ಭೋಜರಾಜ (ಕ್ರಿ.ಶ.1000-1055)

ಭೋಜರಾಜ (ಕ್ರಿ.ಶ.1000-1055)

ಭೋಜರಾಜನು ಪರಮಾರ ದೊರೆಗಳಲ್ಲಿ ಅತ್ಯಂತ ಪ್ರಸಿದ್ಧನಾಗಿದ್ದನು. ಈತ ಕ್ರಿ.ಶ.1000 ದಿಂದ 1055ರವರೆಗೆ ಆಳ್ವಿಕೆ ಮಾಡಿದನು. ಚಿಕ್ಕ ರಾಜ್ಯವಾಗಿದ್ದ ಪರಮಾರರ ರಾಜ್ಯ ಭೋಜರಾಜನ ಕಾಲದಲ್ಲಿ ವಿಶಾಲವಾಗಿ ಹರಡಿತು. ಇವನು ದಂಡನಾಯಕ ಮಾತ್ರ ಆಗಿರದೆ ಸಾಹಿತಿಯೂ ಆಗಿದ್ದನು. ‘ಧಾರಾನಗರ’ ಈತನ ರಾಜಧಾನಿಯಾಗಿದ್ದಿತು. ಭೋಜಚರಿತೆ, ಸರಸ್ವತಿ ಕಂಠಾಭರಣ ಹಾಗೂ ಶಬ್ದಾನುಶಾಸನ ಈತನ ಸಾಧನೆಗಳ ಕುರಿತು ಬರೆದಿವೆ.

ಭೋಜರಾಜನ ದಂಡಯಾತ್ರೆಗಳು:

1) ಕಲ್ಯಾಣಿ ಚಾಲುಕ್ಯರ ಮೇಲೆ ಸೇಡು: ಪರಮಾರರ ಬದ್ಧ ವೈರಿಯಾಗಿದ್ದ ಕಲ್ಯಾಣಿ ಚಾಲುಕ್ಯರ ಮೇಲೆ ಸೇಡು ತೀರಿಸಿಕೊಳ್ಳಲು ಭೋಜರಾಜನು ಕಾತರನಾಗಿದ್ದನು. ಇದೇ ಸಮಯದಲ್ಲಿ ಚಾಲುಕ್ಯರ ಅರಸನಾದ ಎರಡನೆಯ ಜಯಸಿಂಹ ಭೋಜರಾಜನ ಅರಮನೆಯ ಸಂಪತ್ತೆಲ್ಲವನ್ನು ಲೂಟಿ ಮಾಡಿದನು. ಇದರಿಂದ ಕುಪಿತಗೊಂಡ ಭೋಜರಾಜನು ಕಲಚೂರಿ ದೊರೆ ಗಾಂಗೇಯದೇವ ಹಾಗು ತಂಜಾವೂರಿನ ರಾಜೇಂದ್ರ ಚೋಳನೊಂದಿಗೆ ಒಪ್ಪಂದವನ್ನು ಮಾಡಿಕೊಂಡು ಚಾಲುಕ್ಯರ ಮೇಲೆ ಯುದ್ಧ ಸಾರಿದನು. ಇವರೀರ್ವರೂ ಗೋದಾವರಿ ನದಿ ತೀರದಲ್ಲಿ ಸಂಧಿಸಿದರು. ಆರಂಭದಲ್ಲಿ ಭೋಜರಾಜನ ಸೈನ್ಯಕ್ಕೆ ಯಶಸ್ಸು ಲಭಿಸಿತು. ಆದರೆ ತಕ್ಷಣವೇ ಎಚ್ಚೆತ್ತುಕೊಂಡ ಜಯಸಿಂಹ ಮಿತ್ರಕೂಟವನ್ನು ಸಂಪೂರ್ಣವಾಗಿ ಸೋಲಿಸಿ ಹಿಮ್ಮೆಟ್ಟಿಸಿದನು.

