ಭಾರತದ ಜೀವ ವೈವಿಧ್ಯತೆಯ ಬಿಸಿ ತಾಣಗಳು

ಭಾರತದ ಜೀವ ವೈವಿಧ್ಯತೆಯ ಬಿಸಿ ತಾಣಗಳು

ಪ್ರಪಂಚದ 35 ಮಹಾಜೀವ ವೈವಿಧ್ಯತೆಯ ಬಿಸಿ ತಾಣಗಳಲ್ಲಿ ಭಾರತದ ಈ ಕೆಳಗಿನ ಎರಡು ವಲಯಗಳು ಸೇರಿವೆ. ಅವುಗಳೆಂದರೆ,

  1. ಪೂರ್ವ ಹಿಮಾಲಯ ಪರ್ವತ
  2. ಪಶ್ಚಿಮ ಘಟ್ಟ ಪ್ರದೇಶ

    1. ಪೂರ್ವ ಹಿಮಾಲಯ ಪರ್ವತ: (The eastern Himalayas)

    ಹಿಮಾಲಯ ಪರ್ವತವು ಭಾರತದ ವಿಶಿಷ್ಟವಾದ ನೆಲೆಯಾಗಿದೆ. ಇದು ಭಾರತದ ತಡೆಗೋಡೆಯಾಗಿದೆ. ಶತ್ರುಗಳಿಂದ ಭಾರತವನ್ನು ರಕ್ಷಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತಿದೆ.  ಹಿಮಾಲಯವು ಸಾವಿರಾರು ಜಾತಿಯ ಗಿಡಮೂಲಿಕೆ ಔಷಧಿ ಸಸ್ಯಗಳ ಅಗರವಾಗಿದೆ. ಬಿಸಿ ಗಾಳಿಯನ್ನು ತಡೆಗಟ್ಟಿ ಭಾರತಕ್ಕೆ ತಂಪಾದ ಗಾಳಿಯನ್ನು ನೀಡುತ್ತದೆ. ಸಿಂಧು, ಗಂಗಾ, ಬ್ರಹ್ಮಪುತ್ರ ನದಿಗಳ ಉಗಮ ಸ್ಥಾನವಾಗಿದೆ. ಇಂತಹ ಹಿಮಾಲಯವು ನೇಪಾಳ, ಟಿಬೆಟ್, ಭೂತಾನ್, ಸಿಕ್ಕಿಂ ಭಾರತದ ಈಶಾನ್ಯ ಹಾಗೂ ವಾಯುವ್ಯ ರಾಜ್ಯಗಳು ಹಾಗೂ ಚೀನಾ ದೇಶದ ಯಮನ್ ಪ್ರಾಂತ್ಯವನ್ನು ಒಳಗೊಂಡಿದೆ.

    ಹಿಮಾಲಯ  ಪ್ರದೇಶವು ಸುಮಾರು 9000 ಬಗೆಯ ಸಸ್ಯ ಪ್ರಭೇದಗಳನ್ನು ಹೊಂದಿದೆ. ಇವುಗಳಲ್ಲಿ 3500 ಸಸ್ಯ ಪ್ರಭೇದಗಳು ಸ್ಥಳೀಯ ಪ್ರಭೇದಗಳಾಗಿವೆ. ದಾಖಲಾತಿಯ ಪ್ರಕಾರ ಇಲ್ಲಿ 175 ಸರೀಸೃಪಗಳ ಪೈಕಿ 50 ಸ್ಥಳೀಯ ಸರಿಸೃಪಗಳಾಗಿವೆ.

    ಸಸ್ಯಗಳು: ಪೂರ್ವ ಹಿಮಾಲಯ ಪರ್ವತ ವಲಯವು ವೈವಿಧ್ಯಮಯವಾದ ಸಸ್ಯ ಪ್ರಭೇದಗಳಿಂದ ಕೂಡಿದೆ. ಇವುಗಳಲ್ಲಿ 55 ಪ್ರಭೇದಗಳು ಈ ಪ್ರದೇಶದ ಮೂಲ ಪ್ರಭೇದಗಳಾಗಿವೆ. ಇಲ್ಲಿ ಬೆಳೆಯುವ ಪಿಚರ್ ಪ್ಲಾಂಟ್ ಎಂಬ ಸಸ್ಯ ಈ ಪ್ರದೇಶದ ಸ್ಥಳೀಯ ವಂಶಕ್ಕೆ ಸೇರಿದ್ದಾಗಿದೆ. ಈ ಸ್ಥಳಗಳು ಸುಂದರವಾದ ಹೂಗಳನ್ನು ಬಿಡುತ್ತವೆ. ಹಾಗಾಗಿ ಇದನ್ನು ಪ್ರಭೇದದ ತೊಟ್ಟಿಲು ಎಂದು ಕರೆಯುತ್ತಾರೆ. ಇಲ್ಲಿ ಬೆಳೆಯುವ ಟಾಕ್ಸ್ಸ್ ಗಿಡ ಇದು ಟಾಕ್ಸಲ್ ಎಂಬ ಕ್ಯಾನ್ಸರ್ ಕಾಯಿಲೆಗೆ ಮೂಲ ಔಷಧಿಯಾಗಿದೆ. ಈ ಪ್ರದೇಶದ ಇನ್ನೊಂದು ಸ್ಥಳೀಯ ಸಸ್ಯ ಪ್ರಭೇದವೆಂದರೆ ಅದು ಚಹಾ. ಸುಮಾರು 40 ಸಾವಿರ ವರ್ಷಗಳಿಂದಲೂ ಚಹಾದ ಬಗ್ಗೆ ಇಲ್ಲಿನ ಜನರಿಗೆ ತಿಳಿದಿತ್ತು. ಚಹದ ವಿವಿಧ ಪ್ರಭೇದಗಳು ಸಹ ಇಲ್ಲಿ ಕಂಡುಬರುತ್ತವೆ. ಇದರ ಜೊತೆಗೆ ಸೆಣಬು ಹಾಗೂ ಖರ್ಜೂರದಂತಹ ಆರ್ಥಿಕ ಮಹತ್ವದ ಬೆಳೆ ಗಿಡಗಳ ವಿಕಾಸದಲ್ಲಿ ಪೂರ್ವ ಹಿಮಾಲಯವು ಮಹತ್ವದ ಪಾತ್ರ ವಹಿಸಿದೆ.

    ಪ್ರಾಣಿಗಳು:  ಪೂರ್ವ ಹಿಮಾಲಯದಲ್ಲಿಯೂ ವಿವಿಧ ರೀತಿಯ ಪ್ರಾಣಿ ಪ್ರಭೇದಗಳು ಕಂಡುಬರುತ್ತವೆ. ಭಾರತದ ಭೂ ವಲಯದ 63 ರಷ್ಟು ಸಸ್ತನಿಗಳು ಈ ವಲಯದಿಂದ ಇತರೆ ವಲಯಗಳಿಗೆ ವಲಸೆ ಹೋಗುತ್ತವೆ. ಇಲ್ಲಿ ನೂತನವಾಗಿ ಪ್ರಾಣಿ ಪ್ರಭೇದಗಳು ಸತತವಾಗಿ ಪತ್ತೆಯಾಗುತ್ತಿರುವುದು ಅತ್ಯಂತ ಸಂತಸದ ಸುದ್ದಿ. ಅರುಣಾಚಲ ಪ್ರದೇಶದಲ್ಲಿರುವ ನಾಮ್‌ಧಪ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯೊಳಗೆ ಸುಮಾರು 30 ಪ್ರಾಣಿ ಪ್ರಭೇದಗಳನ್ನು ಶೋಧಿಸಲಾಗಿದೆ. ಇದರಲ್ಲಿ ಅಪರೂಪದ ಹಾರುವ ಅಳಿಲು ಸಹ ಸೇರಿದೆ. ಅಸ್ಸಾಂ, ಭೂತಾನ್ ವಲಯದ ಗೋಲ್ಡನ್ ಲಾಂಗೂರ್ ಅತ್ಯಂತ ಸುಂದರವಾದ ಪ್ರಾಣಿಯಾಗಿದೆ.

     ಪಕ್ಷಿಗಳು:  ಪೂರ್ವ ಹಿಮಾಲಯವು ಹಲವಾರು ಪಕ್ಷಿ ವೈವಿಧ್ಯತೆಗೆ ಹೆಸರಾದ ತಾಣವಾಗಿದೆ. ಈಶಾನ್ಯ ವಲಯದಲ್ಲಿ ಭಾರತದ ಒಟ್ಟು ಪಕ್ಷಿ ಪ್ರಭೇದದ ಶೇಕಡ 60ರಷ್ಟು ಪ್ರಭೇದಗಳನ್ನು ಗುರುತಿಸಲಾಗಿದ್ದು ಇಲ್ಲಿ ಎರಡು ಬಗೆಯ ಹಲ್ಲಿಗಳ ವರ್ಗಗಳಿವೆ. ಸುಮಾರು 35 ಉರಗ ಸಂತತಿಗಳು, ಎರಡು ರೀತಿಯ ಆಮೆಗಳು ಈ ವಲಯದಲ್ಲಿಯೇ ಹುಟ್ಟಿ ಬೆಳೆದಿವೆ. ಭಾರತದ ಒಟ್ಟು 204 ಜೀವಿ ಪ್ರಭೇದಗಳಲ್ಲಿ ಸುಮಾರು 60 ಬಗೆಯ ಉಭಯವಾಸಿಗಳು ಈ ವಲಯದಲ್ಲಿ ಕಂಡುಬರುತ್ತವೆ. ಅರುಣಾಚಲ ಪ್ರದೇಶದ ನಾಮದಫ್ ವನ್ಯಜೀವಿ ರಾಷ್ಟ್ರೀಯ ಉದ್ಯಾನದಲ್ಲಿ ಒಂದು ಹೊಸ ಸಸ್ತನಿ‌, ಉಭಯವಾಸಿಗಳ ಆರು ಪ್ರಭೇದಗಳು, 15 ಬೀಟರ್ ಪ್ರಭೇದಗಳು, ನಾಲ್ಕು ಹೊಸ ಬಗೆಯ ಮೀನುಗಳು ಹಾಗೂ ಆರು ಹೊಸ ಬಗೆಯ ನೊಣಗಳನ್ನು ಪತ್ತೆಹಚ್ಚಲಾಗಿದೆ.

    2) ಪಶ್ಚಿಮ ಘಟ್ಟ ಪ್ರದೇಶ: (The western ghat region)

     ಪಶ್ಚಿಮ ಘಟ್ಟ ಪ್ರದೇಶವು ಭಾರತದ ಎರಡನೇ ಮಹಾ ಜೀವ ವೈವಿಧ್ಯತೆಯ ತಾಣವಾಗಿದೆ. ಭಾರತದ ಪರ್ಯಾಯ ಪ್ರಸ್ಥಭೂಮಿಯ ಪಶ್ಚಿಮ ಕರಾವಳಿಯವರೆಗೆ ಸಮಾನವಾಗಿ ಹಂಚಿಕೆಯಾಗಿರುವ ಘಟ್ಟಗಳ ಸಾಲುಗಳನ್ನು ಪಶ್ಚಿಮ ಘಟ್ಟಗಳು ಎಂದು ಕರೆಯಲಾಗಿದೆ. ಇದರ ಒಟ್ಟು ಉದ್ದ 600 ಕಿ.ಮೀಗಳು. ಕರ್ನಾಟಕ, ಮಹಾರಾಷ್ಟ್ರ, ಗೋವಾ, ತಮಿಳುನಾಡು ಹಾಗೂ ಕೇರಳ ರಾಜ್ಯಗಳಲ್ಲಿ ಈ ಪ್ರದೇಶ  ವ್ಯಾಪಿಸಿದೆ. ಸಮುದ್ರಮಟ್ಟದಿಂದ ಸುಮಾರು 500 ಮೀ ಎತ್ತರದ ವರೆಗೆ ಪಶ್ಚಿಮ ಘಟ್ಟಗಳ ನಿತ್ಯ ಹರಿದ್ವರ್ಣ ಕಾಡುಗಳು ಇವೆ. ಈ ಪ್ರದೇಶದಲ್ಲಿ ಅತ್ಯಧಿಕ ಮಳೆಯಾಗುತ್ತಿದ್ದು ಜೀವ ವೈವಿಧ್ಯತೆಯ ಬೆಳವಣಿಗೆಗೆ ಈ ಪ್ರದೇಶದ ಮಳೆಯೇ ಕಾರಣವಾಗಿದೆ. ಈ ಪ್ರದೇಶದಲ್ಲಿ ವಿಶಿಷ್ಟ ಜೀವಿಗಳು ವಾಸಿಸುತ್ತವೆ. ಅವುಗಳನ್ನು ಸಂರಕ್ಷಿಸಲು ಭಾರತ ಸರ್ಕಾರವು ಮಾಧವ ಗಾಡ್ಗಿಳ್ ಸಮಿತಿ ಹಾಗೂ ಕಸ್ತೂರಿರಂಗನ್ ಸಮಿತಿಗಳನ್ನು ನೇಮಕಗೊಳಿಸಿದ್ದಿತು. ಈ ಎರಡು ಸಮಿತಿಗಳು ಸಲ್ಲಿಸಿದ್ದ ವರದಿಗಳನ್ನು ರಾಜ್ಯ ಸರ್ಕಾರಗಳು ತಿರಸ್ಕರಿಸಿದವು.

