ಮೌರ್ಯರ ಆಡಳಿತ ವ್ಯವಸ್ಥೆ

ಮೌರ್ಯರ ಆಡಳಿತ ವ್ಯವಸ್ಥೆ

ಪೀಠಿಕೆ:

ಪ್ರಾಚೀನ ಭಾರತದಲ್ಲಿ ಮೊಟ್ಟಮೊದಲ ಬಾರಿಗೆ ಅಖಂಡ ಮತ್ತು ಐತಿಹಾಸಿಕ ಸಾಮ್ರಾಜ್ಯ ನಿರ್ಮಿಸಿದ ಮೌರ್ಯರು ಸುಭದ್ರ ಮತ್ತು ಸುವ್ಯವಸ್ಥಿತ ಆಡಳಿತವನ್ನು ಸಂಸ್ಥಾಪಿಸಿದ್ದರು. ಇಂತಹ ಆಡಳಿತವು ಮಾದರಿಯಾದ ಒಂದು ಆಡಳಿತವೆಂದು ತಿಳಿದುಬರುತ್ತದೆ. ಮೌರ್ಯರ ಆಡಳಿತ ವ್ಯವಸ್ಥೆಯನ್ನು ಸಮಗ್ರವಾಗಿ ತಿಳಿದುಕೊಳ್ಳಲು ಸಹಾಯಕವಾಗಿರುವ ಆಧಾರಗಳೆಂದರೆ ಕೌಟಿಲ್ಯನ ಅರ್ಥಶಾಸ್ತ್ರ, ಮೆಗಾಸ್ಥನೀಸನ ಇಂಡಿಕಾ ಮತ್ತು ಅಶೋಕನ ಶಾಸನಗಳು ಹಾಗು ವಿದೇಶಿಯರ ಬರಹಗಳು ಮೊದಲಾದ ಆಕರಗಳು ಮೌರ್ಯರ ಆಡಳಿತದ ಸ್ಪಷ್ಟ ಚಿತ್ರಣ ನೀಡುತ್ತವೆ. ಉತ್ತುಂಗ ಸ್ಥಿತಿಯಲ್ಲಿ ಮೌರ್ಯರ ಪ್ರಭುತ್ವವು ಉತ್ತರದಲ್ಲಿ ಪರ್ಶಿಯಾದಿಂದ ದಕ್ಷಿಣದಲ್ಲಿ ಕರ್ನಾಟಕ ದವರೆಗೂ ವಿಸ್ತರಿಸಿತ್ತು. ಇಂತಹ ಮೌರ್ಯ ಪ್ರಭುತ್ವದ ಆಡಳಿತದಲ್ಲಿ ಕೆಲವು ಪ್ರಮುಖ ಲಕ್ಷಣಗಳು ಕಂಡು ಬರುತ್ತವೆ. ಅವುಗಳೆಂದರೆ

  1. ಪ್ರಬಲ ಕೇಂದ್ರೀಕೃತ ಆಡಳಿತ : ಮೌರ್ಯರ ಆಡಳಿತವು ಭಾಗಶಃ ಕೇಂದ್ರೀಕೃತವೂ ಮತ್ತು ಭಾಗಶಃ ವಿಕೇಂದ್ರೀಕೃತವೂ ಆದ ಲಕ್ಷಣಗಳನ್ನು ಒಳಗೊಂಡಿತ್ತು. ಹರಿದು ಹಂಚಿಹೋಗಿದ್ದ ಭಾರತವನ್ನು ಏಕಚಕ್ರಾಧಿಪತ್ಯಕ್ಕೆ ತರುವ ಮೂಲಕ ಭಾರತದಲ್ಲಿ ರಾಜಕೀಯ ಸ್ಥಿರತೆಯನ್ನು ಸ್ಥಾಪಿಸಿದ್ದರು. ರಾಜ ಮತ್ತು ಮಂತ್ರಿಪರಿಷತ್ ಮೂಲಕ ಕೇಂದ್ರಾಡಳಿತವು ಪ್ರಬಲವಾಗಿ ಬೆಳೆದದ್ದು ಕಂಡುಬರುತ್ತದೆ.
  2. ಸಾಂಕುಶ ಪ್ರಜಾಪ್ರಭುತ್ವ : ಮೌರ್ಯರ ಆಡಳಿತ ವ್ಯವಸ್ಥೆಯ ಒಂದು ಗುಣಾತ್ಮಕ ಲಕ್ಷಣವೆಂದರೆ ಸಾಂಕುಶ ಪ್ರಭುತ್ವದ ಸ್ಥಾಪನೆ. ರಾಜನಿಗೆ ಅಪರಿಮಿತ ಅಧಿಕಾರಗಳಿದ್ದರಿಂದ ಅದು ನಿರಂಕುಶ ಆಡಳಿತಾಧಿಕಾರವೆಂದು ಗುರುತಿಸಿದ್ದರೂ, ಆಡಳಿತ ಮಾತ್ರ ಸಾಂಕುಶ ರೀತಿಯದಾಗಿತ್ತು. ರಾಜನು ಪ್ರಜಾ ಅಭ್ಯುದಯಕ್ಕಾಗಿ ಆಡಳಿತವನ್ನು ಬಳಸಿದ್ದು ಪ್ರಧಾನವಾಗಿ ಕಂಡುಬರುತ್ತದೆ.
  3. ವಿಕೇಂದ್ರೀಕೃತ ಆಡಳಿತ: ಮೌರ್ಯರ ಆಡಳಿತ ವ್ಯವಸ್ಥೆಯ ಮತ್ತೊಂದು ಪ್ರಧಾನ ಲಕ್ಷಣವೆಂದರೆ ವಿಕೇಂದ್ರೀಕೃತ ಆಡಳಿತದ ಸ್ಥಾಪನೆ. ವಿಶಾಲ ಸಾಮ್ರಾಜ್ಯವನ್ನು ಏಕವ್ಯಕ್ತಿಯ, ಅರಸೊತ್ತಿಗೆಯ ಆಡಳಿತಕ್ಕೊಳಪಡಿಸುವುದು ಕಠಿಣವೆಂಬ ದೃಷ್ಟಿಯಿಂದ ವಿಕೇಂದ್ರೀಕರಣಕ್ಕೆ ಹೆಚ್ಚು ಮಹತ್ವ ನೀಡಲಾಗಿತ್ತು. ವಿಕೇಂದ್ರೀಕೃತ ಆಡಳಿತದಲ್ಲಿ ಪ್ರಾಂತ್ಯಾಡಳಿತ, ಜಿಲ್ಲೆಯ ಆಡಳಿತ ಮತ್ತು ನಗರಾಡಳಿತಗಳು ಕಂಡುಬರುತ್ತಿದ್ದವು.

1. ಕೇಂದ್ರಾಡಳಿತ.

ಕೇಂದ್ರಾಡಳಿತವು ರಾಜ ಮತ್ತು ಮಂತ್ರಿ ಪರಿಷತ್ ಮೂಲಕ ನಡೆಯುತ್ತಿತ್ತು.

ಅರಸ : ಕೇಂದ್ರಾಡಳಿತದ ಕೇಂದ್ರಬಿಂದು ರಾಜನಾಗಿದ್ದನು. ರಾಜನ ಆಯ್ಕೆಯು ಸಾಮಾನ್ಯವಾಗಿ ವಂಶಪಾರಂಪರ್ಯವಾಗಿತ್ತು. ಅಲ್ಲದೆ ದಕ್ಷತೆ ಮತ್ತು ಅರ್ಹತೆಯ ಆಧಾರದ ಮೇಲೂ ರಾಜನ ಆಯ್ಕೆಯಾಗುತ್ತಿತ್ತು. ಉದಾ:-ಅಶೋಕ ಮಹಾಶಯ ದಕ್ಷತೆಯ ಆಧಾರದ ಮೇಲೆ ಅರಸನಾಗಿದ್ದನು. ರಾಜನಿಗೆ ಅಪರಿಮಿತ ಅಧಿಕಾರಗಳಿದ್ದವು. ಸಾಮಾನ್ಯ ಆಡಳಿತಗಾರನಾಗಿ, ಅತ್ಯುಚ್ಛ ನ್ಯಾಯಾದೀಶನಾಗಿ, ಶ್ರೇಷ್ಠ ದಂಡನಾಯಕನಾಗಿ ರಾಜನು ಕಾರ್ಯ ನಿರ್ವಹಿಸುತ್ತಿದ್ದನು. ರಾಜನಿಗೆ ಅಧಿಕಾರಗಳ ದೃಷ್ಟಿಯಿಂದ ನಿರಂಕುಶಾಧಿಕಾರಿಯಾದರೂ ಆಡಳಿತ ಮಾತ್ರ ಪ್ರಜಾಹಿತಕಾರಿಯಾಗಿತ್ತು. ಪ್ರಜಾ ಅಭ್ಯುದಯವೇ ರಾಜನ ಅಭ್ಯುದಯವೆಂಬ ದೃಷ್ಠಿಯಿಂದ ರಾಜನು ಆಡಳಿತ ನಡೆಸುತ್ತಿದ್ದನು. ಕೌಟಿಲ್ಯನ ಅರ್ಥಶಾಸ್ತ್ರ, ಮೌರ್ಯರ ಆಡಳಿತಕ್ಕೆ ಮಾರ್ಗದರ್ಶಕವಾಗಿತ್ತು.

ಮಂತ್ರಿ ಪರಿಷತ್ : ರಾಜನು ಆಡಳಿತ ನಿರ್ವಹಣೆಯಲ್ಲಿ ಮಂತ್ರಿಪರಿಷತ್‌ನ್ನು ಸ್ಥಾಪಿಸಿಕೊಂಡಿದ್ದನು. ಒಂದು ಗಾಡಿ ಉರುಳಲು ಎರಡು ಚಕ್ರಗಳ ಸಹಾಯದಂತೆ ರಾಜ್ಯಾಡಳಿತ ನಡೆಸಲು ರಾಜ ಮತ್ತು ಮಂತ್ರಿಪರಿಷತ್ ಪರಸ್ಪರ ಸಹಕರಿಸಿ ಆಡಳಿತ ನಡೆಸಬೇಕಾಗಿತ್ತು. ರಾಜನು ರಾಜ್ಯದ ಸಪ್ತಾಂಗಗಳಲ್ಲಿ ಒಂದು ಅಂಗ ಮಾತ್ರ ಉಳಿದವು ಗಳೆಂದರೆ ಅಮಾತ್ಯ, ಕೋಶ(ಖಜಾನೆ), ಬಲ(ಸೇನೆ), ಜನಪದ(ಪ್ರಾಂತ್ಯ), ದುರ್ಗ(ಕೋಟೆ) ಮತ್ತು ಮಿತ್ರ(ನೆರೆರಾಜ್ಯ). ಮಂತ್ರಿಗಳನ್ನು ಆಯ್ಕೆಮಾಡುವಾಗ ದಕ್ಷತೆ, ಅರ್ಹತೆ, ವಿದ್ಯೆ ಮತ್ತು ಕಾನೂನಿನ ಪರಿಜ್ಞಾನ ಹೊಂದಿರುವವರನ್ನು ಮಾತ್ರ ಆರಿಸಲಾಗುತ್ತಿತ್ತು. ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ ಉಲ್ಲೇಖಿಸಲ್ಪಟ್ಟಿರುವಂತೆ ಮಂತ್ರಿಪರಿಷತ್ ರಚನೆ ಮತ್ತು ಕಾರ್ಯನಿರ್ವಹಣೆಯ ವಿವರಗಳು ಸ್ಪಷ್ಟವಾಗಿ ತಿಳಿದುಬರುತ್ತವೆ. ಮಂತ್ರಿಪರಿಷತ್‌ ಸದಸ್ಯರ ಸಂಖ್ಯೆಯು ಅವಶ್ಯಕತೆಯನ್ನು ಆಧರಿಸಿತ್ತು. ವರ್ಷಕ್ಕೆ 12,000 ಪಣಗಳನ್ನು ಸಂಭಾವನೆಯಾಗಿ ಮಂತ್ರಿಗಳಿಗೆ ನೀಡಲಾಗುತ್ತಿತ್ತು. ಮಂತ್ರಿಪರಿಷತ್ ಸಭೆಯನ್ನು ಅರಸನ ಅಧ್ಯಕ್ಷತೆಯಲ್ಲಿ ನಡೆಸಲಾಗುತ್ತಿತ್ತು. ಮಂತ್ರಿ ಪರಿಷತ್‌ನ ಕಾರ್ಯಚಟುವಟಿಕೆಗಳ ವಿವರಗಳನ್ನು ಗುಪ್ತವಾಗಿ ಇಡಲಾಗುತ್ತಿತ್ತು.

ಮೌರ್ಯರು ತಮ್ಮ ಆಡಳಿತವನ್ನು 18 ವಿವಿಧ ಇಲಾಖೆಗಳಲ್ಲಿ ವಿಭಾಗಿಸಿದ್ದರು. ಪ್ರತಿಯೊಂದು ಇಲಾಖೆಯನ್ನು ಮೇಲ್ವಿಚಾರಕನ ಅಧೀನಕ್ಕೊಳಪಡಿಸಲಾಗಿತ್ತು. ಅಂತಹ ಇಲಾಖೆಗಳೆಂದರೆ ಖಜಾನೆ, ಗಣಿ, ವಿದೇಶಾಂಗ, ಅರಣ್ಯ, ತೂಕ ಅಳತೆ, ಶಸ್ತ್ರಾಗಾರ, ಸುಂಕ, ನೇಯ್ದೆ, ಕೃಷಿ, ಅಬಕಾರಿ, ವೇಶೈಯರು, ಬಂದೀಖಾನೆ, ರಸ್ತೆ, ಬಂದರು. ಕೈಗಾರಿಕೆ, ವ್ಯಾಪಾರ ಮತ್ತು ವಾಣಿಜ್ಯ ಮೊದಲಾದವು

2. ಪ್ರಾಂತೀಯ ಆಡಳಿತ :

ವಿಶಾಲವಾದ ಮೌರ್ಯಚಕ್ರಾಧಿಪತ್ಯವನ್ನು ಆಡಳಿತದ ಅನುಕೂಲತೆಯ ದೃಷ್ಟಿಯಿಂದ ಪ್ರಾಂತೀಯ ಆಡಳಿತದಲ್ಲಿ ಸಂಘಟಿಸಲಾಗಿತ್ತು. ಪ್ರಾಂತ್ಯಗಳು ವಿಭಜನೆಯ ದೃಷ್ಟಿಯಿಂದ ಏಕರೂಪವಾಗಿರಲಿಲ್ಲ. ಕೆಲವು ದೊಡ್ಡ ಪ್ರಾಂತ್ಯಗಳಿದ್ದರೆ ಹಲವು ಚಿಕ್ಕ ಪ್ರಾಂತ್ಯಗಳಿದ್ದವು. ಚಂದ್ರಗುಪ್ತನ ಕಾಲಾವಧಿಯಲ್ಲಿನ ಪ್ರಾಂತೀಯ ಆಡಳಿತದ ಸ್ಪಷ್ಟ ಚಿತ್ರಣ ದೊರಕುವುದಿಲ್ಲ. ಆದರೆ ಅಶೋಕ, ಮೌರ್ಯನ ಕಾಲದಲ್ಲಿ ಕಳಿಂಗ, ತಕ್ಷಶಿಲೆ, ಉಜ್ಜಯನಿ ಮತ್ತು ಸುವರ್ಣಗಿರಿ ಎಂಬ ನಾಲ್ಕು ಪ್ರಾಂತ್ಯಗಳಿದ್ದವೆಂದು ತಿಳಿದು ಬರುತ್ತದೆ.

