ಕುಶಾನರ ಕಾಲದ ಸಾಹಿತ್ಯ

ಕುಶಾನರ ಕಾಲದ ಸಾಹಿತ್ಯ

ಕುಶಾನರ ಕಾಲದಲ್ಲಿ ಸಾಹಿತ್ಯ ಕೂಡ ಹೆಚ್ಚು ಅಭಿವೃದ್ಧಿ ಹೊಂದಿತು. ಕುಶಾನ ದೊರೆಗಳು ಸಾಹಿತ್ಯಾಭಿಮಾನಿ ಗಳಾಗಿದ್ದು ಸಾಹಿತ್ಯದ ಬೆಳೆವಣಿಗೆಗೆ ಸಾಕಷ್ಟು ಪ್ರೋತ್ಸಾಹ ನೀಡಿದರು. ಇದರಿಂದಾಗಿ ಹಲವಾರು ಪ್ರಮುಖ ಕೃತಿಗಳು ರಚನೆಯಾದವು. ಕುಶಾನರ ಕಾಲದ ಪ್ರಮುಖ ಸಾಹಿತ್ಯಕ, ಧಾರ್ಮಿಕ ಕೃತಿಗಳು ಮತ್ತು ಅವುಗಳ ಐತಿಹಾಸಿಕ ಮೌಲ್ಯವನ್ನು ಅವಲೋಕಿಸಬಹುದು.

ಅಶ್ವಘೋಷ : ಕಾನಿಷ್ಕನ ಆಸ್ಥಾನದಲ್ಲಿದ್ದ ‘ಅಶ್ವಘೋಷ’ ಕವಿಯಾಗಿ, ತತ್ವಜ್ಞಾನಿಯಾಗಿ, ನಾಟಕಕಾರನಾಗಿ, ಸಂಗೀತಗಾರನಾಗಿ ಪ್ರಖ್ಯಾತಿ ಹೊಂದಿದ್ದನು. ಇವನ ಪ್ರಮುಖ ಕೃತಿಗಳೆಂದರೆ:

1. ಬುದ್ಧಚರಿತ : ಬುದ್ಧನ ಜೀವನ ಚರಿತ್ರೆಯ ಬಗ್ಗೆ ವಿವರಣೆ ನೀಡುತ್ತದೆ.

2. ಸೌಂದರಾನಂದ : ಬುದ್ಧನ ಜೀವನದ ಪ್ರಮುಖ ಘಟನೆಗಳ ಬಗ್ಗೆ ವಿಶ್ಲೇಷಿಸುತ್ತದೆ.

3. ವಜ್ರಸೂಚಿ : ಸಮಕಾಲೀನವಾಗಿದ್ದ ಜಾತಿಪದ್ಧತಿಯನ್ನು ಖಂಡಿಸುತ್ತದೆ.

4. ಸರಿಪುತ್ರಪ್ರಕರಣ : ಇದು ನಾಟಕ ರೂಪದಲ್ಲಿದ್ದು ಸರಿಪುತ್ರ ಮತ್ತು ಮೊಗ್ಗಲ್ಲನರ ಮತಾಂತರದ ಬಗ್ಗೆ ವಿವರ ನೀಡುತ್ತದೆ. ಫ್ರೆಂಚ್ ವಿದ್ವಾಂಸ ‘ಸೆಲ್ವನ್‌ವಿ’ ಅಭಿಪ್ರಾಯಪಡುವಂತೆ ‘ಅಶ್ವಘೋಷನ ಸಾಹಿತ್ಯದ ಶ್ರೀಮಂತಿಕೆ ಮತ್ತು ವೈವಿಧ್ಯತೆಯು ನಮಗೆ ಮಿಲ್ಟನ್, ಗಯಟೆ, ಕಾಂಟ್, ವಾಲ್ವೇರ್’ ಮೊದಲಾದವರ ನೆನಪನ್ನು ಗಮನಕ್ಕೆ ತರುತ್ತದೆ. ಅಶ್ವಘೋಷನು ಕಾಳಿದಾಸ ಮತ್ತು ಭಾಸಕವಿಯಿಂದ ಪ್ರಭಾವಿತನಾಗಿರ ಬೇಕೆಂದು ಕೆಲವು ವಿದ್ವಾಂಸರ ಅಭಿಪ್ರಾಯ.

ನಾಗಾರ್ಜುನ : ಇವನ ಕೃತಿಗಳು: 1. ಶತಸಾಹಸಿಕ ಪ್ರಜ್ಞಾಪರಿಮಿತ 2. ಮಾಧ್ಯಮಿಕ ಸೂತ್ರ 3. ಸಹೃಲೇಖ

ನಾಗಾರ್ಜುನ ಕಾನಿಷ್ಕನ ಆಸ್ಥಾನದ ಮತ್ತೋರ್ವ ಪ್ರಖ್ಯಾತ ಕವಿ. ಮಹಾಯಾನ ಪಂಥದ ಪ್ರತಿಪಾದಕನಾದ ನಾಗಾರ್ಜುನ ಮಾದ್ಯಮಿಕ ಸೂತ್ರದಲ್ಲಿ ಸಾಪೇಕ್ಷ ಸಿದ್ಧಾಂತವನ್ನು ಪ್ರತಿಪಾದಿಸಿದ್ದಾನೆ. ಪ್ರಜ್ಞಾಪರಿಮಿತ ವೇದಾಂತದ ಕೃತಿಯಾಗಿದೆ.

‘ಸಹೃಲೇಖ’ ಕೃತಿಯು ನಾಲ್ಕು ಆರ್ಯಸತ್ಯಗಳು ಮತ್ತು ಅಷ್ಟಾಂಗ ಸಿದ್ದಮಾರ್ಗಗಳನ್ನು ಕುರಿತು ವಿಶ್ಲೇಷಿಸುತ್ತದೆ. ಈ ಕೃತಿಯ ಸರ್ವೋತ್ಕೃಷ್ಟ ಅಂಶವೆಂದರೆ ಮಿತ್ರರು ಮತ್ತು ವೈರಿಗಳಲ್ಲಿ ಯಾವುದೇ ಭೇದಭಾವವನ್ನು ಮಾಡಬಾರದೆಂಬುದು. ನಾಗಾರ್ಜುನನ್ನು ಭಾರತದ ಮಾರ್ಟಿನ್ ಲೂಥರ್ ಮತ್ತು ಭಾರತದ ಐನ್ ಸ್ಟೈನ್ ಎಂದೇ ಕರೆಯಲಾಗಿದೆ. ನಾಗಾರ್ಜುನನ ವಿದ್ವತ್ತನ್ನು ಗಮನಿಸಿದ ಚೀನಿ ಯಾತ್ರಿಕ ಹ್ಯುಯನ್ ತ್ಸಾಂಗ್ ಹೇಳುವಂತೆ ‘ಜಗತ್ತಿನ ನಾಲ್ಲು ಜ್ಯೋತಿಗಳಲ್ಲಿ ನಾಗಾರ್ಜುನನು ಕೂಡ ಒಬ್ಬನಾಗಿದ್ದಾನೆ’.

ಚರಕ : ಕುಶಾನರ ಕಾಲದಲ್ಲಿದ್ದ ಚರಕನು ಆಯುರ್ವೇದ ಔಷಧ ಶಾಸ್ತ್ರದ ಮಹಾನ್ ಪಂಡಿತನೆನಿಸಿದ್ದನು. ಇವನು ಕಾನಿಷ್ಕನ ಆಸ್ಥಾನದ ಪ್ರಖ್ಯಾತ ವೈದ್ಯನಾಗಿದ್ದನು. ಇವನು ‘ಚರಕಸಂಹಿತೆ’ ಯೆಂಬ ವೈದ್ಯಕೀಯ ಕೃತಿಯನ್ನು ರಚಿಸಿದ್ದಾನೆ. ಇದು ಕ್ರಿ.ಶ 7ನೇಶತಮಾನದಲ್ಲಿ ಪರ್ಶಿಯನ್ ಭಾಷೆಗೂ ಕ್ರಿಶ ೫ನೇ ಶತಮಾನದಲ್ಲಿ ಅರೇಬಿಕ್ ಭಾಷೆಗೂ ಭಾಷಾಂತರವಾಯಿತು.ಕಾನಿಷ್ಕನ ಕಾಲಾವಧಿಯಲ್ಲಿ ವಸುಮಿತ್ರ ಮತ್ತು ಪಾರ್ಶ್ವ ಎಂಬ ವಿದ್ವಾಂಸರುಗಳಿದ್ದರು. ವಸುಮಿತ್ರನು ನಾಲ್ಕನೇ ಬೌದ್ಧ ಮಹಾಸಮ್ಮೇಳನದ ಅಧ್ಯಕ್ಷನಾಗಿ ಕಾರ್ಯನಿರ್ವಹಿಸಿದ್ದನು. ಕುಶಾನರ ಕಾಲದಲ್ಲಾದ ಸಾಹಿತ್ಯದ ಚಟುವಟಿಕೆಗಳ ನ್ನು ಗಮನಿಸಿ ಡಾ|ಹೆಚ್.ಜಿ.ರಾಲಿಸನ್ ರವರು ‘ಕುಶಾನರ ಕಾಲವು ಗುಪ್ತರ ಯುಗಕ್ಕೆ ಅತ್ಯುತ್ತಮ ಪೂರ್ವಭಾವಿ ಪೀಠಿಕೆಯಾಗಿದೆ’ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಕಾನಿಷ್ಕ (ಕ್ರಿ.ಶ. 78-120)

ಕಾನಿಷ್ಕ (ಕ್ರಿ.ಶ. 78-120)

ಕುಶಾನ ಅರಸರಲ್ಲಿಯೇ ಅತ್ಯಂತ ಸಮರ್ಥ ಹಾಗೂ ಪ್ರಸಿದ್ದನಾದ ದೊರೆಯೆಂದರೆ ಕಾನಿಷ್ಕ. ಈತನ ಸಿಂಹಾಸನದ ಬಗ್ಗೆ ವಿದ್ವಾಂಸರಲ್ಲಿ ಅನೇಕ ಅಭಿಪ್ರಾಯಗಳಿವೆ. ಡಾ. ಪ್ಲೀಟ ಹಾಗೂ ಕನ್ನಿಹ್ಯಾಂರು ಈತನ ಅಧಿಕಾರಾವಧಿ ಕ್ರಿ.ಪೂ. 58 ವಿಕ್ರಮ ಶಕೆ ಎಂದು ಹೇಳಿದರೆ, ಡಾ. ಮುಜುಮದಾರರು ಕ್ರಿ.ಶ. 248ರಲ್ಲಿ ಕಾನಿಷ್ಕ ಸಿಂಹಾಸನಕ್ಕೆ ಬಂದ ವರ್ಷವೆಂದಿದ್ದಾರೆ. ಡಾ. ಜಿ. ಭಂಡಾರಕರವರು ಕ್ರಿ.ಶ. 278ರಲ್ಲಿ ಅಧಿಕಾರಕ್ಕೆ ಬಂದನು ಎಂದರೆ, ರಾಯ್ ಚೌದರಿಯವರು ಕಾನಿಷ್ಕ ಕ್ರಿ.ಶ. 78ರಲ್ಲಿ ಸಿಂಹಾಸನಾಧೀಶ್ವರನಾದನು ಎಂದಿದ್ದಾರೆ. ಈತ ಕ್ರಿ.ಶ. 78ರಲ್ಲಿ ಅಧಿಕಾರಕ್ಕೆ ಬಂದುದರಿಂದ ಶಾಲಿವಾಹನ ಶಕೆಯನ್ನು ಆರಂಭಿಸಿದನು.

ದಿಗ್ವಿಜಯಗಳು :

1) ಕಾಶ್ಮೀರ ಕಣಿವೆಯನ್ನು ಕಾನಿಷ್ಕ ಹೆಚ್ಚು ಇಷ್ಟಪಡುತ್ತಿದ್ದುದರಿಂದಾಗಿ ಅದರ ಮೇಲೆ ಯುದ್ಧ ಘೋಷಿಸಿ ಸುಲಭವಾಗಿ ವಶಪಡಿಸಿಕೊಂಡನು.

2) ಉತ್ತರ ಭಾರತದ ಪಂಜಾಬ್ ಹಾಗೂ ಮಥುರಾಗಳಲ್ಲಿ ಪ್ರಬಲರಾಗಿದ್ದ ಕ್ಷತ್ರಪರ ವಿರುದ್ಧ ಯುದ್ಧ ಕೈಗೊಂಡು ಆ ಪ್ರದೇಶಗಳನ್ನು ಯಾವುದೇ ಪ್ರಯಾಸವಿಲ್ಲದೆ ವಶಪಡಿಸಿಕೊಂಡನು.

3) ಮಾಳವದ ಕ್ಷತ್ರಪರನ್ನು ಸಹ ಸೋಲಿಸಿ ಆ ಪ್ರದೇಶವನ್ನು ಆಕ್ರಮಿಸಿದನು.

4) ಈತ ಚೀನಿಯರೊಂದಿಗೆ ಹೋರಾಡಿ ಅಂತಿಮವಾಗಿ ಕಾಸ್ಗರ್, ಖೊಟಾನ್ ಹಾಗೂ ಯಾರ್ಕಂಡ್ ಪ್ರದೇಶಗಳನ್ನು ಆಕ್ರಮಿಸಿದನು.

5) ಚೀನಾದ ಪಾನ್-ಪಾನ್ ಬಾವೋನ ಮೇಲೆ ಯುದ್ಧ ಘೋಷಿಸಿ ಅವನಿಂದ ಸೋತ ಕಾನಿಷ್ಕ ತನ್ನ ಮೊದಲ ಚೀನಾದ ದಂಡಯಾತ್ರೆಯನ್ನು ಕೊನೆಗಾಣಿಸಿದ.

6) ಎರಡನೆಯ ದಂಡಯಾತ್ರೆಯಲ್ಲಿ ಕಾನಿಷ್ಕ ಚೀನಾದ ಪಾನ್‌ ಚಾವೋನ ಮಗನಾದ ಪಾನ್ ಯಾಂಗನನ್ನು ಸೋಲಿಸಿ ಮೊದಲಿನ ಸೇಡನ್ನು ತೀರಿಸಿಕೊಂಡನು. ಕಾನಿಷ್ಕನ ಸಾಮ್ರಾಜ್ಯವು ಭಾರತದ ಆಚೆ ಅಪಘಾನಿಸ್ತಾನ್, ಬ್ಯಾಸ್ಟ್ರಿಯಾ, ಕಾಪ್ಟರ್, ಖೋಟಾನ್ ಹಾಗೂ ಯಾರ್ಕಂಡ್ ಪ್ರಾಂತ್ಯಗಳನ್ನು ಒಳಗೊಂಡಿದ್ದರೆ ಭಾರತದಲ್ಲಿ ಪಂಜಾಬ್, ಸಿಂಥ್, ಕಾಶ್ಮೀರ್ ಹಾಗೂ ಉತ್ತರ ಪ್ರದೇಶದ ಬಹುಭಾಗವನ್ನು ಒಳಗೊಂಡಿದ್ದಿತು.

