ವಿಧಾನಸಭೆಯ ಅಧಿಕಾರ ಮತ್ತು ಕಾರ್ಯಗಳು

ವಿಧಾನಸಭೆಯ ಅಧಿಕಾರ ಮತ್ತು ಕಾರ್ಯಗಳು

ರಾಜ್ಯ ವಿಧಾನಸಭೆಯನ್ನು ಶಾಸಕಾಂಗದ ಕೆಳಮನೆ ಎಂದು ಕರೆಯಲಾಗುತ್ತದೆ. ವಿಧಾನ ಸಭೆಯ ಸದಸ್ಯರು ನೇರವಾಗಿ ಪ್ರಜೆಗಳಿಂದ ಆಯ್ಕೆಯಾಗುವ ಕಾರಣ ಇದನ್ನು ಜನತಾ ಸದನ ಎಂದು ಕರೆಯುತ್ತಾರೆ. ಕೇಂದ್ರದಲ್ಲಿ ಲೋಕಸಭೆಯ ಹಾಗೆ ರಾಜ್ಯದಲ್ಲಿ ವಿಧಾನಸಭೆ ಪ್ರಭಾವಶಾಲಿಯಾಗಿದೆ. ಕರ್ನಾಟಕದಲ್ಲಿ ವಿಧಾನಸಭೆ ಹಾಗೂ ವಿಧಾನ ಪರಿಷತ್ತುಗಳು ಇದ್ದರೂ ವಿಧಾನಸಭೆಯಷ್ಟು ವಿಧಾನ ಪರಿಷತ್ತು ಪ್ರಭಾವಶಾಲಿಯಾಗಿಲ್ಲ. ವಿಧಾನಸಭೆಯ ಕಾರ್ಯ ಕಲಾಪಗಳು ಈ ಕೆಳಗಿನಂತಿವೆ.

1. ಶಾಸನೀಯ ಅಧಿಕಾರಿಗಳು: (Legislative Power)

ರಾಜ್ಯ ಶಾಸಕಾಂಗದ ಯಾವುದೇ ಸದನದಲ್ಲಿ ಸಾಮಾನ್ಯ ಮಸೂದೆಯನ್ನು ಮಂಡಿಸಬಹುದು. ಮೊದಲು ವಿಧಾನ ಪರಿಷತ್ತಿನಲ್ಲಿ ಮಸೂದೆಯೊಂದು ಮಂಡಿಸಲ್ಪಟ್ಟರೆ ಅದನ್ನು ಅಂಗೀಕರಿಸಿ ವಿಧಾನ ಸಭೆಯ ಅಂಗೀಕಾರಕ್ಕಾಗಿ ಕಳುಹಿಸಕೊಡಲಾಗುತ್ತದೆ. ಹೀಗೆ ಕಳುಹಿಸಿದ ಮಸೂದೆಗೆ ವಿಧಾನಸಭೆ ಅಂಗೀಕಾರ ನೀಡಿದರೆ ಅದು ರಾಜ್ಯಪಾಲರ ಒಪ್ಪಿಗೆಗೆ ಹೋಗುತ್ತದೆ. ರಾಜ್ಯಪಾಲರು ಅದಕ್ಕೆ ಒಪ್ಪಿಗೆ ನೀಡಿದರೆ ಅದು ಶಾಸನವಾಗುತ್ತದೆ. ಒಂದು ವೇಳೆ ವಿಧಾನ ಪರಿಷತ್ ಅಂಗೀಕರಿಸಿದ ಮಸೂದೆಯನ್ನು ವಿಧಾನಸಭೆ ತಿರಸ್ಕರಿಸಿದರೆ ಆ ಮಸೂದೆ ನಾಶವಾಗುತ್ತದೆ. ಹಾಗೆ ವಿಧಾನಸಭೆಯಲ್ಲಿ ಮೊದಲು ಮಂಡಿಸಲ್ಪಟ್ಟ ಮಸೂದೆಯನ್ನು ಅಂಗೀಕರಿಸಿ ವಿಧಾನ ಪರಿಷತ್ತಿನ ಅಂಗೀಕಾರಕ್ಕೆ ಕಳುಹಿಸಲಾಗುತ್ತದೆ. ಹೀಗೆ ಕಳುಹಿಸಿದ ಮಸೂದೆಗೆ ವಿಧಾನ ಪರಿಷತ್ತು ಒಪ್ಪಿಗೆ ನೀಡಿದರೆ ರಾಜ್ಯಪಾಲರ ಅಂಕಿತದೊಂದಿಗೆ ಶಾಸನವಾಗುತ್ತದೆ. ಇಲ್ಲವೆ  ವಿಧಾನ ಪರಿಷತ್ತು ಮಸೂದೆಯನ್ನು ೪ ತಿಂಗಳುಗಳ ಕಾಲ ತಡೆ ಹಿಡಿಯಬಹುದು. ಅಂತಿಮವಾಗಿ ಅದು ಒಪ್ಪಿಗೆ ನೀಡಲೇಬೇಕಾಗುತ್ತದೆ. ಒಂದು ವೇಳೆ ಒಪ್ಪಿಗೆ ನೀಡದಿದ್ದರೆ ವಿಧಾನಸಭೆ ಅದನ್ನು ರಾಜ್ಯಪಾಲರ ಬಳಿ ಕಳುಹಿಸಿ ಅವರಿಂದ ಅಂಕಿತವನ್ನು ಪಡೆಯುತ್ತದೆ. ವಿಧಾನ ಪರಿಷತ್ತಿಗೆ ಯಾವುದೇ ಮಸೂದೆಯನ್ನು ತಡೆ ಹಿಡಿಯುವ ಅಧಿಕಾರ ಇಲ್ಲ.

2. ಕಾರ್ಯಾಂಗೀಯ ಅಧಿಕಾರಿಗಳು: (Excutive Power)

ಕಾರ್ಯಾಂಗವು ನೇರವಾಗಿ ಶಾಸಕಾಂಗಕ್ಕೆ ಜವಾಬ್ದಾರಿಯಾಗಿರುತ್ತದೆ. ಎಲ್ಲಿಯವರೆಗೆ ವಿಧಾನಸಭೆಯು ನಂಬಿಕೆಗೆ ಪಾತ್ರರಾಗಿರುತ್ತದೆಯೋ ಅಲ್ಲಿಯವರೆಗೆ ಅಧಿಕಾರದಲ್ಲಿರುತ್ತದೆ. ಸದಸ್ಯರು ಪ್ರಶ್ನೆಗಳನ್ನು ಕೇಳುವ ಮೂಲಕ ಸರ್ಕಾರದಿಂದ ವಿಷಯವನ್ನು ಸಂಗ್ರಹಿಸಬಹುದು. ಸದಸ್ಯರ ಪ್ರಶ್ನೆಗಳಿಗೆ ಯಾವುದೇ ಆತಂಕಕ್ಕೊಳಗಾಗದೇ ಸಮಾಧಾನದಿಂದ ಉತ್ತರಿಸುವುದು ಮಂತ್ರಿಗಳ ಜವಾಬ್ದಾರಿಯಾಗಿದೆ. ಮಂತ್ರಿಗಳು ಸುಳ್ಳು ಹೇಳುವ ಅಥವಾ ಸದನವನ್ನು ತಪ್ಪು ದಾರಿಗೆ ಕೊಂಡೊಯ್ಯುವ ಪ್ರಯತ್ನವನ್ನು ಮಾಡಿದರೆ ಸದನದಿಂದ ಅವರು ಶಿಕ್ಷೆಗೆ ಒಳಗಾಗಬೇಕಾಗುತ್ತದೆ.

ಚರ್ಚೆಯ ಸಮಯದಲ್ಲಿ ವಿಧಾನಸಭೆಯು ಸರ್ಕಾರದಿಂದ ಅವಶ್ಯಕ ಮಾಹಿತಿಯನ್ನು ಹೊರಗೆಳೆಯಬಹುದಾಗಿದೆ. ಪ್ರಶ್ನೆವೇಳೆ, ನಿಲುವಳಿ ಸೂಚನೆ, ಶೂನ್ಯ ವೇಳೆ, ಕಡಿತದ ಸೂಚನೆ, ಗಮನ ಸೆಳೆಯುವ ಸೂಚನೆ ಇತ್ಯಾದಿ ಸಂದರ್ಭದಲ್ಲಿ ಜಾಗರೂಕತನದಿಂದ ಉತ್ತರಗಳನ್ನು ನೀಡಬೇಕಾಗುತ್ತದೆ.  ಪ್ರಶ್ನೆಗಳನ್ನು ಎದುರಿಸಲು ಮಂತ್ರಿಗಳು ಸಾಕಷ್ಟು ಮನೆಗೆಲಸಗಳನ್ನು ಮಾಡಿಕೊಂಡು ಬರಬೇಕು. ಉತ್ತರಗಳು ಸಿದ್ಧವಿರದಿದ್ದಲ್ಲಿ ಮಂತ್ರಿಗಳು ಸದನದಿಂದ ಸಮಯವನ್ನು ಪಡೆದು ನಂತರ ಉತ್ತರ ನೀಡಬಹುದು. ಸರ್ಕಾರವನ್ನು ತುದಿಗಾಲಲ್ಲಿ ನಿಲ್ಲಿಸುವ ಪರಿಣಾಮಕಾರಿ ಅಸ್ತ್ರವೆಂದರೆ ಅವಿಶ್ವಾಸ ಮತ ನಿರ್ಣಯ ಸರಕಾರವು ಅವಿಶ್ವಾಸ ನಿರ್ಣಯದಲ್ಲಿ ಸೋತರೆ ಅಧಿಕಾರದಿಂದ ಕೆಳಗಿಳಿದು ನಡೆಯಬೇಕಾಗುತ್ತದೆ.

3. ಹಣಕಾಸಿನ ಅಧಿಕಾರಿಗಳು: (Financial Powers)

ಹಣಕಾಸಿನ ಮಸೂದೆಯನ್ನು ಮೊದಲು ವಿಧಾನಸಭೆಯಲ್ಲಿ ಮಂಡಿಸಲ್ಪಡುತ್ತದೆ. ನಂತರ ಮಂಡಿಸಿದ ಹಣಕಾಸು ಮಸೂದೆಯನ್ನು ಅಂಗೀಕಾರಕ್ಕಾಗಿ ವಿಧಾನ ಪರಿಷತ್ತಿಗೆ ಕಳುಹಿಸಿಕೊಡಲಾಗುತ್ತದೆ. ಆಗ ವಿಧಾನಪರಿಷತ್ತು 14 ದಿನದೊಳಗೆ ಅಂಗೀಕಾರವನ್ನು ನೀಡಬೇಕು, ಇಲ್ಲವಾದಲ್ಲಿ ಎರಡು ಸದನಗಳು ಅಂಗೀಕರಿಸಿವೆ ಎಂದು ಭಾವಿಸಿ ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಿಕೊಡಲಾಗುವುದು. ರಾಜ್ಯಪಾಲರ ಅಂಕಿತದೊಂದಿಗೆ ಮಸೂದೆ ಶಾಸನವಾಗುತ್ತದೆ. ಕೆಳಮನೆಯ ಒಪ್ಪಿಗೆ ಇಲ್ಲದೆ ಯಾವ ಇಲಾಖೆಯು ಹಣವನ್ನು ಖರ್ಚು ಮಾಡಲು ಸಾಧ್ಯವಿಲ್ಲ ಮತ್ತು ತೆರಿಗೆಯನ್ನು ವಿಧಿಸಿ ಸಾರ್ವಜನಿಕರಿಂದ ವಸೂಲಿ ಮಾಡುವಂತೆಯೂ ಇಲ್ಲ. ರಾಜ್ಯದ ಆಯವ ಪಟ್ಟಿಯನ್ನು ವಿಧಾನಸಭೆಯ ಮುಂದೆ ಇಡಬೇಕಾಗುತ್ತದೆ. ಇಲಾಖೆಯಿಂದ ಬರುವ ಹಣದ ಬೇಡಿಕೆಗಳ ಬಗ್ಗೆ  ಚರ್ಚಿಸಿ ಬೇಡಿಕೆಗಳನ್ನು ಕಡಿಮೆ ಮಾಡುವ ಅಥವಾ ನಿರಾಕರಿಸುವ ಅಧಿಕಾರ ವಿಧಾನಸಭೆಗೆ ಇದೆ. ವಿಧಾನಸಭೆಯ ಅನುಮತಿ ಇಲ್ಲದೆ ಯಾವ ತೆರಿಗೆಯನ್ನು ವಿಧಿಸಲು ಸಾಧ್ಯವಿಲ್ಲ.

4. ಚುನಾವಣಾ ಅಧಿಕಾರಿಗಳು: (Election Power)

  1. ವಿಧಾನಸಭೆಯ ಸದಸ್ಯರು ಮತದಾನದ ಮೂಲಕ ತಮ್ಮೊಳಗೆ ಒಬ್ಬ ಸಭಾಧ್ಯಕ್ಷ ಹಾಗೂ ಒಬ್ಬ ಉಪಸಭಾಧ್ಯಕ್ಷನನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.
  2. ವಿಧಾನ ಪರಿಷತ್ತು ಇರುವ ರಾಜ್ಯಗಳಲ್ಲಿ ವಿಧಾನ ಸಭೆಯ ಸದಸ್ಯರು ವಿಧಾನ ಪರಿಷತ್ತಿನ ೧/೩  ರಷ್ಟು ಸದಸ್ಯರನ್ನು ಮತ ನೀಡುವ ಮೂಲಕ ಚುನಾಯಿಸಿಕೊಳ್ಳುತ್ತಾರೆ.
  3. ವಿಧಾನ ಸಭೆಯ ಸದಸ್ಯರು ಆಯಾ ರಾಜ್ಯಕ್ಕೆ ಸಂವಿಧಾನದಲ್ಲಿ ನಿಗದಿಪಡಿಸಿದಷ್ಟು ಸದಸ್ಯರನ್ನು ರಾಜ್ಯಸಭೆಗೆ ಮತ ನೀಡುವ ಮೂಲಕ ಚುನಾಯಿಸುತ್ತಾರೆ.
  4. ರಾಷ್ಟ್ರಪತಿ ಚುನಾವಣೆಯಲ್ಲಿ ವಿಧಾನಸಭಾ ಸದಸ್ಯರು ಮತ ನೀಡುವ ಅಧಿಕಾರ ಹೊಂದಿದ್ದಾರೆ.

5. ಸಂವಿಧಾನ ತಿದ್ದುಪಡಿ ಅಧಿಕಾರಗಳು: (Power of Constitution Amensment)

ಸಂವಿಧಾನ ತಿದ್ದುಪಡಿಯಲ್ಲಿಯೂ ವಿಧಾನಸಭೆಯ ಪಾತ್ರ ಅತಿ ಮುಖ್ಯವಾಗಿದೆ. ಸಂಸತ್ತು ಸಂವಿಧಾನದ ಕೆಲವು ಪ್ರಮುಖ ವಿಷಯಗಳನ್ನು ತಿದ್ದುಪಡಿ ಮಾಡಲು ಮಸೂದೆಯನ್ನು ಅಂಗೀಕರಿಸಿದಾಗ ಒಟ್ಟು ರಾಜ್ಯಗಳ ಪೈಕಿ ಅರ್ಧದಷ್ಟು ರಾಜ್ಯಗಳ ವಿಧಾನಸಭೆಗಳು ತಮ್ಮ ಅಲ್ಪ ಮತದೊಂದಿಗೆ ಅನುಮೋದನೆಯನ್ನು ನೀಡಬೇಕು. ಅಲ್ಲದೇ ಕೇಂದ್ರ ಸರ್ಕಾರ ಯಾವುದಾದರೂ ಒಂದು ಭೂಪ್ರದೇಶವನ್ನು ಪುನರ್ರಚಿಸಲು ಇಚ್ಛಿಸಿದಾಗ ರಾಷ್ಟ್ರಪತಿಗಳು ಆ ರಾಜ್ಯದ ವಿಧಾನಸಭೆಯ ಅಭಿಪ್ರಾಯ ಕೇಳುತ್ತಾರೆ. ಆಗ ರಾಜ್ಯದ ವಿಧಾನಸಭೆ ಒಪ್ಪಿಗೆ ನೀಡುವುದು ಅಥವಾ ಬಿಡುವುದು ಅದಕ್ಕೆ ಸೇರಿದುದು.