ರಾಜಪ್ರತಿನಿಧಿ : ಪ್ರಾಂತ್ಯಾಡಳಿತದ ಮುಖ್ಯಸ್ಥನನ್ನು ರಾಜಪ್ರತಿನಿಧಿ ಅಥವಾ ಗೌರ್ನರ್ ಎಂದು ಹೆಸರಿಸ ಲಾಗಿತ್ತು. ಯುವರಾಜ ಅಥವಾ ರಾಜನ ಸಂಬಂಧಿಗಳು ಪ್ರಾಂತ್ಯಾಡಳಿತವನ್ನು ನೋಡಿಕೊಳ್ಳುತ್ತಿದ್ದರು. ಪ್ರಾಂತೀಯ ಆಡಳಿತವು ಸಹ ಕೇಂದ್ರಾಡಳಿತದಂತೆಯೇ ಸುವ್ಯವಸ್ಥಿತ ಆಡಳಿತವಾಗಿತ್ತು. ಪ್ರಾಂತ್ಯಗಳ ಸಾಮಾನ್ಯ ಆಡಳಿತ ನೋಡಿಕೊಳ್ಳುವುದು, ನ್ಯಾಯಪರಿಪಾಲನೆ ಮತ್ತು ಶಿಸ್ತು ಸ್ಥಾಪನೆಯು ಗೌರ್ನರ್‌ನ ಕರ್ತವ್ಯವಾಗಿತ್ತು. ಪ್ರಾಂತ್ಯಗಳಲ್ಲಿನ ಸುಂಕವನ್ನು ವಸೂಲಿಮಾಡಿ ಖಜಾನೆಗೆ ಸಲ್ಲಿಸಬೇಕಾಗಿತ್ತು. ಅಲ್ಲದೆ ಪ್ರಾಂತ್ಯದ ಪರಿಸ್ಥಿತಿಯ ಬಗ್ಗೆ ವರದಿಯನ್ನು ಸಹ ಸಲ್ಲಿಸಬೇಕಾಗಿತ್ತು.

ಪ್ರಾಂತ್ಯಗಳಲ್ಲಿ ಸುವ್ಯವಸ್ಥಿತ ಆಡಳಿತಕ್ಕಾಗಿ ಹಲವು ಅಧಿಕಾರಿಗಳನ್ನು ನೇಮಿಸಲಾಗಿತ್ತು. ಅವರೆಂದರೆ, ರಾಜುಕರು, ಯುಕ್ತರು, ಪ್ರಾದೇಶಿಕರು ಮತ್ತು ಪುರುಷರು. ಆದರೆ ಇವರುಗಳ ಕಾರ್ಯನಿರ್ವಹಣೆಯ ಬಗ್ಗೆ ಏಕಾಭಿಪ್ರಾಯವಿಲ್ಲ ಪ್ರಾಂತ್ಯಗಳನ್ನು ಆಹರ, ವಿಷಯ ಹಾಗೂ ಪ್ರದೇಶಗಳೆಂದು ಸಹ ವಿಭಾಗಿಸಲಾಗಿತ್ತು.

3. ಜಿಲ್ಲೆಯ ಆಡಳಿತ:

ಪ್ರಾಂತ್ಯದ ಆಡಳಿತದ ಕೆಳಹಂತದಲ್ಲಿ ಜಿಲ್ಲೆಯ ಆಡಳಿತವಿದ್ದಿತು. ಪ್ರತಿಯೊಂದು ಜಿಲ್ಲೆ ಯಲ್ಲಿಯೂ ‘ಸ್ಥಾನಿಕರು’ ಆಡಳಿತ ನೋಡಿಕೊಳ್ಳುತ್ತಿದ್ದರು. ಜಿಲ್ಲೆಯ ಕಂದಾಯ ವಸೂಲಾತಿ, ನ್ಯಾಯಪರಿಪಾಲನೆ ಮತ್ತು ಶಿಸ್ತಿನ ಸ್ಥಾಪನೆ, ಸ್ಥಾನಿಕ ಆಡಳಿತಗಾರನ ಆದ್ಯ ಕರ್ತವ್ಯವಾಗಿತ್ತು. ಸ್ಥಾನಿಕನ ಸಹಾಯಕ್ಕೆ ಗೋಪ ಎಂಬ ಅಧಿಕಾರಿಯಿದ್ದನು. ಸ್ಥಾನಿಕನ ಆಡಳಿತವನ್ನು ಇಂದಿನ ಜಿಲ್ಲಾಧಿಕಾರಿಗಳ ಆಡಳಿತಕ್ಕೆ ಹೋಲಿಸಬಹುದು.

4. ನಗರಾಡಳಿತ (ಪಾಟಲೀಪುತ್ರದ ಆಡಳಿತ ವ್ಯವಸ್ಥೆ)

ಮೆಗಾಸ್ಥನೀಸನ ಇಂಡಿಕಾ ಕೃತಿಯು ಮೌರ್ಯರ ನಗರಾಡಳಿತದ ಬಗ್ಗೆ ಸ್ಪಷ್ಟ ವಿವರ ನೀಡುತ್ತದೆ. ಮೌರ್ಯರ ಕಾಲದ ನಗರಾಡಳಿತಕ್ಕೆ ಪಾಟಲೀಪುತ್ರವು ಸ್ಪಷ್ಟ ಉದಾಹರಣೆಯಾಗಿತ್ತು. ಪಾಟಲೀಪುತ್ರದ ಆಡಳಿತವು ಮಾದರಿಯಾದ ನಗರಾಡಳಿತಕ್ಕೆ ಸ್ಪಷ್ಟ ನಿದರ್ಶನವೆನಿಸಿದೆ. ನಗರಾಡಳಿತವನ್ನು ನೋಡಿಕೊಳ್ಳಲು 30 ಅಧಿಕಾರಿಗಳಿದ್ದರು. ಆರು ಸಮಿತಿಗಳಿದ್ದು(ಮಂಡಳಿ) ಪ್ರತಿ ಸಮಿತಿಯಲ್ಲೂ ಐದು ಜನ ಸದಸ್ಯರಿದ್ದರು. ಪ್ರತಿ ಸಮಿತಿಯು ಒಂದೊಂದು ನಿರ್ದಿಷ್ಟ ಕಾರ್ಯವನ್ನು ನಿರ್ವಹಿಸಬೇಕಾಗಿತ್ತು.

  1. ಕೈಗಾರಿಕಾ ಸಮಿತಿ : ಈ ಸಮಿತಿಯು ಕೈಗಾರಿಕೆ ಮತ್ತು ಕರಕುಶಲತೆಯನ್ನು ನೋಡಿಕೊಳ್ಳುತ್ತಿತ್ತು. ಅಂದರೆ ಸರಕುಗಳ ಉತ್ಪಾದನೆಯಲ್ಲಿ ಉತ್ತಮ ಕಚ್ಚಾಸರಕುಗಳನ್ನು ಬಳಸಲಾಗಿದೆಯೇ ಅಥವಾ ಇಲ್ಲವೆ ಎಂಬ ಬಗ್ಗೆ.
  2. ವಿದೇಶಿಯರ ಚಲನ ವಲನ ಸಮಿತಿ : ಈ ಸಮಿತಿಯು ವಿದೇಶಿಯರ ಯೋಗಕ್ಷೇಮವನ್ನು ನೋಡಿಕೊಳ್ಳುತಿತ್ತು. ವಿದೇಶಿಯರ ವಸತಿ, ವೈದ್ಯಕೀಯ ಮತ್ತು ಸಂರಕ್ಷಣೆಯ ಜವಾಬ್ದಾರಿ, ಪ್ರವಾಸದ ಸಂದರ್ಭದಲ್ಲಿ ಮರಣ ಹೊಂದಿದ ವಿದೇಶಿಯರ ಸರಕುಗಳನ್ನು ಅವರ ಸಂಬಂಧಿಗಳಿಗೆ ತಲುಪಿಸುವುದು.
  3. ಜನಗಣತಿ ಸಮಿತಿ : ಈ ಸಮಿತಿಯ ಜವಾಬ್ದಾರಿ ಜನನ-ಮರಣಗಳ ದಾಖಲೆಯ-ಸಂಗ್ರಹಣೆ ಮತ್ತು ವರದಿ ನೀಡಿಕೆ.
  4. ವ್ಯಾಪಾರ ಮತ್ತು ವಾಣಿಜ್ಯ ಸಮಿತಿ : ಈ ಸಮಿತಿಯು ವ್ಯಾಪಾರ ಮತ್ತು ವಾಣಿಜ್ಯವನ್ನು ನಿಯಂತ್ರಿಸುವ ಜವಾಬ್ದಾರಿಯನ್ನು ಹೊಂದಿತ್ತು.
  5. ಸರಕು ಮೇಲ್ವಿಚಾರಣ ಸಮಿತಿ : ಸರಕುಗಳ ಮೇಲ್ವಿಚಾರಣೆಯನ್ನು ಮಾಡುತಿತ್ತು. ಸರಕುಗಳ ವಿಕ್ರಯಕಾರ್ಯ ಮತ್ತು ಸರಕುಗಳ ಕಲಬೆರೆಕೆಯನ್ನು ತಡೆಯುವುದು ಈ ಸಮಿತಿಯ ಕಾರ್ಯವಾಗಿತ್ತು.
  6. ತೆರಿಗೆ ವಸೂಲಿ ಸಮಿತಿ : ಈ ಸಮಿತಿಯು ಮಾರಾಟವಾಗುತ್ತಿದ್ದ ಸರಕುಗಳ ಮೇಲೆ 1/10 ರಷ್ಟು ಕರವನ್ನು ವಸೂಲಿ ಮಾಡುವ ಜವಾಬ್ದಾರಿಯನ್ನು ಹೊಂದಿತ್ತು. ಹೀಗೆ ವಿವಿಧ ಸಮಿತಿಗಳು ವಿಭಿನ್ನ ಆಡಳಿತ ಸಂಘಟನೆಯನ್ನು ನೋಡಿಕೊಳ್ಳುತ್ತಿದ್ದವು.

ನೌಕಾ ಸಮಿತಿ, ರಥ ಸಮಿತಿ,

ಕಾಲ್ಗಳ ಸಮಿತಿ, ಗಜದಳ ಸಮಿತಿ,

ಸಾರಿಗೆ ಮತ್ತು ಸರಬರಾಜು ಸಮಿತಿ. ಅಶ್ವದಳ ಸಮಿತಿ,

ಮೌರ್ಯರು ವ್ಯವಸ್ಥಿತ ಸೈನಾಡಳಿತ ಹೊಂದಿದ್ದರಿಂದ ವಿಶಾಲಸಾಮ್ರಾಜ್ಯ ನಿರ್ಮಿಸಿ ದಕ್ಷ ಆಡಳಿತ ನಡೆಸಿದರು.

5. ಗೂಢಾಚಾರ ವ್ಯವಸ್ಥೆ

ಮೌರ್ಯರು ತಮ್ಮ ಆಡಳಿತದ ಅವಧಿಯಲ್ಲಿ ಗುಪ್ತ ಗೂಢಾಚಾರ ಪದ್ಧತಿಯನ್ನು ಹೊಂದಿದ್ದರು. ಗೂಢಾಚಾರರನ್ನು ರಾಜನ ಕಣ್ಣುಗಳು ಹಾಗೂ ಕಿವಿಗಳು ಎಂದೇ ಭಾವಿಸಲಾಗಿತ್ತು. ಗೂಢಾಚಾರರು ಸಾಮ್ರಾಜ್ಯದ ದೈನಂದಿನ ಚಟುವಟಿಕೆಗಳಲ್ಲದೆ, ಮುಖ್ಯವಾದ ರಹಸ್ಯ ವಿಚಾರಗಳನ್ನು ಸಂಗ್ರಹಿಸಿ ಅರಸನಿಗೆ ವರದಿ ಒಪ್ಪಿಸುತ್ತಿದ್ದರು. ಗೂಢಾಚಾರರು ಮಂತ್ರಿಗಳು ಮತ್ತು ರಾಣಿಯರ ಚಟುವಟಿಕೆಗಳ ಮೇಲೂ ಗಮನ ಹರಿಸಬೇಕಾಗಿತ್ತು. ಗೂಢಾಚಾರರು ತಪ್ಪು ವರದಿಯನ್ನು ಸಲ್ಲಿಸಿದರೆ ಅಂತಹವರಿಗೆ ಕಠಿಣ ಶಿಕ್ಷೆ ನೀಡಲಾಗುತಿತ್ತು.

6. ಕಂದಾಯ ಆಡಳಿತ

ಮೌರ್ಯರು ತಮ್ಮ ಆಡಳಿತದ ಅವಧಿಯಲ್ಲಿ ವ್ಯವಸ್ಥಿತವಾದ ಕಂದಾಯದ ಆಡಳಿತವನ್ನು ಜಾರಿಗೆ ತಂದಿದ್ದರು. ವಿವಿಧ ಆದಾಯದ ಮೂಲಗಳಿಂದ ಆದಾಯವನ್ನು ಸಂಗ್ರಹಿಸಿ ಖಜಾನೆಯನ್ನು ಸುಸ್ಥಿತಿಯಲ್ಲಿಡಲು ಪ್ರಯತ್ನಿಸಿದರು. ಆರ್ಥಿಕ ದುಸ್ಥಿತಿ ಉಂಟಾಗದಂತೆ ಗಮನ ಹರಿಸುತ್ತಿದ್ದರು. ಮೌರ್ಯರು ತಾತ್ವಿಕ ನೆಲೆಗಟ್ಟಿನ ಆಧಾರದ ಮೇಲೆ ತೆರಿಗೆಯನ್ನು ವಸೂಲಿ ಮಾಡುತ್ತಿದ್ದರು. ತೆರಿಗೆ ನಿಗದಿಗೊಳಿಸುವಾಗ ಉದಾರ ನೀತಿಯನ್ನು ಅನುಸರಿಸಲಾಗುತಿತ್ತು.

  • ಭೂಕಂದಾಯವು ಸಾಮ್ರಾಜ್ಯದ ಆದಾಯದ ಮೂಲಗಳಲ್ಲಿ ಪ್ರಮುಖವಾಗಿತ್ತು. ಭೂಮಿಯ ಗುಣಮಟ್ಟವನ್ನು ಆಧರಿಸಿ ಉತ್ಪಾದನೆಯ 1/6 ರಿಂದ 1/4ರಷ್ಟು ಭೂಕಂದಯವನ್ನು ವಸೂಲಿಮಾಡಲಾಗುತಿತ್ತು.
  • ಪ್ರಾಣಿಗಳ ಮೇಲೆ ತೆರಿಗೆಯನ್ನು ಹಾಕುವ ಕ್ರಮ ಅನುಸರಣೆಯಲ್ಲಿತ್ತು. ಕುರಿಗಳು ಮತ್ತು ಹಸುಗಳ ಮೇಲೆ ತೆರಿಗೆಯನ್ನು ಹಾಕಲಾಗುತಿತ್ತು.
  • ವ್ಯಾಪಾರ ವಾಣಿಜ್ಯದ ಮೇಲೆ ತೆರಿಗೆ ಹಾಕಲಾಗುತಿತ್ತು. 1/5ಭಾಗವನ್ನು ಸುಂಕದ ವಸೂಲಿಯಾಗಿ ಸಂಗ್ರಹಿಸಲಾಗುತಿತ್ತು.
  • ಗಣಿಗಳು ಮತ್ತು ಕಾಡಿನ ವಸ್ತುಗಳ ಮೇಲೆ ಸಾಮ್ರಾಜ್ಯವು ಒಡೆತನ ಹೊಂದಿತ್ತು.

ಹೀಗೆ ವಿವಿಧ ಮೂಲಗಳಿಂದ ಸಂಗ್ರಹಣೆಗೊಂಡ ಆದಾಯವನ್ನು ಸಾಮ್ರಾಜ್ಯದ ವಿವಿಧ ವೆಚ್ಚಕ್ಕಾಗಿ ಬಳಸಲಾಗುತ್ತಿತ್ತು. ಹುಟ್ಟುವಳಿಯ ಅಧಿಕ ಭಾಗವನ್ನು ಸೇನೆಯ ವೆಚ್ಚಕ್ಕಾಗಿ ಬಳಸಲಾಗುತಿತ್ತು.

