ಭಾರತದ ಸಂವಿಧಾನ ಒಂದು ಸಾಮಾಜಿಕ ದಾಖಲೆ – ಗ್ರಾನ್ ವಿಲ್ಲೆ ಅಸಿಸ್ಟೆಂಟ್

ವಿಶಾಲ ಜನಸಂಖ್ಯೆ, ಭಾಷಾ ವೈವಿಧ್ಯತೆ ಮತ್ತು ಸಾಂಸ್ಕೃತಿಕ ಭಿನ್ನತೆಗಳನ್ನು ಹೊಂದಿರುವ ಭಾರತದ ಆಡಳಿತಕ್ಕೆ ಸಂವಿಧಾನವೇ ಆಧಾರವಾಗಿದೆ. ಇದು ಕೇಂದ್ರ–ರಾಜ್ಯ ಸಂಬಂಧಗಳನ್ನು ಸಮನ್ವಯಗೊಳಿಸುತ್ತದೆ. ಪ್ರಜಾಪ್ರಭುತ್ವದ ಯಶಸ್ಸಿಗೆ ಇದು ಬಲವಾದ ಅಡಿಪಾಯವಾಗಿದೆ.

1. ಲಿಖಿತ ಹಾಗೂ ಬೃಹತ್ ಸಂವಿಧಾನ: 

ಭಾರತದ ಸಂವಿಧಾನವು ಪ್ರಪಂಚದಲ್ಲಿ ಅತ್ಯಂತ ವಿಸ್ತಾರವಾದ ಹಾಗೂ ಬೃಹತ್ ಗಾತ್ರದಿಂದ ಕೂಡಿದೆ. ಇದು ಅತಿ ಸೂಕ್ಷ್ಮ ವಿಷಯದಿಂದ ಹಿಡಿದು ಎಲ್ಲಾ ವಿಷಯಗಳನ್ನು ಯಾವುದೇ ಅನುಮಾನ, ಗೊಂದಲ ಹಾಗೂ ಘರ್ಷಣೆಗೆ ಎಡೆ ಮಾಡಿಕೊಡದೆ ಸವಿಸ್ತಾರವಾದ ಬಹುರೂಪದಲ್ಲಿದೆ. ಭಾರತದ ಸಂವಿಧಾನದ ಬೃಹತ್ ಗಾತ್ರವನ್ನು ಆನೆಯ ಗಾತ್ರಕ್ಕೆ ಹೋಲಿಸಿ ಆನೆಯ ಗಾತ್ರದ ಸಂವಿಧಾನ ಎನ್ನುವರು. ಆದರೆ ಭಾರತದ ಶ್ರೀಮಂತ ಚರಿತ್ರೆ ಸಂಸ್ಕೃತಿ ಹಾಗೂ ವಿಭಿನ್ನ ಸಾಮಾಜಿಕ ಆರ್ಥಿಕ ಹಿನ್ನೆಲೆಯನ್ನು ಗಮನಿಸಿದಾಗ ಸಂವಿಧಾನದ ಗಾತ್ರ ದೊಡ್ಡದೇನದಲ್ಲ ಎಂದು ಹೇಳಬಹುದು. ಈ ಸಂವಿಧಾನದಲ್ಲಿ ಆಡಳಿತಕ್ಕೆ ಸಂಬಂಧಿಸಿದ ಎಲ್ಲಾ ವಿಷಯಗಳನ್ನು ವಿವರವಾಗಿ ತಿಳಿಸಲಾಗಿದೆ. ಪೌರತ್ವ, ಮೂಲಭೂತ ಹಕ್ಕುಗಳು, ರಾಜ್ಯ ನಿರ್ದೇಶಕ ತತ್ವಗಳು, ಸಂಯುಕ್ತ ಪದ್ಧತಿ, ತುರ್ತು ಪರಿಸ್ಥಿತಿ ಅಧಿಕಾರಗಳು, ಸ್ವತಂತ್ರ ನ್ಯಾಯಾಂಗ ಪದ್ಧತಿ, ಚುನಾವಣೆಗಳು, ಅಲ್ಪಸಂಖ್ಯಾತ ಹಾಗೂ ಹಿಂದುಳಿದ ವರ್ಗಗಳ ರಕ್ಷಣೆ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ರಚನೆ ಮತ್ತು ಅವುಗಳ ನಡುವಿನ ಸಂಬಂಧಗಳ ವಿಷಯಗಳನ್ನು ಸಂವಿಧಾನ ಹೊಂದಿದೆ. 1949 ನವೆಂಬರ್ 26ರಂದು ಅಂಗೀಕರಿಸಿದ ಸಂವಿಧಾನದಲ್ಲಿ 395 ವಿಧಿಗಳು 8 ಅನುಸೂಚಿಗಳು ಇದ್ದವು. ಕಾಲಕಾಲಕ್ಕೆ ಸಂವಿಧಾನದಲ್ಲಿ ತಿದ್ದುಪಡಿಗಳ ಆದ ಕಾರಣ ಸಂವಿಧಾನದ ವಿಧಿಗಳಲ್ಲಿ ಏರುಪೇರಾಗಿದೆ. ಕೆಲವು ವಿಧಿಗಳು ರದ್ದಾದರೆ ಇನ್ನು ಕೆಲವು ವಿಧಿಗಳು ಹೊಸದಾಗಿ ಸೇರಿಸಲ್ಪಟ್ಟವುಗಳಾಗಿವೆ. ಹೀಗಾಗಿ ಪ್ರಸ್ತುತ 460ಕ್ಕೂ ಹೆಚ್ಚು ವಿಧಿಗಳು, 25 ಭಾಗಗಳು ಹಾಗೂ 12 ಅಧಿಸೂಚಿಗಳು ಇವೆ. ಆದರೂ ವಿಧಿಗಳ ಮೊದಲ ಕ್ರಮ ಸಂಖ್ಯೆ ಮಾತ್ರ ಬದಲಾವಣೆಯಾಗಿಲ್ಲ. 1950 ರಿಂದ ಈವರೆಗೆ ಒಟ್ಟು 104 ಬಾರಿ ಸಂವಿಧಾನದ ವಿಧಿಗಳು ತಿದ್ದುಪಡಿಗೆ ಒಳಗಾಗಿವೆ.

2.  ಪ್ರಸ್ತಾವನೆ: 

ಸಂವಿಧಾನದ ತತ್ವಗಳು, ಮೌಲ್ಯಗಳು, ಗುರಿ ಹಾಗೂ ಉದ್ದೇಶಗಳನ್ನು ತಿಳಿಸುವ ಸಂವಿಧಾನದ ಭಾಗವನ್ನು ಪ್ರಸ್ತಾವನೆ ಅಥವಾ ಪೂರ್ವ ಪೀಠಿಕೆ ಎಂದು ಕರೆಯಲಾಗಿದೆ. ಅಮೇರಿಕ ಸಂವಿಧಾನದ ಪ್ರಭಾವಕ್ಕೆ ಒಳಗಾಗಿ ಭಾರತೀಯ ಪರಿಸರಕ್ಕೆ ಹೊಂದಿಕೊಳ್ಳುವ ಹಾಗೆ ಸಂವಿಧಾನದಲ್ಲಿ ಪ್ರಸ್ತಾವನೆಯನ್ನು ಅಳವಡಿಸಿಕೊಳ್ಳಲಾಗಿದೆ. ಭಾರತದ ಪ್ರಜೆಗಳಾದ ನಾವು ಎಂದು ಆರಂಭವಾಗುವ ಭಾರತದ ಸಂವಿಧಾನದ ಪ್ರಸ್ತಾವನೆಯೂ ಈ ಸಂವಿಧಾನವನ್ನು ಅಂಗೀಕರಿಸಿ ಅಧಿನಿಯಮಿತಗೊಳಿಸಿ ನಮಗೆ ನಾವೇ ಅರ್ಪಿಸಿಕೊಂಡಿದ್ದೇವೆ ಎಂಬುದಾಗಿ ಮುಕ್ತಾಯಗೊಳ್ಳುತ್ತದೆ. ಕೆ. ಎಂ. ಮುನ್ಸಿಯವರು ಸಂವಿಧಾನದ ಪೂರ್ವ ಪೀಠಿಕೆಯನ್ನು ಸಂವಿಧಾನದ ಜಾತಕ ಎಂದು ಕರೆದರೆ, ಮತ್ತೊಬ್ಬ ಚಿಂತಕರು ಇದನ್ನು ”ಸಂವಿಧಾನದ ಒಡವೆ” ಎಂದು ಕರೆದಿದ್ದಾರೆ.