    ಪಶ್ಚಿಮ ಘಟ್ಟದಲ್ಲಿ ವೈವಿಧ್ಯತೆಯಿಂದ ಕೂಡಿದ ಮರಗಳನ್ನು ಕಾಣಬಹುದಾಗಿದೆ. ಈ ವಲಯದಲ್ಲಿ ಸುಮಾರು 38 ಬಗೆಯ ಮರಗಳನ್ನು ಗುರುತಿಸಲಾಗಿದ್ದು ಇವುಗಳ ವೈವಿಧ್ಯತೆ 8 ಡಿಗ್ರಿ ಉತ್ತರ ಅಕ್ಷಾಂಶದಿಂದ 30 ಡಿಗ್ರಿ ಉತ್ತರ ಅಕ್ಷಾಂಶದಲ್ಲಿ ಅತಿ ಹೆಚ್ಚು ಕಂಡುಬರುತ್ತವೆ. ಇದರಲ್ಲಿ ಗಿಡಮೂಲಿಕೆ ಔಷಧಿ ಗಿಡಗಳೇ ಅಧಿಕವಾಗಿವೆ. ಈ ಬಿಸಿ ತಾಣದಲ್ಲಿ 1500ಕ್ಕೂ ಹೆಚ್ಚಿನ ಬಗೆಯ ಸಸ್ಯ ಪ್ರಭೇದಗಳಿವೆ.

    ಈ ಪ್ರದೇಶವು ಸಸ್ಯ ಪ್ರಭೇದಗಳಿಗೆ ಹೆಸರಾಗಿದ್ದಂತೆ ಪ್ರಾಣಿಪ್ರಭೇದಗಳಿಗೂ ಹೆಸರಾಗಿದೆ. 315 ದೇಶಿಯ ಪ್ರಭೇದದ ಅಕಸೇರುಕಗಳು ಇಲ್ಲಿವೆ. ಇವುಗಳ ಪೈಕಿ 7 ಸಸ್ತನಿ, 13 ಪಕ್ಷಿ, 84 ಉಭಯವಾಸಿ ಹಾಗೂ 104 ಮೀನಿನ ಪ್ರಭೇದಗಳು ಇವೆ.

     ಮಾನವನ ಅತಿಯಾದ ಮೋಹಕ್ಕೆ ಬಲಿಯಾಗಿ ಅನೇಕ ಪ್ರಾಣಿ ಸಂತತಿಗಳು ವಿನಾಶದ ಅಂಚಿಗೆ ಬಂದು ತಲುಪಿದೆ. ಸುಮಾರು 235 ಬಗೆಯ ಸ್ಥಳೀಯ ಪುಷ್ಪ ಪ್ರಭೇದಗಳು ಅಳಿವಿನ ಅಂಚಿನಲ್ಲಿದೆ. ಸಿಂಹಬಾಲದ ಮಕಾಕ್, ನೀಲಗಿರಿ ಲಂಗೂರ್‌, ತಹರ್, ಹಾರುವ ಅಳಿಲು ಹಾಗೂ ಮಲಬಾರ್ ಗ್ರೇ ಹಾರ್ನ್ ಬಿಲ್ ಪಕ್ಷಿಗಳು ಹೆಚ್ಚು ಗಮನ ಸೆಳೆಯುತ್ತವೆ. ಇಲ್ಲಿನ 165 ಪ್ರಭೇದದ ಉರಗಗಳಲ್ಲಿ 88 ದೇಶಿಯ ಪ್ರಭೇದದ ಉರಗಗಳಿವೆ.

    ಉಪಸಂಹಾರ

    ಪೂರ್ವ ಹಿಮಾಲಯ ಮತ್ತು ಪಶ್ಚಿಮ ಘಟ್ಟಗಳು ಭಾರತದ ಜೀವ ವೈವಿಧ್ಯತೆಯ ಅಮೂಲ್ಯ ಧನವಾಗಿವೆ. ಇವುಗಳಲ್ಲಿ ಅನೇಕ ಸ್ಥಳೀಯ ಹಾಗೂ ಅಪರೂಪದ ಸಸ್ಯ ಮತ್ತು ಪ್ರಾಣಿ ಪ್ರಭೇದಗಳು ವಾಸಿಸುತ್ತಿವೆ. ಮಾನವನ ಅತಿಯಾದ ಹಸ್ತಕ್ಷೇಪದಿಂದ ಈ ಬಿಸಿ ತಾಣಗಳು ಅಪಾಯದ ಅಂಚಿಗೆ ತಲುಪುತ್ತಿವೆ. ಆದುದರಿಂದ ಇಂತಹ ಪ್ರಕೃತಿ ಸಂಪತ್ತಿನ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಭವಿಷ್ಯದ ಪೀಳಿಗೆಗಾಗಿ ಜೀವ ವೈವಿಧ್ಯತೆಯನ್ನು ಕಾಪಾಡುವುದು ಅತ್ಯಂತ ಅವಶ್ಯಕವಾಗಿದೆ.

    ಜಾಗತಿಕ ಜೀವ ವೈವಿಧ್ಯದ ಹಾಟ್‌ಸ್ಪಾಟ್‌ಗಳು

    ಜಾಗತಿಕ ಜೀವ ವೈವಿಧ್ಯದ ಹಾಟ್‌ಸ್ಪಾಟ್‌ಗಳು

    ಭೂಮಿಯ ಮೇಲಿನ ಅತ್ಯಂತ ಸಮೃದ್ಧವಾದ ಆದರೆ ಅಳಿವಿನಂಚಿಗೆ ಬಂದು ತಲುಪಿರುವ ಸಸ್ಯ ಹಾಗೂ ಪ್ರಾಣಿಸಮುದಾಗಳ ಪ್ರದೇಶವನ್ನು ಹಾಟ್‌ಸ್ಪಾಟ್‌ಗಳು ಎಂದು ಕರೆಯಲಾಗಿದೆ. ʻʻನಾರ್ಮನ್‌ ಮೆಯರ್‌ರವರು 1988 ರಲ್ಲಿ ಜೈವಿಕ ವೈವಿಧ್ಯತೆಯ ಬಿಸಿತಾಣ ಎಂಬ ಪರಿಕಲ್ಪನೆಯನ್ನು ಪ್ರಥಮ ಬಾರಿಗೆ ಪರಿಚಯಿಸಿದರು. ಬೇರೆ ಎಲ್ಲಿಯೂ ಕಂಡು ಬರದಷ್ಟು ಸಂಖ್ಯೆಯಲ್ಲಿ ಆವಾಸ ಸ್ಥಾನದ ನಾಶದ ತೀವ್ರತೆಯನ್ನು ಎಂಟು ಸ್ಥಾನಗಳಲ್ಲಿ ಗುರುತಿಸಿ. ಈ ಪರಿಕಲ್ಪನೆಯನ್ನು ನೀಡಿದರು. 1996ರಲ್ಲಿ ಕನ್ಸರ್ವೇಟಿವ್ ಇಂಟರ್ನ್ಯಾಷನಲ್ ಸಂಸ್ಥೆಯು ಮೇಯರ್ ನ ಬಿಸಿ ತಾಣಗಳ ನೀಲಿ ನಕ್ಷೆಯನ್ನು ಸ್ವೀಕರಿಸಿತು. 1999 ರಲ್ಲಿ ಸುಮಾರು 25 ಬಿಸಿ ತಾಣಗಳನ್ನು ಗುರುತಿಸಲಾಯಿತು. ಉತ್ತರ ಅಮೆರಿಕಾದ ಕರಾವಳಿಯನ್ನು 36ನೇ ಬಿಸಿ ತಾಣವಾಗಿ 2016ನೇ ಏಪ್ರಿಲ್ ನಲ್ಲಿ ಘೋಷಣೆ ಮಾಡಲಾಯಿತು.

    ಜಾಗತಿಕ ಬಿಸಿ ತಾಣಗಳು

    ಆಫ್ರಿಕ

    1. ಕೆಪ್‌ ಫ್ಲೊರೋಸ್ಟಿಕ್ (12) 

    2.  ಪೂರ್ವ ಆಫ್ರಿಕಾ ಕರಾವಳಿಯ ಕಾಡುಗಳು (10)

    3.  ಪೂರ್ವದ ಆಫ್ರೋಮಾಂಟೇನ್‌ (28)   

    4. ಪಶ್ಚಿಮ ಆಫ್ರಿಕಾದ ಗ್ಯೂನಿಯನ್ ಕಾಡುಗಳು (11) 

    5. ಆಫ್ರಿಕಾದ ಹಾರ್ನ್ (29)

    6.  ಮಡ್ಗಾಸ್ಕರ್ ದ್ವೀಪಗಳು(9)

    7.  ಪಂಟೋಲ್ಯಾಂಡ್ (27)

    8. ಸೆಕ್ಯುಲೆಂಟ್ ಕಾರೋ (13)

     

    ಏಷಿಯಾ ಫೆಸಿಫಿಕ್

    1. ಮಲೇಶಿಯನ್ ದ್ವೀಪಗಳು  34

    2. ಹಿಮಾಲಯ 32

    3. ಇಂಡೋ ಬರ್ಮಾ 19

    4. ಜಪಾನ್ ನೈರುತ್ಯ 33

    5. ಚೈನಾ ಪರ್ವತಗಳು 20

    6. ನ್ಯೂ ಕಡ ಲೋನಿಯಾ 23

    7. ನ್ಯೂಜಿಲೆಂಡ್ 24

    8. ಫಿಲಿಫೈನ್ 18

    9. ಪಾಲಿನೇಶಿಯ 25

    10. ನೈರುತ್ಯ ಆಸ್ಟ್ರೇಲಿಯ ಕಾಡು 22

    ಯುರೋಪಿಯನ್ / ಮಧ್ಯ ಏಷ್ಯಾ

    1. ಕಾಕಸಸ್ 15
    2. ಇರಾನ್ ಅನಟೆಷನ್‌ (30)
    3. ಮೆಡಿಟೇರಿಯನ್ ಬೇಸಿನ್ 14
    4. ಮಧ್ಯ ಏಷ್ಯಾದ ಪರ್ವತಗಳು 31
    5.  ಪೂರ್ವ ಆಸ್ಟ್ರೇಲಿಯಾದ ಕಾಡುಗಳು 35

    ಉತ್ತರ ಮತ್ತು ಮಧ್ಯ ಅಮೆರಿಕ

    1. ಕ್ಯಾಲಿಫೋರ್ನಿಯ ಪ್ಲುರೋಸ್ಟಿಕ್ ಪ್ರಾಂತ್ಯ (8)
    2. ಕೆರೆಬಿಯನ್ ದ್ವೀಪಗಳು (4)
    3. ಮ್ಯಾಡ್ರಿಯನ್ ಫೈನ್ ಓಕ್ ವುಡ್ಲ್ಯಾಂಡ್ (2)6
    4. ಮೆಸೋ ಅಮೇರಿಕಾ 2
    5. ಉತ್ತರ ಅಮೆರಿಕ ಕರಾವಳಿ ಮೈದಾನ (36)

    ದಕ್ಷಿಣ ಅಮೆರಿಕ

    1.  ಅಂಟ್ಲಾಂಟಿಕ್ ಕಾಡುಗಳು (4)
    2.  ಸೆರ್ಯಾಡೋ 6
    3. ಬಿಲಿಯಾನ್ ಚಳಿಗಾಲದ ಮಳೆಯ ಕಾಡುಗಳು (7)
    4. ದೊಂಬೆಸ್ ಚಾಕೋ ಮಗಡಾಲಿನ್ 5
    5. ಉಷ್ಣವಲಯದ ಅಂಡೀಸ್ (1)
    ಜೀವ ವೈವಿಧ್ಯತೆಯ ಮಾದರಿಗಳು

    ಜೀವ ವೈವಿಧ್ಯತೆಯ ಮಾದರಿಗಳು

    ಜೀವ ವೈವಿಧ್ಯತೆಯು ಮುಖ್ಯವಾಗಿ ಪರಿಸರ ಹಾಗೂ ಜೀವ ಪರಿಸರದ ಸಮತೋಲನ ಮಾಡುವಲ್ಲಿ ಮುಖ್ಯವಾದ ಪಾತ್ರ ವಹಿಸುತ್ತದೆ. ಮರುಭೂಮಿಯಲ್ಲಿ ಮಾಂಸಾಹಾರಿಗಳಷ್ಟೇ ಸಸ್ಯಹಾರಿಗಳು ಇರಬೇಕಾಗುತ್ತದೆ. ಒಂದುವೇಳೆ ಇವುಗಳಲ್ಲಿ  ಏರುಪೇರು ಕಂಡುಬಂದರೆ ಪರಿಸರದಲ್ಲಿ ಅಸಮತೋಲನ ಉಂಟಾಗುತ್ತದೆ. ಮಾನವನ ಆರ್ಥಿಕ ಚಟುವಟಿಕೆಗೆ ಜೀವವೈವಿಧ್ಯತೆಯು ಅಗತ್ಯವಾಗಿ ಬೇಕು.