6. ಸಾರ್ವಜನಿಕ ಕುಂದು ಕೊರತೆಗಳ ನಿವಾರಣಾ ಅಧಿಕಾರಗಳು: (Power of Public Grivances)

ವಿಧಾನಸಭೆ ಸದಸ್ಯರು ಜನರಿಂದಲೇ ನೆರವಾಗಿ ಆಯ್ಕೆಯಾದ ಕಾರಣ ಅವರು ಸಾರ್ವಜನಿಕ ಕುಂದುಕೊರತೆಗಳ ನಿವಾರಣೆಗೆ ಶ್ರಮಿಸಬೇಕು. ವಿಧಾನ ಸಭೆಯ ಪ್ರತಿಯೊಬ್ಬ ಸದಸ್ಯನು ತಾನು ಆಯ್ಕೆಯಾದ ಮತ ಕ್ಷೇತ್ರದ ಸಮಸ್ಯೆಗಳನ್ನು ಅರಿತುಕೊಂಡು ಅವುಗಳ ಪಟ್ಟಿ ಮಾಡಿ ಅಧಿವೇಶನದ ಸಮಯದಲ್ಲಿ ಕಾರ್ಯಾಂಗದ ಗಮನಕ್ಕೆ ತಂದು ಸೂಕ್ತ ಪರಿಹಾರಕ್ಕೆ ಒತ್ತಾಯಿಸುವನು. ಇದರ ಜೊತೆಗೆ ರಾಜ್ಯವನ್ನು ಬಾಧಿಸುವ ಸಮಸ್ಯೆಗಳನ್ನು ಸಹ ಸದಸ್ಯರು ಅಧಿವೇಶನದಲ್ಲಿ ಚರ್ಚಿಸಿ ಅವುಗಳಿಗೆ ಪರಿಹಾರ ಕಂಡುಕೊಳ್ಳಲು ಯತ್ನಿಸುವರು. ಈ ವಿಷಯದಲ್ಲಿ ಸದಸ್ಯರುಗಳು ಪ್ರಶ್ನಾತೀತ ಮತ್ತು ಪಕ್ಷಾತೀತವಾಗಿ ಹೋರಾಡಬೇಕು. ಆ ಮೂಲಕ ಸಾರ್ವಜನಿಕ ಸಮಸ್ಯೆಗಳಿಗೆ ಧ್ವನಿಯಾಗಿ ನಿಲ್ಲಬೇಕು. ಪರಿಹಾರವನ್ನು ಒದಗಿಸಿಕೊಡಬೇಕು. ಇಲ್ಲವಾದರೆ ಜನರ ವಿರೋಧವನ್ನು ಕಟ್ಟಿಕೊಳ್ಳಬೇಕಾಗುತ್ತದೆ.

ಉಪಸಂಹಾರ

ಒಟ್ಟಾರೆ ವಿಧಾನಸಭೆ ರಾಜ್ಯ ಆಡಳಿತದ ಕೇಂದ್ರಬಿಂದುವಾಗಿದ್ದು, ಕಾನೂನು, ಹಣಕಾಸು ಮತ್ತು ಕಾರ್ಯಾಂಗದ ಮೇಲ್ವಿಚಾರಣೆಯಲ್ಲಿ ಮಹತ್ವದ ಅಧಿಕಾರ ಹೊಂದಿದೆ. ಜನರ ಆಶಯಗಳನ್ನು ಪ್ರತಿನಿಧಿಸುವ ಸದಸ್ಯರು ಸಾರ್ವಜನಿಕ ಹಿತಾಸಕ್ತಿಯನ್ನು ಕಾಯ್ದುಕೊಳ್ಳಬೇಕು. ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವ ವಿಧಾನಸಭೆ ಪ್ರಜಾಪ್ರಭುತ್ವವನ್ನು ಬಲಪಡಿಸುತ್ತದೆ. ಜನರ ವಿಶ್ವಾಸವನ್ನು ಉಳಿಸಿಕೊಳ್ಳುವುದು ಅದರ ಪ್ರಮುಖ ಹೊಣೆಗಾರಿಕೆಯಾಗಿದೆ.

ವಿಧಾನಸಭೆಯ ರಚನೆ

ವಿಧಾನಸಭೆಯ ರಚನೆ

ವಿಧಾನಸಭೆಯು ಶಾಸಕಾಂಗದ ಕೆಳಮನೆ. ಸಂಸತ್ತಿನ ಕೆಳಮನೆಯಾದ ಲೋಕಸಭೆಯ ಹಾಗೆ ರಾಜ್ಯ ಶಾಸಕಾಂಗಗಳಲ್ಲಿ ಕೆಳಮನೆಯಾದ ವಿಧಾನ ಸಭೆಯು ಭಾರತದ ಎಲ್ಲಾ ರಾಜ್ಯಗಳಲ್ಲೂ ಜಾರಿಯಲ್ಲಿರುತ್ತದೆ. ದ್ವಿ ಸದನಗಳಲ್ಲಿ ವಿಧಾನಸಭೆಯೇ ಪ್ರಾಮುಖ್ಯತೆಯನ್ನು ಪಡೆದಿರುತ್ತದೆ. ಇಲ್ಲಿ ಪ್ರಜೆಗಳಿಂದ ನೇರವಾಗಿ ಚುನಾಯಿತರಾದ ಪ್ರತಿನಿಧಿಗಳಿರುತ್ತಾರೆ.

1. ವಿಧಾನಸಭೆಯ ಸದಸ್ಯರ ಸಂಖ್ಯೆ: (Total number of members of Legislative Assembly)

ಸಂವಿಧಾನದ 170 (೧)ನೇ ವಿಧಿಯ ಪ್ರಕಾರ ರಾಜ್ಯವೊಂದರ ವಿಧಾನಸಭೆಯ ಸದಸ್ಯರ ಸಂಖ್ಯೆ 500ನ್ನು ಮೀರುವಂತಿಲ್ಲ ಹಾಗೂ ಕನಿಷ್ಠ ೬೦ಕ್ಕಿಂತ ಕಡಿಮೆ ಇಡಬಾರದು ಹೇಳಿದೆ. ಮುಂದುವರೆದು ಆಯಾ ರಾಜ್ಯದ ಜನಸಂಖ್ಯೆಯನ್ನು ಆಧರಿಸಿ ಸಂವಿಧಾನವೇ ಪ್ರತಿಯೊಂದು ರಾಜ್ಯದ ವಿಧಾನ ಸಭೆಯ ಸದಸ್ಯರ ಸಂಖ್ಯೆಯನ್ನು ನಿಗದಿಪಡಿಸಿದೆ. ಉದಾಹರಣೆ ಆಂಧ್ರಪ್ರದೇಶ ೨೯೪, ಬಿಹಾರ್ 242, ಗುಜರಾತ್ 182, ಕರ್ನಾಟಕ 224, ಕೇರಳ 140, ಮಧ್ಯಪ್ರದೇಶ ೨೩೦, ಮಹಾರಾಷ್ಟ್ರ 288 ಹಾಗೂ ಉತ್ತರ ಪ್ರದೇಶಗಳಿಗೆ 403 ವಿಧಾನಸಭಾ ಸ್ಥಾನಗಳನ್ನು ನೀಡಲಾಗಿದೆ. ಅಂದರೆ ಆಯಾ ರಾಜ್ಯಗಳ ಜನಸಂಖ್ಯೆ ಆಧಾರದ ಮೇಲೆ ವಿಧಾನಸಭಾ ಸ್ಥಾನಗಳು ಹಂಚಿಕೆಯಾಗಿವೆ. ಆದರೆ ಚಿಕ್ಕ ರಾಜ್ಯಗಳ ವಿಧಾನಸಭಾ ಕ್ಷೇತ್ರಗಳ ಸಂಖ್ಯೆ ಕಡಿಮೆ ಇರುತ್ತದೆ. ಉದಾಹರಣೆ ಗೋವಾ 40, ಸಿಕ್ಕಿಂ 32, ಮಿಜೋರಾಂ 40 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದೆ.

2. ಚುನಾವಣಾ ವಿಧಾನ: (Election Method)

ವಿಧಾನಸಭಾ ಸದಸ್ಯರು ಪ್ರಜೆಗಳಿಂದ ನೇರವಾಗಿ ಚುನಾಯಿತರಾಗುತ್ತಾರೆ. ಸಂವಿಧಾನದ 61ನೇ ತಿದ್ದುಪಡಿಯ ಪ್ರಕಾರ 18 ವರ್ಷ ಪೂರೈಸಿದ ಪುರುಷ ಮತ್ತು ಮಹಿಳೆಯರು ಪ್ರತಿ ೫ ವರ್ಷಕ್ಕೊಮ್ಮೆ ನಡೆಯುವ ಸಾರ್ವತ್ರಿಕ ಮತದಾನ ಪದ್ದತಿಯ ಮೂಲಕ ಮತ ಚಲಾಯಿಸುತ್ತಾರೆ. ಪ್ರಜೆಗಳು ಯಾವುದೇ ಆಮಿಷಕ್ಕೆ ಒಳಗಾಗದೆ, ಅಡ್ಡಿ ಆತಂಕಗಳಿಲ್ಲದೆ ವಿಧಾನಸಭಾ ಸದಸ್ಯರನ್ನು ರಹಸ್ಯ ಮತದಾನದ ಮೂಲಕ ಆಯ್ಕೆ ಮಾಡುತ್ತಾರೆ. ಲೋಕಸಭಾ ಸ್ಥಾನದಂತೆಯೇ ಇಲ್ಲಿಯೂ ಕೂಡ ಪರಿಶಿಷ್ಟ ಜಾತಿ, ಪಂಗಡದ ಅಭ್ಯರ್ಥಿಗಳಿಗೆ ಕೆಲವೊಂದು ಸ್ಥಾನಗಳನ್ನು ಮೀಸಲಿಡಲಾಗುತ್ತದೆ.

3. ವಿಧಾನಸಭಾ ಸದಸ್ಯರ ಅರ್ಹತೆಗಳು: (Qualifications of Legislative Members)

 ವಿಧಾನಸಭಾ ಸದಸ್ಯನಾಗಲು ಈ ಕೆಳಗಿನ ಅರ್ಹತೆಗಳು ಇರಲೇಬೇಕು

1. ಸಂವಿಧಾನದ 173 ನೇ ವಿಧಿಯ ಪ್ರಕಾರ ಆತ ಭಾರತದ ಪ್ರಜೆಯಾಗಿರಬೇಕು.

2. ಆತ ಕನಿಷ್ಠ 25 ವರ್ಷ ವಯಸ್ಸಿನವನಾಗಿರಬೇಕು.

3. ಸಂಸತ್ತಿನ ಅಥವಾ ಕಾನೂನಿನಿಂದ ನಿಗದಿಪಡಿಸಲ್ಪಟ್ಟ ಅರ್ಹತೆಗಳಿರಬೇಕು.

4. ಸಂವಿಧಾನಕ್ಕೆ  ವಿಧೇಯನಾಗಿರಬೇಕು.

5. ಕೇಂದ್ರ ಅಥವಾ ರಾಜ್ಯ ಸರ್ಕಾರಗಳಲ್ಲಿ ಯಾವುದೇ ಲಾಭದಾಯಕ ಹುದ್ದೆಯಲ್ಲಿ ಇರಬಾರದು.

6. ದಿವಾಳಿ, ಮತಿವಿಕಲ ಅಥವಾ ಬುದ್ಧಿಮಾಂದ್ಯನಾಗಿರಬಾರದು.

4. ಸದಸ್ಯರ ಅಧಿಕಾರಾವಧಿ: (Terms and Power of Members)

 ಸಾಮಾನ್ಯವಾಗಿ ವಿಧಾನಸಭೆಯ ಸದಸ್ಯರ ಅಧಿಕಾರ ಅವಧಿ ೫ ವರ್ಷಗಳು, ಅವಧಿಗಿಂತ ಮೊದಲೇ ಮುಖ್ಯಮಂತ್ರಿಗಳ ಸಲಹೆ ಮೇರೆಗೆ ರಾಜ್ಯಪಾಲರು ವಿಧಾನಸಭೆಯನ್ನು ವಿಸರ್ಜಿಸಬಹುದು. ಆಗ ಅಧಿಕಾರ ಅವಧಿ ಕಡಿಮೆಯಾಗುತ್ತದೆ. ಸಂವಿಧಾನದ 356ನೇ ವಿಧಿಯ ಪ್ರಕಾರ ರಾಜ್ಯದಲ್ಲಿ ತುರ್ತು ಪರಿಸ್ಥಿತಿ ಘೋಷಣೆಯಾದರೆ ರಾಷ್ಟ್ರಪತಿಯೂ ಸಹ ವಿಧಾನಸಭೆಯನ್ನು ವಿಸರ್ಜಿಸಬಹುದು. ರಾಷ್ಟ್ರೀಯ ತುರ್ತುಪರಿಸ್ಥಿತಿ ಜಾರಿಯಲ್ಲಿದ್ದಾಗ ವಿದಾನ ಸಭೆಯ ಅವಧಿಯನ್ನು ಸಂಸತ್ತು ಒಂದು ವರ್ಷದವರೆಗೆ ಮುಂದುವರಿಸಬಹುದು. ತುರ್ತು ಪರಿಸ್ಥಿತಿ ರದ್ದಾದ ೬ ತಿಂಗಳೊಳಗಾಗಿ ಚುನಾವಣೆಗಳು ನಡೆಯಬೇಕು.

5. ಅಧಿವೇಶನಗಳು: (Sessions)

ವಿಧಾನಸಭೆಯ ಅಧಿವೇಶನವನ್ನು ಕರೆಯುವುದು ಅಥವಾ ಮುಂದೂಡುವುದು ರಾಜ್ಯಪಾಲರ ವಿವೇಚನೆಗೆ ಸೇರಿರುತ್ತದೆ. ವಿಧಾನ ಸಭೆಯು ವಾರ್ಷಿಕ 3 ಬಾರಿ ಅಧಿವೇಶನವನ್ನು ಕರೆಯಬೇಕು. ಈ ಅಧಿವೇಶನಗಳು ಮುಂಗಡಪತ್ರ ಅಧಿವೇಶನ, ಮಳೆಗಾಲದ ಅಧಿವೇಶನ ಹಾಗೂ ಚಳಿಗಾಲದ ಅಧಿವೇಶನಗಳಾಗಿವೆ. ವಿಧಾನಸಭಾ ಅಧಿವೇಶನಗಳ ನಡುವಿನ ಅಂತರ ಕನಿಷ್ಠ ೬ ತಿಂಗಳು ಮೀರುವಂತಿಲ್ಲ. ಅಂದರೆ ವಾರ್ಷಿಕವಾಗಿ ಎರಡು ಬಾರಿಯಾದರೂ ಅಧಿವೇಶನವನ್ನು ಕರೆಯಲೇಬೇಕು. 

