ವಾಯುಮಾಲಿನ್ಯ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕಾಯಿದೆ 1981

ವಾಯುಮಾಲಿನ್ಯ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕಾಯಿದೆ 1981

ಬೆಳೆಯುತ್ತಿರುವ ಜನಸಂಖ್ಯೆ ಹಾಗೂ ಕೈಗಾರಿಕೆಗಳಿಂದ ವಾಯು ಮಾಲಿನ್ಯವಾಗುತ್ತಿದೆ. ಇದು ಮಾನವನ ಆರೋಗ್ಯ ಹಾಗೂ ಪರಿಸರದ ಮೇಲೆ ತೀವ್ರ ಪರಿಣಾಮವನ್ನುಂಟುಮಾಡುತ್ತದೆ. ಭಾರತವು ಒಕ್ಕೂಟ ರಾಷ್ಟ್ರಗಳ (UN) ಮಾನವ ಮತ್ತು ಪರಿಸರ ಸಮಾವೇಶ ಸ್ಟಾಕ್ ಹೋಂ 1972 ರಲ್ಲಿ ಭಾಗವಹಿಸಿದ ನಂತರ ಈ ವಾಯುಮಾಲಿನ್ಯ ತಡೆ ಹಾಗೂ ನಿಯಂತ್ರಣ ಕಾಯಿದೆ 1981 ನ್ನು ಜಾರಿಗೆ ತರಲಾಯಿತು. ಇದು 7 ಅಧ್ಯಾಯಗಳು ಹಾಗೂ 54 ಭಾಗಗಳನ್ನು ಹೊಂದಿದೆ.

ಕೇಂದ್ರ ಮಂಡಳಿಯ ಕಾರ್ಯಗಳು:  ಕೇಂದ್ರ ಮಂಡಳಿಯ ಕಾರ್ಯಗಳು ಈ ಕೆಳಗಿನಂತಿವೆ.

  1.  ವಾಯುವಿನ ಗುಣಮಟ್ಟ ಕಾಯ್ದುಕೊಳ್ಳಲು, ಮಾಲಿನ್ಯವನ್ನು ತಡೆಗಟ್ಟಲು, ನಿಯಂತ್ರಿಸಲು, ಕಡಿಮೆ ಮಾಡಲು ಕ್ರಮ ಜರುಗಿಸುವಂತೆ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡುವುದು.
  2. ವಾಯು ಮಾಲಿನ್ಯವನ್ನು ತಡೆಗಟ್ಟಲು ದೇಶ ವ್ಯಾಪಿ ಕಾರ್ಯಯೋಜನೆಯನ್ನು ಹಮ್ಮಿಕೊಳ್ಳುವುದು.
  3.  ವಾಯುವಿನ ಗುಣಮಟ್ಟವನ್ನು ಸುಧಾರಿಸುವ ಹಾಗೂ ಅದರ ಸಮಸ್ಯೆಗಳ ಬಗ್ಗೆ ಕಾಲಕಾಲಕ್ಕೆ ಸಲಹೆಯನ್ನು ನೀಡುವುದು.
  4.  ವಾಯುಮಾಲಿನ್ಯವನ್ನು ತಡೆಗಟ್ಟಲು ಬೇಕಾಗುವ ತಾಂತ್ರಿಕ ಸಹಾಯ ಮತ್ತು ಮಾರ್ಗದರ್ಶನಗಳನ್ನು ರಾಜ್ಯ ಮಂಡಳಿ ಹಾಗೂ ಕೈಗಾರಿಕೆಗಳಿಗೆ ಪೂರೈಸುವುದು.
  5.  ವಾಯುಮಾಲಿನ್ಯವನ್ನು ತಡೆಗಟ್ಟಲು ಹಾಗೂ ನಿಯಂತ್ರಿಸಲು ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸುವುದು ಹಾಗೂ ತರಬೇತಿಯನ್ನು ನೀಡುವುದು.
  6. ವಾಯುಮಾಲಿನ್ಯದ ಕುರಿತು ಸಂಶೋಧನೆಗಳನ್ನು ನಡೆಸಲು ಪ್ರಯೋಗಾಲಯಗಳನ್ನು ಸ್ಥಾಪಿಸುವುದು.
  7. ವಾಯು ಮಾಲಿನ್ಯ ಗುಣಮಟ್ಟವನ್ನು ಕಾಪಾಡುವುದು.
  8. ವಾಯುಮಾಲಿನ್ಯಕ್ಕೆ ಕಾರಣ, ಪರಿಣಾಮ ಹಾಗೂ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಮಗ್ರವಾದ ಮಾಹಿತಿಯನ್ನು ಸಾರ್ವಜನಿಕರಿಗೆ ತಿಳಿಸುವುದು. ಇದಕ್ಕಾಗಿ ಸಮೂಹ ಮಾಧ್ಯಮಗಳನ್ನು ಬಳಸಿಕೊಳ್ಳುವುದು.
  9.  ದ್ವಿಚಕ್ರ ವಾಹನ ಮತ್ತು ತ್ರಿಚಕ್ರ ವಾಹನಗಳು ಶೇ. 4.5 ಕ್ಕಿಂತ ಹೆಚ್ಚು ಮಾಲಿನ್ಯಕಾರಕಗಳನ್ನು ಬಿಡುಗಡೆ ಮಾಡದಂತೆ ಕ್ರಮ ಜರುಗಿಸುವುದು.
  10. ವಾಹನಗಳಿಗೆ ಶಬ್ಧ ಮಾಡುವ ಉಪಕರಣಗಳನ್ನು ನಿಗದಿಪಡಿಸದಂತೆ ಬಳಕೆ ಮಾಡಬೇಕು.

ರಾಜ್ಯ ಮಂಡಳಿಗಳ ಕಾರ್ಯಗಳು:

  1.  ಮಾಲಿನ್ಯ ನಿಯಂತ್ರಣ ಕುರಿತು ರಾಜ್ಯ ಸರ್ಕಾರಗಳಿಗೆ ಸಲಹೆ ಹಾಗೂ ಶಿಫಾರಸ್ಸುಗಳನ್ನು ನೀಡುವುದು.
  2.  ವಾಯುಮಾಲಿನ್ಯಕ್ಕೆ ಸಂಬಂಧಿಸಿದಂತೆ ಪೂರಕವಾದ ಕಾರ್ಯಕ್ರಮಗಳನ್ನು ರೂಪಿಸಿಕೊಳ್ಳಲು ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡುವುದು.
  3.  ವಾಯುಮಾಲಿನ್ಯದ ಕುರಿತಂತೆ ಕೇಂದ್ರ ಸರ್ಕಾರದೊಂದಿಗೆ ಸೇರಿ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು.
  4.  ವಾಯು ಮಾಲಿನ್ಯ ಪ್ರದೇಶಗಳನ್ನು ಪರಿಶೀಲಿಸುವುದು.
  5. ವಾಯುಮಾಲಿನ್ಯಕ್ಕೆ ಕಾರಣವಾಗುವ ಕೈಗಾರಿಕೆಗಳನ್ನು ಗುರುತಿಸುವುದು ಹಾಗೂ ಅಂತಹ ಕೈಗಾರಿಕೆಗಳಿಗೆ ಎಚ್ಚರಿಕೆಯನ್ನು ನೀಡುವುದು.
  6.  ವಾಯುಮಾಲಿನ್ಯವನ್ನು ಕಡಿಮೆ ಮಾಡುವಂತಹ ಕ್ರಮಗಳನ್ನು ರೂಪಿಸಿ ಅವುಗಳನ್ನು ಅನುಷ್ಠಾನಕ್ಕೆ ತರುವಂತೆ ಕ್ರಮ ಜರುಗಿಸುವುದು.

ಉಪಸಂಹಾರ

ವಾಯುಮಾಲಿನ್ಯ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕಾಯಿದೆ–1981 ದೇಶದ ಪರಿಸರ ಸಂರಕ್ಷಣೆಗೆ ಮಹತ್ವದ ಕಾನೂನು ಸಾಧನವಾಗಿದೆ. ಕೇಂದ್ರ ಹಾಗೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗಳು ಈ ಕಾಯಿದೆಯ ಮೂಲಕ ವಾಯು ಗುಣಮಟ್ಟವನ್ನು ಸುಧಾರಿಸಲು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುತ್ತಿವೆ. ಕೈಗಾರಿಕೆಗಳು ಮತ್ತು ಸಾರ್ವಜನಿಕರು ಈ ನಿಯಮಗಳನ್ನು ಪಾಲಿಸುವುದರಿಂದ ಮಾತ್ರ ಆರೋಗ್ಯಕರ ಪರಿಸರ ಸಾಧ್ಯವಾಗುತ್ತದೆ. ಪರಿಸರ ರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಶುದ್ಧ ವಾಯು ನಮ್ಮ ಮೂಲಭೂತ ಹಕ್ಕಾಗಿದೆ.