     ಮಾನವನ ಉಸಿರಾಟಕ್ಕೆ ಉತ್ತಮ ಗಾಳಿ ಬೇಕು. ಅದನ್ನು ಪರಿಸರ ನೀಡಿದೆ. ಆದರೆ ಮಾನವ ಇಂದು ತನ್ನ ದುರಂಕಾರದಿಂದ ಪರಿಸರಕ್ಕೆ ಕುತ್ತು ತಂದಿದ್ದಾನೆ. ಕಾಡಿನಲ್ಲಿ ಸಿಗುವ ಗಿಡಮೂಲಿಕೆಯ ವ್ಯವಹಾರದಿಂದಲೇ ಕೋಟಿ ಕೋಟಿ ಹಣವನ್ನು ಗಳಿಸಬಹುದು. ಅರಣ್ಯದಿಂದ ಪ್ರಾಣಿಗಳ ಚರ್ಮ, ಪಕ್ಷಿಗಳ ರೆಕ್ಕೆ,  ಘೇಂಡಾಮೃಗದ ಕೊಂಬು, ಆನೆಯ ದಂತ ಒಂದೇ ಎರಡೇ ಎಲ್ಲವೂ ಕಾಡಿನಿಂದಲೇ ಲಭ್ಯವಿವೆ. ಉಸಿರಾಟಕ್ಕೆ ಗಾಳಿ, ತಿನ್ನಲು ಗೆಡ್ಡೆ, ಗೆಣಸು ಹಾಗೂ ಹಣ್ಣು-ಹಂಪಲುಗಳು ಯಥೇಚ್ಛವಾಗಿ ಸಿಗುತ್ತವೆ. ಹೀಗಾಗಿ ಜೀವವೈವಿಧ್ಯತೆಯ ಮೌಲ್ಯ ಬಹಳ ಅಪಾರವಾಗಿದೆ. ಇನ್ನು ಸಾಕು ಪ್ರಾಣಿಗಳಿಂದ ಹೈನುಗಾರಿಕೆ, ಸಾಗಾಣಿಕೆ ಮೊದಲಾದ ಎಲ್ಲಾ ಅಗತ್ಯಗಳಿಗೂ ಪೂರೈಕೆಯಾಗುತ್ತವೆ. ಮಾನವನ ಪ್ರತಿಯೊಂದು ಕ್ಷೇತ್ರಗಳಲ್ಲಿಯೂ ಜೀವವೈವಿಧ್ಯತೆಗಳು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಪೋಷಿಸಲ್ಪಟ್ಟವುಗಳಾಗಿವೆ. ಜೀವ ವೈವಿಧ್ಯತೆಯ ಮೌಲ್ಯಗಳ ಪ್ರಕಾರಗಳು ಈ ಕೆಳಗಿನಂತಿವೆ. 

    1.ಆಹಾರ ಮೌಲ್ಯಗಳು

    2. ಔಷಧೀಯ ಸಂಪನ್ಮೂಲಗಳು

    3. ಮರದ ಉತ್ಪನ್ನಗಳು

    4. ಮನೋರಂಜನ ಮೌಲ್ಯಗಳು ಹಾಗೂ

    5. ಸಾಂಸ್ಕೃತಿಕ ಮೌಲ್ಯಗಳು

    6. ಸಂಶೋಧನಾ ಶೈಕ್ಷಣಿಕ ನಿರ್ವಹಣೆ.

    1. ಆಹಾರದ ಮೌಲ್ಯಗಳು: (Consumtive value)

    ವಿಶ್ವದ ಆಹಾರ ಉತ್ಪಾದನೆಯಲ್ಲಿ ಜೀವವೈವಿಧ್ಯತೆಯ ಪಾತ್ರ ಬಹಳ ಮುಖ್ಯವಾಗಿದೆ. ಭೂಮಿಯ ಮೇಲೆ ವಾಸಿಸುವ ಮಾನವನ ಮೂಲ ಆಹಾರವೇ ಸಸ್ಯಹಾರ ಮತ್ತು ಮಾಂಸಹಾರ. ವಿಶ್ವದಲ್ಲಿ ಸರಿಸುಮಾರು 80,000 ಆಹಾರ ಯೋಗ್ಯ ಸಸ್ಯಗಳು ಇರುವುದು ವರದಿಯಾಗಿದೆ. ಮಾನವನು ಮಾಂಸಕ್ಕಾಗಿ ಕೆಲವೇ ಕೆಲವು ಪ್ರಾಣಿಗಳನ್ನು ಸಾಕಣೆ ಮಾಡುತ್ತಾನೆ. ಉದಾಹರಣೆ: ಹಸು, ಕುರಿ, ಮೇಕೆ, ಎಮ್ಮೆ, ಕೋಣ, ಕೋಳಿ ಇತ್ಯಾದಿಗಳು. ಈ ಪ್ರಾಣಿಗಳಿಂದ ಸುಮಾರು 100% ರಷ್ಟು ಪ್ರೋಟಿನ್‌ಯುಕ್ತ ಆಹಾರವನ್ನು ಪಡೆಯುತ್ತಾನೆ. ಇದು ಅಲ್ಲದೆ ಮೀನು ಕೂಡ ಉತ್ತಮವಾದ ಆಹಾರ ಪಟ್ಟಿಗೆ ಸೇರ್ಪಡೆಗೊಂಡಿದೆ. ಇಂದು ಮೀನುಗಾರಿಕೆ ಅತ್ಯಂತ ಲಾಭದಾಯಕ ಉದ್ಯೋಗವಾಗಿದೆ. ಗೋಧಿ, ಜೋಳ, ರಾಗಿ, ಭತ್ತ, ಸಜ್ಜೆ, ನವಣೆ, ಮೆಕ್ಕೆಜೋಳ ಮೊದಲಾದ 15 ಪ್ರಭೇದಗಳನ್ನು ಮಾನವ ಕೃಷಿ ಮಾಡಿ ಪಡೆದುಕೊಂಡು ಅವುಗಳನ್ನು ಆಹಾರಕ್ಕಾಗಿ ಬಳಸಿಕೊಳ್ಳುತ್ತಿದ್ದಾನೆ.

    2. ಔಷಧೀಯ ಸಂಪನ್ಮೂಲಗಳು: (Medical resources)

    ಜಾಗತಿಕವಾಗಿ ಒಟ್ಟು ಔಷಧಿಗಳ ಉತ್ಪಾದನೆಯಲ್ಲಿ ಸುಮಾರು ಶೇಕಡ 75 ಭಾಗದಷ್ಟು ವಿವಿಧ ಗಿಡಮೂಲಿಕೆಗಳು ಅಥವಾ ಸಸಿಗಳಿಂದ ತಯಾರಾದಂತವುಗಳಾಗಿವೆ. ಆಯುರ್ವೇದ ಹಾಗೂ ಯುನಾನಿ ಮುಂತಾದ ಸಾಂಪ್ರದಾಯಿಕ ವೈದ್ಯ ಪದ್ಧತಿಗಳ ಮೂಲಕ ಚಿಕಿತ್ಸೆ ನೀಡಲಾಗುತ್ತದೆ. ಈ ಚಿಕಿತ್ಸೆಗಳಿಗೆ ಔಷಧೀಯ ಸಸ್ಯಗಳೇ ಮೂಲ ಆಕರಗಳಾಗಿವೆ. ಉದಾ: . ಮೆಂತೆಕಾಳು ಮಧುಮೇಹಕ್ಕೆ ದಿವ್ಯ ಔಷಧೀಯವಾಗಿದೆ. ಹಾಗೆಯೇ

    •  ತುಳಸಿ ಎಲೆಯು ಜ್ವರಕ್ಕೆ ರಾಮಬಾಣವಾಗಿದೆ.
    •  ಸೌತೆಕಾಯಿಯನ್ನು ಬಿಲ್ಲೆಯ ಹಾಗೆ ಕತ್ತರಿಸಿ ಕಣ್ಣಿನ ಮೇಲೆ ಇಟ್ಟುಕೊಂಡರೆ ಕಣ್ಣು ಉರಿ ಶಮನವಾಗುತ್ತದೆ.
    •  ಪರಂಗಿ ಹಣ್ಣನ್ನು ತಿಂದರೆ ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ.
    •  ಸಿಂಕೋನ ಮರದ ತೊಗಟೆಯಿಂದ ಮಲೇರಿಯ ರೋಗ ನಿರೋಧಕ ಔಷಧಿಯಾದ ಕ್ವಿನೈನನ್ನು ತಯಾರಿಸಲಾಗಿದೆ.

    ಪೆನ್ಸಿಲಿಯಂನಿಂದ ಪ್ರತಿಜೀವಕ, ಬ್ಯಾಕ್ಟೀರಿಯಮ್‌ನಿಂದ ಟೆಟ್ರಿ ಸೈಕ್ಲಿನ್‌, ಕ್ಯಾನ್ಸರ್ ರೋಗ ನಿರೋಧಕ ಔಷಧಿ ಮೂಲ ವಸ್ತುಗಳನ್ನು ಪೆರಿವಿಂಕಲ್ ಸಸ್ಯದಿಂದ ತಯಾರಿಸಲಾಗುವುದು. ಇಂಗನ್ನು ಆಹಾರದ ರೂಪದಲ್ಲಿ ಅಲ್ಲದೆ ಔಷಧಿ ರೂಪದಲ್ಲಿಯೂ ಉಪಯೋಗಿಸುತ್ತಾರೆ. ಹಲವು ಸಸ್ಯಗಳಿಂದ ಅಂಟಿ ಬಯೋಟಿಕ್ ಔಷಧಿಯನ್ನು ತಯಾರಿಸುತ್ತಾರೆ.

     ಡೈಸಿ ಎಂಬ ಸಸ್ಯಗಳನ್ನು ಹಿಂದಿನ ಕಾಲದಲ್ಲಿ ಹೇನು ನಿವಾರಣ ಔಷಧಿಯಾಗಿ ಬಳಸಲಾಗುತ್ತಿತ್ತು. ಜೊತೆಗೆ ಇದನ್ನು ಪೈರಿಥ್ರಿನ್ ಎಂಬ ಕೀಟನಾಶಕಗಳಲ್ಲಿಯೂ ಇದನ್ನು ಬಳಸಲಾಗುತ್ತಿತ್ತು.  ಕಾಲಾನಂತರ ಹೇನು ನಿವಾರಕ ಶಾಂಪೂಗಳಲ್ಲಿ ಡೈಸಿಯ ಬಳಕೆಯನ್ನು ಕಡ್ಡಾಯ ಮಾಡಲಾಯಿತು.

    ಬೆಸಿಲಸ್‌ ತುರಿಂಜೆನೆಸಿಸ್‌ ಎಂಬುದು ಒಂದು ಸ್ವಾಭಾವಿಕ ಬ್ಯಾಕ್ಟೀರಿಯಾ ಆಗಿದೆ. ಇದು ಮಣ್ಣಿನಲ್ಲಿ ಇರುತ್ತದೆ. ಈ ಬ್ಯಾಕ್ಟೀರಿಯಾ ವಿಷಪೂರಿತ ಪ್ರೊಟೀನ್‌ಗಳನ್ನು ಉತ್ಪತ್ತಿ ಮಾಡುವ ಕಾರಣದಿಂದ ಇದನ್ನು ಸೇವಿಸುವ ಕೀಟಗಳು ಸತ್ತು ಹೋಗುತ್ತವೆ. ಈ ಕಾರಣಕ್ಕಾಗಿ ಕೀಟನಾಶಕಗಳಲ್ಲಿ ಇದನ್ನು ಬೆರೆಸಲಾಗುತ್ತದೆ.  

    ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ಬೇವನ್ನು ಔಷಧೀಯ ಸಸ್ಯವಾಗಿ ಬಳಕೆ ಮಾಡಲಾಗುತ್ತದೆ. ಬೇವನ್ನು ಪ್ರಮುಖವಾಗಿ ʻಅಜಾಡಿರ್ಯಾಕ್ಟಿನ್‌(Azardurachtin)ʼʼ  ಎಂಬ ಕೀಟನಾಶಕ ತಯಾರಿಕೆಯಲ್ಲಿ ಬಳಸಲಾಗುತ್ತಿದೆ. ಭಾರತೀಯ ಕೃಷಿ ಪದ್ಧತಿ ಹಾಗೂ ಸೌಂದರ್ಯ ವರ್ಧಕಗಳ ತಯಾರಿಕೆಯಲ್ಲಿ ಬೇವನ್ನು ಅಧಿಕ ಪ್ರಮಾಣದಲ್ಲಿ ಬಳಸಲಾಗುತ್ತದೆ.

    3. ಮರದ ಉತ್ಪನ್ನಗಳು: (Wood products)

    ಆದಿ ಮಾನವನಿಂದ ಹಿಡಿದು ಆಧುನಿಕ ಮಾನವನವರೆಗೆ ಮರವನ್ನು ಉರುವಲು ಸೌದೆಗಾಗಿ ಬಳಕೆ ಮಾಡಲಾಗುತ್ತದೆ. ಇದು ಅಲ್ಲದೆ ಮರವನ್ನು ಕಟ್ಟಡ ನಿರ್ಮಾಣಕ್ಕಾಗಿ, ಅಣೆಕಟ್ಟು ಸೇತುವೆ ಹಾಗೂ ರೈಲು ಹಳಿ ನಿರ್ಮಾಣದಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಮುಂದುವರೆದು ಅಲಂಕಾರಿಕ ವಸ್ತುಗಳ ತಯಾರಿಕೆ, ಕಾಗದ ತಯಾರಿಕೆ, ರೆಯಾನ್‌ ತಯಾರಿಕೆ, ಗೊಂಬೆಗಳ ತಯಾರಿಕೆ ಹಾಗೂ ಆಟಿಕೆಗಳ ತಯಾರಿಕೆಗಳಲ್ಲಿ ಮರವನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸುತ್ತಾರೆ.