6. ಕೋರಂ: (Quoram)

ʻʻವಿಧಾನಸಭೆ ಅಧಿವೇಶನದಲ್ಲಿ ಕನಿಷ್ಠ ಸಂಖ್ಯೆಯ ಸದಸ್ಯರು ಹಾಜರಿರಬೇಕಾದ ಕ್ರಮವನ್ನು ಕೋರಂ ಎಂದು ಕರೆಯಲಾಗುತ್ತದೆʼʼ. ವಿಧಾನಸಭೆಯ ಅಧಿವೇಶನಕ್ಕೆ ಕನಿಷ್ಠ ೧/೧೦  ಭಾಗದಷ್ಟು ಸದಸ್ಯರು ಹಾಜರಿರಲೇಬೇಕು. ಅಂದರೆ ೨24 ಸದಸ್ಯರ ಪೈಕಿ 23 ಜನ ಸದಸ್ಯರು ಹಾಜರಾದರೆ ಕೋರಂ ಬಂದ ಹಾಗೆಯೇ. ಒಂದು ವೇಳೆ ಕೋರಂ ಇಲ್ಲದ್ದರೆ ಸಭಾಧ್ಯಕ್ಷರು ಅಧಿವೇಶನವನ್ನು ಮುಂದೂಡುತ್ತಾರೆ.

7. ಸಭಾಪತಿ ಮತ್ತು ಉಪ ಸಭಾಪತಿ: (Speaker and Deputy Speaker)

ವಿಧಾನಸಭೆ ಚುನಾವಣೆಯ ನಂತರ ಬಹುಮತ ಪಡೆದ ಪಕ್ಷದ ಸದಸ್ಯರು ಸೇರಿ ತಮ್ಮಲ್ಲಿ ಒಬ್ಬನನ್ನು ಸಭಾಪತಿ ಮತ್ತು ಇನ್ನೊಬ್ಬನನ್ನು ಉಪ ಸಭಾಪತಿಯನ್ನಾಗಿ ತಮ್ಮಲ್ಲಿ ಆಯ್ಕೆ ಮಾಡಿಕೊಳ್ಳುತ್ತಾರೆ. ಆಯ್ಕೆಯಾದ ಸಭಾಪತಿಯು ವಿಧಾನ ಸಭೆಯ ಕಾರ್ಯಕಲಾಪಗಳ ಜವಾಬ್ದಾರಿಯನ್ನು ಹೊರುತ್ತಾರೆ. ಸಭಾಪತಿ ಹಾಗೂ ಉಪಸಭಾಪತಿಗಳು ೫ ವರ್ಷಗಳ ಅವಧಿಗೆ ಅಧಿಕಾರದಲ್ಲಿ ಇರುತ್ತಾರೆ. ಸದನದ ಶಾಸಕೀಯ ವ್ಯವಹಾರಗಳನ್ನು ಸುಸೂತ್ರವಾಗಿ ಗೌರವ, ಶಿಸ್ತು ಹಾಗೂ ಗಂಭೀರವಾಗಿ ನಡೆಸುವ ಜವಾಬ್ದಾರಿಯ ಸಹ ಸಭಾಪತಿಯ ಮೇಲಿರುತ್ತದೆ. ವಿಧಾನಸಭಾ ಸಭಾಪತಿಗಳು ಜಂಟಿ ಸಮಾವೇಶಗಳ ಅಧ್ಯಕ್ಷತೆಯನ್ನು ವಹಿಸುವ ಕಾರ್ಯವನ್ನಲ್ಲದೆ ಲೋಕಸಭಾ ಅಧ್ಯಕ್ಷರು ನಿರ್ವಹಿಸುವ ಎಲ್ಲಾ ಕಾರ್ಯಗಳನ್ನು ನಿರ್ವಹಿಸುತ್ತಾರೆ. ಸಭಾಪತಿಗಳ ಗೈರುಹಾಜರಿ, ನಿಧನ, ಅನಾರೋಗ್ಯ ಮತ್ತು ವಿದೇಶಿ ಪ್ರವಾಸದಂತಹ ಸಮಯದಲ್ಲಿ ಉಪಸಭಾಪತಿಗಳು ಸಭಾಪತಿಗಳ ಕಾರ್ಯವನ್ನು ನಿರ್ವಹಿಸುತ್ತಾರೆ.

ಅ) ಸದನದ ಎಲ್ಲಾ ಆದೇಶಗಳನ್ನು ಸಭಾಪತಿಯ ಮೂಲಕವೇ  ನೆರವೇರಿಸಲಾಗುತ್ತದೆ.

ಆ)  ರಾಜ್ಯಪಾಲರಿಂದ ಬರುವ ಯಾವುದೇ ಸಂದೇಶಗಳನ್ನು ಸಭಾಪತಿಯ ಮೂಲಕವೇ ಸದನಕ್ಕೆ ತಿಳಿಸಲಾಗುತ್ತದೆ.

ಇ)  ಒಂದು ಮಸೂದೆ ಅದು ಹಣಕಾಸು ಮಸೂದೆಯೋ ಅಥವಾ ಅಲ್ಲವೋ ಎಂಬುದನ್ನು ತೀರ್ಮಾನಿಸುವ ಅಧಿಕಾರ ಸಭಾಪತಿಗೆ ಇರುತ್ತದೆ.

ಈ) ಸಭಾಪತಿಯ ನಿರ್ಣಯಗಳನ್ನು ಯಾವುದೇ ನ್ಯಾಯಾಲಯದಲ್ಲಿ ಪ್ರಶ್ನಿಸುವಂತಿಲ್ಲ.

ಉ) ಯಾವುದೇ ಸದಸ್ಯರು ಸಭಾಪತಿಯ ಅನುಮತಿಯನ್ನು ಪಡೆಯದ ಹೊರತು ಸದನದಲ್ಲಿ ಮಾತನಾಡುವಂತಿಲ್ಲ.

ಊ) ಒಂದು ಮಸೂದೆಯನ್ನು ಮಂಡಿಸುವಾಗ ಸದನದಲ್ಲಿ ಸರಿ ಸಮಾನವಾದ ಮತಗಳು ಬಂದಾಗ ಸಭಾಪತಿಗೆ ನಿರ್ಣಾಯಕ ಮತ ನೀಡುವ ಹಕ್ಕು ಇದೆ. ಸದನದಲ್ಲಿ ಈ ಕೆಳಗಿನ ಶಬ್ದಗಳನ್ನು ಬಳಸಿದಂತೆ ನಿರ್ಬಂಧ ಹೇರಲಾಗಿದೆ. ಸುಳ್ಳುಗಾರ, ಗೂಂಡಾ, ನರಕ, ರಾಷ್ಟ್ರದೋಹಿ, ಕೆಲಸಕ್ಕೆ ಬಾರದವನು, ಕುರಿ, ಮೂರ್ಖ, ಬಾಡಿಗೆ ಜನ, ದುರಹಂಕಾರಿ, ರೌಡಿ ಅಯೋಗ್ಯ ಮುಂತಾದವುಗಳು.  ʻʻಸಭಾಪತಿಗಳು ತಮ್ಮ ರಾಜೀನಾಮೆಯನ್ನು ಡೆಪ್ಯೂಟಿ ಸ್ಪೀಕರವರಿಗೆ ನೀಡಬೇಕು.ʼʼ ಡೆಪ್ಯೂಟಿ ಸ್ಪೀಕರ್ ತಮ್ಮ ರಾಜೀನಾಮೆಯನ್ನು  ಸ್ಪೀಕರವರಿಗೆ ನೀಡಬೇಕು.

8. ವೇತನ ಮತ್ತು ವಿನಾಯಿತಿಗಳು: (Salary and Immunities)

ವಿಧಾನಸಭಾ ಸದಸ್ಯರು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಅವರಿಗೆ ಅಗತ್ಯವಾದ ವೇತನ ಹಾಗೂ ಸೌಲಭ್ಯಗಳನ್ನು ನೀಡಲಾಗುತ್ತದೆ. ಅವರಿಗೆ ಮಾಸಿಕವೇತನ ಮತ್ತು ನಿವೃತ್ತಿವೇತನ ನೀಡಲಾಗುತ್ತದೆ. ಜೊತೆಗೆ ಉಚಿತ ದೂರವಾಣಿ ಕರೆಗಳು, ಉಚಿತ ನಿವಾಸ ಸೌಲಭ್ಯ, ಆರೋಗ್ಯ ಸೇವೆ, ವಿದ್ಯುತ್‌ ಸೌಲಭ್ಯಗಳನ್ನು ಪಡೆಯುತ್ತಾರೆ.

ಉಪಸಂಹಾರ

ಒಟ್ಟಾರೆ ವಿಧಾನಸಭೆ ರಾಜ್ಯ ಪ್ರಜಾಪ್ರಭುತ್ವದ ಮೂಲಸ್ತಂಭವಾಗಿದೆ. ಜನರ ಆಶಯಗಳನ್ನು ಕಾನೂನಿನ ರೂಪಕ್ಕೆ ತರಲು ಹಾಗೂ ಸರ್ಕಾರವನ್ನು ಜವಾಬ್ದಾರಿಯುತವಾಗಿ ನಡೆಸಲು ಇದು ಸಹಾಯಕವಾಗಿದೆ. ಸಭಾಪತಿ, ಸದಸ್ಯರು ಮತ್ತು ಅಧಿವೇಶನಗಳ ಮೂಲಕ ರಾಜ್ಯದ ಆಡಳಿತ ವ್ಯವಸ್ಥೆ ಸುಸೂತ್ರವಾಗಿ ನಡೆಯುತ್ತದೆ. ಆದ್ದರಿಂದ ವಿಧಾನಸಭೆಯ ರಚನೆ ಮತ್ತು ಕಾರ್ಯವಿಧಾನವನ್ನು ತಿಳಿದುಕೊಳ್ಳುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ.

ವಿಧಾನಪರಿಷತ್ ರಚನೆ

ವಿಧಾನಪರಿಷತ್ ರಚನೆ

ಭಾರತೀಯ ಸಂವಿಧಾನದ 169 ಮತ್ತು 171ನೇ ವಿಧಿಗಳ ಪ್ರಕಾರ ಕೆಲವು ರಾಜ್ಯಗಳಲ್ಲಿ ಮಾತ್ರ ವಿಧಾನಪರಿಷತ್ತು ರಚನೆಯಾಗಿದೆ. ಪ್ರಸ್ತುತ ಉತ್ತರಪ್ರದೇಶ, ಆಂಧ್ರಪ್ರದೇಶ, ತೆಲಂಗಾಣ, ಬಿಹಾರ್, ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯಗಳಲ್ಲಿ ವಿಧಾನಪರಿಷತ್ತು ಅಸ್ತಿತ್ವದಲ್ಲಿದೆ. ಇದು ರಾಜ್ಯ ವಿಧಾನಸಭೆಗೆ ಸಹಾಯಕವಾಗಿದ್ದು ಶಾಸನ ಪ್ರಕ್ರಿಯೆಯಲ್ಲಿ ಸಮತೋಲನವನ್ನು ಕಾಪಾಡುತ್ತದೆ. ವಿಶೇಷ ವರ್ಗಗಳ ಪ್ರತಿನಿಧಿತ್ವಕ್ಕೆ ಅವಕಾಶ ನೀಡುವ ಮೂಲಕ ಜನಪ್ರಾತಿನಿಧ್ಯವನ್ನು ವಿಸ್ತರಿಸುತ್ತದೆ.

ವಿಧಾನಪರಿಷತ್ ರಚನೆ: (Compostition of Legislative Council or Upper House)

ʻʻವಿಧಾನ ಪರಿಷತ್ತನ್ನು ರಾಜ್ಯ ಶಾಸಕಾಂಗದ ಮೇಲ್ಮನೆಯಂದು ಕರೆಯಲಾಗಿದೆʼʼ. ಭಾರತದ ಒಕ್ಕೂಟದ ಎಲ್ಲಾ ರಾಜ್ಯಗಳ ಶಾಸಕಾಂಗಗಳು ವಿಧಾನ ಪರಿಷತ್ತನ್ನು ಹೊಂದಿಲ್ಲ. ಭಾರತದ ಕೆಲವೇ ಕೆಲವು ರಾಜ್ಯಗಳಲ್ಲಿ ಮಾತ್ರ ವಿಧಾನ ಪರಿಷತ್ತು ರಚನೆಯಾಗಿರುವುದು ಕಂಡುಬರುತ್ತದೆ. ಪ್ರಸ್ತುತ ಉತ್ತರಪ್ರದೇಶ, ಆಂಧ್ರಪ್ರದೇಶ, ತೆಲಂಗಾಣ, ಬಿಹಾರ್ ಮತ್ತು ಕರ್ನಾಟಕದಲ್ಲಿ ಹಾಗೂ ಮಹಾರಾಷ್ಟ್ರ ರಾಜ್ಯಗಳಲ್ಲಿ ಮಾತ್ರ ವಿಧಾನ ಪರಿಷತ್ತು ಅಸ್ತಿತ್ವದಲ್ಲಿದೆ. ಸಂವಿಧಾನದ 169 ನೇ ವಿಧಿಯ ಪ್ರಕಾರ ಸಂಸತ್ತು ರಾಜ್ಯವೊಂದರಲ್ಲಿ ವಿಧಾನ ಪರಿಷತ್ತನ್ನು ಹೊಸದಾಗಿ ರಚಿಸುವ ಮತ್ತು ಈಗಾಗಲೇ ಅಸ್ತಿತ್ವದಲ್ಲಿರುವ ವಿಧಾನ ಪರಿಷತ್ತನ್ನು ರದ್ದುಪಡಿಸುವ ಅಧಿಕಾರವನ್ನು ಹೊಂದಿದೆ. ಆದರೆ ವಿಧಾನಪರಿಷತ್ತಿನ ರಚನೆ ಮತ್ತು ರದ್ದತಿಗೆ ಆಯಾ ರಾಜ್ಯ ವಿಧಾನ ಸಭೆಯ ೨/೩ ರಷ್ಟು ಸದಸ್ಯರು ಹಾಜರಿದ್ದು ಒಟ್ಟು ಸದಸ್ಯ ಸ್ಥಾನಗಳ ಅರ್ಧಕ್ಕಿಂತಲೂ ಹೆಚ್ಚು ಬಹುಮತದೊಂದಿಗೆ ನಿರ್ಣಯವನ್ನು ಅಂಗೀಕರಿಸಿ ಅದನ್ನು ಸಂಸತ್ತಿಗೆ ಕಳುಹಿಸಿಕೊಡಬೇಕು. ಆಗ ಸಂಸತ್ತು ಸರಳ ಬಹುಮತದೊಂದಿಗೆ ಅಂಗೀಕರಿಸಿ ಕಾನೂನಾಗಿ ಮಾಡಿ ವಿಧಾನಸಭೆಯ ನಿರ್ಣಯಕ್ಕೆ ಸಂವಿಧಾನಾತ್ಮಕ ಸ್ಥಾನವನ್ನು ನೀಡುತ್ತದೆ.