ಪರಿಸರ ಸಂರಕ್ಷಣಾ ಕಾಯಿದೆ 1986

ಪರಿಸರ ಸಂರಕ್ಷಣಾ ಕಾಯಿದೆ 1986

ಈ ಕಾಯಿದೆಯನ್ನು ಪರಿಸರ ರಕ್ಷಣೆ ಹಾಗೂ ಅದಕ್ಕೆ ಸಂಬಂಧಿಸಿದ ವಿಷಯಗಳು ಮತ್ತು ಪರಿಸರವನ್ನು ಉತ್ತಮಪಡಿಸುವಿಕೆಯ ದೃಷ್ಟಿಯಿಂದ ಜಾರಿಗೆ ತರಲಾಯಿತು. ಪರಿಸರ ಸಂರಕ್ಷಣಾ ಕಾಯಿದೆಯು 1986 ನವೆಂಬರ್ 19ರಂದು ಶ್ರೀಮತಿ ದಿವಂಗತ ಇಂದಿರಾಗಾಂಧಿಯವರ ಜನ್ಮದಿನದ ಪ್ರಯುಕ್ತ ಜಾರಿಗೆ ಬಂದಿತು. ಈ ಕಾಯಿದೆಯಲ್ಲಿ 4 ಪ್ರಮುಖ ಅಧ್ಯಾಯಗಳು ಇವೆ. 26 ಭಾಗಗಳು ಇವೆ. ಈ ಕಾಯಿದೆಯಲ್ಲಿ ಪರಿಸರ ಮಾಲಿನ್ಯ, ಮಾನವ ಹಾಗೂ ಇತರ ಜೀವಿಗಳಿಗೆ ಹಾನಿಯನ್ನುಂಟು ಮಾಡುವ ಅಪಾಯಕಾರಿ ವಸ್ತುಗಳು ಎಂಬ ಮೂರು ಶಬ್ಧಗಳ ಕುರಿತು ವಿವರಿಸಲಾಗಿದೆ.

ಪರಿಸರ:  ಪರಿಸರ ಎಂಬ ಪದವು ನೀರು ಗಾಳಿ ಹಾಗೂ ಭೂಮಿಗಳ ನಡುವಿನ ಸಂಬಂಧ ಈ ಮೂರು ಘಟಕಗಳೊಂದಿಗೆ ಮಾನವ ಹಾಗೂ ಇತರೆ ಪ್ರಾಣಿಗಳು ಸಸ್ಯಗಳು ಹಾಗೂ ಸೂಕ್ಷ್ಮಾಣು ಜೀವಿಗಳು ಹೊಂದಿರುವ ಸಂಬಂಧ.

ಪರಿಸರ ಮಾಲಿನ್ಯ:  ಪರಿಸರ ಇಂದು ಹೆಚ್ಚು ಮಲಿನಕಾರಕವಾಗಿದೆ.

ಅಪಾಯಕಾರಿ ಅಂಶ:  ಯಾವುದೇ ಅನಿಲ ಮತ್ತು ಅದರ ರಸಾಯನಿಕ ಅಥವಾ ಭೌತಿಕ ರಸಾಯನಿಕ ಗುಣಗಳಿಂದ  ಅಥವಾ ಅವುಗಳನ್ನು ಬಳಸಿದಾಗ ಮಾನವನಿಗೆ ಅಥವಾ ಇತರ ಜೀವ ಜಂತುಗಳಿಗೆ ಸಸ್ಯಗಳಿಗೆ ಅಥವಾ ಸೂಕ್ಷ್ಮಾಣು ಜೀವಿಗಳಿಗೆ ಹಾನಿಯನ್ನು ಉಂಟು ಮಾಡುವಂತಿದ್ದರೆ ಅದು ಅಪಾಯಕಾರಿ ವಸ್ತುವಾಗುತ್ತದೆ. ಈ ಕಾಯಿದೆಯು ಕೇಂದ್ರ ಸರ್ಕಾರಕ್ಕೆ ಈ ಕೆಳಕಂಡ ಉದ್ದೇಶಗಳಿಗಾಗಿ ಅಗತ್ಯ ಕ್ರಮಕೈಗೊಳ್ಳಲು ಅಧಿಕಾರ ನೀಡಿತು.

 ಪರಿಸರವನ್ನು ರಕ್ಷಿಸುವುದು ಹಾಗೂ ಅದರ ಸುಧಾರಣೆಗಾಗಿ ಕ್ರಮಗಳನ್ನು ಕೈಗೊಳ್ಳುವಂತೆ, ಕೇಂದ್ರ ಸರ್ಕಾರಕ್ಕೆ ಅಧಿಕಾರವನ್ನು ನೀಡುತ್ತದೆ. ಜೊತೆಗೆ ಅಧಿಕಾರಿಗಳ ನೇಮಕ ಮತ್ತು ಅವರು ನಿರ್ವಹಿಸುವ ಕಾರ್ಯ ಸೂಚಿಯನ್ನು ನಿರ್ದೇಶಿಸುತ್ತದೆ.

ಕೇಂದ್ರ ಸರ್ಕಾರದ ಸಾಮಾನ್ಯ ಅಧಿಕಾರಗಳು:

  1. ಪರಿಸರ ಮಾಲಿನ್ಯವನ್ನು ತಡೆಗಟ್ಟುವುದು, ನಿಯಂತ್ರಿಸುವುದು ಮತ್ತು ಕಡಿಮೆ ಮಾಡುವುದು. ಇದನ್ನು ರಾಷ್ಟ್ರದಾದ್ಯಂತ ಜಾರಿಗೆ ತಂದು ವಿವಿಧ ರೀತಿಯಲ್ಲಿ ಪರಿಸರದ ಗುಣಮಟ್ಟವನ್ನು ಕಾಪಾಡುವುದು.
  2. ಪರಿಸರಕ್ಕೆ ಧಕ್ಕೆ ಬಾರದಂತಹ ಉತ್ತಮ ಗುಣಮಟ್ಟದ ವಸ್ತುಗಳನ್ನು ಬಳಕೆ ಮಾಡುವುದು.
  3. ಪರಿಸರ ಸಂರಕ್ಷಣಾ ಕಾಯಿದೆಯನ್ನು ಉಲ್ಲಂಘನೆ ಮಾಡಿ ಪರಿಸರ ಮಾಲಿನ್ಯದಲ್ಲಿ ತೊಡಗುವವರಿಗೆ ದಂಡ ಮತ್ತು ಕಾರಾಗೃಹ ಶಿಕ್ಷೆಯನ್ನು ವಿಧಿಸುವುದು.
  4. ಪರಿಸರ ಮಾಲಿನ್ಯಕ್ಕೆ ಕಾರಣವಾಗುವ ಪದಾರ್ಥ ಹಾಗೂ ಸ್ಥೂಲ ಪದಾರ್ಥಗಳನ್ನು ಉತ್ಪಾದನೆ ಮಾಡುವ ಕಾರ್ಯವಿಧಾನವನ್ನು ಪರೀಕ್ಷೆಗೆ ಒಳಪಡಿಸುವುದು.
  5. ಪರಿಸರ ಮಾಲಿನ್ಯಕ್ಕೆ ಕಾರಣವನ್ನು ಸಂಶೋಧನೆಯ ಮೂಲಕ ಗೊತ್ತುಪಡಿಸಿಕೊಳ್ಳುವುದು ಮತ್ತು ಮಾಲಿನ್ಯವನ್ನು ತಡೆಗಟ್ಟಲು ಕಠಿಣ ಕ್ರಮಗಳನ್ನು ಕೈಗೊಳ್ಳುವುದು.
  6. ಪರಿಸರ ರಕ್ಷಣೆಗೆ ಸಂಬಂಧಿಸಿದಂತೆ ಪ್ರಯೋಗ ಶಾಲೆಯನ್ನು ತೆರೆಯುವುದು.
  7. ಪರಿಸರ ಮಾಲಿನ್ಯ ನಿಯಂತ್ರಣಕ್ಕೆ ಕೈಪಿಡಿ ಹಾಗೂ ಮಾರ್ಗದರ್ಶಿ ನಿಯಮಗಳ ಪಟ್ಟಿಯನ್ನು ತಯಾರಿಸುವುದು.
  8. ಈ ಕಾಯಿದೆಯ ಪ್ರಕಾರ ಯಾವುದೇ ಕೈಗಾರಿಕೋದ್ಯಮಿ ಪರಿಸರಕ್ಕೆ ಧಕ್ಕೆ ತರುವಂತಹ ತ್ಯಾಜ್ಯಗಳನ್ನು ನಿಗದಿಪಡಿಸಿದ ಪ್ರಮಾಣಕ್ಕಿಂತ ಹೆಚ್ಚು ಬಿಡುಗಡೆ ಮಾಡುವಂತಿಲ್ಲ.

ಈ ಕಾಯಿದೆಯ ಪ್ರಕಾರ ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ರಾಜ್ಯ ಸರ್ಕಾರಗಳು ಕೈಗೊಳ್ಳಬೇಕಾದ ಕ್ರಮಗಳು ಈ ಕೆಳಗಿನಂತಿವೆ.

