ʻʻಕಾಡುಗಳನ್ನು ಬರಿದು ಮಾಡುವ ಪ್ರಕ್ರಿಯೆಯನ್ನು ಅರಣ್ಯ ನಾಶ ಎಂದು ಕರೆಯಲಾಗಿದೆ.ʼʼ ಇಂದು ನಿಸರ್ಗದ ಮೇಲಿನ ಮಾನವನ ದಾಳಿಯಿಂದ ಅರಣ್ಯಗಳು ಬರಿದಾಗುತ್ತ ಹೊರಟಿವೆ. ಕಳೆದ 30 ವರ್ಷಗಳ ಅವಧಿಯಲ್ಲಿ 500 ದಶಲಕ್ಷ ಎಕರೆಗೂ ಅಧಿಕ ಪ್ರಮಾಣದ ಕಾಡು ನಾಶವಾಗಿದೆ ಎಂದರೆ ಊಹೆ ಮಾಡಿಕೊಳ್ಳಿ ಮನುಷ್ಯ ಎಷ್ಟು ದುರಾಸೆಗೆ ಬಿದ್ದಿದ್ದಾನೆ ಎಂದು. ವಸತಿಗಾಗಿ, ಇಂಧನವಾಗಿ, ನೀರಾವರಿ ಹಾಗೂ ಅಣೆಕಟ್ಟುಗಳ ನಿರ್ಮಾಣಕ್ಕಾಗಿ ನಿತ್ಯವೂ ಕಾಡುಗಳು ತಮ್ಮ ಕೊನೆಯ ದಿನಗಳನ್ನು ಎಣಿಸುತ್ತಾ ಬರುತ್ತಿವೆ. ಕಾಡುಗಳು ಬರಿದಾದ ನಂತರ ಅಲ್ಲಿನ ಪ್ರಾಣಿಗಳನ್ನು ಬೇಟೆಯಾಡಿ ತನ್ನ ಹೊಟ್ಟೆಯನ್ನು ತುಂಬಿಸಿಕೊಳ್ಳುತ್ತಿದ್ದಾನೆ. ಹೀಗಾಗಿ ಲಕ್ಷಾಂತರ ಕಾಡು ಪ್ರಾಣಿಗಳು ಕಣ್ಮರೆಯಾಗಿವೆ.

ಅರಣ್ಯ ನಾಶದ ಪರಿಣಾಮಗಳು ಈ ಕೆಳಗಿನಂತಿವೆ

1. ಮಳೆಯ ಪ್ರಮಾಣದಲ್ಲಿ ಇಳಿಕೆ:

ದಿನೇ ದಿನೇ ಕಾಡುಗಳು ನಾಶವಾಗುತ್ತಿರುವ ಪರಿಣಾಮದಿಂದಾಗಿ ವಾರ್ಷಿಕ ಮಳೆಯ ಪ್ರಮಾಣದಲ್ಲಿ ಏರುಪೇರುಗಳು ಆಗುತ್ತಿವೆ. ಒಮ್ಮೆ ಮಳೆ ಅತಿಯಾಗಿ ಬಂದರೆ, ಇನ್ನೊಮ್ಮೆ ಕಡಿಮೆಯಾಗಿ ಬರುತ್ತದೆ. ಈಗಂತೂ ಮಳೆಗಾಲವು ಯಾವಾಗ ಬರುತ್ತದೆ ಎಂಬುದೇ ಗೊತ್ತಾಗದ ರೀತಿಯಲ್ಲಿ ಕಾಲಮಾನಗಳಲ್ಲಿ ಬದಲಾವಣೆಗಳು ಆಗುತ್ತಿವೆ. ಅತಿಯಾದ ಮಳೆ ಬಂದರೆ ಬೆಳೆಗಳೆಲ್ಲ ಕೊಚ್ಚಿಕೊಂಡು ಹೋಗುತ್ತವೆ. ಮಳೆ ಬರದೆ ಬರಗಾಲ ಬಿದ್ದರೆ ಭೂಮಿಯು ಬರಡಾಗಿ ಬೆಳೆಗಳೆಲ್ಲ ಒಣಗಿ ಹೋಗುತ್ತವೆ.

2. ಜೀವಿಗಳ ಆವಾಸಸ್ಥಾನ ಕೊನೆಯಾಗುವುದು:

ಅರಣ್ಯವು ವಿವಿಧ ಪಕ್ಷಿಸಂಕುಲ ಹಾಗೂ ಪ್ರಾಣಿ ಸಂಕುಲಗಳಿಗೆ ಆವಾಸಸ್ಥಾನವಾಗಿದೆ. ಕಾಡು ದಿನೇ ದಿನೇ ಕಡಿಮೆಯಾಗುವ ಕಾರಣಕ್ಕಾಗಿ ಎಣಿಕೆಗೆ ಸಿಗದಷ್ಟು ಜೀವಸಂಕುಲಗಳು ಕಣ್ಮರೆಯಾಗುತ್ತವೆ. ಈಗಾಗಲೇ ಲಕ್ಷಾಂತರ ಪ್ರಾಣಿ, ಪಕ್ಷಿ ಪ್ರಭೇದಗಳು ಅಳಿವಿನ ಅಂಚಿಗೆ ಬಂದು ತಲುಪಿವೆ.