1. ಒಟ್ಟು ಸದಸ್ಯರ ಸಂಖ್ಯೆ: (Total Number of Members)

ವಿಧಾನ ಪರಿಷತ್ತಿನ ಸದಸ್ಯರ ಸಂಖ್ಯೆ ಇಷ್ಟೇ ಇರಬೇಕು ಎಂಬುದನ್ನು ನಿಗದಿಪಡಿಸಿರುವುದಿಲ್ಲ.  ವಿಧಾನ ಪರಿಷತ್ತಿನ ಸದಸ್ಯರ ಸಂಖ್ಯೆ ಆಯಾ ರಾಜ್ಯಗಳ ಜನಸಂಖ್ಯೆಯನ್ನು ಆಧರಿಸಿ ನಿಗದಿಪಡಿಸಲಾಗುತ್ತದೆ. ಸಂವಿಧಾನದ 171(೧) ನೇ ವಿಧಿಯ ಪ್ರಕಾರ ವಿಧಾನಪರಿಷತ್ತಿನ ಒಟ್ಟು ಸದಸ್ಯರ ಸಂಖ್ಯೆ 40 ಕ್ಕಿಂತ ಕಡಿಮೆ ಇರಬಾರದು ಮತ್ತು ಸಂಬಂಧಿಸಿದ ರಾಜ್ಯ ವಿಧಾನಸಭೆಯ ಒಟ್ಟು ಸದಸ್ಯರ ಸಂಖ್ಯೆ ೧/೩ಕ್ಕಿಂತ ಹೆಚ್ಚಿರಬಾರದು ಎಂದು ಸೂಚಿಸಿದೆ. ಹೀಗಾಗಿ ಕರ್ನಾಟಕದಲ್ಲಿ 224 ಚುನಾಯಿತ ಹಾಗೂ ಒಬ್ಬ ಆಂಗ್ಲೋ ಇಂಡಿಯನ್ ಸದಸ್ಯ ಸೇರಿದಂತೆ ವಿಧಾನ ಸಭೆಯು 225 ಸ್ಥಾನಗಳನ್ನು ಹೊಂದಿದೆ. ಹಾಗಾಗಿ ವಿಧಾನ ಪರಿಷತ್ತು ವಿಧಾನಸಭೆಯ ೧/೩ ರಷ್ಟು ಸ್ಥಾನಗಳನ್ನು ಅಂದರೆ 75 ಸದಸ್ಯರಿಂದ ಕೂಡಿದೆ.

2. ಚುನಾವಣಾ ವಿಧಾನ: (Election Method)

ವಿಧಾನಸಭೆಯ ಸದಸ್ಯರಂತೆ ವಿಧಾನ ಪರಿಷತ್ತಿನ ಸದಸ್ಯರು ನೇರವಾಗಿ ಜನರಿಂದ ಆಯ್ಕೆಯಾಗುವುದಿಲ್ಲ. ಬದಲಾಗಿ ವಿವಿಧ ವರ್ಗಗಳ ವಿಶೇಷ ಮತದಾರರಿಂದ ಪರೋಕ್ಷ ಚುನಾವಣೆಯ ಮೂಲಕ ಆಯ್ಕೆಕೊಳ್ಳುತ್ತಾರೆ. ಈ ಸದನದ ಎಲ್ಲಾ ಸದಸ್ಯರು ವಿವಿಧ ಕ್ಷೇತ್ರಗಳಿಂದ ಏಕ ಮತವನ್ನು ವರ್ಗಾಯಿಸುವ ಪ್ರಮಾಣಾನುಗುಣ ಪದ್ಧತಿಯ ಮೂಲಕ ಚುನಾಯಿತರಾಗುತ್ತಾರೆ. ಸಂವಿಧಾನದ 171(೧) ನೇ ವಿಧಿಯ ಪ್ರಕಾರ ವಿಧಾನಪರಿಷತ್ತಿನ ಸದಸ್ಯರು ಕೆಳಕಂಡಂತೆ ಚುನಾಯಿತರಾಗುತ್ತಾರೆ.

  1. ೧/೩ ರಷ್ಟು ಭಾಗದಷ್ಟು ಸದಸ್ಯರು ಸ್ಥಳೀಯ ಸಂಸ್ಥೆಗಳಾದ ಮುನಸಿಲಾಲಿಟಿ, ಜಿಲ್ಲಾ ಮಂಡಳಿ ಹಾಗೂ ಸಂಸತ್ತಿನ ಕಾನೂನಿನಿಂದ ರಾಜ್ಯದಲ್ಲಿ ನಿರ್ಧರಿಸಲ್ಪಡುವ ಇತರ ಸ್ಥಳೀಯ ಸಂಸ್ಥೆಗಳಿಂದ ಚುನಾಯಿತರಾಗುತ್ತಾರೆ.
  2. ರಾಜ್ಯ ವಿಧಾನ ಸಭೆಯ ಸದಸ್ಯರು ೧/೩  ಭಾಗದಷ್ಟು ಸದಸ್ಯರನ್ನು ವಿಧಾನ ಸಭೆಯ ಸದಸ್ಯರಲ್ಲದವರನ್ನು ಚುನಾಯಿಸುತ್ತಾರೆ.
  3. ೧/೧೨ ಭಾಗದಷ್ಟು ಸದಸ್ಯರು ದೇಶದ ಯಾವುದೇ ವಿಶ್ವವಿದ್ಯಾಲಯದಿಂದಲಾದರೂ ಪದವಿಯನ್ನು ಪಡೆದ ಪದವೀಧರರಿಂದ ಚುನಾಯಿತರಾಗುತ್ತಾರೆ.
  4. ೧/೧೨ಭಾಗದಷ್ಟು ಸದಸ್ಯರು ಕನಿಷ್ಟ ಪಕ್ಷ ಮೂರು ವರ್ಷಗಳವರೆಗೆ ಸೆಕೆಂಡರಿ ಶಾಲೆಗಿಂತ ಕಡಿಮೆ ಇರದ ವಿದ್ಯಾಸಂಸ್ಥೆಗಳಲ್ಲಿ ಅಧ್ಯಾಪಕರಾಗಿ ಕೆಲಸ ಮಾಡಿದರಿಂದ ಚುನಾಯಿತರಾಗುತ್ತಾರೆ.
  5. ೧/೬ ಭಾಗದಷ್ಟು ಸದಸ್ಯರನ್ನು ವಿಜ್ಞಾನ ಕಲೆ, ಸಮಾಜಿಕ ಸೇವೆಗಳಲ್ಲಿ ಹೆಚ್ಚಿನ ಜ್ಞಾನ ಮತ್ತು ಅನುಭವ ಪಡೆದವರನ್ನು ರಾಜ್ಯಪಾಲರು ವಿಧಾನ ಪರಿಷತ್ತಿನ ಸದಸ್ಯರನ್ನಾಗಿ ನೇಮಿಸುತ್ತಾರೆ.

3. ವಿಧಾನ ಪರಿಷತ್ತಿನ ಸದಸ್ಯರ ಅರ್ಹತೆಗಳು: (Qualification of Legislative Council)

ಸಂವಿಧಾನ 173 ನೇ ವಿಧಿಯ ಪ್ರಕಾರ ವಿಧಾನ ಪರಿಷತ್ತಿನ ಸದಸ್ಯರ ಅರ್ಹತೆಗಳು ಈ ಕೆಳಗಿನಂತಿವೆ:

  1. ಅವರು ಭಾರತದ ಪ್ರಜೆಯಾಗಿರಬೇಕು.
  2. ಅವರಿಗೆ 30 ವರ್ಷ ವಯಸ್ಸಾಗಿರಬೇಕು.
  3. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಲ್ಲಿ ಯಾವುದೇ ಲಾಭದಾಯಕ ಹುದ್ದೆಯನ್ನು ಹೊಂದಿರಬಾರದು.
  4. ಅವನು ಹುಚ್ಚಮತಿ ವಿಕಲ ಅಥವಾ ಅಪರಾಧಿಯಾಗಿರಬಾರದು.
  5. ಸಂಸತ್ತು ನಿರ್ಧರಿಸುವ ಇತರೆ ಅರ್ಹತೆಗಳನ್ನು ಹೊಂದಿರಬೇಕು.

ಸದಸ್ಯರು ಚುನಾಯಿತರಾದ ಮೇಲೆ 191ನೇ ವಿಧಿಯಲ್ಲಿ ನಮೂದಿಸಿದ ಅರ್ಹತೆಗಳನ್ನು ಹೊಂದಿರದಿದ್ದರೆ ಆತ ಸದಸ್ಯತ್ವವನ್ನು ಕಳೆದುಕೊಳ್ಳುತ್ತಾನೆ. 190(೩) (b)  ವಿಧಿಯ ಅನ್ವಯ ವಿಧಾನ ಪರಿಷತ್ತಿನ ಚೇರ್‌ಮೆನ್‌ರವರಿಗೆ ರಾಜೀನಾಮೆ ಪತ್ರ ಬರೆದು ಸದಸ್ಯತ್ವವನ್ನು ತ್ಯಜಿಸಬಹುದು. ಇದೇ ವಿಧಿಯ (೪)ನೇ ಉಪವಿಧಿಯ ಅನ್ವಯ ಸದನದ ಆರಮತಿ ಇಲ್ಲದೆ 60 ದಿನಗಳು ಎಲ್ಲಾ ಸಭೆಗಳಿಗೆ ಗೈರು ಹಾಜರಾದರೆ ಸದಸ್ಯತ್ವ ರದ್ದಾಗುತ್ತದೆ.

4. ವಿಧಾನ ಪರಿಷತ್ತಿನ ಸದಸ್ಯರ ಅಧಿಕಾರಾವಧಿ: (Terms and Power of Legislative Council)

 ಸಾಮಾನ್ಯವಾಗಿ ವಿಧಾನ ಪರಿಷತ್ತಿನ ಸದಸ್ಯರ ಅಧಿಕಾರ ಅವಧಿ ೬ ವರ್ಷಗಳು. ಅವಧಿಗಿಂತ ಮುಂಚಿತವಾಗಿ ಯಾರಾದರೂ ನಿಧನರಾದರೆ ಅಥವಾ ರಾಜೀನಾಮೆ ನೀಡಿದರೆ, ಉಳಿದ ಅವಧಿಗೆ ಚುನಾವಣೆ ನಡೆಯುತ್ತದೆ. ೬ ವರ್ಷದ ಅವಧಿ ಮುಗಿದ ೧/೩  ಭಾಗದಷ್ಟು ಸದಸ್ಯರು ಪ್ರತಿ ಎರಡು ವರ್ಷಕ್ಕೊಮ್ಮೆ ನಿವೃತ್ತರಾಗುತ್ತಾರೆ. ಆಗ ೧/೩ ಭಾಗದಷ್ಟು ಸದಸ್ಯರ ಸ್ಥಾನಗಳಿಗೆ ಚುನಾವಣೆ ನಡೆಯುತ್ತದೆ. ಸಂವಿಧಾನದ 1೭2 (೨)ನೇ ಎರಡು ವಿಧಿಯ ಪ್ರಕಾರ ವಿಧಾನ ಪರಿಷತ್ತನ್ನು ವಿಸರ್ಜಿಸುವಂತಿಲ್ಲ.

5. ವಿಧಾನ ಪರಿಷತ್ ಸದಸ್ಯರ ಪ್ರಮಾಣ ವಚನ: (Oath of Legislative Council)

 ಸಂವಿಧಾನದ 188 ನೇ ವಿಧಿಯ ಪ್ರಕಾರ ವಿಧಾನಪರಿಷತ್ತಿಗೆ ಆಯ್ಕೆಗೊಂಡ ಸದಸ್ಯರು ಪ್ರಮಾಣ ವಚನ ಸ್ವೀಕರಿಸಬೇಕು. ಸಂವಿಧಾನದ ೩ನೇ ಅನುಸೂಚಿಯಲ್ಲಿ ನಮೂದಿಸಿರುವಂತೆ ಸಂವಿಧಾನವನ್ನು ಗೌರವಿಸಿ ದೇಶದ ಪರಮಾಧಿಕಾರ ಮತ್ತು ಸಮಗ್ರತೆಯನ್ನು ಎತ್ತಿ ಹಿಡಿದು ಕರ್ತವ್ಯವನ್ನು ಪ್ರಮಾಣಿಕತೆಯಿಂದ ನಿರ್ವಹಿಸುತ್ತೇನೆಂದು ಪ್ರತಿಜ್ಞೆ ಮಾಡುತ್ತೇನೆ ಎಂದು ಪ್ರತಿಜ್ಞಾವಿಧಿಯನ್ನು ಸ್ವೀಕರಿಸಬೇಕು. ಪ್ರಮಾಣವಚನವನ್ನು ಸ್ವೀಕರಿಸದೆ ಸದನದಲ್ಲಿ ಹಾಜರಾದರೆ ಅಥವಾ ಮತ ಚಲಾಯಿಸಿದರೆ ಪ್ರತಿದಿನ 500ರೂಗಳ ದಂಡ ನೀಡಬೇಕು ಎಂದು ಸಂವಿಧಾನ ೧೯೩ ನೇ ವಿಧಿತಿಳಿಸುತ್ತದೆ. ಹಾಗೆಯೇ ಸದಸ್ಯತ್ವವನ್ನು ಕಳೆದುಕೊಂಡು ಸದನಕ್ಕೆ ಹಾಜರಾದರೆ 500ರೂ ದಂಡ ವಿಧಿಸಲಾಗುವುದು.

6. ಅಧಿವೇಶನಗಳು: (Sessions)

ವಿಧಾನಸಭೆಯ ಜೊತೆಗೆ ವಿಧಾನ ಪರಿಷತ್ತಿನ ಅಧಿವೇಶನವನ್ನು ಕರೆಯುವ ಹಾಗೂ ಮುಂದೂಡುವ ಅಧಿಕಾರ ರಾಜ್ಯಪಾಲರಿಗೆ ಇದೆ. ವಿಧಾನ ಪರಿಷತ್ತು ವರ್ಷದಲ್ಲಿ ಮೂರು ಬಾರಿ ಸಭೆ ಸೇರುತ್ತದೆ. ಈ ಅಧಿವೇಶನಗಳು ಮುಂಗಡಪತ್ರ ಅಧಿವೇಶನ, ಮಳೆಗಾಲದ ಅಧಿವೇಶನ ಹಾಗೂ ಚಳಿಗಾಲದ ಅಧಿವೇಶನಗಳಾಗಿವೆ. ವಿಧಾನ ಪರಿಷತ್ತಿನ ಎರಡು ಸದನಗಳ ನಡುವಿನ ಅಂತರ ೬ ತಿಂಗಳುಗಳನ್ನು ಮೀರುವಂತಿಲ್ಲ. ಅಂದರೆ ವರ್ಷದಲ್ಲಿ ಎರಡು ಬಾರಿ ಅಧಿವೇಶನಗಳು ನಡೆಯಲೇಬೇಕು.

7. ಕೋರಂ: (Quoram)

ಅಧಿವೇಶನದ ಅವಧಿಯಲ್ಲಿ ವಿಧಾನ ಪರಿಷತ್ತಿನ ಕಲಾಪಗಳು ಜರುಗಲು ಹಾಜರಾಗಬೇಕಾದ ಕನಿಷ್ಠ ಸದಸ್ಯರ ಸಂಖ್ಯೆಯನ್ನು ಕೋರಂ ಎಂದು ಕರೆಯಲಾಗುತ್ತದೆ. ಕರ್ನಾಟಕದಲ್ಲಿ ವಿಧಾನ ಪರಿಷತ್ತಿನ ಒಟ್ಟು 75 ಸದಸ್ಯರ ಪೈಕಿ ೮ ಸದಸ್ಯರು ಹಾಜರಾದರೆ ಸಾಕು ಕೋರಂ ಬಂದಂತೆ ಎಂದಾಗುತ್ತದೆ. ಒಂದು ವೇಳೆ ಸದನದಲ್ಲಿ ಕೋರಂ ಇಲ್ಲದೆ ಹೋದರೆ ಸಭಾಪತಿಗಳು ಅಧಿವೇಶನವನ್ನು ಮುಂದೂಡುವ ಅಧಿಕಾರವನ್ನು ಹೊಂದಿರುತ್ತಾರೆ.

