ʻʻಭಾರತದ ಕೇಂದ್ರ ಶಾಸಕಾಂಗವಾದ ಸಂಸತ್ತಿನ ಕೆಳಮನೆಯನ್ನು ಲೋಕಸಭೆ ಎನ್ನಲಾಗುತ್ತದೆ.ʼʼ ಲೋಕಸಭೆಯು ಭಾರತದ ಪ್ರಜೆಗಳನ್ನು ಪ್ರತಿನಿಧಿಸುತ್ತಿರುವುದರಿಂದ ಇದನ್ನು ʻಕೆಳಮನೆʼ ʻಪ್ರತಿನಿಧಿಸಭೆʼ ಜನತಾ ಸದನ ಹಾಗೂ ಪ್ರಜಾಸದನ ಎಂದು ಸಹ ಕರೆಯಲಾಗುತ್ತದೆ. ಲೋಕಸಭೆಯು ಇಂಗ್ಲೆಂಡಿನ ಹೌಸ್‌ ಆಫ್‌ ಕಾಮನ್ಸ್‌ ಮತ್ತು ಅಮೆರಿಕದ ಹೌಸ್ ಆಫ್ ರೆಪ್ರೆಸೆಂಟೇಟಿವ್‌ಗೆ ಸಮನಾಗಿದೆ.

1. ಲೋಕಸಭೆಯ ಗಾತ್ರ: (Size of Loksabha)

ಭಾರತದ ಸಂವಿಧಾನದಲ್ಲಿ ಲೋಕಸಭೆಯ ಗರಿಷ್ಠ ಸದಸ್ಯರ ಸಂಖ್ಯೆಯನ್ನು 552 ಕ್ಕೆ ನಿಗದಿಪಡಿಸಲಾಗಿದೆ. ಈ ೫೫೨ ಸ್ಥಾನಗಳಲ್ಲಿ ರಾಷ್ಟ್ರಪತಿಗಳು ಇಬ್ಬರು ಆಂಗ್ಲೋ ಇಂಡಿಯನ್ನರನ್ನು ನಾಮಕರಣಗೊಳಿಸುತ್ತಾರೆ. ಉಳಿದ 550 ಸ್ಥಾನಗಳು ಪ್ರಜೆಗಳಿಂದ ಚುನಾವಣೆಯಲ್ಲಿ ಆಯ್ಕೆಗೊಂಡ ಪ್ರತಿನಿಧಿಗಳಿಗೆ ಮೀಸಲಾಗಿದ್ದವು. 2019ರ ವೇಳೆಗೆ ಲೋಕಸಭೆಯ ಸದಸ್ಯರ ಸಂಖ್ಯೆ 545ಕ್ಕೆ ಸೀಮಿತಗೊಂಡಿದೆ. ಅದರಲ್ಲಿ ಇಬ್ಬರು ಆಂಗ್ಲೋ ಇಂಡಿಯನ್ನರು ನೇಮಕವಾದರೆ ಉಳಿದ 543 ಸ್ಥಾನಗಳು ಪ್ರಜೆಗಳಿಂದ ಆಯ್ಕೆಯಾದ ಪ್ರತಿನಿಧಿಗಳಿಗೆ ಮೀಸಲು. 2019 ರಲ್ಲಿ ಸಂವಿಧಾನದ 104ನೇ ತಿದ್ದುಪಡಿಯನ್ವಯ ಆಂಗ್ಲೋ ಇಂಡಿಯನ್ ಸದಸ್ಯರುಗಳ ನೇಮಕಾತಿಯನ್ನು ರದ್ದುಗೊಳಿಸಲಾಗಿದೆ. ಪರಿಣಾಮವಾಗಿ ಇಂದು 543 ಸ್ಥಾನಗಳು ಮಾತ್ರ ಉಳಿದಿವೆ. 543 ಸ್ಥಾನಗಳ ಪೈಕಿ 20 ಸ್ಥಾನಗಳನ್ನು ಕೇಂದ್ರಾಡಳಿತ ಪ್ರದೇಶಗಳಿಗೆ ಮೀಸಲಿಡಲಾಗಿದೆ.

