ಭಾರತದಲ್ಲಿ ಟರ್ಕರ ಆಕ್ರಮಣದ ಪರಿಣಾಮಗಳು

ಭಾರತದಲ್ಲಿ ಟರ್ಕರ ಆಕ್ರಮಣದ ಪರಿಣಾಮಗಳು

ಪೀಠಿಕೆ:

ಅರಬ್ಬರು ಭಾರತದ ಮೇಲೆ ದಾಳಿ ಮಾಡಿದ ಪ್ರಥಮ ಮುಸಲ್ಮಾನರು. ಇವರು ಕೇವಲ ಸಿಂಧ್‌ ಪ್ರಾಂತ್ಯಕ್ಕೆ ತಮ್ಮನ್ನು ಸೀಮಿತಗೊಳಿಸಿಕೊಂಡು ಭಾರತದ ಇತರ ಭೂಭಾಗಗಳನ್ನು ನಿರ್ಲಕ್ಷಿಸಿದ್ದರು. ಆದರೆ ನಂತರದಲ್ಲಿ ಭಾರತದ ಮೇಲೆ ದಂಡಯಾತ್ರೆಯನ್ನು ಕೈಗೊಂಡ ಟರ್ಕರು ಭಾರತದ ಇನ್ನುಳಿದ ಕೆಲವು ಭೂಪ್ರದೇಶಗಳನ್ನು ವಶಪಡಿಸಿಕೊಳ್ಳುವ ಮೂಲಕ ಭಾರತದಲ್ಲಿ ಇಸ್ಲಾಂ ಧರ್ಮವನ್ನು ಶಾಶ್ವತವಾಗಿ ನೆಲೆಯೂರಲು ಕಾರಣರಾದರು. ಟರ್ಕರು ಅರಬ್ಬರಿಗಿಂತ ದೈಹಿಕವಾಗಿ ಬಲಾಡ್ಯರಾಗಿದ್ದು ಪ್ರಬಲ ಆಯುಧಗಳನ್ನು ಹೊಂದಿದ್ದರು. ಟರ್ಕರು ಭಾವಜೀವಿಗಳೂ ಆಗಿದ್ದರು. ಅವರಲ್ಲಿ ಶ್ರದ್ಧೆ ಇತ್ತು. 8 ಹಾಗೂ 9ನೇ ಶತಮಾನದಲ್ಲಿ ಬಾಗ್ದಾದಿನ ಖಲೀಪರ ಮೇಲೆ ಹಿಡಿತವನ್ನು ಸಾಧಿಸಿದ ಟರ್ಕರು ಅಬ್ಬಾಸಿದ್‌ ಖಲೀಪರ ಮರಣದ ನಂತರ ಮಧ್ಯ ಏಷ್ಯಾದಲ್ಲಿ ಅವರ ಸಾಮಂತರಾದ ಸಮಸಿದ್‌ ಮನೆತನದವರನ್ನು ಅಧಿಕಾರಕ್ಕೆ ತರುವಲ್ಲಿ ಯಶಸ್ವಿಯಾದರು. ಅಬ್ದುಲ್‌ ಮಲಿಕ್‌ ಎಂಬಾತನು ಸಮಸಿದ್‌ ಮನೆತನದ ಅರಸನಾಗಿದ್ದನು. ಈತನ ಸಾವಿನ ನಂತರ ಅವನ ಗುಲಾಮನಾಗಿದ್ದ ಅಲಪ್ತಗಿನ್‌ ಸ್ವತಂತ್ರ ರಾಜ್ಯವನ್ನು ಸ್ಥಾಪಿಸಿ ಮಧ್ಯ ಏಷಿಯಾದ ರಾಜಕೀಯ ಬೆಳವಣಿಗೆಗೆ ಕಾರಣನಾದನು. ಈತ ರಾಜ್ಯವನ್ನು ಕಟ್ಟಿದ ಕೆಲವೇ ತಿಂಗಳಲ್ಲಿ ನಿಧನ ಹೊಂದಿದನು. ಈತನ ಮರಣದ 14 ವರ್ಷಗಳ ನಂತರ ಸಬಕ್ತಗಿನ್‌ ಕ್ರಿ.ಶ 977ರಲ್ಲಿ ಘಜ್ನಿಯಲ್ಲಿ ಸಿಂಹಾಸನಕ್ಕೆ ಬಂದನು. ಅಲಪ್ತಗಿನ್‌ ಹಾಗೂ ಸಬಕ್ತಗಿನ್‌ರು ಆಗಲೇ ಭಾರತದ ಮೇಲೆ ಹಲವಾರು ಬಾರಿ ದಾಳಿ ಮಾಡಿ ಹಿಂದೂ ದೊರೆಗಳಿಂದ ಅಪಾರ ಪ್ರಮಾಣದಲ್ಲಿ ಸಂಪತ್ತನ್ನು ಕೊಳ್ಳೆ ಹೊಡೆದರು. ಕ್ರಿ.ಶ 997ರಲ್ಲಿ ಸಬಕ್ತಗಿನ್‌ ಮರಣ ಹೊಂದಿದನು. ಆಗ ಈತನ ಮೆಚ್ಚಿನ ಸೇವಕನಾದ ಮಹಮ್ಮದ್‌ ಘಜ್ನಿಯು ಸಿಂಹಾಸನಕ್ಕೆ ಬಂದನು. ಈತ ಭಾರತದ ಸಂಪತ್ತಿನ ಬಗ್ಗೆ ಕೇಳಿ ತಿಳಿದುಕೊಂಡಿದ್ದ ಕಾರಣದಿಂದ ಭಾರತದ ಮೇಲೆ ಸುಮಾರು 17 ಬಾರಿ ದಂಡಯಾತ್ರೆಯನ್ನು ಕೈಗೊಂಡನು. ಈತ ಸಾಕಷ್ಟು ಪ್ರಮಾಣದಲ್ಲಿ ಭಾರತದ ಸಂಪತ್ತನ್ನು ಕೊಳ್ಳೆ ಹೊಡೆದನು. ಇವನ ಸಾವಿನ ನಂತರ ಇವನ ಆಪ್ತ ಸೇವಕನಾದ ಘೋರಿ ಮಹಮ್ಮದ್‌ ಭಾರತದ ಮೇಲೆ ಹಲವಾರು ಬಾರಿ ದಾಳಿ ಮಾಡಿ ಅಗಾಧ ಪ್ರಮಾಣದಲ್ಲಿ ಸಂಪತ್ತನ್ನು ವಶಪಡಿಸಿಕೊಳ್ಳುವುದರೊಂದಿಗೆ ಭಾರತದಲ್ಲಿ ಇಸ್ಲಾಂ ಧರ್ಮ ಶಾಶ್ವತವಾಗಿ ಬೇರು ಬಿಡಲು ಕಾರಣನಾದನು.

ಹೀಗೆ ಘೋರಿ ಮಹಮ್ಮದನ ಪ್ರಯತ್ನದ ಫಲವಾಗಿ ಭಾರತದಲ್ಲಿ ಕಾಲಿರಿಸಿದ ಇಸ್ಲಾಂ ಧರ್ಮ ಸಹಜವಾಗಿ ಹಿಂದೂ ಧರ್ಮದೊಂದಿಗೆ ಸ್ಪರ್ಧೆಗೆ ಇಳಿಯಿತು. ಇವುಗಳ ಸಂಘರ್ಷದ ಪರಿಣಾಮವಾಗಿ ಭಾರತದಲ್ಲಿ ರಾಜಕೀಯ, ಧಾರ್ಮಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಏರಿಳಿತಗಳು ಕಂಡುಬಂದವು. ಈ ಹಿಂದೆ ಕುಶಾನರು, ಗ್ರೀಕರು, ಪರ್ಶಿಯನ್ನರು ಹಾಗೂ ಶಕರು ಭಾರತಕ್ಕೆ  ಬಂದರಾದರೂ ಅವರಿಂದ ಭಾರತದ ಮೇಲೆ ಯಾವುದೇ ಪರಿಣಾಮಗಳು ಬೀರಲಿಲ್ಲ. ಈ ನೆಲದಲ್ಲಿಯೇ ಹುಟ್ಟಿದ ಜೈನ ಹಾಗೂ ಬೌದ್ಧ ಧರ್ಮಗಳು ಭಾರತೀಯ ಸಮಾಜದಲ್ಲಿ ಹೇಳಿಕೊಳ್ಳುವಂತಹ ಬದಲಾವಣೆಯನ್ನು ಮಾಡಲಿಲ್ಲ. ಅವರು ಹಿಂದುಗಳೊಂದಿಗೆ ಹೊಂದಾಣಿಕೆಯ ಸಹಜೀವನ ನಡೆಸಿದರು. ಆದರೆ ಭಾರತಕ್ಕೆ ಕಾಲಿಟ್ಟ ಇಸ್ಲಾಂ ಧರ್ಮವು ಮಾತ್ರ ತನ್ನತನವನ್ನು ಬಿಟ್ಟುಕೊಡದೆ ಭಾರತೀಯ ಸಂಸ್ಕೃತಿಯೊಂದಿಗೆ ಬೆರೆಯಲಿಲ್ಲ. ಹೀಗಾಗಿ ಟರ್ಕರ ಆಕ್ರಮಣವು ಭಾರತದ ಈ ಕೆಳಗಿನ ಕ್ಷೇತ್ರಗಳಲ್ಲಿ ಬದಲಾವಣೆಯನ್ನು ತಂದಿತು.

1) ರಾಜಕೀಯ ಬದಲಾವಣೆಗಳು:

ರಾಜಕೀಯವಾಗಿ ಟರ್ಕರ ಆಕ್ರಮಣದ ಪರಿಣಾಮಗಳು ಈ ಕೆಳಗಿನಂತಿವೆ.

೧. ನಂತರದ ಆಕ್ರಮಣಗಳಿಗೆ ನೆಲೆ:  

ಟರ್ಕರ ಆಕ್ರಮಣಗಳು ತರೈನ್‌ ಕದನಗಳಿಗೆ (ಘೋರಿ ಮಹಮ್ಮದ್ ಮತ್ತು  ಪೃಥ್ವಿರಾಜ್ ಚೌಹಾನ್ ನಡುವೆ ನಡೆದ) ಕಾರಣವಾಯಿತು. ಇದು ಉತ್ತರ ಭಾರತದ ಅನೇಕ ಪ್ರದೇಶಗಳ ಮೇಲೆ ಸುಲ್ತಾನರ ಆಳ್ವಿಕೆಯನ್ನು ವಿಸ್ತರಿಸಲು ಕಾರಣವಾಯಿತು. ಘಜ್ನಿ ಮಹಮದ್‌ ಪಂಜಾಬನ್ನು ಗೆದ್ದದ್ದು, ಮುಂದೆ ಘೋರಿ ಮಹಮ್ಮದ್ ಮತ್ತಷ್ಟು ಪ್ರದೇಶದ ಮೇಲೆ ದಾಳಿ ಮಾಡಲು ನೆಲೆ ಒದಗಿಸಿತು.

೨. ದೆಹಲಿಯಲ್ಲಿ ಸುಲ್ತಾನರ ಆಳ್ವಿಕೆಗೆ ಕಾರಣ:

ಘೋರಿ ಮಹಮ್ಮದ್ ಹಿಂತಿರುಗುವಾಗ ತನ್ನ ನಂಬಿಕಸ್ತ ಕುತುಬ್-ಉದ್ದಿನ್-ಐಬಕ್‌ನನ್ನು ತನ್ನ ಪ್ರತಿನಿಧಿಯಾಗಿ ಗೆದ್ದ ಪ್ರದೇಶಗಳನ್ನು ನೋಡಿಕೊಳ್ಳಲು ಜವಾಬ್ದಾರಿ ವಹಿಸಿ ತೆರಳಿದನು. ಈ ನಂಬಿಕಸ್ತನೇ (ಕುತುಬ್-ಉದ್ದಿನ್-ಐಬಕ್‌) ಮುಂದೆ ದೆಹಲಿಯಲ್ಲಿ ಸುಲ್ತಾನರ ಆಳ್ವಿಕೆಗೆ ಕಾರಣನಾದನು. ಅಂದರೆ ಘೋರಿ ಮಹಮದ್‌ನ ಆಕ್ರಮಣ ದೆಹಲಿಯಲ್ಲಿ ಸುಲ್ತಾನರ ಆಳ್ವಿಕೆಗೆ ನಾಂದಿಯಾಯಿತು.

೩. ಭಾರತದ ರಾಜಕೀಯದಲ್ಲಿ ವಿದೇಶಿ ಮುಸ್ಲಿಂರ ಧಾರ್ಮಿಕ ಅಂಶಗಳ ಪ್ರವೇಶ:

ಟರ್ಕರು ಸ್ವತಂತ್ರ ಆಡಳಿತವನ್ನು ನಡೆಸುತ್ತಿದ್ದರು. ಆದರೂ ಬಾಗ್ದಾದಿನ ಖಲೀಫನಿಗೆ ಗೌರವವನ್ನು ನೀಡಿ ಅವರ ಮಾರ್ಗದರ್ಶನವನ್ನು ಬಯಸುತ್ತಿದ್ದರು.  ಅಲ್ಲದೆ ದೆಹಲಿ ಆಡಳಿತವು ವಿಶ್ವ ಮುಸ್ಲಿಮರ ಆಳ್ವಿಕೆಯ ಭಾಗವೆಂದು ಪರಿಗಣಿಸಿದ್ದರು. ಹೀಗಾಗಿ ಬಾಗ್ದಾದಿನ ಖಲೀಫನ ಸಾರ್ವಬೌಮತ್ವವನ್ನು ಮನ್ನಿಸಿದ್ದರು. ಇದು ಭಾರತದ ರಾಜಕೀಯದಲ್ಲಿ ವಿದೇಶಿ ಮುಸ್ಲಿಂರ ಧಾರ್ಮಿಕ ಅಂಶಗಳು ಎದ್ದು ಕಾಣುವಂತಾಯಿತು.

೪. ಆಡಳಿತದಲ್ಲಿ ಟರ್ಕರ ಸಾರ್ವಭೌಮಾಧಿಕಾರದ ಸ್ಥಾಪನೆ:

ಭಾರತೀಯರ ರಾಜಕೀಯ ಏಕತೆಯ ಕೊರತೆಯ ಕಾರಣದಿಂದ ಟರ್ಕರು ಭಾರತೀಯರನ್ನು ಸುಲಭವಾಗಿ ಸೋಲಿಸಿ ತಮ್ಮ ರಾಜಕೀಯ ಸಾರ್ವಭೌಮಾಧಿಕಾರವನ್ನು ಸ್ಥಾಪಿಸಿದರು. ಭಾರತೀಯರು ತಮ್ಮ ಎಲ್ಲಾ ಅಧಿಕಾರವನ್ನು ಟರ್ಕರ ಕೈಗೆ ಹಸ್ತಾಂತರಿಸಿ ಹಲ್ಲು ಕಿತ್ತ ಹಾವಿನಂತಾದರು. ರಾಜಕೀಯ ಮೇಲಾಟದಲ್ಲಿ ಮೆರೆಯುತ್ತಿದ್ದ ಭಾರತೀಯರು ತಮ್ಮ ಅಧಿಕಾರವನ್ನು ಕಳೆದುಕೊಂಡು ದ್ವಿತೀಯ ದರ್ಜೆಯ ಗುಲಾಮರಂತೆ ಬದುಕಿದರು. ಆಡಳಿತದಲ್ಲಿನ ಉನ್ನತ ಹುದ್ದೆಗಳು ಟರ್ಕರಿಗೆ ಮಾತ್ರ ಮೀಸಲಾಗಿದ್ದವು. ಇದರಿಂದ ಹಿಂದೂಗಳು ಮತ್ತು ಇತರೆ ಮುಸ್ಲಿಂರು ಉನ್ನತ ಹುದ್ದೆಯಿಂದ ವಂಚಿತರಾದರು.

೫. ಹಿಂದೂಗಳು ದೈಹಿಕ ಮತ್ತು ಮಾನಸಿಕ ಹಿಂಸೆಗೆ ಒಳಪಟ್ಟರು:

ಟರ್ಕರು ಭಾರತದ ಮೇಲೆ ದಾಳಿ ಮಾಡಿ ಹಿಂದೂಗಳಿಂದ ಬಲವಂತವಾಗಿ ಅಧಿಕಾರವನ್ನು ಕಿತ್ತುಕೊಂಡು ಅವರನ್ನು ತಮ್ಮ ಗುಲಾಮರನ್ನಾಗಿ ಮಾಡಿಕೊಂಡರು. ರಾಜ್ಯದ ಶ್ರೇಷ್ಠ ಹುದ್ದೆಗಳು ಟರ್ಕರ ಪಾಲಾಗಿ ಕೆಳದರ್ಜೆಯ ಹುದ್ದೆಗಳನ್ನು ಹಿಂದುಗಳಿಗೆ ನೀಡಲಾಯಿತು. ಪರಿಣಾಮವಾಗಿ ಭಾರತೀಯ ನೈಸರ್ಗಿಕ ಸಂಪತ್ತು ಹಾಗೂ ವಿವಿಧ ಸೌಲಭ್ಯಗಳನ್ನು ಟರ್ಕರು ಅನಾಯಾಸವಾಗಿ ಅನುಭವಿಸುವಂತಾಯಿತು. ಹಿಂದೂಗಳು ದನಗಳಿಗಿಂತಲೂ ಕೀಳು ದರ್ಜೆಯ ಬದುಕನ್ನು ಸಾಗಿಸುವಂತಾಯಿತು. ಮಹಮ್ಮದ್‌ ಘಜ್ನಿ, ಮಹಮ್ಮದ್‌ ಘೋರಿ ಹಾಗೂ ಅಲ್ಲಾವುದ್ದೀನ್‌ ಖಿಲ್ಜಿ ಮತ್ತು ಇಬ್ರಾಹಿಂ ಲೂದಿಯಂತಹ ಮತಾಂಧರುಗಳು ಹಿಂದೂಗಳ ಏಳಿಗೆಯನ್ನು ಸ್ವಲ್ಪವೂ ಸಹಿಸಲಿಲ್ಲ. ಹಿಂದುಗಳನ್ನು ಹೆಜ್ಜೆ ಹೆಜ್ಜೆಗೂ ಹಿಂಸಿಸಿ ಪ್ರಾಣಿಗಳಂತೆ ನಡೆಸಿಕೊಂಡರು. ಹೀಗೆ ಟರ್ಕರಿಂದ ಹಿಂದೂಗಳು ದೈಹಿಕ ಹಾಗೂ ಮಾನಸಿಕ ಹಿಂಸೆಗೆ ಒಳಗಾದರು.

೬. ಆಡಳಿತದಲ್ಲಿ ಕೆಲವು ಹಿಂದೂಗಳು ನೇಮಕ:  

ಟರ್ಕರು ದಕ್ಷ ಆಡಳಿತಾಧಿಕಾರಿಗಳೇನು ಆಗಿರಲಿಲ್ಲ. ಅವರು ಕೆಲವು ಬುದ್ಧಿವಂತ ಹಿಂದೂಗಳನ್ನೇ ಆಡಳಿತದಲ್ಲಿ ನೇಮಿಸಿಕೊಂಡು ಅವರಿಂದಲೇ ರಾಜಕೀಯ ಲಾಭವನ್ನು ಪಡೆದುಕೊಂಡರು. ಅವರಿಂದಲೇ ತಮ್ಮ ಅಧಿಕಾರದ ಬೇಳೆಯನ್ನು ಬೇಯಿಸಿಕೊಂಡರು. ಭಾರತದಲ್ಲಿ ಗ್ರಾಮಾಡಳಿತದಿಂದ ಹಿಡಿದು ಕೇಂದ್ರ ಸರ್ಕಾರದವರೆಗಿನ ವಿವಿಧ ಹುದ್ದೆಗಳಿಗೆ ಹಿಂದೂಗಳನ್ನು ನೇಮಕ ಮಾಡಿದ ಟರ್ಕರು ಅವರ ಮಾರ್ಗದರ್ಶನದಲ್ಲಿ ಭಾರತದ ಆಡಳಿತವನ್ನು ನಡೆಸಿಕೊಂಡು ಬಂದರು. ಉದಾ: ಚಾಂದೇರಿಯ ಮೇದಿನಿರಾಯ್‌, ಬಂಗಾಳದಲ್ಲಿ ರೂಪ್‌ ಹಾಗೂ ಸನ್‌ಕನ್‌ ಮುಂತಾದವರು. ಹಾಗೆಯೇ ಗೋಲ್ಕಂಡ ಸುಲ್ತಾನ್‌, ಬಿಜಾಪುರದ ಯೂಸುಪ್‌ ಆದಿಲ್‌ ಷಾ ಸಹ ಹಿಂದೂಗಳನ್ನು ಆಡಳಿತದಲ್ಲಿ ನೇಮಕಮಾಡಿಕೊಂಡಿದ್ದರು.

೭. ಹಿಂದೂಗಳ ಧಾರ್ಮಿಕ ನಂಬಿಕೆಯ ಮೇಲೆ ಪ್ರಹಾರ:

ಮಹಮ್ಮದ್‌ ಘಜ್ನಿ 1026ರಲ್ಲಿ ವಿಶ್ವಪ್ರಸಿದ್ಧ ಸೋಮನಾಥ ದೇವಾಲಯವನ್ನು ಧ್ವಂಸಗೊಳಿಸಿ ಅಲ್ಲಿನ ಶಿವಲಿಂಗವನ್ನು ಒಡೆದು ಹಾಕಿದನು. ಕೋಟ್ಯಾಂತರ ರೂಪಾಯಿಗಳ ಬೆಲೆಬಾಳುವ ಮುತ್ತು, ರತ್ನ ಹಾಗೂ ವಜ್ರ ವೈಡೂರ್ಯಗಳನ್ನು ದೋಚಿಕೊಂಡು ಹೋದನು. ಇದು ಹಿಂದೂಗಳ ಧಾರ್ಮಿಕ ನಂಬಿಕೆಯ ಮೇಲೆ ನಡೆದ ಪ್ರಹಾರವಾಗಿತ್ತು. ಆದರೆ ಆ ಸಂದರ್ಭದಲ್ಲಿ ಯಾವುದೇ ಒಬ್ಬ ಹಿಂದೂ ಸಹ ಪ್ರತಿರೋಧ ಒಡ್ಡಲಿಲ್ಲ. ಹಾಗೆಯೇ ಮಹಮ್ಮದ್‌ ಘೋರಿ ತರೈನ್‌ ಯುದ್ಧದಲ್ಲಿ ಪೃಥ್ವಿರಾಜ್‌ ಚೌಹಾಣನನ್ನು ಸೋಲಿಸಿ ಕೊಲೆ ಮಾಡಿದ ಸಂದರ್ಭದಲ್ಲಿಯೂ ಸಹ ರಜಪೂತ್‌ ದೊರೆಗಳು ಮೂಕ ಪ್ರೇಕ್ಷಕರಂತೆ ನಿಂತು ನೋಡಿದರೇ ಹೊರತು ಯಾರೂ ಸಹ ಘೋರಿಯ ವಿರುದ್ಧ ಕಂಕಣ ಕಟ್ಟಿ ಹೋರಾಟಕ್ಕೆ ಇಳಿಯಲಿಲ್ಲ. ಮುಂದೊಂದು ದಿನ ಇಂತಹ ಪರಿಸ್ಥಿತಿ ತಮಗೂ ಬರಬಹುದು ಎಂಬ ಕನಿಷ್ಟ ಜ್ಞಾನವೂ ರಜಪೂತ ದೊರೆಗಳಿಗೆ ಇಲ್ಲದೆ ಹೋದುದು ಅತ್ಯಂತ ದುಃಖದ ಸಂಗತಿ ಎಂದು ಹೇಳಬಹುದು. ಇದಕ್ಕೆಲ್ಲಾ ಮೂಲ ಕಾರಣವೆಂದರೆ ಭಾರತೀಯ ಸಮಾಜದಲ್ಲಿದ್ದ ಒಡಕು.

೮. ಪರ್ಶಿಯನ್‌ ಆಡಳಿತ ಭಾಷೆಯಾಯಿತು:

ಟರ್ಕರ ಆಕ್ರಮಣದ ಪರಿಣಾಮವಾಗಿ ಭಾರತದಲ್ಲಿ ಸಂಸ್ಕೃತ ಭಾಷೆಯ ಬದಲಾಗಿ ಪರ್ಶಿಯನ್‌ ಆಡಳಿತ ಭಾಷೆಯಾಗಿ ಜಾರಿಗೆ ಬಂದಿತು. ಅದು ಮೊಗಲರ ಕಾಲದವರೆಗೂ ಮುಂದುವರೆಯಿತು. ಭಾರತೀಯ ಅನೇಕ ಹಿಂದೂ ಪಂಡಿತರು, ಲೇಖಕರು ಹಾಗೂ ಕವಿಗಳಿಗೆ ಟರ್ಕರು ತಮ್ಮ ಆಸ್ಥಾನದಲ್ಲಿ ಆಶ್ರಯ ನೀಡಿ ಅವರ ಮೂಲಕ ಅನೇಕ ಹಿಂದೂ ಗ್ರಂಥಗಳನ್ನು ಪರ್ಶಿಯನ್‌ ಭಾಷೆಗೆ ತರ್ಜುಮೆಗೊಳಿಸಿದರು.

೯. ರಾಜಧಾನಿಯ ಬದಲಾವಣೆ:

ಟರ್ಕರ ದಾಳಿಯ ಪರಿಣಾಮವಾಗಿ ಈ ಹಿಂದೆ ಇದ್ದ ಲಾಹೋರಿನ ಕೇಂದ್ರ ಸ್ಥಾನವನ್ನು ಬದಲಾಯಿಸಿ ಅದನ್ನು ದೆಹಲಿಗೆ ಸ್ಥಳಾಂತರಗೊಳಿಸಿದರು. ಹೀಗಾಗಿ ಘಜ್ನಿ ಹಾಗೂ ಘೋರಿ ಮಹಮ್ಮದರಿಂದ ಹಿಡಿದು ಮೊಗಲ್‌ ಸಾಮ್ರಾಜ್ಯದ ಕೊನೆಯ ದಿನಗಳವರೆಗೂ ದೆಹಲಿಯು ಮುಸ್ಲೀಂರ ಕೇಂದ್ರ ಸ್ಥಾನವಾಯಿತು. ದೆಹಲಿಯಿಂದಲೇ ಮುಸ್ಲೀಂರ ರಾಜಕೀಯ ಚಟುವಟಿಕೆಗಳು ಆರಂಭಗೊಳ್ಳುತ್ತಿದ್ದವು.

