ಕನಕದಾಸರು ಕರ್ನಾಟಕದ ಹರಿಭಕ್ತ ದಾಸಶ್ರೇಷ್ಟರಲ್ಲಿ ಒಬ್ಬರಾಗಿದ್ದಾರೆ.ಇವರು ಧಾರವಾಡ ಜಿಲ್ಲೆಯ ಬ್ಯಾಡದಲ್ಲಿ ಬೀರಪ್ಪನಾಯಕ ಹಾಗು ಬಚ್ಚಮ್ಮ ಎಂಬ ದಂಪತಿಗಳ ಉದರದಲ್ಲಿ ಜನಿಸಿದರು.ಕನಕದಾಸರ ತಂದೆ ವಿಜಯನಗರ ಅರಸರ ಸೇನೆಯಲ್ಲಿ ಸೇನಾಪತಿಯಾಗಿದ್ದರು.ಕನಕದಾಸರು ಕನ್ನಡ ಹಾಗೂ ಸಂಸ್ಕೃತದಲ್ಲಿ ಸಾಕಷ್ಟು ಪಾಂಡಿತ್ಯವನ್ನು ಪಡೆದಿದ್ದರು. ಬಹುಕಾಲದ ನಂತರ ತಿರುಪತಿ ತಿಮ್ಮಪ್ಪನ ಕೃಪೆಯಿಂದ ಜನಿಸಿದ ಮಗನಿಗೆ ತಂದೆ-ತಾಯಿಗಳು ಮೊದಲು ಹೆಸರು ಇಟ್ಟಿದ್ದು ತಿಮ್ಮಪ್ಪ ಅಥವಾ ವೆಂಕಟೇಶ ಎಂದು. ಬೀರಪ್ಪನಾಯಕನ ಜಾತಿ ಯಾವುದೆಂದು ತಿಳಿದು ಬಂದಿಲ್ಲ, ಕುರುಬ ಜಾತಿಗೆ ಸೇರಿದವರಾಗಿದ್ದಾರೆ ಎಂದು ಊಹಿಸಲಾಗಿದೆ. ಮೂಲತಃ ಇವರು ಶೈವ ಧರ್ಮಕ್ಕೆ ಸೇರಿದವರಾಗಿದ್ದರು ಎಂದು ಹೇಳುವುದುಂಟು. ನಂತರ ರಾಮಾನುಜಾಚಾರ್ಯರ ಕಾಲದಲ್ಲಿ ವೈಷ್ಣವರಾಗಿದ್ದಂತೆ ಕಂಡುಬರುತ್ತದೆ. ಬೀರನಾಯಕ ಆ ಭಾಗದ ಕುರುಬ ಜನಾಂಗದ ಮುಖಂಡ ಅಥವಾ ನಾಯಕನಾಗಿದ್ದಿರಬೇಕು. ತಿಮ್ಮಪ್ಪ ಪ್ರಾಪ್ತವಯಸ್ಕನಾಗುವ ಮೊದಲೇ ಅವನ ತಂದೆತಾಯಿಗಳು ಕಾಲವಾದರು. ಪರಿಣಾಮವಾಗಿ ತಿಮ್ಮಪ್ಪ ಸಾಕಷ್ಟು ತೊಂದರೆಗಳನ್ನು ಅನುಭವಿಸಬೇಕಾಯಿತು. ಅವನ ಸಂಬಂಧಿಕರು ಅವನ ಎಲ್ಲಾ ಆಸ್ತಿಯನ್ನು ದೋಚಿದರು. ಇಂತಹ ಕಷ್ಟಕಾಲದಲ್ಲಿ ತಿಮ್ಮಪ್ಪನಿಗೆ ಮನೆಯನ್ನು ಕಟ್ಟುವಾಗ ನಿಧಿ(ಕನಕ)ದೊರಕಿತು.