3. ಜೈವಿಕ ವೈವಿಧ್ಯತೆಗಳ ನಾಶ:

ಅರಣ್ಯಗಳ ನಾಶದೊಂದಿಗೆ ಪಶು ಪಕ್ಷಿಗಳು ಸಹ ವಿನಾಶದತ್ತ ಸಾಗಿವೆ. ಇದರಿಂದ ಪರಿಸರದಲ್ಲಿ ಅಸಮತೋಲನ ಉಂಟಾಗುತ್ತದೆ.

4. ಸೂರ್ಯನ ಪ್ರಕರತೆ:

ಸೂರ್ಯನ ವಿಪರೀತ ಶಾಖದಿಂದ ಭೂಮಿಯ ಮೇಲಿನ ಮಣ್ಣಿನ ತೇವಾಂಶ ಆವಿಯಾಗುತ್ತದೆ. ಇದರಿಂದ ಮಣ್ಣು ಬಿರುಕು ಬಿಡುತ್ತದೆ. ಹಾಗಾಗಿ ರೈತರು ಬೆಳೆದ ಬೆಳೆಗಳು ಒಣಗಿ ಹೋಗುತ್ತವೆ. ಮರ ಗಿಡಗಳು ಉದುರಿ ಬೀಳುತ್ತವೆ.

5. ಮಣ್ಣಿನ ಸವೆತ:

ಅರಣ್ಯನಾಶದಿಂದ ನಿರಂತರವಾಗಿ ಮಣ್ಣಿನ ಸವಕಳಿ ಉಂಟಾಗುತ್ತದೆ. ಕಾಲ ಕಳೆದಂತೆ ಭೂಮಿಯ ಅವನತಿಯು ಉಂಟಾಗಿ ಮರುಭೂಮೀಕರಣಕ್ಕೆ ಕಾರಣವಾಗುತ್ತದೆ.

6. ಔಷಧಿ ಸಸ್ಯಗಳ ನಾಶ:

ಅರಣ್ಯವು ತನ್ನ ಒಡಲಿನಲ್ಲಿ ಲಕ್ಷಾಂತರ ವಿವಿಧ ಗಿಡಮೂಲಿಕೆ ಔಷಧಿ ಸಸ್ಯಗಳನ್ನು ಹುದುಗಿಸಿಕೊಂಡಿದೆ. ಕಾಡಿನ ನಾಶದಿಂದಾಗಿ ಅಮೂಲ್ಯವಾದ ಗಿಡ ಮೂಲಿಕೆಗಳು ನಮಗೆ ಮುಂದೆ ಸಿಗದೇ ಹೋಗಬಹುದು.

7. ಬುಡಕಟ್ಟು ಜನಾಂಗದ ಜೀವನ ನಾಶ:

ಪ್ರಸ್ತುತ ಅರಣ್ಯವನ್ನೇ ಅವಲಂಬಿಸಿ ಬದುಕುತ್ತಿರುವ ಬುಡಕಟ್ಟು ಜನಾಂಗ ಅರಣ್ಯ ನಾಶದಿಂದಾಗಿ ಬೀದಿಗೆ ಬರುವ ಸ್ಥಿತಿ ಬಂದಿದೆ. ಅವರ ಬದುಕು ಇಂದು ಅತಂತ್ರವಾಗಿದೆ.

8. ಮಾಲಿನ್ಯದ ಪ್ರಮಾಣದಲ್ಲಿ ಹೆಚ್ಚಳ:

ಅರಣ್ಯ ನಾಶದಿಂದಾಗಿ ವಾಯುಮಾಲಿನ್ಯ, ಜಲ ಮಾಲಿನ್ಯ, ಶಬ್ದ ಮಾಲಿನ್ಯ ಹೆಚ್ಚಾಗಿ ಅವುಗಳನ್ನು ನಿಯಂತ್ರಣಕ್ಕೆ ತರಲು ಆಗದ ಸ್ಥಿತಿಗೆ ಬಂದು ತಲುಪಿದೆ. ಇಂದು ವಾತಾವರಣದಲ್ಲಿ ಧೂಳಿನ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ.