೧೦. ಉತ್ತರಾಧಿಕಾರದ ಕಾನೂನು ಇಲ್ಲದಿರುವುದು ರಕ್ತಪಾತಕ್ಕೆ ಕಾರಣವಾಯಿತು:

ಮುಸ್ಲೀಂರ ರಾಜಕೀಯ ವ್ಯವಸ್ಥೆ ಅಂದು ಬಹಳ ಗೊಂದಲಗಳಿಂದ ಕೂಡಿತ್ತು. ಅವರಲ್ಲಿ ಉತ್ತರಾಧಿಕಾರದ ಕುರಿತು ಯಾವುದೇ ನಿರ್ದಿಷ್ಟವಾದ ಕಾನೂನುಗಳು ಇರಲಿಲ್ಲ. ಉತ್ತರಾಧಿಕಾರತ್ವ ಅನುವಂಶೀಯವಾಗಿರಲಿಲ್ಲ. ಅದು ಕೇವಲ ಖಡ್ಗ ಬಲದ ಆಧಾರದ ಮೇಲೆ ನಿಂತಿತ್ತು. ಯಾರು ಬಲಿಷ್ಟರಾಗಿರುತ್ತಾರೋ ಅವರೇ ಸಿಂಹಾಸನಕ್ಕೆ ಬರುತ್ತಿದ್ದರು. ಹೀಗಾಗಿ ಉತ್ತರಾಧಿಕಾರದ ಸಂದರ್ಭಗಳಲ್ಲಿ ಸುಲ್ತಾನರ ಮಕ್ಕಳ ನಡುವೆ ನಿರಂತರವಾಗಿ ಘರ್ಷಣೆಗಳು ಸಂಭವಿಸುತ್ತಿದ್ದವು. ಈ ಘರ್ಷಣೆಯಲ್ಲಿ ರಕ್ತಪಾತ ಸಹಜವೆಂಬಂತೆ ಇತ್ತು.

೧೧. ಊಳಿಗಮಾನ್ಯ ಪದ್ಧತಿ ನಿರ್ನಾಮವಾಯಿತು:

ಟರ್ಕರು ತಮ್ಮ ಆಡಳಿತದ ಅನುಕೂಲಕ್ಕಾಗಿ ಸಾಮ್ರಾಜ್ಯವನ್ನು ಇಕ್ತಾಗಳಾಗಿ (ಪ್ರಾಂತ್ಯಗಳಾಗಿ)ವಿಭಜಿಸಿದ್ದರು.  ಪರಿಣಾಮವಾಗಿ ಸಣ್ಣಪುಟ್ಟ ಅರಸರು ತಮ್ಮ ಅಸ್ತಿತ್ವವನ್ನು ಕಳೆದುಕೊಂಡರು. ಇಕ್ತಾಗಳನ್ನು ನೋಡಿಕೊಳ್ಳಲು ಇಕ್ತಾದಾರರನ್ನು ನೇಮಿಸಿದ್ದರು. ಇಕ್ತಾದಾರನು ಇಕ್ತಾಗಳಿಂದ ವಸೂಲಾಗುವ ಆದಾಯದಲ್ಲಿ ಸೈನ್ಯದ ನಿರ್ವಹಣೆ ಮಾಡುತ್ತ ಉಳಿದ ಆದಾಯವನ್ನು ಸುಲ್ತಾನನಿಗೆ ಸಲ್ಲಿಸಬೇಕಾಗಿತ್ತು. ಇದರಿಂದ ಕೇಂದ್ರ ಸರಕಾರದ ಆಳ್ವಿಕೆ ಬಲವಾಯಿತು. ಪ್ರಾಚೀನ ಕಾಲದಲ್ಲಿ  ಯುದ್ಧದ ಸಂದರ್ಭಗಳಲ್ಲಿ ಮಾತ್ರ ಊಳಿಗಮಾನ್ಯ ಸೈನ್ಯವನ್ನು ಬಳಸಿಕೊಳ್ಳಲಾಗುತ್ತಿತ್ತು. ಆದರೆ ಟರ್ಕರು ಭಾರತಕ್ಕೆ ಬಂದ ನಂತರ ಯುದ್ಧದ ಸಮಯದಲ್ಲಿ ಸದಾ ಸಿದ್ಧವಿದ್ದ ಸೇನೆಯನ್ನು (Permanent Standing Army)ಸಂಘಟಿಸಿ ಅದಕ್ಕೆ ಸಂಪೂರ್ಣ ತರಬೇತಿಯನ್ನು ನೀಡಿ ಯುದ್ಧಕ್ಕೆ ಸನ್ನದ್ಧಗೊಳಿಸಲಾಗುತ್ತಿತ್ತು. ಹೀಗಾಗಿ ಊಳಿಗಮಾನ್ಯ ಸೈನ್ಯವು ತನ್ನ ಅಸ್ತಿತ್ವವನ್ನು ಕಳೆದುಕೊಂಡು ಊಳಿಗಮಾನ್ಯ ವ್ಯವಸ್ಥೆ (Feudal System) ಅವನತಿ ಕಾಣುವಂತಾಯಿತು.

೧೨. ಕ್ಷತ್ರಿಯರೊಂದಿಗೆ ಸೈನ್ಯಕ್ಕೆ ಬೇರೆ ಜನರ ಸೇರ್ಪಡೆ:

ಪ್ರಾಚೀನ ಹಾಗೂ ಮಧ್ಯಕಾಲೀನ ಆಡಳಿತದ ಸಮಯದಲ್ಲಿ ರಜಪೂತರಲ್ಲಿ ಕ್ಷತ್ರೀಯ ಹಿನ್ನೆಲೆಯಿಂದ ಬಂದವರು ಮಾತ್ರ ಸೈನ್ಯವನ್ನು ಸೇರಬಹುದಾಗಿತ್ತು. ದೇಶ ರಕ್ಷಣೆಯ ವಿಷಯ ಬಂದಾಗ ಕ್ಷತ್ರೀಯರು ಮಾತ್ರ ಹೋರಾಟದಲ್ಲಿ ತೊಡಗಬೇಕು ಎಂಬ ನಿಯಮವಿತ್ತು. ಬೇರೆ ಜಾತಿ ಜನಾಂಗಗಳಲ್ಲಿ ಎಷ್ಟೇ ಬಲಿಷ್ಠರು ಇದ್ದರೂ ಸಹ ಅವರನ್ನು ಸೈನ್ಯಕ್ಕೆ ಸೇರಿಸಿಕೊಳ್ಳುತ್ತಿರಲಿಲ್ಲ. ಕ್ಷತ್ರೀಯರು ಯುದ್ಧದಲ್ಲಿ ಸೋತರೆ ಇಡೀ ದೇಶವೇ ಸೋತಂತೆ ಎಂಬ ತೀರ್ಮಾನಕ್ಕೆ ಬರಲಾಗುತ್ತಿತ್ತು. ಆದರೆ ಟರ್ಕರು ಭಾರತಕ್ಕೆ ಬಂದ ನಂತರ ಕ್ಷತ್ರೀಯರು ಮಾತ್ರವಲ್ಲ, ಬೇರೆ ಯಾವುದೇ ಜಾತಿ ಜನಾಂಗದವರು ಸೇನೆಯನ್ನು ಸೇರಬಹುದು ಎಂಬ ಪತ್ವಾವನ್ನು ಹೊರಡಿಸಿದರು. ಹೀಗಾಗಿ ಭಾರತೀಯ ಸೇನೆಯಲ್ಲಿ ಬೇರೆ-ಬೇರೆ ಜಾತಿ ಜನಾಂಗದ ಸೈನಿಕರು ಸೇರಲು ಅವಕಾಶ ಸಿಕ್ಕಂತಾಯಿತು.

2) ಆರ್ಥಿಕ ಬದಲಾವಣೆಗಳು:

ಟರ್ಕರ ದಂಡಯಾತ್ರೆಗಳ ಪರಿಣಾಮದಿಂದ ಭಾರತದ ಆರ್ಥಿಕ ಕ್ಷೇತ್ರದಲ್ಲಿ ಉಂಟಾದ ಬದಲಾವಣೆಗಳು ಈ ಕೆಳಗಿನಂತಿವೆ.

೧. ಅಪಾರ ಪ್ರಮಾಣದ ಸಂಪತ್ತಿನ ಲೂಟಿ:

ಮಹಮ್ಮದ್‌ ಘಜ್ನಿಯ ಭಾರತದ ಮೇಲಿನ ದಾಳಿಗೆ ಕಾರಣ ಅಪಾರ ಪ್ರಮಾಣದ ಸಂಪತ್ತನ್ನು ದೋಚುವುದಾಗಿತ್ತು. ಅವನು ಸಂಪತ್ತಿನ ಮೇಲೆ ಅತಿಯಾದ ಮೋಹವುಳ್ಳವನಾಗಿದ್ದನು. ಆ ಸಂಪತ್ತಿನ ದಾಹವನ್ನು ಇಂಗಿಸಿಕೊಳ್ಳಲು ಆತ ಭಾರತದ ಮೇಲೆ ಸುಮಾರು 17 ಬಾರಿ ದಂಡಯಾತ್ರೆ ಕೈಗೊಂಡು ದೇಶದ ಅರ್ಧದಷ್ಟು ಸಂಪತ್ತನ್ನು ಲೂಟಿ ಮಾಡಿದನು. ಆದರೆ ಘೋರಿ ಮಹಮ್ಮದ್‌ ಭಾರತದ ಸಂಪತ್ತನ್ನು ಲೂಟಿ ಮಾಡುವುದು ಹಾಗೂ ಸಾಮ್ರಾಜ್ಯವನ್ನು ವಿಸ್ತರಿಸುವುದು ಈ ಎರಡು ಮೂಲಗುರಿಗಳನ್ನು ಇಟ್ಟುಕೊಂಡು ಭಾರತದ ಮೇಲೆ ದಾಳಿ ಮಾಡಿ ತರೈನ್‌ ಯುದ್ಧದಲ್ಲಿ ಪೃಥ್ವಿರಾಜ್‌ ಚೌಹಾಣನನ್ನು ಸೋಲಿಸಿ ಕೊಲೆ ಮಾಡಿದನು. ಇವರಿಬ್ಬರ ದಾಳಿಯ ಪರಿಣಾಮವಾಗಿ ಭಾರತ  ಬಡ ರಾಷ್ಟ್ರವಾಯಿತು. ಒಂದು ಅಂದಾಜಿನ ಪ್ರಕಾರ ಅವರು ಕೊಳ್ಳೆ ಹೊಡೆದ ಚಿನ್ನ, ಬೆಳ್ಳಿ, ರತ್ನ, ವಜ್ರಗಳ ಮೌಲ್ಯ ಫೆರಿಸ್ತಾ ಹೇಳಿದಂತೆ 7 ಲಕ್ಷ ಚಿನ್ನದ ದಿನಾರು, 700 ಮಣ ಚಿನ್ನ ಹಾಗೂ ಬೆಳ್ಳಿ, 200 ಮಣ ಚಿನ್ನದ ಗಟ್ಟಿ, 200 ಮಣ ಕಚ್ಛಾ ಬೆಳ್ಳಿ, 20 ಮಣ ಆಭರಣಗಳು ಸೇರಿದ್ದವು.

೨. ಆರ್ಥಿಕ ಮುಗ್ಗಟ್ಟು:

ಟರ್ಕರು ಭಾರತವನ್ನು ಆಕ್ರಮಣ ಮಾಡಿಕೊಂಡ ನಂತರ ಭಾರತದ ರಾಜಕೀಯದಲ್ಲಿ ಮಧ್ಯಪ್ರವೇಶ ಮಾಡಿದರು. ನಂತರ ಭಾರತದ ಹಿಂದೂಗಳ ಮೇಲೆ ಜಜಿಯಾ ತೆರಿಗೆಗಳನ್ನು ಹೇರಿದರು. ತೆರಿಗೆ ಕೊಡಲಾಗದ ಅನೇಕ ಹಿಂದುಗಳು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡರು. ದೇಶದ ಸಂಪತ್ತು ಕೆಲವೇ ಕೆಲವು ವ್ಯಕ್ತಿಗಳಲ್ಲಿ ಕೇಂದ್ರೀಕರಣಗೊಂಡಿತು. ಈ ಸಂಪತ್ತನ್ನು ಅವರು ಪ್ರಜೆಗಳ ಕಲ್ಯಾಣಕ್ಕಾಗಿ ಬಳಕೆ ಮಾಡಲಿಲ್ಲ. ಬದಲಾಗಿ ಸುಖ ಭೋಗದ ಜೀವನಕ್ಕಾಗಿ ಬಳಕೆ ಮಾಡಿಕೊಂಡರು. ಹೀಗಾಗಿ ಭಾರತೀಯರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದರು.

೩. ತೆರಿಗೆ ಪದ್ಧತಿಯಲ್ಲಿ ಬದಲಾವಣೆ:

ಟರ್ಕರು ಮುಸ್ಲಿಂ ಆಗಿದ್ದರಿಂದ ಇಸ್ಲಾಮಿಕ್ ಕಾಯ್ದೆಯ ಪ್ರಕಾರ ತೆರಿಗೆ ವಸೂಲಿ ಮಾಡುತ್ತಿದ್ದರು.

೧. ಜಕಾತ್ ತೆರಿಗೆ(Zakat):  ಪ್ರತಿ ಮುಸಲ್ಮಾನರು ತಮ್ಮ ಆದಾಯದಲ್ಲಿ ೨% ತೆರಿಗೆಯನ್ನು ಸರ್ಕಾರಕ್ಕೆ ಕಟ್ಟಬೇಕಾಗಿತ್ತು.

೨. ಖಮ್ಸ್‌ (Khams):  ಯುದ್ಧದ ಸಂದರ್ಭದ ಲೂಟಿಯಲ್ಲಿ ಸರ್ಕಾರಕ್ಕೆ ಸಲ್ಲಿಸಬೇಕಾದ ತೆರಿಗೆ.

೩. ಜಜಿಯಾ(Jajiya): ಹಿಂದುಗಳು ತಮ್ಮ ರಕ್ಷಣೆಗಾಗಿ ಸರ್ಕಾರಕ್ಕೆ ಸಲ್ಲಿಸಬೇಕಾದ ತೆರಿಗೆ.

೪. ಖಿರಾಜ್(Khiraj):   ರೈತರು ತಮ್ಮ ಜಮೀನಿನ ಉತ್ಪತ್ತಿಯಲ್ಲಿ ಸರ್ಕಾರಕ್ಕೆ ಸಲ್ಲಿಸಬೇಕಾದ ತೆರಿಗೆ ಶೇಕಡ 50ರಷ್ಟು.

3) ಸಾಮಾಜಿಕ ಬದಲಾವಣೆಗಳು:

ಇಸ್ಲಾಂ ಸಂಸ್ಕೃತಿ ಹಾಗೂ ನಾಗರಿಕತೆಗಳು ಭಾರತೀಯ ಸಮಾಜದ ಮೇಲೆ ಕೆಲವೊಂದು ಕೆಟ್ಟ ಪರಿಣಾಮಗಳನ್ನು ಬೀರಿ ಭಾರತೀಯ ಸಮಾಜದ ಬದಲಾವಣೆಗೆ ಕಾರಣವಾದವು. ಅವುಗಳನ್ನು ಈ ರೀತಿಯಾಗಿ ನೋಡಬಹುದು.

೧. ಭಾರತೀಯ ಸಮಾಜದ ವಿಭಜನೆಗೆ ಕಾರಣವಾಯಿತು:

ಟರ್ಕರು ಭಾರತದ ಮೇಲೆ ದಾಳಿ ಮಾಡುವ ಮೂಲಕ ಅವರು ಇಲ್ಲಿಯೇ ನೆಲೆಯೂರಿದರು. ಪರಿಣಾಮವಾಗಿ ಭಾರತೀಯ ಸಮಾಜವು ಹಿಂದೂ ಸಮಾಜ ಹಾಗೂ ಮುಸ್ಲೀಂ ಸಮಾಜ ಎಂಬ ಎರಡು ಭಾಗಗಳಾಗಿ ವಿಭಜನೆ ಹೊಂದಿತು. ಇವರಿಬ್ಬರ ನಡುವೆ ಮೇಲು-ಕೀಳು, ಕರಿಯ-ಬಿಳಿಯ ಹಾಗೂ ವರ್ಣಭೇದಗಳು ಕಾಣಿಸಿಕೊಂಡವು. ಇದು ಅತಿಯಾದಂತೆ ಪರಸ್ಪರರಲ್ಲಿ ಜಗಳ, ಕದನ ಆರಂಭಗೊಂಡು ಸೌಹಾರ್ದತೆ ಕ್ಷೀಣಿಸುತ್ತಾ ಹೋಯಿತು.

೨. ಜಾತಿ ಪದ್ಧತಿಗೆ ವಿರೋಧ ಮತ್ತು ಅದರ ಕರಾಳತೆಗೆ ಕಾರಣವಾಯಿತು:

ಇಸ್ಲಾಂ ಧರ್ಮದಲ್ಲಿ ಜಾತಿ ಪದ್ಧತಿ ಇರಲಿಲ್ಲ. ಇದರಿಂದ ಹಿಂದೂ ಧರ್ಮದಲ್ಲಿದ್ದ ಜಾತಿಪದ್ಧತಿ, ವರ್ಣಾಶ್ರಮ ಧರ್ಮಕ್ಕೆ ಯಾವುದೇ ಮಾನ್ಯತೆಯನ್ನು ಸುಲ್ತಾನರು ನೀಡಲಿಲ್ಲ. ಹೀಗಾಗಿ ಜಾತಿಪದ್ಧತಿ ತನ್ನ ಜಟಿಲತೆಯನ್ನು ಕಳೆದುಕೊಂಡಿತು. ಟರ್ಕರ ಆಗಮನದ ಪರಿಣಾಮವಾಗಿ ಇಸ್ಲಾಂ ಧರ್ಮ ತನ್ನ ಪ್ರಚಾರವನ್ನು ದಿನದಿಂದ ದಿನಕ್ಕೆ ಹೆಚ್ಚಿಸಿಕೊಳ್ಳುತ್ತಾ ಹೊರಟಿತು. ಇದರಿಂದ ಹೆದರಿದ ಹಿಂದುಗಳು ಹಿಂದೂ ಧರ್ಮವನ್ನು ರಕ್ಷಿಸಿಕೊಳ್ಳುವುದಕ್ಕಾಗಿ ಅವರು ಜಾತಿ ಪದ್ಧತಿಯನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದರು. ಇದರಿಂದ ಭಾರತದಲ್ಲಿ ಜಾತಿ ಪದ್ಧತಿ ಅಳಿಸಿ ಹೋಗುವುದರ ಬದಲಾಗಿ ಮತ್ತಷ್ಟು ತನ್ನ ಕರಾಳ ರೂಪವನ್ನು ತೋರಿಸಿತು. ಹೀಗೆ ಜಾತಿ ಪದ್ಧತಿಯು ತನ್ನ ಜಟಿಲತೆಯನ್ನು ಕಳೆದುಕೊಂಡದ್ದು ಹಾಗೂ ಅದರ ಕರಾಳತೆಯ ಪ್ರದರ್ಶನ ಎರಡೂ ಏಕಕಾಲದಲ್ಲಿ ಘಟಿಸಿದವು.

೩. ನಗರ ಪ್ರದೇಶಗಳಲ್ಲಿ ಬದಲಾವಣೆ:

 ಟರ್ಕರ ಆಡಳಿತ ಕಾಲದಲ್ಲಿ ನಗರ ಪ್ರದೇಶದಲ್ಲಿ ಎಲ್ಲಾ ರೀತಿಯ ಜನರು ವಾಸಿಸಲು ಅನುಕೂಲವಾಯಿತು. ಜಾತಿ ಧರ್ಮದ ಹಂಗಿಲ್ಲದೆ ಒಟ್ಟಿಗೆ  ವಾಸಿಸುವ ವ್ಯವಸ್ಥೆ  ಸೃಷ್ಟಿಯಾಯಿತು.  ಯಾಕೆಂದರೆ ಜಾತಿಯನ್ನು ಪೋಷಿಸುವ ಮತ್ತು ಜಾತಿ ವ್ಯವಸ್ಥೆಯನ್ನು ಕಾಪಾಡುವ ಅವಶ್ಯಕತೆ ಮುಸ್ಲಿಂ ಮುಖಂಡರಿಗೆ ಅಥವಾ ಸುಲ್ತಾನರಿಗೆ ಇರಲಿಲ್ಲ. ಅದರಲ್ಲಿ ಅವರಿಗೆ ಯಾವುದೇ ಆಸಕ್ತಿಯೂ ಇರಲಿಲ್ಲ.

೪. ವೈಭವದ ವಿಲಾಸಿ ಜೀವನ ಶೈಲಿಗೆ ಪರಿವರ್ತನೆ:

ರ್ಕರು ಭಾರತದಲ್ಲಿ ತಮ್ಮ ಆಳ್ವಿಕೆಯನ್ನು ಸ್ಥಾಪಿಸಿದ ನಂತರ, ಉಪಖಂಡದ ಅಪಾರ ಸಂಪತ್ತು ಅವರ ಜೀವನ ವಿಧಾನದ ಮೇಲೆ ಪ್ರಭಾವ ಬೀರಲು ಪ್ರಾರಂಭಿಸಿತು. ಅವರು ಗಳಿಸಿದ ಸಂಪತ್ತು ಪರ್ಷಿಯನ್ನರಂತೆಯೇ ಐಷಾರಾಮಿ ಜೀವನಶೈಲಿಯನ್ನು ಅಳವಡಿಸಿಕೊಳ್ಳಲು ಅವರಿಗೆ ಅವಕಾಶ ಮಾಡಿಕೊಟ್ಟಿತು. ಅರಮನೆಗಳು, ಉತ್ತಮ ಉಡುಪುಗಳು, ಸುಗಂಧ ದ್ರವ್ಯಗಳು, ಶ್ರೀಮಂತ ಆಹಾರ ಮತ್ತು ಮನರಂಜನೆ ಗಣ್ಯ ಸಂಸ್ಕೃತಿಯ ಭಾಗವಾಯಿತು. ಸೌಕರ್ಯ ಮತ್ತು ಭವ್ಯತೆಯ ಈ ಹೊಸ ಅಭಿರುಚಿ ಕ್ರಮೇಣ ಸಾಮ್ರಾಜ್ಯದಾದ್ಯಂತ ಹರಡಿತು. ಇದು ಪ್ರಮುಖ ನಗರಗಳಲ್ಲಿನ ಅನೇಕ ಜನರ ಜೀವನಶೈಲಿಯ ಮೇಲೆ ಪ್ರಭಾವ ಬೀರಿತು.

ಕಾಲಕ್ರಮೇಣ, ಈ ಐಷಾರಾಮಿತನ ಕೆಲವು ಸಾಮಾಜಿಕ ಬದಲಾವಣೆಗಳಿಗೆ ಕಾರಣವಾಯಿತು. ಮದ್ಯಪಾನ, ಜೂಜಾಟ ಮತ್ತು ಅನೈತಿಕ ಚಟುವಟಿಕೆಗಳು ಹೆಚ್ಚು ವ್ಯಾಪಕವಾಗಿ ಹರಡಿತು. ಇದು ಆಡಳಿತ ವರ್ಗ ಮತ್ತು ಹಿಂದೂ ಸಮಾಜಿಕ ವ್ಯವಸ್ಥೆಯ ಮೇಲೆ ಗಂಭೀರ ಪರಿಣಾಮ ಬೀರಿತು ಎಂದು ಐತಿಹಾಸಿಕ ವೃತ್ತಾಂತಗಳು ಉಲ್ಲೇಖಿಸುತ್ತವೆ. ಜನರು ಸೌಕರ್ಯ ಮತ್ತು ಭೋಗ ಜೀವನದತ್ತ ಆಕರ್ಷಿತರಾಗುತ್ತಿದ್ದಂತೆ, ಸಾಂಪ್ರದಾಯಿಕ ನೈತಿಕ ಮೌಲ್ಯಗಳು ದುರ್ಬಲಗೊಳ್ಳಲು ಪ್ರಾರಂಭಿಸಿದವು. ಹೀಗಾಗಿ, ಟರ್ಕರ ವಿಜಯವು ಹೊಸ ಸಾಂಸ್ಕೃತಿಕ ಅಂಶಗಳನ್ನು ಪರಿಚಯಿಸಿದ್ದಲ್ಲದೆ, ಸಾಮಾಜಿಕ ದುರ್ಗುಣಗಳ ಉದಯಕ್ಕೂ ಕಾರಣವಾಯಿತು, ಇದು ಮಧ್ಯಕಾಲೀನ ಭಾರತೀಯ ಸಮಾಜದಲ್ಲಿ ಗಮನಾರ್ಹ ಬದಲಾವಣೆಯನ್ನು ಉಂಟುಮಾಡಿತು.

೫. ಉಡುಗೆ ತೊಡುಗೆಗಳಲ್ಲಿ ಬದಲಾವಣೆ:

ಭಾರತಕ್ಕೆ ತುರ್ಕರು ಮತ್ತು ಇತರ ಮುಸ್ಲಿಂ ಸಮುದಾಯಗಳ ಆಗಮನವು ಹೊಸ ಮತ್ತು ಆಕರ್ಷಕ ಶೈಲಿಯ ಉಡುಗೆ ತೊಡುಗೆ, ಆಹಾರ ಪದ್ಧತಿ, ಸುಗಂಧ ದ್ರವ್ಯಗಳು ಮತ್ತು ಜೀವನಶೈಲಿಯ ಅಭ್ಯಾಸಗಳನ್ನು ಪರಿಚಯಿಸಿತು. ಮುಸ್ಲಿಂ ಗಣ್ಯರು ಮತ್ತು ಸೈನಿಕರು ರೇಷ್ಮೆ ನಿಲುವಂಗಿಗಳು, ಮಸ್ಲಿನ್ ಬಟ್ಟೆಗಳು, ಕಸೂತಿ ಮಾಡಿದ ಪೇಟಗಳು ಮತ್ತು ಅಲಂಕಾರಿಕ ಬೆಲ್ಟ್‌ಗಳಂತಹ ಸೊಗಸಾದ ಉಡುಪುಗಳನ್ನು ಧರಿಸುತ್ತಿದ್ದರು. ಇದು ಅವರ ನೋಟವನ್ನು ಆಕರ್ಷಕ ಮತ್ತು ಅತ್ಯಾಧುನಿಕವಾಗಿಸಿತು. ಅವರ ಸಂಸ್ಕರಿಸಿದ ಆಹಾರ ಪದ್ಧತಿಗಳು, ಸುಗಂಧ ದ್ರವ್ಯಗಳ ಬಳಕೆ ಮತ್ತು ಸುಸಂಘಟಿತ ಜೀವನ ಶೈಲಿಗಳು ಸ್ಥಳೀಯ ಜನರ ಮೇಲೆ ಸಾಂಸ್ಕೃತಿಕ ಪ್ರಭಾವವನ್ನು ಬೀರಿದವು.