  1. ಅಪಾಯಕಾರಿ ವಸ್ತುಗಳ ನಿರ್ವಹಣೆ ಹಾಗೂ ರಕ್ಷಣೆ ಮಾಡುವುದು.
  2. ರಾಜ್ಯ ಉದ್ಯಮಗಳು ತ್ಯಾಜ್ಯ ವಸ್ತುಗಳನ್ನು ವಿಸರ್ಜಿಸುವುದಕ್ಕೆ ಮುಂಚೆ ಅವುಗಳನ್ನು ಪರೀಕ್ಷೆಗೆ ಒಳಪಡಿಸುವುದು ಹಾಗೂ ನಂತರ ಆದೇಶಿಸುವುದು.
  3. ಅಪಾಯಕಾರಿ ವಸ್ತುಗಳನ್ನು ಉಪಯೋಗಿಸುವಾಗ ಅನುಸರಿಸಬೇಕಾದ ನಿಯಮಗಳ ಕುರಿತು ಕ್ರಮ ಜರುಗಿಸುವುದು.
  4. ಕೈಗಾರಿಕೆಗಳು ತಮ್ಮ ತ್ಯಾಜ್ಯ ವಸ್ತುಗಳನ್ನು ಪುನರ್‌ಬಳಕೆ ಮಾಡುವಂತೆ ಪ್ರೋತ್ಸಾಹ ನೀಡುವುದು.
  5. ಕೈಗಾರಿಕೆಗಳಲ್ಲಿ ಮಾಲಿನ್ಯಕಾರಕಗಳನ್ನು ಮಿತಿಗೊಳಿಸುವುದಕ್ಕಾಗಿ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಲು ಉದ್ಯಮಿಗಳಿಗೆ ಉತ್ತೇಜನ ನೀಡುವುದು.
  6. ಪರಿಸರ ಮಾಲಿನ್ಯದ ಮಾಹಿತಿಯನ್ನು ಸಂಗ್ರಹಿಸುವುದು ಮತ್ತು ವಿತರಿಸುವುದು.
  7. ಕೈಗಾರಿಕೆಗಳಿಂದ ಸಾಗರ, ಸಮುದ್ರ, ಸರೋವರ, ನದಿ, ಕೆರೆಗಳಿಗೆ, ತ್ಯಾಜ್ಯ ವಸ್ತುಗಳು ಸೇರದಂತೆ ಕ್ರಮ ವಹಿಸುವಂತೆ ಕೈಗಾರಿಕೋದ್ಯಮಿಗಳಿಗೆ ಎಚ್ಚರಿಕೆ ನೀಡುವುದು.
  8. ಈ ಕುರಿತು ಪ್ರಾಧಿಕಾರಿ ಹಾಗೂ ನಿಯೋಗಗಳಿಗೆ ಮಾಹಿತಿ ನೀಡುವುದು.
  9. ಪರಿಸರ ಮಾಲಿನ್ಯವನ್ನು ತಡೆಗಟ್ಟಲು ಕೈಪಿಡಿ ಹಾಗೂ ಪುಸ್ತಕಗಳನ್ನು ರಚಿಸಿ ಹಂಚುವುದು.
  10. ಅಪಾಯಕಾರಿ ವಸ್ತುಗಳನ್ನು ನಿರ್ವಹಿಸುತ್ತಿರುವ ವ್ಯಕ್ತಿಗಳು ರಕ್ಷಣಾ ವಿಧಾನಗಳನ್ನು ಪಾಲಿಸುವಂತೆ ಮಾರ್ಗದರ್ಶನ ನೀಡುವುದು.

ಉಪಸಂಹಾರ

ಪರಿಸರ ಸಂರಕ್ಷಣಾ ಕಾಯಿದೆ 1986 ಭಾರತದಲ್ಲಿ ಪರಿಸರ ರಕ್ಷಣೆಗೆ ಮೈಲುಗಲ್ಲಾಗಿದೆ. ಈ ಕಾಯಿದೆಯ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಪರಿಸರ ಮಾಲಿನ್ಯವನ್ನು ತಡೆಯಲು ಅಗತ್ಯವಾದ ಅಧಿಕಾರ ಮತ್ತು ಜವಾಬ್ದಾರಿಗಳನ್ನು ನೀಡಲಾಗಿದೆ. ಕೈಗಾರಿಕೆಗಳು ಹಾಗೂ ನಾಗರಿಕರು ಪರಿಸರ ಸ್ನೇಹಿ ಕ್ರಮಗಳನ್ನು ಅನುಸರಿಸುವುದು ಈ ಕಾಯಿದೆಯ ಮುಖ್ಯ ಉದ್ದೇಶವಾಗಿದೆ. ಪರಿಸರವನ್ನು ರಕ್ಷಿಸುವುದು ಕೇವಲ ಸರ್ಕಾರದ ಕರ್ತವ್ಯವಲ್ಲ, ಪ್ರತಿಯೊಬ್ಬ ನಾಗರಿಕನ ನೈತಿಕ ಜವಾಬ್ದಾರಿಯೂ ಹೌದು. ಜಾಗೃತಿ ಮತ್ತು ಪಾಲನೆ ಮೂಲಕ ಮಾತ್ರ ಸ್ವಚ್ಛ ಹಾಗೂ ಸುರಕ್ಷಿತ ಪರಿಸರವನ್ನು ಮುಂದಿನ ಪೀಳಿಗೆಗೆ ಉಳಿಸಬಹುದು

ಆಮ್ಲ ಮಳೆ ಮತ್ತು ಮಾನವ ಸಮುದಾಯಗಳು ಹಾಗೂ ಕೃಷಿಯ ಮೇಲಿನ ಪರಿಣಾಮಗಳು

ಆಮ್ಲ ಮಳೆ ಮತ್ತು ಮಾನವ ಸಮುದಾಯಗಳು ಹಾಗೂ ಕೃಷಿಯ ಮೇಲಿನ ಪರಿಣಾಮಗಳು

ಕಲ್ಲಿದ್ದಲು, ಪೆಟ್ರೋಲಿಯಂ, ವಾಹನಗಳು, ವಿದ್ಯುತ್ ಉತ್ಪಾದನೆ, ಲೋಹ ಕರಗಿಸುವ ಕಾರ್ಯಗಾರ, ಮನೆಗಳಲ್ಲಿ ಉರಿಸುವ ಸೌದೆ, ಮೊದಲಾದವುಗಳಿಂದ ಹೊರಬಂದ ಹೊಗೆಯಲ್ಲಿ ಗಂಧಕದ ಡೈಆಕ್ಸೈಡ್ ಹಾಗೂ ಸಾರಜನಕದ ಡೈಆಕ್ಸೈಡ್‌ಗಳು ಇರುತ್ತವೆ. ಅವುಗಳು ಗಾಳಿಯಲ್ಲಿ ಸೇರಿ ಭೂಮಿಯ ಮೇಲ್ಭಾಗದ ಹವೆಯಲ್ಲಿ ಹಲವಾರು ಕಿ.ಮೀಗಳವರೆಗೆ ಚಲಿಸುತ್ತವೆ. ನಂತರ ನೀರಾವಿಯೊಂದಿಗೆ ಸಂಯೋಜನೆ ಹೊಂದಿ ರಸಾಯನಿಕ ಕ್ರಿಯೆಗೆ ಒಳಪಡುತ್ತವೆ. ತದನಂತರ ಆಮ್ಲದ ದ್ರಾವಣವಾಗಿ ಬದಲಾಗುತ್ತವೆ. ಹೀಗೆ ಆಮ್ಲದಿಂದ ಕೂಡಿದ ಮೋಡಗಳು ಮಳೆಯಲ್ಲಿ ವಿಲೀನಗೊಂಡು ವೃಷ್ಠಿರೂಪದಲ್ಲಿ ಭೂಮಿಯ ಮೇಲೆ ಬೀಳುತ್ತವೆ. ಇದನ್ನೇ ʻʻಆಮ್ಲ ಮಳೆʼʼ ಎಂದು ಕರೆಯುತ್ತಾರೆ.

ಸಾಮಾನ್ಯವಾಗಿ ಮಳೆ, ಮಂಜು, ಮೊದಲಾದ ರೂಪದಲ್ಲಿ ಆಮ್ಲಗಳು ವಾತಾವರಣದಿಂದ ಭೂಮಿಯ ಮೇಲೆ ಚೆಲ್ಲಲ್ಪಡುವ ಪ್ರಕ್ರಿಯೆಯನ್ನು ಆಮ್ಲ ಮಳೆ ಎಂದು ಕರೆಯುವರು.

ವಾಯುಮಂಡಲದ ನೀರಾವಿ ನೀರಿನ ಹನಿಗಳ ರೂಪದಲ್ಲಿ ಭೂಮಿಯ ಮೇಲೆ ಬೀಳುವುದನ್ನು ಆಮ್ಲ ಮಳೆ ಎಂದು ಕರೆಯುವರು. ಈ ನೀರಾವಿ ಅಧಿಕ ಪ್ರಮಾಣದ ಆಮ್ಲವನ್ನು ಒಳಗೊಂಡಿರುವುದರಿಂದ ಇದಕ್ಕೆ ಹುಳಿ ಮಳೆ ಎಂದು ಸಹ ಕರೆಯುತ್ತಾರೆ.

ರಸಾಯನಿಕ ಆಮ್ಲ ಗುಣವನ್ನು PH ಎಂಬ ಮಾನದಂಡದಿಂದ ಅಳಿಯಲಾಗುತ್ತದೆ. ಶುದ್ಧ ನೀರಿನ PH 7 ಆಗಿದ್ದರೆ ಆಮ್ಲಿಯ ನೀರಿನ PH ಅದಕ್ಕಿಂತ ಕಡಿಮೆಯಾಗಿರುತ್ತದೆ. ಅಮೆರಿಕದಂತಹ ಮಾಲಿನ್ಯಭರಿತ ದೇಶಗಳಲ್ಲಿ ಬೀಳುವ ಆಮ್ಲ ಮಳೆ ನೀರಿನ PH 4.3 ರಷ್ಟು ಕಡಿಮೆ ಇದೆ.