ಪ್ರಾಪ್ತವಾದ ನಿಧಿಯನ್ನು ದೀನದಲಿತರಿಗೆ ಹಂಚಿದ ತಿಮ್ಮಪ್ಪ ಮುಂದೆ ಕನಕನಾಯಕನೆಂದು ಹೆಸರಾದನು. ಸಂಪತ್ತು ದೊರಕಿದ ನಂತರ ಕನಕನಾಯಕನಾದ ತಿಮ್ಮಪ್ಪ ತನ್ನ ಪರೋಪಕಾರ ಹಾಗು ಪ್ರೀತಿ ವಾತ್ಸಲ್ಯಗಳಿಂದ ಹೆಚ್ಚು ಪ್ರಸಿದ್ಧನಾದನು. ಅತಿಯಾದ ಭಕ್ತಿಭಾವವುಳ್ಳ ಕನಕದಾಸರು ಒಮ್ಮೆ ಕನಸಿನಲ್ಲಿ ಕಂಡ ಆದಿಕೇಶವನ ಆದೇಶದಂತೆ ತನ್ನ ಊರಿನ ನಿರ್ಲಕ್ಷ್ಯ ಸ್ಥಳವೊಂದರಲ್ಲಿ ಮೂಲೆಗುಂಪಾಗಿ ಬಿದ್ದಿದ್ದ ಆದಿಕೇಶವನ ಮೂರ್ತಿಯನ್ನು ಕಾಗಿನೆಲೆ ಎಂಬಲ್ಲಿಗೆ ತಂದು ಪ್ರತಿಷ್ಠಾಪಿಸಿದರು. ಇದರಿಂದ ಕನಕನ ಕೀರ್ತಿ ಮತ್ತಷ್ಟು ಇಮ್ಮಡಿಸಿತು. ಈತನ ಭಕ್ತಿಗೆ ಮೆಚ್ಚಿದ ಅಂದಿನ ವಿಜಯನಗರದ ಆರಸ ಎರಡನೆಯ ನರಸಿಂಹ ಕನಕನನ್ನು ಬಂಕಾಪುರ ಪ್ರಾಂತಕ್ಕೆ ದಣ್ಣಾಯಕನನ್ನಾಗಿ ನೇಮಿಸಿದ ಕನಕದಾಸರು ವಾಸವಿದ್ದ ಅರಮನೆಯನ್ನು ಇತ್ತೀಚೆಗೆ ಡಾ.ಎಸ್.ಜಿ.ಸಾಮಕ್ ರವರು ಬಾಡದಲ್ಲಿ ಉತ್ಕನನ ಮಾಡಿದ್ದಾರೆ. ಇಲ್ಲಿ ದೊಡ್ಡ ಅಡುಗೆ ಮನೆ, ಸಭೆ ನಡೆಸುವ ಹಜಾರ, ಸ್ನಾನಗೃಹ, ಶೌಚಾಲಯ, ನಾಲ್ಕು ವಿಶ್ರಾಂತಿ ಕೋಣೆಗಳು ಪತ್ತೆಯಾಗಿವೆ.