ಸಾಂಪ್ರದಾಯಿಕವಾಗಿ ಸರಳವಾದ ಬಟ್ಟೆ ಮತ್ತು ಜೀವನಶೈಲಿಯ ಅಭ್ಯಾಸಗಳನ್ನು ಅನುಸರಿಸುತ್ತಿದ್ದ ಹಿಂದೂಗಳು ಸ್ವಾಭಾವಿಕವಾಗಿ ಈ ಹೊಸ ಪ್ರಭಾವಗಳಿಂದ ಆಕರ್ಷಿತರಾದರು. ಕಾಲಾನಂತರದಲ್ಲಿ, ಅನೇಕ ಹಿಂದೂಗಳು ವಿಶೇಷವಾಗಿ ಪಟ್ಟಣಗಳು, ವ್ಯಾಪಾರ ಕೇಂದ್ರಗಳು ಮತ್ತು ಅರಮನೆಯ ಸುತ್ತಮುತ್ತ ವಾಸಿಸುವವರು ಮುಸ್ಲಿಂ ಉಡುಗೆ ತೊಡುಗೆ, ಆಹಾರ ಮತ್ತು ಶಿಷ್ಟಾಚಾರದ ಅಂಶಗಳನ್ನು ಅಳವಡಿಸಿಕೊಳ್ಳಲು ಪ್ರಾರಂಭಿಸಿದರು. ಕ್ರಮೇಣ ಈ ಅನುಕರಣೆ ಮಧ್ಯಕಾಲೀನ ಭಾರತದಲ್ಲಿ ನಡೆಯುತ್ತಿರುವ ಸಾಂಸ್ಕೃತಿಕ ಮಿಶ್ರಣವನ್ನು ಪ್ರತಿಬಿಂಬಿಸುತ್ತದೆ. ಇದು ಅನೇಕ ಹಿಂದೂಗಳಲ್ಲಿ ದೈನಂದಿನ ಜೀವನದ ಮೇಲೆ ಪ್ರಭಾವ ಬೀರಿದವು.

೬. ಉಳಿಗಮಾನ್ಯ ಪ್ರಭುಗಳ ಸ್ಥಾನಕ್ಕೆ ಕುತ್ತಾಯಿತು:

 ಇಕ್ತಗಳೆಂದರೆ ಪ್ರಾಂತಗಳು. ಅದರ ನೇತೃತ್ವ ವಹಿಸಿದ್ದ ಇಕ್ತದಾರರು ಸರಕಾರದ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ತೆರಿಗೆಯನ್ನು ವಸೂಲಿ ಮಾಡುತ್ತಿದ್ದರು. ಹೀಗಾಗಿ ಹಿಂದೆ ಇದೇ ಕೆಲಸ ಮಾಡುತ್ತಿದ್ದ ಉಳಿಗಮಾನ್ಯ ಮುಖಂಡರು ತಮ್ಮ ಸ್ಥಾನವನ್ನು ಕಳೆದುಕೊಂಡರು. ಅವರು ಸರಕಾರದ ಸವಲತ್ತುಗಳಿಂದಲೂ ಹಾಗೂ ಜನರ ಭಯ ಭಕ್ತಿಯಿಂದಲೂ ದೂರವಾದರು.

೭. ಪರ್ದಾ ಪದ್ಧತಿಯ ಪರಿಚಯ:

ಟರ್ಕರು ಭಾರತಕ್ಕೆ ಬರುವ ಮೊದಲು ಭಾರತದಲ್ಲಿ ಪರ್ದಾ ಪದ್ಧತಿ ಜಾರಿಯಲ್ಲಿ ಇರಲಿಲ್ಲ. ಈ ಪದ್ಧತಿ ಮುಸ್ಲೀಂ ಸಮಾಜಕ್ಕೆ ಮಾತ್ರ ಮೀಸಲಾಗಿತ್ತು. ಪರಿಸ್ಥಿತಿ ಬದಲಾದಂತೆ ಹಿಂದೂಗಳು ಸಹ ಪರ್ದಾ ಪದ್ಧತಿಯನ್ನು ಅನುಸರಿಸಲು ಆರಂಭಿಸಿದರು. ಕಾರಣ ಮುಸ್ಲೀಂ ಕಾಮಾಂಧರ ಕಣ್ಣಿಗೆ ಹಿಂದೂ ಸುಂದರ ಹುಡುಗಿಯರು ಬೀಳದಿರಲಿ ಎಂಬ ಉದ್ದೇಶದಿಂದ ಈ ಪದ್ಧತಿಯನ್ನು ಅನುಸರಿಸಿದರು. ಹೀಗೆ ಭಾರತೀಯ ಸಮಾಜದಲ್ಲಿ ಪರ್ದಾ ಪದ್ಧತಿ ಕಾಲಿರಿಸಿತು.

೮. ಬಾಲ್ಯವಿವಾಹ ಜನಪ್ರಿಯವಾಯಿತು:

ಮುಸ್ಲೀಂ ರಾಜರು, ಕುಲೀನರು ಹಾಗೂ ಸೈನಿಕರು ಹಿಂದೂ ಸ್ತ್ರೀಯರನ್ನು ಬಲಾತ್ಕಾರದಿಂದ ಮದುವೆಯಾಗಲು ಆರಂಭಿಸಿದರು. ಕೆಲವರು ಹಿಂದೂ ಹುಡುಗಿಯರನ್ನು ಅಪಹರಿಸಿ ಮದುವೆಯಾಗುತ್ತಿದ್ದರು. ಈ ಕಾರಣದಿಂದ ಹಿಂದೂಗಳು ತಮ್ಮ ಹೆಣ್ಣು ಮಕ್ಕಳನ್ನು ಪ್ರೌಢಾವಸ್ಥೆಗೆ ಬರುವ ಮೊದಲೇ ಮದುವೆ ಮಾಡಿ ಮುಗಿಸುತ್ತಿದ್ದರು. ಹಿಂದೆ ಕಡಿಮೆ ಪ್ರಮಾಣದಲ್ಲಿ ಜಾರಿಯಲ್ಲಿದ್ದ ಬಾಲ್ಯವಿವಾಹ ಟರ್ಕರು ಭಾರತಕ್ಕೆ ಬಂದ ನಂತರ ಅದು ಹೆಚ್ಚು ಪ್ರಚಲಿತವಾಯಿತು. ಮುಸ್ಲೀಂರಿಂದ ತಮ್ಮ ಹೆ‍ಣ್ಣು ಮಕ್ಕಳನ್ನು ರಕ್ಷಿಸಲು ಹಿಂದೂಗಳು ಹೆಣ್ಣು ಮಗು ಜನಿಸಿದ ಕೂಡಲೇ ಅದನ್ನು ಕೊಲ್ಲುವಂತಹ ಅಮಾನುಷ ಕೃತ್ಯಕ್ಕೂ ಇಳಿದರು. ಇದರಿಂದ ಹೆಣ್ಣು ಶಿಶು ಹತ್ಯೆ ಸರ್ವೇಸಾಮಾನ್ಯವಾಯಿತು.

೯. ಮಹಿಳಾ ಸ್ವಾತಂತ್ರ್ಯಕ್ಕೆ ನಿರ್ಬಂಧ:

ಟರ್ಕರ ಸಮಾಜದಲ್ಲಿ ಮಹಿಳೆಯರಿಗೆ ಸ್ವಾತಂತ್ರ್ಯ ಇರಲಿಲ್ಲ. ಪುರುಷನಿಗೆ ಸರಿಸಮಾನವಾಗಿ ನಿಲ್ಲುವ ಹಕ್ಕು ಸ್ತ್ರೀಯರಿಗೆ ನಿರಾಕರಿಸಲಾಗಿತ್ತು. ಸಭೆ-ಸಮಾರಂಭಗಳು ಹಾಗೂ ಧಾರ್ಮಿಕ ಕಾರ್ಯಗಳಲ್ಲಿ ಅವರು ಭಾಗವಹಿಸದಂತೆ ನಿರ್ಬಂಧ ಹೇರಲಾಗಿತ್ತು. ಇದು ಭಾರತೀಯ ಹಿಂದೂಗಳ ಮೇಲೆ ಪ್ರಭಾವ ಬೀರಿತು. ತಾವು ಸಹ ಮಹಿಳೆಯರಿಗೆ ಸ್ವಾತಂತ್ರ್ಯ ನೀಡುವುದನ್ನು ನಿರ್ಬಂಧಿಸಿದರು. ಹೆಣ್ಣು ನಾಲ್ಕು ಗೋಡೆಗಳ ಮಧ್ಯೆ ಕಾಲಕಳೆಯುವಂತೆ ಮಾಡಲಾಯಿತು.

೧೦. ಸತಿಸಹಗಮನ ಹಾಗೂ ಜೋಹಾರ್‌ ಪದ್ಧತಿಯ ಜನಪ್ರಿಯತೆ:

ಟರ್ಕರ ಆಕ್ರಮಣದ ಸಂದರ್ಭದಲ್ಲಿ ಸಾವಿರಾರು ಸ್ತ್ರೀಯರನ್ನು ಅಪಹರಿಸಿಕೊಂಡು ಹೋಗಿ ಮದುವೆಯಾಗುವುದು, ಮಾರುವುದು ಹಾಗೂ ಗುಲಾಮಳನ್ನಾಗಿ ಮಾಡಿಕೊಳ್ಳುವುದು ಮುಂತಾದ ಚಟುವಟಿಕೆಗಳು ಆರಂಭವಾದವು. ಹೀಗಾಗಿ ಹಿಂದೂ ಸ್ತ್ರೀಯರು ತಮ್ಮ ಪಾವಿತ್ರ್ಯತೆಯನ್ನು ಕಾಪಾಡಿಕೊಳ್ಳಲು ಸಾಮೂಹಿಕವಾಗಿ ಅಗ್ನಿಗೆ ಹಾರಿ ಪ್ರಾಣ ಕಳೆದುಕೊಳ್ಳುವ ಜೋಹಾರ್‌ ಪದ್ಧತಿಯನ್ನು ಅನುಸರಿಸಲು ಆರಂಭಿಸಿದರು. ಜೊತೆಗೆ ಪತಿ ತೀರಿಕೊಂಡಾಗ ವೈಯಕ್ತಿಕವಾಗಿ ಪ್ರಾಣ ಕಳೆದುಕೊಳ್ಳುವ ಸತಿ ಪದ್ಧತಿಯೂ ಜನಪ್ರಿಯವಾಯಿತು.

೧೧. ಗುಲಾಮಗಿರಿಯ ಜನನ:

ಭಾರತದಲ್ಲಿ ಮುಸ್ಲಿಂ ಆಳ್ವಿಕೆಯ ಸ್ಥಾಪನೆಯು ದೊಡ್ಡ ಪ್ರಮಾಣದ ಗುಲಾಮಗಿರಿ ವ್ಯವಸ್ಥೆಯನ್ನು ಪರಿಚಯಿಸಿತು. ಇದು ಆಡಳಿತಗಾರರಲ್ಲಿ ಪ್ರತಿಷ್ಠೆ, ಸಂಪತ್ತು ಮತ್ತು ಅಧಿಕಾರದ ಗುರುತಾಯಿತು. ಅನೇಕ ಮುಸ್ಲಿಂ ರಾಜರು ಮತ್ತು ಗಣ್ಯರು ಹೆಚ್ಚಿನ ಸಂಖ್ಯೆಯ ಗುಲಾಮರನ್ನು ಹೊಂದುವುದು ತಮ್ಮ ಸಾಮಾಜಿಕ ಸ್ಥಾನಮಾನವನ್ನು ಹೆಚ್ಚಿಸುತ್ತದೆ ಎಂದು ನಂಬಿದ್ದರು. ಯುದ್ಧಗಳ ಸಮಯದಲ್ಲಿ ಸೆರೆಹಿಡಿಯಲಾದ ಸೈನಿಕರು, ಗಣ್ಯರು ಮತ್ತು ರಾಜಮನೆತನದ ಸದಸ್ಯರು ಸೇರಿದಂತೆ ಅವರನ್ನು ಹೆಚ್ಚಾಗಿ ಗುಲಾಮಗಿರಿಗೆ ತಳ್ಳಲಾಗುತ್ತಿತ್ತು ಮತ್ತು ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸುವಂತೆ ಮಾಡಲಾಗುತ್ತಿತ್ತು. ಈ ಗುಲಾಮ ವ್ಯಕ್ತಿಗಳನ್ನು ಮನೆಗಳು, ಮಿಲಿಟರಿ ಶಿಬಿರಗಳು, ಅರಮನೆಗಳು ಮತ್ತು ಆಡಳಿತಾತ್ಮಕ ಕೆಲಸಗಳಲ್ಲಿ ನೇಮಿಸಿಕೊಳ್ಳಲಾಗುತ್ತಿತ್ತು. ಇದು ವಶಪಡಿಸಿಕೊಂಡ ಪ್ರದೇಶಗಳ ಮೇಲೆ ಆಡಳಿತಗಾರರ ಪ್ರಾಬಲ್ಯವನ್ನು ಪ್ರತಿಬಿಂಬಿಸುತ್ತದೆ.

ಕಾಲಕ್ರಮೇಣ, ಕೆಲವು ಆಡಳಿತಗಾರರ ಅಡಿಯಲ್ಲಿ ಗುಲಾಮಗಿರಿಯು ಅಸಾಧಾರಣ ಪ್ರಮಾಣದಲ್ಲಿ ವಿಸ್ತರಿಸಿತು. ಅಲಾವುದ್ದೀನ್ ಖಿಲ್ಜಿ ಸುಮಾರು 84,000 ಗುಲಾಮರನ್ನು ಇಟ್ಟುಕೊಂಡಿದ್ದಾಗಿ ದಾಖಲಿಸಲಾಗಿದೆ. ಆದರೆ ಫಿರೋಜ್ ಷಾ ತುಘಲಕ್ ಇನ್ನೂ ಹೆಚ್ಚಿನ ಸಂಖ್ಯೆಯ ಗುಲಾಮರನ್ನು ಇಟ್ಟುಕೊಂಡಿದ್ದನು. ಇವನ ಹತ್ತಿರ ಸುಮಾರು 1,80,000 ಗುಲಾಮರು ಇದ್ದರು. ಈ ಗುಲಾಮರು ಸ್ಥಳೀಯ ಸೇವೆಯಿಂದ ಕೌಶಲ್ಯಪೂರ್ಣ ಕಾರ್ಮಿಕರವರೆಗೆ ಮತ್ತು ಆಡಳಿತಾತ್ಮಕ ಕಾರ್ಯಗಳವರೆಗೆ ವ್ಯಾಪಕ ಶ್ರೇಣಿಯ ಕರ್ತವ್ಯಗಳನ್ನು ನಿರ್ವಹಿಸಿದರು. ಗುಲಾಮರನ್ನಾಗಿ ಮಾಡಿಕೊಂಡ ಜನರ ಬೃಹತ್ ಸಂಖ್ಯೆಯು ಆಡಳಿತಗಾರರ ರಾಜಕೀಯ ಅಧಿಕಾರವನ್ನು ಪ್ರತಿಬಿಂಬಿಸುತ್ತದೆ. ಆದರೆ ತಮ್ಮ ಕುಟುಂಬಗಳಿಂದ ಬಲವಂತವಾಗಿ ಕರೆದೊಯ್ಯಲ್ಪಟ್ಟವರು ಮತ್ತು ಜೀವನದುದ್ದಕ್ಕೂ ಸೇವೆ ಸಲ್ಲಿಸಲು ಒತ್ತಾಯಿಸಲ್ಪಟ್ಟವರು ಎದುರಿಸಿದ ಕಠೋರ ವಾಸ್ತವಗಳನ್ನು ಸಹ ಎತ್ತಿ ತೋರಿಸುತ್ತದೆ.

4) ಧಾರ್ಮಿಕ ಬದಲಾವಣೆಗಳು:

ಟರ್ಕರು ಭಾರತಕ್ಕೆ ಆಗಮಿಸಿದ ನಂತರ ಭಾರತೀಯ ಧಾರ್ಮಿಕ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳು ಕಂಡುಬಂದವು. ಅವುಗಳು ಈ ರೀತಿಯಾಗಿವೆ.

೧. ಇಸ್ಲಾಂ ಧರ್ಮದ ಪ್ರಚಾರ:

ಮುಸಲ್ಮಾನರು ಭಾರತದಲ್ಲಿ ನೆಲೆಯೂರಿದ ನಂತರ ಇಸ್ಲಾಂ ಧರ್ಮವು ಹೆಚ್ಚು ಬಲಿಷ್ಠವಾಗುತ್ತಾ ಹೊರಟಿತು.  ಅವರ ಮತಾಂತರ ಕಾರ್ಯಕ್ಕೆ ವೇಗ ಬಂದಿತು. ಏಕೆಂದರೆ ಅನೇಕ ಮುಸ್ಲೀಂ ರಾಜರುಗಳು ಹಿಂದೂಗಳಿಗೆ ಅನೇಕ ಆಸೆ ಆಮಿಷಗಳನ್ನು ಒಡ್ಡಿ ಅವರನ್ನು ಇಸ್ಲಾಂ ಧರ್ಮಕ್ಕೆ ಮತಾಂತರಗೊಳಿಸಿದರು. ಹಿಂದೂ ದೇವಾಲಯಗಳನ್ನು ಭಗ್ನಗೊಳಿಸಿದರು. ಕೆಲವರಂತೂ ಮೂರ್ತಿಭಂಜಕರು ಎಂಬ ಬಿರುದನ್ನೇ ಪಡೆದರು. ಹಿಂದೂಗಳ ಮೇಲೆ ಅಮಾನವೀಯ ತೆರಿಗೆಗಳನ್ನು ಹೇರಿದರು. ತೆರಿಗೆ ನೀಡಲು ಅಸಮರ್ಥರಾದವರು ಇಸ್ಲಾಂ ಧರ್ಮವನ್ನು ಸ್ವೀಕರಿಸಿದರು. ಇಸ್ಲಾಂನ ಏಕೀಶ್ವರ ವಾದವು ಅನೇಕ ಹಿಂದೂಗಳನ್ನು ಆಕರ್ಷಿಸಿತು. ಇಸ್ಲಾಂ “ರಾಜ್ಯ ಧರ್ಮ” (State Religion)ವಾಯಿತು. ಹಿಂದೂ ಧರ್ಮದಲ್ಲಿ ಸಾವಿರಾರು ವರ್ಷಗಳಿಂದ ಎಲ್ಲಾ ರೀತಿಯ ಅಮಾನುಷ ಅಸಮಾನತೆಯನ್ನು ಅನುಭವಿಸಿದವರು ಇಸ್ಲಾಂ ಧರ್ಮಕ್ಕೆ ಆಕರ್ಷಿತರಾಗಿ ಮತಾಂತರವಾದರು. ಇದರಿಂದ ಭಾರತೀಯ ಸಮಾಜದಲ್ಲಿದ್ದ ಕೆಲವೊಂದು ಅನಿಷ್ಟ ಪದ್ಧತಿಗಳು ತೊಲಗಲು ಆರಂಭಿಸಿದವು. ಪರಿಣಾಮವಾಗಿ ಬ್ರಾಹ್ಮಣರ ಸ್ಥಾನಮಾನಗಳು ಕುಸಿದು ಹೋದವು.

೨. ಧಾರ್ಮಿಕ ಮತ್ತು ಸಾಮಾಜಿಕ ಸಹಿಷ್ಣುತೆಗೆ ಚಾಲನೆ ಸಿಕ್ಕಿತು:

ಆರಂಭದಲ್ಲಿ ಹಿಂದೂ-ಮುಸಲ್ಮಾನರಲ್ಲಿ ಸಾಕಷ್ಟು ಭಿನ್ನತೆಗಳು ಕಂಡುಬಂದವು. ಆದರೆ ಕಾಲಾನಂತರ ಅವರು ಹೊಂದಾಣಿಕೆಯ ಗುಣಗಳನ್ನು ಅಳವಡಿಸಿಕೊಂಡರು. ಮತಾಂಧತೆ ಭಾವನೆಗಳನ್ನು ತೊಲಗಿಸಿ ಸಮತಾಭಾವನೆಯನ್ನು ರೂಢಿಸಿಕೊಂಡರು. ಭಕ್ತಿಸಂತರ ಬೋಧನೆಗಳಿಂದ ಇಬ್ಬರೂ ಪ್ರಭಾವಿತರಾದರು. ಮುಸಲ್ಮಾನರ ಧಾರ್ಮಿಕ ಚಿಂತನೆಗಳು ಹಾಗೂ ಆಚರಣೆಗಳನ್ನು ಹಿಂದೂಗಳು, ಹಿಂದೂಗಳ ಧಾರ್ಮಿಕ ಚಿಂತನೆ ಹಾಗೂ ಆಚರಣೆಗಳನ್ನು ಮುಸಲ್ಮಾನರು ಅಳವಡಿಸಿಕೊಳ್ಳಲು ಆರಂಭಿಸಿದರು. ಆರಂಭದಲ್ಲಿ “ ನ ರೋಟಿ ನ ಬೇಟಿ” ಎಂಬ ನೀತಿಯನ್ನು ಅನುಸರಿಸಿದ ಹಿಂದೂ-ಮುಸಲ್ಮಾನರು ಕಾಲ ಕ್ರಮೇಣ ಮದುವೆ ಹಾಗೂ ಊಟೋಪಚಾರಗಳಲ್ಲಿ ಹೊಂದಾಣಿಕೆಯನ್ನು ಮಾಡಿಕೊಂಡರು. ಮುಸಲ್ಮಾನರ ಉಡುಗೆ-ತೊಡುಗೆ, ಆಹಾರ ಪದ್ಧತಿಯನ್ನು ಹಿಂದೂಗಳು, ಹಿಂದೂಗಳ ಆಹಾರ ಪದ್ಧತಿ, ವೇಷ ಭೂಷಣಗಳನ್ನು ಮುಸಲ್ಮಾನರು ರೂಢಿಸಿಕೊಂಡರು.

೩. ಭಕ್ತಿ ಹಾಗೂ ಸೂಫಿ ಪಂಥಗಳ ಬೆಳವಣಿಗೆ:

ಆರಂಭದಲ್ಲಿ ಹಿಂದೂ-ಮುಸಲ್ಮಾನರ ನಡುವೆ ದೊಡ್ಡದಾದ ಧಾರ್ಮಿಕ ಕಂದಕವೇ ಏರ್ಪಟ್ಟಿತ್ತು. ಇಂತಹ ಕಂದಕವನ್ನು ದೂರಮಾಡಿ ಅವರಿಬ್ಬರಲ್ಲಿ ಸಹೋದರ ಭಾವನೆಯನ್ನು ಮೂಡಿಸಲು ಭಕ್ತಿಪಂಥ ಹಾಗೂ ಸೂಫಿ ಪಂಥಗಳು ಪ್ರಯತ್ನಿಸಿದವು. ಭಕ್ತಿಪಂಥ ಹಾಗೂ ಸೂಫಿ ಪಂಥಗಳ ಸಂತರು ದೇವರ ಏಕತೆ, ಸಮಾನತೆ, ಸರಳ ಮತಾಚರಣೆಗಳನ್ನು ಬೋಧಿಸಿದರು. ಇವುಗಳು ಹಿಂದೂ-ಮುಸ್ಲೀಂರ ಮೇಲೆ ತೀವ್ರ ಪರಿಣಾಮಗಳನ್ನು ಬೀರಿದವು. ಇವರ ಚಿಂತನೆಗಳು ಜನರ ನಡುವೆ ಸುಸ್ಥಿರ ಮನೋಭಾವನೆಯ ಬೆಳವಣಿಗೆಗೆ ಕಾರಣವಾದವು.

೪. ಬೌದ್ಧ ಧರ್ಮದ ಅವನತಿ:

ಭಾರತಕ್ಕೆ ಬಂದ ಮುಸಲ್ಮಾನರು ಭೌದ್ಧ ಧರ್ಮ ಹಾಗೂ ಅದರ ಅಹಿಂಸಾ ನೀತಿಯನ್ನು ವಿರೋಧಿಸಿದರು. ಹೀಗಾಗಿ ಮುಸಲ್ಮಾನರು ಸಾವಿರಾರು ಬೌದ್ಧರನ್ನು ಸೆರೆ ಹಿಡಿದು ಕುರಿಗಳನ್ನು ಕಡಿದಂತೆ ಕಡಿದು ಹಾಕಿದರು. ಹಿಂದೂಗಳು ಸಹ ಅಹಿಂಸಾ ನೀತಿಯನ್ನು ಒಪ್ಪಿಕೊಳ್ಳದೆ ಅದರಿಂದ ದೂರವಾದರು.

5) ಸಾಂಸ್ಕೃತಿಕ ಬದಲಾವಣೆಗಳು:

ಟರ್ಕರ ಆಗಮನದಿಂದ ಭಾರತೀಯ ಸಮಾಜದ ಸಾಂಸ್ಕೃತಿಕ ಬದಲಾವಣೆಗಳು ಈ ಕೆಳಗಿನಂತಿವೆ.

೧. ಉರ್ದು ಭಾಷೆಯ ಉಗಮ:

ಮುಸ್ಲೀಂ ಆಕ್ರಮಣಕಾರರು ಅಂದು ಪರ್ಶಿಯನ್‌ ಹಾಗೂ ಅರೇಬಿಕ್‌ ಭಾಷೆಗಳನ್ನು ಮಾತನಾಡುತ್ತಿದ್ದರು. ಹಾಗೆಯೇ ಹಿಂದೂಗಳು ಸಂಸ್ಕೃತ ಭಾಷೆಯನ್ನು ಜನಪ್ರಿಯಗೊಳಿಸಿದ್ದರು. ಭಾರತಕ್ಕೆ ಬಂದ ಮುಸಲ್ಮಾನರು ಹಾಗೂ ಭಾರತೀಯ ಹಿಂದೂಗಳು ಇವರಿಬ್ಬರಿಗೂ ಒಂದೇ ಭಾಷೆಯ ಅಗತ್ಯವಿತ್ತು. ಹೀಗಾಗಿ ಹಿಂದೂ-ಮುಸ್ಲೀಂರ ಸಮ್ಮಿಲನದ ಫಲಶೃತಿಯಾಗಿ ಉರ್ದುಭಾಷೆ ಉಗಮಗೊಂಡಿತು. ಉರ್ದು ಜನರ ಆಡುಭಾಷೆಯಾಗಿ ಜನಪ್ರಿಯತೆಗಳಿಸಿತು. ಅನೇಕ ಮುಸ್ಲೀಂ ಕವಿಗಳು ಹಿಂದಿಯಲ್ಲಿಯೂ ಹಾಗೂ ಅನೇಕ ಹಿಂದೂ ಕವಿಗಳು ಉರ್ದುವಿನಲ್ಲಿ ಕವಿತೆ, ಗೀತೆ ಹಾಗೂ ಕೃತಿಗಳನ್ನು ರಚಿಸಿದರು.