2.  ಚುನಾವಣಾ ವಿಧಾನ: (Election Method)

ಲೋಕಸಭೆಯ 543 ಮತ ಕ್ಷೇತ್ರಗಳ ಅಭ್ಯರ್ಥಿಗಳು ನೇರವಾಗಿ ಪ್ರಜೆಗಳಿಂದ ಸಾರ್ವತ್ರಿಕ ಮತದಾನದ ಮೂಲಕ ಆಯ್ಕೆಯಾಗುತ್ತಾರೆ. ಉಳಿದ ಎರಡು ಸ್ಥಾನಗಳನ್ನು ರಾಷ್ಟ್ರಪತಿಗಳು ನಾಮಕರಣಗೊಳಿಸುತ್ತಾರೆ. ಭಾರತದ ಜನಸಂಖ್ಯೆಗನುಗುಣವಾಗಿ ಭಾರತದ ಪ್ರತಿಯೊಂದು ರಾಜ್ಯಗಳ ಮತಕ್ಷೇತ್ರಗಳಿಂದ ಲೋಕಸಭೆಗೆ ಆಯ್ಕೆಗೊಳ್ಳಬೇಕಾದ ಸ್ಥಾನಮಾನಗಳನ್ನು ಸಂವಿಧಾನದಲ್ಲಿ ನಿಗದಿಪಡಿಸಲಾಗಿದೆ. ಅದರಂತೆ ಕರ್ನಾಟಕವು 28 ಲೋಕಸಭಾ ಕ್ಷೇತ್ರಗಳನ್ನು ಹೊಂದಿದೆ. ಚುನಾವಣಾ ಆಯೋಗವು ಭಾರತದ ಭೂ ಭಾಗವನ್ನು 543 ಲೋಕಸಭಾ ಮತಕ್ಷೇತ್ರಗಳನ್ನಾಗಿ ವಿಂಗಡಿಸಿ ಆಯಾ ಸಮುದಾಯಗಳಿಗೆ ಸಮಾನವಾಗಿ ಸೀಟುಗಳನ್ನು ಹಂಚಿಕೆ ಮಾಡುತ್ತದೆ. ಪರಿಶಿಷ್ಟ ಜಾತಿಗಳಿಗೆ 87 ಹಾಗೂ ಪರಿಶಿಷ್ಟ ಪಂಗಡಗಳಿಗೆ 44 ಸೀಟುಗಳನ್ನು ಒಟ್ಟು 132 ಮತಕ್ಷೇತ್ರಗಳನ್ನು ಮೀಸಲಿಡಲಾಗುತ್ತದೆ. ಈ ಕ್ಷೇತ್ರಗಳ ಚುನಾವಣೆಯನ್ನು ವಯಸ್ಕ ಮತದಾನ ಪದ್ದತಿಯಂತೆ ನಡೆಸಲಾಗುತ್ತದೆ.

3.  ಅರ್ಹತೆಗಳು: (Qualification)

 ಲೋಕಸಭಾ ಸದಸ್ಯನಾಗಬಯಸುವ ವ್ಯಕ್ತಿಯು ಈ ಕೆಳಕಂಡ ಅರ್ಹತೆಗಳನ್ನು ಹೊಂದಿರಬೇಕು.