ಕನಕದಾಸನಾಗುವ ಮೊದಲು ತಿಮ್ಮಪ್ಪ ದೊರೆಯಾಗಿದ್ದನೆಂದು ಆ ಕಾಲದ ಆದಿರಾಜ ಅವರ ಹಾಡಿನ ಮೂಲಕ ತಿಳಿಯಬಹುದು.

ದೊರೆತನವ ಬಿಡಿಸಿ ಸುಸ್ತಿರ ಮಾರ್ಗ

ತೋರಿಸಿದೆ.

ನರಮಾತ್ರದವನೆನೆದೆ ಹರಿಯೇ

ಪರಬಲವ ನೋಡಿದರೆ ಉರಿದುರಿದು ಬೀಳ್ವ ಮನ

ಸೆರೆಹಾಕಿ ನಿಲಿಸಿದೆಯೊ ಹರಿ

ವೀರಯೋಧನಾಗಿ ಶತೃಗಳನ್ನು ಮೆಟ್ಟಿದ ಈ ಕನಕನಾಯಕನು ಕನಕದಾಸನಾದ ಬಗೆಯನ್ನು ಈ ಮೇಲಿನ ಕೀರ್ತನೆಗಳನ್ನು ಬಿಟ್ಟರೆ ನಿಖರವಾದ ಬೇರಾವ ಆಧಾರಗಳೂ ನಮಗೆ ಸಿಕ್ಕಿಲ್ಲ. ಈ ಕುರಿತು ಹೇಳಿಕೆಯೊಂದು ಹೀಗಿದೆ.

ಕಾಗಿನೆಲೆಯಲ್ಲಿ ಪ್ರತಿಷ್ಟಾಪಿತವಾದ ಅದಿಕೇಶವ ಕನಕನ ಇಷ್ಟದೈವ. ತನ್ನ ಇಷ್ಟದೈವನ ಇಚ್ಚೆಯಂತೆ ಅವನು ದಾಸನಾಗಲು ಹಿಂಜರಿಯುತ್ತಿದ್ದ. ದಣ್ಣಾಯಕನಾದ ಕನಕ ಒಮ್ಮೆ ಕದನವೊಂದರಲ್ಲಿ ಶತೃವಿನ ಹೊಡೆತಕ್ಕೆ ಸಿಕ್ಕಿ ಪ್ರಜ್ಞಾವಸ್ಥೆಯಲ್ಲಿ ಬಿದ್ದದ್ದ. ಆ ಸಮಯದಲ್ಲಿ ಆದಿಕೇಶವನ ಆದೇಶವನ್ನು ಸ್ವೀಕರಿಸಿ ಅವನ ದಾಸನಾಗಲು ಸಮ್ಮತಿಸಿದನಂತೆ. ಈ ಹೇಳಿಕೆಯ ಸಮರ್ಥನೆಗೆ ಅವನ ಈ ಹಾಡೊಂದು ಪುಷ್ಟಿನೀಡುತ್ತದೆ.

“ರಣದೊಳಗೆ ದೇಹವ ಖಂಡತುಂಡವ ಮಾಡಿ

ರಣವನುತ್ತರಿಸಿ ಮರಣವ ತೋರಿದೆ

ಪ್ರಣವಗೋಚರವಾಗಿ ಲೀಲೆಯಿಂದಲ್ಲಿ ಬಂದು

ಹಣಕೆ ಪ್ರಾಣವನು ತಂದಿತ್ತ ಮಹಾತಮನೆ”

ದಾಸನಾಗಿ ರೂಪಗೊಂಡ ಕನಕನಾಯಕ ತಿರುಪತಿ, ಶ್ರೀರಂಗ, ಬೇಲೂರು, ಉಡುಪಿ, ಅಹೋಬಲ, ಕಂಚಿ, ಮೇಲುಕೋಟೆ ಮೊದಲಾದ ಸ್ಥಳಗಳಲ್ಲಿ ವ್ಯಾಪಕವಾಗಿ ಸಂಚರಿಸಿದನು. ವಿಜಯನಗರದಲ್ಲಿ ಕೃಷ್ಣದೇವರಾಯರ ಗುರುಗಳಾಗಿ ವಾಸ್ತವ್ಯಹೂಡಿದ್ದ ಶ್ರೀವ್ಯಾಸರಾಯರ ಮಹಿಮೆಯನ್ನು ಕೇಳಿದ್ದ ಕನಕದಾಸರು ಅವರಲ್ಲಿ ಹೋಗಿ ಶಿಷ್ಯತ್ವವನ್ನು ಪಡೆದು ಗುರುಮಂತ್ರ ಸ್ವೀಕರಿಸಿದರು. ವ್ಯಾಸರಾಯರು ಕನಕದಾಸರಿಗೆ ನೀಡುತ್ತಿದ್ದ ಮಹತ್ವವನ್ನು ಅವರ ಶಿಷ್ಯವೃಂದ ಯಾವ ರೀತಿ ಮನಸ್ಸಿನಲ್ಲಿ ಕರುಬುತ್ತಿದ್ದರು ಎಂಬುದು ಈ ಕೆಳಗಿನ ವಚನದಿಂದ ತಿಳಿಯಬಹುದು.