೨. ಹಿಂದವಿ ಭಾಷೆಯ ಬೆಳವಣಿಗೆ :

ಹಿಂದವಿ ಭಾಷೆಯು ೧೦ ರಿಂದ ೧೩ನೇ ಶತಮಾನಗಳ ಸುಮಾರಿಗೆ ದೆಹಲಿ ಪ್ರದೇಶದಲ್ಲಿ ಮಾತನಾಡುತ್ತಿದ್ದ ಅಪಭ್ರಂಶ ಉಪಭಾಷೆಗಳಿಂದ ಹೊರಹೊಮ್ಮಿತು. ಇದೇ ಹೊತ್ತಿನಲ್ಲಿ ದೆಹಲಿ ಸುಲ್ತಾನರ ಆಳ್ವಿಕೆಯೂ ಪ್ರಾರಂಭವಾಗಿ ಇಂಡೋ ಆರ್ಯನ್‌ ಉಪಭಾಷೆಗಳನ್ನು ಪರ್ಶಿಯನ್‌ ಮತ್ತು ಅರೇಬಿಕ್‌ ಪದಗಳೊಂದಿಗೆ ಬೆರೆಸಿ ಮಾತನಾಡುವ ಪ್ರಕ್ರಿಯೆಯಿಂದಾಗಿ ಹಿಂದವಿ ಸಾಕಷ್ಟು ಬೆಳೆಯಿತು. ಪರ್ಶಿಯನ್‌ ಆಡಳಿತಗಾರರು ಮತ್ತು ಅಮೀರ್‌ ಖುಸ್ರು ಮುಂತಾದ ಕವಿಗಳು ವಿಶಿಷ್ಟವಾಗಿ ಬೆಳವಣಿಗೆಯಾಗುತ್ತಿರುವ ಈ ಭಾಷೆಯನ್ನು  ಹಿಂದವಿ ಅಥವಾ ದಹ್ಲವಿ ಎಂದು ಕರೆದರು. ಇದು ಆಧುನಿಕ ಹಿಂದಿ ಮತ್ತು ಉರ್ದುವಿನ ಹಿಂದಿನ ಬೆಳವಣಿಗೆಯ ಆರಂಭಿಕ ಹಂತವಾಗಿದೆ.(ಪೂರ್ವಜವಾಗಿದೆ).  

೩. ಇಂಡೋ-ಸಾರ್ಸೆನಿಕ್‌ ಶೈಲಿಯ ಉದಯ:

ಹಿಂದೂ ಮುಸ್ಲೀಂ ಸಂಸ್ಕೃತಿಯ ಬೆರೆಕೆಯ ಪರಿಣಾಮವಾಗಿ ಇಂಡೋ-ಇಸ್ಲಾಮಿಕ್‌ ಅಥವಾ ಇಂಡೋ-ಸಾರ್ಸೆನಿಕ್‌ ಎಂಬ ಹೊಸಶೈಲಿ ಉಗಮಗೊಂಡಿತು. ಕಾಲಾನಂತರ ಹಿಂದೂಸ್ತಾನಿ ಸಂಗೀತವು ಸಹ ಬೆಳವಣಿಗೆಯಾಯಿತು. ಮುಸಲ್ಮಾನರು ಹಿಂದೂ ದೇವಾಲಯಗಳನ್ನು ನಾಶಗೊಳಿಸಿ ಅದರ ಮೇಲೆ ಮಸೀದಿಯನ್ನು ನಿರ್ಮಿಸಿ ಅದಕ್ಕೆ ಇಂಡೋ- ಸಾರ್ಸೆನಿಕ್‌ ಕಲೆಯ ರೂಪವನ್ನು ನೀಡಿದರು.

೪. ಹಿಂದೂ ಹಬ್ಬಗಳ ಮತ್ತು ಸಂಪ್ರದಾಯ ಆಚರಣೆಗಳ ಅನುಸರಣೆ:

ಮುಸಲ್ಮಾನರು ಹಿಂದೂ ಧಾರ್ಮಿಕ ಪದ್ಧತಿ ಹಾಗೂ ರೂಢಿ ಸಂಪ್ರದಾಯಗಳಿಂದ ಪ್ರಭಾವಿತರಾಗಿದ್ದರು. ಉದಾ: ಅಖೀಬಾ ಹಾಗೂ ಬಿಸ್ಮಿಲ್ಲಾ ಪದ್ಧತಿಯ ಆಚರಣೆಗಳು, ಹಿಂದೂಗಳ ಚೌಲಕರ್ಮ ಹಾಗೂ ಉಪನಯನ ಕಾರ್ಯಕ್ರಮ ನಡೆಸುವ ರೀತಿಯಲ್ಲಿ ಆಚರಿಸಲಾಗುತ್ತಿತ್ತು. ಶಿವರಾತ್ರಿ ಹಬ್ಬದಂತೆ ಷಬ್-ಎ-ಬರಾತ್‌ ಹಬ್ಬವನ್ನು ಆಚರಿಸುತ್ತಿದ್ದರು. ಹಿಂದೂಗಳಲ್ಲಿದ್ದ ಸಾಧು ಸಂತರನ್ನು ಪೂಜಿಸುವುದು, ಅವರ ಸಮಾಧಿ ಸ್ಥಳಗಳಿಗೆ ಭೇಟಿ ನೀಡುವುದು ಮುಂತಾದ ಪದ್ಧತಿಗಳನ್ನು ಮುಸಲ್ಮಾನರೂ ಸಹ ಅಳವಡಿಸಿಕೊಂಡರು. ಹಿಂದೂ ಚಿಂತನೆಗಳು ಸಹ ಮುಸಲ್ಮಾನರಲ್ಲಿ ಆಳವಾಗಿ ಬೇರೂರಿದವು. ಕೆಲವು ಮುಸಲ್ಮಾನರು ಮಾತ್ರ ಬಹುಪತ್ನಿತ್ವವನ್ನು ಕೈಬಿಟ್ಟು ಏಕಪತ್ನಿ ಪದ್ಧತಿಯನ್ನು ಅನುಸರಿಸಿದರು. ಹಿಂದೂ ವಿವಾಹ ಪದ್ಧತಿಯಂತೆ ಮುಸಲ್ಮಾನರೂ ಸಹ ತಮ್ಮಲ್ಲಿ ಅನುಸರಿಸಿದರು. ಹಿಂದೂ ರಾಜರು ತುಲಾಭಾರ ಮಾಡಿಸಿಕೊಳ್ಳುವಂತೆ ಮುಸಲ್ಮಾನ ರಾಜರು ಸಹ ತುಲಾಭಾರವನ್ನು ಮಾಡಿಸಿಕೊಳ್ಳಲು ಆರಂಭಿಸಿದರು.

೫. ಜ್ಞಾನ ಕೇಂದ್ರಗಳಾದ ವಿಶ್ವವಿದ್ಯಾನಿಲಯಗಳ ಅವನತಿ:

ಪ್ರಾಚೀನ ಕಾಲದ ಪ್ರಸಿದ್ಧ ಕಲಿಕಾ ಕೇಂದ್ರಗಳಾದ ನಲಂದಾ, ತಕ್ಷಶಿಲಾ, ವಿಕ್ರಮಶಿಲಾ, ಉಜ್ಜಯಿನಿ, ಕಾಶಿ ಮುಂತಾದವುಗಳು ಟರ್ಕರ ದಾಳಿಗೆ ಸಿಕ್ಕು ಹೇಳ ಹೆಸರಿಲ್ಲದಂತೆ ನಾಶವಾದವು. ಅಲ್ಲಿನ ಅಮೂಲ್ಯ ಗ್ರಂಥ ಭಂಡಾರವನ್ನು ಟರ್ಕರು ಬೆಂಕಿಗೆ ಹಾಕಿ ಸುಟ್ಟರು.

೬.  ʻಘಜ್ನಿʼ ನಗರಕ್ಕೆ  ಆಧುನಿಕತೆಯ ಸ್ಪರ್ಶ:

ಘಜ್ನಿಯ ಮಹಮ್ಮದ್ ಆಳ್ವಿಕೆಯಲ್ಲಿ ಘಜ್ನಿ ನಗರವು ಗಮನಾರ್ಹ ರೂಪಾಂತರಕ್ಕೆ ಒಳಗಾಯಿತು. ಇದಕ್ಕೆ ಹೆಚ್ಚಾಗಿ ಅವನು ಭಾರತದಿಂದ ಲೂಟಿ ಮಾಡಿದ ಅಪಾರ ಸಂಪತ್ತಿನ ಹಣಕಾಸು ಒದಗಿಸಿದನು. ಈ ನಿಧಿಯಿಂದ, ಘಜ್ನಿಯನ್ನು ಸುಂದರಗೊಳಿಸಲಾಯಿತು ಮತ್ತು ಅದರ ಕಾಲಕ್ಕೆ ತಕ್ಕ ಶಕ್ತಿ, ಅತ್ಯಾಧುನಿಕತೆಯನ್ನು ಪ್ರತಿಬಿಂಬಿಸುವ ಭವ್ಯವಾದ, ಪ್ರವರ್ಧಮಾನಕ್ಕೆ ಬಂದ ರಾಜಧಾನಿಯಾಗಿ ಅಭಿವೃದ್ಧಿಪಡಿಸಲಾಯಿತು. ಘಜ್ನವಿಡ್ ಸಾಮ್ರಾಜ್ಯದ ವೈಭವವನ್ನು ಪ್ರದರ್ಶಿಸಲು ಭವ್ಯವಾದ ಅರಮನೆಗಳು, ಎತ್ತರದ ಮಸೀದಿಗಳು, ಉದ್ಯಾನಗಳು, ಅಮೃತಶಿಲೆಯ ರಚನೆಗಳು ಮತ್ತು ಕಲಾತ್ಮಕ ಸ್ಮಾರಕಗಳನ್ನು ನಿರ್ಮಿಸಲಾಯಿತು. ವಿವಿಧ ಪ್ರದೇಶಗಳಿಂದ ನುರಿತ ವಾಸ್ತುಶಿಲ್ಪಿಗಳು, ಕುಶಲಕರ್ಮಿಗಳು, ಕವಿಗಳು ಮತ್ತು ವಿದ್ವಾಂಸರನ್ನು ಆಹ್ವಾನಿಸಲಾಯಿತು, ಘಜ್ನಿಯನ್ನು ಸಂಸ್ಕೃತಿ, ಕಲಿಕೆ ಮತ್ತು ಆಡಳಿತದ ರೋಮಾಂಚಕ ಕೇಂದ್ರವನ್ನಾಗಿ ಮಾಡಲಾಯಿತು. ಹೀಗಾಗಿ, ಭಾರತದಿಂದ ತೆಗೆದುಕೊಂಡ ಹೋದ (ಲೂಟಿ ಮಾಡಿದ) ಸಂಪತ್ತು ಘಜ್ನಿ ಎಂಬ ನಗರಕ್ಕೆ ಹೊಸ, ಆಧುನಿಕ ಮತ್ತು ಭವ್ಯವಾದ ಗುರುತನ್ನು ಮತ್ತು ಆಧುನಿಕ ಸ್ಪರ್ಶವನ್ನು ನೀಡುವಲ್ಲಿ ನಿರ್ಣಾಯಕ ಪಾತ್ರ ವಹಿಸಿತು. ಅದನ್ನು ಮಧ್ಯಕಾಲೀನ ಇಸ್ಲಾಮಿಕ್ ಪ್ರಪಂಚದ ಅತ್ಯಂತ ವೈಭವದ  ರಾಜಧಾನಿಗಳಲ್ಲಿ ಒಂದನ್ನಾಗಿ ಪರಿವರ್ತಿಸಲಾಯಿತು.

ಉಪಸಂಹಾರ

ಟರ್ಕರ ಆಡಳಿತದ ಅವಧಿಯಲ್ಲಿ ಹಿಂದೂ ಮತ್ತು ಮುಸ್ಲಿಂ ಸಂಸ್ಕೃತಿಗಳ ನಡುವಿನ ಪರಸ್ಪರ ಸಂಬಂಧವು ಸಹಕಾರ ಮತ್ತು ಸಂಘರ್ಷ ಎರಡನ್ನೂ ತಂದಿತು. ಹಲವಾರು ಕಾರಣಗಳಿಂದ ಹಿಂದೂ ಮುಸ್ಲೀಂ ಸಂಸ್ಕೃತಿಗಳು ಸಂಪೂರ್ಣ ಬೆರೆಯಲಿಲ್ಲ.

ಅನೇಕ ಮುಸ್ಲಿಂ ಆಡಳಿತಗಾರರು ಮತಾಂತರವನ್ನು ಪ್ರೋತ್ಸಾಹಿಸುವ ನೀತಿಗಳನ್ನು ಅನುಸರಿಸಿದರು, ಹಿಂದೂ ಸಮಾಜದ ಮೇಲೆ ಕುರಾನ್‌ನ ತತ್ವಗಳನ್ನು ಜಾರಿಗೊಳಿಸಿದರು, ಗೋಹತ್ಯೆಯನ್ನು ಅನುಮತಿಸಿದರು ಮತ್ತು ಕೆಲವೊಮ್ಮೆ ಹಿಂಸೆ ಅಥವಾ ತಾರತಮ್ಯಕ್ಕೆ ಕಾರಣವಾಗುವ ಇಸ್ಲಾಮಿಕ್ ಕಾನೂನುಗಳನ್ನು ಹೇರಿದರು. ಈ ಅಂಶಗಳು ಸಮಾಜದ ಉನ್ನತ ಹಂತಗಳಲ್ಲಿ ಪೂರ್ಣ ಸಾಂಸ್ಕೃತಿಕ ಸಾಮರಸ್ಯಕ್ಕೆ ಅಡೆತಡೆಗಳನ್ನು ಸೃಷ್ಟಿಸಿದವು.

ಆದಾಗ್ಯೂ, ಟರ್ಕರ ಆಕ್ರಮಣವು ಭಾರತದಲ್ಲಿ ಹೊಸ ರಾಜಕೀಯ ಮತ್ತು ಸಾಂಸ್ಕೃತಿಕ ಯುಗದ ಆರಂಭವನ್ನು ಗುರುತಿಸಿತು. ದೆಹಲಿ ಸುಲ್ತಾನರು ಭಾರತೀಯ ಆಡಳಿತವನ್ನು ಮರುರೂಪಿಸಿದ ಬಲವಾದ, ಕೇಂದ್ರೀಕೃತ ಆಡಳಿತವನ್ನು ಪರಿಚಯಿಸಿದರು. ಅವರ ಆಗಮನವು ಇಸ್ಲಾಂ ಧರ್ಮದ ಹರಡುವಿಕೆಯನ್ನು ಪ್ರೋತ್ಸಾಹಿಸಿತು ಮತ್ತು ಸಾಂಸ್ಕೃತಿಕ ವಿನಿಮಯಕ್ಕೆ ಮಾರ್ಗಗಳನ್ನು ತೆರೆಯಿತು. ಈ ಅವಧಿಯು ಕಲೆ, ವಾಸ್ತುಶಿಲ್ಪ, ಸಾಹಿತ್ಯ, ನಗರಾಭಿವೃದ್ಧಿ ಮತ್ತು ಮಿಲಿಟರಿ ತಂತ್ರಗಳಲ್ಲಿ ಗಮನಾರ್ಹ ಬೆಳವಣಿಗೆಗೆ ಸಾಕ್ಷಿಯಾಯಿತು, ಇದರಲ್ಲಿ ಅಶ್ವಸೈನ್ಯದ ಬಳಕೆ, ಹೊಸ ಶಸ್ತ್ರಾಸ್ತ್ರಗಳು ಮತ್ತು ಮುಂದುವರಿದ ಯುದ್ಧ ತಂತ್ರಗಳು ಸೇರಿವೆ. ಟರ್ಕರ ಆಕ್ರಮಣದಿಂದಾಗಿ ಮೇಲಿನ ಸ್ತರದಲ್ಲಿ ಹಿಂದೂ ಮತ್ತು ಮುಸ್ಲಿಂರ ನಡುವೆ ಘರ್ಷಣೆಯ ವಾತಾವರಣವಿತ್ತು. ಆದರೆ ಕೆಳಸ್ತರದಲ್ಲಿ (ಆಂತರ್ಯದಲ್ಲಿ) ಸಾಮಾನ್ಯ ಹಿಂದು ಮತ್ತು ಮುಸ್ಲಿಂರ ನಡುವೆ ಒಡನಾಟ, ಪರಸ್ಪರ ನಂಬಿಕೆ, ವಿಶ್ವಾಸಗಳು ನೆಲೆಯೂರ ತೊಡಗಿದವು. ಇದು ವಿಶಿಷ್ಟ ಪರಸ್ಪರ ಸಾಂಸ್ಕೃತಿಕ ಅನುಭವಕ್ಕೆ ಅಡಿಪಾಯ ಹಾಕಿತು. ಹೀಗಾಗಿ, ಟರ್ಕರ ಪ್ರಭಾವವು ಭಾರತದ ರಾಜಕೀಯ ರಚನೆ, ಸಾಂಸ್ಕೃತಿಕ ಜೀವನ ಮತ್ತು ಸಾಮಾಜಿಕ ವಿಕಾಸದ ಮೇಲೆ ಆಳವಾದ ಮತ್ತು ಶಾಶ್ವತವಾದ ಪ್ರಭಾವವನ್ನು ಬೀರಿತು.

ಸಿಂಧೂ ಕಣಿವೆ ನಾಗರಿಕತೆಯ ಧಾರ್ಮಿಕ ಜೀವನ

ಸಿಂಧೂ ಕಣಿವೆ ನಾಗರಿಕತೆಯ ಧಾರ್ಮಿಕ ಜೀವನ

ಪೀಠಿಕೆ

ಪ್ರಪಂಚದ ಅತ್ಯಂತ ಹಳೆಯ ನಗರ ನಾಗರೀಕತೆಯಲ್ಲಿ ಸಿಂಧೂ ಕಣಿವೆ ನಾಗರಿಕತೆಯು ಒಂದಾಗಿದೆ. ಇದು ತನ್ನ ಜನರ ಮೌಲ್ಯಗಳು ಮತ್ತು ಕಾಳಜಿಗಳನ್ನು ಪ್ರತಿಬಿಂಬಿಸುವ ಧಾರ್ಮಿಕ ನಂಬಿಕೆಗಳು ಮತ್ತು ಆಚರಣೆಗಳಿಂದ ಶ್ರೀಮಂತವಾಗಿದೆ. ನಾವು ಮಾತೃ ದೇವತೆ, ಪಶುಪತಿ, ಪ್ರಕೃತಿಯ ಆರಾಧನೆಗಳು ಮತ್ತು ಶವ ಸಂಸ್ಕಾರ ಪದ್ಧತಿಗಳ ಮೂಲಕ ಅವರ ಧಾರ್ಮಿಕ ಜೀವನದ ಮಹತ್ವದ ಅಂಶಗಳನ್ನು ತಿಳಿಯುತ್ತೇವೆ.

ಧಾರ್ಮಿಕ ಜೀವನದ ಪ್ರಮುಖ ಅಂಶಗಳು

  1. ಮಾತೃದೇವತೆಯ ಆರಾಧನೆ

ಮಾತೃದೇವತೆ ಸಿಂಧೂ ಜನರ ಪ್ರಧಾನ ಆರಾಧನಾ ದೇವತೆಯಾಗಿದ್ದಿತು. ಸಾಕಷ್ಟು ಸಂಖ್ಯೆಯಲ್ಲಿ ಇಲ್ಲಿ ದೊರೆತಿರುವ ಸ್ತ್ರೀಮೂರ್ತಿಗಳು ಇದನ್ನು ಪುಷ್ಠಿಕರಿಸುತ್ತಿವೆ. ಮಾತೃದೇವತೆಯನ್ನು ಇವರು ಶಕ್ತಿ, ದುರ್ಗಿ, ಅಮ್ಮ ಹಾಗೂ ಅಂಬೆ ಎಂಬ ವಿವಿಧ ಹೆಸರುಗಳಿಂದ ಪೂಜಿಸುತ್ತಿದ್ದರು. ಮಾತೃ ದೇವತೆಯ ಆರಾಧನೆ, ಫಲವತ್ತತೆ ಮತ್ತು ಮಾತೃತ್ವದ ಸಂಕೇತವಾಗಿ ಪೂಜಿಸಲ್ಪಟ್ಟಿದೆ. ಈ ಆರಾಧನೆಯು ಅವರ ಸಮಾಜದಲ್ಲಿ ಮಹಿಳೆಯರ ಮಹತ್ವದ ಪಾತ್ರವನ್ನು ತೋರಿಸುತ್ತದೆ.

  1. ಪಶುಪತಿಯ ಆರಾಧನೆ

ಸಿಂಧೂ ಕಣಿವೆಯ ಧಾರ್ಮಿಕ ಆಚರಣೆಗಳಲ್ಲಿ ಪ್ರಮುಖ ವ್ಯಕ್ತಿ ಪಶುಪತಿ, ಆಗಾಗ್ಗೆ ಯೋಗಿ ಎಂದು ಚಿತ್ರಿಸಲಾಗಿದೆ. ಹರಪ್ಪಾ, ಮೊಹೆಂಜೋದಾರೋ ಮತ್ತು ಕಾಲಿಬಂಗನ್‌ನ ಮುದ್ರೆಗಳು ಪದ್ಮಾಸನದಲ್ಲಿ ಕುಳಿತಿರುವ ಮೂರು ಕೊಂಬಿನ ಯೋಗಿಯ ಚಿತ್ರಗಳನ್ನು ಬಹಿರಂಗಪಡಿಸುತ್ತವೆ. ಈ ಯೋಗಿಯು ತಲೆಯಲ್ಲಿ ಮೂರು ಕೊಂಬುಗಳನ್ನು ಹೊಂದಿದ್ದು ಕೈಯಲ್ಲಿ ತ್ರಿಶೂಲ ಹಾಗೂ ನಾಲ್ಕು ಕೈಗಳಿವೆ.  .ಯೋಗಿಯ ಸುತ್ತಲೂ ವಿವಿಧ ಪ್ರಾಣಿಗಳು ಸುತ್ತುವರಿದಿದೆ. ವಿದ್ವಾಂಸರು ಈ ಯೋಗಿಯನ್ನು ʻಪಶುಪತಿ’ ಅಥವಾ ʻತ್ರಿಮೂರ್ತಿ’ ಎಂದು ಉಲ್ಲೇಖಿಸಿದ್ದಾರೆ.

  1. ಪ್ರಕೃತಿ ಮತ್ತು ಪ್ರಾಣಿಗಳ ಆರಾಧನೆ

ಸಿಂಧೂ ಜನರು ಪ್ರಕೃತಿ ಹಾಗೂ ಪ್ರಾಣಿಗಳ ಆರಾಧಕರಾಗಿದ್ದರು. ಅವರು ಅವುಗಳ ಬಗ್ಗೆ ಆಳವಾದ ಗೌರವವನ್ನು ಹೊಂದಿದ್ದರು, ಅವರು ಬೆಂಕಿ, ನದಿಗಳು, ಭೂಮಿ ಮತ್ತು ಆಕಾಶವನ್ನು ಪ್ರತಿನಿಧಿಸುವ ವಿವಿಧ ನೈಸರ್ಗಿಕ ದೇವತೆಗಳನ್ನು ಸಾಮಾನ್ಯವಾಗಿ ಭಯ ಮತ್ತು ಭಕ್ತಿಯ ಮಿಶ್ರಣದಿಂದ ಪೂಜಿಸಿದರು. ಗೂಳಿಯನ್ನು ಪವಿತ್ರವೆಂದು ಪರಿಗಣಿಸಿದ್ದರು. ಇದು ಶಕ್ತಿ ಮತ್ತು ಫಲವತ್ತತೆಯನ್ನು ಸಂಕೇತಿಸುತ್ತದೆ. ಪಾರಿವಾಳಗಳಂತಹ ಪಕ್ಷಿಗಳು ಸಹ ಧಾರ್ಮಿಕ ಪ್ರಾಮುಖ್ಯತೆಯನ್ನು ಹೊಂದಿದ್ದವು, ಜೊತೆಗೆ ಅಶ್ವತ್ಥ ಮರವನ್ನು ಪವಿತ್ರ ಮರವೆಂದು ನಂಬಿದ್ದರು. ಇದು ಪ್ರಾಣಿಗಳು ಮತ್ತು ಪ್ರಕೃತಿಯೊಂದಿಗೆ ನಾಗರಿಕತೆಯ ಆಳವಾದ ಸಂಬಂಧವನ್ನು ಸೂಚಿಸುತ್ತದೆ, ಅಲ್ಲದೇ ಆಧ್ಯಾತ್ಮಿಕ ಅರ್ಥವನ್ನು ದ್ವನಿಸುತ್ತದೆ.

  1. ಶವಸಂಸ್ಕಾರದ ಆಚರಣೆಗಳು

ಸಿಂಧೂ ಕಣಿವೆ ನಾಗರಿಕತೆಯ ಜನರು ವಿಶಿಷ್ಟವಾದ ಶವಸಂಸ್ಕಾರ ಪದ್ಧತಿಗಳನ್ನು ಹೊಂದಿದ್ದರು. ಇದು ಜೀವನ, ಸಾವು ಮತ್ತು ಮರಣಾನಂತರದ ಜೀವನದ ಬಗ್ಗೆ ಅವರ ನಂಬಿಕೆಗಳನ್ನು ಪ್ರದರ್ಶಿಸುತ್ತದೆ. ಹರಪ್ಪಾದಲ್ಲಿ ಮಾರ್ಟಿಮರ್ ವೀಲರ್ ನೇತೃತ್ವದ ಉತ್ಖನನವು ಸತ್ತವರ ಸಂಸ್ಕಾರದ ಬಗ್ಗೆ ಅವರು ಅನುಸರಿಸುತ್ತಿದ್ದ ವಿವಿಧ ವಿಧಾನಗಳನ್ನು ತಿಳಿಸುತ್ತದೆ. ಇಲ್ಲಿ ಸುಮಾರು 67 ಗೋರಿಗಳನ್ನು ಉತ್ಕನನ ಮಾಡಿದ್ದು ಪ್ರತಿಯೊಂದು ಅಭ್ಯಾಸ ಯೋಗ್ಯವಾಗಿದೆ.