ಕಾನಿಷ್ಕನ ಆಡಳಿತ : ಕಾನಿಷ್ಕ ಒಬ್ಬ ಯೋಧ, ಉತ್ತಮ ಆಡಳಿತಗಾರ, ಶ್ರೇಷ್ಠ ರಾಜಕಾರಿಣಿ ಹಾಗೂ ಧಾರ್ಮಿಕ ನೀತಿಯುಳ್ಳವನೂ ಆಗಿದ್ದನು. ಇವನು ನಿರಂಕುಶಾಧಿಕಾರಿಯಾಗಿ ಆಡಳಿತ ನಡೆಸಿದರೂ ಪ್ರಜೆಗಳಿಗೆ ಎಂದಿಗೂ ತೊಂದರೆಯನ್ನು ಕೊಡಲಿಲ್ಲ. ಕಾನಿಷ್ಕ ತನ್ನ ಆಡಳಿತಾವಧಿಯಲ್ಲಿ ಹಲವಾರು ಸುಧಾರಣೆಗಳನ್ನು ಜಾರಿಗೆ ತಂದನು.

1) ಕೃಷಿಯನ್ನು ಅಭಿವೃದ್ಧಿಗೊಳಿಸುವ ಮೂಲಕ ನೀರಾವರಿಗೆ ಹೆಚ್ಚಿನ ಆದ್ಯತೆ ನೀಡಿದನು.

2) ಆಹಾರ ಉತ್ಪಾದನೆಗೆ ಪ್ರೋತ್ಸಾಹ ನೀಡಿದನು.

3) ರೈತರು ಹೈನಿಗಾಗಿ ಹೆಚ್ಚು ಹೆಚ್ಚು ದನಕರುಗಳನ್ನು ಸಾಕುವಂತೆ ಪ್ರೋತ್ಸಾಹ ಕೊಟ್ಟನು.

4) ಪ್ರಕೃತಿ ವಿಕೋಪಗಳಾದ ಕ್ಷಾಮ, ನೆರೆಹಾವಳಿ ಹಾಗೂ ಬರಗಾಲದಂತಹ ಸಮಯದಲ್ಲಿ ಸರ್ಕಾರದಿಂದ ದವಸ ಧಾನ್ಯಗಳನ್ನು ಹಂಚುವ ವ್ಯವಸ್ಥೆ ಮಾಡಿದನು.

5) ಸಾಮ್ರಾಜ್ಯವನ್ನು ಅನೇಕ ಪ್ರಾಂತ್ಯಗಳನ್ನಾಗಿ ವಿಭಾಗಿಸಿ ಅವುಗಳಿಗೆ ರಾಜ್ಯಪಾಲರನ್ನು ನೇಮಕ ಮಾಡಿದನು.

6) ರಾಜ್ಯದ ಎಲ್ಲಾ ಆಗು ಹೋಗುಗಳನ್ನು ಬರೆದಿಡುವ ಪದ್ಧತಿಯನ್ನು ಜಾರಿಗೆ ತಂದನು.

ಕಾನಿಷ್ಕನ ಧಾರ್ಮಿಕ ನೀತಿ :

ಅಶೋಕನ ಹಾಗೆ ಕಾನಿಷ್ಕ ಬೌದ್ಧ ಮತಾವಲಂಬಿಯಾಗಿದ್ದನು. ಈತ ಬೌದ್ಧ ಮತವನ್ನು ಸ್ವೀಕರಿಸಿದ್ದರೂ ಇತರ ಧರ್ಮಗಳನ್ನು ಕಡೆಗಣಿಸಿರಲಿಲ್ಲ. ಈತನ ನಾಣ್ಯಗಳ ಮೇಲೆ ರೋಮನ್, ಗ್ರೀಕ್, ಪರ್ಶಿಯನ್ ಹಾಗೂ ಹಿಂದೂ ದೇವತೆಗಳ ಹೆಸರನ್ನು ಮುದ್ರಿಸಲಾಗಿದೆ.

ಕಾನಿಷ್ಕ ಮತ್ತು ಬೌದ್ಧ ಧರ್ಮ :

ಕಾನಿಷ್ಕ ಕೇವಲ ದಿಗ್ವಿಜಯಿಯಾಗಿರದೆ ಬೌದ್ಧ ಧರ್ಮದ ಮಹಾಪೋಷಕನಾಗಿ ಪ್ರಸಿದ್ದಿಯನ್ನು ಪಡೆದಿದ್ದಾನೆ. ಅಶೋಕನನ್ನು ಬಿಟ್ಟರೆ ಬೌದ್ಧ ಧರ್ಮದ ಖ್ಯಾತಿಗೆ ಶ್ರಮಿಸಿದವರಲ್ಲಿ ಕಾನಿಷ್ಕನೇ ಅಗ್ರಗಣ್ಯ. ಇವನ ಕಾಲದಲ್ಲಿ ಬೌದ್ಧ ಧರ್ಮ ಭಾರತವನ್ನು ದಾಟಿ ವಿದೇಶದಲ್ಲಿಯೂ ಹರಡಿತ್ತು. ಆ ಮೂಲಕ ಭಾರತ ವಿದೇಶಿ ಸಂಪರ್ಕವನ್ನು ಪಡೆಯಿತು. ಈತನ ಕಾಲದಲ್ಲಿಯೂ ದೇಶದಾದ್ಯಂತ ಅನೇಕ ಬೌದ್ಧ ಸ್ತೂಪಗಳು, ಸಂಘಾರಾಮಗಳು, ಗುಹಾಲಯಗಳು, ಅರಮನೆಗಳು ಹಾಗೂ ಬೌದ್ಧ ಮೂರ್ತಿಗಳು ನಿರ್ಮಾಣಗೊಂಡವು. ಪ್ರಥಮ ಬಾರಿಗೆ ಭಾರತದಲ್ಲಿ ಕಾನಿಷ್ಕನ ಕಾಲದಲ್ಲಿ ಬುದ್ಧನನ್ನು ಮೂರ್ತಿರೂಪದಲ್ಲಿ ಪೂಜಿಸುವ ಪದ್ಧತಿ ಜಾರಿಗೆ ಬಂದಿತು.

ನಾಲ್ಕನೆಯ ಬೌದ್ಧ ಸಮ್ಮೇಳನ : ಬೌದ್ಧ ಮತಾವಲಂಬಿಯಾಗಿದ್ದ ಕಾನಿಷ್ಕ ಬೌದ್ಧ ಧರ್ಮದ ಪ್ರಚಾರಕ್ಕಾಗಿ ವಿಶೇಷ ಕಾಳಜಿ ವಹಿಸಿದನು. ಈತ ಕಾಶ್ಮೀರಿನ ಕುಂಡಲಿವನ ಎಂಬಲ್ಲಿ ನಾಲ್ಕನೆಯ ಬೌದ್ಧ ಸಮ್ಮೇಳನವನ್ನು ಸಂಘಟಿಸಿದನು. ಈ ಸಭೆಯ ಅಧ್ಯಕ್ಷತೆಯನ್ನು ವಸುಮಿತ್ರನೂ ಉಪಾಧ್ಯಕ್ಷನಾಗಿ ಅಶ್ವಘೋಷನೂ ವಹಿಸಿದ್ದರು. ಬೌದ್ಧರಲ್ಲಿ ಕಾಣಿಸಿಕೊಂಡ ಆಂತರಿಕ ಒಡುಕು ಹಾಗೂ ಭಿನ್ನಮತವನ್ನು ಹೋಗಲಾಡಿಸುವುದು ಈ ಸಮ್ಮೇಳನದ ಉದ್ದೇಶವಾಗಿದ್ದಿತು. ಅಶ್ವಘೋಷ ಹಾಗೂ ವಸುಮಿತ್ರ ಸೇರಿದಂತೆ ಒಟ್ಟು 500ಕ್ಕೂ ಹೆಚ್ಚು ಬೌದ್ಧ ಸನ್ಯಾಸಿಗಳು ಈ ಸಭೆಗೆ ಹಾಜರಾಗಿದ್ದರು. ಬುದ್ಧನ ತ್ರಿಪಿಟಕಗಳ ವಿಷಯಗಳನ್ನು ಕ್ರೋಢೀಕರಿಸಿ ಮಹಾವಿಭಾಷ್ಯ ಎಂಬ ಗ್ರಂಥವನ್ನು ಹೊರತರಲಾಯಿತು. ಇವುಗಳನ್ನು ತಾಮ್ರಪಟಗಳ ಮೇಲೆ ಕೊರೆಯಿಸಿ ಶಿಲಾ ಪೆಟ್ಟಿಗೆಯಲ್ಲಿ ತುಂಬಿ ಇದರ ಮೇಲೆ ಸ್ತೂಪವನ್ನು ನಿರ್ಮಿಸಲಾಯಿತು.

ಈ ಮಹಾಸಭೆಯಲ್ಲಿ ಬೌದ್ಧರಲ್ಲಿದ್ದ ಆಂತರಿಕ ಭಿನ್ನಮತ ಮತ್ತಷ್ಟು ಗರಿಗೆದರಿ ಹೀನಾಯಾನ ಹಾಗೂ ಮಹಾಯಾನ ಎಂಬ ಎರಡು ಪಂಥಗಳು ಹುಟ್ಟಿಕೊಂಡವು.

ಹೀನಾಯಾನ ಪಂಥದವರು

ಮಹಾಯಾನ ಪಂಥದವರು

1.

ಬುದ್ಧನನ್ನು ದೇವತಾ ರೂಪಕ್ಕೆ

1.

ಬುದ್ಧನನ್ನು ದೇವರೆಂದು ನಂಬಿದ್ದರು.

2.

ಇವರು ಬುದ್ಧನ ತತ್ವಗಳನ್ನು ಚಾಚು ತಪ್ಪದೆ ಪಾಲಿಸಿದರು.

2.

ಬೌದ್ಧ ಧರ್ಮದಲ್ಲಿ ಸಾಕಷ್ಟು ಬದಲಾವಣೆ

3.

ಅಶೋಕ ಈ ಪಂಥವನ್ನು ಪೋಷಿಸಿ ಬೆಳೆಸಿದನು

3.

ಕಾನಿಷ್ಕ ಈ ಪಂಥವನ್ನು ಪೋಷಿಸಿ ಬೆಳೆಸಿದನು.

4.

ಬುದ್ಧನನ್ನು ಚಿನ್ನೆಯ ರೂಪದಲ್ಲಿ ಪೂಜಿಸುವರು.

4.

ಮೂರ್ತಿ ರೂಪದಲ್ಲಿ ಪೂಜಿಸುವರು.

5.

ಬೋಧಿಸತ್ವನನ್ನೂ ಪೂಜಿಸುವದಿಲ್ಲ

5.

ಬೋಧಿಸತ್ವನ ಪೂಜೆ ಇಲ್ಲಿ ಕಡ್ಡಾಯ.

6.

ಇದು ಹಿಂದೂ ಧರ್ಮದಿಂದ ದೂರವಿದೆ.

6.

ಇದು ಹಿಂದು ಧರ್ಮಕ್ಕೆ ಹತ್ತಿರವಾಗಿದೆ.

7.

ಇವರು ಹಿಂದೂ ಧರ್ಮದಲ್ಲಿ ನಂಬಿಕೆ ಹೊಂದಿಲ್ಲ

7.

ಇವರು ದೇವರ ಅವತಾರದಲ್ಲಿ ನಂಬಿಕೆ ಇಟ್ಟಿದ್ದರು.

8.

ಇವರ ಸಾಹಿತ್ತಿಕ ಭಾಷೆ ಪಾಳಿ

8.

ಸಂಸ್ಕೃತ ಇವರ ಸಾಹಿತ್ತಿಕ ಭಾಷೆ.

9.

ಕರ್ಮದಲ್ಲಿ ಇವರಿಗೆ ನಂಬಿಕೆ ಹೆಚ್ಚು

9.

ಭಕ್ತಿಯಲ್ಲಿ ನಂಬಿಕೆ ಹೆಚ್ಚು.

10.

ನಿರ್ಮಾಣವೇ ಜೀವನದ ಪರಮ ಗುರಿ.

10.

ಸ್ವರ್ಗ ಪಡೆಯುವುದು ಇವರ ಗುರಿ

11.

ಅಷ್ಟಾಂಗ ಮಾರ್ಗವನ್ನು ಕಟ್ಟು ನಿಟ್ಟಾಗಿ ಪಾಲಿಸುತ್ತಿದ್ದರು.

11.

ಪೂಜಾವಿಧಾನಗಳ ಪಾಲನೆ.

12.

ಶ್ರೀಲಂಕಾ, ಬರ್ಮಾದಲ್ಲಿ ಇದರ ಜನಪ್ರಿಯತೆ

12.

ಟೆಬೇಟ ಕೋರಿಯಾದಲ್ಲಿ ಇದರ ಜನಪ್ರಿಯತೆ

13

ಪಾಟಲಿಪುತ್ರ ಇವರ ಧಾರ್ಮಿಕ ಕೇಂದ್ರ

13

ಗಾಂಧಾರ ಇವರ ಧಾರ್ಮಿಕ ಕೇಂದ್ರ

14.

ಸಂಸ್ಕಾರ ವಿಧಿಗಳಿಗೆ ಅವಕಾಶವಿಲ್ಲ

14.

ಸಂಸ್ಕಾರ ವಿಧಿಗಳಿಗೆ ಅವಕಾಶವಿದೆ.

ಸಾಹಿತ್ಯ :

ಸಾಹಿತ್ಯಾಭಿಮಾನಿಯಾಗಿದ್ದ ಕಾನಿಷ್ಕ ವಿದ್ವಾಂಸರನ್ನು ಕಂಡರೆ ಅವನಿಗೆ ಎಲ್ಲಿಲ್ಲದ ಪ್ರೀತಿ. ಹೀಗಾಗಿ ಈತ ಅನೇಕ ವಿದ್ವಾಂಸರಿಗೆ ಆಶ್ರಯ ನೀಡಿದ್ದನು. ಈತನ ಆಸ್ಥಾನದಲ್ಲಿ ಅನೇಕ ತತ್ವಜ್ಞಾನಿಗಳು, ಕವಿಗಳು, ವಿದ್ವಾಂಸರು, ನಾಟಕಗಾರರು ಹಾಗೂ ಸಂಗೀತಗಾರರಿದ್ದರು. ಅವರ ಹೆಸರು ಹಾಗೂ ಕೃತಿಗಳು ಈ ಕೆಳಗಿನಂತಿವೆ.