3. ಸಾರ್ವಭೌಮ ಪ್ರಜಾಸತ್ತಾತ್ಮಕ ಗಣರಾಜ್ಯ: 

ಭಾರತದ ಸಂವಿಧಾನದ ಪ್ರಸ್ತಾವನೆಯಲ್ಲಿ ಭಾರತವನ್ನು ಸಾರ್ವಭೌಮ ಪ್ರಜಾಸತ್ತಾತ್ಮಕ ಗಣರಾಜ್ಯವೆಂದು ಘೋಷಿಸಿದೆ. ಹೀಗಾಗಿ ಭಾರತದ ಆಂತರಿಕ ಹಾಗೂ ಬಾಹ್ಯ ವ್ಯವಹಾರಗಳಲ್ಲಿ ಹೊರಗಿನವರು ತಲೆಹಾಕಲು ಸಾಧ್ಯವಿಲ್ಲ. ಎಲ್ಲಾ ವಿಷಯಗಳಲ್ಲಿ ಭಾರತ ಸಂಪೂರ್ಣ ಸ್ವತಂತ್ರವನ್ನು ಪಡೆದುಕೊಂಡು ಒಂದು ಸಾರ್ವಭೌಮ ದೇಶವಾಗಿದೆ. ಇಲ್ಲಿ ಪ್ರಜೆಗಳಿಂದ ಆಯ್ಕೆಯಾದ ಪ್ರತಿನಿಧಿಗಳು ಪ್ರಜೆಗಳ ಆಶಯದಂತೆ ಪ್ರಜೆಗಳ ಕಲ್ಯಾಣಕ್ಕಾಗಿ ದುಡಿಯಬೇಕು. ಪ್ರತಿನಿಧಿಗಳು ಚುನಾವಣಾ ಪ್ರಕ್ರಿಯೆ ಮೂಲಕ ಆಯ್ಕೆಯಾಗುತ್ತಾರೆ. ಪ್ರತಿ ಐದು ವರ್ಷಕ್ಕೊಮ್ಮೆ ನಡೆಯುವ ಸಾರ್ವತ್ರಿಕ ಚುನಾವಣೆಗಳಲ್ಲಿ 18 ವರ್ಷ ತುಂಬಿದ ಸ್ತ್ರೀ ಪುರುಷರು ಮತದಾನ ಮಾಡುವ ಹಕ್ಕುವನ್ನು ಹೊಂದಿದ್ದಾರೆ. ದೇಶದ ಮುಖ್ಯಸ್ಥರು ಜನರಿಂದ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಆಯ್ಕೆಯಾಗುತ್ತಿದ್ದರೆ. ಅದನ್ನು ಗಣರಾಜ್ಯ ಎಂದು ಕರೆಯುತ್ತಾರೆ. ಭಾರತದ ರಾಷ್ಟ್ರಪತಿಯು ರಾಜ್ಯಸಭೆ, ಲೋಕಸಭೆ ಹಾಗೂ ಎಲ್ಲಾ ರಾಜ್ಯಗಳ ವಿಧಾನಸಭಾ ಚುನಾಯಿತ ಪ್ರತಿನಿಧಿಗಳಿಂದ ಆಯ್ಕೆಯಾಗುವ ಕಾರಣ ಭಾರತವು ಗಣರಾಜ್ಯವಾಗಿದೆ ಎಂಬುದಕ್ಕೆ ಪುಷ್ಠಿ ನೀಡಿದಂತಾಗಿದೆ.

4. ಭಾಗಶಃ ನಮ್ಯ ಮತ್ತು ಭಾಗಶಃ ಅನಮ್ಯ ಸಂವಿಧಾನ: 

ಯಾವ ಸಂವಿಧಾನವನ್ನು ವಿಶೇಷ ವಿಧಾನವನ್ನು ಅನುಸರಿಸದೆ ಸುಲಭವಾಗಿ ತಿದ್ದುಪಡಿ ಮಾಡಬಹುದು ಅದನ್ನು ನಮ್ಯ ಎಂದು, ಯಾವ ಸಂವಿಧಾನವನ್ನು ವಿಶೇಷ ವಿಧಾನವನ್ನು ಅನುಸರಿಸಿ ಸುಲಭವಾಗಿ ತಿದ್ದುಪಡಿ ಮಾಡಬಹುದು ಅದನ್ನು  ಅನಮ್ಯ ಸಂವಿಧಾನ ಎಂದು ಕರೆಯುವರು. ಭಾರತದಲ್ಲಿ ಸಂವಿಧಾನದ ಕೆಲವು ಅಂಶಗಳನ್ನು ತಿದ್ದುಪಡಿ ಮಾಡಲು ಸಂಸತ್ತಿನಲ್ಲಿ ಅರ್ಧಕ್ಕಿಂತ ಕಡಿಮೆ ಇಲ್ಲದಂತೆ ರಾಜ್ಯಗಳು ಅನುಮೋದಿಸಬೇಕಾಗುತ್ತದೆ. ಉದಾಹರಣೆ: ರಾಜ್ಯದ ಹೆಸರಿನ ಬದಲಾವಣೆ, ರಾಜ್ಯಗಳ ಗಡಿ ಭಾಗಗಳ ಬದಲಾವಣೆ ಹಾಗೂ ರಾಜ್ಯ ಶಾಸಕಾಂಗದಲ್ಲಿ ಮೇಲ್ಮನೆಯ ರಚನೆ ಅಥವಾ ರದ್ದುಗೊಳಿಸುವುದು ಇತ್ಯಾದಿಗಳನ್ನು ಸರಳ ಬಹುಮತದ ಮೂಲಕ ಬದಲಾಯಿಸಬಹುದು. ಹೀಗಾಗಿ ಭಾರತದ ಸಂವಿಧಾನವು ಇಂಗ್ಲೆಂಡ್ ಸಂವಿಧಾನದಂತೆ ಸುಲಭವೂ ಆಗಿರದೆ ಅಮೆರಿಕಾದ ಸಂವಿಧಾನದಂತೆ ಕಠಿಣವೂ ಆಗಿರದೆ ಇವೆರಡರ ಸಮ್ಮಿಶ್ರದ ಲಕ್ಷಣಗಳಿಂದ ಕೂಡಿದೆ ಎಂದು ಹೇಳಬಹುದು.