ಮೌರ್ಯರ ಆಡಳಿತ ವ್ಯವಸ್ಥೆಯ ದೋಷಗಳು

  1. ಕ್ರಿಮಿನಲ್ ಕಾಯಿದೆ ಕಠಿಣವಾಗಿತ್ತು. ಮರಣ ದಂಡನೆ ಸಾಮಾನ್ಯವಾಗಿತ್ತು.
  2. ರಾಜ್ಯದ ಒಳಗಡೆ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಪ್ರಯಾಣ ಮಾಡಲು ರಹದಾರಿ ಪತ್ರ ಬೇಕಾಗಿತ್ತು. ಇದರಿಂದ ವ್ಯಾಪಾರಿಗಳಿಗೂ ಮತ್ತು ಸಾಮಾನ್ಯ ಜನರಿಗೂ ತೊಂದರೆಯಾಗಿತ್ತು.
  3. ಗೂಢಾಚಾರ ವ್ಯವಸ್ಥೆ ಪ್ರಬಲವಾಗಿದ್ದು ಜನರು ಮಾತನಾಡಲು ಹೆದರಿಕೊಳ್ಳುತ್ತಿದ್ದರು. ವಾಕ್ ಸ್ವಾತಂತ್ರ್ಯಕ್ಕೆ ಚ್ಯುತಿಯಾಗಿತ್ತು.

ಒಟ್ಟಾರೆ ಮೌರ್ಯರ ಆಡಳಿತ ವ್ಯವಸ್ಥೆಯಲ್ಲಿ ದೋಷಗಳಿದ್ದರೂ ಅತ್ಯಧಿಕ ಸಂಖ್ಯೆಯಲ್ಲಿ ಗುಣಗಳೇ ಕಂಡುಬರುತ್ತವೆ. ಮೆಗಾಸ್ಥನೀಸನ ಇಂಡಿಕಾ ಮತ್ತು ಕೌಟಿಲ್ಯನ ಅರ್ಥಶಾಸ್ತ್ರ ಕೃತಿಗಳು ಮೌರ್ಯರ ಆಡಳಿತ ವ್ಯವಸ್ಥೆಯ ಬಗ್ಗೆ ಬೆಳಕು ಚೆಲ್ಲುತ್ತವೆ. ಪ್ರಾಚೀನಕಾಲದಲ್ಲಿ ಮೌರ್ಯರು ಭಾರತೀಯ ಆಡಳಿತ ವ್ಯವಸ್ಥೆಗೆ ಉತ್ತಮ ಅಡಿಪಾಯ ಹಾಕಿದರು. ಸ್ವತಂತ್ರ ಭಾರತದ ಆಡಳಿತ ವ್ಯವಸ್ಥೆಯ ಮೂಲ ಬೇರುಗಳನ್ನು ಮೌರ್ಯರ ಆಡಳಿತದಲ್ಲಿಯೇ ಗುರುತಿಸಬೇಕಾಗುತ್ತದೆ.

ಅಶೋಕನ ಶಾಸನಗಳು

ಅಶೋಕನ ಶಾಸನಗಳು

ಪೀಠಿಕೆ:

ಭಾರತದಲ್ಲಿ ಅಶೋಕನಿಂದಲೇ ಶಾಸನಗಳ ರಚನೆ ಪ್ರಾರಂಭವಾಯಿತು. ಆದ್ದರಿಂದ ಅಶೋಕನನ್ನು ‘ಶಾಸನಗಳ ಆದ್ಯಪ್ರವರ್ತಕ’ನೆಂದೇ ಹೆಸರಿಸಲಾಗಿದೆ. ತನ್ನ ಆಳ್ವಿಕೆಯ ಅವಧಿಯಲ್ಲಿ ಸಾಮ್ರಾಜ್ಯದಾದ್ಯಂತ ಶಾಸನಗಳನ್ನು ಕೆತ್ತಿಸಿದ್ದನು. ಹೀಗೆ ಕೆತ್ತಿಸಿದ ಬಹುಸಂಖ್ಯಾತ ಶಾಸನಗಳು ಸಾಮ್ರಾಜ್ಯದ ವಿವಿಧ ಭಾಗಗಳಲ್ಲಿ ದೊರೆತಿವೆ. ವಿವಿಧ ಭಾಷೆ ಮತ್ತು ಲಿಪಿಗಳಲ್ಲಿ ರಚನೆಗೊಂಡ ಶಾಸನಗಳು ಲಭ್ಯವಾಗಿವೆ. ಅಶೋಕನ ಹೆಚ್ಚು ಶಾಸನಗಳು ಪ್ರಾಕೃತ ಭಾಷೆ ಹಾಗೂ ಬ್ರಾಹ್ಮಲಿಪಿಯಲ್ಲಿವೆ. ವಾಯುವ್ಯ ಭಾರತದಲ್ಲಿ ದೊರೆತ ಅಶೋಕನ ಶಾಸನಗಳು ಪ್ರಾಕೃತ ಭಾಷೆ ಹಾಗೂ ಖರೋಷ್ಠಿ ಲಿಪಿಯಲ್ಲಿವೆ. ಅಫಘಾನಿಸ್ತಾನದ ಕಂದಹಾರ್‌ನಲ್ಲಿನ ಶಾಸನಗಳು ಗ್ರೀಕ್ ಮತ್ತು ಅರಾಮಿಕ್ ಭಾಷೆಗಳನ್ನು ಮತ್ತು ಗ್ರೀಕ್ ಲಿಪಿಯನ್ನು ಒಳಗೊಂಡಿವೆ. ಅಶೋಕನ ಶಾಸನಗಳನ್ನು ಪ್ರಥಮಬಾರಿಗೆ ಅಧ್ಯಯನ ಮಾಡಿ ಅರ್ಥೈಸಿದ ಕೀರ್ತಿ ಜೇಮ್ಸ್ ಪ್ರಿನ್ಸೆಫ್ ಗೆ ಸಲ್ಲುತ್ತದೆ. ಅಶೋಕನ ಶಾಸನಗಳನ್ನು ಅವುಗಳ ರಚನೆಯ ಆಧಾರದ ಮೇಲೆ ಹಲವು ಭಾಗಗಳಾಗಿ ವರ್ಗೀಕರಿಸಿ ನೋಡಬಹುದು.

1. ಮುಖ್ಯ ಶಿಲಾಶಾಸನಗಳು :

ಮುಖ್ಯ ಶಿಲಾಶಾಸನಗಳಲ್ಲಿ 14 ಶಿಲಾಶಾಸನಗಳು ಕಂಡುಬಂದಿವೆ. ಅವುಗಳು ವಿವಿಧ ಸ್ಥಳಗಳಲ್ಲಿ ದೊರೆತಿವೆ. ಮುಖ್ಯವಾದವುಗಳೆಂದರೆ

  1. ಗಿರ್ನಾರ್ ಶಾಸನ (ಗುಜರಾತ್ ರಾಜ್ಯ),
  2. ಕಾಲ್ಸಿ (ಉತ್ತರಾಂಚಲ್ ರಾಜ್ಯ),
  3. ಶಹಬಾಜ್‌ ಘರಿ ಶಿಲಾಶಾಸನ (ಪಾಕಿಸ್ತಾನ),
  4. ಮನ್‌ಸೆಹ್ರ ಶಾಸನ (ಪಾಕಿಸ್ತಾನ),
  5. ದೌಲಿ ಶಿಲಾಶಾಸನ (ಒರಿಸ್ಸಾ),
  6. ಔಗಢ ಶಿಲಾಶಾಸನ (ಒರಿಸ್ಸಾ)
  7. ಬಾಂಬೆಸೊಪಾರ ಶಾಸನ (ಮಹಾರಾಷ್ಟ್ರ),
  8. ಯರಗುಡಿ ಶಿಲಾಶಾಸನ (ಆಂಧ್ರಪ್ರದೇಶ),
  9. ಮಸ್ಕಿ ಶಾಸನ (ಕರ್ನಾಟಕ).

2. ಗೌಣಶಿಲಾ ಶಾಸನಗಳು :

  1. ರೂಪನಾಥ್ ಶಿಲಾಶಾಸನ (ಮದ್ಯಪ್ರದೇಶ),
  2. ಸಹಸ್ರಾಮ್ ಶಿಲಾಶಾಸನ (ಬಿಹಾರ),
  3. ಬೈರತ್ ಶಿಲಾಶಾಸನ (ರಾಜಸ್ಥಾನ),
  4. ಕಲ್ಕತ್ತ-ಬೈರತ್ ಶಿಲಾಶಾಸನ: ಇದನ್ನು ಭಟ್ರುಶಿಲಾಶಾಸನವೆಂದು ಕರೆಯಲಾಗಿದೆ.
  5. ಮಸ್ಕಿ ಶಿಲಾಶಾಸನ (ಕನಾಟಕ),
  6. ಬ್ರಹ್ಮಗಿರಿ, ಸಿದ್ದಾಪುರ, ಜಟಿಂಗರಾಮೇಶ್ವರ (ಕರ್ನಾಟಕ),
  7. ಗವಿಮಠ ಮತ್ತು ಪಾಲ್ಕಿಗುಂಡು ಶಿಲಾಶಾಸನಗಳು (ಕರ್ನಾಟಕ),
  8. ರಜುಲಮಂಡಗಿರಿ ಶಿಲಾಶಾಸನ (ಆಂಧ್ರಪ್ರದೇಶ),
  9. ಗರ್ಜಾ ಶಾಸನ (ಮದ್ಯಪ್ರದೇಶ).

ಮಸ್ಕಿ ಶಾಸನದಲ್ಲಿ ಅಶೋಕನನ್ನು ʻದೇವಾನಾಂಪ್ರಿಯ ಅಶೋಕಸ’ ಎಂದು ಸಂಬೋಧಿಸಿದ್ದರೆ, ಗರ್ಜಾ ಶಾಸನದಲ್ಲಿ ‘ದೇವನಾಂಪಿಯ ಪಿಯದಸಿ’ ಎಂಬ ವಿವರವಿದೆ. ಗೌಣಶಿಲಾ ಶಾಸನಗಳಿಂದ ಅಶೋಕನ ವೈಯುಕ್ತಿಕ ಇತಿಹಾಸ, ಧರ್ಮದ ಸಾರಾಂಶ, ಅಶೋಕನ ಬಿರುದುಗಳ ವಿವರಗಳು ಕಂಡುಬರುತ್ತವೆ.

3. ಮುಖ್ಯಸ್ತಂಭ ಶಾಸನಗಳು :

  1. ದೆಹಲಿ – ತೊಪ್ರಾಸ್ತಂಭ ಶಾಸನ,
  2. ದೆಹಲಿ – ಮೀರತ್ ಸ್ತಂಭ ಶಾಸನ,
  3. ಲೋರಿಯಾ – ಅರಾರಜ್ ಮತ್ತು ಲೋರಿಯನಂದನ್‌ ಘರ್ ಸ್ತಂಭಗಳು,
  4. ರಾಮ್ ಪೂರ್ವಸ್ತಂಭ ಶಾಸನ
  5. ಅಲಹಾಬಾದ್-ಕೋಸಂ ಸ್ತಂಭಶಾಸನ

ಮುಖ್ಯ ಸ್ತಂಭಶಾಸನಗಳನ್ನು ಶಿಲಾ ಶಾಸನಗಳ ಅನುಬಂಧಗಳು ಅಥವಾ ಪುರವಣಿಗಳೆಂದು ಪರಿಗಣಿಸಲಾಗಿದೆ.

4. ಗೌಣಸ್ತಂಭಶಾಸನಗಳು :

  1. ಸಾಂಚಿ ಸ್ತಂಭ ಶಾಸನ (ಮದ್ಯಪ್ರದೇಶ),
  2. ಸಾರನಾಥ್ ಸ್ತಂಭ ಶಾಸನ,
  3. ಅಲಹಾಬಾದ್-ಕೋಸಂ ಸ್ತಂಭ ಶಾಸನ : ಇವುಗಳು ಬೌದ್ಧಸಂಘದಲ್ಲಿ ಉಂಟಾಗಿದ್ದ ಒಡಕನ್ನು ಬಗೆಹರಿಸಿ ಏಕತೆಯನ್ನು ಕಾಪಾಡಲು ಅಶೋಕ ಪ್ರಯತ್ನಿಸಿದ ಅಂಶವನ್ನು ದಾಖಲಿಸುತ್ತವೆ.

5. ಸ್ಮರಣಾರ್ಥ ಸ್ತಂಭಶಾಸನಗಳು :

  1. ರುಮ್ಮಿಂಡೈ ಸ್ತಂಭ ಶಾಸನ (ನೇಪಾಳದ ತರೈನಲ್ಲಿದೆ),
  2. ನಿಗಾಲಿಸಾಗರ್ ಸ್ತಂಭ ಶಾಸನ (ನೇಪಾಳದ ತರೈನಲ್ಲಿದೆ).

6. ಗುಹಾ ಶಾಸನಗಳು :

ಗುಹಾ ಶಾಸನಗಳು ಗಯಾದಿಂದ 24ಕೀ.ಮೀ ದೂರದಲ್ಲಿರುವ ಬಾರಾಬರ್ ಬೆಟ್ಟ ಪ್ರದೇಶದಲ್ಲಿದೆ. ಈ ಬೆಟ್ಟಗಳು ಎರಡು ವಿಧದ ಗುಹೆಗಳನ್ನೊಳಗೊಂಡಿದೆ. ಅವುಗಳೆಂದರೆ ಬಾರಾಬರ್ ಮತ್ತು ನಾಗಾರ್ಜುನ. ಬಾರಾಬರ್ ಬೆಟ್ಟದಲ್ಲಿ ಅಶೋಕನು ಗುಹಾಲಯಗಳನ್ನು ನಿರ್ಮಿಸಿ ಅಜೀವಿಕ ಪಂಥದವರಿಗೆ ದಾನನೀಡಿದ್ದನೆಂದು ಹಾಗೂ ಶಾಸನಗಳ ಹೊರಡಿಸಿದ್ದನೆಂದು ತಿಳಿದುಬರುತ್ತದೆ.

ಅಶೋಕನ ಆತ್ಮಕಥನಗಳೆಂದು ಪರಿಗಣಿಸಲ್ಪಟ್ಟಿರುವ ಈ ಶಾಸನಗಳು ಅಂದಿನ ರಾಜಕೀಯ, ಧಾರ್ಮಿಕ ಹಾಗೂ ವಿದೇಶ ಸಂಬಂಧವನ್ನು ಅರಿಯಲು ಸಹಾಯಕವಾಗಿದೆ. ಡಾ|| ಆರ್.ಎಸ್.ಶರ್ಮ ಅಭಿಪ್ರಾಯದಂತೆ ಇವುಗಳು ಅಶೋಕನ ‘ದೇಶೀಯ ಹಾಗೂ ವಿದೇಶೀಯ ನೀತಿಗಳನ್ನು ಮತ್ತು ಸಾಮ್ರಾಜ್ಯದ ಎಲ್ಲೆಯನ್ನು ಅರಿಯಲು ಸಹಾಯಕವಾಗಿದೆ’.