8. ಸಭಾಪತಿ ಮತ್ತು ಉಪ ಸಭಾಪತಿ: (Chairman and Deputy Chairman)

ವಿಧಾನಪರಿಷತ್ತಿನ ಚುನಾವಣೆಯ ನಂತರ ಆಯ್ಕೆಯಾದ ಸದಸ್ಯರುಗಳು ತಮ್ಮಲ್ಲಿ ಒಬ್ಬ ಸಭಾಪತಿ ಹಾಗೂ ಒಬ್ಬ ಉಪಸಭಾಪತಿಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಸಭಾಪತಿಯಾದವನು ವಿಧಾನ ಪರಿಷತ್ತಿನ ಕಲಾಪಗಳ ಅಧ್ಯಕ್ಷತೆಯನ್ನು ವಹಿಸಿಕೊಳ್ಳುತ್ತಾನೆ. ಆತ ಸದನದಲ್ಲಿ ಶಿಸ್ತು, ಸಂಯಮದಿಂದ ನಡೆದುಕೊಂಡು ಸದನದ ಗೌರವವನ್ನು ಕಾಪಾಡುವಂತೆ ಸದಸ್ಯರಿಗೆ ಮನವಿ ಮಾಡುತ್ತಾರೆ. ಒಂದು ವೇಳೆ ಅಧ್ಯಕ್ಷರು ಗೈರು ಹಾಜರಾದರೆ ಉಪಾಧ್ಯಕ್ಷರು ಸದನವನ್ನು ಮುಂದುವರಿಸಿಕೊಂಡು ಹೋಗುತ್ತಾರೆ.

9. ವೇತನ ಹಾಗೂ ವಿನಾಯಿತಿಗಳು: (Salary and Immunities)

ಸಂವಿಧಾನದ 195 ನೇ ವಿಧಿಯ ಪ್ರಕಾರ ರಾಜ್ಯಗಳ ಶಾಸಕರಿಗೆ ಕಾನೂನಿನ ಮೂಲಕ ವೇತನ ಹಾಗೂ ಇತರೆ ಭತ್ಯೆಗಳನ್ನು ನಿರ್ಧರಿಸುವ ಅಧಿಕಾರ ರಾಜ್ಯ ಶಾಸಕಾಂಗಕ್ಕೆ ಇದೆ. ಕರ್ನಾಟಕ ಶಾಸಕಾಂಗ ಎಂ.ಎಲ್.ಎ ಹಾಗೂ ಎಂ.ಎಲ್‌.ಸಿ ಗಳ ವೇತನ ಹಾಗೂ ಭತ್ಯೆಗಳನ್ನು ಆಗಾಗ ಪರಿಷ್ಕರಿಸಿದೆ. ವಿಧಾನ ಪರಿಷತ್ತಿನ ಶಾಸಕರಿಗೆ 40,000 ಮಾಸಿಕ ವೇತನ ನೀಡಲಾಗುತ್ತದೆ. ಇದರ ಜೊತೆಗೆ ದೂರವಾಣಿ ಭತ್ಯೆ, ಚುನಾವಣಾ ಕ್ಷೇತ್ರದ ಭತ್ಯೆ, ಅಂಚೆ ವೆಚ್ಚಗಳ ಭತ್ಯೆ, ಪ್ರತಿ ಅಧಿವೇಶನಕ್ಕೆ ಹಾಜರಾದಾಗ ದಿನವೊಂದಕ್ಕೆ 200೦ ರೂಗಳ ಭತ್ಯೆ, ತಿಂಗಳಿಗೆ ಕನಿಷ್ಠ ಪಿಂಚಣಿ ೧೫೦೦೦ ದಿಂದ 25,000 ವರೆಗೆ ನೀಡಲಾಗುತ್ತದೆ. ಅದು ಅಲ್ಲದೆ ವೈದ್ಯಕೀಯ ಸೌಲಭ್ಯ, ಸರ್ಕಾರಿ ಬಸ್ಸುಗಳಲ್ಲಿ ಉಚಿತ ಪ್ರಯಾಣ ಹಾಗೂ ವಾಹನಗಳನ್ನು ಖರೀದಿಸಲು ಸಾಲ ಸೌಲಭ್ಯಗಳನ್ನು ನೀಡಲಾಗುತ್ತದೆ.

ಉಪಸಂಹಾರ

ವಿಧಾನಪರಿಷತ್ತು ರಾಜ್ಯದ ಶಾಸನಾತ್ಮಕ ವ್ಯವಸ್ಥೆಗೆ ಸ್ಥಿರತೆ ಮತ್ತು ಗಂಭೀರತೆ ನೀಡುವ ಪ್ರಮುಖ ಸಂಸ್ಥೆಯಾಗಿದೆ. ಇದು ವಿಧಾನಸಭೆಯ ನಿರ್ಣಯಗಳನ್ನು ಪರಿಶೀಲಿಸಿ ಸೂಕ್ತ ಸಲಹೆಗಳನ್ನು ನೀಡುವ ಮೂಲಕ ಕಾನೂನು ರಚನೆಗೆ ಗುಣಮಟ್ಟವನ್ನು ಹೆಚ್ಚಿಸುತ್ತದೆ. ವಿವಿಧ ಕ್ಷೇತ್ರಗಳ ಪರಿಣಿತರನ್ನು ಒಳಗೊಂಡಿರುವುದರಿಂದ ಇದು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಬಲಪಡಿಸುತ್ತದೆ. ಹೀಗಾಗಿ ವಿಧಾನಪರಿಷತ್ತು ರಾಜ್ಯ ಆಡಳಿತದಲ್ಲಿ ಸಮತೋಲನ ಮತ್ತು ಸಮರ್ಥತೆಯನ್ನು ಒದಗಿಸುವ ಮಹತ್ವದ ಸದನವಾಗಿದೆ.

ಪ್ರಧಾನ ಮಂತ್ರಿ ಅಧಿಕಾರ ಕಾರ್ಯಗಳು

ಪ್ರಧಾನ ಮಂತ್ರಿ ಅಧಿಕಾರ ಕಾರ್ಯಗಳು

ಪ್ರಧಾನಮಂತ್ರಿ ಭಾರತದ ಆಡಳಿತ ವ್ಯವಸ್ಥೆಯ ಕೇಂದ್ರೀಯ ಶಕ್ತಿಯಾಗಿದೆ. ಕೇಂದ್ರ ಮಂತ್ರಿಮಂಡಲದ ನೇತೃತ್ವ ವಹಿಸುವ ಮೂಲಕ ದೇಶದ ಆಡಳಿತವನ್ನು ಸರಾಗವಾಗಿ ನಡೆಸುವ ಹೊಣೆಗಾರಿಕೆ ಇವರ ಮೇಲಿದೆ. ಸಂವಿಧಾನದ ಅನೇಕ ವಿಧಿಗಳು ಪ್ರಧಾನಮಂತ್ರಿಗೆ ವಿಶಿಷ್ಟ ಅಧಿಕಾರಗಳನ್ನು ನೀಡಿವೆ.

ಪ್ರಧಾನ ಮಂತ್ರಿ ಕೇಂದ್ರ ಮಂತ್ರಿ ಮಂಡಲದ ನಕ್ಷತ್ರದೊಳಗಿನ ಚಂದ್ರನಂತೆ ಈತನ ಕಾರ್ಯಗಳು ಈ ಕೆಳಗಿನಂತಿವೆ:

1.  ಕೇಂದ್ರ ಮಂತ್ರಿ ಮಂಡಲದ ರಚನೆ: (Formation of Central Minister)

ಸಂವಿಧಾನದ 74ನೇ ವಿಧಿಯ ಪ್ರಕಾರ  ಪ್ರಧಾನಮಂತ್ರಿ ನೇತೃತ್ವದ ಕೇಂದ್ರ ಮಂತ್ರಿಮಂಡಲ ಇರಬೇಕೆಂದು ಹೇಳಿದೆ. ಪ್ರಧಾನಮಂತ್ರಿಯ ಮೊದಲ ಕಾರ್ಯವೆಂದರೆ ಮಂತ್ರಿಮಂಡಲ ರಚನೆ. ರಾಷ್ಟ್ರಪತಿಗಳಿಂದ ಪ್ರಧಾನಮಂತ್ರಿಯಾಗಲು ಆಹ್ವಾನ ಬಂದ ನಂತರ ಪ್ರಧಾನಮಂತ್ರಿ ಆದವರು ತನ್ನ ಮಂತ್ರಿಮಂಡಲದಲ್ಲಿ ಇರಬೇಕಾದ ಸಚಿವರ ಪಟ್ಟಿಯನ್ನು ತಯಾರಿಸಿ ಪ್ರಮಾಣವಚನ ನೀಡುವುದಕ್ಕಾಗಿ ರಾಷ್ಟ್ರಪತಿಗೆ ಸಲ್ಲಿಸುತ್ತಾರೆ. ನಂತರ ರಾಷ್ಟ್ರಪತಿಗಳು ಪ್ರಮಾಣವಚನ ನೀಡುವುದರ ಮೂಲಕ ಸಚಿವರನ್ನು ನೇಮಕ ಮಾಡುತ್ತಾರೆ. ತಮಗೆ ನಿಷ್ಠರಾದವರನ್ನೇ ಪ್ರಧಾನಿಗಳು ಮಂತ್ರಿಗಳನ್ನಾಗಿ ನೇಮಿಸುತ್ತಾರೆ. ಜೊತೆಗೆ ಪಕ್ಷಕ್ಕಾಗಿ ದುಡಿದ ದಕ್ಷತೆ ಮತ್ತು ಪ್ರಾಮಾಣಿಕ ವ್ಯಕ್ತಿಗಳಿಗೆ ಆದ್ಯತೆ ನೀಡುತ್ತಾರೆ. ಇದರೊಂದಿಗೆ ಜಾತಿವಾರು, ಪ್ರಾದೇಶಿಕತೆ, ರಾಜ್ಯ, ಜನಾಂಗ ಹಾಗೂ ಭಾಷೆಗಳಿಗೆ ಪ್ರಾಧಾನ್ಯತೆಯನ್ನು ನೀಡುವ ಮೂಲಕ ಮಂತ್ರಿಗಳನ್ನು ನೇಮಿಸುವ ಪರಮಾಧಿಕಾರ ಪ್ರಧಾನ ಮಂತ್ರಿಗಳಿಗಿದೆ. ಮಂತ್ರಿ ಮಂಡಳದ ಗಾತ್ರ ಎಷ್ಟಿರಬೇಕೆಂಬುದನ್ನು ಪ್ರಧಾನಮಂತ್ರಿ ನಿರ್ಧರಿಸುತ್ತಾರೆ. ಆದ್ದರಿಂದ ಪ್ರಧಾನಿಯನ್ನು ʻʻಕಿಂಗ್ ಮೇಕರ್ʼʼ ಚಕ್ರದೊಳಗಿನ ಚಕ್ರ ʻʻಸರ್ಕಾರದ ನೀತಿ ರಚನೆಯ ಆಯಸ್ಕಾಂತʼʼ ಎಂದು ಕರೆಯಲಾಗಿದೆ.

2. ಖಾತೆಗಳ ಹಂಚಿಕೆ: 

ಪ್ರಧಾನಮಂತ್ರಿ ತನ್ನ ಮಂತ್ರಿ ಮಂಡಲದ ರಚನೆಯ ನಂತರ ಮಾಡುವ ಮತ್ತೊಂದು ಕೆಲಸವೆಂದರೆ ಖಾತೆಗಳ ಹಂಚಿಕೆಯ ಪ್ರಹಸನ. ಈ ಖಾತೆಗಳ ಹಂಚಿಕೆಯಲ್ಲಿ ಪ್ರಧಾನಿ ಸರ್ವಸ್ವತಂತ್ರರಾಗಿರುತ್ತಾರೆ. ಆಯಾಮಂತ್ರಿಯ ವಿಶ್ವಾಸಾರ್ಹತೆ, ಸಾಮರ್ಥ್ಯ, ಶಿಕ್ಷಣ, ಅನುಭವ, ಚಾರಿತ್ರ್ಯವನ್ನು ಗಣನೆಗೆ ತೆಗೆದುಕೊಂಡು ಖಾತೆಗಳನ್ನು ಹಂಚುತ್ತಾರೆ. ಕೆಲವು ವೇಳೆ ರಾಜಕೀಯ ಒತ್ತಡದಿಂದಾಗಿ ಕೆಲವರಿಗೆ ಅವರಿಷ್ಟ ಪಟ್ಟ ಖಾತೆಗಳನ್ನು ನೀಡಬೇಕಾಗುತ್ತದೆ. 1967 ರಲ್ಲಿ ಇಂದಿರಾಗಾಂಧಿಯವರು ಮುರಾರ್ಜಿ ದೇಸಾಯಿ ಅವರಿಗೆ ಗೃಹ ಖಾತೆ ಕೊಡಲು ಇಷ್ಟವಿಲ್ಲದಿದ್ದರೂ ಅರ್ಥ ಖಾತೆಯನ್ನು ಕೊಡಬೇಕಾಯಿತು. 1977 ರಲ್ಲಿ ಚರಣಸಿಂಗ್ ಮೊದಲ ಬಾರಿಗೆ ಕೇಂದ್ರದಲ್ಲಿ ಮಂತ್ರಿ ಆದಾಗ ಅವರಿಗೆ ಗೃಹ ಖಾತೆ ನೀಡಲಾಯಿತು. ನೆಹರು ದಕ್ಷರಿಗೆ ಉತ್ತಮ ಖಾತೆಗಳನ್ನು ನೀಡಿದರೆ ಇಂದಿರಾಗಾಂಧಿ ಅದನ್ನು ಪಾಲಿಸಲಿಲ್ಲ. ಆಂಧ್ರಪ್ರದೇಶದ ಮುಲ್ಕಿ ಸಮಸ್ಯೆಯನ್ನು ಬಗೆಹರಿಸದ ಪಿ.ವಿ ನರಸಿಂಹರಾವ್ ಅವರನ್ನು ವಿದೇಶಾಂಗ ಮಂತ್ರಿ ಆಗಿ ಮಾಡಲಾಯಿತು. ಹೀಗೆ ಅಧಕ್ಷರಿಗೆ ಉತ್ತಮ ಖಾತೆಗಳು ದೊರತಾಗ ಅನುಭವದ ಕೊರತೆಯಿಂದ ಆಡಳಿತ ಯಂತ್ರ ಕುಸಿದು ಬೀಳುವ ಸಂಭವ ಹೆಚ್ಚಾಗಿ ಕಂಡುಬರುತ್ತದೆ.

3. ಮಂತ್ರಿಮಂಡಲದ ಪುನರ್ ರಚನೆ:

ಸಾಮಾನ್ಯವಾಗಿ ಪ್ರಧಾನಮಂತ್ರಿಯೇ ಮಂತ್ರಿ ಮಂಡಲದ ಕೇಂದ್ರ ಬಿಂದುವಾಗಿದ್ದು ಆಕಾಶದಲ್ಲಿ ಪ್ರಜ್ವಲಿಸುತ್ತಿರುವ ನಕ್ಷತ್ರಗಳ ನಡುವಿನ ಚಂದ್ರನಂತೆ ಕಂಗೊಳಿಸುತ್ತಾನೆ ಎಂದು ಹೇಳಬಹುದು. ಹೀಗಾಗಿ ಮಂತ್ರಿಮಂಡಲದ ಜವಾಬ್ದಾರಿಯನ್ನು ಆತನೇ ಹೊತ್ತುಕೊಂಡಿರುತ್ತಾನೆ. ಮಂತ್ರಿ ಮಂಡಳದ ರಚನೆಯಿಂದ ಹಿಡಿದು ಮಂತ್ರಿಗಳನ್ನು ವಜಾಗೊಳಿಸುವ ಸಂಪೂರ್ಣ ಅಧಿಕಾರ ಅವನ ಹಿಡಿತದಲ್ಲಿ ಇರುತ್ತದೆ. ಅಸಮರ್ಥತೆ ಭ್ರಷ್ಟಾಚಾರ, ಅವಿಧೇಯತೆ ಮುಂತಾದ ಕಾರಣಗಳಿಂದ ಮಂತ್ರಿಯೊಬ್ಬನಿಂದ ರಾಜೀನಾಮೆ ಪಡೆದು ಆ ಖಾತೆಯನ್ನು ಬೇರೊಬ್ಬನಿಗೆ ವಹಿಸಿಕೊಡುಬಹುದು. ಜೊತೆಗೆ ಮಂತ್ರಿಗಳ ಖಾತೆಯನ್ನು ಅದಲು ಬದಲು ಮಾಡುವ ಅಧಿಕಾರ ಪ್ರಧಾನಮಂತ್ರಿಗೆ ಇದೆ.