  1.  ಆತ ಭಾರತದ ಪ್ರಜೆಯಾಗಿರಬೇಕು.
  2.  ಆತನಿಗೆ ಕನಿಷ್ಠ 25 ವರ್ಷ ವಯಸ್ಸಾಗಿರಬೇಕು.
  3.  ಆತ ಯಾವುದಾದರೂ ಲೋಕಸಭಾ ಕ್ಷೇತ್ರದ ಮತದಾರನಾಗಿಬೇಕು.
  4.  ಲೋಕಸಭಾ ಸದಸ್ಯನಿಗಿರಬೇಕಾದ ಎಲ್ಲಾ ಅರ್ಹತೆಗಳು ಇರಬೇಕು.
  5.  ಕೇಂದ್ರ ರಾಜ್ಯ ಅಥವಾ ಯಾವುದೇ ಸರ್ಕಾರಿ ಹುದ್ದೆಯಲ್ಲಿರಬಾರದು.
  6. ಆತ ಹುಚ್ಚ, ದಿವಾಳಿ ಅಥವಾ ಮತಿವಿಕಲನಾಗಿರಬಾರದು

 4. ಅಧಿಕಾರ ಅವಧಿ: (Term of Power)

ಲೋಕಸಭಾ ಸದಸ್ಯರ ಅಧಿಕಾರಾವಧಿ ಸಾಮಾನ್ಯವಾಗಿ ಐದು ವರ್ಷಗಳು. ಚುನಾವಣೆಗಳು ನಡೆದು ಮೊದಲನೇ ಅಧಿವೇಶನವು ಸೇರುವ ದಿನದಿಂದ ಐದು ವರ್ಷಗಳ ಕಾಲದವರೆಗೆ ಅಧಿಕಾರದಲ್ಲಿರುವುದು. ಆದರೆ ರಾಷ್ಟ್ರಪತಿಗಳು ಲೋಕಸಭಾ ಅಧಿಕಾರಾವಧಿ ಮುಗಿಯುವ ಮುಂಚಿತವಾಗಿ ವಿಸರ್ಜನೆಗೊಳಿಸಬಹುದು. ಈ ರೀತಿಯ ವಿಸರ್ಜನೆಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವಂತಿಲ್ಲ. ಹಲವು ಬಾರಿ ರಾಷ್ಟ್ರಪತಿಗಳು ಲೋಕಸಭೆಯನ್ನು ಅವಧಿಗೂ ಮುನ್ನವೇ ವಿಸರ್ಜಿಸಿದ್ದಾರೆ. ಉದಾಹರಣೆ 1998ರ 12ನೇ ಲೋಕಸಭೆಯನ್ನು 1999 ರಲ್ಲಿ ವಿಸರ್ಜಿಸಲಾಯಿತು. ಇದರೊಂದಿಗೆ ತುರ್ತುಪರಿಸ್ಥಿತಿಯೇನಾದರೂ ಸಂಭವಿಸಿದರೆ ಲೋಕಸಭೆಯ ಅವಧಿಯನ್ನು ಒಂದು ವರ್ಷ ಮುಂದೂಡಬಹುದು. ಅದಕ್ಕೆ ಸಂಸತ್ತಿನ ಅನುಮತಿ ಬೇಕು, ತುರ್ತುಪರಿಸ್ಥಿತಿ ಮುಗಿದ ಆರು ತಿಂಗಳೊಳಗೆ ಚುನಾವಣೆಗಳು ನಡೆಯಬೇಕು.

5. ಅಧಿವೇಶನಗಳು: (Sessions)

ರಾಷ್ಟ್ರಪತಿಗಳು ಲೋಕಸಭೆಯ ಅಧಿವೇಶನವನ್ನು ಕರೆಯುವ ಅಥವಾ ಮುಂದೂಡುವ ಅಧಿಕಾರವನ್ನು ಹೊಂದಿದ್ದಾರೆ ಲೋಕಸಭೆಯು ಸಾಮಾನ್ಯವಾಗಿ ಮೂರು ಬಾರಿ ಅಧಿವೇಶನವನ್ನು ಕರೆಯುತ್ತದೆ. ಬಜೆಟ್ ಅಧಿವೇಶನ( ಫೆಬ್ರವರಿ- ಮೇ)  ಮುಂಗಾರು ಅಧಿವೇಶನ (ಜುಲೈ-ಸೆಪ್ಟೆಂಬರ್) ಹಾಗೂ ಚಳಿಗಾಲದ ಅಧಿವೇಶನ (ನವೆಂಬರ್-ಡಿಸೆಂಬರ್) ಸಂವಿಧಾನದ ಪ್ರಕಾರ ಲೋಕಸಭೆಯ ಎರಡು ಅಧಿವೇಶನಗಳ ನಡುವಿನ ಅಂತರ ಆರು ತಿಂಗಳು ಮೀರುವಂತಿಲ್ಲ. ಆದರೆ ಪ್ರತಿವರ್ಷ ಎರಡು ಅಧಿವೇಶನಗಳು ನಡೆಯಲೇಬೇಕು.