ಅಶೋಕನ ಆಡಳಿತ ವ್ಯವಸ್ಥೆ

ಅಶೋಕನ ಆಡಳಿತ ವ್ಯವಸ್ಥೆ

ಸಾಹಸಪ್ರಿಯನೂ, ದಿಗ್ವಿಜಯಶಾಲಿಯೂ ಆಗಿದ್ದ ಅಶೋಕ ಮಹಾಶಯ ದಕ್ಷ ಆಡಳಿತಗಾರನೂ ಸಹ ಆಗಿದ್ದನು. ಆತನ ಆಡಳಿತವು ಪ್ರಾಚೀನ ಭಾರತದ ಚರಿತ್ರೆಯಲ್ಲಿ ಚಿರಸ್ಥಾಯಿಯಾಗಿ ಉಳಿದುಕೊಂಡಿರುವ ಆದರ್ಶ ಮತ್ತು ಮಾದರಿಯಾದ ಆಡಳಿತವಾಗಿದೆ. ಭಾರತ ಖಂಡದ ಚರಿತ್ರೆಯಲ್ಲಿ ಮೊದಲ ಬಾರಿಗೆ ವಿಶಾಲ ಮತ್ತು ಐಕ್ಯತೆಯ ಸಾಮ್ರಾಜ್ಯವನ್ನು ಅಶೋಕ ಸ್ಥಾಪಿಸಿದ್ದನು. ಅಶೋಕನ ಆಡಳಿತ ಸಂಘಟನೆಯಲ್ಲಿ ಕೆಲವು ಪ್ರಮುಖ ಲಕ್ಷಣಗಳು ಕಂಡುಬರುತ್ತವೆ. ಅಂತಹ ಲಕ್ಷಣಗಳು ಮೌರ್ಯರ ಆಡಳಿತದ ಲಕ್ಷಣಗಳಾಗಿಯೂ ಕಂಡುಬರುತ್ತವೆ. ಅಂತಹ ಪ್ರಮುಖ ಲಕ್ಷಣಗಳೆಂದರೆ :

  1. ಪ್ರಬಲ ಕೇಂದ್ರಾಡಳಿತ,
  2. ವಿಕೇಂದ್ರೀಕೃತ ಆಡಳಿತ
  3. ಪ್ರಜಾಹಿತ ಆಡಳಿತ
  4. ಲೋಕೋಪಯೋಗಿ ಕಾರ್ಯಗಳು

1. ಪ್ರಬಲ ಕೇಂದ್ರಾಡಳಿತ :

ಅಶೋಕನ ಆಡಳಿತ ವ್ಯವಸ್ಥೆಯಲ್ಲಿ ಕೇಂದ್ರಸರ್ಕಾರವು ಅತ್ಯಂತ ಪ್ರಬಲವಾದುದಾಗಿತ್ತು. ಕೇಂದ್ರಾಡಳಿತವು ರಾಜ ಮತ್ತು ಮಂತ್ರಿಪರಿಷತ್‌ ಸಹಾಯದಿಂದ ನಡೆಯುತ್ತಿತ್ತು. ರಾಜನಿಗೆ ಅಪರಿಮಿತ ಅಧಿಕಾರಗಳಿದ್ದವು. ಅಧಿಕಾರಿಗಳ ದೃಷ್ಟಿಯಿಂದ ರಾಜನು ನಿರಂಕುಶಾಧಿಕಾರಿಯಾಗಿದ್ದನು. ಆದರೆ ಆಡಳಿತ ನಿರಂಕುಶ ರೀತಿಯಲ್ಲಿ ಇರಲಿಲ್ಲ. ರಾಜನು ಸಾಮಾನ್ಯ ಆಡಳಿತಗಾರನಾಗಿ, ಅತ್ಯುಚ್ಛ ನ್ಯಾಯಾಧೀಶನಾಗಿ, ಶ್ರೇಷ್ಠ ದಂಡನಾಯಕನಾಗಿ ಕಾರ್ಯ ನಿರ್ವಹಿಸುತ್ತಿದ್ದನು.

ಮಂತ್ರಿಪರಿಷತ್ : ಕೇಂದ್ರಾಡಳಿತದಲ್ಲಿ ರಾಜನಿಗೆ ಸಹಕಾರಿಯಾಗಿ ಮಂತ್ರಿಪರಿಷತ್ ಇತ್ತು. ಕೇಂದ್ರಾಡಳಿತದಲ್ಲಿ ವಿವಿಧ ಇಲಾಖೆಯ ಮುಖ್ಯಸ್ಥರು ಕಾರ್ಯನಿರ್ವಹಿಸುತ್ತಿದ್ದರು.

ಅಂತ ಮಹಾಮಾತ್ರರು : ರಾಜ್ಯದ ಗಡಿಭಾಗಗಳ ರಕ್ಷಣಾ ಕಾರ್ಯವನ್ನು ನಿರ್ವಹಿಸುತ್ತಿದ್ದರು.

ಧರ್ಮ ಮಹಾಮಾತ್ರರು : ಧಾರ್ಮಿಕ ಶ್ರೇಯಸ್ಸನ್ನು ಸಾಧಿಸುತ್ತಿದ್ದರು.

ಸ್ತ್ರೀ ಅದ್ಯಕ್ಷ ಮಹಾಮಾತ್ರರು : ಸ್ತ್ರೀಯರ ಹಿತವನ್ನು ನೋಡಿಕೊಳ್ಳುತ್ತಿದ್ದರು.

2. ವಿಕೇಂದ್ರೀಕೃತ ಆಡಳಿತ :

ಅಶೋಕನು ಸಂಸ್ಥಾಪಿಸಿದ್ದ ಆಡಳಿತವು ವಿಕೇಂದ್ರೀಕೃತ ಸ್ವರೂಪದ್ದಾಗಿತ್ತು. ಅಶೋಕನ ಕಾಲದಲ್ಲಿ 5 ಪ್ರಾಂತ್ಯಗಳಿದ್ದು ಪ್ರಾಂತ್ಯಾಧಿಕಾರಿಗಳು ಪ್ರಾಂತೀಯ ಆಡಳಿತವನ್ನು ನೋಡಿಕೊಳ್ಳುತ್ತಿದ್ದರು. ಅವುಗಳೆಂದರೆ; ಕಳಿಂಗ, ಕೋಸಲ, ಪಾಟಲೀಪುತ್ರ, ಉಜ್ಜಯನಿ ಮತ್ತು ಸುವರ್ಣಗಿರಿ, ಕೇಂದ್ರಾಡಳಿತದಂತೆಯೇ ಪ್ರಾಂತೀಯ ಆಡಳಿತವು ಸಹ ವ್ಯವಸ್ಥಿತ ಮತ್ತು ಸುಭದ್ರ ಆಡಳಿತವೆನಿಸಿತ್ತು.

3. ಪ್ರಜಾಹಿತ ಆಡಳಿತ (ಸುಖೀ ರಾಜ್ಯದ ಸ್ಥಾಪನೆ):

ಅಶೋಕನು ಸಂಸ್ಥಾಪಿಸಿದ್ದ ಆಡಳಿತವು ಪ್ರಜಾಹಿತ ಆಡಳಿತವೆನಿಸಿತ್ತು. ಪ್ರಜಾಹಿತಾಕಾಂಕ್ಷೆಯೇ ರಾಜನ ಆಡಳಿತದ ಮೂಲ ಮಂತ್ರವಾಗಿತ್ತು. ಪ್ರಜಾ ಅಭ್ಯುದಯವೇ ರಾಜನ ಅಭ್ಯುದಯವಾಗಿತ್ತು.

4. ಪ್ರಜಾಕಲ್ಯಾಣ (ಲೋಕೋಪಯೋಗಿ ಕಾರ್ಯಗಳು):

ಪ್ರಜಾಕಲ್ಯಾಣ ಕಾರ್ಯಕ್ಕಾಗಿ ಕೆಲವು ಲೋಕೋಪಯೋಗಿ ಕಾರ್ಯಗಳನ್ನು ಜಾರಿಗೆ ತಂದಿದ್ದನು. ಪ್ರಯಾಣಿಕರಿಗಾಗಿ ಮಾರ್ಗಗಳನ್ನು ನಿರ್ಮಿಸಿದ್ದನು. ಮಾರ್ಗಗಳ ಎರಡು ಕಡೆಗೂ ನೆರಳಿಗಾಗಿ ಆಲದ ಮರಗಳನ್ನು ನೆಡಿಸಿದ್ದನು. ಮಾವಿನ ತೋಪುಗಳನ್ನು ಬೆಳೆಸಿದ್ದನು. ಪ್ರತಿ 9 ಮೈಲುಗಳಿಗೆ ಬಾವಿಯನ್ನು ತೊಡಿಸಿದ್ದನು. ಮಾರ್ಗದ ಮಧ್ಯೆ ವಿಶ್ರಾಂತಿ ಗೃಹಗಳನ್ನು ಕಟ್ಟಿಸಿದ್ದನು. ಪ್ರಾಣಿ ಮತ್ತು ಮಾನವರ ಉಪಯೋಗಕ್ಕಾಗಿ ಚಿಕಿತ್ಸಾಲಯಗಳನ್ನು ತೆರೆದಿದ್ದನು. ಚಿಕತ್ಸೆಗಾಗಿ ಗಿಡಮೂಲಿಕೆಗಳ ವನವನ್ನು ಬೆಳೆಸಿದ್ದನು. ಅಶೋಕನ 7 ನೇ ಸ್ತಂಭಶಾಸನ ಮತ್ತು 2ನೇ ಬಂಡೆಕಲ್ಲು ಶಾಸನದಿಂದ ಅಶೋಕನ ಪ್ರಜಾಹಿತ ಕಾರ್ಯಗಳ ವಿವರ ತಿಳಿದುಬರುತ್ತದೆ. ಈ ಮೇಲಿನ ಅಂಶಗಳನ್ನು ಅವಲೋಕಿಸಿದ ಚರಿತ್ರಾಕಾರ ʻಫೀಟ್’ ಅಭಿಪ್ರಾಯ ಪಡುವಂತೆ `ಪ್ರಜಾಹಿತಕಾರ್ಯಕ್ಕೆ ಅಶೋಕನ ಧಾರ್ಮಿಕ ಮತ್ತು ನೈತಿಕ ಅಂಶಗಳು ಆಧಾರಗಳಾಗಿದ್ದವು’.

5. ಶಾಂತಿ ಮತ್ತು ಅಹಿಂಸೆಯ ತತ್ವ :

ಅಶೋಕನ ಆಳ್ವಿಕೆಯಲ್ಲಿ ಶಾಂತಿ ಮತ್ತು ಅಹಿಂಸೆಯ ತತ್ವವು ಮೂಲ ಆಧಾರವಾಗಿತ್ತು. ಶಾಂತಿ ಮತ್ತು ಅಹಿಂಸಾತತ್ವವು ಬೌದ್ಧ ಧಾರ್ಮಿಕ ತತ್ವಗಳನ್ನು ಆಧರಿಸಿದೆ. ಯುದ್ಧದಿಂದ ಮತ್ತು ಹಿಂಸೆಗಳ ಮೂಲಕ ಭೂಪ್ರದೇಶ ಗೆಲ್ಲುವುದನ್ನು ತ್ಯಜಿಸುವುದು, ಜೊತೆಗೆ ಪ್ರಾಣಿಹತ್ಯೆಯನ್ನು ತಡೆಗಟ್ಟುವುದೇ ಆಗಿದೆ.

ಅಶೋಕ ಮತ್ತು ಬೌದ್ಧಧರ್ಮದ ಪ್ರಸಾರ

ಅಶೋಕ ಮತ್ತು ಬೌದ್ಧಧರ್ಮದ ಪ್ರಸಾರ

ಕಳಿಂಗ ಯುದ್ಧಾನಂತರ ಮನಪರಿವರ್ತನೆಯಾಗಿ ಬೌದ್ಧಮತಾವಲಂಬಿಯಾದ ಅಶೋಕ ಮಹಾಶಯ ಆ ಪಂಥದ ಶ್ರೇಯಸ್ಸಿಗಾಗಿ ಅಪಾರವಾಗಿ ಶ್ರಮಿಸಿದನು. ಬೌದ್ಧ ಮತದ ಅಭಿವೃದ್ಧಿಗಾಗಿ ಅಶೋಕನು ಮಾಡಿದ ಸ್ಮರಣಾರ್ಹ ಸೇವೆಯ ಹಿನ್ನೆಲೆಯಲ್ಲಿ ಆತನನ್ನು 2ನೇ ಬುದ್ಧನೆಂದು ಹೆಸರಿಸಲಾಗಿದೆ. ಪೊ|| ಆರ್.ಸತ್ಯನಾಥ ಅಯ್ಯರ್ ‘ಅಶೋಕನು ಭಗವಾನ್ ಬುದ್ಧನ ಉಪದೇಶಗಳ ಸಾರವನ್ನು ಅಧಿಕೃತವಾಗಿ ಪ್ರಸಾರಮಾಡಿದನು’ ಎಂದಿದ್ದಾರೆ. ಬೌದ್ಧಪಂಥದ ಶ್ರೇಯೋಭಿವೃದ್ದಿಗಾಗಿ 5 ಮಾರ್ಗಗಳನ್ನು ಅನುಸರಿಸಿದನು.

1) ಧರ್ಮ ಮಹಾಮಾತ್ರರ ನೇಮಕ, 

2) ಬೌದ್ಧ ಸಂಘಗಳ ಸ್ಥಾಪನೆ,

3) ಧಾರ್ಮಿಕ ಯಾತ್ರೆಗಳು,    

4) ಶಿಲಾಶಾಸನ ಪದ್ಧತಿ,

5) ಬೌದ್ಧಯತಿಗಳ ನೇಮಕ.

1.ಧರ್ಮಮಹಾಮಾತ್ರರ ನೇಮಕ : ಬೌದ್ಧಧರ್ಮದ ಸಂವರ್ಧನೆಗಾಗಿ ಧರ್ಮಮಹಾಮಾತ್ರರನ್ನು ನೇಮಿಸಲಾಗಿತ್ತು. 13ನೇ ಬಂಡೆಕಲ್ಲು ಶಾಸನ ತಿಳಿಸುವಂತೆ ಧರ್ಮಪ್ರಚಾರ ಮಾಡಲು ಮತ್ತು ಪ್ರಚಾರವಾದುದು ಕಾರ್ಯಗತವಾಗಿದೆಯೇ ಎಂದು ಪರಿಶೀಲಿಸಲು 256ವಿಶೇಷ ಅಧಿಕಾರಿಗಳನ್ನು ನೇಮಿಸಿದ್ದನು. ಧಮ್ಮಮಹಾಮಾತ್ರರನ್ನು ಧರ್ಮಆಯುಕ್ತರೆಂದು ಸಹ ಕರೆಯಲಾಗುತ್ತಿತ್ತು.

2. ಬೌದ್ಧಸಂಘಗಳ ಸ್ಥಾಪನೆ : ಬೌದ್ಧಸನ್ಯಾಸಿ, ಸನ್ಯಾಸಿನಿಯರಿಂದ ಕೂಡಿದ ಸಂಘವು ಧರ್ಮದ ಶ್ರೇಯಸ್ಸಿಗಾಗಿ ಅಪಾರ ಶ್ರಮಿಸುತ್ತಿತ್ತು. ಸಂಘದ ಪಾತ್ರ ಕುರಿತು ‘ಬುದ್ಧಂ ಶರಣಂ ಗಚ್ಛಾಮಿ, ಸಂಘಂ ಶರಣಂ ಗಚ್ಛಾಮಿ ಧರ್ಮಂ ಶರಣಂ ಗಚ್ಛಾಮಿ’ ಎಂಬ ಅಂಶ ಪ್ರಧಾನವಾದುದು. ಬೌದ್ಧ ಸಂಘದ ಬಗ್ಗೆ ಅಶೋಕ ಮಹಾಶಯನ ಅಭಿಪ್ರಾಯ ʻಸಾಂಚಿ ಹಾಗೂ ಸಾರನಾಥ’ ಶಾಸನಗಳಲ್ಲಿ ಕಂಡುಬರುತ್ತದೆ. ಇದರಲ್ಲಿ ‘ನನ್ನ ಪುತ್ರ. ಪೌತ್ರರಿರುವವರೆಗೂ ಸೂರ್ಯ ಚಂದ್ರರಿರುವವರೆಗೂ ಬೌದ್ಧ ಬಿಕ್ಷು-ಚಿಕ್ಷುಣಿಯರ ಸಂಘವು ಸಮಗ್ರವಾಗಿರತಕ್ಕದ್ದು’ ಎಂದು ಹೇಳಿದ್ದಾನೆ.

3. ಧಾರ್ಮಿಕ ಯಾತ್ರೆಗಳು : ಧರ್ಮಪ್ರಚಾರಕ್ಕಾಗಿ ಧಾರ್ಮಿಕ ಯಾತ್ರೆಗಳನ್ನು ನಡೆಸಿದನು. ಬುದ್ಧನಿಗೆ ಸಂಬಂಧಿಸಿದ ಪ್ರದೇಶಗಳಾದ ಲುಂಬಿನಿವನ, ಕಪಿಲವಸ್ತು, ಸಾರನಾಥ, ಕುಶೀನಗರ ಮೊದಲಾದ ಪ್ರದೇಶಗಳಿಗೆ ಧರ್ಮಯಾತ್ರೆ ಕೈಗೊಂಡನು.