  1. ಸತ್ತನಂತರ ದೇಹಗಳನ್ನು ರಣಹದ್ದುಗಳು ಮತ್ತು ಕಾಗೆಗಳಿಗೆ ತಿನ್ನಲು ಬಿಡುತ್ತಿದ್ದರು. ಉಳಿದ ಮೂಳೆಗಳನ್ನು ನಂತರ ಸಮಾಧಿ ಮಾಡುತ್ತಿದ್ದರು.
  2. ಮತ್ತೆ ಕೆಲವು ಶವಗಳನ್ನು ಸುಡುತಿದ್ದರು. ಅದರ ಚಿತಾಭಸ್ಮವನ್ನು ಮಡಿಕೆಯಲ್ಲಿ ಇರಿಸಿ ನಂತರ ಅದನ್ನು ಸಮಾಧಿಯಲ್ಲಿ ಹೂಳುತ್ತಿದ್ದರು.
  3. ಕೆಲವು ದೇಹಗಳನ್ನು ಸಮಾಧಿ ಮಾಡುತ್ತಿದ್ದು, ನಂತರ ನಿರ್ದಿಷ್ಟ ವಿಧಿವಿಧಾನಗಳ ಪ್ರಕಾರ ದಹನ ಮಾಡುತ್ತಿದ್ದರು. ಒಂದೇ ಸಮಾಧಿಯಲ್ಲಿ ಎರಡು ದೇಹಗಳನ್ನು ಸುಡುವ ನಿದರ್ಶನಗಳನ್ನು ಲೋಥಾಲ್‌ನಲ್ಲಿ ಗಮನಿಸಬಹುದು.

ಈ ಅಭ್ಯಾಸಗಳು ಸಾವಿನ ಸಂಕೀರ್ಣ ತಿಳುವಳಿಕೆಯನ್ನು ಮತ್ತು ಮರಣಾನಂತರದ ಜೀವನದ ಬಗ್ಗೆ ಅವರ ನಂಬಿಕೆಯನ್ನು ಪ್ರತಿಬಿಂಬಿಸುತ್ತವೆ.

ಉಪಸಂಹಾರ

ಸಿಂಧೂ ಕಣಿವೆ ನಾಗರಿಕತೆಯ ಧಾರ್ಮಿಕ ಜೀವನವು ಪ್ರಕೃತಿಯೊಂದಿಗೆ ಆಳವಾಗಿ ಬೇರೂರಿರುವ ಸಂಪರ್ಕವನ್ನು ಪ್ರತಿಬಿಂಬಿಸುತ್ತದೆ. ಮಾತೃ ದೇವತೆ ಮತ್ತು ಪಶುಪತಿಯಂತಹ ದೇವತೆಗಳ ಆರಾಧನೆ ಮತ್ತು ಸಂಕೀರ್ಣ ಸಮಾಧಿ ಆಚರಣೆಗಳ ಮೂಲಕ ಅವರ ಧಾರ್ಮಿಕ ಜೀವನದ ವಿವಿಧ ಮಗ್ಗಲುಗಳ ಪರಿಚಯವಾಗುತ್ತದೆ. ಜೊತೆಗೆ ಇತಿಹಾಸದ ಅತ್ಯಂತ ಆಕರ್ಷಕ ಸಂಸ್ಕೃತಿಗಳ ಧಾರ್ಮಿಕ ಆಧ್ಯಾತ್ಮಿಕ ಪ್ರಪಂಚದ ಬಗ್ಗೆ ಅಮೂಲ್ಯವಾದ ಒಳನೋಟಗಳನ್ನು ಪಡೆಯುತ್ತೇವೆ.

CSS to this text in the module Advanced settings.

ಸಿಂದೂ ಬಯಲಿನ ನಾಗರೀಕತೆಯ ಆರ್ಥಿಕ ಜೀವನ

ಸಿಂದೂ ಬಯಲಿನ ನಾಗರೀಕತೆಯ ಆರ್ಥಿಕ ಜೀವನ

ಪೀಠಿಕೆ

ಸಿಂದೂ ಬಯಲಿನ ನಾಗರೀಕತೆಯ(ಹರಪ್ಪ ಸಂಸ್ಕೃತಿಯ) ಜನರು ವಿವಿಧ ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ಇವರು ಭವಿಷ್ಯದ ಸಮಾಜಗಳಿಗೆ ಅಡಿಪಾಯ ಹಾಕುವ ರೀತಿಯಲ್ಲಿ ತಮ್ಮ ಆರ್ಥಿಕ ಜೀವನವನ್ನು ರೂಪಿಸಿಕೊಂಡರು. ಇಲ್ಲಿ, ನಾವು ಕೃಷಿ, ಕೈಗಾರಿಕೆಗಳು, ವ್ಯಾಪಾರ ಮತ್ತು ಕಲಾತ್ಮಕತೆ ಸೇರಿದಂತೆ ಅವರ ಆರ್ಥಿಕತೆಯ ಪ್ರಮುಖ ಅಂಶಗಳನ್ನು ಗಮನಿಸಬಹುದು.

ಆರ್ಥಿಕ ಜೀವನದ/ವ್ಯವಸ್ಥೆಯ ಪ್ರಮುಖ ಅಂಶಗಳು

1. ಕೃಷಿ ಮತ್ತು ಪಶುಸಂಗೋಪನೆ: ಕೃಷಿಯು ಸಿಂಧೂ ಜನರ ಮೂಲ ಉದ್ಯೋಗವಾಗಿತ್ತು. ಇವರು ಹವಾಮಾನ, ಭೂಮಿಯ ಫಲವತ್ತತೆ ಹಾಗೂ ನೀರಾವರಿಯನ್ನು ಆಧರಿಸಿ ಗೋಧಿ, ಬಾರ್ಲಿ, ಭತ್ತ, ತರಕಾರಿ, ಖರ್ಜೂರ, ನವಣೆ,ಬಟಾಣಿ ಹಾಗೂಎಣ್ಣೆಕಾಳು ಗಳಂತಹ ವಿವಿಧ ಬೆಳೆಗಳನ್ನು ಬೆಳೆಯುತ್ತಿದ್ದರು. ಹರಪ್ಪ ಹಾಗೂ ಮೊಹೆಂಜೋದಾರೋ ನಗರಗಳಲ್ಲಿ ಕಲ್ಲಂಗಡಿ ಮತ್ತು ಖರ್ಜೂರ ಬೀಜಗಳು ದೊರಕಿದ್ದು ನೋಡಿದರೆ ಅವರು ಕಲ್ಲಂಗಡಿ ಹಾಗೂ ಖರ್ಜೂರಗಳನ್ನು ಬೆಳೆಯುತ್ತಿದ್ದರೆಂದು ತಿಳಿಯಬಹುದು. ಹತ್ತಿ ಬಟ್ಟೆಯ ಅವಶೇಷಗಳು ದೊರೆತಿರುವುದರಿಂದ ಹತ್ತಿಯನ್ನು ವಾಣಿಜ್ಯ ಬೆಳೆಯನ್ನಾಗಿ ಬೆಳೆಯುತ್ತಿದ್ದರೆಂದು ಅರಿಯಬಹುದಾಗಿದೆ. ನೀರಾವರಿಯ ಕಾಲುವೆಗಳು ಸಿಂಧೂ ಸಂಸ್ಕೃತಿಯಲ್ಲಿ ದೊರಕಿವೆ. ಅನೇಕ ಉಗ್ರಾಣಗಳು ಪತ್ತೆಯಾಗಿವೆ. ಉಳುಮೆಗಾಗಿ ಇವರು ಮರದ ನೇಗಿಲುಗಳನ್ನು ಬಳಸುತ್ತಿದ್ದರು. ಸಿಂಧೂ ಜನರು ಕೃಷಿಯ ಜೊತೆಗೆ ಪಶುಪಾಲನೆಯಂತಹ ಉದ್ಯೋಗವನ್ನು ಕೈಗೊಂಡಿದ್ದರು.

2. ಕೈಗಾರಿಕೆಗಳು : ಹರಪ್ಪ, ಮೊಹೆಂಚೋದಾರೋ ಹಾಗೂ ಲೋಥಾಲ್ ಪ್ರಮುಖ ಕೈಗಾರಿಕಾ ಪ್ರದೇಶಗಳಾಗಿದ್ದವು. ನೇಕಾರಿಕೆ, ಕುಂಬಾರಿಕೆ, ಕಮ್ಮಾರಿಕೆ, ಲೋಹ ತಯಾರಿಕೆ, ಮುಂತಾದ ಉದ್ದಿಮೆಗಳು ಪ್ರಚಲಿತವಾಗಿದ್ದವು. ಬಣ್ಣ ತಯಾರಿಕೆ, ಬಟ್ಟೆ ತಯಾರಿಕೆ, ಕುಸುರಿ ಕೆಲಸ ಮುಂತಾದವು ಇನ್ನಿತರ ಉದ್ದಿಮೆಗಳಾಗಿದ್ದವು. ತಮ್ಮ ಪ್ರಾಣ ರಕ್ಷಣೆಗಾಗಿ ಅವರು ಕೊಡಲಿ, ಕತ್ತಿ, ಗುರಾಣಿ, ಚಾಕು, ಭರ್ಚಿ, ಕವಚ, ಶಿರಾಸ್ತ್ರಣ, ಬಿಲ್ಲು, ಬಾಣ, ಶೂಲ ಮತ್ತು ಈಟಿಯಂತಹ ಆಯುಧಗಳನ್ನು ಬಳಸುತ್ತಿದ್ದರು. ಈಗಾಗಿ ಈ ಉದ್ದಿಮೆಗಳು ಸಹ ಪ್ರಾಮುಖ್ಯತೆಯನ್ನು ಪಡೆದಿದ್ದವೆಂದು ತಿಳಿದುಬರುತ್ತದೆ.

3. ಲೋಹಗಳು: ಸಿಂಧೂ ಜನರು ತಮ್ಮ ದೈನಂದಿನ ಜೀವನದಲ್ಲಿ ಬೆಳ್ಳಿ, ಚಿನ್ನ, ತಾಮ್ರ, ತವರ ಮತ್ತು ಸೀಸದಂತಹ ಲೋಹಗಳನ್ನು ಬಳಸುವ ಮೂಲಕ ಗಣನೀಯ ಲೋಹಶಾಸ್ತ್ರ ಕೌಶಲ್ಯವನ್ನು ಪ್ರದರ್ಶಿಸಿದರು. ಆದಾಗ್ಯೂ, ಈ ಅವಧಿಯಲ್ಲಿ ಅವರು ಕಬ್ಬಿಣವನ್ನು ಬಳಸಲಿಲ್ಲ ಎಂಬುದಕ್ಕೆ ಪುರಾವೆಗಳಿವೆ.

4. ವ್ಯಾಪಾರ : ಸಿಂಧೂ ನಾಗರಿಕತೆಯು ಮುಖ್ಯವಾಗಿ ವ್ಯಾಪಾರವನ್ನು ಅವಲಂಬಿಸಿತ್ತು. ದೇಶೀಯ ಮತ್ತು ವಿದೇಶಿ ವ್ಯಾಪಾರಗಳು ಭರದಿಂದ ಸಾಗಿದ್ದವು. ಹರಪ್ಪ, ಮೊಹೆಂಜೋದಾರೊ, ಲೋಥಾಲ್ ಹಾಗೂ ಕಾಲಿಬಂಗನ್ ಪ್ರಮುಖ ವ್ಯಾಪಾರಿ ಕೇಂದ್ರಗಳಾಗಿದ್ದವು. ಸಮುದ್ರದ ಚಿಪ್ಪನ್ನು ಬಲೂಚಿಸ್ಥಾನದ ಬಾಲಕೋಟದಿಂದ, ಶಂಕಗಳನ್ನು ಲೋಥಾಲ್‌ದಿಂದ, ಚರ್ಟಕಲ್ಲನ್ನು ಖೇತ್ರ ಹಾಗೂ ದೇಬರಿ ಗಣಿಗಳಿಂದ, ಚಿನ್ನವನ್ನು ಕೋಲಾರ ಮತ್ತು ಹಟ್ಟಿ ಗಣಿಗಳಿಂದ, ಸೀಸವನ್ನು ದಕ್ಷಿಣ ಭಾರತದಿಂದ, ಕಾಗೆ ಬಂಗಾರವನ್ನು ಬಲೂಚಿಸ್ಥಾನದಿಂದ ತರಿಸಿಕೊಳ್ಳಲಾಗುತ್ತಿತ್ತು. ಹರಪ್ಪ, ಮೆಹೆಂಜೋದಾರೊ ಹಾಗೂ ಲೋಥಾಲ್‌ಗಳು ವಿದೇಶಿ ವ್ಯಾಪಾರ ಕೇಂದ್ರಗಳಾಗಿದ್ದವು. ಸಿಂಧೂ ಜನರು ಈಜಿಪ್ಟ್, ಮೆಸೋಪೋಟಮಿಯಾ, ಚೀನಾ, ಪರ್ಶಿಯಾ ಹಾಗೂ ಸಿರಿಯಾ ಮುಂತಾದ ದೇಶಗಳೊಂದಿಗೆ ವಿದೇಶಿ ವ್ಯಾಪಾರವನ್ನು ಇಟ್ಟುಕೊಂಡಿದ್ದರು. ಎತ್ತು, ಎಮ್ಮೆ, ಕತ್ತೆ ಹಾಗೂ ಒಂಟೆಗಳನ್ನು ಭೂಸಾರಿಗೆಗಾಗಿ ಬಳಸುತ್ತಿದ್ದರು. ಇವರಿಗೆ ದಶಮಾಂಶ ಪದ್ಧತಿ ತಿಳಿದಿತ್ತು ಮಹೆಂಜೋದಾರೋ ಹಾಗೂ ಹರಪ್ಪ ನಗರಗಳಲ್ಲಿ ತೂಕದ ಕಲ್ಲುಗಳು, ತಕ್ಕಡಿ ಹಾಗೂ ಕಂಚಿನ ಆಳತೆಯ ಕಡ್ಡಿಗಳು ಸಿಕ್ಕಿವೆ.

5. ಮುದ್ರೆಗಳು: ಸಿಂಧೂ ನದಿಯ ಬಯಲಿನಲ್ಲಿ ಈಗಾಗಲೇ ಸುಮಾರು 1500 ಮುದ್ರೆಗಳು ದೊರಕಿವೆ. ಇವುಗಳು ಅವರ ಆರ್ಥಿಕ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದವೆಂದು ನಂಬಲಾಗಿದೆ. ಇವುಗಳು ಮೂಳೆ, ಟೆರಿಕೋಟ ಹಾಗೂ ಜೇಡಿಮಣ್ಣಿನಿಂದ ತಯಾರಾಗಿವೆ. ಅನೇಕ ಮುದ್ರೆಗಳು ಮಾನವನ ಹಾಗೂ ಪ್ರಾಣಿಗಳ ಚಿತ್ರಗಳನ್ನು ಹೊಂದಿವೆ. ಕೆಲವು ಮುದ್ರೆಗಳ ಮೇಲೆ ಚಿತ್ರ ಲಿಪಿಗಳಿಂದ ಕೂಡಿದ ಬರವಣಿಗೆಗಳು ಕಂಡು ಬಂದಿವೆ.

6. ಕರಕುಶಲತೆ : ಸಿಂಧೂ ಜನರು ಕರಕುಶಲ ಕೆಲಸಗಾರರೂ ಆಗಿದ್ದು ಕಲೆ ಮತ್ತು ವಾಸ್ತುಶಿಲ್ಪದಲ್ಲಿ ಅವರು ಸಾಕಷ್ಟು ಪರಿಣಿತಿಯನ್ನು ಪಡೆದಿದ್ದರು. ಮೊಹೆಂದೋ ದಾರೋ ನಗರದಲ್ಲಿ ದೊರೆತಿರುವ ನೃತ್ಯ ಭಂಗಿಯ ಕಂಚಿನ ಸ್ತ್ರೀ ವಿಗ್ರಹ ಹಾಗೂ ಗಡ್ಡದಾರಿ ಪುರುಷನ ಬಳಪದ ಕಲ್ಲಿನ ವಿಗ್ರಹ ಸಿಂಧೂ ಜನರ ಕಲಾ ನೈಮಣ್ಯತೆಗೆ ಹಿಡಿದ ಕನ್ನಡಿಯಾಗಿದೆ.

ಉಪಸಂಹಾರ

ಸಿಂಧೂ ಕಣಿವೆ ನಾಗರಿಕತೆಯ ಆರ್ಥಿಕ ಜೀವನವು ಕೃಷಿ, ಕೈಗಾರಿಕೆ, ವ್ಯಾಪಾರ, ಕಲಾತ್ಮಕತೆ ಮತ್ತು ಆಧ್ಯಾತ್ಮಿಕ ನಂಬಿಕೆಗಳಿಂದ ನೇಯ್ದ ಸಂಕೀರ್ಣವಾದ ಬಟ್ಟೆಯಾಗಿದೆ. ಕೃಷಿ ಮತ್ತು ವ್ಯಾಪಾರದಲ್ಲಿ ಅವರ ನವೀನ ಅಭ್ಯಾಸಗಳು ಭವಿಷ್ಯದ ಪೀಳಿಗೆಯ ಮೇಲೆ ಪ್ರಭಾವ ಬೀರುವ ಆರ್ಥಿಕ ವ್ಯವಸ್ಥೆಗಳಿಗೆ ಅಡಿಪಾಯವನ್ನು ಹಾಕಿದವು. ಹೀಗಾಗಿಯೇ ಪ್ರಪಂಚದ ಆರಂಭಿಕ ನಗರ ನಾಗರಿಕತೆಗಳಲ್ಲಿ ಒಂದಾದ ಸಿಂದೂ ನಾಗರೀಕತೆಯು ಆರ್ಥಿಕ ಚಲನಶೀಲತೆಯ ಒಳನೋಟಗಳನ್ನು ನೀಡುತ್ತದೆ.

ಸಿಂದೂ ಬಯಲಿನ ನಾಗರೀಕತೆಯ ಸಾಮಾಜಿಕ ಜೀವನ

ಸಿಂದೂ ಬಯಲಿನ ನಾಗರೀಕತೆಯ ಸಾಮಾಜಿಕ ಜೀವನ

ಪೀಠಿಕೆ

ಸಿಂಧೂ ಕಣಿವೆ ನಾಗರಿಕತೆಯ ಸಾಮಾಜಿಕ ಜೀವನವು ಸುಸಂಘಟಿತ, ಶಿಸ್ತುಬದ್ಧ ಮತ್ತು ಸಾಂಸ್ಕೃತಿಕವಾಗಿ ಮುಂದುವರಿದಿತ್ತು. ಜನರು ಹರಪ್ಪ ಮತ್ತು ಮೊಹೆಂಜೋದಾರೊದಂತಹ ಯೋಜಿತ ನಗರಗಳಲ್ಲಿ ವಾಸಿಸುತ್ತಿದ್ದರು. ಜನರು ಕೃಷಿ, ವ್ಯಾಪಾರ, ಕರಕುಶಲ ವಸ್ತುಗಳು ಮತ್ತು ವಿವಿಧ ರೀತಿಯ ಮನರಂಜನೆಯಲ್ಲಿ ತೊಡಗಿದ್ದರು. ಅವರು ಸಮತೋಲಿತ ಮತ್ತು ಸಾಮರಸ್ಯದ ಜೀವನವನ್ನು ನಡೆಸುತ್ತಿದ್ದರು. ಒಟ್ಟಾರೆಯಾಗಿ, ಅವರ ಸಾಮಾಜಿಕ ಜೀವನವು ಸರಳತೆ, ಸಂಘಟನೆ ಮತ್ತು ಅತ್ಯಾಧುನಿಕತೆಯ     ಮಿಶ್ರಣವಾಗಿದೆ. ಹರಪ್ಪಾ ಸಾಮಾಜಿಕ ವ್ಯವಸ್ಥೆಯು ದೈನಂದಿನ ಜೀವನದಲ್ಲಿ ಸೌಂದರ್ಯ, ಸಮತೋಲನ ಮತ್ತು ಸಾಮರಸ್ಯವನ್ನು ಗೌರವಿಸುವ ರೋಮಾಂಚಕ, ಸುಸಂಸ್ಕೃತ ಮತ್ತು ಪ್ರಗತಿಪರ ನಾಗರಿಕತೆಯನ್ನು ಚಿತ್ರಿಸುತ್ತದೆ. ಅದು ಇಂದಿಗೂ ಮತ್ತು ಎಂದೆಂದಿಗೂ ಇತಿಹಾಸಕಾರರನ್ನು ಮಾತ್ರವಲ್ಲದೇ ಜನಸಾಮಾನ್ಯರನ್ನೂ  ಆಕರ್ಷಿಸುತ್ತಿದೆ. ಅದರ ಬಗ್ಗೆ ಒಂದು ಇಣುಕು ನೋಟ..

ಪ್ರಮುಖ ಲಕ್ಷಣಗಳು

1. ಕೌಟುಂಬಿಕ ಪದ್ಧತಿ : ಹರಪ್ಪ ಸಂಸ್ಕೃತಿಯಲ್ಲಿ ನಿರ್ದಿಷ್ಟ ಕೌಟುಂಬಿಕ ಜೀವನ ಪದ್ಧತಿ ಕಂಡುಬರುತ್ತದೆ. ಒಂದು ಕುಟುಂಬದ ಸದಸ್ಯರು ಸಾಂಘಿಕವಾಗಿ ಜೀವನ ನಿರ್ವಹಿಸುತ್ತಿದ್ದರು. ಇಲ್ಲಿಯ ಕೌಟುಂಬಿಕ ವ್ಯವಸ್ಥೆಯಲ್ಲಿ ಮಾತೃ ಪ್ರಧಾನ ಕೌಟುಂಬಿಕ ವ್ಯವಸ್ಥೆ ಕಂಡುಬರುತ್ತದೆ.

2. ಸಾಮಾಜಿಕ ವರ್ಗಗಳು : ಹರಪ್ಪ ಸಂಸ್ಕೃತಿಯ ಕಾಲದಲ್ಲಿ ನಿರ್ದಿಷ್ಟ ವರ್ಣಪದ್ಧತಿ ಅಸ್ತಿತ್ವದಲ್ಲಿರಲಿಲ್ಲ. ಆದರೆ ಡಾ.ವಿ.ಡಿ.ಪುಸಾಲ್ಕರ್ ಅಭಿಪ್ರಾಯ ಪಡುವಂತೆ ವೃತ್ತಿಯನ್ನು ಆಧರಿಸಿ ವಿದ್ಯಾವಂತ ವರ್ಗ, ಸೇನಾನಿಗಳ ವರ್ಗ, ಕರಕುಶಲ ಕೆಲಸಗಾರರ ವರ್ಗ ಮತ್ತು ಕಾರ್ಮಿಕ ವರ್ಗವೆಂದು 4 ಭಾಗಗಳಾಗಿ ವಿಂಗಡಣೆಗೊಂಡಿತ್ತು. ಈ ಸಾಮಾಜಿಕ ರಚನೆಯು ಸಂಕೀರ್ಣತೆ ಮತ್ತು ಸಂಘಟನೆಯ ಮಟ್ಟವನ್ನು ಸೂಚಿಸುತ್ತದೆ. ಸಿಂಧೂ ಜನರು ತಮ್ಮ ವರ್ಗಕ್ಕೆ ಅನುಗುಣವಾಗಿ ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದರು ಎಂದು ಗೊತ್ತಾಗುತ್ತದೆ.

3. ವಿವಾಹಪದ್ಧತಿ : ಹರಪ್ಪ ನಾಗರೀಕತೆಯ ಕಾಲದ ವೈವಾಹಿಕ ಪದ್ಧತಿಯ ಬಗ್ಗೆ ನಿರ್ಧಿಷ್ಟ ವಿಷಯ ದೊರೆತಿಲ್ಲ, ಪ್ರಾಯಶಃ ಸಜಾತೀಯ ವಿವಾಹಪದ್ಧತಿಯು ಅಸ್ತಿತ್ವದಲ್ಲಿತ್ತೆಂದು ತಿಳಿದುಬರುತ್ತದೆ

4. ಸ್ತ್ರೀಯರ ಸ್ಥಾನ : ಹರಪ್ಪ ಸಂಸ್ಕೃತಿಯ ಕಾಲದಲ್ಲಿ ಸ್ತ್ರೀಯರ ಸ್ಥಾನಮಾನವು ಪ್ರಮುಖವಾದುದಾಗಿತ್ತು. ಸ್ತ್ರೀ ಯನ್ನು ಮಾತೃದೇವತೆಯೆಂದೇ ಆರಾಧಿಸುತ್ತಿದ್ದರು. ಮಾತೃ ದೇವಿಯ ಆರಾಧನೆಯು ಮಹಿಳೆಯರು ಮತ್ತು ಫಲವತ್ತತೆಯ ಮೇಲಿನ ಗೌರವವನ್ನು ಪ್ರತಿಬಿಂಬಿಸುತ್ತದೆ. ಒಂದು ವಿಧದಲ್ಲಿ ಹೇಳಬೇಕೆಂದರೆ ಮಾತೃ ಪ್ರಧಾನ ಕೌಟುಂಬಿಕ ವ್ಯವಸ್ಥೆ ಕಂಡುಬರುತ್ತಿತ್ತು.

5. ಪುರುಷನ ಸ್ಥಾನ : ಸಮಾಜದಲ್ಲಿ ಪುರುಷನ ಸ್ಥಾನವು ಪ್ರಧಾನವಾಗಿಯೇ ಕಂಡುಬರುತ್ತಿದ್ದು, ಪುರುಷನು ಕುಟುಂಬದ ಯಜಮಾನನೆನಿಸಿದ್ದನು.

6. ಆಹಾರ ಪದ್ಧತಿ : ಹರಪ್ಪನ್ನರ ಆಹಾರವು ವೈವಿಧ್ಯಮಯವಾಗಿತ್ತು. ಹರಪ್ಪ ನಾಗರೀಕತೆಯ ಜನರು ಮಿಶ್ರ ಆಹಾರ ಪ್ರಿಯರಾಗಿದ್ದರು. ಸಸ್ಯಹಾರ ಮತ್ತು ಮಾಂಸಾಹಾರಗಳೆರಡು ಅಸ್ತಿತ್ವದಲ್ಲಿದ್ದವು. ಸಸ್ಯಹಾರಿಗಳಾದರೆ ಹಾಲು, ತರಕಾರಿಗಳು ಮತ್ತು ವಿವಿಧ ಹಾಲಿನ ಉತ್ಪನ್ನಗಳೊಂದಿಗೆ ಗೋಧಿ, ಅಕ್ಕಿ ಮತ್ತು ಬಾರ್ಲಿಯಂತಹ ಧಾನ್ಯಗಳನ್ನು ಬಳಸುತ್ತಿದ್ದರು. ಖರ್ಜೂರ ಮತ್ತು ದಾಳಿಂಬೆಯಂತಹ ಹಣ್ಣುಗಳು ಸಹ ಸಾಮಾನ್ಯವಾಗಿದ್ದವು. ಮಾಂಸಹಾರಿಗಳಾದರೆ ಕುರಿ, ಮೇಕೆ, ಜಿಂಕೆ, ದನ, ಹಂದಿ ಮೊದಲಾದ ಪ್ರಾಣಿಗಳನ್ನು ಮಾಂಸಕ್ಕಾಗಿ ಬಳಸುತ್ತಿದ್ದರು. ತಮ್ಮ ಭಕ್ಷ್ಯಗಳನ್ನು ಸುವಾಸನೆ ಮಾಡಲು ಮಸಾಲೆ ಪದಾರ್ಥಗಳನ್ನು ಬಳಸಿದರು.