ಆಮ್ಲ ಮಳೆಯನ್ನು ಮೊದಲ ಬಾರಿಗೆ ಗುರುತಿಸಿದ ಖ್ಯಾತಿ ಇಂಗ್ಲೆಂಡಿನ ರಸಾಯನಿಕ ತಜ್ಞ ರಾಬರ್ಟ್ ಹ್ಯಾಂಗಸ್‌ ಸ್ಮಿತ್ ಎಂಬವರಿಗೆ ಸಲ್ಲುತ್ತದೆ. ಇವರು 1852 ರಲ್ಲಿ ಮ್ಯಾಂಚೆಸ್ಟರ್‌ನಲ್ಲಿ ಸುರಿದ ಮಳೆಯ ನೀರಿನಲ್ಲಿ ಅಸಾಧಾರಣ ಆಮ್ಲಿಯ ಮಟ್ಟವನ್ನು ಗುರುತಿಸಿದರು. ತದನಂತರ 1960 ರಲ್ಲಿ ಸ್ವೀಡನ್ ದೇಶದ ಸ್ವೇಂಟಿ ಓಡೆನ್‌ ಎಂಬುವರು ಆ ದೇಶದ 25% ರಷ್ಟು ಜಲಮೂಲಗಳು ಆಮ್ಲ ಮಳೆಯ ಪರಿಣಾಮದಿಂದ ಹಾಳಾಗುವುದನ್ನು ಗುರುತಿಸಿದರು. ಇತ್ತೀಚಿನ ಅಧ್ಯಯನಗಳ ಆಧಾರದ ಮೇರೆಗೆ ಕಲ್ಕತ್ತಾ, ಮುಂಬೈ, ಚೆನ್ನೈ, ಹೈದರಾಬಾದ್, ವಿಶಾಖಪಟ್ಟಣಂ, ಬೆಂಗಳೂರು, ಮೊದಲಾದ ಮಹಾನಗರಗಳು ಸಹ ಆಮ್ಲ ಮಳೆಯ ತೊಂದರೆಗೆ ಸಿಲುಕಿವೆ.

ಆಮ್ಲಮಳೆಯ ಪರಿಣಾಮಗಳು (ಸಮುದಾಯ ಹಾಗೂ ಕೃಷಿ) 

  1. ಆಮ್ಲ ಮಳೆಯು ಮಣ್ಣಿನಲ್ಲಿರುವ ಪೋಷಕಾಂಶಗಳನ್ನು ಕರಗಿಸಿ ಆಹಾರ ಪದಾರ್ಥಗಳು ಫಲವತ್ತಾಗಿ ಬೆಳೆಯಲು ತಡೆಯನ್ನೊಡ್ಡುತ್ತದೆ.
  2. ಆಮ್ಲ ಮಳೆಯು ಮಣ್ಣಿನಲ್ಲಿರುವ ಅಲ್ಯುಮಿನಿಯಂ ಹಾಗೂ ಪಾದರಸಗಳನ್ನು ಕರಗಿಸಿ ಜಲಮೂಲಗಳನ್ನು ಕಲುಷಿತಗೊಳಿಸುತ್ತದೆ. ಮಣ್ಣಿನಲ್ಲಿರುವ ಪೋಷಕಾಂಶಗಳು ಕರಗಿ ಹೋದರೆ ಸಸ್ಯಗಳ ಸಂತತಿ ವಿನಾಶದ ಅಂಚಿಗೆ ಬಂದು ತಲುಪುತ್ತದೆ.
  3. ಆಮ್ಲ ಮಳೆಯು ಸಮುದ್ರ ಹಾಗೂ ಸಾಗರ, ಸರೋವರ ಮತ್ತು ನದಿಗಳ ಮೂಲಕ ಸೇರಿ ಜಲರಾಶಿಗಳ ಜೀವ ಪರಿಸರ ವ್ಯವಸ್ಥೆಯ ಮೇಲೆ ಪ್ರತಿಕೂಲ ಪರಿಣಾಮವನ್ನು ಉಂಟುಮಾಡುತ್ತದೆ.
  4. ಆಮ್ಲ ಮಳೆಯು ಜಲಭಾಗದ ಆಹಾರ ಸರಪಳಿ, ಆಹಾರ ಜಾಲ ಹಾಗೂ ಮೀನಿನ ಉತ್ಪಾದನೆಯನ್ನು ಕುಂಠಿತಗೊಳಿಸಿ ಅವುಗಳನ್ನು ಮೃತ ಸರೋವರಗಳನ್ನಾಗಿ ಮಾಡಿದೆ.
  5. ಆಮ್ಲ ಮಳೆಯಿಂದ ಬೆಳೆಗಳು ಹಾಗೂ ಅರಣ್ಯಗಳ ಮರಗಳ ಎಲೆಗಳು ಉದುರುತ್ತವೆ ಇದರಿಂದ ದ್ಯುತಿ ಸಂಶ್ಲೇಷಣೆ ಹಾಗೂ ಸಸ್ಯಗಳ ಆಹಾರ ಉತ್ಪಾದನೆಯಲ್ಲಿ ಹಿನ್ನಡೆ ಉಂಟಾಗುತ್ತದೆ.
  6. ಆಮ್ಲ ಮಳೆಯಿಂದ ಮರ ಗಿಡಗಳು ದುರ್ಬಲಗೊಂಡು ಸುಲಭವಾಗಿ ರೋಗಗಳಿಗೆ ತುತ್ತಾಗುತ್ತವೆ.
  7. ಆಮ್ಲ ಮಳೆಯು ವಿಶ್ವದಾದ್ಯಂತ ಸುಂದರ ಶಿಲ್ಪಗಳು, ಐತಿಹಾಸಿಕ ಕಟ್ಟಡಗಳು, ಸೇತುವೆಗಳು ಮುಂತಾದವುಗಳನ್ನು ವಿರೂಪಗೊಳಿಸುತ್ತದೆ ಹಾಗೂ ಶಿಥಿಲಗೊಳಿಸುತ್ತದೆ.
  8. ವಿಶ್ವ ಪ್ರಸಿದ್ಧ ತಾಜ್‌ಮಹಲ್ ಕಟ್ಟಡವು ಅಮೃತಶಿಲೆಯಿಂದ ರಚಿಸಲ್ಪಟ್ಟಿದ್ದು ಸ್ಥಳೀಯ ಕಾರ್ಖಾನೆಗಳು ಬಿಡುವ ಹೊಗೆಯ ಮಲಿನಕಾರಕ ಅಂಶಗಳಿಂದ ಉಂಟಾಗುವ ಆಮ್ಲ ಮಳೆಯಿಂದ ಹಾಳಾಗಿದೆ. ಅತ್ಯಂತ ಬೆಳಕು ಹಾಗೂ ಹೊಳಪಿನಿಂದ ಕೂಡಿದ ತಾಜ್‌ಮಹಲ್ ಕಳೆಗುಂದಿ ಮಾಸಿದ ಬಣ್ಣಕ್ಕೆ ತಿರುಗಿದೆ.
  9. ಕಬ್ಬಿಣ ಹಾಗೂ ಉಕ್ಕು, ತವರ ಮೊದಲಾದವು ಆಮ್ಲ ಮಳೆಯಿಂದ ತುಕ್ಕು ಹಿಡಿದು ಹಾಳಾಗುತ್ತವೆ.
  10. ಗಣಿಗಾರಿಕೆ ಮತ್ತು ಪೆಟ್ರೋ ಕೆಮಿಕಲ್ ಪಕ್ಕದ ಪ್ರದೇಶದಲ್ಲಿರುವ ಡಾಂಪಿಯರ್ ರಾಕ್ ಆರ್ಟ್ ಕಾಂಪ್ಲೆಕ್ಸ್‌ನಲ್ಲಿರುವ ಚಿತ್ರಕಲೆಗಳ ಮೇಲೆ ಆಮ್ಲಮಳೆಯ ಪರಿಣಾಮ ಸಾಕಷ್ಟು ಪ್ರಮಾಣದಲ್ಲಿ ಉಂಟಾಗಿದೆ. ಅನೇಕ ಕಲಾಕೃತಿಗಳು ನಿಧಾನವಾಗಿ ಮಂದವಾಗುತ್ತಿವೆ.
  11. ಹಾಗೆಯೇ ಅಥೆನ್ಸ್, ಪಾರ್ಥೆನಾನ್‌, ರೋಂನ, ಕಲೋಸಿಯಂ ಅಂತಹ ಅನುಪಮ ಸೌಂದರ್ಯದ ವಾಸ್ತುಶಿಲ್ಪಗಳು ಸಹ  ಆಮ್ಲ ಮಳೆಯ ಕಾರಣದಿಂದ ಹಾಳಾಗಿವೆ.
  12. ಆಮ್ಲೀಯ ಮಳೆಯಿಂದ ಮಾನವ ಸಮುದಾಯದ ಆರೋಗ್ಯದ ಮೇಲೆ ಗಂಭೀರ ಪರಿಣಾಮಗಳು ಉಂಟಾಗಿದೆ. ಆಮ್ಲಿಯ ಮಳೆಯಿಂದ ಗಾಳಿಯನ್ನು ಸೇರುವ ಗಂಧಕದ ಡೈಆಕ್ಸೈಡ್ ಹಾಗೂ ಸಾರಜನಕದ ಆಕ್ಸೈಡ್‌ಗಳು ಉಸಿರಾಟದ ತೊಂದರೆಗೆ ಕಾರಣವಾಗಿವೆ. ಅಸ್ತಮಾ ಹಾಗೂ ಶ್ವಾಸಕೋಶದ ತೊಂದರೆಗಳು ಕಾಣಿಸಿಕೊಳ್ಳುತ್ತಿವೆ. ಇದು ಅಲ್ಲದೆ ಚರ್ಮರೋಗ ಹಾಗೂ ಕೂದಲು ಉದುರುವುದು ಮುಂತಾದ ಗಂಭೀರ ಖಾಯಿಲೆಗಳು ಕಾಣಿಸಿಕೊಂಡಿವೆ.