    4. ಮನೋರಂಜನಾ ಮೌಲ್ಯಗಳು: (Aesthetic values)

    ಜೀವವೈವಿಧ್ಯತೆಯು ಪ್ರವಾಸ ಹಾಗೂ ಮನರಂಜನ ಚಟುವಟಿಕೆಗಳ ಪ್ರಮುಖ ಅಂಗಗಳಾಗಿ ಕೆಲಸ ನಿರ್ವಹಿಸುತ್ತದೆ. ಅನೇಕ ಗಿರಿಧಾಮಗಳು, ಪರ್ವತಗಳು, ಹಿತಕರವಾದ ಹವಾಗುಣವನ್ನು ಹೊಂದಿದ್ದು ಜನರು ಅಲ್ಲಿಗೆ ಹೋಗಿ ಸಮಯವನ್ನು ಕಳೆಯಲು ಅತ್ಯಂತ ಪ್ರಶಸ್ತವಾದ ತಾಣವಾಗಿವೆ. ಪಕ್ಷಿಧಾಮಗಳು, ಅಭಯಾರಣ್ಯಗಳು, ವನ್ಯಮೃಗ ಸಂರಕ್ಷಣಾ ತಾಣಗಳು, ಪ್ರಾಣಿ ಸಂಗ್ರಹಾಲಯಗಳು ಮೊದಲಾದವುಗಳು ಜನರಿಗೆ ಮನರಂಜನೆಯನ್ನು ಒದಗಿಸುತ್ತವೆ. ವನ್ಯಜೀವಿಗಳ ಕುರಿತು ಸಾಹಿತ್ಯ ರಚಿಸಲು, ಛಾಯಾಗ್ರಹಣ ಮಾಡಲು, ಪಕ್ಷಿ ವೀಕ್ಷಿಸಲು, ಪರಿಸರ ಅಧ್ಯಯನ ಕ್ಷೇತ್ರಗಳಾಗಿ ಹೆಚ್ಚು ಪ್ರಸಿದ್ಧಿಗಳಿಸಿವೆ.

     5. ಸಾಂಸ್ಕೃತಿಕ ಮೌಲ್ಯಗಳು: (Cultural values)

    ಭಾರತೀಯ ಹಿಂದೂ ಸಂಸ್ಕೃತಿಯಲ್ಲಿ ಜೀವವೈವಿಧ್ಯತೆಗಳಿಗೆ ಅತ್ಯಂತ ಮಹತ್ವವನ್ನು ನೀಡಲಾಗಿದೆ. ಹಬ್ಬ ಹರಿದಿನಗಳಲ್ಲಿ ಮರಗಳನ್ನು ಪೂಜಿಸುವುದು ಸಾಮಾನ್ಯವಾಗಿ ಕಂಡುಬರುತ್ತದೆ. ಉದಾ: ದಸರಾ ಹಬ್ಬದಲ್ಲಿ ಬನ್ನಿ ಮರಕ್ಕೆ ಪೂಜೆ ಸಲ್ಲಿಸುವುದು ಇಂದಿಗೂ ರೂಢಿಯಲ್ಲಿದೆ.

    ಉಪಸಂಹಾರ

    ಒಟ್ಟಿನಲ್ಲಿ ಜೀವವೈವಿಧ್ಯತೆಯು ಮಾನವನ ಜೀವನಕ್ಕೆ ಅಮೂಲ್ಯವಾದ ಪ್ರಕೃತಿಯ ವರವಾಗಿದೆ. ಪರಿಸರದ ಸಮತೋಲನ, ಆರೋಗ್ಯಕರ ಜೀವನ ಹಾಗೂ ಆರ್ಥಿಕ ಅಭಿವೃದ್ಧಿಗೆ ಇದು ಅವಿಭಾಜ್ಯ ಅಂಗವಾಗಿದೆ. ಮಾನವನ ಅತಿಯಾದ ದುರಾಸೆಯಿಂದ ಇಂದು ಜೀವವೈವಿಧ್ಯತೆ ಅಪಾಯಕ್ಕೆ ಸಿಲುಕುತ್ತಿದೆ. ಆದ್ದರಿಂದ ಪ್ರತಿಯೊಬ್ಬರೂ ಜೀವವೈವಿಧ್ಯತೆಯನ್ನು ಸಂರಕ್ಷಿಸುವ ಹೊಣೆಗಾರಿಕೆಯನ್ನು ಅರಿತುಕೊಳ್ಳಬೇಕು. ಪ್ರಕೃತಿಯನ್ನು ಉಳಿಸಿದರೆ ಮಾತ್ರ ಭವಿಷ್ಯದ ಪೀಳಿಗೆಗೆ ಸುಸ್ಥಿರ ಜೀವನವನ್ನು ನೀಡಲು ಸಾಧ್ಯ.

    ಜೀವ ವೈವಿಧ್ಯತೆಯ ಪ್ರಕಾರಗಳು

    ಜೀವ ವೈವಿಧ್ಯತೆಯ ಪ್ರಕಾರಗಳು

    ಭೂಮಿಯ ಮೇಲೆ ವಾಸಿಸುವ ಸಸ್ಯ, ಪ್ರಾಣಿ ಮತ್ತು ಸೂಕ್ಷ್ಮಜೀವಿಗಳಲ್ಲಿರುವ ವೈವಿಧ್ಯತೆಯನ್ನು ಜೀವವೈವಿಧ್ಯತೆ ಎಂದು ಕರೆಯಲಾಗುತ್ತದೆ. ಈ ವೈವಿಧ್ಯತೆ ಜೀವಿಗಳ ಉಳಿವು ಮತ್ತು ವಿಕಾಸಕ್ಕೆ ಸಹಕಾರಿಯಾಗಿದೆ. ಜೀವವೈವಿಧ್ಯತೆಯ ಪ್ರಕಾರಗಳು ಈ ಕೆಳಗಿನಂತಿವೆ,

    1. ಅನುವಂಶಿಯ ವೈವಿಧ್ಯತೆ
    2. ಜೀವ ಪ್ರಭೇದ ವೈವಿಧ್ಯತೆ
    3. ಪರಿಸರ ವ್ಯವಸ್ಥೆಯ ವೈವಿಧ್ಯತೆ

    1. ಅನುವಂಶೀಯ ವೈವಿಧ್ಯತೆ: (Genetic diversity)

     ʻʻಜೀವ ಪ್ರಭೇದಗಳ ನಡುವಿನ ಅನುವಂಶೀಯ ವ್ಯತ್ಯಾಸವನ್ನು ಜೀವವೈವಿಧ್ಯತೆ ಎಂದು ಕರೆಯುವರು.ʼʼ ಭೂಮಿಯ ಮೇಲೆ ಜನಿಸಿದ ಒಂದೇ ಪ್ರಭೇದದ ಜೀವಿಗಳಲ್ಲಿ ವಂಶವಾಹಿನಿಯ ಗುಣಗಳು ಭಿನ್ನವಾಗಿ ಕಂಡುಬರುತ್ತವೆ. ಉದಾ:-  ಭತ್ತದ ತಳಿಗಳಲ್ಲಿ ಸುಮಾರು 5000 ಪ್ರಕಾರಗಳಿವೆ ಎಂದು ಹೇಳಲಾಗುತ್ತದೆ. ಮೂಲತಃ ಮಾನವನು ಹೋಮೋ ಸೇಪಿಯನ್‌ ಪ್ರಭೇದಕ್ಕೆ ಸೇರಿದವನಾಗಿದ್ದರೂ ಇದರಲ್ಲಿಯೇ ಸಾವಿರಾರು ತಳಿಗಳನ್ನು ಗುರುತಿಸಬಹುದಾಗಿದೆ. ಹೀಗಾಗಿ ಅವರ ಮೈಬಣ್ಣ, ಎತ್ತರ, ತೂಕ, ಗಾತ್ರ, ಕಣ್ಣಿನ ಬಣ್ಣ ಹಾಗೂ ಮೆದುಳಿನ ತೂಕದಲ್ಲಿ ಭಿನ್ನತೆಯನ್ನು ಕಾಣಬಹುದಾಗಿದೆ. ಈ ರೀತಿಯ ಭಿನ್ನತೆಯು ಅನುವಂಶಿಯ ವೈವಿಧ್ಯತೆಯನ್ನು ವ್ಯಕ್ತಪಡಿಸುತ್ತದೆ. ಪರಿಸರದ ಲಕ್ಷಣಗಳು ಬದಲಾವಣೆಗೊಂಡಂತೆ ಜೀವಿಗಳ ವಂಶ ವಾಹಿನಿಗಳಲ್ಲಿ ಹೊಂದಾಣಿಕೆಯ ಮೂಲಕ ಬದಲಾವಣೆಗಳು ಕಂಡುಬರುತ್ತವೆ. ಒಂದೇ ರೀತಿಯ ಪ್ರಾಣಿ ಪಕ್ಷಿಗಳಲ್ಲಿಯೂ ಈ ಭಿನ್ನತೆಯನ್ನು ನಾವು ಕಾಣಬಹುದಾಗಿದೆ. ಈ ಬದಲಾವಣೆಯನ್ನು ಪ್ರಭೇದ ನಿರ್ಮಾಣ ಕ್ರಿಯೆ ಎಂದು ಕರೆಯಲಾಗಿದೆ. ಜೀವಿಗಳ ಈ ವೈವಿಧ್ಯತೆಯು ವಂಶಾಭಿವೃದ್ಧಿಗೆ ಕಾರಣವಾಗುತ್ತದೆ. ಒಂದು ವೇಳೆ ವಂಶಾಭಿವೃದ್ಧಿ ಕಡಿಮೆಯಾದರೆ ಜೀವಿಗಳು ನಶಿಸಿ ಹೋಗುತ್ತವೆ.

    2. ಜೀವ ಪ್ರಭೇದದ ವೈವಿಧ್ಯತೆ: (Species diversity)

    ʻʻಒಂದೇ ಭೂಭಾಗದಲ್ಲಿ ಬೇರೆ ಬೇರೆ ತಳಿಯ ಜೀವಿ ಪ್ರಭೇದಗಳು ವಾಸಿಸುತ್ತಿದ್ದರೆ ಅವುಗಳನ್ನು ಜೀವ ಪ್ರಭೇದದ ವೈವಿಧ್ಯತೆ ಎಂದು ಕರೆಯುವರು.ʼʼ ಒಂದೇ ಭೂ ಭಾಗದಲ್ಲಿ ವಾಸಿಸುವ ಜೀವಿಗಳಲ್ಲಿ ಹಲವಾರು ರೀತಿಯ ಭಿನ್ನತೆಗಳು ಕಂಡುಬರುತ್ತದೆ. ಉದಾ ಸೂಕ್ಷ್ಮಾಣು ಜೀವಿ ವೈವಿಧ್ಯತೆ ಸಸ್ಯ ವೈವಿಧ್ಯತೆ ಹಾಗೂ ಪ್ರಾಣಿ ವೈವಿಧ್ಯತೆ. ಒಂದು ಭಾಗದಲ್ಲಿ ವಾಸಿಸುವ ಜೀವಿಗಳ ಸಂಖ್ಯಾ ಪ್ರಮಾಣ ಹೇಗೆ ಸಮನಾಗಿ ಕಂಡು ಬರುವುದಿಲ್ಲವೋ ಹಾಗೆಯೇ ಅವುಗಳ ಸಂಖ್ಯೆ ಹೆಚ್ಚು ಕಡಿಮೆಯಾಗಿರುತ್ತದೆ. ಜೀವ ಪ್ರಭೇದದ ವಿವಿಧ ರೂಪಗಳನ್ನು ಎರಡು ಭಾಗಗಳಾಗಿ ಗುರುತಿಸಬಹುದು. ಅವುಗಳೆಂದರೆ.

    1. ಜೀವ ಪ್ರಭೇದ ಶ್ರೀಮಂತಿಕೆ 2.  ಜೀವ ಪ್ರಭೇದದ ಸಮತಲ ಹಂಚಿಕೆ.

    1. ಜೀವ ಪ್ರಭೇದದ ಶ್ರೀಮಂತಿಕೆ: (Species richness)

    1. ಅಲ್ಫಾ ವೈವಿಧ್ಯತೆ:(Alpha diversity) ಒಂದು ಗೊತ್ತಾದ ಪ್ರದೇಶದಲ್ಲಿ ಕಂಡುಬರುವ ಜೀವಿ ಪ್ರಭೇದಗಳ ಒಟ್ಟು ಸಂಖ್ಯೆಯನ್ನು ಆಲ್ಫಾ ವೈವಿಧ್ಯತೆ ಎಂದು ಕರೆಯುವರು. ಇಲ್ಲಿ ವಾಸಿಸುವ ಜೀವಿಗಳು ನಿರ್ದಿಷ್ಟ ಸಮುದಾಯಕ್ಕೆ ಸೇರಿದವುಗಳಾಗಿರುತ್ತವೆ. ಇಲ್ಲಿನ ಶ್ರೀಮಂತ ಜೀವಿ ಸಮುದಾಯಗಳ ಹಂಚಿಕೆ ಸರಿಸಮಾನವಾಗಿರುತ್ತದೆ.
    2. ಬೀಟಾ ವೈವಿಧ್ಯತೆ: (Beta diversity) ಎರಡು ನೆಲೆಗಳಲ್ಲಿಯೂ ಸಾಮಾನ್ಯವಾಗಿ ಕಂಡುಬರುವ ಜೀವ ವೈವಿಧ್ಯಗಳನ್ನು ಬೀಟಾ ವೈವಿಧ್ಯತೆ ಎಂದು ಕರೆಯುವರು.
    3. ಗಾಮಾ ವೈವಿಧ್ಯತೆ: (Gamma diversity) ಒಂದು ಗೊತ್ತಾದ ಪ್ರದೇಶದಲ್ಲಿ ವಿವಿಧ ರೀತಿಯ ಜೀವ ವೈವಿಧ್ಯಗಳು ಕಂಡುಬಂದರೆ ಅದನ್ನು ಗಾಮ ವೈವಿಧ್ಯತೆ ಎಂದು ಕರೆಯಬಹುದಾಗಿದೆ.