5. ಸಂಸದೀಯ ಮಾದರಿ ಸರ್ಕಾರ: 

ನಮ್ಮ ದೇಶವು ಸಂಸದೀಯ ಮಾದರಿ ಸರ್ಕಾರವನ್ನು ಹೊಂದಿದೆ. ಯಾವ ದೇಶವು ಸಂಸದೀಯ ಮಾದರಿ ಸರ್ಕಾರವನ್ನು ಹೊಂದಿರುವುದೋ ಆ ದೇಶದ ಮುಖ್ಯಸ್ಥರು ಹೆಸರಿಗೆ ಮಾತ್ರ ಅಧಿಕಾರವನ್ನು ಹೊಂದಿರುತ್ತಾನೆ. ದೇಶದ ಎಲ್ಲಾ ಅಧಿಕಾರವೂ ಸಂಸತ್ತಿ(ಮಂತ್ರಿಮಂಡಲ)ಕ್ಕೆ ಒಳಪಟ್ಟಿರುತ್ತದೆ. ಉದಾಹರಣೆ: ಇಂಗ್ಲೆಂಡ್ ಹಾಗೂ ಭಾರತದಲ್ಲಿ ಅಧ್ಯಕ್ಷ ಹಾಗೂ ರಾಜರುಗಳು ನಾಮ ಮಾತ್ರ ಕಾರ್ಯಾಂಗ ಅಧಿಕಾರಿಗಳಾಗಿದ್ದು ನೈಜ ಅಧಿಕಾರಕ್ಕೆ ಮಂತ್ರಿಮಂಡಲ ಹೊಣೆಯಾಗಿರುತ್ತದೆ. ಸಂವಿಧಾನವು ಅಧ್ಯಕ್ಷರಿಗೆ ಸಾಕಷ್ಟು ಅಧಿಕಾರಗಳನ್ನು ನೀಡಿದೆಯಾದರೂ ಕೇವಲ ಅನಿವಾರ್ಯ ಸಂಬಂಧಗಳಲ್ಲಿ ಮಾತ್ರ ಅವರು ತಮ್ಮ ಅಧಿಕಾರವನ್ನು ಚಲಾಯಿಸಲು ಅವಕಾಶವಿರುತ್ತದೆ. ಸಾಮಾನ್ಯ ಪರಿಸ್ಥಿತಿಯಲ್ಲಿ ರಾಷ್ಟ್ರಪತಿಗಳು ಮಂತ್ರಿಮಂಡಲದ ಆದೇಶದಂತೆ ಎಲ್ಲಾ ಕಾರ್ಯಗಳನ್ನು ನಿರ್ವಹಿಸಬೇಕಾಗುತ್ತದೆ.

6. ಸಂಯುಕ್ತ ಮತ್ತು ಏಕೀಕೃತ ಸಂವಿಧಾನ: 

“ ಕೇಂದ್ರ ಮತ್ತು ಪ್ರಾಂತ್ಯ ಎಂಬ ಎರಡು ರೀತಿಯ ಸರ್ಕಾರಗಳು ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ವ್ಯವಸ್ಥೆಗೆ ಸಂಯುಕ್ತ ವ್ಯವಸ್ಥೆ” ಎಂದು, ಕೇಂದ್ರ ಸರ್ಕಾರ ಪ್ರಭಲವಾಗಿದ್ದು ರಾಜ್ಯ ಸರ್ಕಾರಗಳು ಕೇಂದ್ರದ ನಿಯಂತ್ರಣದಲ್ಲಿರುವ ವ್ಯವಸ್ಥೆಯನ್ನು ಏಕಾತ್ಮಕ ವ್ಯವಸ್ಥೆ ಎಂದು ಕರೆಯಲಾಗುತ್ತದೆ.

ಭಾರತದ ಸಂವಿಧಾನದ ಮೊದಲನೆಯ ವಿಧಿಯು ಭಾರತವು ರಾಜ್ಯಗಳ ಒಕ್ಕೂಟವಾಗಿದೆ ಎಂದು ವಿವರಿಸಿದೆ. ಆದರೆ ಸಂಯುಕ್ತ ವ್ಯವಸ್ಥೆಯಾಗಿದೆ ಎಂದು ಎಲ್ಲಿಯೂ ತಿಳಿಸಿಲ್ಲ. ಆದರೂ ಸಂಯುಕ್ತ ವ್ಯವಸ್ಥೆಯ ಲಕ್ಷಣಗಳಾದ ಸಂವಿಧಾನದ ಶ್ರೇಷ್ಠತೆ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಅಧಿಕಾರ ಹಂಚಿಕೆ, ಸುಪ್ರೀಂಕೋರ್ಟ್ ಇರುವಿಕೆ, ಅನಮ್ಯ ತಿದ್ದುಪಡಿ ಮುಂತಾದವುಗಳನ್ನು ಅಳವಡಿಸಿಕೊಂಡಿದೆ. ಜೊತೆಗೆ ಏಕಾತ್ಮಕ ಅಂಶಗಳಾಗದ ಏಕ ಪೌರತ್ವ, ಏಕ ಸಂವಿಧಾನ, ಪ್ರಬಲ ಕೇಂದ್ರ ಸರ್ಕಾರ, ಅಖಿಲ ಭಾರತೀಯ ಸೇವೆಗಳು ಹಾಗೂ ಸಾಮಾನ್ಯ ಚುನಾವಣಾ ಆಯೋಗ ಮುಂತಾದವುಗಳನ್ನು ಅಳವಡಿಸಿಕೊಳ್ಳಲಾಗಿದೆ. ಆದುದರಿಂದ ಭಾರತವನ್ನು ಅರೆ ಸಂಯುಕ್ತ ಸರ್ಕಾರ ಎಂದು ಕರೆಯಲಾಗಿದೆ. ಕೆ. ಸಿ. ವ್ಹೀರ್ ಅವರು ಭಾರತದ ಸಂವಿಧಾನವು ಭಾವನಾತ್ಮಕ ಸಂಯುಕ್ತ ವ್ಯವಸ್ಥೆಯಾಗಿದ್ದು ಸಂಯುಕ್ತ ಲಕ್ಷಣಗಳನ್ನು ಹೊಂದಿದ ಏಕಾತ್ಮಕ ವ್ಯವಸ್ಥೆ ಎಂದಿದ್ದಾರೆ.

7. ಮೂಲಭೂತ ಹಕ್ಕುಗಳು: 

ಭಾರತದ ಸಂವಿಧಾನದ ಮೂರನೇ ಭಾಗದಲ್ಲಿ ಮೂಲಭೂತ ಹಕ್ಕುಗಳನ್ನು ಅಳವಡಿಸಿ ಪ್ರಜೆಗಳ ಸ್ವಾತಂತ್ರ್ಯಕ್ಕೆ ಅವಕಾಶ ಕಲ್ಪಿಸಲಾಗಿದೆ. ಭಾರತದ ಸಂವಿಧಾನ ರಚನಾಕಾರರು ಸಂವಿಧಾನದ ಮೂರನೇ ಭಾಗದ 12 ರಿಂದ 15 ನೇ ವಿಧಿಯವರೆಗೆ ಏಳು ಮೂಲಭೂತ ಹಕ್ಕುಗಳನ್ನು ನೀಡಿದ್ದರು. ಆದರೆ 1978 ರಲ್ಲಿ 44ನೇ ವಿಧಿಗೆ ತಿದ್ದುಪಡಿ ತಂದು ಆಸ್ತಿ ಹಕ್ಕನ್ನು ಮೂಲಭೂತ ಹಕ್ಕುಗಳ ಪಟ್ಟಿಯಿಂದ ಕೈಬಿಡಲಾಯಿತು. ಪ್ರಸ್ತುತ ಈಗ ಸಮಾನತೆಯ ಹಕ್ಕು, ಸ್ವಾತಂತ್ರ್ಯದ ಹಕ್ಕು, ಶೋಷಣೆಯ ವಿರುದ್ಧ ಹಕ್ಕು, ಧಾರ್ಮಿಕ ಹಕ್ಕು, ಸಾಂಸ್ಕೃತಿಕ ಮತ್ತು ವಿದ್ಯಾಭ್ಯಾಸದ ಹಕ್ಕು ಹಾಗೂ ಸಂವಿಧಾನಾತ್ಮಕ ಪರಿಹಾರ ಹಕ್ಕುಗಳು ಇವೆ. ಭಾರತೀಯ ಪೌರರು ಮೂಲಭೂತ ಹಕ್ಕುಗಳನ್ನು ಹೊಂದಿದ್ದರೂ ತುರ್ತುಪರಿಸ್ಥಿತಿಯಲ್ಲಿ ಅವುಗಳನ್ನು ಕಸಿದುಕೊಳ್ಳಬಹುದಾಗಿದೆ. ಹಾಗೂ ಸಾಮಾನ್ಯ ಪರಿಸ್ಥಿತಿಯಲ್ಲಿ ಅವುಗಳನ್ನು ಮಿತಿಗೊಳಿಸಬಹುದಾಗಿದೆ.