ಕವಿಗಳು  ಕೃತಿಗಳು
1) ಅಶ್ವಘೋಷ ಸುಂದರನಂದ ಹಾಗೂ ವಜ್ರಸೂಚಿ 1) ಬುದ್ಧ ಚರಿತ ಹಾಗೂ ಸೂತ್ರಾಲಂಕಾರ,

2) ನಾಗಾರ್ಜುನ

(ಕುಶಾನರ ಕಾಲದ ಮಾರ್ಟಿನ್ ಲೂಥರ್)

2) ಮಾಧ್ಯಮಿಕ ಸೂತ್ರ
3) ವಸುಮಿತ್ರ 3) ಮಹಾವಿಭಾಷ್ಯ (ಇದನ್ನು ಬೌದ್ಧರ ವಿಶ್ವಕೋಶ ಎನ್ನಲಾಗಿದೆ.)
4) ಚರಕ 4) ಚರಕ ಸಂಹಿತೆ
5) ಎರಡನೆಯ ನಾಗಾರ್ಜುನ 5) ರಸವೈದ್ಯ
6) ಸುಶ್ರೂಷ 6) ಸುಶ್ರೂಷ ಸಂಹಿತ
7) ವಾಗ್ಭಟ 7) ಅಷ್ಟಾಂಗ ಸಂಗ್ರಹ ಹಾಗೂ ಅಷ್ಟಾಂಗ ಹೃದಯ
ಸಿಂದೂ ನಾಗರೀಕತೆಯ ಪೀಠಿಕೆ

ಸಿಂದೂ ನಾಗರೀಕತೆಯ ಪೀಠಿಕೆ

ಪೀಠಿಕೆ :

ವಿಶ್ವದ ಅತ್ಯಂತ ಪ್ರಾಚೀನ ಮತ್ತು ಪ್ರಮುಖ ನಾಗರೀಕತೆಗಳಲ್ಲಿ ಹರಪ್ಪದ ನಾಗರೀಕತೆಯು ಒಂದು. ಭೂಮಿಯ ಗರ್ಭದಲ್ಲಿ ಹುದುಗಿಕೊಂಡಿದ್ದ ಈ ನಾಗರೀಕತೆಯು 1921-22ರಲ್ಲಿ ಸಂಶೋಧಿಸಲ್ಪಟ್ಟಿತು. ಇದರಿಂದಾಗಿ ಭಾರತವು ನಾಗರೀಕತೆಯ ತೊಟ್ಟಿಲು ರಾಷ್ಟ್ರವಾಗಿತ್ತು ಎಂಬುದು ತಿಳಿದುಬರುತ್ತದೆ. ಹರಪ್ಪ ಸಂಸ್ಕೃತಿಯು ಬೆಳಕಿಗೆ ಬಂದದ್ದರಿಂದ ಭಾರತವು ಅನಾಗರೀಕ ರಾಷ್ಟ್ರವೆಂಬ ವಿದೇಶಿಯರ ಅಭಿಪ್ರಾಯ ಹುಸಿಗೊಂಡಿತು. ಹರಪ್ಪ ಸಂಸ್ಕೃತಿಯ ವಿಶಿಷ್ಟವಾದ ಒಂದು ಸಂಸ್ಕೃತಿಯಾಗಿದ್ದು ಸಮಕಾಲೀನ ನಾಗರೀಕತೆಗಳಿಗಿಂತ ವಿಶಿಷ್ಟವಾದ ಲಕ್ಷಣಗಳನ್ನು ಒಳಗೊಂಡಿದೆ. ಹರಪ್ಪ ಸಂಸ್ಕೃತಿಯ ಸಂಶೋಧನೆಯೊಂದಿಗೆ ಸುಮಾರು 3000 ವರ್ಷಗಳಿಗೂ ಹಿಂದೆಯೇ ಭಾರತವು ವ್ಯವಸ್ಥಿತವಾದ ಜನಜೀವನವನ್ನು ಹೊಂದಿದ್ದ ನಾಡಾಗಿತ್ತೆಂದು ತಿಳಿದುಬರುತ್ತದೆ.

ಹರಪ್ಪ ಸಂಸ್ಕೃತಿಯ ಸಂಶೋಧನೆ :

ಹರಪ್ಪಾ ಸಂಸ್ಕೃತಿಯು ಬೆಳಕಿಗೆ ಬಂದದ್ದು ಒಂದು ಆಶ್ಚರ್ಯಕರ ಸಂಗತಿಯಾಗಿದೆ. ಭಾರತದಲ್ಲಿನ ಆಂಗ್ಲ ಸರ್ಕಾರವು 1856ರಲ್ಲಿ ರೈಲ್ವೆ ರಸ್ತೆಯ ನಿರ್ಮಾಣ ಕಾರ್ಯದಲ್ಲಿ ನಿರತವಾಗಿದ್ದಾಗ ಸುಟ್ಟ ಇಟ್ಟಿಗೆಗಳು ಸಿಂದ್ ಪ್ರದೇಶದಲ್ಲಿ ದೊರೆತವು. ಕ್ರಿ.ಶ 1862 ರಲ್ಲಿ ಅಲೆಕ್ಸಾಂಡರ್ ಕನ್ನಿಂಗ್ ಹ್ಯಾಮ್ ಹರಪ್ಪದ ಬಳಿ ಕೆಲವು ಮುದ್ರೆಗಳನ್ನು ಪತ್ತೆ ಹಚ್ಚಿದರು. ಇದೇ ವೇಳೆಯಲ್ಲಿ ಬ್ರಿಟೀಷ್ ಸರ್ಕಾರವು ಸಂಶೋಧನೆಗಾಗಿ 2.5ಲಕ್ಷ ರೂಪಾಯಿಗಳನ್ನು ಮಂಜೂರು ಮಾಡಿತು. ಇದು ಸಂಶೋಧನಾ ಕಾರ್ಯ ಚುರುಕುಗೊಳ್ಳಲು ಕಾರಣವಾಯಿತು. ಇದೇ ವೇಳೆಯಲ್ಲಿ ದಯಾರಾಂ ಸಹನಿ 1921-22ರಲ್ಲಿ ಹರಪ್ಪದಲ್ಲಿ, ಆ‌ರ್.ಡಿ. ಬ್ಯಾನರ್ಜಿ 1922-23ರಲ್ಲಿ ಮೆಹೆಂಜೋದಾರೋವಿನಲ್ಲಿ ನಡೆಸಿದ ಉತ್ಖನನದ ಫಲವಾಗಿ ಸಂಶೋಧನಾ ಕಾರ್ಯಕ್ಕೆ ಹೆಚ್ಚು ಚಾಲನೆ ದೊರೆಯಿತು.

ಹರಪ್ಪ ಸಂಸ್ಕೃತಿಯ ಕಾಲಮಾನ :

ಸರ್‌ಜಾನ್ ಮಾರ್ಷಲ್ ರವರ ಪ್ರಕಾರ – ಕ್ರಿ.ಪೂ 3250-2750,

ಮಾರ್ಟಿಮರ್ ವೀಲರ್ ಕ್ರಿ.ಪೂ – 2500-1500,

ವತ್ಸರ ಪ್ರಕಾರ ಕ್ರಿ.ಪೂ  – 3500 ಕ್ಕೂ ಮುಂಚಿತವಾಗಿ ಈ ನಾಗರೀಕತೆ ಬೆಳೆದಿದೆ.

ಹರಪ್ಪ ಸಂಸ್ಕೃತಿಯ ವಿಭಿನ್ನ ಹೆಸರುಗಳು :

ಹರಪ್ಪ ನಾಗರೀಕತೆಯನ್ನು ವಿವಿಧ ಹೆಸರುಗಳಿಂದ ಕರೆಯುತ್ತಾರೆ. ಅವುಗಳೆಂದರೆ : ಸಿಂಧೂಬಯಲಿನ ನಾಗರೀಕತೆ

ಇಂಡೋ-ಸುಮೇರಿಯನ್ ನಾಗರೀಕತೆ

ಚಾಲ್ಕೋಲಿಥಿಕ್ ಸಂಸ್ಕೃತಿ

ಪ್ರಾಗ್ಭಾರತೀಯ ಸಂಸ್ಕೃತಿ-ಹೀಗೆ ವಿಭಿನ್ನ ಹೆಸರುಗಳಿವೆ.

ನಾಗರೀಕತೆಯ ಜನಾಂಗ :

ಹರಪ್ಪ ಸಂಸ್ಕೃತಿಯ ನಿರ್ಮಾತೃಗಳು ಯಾರು ಎಂಬುದು ಖಚಿತವಾಗಿ ತಿಳಿದುಬಂದಿಲ್ಲ. ದಸ್ಯುಗಳು ಅಥವಾ ದ್ರಾವಿಡರು ಈ ನಾಗರೀಕತೆಯ ನಿರ್ಮಾತೃಗಳೆಂದು ಅಭಿಪ್ರಾಯ ಪಡಲಾಗಿದೆ. ಆದರೆ ಸಂಶೋಧನೆಯ ಕಾಲದಲ್ಲಿ ಆಸ್ಟ್ರೋಲಾಯ್ಡ್-ಮಂಗೋಲಿಯನ್ ಮೊದಲಾದ ಬುಡಕಟ್ಟಿನ ಜನಾಂಗಗಳ ಅವಶೇಷಗಳು ದೊರೆತಿವೆ.

ಪ್ರಮುಖ ನಿವೇಶನಗಳು

ಸಿಂಧೂ ಸಂಸ್ಕೃತಿಯ ಸಂಶೋಧನೆಯಿಂದ ಇದುವರೆಗೆ ಸುಮಾರು 300 ನಿವೇಶನಗಳ ಸ್ಥಳಗಳನ್ನು ಪತ್ತೆ ಹಚ್ಚಲಾಗಿದೆ. ಹಲವು ಪ್ರಮುಖ ನಗರಗಳು ಬೆಳಕಿಗೆ ಬಂದಿವೆ. ಅಂತಹ ನಗರಗಳು ಮತ್ತು ಅವುಗಳ ಪ್ರಾಮುಖ್ಯತೆಯನ್ನು ಅರಿಯುವುದು ಅಗತ್ಯವೆನಿಸುತ್ತದೆ.

1) ಹರಪ್ಪ : ಇದು ಹರಪ್ಪ ನಾಗರೀಕತೆಯ ಕಾಲದ ಒಂದು ಪ್ರಮುಖ ನಿವೇಶನ ಪ್ರಾರಂಭದಲ್ಲಿ ಪತ್ತೆ ಹಚ್ಚಿದ ವಿಶಾಲವಾದ ನಿವೇಶನವೂ ಇದೇ ಆಗಿದೆ. ಈ ನಿವೇಶನವು ಪಂಜಾಬಿನ ಮಾಂಟೆಗೋಮರಿ ಜಿಲ್ಲೆಯಲ್ಲಿದೆ. 1921 ರಲ್ಲಿ ಡಾ|| ದಯಾರಾಂ ಸಹನಿಯವರು ಪ್ರಥಮ ಉತ್ಖನನ ನಡೆಸಿದರು. ಆನಂತರ ಹೆಚ್ಚಿನ ಸಂಶೋಧನೆಯನ್ನು ಎಂ.ಎಸ್ ವತ್ಸ 1923 ರಿಂದ 34 ರ ಅವಧಿಯಲ್ಲು, ಕೆ.ಎನ್ ದೀಕ್ಷಿತ್ 1940ರಲ್ಲು, ಸರ್‌ಮಾರ್ಟಿಮರ್ ವೀಲರ್ 1962ರಲ್ಲು ಕೈ ಗೊಂಡರು. ಇದೊಂದು ಪ್ರಮುಖ ನಗರವಾಗಿದ್ದು, ಈ ಚಾರಿತ್ರಿಕ ಹಿನ್ನೆಲೆಯಲ್ಲಿ ಹರಪ್ಪ ಸಂಸ್ಕೃತಿಯೆಂದೇ ಹೆಸರಿಸಲಾಗಿದೆ.

2) ಮೆಹೆಂಜೋದಾರೋ (ಮಡಿದವರ ದಿಬ್ಬ) : ಸಂಶೋಧನೆಯ ಕಾಲದಲ್ಲಿ ದೊರೆತ ಮತ್ತೊಂದು ಪ್ರಮುಖ ನಿವೇಶನ ಮೆಹೆಂಜೋದಾರೋ. ಇದು ಇಂದು ಪಾಕಿಸ್ಥಾನದ ಸಿಂದ್ ಪ್ರಾಂತ್ಯದ ಲರ್ಕಾನ ಜಿಲ್ಲೆಯಲ್ಲಿದೆ. ಹರಪ್ಪ ಮತ್ತು ಮೆಹೆಂಜೋದಾರೋಗಳ ಮಧ್ಯ 640 ಕಿ.ಮೀ ಅಂತರವಿದೆ. ಮೆಹೆಂಜೋದಾರೋ ಎಂಬ ಪದದ ಅರ್ಥ- ʻಮಡಿದವರ ದಿಬ್ಬ’, ಮೆಹೆಂಜೋದಾರೋವನ್ನು ಉತ್ಖನನ ಮಾಡಿದವರು ಸರ್‌ಜಾನ್‌ ಮಾರ್ಷಲ್ ಮತ್ತು ಮೆಕೆರವರು. 1927 ರಿಂದ 31ರ ಅವಧಿಯಲ್ಲಿ ಮಹೆಂಜೋದಾರೋವಿನಲ್ಲಿ ಹೆಚ್ಚಿನ ಸಂಶೋಧನಾ ಕಾರ್ಯ ನಡೆಸಿದ ಕೀರ್ತಿ ಸರ್‌ಮಾರ್ಟಿಮರ್ ವೀಲರ್ ಮತ್ತು ಜಾರ್ಜ ಎಫ್ ಡೇಲ್ಸ್‌ ರವರಿಗೆ ಸಲ್ಲುತ್ತದೆ.

3) ಲೋಥಾಲ್ : ಹರಪ್ಪ ಸಂಸ್ಕೃತಿಯ ಕಾಲದ ಮತ್ತೊಂದು ಪ್ರಮುಖ ನಿವೇಶನ ಲೋಥಾಲ್. ಇದು ಸಾಬರಮತಿಯ ಉಪನದಿಯ ತಗ್ಗು ಪ್ರದೇಶದಲ್ಲಿದೆ. ಆಹ್ಮದಾಬಾದಿನ ನೈರುತ್ಯಕ್ಕೆ 80 ಕಿ.ಮೀ ದೂರವಿರುವ ಲೋಥಾಲ್ ಒಂದು ತೀರ ಪ್ರದೇಶದ ನಗರವಾಗಿದೆ. ಎಸ್.ಆರ್.ರಾವ್‌ ರವರು ಪ್ರಾಕ್ತನಾಶಾಸ್ತ್ರ ಇಲಾಖೆಯ ತಂಡದೊಂದಿಗೆ 1959 ರಿಂದ 1962 ರವರೆಗೆ ಸಂಶೋಧನಾಕಾರ್ಯ ಕೈಗೊಂಡಿದ್ದರು. ಲೋಥಾಲ್ ಸಿಂದೂಕೊಳ್ಳದ ಸಂಸ್ಕೃತಿಯ ಹಡಗುಕಟ್ಟೆಯ ಪ್ರಮುಖ ಕೇಂದ್ರವಾಗಿತ್ತು. ತೀರಪ್ರದೇಶವಾದ ಕಾರಣ ನಗರದ ರಕ್ಷಣೆಗಾಗಿ ಸುತ್ತಲೂ ಇಟ್ಟಿಗೆಯ ಗೋಡೆಯನ್ನು ನಿರ್ಮಿಸಲಾಗಿದೆ. ಲೋಥಾಲ್ ಹೆಸರಾಂತ ಬಂದರಾಗಿದ್ದು ಮಣಿಗಳ ತಯಾರಿಕೆಯ ಕೇಂದ್ರವೂ ಆಗಿತ್ತು.

