“ಪ್ರಸ್ತಾವನೆ ಸಂವಿಧಾನದ ಸತ್ವ. ಇದು ಸಂವಿಧಾನದ ಯೋಗ್ಯತೆಯನ್ನು ಅಳೆಯಲು ಇರುವ ಒಂದು ಅಳತೆಗೋಲು”

  • ಪಂಡಿತ್‌ ಠಾಕೂರ್‌ ದಾಸ್‌ ಭಾರ್ಗವ

ಪೀಠಿಕೆ: ಸಾಮಾನ್ಯವಾಗಿ ದೇಶಾದ್ಯಂತ ಹಲವಾರು ಲೇಖಕರು ಬರೆದ ಗ್ರಂಥಗಳನ್ನು ಅವಲೋಕಿಸಿದಾಗ ಅವುಗಳು ಪೂರ್ವ ಪೀಠಿಕೆಗಳನ್ನು ಒಳಗೊಂಡಿರುತ್ತವೆ. ಈ ಪೀಠಿಕೆಗಳು ಇಡೀ ಗ್ರಂಥದ ಒಳನೋಟವನ್ನು ಒದಗಿಸುತ್ತದೆ. ಹಾಗೇ ಜಗತ್ತಿನ ಪ್ರತಿಯೊಂದು ಸಂವಿಧಾನಗಳು ಪೂರ್ವ ಪೀಠಿಕೆಗಳನ್ನು ಒಳಗೊಂಡಿವೆ. ಹಾಗೆಯೇ ಭಾರತದ ಸಂವಿಧಾನ ರಚನಾಕಾರರು ಉದಾರವಾದಿ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತವನ್ನು ನಿರ್ದೇಶಿಸಲು ಹಾಗೂ ನಿಯಂತ್ರಿಸಲು ತಯಾರಿಸಿದ ಭಾರತ ಸಂವಿಧಾನದಲ್ಲೂ ಪ್ರಸ್ತಾವನೆಯನ್ನು ಅಳವಡಿಸಲು ಮುಂದಾದರು. ಅಮೇರಿಕದ ಸಂವಿಧಾನದ ಪ್ರಸ್ತಾವನೆಯಿಂದ ಪ್ರಭಾವಿತಗೊಂಡ ಭಾರತವೂ ಸಹ ತನ್ನ ಸಂವಿಧಾನದಲ್ಲಿ ಪ್ರಸ್ತಾವನೆಯನ್ನು ಅಳವಡಿಸಿಕೊಂಡಿತು. ಭಾರತದ ಸಂವಿಧಾನದ ಪ್ರಸ್ತಾವನೆಯಲ್ಲಿ ರಷ್ಯಾ ಹಾಗೂ ಫ್ರಾನ್ಸ್‌ ಕ್ರಾಂತಿಯ ಮೌಲ್ಯಗಳನ್ನು ಕಾಣಬಹುದಾಗಿದೆ. ಪ್ರಸ್ತಾವನೆಯಲ್ಲಿ ಸಂವಿಧಾನದ ವಿವಿಧ ಅಂಶಗಳು, ಲಕ್ಷಣಗಳು, ಆದರ್ಶಗಳು ಹಾಗೂ ಗುರಿ ಮತ್ತು ಉದ್ದೇಶಗಳನ್ನು ಸಂಕ್ಷಿಪ್ತವಾಗಿ ವಿವರಿಸಲಾಗಿದೆ. ಸಂವಿಧಾನದ ಪೂರ್ವ ಪೀಠಿಕೆಯನ್ನು “ಸಂವಿಧಾನದ ಮುಖಪುಟ” ಎಂದು ಕರೆಯಲಾಗಿದೆ.