8. ರಾಜ್ಯ ನಿರ್ದೇಶಕ ತತ್ವಗಳು :(Directive principles of state policy)

ದೇಶದ ಪ್ರಜೆಗಳ ಸಾಮಾಜಿಕ ಮತ್ತು ಆರ್ಥಿಕ ಸುಧಾರಣೆಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಸಂವಿಧಾನ ನೀಡಿರುವ ಮಾರ್ಗದರ್ಶಿ ಸೂತ್ರಗಳಿಗೆ ರಾಜ್ಯ ನಿರ್ದೇಶಕ ತತ್ವಗಳು ಎಂದು ಕರೆಯುತ್ತಾರೆ. ಸಂವಿಧಾನದ ನಾಲ್ಕನೇ ಭಾಗದಲ್ಲಿ ರಾಜ್ಯ ನಿರ್ದೇಶಕ ತತ್ವಗಳನ್ನು ಅಳವಡಿಸಲಾಗಿದ್ದು ಇವು ಸರ್ಕಾರವು ಅನುಸರಿಸಬೇಕಾದ ನೀತಿ ನಿಯಮಗಳ ಬಗೆಗೆ ನಿರ್ದೇಶನಗಳನ್ನು ನೀಡುತ್ತವೆ. ಒಂದು ವೇಳೆ ಸರ್ಕಾರ ಅವುಗಳನ್ನು ಪಾಲಿಸದೆ ಹೋದರೆ ಸರ್ಕಾರದ ವಿರುದ್ಧ ನ್ಯಾಯಾಲಯಕ್ಕೆ ಹೋಗುವಂತಿಲ್ಲ. ನ್ಯಾಯಾಲಯಗಳು ರಾಜ್ಯ ನಿರ್ದೇಶಕ ತತ್ವಗಳನ್ನು ಸರ್ಕಾರದ ಮೇಲೆ ಬಲವಂತವಾಗಿಯೂ ಹೇರುವಂತಿಲ್ಲ. ದೇಶದ ಸಂವಿಧಾನದ ಹೊರತಾಗಿ ಬೇರೆ ಯಾವುದೇ ದೇಶಗಳ ಸಂವಿಧಾನದಲ್ಲಿ ಇಂತಹ ನಿರ್ದೇಶಕ ತತ್ವಗಳು ಕಂಡುಬರುವುದಿಲ್ಲ. ಆದರೂ ನಿರ್ದೇಶಕ ತತ್ವಗಳನ್ನು ರಾಜ್ಯ ಆಡಳಿತದಲ್ಲಿ ಮೂಲಭೂತವೆಂದು ಪರಿಗಣಿಸಲಾಗಿದ್ದು ಸರ್ಕಾರಗಳು ರಾಜ್ಯ ನಿರ್ದೇಶಕ ತತ್ವಗಳನ್ನು ಜಾರಿಗೆ ತರಬೇಕೆಂದು ಹೇಳಲಾಗಿದೆ. ಇಲ್ಲವಾದರೆ ಡಾಕ್ಟರ್ ಅಂಬೇಡ್ಕರ್ ಹೇಳಿದಂತೆ ಜನರ ಕೋಪಕ್ಕೆ ಗುರಿಯಾಗಬೇಕಾಗುತ್ತದೆ. ಹೀಗಾಗಿ ರಾಜ್ಯ ನಿರ್ದೇಶಕ ತತ್ವಗಳು ಸರ್ಕಾರದ ದಾರಿ ದೀಪಗಳಾಗಿವೆ. ರಾಜ್ಯ ನಿರ್ದೇಶಕ ತತ್ವಗಳು ಗಾಂಧೀವಾದ, ಸಮಾಜವಾದ ಹಾಗೂ ಉದಾರವಾದ ತತ್ವಗಳಿಂದ ಸ್ಪೂರ್ತಿ ಪಡೆದಿವೆ.

9. ಮೂಲಭೂತ ಕರ್ತವ್ಯಗಳು:  (Fundamental Duties)

ಮೂಲಭೂತ ಕರ್ತವ್ಯಗಳು ದೇಶದ ಪ್ರಜೆಗಳು ದೇಶಕ್ಕಾಗಿ ನಿರ್ವಹಿಸಬೇಕಾದ ಸರಳ ಕಾರ್ಯಗಳಾಗಿವೆ. ಆರಂಭದಲ್ಲಿ ಭಾರತದ ಸಂವಿಧಾನದಲ್ಲಿ ಭಾರತೀಯ ಪ್ರಜೆಗಳು ನಿರ್ವಹಿಸಬಹುದಾದ ಮೂಲಭೂತ ಕರ್ತವ್ಯಗಳ ಪ್ರಸ್ತಾಪವಿರಲಿಲ್ಲ. 1976ರ 42ನೇ ಸಂವಿಧಾನದ ತಿದ್ದುಪಡಿಯ ಮೂಲಕ ಭಾಗ ನಾಲ್ಕು A 51ನೇ ವಿಧಿ ಅಡಿಯಲ್ಲಿ ಸೇರಿಸಲಾಯಿತು. ಪ್ರತಿ ಹಕ್ಕಿಗೂ ಅನುರೂಪವಾದ ಕರ್ತವ್ಯವಿರುವುದರಿಂದ ರಾಜ್ಯದಿಂದ ಹಕ್ಕುಗಳನ್ನು ಪಡೆದು ಅನುಭವಿಸುವ  ಪ್ರಜೆಗಳು ಕೃತಜ್ಞತಾಪೂರ್ವಕವಾಗಿ ಕೆಲವು ಕರ್ತವ್ಯಗಳನ್ನು ನಿರ್ವಹಿಸಬೇಕಾಗುತ್ತದೆ. ದೇಶ ಸೇವೆಗೆ ಕರೆ ಬಂದರೆ ದೇಶ ಸೇವೆ ಮಾಡುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿದೆ. ರಾಷ್ಟ್ರಧ್ವಜ, ರಾಷ್ಟ್ರಗೀತೆಯನ್ನು ಗೌರವಿಸುವುದು. ದೇಶದ ಏಕತೆ ಮತ್ತು ಅಖಂಡತೆಯನ್ನು ಎತ್ತಿ ಹಿಡಿಯುವುದು ಹಾಗೂ ದೇಶದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವುದು ಪ್ರತಿಯೊಬ್ಬ ಪ್ರಜೆಯ ಮೂಲಭೂತ ಕರ್ತವ್ಯವಾಗಿದೆ.