7. ಲೋಹಗಳು : ಸಿಂಧೂ ಜನರು ತಮ್ಮ ದೈನಂದಿನ ಜೀವನದಲ್ಲಿ ಬೆಳ್ಳಿ, ಚಿನ್ನ, ತಾಮ್ರ, ತವರ ಮತ್ತು ಸೀಸದಂತಹ ಲೋಹಗಳನ್ನು ಬಳಸಿಕೊಂಡು ಗಣನೀಯ ಲೋಹಶಾಸ್ತ್ರದ ಕೌಶಲ್ಯಗಳನ್ನು ಪ್ರದರ್ಶಿಸಿದರು. ಆದಾಗ್ಯೂ, ಈ ಅವಧಿಯಲ್ಲಿ ಅವರು ಕಬ್ಬಿಣವನ್ನು ಬಳಸಲಿಲ್ಲ ಎಂದು ಸೂಚಿಸಲು ಪುರಾವೆಗಳಿವೆ.

8. ಪಶುಪಾಲನೆ : ಪಶುಸಂಗೋಪನೆಯು ಸಿಂಧೂ ಜನರ ಜೀವನೋಪಾಯದಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದೆ. ಅವರು ಹಸುಗಳು, ಎತ್ತುಗಳು, ಎಮ್ಮೆಗಳು, ಕತ್ತೆಗಳು, ನಾಯಿಗಳು, ಕುರಿಗಳು, ಮೇಕೆಗಳು ಮತ್ತು ಹಂದಿಗಳು ಸೇರಿದಂತೆ ವಿವಿಧ ಪ್ರಾಣಿಗಳನ್ನು ಸಾಕಿದರು, ಇದು ಅವರ ಕೃಷಿ ಮತ್ತು ಆರ್ಥಿಕ ಚಟುವಟಿಕೆಗಳಿಗೆ ಕೊಡುಗೆ ನೀಡಿತು.

9. ಉಡುಪು : ಹರಪ್ಪ ಸಂಸ್ಕೃತಿಯ ಕಾಲದ ಸ್ತ್ರೀಪುರುಷರು ಹಾಕಿಕೊಳ್ಳುತ್ತಿದ್ದ ಉಡುಪುಗಳ ಬಗ್ಗೆ ನಿರ್ದಿಷ್ಟವಾಗಿ ಹೇಳುವುದು ಅಸಾಧ್ಯ. ಸಂಶೋಧನೆಯ ಕಾಲದಲ್ಲಿ ದೊರೆತಿರುವ ಕೆಲವು ಸ್ತ್ರೀ-ಪುರುಷರ ಆಕೃತಿಗಳು ನಗ್ನವಾಗಿದೆ. ಅಂದಮಾತ್ರಕ್ಕೆ ಉಡುಪುಗಳನ್ನೇ ಧರಿಸುತ್ತಿರಲಿಲ್ಲವೇ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಭೂ ಸಂತೋದನೆಯ ಕಾಲದಲ್ಲಿ ಕೊಳೆತ ಹತ್ತಿ ಬಟ್ಟೆಯ ಚೂರು ಮತ್ತು ಕುರಿಗಳ ಸಾಕಾಣಿಕೆಯ ಆಧಾರದ ಮೇಲೆ ಹತ್ತಿ ಮತ್ತು ಉಣ್ಣೆಯ ಉಡುಪುಗಳನ್ನು ಹಾಕಿಕೊಳ್ಳುತ್ತಿದ್ದರೆಂದು ಊಹಿಸಲಾಗಿದೆ. ಪುರುಷರು ಧೋತಿ ಮತ್ತು ಉತ್ತರೀಯವನ್ನು, ಸ್ತ್ರೀಯರು ಸೀರೆಯನ್ನು ಧರಿಸುತ್ತಿದ್ದರು.

ಸಿಂಧೂ ನಾಗರಿಕತೆಯ ಉಡುಪುಗಳನ್ನು ಪ್ರಧಾನವಾಗಿ ಹತ್ತಿ ಮತ್ತು ಉಣ್ಣೆಯಿಂದ ಮಾಡಲಾಗಿತ್ತು. ಬಟ್ಟೆಯ ಈ ಆಯ್ಕೆಯು ಅವರ ಸುಧಾರಿತ ಜವಳಿ ಉತ್ಪಾದನಾ ತಂತ್ರಗಳನ್ನು ಪ್ರತಿಬಿಂಬಿಸುತ್ತದೆ.

10. ಸೌಂದರ್ಯವರ್ಧಕಗಳು : ಸಿಂಧೂ ಜನರು ವೈಯಕ್ತಿಕ ಅಲಂಕಾರ ಮತ್ತು ಅಂದಗೊಳಿಸುವಿಕೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿದರು. ಅವರು ಲಿಪ್ ಬಾಮ್, ಐ ಜೆಲ್, ಫೇಸ್ ಬಾಮ್‌ಗಳು ಮತ್ತು ಪೌಡರ್‌ಗಳನ್ನು ಒಳಗೊಂಡಂತೆ ವಿವಿಧ ಸೌಂದರ್ಯವರ್ಧಕಗಳನ್ನು ಬಳಸಿದ್ದಾರೆಂದು ಪುರಾವೆಗಳು ಸೂಚಿಸುತ್ತವೆ. ಅವರು ತಾಮ್ರದ ಕನ್ನಡಿಗಳು ಮತ್ತು ದಂತದ ಬಾಚಣಿಗೆಗಳನ್ನು ಸಹ ಬಳಸುತ್ತಿದ್ದರು. ಇದು ಅವರ ವೈಯಕ್ತಿಕ ಆರೈಕೆಗೆ, ಆಗಿನ ಕಾಲದ ಅತ್ಯಾಧುನಿಕ ವಿಧಾನವನ್ನು ಸೂಚಿಸುತ್ತದೆ. ಆಭರಣಗಳು ಮತ್ತು ಸೌಂದರ್ಯವರ್ಧಕಗಳನ್ನು ಸಂಗ್ರಹಿಸಲು ಪೆಟ್ಟಿಗೆಗಳನ್ನು ಹೆಚ್ಚಾಗಿ ಬಳಸಲಾಗುತ್ತಿತ್ತು.

11. ಕೇಶ ವಿನ್ಯಾಸ : ಸಿಂಧೂ ನಾಗರಿಕತೆಯಲ್ಲಿ ಪುರುಷರು ಮತ್ತು ಮಹಿಳೆಯರು ಇಬ್ಬರೂ ತಮ್ಮ ಕೇಶವಿನ್ಯಾಸದಲ್ಲಿ ಹೆಮ್ಮೆಪಡುತ್ತಿದ್ದರು. ವ್ಯಕ್ತಿಗಳು ತಮ್ಮ ಕೂದಲನ್ನು ಹಿಂದಕ್ಕೆ ಬಾಚಿಕೊಂಡು ಗಂಟು ಕಟ್ಟಿಕೊಳ್ಳುವುದು ಸಾಮಾನ್ಯವಾಗಿತ್ತು. ಮೊಹೆಂಜೊದಾರೊದಲ್ಲಿ ಪತ್ತೆಯಾದ ನೃತ್ಯ ಭಂಗಿಯಲ್ಲಿರುವ ಹುಡುಗಿಯ ಕಲಾತ್ಮಕ ಪ್ರತಿಮೆಗಳು ಅಪೂರ್ವ ಕೇಶವಿನ್ಯಾಸವನ್ನು ಪ್ರದರ್ಶಿಸುತ್ತವೆ. ಪುರುಷರು ಸಾಮಾನ್ಯವಾಗಿ ತಮ್ಮ ಗಡ್ಡವನ್ನು ಹಾಗೆಯೇ ಬಿಟ್ಟು ತಮ್ಮ ಮೀಸೆಯನ್ನು ಬೋಳಿಸಿಕೊಳ್ಳುತ್ತಾರೆ.

12. ಆಭರಣ : ಆಭರಣಗಳು ಸಿಂಧೂ ಜನರಲ್ಲಿ ಗಮನಾರ್ಹವಾದ ಸಾಂಸ್ಕೃತಿಕ ಪ್ರಾಮುಖ್ಯತೆಯನ್ನು ಹೊಂದಿದ್ದವು. ಪುರುಷರು ಮತ್ತು ಮಹಿಳೆಯರು ಇಬ್ಬರೂ ವಿವಿಧ ಆಭರಣಗಳಿಂದ ತಮ್ಮನ್ನು ಅಲಂಕರಿಸಿಕೊಳ್ಳುತ್ತಿದ್ದರು.  ಸಂಶೋಧನೆಯ ಕಾಲದಲ್ಲಿ ಕಂಠೀಹಾರ, ಕಾಲುಂಗುರ, ಬೆರಳುಂಗುರ, ಸೊಂಟದ ಪಟ್ಟಿ, ಕೈ ಬಳೆ, ಕಾಲ್ಗಡಗ ಮೊದಲಾದ ಆಭರಣಗಳು ದೊರೆತಿವೆ. ಈ ಆಭರಣಗಳನ್ನು ಚಿನ್ನ, ಬೆಳ್ಳಿ, ತಾಮ್ರ, ದಂತ, ಚಿಪ್ಪು ಮತ್ತು ಪಿಂಗಾಣಿಗಳಂತಹ ವಸ್ತುಗಳಿಂದ ರಚಿಸಲಾಗಿದೆ. ಇವುಗಳು ಸಂಕೀರ್ಣ ವಿನ್ಯಾಸಗಳು ಮತ್ತು ಆಕಾರಗಳನ್ನು ಹೊಂದಿವೆ.

13. ಆಟಿಕೆಗಳು : ಸಿಂಧೂ ನಾಗರಿಕತೆಯ ಮಕ್ಕಳು ವಿವಿಧ ಆಟಿಕೆಗಳನ್ನು ಆನಂದಿಸುತ್ತಿದ್ದರು, ಇದು ನಾಗರಿಕತೆಯ ಸೃಜನಶೀಲತೆ ಮತ್ತು ಕರಕುಶಲತೆಯನ್ನು ಪ್ರತಿಬಿಂಬಿಸುತ್ತದೆ. ಬಿದಿರಿನ ಬೊಂಬೆಗಳು, ಜೇಡಿಮಣ್ಣಿನ ಆಕೃತಿಗಳು, ಅಮೃತಶಿಲೆಗಳು ಮತ್ತು ಚಿಕಣಿ ಪ್ರಾಣಿಗಳಂತಹ ಕಲಾಕೃತಿಗಳನ್ನು ಕಂಡುಹಿಡಿಯಲಾಗಿದೆ, ಚಾನ್ಹುದಾರೋ ಆ ಕಾಲದ ಗಮನಾರ್ಹ ಆಟಿಕೆ ಉತ್ಪಾದನಾ ಕೇಂದ್ರವಾಗಿ ಗುರುತಿಸಲ್ಪಟ್ಟಿದೆ.

14. ಮನರಂಜನೆ : ಹರಪ್ಪ ನಾಗರೀಕತೆಯ ಜನರು ಮನರಂಜನಾ ಪ್ರಿಯರಾಗಿದ್ದರು. ಬಿಡುವಿನ ವೇಳೆಯಲ್ಲಿ ಹಲವು ಕ್ರೀಡೆಗಳನ್ನಾಡುತ್ತಿದ್ದರು. ಚದುರಂಗ, ಪಗಡೆ, ನೃತ್ಯ, ಹಾಡುಗಾರಿಕೆ ಒಳಾಂಗಣದ ಆಟಗಳಾಗಿದ್ದವು. ಆದರೆ ಹೊರಾಂಗಣ  ಕ್ರೀಡೆಗಳು ಬೇಟೆಯಾಡುವುದು, ಮೀನುಗಾರಿಕೆ, ಗೂಳಿಕಾಳಗ ಮತ್ತು ಕೋಳಿ ಕಾದಾಟವನ್ನು ಒಳಗೊಂಡಿತ್ತು. ಮಕ್ಕಳ ವಿನೋದಕ್ಕಾಗಿ ಮಣ್ಣಿನಿಂದ ತಯಾರಿಸಿದ ಬೊಂಬೆಗಳನ್ನು ತಯಾರಿಸುತ್ತಿದ್ದರು. ಇದು ಶ್ರೀಮಂತ ಸಾಂಸ್ಕೃತಿಕ ಜೀವನವನ್ನು ವಿವರಿಸುತ್ತದೆ.

15. ಮನೆಯ ವಸ್ತುಗಳು : ಸಿಂಧೂ ಜನರ ದೈನಂದಿನ ಜೀವನವನ್ನು ಚಾಪೆಗಳು, ಚಾಕುಗಳು, ಕೊಡಲಿಗಳು, ಅಡುಗೆ ಪಾತ್ರೆಗಳು, ಚಮಚಗಳು, ಬಟ್ಟಲುಗಳು, ಕನ್ನಡಿಗಳು ಮತ್ತು ಪೀಠೋಪಕರಣಗಳಾದ ಕುರ್ಚಿಗಳು ಮತ್ತು ಮೇಜುಗಳು ಸೇರಿದಂತೆ ಹಲವಾರು ಗೃಹೋಪಯೋಗಿ ವಸ್ತುಗಳು ದೊರೆತ್ತಿವೆ. ಈ ಕಲಾಕೃತಿಗಳು ಅವರ ಪ್ರಾಯೋಗಿಕ ಅಗತ್ಯಗಳನ್ನು ಮತ್ತು ಸುಧಾರಿತ ಕರಕುಶಲತೆಯನ್ನು ಪ್ರತಿಬಿಂಬಿಸುತ್ತವೆ.

ಉಪಸಂಹಾರ

ಹರಪ್ಪ ಅಥವಾ ಸಿಂಧೂ ಕಣಿವೆ ನಾಗರಿಕತೆಯ ಸಾಮಾಜಿಕ ಜೀವನವು ಹೆಚ್ಚು ಸಂಘಟಿತ, ಅತ್ಯಾಧುನಿಕ ಮತ್ತು ತನ್ನ ಸಮಯಕ್ಕಿಂತ ಮುಂದುವರೆದಿತ್ತು. ಸಮಾಜವು ಮಾತೃಪ್ರಧಾನ ಕುಟುಂಬ ವ್ಯವಸ್ಥೆಯನ್ನು ಅನುಸರಿಸಿತು, ಅಲ್ಲಿ ಮಹಿಳೆಯರು ಪ್ರಮುಖ ಸ್ಥಾನವನ್ನು ಹೊಂದಿದ್ದರು ಮತ್ತು ಮಾತೃ ದೇವತೆಗಳೆಂದು ಪೂಜಿಸಲ್ಪಟ್ಟರು. ಆದರೂ ಪುರುಷರನ್ನು ಇನ್ನೂ ಕುಟುಂಬಗಳ ಮುಖ್ಯಸ್ಥರೆಂದು ಪರಿಗಣಿಸಲಾಗುತ್ತಿತ್ತು. ಯಾವುದೇ ಕಠಿಣ ಜಾತಿ ವ್ಯವಸ್ಥೆ ಇರಲಿಲ್ಲ; ಬದಲಾಗಿ, ಸಮಾಜವನ್ನು ವಿದ್ಯಾವಂತರು, ಸೈನಿಕರು, ಕುಶಲಕರ್ಮಿಗಳು ಮತ್ತು ಕಾರ್ಮಿಕರು ಮುಂತಾದ ವೃತ್ತಿಪರ ವರ್ಗಗಳಾಗಿ ವಿಂಗಡಿಸಲಾಗಿದೆ. ಹರಪ್ಪನ್ನರು ಸಮತೋಲಿತ ಮತ್ತು ವೈವಿಧ್ಯಮಯ ಜೀವನಶೈಲಿಯನ್ನು ನಡೆಸಿದರು. ಅವರ ಆಹಾರದಲ್ಲಿ ಧಾನ್ಯಗಳು, ಹಣ್ಣುಗಳು, ಹಾಲಿನ ಉತ್ಪನ್ನಗಳು ಮತ್ತು ಮಾಂಸದಂತಹ ಸಸ್ಯಾಹಾರಿ ಮತ್ತು ಮಾಂಸಾಹಾರಿ ಆಹಾರಗಳು ಸೇರಿವೆ. ಪಶುಸಂಗೋಪನೆಯು ಅವರ ಆರ್ಥಿಕತೆಯ ಬೆನ್ನೆಲುಬಾಗಿ ರೂಪುಗೊಂಡಿತು. ಹತ್ತಿ ಮತ್ತು ಉಣ್ಣೆಯಿಂದ ತಯಾರಿಸಿದ ಅವರ ಬಟ್ಟೆಗಳು ಅವರ ಮುಂದುವರಿದ ಜವಳಿ ಕೌಶಲ್ಯಗಳನ್ನು ಪ್ರದರ್ಶಿಸಿದವು. ಜೊತೆಗೆ ಸೌಂದರ್ಯವರ್ಧಕಗಳು, ಕನ್ನಡಿಗಳು ಮತ್ತು ಬಾಚಣಿಗೆಗಳ ಬಳಕೆ ಮುಂತಾದ ಅಂಶಗಳು ಅವರು ಸೌಂದರ್ಯರಾಧಕರು ಎಂಬುದನ್ನು ಸಾರಿಹೇಳುತ್ತವೆ. ಮಕ್ಕಳು ಜೇಡಿಮಣ್ಣು ಮತ್ತು ಬಿದಿರಿನಿಂದ ಮಾಡಿದ ಆಟಿಕೆಗಳೊಂದಿಗೆ ಆಟವಾಡುತ್ತಿದ್ದರು ಮತ್ತು ಜನರು ಸಂಗೀತ ಮತ್ತು ನೃತ್ಯದಿಂದ ಹಿಡಿದು ಚದುರಂಗ, ಬೇಟೆ ಮತ್ತು ಗೂಳಿ ಕಾಳಗದಂತಹ ಆಟಗಳವರೆಗೆ ವಿವಿಧ ರೀತಿಯ ಮನರಂಜನೆಯನ್ನು ಆನಂದಿಸುತ್ತಿದ್ದರು. ಒಟ್ಟಾರೆಯಾಗಿ, ಹರಪ್ಪಾ ಸಾಮಾಜಿಕ ವ್ಯವಸ್ಥೆಯು ದೈನಂದಿನ ಜೀವನದಲ್ಲಿ ಸೌಂದರ್ಯ, ಸಮತೋಲನ ಮತ್ತು ಸಾಮರಸ್ಯವನ್ನು ಗೌರವಿಸುವ ರೋಮಾಂಚಕ, ಸುಸಂಸ್ಕೃತ ಮತ್ತು ಪ್ರಗತಿಪರ ನಾಗರಿಕತೆಯನ್ನು ಚಿತ್ರಿಸುತ್ತದೆ.

ಗೌತಮ ಬುದ್ಧನ ಜೀವನ ಹಾಗೂ ಬೋಧನೆ

ಗೌತಮ ಬುದ್ಧನ ಜೀವನ ಹಾಗೂ ಬೋಧನೆ

ಗೌತಮ ಬುದ್ಧನ ಜೀವನ

ಬಾಲ್ಯ : ಏಷ್ಯಾದ ಬೆಳಕು ಎಂದು ಹೆಸರಾದ ಗೌತಮಬುದ್ಧ ಬೌದ್ಧ ಧರ್ಮದ ಸ್ಥಾಪಕ. ಈತ ಒಬ್ಬ ಮಹಾನ್ ದಾರ್ಶನಿಕ. ಈತನನ್ನು ಶಾಕ್ಯಮುನಿ ಹಾಗೂ ತಥಾಗತ ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ. ಈತ ಕ್ರಿ.ಪೂ. 583 ರಂದು ವೈಶಾಖ ಶುದ್ಧ ಪೂರ್ಣಿಮೆಯಂದು ನೇಪಾಳದ ಲುಂಬಿನಿ ವನದಲ್ಲಿ ಜನಿಸಿದನು.  ತ್ರಿಪೀಟಕಗಳು ಹಾಗೂ ಜಾತಕ ಕಥೆಗಳು ಬುದ್ಧನ ಬಗ್ಗೆ ವಿವರಣೆ ನೀಡುತ್ತವೆ. ಈತನ ತಂದೆ ಶುದ್ಧೋದನ ಹಾಗೂ ತಾಯಿ ಮಾಯಾದೇವಿ, ಬುದ್ಧನ ಮೂಲ ಹೆಸರು ಸಿದ್ದಾರ್ಥ, ಶುದ್ಧೋದನ ಕಪಿಲ ವಸ್ತುವಿನ ಶಾಕ್ಯ ಕುಲಕ್ಕೆ ಸೇರಿದವನು. ಸಿದ್ದಾರ್ಥ ಜನಿಸಿದ ಕೇವಲ 7 ದಿನಗಳಲ್ಲಿ ಮಾಯಾದೇವಿ ತೀರಿಕೊಂಡಳು. ನಂತರ ಬುದ್ಧ ತನ್ನ ಮಲತಾಯಿ ಪ್ರಚಾಪತಿ ಗೌತಮಿಯ ಆಶ್ರಮದಲ್ಲಿ ಬೆಳೆದನು. ಸಂಪ್ರದಾಯದಂತೆ ಸಿದ್ದಾರ್ಥ ಜನಿಸಿದ ತಕ್ಷಣ ಶುದ್ಧೋದನ ಜ್ಯೋತಿಷಿಗಳನ್ನು ಕರೆದು ಮಗನ ಭವಿಷ್ಯವನ್ನು ಕೇಳಿದನು. ಈತ ಮಹಾರಾಜನಾಗುತ್ತಾನೆ ಇಲ್ಲವೆ ಜಗತ್ತನ್ನು ಉದ್ಧರಿಸುವ ಸನ್ಯಾಸಿಯಾಗುತ್ತಾನೆ ಎಂದು ಜ್ಯೋತಿಷಿ ಹೇಳಿದನು. ಈ ಮಾತನ್ನು ಕೇಳಿ ದಿಗ್ಬ್ರಮೆಗೊಂಡ ಶುದ್ಧೋದನ ತನ್ನ ಮಗ ಸನ್ಯಾಸಿಯಾಗದಿರಲಿ ಎಂದು ಬಯಸಿ ಅರಮನೆಯಲ್ಲಿಯೇ ಅವನಿಗೆ ಸಕಲ ಸೌಲಭ್ಯಗಳನ್ನು ಒದಗಿಸಿದನು. ಅವನಿಗಾಗಿ ಅರಮನೆಗಳನ್ನು ನಿರ್ಮಿಸಿದನು. ಯಾಕೆಂದರೆ ತನ್ನ ಮಗ ಪ್ರಸಿದ್ಧ ಸಾಮ್ರಾಟನಾಗಲು ಬಯಸಿದ್ದನೇ ಹೊರತು ಸನ್ಯಾಸಿಯಾಗಲು ಅಲ್ಲ. ಹೀಗಾಗಿ ತನ್ನ ಮಗನ ಮನಸ್ಸಿಗೆ ಘಾಸಿಯಾಗುವ ಯಾವುದೇ ಘಟನೆ ನಡೆಯದಂತೆ ಎಚ್ಚರಿಕೆವಹಿಸಿದನು.

ವೈವಾಹಿಕ ಜೀವನ : ಬಾಲ್ಯದಿಂದಲೇ ಸಿದ್ದಾರ್ಥನಿಗೆ ಆಧ್ಯಾತ್ಮದ ಕಡೆಗೆ ಒಲವಿತ್ತು. ಹೀಗಾಗಿ ಶುದ್ಧೋದನ ತನ್ನ ಮಗನ ಮನಸ್ಸನ್ನು ಬೇರೆಡೆಗೆ ಸೆಳೆಯಲು ಉತ್ತಮ ಶಿಕ್ಷಣ ನೀಡುವ ಸಕಲ ಏರ್ಪಾಡು ಮಾಡಿದನು. ಸಿದ್ದಾರ್ಥ 16ನೇ ವಯಸ್ಸಿಗೆ ಬಂದಾಗ ಅವನ ಸೋದರ ಮಾವನ ಮಗಳಾದ ಯಶೋಧರಾ, ಭದ್ಧಕಚ್ಛಾನಾ, ಸುಭದ್ರಕಾ, ಬಿಂಬಾ ಅಥವಾ ಗೋಪಾ ಎಂದು ಕರೆಯಲ್ಪಡುವ ರಾಜಕುಮಾರಿಯೊಡನೆ ಮದುವೆ ಮಾಡಲಾಯಿತು. 13 ವರ್ಷಗಳ ಕಾಲ ಸಾಂಸಾರಿಕ ಜೀವನ ನಡೆಸಿ ರಾಹುಲ ಎಂಬ ಮುದ್ದಾದ ಮಗುವನ್ನು ಪಡೆದನು.

1) ನಾಲ್ಕು ಘಟನೆಗಳು : ಸಿದ್ದಾರ್ಥ ಅರಮನೆಯ ಸುಖಭೋಗ ಜೀವನದಲ್ಲಿ ಕೆಲಕಾಲ ಕಳೆದ ನಂತರ ಹೊರಪ್ರಪಂಚದ ಕುತೂಹಲವಾಯಿತು. ಒಂದು ದಿನ ಅರಮನೆಯ ಆಚೆ ಹೋಗಬೇಕೆನಿಸಿ ತನ್ನ ಸೇವಕ ಚನ್ನನೊಂದಿಗೆ ಕುದುರೆಯನ್ನು ಏರಿ ವಾಯುವಿಹಾರಕ್ಕೆ ಹೊರಟನು. ಈ ಸಂದರ್ಭದಲ್ಲಿ ಆತ ಕೆಳಕಂಡ ನಾಲ್ಕು ಮಹಾ ಘಟನೆಯನ್ನು ನೋಡಿದನು.