“ಕನಕದಾಸನ ಮೇಲೆ ದಯಮಾಡಲು

ವ್ಯಾಸಮುನಿ ಮಠದವರೆಲ್ಲಾ ದೂರಿಕೊಂಬರೋ”

ಕನಕನ ಕಿಂಡಿಯ ಪವಾಡ

ತಿರುಪತಿಯಿಂದ ಮರಳಿದ ಕನಕದಾಸರು ಉಡುಪಿಗೆ ಭೇಟಿ ನೀಡಿ ಶ್ರೀಕೃಷ್ಣನ ದರ್ಶನಕ್ಕೆ ಕಾದು ಕುಳಿತರಂತೆ. ಆದರೆ ಅವರು ಜಾತಿಯಿಂದ ಕುರುಬರಾಗಿದ್ದ (ಶೂದ್ರ) ರಿಂದ ಬ್ರಾಹ್ಮಣರು ದೇವಾಲಯದೊಳಗೆ ಅವರನ್ನು ಬಿಡಲಿಲ್ಲವಂತೆ. ಇದರಿಂದ ನೊಂದ ಕನಕದಾಸರು ದೇವಾಲಯದ ಹಿಂಭಾಗಕ್ಕೆ ಹೋಗಿ ಪ್ರಾರ್ಥಿನೆ ಸಲ್ಲಿಸಿದರಂತೆ. ಆಗ ಹಿಂಭಾಗದ ಗೋಡೆ ಬಿದ್ದು ಪೂರ್ವಾಭಿಮುಖವಾಗಿದ್ದ ಶ್ರೀಕೃಷ್ಣನ ವಿಗ್ರಹ ಪಶ್ಚಿಮಕ್ಕೆ ತಿರುಗಿತಂತೆ. ಇಂದಿಗೂ ದೇವಾಲಯದ ಈ ಕಿಂಡಿಯನ್ನು ʻಕನಕನ ಕಿಂಡಿ’ಯೆಂದೇ ಕರೆಯಲಾಗುತ್ತದೆ. ಆದರೆ ಇತಿಹಾಸದ ವಿದ್ಯಾರ್ಥಿಗಳಾದ ನಾವುಗಳು ವೈಚಾರಿಕವಾಗಿ ಯೋಚಿಸಬೇಕಾಗುತ್ತದೆ.

1. ವಿಗ್ರಹವೊಂದು ಮಾನವ ಪ್ರಯತ್ನವಿಲ್ಲದೆ ತಿರುಗಲು ಸಾಧ್ಯವೆ ?

2.ʻಕನಕನ ಕಿಂಡಿಯ ಪವಾಡವೆಂಬುದು ಮಹಾತ್ಮ ಕನಕನ ಶಕ್ತಿಗೆ ಹೆದರಿದ ಪುರೋಹಿತಶಾಹಿಗಳು ಕಟ್ಟಿದ ಕಥೆಯಾಗಿರಬಹುದೆ?

3. ಕನಕನ ಕಿಂಡಿಯ ಮೂಲಕ ಜಾತಿಯಿಂದ ಶೂದ್ರರಾಗಿದ್ದ ಮಹಾತ್ಮ ಕನಕರನ್ನು ದೇವಾಲಯದ ಒಳಗೆ ಸೇರಿಸದೆ ಹೊರಗೇ ಇಡಲಾಯಿತಲ್ಲವೆ ?