10. ಸ್ವತಂತ್ರ ನ್ಯಾಯಾಂಗ: (Independent judiciary)

ಭಾರತದಲ್ಲಿ ಪ್ರಜೆಗಳಿಗೆ ಸಮಾನವಾಗಿ ನ್ಯಾಯ ವಿತರಣೆ ಮಾಡುವ ಉದ್ದೇಶದಿಂದ ಭಾರತದ ಸಂವಿಧಾನವು ನ್ಯಾಯಾಂಗವನ್ನು ಶಾಸಕಾಂಗ ಹಾಗೂ ಕಾರ್ಯಾಂಗದಿಂದ ಬೇರ್ಪಡಿಸಿದೆ. ಏಕೆಂದರೆ ನ್ಯಾಯಾಂಗವು ಶಾಸಕಾಂಗ ಮತ್ತು ಕಾರ್ಯಾಂಗದ ಅಂಕಿತದಲ್ಲಿದ್ದರೆ ಅವುಗಳು ನ್ಯಾಯಾಂಗವನ್ನು ದುರುಪಯೋಗಪಡಿಸಿಕೊಳ್ಳಬಹುದೆಂಬ ಗುಮಾನಿಯಿಂದ ಮತ್ತು ನ್ಯಾಯಾಂಗ ವ್ಯವಸ್ಥೆಯಲ್ಲಿ ಸಾರ್ವಜನಿಕರ ನಂಬಿಕೆ ಉಳಿಯುವಂತೆ ಮಾಡಲು ಮತ್ತು ನ್ಯಾಯಾಂಗದ ಪಾವಿತ್ರ್ಯತೆಯನ್ನು ಕಾಪಾಡಲು ಸಂವಿಧಾನ ರಚನಾ ಸಮಿತಿಯ ಸದಸ್ಯರು ನ್ಯಾಯಾಂಗವನ್ನು ಉಳಿದ ಎರಡು ಅಂಗಗಳಿಂದ ದೂರವಿರಿಸಿದರು. ಹೀಗಾಗಿ ಇಂದಿಗೂ ನ್ಯಾಯಾಂಗವು ಪ್ರತ್ಯೇಕವಾಗಿದ್ದು ನ್ಯಾಯಾಧೀಶರ ಸಂಬಳವನ್ನು ಸರ್ಕಾರ ನೀಡದೇ ಬದಲಾಗಿ “ಭಾರತದ ಸಂಗ್ರಹ ನಿಧಿಯಿಂದ ಭರಿಸಲಾಗುತ್ತದೆ.” ನ್ಯಾಯಾಧೀಶರ ನೇಮಕಾತಿಯಲ್ಲಿಯೂ ಸಹ ಸರ್ಕಾರದ ಪಾತ್ರವೇನೂ ಇರುವುದಿಲ್ಲ.

11. ನ್ಯಾಯಾಂಗ ವಿಮರ್ಶೆ:

ಕೇಂದ್ರ ಹಾಗೂ ರಾಜ್ಯ ಶಾಸಕಾಂಗಗಳು ಸಂವಿಧಾನದ ನಿಯಮಾವಳಿಗನುಗುಣವಾಗಿ ಕಾನೂನುಗಳನ್ನು ರೂಪಿಸಬೇಕು. ಶಾಸಕಾಂಗಗಳು ರೂಪಿಸುವ ಕಾನೂನುಗಳು ಸಂವಿಧಾನ ವಿರುದ್ಧವಾಗಿದ್ದರೆ ಅವುಗಳನ್ನು ಅಸಿಂಧು ಅಥವಾ ಕಾನೂನುಬಾಹಿರ ಎಂದು ಘೋಷಿಸುವ ಅಧಿಕಾರ ನ್ಯಾಯಾಂಗಕ್ಕೆ ಇದೆ. ಇದನ್ನೇ ನ್ಯಾಯಿಕ ವಿಮರ್ಶೆ ಎಂದು ಕರೆಯುತ್ತಾರೆ. ಇದರಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಂವಿಧಾನಕ್ಕೆ ವಿರುದ್ಧವಾಗಿ ವರ್ತಿಸುವಂತಿಲ್ಲ. ನ್ಯಾಯಾಂಗ ಒಮ್ಮೆ ಕೊಟ್ಟ ತೀರ್ಪನ್ನು ಯಾರೂ ಪ್ರಶ್ನಿಸುವಂತಿಲ್ಲ. ಸಂವಿಧಾನದ ಅರ್ಥವನ್ನು ಯಾವುದೇ ಪಕ್ಷಪಾತವಿಲ್ಲದೆ ವ್ಯಕ್ತಪಡಿಸಲು ನ್ಯಾಯಾಲಯಗಳಿಗೆ ಈ ಅಧಿಕಾರವನ್ನು ಕೊಡಲಾಗಿಯೇ ವಿನಹಃ ಶಾಸಕಾಂಗಗಳ ಅಧಿಕಾರಗಳನ್ನು ಮೊಟಕುಗೊಳಿಸುವ ಉದ್ದೇಶದಿಂದಲ್ಲ ಎಂಬುದು ಗಮನಾರ್ಹ ಸಂಗತಿಯಾಗಿದೆ. ನ್ಯಾಯಾಂಗ ವಿಮರ್ಶೆಯ ಮೂಲಕ ನ್ಯಾಯಾಲಯವು ಸಂವಿಧಾನದ ಸಮತೋಲನ ಚಕ್ರದಂತೆ ಕಾರ್ಯನಿರ್ವಹಿಸುತ್ತದೆ.

12. ಜಾತ್ಯಾತೀತ ರಾಷ್ಟ್ರ: (Secular state)

 ಯಾವುದೇ ಒಂದು ನಿರ್ದಿಷ್ಟ ಧರ್ಮಕ್ಕೆ ಮಹತ್ವ ನೀಡದೇ ಅಸ್ತಿತ್ವದಲ್ಲಿರುವ ಎಲ್ಲಾ ಧರ್ಮಗಳನ್ನು ಸಮಾನವಾಗಿ ಕಂಡರೆ ಅದನ್ನು ಜಾತ್ಯತೀತ ಎಂದು ಕರೆಯಲಾಗುವುದು. ಈ ಜಾತ್ಯತೀತ ಎಂಬ ಪದವು 1950ರ ಮೂಲ ಸಂವಿಧಾನದಲ್ಲಿ ಇರಲಿಲ್ಲ. ಇದನ್ನು 1976ರಲ್ಲಿ 42ನೇ ಸಾಂವಿಧಾನಿಕ ತಿದ್ದುಪಡಿಯ ಮೂಲಕ ಸೇರಿಸಲಾಯಿತು. ಜಾತ್ಯತೀತ ಎಂಬ ಪದವು ಇಂಗ್ಲಿಷ್ ಪದವಾದ ಸೆಕ್ಯುಲರಿಸಂ ಎಂಬ ಪದದಿಂದ ಬಂದಿದೆ. ಇದು ಕನ್ನಡದಲ್ಲಿ ನಾಸ್ತಿಕ ಅಥವಾ ದೈವ ವಿರೋಧಿ ಎಂದರ್ಥವಾಗುತ್ತದೆ. ಭಾರತಕ್ಕೆ ಸಂಬಂಧಿಸಿದಂತೆ ಜಾತ್ಯತೀತ ಪದವನ್ನು ಧರ್ಮ ನಿರಪೇಕ್ಷತೆಯನ್ನು ಸೂಚಿಸಲು ಬಳಸಲಾಯಿತು. ಭಾರತದ ಸಂವಿಧಾನದ ಪ್ರಕಾರ ಭಾರತವು ಜಾತ್ಯತೀತ ದೇಶವಾಗಿದ್ದು ಹಿಂದೂ, ಇಸ್ಲಾಂ, ಜೈನ, ಬೌದ್ಧ, ಕ್ರೈಸ್ತ ಹಾಗೂ ಪಾರ್ಶಿಗಳನ್ನು ಸಮಾನವಾಗಿ ಗೌರವಿಸುತ್ತದೆ. ರಾಜ್ಯವು ಯಾವುದೇ ಧರ್ಮದ ಪರ ಅಥವಾ ವಿರೋಧಿಯಾಗಿರಬಾರದು. ಭಾರತೀಯನು ತನಗೆ ಇಷ್ಟ ಬಂದ ಮತವನ್ನು ಇತರರಿಗೆ ತೊಂದರೆ ಆಗದಂತೆ ಅವಲಂಬಿಸಿ ಪ್ರಚಾರ ಮಾಡಬಹುದಾಗಿದೆ. ಅಸ್ಪೃಶ್ಯತೆಯ ನಿವಾರಣೆಯು ಭಾರತದ ಸಂವಿಧಾನದ ಮಹತ್ತರವಾದ ಆಶಯವಾಗಿದೆ.