1) ವೃದ್ಧಾಪ್ಯದಿಂದ ನರಳುತ್ತಿದ್ದ ಮನುಷ್ಯ

2) ರೋಗದಿಂದ ಬಳಲುತ್ತಿದ್ದ ವಯೋವೃದ್ಧ

3) ಸನ್ಯಾಸಿ ಹಾಗೂ

4) ಹೆಣ

ಈ ನಾಲ್ಕು ದೃಶ್ಯಗಳು ಸಿದ್ದಾರ್ಥನ ಮನಸ್ಸಿನ ಮೇಲೆ ಗಾಢವಾದ ಪರಿಣಾಮವನ್ನು ಉಂಟು ಮಾಡಿದವು. ಮುಪ್ಪು, ರೋಗ ಹಾಗೂ ಮರಣಗಳಿಗೆ ತುತ್ತಾಗಬಲ್ಲ ಮಾನವ ದೇಹ ಕ್ಷಣಿಕ ಎಂಬ ಭಾವನೆಯನ್ನುಂಟು ಮಾಡಿದವು. ಇದರಿಂದ ಆತ ಮೋಹವಿಲ್ಲದ ಏಕಾಂತ ಜೀವನವನ್ನು ಬಯಸತೊಡಗಿದನು. ಈ ಸಮಸ್ಯೆಗೆ ಪರಿಹಾರ ಕಂಡುಹಿಡಿಯಲು ಪ್ರಯತ್ನಿಸಿದನು

2)ಮಹಾಪರಿತ್ಯಾಗ : ಮುಪ್ಪು, ರೋಗ, ಸಾವು ಇವು ಸಿದ್ದಾರ್ಥನ ಮನಸ್ಸನ್ನು ಕಲಕಿದವು. ಅರಮನೆಯ ವೈಭೋಗ, ದುಃಖಮಯ ಜೀವನ, ಇವುಗಳಿಂದ ಅವನು ಬೇಸರಗೊಂಡಿದ್ದನು. ಮಾನವರೆಲ್ಲರ ಕಷ್ಟಕೋಟಲೆಗಳಿಗೆ ಕಾರಣವಾದ ಕಣ್ಣೀರನ್ನು ಒರೆಸಲು ಯತ್ನಿಸಿ ಸಂಸಾರವನ್ನು ತ್ಯಜಿಸಲು ತೀರ್ಮಾನಿಸಿದನು. ತನ್ನ 29ನೇ ವಯಸ್ಸಿನಲ್ಲಿ ಸಿದ್ದಾರ್ಥ ಒಂದು ರಾತ್ರಿ ತನ್ನ ಮಲತಾಯಿ, ಹೆಂಡತಿ, 6 ದಿನಗಳ ಮಗ ರಾಹುಲ, ಅರಮನೆ, ವೈಭೋಗ ಎಲ್ಲವನ್ನೂ ತೊರೆದು ಸನ್ಯಾಸಿಯಾಗಿ ಕಾಡಿಗೆ ಹೋದನು. ಇದನ್ನೇ ಮಹಾಪರಿತ್ಯಾಗ ಎಂದು ಕರೆಯಲಾಗಿದೆ.

3)ಸತ್ಯಾನ್ವೇಷಣೆ : ಸಿದ್ದಾರ್ಥ ಸನ್ಯಾಸಿಯ ಉಡುಪನ್ನು ಧರಿಸಿ ಕಾಡಿಗೆ ಹೋದನು. ಬದುಕಿನ ಸತ್ಯವನ್ನು ಹಾಗೂ ದುಃಖಕ್ಕೆ ಪರಿಹಾರವನ್ನು ಕಾಣಲು ಏಳು ವರ್ಷಗಳ ಕಾಲ ಗುರುಗಳ ಹತ್ತಿರ ಅಲೆದನು. ಇದರಿಂದ ಯಾವ ಪ್ರಯೋಜನವೂ ಆಗಲಿಲ್ಲ. ಸಿದ್ದಾರ್ಥ ವೈಶಾಲಿಯ ಪ್ರಸಿದ್ಧ ದಾರ್ಶನಿಕನಾದ ಆರದ ಕಲಮನ ಬಳಿ ಎರಡು ವರ್ಷ ಶಿಷ್ಯನಾಗಿದ್ದನು. ಅಲ್ಲಿಯೂ ಅವನಿಗೆ ಸಾಧನೆಯ ಮಾರ್ಗ ಸಿಗಲಿಲ್ಲ. ಆನಂತರ ರಾಜಗೃಹಕ್ಕೆ ಹೋಗಿ ಉದ್ರಕಿ ಎಂಬುವವನ ಬಳಿ ಧ್ಯಾನಕ್ಕೆ ಕುಳಿತು ಏಕಾಗ್ರತೆಯನ್ನು ಪಡೆದನು. ಅನಂತರ ಗಯಾ ಕ್ಷೇತ್ರದ ಬಳಿಯಿರುವ ಉರುವಿಲ್ಲದಲ್ಲಿ ಕಠಿಣ ತಪಸ್ಸನ್ನು ಆಚರಿಸಿ ಎಲುಬಿನ ಹಂದರವಾದನು. ಆದರೂ ಆತನಿಗೆ ಜ್ಞಾನೋದಯವಾಗಲಿಲ್ಲ. ಕೊನೆಗೆ ನಿರಂಜನಾ ನದಿಯಲ್ಲಿ ಸ್ನಾನ ಮಾಡಿ ಸುಜಾತಾ ಎಂಬ ಕನ್ಯೆ ನೀಡಿದ ಮಧುಪಾಯಸವನ್ನು ಸ್ವೀಕರಿಸಿದನು. ಇದರಿಂದ ಅವನು ಜೀವ ಶಕ್ತಿಯನ್ನು ಪಡೆದನು. ನಿರಾಳ ಭಾವನೆಯಿಂದ ಬೋಧಗಯಾ ಬಳಿಯಿರುವ ಉರುವಲ ಎಂಬ ಗ್ರಾಮದ ಬಳಿಯ ಅರಳಿ ಮರದ ಕೆಳಗೆ ಕುಳಿತು ಧ್ಯಾನ ಮಗ್ನನಾದನು. ಕೊನೆಗೆ ವೈಶಾಖ ಶುದ್ಧ ಪೂರ್ಣಿಮೆಯ ದಿನ ಜ್ಞಾನೋದಯವಾಯಿತು. ಅಂದಿನಿಂದ ಸಿದ್ದಾರ್ಥ ಬುದ್ಧನಾದನು. ಬುದ್ಧ ಎಂದರೆ ಜ್ಞಾನೋದಯ ಅಥವಾ ಪರಮಜ್ಞಾನ ಪಡೆದವನು ಎಂದರ್ಥ, ಬುದ್ಧನು ತಪಸ್ಸು ಮಾಡಿದ ಸ್ಥಳವನ್ನು ಬೋಧಗಯಾ ಎಂದೂ, ಆ ಅರಳಿಮರವನ್ನು ಬೋಧಿವೃಕ್ಷ ಎಂದೂ ಕರೆಯಲಾಯಿತು.

4)ಧರ್ಮಚಕ್ರಪ್ರವರ್ತನ ಕಾಲ : ಬುದ್ಧ ತಾನು ಕಂಡುಕೊಂಡ ಪರಮ ಸತ್ಯವನ್ನು ಜನಸಾಮಾನ್ಯರಿಗೆ ತಿಳಿಸಲು ಅವನು ತನ್ನ ಮೊದಲ ಉಪದೇಶವನ್ನು ವಾರಣಾಸಿ ಸಮೀಪವಿರುವ ಸಾರನಾಥದ ಜಿಂಕೆಯ ವನದಲ್ಲಿ ನೀಡಿದನು. ಈ ಘಟನೆಯನ್ನೇ ಧರ್ಮಚಕ್ರ ಪ್ರವರ್ತನ ಅಥವಾ ಧರ್ಮಚಕ್ರ ತಿರುಗುವಿಕೆ ಎಂದು ಕರೆಯಲಾಗಿದೆ. ಬುದ್ಧನ ಮೊದಲ ಐದು ಜನ ಶಿಷ್ಯಂದಿರೆಂದರೆ ಕೊಂಡಣ್ಣ, ಎಪ್ಪು, ಭವ್ಹಾಜಿ, ಮಹಾನಾಮ ಹಾಗೂ ಅನ್ನಾಜಿ. ನಂತರ ಬುದ್ಧ ಈ ಐವರ ಸಹಾಯದೊಂದಿಗೆ ಬೌದ್ಧ ಸಂಘವನ್ನು ಸ್ಥಾಪಿಸಿದನು. ಅಂದಿನಿಂದ ಬುದ್ಧನ ಧರ್ಮಚಕ್ರ ಉರುಳಲು ಆರಂಭಿಸಿತು.

5)ಬೌದ್ಧ ಧರ್ಮದ ಪ್ರಚಾರ : ಬುದ್ಧನು ತನ್ನ ಉಳಿದ 45 ವರ್ಷಗಳ ಕಾಲ ಊರೂರು ಅಲೆಯುತ್ತಾ ತನ್ನ ಬೋಧನೆಗಳನ್ನು ಮಾಡಿದನು. ಈ ಅವಧಿಯಲ್ಲಿ ಆತ ಕಾಶಿ, ಸಾರನಾಥ, ರಾಜಗೃಹ, ಕೌಶಾಂಬಿ, ಮಗಧ, ಕೋಶಲ, ಅಂಗ, ಮಿಥಿಲ ಹಾಗೂ ಕಪಿಲ ವಸ್ತುಗಳಿಗೆ ಭೇಟಿ ನೀಡಿದನು. ತಾನು ಹೋದಡೆಯಲೆಲ್ಲಾ ಬೆಂಬತ್ತಿ ಬಂದ ಜನರಿಗೆ ಭೇದ ಭಾವವಿಲ್ಲದೆ ಧರ್ಮಬೋಧೆಮಾಡಿದನು. ಆನಂದ ಈತನ ಮೊದಲ ಶಿಷ್ಯನಾಗಿದ್ದನು. ಬುದ್ಧನು ವರ್ಷದಲ್ಲಿ 4 ತಿಂಗಳು ಮಳೆಗಾಲವನ್ನು ಒಂದು ಕಡೆ ಕಳೆದು, ಉಳಿದ ಎಂಟು ತಿಂಗಳ ಕಾಲ ಪ್ರವಾಸದಲ್ಲಿ ತೊಡಗಿರುತ್ತಿದ್ದನು. ಹೀಗಾಗಿ ಆತನ ಧರ್ಮ ಬಹುಬೇಗ ಪಸರಿಸಿತು. ನಂತರ ಬುದ್ಧ ತನ್ನ 80ನೇ ವಯಸ್ಸಿನಲ್ಲಿ ಉತ್ತರ ಪ್ರದೇಶದ ಗೋರಕ್‌ಪುರ ಜಿಲ್ಲೆಯ ಕುಶಿನಗರ ಎಂಬಲ್ಲಿ ಕ್ರಿ.ಪೂ. 503ರಲ್ಲಿ ಪರಿನಿರ್ವಾಣ ಹೊಂದಿದನು. ಒಂದು ಆಸಕ್ತಿಕರವಾದ ವಿಷಯವೆಂದರೆ ಬುದ್ಧನ ಜನನ, ಜ್ಞಾನೋದಯ ಮತ್ತು ಮರಣ ವೈಶಾಕ ಶುದ್ಧ ಪೂರ್ಣಿಮೆಯಂದು ಸಂಭವಿಸಿದವು. ಆದುದರಿಂದ ಬೌದ್ಧರು ಅವನ ಜನ್ಮದಿನವನ್ನು ಬೌದ್ಧ ಪೂರ್ಣಿಮೆ ಎಂದು ಆಚರಿಸುತ್ತಾರೆ.

ಗೌತಮ ಬುದ್ಧನ ಬೋಧನೆಗಳು :

ಬುದ್ಧನ ಬೋಧನೆಗಳನ್ನು ಬೌದ್ಧರ ಪವಿತ್ರ ಗ್ರಂಥಗಳಾದ ತ್ರಿಪೀಟಕಗಳಾದ ಸುತ್ತಪಿಟಿಕ, ಅಭಿದಮ್ಮ ಪಿಟಿಕ ಹಾಗೂ ವಿನಯ ಪಿಟಿಕೆಗಳಲ್ಲಿ ಕಾಣಬಹುದು. ಇವುಗಳನ್ನು ಮೂರು ಪವಿತ್ರ ಬುಟ್ಟಿಗಳೆಂದು ಕರೆಯಲಾಗಿದೆ.

1)ನಾಲ್ಕು ಮೂಲ ತತ್ವಗಳು :

ಎ) ಅಹಿಂಸೆ (ಪ್ರಾಣಿ ಹಿಂಸೆ ಮಾಡದಿರುವುದು).

ಬಿ) ಸತ್ಯ (ಸುಳ್ಳು ಹೇಳದಿರುವುದು),

ಸಿ) ಕಳ್ಳತನ ಮಾಡದಿರುವುದು.

ಡಿ) ಪಾವಿತ್ರ್ಯತೆಯನ್ನು ಕಾಪಾಡುವುದು/ಬ್ರಹ್ಮಚರ್ಯೆಯನ್ನು ಪಾಲಿಸುವುದು.

2)ನಾಲ್ಕು ಆರ್ಯ ಸತ್ಯಗಳು :

ಎ) ಜೀವನವು ಅತ್ಯಂತ ದುಃಖಮಯವಾಗಿದೆ. (ಜನ್ಮ, ವೃದ್ಧಾಪ್ಯ, ರೋಗ, ಸಾವು ಇವೇ ದುಃಖದ ಮೂಲಗಳು)

ಬಿ) ದುಃಖಕ್ಕೆ ಆಸೆಯೇ ಮೂಲಕಾರಣ.

ಸಿ) ಆಸೆಯನ್ನು ತ್ಯಜಿಸಿದರೆ ದುಃಖದಿಂದ ಮುಕ್ತಿ ಹೊಂದಬಹುದು.

ಡಿ) ದುಃಖದಿಂದ ಪಾರಾಗಲು ಅಷ್ಟಾಂಗ ಮಾರ್ಗಗಳನ್ನು ಅನುಸರಿಸುವುದು.

3) ಅಷ್ಟಾಂಗ ಮಾರ್ಗಗಳು : ಅಷ್ಟಾಂಗ ಮಾರ್ಗಗಳನ್ನು ಅನುಸರಿಸುವುದರಿಂದ ಹುಟ್ಟು- ಸಾವುಗಳಿಂದ ಮುಕ್ತಿ ಹೊಂದಬಹುದು. ಬುದ್ಧ ಹೇಳಿದ ಅಷ್ಟಾಂಗ ಮಾರ್ಗಗಳೆಂದರೆ:

1) ಸಮ್ಯಕ್ ನುಡಿ    –          ಅಸತ್ಯವನ್ನು ನುಡಿಯದಿರುವುದು ಹಾಗೂ ಪರರ ನಿಂದನೆ ಮಾಡದಿರುವುದು.)

2) ಸಮ್ಯಕ್ ಚಾರಿತ್ರ್ಯ   –     ಕೊಲೆ, ಕಳ್ಳತನ ಹಾಗೂ ಅನೈತಿಕ ವ್ಯವಹಾರದಿಂದ ದೂರವಿರುವುದು.

3) ಸಮ್ಯಕ್ ಜೀವ     –        ಬೇರೆ ಜೀವಿಗಳಿಗೆ ತೊಂದರೆ ಕೊಡದಿರುವುದು

4) ಸಮ್ಯಕ್ ವಿಚಾರ   –        ಮನಸ್ಸಿನಲ್ಲಿ ಒಳ್ಳೆಯ ವಿಚಾರಗಳನ್ನು ಇಟ್ಟುಕೊಳ್ಳುವುದು

5) ಸಮ್ಯಕ್ ನಂಬಿಕೆ    –       ಪರರಲ್ಲಿ ನಂಬಿಕೆ ಇಡುವುದು

6) ಸಮ್ಯಕ್ ಪ್ರಯತ್ನ   –       ಒಳ್ಳೆಯ ಪ್ರಯತ್ನಗಳನ್ನು ಮಾಡುವುದು

7) ಸಮ್ಯಕ್ ಧ್ಯಾನ      –        ಮನಸ್ಸನ್ನು ಹತೋಟಿಗೊಳಪಡಿಸಿಕೊಳ್ಳುವುದು

8) ಸಮ್ಯಕ್ ನೆನಪು     –        ಆತ್ಮಜ್ಞಾನ ಹಾಗೂ ಸಂಯಮದಿಂದ ಇರುವುದು

4) ಬೌದ್ಧ ಧರ್ಮದ ತ್ರಿರತ್ನಗಳು : ಬೌದ್ಧ ಧರ್ಮದಲ್ಲಿ ಬುದ್ಧ, ಧರ್ಮ ಮತ್ತು ಸಂಘ ಎಂಬುದು ಮೂರು ತ್ರಿರತ್ನಗಳಾಗಿವೆ.  ಬುದ್ಧಂ ಶರಣಂ ಗಚ್ಛಾಮಿ ಧರ್ಮಂ ಶರಣಂ ಗಚ್ಛಾಮಿ – ಸಂಘಂ ಶರಣಂ ಗಚ್ಛಾಮಿ

1. ಬುದ್ಧಂ ಶರಣಂ ಗಚ್ಛಾಮಿ :

ಅಂದರೆ “ನಾನು ಬುದ್ಧನಲ್ಲಿ ಶರಣಾಗುತ್ತೇನೆ” — ಆತನು ಜ್ಞಾನೋದಯವನ್ನು ಹೊಂದಿದ ಗುರು, ಮಾನವಕುಲಕ್ಕೆ ಮುಕ್ತಿಯ ಮಾರ್ಗ ತೋರಿಸಿದ ಪ್ರೇರಕ.

2. ಧಮ್ಮಂ ಶರಣಂ ಗಚ್ಛಾಮಿ :

ಅಂದರೆ “ನಾನು ಧರ್ಮದಲ್ಲಿ ಶರಣಾಗುತ್ತೇನೆ” — ಬುದ್ಧನು ಬೋಧಿಸಿದ ಸತ್ಯ, ಜ್ಞಾನ ಮತ್ತು ದುಃಖ ನಿವಾರಣೆಯ ಮಾರ್ಗವಾದ ಧರ್ಮದಲ್ಲಿ ಶರಣಾಗುವುದು.

3. ಸಂಘಂ ಶರಣಂ ಗಚ್ಛಾಮಿ :

ಅಂದರೆ “ನಾನು ಸಂಘದಲ್ಲಿ ಶರಣಾಗುತ್ತೇನೆ” — ಬುದ್ಧನ ಉಪದೇಶಗಳನ್ನು ಅನುಸರಿಸುವ ಭಿಕ್ಷುಗಳು, ಭಿಕ್ಷುನಿಯರು ಮತ್ತು ನಿಷ್ಠಾವಂತ ಅನುಯಾಯಿಗಳ ಸಮುದಾಯದಲ್ಲಿ ಶರಣಾಗುವುದು.

ಒಟ್ಟಾರೆ: ಇದು ಜ್ಞಾನ (ಬುದ್ಧ), ಸತ್ಯ (ಧಮ್ಮ), ಮತ್ತು ಆಧ್ಯಾತ್ಮಿಕ ಸಹವಾಸ (ಸಂಘ) — ಈ ಮೂರು ಶ್ರೇಷ್ಠ ಶರಣಾಗತಿಗಳಲ್ಲಿ ನಂಬಿಕೆಯನ್ನು ಸೂಚಿಸುವ ಬೌದ್ಧ ಜೀವನದ ಮೂಲ ತತ್ವವಾಗಿದೆ.

5) ಅಹಿಂಸೆ : ಬುದ್ಧ ಹಿಂಸೆಯನ್ನು ಖಂಡಿಸಿದನು. ಅಹಿಂಸಾವಾದಕ್ಕೆ ಹೆಚ್ಚು ಒತ್ತು ನೀಡಿದನು. ಜಗತ್ತಿನ ಪ್ರತಿ ಜೀವಿಯಲ್ಲೂ ಜೀವವಿದೆ ಅದನ್ನು ಹಿಂಸಿಸುವುದು ಮಹಾಪಾಪ ಎಂದು ಬೋಧಿಸಿದನು. ಯಜ್ಞಯಾಗಾದಿಗಳಲ್ಲಿ ಆಗುತ್ತಿದ್ದ ಪ್ರಾಣಿಬಲಿಯನ್ನು ಉಗ್ರವಾಗಿ ಖಂಡಿಸಿದನು. ಹಿಂಸಾತ್ಮಕ ಮಾರ್ಗವನ್ನು ಬಿಟ್ಟು ಸ್ನೇಹ, ಪ್ರೀತಿ, ಶಾಂತಿ, ಅನುಕಂಪ ಹಾಗೂ ಸೌಹಾರ್ಧತೆಯಿಂದ ಬದುಕುವಂತೆ ತನ್ನ ಅನುಯಾಯಿಗಳಿಗೆ ಕರೆನೀಡಿದನು.

6) ಜಾತಿ ಪದ್ಧತಿಯ ಖಂಡನೆ : ಬುದ್ಧ ಜಾತಿ ಪದ್ಧತಿಯನ್ನು ಖಂಡಿಸಿದನು. ಮನುಷ್ಯನ ಯೋಗ್ಯತೆಯನ್ನು ಅವನ ವ್ಯಕ್ತಿತ್ವದಿಂದ ಅಳೆಯಬೇಕೆ ವಿನಃ ಜಾತಿಯಿಂದ ಅಲ್ಲ ಎಂದನು. ಈ ಕಾರಣಕ್ಕಾಗಿ ಬುದ್ಧ ತನ್ನ ಸಂಘದಲ್ಲಿ ಸಾವಿರಾರು ಅಸ್ಪೃಶ್ಯರಿಗೆ ಸದಸ್ಯತ್ವವನ್ನು ನೀಡಿದನು.

7) ಪುನರ್ ಜನ್ಮ ಹಾಗೂ ಕರ್ಮ : ಮಹಾವೀರನಂತೆ ಬುದ್ಧ ಕೂಡಾ ಪುನರ್‌ಜನ್ಮ ಮತ್ತು ಕರ್ಮಗಳಲ್ಲಿ ನಂಬಿಕೆ ಇಟ್ಟಿದ್ದನು. ಮಾನವನ ಇಂದಿನ ಹುಟ್ಟು ಸಾವುಗಳಿಗೆ ಹಿಂದಿನ ನಮ್ಮ ಕರ್ಮಗಳೇ ಕಾರಣವಾಗಿವೆ. ಆದ್ದರಿಂದ ಉತ್ತಮ ಕರ್ಮಗಳನ್ನು ನಾವು ಮಾಡಿದರೆ ಮೋಕ್ಷ ಪಡೆಯಬಹುದು ಎಂದು ಬುದ್ಧ ಬೋಧಿಸಿದನು.

ಉಪಸಂಹಾರ :

ಗೌತಮ ಬುದ್ಧನ ಮಹತ್ವ ಮಾನವತೆಯ ಶಾಂತಿ, ಸಮಾನತೆ ಮತ್ತು ನೈತಿಕತೆಯ ಆಧಾರಶಿಲೆಯಾಗಿದೆ. ಆತ ಅಹಿಂಸೆ, ಸತ್ಯ, ಕರುಣೆ, ಸಹಿಷ್ಣುತೆ ಮತ್ತು ಸ್ವಸಂಯಮದ ಮೂಲಕ ಮಾನವನ ಆತ್ಮೋನ್ನತಿಗೆ ದಾರಿ ತೋರಿಸಿದನು. ಜಾತಿ, ಧರ್ಮ, ಲಿಂಗ ಅಥವಾ ಸಂಪತ್ತಿನ ಆಧಾರದ ಮೇಲೆ ಬೇಧವಿಲ್ಲದೆ ಎಲ್ಲರನ್ನು ಸಮಾನವಾಗಿ ಕಾಣುವ ಬೌದ್ಧ ತತ್ವಗಳು ಸಾಮಾಜಿಕ ನ್ಯಾಯ ಮತ್ತು ಮಾನವ ಹಕ್ಕುಗಳ ಮೂಲ ಆಧಾರಗಳಾಗಿವೆ. ಇಂದಿನ ಅಶಾಂತ, ಹಿಂಸಾತ್ಮಕ ಮತ್ತು ಸ್ಪರ್ಧಾತ್ಮಕ ಯುಗದಲ್ಲಿ ಬುದ್ಧನ ಬೋಧನೆಗಳು ಅತಿ ಪ್ರಸ್ತುತವಾಗಿದ್ದು, ಅವು ಮಾನವನಿಗೆ ಆತ್ಮಶಾಂತಿ, ಸಾಮಾಜಿಕ ಸೌಹಾರ್ದತೆ ಹಾಗೂ ಪರಿಸರಸಂರಕ್ಷಣೆಯ ಮಾರ್ಗದರ್ಶನ ನೀಡುತ್ತವೆ. ಬುದ್ಧನ ಅಹಿಂಸೆ ಮತ್ತು ಮಿತಾಭೋಗದ ಸಂದೇಶವು ಇಂದಿನ ಜಾಗತಿಕ ಸಮಾಜಕ್ಕೆ ಮಾನವೀಯತೆ ಮತ್ತು ಶಾಂತಿಯ ದಾರಿ ತೋರಿಸುವ ಶಾಶ್ವತ ಬೆಳಕಾಗಿದೆ.

ಅಶೋಕ ಧಮ್ಮ

ಅಶೋಕ ಧಮ್ಮ

ಧರ್ಮ ಎಂಬ ಪದದ ಪ್ರಾಕೃತ ರೂಪವೇ ʻಧಮ್ಮ’. ಅಂದರೆ ಧಾರ್ಮಿಕತೆ, ದೈವಭಕ್ತಿ (Law of Piety), ನೈತಿಕತೆ, ಸಾಮಾಜಿಕ ಮತ್ತು ಧಾರ್ಮಿಕ ವ್ಯವಸ್ಥೆ ಎಂಬ ಅರ್ಥಗಳನ್ನು ಹೊಂದಿದೆ. ಅಶೋಕ ಧಮ್ಮದ ಮೂಲಭೂತ ತತ್ವಗಳನ್ನು ಅಶೋಕನೇ ಕೆತ್ತಿಸಿದ ಶಿಲಾಶಾಸನ ಗಳಲ್ಲಿ ಕಾಣಬಹುದು. ಅವುಗಳೆಂದರೆ

ಸಂಯಮ (Mastery of Senses)
ದಯಾ (Kindness)
ಶುಶೃಷಾ (Service)
ಅಪಚಿತ್ತಿ (Reverence – Deep Respect)
ದಾನ (Charity)
ಸಂಪ್ರತಿಪತ್ತಿ (Support)
ಕೃತಜ್ಞತಾ, (Gratitude)
ಶೌಚ (Purity)
ಭಾವಶುದ್ಧಿ (Purity of Thought)
ದೃಡಭಕ್ತಿ (Devotion)
ಸತ್ಯ (Truthfullness)
ಅಪಿಚಿತ್ತಿ (Reverence – Deep Respect)

ಈ ಮೇಲ್ಕಂಡ ಅಂಶಗಳನ್ನು ಒಳಗೊಂಡ ಅಶೋಕ ಧಮ್ಮವು ಯಾವ ಧರ್ಮದಿಂದ ಆಧಾರಿತವಾಗಿದೆ ಅಥವಾ ಪ್ರಭಾವಿತವಾಗಿದೆ ಎಂಬ ವಿಷಯಕ್ಕೆ ಸಂಬಂಧಿಸಿದಂತೆ ವಿದ್ವಾಂಸರಲ್ಲಿ ಭಿನ್ನಾಭಿಪ್ರಾಯಗಳಿವೆ.