    2. ಜೀವ ಪ್ರಭೇದದ ಸಮತಲ ಹಂಚಿಕೆ: (Species eveness)

     ಒಂದು ಪ್ರದೇಶದಲ್ಲಿ ಹಲವಾರು ಜಾತಿಯ ಪ್ರಭೇದಗಳು ವಾಸಿಸುತ್ತವೆ. ಅವುಗಳ ಸಂಖ್ಯೆಯಲ್ಲಿ ಏರುಪೇರು ಆಗಿರುವುದು ಸಹಜವಾದ ಕ್ರಿಯೆ. ಒಂದು ವೇಳೆ ಜೀವಿಗಳ ಸಂಖ್ಯೆಯಲ್ಲಿ ಸಮನಾಗಿದ್ದರೆ ಅದನ್ನು ಸಮತಲ ಹಂಚಿಕೆ ಎಂದು ಕರೆಯಲಾಗುವುದು. ಒಂದು ವೇಳೆ ಸಂಖ್ಯೆಯಲ್ಲಿ ಅಸಮಾನತೆ ಕಂಡು ಬಂದರೆ ಅದನ್ನು ಅಸಮತಲ ಹಂಚಿಕೆ ಎಂದು ಹೇಳಬಹುದು.

    ಉಪಸಂಹಾರ

    ಜೀವವೈವಿಧ್ಯತೆ ಭೂಮಿಯ ಜೀವಸಂಪತ್ತಿನ ಮೂಲಾಧಾರವಾಗಿದ್ದು, ಅದು ಪರಿಸರ ಸಮತೋಲನವನ್ನು ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಅನುವಂಶೀಯ, ಜೀವ ಪ್ರಭೇದ ಹಾಗೂ ಪರಿಸರ ವ್ಯವಸ್ಥೆಯ ವೈವಿಧ್ಯತೆಗಳು ಪರಸ್ಪರ ಅವಿಭಾಜ್ಯವಾಗಿ ಸಂಬಂಧಿಸಿದ್ದಾಗಿವೆ. ಈ ವೈವಿಧ್ಯತೆಯು ಜೀವಿಗಳ ಹೊಂದಾಣಿಕೆ, ವಂಶಾಭಿವೃದ್ಧಿ ಮತ್ತು ಉಳಿವಿಗೆ ಸಹಕಾರಿಯಾಗುತ್ತದೆ. ಜೀವವೈವಿಧ್ಯತೆ ಕುಗ್ಗಿದರೆ ಪರಿಸರ ಅಸ್ಥಿರತೆ ಉಂಟಾಗುತ್ತದೆ. ಆದ್ದರಿಂದ ಜೀವವೈವಿಧ್ಯತೆಯ ಸಂರಕ್ಷಣೆ ಮಾನವನ ಪ್ರಮುಖ ಜವಾಬ್ದಾರಿಯಾಗಿದೆ.

    ವನ್ಯಜೀವಿ ಸಂರಕ್ಷಣಾ ಯೋಜನೆಗಳು

    ವನ್ಯಜೀವಿ ಸಂರಕ್ಷಣಾ ಯೋಜನೆಗಳು

    ವನ್ಯಜೀವಿ ಸಂರಕ್ಷಣಾ ಯೋಜನೆಗಳು

    ಜೀವ ಪ್ರಭೇದಗಳ ರಕ್ಷಣೆಗಾಗಿ ಭಾರತ ಸರ್ಕಾರವು ಈ ಕೆಳಗಿನ ಯೋಜನೆಗಳನ್ನು ಹಮ್ಮಿಕೊಂಡಿದೆ.

    1. ಹುಲಿ ಯೋಜನೆ: (Tiger Project)

    ರಾಷ್ಟ್ರೀಯ ಪ್ರಾಣಿ ಎಂದು ಹೆಸರಾದ ಹುಲಿಯು ಇಂದು ಅಳಿವಿನ ಅಂಚಿನಲ್ಲಿದೆ. ಭಾರತವು 1900ರಲ್ಲಿ ಸುಮಾರು 40000 ಹುಲಿಗಳನ್ನು ಹೊಂದಿತ್ತು. ಆದರೆ ಇವುಗಳ ಸಂಖ್ಯೆ 1970ರಲ್ಲಿ 1800 ಕ್ಕೆ ಇಳಿಯಿತು. ಇದರಿಂದ ಆತಂಕಗೊಂಡ ಭಾರತ ಸರ್ಕಾರ ಭಾರತೀಯ ವನ್ಯಜೀವಿ ಮಂಡಳಿಯ ನೇತೃತ್ವದಲ್ಲಿ ಹುಲಿಗಳ ಸಂರಕ್ಷಣೆಗೆಂದು 1970ರಲ್ಲಿ ಒಂದು ವಿಶೇಷ ಕಾರ್ಯವನ್ನು ಸಂಘಟಿಸಿತು. ಇದರ ಪರಿಣಾಮವಾಗಿ 1973 ಏಪ್ರಿಲ್ 1 ರಂದು ʻʻಭಾರತ ಸರ್ಕಾರದ ಹುಲಿ ಯೋಜನೆಯನ್ನು ಜಾರಿಗೆ ತಂದಿತು.ʼʼ

    ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಸ್ಥಾಪನೆ:

    ವನ್ಯಜೀವಿ ಸಂರಕ್ಷಣಾ ತಿದ್ದುಪಡಿ ಕಾಯ್ದೆ 2006ರ ಪ್ರಕಾರ ವನ್ಯಜೀವಿ ಸಂರಕ್ಷಣಾ ಪ್ರಾಧಿಕಾರವನ್ನು ಸ್ಥಾಪಿಸಲಾಗಿದೆ. ಈ ಪ್ರಾಧಿಕಾರವು ಈ ಕೆಳಗಿನ ಕಾರ್ಯಗಳನ್ನು ಹಮ್ಮಿಕೊಂಡಿದೆ.

    1. a) ರಾಜ್ಯ ಸರ್ಕಾರ ತಯಾರಿಸಿದ ಹುಲಿ ಸಂರಕ್ಷಣಾ ಯೋಜನೆಗಳಿಗೆ ಅನುಮೋದನೆಯನ್ನು ನೀಡುವುದು.
    2. b) ಹುಲಿ ಮೀಸಲು ಪ್ರದೇಶಗಳಲ್ಲಿ ಗಣಿಗಾರಿಕೆ, ಕೈಗಾರಿಕೆ ಹಾಗೂ ವಿವಿಧ ಯೋಜನೆಗಳನ್ನು ಮಾಡಿದಂತೆ ತಡೆ ನೀಡುವುದು.
    3. c) ಹುಲಿಗಳ ರಕ್ಷಣೆಗಾಗಿ ಕಾಲಕಾಲಕ್ಕೆ ಯೋಜನೆಯ ಮಾರ್ಗಸೂಚಿಯನ್ನು ಬಿಡುಗಡೆ ಮಾಡುವುದು.
    4. d) ಸಂರಕ್ಷಣೆಯ ಕ್ರಮಗಳ ಕುರಿತು ಪ್ರಾಧಿಕಾರವು ಸರ್ಕಾರಕ್ಕೆ ಆಗಾಗ ಮಾಹಿತಿ ನೀಡುವುದು.

    2) ಆನೆ ಯೋಜನೆ: (Elephant Project)

    1992 ರಲ್ಲಿ ಆನೆಯೋಜನೆಯನ್ನು ಆರಂಭಿಸಲಾಯಿತು. ಈ ಯೋಜನೆಯ ಮೂಲ ಉದ್ದೇಶಗಳು ಈ ಕೆಳಗಿನಂತಿವೆ.

    1. ಆನೆಗಳ ಆವಾಸಸ್ಥಾನಗಳನ್ನು ರಕ್ಷಿಸುವುದು ಮತ್ತು ಪೋಷಿಸುವುದು.
    2. ಮಾನವ-ಪ್ರಾಣಿಗಳ ನಡುವಿನ ಸಂಘರ್ಷವನ್ನು ತಪ್ಪಿಸುವುದು.
    3. ಸೆರೆಸಿಕ್ಕ ಆನೆಗಳನ್ನು ಸೂಕ್ತ ರೀತಿಯಲ್ಲಿ ಪೋಷಿಸಿ ಬೆಳೆಸುವುದು.
    4. ಈ ಯೋಜನೆಯು ಭಾರತದ 16 ರಾಜ್ಯಗಳಲ್ಲಿ ಜಾರಿಯಲ್ಲಿದೆ.
    5. ಅಧಿಕ ಪ್ರಮಾಣದ ಆನೆ ಸಂತತಿಗಳನ್ನು ಹೊಂದಿದ ರಾಜ್ಯಗಳಿಗೆ ಆರ್ಥಿಕ ಹಾಗೂ ತಾಂತ್ರಿಕ ನೆರವನ್ನು ನೀಡುವುದು.

    ಭಾರತದಲ್ಲಿ ಇಂದು ಆನೆ ಸುರಕ್ಷಿತಾ ವಲಯಗಳನ್ನು ಸ್ಥಾಪಿಸಲಾಗಿದ್ದು ಈಗ ಒಟ್ಟು 33 ಆನೆ ಸುರಕ್ಷಿತ ವಲಯಗಳಿವೆ. ಪ್ರಸ್ತುತ ಆನೆಗಳ ಸಂಖ್ಯೆ 23,000 ದಿಂದ 41,000 ಕ್ಕೆ ಏರಿಕೆಯಾಗಿದೆ. ಕರ್ನಾಟಕ ಒಂದರಲ್ಲಿ ಒಟ್ಟು 30000ಕ್ಕೂ ಹೆಚ್ಚು ಆನೆಗಳಿವೆ.

    3. ರಣಹದ್ದು ಯೋಜನೆ : (Vultura Project)

    2006 ರ ಮೇ ತಿಂಗಳಲ್ಲಿ ಭಾರತ ಸರ್ಕಾರವು ರಣಹದ್ದು ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯ ಪ್ರಕಾರ ಮಹಾರಾಷ್ಟ್ರ ಹಾಗೂ ಹರಿಯಾಣಾ ಅರಣ್ಯ ಇಲಾಖೆಗಳು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ. ಇವುಗಳು ರಣಹದ್ದು ಉಪಹಾರಗೃಹಗಳನ್ನು  ಆರಂಭಿಸಿವೆ.

    1. ತೀವ್ರವಾಗಿ ಇಳಿಕೆ ಕಾಣುತ್ತಿರುವ ರಣಹದ್ದುಗಳ ಸಂಖ್ಯೆಗಳನ್ನು ಹೆಚ್ಚಿಸುವುದು.
    2. ರಣಹದ್ದು ಉಪಹಾರ ಗೃಹಗಳ ಮೂಲಕ ಡೈಕ್ಲೋಪಿನಾಕ್‌ ಮುಕ್ತ ಸತ್ತ ಜಾನುವಾರುಗಳನ್ನು ರಣಹದ್ದುಗಳಿಗೆ ಆಹಾರವಾಗಿ ನೀಡಲಾಗುವುದು.
    3. ಈ ಉಪಹಾರ ಗೃಹಗಳೊಂದಿಗೆ ಸ್ಥಳೀಯ ಸಾರ್ವಜನಿಕರು ಕೈಜೋಡಿಸಿ ಸ್ವಸ್ಥಾನಗಳಲ್ಲಿ ರಣಹದ್ದುಗಳನ್ನು ರಕ್ಷಿಸುವುದು.
    4. ಗ್ರಾಮಗಳಲ್ಲಿ ಯಾವುದೇ ಪ್ರಾಣಿ ಸತ್ತು ಹೋದರೆ ಗ್ರಾಮೀಣ ಜನರು ಇಲಾಖೆಗೆ ಮಾಹಿತಿ ನೀಡುತ್ತಾರೆ. ಅರಣ್ಯ ಇಲಾಖೆ ಇದನ್ನು ಪರೀಕ್ಷಿಸಿ, ಡೈಕ್ಲೋಪಿನಾಕ್‌ ಮುಕ್ತವಾಗಿದ್ದರೆ ಅದನ್ನು ರಣಹದ್ದು ಗೃಹಗಳಿಗೆ ಸಾಗಿಸುತ್ತಾರೆ ನಂತರ ಸತ್ತ ದನಗಳ ಮಾಲೀಕರಿಗೆ ಹಣಕಾಸಿನ ನೆರವನ್ನು ನೀಡಲಾಗುತ್ತದೆ.
    5. ರಣಹದ್ದು ಗೂಡುಗಳು ಕಂಡು ಬಂದಾಗ ಅಲ್ಲಿ ಆಹಾರದ ವ್ಯವಸ್ಥೆ ಮಾಡುವುದು.

    4. ಸಮುದ್ರ ಆಮೆಗಳ ಯೋಜನೆ: (Sea Turtle Project)

    ಪ್ರತಿ ವರ್ಷ ಚಳಿಗಾಲ ಬಂದಿತೆಂದರೆ ಭಾರತದ ಪೂರ್ವ ಕರಾವಳಿಯಲ್ಲಿ ಆಮೆಗಳು ಗೂಡು ಕಟ್ಟಲು ಸಮುದ್ರದಿಂದ ದಡಕ್ಕೆ ಬರುತ್ತವೆ. ಇವುಗಳಲ್ಲಿ ಪ್ರಮುಖವಾದ ಆಮೆಗಳೆಂದರೆ ʻʻಆಲಿವ್‌ ರಿಡ್ಲೆ ಆಮೆʼʼ 1999 ನವೆಂಬರ್ ತಿಂಗಳಲ್ಲಿ ಪರಿಸರ ಹಾಗೂ ಅರಣ್ಯ ಸಚಿವಾಲಯವು ಅಳಿವಿನ ಅಂಚಿನಲ್ಲಿರುವ ಆಮೆಗಳನ್ನು ರಕ್ಷಿಸಲು ಸಮುದ್ರ ಆಮೆಗಳ ಸಂರಕ್ಷಣಾ ಯೋಜನೆಯನ್ನು  ಜಾರಿಗೆ ತಂದಿತು.