4) ಕಾಲಿಬಂಗನ್ : ಸರಸ್ವತಿ ನದಿಯ ಬಲದಂಡೆಯ ಮೇಲಿರುವ ನಿವೇಶನವಾಗಿದೆ. ರಾಜಸ್ಥಾನದ ಗಂಗಾನಗರ ಜಿಲ್ಲೆಯಲ್ಲಿ ಬರುವ ಈ ನಿವೇಶನವನ್ನು ಘೋಷ್‌ ರವರು 1953ರಲ್ಲಿ ಪತ್ತೆಹಚ್ಚಿದರು. 1961 ರಿಂದ 1969ರ ಅವಧಿಯಲ್ಲಿ ಬಿ.ಬಿ.ಲಾಲ್ ಮತ್ತು ಥಾಪರ್‌ರವರು ಹೆಚ್ಚಿನ ಸಂಶೋಧನೆ ಮಾಡಿದ್ದಾರೆ. ಈ ನಗರದಲ್ಲಿ ದೊರೆತ ಅವಶೇಷಗಳ ಆಧಾರದ ಮೇಲೆ ನಗರದ ಸುತ್ತಲೂ ಕೋಟೆಯನ್ನು ನಿರ್ಮಿಸಲಾಗಿತ್ತೆಂದು ಮತ್ತು ಪ್ರಕೃತಿಯ ವಿಕೋಪಕ್ಕೆ ತುತ್ತಾಗಿರುವ ನಗರವಾಗಿತ್ತೆಂದು ಪತ್ತೆಹಚ್ಚಲಾಗಿದೆ.

5) ಬನವಲಿ : ಹರ್ಯಾಣದ ಹಿಸ್ಸಾರ್ ಜಿಲ್ಲೆಯಲ್ಲಿರುವ ಈ ನಿವೇಶನವನ್ನು ಆರ್.ಎಸ್.ಬಿಸ್ ಪತ್ತೆಹಚ್ಚಿದರು. ಸರಸ್ವತಿ ನದಿಯ ದಂಡೆಯ ಮೇಲಿರುವ ಬನವಲಿಯಲ್ಲಿ ಮಡಿಕೆಗಳು ಹೆಚ್ಚಾಗಿ ದೊರೆತಿವೆ. ಮಡಿಕೆಗಳ ತಯಾರಿಕೆಯ ಕೇಂದ್ರವಾಗಿದ್ದು ಇದರ ಮೇಲೆ ಚಿತ್ರಕಲೆಯು ಕಂಡುಬರುತ್ತದೆ.

6) ಚಾನ್ಹುದಾರೊ : ಈ ನಿವೇಶನವನ್ನು 1931ರಲ್ಲಿ ಎನ್.ಜಿ.ಮಜುಂದಾರ್ ರವರು ಕಂಡುಹಿಡಿದರು.1935ರಲ್ಲಿ ಮ್ಯಾಕೆಯವರು ವ್ಯಾಪಕ ಉತ್ಖನನ ಕೈಗೊಂಡರು.ಈ ನಗರವು ಮಹೆಂಜೊದಾರೊದಿಂದ 129 ಕಿ.ಮೀ.ದೂರದಲ್ಲಿದೆ.

ಕಲೆ

ಹರಪ್ಪ ಸಂಸ್ಕೃತಿಯ ಜನರು ಕಲಾಭಿರುಚಿಯುಳ್ಳವರಾಗಿದ್ದರು. ತಮ್ಮ ಕಲಾ ಪ್ರತಿಭೆಯನ್ನು ಮುದ್ರೆಗಳು ಸ್ತ್ರೀ-ಪುರುಷರ ಆಕೃತಿಗಳಲ್ಲಿ ಪ್ರತಿಬಿಂಬಿಸಿದ್ದಾರೆ. ಅವರ ಮಡಿಕೆಗಳ ಮೇಲಿನ ಚಿತ್ರಗಳು ಕಲಾ ಕೌಶಲ್ಯತೆಯನ್ನು ಸೂಚಿಸುತ್ತದೆ, ಮುದ್ರೆಗಳ ಮೇಲೆ ಚಿತ್ರಿಸಿರುವ ಡುಬ್ಬದ ಗೂಳಿ, ಎಮ್ಮೆ, ಕಾಡುಕೋಣ, ಹಸುಗಳ ಚಿತ್ರಗಳು ಕಲೆಯ ಪ್ರತೀಕವಾಗಿವೆ. ಸೂಕ್ಷ್ಮಮಣಿಗಳ ತಯಾರಿಕೆ. ಮಣಿಯ ಮೇಲೆ ಕೆತ್ತಲ್ಪಟ್ಟ ಮಂಗಗಳ ಚಿತ್ರಗಳು ಕಲಾ ಶ್ರೇಷ್ಟತೆಗೆ ನಿದರ್ಶನವಾಗಿದೆ. ಹರಪ್ಪ ಸಂಸ್ಕೃತಿಯ ಕಲಾ ಶ್ರೀಮಂತಿಕೆಯನ್ನು ವ್ಯಕ್ತಪಡಿಸುವ ಶಿವನ ತಾಂಡವ ನೃತ್ಯದ ದಾರ್ಶನಿಕ ಭಾವದ ಮೂರ್ತಿ, ನಟರಾಜನ ಮೂರ್ತಿ, ಮೆಹೆಂಜೋದಾರೋವಿನಲ್ಲಿ ದೊರೆತಿರುವ ನೃತ್ಯ ಭಂಗಿಯ ಸ್ತ್ರೀ ಪ್ರತಿಮೆಗಳು ನಿಜಕ್ಕು ಕಲಾಪ್ರತಿಭೆಯನ್ನು ಪ್ರತಿಬಿಂಬಿಸಿದ್ದಾರೆ. ಇವುಗಳನ್ನು ಅವಲೋಕಿಸಿದ ಸರ್.ಜಾನ್ ಮಾರ್ಷಲ್ ಗ್ರೀಕರ ಕಲೆಯನ್ನು ನಾಚಿಸುವಂತಹ ಕಲಾಭಿವೃದ್ಧಿ ಹರಪ್ಪ ಸಂಸ್ಕೃತಿಯಲ್ಲಿ ಇತ್ತೆಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಡಿಕೆಗಳ ಮೇಲೆ ಬಿಡಿಸಿರುವ ರೇಖೆಯುಳ್ಳ ಚಿತ್ರಗಳು ಮನುಷ್ಯಾಕೃತಿ, ಪ್ರಾಣಿ, ಗಿಡ ಮರಗಳು ಮತ್ತು ಹಕ್ಕಿ ಪಕ್ಷಿಗಳ ಚಿತ್ರಗಳು ನೋಡಲು ನಯನ ಮನೋಹರವಾಗಿವೆ.

ಮುದ್ರೆಗಳು : ಹರಪ್ಪ ಸಂಸ್ಕೃತಿಯ ಕಾಲದಲ್ಲಿನ ಸುಮಾರು 2500ಕ್ಕೂ ಹೆಚ್ಚು ಮುದ್ರೆಗಳು ದೊರೆತಿವೆ. ಮುದ್ರೆಗಳು ಕಲೆಯ ಪ್ರತೀಕವೂ ಆಗಿವೆ. ಚದುರಾಕಾರದ ಮುದ್ರೆಗಳಲ್ಲಿ ಲಿಪಿ ಮತ್ತು ಆಕೃತಿಗಳೆರಡು ಇವೆ. ಆಯತಾಕಾರದ ಮುದ್ರೆಗಳು ಕೇವಲ ಲಿಪಿಯನ್ನೊಳಗೊಂಡಿರುತ್ತವೆ. ಮುದ್ರೆಗಳ ಮೇಲೆ ಇಳಿ ಕೆತ್ತನೆಯಾಗಿ ಕೊರೆದ ಚಿತ್ರಗಳು, ಮಾನವರ, ಪ್ರಾಣಿಗಳ, ದೇವರ ಆಕೃತಿಗಳು, ಲೌಕಿಕ ಮತ್ತು ಪೌರಾಣಿಕ ವಿಷಯಗಳಿಗೆ ಸಂಬಂಧಿಸಿದ ಚಿತ್ರಗಳಿವೆ. ಮುದ್ರೆಯ ಮೇಲಿರುವ ಗೂಳಿಯ ಚಿತ್ರ ಎಮ್ಮೆಯ ಮೇಲೆ ಈಟಿಯಿಂದ ಆಕ್ರಮಣ ಮಾಡುತ್ತಿರುವ ಮನುಷ್ಯನ ಚಿತ್ರವಿದೆ. ಮಹೆಂಜೋದಾರೋದ ಮುದ್ರೆಯೊಂದರಲ್ಲಿ ಗೂಳಿಯಾಕಾರದ ಮುನುಷ್ಯ ಕೊಂಬುಳ್ಳ ಹುಲಿಯ ಮೇಲೆ ಆಕ್ರಮಣ ಮಾಡುತ್ತಿರುವ ದೃಶ್ಯವಿದೆ. ಮುದ್ರೆಗಳು ಹರಪ್ಪ ಸಂಸ್ಕೃತಿಯ ಕಲೆಯನ್ನು ಸ್ಪಷ್ಟವಾಗಿ ಪ್ರತಿಬಿಂಬಿಸುತ್ತವೆ.

ಲಿಪಿ : ಹರಪ್ಪ ಸಂಸ್ಕೃತಿಯ ಲಿಪಿಯನ್ನು ಸಂಶೋಧನೆಯ ಕಾಲದಲ್ಲಿ ದೊರೆತ ಮುದ್ರೆಗಳ ಸಹಾಯದಿಂದ ಅರಿಯುವ ಪ್ರಯತ್ನ ಮಾಡಲಾಗಿದೆ. ಸಿಂಧೂ ಸಂಸ್ಕೃತಿಯ ಭಾಷೆ ಮತ್ತು ಲಿಪಿಯ ಬಗ್ಗೆ ಸ್ಪಷ್ಟವಾದ ಅಭಿಪ್ರಾಯಕ್ಕೆ ಬರುವುದು ಕಷ್ಟಸಾಧ್ಯವಾಗಿದೆ. ಈ ಸಂಸ್ಕೃತಿಯ ಕಾಲದ ಭಾಷೆಯ ಬಗ್ಗೆ ವಿಭಿನ್ನ ಅಭಿಪ್ರಾಯಗಳಿವೆ. ಪರ್ಪೋಲ ಮೊದಲಾದ ಸ್ಕ್ಯಾಂಡಿನೇವಿಯನ್ನರ ಸಂಶೋಧನೆಯಿಂದ ಭಾಷೆಯು ದ್ರಾವಿಡ ಗುಂಪಿಗೆ ಹತ್ತಿರವಾದುದೆಂದು ತಿಳಿಸಿದ್ದಾರೆ. ಪ್ರಸಿದ್ಧ ವಿದ್ವಾಂಸ ಸಹಾದೇವನ್‌ರವರು ಸಿಂಧೂ ಲಿಪಿಯನ್ನು ಕಂಪ್ಯೂಟರ್ ಸಹಾಯದಿಂದ ಅಧ್ಯಯನ ಮಾಡಿ ಭಾಷೆಯು ದ್ರಾವಿಡ ಗುಂಪಿನದು ಎಂದಿದ್ದಾರೆ. ಎಸ್.ಆರ್.ರಾವ್‌ರವರು ಮುದ್ರೆಗಳ ಮೇಲಿನ ಬರಹಗಳನ್ನು ಅಧ್ಯಯನಮಾಡಿ ಇಂಡೋ-ಆರ್ಯನ್ ಅಥವಾ ಇಂಡೋ-ಯುರೋಪಿಯನ್ ಭಾಷೆಯ ವರ್ಗಕ್ಕೆ ಸೇರಿದ್ದು ವೇದ ಪೂರ್ವದ ಭಾಷೆಯಾಗಿದೆಯೆಂದಿದ್ದಾರೆ. ಲ್ಯಾಂಡ್ನ್‌ರವರು ಬ್ರಾಹ್ಮಿ ಲಿಪಿಯ ಮೂಲವಾಗಿದೆ ಎಂದಿದ್ದಾರೆ. ಸಿಂಧೂ ಲಿಪಿಯ ಬರವಣಿಗೆಯು ಬಲದಿಂದ ಎಡಕ್ಕೆ ಕೆತ್ತಲ್ಪಟ್ಟಿದ್ದು ವರ್ಣಮಾಲೆಯಾಗಿರದೆ ಚಿತ್ರಗಳನ್ನಾದರಿಸಿದ ಲಿಪಿಯಾಗಿದೆ. 250 ರಿಂದ 400 ಚಿತ್ರಗಳನ್ನು ಒಳಗೊಂಡಿದೆ. 26 ಚಿತ್ರಗಳಿದ್ದು ಪ್ರತಿಯೊಂದು ಚಿತ್ರವು ಒಂದೊಂದು ಶಬ್ದವನ್ನೊಳಗೊಂಡಿದೆ. ಎಸ್.ಆರ್.ರಾವ್‌ರವರು ಮನುಷ್ಯ ಮತ್ತು ಮೀನಿನ ಚಿತ್ರಗಳನ್ನು ರೇಖಾರೂಪದಲ್ಲಿ ಬಿಡಿಸಲಾಗಿದೆ ಎಂದಿದ್ದಾರೆ. ಸಿಂಧೂ ಲಿಪಿಯನ್ನು ಓದಲು ಇತ್ತೀಚಿಗೆ ಹೆಚ್ಚಿನ ಪ್ರಯತ್ನಗಳು ನಡೆದಿವೆ. ಆದರೆ ಸಿಂಧೂಲಿಪಿಯು ಇದುವರೆವಿಗೂ ನಿಗೂಢವಾಗಿಯೇ ಉಳಿದಿದೆ.