ಡಾ. ಭಂಡಾರ್ಕರ್‌ ರವರ ಪ್ರಕಾರ ಅಶೋಕ ಧಮ್ಮವು ಬೌದ್ಧ ಧರ್ಮವಾಗಿದೆ. ಅವನು ಬೌದ್ಧಧರ್ಮಿಯನಾಗಿದ್ದಾನೆ. ಆದರೆ ಅದನ್ನು ವಿರೋಧಿಸುವ ಡಾ. ರಾಧಾಕುಮುದ್ ಮುಖರ್ಜಿಯವರು ಅಶೋಕ ತನ್ನ ಶಿಲಾಶಾಸನಗಳಲ್ಲಿ ಪ್ರತಿಪಾದಿಸಿದ ಧಮ್ಮ ಬೌದ್ಧಧರ್ಮವೇ ಆಗಿದ್ದರೆ, ಭಗವಾನ್ ಬುದ್ಧನ ನಾಲ್ಕು ಆರ್ಯಸತ್ಯಗಳನ್ನು ಹೇಳುತ್ತಿದ್ದ. ಅಷ್ಟಾಂಗಿಕ ಮಾರ್ಗಗಳನ್ನು ಮತ್ತು ನಿರ್ವಾಣವನ್ನಾದರೂ ಉಲ್ಲೇಖಿಸುತ್ತಿದ್ದ. ಭಗವಾನ್ ಬುದ್ಧನ ಮಹಾನ್ ವ್ಯಕ್ತಿತ್ವವನ್ನಾದರೂ ಕೊಂಡಾಡುತ್ತಿದ್ದ. ಆದರೆ ಅದ್ಯಾವುದನ್ನು ಮಾಡದ ಅಶೋಕ ಧಮ್ಮ, ಬೌದ್ಧಧರ್ಮ ಅಲ್ಲವೇ ಅಲ್ಲ ಎನ್ನುವುದು ಮುಖರ್ಜಿಯವರ ಸ್ಪಷ್ಟ ಅಭಿಪ್ರಾಯವಾಗಿದೆ.

ಕಲ್ಲಣನು ತನ್ನ ‘ರಾಜತರಂಗಿಣಿ’ ಎಂಬ ಕೃತಿಯಲ್ಲಿ ಅಶೋಕನು ಶಿವನ ಆರಾಧಕನಾಗಿದ್ದನೆಂದು ತಿಳಿಸುತ್ತಾನೆ. ಅಲ್ಲದೆ ಶಿಲಾಶಾಸನಗಳಲ್ಲಿ ತನ್ನನ್ನು ‘ದೇವನಾಂಪ್ರಿಯ ಪ್ರಿಯದರ್ಶಿ’ ಎಂದು ಕರೆದುಕೊಂಡಿದ್ದಾನೆ. ಕೆ.ಎಂ. ಪಣಿಕ್ಕರ್‌ರವರು ಈ ದೈವ ವೈದಿಕ ದೇವರಲ್ಲದೆ ಮತ್ತಾರು ಎಂದು ಪ್ರಶ್ನಿಸುತ್ತಾರೆ. ಅಂದರೆ ಅಶೋಕನು ವೈದಿಕನಾಗಿದ್ದ. ಅವನ ಧರ್ಮಕ್ಕೆ ʻವೈದಿಕಧರ್ಮ’ (ಹಿಂದೂಧರ್ಮ) ಆಧಾರವಾಗಿತ್ತು ಎಂದರ್ಥವಾಗುತ್ತದೆ. ಆದರೆ ಅದನ್ನು ವಿರೋಧಿಸುವ ಇತರೆ ವಿದ್ವಾಂಸರು ಅಶೋಕ ಪ್ರತಿಪಾದಿಸಿದ ಧಮ್ಮ ವೈದಿಕ ಧರ್ಮವೇ ಆಗಿದ್ದರೆ ಅದರ ಪ್ರತೀಕವಾದ ಪ್ರಾಣಿಬಲಿ, ಯಾಗ, ಸಂಪ್ರದಾಯ ಮತ್ತು ಆಚರಣೆಗಳಲ್ಲಿ ತನ್ನ ನಂಬಿಕೆಯನ್ನು ದೃಢಪಡಿಸುತ್ತಿದ್ದ ಎಂದಿದ್ದಾರೆ. ಆದರೆ ಅವುಗಳ ಬಗ್ಗೆ ಚಕಾರವೆತ್ತದ ಅಶೋಕ ವೈದಿಕ ಧರ್ಮದಿಂದ ಪ್ರಭಾವಿತನಾಗಿಲ್ಲ ಎಂಬುದು ತಿಳಿಯುತ್ತದೆ.

ವಾಸ್ತವವಾಗಿ ಅಶೋಕ ಧಮ್ಮವು ಯಾವುದೇ ಧರ್ಮದಿಂದ ಪ್ರಭಾವಿತವಾಗಿಲ್ಲದಿರುವುದನ್ನು ಕಾಣಬಹುದು. ಆದರೆ ಅದು ಎಲ್ಲಾ ಧರ್ಮಗಳ ಸಾರ ಸಂಗ್ರಹವಾಗಿದೆ. ಯಾವುದೇ ಜಾತಿ, ಮತ, ಧರ್ಮಗಳ ಚೌಕಟ್ಟಿಗೆ ಒಳಪಡದ ಸ್ವತಂತ್ರ ಅಭಿವ್ಯಕ್ತಿಯಾಗಿದೆ. ಡಾ. ಆರ್.ಸಿ. ಮಜುಂದಾರ್ ಪ್ರಕಾರ “ಅವನ ಧರ್ಮ ಧರ್ಮ ಎನ್ನುವುದಕ್ಕಿಂತ ಒಂದು ನೀತಿ ಸಂಹಿತೆ ಎಂದು ಕರೆಯುವುದು ಉಚಿತ’ ಎಂದಿದ್ದಾರೆ. ಆರ್.ಕೆ. ಮುಖರ್ಜಿಯವರ ಪ್ರಕಾರ “ಅಶೋಕನ ಧರ್ಮ ಯಾವುದೇ ನಿರ್ದಿಷ್ಟ ಪದ್ಧತಿಯಾಗಿರದೇ ಅದರಲ್ಲಿ ಎಲ್ಲಾ ಜಾತಿ, ಜನಾಂಗ, ಧರ್ಮಿಯರಿಗೆ ಅವಶ್ಯಕವಾದ ನೀತಿ ಸಂಹಿತೆಯಾಗಿದ್ದವು. ಅವನ ಸ್ವಂತಿಕೆ ಅಡಗಿರುವುದು ಅವನು ಮಾಡಿದ ಕಾರ್ಯಗಳಲ್ಲಿ ಅಡಗಿದೆ” ಎಂದಿದ್ದಾರೆ. ಸ್ಮಿತ್‌ರವರು ಅಶೋಕನದು ಬೌದ್ಧಧರ್ಮವಾಗಿರದೇ ಅವನದೇ ಸ್ವಂತಿಕೆಯ ಧರ್ಮವೆಂದಿದ್ದಾರೆ.

ಸಾಮಾಜಿಕ ಹೊಣೆಗಾರಿಕೆ ಮತ್ತು ಒಬ್ಬರೊಂದಿಗೆ ಮತ್ತೊಬ್ಬರ ನಡತೆಗಳು ಹೇಗಿರಬೇಕೆಂಬುದರ ಮಹತ್ವವನ್ನು ಮನವರಿಕೆ ಮಾಡಿಕೊಡುವುದು ಧಮ್ಮದ ಉದ್ದೇಶವಾಗಿತ್ತು ಎಂದು ಪ್ರೊ|| ರೊಮಿಲಾ ಥಾಪರ್ ಅಭಿಪ್ರಾಯಪಟ್ಟಿದ್ದಾರೆ. ಅಶೋಕನ ಧಮ್ಮವು 4 ಪ್ರಮುಖ ತತ್ವಗಳನ್ನು ಆದರಿಸಿತ್ತು. ಅವುಗಳೆಂದರೆ 1. ಅಹಿಂಸೆ, 2. ಸಹಿಷ್ಣುತೆ, 3. ಶಾಂತಿ, 4. ಪ್ರಜಾಕಲ್ಯಾಣ.

 ಡಾ||ಆರ್.ಕೆ.ಮುಖರ್ಜಿಯವರ ಪ್ರಕಾರ ʻಅಶೋಕನ ಧಮ್ಮವು ಯಾವುದೇ ನಿರ್ದಿಷ್ಟ ಧಮ್ಮ ಹಾಗೂ ಧಾರ್ಮಿಕ ಪದ್ಧತಿಯಾಗಿರದೆ ಎಲ್ಲಾ ಜಾತಿ ಜನಾಂಗಕ್ಕೂ ಅಗತ್ಯವಾದ ನೈತಿಕ ಕಾನೂನುಗಳಾಗಿದ್ದವು’. ಡಾ|| ಭಂಡಾರ್ಕರ್ ರವರು ʻಅಶೋಕನ ಧಮ್ಮವು ಧಾರ್ಮಿಕವಲ್ಲದ ಬೌದ್ಧಧರ್ಮವಾಗಿತ್ತು’ ಎಂದಿದ್ದಾರೆ.

ಅಶೋಕ ಧಮ್ಮದ ಲಕ್ಷಣಗಳು :

1. ಅಹಿಂಸೆ :

ಅಹಿಂಸೆಯು ಅಶೋಕ ಧಮ್ಮದ ಸಾರವಾಗಿತ್ತು. ಇವನು ಕಳಿಂಗ ಯುದ್ಧಾನಂತರ ಅಹಿಂಸಾ ನೀತಿಯನ್ನು ಪಾಲಿಸಿದನು, ತನ್ನ ರಾಜ್ಯದಲ್ಲಿ ಪ್ರಾಣಿಬಲಿಯನ್ನು ನಿಷೇಧಿಸಿದನು. ಸ್ವತಃ ಬೇಟೆಯಾಡುವುದನ್ನು ನಿಲ್ಲಿಸಿದನು. ಮಾಂಸಾಹಾರವನ್ನು ಬಿಟ್ಟುಬಿಟ್ಟನು. ಯಜ್ಞಯಾಗಗಳನ್ನು ನಿಷೇಧಿಸಿದನು. ಪ್ರಾಣಿಗಳನ್ನು ಕೊಲ್ಲದಂತೆ ರಾಜಾಜ್ಞೆಯನ್ನು ಮಾಡಿದನು. ತನ್ನ ಶಿಲಾಶಾಸನದಲ್ಲಿ ಅಹಿಂಸೆಯ ಮಹತ್ವವನ್ನು ಸಾರಿದನು.

2. ಸಹಿಷ್ಣುತೆ :

ಸಹಿಷ್ಣುತೆ ಎಂದರೆ ಗುಲಾಮರು ಮತ್ತು ನೌಕರರ ಜೊತೆಗೆ ಸಹಾನುಭೂತಿ, ಜನ್ಮದಾತ್ಮಗಳಿಗೆ ಹಿರಿಯರಿಗೆ, ಗುರುವರ್ಯರಿಗೆ ಗೌರವ ಕೊಡುವುದರ ಜೊತೆಗೆ ವಿದೇಯರಾಗಿರಬೇಕು. ಅಲ್ಲದೆ ಕಿರಿಯರಿಗೆ ಪ್ರೀತ್ಯಾದಾರಗಳನ್ನು, ಆಶ್ರಿತರಿಗೆ, ಬಡವರಿಗೆ, ಸಂಕಷ್ಟದಲ್ಲಿರುವವರಿಗೆ, ಸ್ನೇಹಿತರಿಗೆ, ಪರಿಚಿತರಿಗೆ ಸನ್ಯಾಸಿಗಳಿಗೆ ಬ್ರಾಹ್ಮಣರಿಗೆ ಔದಾರ್ಯತೆಯನ್ನು ತೋರಿಸಬೇಕೆಂದು ಹೇಳುತ್ತಾನೆ. ಅಶೋಕನ ವೈಯಕ್ತಿಕ ಧರ್ಮ ಬೌದ್ಧ ಧರ್ಮವಾಗಿದ್ದರೂ ಅನ್ಯ ಮತಗಳನ್ನು ಕೀಳಾಗಿ ಕಾಣಲಿಲ್ಲ. ಬ್ರಾಹ್ಮಣರನ್ನು ಪ್ರೀತಿ ವಿಶ್ವಾಸಗಳಿಂದ ಕಂಡನು.

ಎರಡನೇ ಶಿಲಾಶಾಸನದಲ್ಲಿ ಅರಸನು ಎಲ್ಲಾ ಪಂಥಗಳನ್ನು ಗೌರವಿಸುತ್ತಾನೆ ಎಂದು ಅಶೋಕನೇ ಬರೆಸಿದ್ದಾನೆ. ಅಲ್ಲದೇ ಅಜೀವಿಕರಿಗಾಗಿ ಗಯಾ ಬಳಿ ಗುಹೆಗಳನ್ನು ಸಹ ನಿರ್ಮಿಸಿದ್ದಾನೆ. ಯಾರನ್ನೂ ಸಹ ಮತಾಂತರಕ್ಕೆ ಅಶೋಕ ಬಲಾತ್ಕರಿಸಲಿಲ್ಲ. ಇದು ಅಶೋಕನ ಮತ್ತು ಧಮ್ಮದ ಹೆಗ್ಗಳಿಕೆಯಾಗಿದೆ. ಅಶೋಕನ ಧಮ್ಮದ ಪ್ರಕಾರ ತನ್ನ ಪಂಥಕ್ಕಿಂತ ಪರಪಂಥವನ್ನು ಗೌರವಿಸಿದಾಗ ತನ್ನ ಪಂಥವು ಪ್ರಬಲಗೊಳ್ಳುತ್ತದೆ. ಪ್ರತಿಯೊಂದು ಪಂಥವು ಒಂದಲ್ಲಾ ಒಂದು ಕಾರಣಕ್ಕಾಗಿ ಪೂಜ್ಯಭಾವನೆಗೆ ಅರ್ಹ.

3. ಶಾಂತಿ :
ಶಾಂತಿಯು ಯಶಸ್ಸಿನ ಸಾಧನೆಯ ಮೂಲಮಂತ್ರವಾಗಿದೆ. ಅಶಾಂತಿಯು ಅವ್ಯವಸ್ಥೆಯ ಆಗರವಾಗುತ್ತದೆ.
4. ವಿಶ್ವ ಸಹೋದರತ್ವ :

ಅಶೋಕನು ವಿಶ್ವ ಸಹೋದರತ್ವವನ್ನು ಎತ್ತಿ ಹಿಡಿದನು. ವಿಶ್ವದ ಜನರೆಲ್ಲರೂ ತನ್ನ ಸಹೋದರರೆಂದು ಸಾರಿದನು. ಇದನ್ನೇ ಅಶೋಕ ಧಮ್ಮದ ಪ್ರಮುಖ ಲಕ್ಷಣವನ್ನಾಗಿಸಿದನು. ಈ ದೃಷ್ಟಿಯಿಂದ ಅಶೋಕನು ʻಜಗತ್ತಿನ ಪ್ರಥಮ ಅಂತರರಾಷ್ಟ್ರೀಯವಾದಿ’ ಎಂದು ಕರೆಯಬಹುದು.

5. ಪ್ರಜಾಕಲ್ಯಾಣ :

ಅಶೋಕ ಧಮ್ಮದ ಇನ್ನೊಂದು ಪ್ರಮುಖ ಲಕ್ಷಣವೆಂದರೆ ಪ್ರಜಾ ಕಲ್ಯಾಣವಾಗಿದೆ ಅಥವಾ ಸುಖಿರಾಜ್ಯದ (Welfare state) ಸ್ಥಾಪನೆಯಾಗಿದೆ. ತನ್ನ ಪ್ರಜೆಗಳೆಲ್ಲರ ನೈತಿಕ, ಲೌಕಿಕ ಮತ್ತು ಆಧ್ಯಾತ್ಮಿಕ ಉನ್ನತಿಗೆ ಶ್ರಮಿಸಿದ ಅಶೋಕನು ಅವರೆಲ್ಲರ ಸುಖಸಂತೋಷಕ್ಕೆ ತನ್ನ ಜೀವನವನ್ನು ಮುಡಿಪಾಗಿಟ್ಟನು. ಅಂತೆಯೇ ತನ್ನ ಒಂದನೇ ಕಳಿಂಗ ಶಿಲಾಶಾಸನದಲ್ಲಿ ಪ್ರಜೆಗಳೆಲ್ಲರೂ ತನ್ನ ಮಕ್ಕಳೇ. ಅವರು ಇಹಲೋಕದಲ್ಲಿ ಮಾತ್ರವಲ್ಲದೇ ಪರಲೋಕದಲ್ಲೂ ಸುಖವಾಗಿರಬೇಕು” ಎಂದು ತಿಳಿಸಿದ್ದಾನೆ. 6ನೇ ಶಿಲಾಶಾಸನದಲ್ಲಿ “ಎಲ್ಲರೂ ನನ್ನ ಮಕ್ಕಳೇ, ನಾನು ಎಲ್ಲೇ ಇರಲಿ, ಭೋಜನ ಮಾಡುತ್ತಿರಲಿ ಅಂತಃಪುರದಲ್ಲಿರಲಿ, ಗೋಶಾಲೆಯಲ್ಲಿರಲಿ, ಮಲಗುವ ಕೊಠಡಿಯಲ್ಲಿರಲಿ, ಅರಮನೆಯಲ್ಲಿರಲಿ, ಪ್ರಜೆಗಳು ತನ್ನನ್ನು ಭೇಟಿಯಾಗಿ ತಮ್ಮ ಕುಂದು ಕೊರತೆಗಳನ್ನು ನಿವಾರಿಸಿಕೊಳ್ಳಬಹುದು. ಅದಕ್ಕೆ ನಾನು ಸದಾ ಸಿದ್ಧ” ಎಂದು ತಿಳಿಸಿದ್ದಾನೆ. ಸುಖಿರಾಜ್ಯ ಸ್ಥಾಪನೆಗಾಗಿ ಸಾರ್ವಜನಿಕ ಉಪಯೋಗಿ ಕೆಲಸಗಳಲ್ಲಿ ತನ್ನನ್ನು ತಾನು ಅಶೋಕ ತೊಡಗಿಸಿಕೊಂಡಿದ್ದಾನೆ. ಈ ದೃಷ್ಟಿಯಿಂದ ಪ್ರಜಾಕಲ್ಯಾಣಕ್ಕಾಗಿ ಶ್ರಮಿಸಿದ ಸಾಮ್ರಾಟರಲ್ಲಿ ಅಶೋಕ ಮಹಾಶಯನೇ ಮೊದಲಿಗನು. ಪ್ರಜಾಕಲ್ಯಾಣದಲ್ಲಿ ಜಾರಿಗೆ ತಂದ ಲೋಕೋಪಯೋಗಿ ಕಾರ್ಯಗಳು ಅತ್ಯಂತ ಅವಿಸ್ಮರಣೀಯವಾಗಿದೆ. ಅವುಗಳೆಂದರೆ:

ರಸ್ತೆಗಳ ನಿರ್ಮಾಣ,    

ಸಾಲುಮರಗಳನ್ನು ನೆಡಿಸಿದ್ದು,

ಅನ್ನ ಛತ್ರಾಲಯಗಳ ಸ್ಥಾಪನೆ,                                             

ಪ್ರತಿ 9 ಮೈಲುಗಳಿಗೆ ಒಂದು ಬಾವಿಯ ನಿರ್ಮಾಣ,

ಚಿಕಿತ್ಸಾಲಯಗಳ ಸ್ಥಾಪನೆ,                                                   

ವಿಶ್ರಾಂತಿ ಗೃಹಗಳ ಸ್ಥಾಪನೆ,

ಗಿಡಮೂಲಿಕೆಯ ಸಸ್ಯಗಳನ್ನು ಬೆಳೆಸಿದ್ದು ಮೊದಲಾದವು ಪ್ರಜಾಕಲ್ಯಾಣದ ಸಾಧನೆಗಳಾಗಿವೆ.

ಅಶೋಕನು ತನ್ನ  ಧಮ್ಮದ ಪ್ರಚಾರಕ್ಕೆ ಕೈಗೊಂಡ ಕ್ರಮಗಳು :

1. ತನ್ನ ವೈಯಕ್ತಿಕ ಉದಾಹರಣೆಯನ್ನು ಜನರ ಮುಂದಿಡುವ ಮೂಲಕ :

* ದಿಗ್ವಿಜಯಕ್ಕೆ ಸಮಾಪ್ತಿ ಹಾಡಿದನು

* ಪ್ರಾಣಿ ಬಲಿ, ಬೇಟೆ, ಮಾಂಸಾಹಾರ ತ್ಯಜಿಸಿದನು

* ಜನೋಪಯೋಗಿ (ಪ್ರಜಾಕಲ್ಯಾಣ) ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡನು

2. ಹೆಚ್ಚು ಪ್ರಚಾರ ಕೈಗೊಳ್ಳುವ ಮೂಲಕ :

* ಶಿಲಾಶಾಸನಗಳ ಮೇಲೆ, ಸ್ತಂಭಗಳ ಮೇಲೆ ಮತ್ತು ಕಲ್ಲುಬಂಡೆಗಳ ಮೇಲೆ ತನ್ನ ಧಮ್ಮದ ಮಾಹಿತಿಯನ್ನು ಕೆತ್ತಿಸಿದನು

* ಧಮ್ಮ ಮಹಾಮಾತ್ರರನ್ನು ನೇಮಿಸಿ ಅವರನ್ನು ಹೊರ ಪ್ರಾಂತಗಳು ಮತ್ತು ಹೊರ ದೇಶಗಳಿಗೆ ಧರ್ಮಪ್ರಚಾರಕರಾಗಿ ಕಳುಹಿಸಿದನು

* ತನ್ನ ಅಧಿಕಾರಿಗಳು ಪ್ರಜಾಹಿತಕ್ಕೆ ಒತ್ತು ಕೊಡುವಂತೆ ಆದೇಶ ನೀಡಿದನು

* ಜನರನ್ನು ನೇರವಾಗಿ ಸಂಪರ್ಕಿಸಿ ಅವರ ಕುಂದು ಕೊರತೆ ಅರಿಯುವ ಪ್ರಯತ್ನಮಾಡಿದನು

* ಧಮ್ಮದ ಬಗ್ಗೆ ಪ್ರಜ್ಞಾವಂತರೊಂದಿಗೆ ಚರ್ಚಿಸಿ ಧಮ್ಮದ ಮಹತ್ವವನ್ನು ಸಾರುವ  ಕೆಲಸಮಾಡಿದನು

ಅಶೋಕ ಧಮ್ಮದ ಪ್ರಭಾವ (ಪರಿಣಾಮ) :

* ಅಶೋಕನ ರಾಜನೀತಿಯ ಮೇಲೆ ಅಶೋಕ ಧಮ್ಮವು ಹೆಚ್ಚಿನ ಪ್ರಭಾವ ಬೀರಿತು.

* ಅಶೋಕನು ತನ್ನ ದಿಗ್ವಿಜಯ ನೀತಿಯನ್ನು ಸಂಪೂರ್ಣವಾಗಿ ಕೈಬಿಟ್ಟನು. ತನ್ನ ವೈಯಕ್ತಿಕ ಅಧಿಕಾರದ ತೆವಲಿಗಾಗಿ ಹಾಗೂ ಸಾಮ್ರಾಜ್ಯಾಧಿಪತಿ ಎಂಬ ಉಮೇದಿಗಾಗಿ ಹಲವು ಜೀವಗಳನ್ನು ಬಲಿಕೊಟ್ಟು ರಾಜ್ಯ ರಾಜ್ಯಗಳನ್ನು ಗೆಲ್ಲುವ ತನ್ನ ನೀತಿಗೆ ಮಂಗಳ ಹಾಡಿದನು.

* ತನ್ನ ಸಮಕಾಲೀನ ರಾಜ್ಯಗಳೊಂದಿಗೆ ಸೌಹಾರ್ದಯುತವಾದ ಸಂಬಂಧವನ್ನು ಸ್ಥಾಪಿಸಿದನು.

* ಆಕ್ರಮಣಕಾರಿ ನೀತಿಯನ್ನು ಕೈಬಿಟ್ಟನು.

* ತನ್ನ ಮಕ್ಕಳು ಮತ್ತು ಮೊಮ್ಮಕ್ಕಳು ಯಾವುದೇ ಹೊಸ ಯುದ್ಧ / ದಿಗ್ವಿಜಯ ನಡೆಸದಂತೆ ಕಟ್ಟಪ್ಪಣೆ ಮಾಡಿದನು. ಆ ಮೂಲಕ ರಕ್ತಪಾತವನ್ನು ತಪ್ಪಿಸಿದನು.

* ನಂತರದ ದೊರೆಗಳು ಮತ್ತು ಪ್ರಜೆಗಳಿಗೆ ಬೇರಿ ಘೋಷಕ್ಕಿಂತ ಧರ್ಮಘೋಷವೇ ಕಿವಿಗೆ ಹೆಚ್ಚು ಬೀಳುವಂತಾಯಿತು.

* ಆದರೆ ಅಶೋಕ ಅನುಸರಿಸಿದ ಅಹಿಂಸಾ ನೀತಿಯಿಂದ ಸಾಮ್ರಾಜ್ಯದ ನಿರಂತರತೆಗೆ ಭಂಗ ಉಂಟಾಯಿತು. ಸೈನಿಕರಲ್ಲಿದ್ದ ಕ್ಷಾತ್ರ ತೇಜಸ್ಸು ನಾಶವಾಗಿ ಪರಕೀಯರು ಆಕ್ರಮಣ ಮಾಡಿದಾಗ ದೇಶವನ್ನು ರಕ್ಷಿಸಲು ಅಸಮರ್ಥರಾದರು. ಇದರಿಂದಾಗಿ ಮೌರ್ಯ ವಂಶದ ಆಳ್ವಿಕೆ ಅಶೋಕನ ನಂತರ ಸರ್ವನಾಶದತ್ತ ಸಾಗಿತ್ತು.

* ಹೆಚ್.ಸಿ. ರಾಯ್ ಚೌದರಿಯವರು ಅಭಿಪ್ರಾಯ ಪಡುವಂತೆ “ಮೌರ್ಯ ಸಾಮ್ರಾಜ್ಯದ ಕ್ಷಾತ್ರ ತೇಜಸ್ಸು ಕಳಿಂಗ ರಣರಂಗ ದ ಕಡೆಯ ಸೈನಿಕನ ನೋವಿನ ನರಳಾಟದ ಕಡೆಯ ಸೊಲ್ಲಿನಲ್ಲಿ ನಾಶವಾಯಿತು” ಎಂದಿದ್ದಾರೆ.