ಉಪಸಂಹಾರ

ಆಮ್ಲ ಮಳೆಯು ಕೃಷಿ ಉತ್ಪಾದನೆ, ಅರಣ್ಯ ಸಂಪತ್ತು, ಜಲಜೀವ ವೈವಿಧ್ಯ ಹಾಗೂ ಮಾನವ ಆರೋಗ್ಯದ ಮೇಲೆ ಗಂಭೀರ ಅಪಾಯವನ್ನುಂಟುಮಾಡುತ್ತಿದೆ. ಇದು ಕೇವಲ ಪ್ರಕೃತಿಗೆ ಮಾತ್ರವಲ್ಲದೆ, ಮಾನವ ನಿರ್ಮಿತ ಐತಿಹಾಸಿಕ ಸ್ಮಾರಕಗಳು ಮತ್ತು ಮೂಲಸೌಕರ್ಯಗಳಿಗೂ ಹಾನಿ ಉಂಟುಮಾಡುತ್ತಿದೆ. ಈ ಸಮಸ್ಯೆಯನ್ನು ನಿಯಂತ್ರಿಸಲು ವಾಯುಮಾಲಿನ್ಯ ಕಡಿತಗೊಳಿಸುವ ಕ್ರಮಗಳು, ಸ್ವಚ್ಛ ಇಂಧನ ಬಳಕೆ ಮತ್ತು ಪರಿಸರ ಸ್ನೇಹಿ ನೀತಿಗಳ ಅನುಷ್ಠಾನ ಅತ್ಯಗತ್ಯವಾಗಿದೆ. ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯೆಂಬ ಅರಿವು ಮೂಡಿದಾಗ ಮಾತ್ರ ಭವಿಷ್ಯದ ಪೀಳಿಗೆಗೆ ಆರೋಗ್ಯಕರ ಭೂಮಿಯನ್ನು ಉಳಿಸಬಹುದು.

ಓಝೋನ್ ಪದರು ನಾಶದಿಂದ ಉಂಟಾಗುವ ಪರಿಣಾಮಗಳು ಮತ್ತು ಪದರಿನ ನಿಯಂತ್ರಣಗಳು

ಓಝೋನ್ ಪದರು ನಾಶದಿಂದ ಉಂಟಾಗುವ ಪರಿಣಾಮಗಳು ಮತ್ತು ಪದರಿನ ನಿಯಂತ್ರಣಗಳು

ನಾವು ಇಂದು ಬಳಸುವ ಸ್ಪ್ರೇ ವಸ್ತುಗಳು, ಬರುಗು ಉಂಟು ಮಾಡುವ ಪದಾರ್ಥಗಳು ಅಗ್ನಿಶಾಮಕಗಳು, ಹವಾನಿಯಂತ್ರಿತ, ಕೆಲವು ಬಗೆಯ ದ್ರಾವಕ ಕೀಟನಾಶಕಗಳು ಮೊದಲಾದವುಗಳು ಗಾಳಿಯನ್ನು ಸೇರಿ ಅದರಲ್ಲಿನ ಅಣುಗಳೊಂದಿಗೆ ಬೆರೆಯುತ್ತವೆ. ಕಾಲಾನಂತರ ಓಜೋನ್‌ ನಾಶಗೊಂಡು ದುರ್ಬಲವಾಗುತ್ತದೆ. ಹೀಗೆ ಓಜೋನ್‌ ಅನಿಲವು ನಾಶವಾಗುವುದನ್ನೇ “ಓಜೋನ್‌ ವಲಯ ಪತನʼʼ ಎಂದು ಕರೆಯುವರು. ಮಾನವನ ಚಟುವಟಿಕೆಗಳಿಂದ ಓಝೋನ್ ವಲಯಕ್ಕೆ ಹಾನಿ ಆದರೆ ಮಾನವನನ್ನು ʻʻಓಜೋನ್‌ ಭಕ್ಷಕʼʼ ಎಂದು ಪರಿಗಣಿಸಬಹುದು. ಓಜೋನ್‌ ಪದರಿನ ನಾಶದಿಂದ ಆಗುವ ಪರಿಣಾಮಗಳನ್ನು ಈ ಕೆಳಗಿನಂತೆ ತಿಳಿಯಬಹುದು.

ಓಝೋನ್ ಪದರು ನಾಶದಿಂದ ಉಂಟಾಗುವ ಪರಿಣಾಮಗಳು

  1. ಓಜೋನ್ ಪದರು ಹಾಳಾಗುವುದರಿಂದ ಅತಿ ನೇರಳೆ ಕಿರಣಗಳು ಭೂಮಿಯನ್ನು ತಲುಪುತ್ತವೆ. ಆಗ ಮಾನವನ ದೇಹದ ಮೇಲೆ ಈ ಕಿರಣಗಳು ದುಷ್ಪರಿಣಾಮವನ್ನು ಬೀರುತ್ತವೆ. ಮಾನವನ ಶರೀರದಲ್ಲಿ ಇರುವ DNA ದ ಮೇಲೆ ಗಂಭೀರ ಪರಿಣಾಮಗಳು ಉಂಟಾಗುತ್ತದೆ. ಇದರಿಂದ ಅವರಿಗೆ ಜನಿಸುವ ಮಕ್ಕಳು ಅಂಗವಿಕಲರಾಗುತ್ತವೆ. ಈ ನೇರಳೆ ಕಿರಣಗಳು ಚರ್ಮದ ಕ್ಯಾನ್ಸರ್, ಕಣ್ಣಿನ ಕ್ಯಾನ್ಸರ್, ಉಸಿರಾಟದ ತೊಂದರೆ ಮುಂತಾದ ಕಾಯಿಲೆಗಳನ್ನು ಸೃಷ್ಟಿಸುತ್ತವೆ.
  2. ಅತಿಯಾದ ನೇರಳೆ ಕಿರಣಗಳಿಂದ ಮಾನವನ ಕಣ್ಣಿನ ದೃಷ್ಟಿಯ ಮೇಲೆ ಪರಿಣಾಮ ಬೀರುತ್ತದೆ. ಕಣ್ಣಿನ ರೆಟಿನಾಗಳು ಹಾಳಾಗಿ ಕುರುಡುತನ ಬರುತ್ತದೆ.
  3. ಓಜೋನ್ ಪದರಿನ ನಾಶದಿಂದ ಭೂಮಿಯ ಮೇಲಿನ ನಾನಾ ಜೀವಿಗಳು ರೋಗ ರುಜಿನಗಳಿಂದ ನರಳಿ ಸಾಯುತ್ತವೆ.
  4. ಓಜೋನ್ ಪದರು ಹಾಳಾಗುವುದರಿಂದ ರೋಗ ನಿರೋಧಕ ಶಕ್ತಿ ಕುಂದಿ ಮಾನವನ ದೇಹ ನೂರಾರು ಕಾಯಿಲೆಗಳ ಗೂಡಾಗುತ್ತವೆ.
  5. ಇದರಿಂದ ಕೃಷಿ ಬೆಳೆಗಳು ಹಾಗೂ ಜಲಚರ ಪ್ರಾಣಿಗಳು ನಾಶವಾಗುತ್ತವೆ.
  6. ಓಝೋನ್ ಪದರು ನಾಶವಾದರೆ ಭೂಮಂಡಲದ ಉಷ್ಣತೆ ಹೆಚ್ಚಾಗುತ್ತದೆ. ಮಣ್ಣಿನ ಆರ್ದ್ರತೆ ಕಡಿಮೆಯಾಗುತ್ತದೆ ಇದರಿಂದ ಫಸಲು ಹಾಳಾಗುತ್ತದೆ.
  7. ಪಾಚಿಗಳು, ಮೀನುಗಳು, ಏಡಿಗಳಂತಹ ಜಲಚರಗಳು ಸಹ ನೇರಳಾತೀತ ಕಿರಣಗಳಿಂದ ಅಪಾಯಕ್ಕೆ ಈಡಾಗುತ್ತವೆ.