ಹರಪ್ಪ ಸಂಸ್ಕೃತಿಯ ಅವನತಿ

ಪ್ರಾಚೀನ ಹರಪ್ಪ ಸಂಸ್ಕೃತಿಯು ನೂರಾರು ವರ್ಷಗಳ ಕಾಲ ಬಾಳಿ ಬದುಕಿ ಕ್ರಿಪೂ 2000 ದ ವೇಳೆಗೆ ಅವನತಿ ಹೊಂದಿರಬೇಕೆಂದು ಮಾರ್ಟಿಮರ್ ವೀಲರ್ ಅಭಿಪ್ರಾಯಪಟ್ಟಿದ್ದಾರೆ. ನಾಗರೀಕತೆಯ ಅವನತಿಗೆ ಇತಿಹಾಸಕಾರರು ಅನೇಕ ಕಾರಣಗಳನ್ನು ನೀಡಿದ್ದಾರೆ. ಅಂತಹ ಪ್ರಮುಖ ಕಾರಣಗಳೆಂದರೆ.

1. ಭೌಗೋಳಿಕ ಬದಲಾವಣೆಗಳು :

ಹರಪ್ಪ ಸಂಸ್ಕೃತಿಯ ಕಾಲದಲ್ಲಿ ಹವಾಮಾನದಲ್ಲಿ ಅನೇಕ ಬದಲಾವಣೆಗಳು ಆದವು. ಇಟ್ಟಿಗೆ ಸುಡಲು ಮರಗಳನ್ನು ಕಡಿದಿದ್ದರಿಂದ ಉಷ್ಣತೆಯ ಪ್ರಮಾಣ ಹೆಚ್ಚಿ ಮಳೆ ಕಡಿಮೆಯಾಯಿತೆಂದು ಇದರಿಂದ ಕೃಷಿ ಭೂಮಿಯ ಫಲವತ್ತತೆ ಕಡಿಮೆಯಾಗಿ ಮರುಭೂಮಿಯಾಗಿ ಮಾರ್ಪಟ್ಟಿತೆಂದು ಅಮಲಾನಂದ ಘೋಷ್ ಅಭಿಪ್ರಾಯ ಪಡುತ್ತಾರೆ. ಇದರಿಂದಾಗಿಯೇ ಹರಪ್ಪ ಸಂಸ್ಕೃತಿ ಅವನತಿಯಾಯಿತೆಂದು ಅವರ ನಿಲುವಾಗಿದೆ.

2. ಪ್ರವಾಹ :

ಹರಪ್ಪ ಸಂಸ್ಕೃತಿಯು ಸಿಂಧೂನದಿಯ ದಂಡೆಯ ಮೇಲೆ ಬೆಳವಣಿಗೆ ಹೊಂದಿದ್ದರಿಂದ ಸಿಂಧೂನದಿಯು ಉಕ್ಕಿ- ಹರಿದು ಪ್ರವಾಹಕ್ಕೆ ತುತ್ತಾಗಿ ನಾಗರೀಕತೆ ನಾಶವಾಗಿದೆಯೆಂದು ಸರಜಾನ್ ಮಾರ್ಷಲ್ ಮತ್ತು ಮೆಕೆ ಅಭಿಪ್ರಾಯಪಟ್ಟಿದ್ದಾರೆ.

3. ಆರ್ಯನ್ನರ ದಾಳಿ :

ಹರಪ್ಪ ನಾಗರೀಕತೆಯು ಆರ್ಯನ್ನರ ದಾಳಿಯಿಂದ ನಾಶಗೊಂಡಿದೆಯೆಂದು ಮಾರ್ಟಿಮರ್ ವ್ಹೀಲರ್ ಅಭಿಪ್ರಾಯಪಟ್ಟಿದ್ದಾರೆ. ಇದಕ್ಕೆ ಪೂರಕವಾಗಿ ಸಂಶೋಧನೆಯ ಕಾಲದಲ್ಲಿ ಅಸ್ತವ್ಯಸ್ತವಾಗಿ, ಅಂಗಾಂಗಳು ಕತ್ತರಿಸಲ್ಪಟ್ಟ ಅಸ್ಥಿಪಂಜರಗಳು ದೊರೆತಿವೆ. ಅಸ್ಥಿಪಂಜರಗಳ ಅಧ್ಯಯನದಿಂದ ಅವು ಒಮ್ಮೆಲೆ ಮರಣಹೊಂದಿದ ಶವಗಳೆಂದು ಶಿರಕ್ಕೆ ಕತ್ತಿಯಿಂದ ಗಾಯವಾದಂತಹ ಗುರುತಿದೆ. ಸಂಶೋದನೆಯ ಕಾಲದಲ್ಲಿ ಆರ್ಮೆನಾಯ್ಡ್ ಜನಾಂಗಕ್ಕೆ ಸೇರಿದ ತಲೆಬುರುಡೆ ದೊರೆತಿದ್ದು ಆ ಜನಾಂಗದವರೇ ದಾಳಿ ಮಾಡಿರಬಹುದೆಂದು ಶಂಕಿಸಲಾಗಿದೆ.

4. ಪೂರಕ ಅಂಶಗಳೇ ಕಾರಣವಾಗಿರುವುದು :

ಬಿ.ಕೆ. ಥಾಪರ್ ಅಭಿಪ್ರಾಯಪಡುವಂತೆ ಹವಾಯಣ, ನದಿಯ ಪಾತ್ರದ ಪ್ರಭಾವ, ನೈಸರ್ಗಿಕ ಸಂಪನ್ಮೂಲಗಳು ಬೆಳವಣಿಗೆಗೆ ಪೂರಕವಾಗಿದ್ದಂತೆ ಅವನತಿಗೂ ಕಾರಣವಾಗಿರಬೇಕೆಂದು ತಿಳಿಸಿದ್ದಾರೆ.

5. ಸ್ಥಳೀಯ ಹವಾಮಾನ :

ಆರ್.ಎಲ್. ಸ್ಟೀನ್ ಪ್ರಕಾರ ಬೆಲ್ಕೋಲಿಥಿಕ್ ಯುಗದಿಂದ ಸ್ಥಳೀಯ ಹವಾಮಾನವು ಬದಲಾವಣೆಗೊಂಡಿತು. ಇದು ಸಿಂಧೂ ಕೃಷಿ ವ್ಯವಸ್ಥೆಯ ಮೇಲೆ ಪರಿಣಾಮ ಬೀರಿತು. ಆ ಕಾರಣ ಮಳೆಯು ಕಡಿಮೆಯಾಗುತ್ತಾ ಹೋಗಿ ಶಾಖ ಹೆಚ್ಚಾಗಿ ಮಣ್ಣಿನ ತೇವಾಂಶ ಕಡಿಮೆಯಾಗಿ, ಕೃಷಿಯು ಆಸಾಧ್ಯವೆನಿಸಿ ಅವನತಿಯತ್ತ ನಾಗರೀಕತೆ ಸಾಗಿರಬೇಕು.

6. ಭೂಕಂಪ, ಬರಗಾಲ, ಸಾಂಕ್ರಮಿಕ ಕಾಯಿಲೆ :

ಭೂಕಂಪ, ಬರಗಾಲಗಳಿಂದಲೂ ಹರಪ್ಪ ಸಂಸ್ಕೃತಿ ನಾಶವಾಗಿರಬಹುದು ಅಥವಾ ಯಾವುದೋ ಸಾಂಕ್ರಮಿಕ ಕಾಯಿಲೆಗೆ ತುತ್ತಾಗಿರಬಹುದಾದ ಸಾಧ್ಯತೆಯೂ ಇದೆ.

7. ಮರುಭೂಮಿಯ ವಿಸ್ತಾರ :

ಹರಪ್ಪ ನಾಗರೀಕತೆಯ ಸುತ್ತಲೂ ಮರುಭೂಮಿ ವಿಸ್ತಾರಗೊಂಡು ಲವಣಾಂಶ ಅಧಿಕವಾಗಿರಬೇಕು. ಇದು ಭೂಮಿಯ ಫಲವತ್ತತೆಯನ್ನು ಕಡಿಮೆ ಮಾಡಿ ಒಂದು ಮಹಾನ್ ನಾಗರೀಕತೆಯ ಅಂತ್ಯಕ್ಕೆ ಕಾರಣವಾಗಿರಬೇಕು.

ಸಮುದ್ರಗುಪ್ತ (ಕ್ರಿ.ಶ. 335-375)

ಸಮುದ್ರಗುಪ್ತ (ಕ್ರಿ.ಶ. 335-375)

ಈತ ಗುಪ್ತವಂಶದ ದೊರೆಗಳಲ್ಲಿಯೇ ಅತ್ಯಂತ ಪ್ರಸಿದ್ಧನಾಗಿದ್ದನು. ದಿಗ್ವಿಜಯವೇ ಈತನ ಮೂಲ ಗುರಿಯಾಗಿದ್ದಿತು. ಯುದ್ಧ ಭೂಮಿಯಲ್ಲಿ ಸೋಲಿಲ್ಲದ ಸರದಾರ. ಈತನ ಸಾಧನೆಗಳನ್ನು ಗಮನಿಸಿದ ಡಾ. ವಿ.ಎ. ಸ್ಮಿತ್ ಈತನನ್ನು ಭಾರತದ ನೆಪೋಲಿಯನ್ ಎಂದು ಕರೆದಿದ್ದಾರೆ.

ಸಿಂಹಾಸನಾರೋಹಣ : ಸಮುದ್ರಗುಪ್ತನು ಮೊದಲನೆಯ ಚಂದ್ರಗುಪ್ತನ ಜೇಷ್ಠ ಪುತ್ರನೇನೂ ಆಗಿರಲಿಲ್ಲ. ಭಾರತೀಯ ಸಂಪ್ರದಾಯದ ಪ್ರಕಾರ ರಾಜತ್ವ ವಂಶಪಾರಂಪರ್ಯವಾಗಿರಬೇಕಿತ್ತು. ಅಂದರೆ ಹಿರಿಯಮಗನೇ ತಂದೆಯ ನಂತರ ಅಧಿಕಾರಕ್ಕೆ ಬರಬೇಕಿತ್ತು. ಆದರೆ ಸಮುದ್ರಗುಪ್ತ ಬಹಳ ಬುದ್ದಿವಂತ ಹಾಗೂ ಪರಾಕ್ರಮಿಯಾಗಿದ್ದರಿಂದ ಚಂದ್ರಗುಪ್ತ ತನ್ನ ಉತ್ತರಾಧಿಕಾರಿಯಾಗಿ ಸಮುದ್ರಗುಪ್ತನನ್ನೇ ಆಯ್ಕೆ ಮಾಡಿದನು. ಪ್ರಜೆಗಳ ಮತ್ತು ಮಾಂಡಳಿಕರ ಸನ್ನಿಧಿಯಲ್ಲಿ ಸಮುದ್ರಗುಪ್ತನಿಗೆ ಪಟ್ಟಕಟ್ಟಿ ಜಗತ್ತನ್ನೇ ಆಳು ಎಂದು ಆಶೀರ್ವದಿಸಿದನು.

ಸಮುದ್ರಗುಪ್ತನ ದಿಗ್ವಿಜಯಗಳು : ಸಮುದ್ರಗುಪ್ತ ತನ್ನ ದಿಗ್ವಿಜಯಗಳಿಂದ ಹೆಸರುವಾಸಿಯಾಗಿದ್ದಾನೆ. ಈತ ಕೈಗೊಂಡ ಎಲ್ಲಾ ದಂಡಯಾತ್ರೆಗಳಲ್ಲಿ ಜಯಶೀಲನಾಗಿದ್ದಾನೆ. ಈತನ ದಿಗ್ವಿಜಯಗಳ ಬಗ್ಗೆ ತಿಳಿದುಕೊಳ್ಳಲು ಅಲಹಾಬಾದ್ ಸ್ತಂಭಶಾಸನ ಅತಿ ಉಪಯುಕ್ತ ಆಧಾರವಾಗಿದೆ.

ಅಲಹಾಬಾದ್ ಶಾಸನ : ಈ ಶಾಸನವು ಇಂದು ಅಲಹಾಬಾದ್ ಕೋಟೆಯೊಳಗೆ ಇದೆ. ಇದಕ್ಕಿಂತ ಮುಂಚೆ ಅದು ಅಲಹಾಬಾದ್‌ನಿಂದ 28 ಮೈಲು ದೂರದ ಕೌಶಾಂಬಿಯಲ್ಲಿ ಇತ್ತು. ಈ ಸ್ತಂಭದ ಒಂದು ಭಾಗದಲ್ಲಿ ಅಶೋಕನ ಶಾಸನವಿದೆ. ಮತ್ತೊಂದು ಭಾಗದಲ್ಲಿ ಸಮುದ್ರಗುಪ್ತನ ದಿಗ್ವಿಜಯಗಳನ್ನು ತಿಳಿಸುವ ಶಾಸನವಿದೆ. ಸಮುದ್ರಗುಪ್ತನ ದಂಡನಾಯಕ ಮತ್ತು ಸಂಧಿವಿಗ್ರಹಿಯಾಗಿದ್ದ ಹರಿಶೇಣನು ಅಲಹಾಬಾದ್ ಸ್ತಂಭ ಶಾಸನದ ಕರ್ತೃ. ಇದು ಸಂಸ್ಕೃತ ಭಾಷೆಯಲ್ಲಿದೆ. ಚಂಪೂ ಶೈಲಿಯಲ್ಲಿದ್ದ ಇದು ಗದ್ಯ ಪದ್ಯಗಳೆರಡರಿಂದಲೂ ಮಿಶ್ರಣಗೊಂಡಿದೆ.

ಸಮುದ್ರಗುಪ್ತನ ದಿಗ್ವಿಜಯಗಳ ಕುರಿತು ಡಾ. ಆರ್. ಎಸ್. ತ್ರಿಪಾಟಿಯವರು ಯುದ್ಧ ಮತ್ತು ಆಕ್ರಮಣಗಳನ್ನೇ ಗುರಿಯಾಗಿ ಹೊಂದಿದ್ದ ಸಮುದ್ರಗುಪ್ತನು ಶಾಂತಿ ಹಾಗೂ ಧರ್ಮಗಳನ್ನು ಗುರಿಯಾಗಿ ಹೊಂದಿದ್ದ ಅಶೋಕನಿಗೆ ತದ್ವಿರುದ್ಧವಾಗಿದ್ದನು ಎಂದಿದ್ದಾರೆ. ಅಲಹಾಬಾದ್ ಸ್ತಂಭ ಶಾಸನದ ಪ್ರಕಾರ ಸಮುದ್ರಗುಪ್ತನ ದಿಗ್ವಿಜಯಗಳು ಈ ಕೆಳಗಿನಂತಿವೆ.