2) ಇಂದ್ರರಥನ ಮೇಲೆ ದಾಳಿ: ಆದಿನಗರವನ್ನು ಆಳುತ್ತಿದ್ದ ಇಂದ್ರರಥನನ್ನು ಸೋಲಿಸಲು ಭೋಜರಾಜನು ಸೇನಾಸಮೇತ ಹೊರಟನು. ಇವರಿಬ್ಬರ ನಡುವೆ ನಡೆದ ಯುದ್ಧದಲ್ಲಿ ಇಂದ್ರರಥ ಸೋಲನುಭವಿಸಿದನು.

3) ಲಾಟರ ವಿರುದ್ಧ ಯುದ್ಧ: ಲಾಟರ ಅರಸನಾದ ಕೀರ್ತಿರಾಜನನ್ನು ಭೋಜರಾಜ ಸೋಲಿಸಿದನೆಂದು ಆ ಕಾಲದ ಶಾಸನಗಳು ಹೇಳಿವೆ.

4) ತ್ರಿಪುರಿ ಗಂಗೇವಾಡಿಯ ವಿರುದ್ಧ ವಿಜಯ: ತ್ರಿಪುರಿ ಗಾಂಗೇಯ ರಾಜನು ಭೋಜರಾಜನ ಕಡುವೈರಿಯಾಗಿದ್ದನು. ಹೀಗಾಗಿ ಅವನನ್ನು ಸೋಲಿಸಲು ಭೋಜ ರಾಜನು ಹೊರಟನು. ದೀರ್ಘಕಾಲದ ಹೋರಾಟದ ನಂತರ ಗಾಂಗೇಯದೇವ ಭೋಜರಾಜನಿಂದ ಸೋತು ಶರಣಾಗತನಾದನು. ದರ್ಪದಿಂದ ಆಳ್ವಿಕೆ ಮಾಡುತ್ತಿದ್ದನು.

5) ಕೊಂಕಣದ ಮೇಲೆ ದಂಡಯಾತ್ರೆ: ಕೊಂಕಣ ಪ್ರಾಂತ್ಯದ ಅಧಿಪತಿಯಾಗಿದ್ದ ಕೇಶಿದೇವನು ಅಹಂಕಾರ ಹಾಗೂ ಇವನನ್ನು ಬಗ್ಗು ಬಡಿಯಲು ಭೋಜರಾಜ ಕ್ರಿ.ಶ.1020ರಲ್ಲಿ ಕೊಂಕಣದ ಮೇಲೆ ದಾಳಿ ಮಾಡಿದನು. ಈ ಯುದ್ಧದಲ್ಲಿ ಭೋಜರಾಜ ಗೆಲುವನ್ನು ಸಾಧಿಸುವ ಮೂಲಕ ಕೊಂಕಣದ ಮೇಲೆ ತನ್ನ ಪ್ರಭುತ್ವವನ್ನು ಸ್ಥಾಪಿಸಿದನು.

6) ಕನ್ಯಾಕುಬ್ಜದ ವಿರುದ್ಧ ದಂಡಯಾತ್ರೆ: ಶಾಸನಗಳು ಹೇಳುವ ಪ್ರಕಾರ ಭೋಜರಾಜನು ಕನ್ಯಾಕುಬ್ಬದ ಮೇಲೆ ದಾಳಿ ಮಾಡಿ ಅಲ್ಲಿನ ರಾಜನನ್ನು ಸೋಲಿಸಿದನು ಎಂದು ತಿಳಿದುಬರುತ್ತದೆ.

7) ಚಂದೇಲರ ವಿರುದ್ಧ ದಂಡಯಾತ್ರೆ: ಚಂದೇಲರ ಅರಸನಾದ ವಿಧ್ಯಾದರ ಹಾಗೂ ಭೋಜನ ನಡುವೆ ಭೀಕರ ಯುದ್ಧ ನಡೆಯಿತು. ಈ ಯುದ್ಧದಲ್ಲಿ ಭೋಜನು ಸೋಲನುಭವಿಸಿದನು. ಭೋಜನ ಪ್ರಯತ್ನವನ್ನು ಚಂದೇಲರು ಭಗ್ನಗೊಳಿಸಿದರೆಂದು ಶಾಸನಗಳಿಂದ ತಿಳಿದುಬರುತ್ತದೆ.