ಓಜೋನ್ ಪದರಿನ ನಿಯಂತ್ರಣಗಳು:

  1. ಸಿ ಎಫ್ ಸಿ ರಹಿತವಾದ ರೆಫ್ರಿಜರೇಟರ್ ಹಾಗೂ ಹವಾ ನಿಯಂತ್ರಿತ ವಸ್ತುಗಳನ್ನು ಬಳಸದಂತೆ ಕ್ರಮ ಕೈಗೊಳ್ಳಬೇಕು.
  2. ಓಝೋನ್ ಸ್ನೇಹಿ ರಾಸಾಯನಿಕಗಳನ್ನು ಬಳಸುವುದು.
  3. 1987ರ ಮಾಂಟ್ರಿಯಲ್ ಪ್ರೋಟೋಕಾಲ್‌ನಲ್ಲಿ ಭಾಗವಹಿಸಿದ ಅಭಿವೃದ್ಧಿ ಹೊಂದಿದ ದೇಶಗಳು ಓಝೋನ್ ವಿನಾಶಕ ವಸ್ತುಗಳನ್ನು ನಿಷೇಧಿಸಲು ನಿರ್ಧರಿಸಿದವು. ಅದು 2000 ಇಸವಿಗೆ ಸ್ವಲ್ಪ ಸಕಾರಗೊಂಡಂತಾಗಿದೆ.
  4. 1990 ರಲ್ಲಿ ಲಂಡನ್ ನಲ್ಲಿ ನಡೆದ ಸಮಾವೇಶದಲ್ಲಿ ಮಾಂಟ್ರಿಯಲ್ ನಡವಳಿಕೆಗೆ ತಿದ್ದುಪಡಿಯನ್ನು ತಂದು ಅಭಿವೃದ್ಧಿ ಹೊಂದಿದ ದೇಶಗಳು ಓಝೋನ್ ವಿನಾಶಕ ವಸ್ತುಗಳ ಬದಲಾಗಿ ಪರ್ಯಾಯ ರಸಾಯನಿಕಗಳನ್ನು ಬಳಸಲು ನಿರ್ಧರಿಸಿದವು.
  5. 1992 ರಲ್ಲಿ ಭಾರತವು ಸಹ ಮಾಂಟ್ರಿಯಲ್ ನಡುವಳಿಕೆಗೆ ಸಹಿ ಹಾಕಿತ್ತು. 1998ರಲ್ಲಿ ಅರಣ್ಯ ಸಚಿವಾಲಯವು ಓಝೋನ್ ವಿನಾಶಕಗಳನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ನಿಯಮಗಳನ್ನು ರೂಪಿಸಿದೆ. ಇದರ ಪ್ರಕಾರ 2003ರ ಹೊತ್ತಿಗೆ ಓಝೋನ್ ವಿನಾಶಕಗಳನ್ನು ಬಳಸುವುದು ಕಡಿಮೆ ಮಾಡಬೇಕು. ಭಾರತ ಈಗ ಹ್ಯಾಲೋಜನ್‌ಗಳ ಬಳಕೆಯನ್ನು ನಿಲ್ಲಿಸಿದೆ.

ಉಪಸಂಹಾರ

ಓಜೋನ್ ಪದರ ನಾಶವು ಮಾನವ ಆರೋಗ್ಯ, ಪರಿಸರ ಹಾಗೂ ಜೀವಜಾಲದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಅತಿನೇರಳೆ ಕಿರಣಗಳ ಪ್ರಮಾಣ ಹೆಚ್ಚಿದಂತೆ ಅನೇಕ ರೋಗಗಳು ಹಾಗೂ ಪರಿಸರ ಅಸಮತೋಲನ ಉಂಟಾಗುತ್ತಿದೆ. ಆದ್ದರಿಂದ ಓಜೋನ್ ಸ್ನೇಹಿ ಉತ್ಪನ್ನಗಳನ್ನು ಬಳಸುವುದು ಮತ್ತು ಹಾನಿಕಾರಕ ರಾಸಾಯನಿಕಗಳ ಬಳಕೆಯನ್ನು ತಗ್ಗಿಸುವುದು ಅತ್ಯವಶ್ಯಕ. ಸರ್ಕಾರಗಳು ಕೈಗೊಂಡಿರುವ ಅಂತರರಾಷ್ಟ್ರೀಯ ಒಪ್ಪಂದಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು. ಪರಿಸರ ಸಂರಕ್ಷಣೆಯ ಹೊಣೆಗಾರಿಕೆ ಪ್ರತಿಯೊಬ್ಬ ನಾಗರಿಕನ ಮೇಲಿದೆ ಎಂಬ ಅರಿವು ಮೂಡಬೇಕು.

ಓಝೋನ್ ಪದರ ನಾಶಕ್ಕೆ ಕಾರಣಗಳು

ಓಝೋನ್ ಪದರ ನಾಶಕ್ಕೆ ಕಾರಣಗಳು

 ಓಜೋನ್‌ ರಂಧ್ರವನ್ನು ಅಂಟಾರ್ಟಿಕಾ ಸಮೀಕ್ಷೆಯಲ್ಲಿ ಬ್ರಿಟಿಷ್ ವಿಜ್ಞಾನಿ ಡಾ. ಜೆ ಪೋರಮನ್ ರವರು 1982 ರಲ್ಲಿ ದಕ್ಷಿಣ ಧ್ರುವದಲ್ಲಿ ಪತ್ತೆ ಹಚ್ಚಿದರು. 1987 ರಲ್ಲಿ ಓಝೋನ್ ಪದರಿನ ಸ್ಥಿತಿ ತಿಳಿಯಲು ನಾಸಾದಿಂದ ವಿಸ್ತೃತ ಪ್ರಮಿಕ್ಷೆ ನಡೆಸಲಾಯಿತು. ಓಜೋನ್‌ ಪದರು ಆರಂಭದಲ್ಲಿ ನಿಧಾನಗತಿಯಲ್ಲಿ ನಾಶವಾಗಲು ಆರಂಭಿಸಿತು. 1974 ರಲ್ಲಿ ಓಝೋನ್ ಪದರಿಗೆ ರಂಧ್ರವಿರುವುದು ಗೊತ್ತಾಯಿತು. ಓಜೋನ್ ಪದರು ಈಗಾಗಲೇ 4% ರಿಂದ 8% ರಷ್ಟು ನಾಶವಾಗಿದೆ. ಇದರ ನಾಶದ ಪರಿಣಾಮ ಈಗಾಗಲೇ ರಷ್ಯಾ, ಅಮೇರಿಕಾ, ಕೆನಡಾ, ಇಂಗ್ಲೆಂಡ್ ಮೊದಲಾದ ರಾಷ್ಟ್ರಗಳ ಮೇಲೆ ಆಗಿದೆ. ಓಝೋನ್ ಪದರಿನ ನಾಶಕ್ಕೆ ಈ ಕೆಳಗಿನ ಅಂಶಗಳು ಕಾರಣಗಳಾಗಿವೆ. ಅವುಗಳೆಂದರೆ ಓಜೋನ್ ಪದರವು ವೇಗವರ್ಧಕಗಳಾದ ನೈಟ್ರಿಕ್ ಆಕ್ಸೈಡ್(NO) ನೈಟ್ರಸ್ ಆಕ್ಸೈಡ್(N2O) ಹೈಡ್ರಾಕ್ಸಿಲ್‌ (OH) ಪರಮಾಣ್ವಿಕ ಕ್ಲೋರಿಕ್ (CL) ಹಾಗೂ ಪರಮಾಣ್ವಿಕ ಬ್ರೋಮಿನ್ (Br) ಗಳಿಂದ ಹಾಳಾಗುತ್ತದೆ. ಇವುಗಳ ಜೊತೆಗೆ ಈ ಕೆಳಗಿನ ಕಾರಣಗಳಿಂದ  ಓಜೋನ್ ಪದರು ನಶಿಸಿಹೋಗುತ್ತದೆ.

1.ಕ್ಲೋರೋ ಪ್ಲೋರೋ ಕಾರ್ಬನ್‌ಗಳು: (CFCs)

ಕ್ಲೋರೋ ಪ್ಲೋರೋ ಕಾರ್ಬನ್‌ಗಳು ಶೀತಕಾರಕ ಅನಿಲವಾಗಿದ್ದು ಇದನ್ನು ಏರ್‌ಕಂಡೀಷನ್‌ ಹಾಗೂ ರೆಪ್ರಜರೇಟರ್‌ನಲ್ಲಿ ಬಳಕೆ ಮಾಡಲಾಗುತ್ತದೆ. ಇದು ರೆಪ್ರಜರೇಟರ್‌ನಲ್ಲಿ ಆವಾಹಕ ನೊರೆಯನ್ನುಂಟು ಮಾಡುವ ಅನಿಲವಾಗಿದೆ. CFCs  ಸ್ಥಿರವಾದ ಅನಿಲವಾದ ಕಾರಣ ಭೂಮಿಯ ಹತ್ತಿರ ಅದು ವಿಘಟನೆಗೊಳ್ಳದೆ. ವಾಯುಮಂಡಲದಲ್ಲಿ ಅತೀ ಎತ್ತರದವಾದ ಪ್ರದೇಶವನ್ನು ತಲುಪಿ ಅಲ್ಲಿ ವಿಘಟನೆ ಹೊಂದಿ ಕ್ಲೋರಿನ್ ಅನ್ನು ಬಿಡುಗಡೆ ಮಾಡುತ್ತದೆ. ಹೀಗೆ ಬಿಡುಗಡೆಗೊಂಡ ಕ್ಲೋರಿನ್ ಅಣುವು ವಿಭಜನೆಯಾದ ಓಜೋನಿನೊಂದಿಗೆ ಸೇರಿ ಅಸ್ಥಿರವಾದ ಮಧ್ಯಂತರ ಸಂಯುಕ್ತ ವಸ್ತುವಾದ ಕ್ಲೋರಿನ್ ಮೋನಾಕ್ಸೈಡ್ ಆಗಿ ಬದಲಾವಣೆ ಹೊಂದುತ್ತದೆ. ಈ ಕ್ಲೋರಿನ್ ಮಾನಾಕ್ಸೈಡ್ ಮತ್ತೆ ವಿಘಟನೆಗೊಂಡು ನವಜಾತ ಆಮ್ಲಜನಕ ಮತ್ತು ಕ್ಲೋರಿನ್ ಆಗಿ ಬದಲಾಗುತ್ತದೆ. ಹೀಗೆ ಬೇರ್ಪಟ ಕ್ಲೋರಿನ್ ಮತ್ತೊಂದು ಓಜೋನ್‌ ಅಣುವನ್ನು ನಾಶಪಡಿಸಲು ರೆಡಿಯಾಗುತ್ತದೆ. ಹೀಗೆ ಒಂದು ಕ್ಲೋರಿನ್ ಅಣುವು ಸುಮಾರು 1 ಲಕ್ಷ ಓಜೋನ್‌ ಕಣಗಳನ್ನು ನಾಶಪಡಿಸುವುದಲ್ಲದೆ ಅದರ ಪರಿಣಾಮ ಸುಮಾರು 100 ವರ್ಷಗಳವರೆಗೆ ಮುಂದುವರೆಯುತ್ತದೆ.