1) ಉತ್ತರ ಭಾರತದ ದಿಗ್ವಿಜಯಗಳು :

100 ಕದನಗಳ ಸಿಂಹ ಎಂದು ಹೆಸರಾದ ಸಮುದ್ರಗುಪ್ತನು ತನ್ನ ಅಧಿಕಾರವನ್ನು ವಿರೋಧಿಸಿದ ಉತ್ತರ ಭಾರತದ ಒಟ್ಟು 9 ಜನ ಅರಸರನ್ನು ಸೋಲಿಸಿದನು. ಅವರುಗಳೆಂದರೆ

ರಾಜರು ಆಳುತ್ತಿದ್ದ ಪ್ರದೇಶ ಈಗಿನ ರಾಜ್ಯಗಳು
1) ನಾಗಸೇನ 1) ಪದ್ಮಾವತಿ 1) ಮಧ್ಯಪ್ರದೇಶ
2) ಅಚ್ಯುತ 2) ಅಹಿಶ್ಚತ್ರ 2) ಉತ್ತರಪ್ರದೇಶ

3) ಗಣಪತಿನಾಗ

4) ರುದ್ರದೇವ

3) ಮಥುರ ಅಥವಾ ವಿಧಿಶ

3) ಉತ್ತರಪ್ರದೇಶ

4) ಮಧ್ಯಪ್ರದೇಶ

5) ಮತ್ತಿಲ 4) ವಾಕಟಾಕ ರಾಜ 5) ದೆಹಲಿ
6) ನಾಗದತ್ತ 5) ಬುಲಂದ ಶಹರ 6) ಮಥುರ
7) ಚಂದ್ರವರ್ಮ 6) ನಾಗದೊರೆ 7) ಬಂಗಾಳ
8) ನಂದಿ 7) ಪುಷ್ಕರಣದ ರಾಜ 8) ಉತ್ತರ ಪ್ರದೇಶ
9) ಬಲವರ್ಮನ್ 8) ನಾಗದೊರೆ 9) ಅಸ್ಸಾಂ
9) ಅಸ್ಸಾಂ

2) ಅಡವಿ ರಾಜ್ಯಗಳನ್ನು ಸೆದೆಬಡಿದದ್ದು : ಉತ್ತರ ಪ್ರದೇಶ, ಮಧ್ಯಪ್ರದೇಶ, ನಾಗಪುರ, ಬಾಗೇಲ್ ಖಂಡ, ರೇವಾ ಹಾಗೂ ವಿಂದ್ಯ ಪರ್ವತದ ಅಡವಿ ರಾಜ್ಯಗಳನ್ನು ಗೆದ್ದುಕೊಂಡ ಸಮುದ್ರಗುಪ್ತ ಅವುಗಳನ್ನು ತನ್ನ ಸಾಮ್ರಾಜ್ಯದಲ್ಲಿ ವಿಲೀನಗೊಳಿಸಿದನು.

3) ದಕ್ಷಿಣ ಭಾರತದ ದಿಗ್ವಿಜಯಗಳು : ಆರ್ಯಾವರ್ತವನ್ನು ಗೆದ್ದುಕೊಂಡ ನಂತರ ಸಮುದ್ರಗುಪ್ತನು ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡು ದಕ್ಷಿಣದ ಕಡೆಗೆ ಗಮನಹರಿಸಿದನು. ನಂತರ ದಕ್ಷಿಣದ ಎಲ್ಲಾ 12 ರಾಜರನ್ನು ಸೋಲಿಸಿದನೆಂದು ಅಲಹಾಬಾದ್ ಸ್ತಂಭಶಾಸನ ಹೇಳುತ್ತದೆ. ಅವುಗಳೆಂದರೆ

    ರಾಜನ ಹೆಸರು                                                 ಇಂದಿನ ಪ್ರದೇಶ

1) ಮಹಾಕಾಂತಾರದ ವ್ಯಾಘ್ರರಾಜ                 ಒರಿಸ್ಸಾ ಅಥವಾ ಬುಂದೇಲ ಖಂಡದ ಒಂದು ಪ್ರದೇಶ

2) ಕೋಸಲದ ಮಹೇಂದ್ರ                                 ದಕ್ಷಿಣ ಕೋಸ

(ರಾಯಪುರ, ಸಂಬಲಪುರ, ಬಿಲಾಸ್ ಪುರ)

3) ಕೊಟ್ಟೂರಿನ ಸ್ವಾಮಿದತ್ತ                          ಗಂಜಾಂ ಜಿಲ್ಲೆಯ ಮಹೇಂದ್ರಗಿರಿಯ ಹತ್ತಿರ ಕೊತ್ತೂರು

4) ಷಿಷ್ಠಪುರದ ಮಹೇಂದ್ರಗಿರಿ                        ಪಶ್ಚಿಮ ಗೋದಾವರಿ ಜಿಲ್ಲೆಯ ಇಂದಿನ ಪೀರಾಪುರಂ

5) ಕೌರಾಲದ ಮಾಂತರಾಜ                          ಪಶ್ಚಿಮ ಗೋದಾವರಿ ಜಿಲ್ಲೆಯ ಪ್ರದೇಶ

6) ಏರಂಡಪಲ್ಲದ ದಮನ                              ವಿಶಾಖಪಟ್ಟಣದ ಪ್ರದೇಶ

7) ಕಂಚಿಯ ವಿಷ್ಣುಗೋಪ                              ತಮಿಳುನಾಡಿನ ಕಂಚಿ

8) ಅವಮುಕ್ತದ ನೀಲರಾಜ                           ಕಂಚಿಯ ಹತ್ತಿರದ ಪ್ರದೇಶ

9) ವೆಂಗಿಯ ಹಸ್ತಿವರ್ಮ                                ಕೃಷ್ಣಾ-ಗೋದಾವರಿ ನಡುವಣ ಪ್ರದೇಶ

10) ಪಾಲಕ್ಕದ ಉಗ್ರಸೇನ                            ನೆಲ್ಲೂರು ಜಿಲ್ಲೆಯ ಪಾಲಕ್ಕಾಡ

11) ದೇವರಾಷ್ಟ್ರದ ಕುಬೇರ                            ಮಹಾರಾಷ್ಟ್ರದ ಸತಾರಾ ಜಿಲ್ಲೆ

12) ಕುಸ್ತಲಪುರದ ಧನಂಜಯ                        ಉತ್ತರ ಅರ್ಕಾಟ ಜಿಲ್ಲೆ

ದಕ್ಷಿಣದ ಈ ಪ್ರಾಂತ್ಯಗಳು ಪಾಟಲಿಪುತ್ರದಿಂದ ಬಹಳ ದೂರವಿದ್ದುದರ ಕಾರಣ ಅವುಗಳನ್ನು ನೇರ ಆಳ್ವಿಕೆಗೆ ಒಳಪಡಿಸಲು ಸಮುದ್ರಗುಪ್ತನಿಗೆ ಸಾಧ್ಯವಾಗಲಿಲ್ಲ. ಹೀಗಾಗಿ ಆತ ತನ್ನ ಸಾರ್ವಭೌಮವನ್ನು ಒಪ್ಪಿಕೊಂಡ ಅರಸರಿಂದ ಕಪ್ಪಕಾಣಿಕೆಗಳನ್ನು ಸ್ವೀಕರಿಸಿ ಆ ಪ್ರದೇಶಗಳನ್ನು ಆಯಾ ರಾಜರುಗಳಿಗೆ ಒಪ್ಪಿಸಿದನು.

4) ಗಡಿನಾಡ ರಾಜ್ಯಗಳನ್ನು ಗೆದ್ದುಕೊಂಡದ್ದು : ಸಮುದ್ರಗುಪ್ತನ ಶಕ್ತಿ ಸಾಮರ್ಥ್ಯವನ್ನು ಕೇಳಿ ತಿಳಿದುಕೊಂಡಿದ್ದ ಗಡಿರಾಜ್ಯಗಳಾದ ಅಸ್ಸಾಂನ ಕಾಮರೂಪ, ಉತ್ತರ ಅಸ್ಸಾಂನ ದೇವಕ, ಬಂಗಾಳದ ಸಮತಟ, ನೇಪಾಳದ ಕರ್ತೃಪುರ ಹಾಗೂ ರೋಹಿಲ್ ಖಂಡಗಳ ರಾಜರು ತಾವಾಗಿಯೇ ಬಂದು ಸಮುದ್ರಗುಪ್ತನಿಗೆ ಕಪ್ಪಕಾಣಿಕೆ ಸಲ್ಲಿಸಿ ಸಾರ್ವಭೌಮತ್ವವನ್ನು ಒಪ್ಪಿಕೊಂಡರು

5) ಗಣರಾಜ್ಯಗಳ ವಿರುದ್ಧ ಯುದ್ಧ : ಗಣರಾಜ್ಯಗಳಾದ ಮಾಳ್ವರು, ಕಾಕರು, ಸಂಕನಿಕರು, ಕ್ಷುದ್ರಕರು, ಅಭೀರರು, ಅರ್ಜುನಾಯನರು, ಪ್ರರ್ಜನರು, ಯೌದೇಹರು ಹಾಗೂ ಮಾದ್ರಕರು ಸಮುದ್ರಗುಪ್ತನಿಂದ ಸೋತು ಸಾರ್ವಭೌಮತ್ವವನ್ನು ಸ್ವೀಕರಿಸಿದರು.

ವಿದೇಶಗಳಲ್ಲಿ ಅವನ ಮಹಿಮೆ : ಸಮುದ್ರಗುಪ್ತನ ಕೀರ್ತಿ ವಿದೇಶಗಳಿಗೂ ಹರಡಿತ್ತು. ಶಕರ ಹರಿಶೇಣನು ಗುಪ್ತರಿಗೆ ಹೆಚ್ಚು ಗೌರವ ನೀಡಿದ್ದನು. ಅದರಲ್ಲೂ ಕಾಬೂಲಿನ ಕುಶಾನ ಅರಸನಾದ ದೇವಪುತ್ರಶಾಹಿ ತನ್ನ ರಾಯಭಾರಿಗಳನ್ನು ಸಮುದ್ರಗುಪ್ತನ ಆಸ್ಥಾನಕ್ಕೆ ಕಳುಹಿಸಿಕೊಟ್ಟಿದ್ದನು. ಸಿಂಹಳದ ಅರಸ ಬುದ್ಧಗಯಾದಲ್ಲಿ ಒಂದು ಬೌದ್ಧವಿಹಾರವನ್ನು ನಿರ್ಮಿಸಲು ಸಮುದ್ರಗುಪ್ತನಿಂದ ಅನುಮತಿ ಪಡೆದನು.

6) ಸಮುದ್ರಗುಪ್ತನ ರಾಜ್ಯ ವಿಸ್ತಾರ : ಡಾ. ಆರ್.ಕೆ. ಮುಖರ್ಜಿಯವರ ಪ್ರಕಾರ ಸಮುದ್ರಗುಪ್ತನ ಸಾಮ್ರಾಜ್ಯ ಉತ್ತರ ಹಿಮಾಲಯದಿಂದ ಹಿಡಿದು ದಕ್ಷಿಣದಲ್ಲಿ ನರ್ಮದಾ ನದಿಯವರೆಗೆ ಹಾಗೂ ಪಂಜಾಬಿನಿಂದ ಹಿಡಿದು ಬ್ರಹ್ಮಪುತ್ರಾ ನದಿಯವರೆಗೂ ಹಬ್ಬಿದ್ದಿತು.

7) ಅಶ್ವಮೇಧಾಚರಣೆ : ಅನೇಕ ದಿಗ್ವಿಜಯಗಳನ್ನು ಪೂರ್ಣಗೊಳಿಸಿದ ಸಮುದ್ರಗುಪ್ತನು ಅವುಗಳ ನೆನಪಿಗಾಗಿ ಅಶ್ವಮೇಧಯಾಗವನ್ನು ಮಾಡಿದನು. ಹಾಗೂ ಅಶ್ವಮೇಧ, ಪರಾಕ್ರಮಿ, ರಾಜಾಧಿರಾಜ ಹಾಗೂ ಚಕ್ರವರ್ತಿ ಎಂಬ ಬಿರುದನ್ನು ಧರಿಸಿದನು. ತನ್ನ ವಿಜಯದ ಸಂಕೇತವಾಗಿ ಅನೇಕ ಚಿನ್ನದ ನಾಣ್ಯಗಳನ್ನು ಅಚ್ಚುಹಾಕಿಸಿದನು. ಅವುಗಳ ಮೇಲೆ ಕುದುರೆಯ ಚಿತ್ರವನ್ನು ಟಂಕಿಸಿದನು. ಅದಲ್ಲದೆ ವಿವಿಧ ಬಗೆಯ 9 ಚಿನ್ನದ ನಾಣ್ಯಗಳನ್ನು ಟಂಕಿಸಿದನು. ಅವುಗಳೆಂದರೆ 1) ಹುಲಿಮಾದರಿ 2) ವೀಣಾಪಾಣಿ 3) ಅಶ್ವಮೇಧ 4) ಭರ್ಚಿ 5) ಧನಸ್ಸು 6) ಶಂಖ 7) ಛತ್ರಿ 8) ಗಂಡುಗೊಡಲಿ ಇತ್ಯಾದಿ.

8) ಸಮುದ್ರಗುಪ್ತನ ಕಲಾಪೋಷಣೆ : ಕಲೆ, ಸಾಹಿತ್ಯ, ನೃತ್ಯ ಹಾಗೂ ಶಿಲ್ಪಕಲೆಗಳಿಗೆ ಗುಪ್ತರು ಮಹಾನ್ ಕಾಣಿಕೆಯನ್ನು ನೀಡಿದ್ದಾರೆ. ಅವನ ನಾಣ್ಯಗಳ ಮೇಲೆ ವೀಣಾಪಾಣನಾಗಿ ಕುಳಿತಿರುವ ಚಿತ್ರವನ್ನು ನೋಡಿದರೆ ಅವರಿಗೆ ಸಂಗೀತದ ಬಗ್ಗೆ ಇದ್ದ ಅಭಿರುಚಿಯನ್ನು ತಿಳಿಸುತ್ತದೆ. ಸಮುದ್ರಗುಪ್ತ ತನ್ನ ಆಸ್ಥಾನದಲ್ಲಿ ಅನೇಕ ಕವಿಗಳು ಹಾಗೂ ಪಂಡಿತರಿಗೆ ಆಶ್ರಯ ನೀಡಿದ್ದನು. ಅಹಲಾಬಾದ್ ಶಾಸನ ಸಮುದ್ರಗುಪ್ತನನ್ನು ಕವಿರಾಜ ಎಂದು ವರ್ಣಿಸಿದೆ. ಸ್ವತ ಅವನೇ ಕೃಷ್ಣ ಚರಿತ್ರೆಯನ್ನು ರಚಿಸಿದನು.