    ಕಾರ್ಯಗಳು: 

    ಒರಿಸ್ಸಾ ರಾಜ್ಯದ ಅರಣ್ಯ ಇಲಾಖೆ ಹಾಗೂ ವನ್ಯಜೀವಿ ಸಮಾಜಗಳು ಸ್ಥಳೀಯ ಎನ್ ಜಿ ಒ ಸಹಯೋಗದೊಂದಿಗೆ ಈ ಕೆಳಗಿನ ರಕ್ಷಣಾ ಕಾರ್ಯಗಳನ್ನು ಹಮ್ಮಿಕೊಂಡಿದೆ.

    1. ಸಮುದ್ರದಲ್ಲಿ ಗಸ್ತು ತಿರುಗುವವರೆಗೆ ಸೂಕ್ತವಾದ ದೋಣಿಗಳ ಸಹಾಯವನ್ನು ಒದಗಿಸುವುದು.
    2. ಆಮೆಗಳ ಚಲನವಲನಗಳನ್ನು ಗುರುತಿಸಲು ಕ್ಷೇತ್ರ ಶಿಬಿರಗಳನ್ನು ಹಮ್ಮಿಕೊಳ್ಳುವುದು.
    3. ಸಾಗರದ ಆಮೆಗಳ ಸಾವಿನ ಸಂಖ್ಯೆಯನ್ನು ಲೆಕ್ಕ ಹಾಕುವುದು.
    4. ಅಕ್ರಮ ಮೀನುಗಾರಿಕೆಯನ್ನು ತಡೆಗಟ್ಟುವುದು.

    5. ಹಂಗೂಲ್ ಯೋಜನೆ: (Hangul Project)

    ಇದನ್ನು ಕಾಶ್ಮೀರ ಕಡವೆ ಎಂದು ಕರೆಯಲಾಗಿದೆ. ಯುರೋಪಿನಲ್ಲಿ ಕಂಡುಬರುವ ಹಿಮಸಾರಂಗ ಜಾತಿಗೆ ಸೇರಿದ ಒಂದು ಜಿಂಕೆ ಪ್ರಭೇದವಾಗಿದೆ. ಇವು ದಟ್ಟವಾದ ನದಿ ಕಾಡುಗಳು, ಎತ್ತರ ಕಣಿವೆಗಳು, ಕಾಶ್ಮೀರ ಕಣಿವೆಯ ಪರ್ವತಗಳು, ಹಿಮಾಚಲ ಪ್ರದೇಶ ಹಾಗೂ ಕಾಶ್ಮೀರದ ದಚಿಗಾಮ್‌ ರಾಷ್ಟ್ರೀಯ ಉದ್ಯಾನವನದಲ್ಲಿ ಕಂಡುಬಂದಿವೆ. 20ನೇ ಶತಮಾನದ ಹೊತ್ತಿನಲ್ಲಿ 5000 ಇದ್ದ ಈ ಜಿಂಕೆಗಳ ಸಂತತಿ ಆವಾಸಸ್ಥಾನಗಳ ನಾಶ, ಸಾಕುಪ್ರಾಣಿಗಳ ಮೇಯಿಸುವಿಕೆ, ಬೇಟೆಯಾಡುವುದು  ಮುಂತಾದ ಕ್ರಿಯೆಗಳಿಂದ ಇಳಿಮುಖವಾಗಿದೆ. ಇಂದು ಇದು ಅಳಿವಿನಂಚಿನ ಪ್ರಭೇದದ ಗುಂಪಿಗೆ ಸೇರಿದೆ. 1970ರ ವೇಳೆಗೆ ಇವುಗಳ ಸಂಖ್ಯೆ 150ಕ್ಕೆ ಇಳಿಯಿತು ಹೀಗಾಗಿ ಜಮ್ಮು ಕಾಶ್ಮೀರ ರಾಜ್ಯದ ಜೊತೆ ಸೇರಿ IUCN and WWFಗಳು ಸಂರಕ್ಷಣಾ ಯೋಜನೆಯನ್ನು ಜಾರಿಗೆ ತಂದವು. ಇದರಿಂದ 1980ರ ವೇಳೆಗೆ ಜಿಂಕೆಗಳ ಸಂತತಿ 340ಕ್ಕೆ ಏರಿತು. 2009ರ ವೇಳೆಗೆ ʻʻʻಕಾಶ್ಮೀರಿನ ಕೆಂಪುಜಿಂಕೆಯ ಹಂಗೂಲ್‌ನ್ನುʼʼ ರಕ್ಷಿಸಿ ಎಂಬ ಅಭಿಯಾನವನ್ನು ಹಮ್ಮಿಕೊಳ್ಳಲಾಯಿತು. ಅಂದಿನಿಂದ ಜಿಂಕೆಗಳನ್ನು ರಕ್ಷಿಸಲು ಅವುಗಳನ್ನು ಬಂಧಿಸಿ ಅಭಿವೃದ್ಧಿಪಡಿಸಲಾಯಿತು. ಸಂತಾನೋತ್ಪತ್ತಿ ಕೇಂದ್ರಗಳನ್ನು ʻʻಸಿಕರ್‌ಘರ್‌ ಟ್ರಾಲ್‌, ಪುಲುವಾನಾ ಮತ್ತು ಕಂಗನ್ ಜಿಲ್ಲೆಗಳಲ್ಲಿ ತೆರೆಯಲಾಯಿತು. ಆದರೂ ಅವುಗಳ ಪ್ರಗತಿ ಕಂಡುಬಂದಿಲ್ಲ.

    6) ಕೆಂಪು ಪಾಂಡಾ ಯೋಜನೆ: (Red Ponda project)

    ಇವುಗಳು ಪೂರ್ವ ಹಿಮಾಲಯ ಪರ್ವತಗಳಲ್ಲಿ 1500 ರಿಂದ 4,000 ಮೀಟರ್‌ಗಳಷ್ಟು ಎತ್ತರವಾದ ಪ್ರದೇಶಗಳಲ್ಲಿ ವಾಸಿಸುತ್ತವೆ. ಅರುಣಾಚಲ ಪ್ರದೇಶದಲ್ಲಿ ಇದನ್ನು ʻʻಬೆಕ್ಕು ಕರಡಿʼʼ ಎಂದು ಕರೆಯುತ್ತಾರೆ. ಕೆಂಪು ಪಾಂಡಾ ಯೋಜನೆಯು 1966 ಜಾರಿಗೆ ಬಂದಿತು. ಈ ಯೋಜನೆಯನ್ನು ಪದ್ಮಜಾ ನಾಯ್ಡು ಹಿಮಾಲಯನ್ ವನ್ಯಜೀವಿ ಉದ್ಯಾನವನದಲ್ಲಿ WWF ನ ಸಹಕಾರದೊಂದಿಗೆ ಆರಂಭಿಸಿದರು. ಕೆಂಪು ಪಾಂಡಾಗಳು ಅರುಣಾಚಲ ಪ್ರದೇಶ, ಸಿಕ್ಕಿಂ ಹಾಗೂ ಪಶ್ಚಿಮ ಬಂಗಾಳದಲ್ಲಿ ಕಂಡು ಬಂದಿವೆ. 

    7)  ಮಣಿಪುರ ಥಾಮೀನ್ ಯೋಜನೆ : (Manipur Thamin Project)

    ಈ ಥಾಮೀನ್ ಜಿಂಕೆಗಳು ಪಣಿಪುರ ಲೋಕ್ತಾ ಕೆರೆಯ ಆಗ್ನೇಯ ಭಾಗದಲ್ಲಿ ಕಂಡುಬರುತ್ತವೆ. ಇದು ಅತ್ಯಂತ ವಿರಳವಾದ ಪ್ರಭೇದವಾಗಿದ್ದು ಅಳಿವಿನಂಚಿನಲ್ಲಿದೆ. ಇದನ್ನು ರಕ್ಷಿಸಲು 1977ರಲ್ಲಿ ಮಣಿಪುರದಲ್ಲಿ ಈ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ.

    8.  ಮೊಸಳೆ ತಳಿ ಸಂವರ್ಧನೆ ಯೋಜನೆ:

    ತೀವ್ರವಾಗಿ ಕುಸಿಯುತ್ತಿರುವ ಮೊಸಳೆಗಳನ್ನು ಅಭಿವೃದ್ಧಿಪಡಿಸಲು 1975ರಲ್ಲಿ ಮೊಸಳೆ ತಳಿ ಸಂವರ್ಧನೆ ಯೋಜನೆಯನ್ನು ಆರಂಭಿಸಲಾಯಿತು. ಈ ಯೋಜನೆಯ ರೂವಾರಿ ಗುಜರಾತ್ ರಾಜ್ಯವಾಗಿದೆ. ಈ ಯೋಜನೆಯು ಒರಿಸ್ಸಾದ ʻʻತಿಕರಪಾರʼʼ ಎಂಬಲ್ಲಿ ಆರಂಭವಾಯಿತು. ನಂತರ ಇದನ್ನು ಉತ್ತರಪ್ರದೇಶ, ಮಹಾರಾಷ್ಟ್ರ, ಅಂಡಮಾನ್, ಅಸ್ಸಾಂ, ಬಿಹಾರ ಹಾಗೂ ನಾಗಾಲ್ಯಾಂಡ್‌ಗಳಿಗೂ ವಿಸ್ತರಿಸಲಾಯಿತು.

    9. ರಾಮಸರ ಸಮಾವೇಶ: (Ramasara Convention)

    ಆರ್ದ್ರ ಭೂಮಿಗಳನ್ನು ಅಥವಾ ಜೀವ ವೈವಿಧ್ಯತೆಗಳನ್ನು ರಕ್ಷಣೆ ಮಾಡಲು ರಾಮಸರ ಸಮಾವೇಶವು ನಡೆಯಿತು. ಈ ರಾಮಸರ ಪ್ರದೇಶವು ಈಗಿನ ಇರಾನ್ ದೇಶದ ಕ್ಯಾಪ್ಸಿಯನ್ ಸಮುದ್ರದ ಕರಾವಳಿಯ ತೇವಭೂಮಿಯಾಗಿದೆ. 1971ರ ಅವಧಿಯಲ್ಲಿ ಪ್ರಪಂಚದ ಹಲವು ದೇಶಗಳು ಈ ತೇವವಾದ ಭೂಮಿಯನ್ನು ರಕ್ಷಿಸುವ ಕುರಿತು ರಾಮಸರ ಪ್ರದೇಶದಲ್ಲಿ ಸಭೆ ಸೇರಿ ಚರ್ಚೆಗಳನ್ನು ನಡೆಸಿ  ಒಂದು ಒಮ್ಮತದ ಅಭಿಪ್ರಾಯಕ್ಕೆ ಬಂದವು. ಈ ಸಮಾವೇಶದಲ್ಲಿ 169 ದೇಶಗಳು ಭಾಗವಹಿಸಿವೆ. ವಿಶ್ವದಾದ್ಯಂತ 2100 ಕ್ಕೂ ಹೆಚ್ಚು ರಾಮಸರ ಸ್ಥಳಗಳನ್ನು ಹೊಂದಿದೆ. ಈ ಸಮಾವೇಶದಲ್ಲಿ ಹಲವಾರು ಪ್ರಾಕೃತಿಕ ಹಾಗೂ ಮಾನವ ನಿರ್ಮಿತ ವಾಸಸ್ಥಾನಗಳು. ನದಿಗಳು ಹಾಗೂ ಹವಳದ ದಿಬ್ಬಗಳನ್ನು ವಿವಿಧ ಬಗೆಯ ತೇವಭೂಮಿಗಳನ್ನಾಗಿ ವರ್ಗೀಕರಿಸಲಾಗಿದೆ. ಹೀಗೆ ವರ್ಗೀಕರಿಸಿದ ಭೂಮಿಗಳನ್ನು ತೇವಭೂಮಿಯ ಪಟ್ಟಿಗೆ ಸೇರಿಸಲಾಗಿದೆ. ಈ ಪಟ್ಟಿಯಲ್ಲಿರುವ ತೇವ ಭೂಮಿಗಳನ್ನು ರಾಮಸರ ತಾಣಗಳು ಎಂದು ಹೆಸರಿಸಲಾಗಿದೆ.