ಕನಕದಾಸರ ಬೋಧನೆಗಳು:

ಕನಕದಾಸರು ನೂರಾರು ಕೀರ್ತನೆಗಳನ್ನು ರಚಿಸಿದ್ದಾರೆ.ಆ ಎಲ್ಲಾ ಕೀರ್ತನೆಗಳು ತನ್ನ ಇಷ್ಟದೈವವಾಗಿದ್ದ ಆದಿಕೇಶವನ ಅಂಕಿತದಲ್ಲಿ ಮೂಡಿ ಬಂದಿವೆ. ರಾಮಧ್ಯಾನ ಚರಿತೆ.ಮೋಹನ ತರಂಗಿಣಿ,ನಳ ಚರಿತೆ ಮತ್ತು ಹರಿಭಕ್ತಿಸಾರ ಎಂಬ ಕಾವ್ಯಗಳನ್ನು ರಚಿಸಿದ್ದಾರೆ.ಈ ಕಾವ್ಯಗಳು ಹಾಗೂ ಕೀರ್ತನೆಗಳಲ್ಲಿ ಅವರು ಸಾಮಾಜಿಕ ಆಸಮಾನತೆಯನ್ನು ಹೋಗಲಾಡಿಸಲು ಯತ್ನಿಸಿದರಲ್ಲದೆ ಸಮಾಜದ ಅನ್ಯಾಯ,ಅಸಮಾನತೆ,ದಬ್ಬಾಳಿಕೆ,ಗುಲಾಮಗಿರಿ,ಆಸ್ಪೃಶ್ಯತೆ, ಬಹುಪತ್ನಿತ್ವ,ವೇಶ್ಯಾವೃತ್ತಿ.ಸೂಳೆಗಾರಿಕೆ,ಸತಿಪದ್ಧತಿ ಮುಂತಾದ ಪಿಡುಗುಗಳನ್ನು ಖಂಡಿಸಿದರು.ಜೊತೆಗೆ ಸಮಾಜದಲ್ಲಿನ ಏಕತೆಗೆ ದಾರಿ ತೋರಿಸಿಕೊಟ್ಟಿದ್ದಾರೆ. ಇವರು ಸಮಾಜದಲ್ಲಿನ ಮೇಲು-ಕೀಳು,ಸ್ಪೃಶ್ಯ-ಅಸ್ಪೃಶ್ಯವರ್ಣಧರ್ಮ ಮುಂತಾದವುಗಳ ವಿರುದ್ಧ ಸಿಡಿದೆದ್ದರು.

1.ಕನಕದಾಸರು ಕೀರ್ತನೆಯೊಂದರಲ್ಲಿ “ಎಲ್ಲಾರು ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಮತ್ತು ಹಿಟ್ಟಿಗಾಗಿ” ಎಂದು ಹೇಳಿದರು. ವ್ಯಾಪಾರಿಗಳು, ಕೃಷಿಕರು,ಜೀತದಾಳುಗಳು,ಕಳ್ಳರು,ಕಟುಕರು,ವೇಶೈಯರು,ಸನ್ಯಾಸಿಗಳು ಹಾಗು ಮಠಾಧಿಪತಿಗಳು ಇನ್ನೂ ಮುಂತಾದ ವೇಷಗಳು ಹೊಟ್ಟೆಹೊರೆಯಲು ವಿನಹ ಬೇರೆ ಯಾವ ಕಾರಣಕ್ಕೂ ಅಲ್ಲ ಎಂದು ಹೇಳಿದರು. ಅದುದರಿಂದ ಯಾವ ವರ್ಗದವರು ಯಾರನ್ನೂ ಮೂದಲಿಸಬೇಕಿಲ್ಲ ಎಂದು ಬುದ್ದಿವಾದ ಹೇಳಿದರು.