ವ್ಯಕ್ತಿತ್ವ : ಸಮುದ್ರಗುಪ್ತ ಅಸಾಧಾರಣ ಪ್ರತಿಭೆಯನ್ನು ಹೊಂದಿದ ಧೀಮಂತ ನೂರಾರು ಕದನಗಳಲ್ಲಿ ಹೋರಾಡಿ ಅಪಾರ ಗೆಲವು ಸಾಧಿಸಿದ ವೀರ. ಈತ ಅಲೆಕ್ಸಾಂಡರನಂತೆ ಯಶಸ್ವಿ ದಿಗ್ವಿಜಯಶಾಲಿ, ದಕ್ಷ ಆಡಳಿತಗಾರ, ಮಹಾಸಾಮ್ರಾಜ್ಯದ ನಿರ್ಮಾಪಕನಾಗಿ ಇಡೀ ಗುಪ್ತರಲ್ಲಿಯೇ ಪ್ರಸಿದ್ಧ ಅರಸನಾಗಿದ್ದನು. ಹರಿದು ಹಂಚಿಹೋಗಿದ್ದ ರಾಜ್ಯವನ್ನು ಒಂದುಗೂಡಿಸಿ ಏಕಚಕ್ರಾಧಿಪತ್ಯಕ್ಕೆ ಒಳಪಡಿಸಿದುದು ಸಮುದ್ರಗುಪ್ತನ ಮಹಾನ್ ಸಾಧನೆಯಾಗಿದೆ. ಆರ್.ಸಿ ಮುಜಂದಾರ್ ಬರೆದಂತೆ ಸಮುದ್ರಗುಪ್ತನು ಭಾರತೀಯ ಇತಿಹಾಸದ ಅತ್ಯಂತ ಆಕರ್ಷಕ ವ್ಯಕ್ತಿ, ವಿಶಿಷ್ಟ ದೊರೆ, ಸೇನಾನಿಯಾಗಿ ಹಾಗೂ ಆಡಳಿತಗಾರನಾಗಿ ಅವನ ಸಾಧನೆ ಅಪಾರ. ಇವನು ಭಾರತದ ಇತಿಹಾಸದಲ್ಲಿ ನವಯುಗಕ್ಕೆ ನಾಂದಿಹಾಡಿದನು. ಅದೇ ಮುಂದೆ ಸುವರ್ಣಯುಗಕ್ಕೆ ದಾರಿಯಾಯಿತು.

ಗುಪ್ತರ ಕಾಲದ ವಿಜ್ಞಾನ ಮತ್ತು ತಂತ್ರಜ್ಞಾನ

ಗುಪ್ತರ ಕಾಲದ ವಿಜ್ಞಾನ ಮತ್ತು ತಂತ್ರಜ್ಞಾನ

ಗುಪ್ತರ ಕಾಲದಲ್ಲಿ ಭಾರತೀಯ ವಿಜ್ಞಾನ ಮತ್ತು ತಂತ್ರಜ್ಞಾನವು ಅಪೂರ್ವವಾದ ಮುನ್ನಡೆಯನ್ನು ಕಂಡಿತು. ಸೊನ್ನೆಯ ವಿಶಿಷ್ಟತೆಯನ್ನು ಜಗತ್ತಿಗೆ ತಿಳಿಸಿ ಕ್ರಾಂತಿಯನ್ನು ಎಬ್ಬಿಸಲಾಯಿತು. ಖಗೋಳ ಶಾಸ್ತ್ರ, ವೈದ್ಯಕೀಯ, ಗಣಿತ ಶಾಸ್ತ್ರ, ಲೋಹ ಶಾಸ್ತ್ರ ಮುಂತಾದ ಕ್ಷೇತ್ರಗಳಲ್ಲಿ ಅಭೂತಪೂರ್ವವಾದ ಯಶಸ್ಸನ್ನು ಸಂಪಾದಿಸಿದರು. ಪರಿಣಾಮವಾಗಿ ವೈಜ್ಞಾನಿಕ ಸಾಹಿತ್ಯ ರೂಪ ತಳೆಯಿತು.

ಆರ್ಯಭಟ : ಇವನು ಗುಪ್ತರ ಕಾಲದ ಶ್ರೇಷ್ಠ ಖಗೋಳ ವಿಜ್ಞಾನಿ ಮತ್ತು ಪ್ರಖ್ಯಾತ ಗಣಿತ ಶಾಸ್ತ್ರಜ್ಞ ಖಗೋಳ ಶಾಸ್ತ್ರವನ್ನು ಗಣಿತಶಾಸ್ತ್ರದಿಂದ ಪ್ರತ್ಯೇಕಿಸಿದ ಕೀರ್ತಿ ಇವನಿಗೆ ಸಲ್ಲುತ್ತದೆ. ಇವನ ಪ್ರಖ್ಯಾತ ಕೃತಿಗಳೆಂದರೆ, ‘ಆರ್ಯಭಟೀಯಂ’ ಮತ್ತು ‘ಸೂರ್ಯ ಸಿದ್ಧಾಂತ’

  1. ಆರ್ಯಭಟನು ತನ್ನ ಕೃತಿಯಲ್ಲಿ ಭೂಮಿ ಗುಂಡಾಗಿದೆ ಎಂಬ ವೈಜ್ಞಾನಿಕ ಸತ್ಯವನ್ನು ಸಾರಿದ್ದಾನೆ. ಅವನ ಮಾತಿನಲ್ಲೇ ಹೇಳುವುದಾದರೆ ‘ಭೂಗೋಲ: ಸರ್ವತೋ ವೃತಃ’.
  2. ಭೂಮಿಯು ತನ್ನ ಅಕ್ಷದ ಸುತ್ತ ಸುತ್ತುತ್ತಿರುವುದರಿಂದ ಹಗಲು ರಾತ್ರಿಗಳಾಗುತ್ತಿವೆ ಎಂದು ಪ್ರಕಟ ಪಡಿಸಿದ್ದಾನೆ.
  3. ಚಂದ್ರನ ಮೇಲೆ ಭೂಮಿಯ ನೆರಳು ಬೀಳುವುದರಿಂದ ಗ್ರಹಣಗಳಾಗುತ್ತವೆ ಎಂದು ಜಗತ್ತಿಗೆ ಸಾರಿ ಹೇಳಿದನು.
  4. ಸೂರ್ಯ ವರ್ಷದ (ಒಂದು ವರ್ಷದ) ಅವಧಿಯನ್ನು 365,3586805 ದಿನಗಳೆಂದು ಗೊತ್ತು ಪಡಿಸಿದನು.
  5. ಪ್ರಾಚೀನರಿಗೆ ಗೊತ್ತಿಲ್ಲದ ದಶಮಾಂಶ ಪದ್ಧತಿಯನ್ನು ಜಗತ್ತಿಗೆ ಕೊಟ್ಟ ಶ್ರೇಯಸ್ಸು ಆರ್ಯಭಟನಿಗೆ ಸಲ್ಲುತ್ತದೆ. ಅವನ ಅಂಕನ ಪದ್ಧತಿಯಲ್ಲಿ ಇದು ಬರುತ್ತದೆ. ಆದಾಗ್ಯೂ ಈ ಪದ್ಧತಿಯನ್ನು ಆರ್ಯಭಟನೇ ಹುಟ್ಟುಹಾಕಿದನೋ ಅಥವಾ ಅಸ್ತಿತ್ವದಲ್ಲಿ ಇದ್ದ ಪದ್ಧತಿಯೊಂದನ್ನು ಸುಧಾರಿಸಿದನೋ ಎಂಬ ಬಗ್ಗೆ ನಿಖರವಾಗಿ ಹೇಳಲು ಸಾಧ್ಯವಿಲ್ಲ.
  6. ಪೈ ನ ಸರಿಯಾದ ಮೌಲ್ಯ 3,1416 ಎಂದು ಪ್ರತಿಪಾಧಿಸಿದನು.

ವಿಶ್ವದ ವಿಜ್ಞಾನ ಕ್ಷೇತ್ರಕ್ಕೆ ಆರ್ಯಭಟನ ಕೊಡುಗೆ ಅಸಾಧಾರಣವಾದುದು. ಒಟ್ಟಿನಲ್ಲಿ ಇಡೀ ಪ್ರಪಂಚದ ಖಗೋಳ ಶಾಸ್ತ್ರಜ್ಞರ ಮಧ್ಯೆ ಅತಿ ಎತ್ತರದ ಸ್ಥಾನವನ್ನು ಅಲಂಕರಿಸಿದ್ದಾನೆ.

ವರಾಹಮಿಹಿರ : ವರಹಮಿಹಿರನು ಖಗೋಳ ಮತ್ತು ಜ್ಯೋತಿಷ್ಯ ಶಾಸ್ತ್ರದ ಪ್ರಸಿದ್ಧ ಪಂಡಿತನಾಗಿದ್ದನು. ಇವನು ಖಗೋಳ ವಿಜ್ಞಾನವನ್ನು ಖಗೋಳ ವಿಜ್ಞಾನ, ಗಣಿತಶಾಸ್ತ್ರ, ಜಾತಕಶಾಸ್ತ್ರ ಮತ್ತು ಜ್ಯೋತಿಷ್ಯಶಾಸ್ತ್ರಗಳೆಂದು ವಿಭಜಿಸಿದ್ದಾನೆ. ಅಲ್ಲದೆ ಖಗೋಳ ವಿಜ್ಞಾನಕ್ಕಿಂತ ಜ್ಯೋತಿಷ್ಯ ಶಾಸ್ತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ಕೊಟ್ಟಿದ್ದಾನೆ.

ವರಾಹಮಿಹಿರನ ಪ್ರಸಿದ್ಧ ಕೃತಿ ‘ಬೃಹತ್ ಸಂಹಿತ’ ಇದನ್ನು ವಿಶ್ವಕೋಶವೆಂದು ಪರಿಗಣಿಸಲಾಗಿದೆ. ಇದರಲ್ಲಿ ಗ್ರಹಗಳ ಚಲನ ವಲನಗಳು, ಮನುಷ್ಯರ ಮೇಲೆ ಅವುಗಳ ಪರಿಣಾಮಗಳು, ಕೆರೆಗಳನ್ನು ತೋಡುವುದು, ತೋಟವನ್ನು ಮಾಡುವುದು, ಬೇರೆ-ಬೇರೆ ವರ್ಗದ ಸ್ತ್ರೀಯರ ಹಾಗೂ ಪ್ರಾಣಿಗಳ ಲಕ್ಷಣಗಳು, ಶಕುನಶಾಸ್ತ್ರ, ಶಿಲ್ಪಶಾಸ್ತ್ರ, ವಾಸ್ತುಶಿಲ್ಪ, ಭೂಗೋಳ, ರತ್ನಪರೀಕ್ಷೆ, ವಿವಾಹ ಮೊದಲಾದವುಗಳ ಬಗ್ಗೆ ಮಾಹಿತಿ ಈ ಗ್ರಂಥದಲ್ಲಿದೆ. ಇವನ ಮತ್ತೊಂದು ಕೃತಿ ಪಂಚಸಿದ್ಧಾಂತಿಕ. ಇದರಲ್ಲಿ ಖಗೋಳ ವಿಜ್ಞಾನದ ಐದು ಪಂಥಗಳ ಬಗ್ಗೆ ಬರೆದಿದ್ದಾನೆ.

ಬ್ರಹ್ಮಗುಪ್ತ : ಇವನೂ ಸಹ ಪ್ರಸಿದ್ಧ ಖಗೋಳ ಮತ್ತು ಗಣಿತಶಾಸ್ತ್ರಜ್ಞನಾಗಿದ್ದನು. ಇವನ ಎರಡು ಕೃತಿಗಳೆಂದರೆ

ಬ್ರಹ್ಮ ಸಿದ್ಧಾಂತ ಮತ್ತು ಖಂಡಖಾದ್ಯ. ಇವನು ತನ್ನ ಕೃತಿಗಳಲ್ಲಿ ಚೌಕೋನ, ಷಟ್ಕೋನ, ತ್ರಿಕೋನ, ಜ್ಯಾಮಿತಿ, ಲಂಬಕೋನ, ವೃತ್ತ ಮುಂತಾದವುಗಳ ಬಗ್ಗೆ ಬರೆದಿದ್ದಾನೆ. ಗ್ರಹಗಳ ಸ್ಥಾನಗಳನ್ನು, ಗ್ರಹಣಗಳ ಲೆಕ್ಕಾಚಾರಗಳನ್ನು ಗುಣಿಸುವುದನ್ನು ವಿವರಿಸಿದ್ದಾನೆ. ಜಗತ್ತಿಗೆ ಆಕರ್ಷಿಸುವ ಶಕ್ತಿ ಇರುವುದರಿಂದಲೇ ಎಲ್ಲಾ ವಸ್ತುಗಳು ನೆಲಕ್ಕೆ ಬೀಳುತ್ತವೆ ಎಂಬ ಸಿದ್ಧಾಂತವನ್ನು ನ್ಯೂಟನ್‌ಗಿಂತ ಹಲವು ಶತಮಾನಗಳ ಹಿಂದೆಯೇ ಪ್ರಕಟಿಸಿದ್ದನು.

ವಾಗ್ಬಟ : ವಾಗ್ದಟನ ಪ್ರಸಿದ್ಧ ಕೃತಿ ‘ಅಷ್ಟಾಂಗ ಸಂಗ್ರಹ’. ಇದೊಂದು ವೈದ್ಯಶಾಸ್ತ್ರದ ಗ್ರಂಥವಾಗಿದ್ದು, ಆಯುರ್ವೇದದ ಬೆಳವಣಿಗೆಗೆ ಸಹಾಯಕವಾಯಿತು.

ಪಾಲಕಾಪ್ಯ : ಇವನ ಕೃತಿ ‘ಹಸ್ತಾ ಆಯುರ್ವೇದ’, ಅಂಗದೇಶದ ರಾಜನಾದ ರೋಮಪಾದ ಹಾಗೂ ಪಾಲಕಾಪ್ಯಮುನಿ ಇವರ ಸಂಭಾಷಣೆಯೇ ಗ್ರಂಥರೂಪವನ್ನು ಪಡೆದಿದೆ. ಇದರಲ್ಲಿ ಆನೆಗೆ ಬರುವ ಕಾಯಿಲೆಗಳು ಮತ್ತು ಅವುಗಳ ಚಿಕಿತ್ಸಾ ವಿಧಾನದ ಬಗ್ಗೆ ಮಾಹಿತಿ ದೊರೆಯುತ್ತದೆ.

ಚರಕ, ಶುಶೃತ, ಧನ್ವಂತರಿ : ಇವರುಗಳು ಪ್ರಸಿದ್ಧ ಆಯುರ್ವೇದ ವೈದ್ಯರಾಗಿದ್ದರು. ಚರಕನ ‘ಚರಕಸಂಹಿತೆ’, ಸುಶೃತನ ‘ಸುಶೃತ ಸಂಹಿತೆ’ ಮತ್ತು ಧನ್ವಂತರಿಯ ‘ಆಯುರ್ವೇದ ನಿಘಂಟು’ ಪ್ರಾಚೀನ ಚಿಕಿತ್ಸಾ ಪದ್ಧತಿಯ ಪ್ರಸಿದ್ಧ ಕೃತಿಗಳಾಗಿವೆ.