    ಭಾರತ ಹಾಗೂ ರಾಮಸರ ಸಮಾವೇಶ:

    ಭಾರತವು ಒಟ್ಟು 27400 ಚೌಗು ಪ್ರದೇಶಗಳನ್ನು ಹೊಂದಿದೆ. ಅದರಲ್ಲಿ 23450 ಒಳನಾಡಿನ ಹಾಗೂ 3950 ಕರಾವಳಿಯ ಚೌಗು ಪ್ರದೇಶಗಳಾಗಿವೆ. 1981 ರಲ್ಲಿ ಭಾರತವು ರಾಮಸರ ಸಮಾವೇಶದ ಸದಸ್ಯ ರಾಷ್ಟ್ರವಾಗಿ ಸೇರ್ಪಡೆಯಾಯಿತು. ಚಿಲ್ಕಾ ಹಾಗೂ ಘಾನಾ ಸರೋವರ ಭಾರತದ ಮೊದಲ ರಾಮಸರ ಸರೋವರಗಳಾಗಿವೆ. ಭಾರತದ ಚೌಗು ಪ್ರದೇಶಗಳನ್ನು ರಾಮಸರ ತಾಣಗಳ ಪಟ್ಟಿಗೆ ಸೇರಿಸಲಾಗಿದೆ. ಭಾರತದಲ್ಲಿ ಈಗ 89 ರಾಮಸರ ತಾಣಗಳಿವೆ. ಭಾರತದ ಅತಿ ದೊಡ್ಡ ರಾಮಸರ ತಾಣವೆಂದರೆ ಸುಂದರ್‌ ಬನ್ಸ್‌, ವಿಶ್ವದ ಅತೀ ದೊಡ್ಡ ರಾಮಸರ್‌ ತಾಣವೆಂದರೆ ಪಂಥನಾಲ್‌, ಇದು ದಕ್ಷಿಣ ಅಮೆರಿಕದಲ್ಲಿದೆ. ಭಾರತದ ಚಿಕ್ಕ ರಾಮಸರ್‌ ತಾಣ ರೇಣುಕಾ ಚೌಗು ಪ್ರದೇಶ ಹಿಮಾಚಲ ಪ್ರದೇಶದಲ್ಲಿದೆ. ಭಾರತದಲ್ಲಿ ಗರಿಷ್ಠ ರಾಮಸರ ತಾಣಗಳನ್ನು ತಮಿಳುನಾಡು ಹೊಂದಿದೆ. ಇಲ್ಲಿ ಒಟ್ಟು 20 ತಾಣಗಳಿವೆ. ನಂತರ ಉತ್ತರ ಪ್ರದೇಶ ಇಲ್ಲಿ 10 ತಾಣಗಳಿವೆ.

    10. ಪವಿತ್ರವನ: (Secred Groves)

    ಭಾರತದ ಪ್ರಾಚೀನ ಕಾಲದಿಂದಲೂ ಅರಣ್ಯ ರಕ್ಷಣೆಗೆ ಆದ್ಯತೆ ನೀಡಲಾಗಿದೆ. ವಿವಿಧ ಸಮುದಾಯಗಳು ದೇಶದಾದ್ಯಂತ ಪವಿತ್ರ ವನಗಳನ್ನು ಸ್ಥಾಪಿಸಿ ಸಂರಕ್ಷಿಸಿವೆ. ಇವು ಇಂದಿಗೂ  ಪಳೆಯುಳಿಕೆಯ ಹಾಗೆ ಉಳಿದುಕೊಂಡಿವೆ. ಸಹ್ಯಾದ್ರಿಯ ಪ್ರತಿಯೊಂದು ಗ್ರಾಮಗಳೂ ಈ ಪವಿತ್ರವನ ಸ್ಥಾಪಿಸಿ ರಕ್ಷಿಸಿಕೊಂಡು ಬರುತ್ತಿವೆ. ಇವುಗಳನ್ನು ವಿವಿಧ ಹೆಸರುಗಳಿಂದ ಕರೆಯಲಾಗುತ್ತಿದೆ. ಕರ್ನಾಟಕದಲ್ಲಿ ʻದೇವರನಾಡುʼ ಕೇರಳದಲ್ಲಿ ಕಾವು, ಸರ್ಪಕಾವು, ಮಹಾರಾಷ್ಟ್ರದಲ್ಲಿ ದೇವರೈ, ಆಂಧ್ರಪ್ರದೇಶದಲ್ಲಿ ʻʻಪವಿತ್ರ ಕ್ಷೇತ್ರಲುʼʼ ಅರುಣಾಚಲ ಪ್ರದೇಶದಲ್ಲಿ ʻʻಗುಂಪಾʼʼ ಛತ್ತೀಸ್‌ಗಡದಲ್ಲಿ ಸ್ವರ್ಣ, ದೇವಲಾಸ್‌, ತಮಿಳುನಾಡಿನಲ್ಲಿ ʻಕೋವಿಲ್ ಕಾಡುʼ ಉತ್ತರಖಂಡದಲ್ಲಿ ʻದೇರ್‌ಭೂಮಿʼ ಎಂದು ಕರೆಯುತ್ತಾರೆ. ಕೊಡಗಿನಲ್ಲಿಯೇ ಸುಮಾರು 1000 ದೇವರ ಕಾಡುಗಳಿವೆ. ಅರಣ್ಯನಾಶ, ನಗರೀಕರಣ, ದನಕರುಗಳ ಮೇಯುವಿಕೆ ಹಾಗೂ ಜನರ ನಿರ್ಲಕ್ಷದಿಂದಾಗಿ ಹಾಳಾಗಿವೆ.

    ಉಪಸಂಹಾರ

    ಭಾರತ ಸರ್ಕಾರವು ಜಾರಿಗೆ ತಂದಿರುವ ಈ ಜೀವ ಸಂರಕ್ಷಣಾ ಯೋಜನೆಗಳು ಪ್ರಕೃತಿ ಮತ್ತು ಮಾನವನ ನಡುವಿನ ಸಮತೋಲನವನ್ನು ಕಾಯ್ದುಕೊಳ್ಳಲು ಅತ್ಯಂತ ಅಗತ್ಯವಾಗಿವೆ. ಅಳಿವಿನಂಚಿನಲ್ಲಿರುವ ಪ್ರಭೇದಗಳನ್ನು ಉಳಿಸುವ ಮೂಲಕ ಪರಿಸರದ ಆರೋಗ್ಯವನ್ನು ಸುಧಾರಿಸುವ ಪ್ರಯತ್ನ ಇದಾಗಿದೆ. ಸರ್ಕಾರದ ಜೊತೆಗೆ ಸಾರ್ವಜನಿಕರ ಸಹಕಾರವೂ ಈ ಯೋಜನೆಗಳ ಯಶಸ್ಸಿಗೆ ಮುಖ್ಯವಾಗಿದೆ. ಪ್ರತಿಯೊಬ್ಬ ನಾಗರಿಕನು ಪರಿಸರ ಸಂರಕ್ಷಣೆಯ ಹೊಣೆ ಹೊತ್ತಾಗ ಮಾತ್ರ ಭವಿಷ್ಯ ಪೀಳಿಗೆಗೆ ಸುರಕ್ಷಿತ ಪ್ರಕೃತಿಯನ್ನು ನೀಡಲು ಸಾಧ್ಯವಾಗುತ್ತದೆ.

    ಭಾರತದಲ್ಲಿ ಅಳಿವಿನಂಚಿನಲ್ಲಿರುವ ಮತ್ತು ಸ್ಥಳೀಯ ಪ್ರಭೇದಗಳು

    ಭಾರತದಲ್ಲಿ ಅಳಿವಿನಂಚಿನಲ್ಲಿರುವ ಮತ್ತು ಸ್ಥಳೀಯ ಪ್ರಭೇದಗಳು

    ವಿಶ್ವದಲ್ಲಿ ಸುಮಾರು 12 ಮಹಾಜೈವಿಕ ವೈವಿಧ್ಯತೆಯಿಂದ ಕೂಡಿದ ರಾಷ್ಟ್ರಗಳು ಉಂಟು. ಅದರಲ್ಲಿ ಭಾರತವು ಸಹ ಒಂದು ಎಂದು ಪರಿಗಣಿತವಾಗಿದೆ. ಏಷ್ಯಾದ ಜೈವಿಕ ವೈವಿಧ್ಯ ದೇಶಗಳಲ್ಲಿ ನಾಲ್ಕನೇ ಸಾಧನೆ ಮಾಡಿದ ದೇಶ ಭಾರತವಾಗಿದೆ. ಹಾಗೆ ವಿಶ್ವದ ಸಸ್ಯ ವೈವಿಧ್ಯತೆ ಹೊಂದಿದ ದೇಶಗಳಲ್ಲಿ 10ನೇ ಸ್ಥಾನದಲ್ಲಿದೆ. ಪ್ರಪಂಚದ ದೇಶಿಯ ಕಸೇರುಕಗಳ ಪಟ್ಟಿಯಲ್ಲಿ 11ನೇ ಸ್ಥಾನ ಪಡೆದಿದೆ.

    ಭಾರತದಲ್ಲಿ ತೀವ್ರ ಅಪಾಯದ ಅಂಚಿನಲ್ಲಿರುವ ಪ್ರಬಂಧಗಳೆಂದರೆ.

    1 ಸಸ್ತನಿಗಳು:

    1. ಚಿಕ್ಕದಾದ ಕಾಡು ಹಂದಿ:  ಈ ಪ್ರಾಣಿಯ ನಾಶದಿಂದಾಗಿ ಇದನ್ನೇ ಅವಲಂಬಿಸಿ ಬದುಕು  ಕಂಡುಕೊಂಡಿದ್ದ ಹಾಗ್ ಎಂಬ ಜೀವಿಯು ಅಳಿವಿನ ಅಂಚಿನಲ್ಲಿದೆ.
    2. ಕೊಂಡಾನ ಇಲಿ:  ಭಾರತದಲ್ಲಿ ಮಾತ್ರ ಕಾಣಸಿಗುವ ಜಲವಾಸಿಯಾಗಿದ್ದು ಇದರ ಆವಾಸಸ್ಥಾನ ನಾಶವಾಗುತ್ತಿದೆ. ಹುಲ್ಲುಗಾವಲು ಮೇಯುವಿಕೆ ಹಾಗೂ ಪ್ರವಾಸೋದ್ಯಮ ಚಟುವಟಿಕೆಗಳಿಂದ ಇಲಿ ವಿನಾಶದ ಅಂಚಿಗೆ ಬಂದು ತಲುಪಿದೆ.
    3. ಮಲಬಾರ್ ಕಿರುಬ:  ಇದು ಪಶ್ಚಿಮ ಘಟ್ಟದಲ್ಲಿ ಕಂಡುಬರುತ್ತದೆ. ಕಾಡುಗಳ ನಾಶದಿಂದಾಗಿ ಈ ಪ್ರಾಣಿ ಅಪಾಯವನ್ನು ಎದುರಿಸುತ್ತಿದೆ.
    4. ಜಾವಾದ ಘೇಂಡಾಮೃಗ: ಘೇಂಡಾಮೃಗದ 5 ಪ್ರಭೇದಗಳ ಪೈಕಿ ಇದು ಚಿಕ್ಕ ಪ್ರಭೇದವಾಗಿದೆ. ಹಿಮಾಲಯದ ಹಾಗೂ ಈಶಾನ್ಯ ಭಾರತದಲ್ಲಿ ಇದು ಕಂಡುಬರುತ್ತದೆ. ಇಂದು ಭಾರತದಲ್ಲಿ ಈ ಪ್ರಾಣಿ ಇಲ್ಲವಾಗಿದೆ.

    2. ಸರಿಸೃಪಗಳು:

    1. ಉದ್ದ ಮುಖದ ಮೊಸಳೆ: ಮೀನುಗಳನ್ನು ತಿಂದು ಬದುಕುವ ಇದು ಚಂಬಲ್‌ ರಾಷ್ಟ್ರೀಯ ಅಭಯಾರಣ್ಯ, ರಾಜಸ್ಥಾನ್‌ ಹಾಗೂ ಮಧ್ಯ ಪ್ರದೇಶದಲ್ಲಿ ಕಂಡುಬರುತ್ತದೆ. ಅಣೆಕಟ್ಟು ನಿರ್ಮಾಣ ಹಾಗೂ ಕೃತಕ ಹಡಗುದಾಣ ನಿರ್ಮಾಣ ಮತ್ತು ಮರಳು ಗಣಿಗಾರಿಕೆಯಿಂದ ನಾಶವಾಗಿದೆ.
    2. ಗಿಡುಗ ಮೂಗಿನ ಆಮೆ: ಅತೀ ದುರ್ಬಲವಾದ ಸರಿಸೃಪವಾಗಿದೆ. ಮರುಳು ತೀರ ಬುಡದಲ್ಲಿ ಇದರ ವಾಸ. 25 ರಿಂದ 45 ವರ್ಷ ಬದುಕುತ್ತದೆ. ಆಮೆ ಚಿಪ್ಪು ಮಾರಾಟ, ಮಾಂಸಕ್ಕಾಗಿ ಹಾಗೂ ತೈಲಕ್ಕಾಗಿ ಇದನ್ನು ಕೊಲೆ ಮಾಡಲಾಗುತ್ತದೆ.
    3. ಸಿಸ್ಟಾರ ಹಗಲಿನ ಹಲ್ಲಿ: ಕಾಡಿನಲ್ಲಿ ವಾಸಿಸುವ ದೊಡ್ಡ ಹಲ್ಲಿ ಇದಾಗಿದೆ. ಪ್ರಮುಖವಾಗಿ ಕೀಟಗಳನ್ನು ತಿಂದು ಬದುಕುತ್ತದೆ. ರಾತ್ರಿ ವೇಳೆ ಇದರ ಓಡಾಟ ಹೆಚ್ಚು. ಪಶ್ಚಿಮ ಘಟ್ಟಗಳು, ನೀಲಗಿರಿ ಬೆಟ್ಟಗಳು ಇವುಗಳ ಆವಾಸ ಸ್ಥಾನ. ಕಾಡುಗಳ ನಾಶ ಹಾಗೂ ಅವುಗಳ ವಾಸಸ್ಥಾನಗಳ ನಾಶದಿಂದಾಗಿ ಹಲ್ಲಿಗಳು ಅಳಿವಿನ ಅಂಚಿಗೆ ಬಂದು ತಲುಪಿವೆ.
    4. ಕಾಡು ಗೂಬೆ: ಇದು ಒಣಎಲೆ ಉದುರುವ ಕಾಡುಗಳಲ್ಲಿ ಕಂಡುಬರುತ್ತದೆ. ಮಹಾರಾಷ್ಟ್ರ ಹಾಗೂ ಮಧ್ಯಪ್ರದೇಶದ ದಕ್ಷಿಣ ಭಾಗದಲ್ಲಿ ಇದರ ವಾಸ. ಮರಗಳ ಸಾಗಾಣಿಕೆ ಮತ್ತು ಮರಗಳ ಕಟಾವುಗಳಿಂದ ಗೂಬೆಗಳು ಕಣ್ಮರೆಯಾಗುತ್ತಿವೆ.