6. ಕೋರಂ: (Quoram)

ಲೋಕಸಭಾ ಅಧಿವೇಶನದ ಸಂದರ್ಭದಲ್ಲಿ ಕಲಾಪಗಳು ಜರುಗಲು ಹಾಜರಿರಬೇಕಾದ ಕನಿಷ್ಠ ಸದಸ್ಯರ ಸಂಖ್ಯೆಯನ್ನು ಕೋರಂ ಎಂದು ಕರೆಯಲಾಗುತ್ತದೆ. ಲೋಕಸಭೆಯ ಕೋರಂ ಸಂಖ್ಯೆ ಒಟ್ಟು ಸದಸ್ಯರ ೧/೧೦ ಷ್ಟು ಬಹುಮತ ಇರಬೇಕು. ಲೋಕಸಭಾ ಅಧಿವೇಶನದಲ್ಲಿ ಬಹುಮತದ ಸಂಖ್ಯೆಯಷ್ಟು ಸದಸ್ಯರು ಹಾಜರಾಗದಿದ್ದರೆ ಸ್ಪೀಕರ್ ಅಧಿವೇಶನವನ್ನು ಮುಂದೂಡುತ್ತಾರೆ.

7. ಅಧ್ಯಕ್ಷ ಮತ್ತು ಉಪಾಧ್ಯಕ್ಷ: (Speaker and Deputy Speaker)

ʻʻ ಲೋಕಸಭೆಯ ಅಧ್ಯಕ್ಷನನ್ನು ಸ್ಪೀಕರ್ ಎಂದು ಕರೆಯಲಾಗಿದೆʼʼ. ಲೋಕಸಭೆಯ ಸದಸ್ಯರು ತನ್ನಲ್ಲಿಯೇ ಒಬ್ಬ ಅಧ್ಯಕ್ಷ ಮತ್ತು ಉಪಾಧ್ಯಕ್ಷನ್ನು ಆಯ್ಕೆ ಮಾಡುತ್ತಾರೆ. ಲೋಕಸಭೆಯ ಕಾರ್ಯಕಲಾಪಗಳು ಲೋಕಸಭಾ ಸ್ಪೀಕರ್ ನೇತೃತ್ವದಲ್ಲಿಯೇ ನಡೆಯುತ್ತವೆ. ಅಧ್ಯಕ್ಷರ ಅನುಪಸ್ಥಿಯಲ್ಲಿ ಉಪಾಧ್ಯಕ್ಷರು ಸಭೆಯ ಕಾರ್ಯಕಲಾಪಗಳನ್ನು ನಿರ್ವಹಿಸಿಕೊಂಡು ಹೋಗುತ್ತಾರೆ.

8. ವೇತನ ಹಾಗೂ ವಿನಾಯಿತಿಗಳು: 