2. ಕನಕದಾಸರು ತಾವು ರಚಿಸಿದ ರಾಮಧ್ಯಾನ ಚರಿತೆಯಲ್ಲಿ ಅಕ್ಕಿ ಮತ್ತು ರಾಗಿಯ ಮಧ್ಯೆ ಆದ ಘರ್ಷಣೆಯ ಕುರಿತು ಚರ್ಚಿಸಿದ್ದಾರೆ. ಈ ಘರ್ಷಣೆ ಉಂಟಾಗಲು ಕಾರಣ ಎರಡರಲ್ಲೂ ಬೇಧ-ಭಾವ ಹುಟ್ಟಿಕೊಂಡಿದ್ದು, ಸಮಾಜದಲ್ಲಿನ ಬೇಧ-ಭಾವದ ಹಿನ್ನೆಲೆಯಲ್ಲಿ ರಚಿತವಾಗಿರುವ ಈ ಕೃತಿ ಸಮಾಜದ ಅಂಕುಡೊಂಕುಗಳನ್ನು ಮಾರ್ಮಿಕವಾಗಿ ಚರ್ಚಿಸುತ್ತದೆ. ಅಂತಿಮವಾಗಿ ಪರಮಾತ್ಮನ ಮುಂದೆ ನಾವೆಲ್ಲಾ ಒಂದೇ, ಪರಮಾತ್ಮನ ವಿಚಾರದಲ್ಲಿ ಎಲ್ಲರೂ ಸರಿಸಮಾನರು ಎಂಬ ಅಂಶವನ್ನು ಮನವರಿಕೆ ಮಾಡಿಕೊಡಲು ಕನಕದಾಸರು ಯತ್ನಿಸಿದ್ದಾರೆ.

3. ಜಾತಿಪದ್ಧತಿಯನ್ನು ಖಂಡಿಸುತ್ತಾ ಕನಕದಾಸರು “ಕುಲಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ ಬಲ್ಲಿರಾ” ಎಂದು ಪ್ರಶ್ನಿಸಿದ್ದಾರೆ.

4. ಗ್ರಾಮದೇವತೆಗೆ ಬಲಿಕೊಡುವುದನ್ನು ಗಮನಿಸಿದ ಕನಕದಾಸರು `ಕಳ್ಳದೇವತೆಗಳನ್ನು ನಂಬಿ ಬೆತ್ತಲೆ ನಿಲ್ಲಬೇಡಿ,ಕೋಣ ಕುರಿಗಳನ್ನು ಬಲಿಕೊಡಬೇಡಿ,ಕೈಯಲ್ಲಿನ ಕಾಸನ್ನು ಕಳೆದುಕೊಂಡು ಮೂರ್ಖರಾಗದಿರಿ’ ಎಂದು ಮೂದಲಿಸಿದರು.

  1. ಡಂಬಾಚಾರ,ಆಡಂಬರ,ಸಿರಿವಂತಿಕೆ ಮುಂತಾದ ಮೋಹಗಳಿಗೆ ದಾಸರಾಗದೆ ದೇವರಲ್ಲಿ ನಂಬಿಕೆ ಇಟ್ಟು ಪರಿಶುದ್ಧ ಜೀವನವನ್ನು ನಡೆಸಬೇಕೆಂದು ಕನಕದಾಸರು ಹೇಳಿದರು.
  2. `ಜೀವಿ ಸಂಸಾರಸ್ಥನಾಗಿದ್ದರೂ ಅದಕ್ಕೆ ಅಂಟಿಕೊಳ್ಳಬಾರದು’.
  3. ಜಾತಿ,ಮತ,ಉಚ್ಛ-ನೀಚ,ಮೇಲು-ಕೀಳು, ಸ್ಪೃಶ್ಯ-ಅಸ್ಪೃಶ್ಯ,ಕರಿಯ-ಬಿಳಿಯ ಮುಂತಾದ ಬೇಧ ಭಾವ ಮಾಡದೇ ಎಲ್ಲರೂ ಒಂದಾಗಿ ಬಾಳಬೇಕು.
  4. `ಉತ್ತಮ ನಡತೆಯನ್ನು ಹೊಂದದವನು, ಪಡೆದ ಸಾಲವನ್ನು ಮರುಪಾವತಿ ಮಾಡದವನು, ಬೇರೊಬ್ಬರ ಮನೆಗೆ ಕೇಡನ್ನು ಬಯಸುವವನು,ಆಚಾರವನ್ನು ಮುರಿದವನು,ದಾನಧರ್ಮವನ್ನು ಮಾಡದವನು. ಮಾತಿನಂತೆ ನಡೆಯದವನು,ಪರಸತಿಯನ್ನು ಬಯಸುವವನು ಹೊಲೆಯನೇ ವಿನಹ ಹುಟ್ಟಿನಿಂದ ಯಾರೂ ಕೀಳಲ್ಲ’ ಎಂದು ಕನಕದಾಸರು ನುಡಿದರು.
  5. ʻಮನುಷ್ಯ ಪಾಪರಹಿತನಾಗಿರಬೇಕು, ಜ್ಞಾನದ ದೀವಿಗೆಯನ್ನು ಎಲ್ಲೆಡೆ ಹಚ್ಚಬೇಕು’ ಎಂದು ಹೇಳಿದ್ದಾರೆ.