13. ಸಾರ್ವತ್ರಿಕ ವಯಸ್ಕ ಮತದಾನ ಪದ್ಧತಿ: (Universal Audalt Franchies)

ಜಾತಿ, ಲಿಂಗ, ಧರ್ಮ, ಭಾಷೆ, ಬಡತನ, ಸಿರಿತನ, ಬಣ್ಣ, ಅಂತಸ್ತು, ಆಸ್ತಿ ಹಾಗೂ ಸ್ಥಾನಮಾನಗಳ ಆಧಾರದ ಮೇಲೆ ತಾರತಮ್ಯ ಮಾಡದೆ ನಿರ್ದಿಷ್ಟ ವಯೋಮಿತಿ ದಾಟಿದ ದೇಶದ ಎಲ್ಲಾ ಪ್ರಜೆಗಳಿಗೆ ಮತದಾನದ ಹಕ್ಕನ್ನು ನೀಡುವ ವ್ಯವಸ್ಥೆಗೆ ಸಾರ್ವತ್ರಿಕ ವಯಸ್ಕ ಮತದಾನ ಪದ್ಧತಿ ಎಂದು ಕರೆಯುವರು. ದೇಶದಿಂದ ದೇಶಕ್ಕೆ ವಯಸ್ಕ ಮತದಾನ ಪದ್ಧತಿಯಲ್ಲಿ ಸಾಕಷ್ಟು ಬದಲಾವಣೆಗಳು ಕಂಡುಬರುತ್ತವೆ. ಭಾರತದ ಸಂವಿಧಾನ ಪಿತಾಮಹರು ಸಾರ್ವತ್ರಿಕ ವಯಸ್ಕ ಮತದಾನದ ಪದ್ಧತಿಯನ್ನು ಬೆಂಬಲಿಸಿ ಪ್ರಜಾಪ್ರಭುತ್ವದ ಯಶಸ್ವಿ ಕಾರ್ಯಾಚರಣೆಗೆ ಅದನ್ನು ಅಳವಡಿಸಿದರು. ಸಂವಿಧಾನದ 15ನೇ ಭಾಗದಲ್ಲಿರುವ 326 ನೇ ವಿಧಿಯಲ್ಲಿ ವಯಸ್ಕ ಮತದಾನ ಪದ್ಧತಿಯನ್ನು ಪರಿಚಯ ಮಾಡಲಾಯಿತು. ಪ್ರತಿ ಐದು ವರ್ಷಗಳಿಗೊಮ್ಮೆ ನಡೆಯುವ ಸಾರ್ವತ್ರಿಕ ಚುನಾವಣೆಗಳಲ್ಲಿ 18 ವರ್ಷ ತುಂಬಿದ ಎಲ್ಲರಿಗೂ ಮತದಾನ ಮಾಡುವ ಅವಕಾಶವಿದೆ. 1988ರಲ್ಲಿ ಸಂಸತ್ತು 326 ನೇ ವಿಧಿಯನ್ನು ತಿದ್ದುಪಡಿ ಮಾಡಿ ಮತದಾನದ ವಯಸ್ಸನ್ನು 21ರಿಂದ 18 ವರ್ಷಕ್ಕೆ ಇಳಿಸಿತು. ಈ ಸಂವಿಧಾನ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿಗಳು 1989ರಲ್ಲಿ ಅಂಕಿತವನ್ನು ಹಾಕಿದರು. ಈ ಪದ್ಧತಿಯು ಪ್ರಜೆಗಳ ಪರಮಾಧಿಕಾರದ ಸಂಕೇತವಾಗಿದೆ. ಸಮಾಜದ ವಿವಿಧ ಜನಾಂಗಗಳಲ್ಲಿ ರಾಜಕೀಯ ಪ್ರಜ್ಞೆ ಬೆಳೆದು ಬಂದಿದೆ. ಯಾರನ್ನು, ಯಾವಾಗ ಮತ್ತು ಹೇಗೆ ಆಯ್ಕೆ ಮಾಡಬೇಕೆಂಬ ಸಾಮಾನ್ಯ ಜ್ಞಾನ ಇಂದು ಪ್ರಜ್ಞಾವಂತ ನಾಗರಿಕರಿಗೆ ಬಂದಿದೆ. ಅದರಲ್ಲಿ ಅವರು ಯಶಸ್ವಿಯೂ ಆಗುತ್ತಿದ್ದಾರೆ. ತಪ್ಪು ಮಾಡಿದ ಪಕ್ಷವನ್ನು ಪದಚ್ಯುತಿಗೊಳಿಸುವುದರಲ್ಲಿ ಭಾರತೀಯ ಪ್ರಜೆಗಳು  ಧೈರ್ಯ ತೋರುತ್ತಿದ್ದಾರೆ.

ತುರ್ತು ಪರಿಸ್ಥಿತಿಗಳು: (Emergency)

ದೇಶ ಎದುರಿಸಬಹುದಾದ ಅಸಹಜ ಸೈನಿಕ ಸಂವಿಧಾನಾತ್ಮಕ ಅಥವಾ ಆರ್ಥಿಕ ಸನ್ನಿವೇಶಗಳನ್ನು ತುರ್ತು ಪರಿಸ್ಥಿತಿ ಎಂದು ಕರೆಯುತ್ತಾರೆ. ಜರ್ಮನಿಯ ವೈಮರ್ ಸಂವಿಧಾನದಿಂದ ಪ್ರಭಾವಿತರಾದ ಸಂವಿಧಾನ ರಚನಾಕಾರರು 18ನೇ ಭಾಗದ 352 ರಿಂದ 360 ನೇ ವಿಧಿಯವರೆಗೆ ಭವಿಷ್ಯದಲ್ಲಿ ಎದುರಾಗಬಲ್ಲ ಮೂರು ಬಗೆಯ ತುರ್ತು ಪರಿಸ್ಥಿತಿಗಳಿಗೆ ಪರಿಹಾರೋಪಾಯಗಳನ್ನು ನಮೂದಿಸಿದ್ದಾರೆ. ಭಾರತದ ಸಂವಿಧಾನದಲ್ಲಿ ತಿಳಿಸಲಾದ ಮೂರು ಬಗೆಯ ತುರ್ತು ಪರಿಸ್ಥಿತಿಗಳೆಂದರೆ,

೧)  352ನೇ ವಿಧಿಯಂತೆ ಬಾಹ್ಯ ಆಕ್ರಮಣ ಅಥವಾ ಆಂತರಿಕ ಸಶಸ್ತ್ರ ಬಂಡಾಯಗಳ ಕಾರಣಕ್ಕೆ ಘೋಷಿಸುವ ತುರ್ತು ಪರಿಸ್ಥಿತಿ.

೨) 356ನೇ ವಿಧಿಯಂತೆ ರಾಜ್ಯವೊಂದರ ಸಂವಿಧಾನಾತ್ಮಕ ಯಂತ್ರ ಕುಸಿದಾಗ ರಾಜ್ಯಪಾಲರಿಂದ ವರದಿ ಪಡೆದು ಆ ರಾಜ್ಯದಲ್ಲಿ ಘೋಷಿಸಲಾಗುವ ರಾಜ್ಯ ತುರ್ತು ಪರಿಸ್ಥಿತಿ.