1. ಪ್ರಸ್ತಾವನೆಯ ಅರ್ಥ: (Meaning of the preamble)

ಆಕ್ಸ್ ಫರ್ಡ್‌ ಅಡ್ವಾನ್ಸ್‌ ಲರ್ನರ್‌ ಡಿಕ್ಷನರಿ ಪ್ರಕಾರ ಪ್ರಸ್ತಾವನೆ ಎಂದರೆ ಯಾವುದೇ ಗ್ರಂಥ ಅಥವಾ ಬರಹ ರೂಪದ ದಾಖಲೆಯ ಪರಿಚಯಾತ್ಮಕ ಭಾಗವಾಗಿದೆ. ಸಂವಿಧಾನ ಒಳಗೊಂಡಿರುವ ಮೌಲ್ಯ, ತತ್ವಗಳು, ಸಿದ್ಧಾಂತಗಳು, ಗುರಿಗಳು ಹಾಗೂ ಉದ್ದೇಶಗಳನ್ನು ಸ್ಪಷ್ಟವಾಗಿ ತಿಳಿಸುವ ಸಂವಿಧಾನದ ಸರಳವಾದ ಭಾಗವೇ ಪ್ರಸ್ತಾವನೆ ಎಂದು ಹೇಳಬಹುದು. ಸಾಮಾನ್ಯವಾಗಿ ಪ್ರಸ್ತಾವನೆಯು ಸಂವಿಧಾನ ರಚನಾಕಾರರು ಮಹತ್ವ ನೀಡಿದ ಮೌಲ್ಯಗಳು, ಪಾಲಿಸಿದ ಬಹುಮುಖ್ಯ ತತ್ವಗಳು, ಪ್ರಜೆಗಳು ಹೊಂದಿರಬೇಕಾದ ಹಕ್ಕುಗಳು ಹಾಗೂ ರಾಜ್ಯದ ಸ್ವರೂಪವನ್ನು ಪ್ರತಿಫಲಿಸುತ್ತದೆ.

ಪ್ರಸ್ತಾವನೆಯು ಸಂವಿಧಾನದ ಒಂದು ಭಾಗವಲ್ಲದಿದ್ದರೂ ಪೀಠಿಕೆಯಂತಿದ್ದು ಭಾರತದ ರಾಜಕೀಯ ಚಿತ್ರಣವನ್ನು ಕಣ್ಮುಂದೆ ತರುತ್ತದೆ. ಪ್ರಸ್ತಾವನೆಯನ್ನು ಕೆಲವರು ʻʻಸಂವಿಧಾನದ ಒಡವೆʻʻ ಎಂದರೆ, ಕೆ.ಎಂ. ಮುನ್ಸಿಯವರು ಇದನ್ನು ʻʻರಾಜಕೀಯ ಜಾತಕʻʻ ಎಂದು ಬಣ್ಣಿಸಿದರು.

ಇದರ ಉಲ್ಲಂಘನೆಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲು ಸಾಧ್ಯವಿಲ್ಲದಿದ್ದರೂ ಇದರ ಪ್ರಾಮುಖ್ಯತೆ ಮತ್ತು ಉಪಯುಕ್ತತೆಯನ್ನು ಸುಪ್ರೀಂಕೋರ್ಟ್ ಅನೇಕ ತೀರ್ಪುಗಳಲ್ಲಿ ತಿಳಿಸಿದೆ. ಬೆರುಬಾರಿ ಮೊಕದ್ದಮೆಯಲ್ಲಿ ಸುಪ್ರೀಂಕೋರ್ಟ್ ಪ್ರಸ್ತಾವನೆಯನ್ನು ಸಂವಿಧಾನದ ಭಾಗವೆಂದು ಪರಿಗಣಿಸಲಿಲ್ಲ. ಆದರೆ 1973ರ ಕೇಶವಾನಂದ ಭಾರತಿ ಮೊಕದ್ದಮೆಯಲ್ಲಿ ಪ್ರಸ್ತಾವನೆಯನ್ನು ಸಂವಿಧಾನದ ಭಾಗವೆಂದು ಪರಿಗಣಿಸಿತು. ಇದರಲ್ಲಿ ಉಲ್ಲೇಖಿಸಿರುವ ಪದಗಳು ಅರ್ಥಗರ್ಭಿತವಾಗಿದ್ದು ರಚನಾತ್ಮಕ ತತ್ವಗಳನ್ನು ಮತ್ತು ಭಾವನೆಗಳನ್ನು ಒಳಗೊಂಡಿದೆ.