ಕರ್ನಾಟಕದ ಸಮಾಜಸುಧಾರಣೆಯ ಇತಿಹಾಸದಲ್ಲಿ ಕನಕ-ಪುರಂದರರದು ಬಹಳ ದೊಡ್ಡ ಹೆಸರು.ಸಾಹಿತ್ಯದ ಮೂಲಕ ಜಟಿಲವಾಗಿದ್ದ ಸಮಾಜವನ್ನು ಸಡಿಲ ಮಾಡುವತ್ತ ಅವರು ನಡೆಸಿದ ಪ್ರಯತ್ನ ಅನನ್ಯವಾದುದು.ಸಂಪ್ರದಾಯಸ್ತ ಸಮಾಜದಲ್ಲಿ ತಮ್ಮ ಪ್ರಖರ ವೈಚಾರಿಕತೆಯಿಂದ ಬಿರುಗಾಳಿ ಎಬ್ಬಿಸಿದವರು ಅವರು. ದಾಸವರ್ಯರಲ್ಲಿ ಕನಕದಾಸರು ಹಾಗು ಪುರಂದರದಾಸರು ದಾಸ ಸಾಹಿತ್ಯದ `ಅಶ್ವಿನಿದೇವತೆಗಳು’ಎಂದು ಪ್ರೊ.ದೇ.ಜವರೇಗೌಡರು ಹೇಳಿದುದು ಅತ್ಯಂತ ಸೂಕ್ತವಾಗಿದೆ.

ಉಪಸಂಹಾರ

ಒಟ್ಟಿನಲ್ಲಿ ಕನಕದಾಸರು ಭಕ್ತಿ ಸಾಹಿತ್ಯದ ಜೊತೆಗೆ ಸಮಾಜ ಸುಧಾರಣೆಯಲ್ಲಿಯೂ ಮಹತ್ವದ ಪಾತ್ರ ವಹಿಸಿದ ಮಹಾನ್ ಸಂತರು. ಅವರು ತಮ್ಮ ಕೀರ್ತನೆಗಳ ಮೂಲಕ ಸಮಾನತೆ, ನೈತಿಕತೆ ಮತ್ತು ಮಾನವೀಯ ಮೌಲ್ಯಗಳನ್ನು ಜನರಲ್ಲಿ ಬೆಳೆಸಲು ಪ್ರಯತ್ನಿಸಿದರು. ಅವರ ಸಂದೇಶಗಳು ಇಂದಿಗೂ ಸಮಾಜಕ್ಕೆ ಮಾರ್ಗದರ್ಶಕವಾಗಿವೆ. ಕನ್ನಡ ಸಾಹಿತ್ಯ ಮತ್ತು ಕರ್ನಾಟಕದ ಸಂಸ್ಕೃತಿಯಲ್ಲಿ ಅವರ ಸ್ಥಾನ ಸದಾಕಾಲ ಅಜರಾಮರವಾಗಿದೆ.