9. ಹವಾಮಾನದ ಮೇಲೆ ಪರಿಣಾಮ:

ಅರಣ್ಯ ನಾಶದಿಂದ ಇಂಗಾಲದ ಡೈ ಆಕ್ಸೈಡ್ ಮತ್ತು ಆಮ್ಲಜನಕದ ಆವರ್ತಕ್ರಿಯೆ ಸಾರಾಗವಾಗಿ ಮುಂದುವರೆಯದೆ ವಾತಾವರಣದಲ್ಲಿ ಅಸಮತೋಲನ ಉಂಟಾಗಿದೆ. ಭೂಮಂಡಲದ ತಾಪಮಾನ ಹೆಚ್ಚಾಗಿದೆ. ಹವಾಗುಣ ಮತ್ತು ವಾಯುಗುಣದಲ್ಲಿ  ಬದಲಾವಣೆ ಕಂಡುಬಂದಿದೆ. ಅತಿಯಾದ ಶಾಖದಿಂದ ಮಾನವನ ಆರೋಗ್ಯದ ಮೇಲೆ ಗಂಭೀರ ಪರಿಣಾಮಗಳು ಉಂಟಾಗುತ್ತವೆ. ಆಮ್ಲಜನಕದ ಕೊರತೆಯಿಂದ ಈಗಾಗಲೇ ದೆಹಲಿಯ ಜನರು ಹಣ ಪಾವತಿಸಿ ಆಮ್ಲಜನಕವನ್ನು ಮೂಗಿಗೆ ಕಟ್ಟಿಕೊಂಡು ಓಡಾಡುತ್ತಾರೆ

10. ಅರಣ್ಯಗಳ ಸಂರಕ್ಷಣೆ:

ಅರಣ್ಯಗಳನ್ನು ಬೆಳೆಸುವುದು, ಉಳಿಸುವುದು ಹಾಗೂ ಅವುಗಳನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುವುದನ್ನು ಅರಣ್ಯಗಳ ಸಂರಕ್ಷಣೆ ಎಂದು ಕರೆಯಲಾಗುತ್ತದೆ. ಅರಣ್ಯಗಳನ್ನು ರಕ್ಷಿಸಲು ಈ ಕೆಳಗಿನ ಕ್ರಮಗಳನ್ನು ಕಾರ್ಯಗತಗೊಳಿಸಬೇಕಾಗುತ್ತದೆ. ಅವುಗಳೆಂದರೆ