2. ಪ್ರಸ್ತಾವನೆಯ ಹಿನ್ನೆಲೆ: (Background of the preamble)

ಸಂವಿಧಾನ ರಚನಾ ಸಭೆಯ ಮೊದಲ ಅಧಿವೇಶನದಲ್ಲಿ 1946 ಡಿಸೆಂಬರ್ 13 ರಂದು ಜವಾಹರ್ಲಾಲ್ ನೆಹರು ಅವರು ಧ್ಯೇಯಗಳ ನಿರ್ಣಯಗಳನ್ನು ಮಂಡಿಸಿದರು. ಈ ಧ್ಯೇಯಗಳ ನಿರ್ಣಯವು ಸಂವಿಧಾನ ರಚನಾ ಸಭೆಯು ಯಾವ ತತ್ವಗಳು, ಮೌಲ್ಯಗಳು, ಸಿದ್ಧಾಂತಗಳು ಹಾಗೂ ಗುರಿಗಳನ್ನು ಆಧರಿಸಿ ಸಂವಿಧಾನ ರಚಿಸಬೇಕೆಂಬ ಅಂಶಗಳನ್ನು ಒಳಗೊಂಡಿತ್ತು. ಸಾರ್ವಭೌಮತೆ, ಪ್ರಜಾಪ್ರಭುತ್ವ, ಗಣತಂತ್ರ, ಜನತಾ ಪ್ರಾಧಿಕಾರ, ಸಾಮಾಜಿಕ ಹಾಗೂ ಆರ್ಥಿಕ ನ್ಯಾಯ, ಅಲ್ಪಸಂಖ್ಯಾತ ಹಾಗೂ ಹಿಂದುಳಿದ ವರ್ಗದವರ ರಕ್ಷಣೆ ಮುಂತಾದ ನಿರ್ಣಯಗಳನ್ನು ಸಂವಿಧಾನ ರಚನಾ ಸಭೆಯಲ್ಲಿ ಆಳವಾಗಿ ಚರ್ಚಿಸಲಾಯಿತು. ಮುಂದೆ 1947 ಜನವರಿ 22ರಂದು ಈ ಧ್ಯೇಯಗಳ ನಿರ್ಣಯವನ್ನು ಸಂವಿಧಾನ ರಚನಾ ಸಭೆಯು ಅಂಗೀಕರಿಸಿ ಅದರಂತೆ ಕಾರ್ಯರಂಭ ಮಾಡಿತು. 1947 ಅಕ್ಟೋಬರ್ 17ರಂದು ಧ್ಯೇಯಗಳ ನಿರ್ಣಯದಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಿ ಸಂವಿಧಾನ ರಚನಾ ಸಭೆಯು ಅದನ್ನೇ ಸಂವಿಧಾನ ಪ್ರಸ್ತಾವನೆಯನ್ನಾಗಿ ಅಳವಡಿಸಿಕೊಳ್ಳಲು ತೀರ್ಮಾನಿಸಿತು.

3. ಪ್ರಸ್ತಾವನೆಯ ಪಠ್ಯ: (Text of the preamble) 

ಭಾರತದ ಸಂವಿಧಾನದ ಪ್ರಸ್ತಾವನೆಯು ಸಂವಿಧಾನಕ್ಕೆ 1976ರಲ್ಲಿ ಅಳವಡಿಸಲಾದ 42ನೇ ತಿದ್ದುಪಡಿಯ ನಂತರ ಹೀಗೆ ಆರಂಭವಾಗುತ್ತದೆ.