4. ಬೌದ್ಧಯತಿಗಳ ನೇಮಕ : ಬೌದ್ಧಧರ್ಮದ ಪ್ರಚಾರಕ್ಕಾಗಿ ಬೌದ್ಧಯತಿಗಳನ್ನು ನೇಮಿಸಿದನು. ತನ್ನ ಮಕ್ಕಳಾದ ಮಹೇಂದ್ರ ಮತ್ತು ಸಂಘಮಿತ್ರೆಯರನ್ನು ಧರ್ಮ ಪ್ರಚಾರಕ್ಕಾಗಿ ಸಿಲೋನ್‌ ಗೆ ಕಳುಹಿಸಿದನು. ಅಶೋಕನು ಈ ಕೆಳಕಂಡ ಪ್ರದೇಶಗಳಿಗೆ ವಿವಿಧ ಪ್ರಚಾರಕರನ್ನು ಕಳುಹಿಸಿದನು. ಮಜ್ಜಾಂತಿಕ- ಕಾಶ್ಮೀರ ಮತ್ತು ಗಾಂಧಾರ, ಮಹಾರಕ್ಷಿತ-ಯವನದೇಶ, ಮಜ್ಜಿಮ-ಹಿಮಾಲಯ ದೇಶ, ಮಹಾಧರ್ಮ ರಕ್ಷಿತ-ಮಹಾರಾಷ್ಟ್ರ, ರಕ್ಷಿತ-ವಾರಣಾಸಿ, ಮಹಾದೇವ-ಮಹಿಷಾ ಮಂಡಲ(ಮೈಸೂರು-ಕರ್ನಾಟಕ), ಸೋನ ಮತ್ತು ಉತ್ತರ-ಸುವರ್ಣ ಭೂಮಿ ಮತ್ತು ಪೆಗು.

5. 3ನೇ ಬೌದ್ಧ ಸಮ್ಮೇಳನ : ಬೌದ್ಧ ಪಂಥದ ಅಭ್ಯುದಯ ಮತ್ತು ಶ್ರೇಯಸ್ಸು ಹಾಗೂ ಐಕ್ಯತೆಯ ಸ್ಥಾಪನೆಗಾಗಿ ಪಾಟಲೀಪುತ್ರದಲ್ಲಿ ಮೂರನೇ ಬೌದ್ಧ ಸಮ್ಮೇಳನವನ್ನು ನಡೆಸಿದನು. ಈ ಧಾರ್ಮಿಕ ಸಭೆಯ ಅಧ್ಯಕ್ಷತೆಯನ್ನು ಆಚಾರ್ಯ ಮೊಗ್ಗಲಿಪುತ್ರತಿಸ್ಸ ವಹಿಸಿದ್ದನು. ಕ್ರಿ.ಪೂ 234ರಲ್ಲಿ ಆದ ಮೂರನೇ ಬೌದ್ಧ ಸಮ್ಮೇಳನವು ಮಹತ್ವದ ಸಾಧನೆ ಮಾಡಿತು. ಈ ಸಮ್ಮೇಳನದ ಮೂಲಕ ಉಪಖಂಡದ ವಿವಿಧ ಭಾಗಗಳಿಗೆ ಧರ್ಮ ಪ್ರಚಾರಕ್ಕಾಗಿ ಪ್ರಚಾರಕರನ್ನು ಕಳುಹಿಸಲಾಯಿತು. ಜನಸಾಮಾನ್ಯರನ್ನು ಧರ್ಮದ ಕಡೆಗೆ ಆಕರ್ಷಿಸಲು ಸ್ತೂಪಗಳನ್ನು ಕಟ್ಟಿಸಿದನು. ಅಶೋಕನು ತನ್ನ ಸಾಮ್ರಾಜ್ಯದ ವಿವಿಧ ಭಾಗಗಳಲ್ಲಿ ಸುಮಾರು 84,000 ಸ್ತೂಪಗಳನ್ನು ನಿರ್ಮಿಸಿದ್ದನೆಂದು ತಿಳಿದುಬರುತ್ತದೆ. ಬೌದ್ಧಧರ್ಮದ ತತ್ವಗಳನ್ನು ಶಾಶ್ವತವಾಗಿ ಉಳಿಸಿಕೊಳ್ಳುವ ದೃಷ್ಠಿಯಿಂದ ಕಲ್ಲುಬಂಡೆಗಳ ಮೇಲೆ ಬೌದ್ಧ ಧಾರ್ಮಿಕ ತತ್ವಗಳನ್ನು ಕೆತ್ತಿಸಿದನು.

ಅಶೋಕನ ಧರ್ಮಪ್ರಚಾರ ಕಾರ್ಯವನ್ನು ಗಮನಿಸಿಯೇ ಡಾ|| ಆರ್.ಎಸ್.ಶರ್ಮರವರು ʻಪ್ರಾಚೀನ ವಿಶ್ವದ ಇತಿಹಾಸದಲ್ಲಿ ಅಶೋಕಮಹಾಶಯ ಅತ್ಯುತ್ತಮ ಧರ್ಮಪ್ರಚಾರಕ’ ಎಂದಿದ್ದಾರೆ. ಡಾ||ಆರ್.ಕೆ.ಮುಖರ್ಜಿ ಯವರು ತಮ್ಮ ಕೃತಿಯಾದ ‘ಹಿಸ್ಟರಿ ಆಫ್ ಏನ್ಸಿಯಂಟ್ ಇಂಡಿಯಾ’ ದಲ್ಲಿ ‘ನಾಗರೀಕ ಪ್ರಪಂಚದ ಸವಿಸ್ತಾರ ಪ್ರದೇಶದ ಮೇಲೆ ಭಾರತೀಯ ಸಂಸ್ಕೃತಿಯ ನೈತಿಕ ಪ್ರಾಬಲ್ಯತೆಯನ್ನು ತರುವಲ್ಲಿ ಅಶೋಕ ಸಾಧನವಾಗಿ ವರ್ತಿಸಿದನು’ ಎಂದಿದ್ದಾರೆ. ಬೌದ್ಧ ಮತದ ಅಭಿವೃದ್ಧಿಗಾಗಿ ಸ್ಮರಣೀಯ ಸೇವೆ ಸಲ್ಲಿಸಿದ ಅಶೋಕ ಮಹಾಶಯನನ್ನು 2ನೇ ಬುದ್ದನೆಂದೇ ಹೆಸರಿಸಲಾಗಿದೆ. ಧರ್ಮಾಶೋಕನ ಅಪಾರ ಪರಿಶ್ರಮದಿಂದ ಬೌದ್ಧಧರ್ಮವು ದೇಶ ವಿದೇಶಗಳಲ್ಲಿ ಹರಡಲ್ಪಟ್ಟ ಪ್ರಧಾನ ಧರ್ಮವಾಯಿತು.

ಅಶೋಕ ಧಮ್ಮ

ಅಶೋಕ ಧಮ್ಮ

ಧರ್ಮ ಎಂಬ ಪದದ ಪ್ರಾಕೃತ ರೂಪವೇ ʻಧಮ್ಮ’. ಅಂದರೆ ಧಾರ್ಮಿಕತೆ, ದೈವಭಕ್ತಿ (Law of Piety), ನೈತಿಕತೆ, ಸಾಮಾಜಿಕ ಮತ್ತು ಧಾರ್ಮಿಕ ವ್ಯವಸ್ಥೆ ಎಂಬ ಅರ್ಥಗಳನ್ನು ಹೊಂದಿದೆ. ಅಶೋಕ ಧಮ್ಮದ ಮೂಲಭೂತ ತತ್ವಗಳನ್ನು ಅಶೋಕನೇ ಕೆತ್ತಿಸಿದ ಶಿಲಾಶಾಸನ ಗಳಲ್ಲಿ ಕಾಣಬಹುದು. ಅವುಗಳೆಂದರೆ

ಸಂಯಮ (Mastery of Senses)
ದಯಾ (Kindness)
ಶುಶೃಷಾ (Service)
ಅಪಚಿತ್ತಿ (Reverence – Deep Respect)
ದಾನ (Charity)
ಸಂಪ್ರತಿಪತ್ತಿ (Support)
ಕೃತಜ್ಞತಾ, (Gratitude)
ಶೌಚ (Purity)
ಭಾವಶುದ್ಧಿ (Purity of Thought)
ದೃಡಭಕ್ತಿ (Devotion)
ಸತ್ಯ (Truthfullness)
ಅಪಿಚಿತ್ತಿ (Reverence – Deep Respect)

ಈ ಮೇಲ್ಕಂಡ ಅಂಶಗಳನ್ನು ಒಳಗೊಂಡ ಅಶೋಕ ಧಮ್ಮವು ಯಾವ ಧರ್ಮದಿಂದ ಆಧಾರಿತವಾಗಿದೆ ಅಥವಾ ಪ್ರಭಾವಿತವಾಗಿದೆ ಎಂಬ ವಿಷಯಕ್ಕೆ ಸಂಬಂಧಿಸಿದಂತೆ ವಿದ್ವಾಂಸರಲ್ಲಿ ಭಿನ್ನಾಭಿಪ್ರಾಯಗಳಿವೆ.

ಡಾ. ಭಂಡಾರ್ಕರ್‌ ರವರ ಪ್ರಕಾರ ಅಶೋಕ ಧಮ್ಮವು ಬೌದ್ಧ ಧರ್ಮವಾಗಿದೆ. ಅವನು ಬೌದ್ಧಧರ್ಮಿಯನಾಗಿದ್ದಾನೆ. ಆದರೆ ಅದನ್ನು ವಿರೋಧಿಸುವ ಡಾ. ರಾಧಾಕುಮುದ್ ಮುಖರ್ಜಿಯವರು ಅಶೋಕ ತನ್ನ ಶಿಲಾಶಾಸನಗಳಲ್ಲಿ ಪ್ರತಿಪಾದಿಸಿದ ಧಮ್ಮ ಬೌದ್ಧಧರ್ಮವೇ ಆಗಿದ್ದರೆ, ಭಗವಾನ್ ಬುದ್ಧನ ನಾಲ್ಕು ಆರ್ಯಸತ್ಯಗಳನ್ನು ಹೇಳುತ್ತಿದ್ದ. ಅಷ್ಟಾಂಗಿಕ ಮಾರ್ಗಗಳನ್ನು ಮತ್ತು ನಿರ್ವಾಣವನ್ನಾದರೂ ಉಲ್ಲೇಖಿಸುತ್ತಿದ್ದ. ಭಗವಾನ್ ಬುದ್ಧನ ಮಹಾನ್ ವ್ಯಕ್ತಿತ್ವವನ್ನಾದರೂ ಕೊಂಡಾಡುತ್ತಿದ್ದ. ಆದರೆ ಅದ್ಯಾವುದನ್ನು ಮಾಡದ ಅಶೋಕ ಧಮ್ಮ, ಬೌದ್ಧಧರ್ಮ ಅಲ್ಲವೇ ಅಲ್ಲ ಎನ್ನುವುದು ಮುಖರ್ಜಿಯವರ ಸ್ಪಷ್ಟ ಅಭಿಪ್ರಾಯವಾಗಿದೆ.

ಕಲ್ಲಣನು ತನ್ನ ‘ರಾಜತರಂಗಿಣಿ’ ಎಂಬ ಕೃತಿಯಲ್ಲಿ ಅಶೋಕನು ಶಿವನ ಆರಾಧಕನಾಗಿದ್ದನೆಂದು ತಿಳಿಸುತ್ತಾನೆ. ಅಲ್ಲದೆ ಶಿಲಾಶಾಸನಗಳಲ್ಲಿ ತನ್ನನ್ನು ‘ದೇವನಾಂಪ್ರಿಯ ಪ್ರಿಯದರ್ಶಿ’ ಎಂದು ಕರೆದುಕೊಂಡಿದ್ದಾನೆ. ಕೆ.ಎಂ. ಪಣಿಕ್ಕರ್‌ರವರು ಈ ದೈವ ವೈದಿಕ ದೇವರಲ್ಲದೆ ಮತ್ತಾರು ಎಂದು ಪ್ರಶ್ನಿಸುತ್ತಾರೆ. ಅಂದರೆ ಅಶೋಕನು ವೈದಿಕನಾಗಿದ್ದ. ಅವನ ಧರ್ಮಕ್ಕೆ ʻವೈದಿಕಧರ್ಮ’ (ಹಿಂದೂಧರ್ಮ) ಆಧಾರವಾಗಿತ್ತು ಎಂದರ್ಥವಾಗುತ್ತದೆ. ಆದರೆ ಅದನ್ನು ವಿರೋಧಿಸುವ ಇತರೆ ವಿದ್ವಾಂಸರು ಅಶೋಕ ಪ್ರತಿಪಾದಿಸಿದ ಧಮ್ಮ ವೈದಿಕ ಧರ್ಮವೇ ಆಗಿದ್ದರೆ ಅದರ ಪ್ರತೀಕವಾದ ಪ್ರಾಣಿಬಲಿ, ಯಾಗ, ಸಂಪ್ರದಾಯ ಮತ್ತು ಆಚರಣೆಗಳಲ್ಲಿ ತನ್ನ ನಂಬಿಕೆಯನ್ನು ದೃಢಪಡಿಸುತ್ತಿದ್ದ ಎಂದಿದ್ದಾರೆ. ಆದರೆ ಅವುಗಳ ಬಗ್ಗೆ ಚಕಾರವೆತ್ತದ ಅಶೋಕ ವೈದಿಕ ಧರ್ಮದಿಂದ ಪ್ರಭಾವಿತನಾಗಿಲ್ಲ ಎಂಬುದು ತಿಳಿಯುತ್ತದೆ.

ವಾಸ್ತವವಾಗಿ ಅಶೋಕ ಧಮ್ಮವು ಯಾವುದೇ ಧರ್ಮದಿಂದ ಪ್ರಭಾವಿತವಾಗಿಲ್ಲದಿರುವುದನ್ನು ಕಾಣಬಹುದು. ಆದರೆ ಅದು ಎಲ್ಲಾ ಧರ್ಮಗಳ ಸಾರ ಸಂಗ್ರಹವಾಗಿದೆ. ಯಾವುದೇ ಜಾತಿ, ಮತ, ಧರ್ಮಗಳ ಚೌಕಟ್ಟಿಗೆ ಒಳಪಡದ ಸ್ವತಂತ್ರ ಅಭಿವ್ಯಕ್ತಿಯಾಗಿದೆ. ಡಾ. ಆರ್.ಸಿ. ಮಜುಂದಾರ್ ಪ್ರಕಾರ “ಅವನ ಧರ್ಮ ಧರ್ಮ ಎನ್ನುವುದಕ್ಕಿಂತ ಒಂದು ನೀತಿ ಸಂಹಿತೆ ಎಂದು ಕರೆಯುವುದು ಉಚಿತ’ ಎಂದಿದ್ದಾರೆ. ಆರ್.ಕೆ. ಮುಖರ್ಜಿಯವರ ಪ್ರಕಾರ “ಅಶೋಕನ ಧರ್ಮ ಯಾವುದೇ ನಿರ್ದಿಷ್ಟ ಪದ್ಧತಿಯಾಗಿರದೇ ಅದರಲ್ಲಿ ಎಲ್ಲಾ ಜಾತಿ, ಜನಾಂಗ, ಧರ್ಮಿಯರಿಗೆ ಅವಶ್ಯಕವಾದ ನೀತಿ ಸಂಹಿತೆಯಾಗಿದ್ದವು. ಅವನ ಸ್ವಂತಿಕೆ ಅಡಗಿರುವುದು ಅವನು ಮಾಡಿದ ಕಾರ್ಯಗಳಲ್ಲಿ ಅಡಗಿದೆ” ಎಂದಿದ್ದಾರೆ. ಸ್ಮಿತ್‌ರವರು ಅಶೋಕನದು ಬೌದ್ಧಧರ್ಮವಾಗಿರದೇ ಅವನದೇ ಸ್ವಂತಿಕೆಯ ಧರ್ಮವೆಂದಿದ್ದಾರೆ.