    3. ಪಕ್ಷಿಗಳು:

    1. ಬಿಳಿ ಹೊಟ್ಟೆಯ ಕೊಕ್ಕರೆ:  ಅರುಣಾಚಲ ಪ್ರದೇಶ ಹಾಗೂ ಅಸ್ಸಾಂನಲ್ಲಿ ಅತಿ ವಿರಳವಾಗಿ ಕಂಡುಬರುವ ಈ ಪಕ್ಷಿಗಳು ಎತ್ತರದ ಹುಲ್ಲುಗಾವಲುಗಳನ್ನು ಆಶ್ರಯಿಸಿರುತ್ತವೆ. ಬೆಟ್ಟದ ಕಡಿದಾದ ಪ್ರದೇಶಗಳು ಇವುಗಳಿಗೆ ಇಷ್ಟ. ಅತಿಯಾದ ಬೇಟೆಯ ಕಾರಣದಿಂದಾಗಿ ಈ ಪಕ್ಷಿಗಳು ವಿನಾಶದ ಅಂಚಿನಲ್ಲಿದೆ.
    2. ಗುಲಾಬಿ ಬಣ್ಣ ತಲೆಯ ಬಾತುಕೋಳಿ:  ನಿಂತ ನೀರಿನ ಕೊಳಗಳು ಹಾಗೂ ಎತ್ತರದ ಹುಲ್ಲುಗಾವಲನ್ನು ಆಶ್ರಯಿಸಿ ಬದುಕುತ್ತಿರುವ ಈ ಬಾತುಕೋಳಿಯ ತಲೆಯು ಕಡುಗೆಂಪು ಗುಲಾಬಿ ಬಣ್ಣವನ್ನು ಹೊಂದಿದೆ.  ಇವು ಭಾರತ, ಬಾಂಗ್ಲಾದೇಶ ಹಾಗೂ ಮಯನ್ಮಾರಗಳಲ್ಲಿ ಕಂಡುಬಂದಿದೆ. ಜೌಗು ಪ್ರದೇಶಗಳ ಸವಕಳಿ, ಬೇಟೆಗಾರಿಕೆ ಹಾಗೂ ಅವುಗಳ ವಾಸಸ್ಥಾನಗಳ ನಾಶದಿಂದಾಗಿ ಬಾತುಕೋಳಿಗಳ ಸಂತತಿ  ಅಳಿವಿನಂಚಿನಲ್ಲಿದೆ.
    3. ಗೊರವ ಹಕ್ಕಿ:  ಈ ಹಕ್ಕಿಗಳ ಸಂಖ್ಯೆ ಹಠಾತ್ತಾಗಿ ಕಡಿಮೆಯಾಗಿದೆ. ಪಾಳು ಬಿದ್ದ ಭೂಮಿ ಹಾಗೂ ಪೊದೆಗಳಲ್ಲಿ ಇವುಗಳ ವಾಸ. ಸೌದಿ ಅರೇಬಿಯಾ, ಸಿರಿಯಾ, ಈಜಿಪ್ಟ್‌, ಇರಾಕ್, ಭಾರತ ಹಾಗೂ ರಷ್ಯಾದಲ್ಲಿ ಈ ಬಗೆಯ ಪಕ್ಷಿಗಳು ಕಂಡುಬರುತ್ತವೆ. ತಗ್ಗು ಪ್ರದೇಶಗಳ ಸವಕಳಿ ಮತ್ತು ಅವುಗಳ ಆವಾಸಸ್ಥಾನಗಳಲ್ಲಿನ ಕಾಡು ನಾಶದಿಂದಾಗಿ ಗೊರವ ಹಕ್ಕಿಗಳ ಸಂತತಿ ಕಡಿಮೆಯಾಗುತ್ತಿದೆ.
    4. ಹಿಮಾಲಯದ ಕೌಜುಗ:  ಇದು ಹಾರಲು ಬಾರದ ಮತ್ತು ಹುಲ್ಲುಗಾವಲಿನಲ್ಲಿ ವಾಸಿಸುವ ಹಕ್ಕಿ. 1876ರಲ್ಲಿ ಕಂಡುಬಂದ ಈ ಹಕ್ಕಿ ಇಂದು ಆಗೊಮ್ಮೆ ಈಗೊಮ್ಮೆ ಕಂಡುಬರುತ್ತದೆ.
    5. ಸೈಬೀರಿಯನ್ ಕೊಕ್ಕರೆ:  ದೊಡ್ಡ ಗಾತ್ರದ ಸುಂದರ ಪಕ್ಷಿ ಇದಾಗಿದೆ. 2002 ರಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿತ್ತು. ಚೌಗು ಪ್ರದೇಶಗಳಲ್ಲಿ ಇವುಗಳ ವಾಸ. ಕೀಟನಾಶಕಗಳಿಂದ ಈ ಕೊಕ್ಕರೆಗಳು ನಾಶಗೊಳ್ಳುತ್ತವೆ. ಬೇಟೆಗಾರಿಕೆ ಹಾಗೂ ಕೃಷಿ ಭೂಮಿಯ ಪರಿವರ್ತನೆಯು ಸಹ ಇವುಗಳ ಅಳಿವಿಗೆ ಕಾರಣವಾಗಿದೆ.

    4. ಉಭಯವಾಸಿಗಳು:

    1. ಭಾರತದ ಗುಂಡ್ಯ ಕಪ್ಪೆ: ಸಮುದ್ರಮಟ್ಟಕ್ಕಿಂತ 200 ಮೀಟರ್ ಎತ್ತರದಲ್ಲಿ ಇವುಗಳ ವಾಸ. ದನ-ಕರುಗಳ ಅತಿಯಾದ ಮೇಯುವಿಕೆ, ಮರ ಸಾಗಾಣಿಕೆ ಹಾಗೂ ರಸ್ತೆ ನಿರ್ಮಾಣದಂತಹ ಕಾರ್ಯಗಳಿಂದ ಈ ಕಪ್ಪೆಗಳ ಸಂತತಿ ನಾಶವಾಗುತ್ತಿದೆ.
    2. ಹುಲಿ ಕಪ್ಪೆ:  ಇದನ್ನು ಮಹಾರಾಷ್ಟ್ರದಲ್ಲಿ ಪತ್ತೆಹಚ್ಚಲಾಗಿದೆ. ಸಮುದ್ರ ಮಟ್ಟದಿಂದ 720 ಮೀಟರ್ ಎತ್ತರದಲ್ಲಿ ವಾಸಿಸುತ್ತದೆ. ಕಾಡುಗಳ ನಾಶ ಹಾಗೂ ಅವುಗಳ ವಾಸಸ್ಥಾನಗಳ ನಾಶದಿಂದ ಈ ಕಪ್ಪೆಗಳ ಸಂತತಿ ಕಡಿಮೆಯಾಗುತ್ತಿದೆ.
    3. ಚಾರ್ಲ್ಸ್ ಡಾರ್ವಿನ್ ಕಪ್ಪೆ: ಇದು ಸಮುದ್ರ ಮಟ್ಟದಿಂದ 200 ಮೀಟರ್ ಎತ್ತರದಲ್ಲಿ ಕಂಡು ಬರುತ್ತದೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಇವುಗಳ ವಾಸ. ಕಾಡುಗಳ ನಾಶದಿಂದ ಈ ಕಪ್ಪೆಗಳು ವಿನಾಶದ ಅಂಚಿಗೆ ಬಂದು ತಲುಪಿವೆ.
    4. ಬಣ್ಣದ ಹೊಳೆಯುವ ಪೊದೆ ಕಪ್ಪೆ:  ಇದೊಂದು ಅಪರೂಪದ ಬಣ್ಣದ ಕಪ್ಪೆ. ಸಮುದ್ರ ಮಟ್ಟದಿಂದ 269 ಮೀಟರ್ ಎತ್ತರದಲ್ಲಿ ವಾಸಿಸುತ್ತದೆ. ಎರಾವಿಕುಲಂ ಅಭಯಾರಣ್ಯ ಇವುಗಳ ವಾಸ. ಕಾಡುಗಳ ನಾಶ ಹಾಗೂ ಇವುಗಳ ಆವಾಸಸ್ಥಾನಗಳ ನಾಶದಿಂದಾಗಿ ಈ ಕಪ್ಪೆಗಳು ಸಾವಕಾಶವಾಗಿ ಕಣ್ಮರೆಯಾಗುತ್ತಿವೆ.

    5.  ಮೀನುಗಳು:

    1. ಪಾಂಡಿಚೇರಿ ಸಾರ್ಕ್:  ಇದು ಸಮುದ್ರ ಕಡಲ ತೀರದಲ್ಲಿ ಕಂಡುಬರುತ್ತದೆ.  ಪಾಕಿಸ್ತಾನದವರೆಗೂ ಈ ಮೀನುಗಳು ಕಂಡುಬರುತ್ತವೆ. ಅನಿಯಂತ್ರಿತ ವಾಣಿಜ್ಯ ಮೀನುಗಾರಿಕೆಯ ಪರಿಣಾಮವಾಗಿ ಇವುಗಳ  ಸಂಖ್ಯೆ ಕಡಿಮೆಯಾಗಿದೆ.
    2. ಗಂಗಾ ನದಿ ಸಾರ್ಕ್: ಅಪರೂಪದಿಂದ ಕೂಡಿದ ಈ ಮೀನುಗಳು ಗಂಗಾ ನದಿಯ ಕೆಸರು ನೀರು ಹಾಗೂ ಬಂಗಾಳಕೊಲ್ಲಿಯಲ್ಲಿ ಕಂಡುಬರುತ್ತವೆ.
    3. ದೊಡ್ಡ ಗಾತ್ರದ ಗರಗಸ ಮೀನು:  ದೊಡ್ಡ ಗಾತ್ರದ ಮೀನು ಗರಗಸ ಹಲ್ಲುಗಳನ್ನು ಹೊಂದಿದೆ. ಇದು ಮೂರು ಮೀಟರ್ ಉದ್ದ ಬೆಳೆಯುವುದರಿಂದ ಇದಕ್ಕೆ ಗೂಳಿ ಶಾರ್ಕ್ ಎಂದು ಕರೆಯುತ್ತಾರೆ. ಹೂಳು ತುಂಬುವುದು, ನೀರಿನ ಮಲೀನತೆ, ಅಣೆಕಟ್ಟು ನಿರ್ಮಾಣ ಹಾಗೂ ಆವಾಸಸ್ಥಾನಗಳ ನಾಶ ಈ ಮೀನುಗಳ ಸಂತತಿಯ ಅವನತಿಗೆ ಕಾರಣವಾಗಿದೆ.
    4. ಚಾಕು ಹಲ್ಲಿನ ಮೀನು:  ಈ ಮೀನು ಬ್ಲೇಡ್ ರೀತಿಯ ಹಲ್ಲುಗಳನ್ನು ಹೊಂದಿದೆ. ಇದು ಸಾಗರದ ಆಳದಲ್ಲಿ ಇರುತ್ತದೆ. ಹಿಂದೂ ಮಹಾಸಾಗರ ಹಾಗೂ ಪೆಸಿಫಿಕ್ ಮಹಾಸಾಗರಗಳಲ್ಲಿ ಇವುಗಳ ವಾಸ. ಹೆಚ್ಚು ಬೇಡಿಕೆ ಇರುವ ಮೀನು ಇದಾಗಿದೆ.

    ಉಪಸಂಹಾರ

    ಭಾರತದಲ್ಲಿನ ಅಳಿವಿನಂಚಿನಲ್ಲಿರುವ ಹಾಗೂ ಸ್ಥಳೀಯ ಪ್ರಭೇದಗಳ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಕಾಡು ನಾಶ, ಅಕ್ರಮ ಬೇಟೆ, ಮಾಲಿನ್ಯ ಮತ್ತು ಆವಾಸಸ್ಥಾನಗಳ ವಿನಾಶವನ್ನು ತಡೆಗಟ್ಟಿದಾಗ ಮಾತ್ರ ಜೀವ ವೈವಿಧ್ಯ ಉಳಿಯಲು ಸಾಧ್ಯ. ಸರ್ಕಾರದ ಕ್ರಮಗಳ ಜೊತೆಗೆ ಜನಜಾಗೃತಿ ಮತ್ತು ಸಮುದಾಯದ ಸಹಭಾಗಿತ್ವ ಅತ್ಯಂತ ಅಗತ್ಯ. ಇಂದೇ ನಾವು ಕೈಗೊಳ್ಳುವ ಸಂರಕ್ಷಣಾ ಪ್ರಯತ್ನಗಳು ನಾಳೆಯ ಪರಿಸರ ಸಮತೋಲನವನ್ನು ನಿರ್ಧರಿಸುತ್ತವೆ. ಪ್ರಕೃತಿಯನ್ನು ಉಳಿಸುವುದೇ ಭವಿಷ್ಯವನ್ನು ಉಳಿಸುವ ಮಾರ್ಗವಾಗಿದೆ