೩)  360ನೇ ವಿಧಿಯಂತೆ ದೇಶದಲ್ಲಿ ಆರ್ಥಿಕ ಮುಗ್ಗಟ್ಟು ತಲೆದೂರಿದಾಗ ಘೋಷಿಸಲಾದ ಆರ್ಥಿಕ ತುರ್ತು ಪರಿಸ್ಥಿತಿ. ಸಾಮಾನ್ಯವಾಗಿ ತುರ್ತು ಪರಿಸ್ಥಿತಿ ಜಾರಿಯಾದಾಗ ಕೇಂದ್ರ ಸರ್ಕಾರ ಪ್ರಬಲವಾಗಿ ರಾಜ್ಯ ಸರ್ಕಾರಗಳು ದುರ್ಬಲವಾಗುತ್ತವೆ.

15. ಎರವಲು ಸಂವಿಧಾನ: 

ಭಾರತದ ಸಂವಿಧಾನ ರಚನೆಯಲ್ಲಿ ಸಂವಿಧಾನ ರಚನೆಗಾರರು ಜಗತ್ತಿನ ಬೇರೆಬೇರೆ ದೇಶಗಳ ಸಂವಿಧಾನಗಳ ಉತ್ತಮ ಅಂಶಗಳನ್ನು ಅಳವಡಿಸಿಕೊಂಡರು. ಆದರೆ ಯಥಾವತ್ತಾಗಿ ಬೇರೆ ಸಂವಿಧಾನಗಳ ನಿಯಮಾವಳಿಗಳನ್ನು ಸೇರಿಸದೆ ಭಾರತದ ಪರಿಸ್ಥಿತಿಗೆ ತಕ್ಕ ಹಾಗೆ ಅವುಗಳಲ್ಲಿ ಅಗತ್ಯ ಮಾರ್ಪಾಡಿನೊಂದಿಗೆ ಅಳವಡಿಸಲು ಪ್ರಯತ್ನಿಸಿದ್ದಾರೆ. ಮೂಲಭೂತ ಹಕ್ಕುಗಳು, ಸರ್ವೋಚ್ಚ ನ್ಯಾಯಾಲಯ, ಪ್ರಸ್ತಾವನೆ ಮುಂತಾದವುಗಳ ಮೇಲೆ ಅಮೇರಿಕ ಸಂವಿಧಾನದ ಪ್ರಭಾವವಾಗಿದ್ದರೆ. ಸಂಸತ್ತು, ಮಂತ್ರಿ ಮಂಡಲ, ಶಾಸನ ರಚನೆ ಮುಂತಾದವುಗಳ ಮೇಲೆ ಇಂಗ್ಲೆಂಡ್ ಸಂವಿಧಾನದ ಪ್ರಭಾವ ಹೆಚ್ಚಾಗಿದೆ. ರಾಜ್ಯ ನಿರ್ದೇಶಕ ತತ್ವಗಳು ಐರ್ಲೆಂಡ್ ಸಂವಿಧಾನದಿಂದ ಪ್ರಭಾವಿತವಾಗಿದ್ದರೆ, ತುರ್ತುಪರಿಸ್ಥಿತಿಯು ಜರ್ಮನಿಯ ಸಂವಿಧಾನದಿಂದ ಪ್ರಭಾವಿತವಾಗಿದೆ. ಜೊತೆಗೆ ಕೆನಡಾ ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ಸಂವಿಧಾನಗಳು ಹಲವು ವಿಧಗಳಲ್ಲಿ ನೆರವಾಗಿವೆ.

16.  ಏಕ ಪೌರತ್ವ: (One citizenship)

ಭಾರತದಲ್ಲಿ ಏಕ ಪೌರತ್ವ ವ್ಯವಸ್ಥೆ ಇದೆ. ಕಾಶ್ಮೀರಿನಿಂದ ಕನ್ಯಾಕುಮಾರಿಯವರೆಗೆ ಎಲ್ಲಾ ಪ್ರಾಂತ್ಯಗಳ ಜನರು ಸಮಾನ ಹಕ್ಕುಗಳನ್ನು ಹೊಂದಿದ್ದಾರೆ. ಹಾಗೆಯೇ ದೇಶದಾದ್ಯಂತ ಒಂದೇ ಕಾನೂನು ಒಂದೇ ಸಂವಿಧಾನವಿದ್ದು ಎಲ್ಲ ಜನರಿಗೂ ಸಮಾನವಾಗಿ ಅನ್ವಯವಾಗುತ್ತದೆ. ಪ್ರಜೆಗಳು ಯಾವುದೇ ರಾಜ್ಯದಲ್ಲಿ ಜನಿಸಿದರೂ ಎಲ್ಲರೂ ಭಾರತೀಯ ಪ್ರಜೆಗಳೇ ಆಗಿರುತ್ತಾರೆ. ಸಂವಿಧಾನದ 11ನೇ ವಿಧಿ ನೀಡಿರುವ ಅಧಿಕಾರದ ಅನ್ವಯ ಸಂಸತ್ತು ಪೌರತ್ವಕ್ಕೆ ಸಂಬಂಧಿಸಿದಂತೆ 1955ರ ಪೌರತ್ವ ಕಾನೂನನ್ನು ಅಂಗೀಕರಿಸಿತು. ಆ ಪ್ರಕಾರ ಏಕ ಸಂವಿಧಾನ, ಏಕ ಪೌರತ್ವ ಹಾಗೂ ಏಕ ರಾಷ್ಟ್ರ ಭಾಷೆ ಎಂಬುದನ್ನು ತಿಳಿಸಿ ಹೇಳಿದೆ. ಇದರ ಮೂಲ ಉದ್ದೇಶ ದೇಶದ ಐಕ್ಯತೆಯನ್ನು ಸಾಧಿಸುವುದಾಗಿದೆ.

17. ಅಧಿಕಾರ ವಿಕೇಂದ್ರೀಕರಣ: (Decentralization of power)

ಕೇಂದ್ರ ಹಾಗೂ ರಾಜ್ಯಗಳ ನಡುವೆ ಅಧಿಕಾರ ವಿಭಜನೆಯಾಗುವುದನ್ನು ಅಧಿಕಾರ ವಿಕೇಂದ್ರೀಕರಣ ಎಂದು ಕರೆಯಲಾಗುವುದು. ಇಲ್ಲಿ ಮೂರು ವಿಧವಾದ ಅಧಿಕಾರ ಹಂಚಿಕೆಯಾಗುವುದನ್ನು ಕಾಣಬಹುದಾಗಿದೆ. ಕೇಂದ್ರ ಸರ್ಕಾರಕ್ಕೆ 97 ವಿಷಯಗಳನ್ನು, ಕೇಂದ್ರ ಸೂಚಿಯಲ್ಲಿ ರಾಜ್ಯಗಳಿಗೆ 66 ವಿಷಯಗಳನ್ನು ರಾಜ್ಯ ಸೂಚಿಯಲ್ಲಿ ವಿಭಜಿಸುವುದಲ್ಲದೆ, ಸಮವರ್ತಿ ಸೂಚಿಯಲ್ಲಿರುವ ಕೆಲವಾರು ವಿಷಯಗಳ ಮೇಲೆ ಕೇಂದ್ರ ಹಾಗೂ ರಾಜ್ಯಗಳೆರಡೂ ಅಧಿಕಾರವನ್ನು ಹೊಂದಿವೆ. ಈ ಅಧಿಕಾರದ ವಿಭಜನೆಯನ್ನು ನೋಡಿದಾಗ ಕೇಂದ್ರಕ್ಕೆ ರಾಜ್ಯಗಳಿಂದ ಹೆಚ್ಚಿನ ಅಧಿಕಾರಗಳಿರುವುದು ಕಂಡುಬರುತ್ತದೆ.