2.  ಹ್ಯಾಲೋಜನ್‌ಗಳು: (ಹ್ಯಾಲೋನ್‌ಗಳು)

ಇದನ್ನು ಪ್ರಮುಖವಾಗಿ ಅಗ್ನಿಶಾಮಕಗಳಲ್ಲಿ ಬಳಕೆಮಾಡಲಾಗುತ್ತದೆ. ಇದು ಅಲ್ಲದೆ ವಾಯು, ನೌಕೆ, ಗಗನ ನೌಕೆ, ಹಡಗು ಹಾಗೂ ಜಲಾಂತರ್ಗಾಮಿಗಳಲ್ಲಿ ಇದನ್ನು ಬಳಸುತ್ತಾರೆ. ಇವು ಓಜೋನ್ ಪದರಿನ ನಾಶದಲ್ಲಿ CFCs ಗಿಂತ 3ರಿಂದ 10 ಪಟ್ಟು ಹೆಚ್ಚಾಗಿರುತ್ತವೆ.

3.  ಬ್ರೋಮಿನ್ ಸಂಯುಕ್ತಗಳು:

ಬ್ರೊಮಿನ್ ಸಂಯುಕ್ತಗಳಾದ ಹ್ಯಾಲೋನ್, ಹೈಡ್ರೋಬ್ರೋಮೊ, ಫ್ಲೋರ್ ಕಾರ್ಬನ್‌ಗಳು ಅಗ್ನಿಶಾಮಕಗಳಲ್ಲಿ ಹಾಗೂ ಬ್ರೂಮೆಡ್‌ಗಳನ್ನು ಕ್ರಿಮಿನಾಶಕಗಳಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಬಳಸಲಾಗುತ್ತದೆ.

4.  ಕಾರ್ಬನ್ ಟೆಟ್ರಾಕ್ಲೋರೈಡ್: (CC14)

 ಇದನ್ನು ಅಗ್ನಿಶಾಮಕ ದಳ, ಕೈಗಾರಿಕೆ, ಪ್ರಯೋಗಾಲಯ, ದ್ರಾವಕವಾಗಿ ಪೆಟ್ರೋ, ರಸಾಯನಿಕ, ಕ್ರೀಟನಾಶಕ ಹಾಗೂ ಔಷಧಿಗಳ ತಯಾರಿಕೆಯಲ್ಲಿ ಬಳಸುತ್ತಾರೆ. ಇದು ಸಹ ಓಜೋನ್‌ನ್ನು CFCs ಯಷ್ಟೇ ಪರಇಣಾಮಕಾರಿಯಾಗಿ ನಾಶಮಾಡುತ್ತದೆ.

5. ಮಿಥೇಲ್ ಪ್ರೊಮೈಡ್‌: (CHBr)

 ಮೀಥೇಲ್ ಬ್ರೊಮೈಡ್‌ನ್ನು ಕೀಟನಾಶಕಗಳಲ್ಲಿ ಬಳಸುತ್ತಾರೆ. ಇದು ಸಹ CFC ಯಷ್ಟೇ ಪರಿಣಾಮಕಾರಿಯಾಗಿ ಓಜೋನನ್ನು ನಾಶಗೊಳಿಸುತ್ತದೆ.

6. ಮಿಥೇಲ್ ಕ್ಲೋರೋಫಾರ್ಮ್:

 ಇದನ್ನು ಕೈಗಾರಿಕಾ ದ್ರಾವಕವಾಗಿ ವಿದ್ಯುತ್ ಹಾಗೂ ಲೋಹಗಳ ಉಪಕರಣ ತಯಾರಿಕೆಯಲ್ಲಿ ಹಾಗೂ ಔಷಧಿಗಳಲ್ಲಿ ಬಳಸುತ್ತಾರೆ. ಇದರ ಓಜೋನ್ ವಿನಾಶ ಸಾಮರ್ಥ್ಯವು CFC ಗಿಂತ 10 ಪಟ್ಟು ಕಡಿಮೆ.

ಉಪಸಂಹಾರ

ಓಜೋನ್ ಪದರದ ನಾಶವು ಮಾನವ ಆರೋಗ್ಯ, ಪರಿಸರ ಹಾಗೂ ಜೀವ ವೈವಿಧ್ಯಕ್ಕೆ ಗಂಭೀರ ಅಪಾಯವನ್ನುಂಟುಮಾಡುತ್ತಿದೆ. ಕೈಗಾರಿಕೆಗಳಲ್ಲಿ ಬಳಸುವ ಹಾನಿಕಾರಕ ರಸಾಯನಿಕಗಳು ಈ ನಾಶಕ್ಕೆ ಪ್ರಮುಖ ಕಾರಣಗಳಾಗಿವೆ. ಓಜೋನ್ ಸ್ನೇಹಿ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಹಾನಿಕಾರಕ ಅನಿಲಗಳ ಬಳಕೆಯನ್ನು ಕಡಿಮೆ ಮಾಡುವುದು ಅತ್ಯವಶ್ಯಕ. ಸರ್ಕಾರ, ಕೈಗಾರಿಕೆ ಮತ್ತು ನಾಗರಿಕರು ಒಟ್ಟಾಗಿ ಪರಿಸರ ಸಂರಕ್ಷಣೆಗೆ ಕೈಜೋಡಿಸಿದಾಗ ಮಾತ್ರ ಓಜೋನ್ ಪದರನ್ನು ಉಳಿಸಲು ಸಾಧ್ಯ. ಭವಿಷ್ಯದ ಪೀಳಿಗೆಗೆ ಸುರಕ್ಷಿತ ಭೂಮಿಯನ್ನು ನೀಡುವುದು ನಮ್ಮ ಜವಾಬ್ದಾರಿಯಾಗಿದೆ.

ಹಸಿರು ಮನೆ ಪರಿಣಾಮದ ದುಷ್ಪರಿಣಾಮಗಳು ಮತ್ತು ನಿವಾರಣೋಪಾಯಗಳು

ಹಸಿರು ಮನೆ ಪರಿಣಾಮದ ದುಷ್ಪರಿಣಾಮಗಳು ಮತ್ತು ನಿವಾರಣೋಪಾಯಗಳು

ಹಸಿರು ಮನೆ ಪರಿಣಾಮವು ಇಂದಿನ ಜಗತ್ತಿನ ಅತ್ಯಂತ ಗಂಭೀರ ಪರಿಸರ ಸಮಸ್ಯೆಯಾಗಿದೆ. ಮಾನವ ಚಟುವಟಿಕೆಗಳಿಂದಾಗಿ ವಾತಾವರಣದಲ್ಲಿ ಉಷ್ಣಾಂಶ ಹೆಚ್ಚಾಗಿ ಭೂಮಿಯ ಸಹಜ ಸಮತೋಲನ ಹದಗೆಡುತ್ತಿದೆ. ಇದರ ಪರಿಣಾಮವಾಗಿ ಜಾಗತಿಕ ತಾಪಮಾನ ಏರಿಕೆ, ಪ್ರಕೃತಿ ವಿಕೋಪಗಳು ಹಾಗೂ ಜೀವ ವೈವಿಧ್ಯಕ್ಕೆ ಅಪಾಯ ಉಂಟಾಗಿದೆ.

ಹಸಿರು ಮನೆ ಪರಿಣಾಮದ ದುಷ್ಪರಿಣಾಮಗಳು:

 ಹಸಿರು ಮನೆ ಪರಿಣಾಮ ಈ ಕೆಳಗಿನ ಕಾರಣಗಳಿಂದ ಸಂಭವಿಸುತ್ತದೆ.