ಲೋಹ ಜ್ಞಾನ : ಗುಪ್ತರ ಕಾಲದಲ್ಲಿ ಲೋಹ ವಿದ್ಯೆಯು ಅಭಿವೃದ್ಧಿಯಾಯಿತು. ಅವರ ಕಾಲದ ನಾಣ್ಯಗಳು ಮತ್ತು ಲೋಹಸ್ತಂಭಗಳು ಇದಕ್ಕೆ ಆಧಾರವಾಗಿವೆ. ದೆಹಲಿ ಬಳಿಯಿರುವ ಮೆಹರೌಲಿ ಎಂಬ ಹಳ್ಳಿಯಲ್ಲಿರುವ ಬೃಹತ್ ಕಬ್ಬಿಣದ ಸ್ತಂಭ ಜಗತ್ ಪ್ರಸಿದ್ಧವಾಗಿದೆ. ಇದು ಎರಡನೇ ಚಂದ್ರಗುಪ್ತನ ಕಾಲಕ್ಕೆ ಸೇರಿದ್ದು, ಅಂದಿನ ಲೋಹಜ್ಞಾನಕ್ಕೆ ಕನ್ನಡಿಯಾಗಿದೆ. ಇದು 23 ಅಡಿ 8 ಅಂಗುಲ ಉದ್ದವಿದೆ. 6000 ಕಿಲೋಗ್ರಾಂ ತೂಕವಿದೆ. ನೂರಾರು ವರ್ಷಗಳು ಕಳೆದರೂ ಮಳೆ, ಗಾಳಿಗೆ ಸ್ವಲ್ಪವೂ ತುಕ್ಕುಹಿಡಿಯದೆ ನಿಂತ ಪರಿ ಅಂದಿನ ಲೋಹ ವಿಜ್ಞಾನಕ್ಕೆ ಸಾಕ್ಷಿಯಾಗಿದೆ.

ಬುದ್ಧನ ತಾವುದ ಮೂರ್ತಿ: ಗುಪ್ತರ ಕಾಲದ ಬುದ್ಧನ ತಾಮ್ರದ ಮೂರ್ತಿಯೊಂದು ದೊರೆತ್ತಿದ್ದು, ಅದೀಗ ‘ಬರ್ಮಿಂಗ್‌ ಹ್ಯಾಂ’ ವಸ್ತು ಸಂಗ್ರಹಾಲಯದಲ್ಲಿದೆ. ಇದು 71/2 ಅಡಿ ಎತ್ತರವಿದೆ. 1000 ಕೆ.ಜಿ. ತೂಕವಿದೆ. ಇದೂ ಸಹ ಗುಪ್ತರಕಾಲದ ಲೋಹ ತಂತ್ರಜ್ಞಾನಕ್ಕೆ ಸಾಕ್ಷಿಯಾಗಿದೆ.

ಬಣ್ಣದ ತಯಾರಿಕೆ ಬಹಳ ಚೆನ್ನಾಗಿ ಬೆಳೆಯಿತು. ಇಂದಿಗೂ ಮಾಸದೇ ಉಳಿದ ವರ್ಣಲೇಪಿತ ಅಜಂತಾ ಚಿತ್ರಗಳು ಗುಪ್ತರ ಕಾಲದ ಅತ್ಯುತ್ತಮ ಕಲಾ ಕೊಡುಗೆಗಳಾಗಿವೆ. ಎ.ಎಲ್. ಭಾಷ್ಯಂ ರವರ ಪ್ರಕಾರ ʻದ ವಂಡರ್ ದಟ್ ವಾಸ್ ಇಂಡಿಯಾ’ ಎಂಬ ಕೃತಿಯಲ್ಲಿ ಹೇಳಿರುವಂತೆ ಗುಪ್ತರ ಕಾಲದಲ್ಲಿ ಪ್ಲಾಸ್ಟಿಕ್ ಸರ್ಜರಿ ಬಳಕೆಯಲ್ಲಿತ್ತು. ಎರಡನೆ ನಾಗಾರ್ಜುನನು ರಸಾಯನ ಶಾಸ್ತ್ರದಲ್ಲಿ ಬಹು ದೊಡ್ಡ ಪಂಡಿತನಾಗಿದ್ದನು. ಇವನನ್ನು ರಸಾಯನ ಶಾಸ್ತ್ರದ ಪಿತಾಮಹನೆಂದು ಕರೆಯಲಾಗಿದೆ.

ಗುಪ್ತರ ಕಾಲದ ಧರ್ಮ

ಗುಪ್ತರ ಕಾಲದ ಧರ್ಮ

ಗುಪ್ತರ ಕಾಲದಲ್ಲಿ ಹಿಂದೂ ಧರ್ಮ

ಗುಪ್ತರ ಆಳ್ವಿಕೆಯಿಂದ ಹಿಂದೂ ಧರ್ಮಕ್ಕೆ ಹೊಸ ಚೈತನ್ಯ ಪ್ರಾಪ್ತವಾಯಿತು. ಇಲ್ಲಿಯವರೆಗೂ ಅಷ್ಟಾಗಿ ಇರದ ರಾಜಾಶ್ರಯ ಈಗ ದೊರೆತು ಪ್ರಬಲವಾಯ್ತು. ಪರಿಣಾಮವಾಗಿ ಬೌದ್ಧಧರ್ಮ ಅವನತಿಯತ್ತ ಸಾಗಿದರೆ ಹಿಂದೂಧರ್ಮ ಪುನರುಜ್ಜಿವನವಾಗತೊಡಗಿತು.

1. ಹಿಂದೂ ಕಲಾ ಮತ್ತು ವಾಸ್ತು ಪರಂಪರೆಯ ಪ್ರಾರಂಭ : ಗುಪ್ತರಿಗಿಂತ ಹಿಂದೆ ಹಿಂದು ದೇವರ ವಿಗ್ರಹ ಕೆತ್ತುವ ಅಥವಾ ದೇವಾಲಯ ನಿರ್ಮಿಸುವ ಪರಿಪಾಠವಿರಲಿಲ್ಲ. ಅದನ್ನು ಪ್ರಾರಂಭ ಮಾಡಿದವರೇ ಗುಪ್ತರು. ಪರಿಣಾಮವಾಗಿ ದೇವಾನು ದೇವತೆಗಳ ವಿಗ್ರಹಗಳು ಮತ್ತು ಅಸಂಖ್ಯಾತ ದೇವಾಲಯಗಳು ನಿರ್ಮಾಣವಾದವು. ಗುಪ್ತ ದೊರೆಗಳು ಹೇರಳವಾಗಿ ಧನಸಹಾಯವನ್ನೂ ಮಾಡಿದರು. ಆ ಮೂಲಕ ಗುಪ್ತರು ಭಾರತೀಯ ಕಲೆ ಮತ್ತು ವಾಸ್ತುಶಿಲ್ಪದ ಪರಂಪರೆಗೆ ಅಪಾರವಾದ ಕೊಡುಗೆ ನೀಡಿದ್ದಾರೆ.

2. ಬ್ರಾಹ್ಮಣರಿಗೆ ಪ್ರಥಮ ಪ್ರಾಶಸ್ಯ : ಶ್ರೇಣೀಕೃತ ಭಾರತೀಯ ಸಮಾಜದಲ್ಲಿ ಬ್ರಾಹ್ಮಣರ ಸ್ಥಾನ ಮೊದಲಿನದಾಗಿದೆ. ಆದರೆ ಮೌರ್ಯರ ಮತ್ತು ಕುಶಾನರ ಕಾಲದಲ್ಲಿ ಬೌದ್ಧಧರ್ಮದ ಪ್ರಭಾವದ ಹಿನ್ನೆಲೆಯಲ್ಲಿ ಬ್ರಾಹ್ಮಣರ ಸ್ಥಾನಮಾನ ಮಂಕಾಗಿತ್ತು. ಯಾವಾಗ ಗುಪ್ತರು ಅಧಿಕಾರಕ್ಕೆ ಬಂದರೋ ಅವರು ಸನಾತನ ಧರ್ಮಕ್ಕೆ ಪ್ರಾಮುಖ್ಯತೆ ನೀಡತೊಡಗಿದರು. ಪರಿಣಾಮವಾಗಿ ಸನಾತನ ಧರ್ಮ ಅಥಾರ್ತ್ ಬ್ರಾಹ್ಮಣಧರ್ಮದ ವಾರಸುದಾರರಂತಿದ್ದ ಬ್ರಾಹ್ಮಣರಿಗೂ ಪ್ರಥಮ ಪ್ರಾಶಸ್ತ್ರ ಲಭ್ಯವಾಯಿತು. ಅರಮನೆಗಳಲ್ಲಿ, ಆಡಳಿತದಲ್ಲಿ ಮತ್ತು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಅವರಿಗೆ ವಿಶೇಷ ಮಹತ್ವ ನೀಡತೊಡಗಿದ್ದರಿಂದ ಅವರ ಸ್ಥಾನ ಹೆಚ್ಚಾಯಿತು.

3 ಯಜ್ಞ-ಯಾಗಗಳ ಏಲ್ಲೆ : ಹಿಂದೂ ಧರ್ಮದ ವಿಶೇಷ ಲಕ್ಷಣಗಳಲ್ಲಿ ಯಜ್ಞ ಯಾಗಗಳು ಬರುತ್ತವೆ. ಹಿಂದೂಧರ್ಮದ ಅನುಯಾಯಿಗಳಾದ ಗುಪ್ತರು ಯಜ್ಞ- ಯಾಗಾಧಿಗಳಿಗೆ ಪ್ರಾಶಸ್ತ್ರ ನೀಡತೊಡಗಿದರು. ಪರಿಣಾಮವಾಗಿ ಅಶ್ವಮೇದ, ವಾಜಪೇಯ, ರಾಜಸೂಯ ಯಾಗಗಳು ಬಹು ಜನಪ್ರಿಯವಾದವು.

4. ಶೈವ ಮತ್ತು ಶಾಕ್ತ ಪಂಥಗಳ ಪ್ರಚಾರ : ಗುಪ್ತರ ಕಾಲದಲ್ಲಿ ಲಕುಲೀಶನಿಂದ ಶೈವ ಪಂಥ ಹೆಚ್ಚು ಪ್ರಚಾರವಾಯಿತು. ಹಾಗೆಯೇ ಶಾಕ್ತ ಪಂಥಗಳು ಅಥವಾ ದೇವಿ/ಶಕ್ತಿಯ ಆರಾಧನೆ ಕೂಡ ಜನಪ್ರಿಯವಾಯಿತು.

5. ವಿವಿಧ ಹೆಸರುಗಳಿಂದ ದೇವರ ಆರಾಧನೆ : ಗುಪ್ತರ ಕಾಲಾವಧಿಯಲ್ಲಿ ಶಿವ ಮತ್ತು ವಿಷ್ಣುರ ಅವತಾರಗಳು ಜನಪ್ರಿಯವಾದವು. ವಿಷ್ಣುವನ್ನು ಕೃಷ್ಣ, ಜನಾರ್ಧನ, ಅನಂತಶಯನ, ಗದಾಧರ, ವಾಸುದೇವ, ಗೋವಿಂದ, ನಾರಾಯಣ ಎಂಬುದಾಗಿ ಕರೆದು ವಿವಿಧ ರೂಪಗಳಲ್ಲಿ ಆರಾಧಿಸತೊಡಗಿದರು. ಶಿವನನ್ನು ಜನಾರ್ಧನ, ಶಂಕರ, ಹರನೆಂದು ಪೂಜಿಸತೊಡಗಿದರು. ಪಾರ್ವತಿಯು ಆಧಿಶಕ್ತಿ, ಭಗವತಿಯಾಗಿ ಕಂಡು ಬಂದಳು. ವಿಗ್ರಹಾರಾಧನೆ ಬಹು ಜನಪ್ರಿಯವಾಯಿತು.

6. ಪುರಾಣಗಳ ಪರಿಪೂರ್ಣತೆ : ಹಿಂದೂ ಧರ್ಮದ ಅವಿಭಾಜ್ಯ ಅಂಗಗಳಾದ 18 ಪುರಾಣಗಳು ಪರಿಪೂರ್ಣವಾಗಿ ರಚಿಸಲ್ಪಟ್ಟಿದ್ದು ಗುಪ್ತರ ಕಾಲಾವಧಿಯಲ್ಲಿ. ಅವು ಪುನಃ ಬರೆಯಲ್ಪಟ್ಟಿದ್ದು ಮತ್ತು ಪರಿಷ್ಕಾರವಾದದ್ದೂ ಆ ಕಾಲಾವಧಿಯಲ್ಲೆ.

7. ವೈಷ್ಣವ ಪಂಥದ ಪ್ರಾಧಾನ್ಯತೆ : ಗುಪ್ತ ಅರಸರು ಬಹುಮುಖ್ಯವಾಗಿ ವಿಷ್ಣು ಆರಾಧಕರಾಗಿದ್ದರು. ತಮ್ಮನ್ನು ಪರಮ ಭಾಗವತರೆಂದು ಕರೆದುಕೊಂಡಿದ್ದಾರೆ. ಗುಪ್ತರ ನಾಣ್ಯಗಳಲ್ಲಿ ವಿಷ್ಣುವಿನ ಪತ್ನಿ ಲಕ್ಷ್ಮಿಯ ಚಿತ್ರ ಮುದ್ರಿಸಲ್ಪಟ್ಟಿದೆ. ಅರಸರು ವಿಷ್ಣುವಿನ ವಾಹನವಾದ ಗರುಡನ ಚಿತ್ರವನ್ನು ಬಳಸುತ್ತಿದ್ದರು. ಅವರ ಬಾವುಟವನ್ನು ವಿಷ್ಣು ದ್ವಜವೆಂದು ಕರೆಯುತ್ತಿದ್ದರು

8. ಸಪ್ತ ಮಾತೃಕೆಯರ ಆರಾಧನೆ : ಗುಪ್ತರ ಕಾಲದಲ್ಲಿ ಸಪ್ತಮಾತೃಕೆಯರ ಹೆಸರುಗಳು ಕಂಡು ಬರುತ್ತವೆ. ಬ್ರಾಹ್ಮ, ಮಹೇಶ್ವರಿ, ಕೌಮಾರಿ, ವೈಷ್ಣವಿ, ವರಾಹಿ, ಮಹೇಂದ್ರಿ, ಚಾಮುಂಡಿ ಎಂಬ ಸಪ್ತ ಮಾತೃಕೆಯರ ಆರಾಧನೆ ಜನಪ್ರಿಯವಾಗಿರುವುದು ಕಂಡು ಬರುತ್ತದೆ.