 18. ಅಖಿಲ ಭಾರತ ಸೇವೆಗಳು: (All indian services)

ಭಾರತದ ಫೆಡರಲ್ ಪದ್ಧತಿಯಲ್ಲಿ ಕೇಂದ್ರ ಹಾಗೂ ರಾಜ್ಯಗಳಿಗೆ ಪ್ರತ್ಯೇಕ ಆಡಳಿತ ಸೇವೆಗಳಿದ್ದರೂ ಸಂವಿಧಾನದ 312ನೇ ವಿಧಿ ಅನ್ವಯ ಅಖಿಲ ಭಾರತ ಸೇವೆಗಳಿಗೆ ಅವಕಾಶ ಮಾಡಲಾಗಿದೆ. ಈ ವಿಧಿಯ ಅನ್ವಯ ರಾಜ್ಯಸಭೆಯ ಶಿಫಾರಸ್ಸಿನ ಆಧಾರದ ಮೇಲೆ ಸಂಸತ್ತು ಅಖಿಲ ಭಾರತ ಸೇವೆಗಳನ್ನು ರಚಿಸಲು ಅಧಿಕಾರ ಪಡೆದಿದೆ. ಕೇಂದ್ರದಲ್ಲಿ ಕೇಂದ್ರ ಲೋಕಸೇವಾ ಆಯೋಗವಿದ್ದು ಅದು ಐಎಎಸ್, ಐಪಿಎಸ್, ಐಎಫ್ಎಸ್, ಐಆರ್‌ಎಸ್ ನಂತಹ  ಪರೀಕ್ಷೆಗಳನ್ನು ನಡೆಸಿ ದಕ್ಷ ಅಧಿಕಾರಿಗಳನ್ನು ನೇಮಕ ಮಾಡುತ್ತದೆ. ಇನ್ನು ಪ್ರತಿ ರಾಜ್ಯಗಳಲ್ಲಿ ಒಂದೊಂದು ರಾಜ್ಯ ಲೋಕಸೇವಾ ಆಯೋಗಗಳಿದ್ದು ಕೆಎಎಸ್ ನಂತಹ ಪರೀಕ್ಷೆಗಳನ್ನು ನಡೆಸಿ ಅಧಿಕಾರಿಗಳ ನೇಮಕ ಮಾಡಿ ಆಡಳಿತ ಯಂತ್ರವನ್ನು ಪರಿಣಾಮಕಾರಿಯಾಗಿ ಚುರುಕುಗೊಳಿಸಲಾಗುತ್ತದೆ.

19. ಉಚಿತ ಪ್ರಾಥಮಿಕ ಶಿಕ್ಷಣ: (Free primary education)

ಒಂದು ದೇಶದ ಪ್ರಗತಿಗೆ ಅಲ್ಲಿನ ಜನರೇ ಕಾರಣರಾಗುತ್ತಾರೆ. ಅವರನ್ನು ಪೌರರು ಎಂದು ಕರೆಯಲಾಗುವುದು. ಅವರು ರಾಷ್ಟ್ರದ ಉನ್ನತಿಗಾಗಿ ಹೋರಾಡಬೇಕಾದರೆ ಅಕ್ಷರಸ್ಥರಾಗುವುದು ಬಹಳ ಮುಖ್ಯವಾದುದು. ಅನಕ್ಷರಸ್ಥರಿಂದ ಯಾವ ದೇಶವೂ ಪ್ರಗತಿಯನ್ನು ಸಾಧಿಸಲು ಸಾಧ್ಯವಾಗದು. ಆದುದರಿಂದ ಭಾರತದ ಸಂವಿಧಾನದಲ್ಲಿ 14 ವರ್ಷದ ಎಲ್ಲಾ ಮಕ್ಕಳಿಗೂ ಉಚಿತ ಹಾಗೂ ಕಡ್ಡಾಯ ಶಿಕ್ಷಣವನ್ನು ನೀಡಲು ನಿರ್ದೇಶನ ನೀಡಿದೆ. ಇದರಿಂದ ಅನಕ್ಷರಸ್ಥರ ಸಂಖ್ಯೆ ಕಡಿಮೆಯಾಗಿ ಅಕ್ಷರಸ್ಥರ ಸಂಖ್ಯೆ ಹೆಚ್ಚಾಗಲು ಸಾಧ್ಯವಾಗುತ್ತದೆ.

20. ಸ್ತ್ರೀಯರ ಸ್ಥಾನಮಾನಗಳು: (Position of women)

ಭಾರತದ ಸಂವಿಧಾನದಲ್ಲಿ ಸ್ತ್ರೀಯರಿಗೆ ಪುರುಷನಷ್ಟೇ ಸರಿಸಮಾನವಾದ ಸ್ಥಾನಮಾನಗಳನ್ನು ನೀಡಲಾಗಿದೆ. ಚುನಾವಣೆಗಳಲ್ಲಿ ಸ್ಪರ್ಧಿಸುವ, ಮತ ಹಾಕುವ ಮತ್ತು ಸರ್ಕಾರಿ ಹುದ್ದೆಗಳನ್ನು ಪಡೆಯುವಾಗ ಮಹಿಳೆಯರಿಗೆ ಶೇಕಡ 33 ರಷ್ಟು ಮೀಸಲಾತಿಯನ್ನು ನೀಡಲಾಗಿದೆ. ಇದರಿಂದ ಮಹಿಳಾ ಸಬಲೀಕರಣ ಸಾಧ್ಯವಾಗಿದೆ. ಪರಿಣಾಮವಾಗಿ ದೇಶದಲ್ಲಿ ಸತತವಾಗಿ 16 ವರ್ಷಗಳವರೆಗೆ ಮಹಿಳೆಯೊಬ್ಬಳು ಪ್ರಧಾನಮಂತ್ರಿಯಾಗಿ ಕಾರ್ಯನಿರ್ವಹಿದಳು. 6 ವರ್ಷಗಳ ಕಾಲ ಮಹಿಳೆಯೊಬ್ಬಳು ಕರ್ನಾಟಕ ವಿಧಾನಸಭೆಯ ಅಧ್ಯಕ್ಷಳಾಗಿದ್ದಳು. ಕಿರಣ್‌ ಬೇಡಿ ದೇಶದ ಮೊದಲ ಮಹಿಳಾ ಐ.ಪಿ.ಎಸ್‌ ಅಧಿಕಾರಿಯಾಗಿದ್ದರು. ಇಂದು ದೇಶದ ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆಯರು ಕಾರ್ಯನಿರ್ವಹಿಸುವುದನ್ನು ನೋಡಿದರೆ ಮಹಿಳೆಯರಿಗೆ ಸಂವಿಧಾನದಲ್ಲಿ ನೀಡಿದ ಸಮಾನಾವಕಾಶವೇ ಕಾರಣವಾಗಿದೆ.

ಉಪಸಂಹಾರ

ಭಾರತದ ಸಂವಿಧಾನವು ದೇಶದ ಆಡಳಿತ ವ್ಯವಸ್ಥೆಯ ಹೃದಯವಾಗಿದ್ದು ಪ್ರಜೆಗಳ ಹಕ್ಕುಗಳನ್ನು ಕಾಪಾಡುವ ರಕ್ಷಾಕವಚವಾಗಿದೆ. ಇದು ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ಸಾಮಾಜಿಕ ನ್ಯಾಯವನ್ನು ಬಲಪಡಿಸುತ್ತದೆ. ಕಾಲಾನುಕ್ರಮದಲ್ಲಿ ತಿದ್ದುಪಡಿಗಳ ಮೂಲಕ ಸಮಾಜದ ಬದಲಾವಣೆಗಳಿಗೆ ಹೊಂದಿಕೊಳ್ಳುತ್ತಿರುವುದು ಇದರ ವಿಶೇಷತೆ. ಆದ್ದರಿಂದ ಭಾರತದ ಸಂವಿಧಾನವು ಕೇವಲ ಕಾನೂನು ಪುಸ್ತಕವಲ್ಲ; ಅದು ಭಾರತದ ಆತ್ಮ ಮತ್ತು ದರ್ಶನವಾಗಿದೆ.