  1. ಪದೇಪದೇ ಬೆಂಕಿಗೆ ಆಹುತಿಯಾಗುತ್ತಿರುವ ಅರಣ್ಯವನ್ನು ರಕ್ಷಿಸುವುದು ಬಹಳ ಅಗತ್ಯವಾದ ಕೆಲಸವಾಗಿದೆ.
  2. ವೈಜ್ಞಾನಿಕ ರೀತಿಯಲ್ಲಿ ಕ್ರಿಮಿ ಕೀಟಗಳ ಅಂಟು ರೋಗಗಳನ್ನು ತಡೆಗಟ್ಟುವ ಕಾರ್ಯಗಳನ್ನು ಹಮ್ಮಿಕೊಳ್ಳುವುದು.
  3. ಬೆಲೆ ಬಾಳುವ ಮರಗಳನ್ನು ರಕ್ಷಿಸುವುದು ಮತ್ತು ಅವುಗಳ ಬುಡದಲ್ಲಿ ಬೆಳೆದ ಇತರೆ ಸಸ್ಯಗಳು ಮತ್ತು ಗಿಡಗಳನ್ನು ಕಾಪಾಡುವುದು.
  4. ವಯಸ್ಸಾದ ಮರವನ್ನು ಕಡಿಯುವುದು ಮತ್ತು ಅದರ ಸ್ಥಳದಲ್ಲಿ ಮತ್ತೊಂದು ಸಸಿಯನ್ನು ನೆಡುವುದು.
  5. ಮರಗಳನ್ನು ಕಡಿಯುವಾಗ ಮತ್ತು ಅವುಗಳನ್ನು ಸಾಗಿಸುವಾಗ ಇತರೆ ಮರಗಳಿಗೆ ಹಾನಿಯಾಗದಂತೆ ಎಚ್ಚರ ವಹಿಸುವುದು.
  6. ಅರಣ್ಯಗಳ ಮರಗಳ ಕಳ್ಳ ಸಾಗಾಣಿಕೆ ಹಾಗೂ ಅತಿಕ್ರಮವನ್ನು ತಡೆಗಟ್ಟಲು ಕಾನೂನುಗಳನ್ನು ಜಾರಿಗೆ ತರುವುದು.
  7. ದನ ಕರುಗಳು ಹುಲ್ಲುಗಾವಲುಗಳಲ್ಲಿ ನಿರಂತರವಾಗಿ ಮೇಯುವುದನ್ನು ನಿಯಂತ್ರಿಸುವುದು.
  8. ರಾಷ್ಟ್ರೀಯ ಉದ್ಯಾನ, ವನ್ಯಜೀವಿಧಾಮ, ಪಕ್ಷಿಧಾಮ ಮುಂತಾದವುಗಳನ್ನು ಸಮರ್ಪಕವಾಗಿ ನಿರ್ವಹಿಸುವುದು.
  9. ಅರಣ್ಯಗಳನ್ನು ಸಂರಕ್ಷಿಸುವುದು ಹಾಗೂ ನಿರ್ವಹಣೆಯ ಕುರಿತು ಕಾಲ ಕಾಲಕ್ಕೆ ತರಬೇತಿಯನ್ನು ನೀಡುವುದು. ಅದಕ್ಕೆ ಸಂಬಂಧಿಸಿದಂತೆ ಸಂಶೋಧನಾ ಕಾರ್ಯಗಳನ್ನು ಕೈಗೊಳ್ಳುವುದು.
  10. ಸಾಮಾಜಿಕ ಅರಣ್ಯವನ್ನು ಬೆಳೆಸುವುದನ್ನು ಪ್ರೋತ್ಸಾಹಿಸುವುದು.
  11. ರಸ್ತೆಯ ಅಕ್ಕ ಪಕ್ಕದಲ್ಲಿ, ರೈಲು ಮಾರ್ಗಗಳ ಬದಿಯಲ್ಲಿ, ಕಾಲುವೆಗಳ ದಂಡೆ, ಗೋಮಾಳ, ಕೆರೆಗಳ ದಂಡೆ, ಶಾಲಾ ಕಾಲೇಜುಗಳ ಆವರಣ ಹಾಗೂ ಕೈಗಾರಿಕಾ ಪ್ರದೇಶಗಳಲ್ಲಿ ಸಸಿಗಳನ್ನು ನೆಡುವುದನ್ನು ಪ್ರೋತ್ಸಾಹಿಸಬೇಕು.
  12. ಅರಣ್ಯಗಳನ್ನು ಬೆಳೆಸುವ ಉಳಿಸುವ ಬಗ್ಗೆ ಸಾರ್ವಜನಿಕರಲ್ಲಿ ಪ್ರಜ್ಞೆ ಮೂಡಿಸುವುದು.
  13. ಅರಣ್ಯ ಸಂರಕ್ಷಣೆಗಾಗಿ ಇತ್ತೀಚಿಗೆ ಚಿಪ್ಕೋ ಚಳುವಳಿ, ಅಪ್ಪಿಕೋ ಚಳುವಳಿಗಳನ್ನು ಹಮ್ಮಿಕೊಂಡಿದ್ದು ಇದೊಂದು ಉತ್ತಮ ಕಾರ್ಯಯೋಜನೆಯಾಗಿದೆ.

ಉಪಸಂಹಾರ

ಅರಣ್ಯನಾಶವು ಮಾನವನ ಜೀವನದ ಮೇಲೆ ಮಾತ್ರವಲ್ಲದೆ ಸಂಪೂರ್ಣ ಜೀವಜಗತ್ತಿನ ಅಸ್ತಿತ್ವದ ಮೇಲೆ ಭಾರಿ ಅಪಾಯವನ್ನುಂಟು ಮಾಡುತ್ತಿದೆ. ಮಳೆಗಾಲದ ಅಸ್ಥಿರತೆ, ಹವಾಮಾನ ಬದಲಾವಣೆ, ಜೀವಜಾಲದ ನಾಶ ಇವೆಲ್ಲವೂ ಅರಣ್ಯ ನಾಶದ ನೇರ ಪರಿಣಾಮಗಳಾಗಿವೆ. ಆದ್ದರಿಂದ ಅರಣ್ಯ ಸಂರಕ್ಷಣೆ ಇಂದಿನ ಅಗತ್ಯವಾಗಿದೆ. ಸರ್ಕಾರ, ಸಮಾಜ ಮತ್ತು ಪ್ರತಿಯೊಬ್ಬ ನಾಗರಿಕರೂ ಕೈಜೋಡಿಸಿ ಅರಣ್ಯಗಳನ್ನು ಉಳಿಸುವ ಜವಾಬ್ದಾರಿಯನ್ನು ಹೊತ್ತುಕೊಳ್ಳಬೇಕು. ಹಸಿರು ಭೂಮಿಯೇ ನಮ್ಮ ಭವಿಷ್ಯ ಎಂಬ ಅರಿವಿನಿಂದ ಕಾರ್ಯನಿರ್ವಹಿಸಿದಾಗ ಮಾತ್ರ ಪರಿಸರ ಸಮತೋಲನ ಸಾಧ್ಯವಾಗುತ್ತದೆ.