4. ಸಚಿವ ಸಂಪುಟದ ಮುಖ್ಯಸ್ಥ:

ಕೇಂದ್ರ ಶಾಸಕಾಂಗದ ಸಂಪುಟದ ಮಂತ್ರಿಗಳನ್ನು ಸಚಿವರು ಎಂದು ಕರೆಯುತ್ತಾರೆ. ಈ ಸಚಿವರನ್ನು ಒಳಗೊಂಡ ಸಮಿತಿಯನ್ನು ಸಚಿವ ಸಂಪುಟ ಸಮಿತಿ ಎಂದು ಹೆಸರಿಸಲಾಗಿದೆ. ಈ ಸಚಿವ ಸಂಪುಟದ ಸಮಿತಿಯ ಸಭೆಯನ್ನು ಪ್ರಧಾನಮಂತ್ರಿಗಳ ನೇತೃತ್ವದಲ್ಲಿ ಏರ್ಪಡಿಸಲಾಗುತ್ತದೆ. ಸಚಿವ ಸಂಪುಟವನ್ನು ಕರೆಯುವ ಮತ್ತು ಸಭೆಯಲ್ಲಿ ನಡೆದ ತೀರ್ಮಾನಗಳನ್ನು ಪ್ರಕಟಿಸುವ ಅಂತಿಮ ಅಧಿಕಾರ ಪ್ರಧಾನಿಗಿದೆ. ಸಚಿವರ ಕಾರ್ಯ ವೈಖರಿಯನ್ನು ಹೊಗಳುವ ಮತ್ತು ದೋಷಗಳು ಕಂಡು ಬಂದಾಗ ತಿದ್ದುಪಡಿ ಮಾಡಿಕೊಳ್ಳುವಂತೆ ಸೂಚಿಸುವ ಕೆಲಸವನ್ನು ಪ್ರಧಾನಿ ಮಾಡಬೇಕಾಗುತ್ತದೆ.

 5. ಸರ್ಕಾರದ ಮುಖಂಡ:

ಕೇಂದ್ರದಲ್ಲಿ ಅಧಿಕಾರದಲ್ಲಿರುವ ಯಾವುದೇ ಪಕ್ಷದ ಸರ್ಕಾರವಿದ್ದರೂ ಅದು ಜನರ ಮತ್ತು ವಿರೋಧ ಪಕ್ಷಗಳ ವಿಮರ್ಶೆಗೆ ಒಳಗಾಗಬೇಕಾಗುತ್ತದೆ. ಸರ್ಕಾರದ ವಿವಿಧ ಯೋಜನೆಗಳು, ಜನರಿಗೆ ಅದು ಕೊಡುವ ಭರವಸೆಗಳು ಹಾಗೂ ಕೈಗೆತ್ತಿಕೊಳ್ಳುವ ಕಾರ್ಯಗಳಿಂದ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಳ್ಳುತ್ತಿರುವುದನ್ನು ಯಾವುದೇ ವಿರೋಧ ಪಕ್ಷವಾದರೂ ಅದನ್ನು ಸಹಿಸುವುದಿಲ್ಲ. ಹೀಗಾಗಿ ಪ್ರಧಾನಿಯಾದವರು ಸಂಸತ್ತಿನ ಒಳಗೆ ಮತ್ತು ಹೊರಗೆ ಸರ್ಕಾರ ಕೈಗೊಂಡಿರುವ ತೀರ್ಮಾನಗಳನ್ನು ತರ್ಕಬದ್ದ ವಿವರಣೆಗಳ ಮೂಲಕ ಉತ್ತರಗಳನ್ನು ನೀಡುತ್ತಾ ಸರ್ಕಾರದ ಸಾಧನೆಗಳನ್ನು ಸಮರ್ಥಿಸಿಕೊಳ್ಳಬೇಕು. 17 ವರ್ಷಗಳ ಅಧಿಕಾರ ಅವಧಿಯಲ್ಲಿ ಜವಹರಲಾಲ್‌ ನೆಹರು ಯೋಜನಾ ಪದ್ಧತಿಯ ಮೂಲಕ ದೇಶದಲ್ಲಿ ಏಕತೆಯನ್ನು ತರಲು ಪ್ರಯತ್ನಿಸಿದರೆ, ಕೇವಲ 18 ತಿಂಗಳ ಅವಧಿಯಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ದೇಶವನ್ನು ಪ್ರಗತಿಯತ್ತ ಕೊಂಡೊಯ್ಯಲು ಪ್ರಯತ್ನಿಸಿದರು. 1964 ರಲ್ಲಿ ಇಂದಿರಾಗಾಂಧಿ 14 ಬ್ಯಾಂಕುಗಳ ರಾಷ್ಟ್ರೀಕರಣಗೊಳಿಸಿದರು. ಗ್ರಾಮೀಣಾಭಿವೃದ್ಧಿಗೆ ಬುನಾದಿ ಹಾಕಿದವರು. ಪಿ ವಿ ನರಸಿಂಹರಾವ್. 1998ರಲ್ಲಿ ಪೋಕರಾನ್‌ ಮರುಭೂಮಿಯಲ್ಲಿ ಅಣುಸ್ಫೋಟಕ್ಕೆ ಅನುಮತಿ ನೀಡಿದವರು ವಾಜಪೇಯಿ.

 6. ಹೊಂದಾಣಿಕೆ ಮತ್ತು ಮೇಲ್ವಿಚಾರಣೆ:

 ಸರ್ಕಾರದ ಆಡಳಿತ ಯಂತ್ರ ಸುಗಮವಾಗಿ ನಡೆಯುವಲ್ಲಿ ಹಲವಾರು ತೊಂದರೆ ತಾಪತ್ರೆಯಗಳು ಕಂಡುಬರುತ್ತವೆ. ಹೀಗಾಗಿ ಸರ್ಕಾರದ ವಿವಿಧ ಇಲಾಖೆಗಳ ಕಾರ್ಯಗಳನ್ನು ಒಂದುಗೂಡಿಸಿ ಆಡಳಿತವನ್ನು ನಡೆಸಿಕೊಂಡು ಹೋಗುವಲ್ಲಿ ಪ್ರಧಾನಮಂತ್ರಿಯ ಪಾತ್ರ ಹಿರಿದಾಗಿದೆ. ಜೊತೆಗೆ ಅದರಲ್ಲಿ ಅವರ ಸಾಮರ್ಥ್ಯವೂ ಅಡಗಿದೆ. ಪ್ರಧಾನಮಂತ್ರಿ ಮಂತ್ರಿ ಮಂಡಲದ ಒಂದು ತಂಡವನ್ನು ಆಯ್ದುಕೊಂಡ ನಂತರ ಆ ತಂಡವು ವಿಚಲಿತವಾಗದಂತೆ ಅದನ್ನು ಹಾಗೆ ಉಳಿಸಿಕೊಂಡು ಹೋಗಬೇಕು. ಸರ್ಕಾರದ ಗುರಿ ಮತ್ತು ಉದ್ದೇಶಗಳನ್ನು ಕಾಪಾಡುವ ಸಲುವಾಗಿ ಮಂತ್ರಿ ಮಂಡಲದ ನಡುವೆ ಸಾಕಷ್ಟು ಭಿನ್ನಾಭಿಪ್ರಾಯಗಳು ಕಂಡುಬರುತ್ತವೆ. ಆಗ ಪ್ರಧಾನಮಂತ್ರಿ ಮಧ್ಯಪ್ರವೇಶಸಿ ಮಾತುಕತೆಗಳ ಮೂಲಕ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಹಿಡಿಯಬೇಕು. ಇಡೀ ಮಂತ್ರಾಲಯದ ಮೇಲೆ ಪ್ರಧಾನಿಗೆ ಹಿಡಿತವಿರುವ ಕಾರಣ ಅದರ ಮೇಲ್ವಿಚಾರಣೆಯ ಜವಾಬ್ದಾರಿ ಅವರಿಗಿದ್ದು ಕಾಲಕಾಲಕ್ಕೆ ಅದರ ಪರಿಶೀಲನೆ ಮಾಡಿ ಸರಿದಾರಿಗೆ ತರಬೇಕು. ಮಂತ್ರಿಗಳು ತಮ್ಮ ಇಲಾಖೆಯನ್ನು ಎಷ್ಟೇ ಮತುವರ್ಜಿ ವಹಿಸಿ ನೋಡಿಕೊಳ್ಳುತ್ತಿದ್ದರೂ ಸರಿಯಾದ ಮೇಲ್ವಿಚಾರಣೆ ಇಲ್ಲದೆ ಹೋದರೆ ನಾವಿಕ ನಿಲ್ಲದ ಹಡಗಿನಂತಾಗುತ್ತದೆ. ಆಡಳಿತ ಯಂತ್ರ ಸುಗಮವಾಗಿ ನಡೆಯಲು ಪ್ರಧಾನಿ ಆಗಾಗ ಅವರ ಮೇಲೆ ನಿಗಾ ಇಡಬೇಕಾದುದು ಅಗತ್ಯವಾಗಿದೆ. ಯಾವುದಾದರು ಇಲಾಖೆಯ ಆಡಳಿತದಲ್ಲಿ ದೋಷ ಕಂಡು ಬಂದರೆ ಕೂಡಲೇ ಮಧ್ಯಪ್ರವೇಶಿಸಿ ದೋಷ ನಿವಾರಣೆಗೆ ಸಲಹೆ ನೀಡಬೇಕು. ಅದು ಪ್ರಧಾನಿಯ ಮುಖ್ಯ ಕೆಲಸವಾಗಿದೆ.

7. ಪ್ರಧಾನ ಮಂತ್ರಿ ಮತ್ತು ರಾಷ್ಟ್ರಪತಿ:

ಪ್ರಧಾನ ಮಂತ್ರಿ ರಾಷ್ಟ್ರಪತಿ ಹಾಗೂ ಮಂತ್ರಿಮಂಡಲದ ನಡುವಿನ ಕೊಂಡಿಯಂತೆ ಕಾರ್ಯನಿರ್ವಹಿಸುತ್ತಾರೆ. ಸಂವಿಧಾನದ 78ನೇ ವಿಧಿಯ ಅನ್ವಯ ಮಂತ್ರಿ ಮಂಡಲ ತೆಗೆದುಕೊಂಡ ತೀರ್ಮಾನಗಳನ್ನು ಪ್ರಧಾನಿ ರಾಷ್ಟ್ರಪತಿಗೆ ತಿಳಿಸಬೇಕು. ಮಂತ್ರಿಯೊಬ್ಬರು ವೈಯಕ್ತಿಕವಾಗಿ ತೆಗೆದುಕೊಂಡ ನಿರ್ಧಾರಗಳನ್ನು ಮಂತ್ರಿಮಂಡಲ ಚರ್ಚೆ ಮಾಡಬೇಕೆಂದು ರಾಷ್ಟ್ರಪತಿ ಸಲಹೆ ನೀಡಿದರೆ. ಪ್ರಧಾನಿ ಅಂತಹ ತೀರ್ಮಾನಗಳನ್ನು ಮಂತ್ರಿಮಂಡಲದ ಮುಂದೆ ತರಬೇಕು. ರಾಷ್ಟ್ರಪತಿಗಳು ಸಂವಿಧಾನದ ರಕ್ಷಕರಾಗಿರುವುದರಿಂದ ಮಂತ್ರಿಮಂಡಲ ಸಂವಿಧಾನಕ್ಕನುಗುಣವಾಗಿ  ಕೆಲಸ ನಿರ್ವಹಿಸಬೇಕು ಎಂಬುದು ಅವರ ಆಶಯವಾಗಿದೆ. ಈ ಕಾರಣದಿಂದ ಪ್ರಧಾನಿ ಹಾಗೂ ರಾಷ್ಟ್ರಪತಿಗಳ ನಡುವೆ ಪರಸ್ಪರ ಹೊಂದಾಣಿಕೆ ಇರಬೇಕು. ಸಾಮಾನ್ಯವಾಗಿ ವಾರಕ್ಕೊಮ್ಮೆ ಅಥವಾ ಎರಡು ವಾರಕ್ಕೊಮ್ಮೆ ಪ್ರಧಾನಮಂತ್ರಿ ರಾಷ್ಟ್ರಪತಿಗಳನ್ನು ಭೇಟಿಯಾಗುತ್ತಾರೆ.

ಜವಹರಲಾಲ್‌ ನೆಹರು ಅವರು ರಾಷ್ಟ್ರಪತಿ ಅವರನ್ನು ಪ್ರತಿ ಸೋಮವಾರ ಮತ್ತು ಮಂತ್ರಿಮಂಡಲದ ಸದಸ್ಯರು ತಿಂಗಳಿಗೊಮ್ಮೆ ರಾಷ್ಟ್ರಪತಿಯನ್ನು ಭೇಟಿ ಮಾಡುತ್ತಿದ್ದರು. ಶಾಸ್ತ್ರೀಯವರು ಎರಡು ವಾರಕ್ಕೊಮ್ಮೆ ಭೇಟಿ, ಹಾಗೆಯೇ ದೇಸಾಯಿ ಮತ್ತು ಇಂದಿರಾಗಾಂಧಿ ಇದನ್ನೇ ಮುಂದುವರಿಸಿಕೊಂಡು ಬಂದರು. ಆದರೆ ರಾಜೀವ್ ಗಾಂಧಿ ಜೇಲ್‌ಸಿಂಗರನ್ನು ಭೇಟಿ ಮಾಡುವ ಸಂಪ್ರದಾಯವನ್ನು ಮುಂದುವರಿಸಲಿಲ್ಲ. ಆರ್ ವೆಂಕಟರಾಮನ್ ರಾಷ್ಟ್ರಪತಿ ಆದಾಗ ರಾಜೀವ್ ಗಾಂಧಿ ಆಗಾಗ ರಾಷ್ಟ್ರಪತಿಗಳನ್ನು ಭೇಟಿ ಮಾಡುತ್ತಿದ್ದರು. ನಂತರ ವಾಜಪೇಯಿ ಮತ್ತು ಮನಮೋಹನ್ ಸಿಂಗರ ಕಾಲದಲ್ಲೂ ರಾಷ್ಟ್ರಪತಿ ಭೇಟಿ ಮುಂದುವರೆಯಿತು.