8) ಗ್ವಾಲಿಯರದ ಕೀರ್ತಿರಾಜನ ಮೇಲೆ ದಾಳಿ: ಗ್ವಾಲಿಯರದ ದೊರೆ ಕೀರ್ತಿರಾಜನ ವಿರುದ್ಧ ಭೋಜನು ಯುದ್ಧವನ್ನು ಸಾರಿದನು. ಈತನನ್ನು ತೀವ್ರವಾಗಿ ವಿರೋಧಿಸಿದ ಕೀರ್ತಿರಾಜನು ಭೋಜರಾಜನನ್ನು ಯುದ್ಧದಲ್ಲಿ ಸೋಲಿಸಿ ಹಿಂದಕ್ಕೆ ಅಟ್ಟಿದನು.

9) ಚಹಮಾನರ ವಿರುದ್ಧ ಹೋರಾಟ: ಚಹಮಾನರ ರಾಜನಾದ ವಿಕ್ರಮನು ಭೋಜರಾಜನ ವಿರುದ್ಧ ಹೋರಾಡಿ ಸೋಲನುಭವಿಸಿದನು.

10) ಘಜ್ನಿ ಮಹಮ್ಮದನ ವಿರುದ್ಧ ದಂಡಯಾತ್ರೆ: ಘಜ್ಜಿ ಮಹಮ್ಮದನ ವಿರುದ್ಧ ಪಂಜಾಬಿನ ದೊರೆಯಾದ ಆನಂದಪಾಲನು ಭೋಜರಾಜನ ಜೊತೆ ಮೈತ್ರಿಯನ್ನು ಏರ್ಪಡಿಸಿಕೊಂಡು ಯುದ್ಧ ಸಾರಿದನು. ಆದರೆ ಮಹಮ್ಮದ್‌ನ ಉಪಟಳ ಹೆಚ್ಚಾಯಿತು. ಆಗ ಆನಂದಪಾಲನ ಮಗ ತ್ರಿಲೋಚನಾಪಾಲನು ಭೋಜರಾಜನ ಜೊತೆ ಸೇರಿಕೊಂಡು ಮಹಮ್ಮದನ ವಿರುದ್ಧ ಹೋರಾಟ ಆರಂಭಿಸಿದನು. ಇವರಿಬ್ಬರೂ ಸೇರಿ ಮುಸ್ಲಿಂರ ಆಕ್ರಮಣದಿಂದ ಭಾರತವನ್ನು ರಕ್ಷಿಸಿದರು. ಇದು ಭೋಜರಾಜನ ಬಹುಮುಖ್ಯವಾದ ಸಾಧನೆಯಾಯಿತು.

11) ಸೋಮೇಶ್ವರನ ವಿರುದ್ಧ ದಾಳಿ: ಚಾಲುಕ್ಯ ದೊರೆ ಒಂದನೆಯ ಸೋಮೇಶ್ವರ ಭೋಜರಾಜನಿಂದ ತನ್ನ ತಂದೆಗೆ ಆದ ಅವಮಾನವನ್ನು ಮರೆತಿರಲಿಲ್ಲ. ಹೀಗಾಗಿ ಆತನ ಮೇಲೆ ಸೇಡು ತೀರಿಸಿಕೊಳ್ಳಲು ಒಂದನೆಯ ಸೋಮೇಶ್ವರ ಆತನ ವಿರುದ್ಧ ಯುದ್ಧ ಘೋಷಿಸಿ ಧಾರಾನಗರ, ಉಜೈನಿ ಹಾಗೂ ಮಾಂಡುಗಳನ್ನು ವಶಪಡಿಸಿಕೊಂಡನು. ಸೋಮೇಶ್ವರನ ದಾಳಿಗೆ ಹೆದರಿ ಭೋಜರಾಜ ರಾಜಧಾನಿಯನ್ನು ತೊರೆದು ಪಲಾಯನ ಮಾಡಿದನು.