ಭಾರತದ ಪ್ರಜೆಗಳಾದ ನಾವು ಭಾರತವನ್ನು ಒಂದು ಸಾರ್ವಭೌಮ

ಸಮಾಜವಾದಿ, ಜಾತ್ಯತೀತ, ಪ್ರಜಾಸತ್ತಾತ್ಮಕ ಗಣರಾಜ್ಯವನ್ನಾಗಿ ವ್ಯವಸ್ಥೆಗೊಳಿಸಲು 

ಮತ್ತು ಅದರ ಎಲ್ಲಾ ಪೌರರಿಗೆ

ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ನ್ಯಾಯ,

ವಿಚಾರ, ಅಭಿವ್ಯಕ್ತಿ, ನಂಬಿಕೆ, ಧರ್ಮ ಮತ್ತು ಉಪಾಸನಾ ಸ್ವಾತಂತ್ರ್ಯ

ಸ್ಥಾನಮಾನ ಮತ್ತು ಅವಕಾಶಗಳಲ್ಲಿ ಸಮಾನತೆ

ಎಲ್ಲರಿಗೂ ದೊರೆಯುವಂತೆ ಮಾಡುವುದಕ್ಕೆ

ವ್ಯಕ್ತಿ ಗೌರವ ಮತ್ತು ರಾಷ್ಟ್ರದ ಏಕತೆ ಮತ್ತು ಸಮಗ್ರತೆಯನ್ನು

ರಕ್ಷಿಸಿ, ಭ್ರಾತೃ ಭಾವನೆಯನ್ನು ಎಲ್ಲರಲ್ಲೂ ವೃದ್ಧಿಗೊಳಿಸುವುದಕ್ಕಾಗಿ

ದೃಢಸಂಕಲ್ಪ ಮಾಡಿ

ನಮ್ಮ ಸಂವಿಧಾನ ರಚನಾ ಸಭೆಯಲ್ಲಿ ನವೆಂಬರ್ 26 1949 ರಂದು ಈ ಸಂವಿಧಾನವನ್ನು ಅಂಗೀಕರಿಸಿ ಕಾನೂನು ರೂಪದಲ್ಲಿ ಆತ್ಮಾರ್ಪಿತ ಮಾಡಿಕೊಂಡಿದ್ದೇವೆ.

ಮೂಲ ಸಂವಿಧಾನ ಪೀಠಿಕೆಯಲ್ಲಿ ಸಾರ್ವಭೌಮ ಪ್ರಜಾಸತ್ತಾತ್ಮಕ ಗಣರಾಜ್ಯ ಎಂಬ ಪದಗಳಿದ್ದವು. ಅವನ್ನು 1976ರ 42ನೇ ಸಂವಿಧಾನಿಕ ತಿದ್ದುಪಡಿ ಮೂಲಕ ಸಮಾಜವಾದಿ ಹಾಗೂ ಜಾತ್ಯತೀತ ಎಂಬ ಪದಗಳನ್ನು ಸೇರಿಸಲಾಯಿತು. ಅದೇ ರೀತಿ ದೇಶದ ಏಕತೆ ಎಂಬ ಪದವನ್ನು ಬದಲಿಸಿ ದೇಶದ ಏಕತೆ ಮತ್ತು ಸಮಗ್ರತೆ ಎಂಬ ಪದವನ್ನು ಸೇರಿಸಲಾಗಿದೆ.

ಉಪಸಂಹಾರ

ಒಟ್ಟಾರೆ, ಭಾರತೀಯ ಸಂವಿಧಾನದ ಪ್ರಸ್ತಾವನೆ ಸಂವಿಧಾನದ ತಾತ್ವಿಕ ನೆಲೆಯನ್ನು ಸ್ಪಷ್ಟಪಡಿಸುತ್ತದೆ. ಇದು ಪ್ರಜೆಗಳಿಗೆ ಸ್ವಾತಂತ್ರ್ಯ, ಸಮಾನತೆ ಮತ್ತು ನ್ಯಾಯವನ್ನು ಭರವಸೆ ನೀಡುವ ಮಹತ್ವದ ಘೋಷಣೆಯಾಗಿದೆ. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಸಂರಕ್ಷಿಸುವಲ್ಲಿ ಪ್ರಸ್ತಾವನೆ ಪ್ರಮುಖ ಪಾತ್ರ ವಹಿಸುತ್ತದೆ. ಆದುದರಿಂದ, ಸಂವಿಧಾನದ ಆತ್ಮವನ್ನು ಅರ್ಥಮಾಡಿಕೊಳ್ಳಲು ಪ್ರಸ್ತಾವನೆಯ ಅಧ್ಯಯನ ಅನಿವಾರ್ಯವಾಗಿದೆ.