ಸಾಮಾಜಿಕ ಹೊಣೆಗಾರಿಕೆ ಮತ್ತು ಒಬ್ಬರೊಂದಿಗೆ ಮತ್ತೊಬ್ಬರ ನಡತೆಗಳು ಹೇಗಿರಬೇಕೆಂಬುದರ ಮಹತ್ವವನ್ನು ಮನವರಿಕೆ ಮಾಡಿಕೊಡುವುದು ಧಮ್ಮದ ಉದ್ದೇಶವಾಗಿತ್ತು ಎಂದು ಪ್ರೊ|| ರೊಮಿಲಾ ಥಾಪರ್ ಅಭಿಪ್ರಾಯಪಟ್ಟಿದ್ದಾರೆ. ಅಶೋಕನ ಧಮ್ಮವು 4 ಪ್ರಮುಖ ತತ್ವಗಳನ್ನು ಆದರಿಸಿತ್ತು. ಅವುಗಳೆಂದರೆ 1. ಅಹಿಂಸೆ, 2. ಸಹಿಷ್ಣುತೆ, 3. ಶಾಂತಿ, 4. ಪ್ರಜಾಕಲ್ಯಾಣ.

 ಡಾ||ಆರ್.ಕೆ.ಮುಖರ್ಜಿಯವರ ಪ್ರಕಾರ ʻಅಶೋಕನ ಧಮ್ಮವು ಯಾವುದೇ ನಿರ್ದಿಷ್ಟ ಧಮ್ಮ ಹಾಗೂ ಧಾರ್ಮಿಕ ಪದ್ಧತಿಯಾಗಿರದೆ ಎಲ್ಲಾ ಜಾತಿ ಜನಾಂಗಕ್ಕೂ ಅಗತ್ಯವಾದ ನೈತಿಕ ಕಾನೂನುಗಳಾಗಿದ್ದವು’. ಡಾ|| ಭಂಡಾರ್ಕರ್ ರವರು ʻಅಶೋಕನ ಧಮ್ಮವು ಧಾರ್ಮಿಕವಲ್ಲದ ಬೌದ್ಧಧರ್ಮವಾಗಿತ್ತು’ ಎಂದಿದ್ದಾರೆ.

ಅಶೋಕ ಧಮ್ಮದ ಲಕ್ಷಣಗಳು :

1. ಅಹಿಂಸೆ :

ಅಹಿಂಸೆಯು ಅಶೋಕ ಧಮ್ಮದ ಸಾರವಾಗಿತ್ತು. ಇವನು ಕಳಿಂಗ ಯುದ್ಧಾನಂತರ ಅಹಿಂಸಾ ನೀತಿಯನ್ನು ಪಾಲಿಸಿದನು, ತನ್ನ ರಾಜ್ಯದಲ್ಲಿ ಪ್ರಾಣಿಬಲಿಯನ್ನು ನಿಷೇಧಿಸಿದನು. ಸ್ವತಃ ಬೇಟೆಯಾಡುವುದನ್ನು ನಿಲ್ಲಿಸಿದನು. ಮಾಂಸಾಹಾರವನ್ನು ಬಿಟ್ಟುಬಿಟ್ಟನು. ಯಜ್ಞಯಾಗಗಳನ್ನು ನಿಷೇಧಿಸಿದನು. ಪ್ರಾಣಿಗಳನ್ನು ಕೊಲ್ಲದಂತೆ ರಾಜಾಜ್ಞೆಯನ್ನು ಮಾಡಿದನು. ತನ್ನ ಶಿಲಾಶಾಸನದಲ್ಲಿ ಅಹಿಂಸೆಯ ಮಹತ್ವವನ್ನು ಸಾರಿದನು.

2. ಸಹಿಷ್ಣುತೆ :

ಸಹಿಷ್ಣುತೆ ಎಂದರೆ ಗುಲಾಮರು ಮತ್ತು ನೌಕರರ ಜೊತೆಗೆ ಸಹಾನುಭೂತಿ, ಜನ್ಮದಾತ್ಮಗಳಿಗೆ ಹಿರಿಯರಿಗೆ, ಗುರುವರ್ಯರಿಗೆ ಗೌರವ ಕೊಡುವುದರ ಜೊತೆಗೆ ವಿದೇಯರಾಗಿರಬೇಕು. ಅಲ್ಲದೆ ಕಿರಿಯರಿಗೆ ಪ್ರೀತ್ಯಾದಾರಗಳನ್ನು, ಆಶ್ರಿತರಿಗೆ, ಬಡವರಿಗೆ, ಸಂಕಷ್ಟದಲ್ಲಿರುವವರಿಗೆ, ಸ್ನೇಹಿತರಿಗೆ, ಪರಿಚಿತರಿಗೆ ಸನ್ಯಾಸಿಗಳಿಗೆ ಬ್ರಾಹ್ಮಣರಿಗೆ ಔದಾರ್ಯತೆಯನ್ನು ತೋರಿಸಬೇಕೆಂದು ಹೇಳುತ್ತಾನೆ. ಅಶೋಕನ ವೈಯಕ್ತಿಕ ಧರ್ಮ ಬೌದ್ಧ ಧರ್ಮವಾಗಿದ್ದರೂ ಅನ್ಯ ಮತಗಳನ್ನು ಕೀಳಾಗಿ ಕಾಣಲಿಲ್ಲ. ಬ್ರಾಹ್ಮಣರನ್ನು ಪ್ರೀತಿ ವಿಶ್ವಾಸಗಳಿಂದ ಕಂಡನು.

ಎರಡನೇ ಶಿಲಾಶಾಸನದಲ್ಲಿ ಅರಸನು ಎಲ್ಲಾ ಪಂಥಗಳನ್ನು ಗೌರವಿಸುತ್ತಾನೆ ಎಂದು ಅಶೋಕನೇ ಬರೆಸಿದ್ದಾನೆ. ಅಲ್ಲದೇ ಅಜೀವಿಕರಿಗಾಗಿ ಗಯಾ ಬಳಿ ಗುಹೆಗಳನ್ನು ಸಹ ನಿರ್ಮಿಸಿದ್ದಾನೆ. ಯಾರನ್ನೂ ಸಹ ಮತಾಂತರಕ್ಕೆ ಅಶೋಕ ಬಲಾತ್ಕರಿಸಲಿಲ್ಲ. ಇದು ಅಶೋಕನ ಮತ್ತು ಧಮ್ಮದ ಹೆಗ್ಗಳಿಕೆಯಾಗಿದೆ. ಅಶೋಕನ ಧಮ್ಮದ ಪ್ರಕಾರ ತನ್ನ ಪಂಥಕ್ಕಿಂತ ಪರಪಂಥವನ್ನು ಗೌರವಿಸಿದಾಗ ತನ್ನ ಪಂಥವು ಪ್ರಬಲಗೊಳ್ಳುತ್ತದೆ. ಪ್ರತಿಯೊಂದು ಪಂಥವು ಒಂದಲ್ಲಾ ಒಂದು ಕಾರಣಕ್ಕಾಗಿ ಪೂಜ್ಯಭಾವನೆಗೆ ಅರ್ಹ.

3. ಶಾಂತಿ :
ಶಾಂತಿಯು ಯಶಸ್ಸಿನ ಸಾಧನೆಯ ಮೂಲಮಂತ್ರವಾಗಿದೆ. ಅಶಾಂತಿಯು ಅವ್ಯವಸ್ಥೆಯ ಆಗರವಾಗುತ್ತದೆ.
4. ವಿಶ್ವ ಸಹೋದರತ್ವ :

ಅಶೋಕನು ವಿಶ್ವ ಸಹೋದರತ್ವವನ್ನು ಎತ್ತಿ ಹಿಡಿದನು. ವಿಶ್ವದ ಜನರೆಲ್ಲರೂ ತನ್ನ ಸಹೋದರರೆಂದು ಸಾರಿದನು. ಇದನ್ನೇ ಅಶೋಕ ಧಮ್ಮದ ಪ್ರಮುಖ ಲಕ್ಷಣವನ್ನಾಗಿಸಿದನು. ಈ ದೃಷ್ಟಿಯಿಂದ ಅಶೋಕನು ʻಜಗತ್ತಿನ ಪ್ರಥಮ ಅಂತರರಾಷ್ಟ್ರೀಯವಾದಿ’ ಎಂದು ಕರೆಯಬಹುದು.

5. ಪ್ರಜಾಕಲ್ಯಾಣ :

ಅಶೋಕ ಧಮ್ಮದ ಇನ್ನೊಂದು ಪ್ರಮುಖ ಲಕ್ಷಣವೆಂದರೆ ಪ್ರಜಾ ಕಲ್ಯಾಣವಾಗಿದೆ ಅಥವಾ ಸುಖಿರಾಜ್ಯದ (Welfare state) ಸ್ಥಾಪನೆಯಾಗಿದೆ. ತನ್ನ ಪ್ರಜೆಗಳೆಲ್ಲರ ನೈತಿಕ, ಲೌಕಿಕ ಮತ್ತು ಆಧ್ಯಾತ್ಮಿಕ ಉನ್ನತಿಗೆ ಶ್ರಮಿಸಿದ ಅಶೋಕನು ಅವರೆಲ್ಲರ ಸುಖಸಂತೋಷಕ್ಕೆ ತನ್ನ ಜೀವನವನ್ನು ಮುಡಿಪಾಗಿಟ್ಟನು. ಅಂತೆಯೇ ತನ್ನ ಒಂದನೇ ಕಳಿಂಗ ಶಿಲಾಶಾಸನದಲ್ಲಿ ಪ್ರಜೆಗಳೆಲ್ಲರೂ ತನ್ನ ಮಕ್ಕಳೇ. ಅವರು ಇಹಲೋಕದಲ್ಲಿ ಮಾತ್ರವಲ್ಲದೇ ಪರಲೋಕದಲ್ಲೂ ಸುಖವಾಗಿರಬೇಕು” ಎಂದು ತಿಳಿಸಿದ್ದಾನೆ. 6ನೇ ಶಿಲಾಶಾಸನದಲ್ಲಿ “ಎಲ್ಲರೂ ನನ್ನ ಮಕ್ಕಳೇ, ನಾನು ಎಲ್ಲೇ ಇರಲಿ, ಭೋಜನ ಮಾಡುತ್ತಿರಲಿ ಅಂತಃಪುರದಲ್ಲಿರಲಿ, ಗೋಶಾಲೆಯಲ್ಲಿರಲಿ, ಮಲಗುವ ಕೊಠಡಿಯಲ್ಲಿರಲಿ, ಅರಮನೆಯಲ್ಲಿರಲಿ, ಪ್ರಜೆಗಳು ತನ್ನನ್ನು ಭೇಟಿಯಾಗಿ ತಮ್ಮ ಕುಂದು ಕೊರತೆಗಳನ್ನು ನಿವಾರಿಸಿಕೊಳ್ಳಬಹುದು. ಅದಕ್ಕೆ ನಾನು ಸದಾ ಸಿದ್ಧ” ಎಂದು ತಿಳಿಸಿದ್ದಾನೆ. ಸುಖಿರಾಜ್ಯ ಸ್ಥಾಪನೆಗಾಗಿ ಸಾರ್ವಜನಿಕ ಉಪಯೋಗಿ ಕೆಲಸಗಳಲ್ಲಿ ತನ್ನನ್ನು ತಾನು ಅಶೋಕ ತೊಡಗಿಸಿಕೊಂಡಿದ್ದಾನೆ. ಈ ದೃಷ್ಟಿಯಿಂದ ಪ್ರಜಾಕಲ್ಯಾಣಕ್ಕಾಗಿ ಶ್ರಮಿಸಿದ ಸಾಮ್ರಾಟರಲ್ಲಿ ಅಶೋಕ ಮಹಾಶಯನೇ ಮೊದಲಿಗನು. ಪ್ರಜಾಕಲ್ಯಾಣದಲ್ಲಿ ಜಾರಿಗೆ ತಂದ ಲೋಕೋಪಯೋಗಿ ಕಾರ್ಯಗಳು ಅತ್ಯಂತ ಅವಿಸ್ಮರಣೀಯವಾಗಿದೆ. ಅವುಗಳೆಂದರೆ:

ರಸ್ತೆಗಳ ನಿರ್ಮಾಣ,    

ಸಾಲುಮರಗಳನ್ನು ನೆಡಿಸಿದ್ದು,

ಅನ್ನ ಛತ್ರಾಲಯಗಳ ಸ್ಥಾಪನೆ,                                             

ಪ್ರತಿ 9 ಮೈಲುಗಳಿಗೆ ಒಂದು ಬಾವಿಯ ನಿರ್ಮಾಣ,

ಚಿಕಿತ್ಸಾಲಯಗಳ ಸ್ಥಾಪನೆ,                                                   

ವಿಶ್ರಾಂತಿ ಗೃಹಗಳ ಸ್ಥಾಪನೆ,

ಗಿಡಮೂಲಿಕೆಯ ಸಸ್ಯಗಳನ್ನು ಬೆಳೆಸಿದ್ದು ಮೊದಲಾದವು ಪ್ರಜಾಕಲ್ಯಾಣದ ಸಾಧನೆಗಳಾಗಿವೆ.

ಅಶೋಕನು ತನ್ನ  ಧಮ್ಮದ ಪ್ರಚಾರಕ್ಕೆ ಕೈಗೊಂಡ ಕ್ರಮಗಳು :

1. ತನ್ನ ವೈಯಕ್ತಿಕ ಉದಾಹರಣೆಯನ್ನು ಜನರ ಮುಂದಿಡುವ ಮೂಲಕ :

* ದಿಗ್ವಿಜಯಕ್ಕೆ ಸಮಾಪ್ತಿ ಹಾಡಿದನು

* ಪ್ರಾಣಿ ಬಲಿ, ಬೇಟೆ, ಮಾಂಸಾಹಾರ ತ್ಯಜಿಸಿದನು

* ಜನೋಪಯೋಗಿ (ಪ್ರಜಾಕಲ್ಯಾಣ) ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡನು

2. ಹೆಚ್ಚು ಪ್ರಚಾರ ಕೈಗೊಳ್ಳುವ ಮೂಲಕ :

* ಶಿಲಾಶಾಸನಗಳ ಮೇಲೆ, ಸ್ತಂಭಗಳ ಮೇಲೆ ಮತ್ತು ಕಲ್ಲುಬಂಡೆಗಳ ಮೇಲೆ ತನ್ನ ಧಮ್ಮದ ಮಾಹಿತಿಯನ್ನು ಕೆತ್ತಿಸಿದನು

* ಧಮ್ಮ ಮಹಾಮಾತ್ರರನ್ನು ನೇಮಿಸಿ ಅವರನ್ನು ಹೊರ ಪ್ರಾಂತಗಳು ಮತ್ತು ಹೊರ ದೇಶಗಳಿಗೆ ಧರ್ಮಪ್ರಚಾರಕರಾಗಿ ಕಳುಹಿಸಿದನು

* ತನ್ನ ಅಧಿಕಾರಿಗಳು ಪ್ರಜಾಹಿತಕ್ಕೆ ಒತ್ತು ಕೊಡುವಂತೆ ಆದೇಶ ನೀಡಿದನು

* ಜನರನ್ನು ನೇರವಾಗಿ ಸಂಪರ್ಕಿಸಿ ಅವರ ಕುಂದು ಕೊರತೆ ಅರಿಯುವ ಪ್ರಯತ್ನಮಾಡಿದನು

* ಧಮ್ಮದ ಬಗ್ಗೆ ಪ್ರಜ್ಞಾವಂತರೊಂದಿಗೆ ಚರ್ಚಿಸಿ ಧಮ್ಮದ ಮಹತ್ವವನ್ನು ಸಾರುವ  ಕೆಲಸಮಾಡಿದನು

ಅಶೋಕ ಧಮ್ಮದ ಪ್ರಭಾವ (ಪರಿಣಾಮ) :

* ಅಶೋಕನ ರಾಜನೀತಿಯ ಮೇಲೆ ಅಶೋಕ ಧಮ್ಮವು ಹೆಚ್ಚಿನ ಪ್ರಭಾವ ಬೀರಿತು.