12) ಭೋಜನ ಸಾಂಸ್ಕೃತಿಕ ಸಾಧನೆಗಳು:

ಎ) ಧರ್ಮ: ಭೋಜರಾಜನು ಮಹಾನ್ ಪರಾಕ್ರಮಿಯಾಗಿದ್ದಂತೆ ಉತ್ತಮ ಆಡಳಿತಗಾರನೂ ಹಾಗೂ ಸಾಹಿತ್ಯ ಪ್ರೇಮಿಯೂ ಆಗಿದ್ದನು. ಇವನು ಶೈವ ಧರ್ಮದ ಅನುಯಾಯಿಯಾಗಿದ್ದು ಧರ್ಮದ ಕುರಿತು ‘ಸತ್ಯ ಪ್ರಕಾಶ’ ಎಂಬ ಕೃತಿಯನ್ನು ರಚಿಸಿದನು. ಇವನು ಜೈನ ಧರ್ಮದ ರಕ್ಷಕನೂ ಆಗಿದ್ದನು. ತನ್ನ ಆಡಳಿತಾವಧಿಯಲ್ಲಿ ವಿವಿಧ ಧರ್ಮದ ಗುರುಗಳನ್ನು ಕರೆದು ಚರ್ಚೆ ಹಾಗೂ ಗೋಷ್ಠಿಗಳನ್ನು ನಡೆಸಿದನು.

ಬಿ) ಶಿಕ್ಷಣ: ಭೋಜನು ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿದನು. ಆದ್ದರಿಂದ ಭೋಜನು ಧಾರಾನಗರದಲ್ಲಿ ಒಂದು ಸಂಸ್ಕೃತ ವಿದ್ಯಾಕೇಂದ್ರವನ್ನು ಸ್ಥಾಪಿಸಿದನು.

ಇವನು ಸಾಹಿತ್ಯ ಪ್ರೇಮಿಯಾಗಿದ್ದು, ಸ್ವತಃ ಅನೇಕ ಕೃತಿಗಳನ್ನು ರಚಿಸಿದ್ದಾನೆ. ಇವನು ರಚಿಸಿದ ಚಂಪೂ ಕಾವ್ಯಕ್ಕೆ ರಾಮಾಯಣ ಚಂಪೂ ಎಂದು ಕರೆಯಲಾಗಿದೆ. ಆಯುರ್ವೇದ ಸರ್ವಸ್ಯ, ಸರಸ್ವತಿ ಕಂಠಾಭರಣ, ವ್ಯವಹಾರ ಸಮುಚ್ಚಯ, ಶಬ್ದಾನುಶಾಸನ, ಸಮರಾಂಗನ ಸೂತ್ರಧಾರ, ನಾಮಮಲ್ಲಿಕಾ, ತತ್ವಪ್ರಕಾಶ, ರಾಜಮಾರ್ತಂಡ ಹಾಗು ಶೃಂಗಾರ ಪ್ರಕಾಶ ಮೊದಲಾದ ಕೃತಿಗಳನ್ನು ಸ್ವತಃ ಭೋಜರಾಜನೇ ರಚಿಸಿದನು. ಧನಪಾಲ, ಉವಟ, ಸೋಲಹನ, ಕವಿತ್ರಿ ಸೀತ ಮುಂತಾದ ಕವಿ ಪಂಡಿತರು ಭೋಜನ ಆಸ್ಥಾನದಲ್ಲಿದ್ದರು. ಈತನ ರಾಣಿ ಅರುಂಧತಿ ಸಹ ವಿದ್ವಂಸಳಾಗಿದ್ದಳು. ಕಲೆ: ಭೋಜರಾಜ ಅನೇಕ ದೇವಾಲಯಗಳು, ಸರೋವರಗಳು ಹಾಗೂ ಕೆರೆಗಳನ್ನು ನಿರ್ಮಿಸಿದನು. ಇವನು ಭೋಜಪುರ ಎಂಬ ನಗರವನ್ನು ನಿರ್ಮಿಸಿದನು. ಧಾರಾನಗರದಲ್ಲಿ ಸರಸ್ವತಿ ದೇಗುಲವನ್ನು ಕಟ್ಟಿಸಿದನು. ಧಾರಾನಗರದಲ್ಲಿ ಶಾಲೆಯನ್ನು ನಿರ್ಮಿಸಿದನು. ಇದು ಅಂದಿನ ಪ್ರಸಿದ್ಧ ವಿಶ್ವವಿದ್ಯಾಲಯವಾಗಿತ್ತು. ಧಾರಾನಗರದಲಿ ಭೋಜ ಸರೋವರವನ್ನು ನಿರ್ಮಿಸಿದನು.