8.  ಲೋಕಸಭೆಯ ವಿಸರ್ಜನಾಧಿಕಾರಗಳು:

ಪ್ರಧಾನಮಂತ್ರಿಯ ಇಚ್ಛೆಯ ಮೇರೆಗೆ ಲೋಕಸಭಾಸದಸ್ಯರು ಲೋಕಸಭೆಯಲ್ಲಿರುತ್ತಾರೆ. ಏಕೆಂದರೆ ಅವಧಿ ಮುನ್ನವೇ ಪ್ರಧಾನಮಂತ್ರಿಯು ಲೋಕಸಭೆಯನ್ನು ವಿಸರ್ಜಿಸಬಹುದು. ಹಾಗೆ ಮಾಡಲು ಅವರು ರಾಷ್ಟ್ರಪತಿಗಳಿಗೆ ಶಿಫಾರಸ್ಸು ಮಾಡಬಹುದು ಕ್ಯಾಬಿನೆಟ್‌ನಲ್ಲಿ ತೀವ್ರ ಭಿನ್ನಾಭಿಪ್ರಾಯಗಳು ತಲೆದೂರಿದಾಗ ಅಥವಾ ಸರ್ಕಾರದ ಮಸೂದೆಗಳು ಸಂಸತ್ತಿನಲ್ಲಿ ಸೋಲನ್ನು ಅನುಭವಿಸಿದಾಗ ಪ್ರಧಾನಮಂತ್ರಿ ಲೋಕಸಭೆಯ ವಿಸರ್ಜನೆಗೆ ರಾಷ್ಟ್ರಪತಿಗಳಿಗೆ ಶಿಫಾರಸ್ಸು ಮಾಡಬಹುದು. ಉದಾಹರಣೆ ಲೋಕಸಭೆಯಲ್ಲಿ ವಿಶ್ವಾಸ ಮತ ಕಳೆದುಕೊಂಡ ವಾಜಪೇಯಿ ಸರಕಾರವು 12ನೇ ಲೋಕಸಭೆಯ ವಿಸರ್ಜನೆಗಾಗಿ ರಾಷ್ಟ್ರಪತಿಗೆ ಶಿಫಾರಸ್ಸು ಮಾಡಿತು. 2004ರಲ್ಲಿ ಚುನಾವಣೆಯಲ್ಲಿ ವಾಜಪೇಯಿ ಸರ್ಕಾರವು ಅವಧಿಗೆ ಮುನ್ನವೇ ಲೋಕಸಭೆಯ ವಿಸರ್ಜನೆಗೆ ಶಿಫಾರಸ್ಸು ಮಾಡಿತು.

9. ನೇಮಕಾತಿ ಪ್ರಾಧಿಕಾರ:

 ರಾಷ್ಟ್ರಪತಿಗಳು ನಾಗರಿಕ, ಸೈನಿಕ, ನ್ಯಾಯಿಕ ಹಾಗೂ ರಾಯಭಾರಿ ಕ್ಷೇತ್ರಗಳ ಉನ್ನತ ಸ್ಥಾನಗಳಿಗೆ ನೇಮಕಾತಿ ಮಾಡುವ ಅಧಿಕಾರವನ್ನು ಹೊಂದಿದ್ದರೂ ಪ್ರಧಾನಮಂತ್ರಿಗಳ ಶಿಫಾರಸ್ಸು ಇಲ್ಲದೆ ಅವರು ಮುಂದುವರೆಯುವಂತಿಲ್ಲ. ಮುಖ್ಯ ಚುನಾವಣಾ ಅಧಿಕಾರಿಗಳು, ರಾಜ್ಯಪಾಲರು, ರಕ್ಷಣಾ ಬಲಗಳ ಮುಖ್ಯಸ್ಥರು, ಉಚ್ಛ ಹಾಗೂ ಸರ್ವೋಚ್ಚ ನ್ಯಾಯಾಲಯಗಳ ನ್ಯಾಯಾಧೀಶರು, ರಾಯಭಾರಿಗಳು  ಮುಂತಾದವರನ್ನು  ನೇಮಕ ಮಾಡಲು ಪ್ರಧಾನಿಗಳು ರಾಷ್ಟ್ರಪತಿಗಳಿಗೆ ಶಿಫಾರಸ್ಸು ಮಾಡುತ್ತಾರೆ.

10. ವಿಶೇಷ ಅಧಿಕಾರಗಳು:

ಪ್ರಧಾನಮಂತ್ರಿಗಳು ಕೇಂದ್ರ ಸಂಸತ್ತಿನ ಮುಖ್ಯಸ್ಥರಾಗಿರುವ ಕಾರಣ ವಿದೇಶಾಂಗ ವ್ಯವಹಾರ, ರಾಷ್ಟ್ರ ರಕ್ಷಣೆ ಮತ್ತು ಆರ್ಥಿಕ ವಿಷಯಗಳಲ್ಲಿ ಅವರಿಗೆ ಸಂಪೂರ್ಣ ಅಧಿಕಾರವಿರುತ್ತದೆ. ಪ್ರಧಾನ ಮಂತ್ರಿ ಆಡುವ ಪ್ರತಿಯೊಂದು ಮಾತುಗಳು ಹಾಗೂ ಮಾಡುವ ಪ್ರತಿ ಕಾರ್ಯಗಳನ್ನು ಭಾರತ ದೇಶ ಅಷ್ಟೇ ಅಲ್ಲದೆ ಇಡೀ ವಿಶ್ವವೇ ಸೂಕ್ಷ್ಮವಾಗಿ ಗಮನಿಸುತ್ತಿರುತ್ತದೆ. ಹಾಗಾಗಿ ಪ್ರಧಾನಿಯವರು ಕಣ್ಣಲ್ಲಿ ಕಣ್ಣಾಗಿ ನಡೆದುಕೊಳ್ಳಬೇಕಾಗುತ್ತದೆ. ಉದಾಹರಣೆ: ಪಂಚಶೀಲ ಒಪ್ಪಂದ ಮಾಡಿಕೊಳ್ಳುವಾಗ ನೆಹರು ಅವರ ಪಾತ್ರ, ತಾಸ್ಕೇಂಡ್ ಒಪ್ಪಂದದಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಪಾತ್ರ, ಭಾರತ ಸೋವಿಯತ್ ಒಪ್ಪಂದದಲ್ಲಿ ಇಂದಿರಾಗಾಂಧಿಯವರ ಪಾತ್ರ, ಭಾರತ ಶ್ರೀಲಂಕಾ ಒಪ್ಪಂದದಲ್ಲಿ ರಾಜೀವ್ ಗಾಂಧಿ ಅವರ ಪಾತ್ರ, ಅವಿಸ್ಮರಣೀಯವಾಗಿದೆ. ಇನ್ನೂ ರಕ್ಷಣಾ ವಿಷಯಕ್ಕೆ ಸಂಬಂಧಿಸಿದಂತೆ ಪ್ರಧಾನ ಮಂತ್ರಿಗಳು ರಕ್ಷಣಾ ಸಚಿವರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದು ರಾಷ್ಟ್ರ ರಕ್ಷಣಾ ವಿಷಯದಲ್ಲಿ ಧಕ್ಕೆ ಉಂಟಾದರೆ ತಕ್ಷಣ ಕಾರ್ಯ ಮಗ್ನರಾಗುತ್ತಾರೆ. ಉದಾಹರಣೆ 1965 ಮತ್ತು 1971ರ ಯುದ್ಧಗಳಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿ ಮತ್ತು ಇಂದಿರಾಗಾಂಧಿ ಅನುಕ್ರಮವಾಗಿ ನಾಯಕತ್ವ ವಹಿಸಿದ್ದರು. 1971ರ ಸಮಯದಲ್ಲಿ ಇಂದಿರಾಗಾಂಧಿ ಯುದ್ಧ ವೆಚ್ಚಕ್ಕಾಗಿ ಜನರಿಂದ ಹಣ, ಬಟ್ಟೆ ಹಾಗೂ  ಧಾನ್ಯಗಳನ್ನು ಸಂಗ್ರಹಿಸಿದರು.

ಪ್ರಧಾನ ಮಂತ್ರಿ ಆರ್ಥಿಕ ಹಾಗೂ ಹಣಕಾಸಿನ ವಿಷಯಗಳಲ್ಲಿ ವಿಶೇಷ ತಜ್ಞರಲ್ಲದಿದ್ದರೂ ಆರ್ಥಿಕ ಬೆಳವಣಿಗೆಗಳಾದ ಬೆಲೆ ಏರಿಕೆ, ಉತ್ಪಾದನೆ, ಕೈಗಾರಿಕಾ ಅಭಿವೃದ್ಧಿ ಇತ್ಯಾದಿ ವಿಷಯಗಳ ಬಗ್ಗೆ ಸಾಕಷ್ಟು ಗಮನಹರಿಸುತ್ತಾರೆ. ಉದಾಹರಣೆ 20 ಅಂಶಗಳ ಕಾರ್ಯಕ್ರಮ ರೂಪಗೊಳ್ಳಲು ಇಂದಿರಾಗಾಂಧಿ ಕಾರಣರಾದರೆ, ಭಾರತದ ಅರ್ಥವ್ಯವಸ್ಥೆಯನ್ನು ಉದಾರಿಕರಣದ ಮೂಲಕ ವಿಶ್ವ ಆರ್ಥಿಕ ವ್ಯವಸ್ಥೆಯೊಡನೆ ಸೇರಿಸುವಲ್ಲಿ ಪಿ.ವಿ ನರಸಿಂಹ ರಾವ್ ಕಾರಣರಾದರು. ಹೀಗಾಗಿ ಪ್ರಧಾನಮಂತ್ರಿ ರಾಷ್ಟ್ರದ ಪ್ರಮುಖ ಆಂತರಿಕ ಹಾಗೂ ಬಾಹ್ಯ ನೀತಿಗಳ ಉಗಮ ಬಿಂದು ಎಂದು ನ್ಯಾಯಮೂರ್ತಿ ಕೃಷ್ಣ ಅಯ್ಯರ್ ಅಭಿಪ್ರಾಯಪಟ್ಟಿದ್ದಾರೆ.

11. ಅಂತರಾಷ್ಟ್ರೀಯ ಸಂಬಂಧಗಳ ವಕ್ತಾರ:

ಪ್ರಧಾನಮಂತ್ರಿ ಅಂತರಾಷ್ಟ್ರೀಯ ಸಂಬಂಧಗಳಲ್ಲಿ ದೇಶವನ್ನು ಪ್ರತಿನಿಧಿಸುತ್ತಾರೆ. ಕಾಮನ್‌ವೆಲ್ತ್ ಆಫ್ ನೇಷನ್ಸ್, ದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಘ, ಬ್ರಿಕ್ಸ್ ಹಾಗೂ ವಿಶ್ವಸಂಸ್ಥೆ ಮುಂತಾದ ಅಂತರಾಷ್ಟ್ರೀಯ ಸಂಸ್ಥೆಗಳ ಸಭೆಗಳಲ್ಲಿ ಪ್ರಧಾನಿ ಖುದ್ದಾಗಿ ದೇಶದ ಪರವಾಗಿ ಭಾಗವಹಿಸುತ್ತಾರೆ. ಸಂಬಂಧಗಳನ್ನು ಗಟ್ಟಿಗೊಳಿಸಲು ವಿದೇಶಗಳಿಗೆ ಭೇಟಿ ನೀಡುತ್ತಾರೆ. ವಿದೇಶಿ ನಾಯಕರು ಭಾರತಕ್ಕೆ ಆಗಮಿಸಿದರೆ ಅವರನ್ನು ಆದರದಿಂದ ಸ್ವಾಗತಿಸುತ್ತಾರೆ. ವಿದೇಶಿ ರಾಯಭಾರಿಗಳೊಂದಿಗೆ ಯಾವಾಗಲೂ ನಿಕಟ ಸಂಪರ್ಕದಲ್ಲಿ ಇರುತ್ತಾರೆ.

ಉಪಸಂಹಾರ

ಒಟ್ಟಾರೆ, ಪ್ರಧಾನಮಂತ್ರಿ ಭಾರತದ ಆಡಳಿತ ವ್ಯವಸ್ಥೆಯ ನಡುಬಿಂದು ಎಂದು ಹೇಳಬಹುದು. ಮಂತ್ರಿಮಂಡಲದ ರಚನೆ, ನೀತಿ ರೂಪಣೆ, ಸಂಸತ್ತಿನ ನಾಯಕತ್ವ ಮತ್ತು ಅಂತರಾಷ್ಟ್ರೀಯ ಪ್ರತಿನಿಧಿತ್ವ ಎಲ್ಲವೂ ಅವರ ಜವಾಬ್ದಾರಿಯಾಗಿದೆ. ಸಮರ್ಥ ಹಾಗೂ ದೃಢ ನಾಯಕತ್ವವಿದ್ದಾಗ ಮಾತ್ರ ದೇಶವು ಶಾಂತಿ, ಪ್ರಗತಿ ಮತ್ತು ಸ್ಥಿರತೆಯನ್ನು ಸಾಧಿಸಬಹುದು. ಆದ್ದರಿಂದ ಪ್ರಧಾನಮಂತ್ರಿಯ ಅಧಿಕಾರಗಳು ಮತ್ತು ಕಾರ್ಯಗಳು ರಾಷ್ಟ್ರದ ಭವಿಷ್ಯವನ್ನು ನಿರ್ಧರಿಸುವಲ್ಲಿ ಪ್ರಮುಖವಾಗಿವೆ.

ತುರ್ತು ಪರಿಸ್ಥಿತಿ ಘೋಷಣಾ ಅಧಿಕಾರಗಳು

ತುರ್ತು ಪರಿಸ್ಥಿತಿ ಘೋಷಣಾ ಅಧಿಕಾರಗಳು

ʻʻದೇಶದ ಸುವ್ಯವಸ್ಥಿತ ಹಾಗೂ ಶಾಂತಿಯುತ ಆಡಳಿತಕ್ಕೆ ಭಂಗ ಉಂಟಾಗುವ ಸನ್ನಿವೇಶವನ್ನು ತುರ್ತು ಪರಿಸ್ಥಿತಿ ಎಂದು ಕರೆಯಲಾಗಿದೆ.ʼʼ ಇಂತಹ ಸನ್ನಿವೇಶವನ್ನು ಸಮರ್ಥವಾಗಿ ಎದುರಿಸಿ ದೇಶವನ್ನು ಸುಸ್ಥಿರವಾಗಿಡಲು ರಾಷ್ಟ್ರಪತಿಗಳು ಮೂರು ಬಗೆಯ ತುರ್ತುಪರಿಸ್ಥಿತಿಗಳನ್ನು ಘೋಷಿಸುತ್ತಾರೆ. ಅವುಗಳು ಈ ಕೆಳಗಿನಂತಿವೆ:

ರಾಷ್ಟ್ರೀಯ ತುರ್ತು ಪರಿಸ್ಥಿತಿ: (National Emergency)

 ಸಂವಿಧಾನದ 352ನೇ ವಿಧಿಯ ಪ್ರಕಾರ ರಾಷ್ಟ್ರಪತಿಗಳು, ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಘೋಷಿಸುವರು. ರಾಷ್ಟ್ರಪತಿಗಳು ದೇಶದ ಭದ್ರತೆಗೆ ಬಾಹ್ಯ ಆಕ್ರಮಣ ಅಥವಾ ಆಂತರಿಕ ದಂಗೆಗಳ ಕಾರಣಗಳಿಂದ ಭಯವಿದೆ ಎಂದುಕಂಡುಬಂದರೆ. ಅವರು ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಘೋಷಿಸುತ್ತಾರೆ. ತುರ್ತು ಪರಿಸ್ಥಿತಿ ಘೋಷಣೆಯಾದ 30 ದಿನದೊಳಗೆ ಸಂಸತ್ತಿನ ಉಭಯ ಸದನಗಳ ೨/೩  ರಷ್ಟು ಸದಸ್ಯರು ಹಾಜರಿದ್ದು ಅದಕ್ಕೆ ಅಂಕಿತವನ್ನು ಹಾಕಬೇಕು. ಇಲ್ಲವಾದರೆ ಜಾರಿಯಲ್ಲಿದ್ದ ತುರ್ತು ಪರಿಸ್ಥಿತಿ ಸ್ಥಗಿತಗೊಳ್ಳುತ್ತದೆ. ಸಂಸತ್ತಿನ ಅನುಮೋದನೆಗೊಂಡ ತುರ್ತುಪರಿಸ್ಥಿತಿಯು ಜಾರಿಗೆ ಬಂದ ದಿನದಿಂದ ಆರು ತಿಂಗಳವರೆಗೆ ಜಾರಿಯಲ್ಲಿರುತ್ತದೆ. ಆರು ತಿಂಗಳ ನಂತರವೂ ತುರ್ತುಪರಿಸ್ಥಿತಿ ಮುಂದುವರಿಯಬೇಕಾದರೆ  ತುರ್ತು ಪರಿಸ್ಥಿತಿ ಘೋಷಣೆಯನ್ನು ಮರಳಿ ಅನುಮೋದಿಸಬೇಕಾಗುತ್ತದೆ.

ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ರದ್ದುಗೊಳಿಸಲು ಲೋಕಸಭೆಯ ಒಟ್ಟು ೧/೧೦  ರಷ್ಟು ಸದಸ್ಯರು ಲಿಖಿತ ರೂಪದಲ್ಲಿ ನೋಟಿಸ್ ಅನ್ನು ಅಧಿವೇಶನದ ಸಮಯದಲ್ಲಿ ಸ್ಪೀಕರ್ ಅವರಿಗೆ ಅಥವಾ ಅಧಿವೇಶನ ಮುಂದೂಡಿದಾಗ ರಾಷ್ಟ್ರಪತಿಗೆ ಕೊಡಬಹುದು. ಈ ನೋಟಿಸ್ ತಲುಪಿಸಿದ 14 ದಿನಗಳೊಳಗೆ ಲೋಕಸಭೆಯ ವಿಶೇಷ ಅಧಿವೇಶನ ಕರೆಯಬಹುದು. ತುರ್ತುಪರಿಸ್ಥಿತಿಯನ್ನು ರದ್ದುಗೊಳಿಸಬಹುದೆಂದು ಅಲ್ಪ ಬಹುಮತದಿಂದ ಲೋಕಸಭೆ ಒಪ್ಪಿದರೆ ಅದು ರದ್ದಾಗುತ್ತದೆ.

ರಾಷ್ಟ್ರೀಯ ತುರ್ತು ಪರಿಸ್ಥಿತಿ ಜಾರಿಯಲ್ಲಿರುವಾಗ ಕೇಂದ್ರ ಸರ್ಕಾರದ ಆಡಳಿತಾತ್ಮಕ ನಿರ್ಧಾರಗಳನ್ನು ರಾಜ್ಯ ಸರ್ಕಾರಗಳು ಪಾಲಿಸಬೇಕಾಗುತ್ತದೆ.

B.ರಾಜ್ಯ ತುರ್ತು ಪರಿಸ್ಥಿತಿ: (State Emergency)

ಭಾರತದ ಒಕ್ಕೂಟದ ಯಾವುದಾದರೂ ರಾಜ್ಯದಲ್ಲಿನ ಆಡಳಿತ ಯಂತ್ರ ಕುಸಿದು ಬಿದ್ದಾಗ ರಾಜ್ಯಪಾಲರ ವರದಿಯನ್ನು ಆಧರಿಸಿ ರಾಷ್ಟ್ರಪತಿಗಳು ಆ ರಾಜ್ಯದಲ್ಲಿ ಘೋಷಿಸುವ ತುರ್ತು ಪರಿಸ್ಥಿತಿಗೆ ರಾಜ್ಯ ತುರ್ತುಪರಿಸ್ಥಿತಿ ಎಂದು ಕರೆಯುತ್ತೇವೆ.ʼʼ ಈ ಬಗ್ಗೆ ತುರ್ತು ಪರಿಸ್ಥಿತಿಯನ್ನು ರಾಷ್ಟ್ರಪತಿ ಆಳ್ವಿಕೆ ಎಂದು ಹೇಳಲಾಗುತ್ತದೆ.ʼʼ ಸಂವಿಧಾನದ 356ನೇ ವಿಧಿಯಂತೆ ರಾಷ್ಟ್ರಪತಿಗಳು ರಾಜ್ಯ ತುರ್ತು ಪರಿಸ್ಥಿತಿಯನ್ನು ಘೋಷಿಸುವರು

 C .ಆರ್ಥಿಕ ತುರ್ತು ಪರಿಸ್ಥಿತಿ: (Econamic Emergency)

ದೇಶದ ಆರ್ಥಿಕ ಪರಿಸ್ಥಿತಿ ದುಸ್ಥಿತಿಗೆ ಒಳಗಾದಾಗ ರಾಷ್ಟ್ರಪತಿಗಳು ಘೋಷಿಸುವ ತುರ್ತು ಪರಿಸ್ಥಿತಿಯನ್ನು ಆರ್ಥಿಕ ತುರ್ತು ಪರಿಸ್ಥಿತಿ ಎಂದು ಕರೆಯುವರು.

ಉಪಸಂಹಾರ

ತುರ್ತು ಪರಿಸ್ಥಿತಿ ಘೋಷಣೆ ದೇಶದ ಆಡಳಿತವನ್ನು ಸುಸ್ಥಿರಗೊಳಿಸುವ ಮಹತ್ವದ ಉಪಕರಣವಾಗಿದೆ. ಆದರೆ ಇದರ ದುರುಪಯೋಗವು ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ಧಕ್ಕೆಯನ್ನುಂಟುಮಾಡಬಹುದು. ಆದ್ದರಿಂದ ಸಂವಿಧಾನದಲ್ಲಿ ನಿಗದಿಪಡಿಸಿದ ನಿಯಮಗಳು ಮತ್ತು ಸಂಸತ್ತಿನ ಮೇಲ್ವಿಚಾರಣೆ ಅಗತ್ಯವಾಗಿದೆ. ತುರ್ತು ಪರಿಸ್ಥಿತಿಯ ಸರಿಯಾದ ಅರಿವು ಪ್ರಜೆಯಾಗಿ ನಮ್ಮ ಕರ್ತವ್ಯವನ್ನು ಬಲಪಡಿಸುತ್ತದೆ.

ಸ್ಪೀಕರ್‌ನ ಅಧಿಕಾರ ಕಾರ್ಯಗಳು

ಸ್ಪೀಕರ್‌ನ ಅಧಿಕಾರ ಕಾರ್ಯಗಳು

ಸ್ಪೀಕರ್ ಎಂಬುದು ಕೇವಲ ಸ್ಥಾನವಲ್ಲ, ಅದು ಸಂಸತ್ತಿನ ಗೌರವದ ಪ್ರತೀಕವಾಗಿದೆ. ಸದನದ ಶಾಂತಿ, ಶಿಸ್ತು ಮತ್ತು ಸಮನ್ವಯವನ್ನು ಕಾಪಾಡುವಲ್ಲಿ ಸ್ಪೀಕರ್ ಪ್ರಮುಖ ಪಾತ್ರ ವಹಿಸುತ್ತಾರೆ. ಪ್ರಜಾಪ್ರಭುತ್ವದ ಯಶಸ್ಸು ಸ್ಪೀಕರ್ ಅವರ ನ್ಯಾಯಸಮ್ಮತ ಕಾರ್ಯನಿರ್ವಹಣೆಯ ಮೇಲೆ ಅವಲಂಬಿತವಾಗಿದೆ.

ಸ್ಪೀಕರ್ ನ ಕಾರ್ಯಗಳು ಈ ಕೆಳಗಿನಂತಿವೆ

  1. ಸ್ಪೀಕರ್ ಲೋಕಸಭೆಯ ಅಧಿವೇಶನದ ಅಧ್ಯಕ್ಷತೆಯನ್ನು ವಹಿಸಿ ಸದನದ ಕಲಾಪಗಳನ್ನು ನಿಯಮಾವಳಿಗನುಸಾರ  ನಡೆಯುವಂತೆ ನೋಡಿಕೊಳ್ಳುತ್ತಾರೆ. ವಿವಿಧ ವಿಷಯಗಳ ಚರ್ಚೆಗೆ ಸಮಯವನ್ನು ನಿಗದಿ ಮಾಡುತ್ತಾರೆ.
  2. ಸದನದಲ್ಲಿ ಯಾರು ಮಾತನಾಡಬೇಕು ಮತ್ತು ಎಷ್ಟು ಮಾತನಾಡಬೇಕು ಎಂಬುದನ್ನು ನಿರ್ಧರಿಸುವ ಅಧಿಕಾರ ಸ್ಪೀಕರ್ ಅವರಿಗೆ ಇರುತ್ತದೆ. ಜೊತೆಗೆ ಅನ್‌ಪಾರ್ಲಿಮೆಂಟರಿ ಪದಗಳನ್ನು ಪ್ರಯೋಗಿಸಿ ಮಾತನಾಡದಂತೆ ತಡೆಯುತ್ತಾರೆ.
  3. ಸದನದಲ್ಲಿ ನಿರ್ದಿಷ್ಟ ಹಾಜರಾತಿ ಇರದೆ ಹೋದರೆ ಸಭೆಯನ್ನು ಮುಂದೂಡುತ್ತಾರೆ. ಸಭೆಯಲ್ಲಿ ಗದ್ದಲ ಮತ್ತು ಕೋಲಹಲವಾದರೂ ಕೆಲವು ನಿಮಿಷಗಳವರೆಗೆ ಸಭೆಯನ್ನು ಮುಂದೂಡುತ್ತಾರೆ.
  4. ಲೋಕಸಭಾ ಸದಸ್ಯರು ಸ್ಪೀಕರ್ ಅವರ ಅನುಮತಿ ಮೇರೆಗೆ ಪ್ರಶ್ನೆ ಕೇಳುವುದು ಹಾಗೂ ಚರ್ಚೆನಡೆಯುವುದರ ಮೂಲಕ ನಿರ್ಣಯಗಳನ್ನು ಮತ್ತು ಮಸೂದೆಗಳನ್ನು ಮಂಡಿಸಬೇಕು.
  5. ಸದನದಲ್ಲಿ ಮೊದಲು ಚರ್ಚಿಸಬೇಕಾದ ವಿಷಯಗಳನ್ನು ಸ್ಪೀಕರ್ ತೀರ್ಮಾನಿಸುತ್ತಾರೆ. ಯಾವುದಾದರೂ ಮಸೂದೆ ಅದು ಹಣಕಾಸಿನ ಮಸೂದೆಯೋ ಅಥವಾ ಅಲ್ಲವೋ ಎಂಬುದನ್ನು ತೀರ್ಮಾನಿಸುವ ಅಂತಿಮ ಅಧಿಕಾರ ಅವರಿಗೆ ಇದೆ.
  6. ಸದನದಲ್ಲಿ ಶಿಸ್ತು, ಶಾಂತಿ ಹಾಗೂ ಸಂಯಮಗಳನ್ನು ಸ್ಪೀಕರ್ ಕಾಪಾಡುತ್ತಾರೆ. ಸದಸ್ಯರು ಒಂದು ವೇಳೆ ಅಶಿಸ್ತಿನಿಂದ ನಡೆದುಕೊಂಡರೆ ಅವರನ್ನು ಸದನದಿಂದ ಹೊರ ಹೋಗುವಂತೆ ಹೇಳುವ ಅಧಿಕಾರವನ್ನು ಸ್ಪೀಕರ್ ಪಡೆದಿದ್ದಾರೆ.
  7. ಸದನದಲ್ಲಿ ಚರ್ಚೆಯಾದ ಮಸೂದೆಯ ಪರ ವಿರೋಧ ಸಮಾನ ಮತಗಳು ಬಂದರೆ ಸ್ಪೀಕರ್ ತಮ್ಮ ಮತ(Casting Vote)ನ್ನು ಚಲಾಯಿಸಬಹುದು.
  8. ಅಸಂಬದ್ಧ ಚರ್ಚೆಗಳನ್ನು ಕಲಾಪ ಪಟ್ಟಿಯಿಂದ ತೆಗೆದು ಹಾಕುವ ಅಧಿಕಾರವು ಸ್ಪೀಕರಿಗೆ ಇದೆ.
  9. ಸ್ಪೀಕರ್ ಅವರು ರೂಲ್ಸ್ ಕಮಿಟಿ ಮತ್ತು ಬಿಸಿನೆಸ್ ಅಡ್ವೆಸರಿ ಕಮಿಟಿಗಳ ಅಧ್ಯಕ್ಷರಾಗಿದ್ದು ಸಾರ್ವಜನಿಕ ಲೆಕ್ಕಪತ್ರ ಸಮಿತಿ, ಅಂದಾಜು ಸಮಿತಿ ಹಾಗೂ ಸಾರ್ವಜನಿಕ ಉದ್ಯಮ ಸಮಿತಿಗಳ ಅಧ್ಯಕ್ಷರುಗಳನ್ನು ಸ್ಪೀಕರ್ ಅವರೇ ನೇಮಿಸುತ್ತಾರೆ.
  10. ಸ್ಪೀಕರ್ ಸ್ಥಾನ ಶ್ರೇಷ್ಠವಾದದ್ದು ಹಾಗೂ ಗೌರವತವಾದುದು ಇವರು ಆಳುವ ಪಕ್ಷದಿಂದ ಆಯ್ಕೆಯಾದರೂ ಸದನದಲ್ಲಿ ಯಾವುದೇ ತಾರತಮ್ಯ ಮಾಡದೆ ಸದನದ ಗೌರವವನ್ನು ಕಾಪಾಡುತ್ತಾರೆ.
  11. ಲೋಕಸಭೆಯ ಸದಸ್ಯರ ಪಕ್ಷಾಂತರ ಕುರಿತಂತೆ ಪಕ್ಷಾಂತರ ನಿಷೇಧ ಕಾಯ್ದೆಯನ್ವಯ ಲೋಕಸಭಾ ಸದಸ್ಯರನ್ನು ಅನರ್ಹಗೊಳಿಸುವ ಅಧಿಕಾರ ಅಧ್ಯಕ್ಷನಿಗಿರುತ್ತದೆ.
  12. ಲೋಕಸಭಾ ಸದಸ್ಯರ ರಾಜೀನಾಮೆಯನ್ನು ಸ್ವೀಕರಿಸುವ ಹಾಗೂ ರಾಜೀನಾಮೆಯ ನೈಜತೆಯನ್ನು ಪರಿಶೀಲಿಸುವ ಅಧಿಕಾರಸ್ಪೀಕರ್‌ವರಿಗಿದೆ. 

ಉಪಸಂಹಾರ

ಈ ಹಿಂದೆ ಜೀವಿ ಮಾವಲಂಕರ್ ಮತ್ತು ವಿಠ್ಠಲ್‌ಬಾಯಿ ಪಟೇಲರು ಧೈರ್ಯ ಹಾಗೂ ದಿಟ್ಟತನದಿಂದ ನಡೆದುಕೊಂಡು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ಕ್ಲಿಪ್ಟನ್ ಬ್ರೌನ್ ಹೇಳಿದಂತೆ ಸ್ಪೀಕರ್ ಗಮನಿಸಬೇಕಾದ ವಿಷಯವೆಂದರೆ I am not  government man nar the opposition man and I am the house of the commons man ಸಭೆಯಲ್ಲಿ ಗೊಂದಲ ಹಾಗೂ ಉದ್ರೇಕಗಳುಂಟಾದರೆ ಸ್ಪೀಕರ್ ತಮ್ಮ ನಗುವಿನ ಹಾಗೂ  ಹಾಸ್ಯ ಚಟಾಕಿಗಳ ಮೂಲಕ ಸದಸ್ಯರನ್ನು ಸಮಾಧಾನಗೊಳಿಸಬೇಕು.