* ಅಶೋಕನು ತನ್ನ ದಿಗ್ವಿಜಯ ನೀತಿಯನ್ನು ಸಂಪೂರ್ಣವಾಗಿ ಕೈಬಿಟ್ಟನು. ತನ್ನ ವೈಯಕ್ತಿಕ ಅಧಿಕಾರದ ತೆವಲಿಗಾಗಿ ಹಾಗೂ ಸಾಮ್ರಾಜ್ಯಾಧಿಪತಿ ಎಂಬ ಉಮೇದಿಗಾಗಿ ಹಲವು ಜೀವಗಳನ್ನು ಬಲಿಕೊಟ್ಟು ರಾಜ್ಯ ರಾಜ್ಯಗಳನ್ನು ಗೆಲ್ಲುವ ತನ್ನ ನೀತಿಗೆ ಮಂಗಳ ಹಾಡಿದನು.

* ತನ್ನ ಸಮಕಾಲೀನ ರಾಜ್ಯಗಳೊಂದಿಗೆ ಸೌಹಾರ್ದಯುತವಾದ ಸಂಬಂಧವನ್ನು ಸ್ಥಾಪಿಸಿದನು.

* ಆಕ್ರಮಣಕಾರಿ ನೀತಿಯನ್ನು ಕೈಬಿಟ್ಟನು.

* ತನ್ನ ಮಕ್ಕಳು ಮತ್ತು ಮೊಮ್ಮಕ್ಕಳು ಯಾವುದೇ ಹೊಸ ಯುದ್ಧ / ದಿಗ್ವಿಜಯ ನಡೆಸದಂತೆ ಕಟ್ಟಪ್ಪಣೆ ಮಾಡಿದನು. ಆ ಮೂಲಕ ರಕ್ತಪಾತವನ್ನು ತಪ್ಪಿಸಿದನು.

* ನಂತರದ ದೊರೆಗಳು ಮತ್ತು ಪ್ರಜೆಗಳಿಗೆ ಬೇರಿ ಘೋಷಕ್ಕಿಂತ ಧರ್ಮಘೋಷವೇ ಕಿವಿಗೆ ಹೆಚ್ಚು ಬೀಳುವಂತಾಯಿತು.

* ಆದರೆ ಅಶೋಕ ಅನುಸರಿಸಿದ ಅಹಿಂಸಾ ನೀತಿಯಿಂದ ಸಾಮ್ರಾಜ್ಯದ ನಿರಂತರತೆಗೆ ಭಂಗ ಉಂಟಾಯಿತು. ಸೈನಿಕರಲ್ಲಿದ್ದ ಕ್ಷಾತ್ರ ತೇಜಸ್ಸು ನಾಶವಾಗಿ ಪರಕೀಯರು ಆಕ್ರಮಣ ಮಾಡಿದಾಗ ದೇಶವನ್ನು ರಕ್ಷಿಸಲು ಅಸಮರ್ಥರಾದರು. ಇದರಿಂದಾಗಿ ಮೌರ್ಯ ವಂಶದ ಆಳ್ವಿಕೆ ಅಶೋಕನ ನಂತರ ಸರ್ವನಾಶದತ್ತ ಸಾಗಿತ್ತು.

* ಹೆಚ್.ಸಿ. ರಾಯ್ ಚೌದರಿಯವರು ಅಭಿಪ್ರಾಯ ಪಡುವಂತೆ “ಮೌರ್ಯ ಸಾಮ್ರಾಜ್ಯದ ಕ್ಷಾತ್ರ ತೇಜಸ್ಸು ಕಳಿಂಗ ರಣರಂಗ ದ ಕಡೆಯ ಸೈನಿಕನ ನೋವಿನ ನರಳಾಟದ ಕಡೆಯ ಸೊಲ್ಲಿನಲ್ಲಿ ನಾಶವಾಯಿತು” ಎಂದಿದ್ದಾರೆ.

ಅಶೋಕನ ಜೀವನ ಮತ್ತು ಸಾಧನೆಗಳು

ಅಶೋಕನ ಜೀವನ ಮತ್ತು ಸಾಧನೆಗಳು

ಆರಂಭಿಕ ಜೀವನ
ಸಿಂಹಾಸನಕ್ಕೆ ಆರೋಹಣ

ಪ್ರಾಚೀನ ಭಾರತದಲ್ಲಿ ಆಳ್ವಿಕೆ ನಡೆಸಿದ ಸರ್ವಶ್ರೇಷ್ಟ ಸಾಮ್ರಾಟರಲ್ಲಿ ಅಶೋಕ ಮಹಾಶಯ ಪ್ರಮುಖ. ಈತನನ್ನು ಭಾರತದ ಘನವಂತ ದೊರೆಯೆಂದೇ ಗುರುತಿಸಲಾಗಿದೆ. ವೀರಯೋಧನು ದಿಗ್ವಿಜಯಶಾಲಿಯೂ, ದಕ್ಷ ಆಡಳಿತಗಾರನೂ, ಶಾಸನಗಳ ಆದ್ಯಪ್ರವರ್ತಕನೂ, ಪ್ರಜಾಹಿತಾಕಾಂಕ್ಷಿ ದೊರೆಯೂ ಆದ ಅಶೋಕ ಮಹಾಶಯನ ವ್ಯಕ್ತಿತ್ವ ವಿಶ್ವದ ಚರಿತ್ರೆಯಲ್ಲಿ ಚಿರಸ್ಥಾಯಿಯಾಗಿ ಉಳಿದುಕೊಂಡಿದೆ. 

 ಅಶೋಕ ಬಿಂದುಸಾರನ ಮಗ, ಚಂದ್ರಗುಪ್ತ ಮೌರ್ಯನ ಮೊಮ್ಮಗ, ಅಶೋಕನ ತಾಯಿಯ ಹೆಸರು ʻದುಮ್ಮಾ’. ಬೌದ್ಧ ಧರ್ಮಗ್ರಂಥಗಳ ಪ್ರಕಾರ ಬಿಂದುಸಾರನಿಗೆ 16 ಜನ ಹೆಂಡತಿಯರಿದ್ದರು. ಅವರಿಗೆ 101 ಜನ ಮಕ್ಕಳು ಜನಿಸಿದರು. ಇವರಲ್ಲಿ ಸುಶೀಮ ಹಿರಿಯಮಗ, ಅಶೋಕ ಎರಡನೇ ಮಗ. ಬಾಲ್ಯದಲ್ಲಿ ಪ್ರತಿಭಾವಂತನಾಗಿದ್ದ ಅಶೋಕನು ತನ್ನ 16ನೇ ವಯಸ್ಸಿನಲ್ಲಿ ಉಜ್ಜಯನಿ ಹಾಗೂ ತಕ್ಷಶಿಲಾ ರಾಜ್ಯಗಳ ರಾಜ್ಯಪಾಲನಾಗಿ ಆಡಳಿತದ ಅನುಭವವನ್ನು ಪಡೆದುಕೊಂಡನು. ಉಜ್ಜಯನಿಯಲ್ಲಿರುವಾಗ ಅಶೋಕ “ಮಹಾದೇವಿ” ಎಂಬ ಕನ್ಯೆಯೊಂದಿಗೆ ವಿವಾಹವಾದನು. ಅವರಿಗೆ ಸಂಗಮಿತ್ರೆ ಹಾಗೂ ಮಹೇಂದ್ರ ಎಂಬ ಇಬ್ಬರು ಮಕ್ಕಳಿದ್ದರು.

ತಂದೆಯ ಮರಣದ ನಂತರ ಅಶೋಕ ನಾಲ್ಕು ವರ್ಷ ತಡವಾಗಿ ಅಂದರೆ ಸಾ.ಶ. ಪೂ. 269ರಲ್ಲಿ ಪಟ್ಟಕ್ಕೆ ಬಂದನು. ಈ ಅವಧಿಯಲ್ಲಿ ಅಶೋಕನು ತನ್ನ ಸಹೋದರರ ಜೊತೆಗೆ ಸಿಂಹಾಸನಕ್ಕಾಗಿ ಹೋರಾಟ ಮಾಡಿರಬೇಕು.  ಅಶೋಕನ ಆರಂಭಿಕ ಜೀವನದ ಬಗ್ಗೆ ವಿವರ ನೀಡುವ ದೀಪವಂಶ, ಮಹಾವಂಶ ಮತ್ತು ಸಿಲೋನಿನ ವೃತ್ತಾಂತಗಳು ಅಶೋಕನು ತನ್ನ 99 ಮಂದಿ ಸಹೋದರರನ್ನು ಸಂಹರಿಸಿ ಸಿಂಹಾಸನಕ್ಕೆ ಬಂದನೆಂದು, ಆರಂಭದಲ್ಲಿ ಕ್ರೂರಿಯು ಮತ್ತು ಚಂಡಾಲ ಅಶೋಕನಾಗಿದ್ದನೆಂದು ತಿಳಿದುಬರುತ್ತದೆ. ಬೌದ್ಧಮತಾವಲಂಬಿಯಾದ ನಂತರ ಧರ್ಮಾಶೋಕನಾಗಿ ಮಾರ್ಪಟ್ಟನು. ಇಂತಹ ಅಂಶಗಳು ‘ಅರ್ಥವಿಲ್ಲದ ಕಗ್ಗ’ವೆಂದು ವಿ.ಎ.ಸ್ಮಿತ್ ಅಭಿಪ್ರಾಯಪಟ್ಟಿದ್ದಾರೆ. ಬಿಂದುಸಾರನ ಮರಣಾನಂತರ ಸಿಂಹಾಸನಕ್ಕಾಗಿ ನಡೆದ ದಾಯಾದಿ ಕಲಹದಿಂದ ಬಹುಶಃ ನಾಲ್ಕು ವರ್ಷಗಳ ಕಾಲ ಅಶೋಕನ ಸಿಂಹಾಸನಾರೋಹಣ ತಡವಾಗಿರಬೇಕೆಂದು ಅಭಿಪ್ರಾಯಪಡಲಾಗಿದೆ. ಆದರೆ ಅಶೋಕನ ಮಲ ಸಹೋದರನಾದ ಸುಸೀಮನ ಪ್ರತಿಭಟನೆ, ಅಶೋಕನ ಸಿಂಹಾಸನಾರೋಹಣವನ್ನು 4ವರ್ಷಗಳ ಕಾಲ ಮುಂದೂಡಿತೇ ವಿನಃ ರಕ್ತಮಯ ವಾತಾವರಣ ಕಾರಣವಲ್ಲವೆಂದು ವಿ.ಎ.ಸ್ಮಿತ್ ಅಭಿಪ್ರಾಯಪಟ್ಟಿದ್ದಾರೆ. ಡಾ|ಆರ್.ಸಿ.ಮಜುಂದಾರ್ ಅಶೋಕನನ್ನು ‘ಚಂಡಾ ಅಶೋಕ’ನೆಂದು ಕರೆಯುವುದು ಸತ್ಯಾಂಶಕ್ಕೆ ದೂರವಾದ ಸಂಗತಿ ಎಂದು ತಿಳಿಸಿದ್ದಾರೆ. ಡಾ. ಜಯಸ್ವಾಲ್ ರವರ ಪ್ರಕಾರ ಪಟ್ಟಾಭಿಷೇಕದ ಕಾಲಕ್ಕೆ ಅಶೋಕನಿಗೆ 21 ವರ್ಷಗಳಾಗಿದ್ದು ವೈದಿಕ ಸಂಪ್ರದಾಯದ ಪ್ರಕಾರ ಪಟ್ಟಾಭಿಷೇಕಕ್ಕೆ 25 ವರ್ಷಗಳಾಗಬೇಕಿದ್ದರಿಂದ 4 ವರ್ಷಗಳ ಕಾಲ ತಡವಾಯಿತು. 

ಕಳಿಂಗ ಯುದ್ಧ

ಅಶೋಕನು ದಿಗ್ವಿಜಯಗಳ ಮೂಲಕ ಮೌರ್ಯರ ಅಧಿಪತ್ಯವನ್ನು ವಿಸ್ತರಿಸುವ ಪ್ರಯತ್ನ ಮಾಡಿದನು. ಆತನು ಕೈಗೊಂಡ ದಿಗ್ವಿಜಯವೇ ಕಳಿಂಗ ಯುದ್ಧ.

ಅಶೋಕನು ತನ್ನ 13ನೇ ಬಂಡೆಕಲ್ಲು ಶಾಸನದಲ್ಲಿ ತಾನು ಸಿಂಹಾಸನವೇರಿದ 9ನೇ ವರ್ಷದಲ್ಲಿ ಕಳಿಂಗ ರಾಜ್ಯದ ಮೇಲೆ ಆಕ್ರಮಣ ಕೈಗೊಂಡನೆಂದು ತಿಳಿಸಿದ್ದಾನೆ. ಈ ಯುದ್ಧದ ಪರಿಣಾಮ ಹಾಗೂ ತನ್ನ ರಾಜನೀತಿಯ ಮೇಲೆ ಉಂಟಾದ ಪ್ರಭಾವದ ಬಗ್ಗೆ ವಿವರಿಸಿದ್ದಾನೆ. ತನ್ನ ತಂದೆಯಿಂದ ಅಥವಾ ಅಜ್ಜನಿಂದ ಕಳಿಂಗವು ಗೆಲ್ಲಲ್ಪಟ್ಟಿರಲಿಲ್ಲವೆಂದು ಸ್ಪಷ್ಟಪಡಿಸಿದ್ದಾನೆ. ಅಶೋಕ ಕೈಗೊಂಡ ದಿಗ್ವಿಜಯಗಳಲ್ಲಿ ಕಳಿಂಗ ಯುದ್ಧವೇ ಪ್ರಥಮ ಮತ್ತು ಕೊನೆಯ ಯುದ್ಧವೆಂದು ತಿಳಿದುಬರುತ್ತದೆ. ಕಳಿಂಗ ಯುದ್ಧಕ್ಕೆ ಕಾರಣವೇನೆಂದು ತಿಳಿದುಬರುವುದಿಲ್ಲ. ಆದರೆ ಈ ಯುದ್ಧವು ತನ್ನ ರಾಜನೀತಿಯ ಮೇಲೆ ಜ್ವಲಂತ ಪರಿಣಾಮ ಬೀರಿತೆಂದು ತಿಳಿಸಿದ್ದಾನೆ.

ಕಳಿಂಗ ಎಂಬುದು ಇಂದಿನ ಓರಿಸ್ಸಾದ ಹಳೆಯ ಹೆಸರು. ಈ ರಾಜ್ಯವನ್ನು ಶುದ್ಧ ವರ್ಮ ಎಂಬ ರಾಜ ಆಳುತ್ತಿದ್ದನು. ಕಳಿಂಗವನ್ನು ಗೆಲ್ಲಬೇಕೆಂಬ ಛಲದಿಂದ ಅಶೋಕ ಭಾರಿ ಸೈನ್ಯದೊಂದಿಗೆ ದಾಳಿ ಮಾಡಿದನು. ಸ್ವಭಾವತಃ ಶಾಂತಿ ಪ್ರಿಯರೂ ಹಾಗೂ ಅಹಿಂಸಾವಾದಿಗಳೂ ಆಗಿದ್ದ ಕಳಿಂಗರು ಭಾರೀ ಪ್ರತಿರೋಧವನ್ನು ಒಡ್ಡಿದರು. ಭುವನೇಶ್ವರದಿಂದ 150 ಕೀ. ಮಿ. ದೂರದ ʻದೌಲಿ’ ಎಂಬಲ್ಲಿ ನಡೆದ ಭೀಕರ ಕದನದಲ್ಲಿ ಅಶೋಕನಿಗೆ ಜಯ ಲಭಿಸಿತು. ಈ ಯುದ್ಧದಲ್ಲಿ ಒಂದು ಲಕ್ಷ ಜನರು ಆಸುನೀಗಿದರು. ಸುಮಾರು ಎರಡು ಲಕ್ಷ ಜನರು ಗಾಯಗೊಂಡರು. ಸುಮಾರು ಒಂದೂವರೆ ಲಕ್ಷ ಜನ ಸೆರೆಸಿಕ್ಕರು. ಲಕ್ಷಾಂತರ ಜನ ರೋಗ ರುಜಿನಗಳಿಗೆ ಬಲಿಯಾದರು. ರಣರಂಗದಲ್ಲಿ ರಕ್ತದ ಕಾಲುವೆಯೇ ಹರಿಯಿತು. ಯುದ್ಧದಲ್ಲಿ ಗಂಡಂದಿರನ್ನು, ಮಕ್ಕಳನ್ನು ಕಳೆದುಕೊಂಡವರ ಆಕ್ರಂದನ ಮುಗಿಲು ಮುಟ್ಟಿತು. ಇದರಿಂದ ಅಶೋಕನ ಮನ ವಿಲಿವಿಲಿ ಒದ್ದಾಡಿತು. ಅವನ ಹೃದಯ ಕಂಪಿಸಿತು. ಈ ಯುದ್ಧ ಅಶೋಕನ ಜೀವನದ ಗತಿಯನ್ನೇ ಬದಲಿಸಿತು. ಇನ್ನು ಮುಂದೆ ಯುದ್ಧವನ್ನೇ ಮಾಡುವುದಿಲ್ಲ ಎಂದು ಪ್ರತಿಜ್ಞೆ ಮಾಡಿದನು. ರಕ್ತ ಪಾತದಿಂದ ರಾಜ್ಯ ನಿರ್ಮಾಣ ನಿರರ್ಥಕ ಎಂದು ಅವನಿಗೆ ಅನಿಸಿತು. ರಕ್ತಪಾತ ಹಾಗೂ ಹಿಂಸೆಯ ಮಾರ್ಗವನ್ನು ಬಿಟ್ಟು ಶಾಂತಿ ಹಾಗೂ ಅಹಿಂಸಾಮಾರ್ಗವನ್ನು ತುಳಿಯುವುದಾಗಿ ಅಶೋಕ ಘೋಷಿಸಿದನು.