  1. ಜಾಗತಿಕ ತಾಪಮಾನವು ಹಸಿರು ಮನೆ ಪರಿಣಾಮದಿಂದ ಏರಿಕೆಯಾಗಿದೆ.
  2. ಮಿತಿಮೀರಿದ ಜನಸಂಖ್ಯೆ, ಫಾಸಿಲ್‌ ಇಂಧನಗಳ ಅತಿಯಾದ ಬಳಕೆ ಹಾಗೂ ಕಾಡುಗಳ ನಾಶದಿಂದ ಹಸಿರು ಮನೆ ಪರಿಣಾಮದ ಮೇಲೆ ದುಷ್ಪರಿಣಾಮ ಬೀರುತ್ತದೆ.
  3.  ಭೂಮಂಡಲದ ಶಾಖದಿಂದಾಗಿ ಸಮುದ್ರದ ನೀರಿನ ಮಟ್ಟದಲ್ಲಿ ಏರಿಕೆಯಾಗುತ್ತದೆ. ಕಳೆದ ಒಂದು ಶತಮಾನದಲ್ಲಿ ಸಾಗರದ ನೀರಿನ ಮಟ್ಟ ಶೇಕಡ 15ರಷ್ಟು ಏರಿಕೆಯಾಗಿದೆ.
  4.  ಭೂಮಿಯ ತಾಪಮಾನದ ಹೆಚ್ಚಾಗುವಿಕೆಯಿಂದ ಹಿಮ ಪ್ರದೇಶದಲ್ಲಿನ ಹಿಮಗಡ್ಡೆಗಳು ಕರಗಿ ಸಾಗರದ ನೀರಿನ ಮಟ್ಟದಲ್ಲಿ ಏರಿಕೆಯಾಗುತ್ತದೆ. ಈಗಾಗಲೇ ಹಲವು ಕಡೆಗಳಲ್ಲಿ ಸಾಗರದ ನೀರಿನ ಮಟ್ಟ ಏರಿಕೆಯಾಗಿರುವುದು ದೃಢಪಟ್ಟಿದೆ.
  5. ಭೂ ಮೇಲ್ಮೈ ಉಷ್ಣತೆ ಹೆಚ್ಚಾದಂತೆ ಬಿರುಗಾಳಿ ಹೆಚ್ಚಾಗುವ ಸಂಭವ ಇರುತ್ತದೆ. ಉದಾ: 2002 ರಲ್ಲಿ ಆಂಧ್ರದಲ್ಲಿ ಬಿರುಗಾಳಿ ಬೀಸಿ ಸಾವಿರಾರು ಜನರು ಪ್ರಾಣ ತೆತ್ತರು.
  6.  ಭೂಮಿಯ ತಾಪಮಾನ ಹೆಚ್ಚಾದರೆ ಕೆರೆ, ಬಾವಿ, ನದಿ, ಸರೋವರಗಳು ಒಣಗಿ ಹೋಗಿ ಕುಡಿಯುವ ನೀರಿನ ಕೊರತೆ ಉಂಟಾಗುತ್ತದೆ.
  7.  ಭೂಮಿಯ ತಾಪಮಾನದ ಪ್ರಮಾಣ ದಿನೇ ದಿನೇ ಹೆಚ್ಚಾದರೆ ಅಂತರ್ಜಲ ಇಂಗಿ ಹೋಗುತ್ತದೆ.
  8.  ವಾತಾವರಣದಲ್ಲಿನ ಬಿಸಿ ಗಾಳಿಯಿಂದ ಜನರ ಚರ್ಮದ ಮೇಲೆ ತೀವ್ರತರದ ಪರಿಣಾಮ ಬೀರುತ್ತದೆ.
  9. ಭೂಮಿಯ ತಾಪಮಾನದ ಪರಿಣಾಮದಿಂದ ಪಶು ಪಕ್ಷಿಗಳು, ಜಲಚರ ಪ್ರಾಣಿಗಳು ಹಾಗೂ ಮಾನವ ಜೀವಿ ನೀರಿಲ್ಲದೆ ಸಾಯಬಹುದು.
  10.  ಭೂಮಿಯ ಅತಿಯಾದ ಉಷ್ಣಾಂಶದಿಂದ ಕೃಷಿ ಬೆಳೆಗಳು, ನೆರಳು ನೀಡುವ ಮರಗಳು ಹಾಗೂ ದಟ್ಟವಾದ ಕಾಡುಗಳು ಕಾಡ್ಗಿಚ್ಚಿಗೆ ಬಲಿಯಾಗಬಹುದು.

ಹಸಿರು ಮನೆ ಪರಿಣಾಮದ ನಿವಾರಣೋಪಾಯಗಳು:

  1. ಹಸಿರು ಮನೆ ಪರಿಣಾಮಕ್ಕೆ ಕಾರಣವಾಗುವ ಅನಿಲಗಳನ್ನು ನಿಯಂತ್ರಿಸಲು CFCs ಮತ್ತು ಪಳೆಯುಳಿಕೆ ಆಧಾರಿತ ಇಂಧನಗಳ ಬಳಕೆಯನ್ನು ಕಡಿಮೆಗೊಳಿಸುವುದು.
  2.  ಮಿತಿಮೀರಿ ಬೆಳೆಯುತ್ತಿರುವ ಜನಸಂಖ್ಯೆಗೆ ಕಡವಾಣವನ್ನು ಹೇರುವುದು.
  3.  15 ವರ್ಷ ಮೀರಿದ ಯಾವುದೇ ವಾಹನಗಳನ್ನು ರಸ್ತೆಗೆ ಇಳಿಸದಂತೆ ಕ್ರಮ ಕೈಗೊಳ್ಳುವುದು.
  4.  ಶಕ್ತಿ ಸಾಧನಗಳನ್ನು ಪ್ರಯೋಜನಕಾರಿಯಾಗಿ ಬಳಸಿಕೊಳ್ಳಬೇಕು.
  5. ರೆಫ್ರಿಜರೇಟರ್ ಹಾಗೂ ಹವಾನಿಯಂತ್ರಿತ ವ್ಯವಸ್ಥೆಗಳ ತಯಾರಿಕೆಯಲ್ಲಿ ಕ್ಲೋರೋ ಫ್ಲೋರೋ ಕಾರ್ಬನ್ ರಹಿತ ತಂತ್ರಜ್ಞಾನವನ್ನು ಬಳಕೆ ಮಾಡಬೇಕು.
  6.  ಉರುವಲು ಸೌದೆಗಾಗಿ, ಅಣೆಕಟ್ಟು, ರಸ್ತೆ, ಸೇತುವೆ ಹಾಗೂ ಕಟ್ಟಡಗಳ ನಿರ್ಮಾಣಕ್ಕಾಗಿ ಅಧಿಕ ಸಂಖ್ಯೆಯ ಮರಗಳನ್ನು ಕಡಿಯುವುದನ್ನು ಕಡಿಮೆಮಾಡಬೇಕು.
  7.  ಮರವಿದ್ದರೆ ನಾಡು-ನಾಡಿದ್ದರೆ ನಾವು ಎಂಬ ಉಕ್ತಿಯನ್ನು ಅನುಸರಿಸಬೇಕು.
  8.  ಮಿಥೇನ್ ಸಂಗ್ರಹಿಸಿ ಅದನ್ನು ಇಂಧನವಾಗಿ ಬಳಸುವುದು.
  9. ಗಿಡಮರಗಳನ್ನು ಹೆಚ್ಚು ಹೆಚ್ಚು ಬೆಳೆಸುವುದನ್ನು ಒಂದು ಹವ್ಯಾಸವಾಗುವಂತೆ ಜನರಲ್ಲಿ ಜಾಗೃತಿ ಮೂಡಿಸಬೇಕು.
  10. ಪಕ್ಕದಲ್ಲಿ ಕಾಡು ಹಾಳಾಗುತ್ತಿದೆ ನನಗೆನಾಗಬೇಕಾಗಿದೆ ಎಂಬ ಉದಾಸಿನ ಮನಸ್ಸಿನಿಂದ ನಡೆದುಕೊಳ್ಳುವುದನ್ನು ಬಿಡಬೇಕು.
  11.  ಸಾವಯವ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು.
  12.  ಕಲ್ಲಿದ್ದಲು, ಪೆಟ್ರೋಲ್‌, ಸೀಮೆಎಣ್ಣೆ ಹಾಗೂ ಅಣು ವಿದ್ಯುತ್ ಸ್ಥಾವರಗಳನ್ನು ತಡೆಗಟ್ಟಬೇಕು.

ಉಪಸಂಹಾರ

ಹಸಿರು ಮನೆ ಪರಿಣಾಮವನ್ನು ನಿಯಂತ್ರಿಸದಿದ್ದರೆ ಭವಿಷ್ಯದಲ್ಲಿ ಭೂಮಿಯ ಮೇಲೆ ಜೀವಿಸುವುದು ಕಷ್ಟಕರವಾಗಬಹುದು. ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಇಂಧನ ಬಳಕೆಯಲ್ಲಿ ಮಿತಿಯು, ಮರ ನೆಡುವ ಅಭ್ಯಾಸ ಮತ್ತು ಶುದ್ಧ ಶಕ್ತಿ ಬಳಕೆ ಅಗತ್ಯವಾಗಿದೆ. ಸರ್ಕಾರದ ಪ್ರಯತ್ನಗಳ ಜೊತೆಗೆ ಸಾರ್ವಜನಿಕ ಜಾಗೃತಿಯೂ ಅತಿ ಮುಖ್ಯವಾಗಿದೆ. ಇಂದೇ ನಾವು ಕೈಗೊಳ್ಳುವ ಸಣ್ಣ ಕ್ರಮಗಳು ನಾಳೆಯ ಭದ್ರ ಭವಿಷ್ಯಕ್ಕೆ ದಾರಿ ಮಾಡಿಕೊಡುತ್ತವೆ. ಪರಿಸರವನ್ನು ಉಳಿಸಿದರೆ ಮಾತ್ರ ಮಾನವ ಜೀವನ ಉಳಿಯುತ್ತದೆ.