ಲೋಕಸಭಾ ಸದಸ್ಯರಿಗೆ ೧ ಲಕ್ಷ ರೂ ವೇತನ ೭೦ ಸಾವಿರ ಕ್ಷೇತ್ರ ಭತ್ಯೆಯೇ ಹಾಗೂ 60,000 ಕಚೇರಿ ವೆಚ್ಚರವನ್ನು ಪ್ರತಿ ತಿಂಗಳು ನೀಡಲಾಗುತ್ತದೆ. ಜೊತೆಗೆ ಅಧಿವೇಶನಕ್ಕೆ ಹಾಜರಾಗಿ ಸಹಿ ಮಾಡಿದರೆ ಪ್ರತಿದಿನ 2,000ರೂ ಭತ್ಯೆಯನ್ನು ನೀಡಲಾಗುತ್ತದೆ. ಇದರೊಂದಿಗೆ ಉಚಿತ ರೈಲು ಹಾಗೂ ವಿಮಾನ ಪ್ರಯಾಣ ಸೌಲಭ್ಯಗಳನ್ನು ಸಹ ನೀಡಲಾಗುತ್ತದೆ. ಅದು ಅಲ್ಲದೆ ಉಚಿತ ನಿವೇಶನ, ದೂರವಾಣಿ ಕರೆಗಳು, ವಿದ್ಯುತ್, ಆರೋಗ್ಯ ಹಾಗೂ ನೀರಿನ ಸೌಲಭ್ಯಗಳನ್ನು ಸಹ ಕಲ್ಪಿಸಿಕೊಡಲಾಗುತ್ತದೆ. ಲೋಕಸಭಾ ಸದಸ್ಯರು ಅಧಿವೇಶನದ ಸಂದರ್ಭದಲ್ಲಿ ಅನಿರ್ಬಂದಿತವಾಗಿ ಮಾತನಾಡುವ ಹಕ್ಕನ್ನು ಪಡೆದಿರುತ್ತಾರೆ. ಅಧಿವೇಶನದ ವೇಳೆ ಮಾತನಾಡುವ ಮಾತುಗಳಿಗೆ ಶಿಕ್ಷೆ ನೀಡುವಂತಿಲ್ಲ. ಅಧಿವೇಶನ ನಡೆಯುವ ಮುನ್ನ ಹಾಗೂ ಅಧಿವೇಶನದ ಸಂದರ್ಭಗಳಲ್ಲಿ ಹಾಗೂ ನಂತರ 40 ದಿನಗಳವರೆಗೆ ಲೋಕಸಭಾ ಸದಸ್ಯನನ್ನು ನಾಗರಿಕ ಮೊಕದ್ದಮೆಯಡಿಯಲ್ಲಿ ಬಂಧಿಸುವಂತಿಲ್ಲ. ಒಂದು ವೇಳೆ ಬಂಧಿಸುವ ಸಂದರ್ಭಗಳು ಬಂದರೆ ಸ್ಪೀಕರ್ ಅವರ ಅನುಮತಿ ಬೇಕೇ ಬೇಕು.

ಉಪಸಂಹಾರ

ಒಟ್ಟಾರೆ, ಲೋಕಸಭೆಯ ರಚನೆ ಮತ್ತು ಕಾರ್ಯವಿಧಾನಗಳು ಭಾರತದ ಪ್ರಜಾಪ್ರಭುತ್ವವನ್ನು ಸ್ಥಿರಗೊಳಿಸುತ್ತವೆ. ಸದಸ್ಯರ ಅರ್ಹತೆ, ಅವಧಿ, ಅಧಿವೇಶನಗಳು ಮತ್ತು ಹಕ್ಕುಗಳು ವ್ಯವಸ್ಥಿತ ಆಡಳಿತಕ್ಕೆ ನೆರವಾಗುತ್ತವೆ. ಜನರಿಂದ ಆಯ್ಕೆಯಾದ ಪ್ರತಿನಿಧಿಗಳ ಮೂಲಕ ಜನಾಭಿಪ್ರಾಯವನ್ನು ಕಾನೂನಾಗಿಸುವ ಶಕ್ತಿ ಲೋಕಸಭೆಗೆ ಇದೆ. ಆದ್ದರಿಂದಲೇ ಲೋಕಸಭೆ ಭಾರತೀಯ ಪ್ರಜಾಪ್ರಭುತ್ವದ ಜೀವಾಳವೆಂದು ಕರೆಯಲ್ಪಡುತ್ತದೆ.