ಬೌದ್ಧ ಧರ್ಮಕ್ಕೆ ಪರಿವರ್ತನೆ

 ಕಳಿಂಗ ಯುದ್ಧದಿಂದ ಮಹತ್ತರ ಪರಿಣಾಮ ಉಂಟಾಯಿತು. ಕಳಿಂಗ ಯುದ್ಧವು ಅಶೋಕ ಮಹಾಶಯನ ಮನಪರಿವರ್ತನೆಗೆ ಮೂಲಕಾರಣವಾಯಿತು. ರಣರಂಗದ ಭೀಭತ್ಸ ದೃಶ್ಯದಿಂದ ಅಶೋಕನ ಮನಕರಗಿತು. ಯುದ್ಧದಿಂದ ಪ್ರಜಾಪೀಡನೆ ಉಂಟಾಗುತ್ತದೆಯೇ ಹೊರತು ಪ್ರಜಾ ಪರಿಪಾಲನೆಯಾಗುವುದಿಲ್ಲ ಎಂದು ಅರ್ಥೈಸಿಕೊಂಡ ಅಶೋಕ ಮಹಾಶಯ ಧರ್ಮಾಶೋಕನಾಗಿ ಮಾರ್ಪಟ್ಟನು. ಕಳಿಂಗ ಯುದ್ಧದಿಂದ ಅಶೋಕನ ಸೈನಿಕ ಆಕ್ರಮಣ ಕೊನೆಗೊಂಡು ಆದ್ಯಾತ್ಮಿಕ ದಿಗ್ವಿಜಯ ಆರಂಭಗೊಂಡಿತು.

ಕಳಿಂಗ ಯುದ್ಧದ ನಂತರ ಅಶೋಕನ ಮನಸ್ಸು ದುಃಖತಪ್ತವಾಯಿತು. ಈ ಹಿನ್ನಲೆಯಲ್ಲಿ ಅಶೋಕನು ಬೌದ್ಧ ಮುನಿ ಉಪಗುಪ್ತನ ಪ್ರಭಾವಕ್ಕೊಳಗಾಗಿ ಬೌದ್ಧ ಧರ್ಮಕ್ಕೆ ಮತಾಂತರಗೊಂಡನು. ಇನ್ನು ಮುಂದೆ ಖಡ್ಗವನ್ನು ಹಿಡಿಯಲಾರೆ ಎಂದು ಶಪಥ ಮಾಡಿದನು. ಅಂದಿನಿಂದ ಅವನು ಯುದ್ಧ ವಿಜಯವನ್ನು ತ್ಯಜಿಸಿ ಧರ್ಮ ವಿಜಯವನ್ನು ಆರಂಭಿಸಿದನು. ಬೌದ್ಧ ಧರ್ಮಕ್ಕೆ ಮತಾಂತರಗೊಂಡ ಅಶೋಕನು ಅದರ ಏಳಿಗೆಗಾಗಿ ಹಗಲಿರುಳು ದುಡಿದನು. ಬೌದ್ಧ ಸ್ಥಳಗಳಾದ ಕಪಿಲವಸ್ತು, ಲುಂಬಿಣಿ, ಸಾರನಾಥ, ಗಯಾ, ಕುಶಿನಗರ, ರಾಜಗೃಹ ಹಾಗೂ ವೈಶಾಲಿಗಳಿಗೆ ಭೇಟಿ ನೀಡಿ ಅಲ್ಲಿ ಅನೇಕ ಸ್ತೂಪಗಳನ್ನು ಹಾಗೂ ವಿಹಾರಗಳನ್ನು ಸ್ಥಾಪಿಸಿದನು. ಬುದ್ಧನ ಜನ್ಮಸ್ಥಳವಾದ ಲುಂಬಿನಿಯಲ್ಲಿ ಒಂದು ಸ್ತೂಪವನ್ನು ನಿರ್ಮಿಸಿ ಅಹಿಂಸೆಯೇ ಪರಮಧರ್ಮ ಎಂದು ಸಾರಿದನು. ಅರಮನೆಗಳಲ್ಲಿ ನಡೆಯುತ್ತಿದ್ದ ಪ್ರಾಣಿ ಬಲಿಯನ್ನು ತಡೆಗಟ್ಟಿದನು. ಸ್ವತಃ ತಾನೇ ಬೇಟೆಯಾಡುವದನ್ನು ನಿಲ್ಲಿಸಿದನು. ಪ್ರಾಣಿ ಹಿಂಸೆ ಮಾಡದಂತೆ ತಡೆಯಲು ಶಾಸನಗಳನ್ನು ಹೊರಡಿಸಿದನು. ಧರ್ಮಪ್ರಚಾರಕ್ಕಾಗಿ ʻಧರ್ಮ ಮಹಾಮಾತ್ರರನ್ನು’ ನೇಮಿಸಿದನು. ತನ್ನ ಸ್ವಂತ ಮಕ್ಕಳಾದ ʻಸಂಗಮಿತ್ರೆ ಹಾಗೂ ಮಹೇಂದ್ರ’ರನ್ನು ಶ್ರೀಲಂಕಾಕ್ಕೆ ಬೌದ್ಧ ಧರ್ಮ ಪ್ರಚಾರಕ್ಕಾಗಿ ಕಳುಹಿಸಿದನು. ಸಿಂಹಳದ ರಾಜ ಬೌದ್ಧ ಧರ್ಮವನ್ನು ಸ್ವೀಕರಿಸುವ ಮೂಲಕ ಅನುರಾಧಪುರದಲ್ಲಿ ಒಂದು ಸ್ತೂಪವನ್ನು ನಿರ್ಮಿಸಿದನು. ಅಶೋಕನ ಶ್ರಮದ ಫಲವಾಗಿ ಬೌದ್ಧ ಧರ್ಮವು ಟಿಬೇಟ್, ಚೀನಾ, ಶ್ರೀಲಂಕಾ, ನೇಪಾಳ, ಜಪಾನ್, ಉಜ್ಜಯನಿ, ಕೋರಿಯಾ, ಸಿರಿಯಾ, ಈಜಿಪ್ಟ್, ಮೆಸೋಪೋಟಮಿಯಾ, ಜಾವಾ, ಸುಮಾತ್ರಾ ಹಾಗೂ ಕಾಂಬೋಡಿಯಾಗಳಲ್ಲಿ ಹೆಚ್ಚು ಪ್ರಚಾರಗೊಂಡಿತು. ಅಶೋಕ ಮೂರನೇ ಬೌದ್ಧ ಸಮ್ಮೇಳನವನ್ನು ಪಾಟಲಿಪುತ್ರದಲ್ಲಿ ನೆರವೇರಿಸಿ ಬೌದ್ಧ ಭಿಕ್ಷುಕರ ನಡುವಿನ ಅಂತಃಕಲಹವನ್ನು ಶಮನಗೊಳಿಸಿದನು.

ಅಲ್ಲದೆ ಕಳಿಂಗ ಯುದ್ಧದ ನಂತರ ಪ್ರಜಾಕಲ್ಯಾಣಕ್ಕಾಗಿ ತನ್ನ ಆಡಳಿತವನ್ನು ಮೀಸಲಿಟ್ಟನು. ‘ದಿಗ್ವಿಜಯಕ್ಕಿಂತ ಧರ್ಮವಿಜಯವೇ ಮಿಗಿಲು’ ಎಂಬುದನ್ನು ಅರಿತುಕೊಂಡನು. ಕಲ್ಹಣನ ರಾಜತರಂಗಿಣಿಯ ಪ್ರಕಾರ ಕಳಿಂಗ ಯುದ್ಧಕ್ಕೆ ಮೊದಲು ಆಶೋಕನು ಶಿವನ ಆರಾಧಕನಾಗಿದ್ದನು. ಬೇಟೆಯಾಡುವಲ್ಲಿ ಅಪಾರ ಆಸಕ್ತಿ ತಳೆದಿದ್ದನು. ಯುದ್ಧದ ನಂತರ ಬುದ್ಧನ ತತ್ವಗಳಿಂದ ಪ್ರಭಾವಿತನಾಗಿ ಅಹಿಂಸಾನೀತಿ ಅನುಸರಿಸಿ ಬೌದ್ಧಮತ ಪ್ರಸಾರಕಾರ್ಯ ಕೈಗೊಂಡನು. ತನ್ನ ವಿದೇಶಾಂಗ ನೀತಿಯಲ್ಲಿಯು ಶಾಂತಿಯ ಪಥವನ್ನು ಅನುಸರಿಸಿದನು. 

.

ಸಮಾಜಕ್ಕೆ ಅವರ ಕೊಡುಗೆಗಳು ಸೇರಿವೆ:

1. ಕಟ್ಟಡ ರಸ್ತೆಗಳು: ಅಶೋಕನು ತನ್ನ ಸಾಮ್ರಾಜ್ಯದಾದ್ಯಂತ ಸಂಪರ್ಕವನ್ನು ಹೆಚ್ಚಿಸಲು ಸುಸಜ್ಜಿತವಾದ ರಸ್ತೆಗಳನ್ನು ನಿರ್ಮಿಸಿದನು.

2. ಮರಗಳನ್ನು ನೆಡುವುದು: ಅವರು ಈ ರಸ್ತೆಗಳ ಉದ್ದಕ್ಕೂ ಸಾಲು ಮರಗಳನ್ನು ನೆಟ್ಟು ನೆರಳು ಮತ್ತು ಸೌಂದರ್ಯವನ್ನು ಒದಗಿಸಿದನು.

3. ವಿಶ್ರಾಂತಿ ಗೃಹಗಳನ್ನು ಸ್ಥಾಪಿಸುವುದು: ಅವರು ವಿಶ್ರಾಂತಿ ಗೃಹಗಳನ್ನು ಮತ್ತು ಪ್ರಯಾಣಿಕರಿಗೆ ಸೌಕರ್ಯಗಳನ್ನು ನಿರ್ಮಿಸಿದನು.

4. ಔಷಧಾಲಯಗಳು: ಅಶೋಕನು ಮಾನವರು ಮತ್ತು ಪ್ರಾಣಿಗಳಿಗೆ ಔಷಧಾಲಯಗಳನ್ನು ಸ್ಥಾಪಿಸಿದನು, ಆರೋಗ್ಯ ಮತ್ತು ಯೋಗಕ್ಷೇಮವನ್ನು ಉತ್ತೇಜಿಸಿದನು.

5. ಉಚಿತ ಔಷಧವನ್ನು ಒದಗಿಸುವುದು: ಔಷಧೀಯ ಉದ್ದೇಶಗಳಿಗಾಗಿ ತನ್ನ ನಾಗರಿಕರಿಗೆ ವಿವಿಧ ಗಿಡಮೂಲಿಕೆಗಳನ್ನು ಲಭ್ಯವಾಗುವಂತೆ ಮಾಡಿದರು.

6. ಸ್ವಾತಂತ್ರ್ಯವನ್ನು ನೀಡುವುದು: ಅಶೋಕನು ತನ್ನ ಜನ್ಮದಿನದಂದು ಕೈದಿಗಳಿಗೆ ಸಂಪೂರ್ಣ ಸ್ವಾತಂತ್ರ್ಯವನ್ನು ನೀಡಿದನು, ಕರುಣೆ ಮತ್ತು ಸಹಾನುಭೂತಿಗೆ ತನ್ನ ಬದ್ಧತೆಯನ್ನು ಪ್ರದರ್ಶಿಸಿದನು.

ಇಲ್ಲಿ ಅಶೋಕನು ತನ್ನ ರಾಣಿಯರೊಂದಿಗೆ ನಿಂತಿರುವ ಚಿತ್ರವಿರುವ ಕಲ್ಲಿನ ಪಟ್ಟಿಕೆ ಪತ್ತೆಯಾಗಿದೆ. ಇಲ್ಲಿ ಬ್ರಾಹ್ಮಿ ಲಿಪಿಯಲ್ಲಿರುವ “ರಾಯ ಅಶೋಕ” ಎಂಬ ಬರಹವೂ ಇದ್ದು ಇವನನ್ನು ಅಶೋಕನೆಂದು ಗುರುತಿಸಲು ಸಹಕಾರಿಯಾಗಿದೆ.

ಉಪಸಂಹಾರ

ಒಟ್ಟಿನಲ್ಲಿ ಹೇಳುವುದಾದರೆ ಕಳಿಂಗ ಯುದ್ಧವು ಭಾರತದ ಚರಿತ್ರೆಯಲ್ಲಿ ಒಂದು ಮಹತ್ತರ ಮೈಲಿಗಲ್ಲಾಗಿ ಹೊಸಯುಗಕ್ಕೆ ನಾಂದಿಯಾಯಿತು. ಡಾ.ರಾಯ್‌ ಚೌಧುರಿಯವರು ಅಭಿಪ್ರಾಯಪಡುವಂತೆ ಅಶೋಕ ಮಹಾಶಯನ ಸೈನಿಕ ‘ಆಕ್ರಮಣದ ವಿಜಯ ಅಂತ್ಯಗೊಂಡು ಧರ್ಮವಿಜಯ ಆರಂಭಗೊಂಡಿತು’. ಕಳಿಂಗ ಯುದ್ಧದ ಮೂಲಕ ರಾಜಕೀಯ ಐಕ್ಯತೆಗೂ ಅನುಕೂಲವಾಯಿತು. ಕಳಿಂಗ ಯುದ್ಧದ ನಂತರ ‘ಶಾಂತಿ ಮತ್ತು ಅಹಿಂಸೆ’ ಎಂಬ ತತ್ವಗಳ ಮೇಲೆ ಪ್ರಜಾಕಲ್ಯಾಣ ರಾಜ್ಯ ಸ್ಥಾಪಿಸಿದ ಅಶೋಕ ವಿಶ್ವದಲ್ಲಿಯೇ ಮಾದರಿಯಾದ ಸರ್ವರೂ ಸ್ವೀಕರಿಸುವ ಶ್ರೇಷ್ಠ ತತ್ವಗಳನ್ನು ಕೊಡುಗೆಯಾಗಿ ನೀಡಿದನು. ಹೆಚ್.ಜಿ.ವೇಲ್ಸ್ ಅಭಿಪ್ರಾಯಪಡುವಂತೆ ʻಗೆಲುವಿನ ನಂತರ ಯುದ್ಧವನ್ನು ತ್ಯಜಿಸಿದ ಸೇನಾ ಸಾರ್ವಭೌಮರಲ್ಲಿ ಅಶೋಕನನ್ನು ಬಿಟ್ಟರೆ ಮತ್ತೊಬ್ಬನಿಲ್ಲ’.