ಕಲೆ: ಭೋಜರಾಜನ ನಂತರ ಜಯಸಿಂಹ, ಉದಯಾದಿತ್ಯ, ಜಗತ್‌ ದೇವ, ನರವರ್ಮನ್, ಯಶೋವರ್ಮನ್, ಜಯವರ್ಮನ್, ವಿಂಧ್ಯವರ್ಮನ್, ಅರ್ಜುನವರ್ಮ, ದೇವಪಾಲ, ಚೈತುಗಿದೇವ, ಎರಡನೆಯ ಜಯವರ್ಮ, ಎರಡನೆಯ ಜಯಸಿಂಹಮ ಎರಡನೆಯ ಅರ್ಜುನವರ್ಮ ಹಾಗೂ ಎರಡನೆಯ ಭೋಜರಾಜ ಪರಮಾರರ ದೊರೆಗಳಾದರು. ಆದರೆ ಎರಡನೆಯ ಭೋಜರಾಜನ ಕಾಲದಲ್ಲಿ 1305ರಲ್ಲಿ ಅಲ್ಲಾವುದ್ದೀನ್ ಖಲ್ಟಿ ಮಾಳವವನ್ನು ಆಕ್ರಮಿಸಿ ಭೋಜರಾಜನ ಸೋಲಿಗೆ ಕಾರಣನಾದನು. ಭೋಜರಾಜನ ಸೋಲಿನ ನಂತರ ಪರಮಾರರ ಸಂತತಿ ಅವನತಿ ಹೊಂದಿತು.

ಪರಮಾರ ಭೋಜರಾಜ (ಕ್ರಿ.ಶ.1000-1055)

ಪರಮಾರ ಭೋಜರಾಜ (ಕ್ರಿ.ಶ.1000-1055)

ಭೋಜರಾಜನು ಪರಮಾರ ದೊರೆಗಳಲ್ಲಿ ಅತ್ಯಂತ ಪ್ರಸಿದ್ಧನಾಗಿದ್ದನು. ಈತ ಕ್ರಿ.ಶ.1000 ದಿಂದ 1055ರವರೆಗೆ ಆಳ್ವಿಕೆ ಮಾಡಿದನು. ಚಿಕ್ಕ ರಾಜ್ಯವಾಗಿದ್ದ ಪರಮಾರರ ರಾಜ್ಯ ಭೋಜರಾಜನ ಕಾಲದಲ್ಲಿ ವಿಶಾಲವಾಗಿ ಹರಡಿತು. ಇವನು ದಂಡನಾಯಕ ಮಾತ್ರ ಆಗಿರದೆ ಸಾಹಿತಿಯೂ ಆಗಿದ್ದನು. ‘ಧಾರಾನಗರ’ ಈತನ ರಾಜಧಾನಿಯಾಗಿದ್ದಿತು. ಭೋಜಚರಿತೆ, ಸರಸ್ವತಿ ಕಂಠಾಭರಣ ಹಾಗೂ ಶಬ್ದಾನುಶಾಸನ ಈತನ ಸಾಧನೆಗಳ ಕುರಿತು ಬರೆದಿವೆ.

ಭೋಜರಾಜನ ದಂಡಯಾತ್ರೆಗಳು:

1) ಕಲ್ಯಾಣಿ ಚಾಲುಕ್ಯರ ಮೇಲೆ ಸೇಡು: ಪರಮಾರರ ಬದ್ಧ ವೈರಿಯಾಗಿದ್ದ ಕಲ್ಯಾಣಿ ಚಾಲುಕ್ಯರ ಮೇಲೆ ಸೇಡು ತೀರಿಸಿಕೊಳ್ಳಲು ಭೋಜರಾಜನು ಕಾತರನಾಗಿದ್ದನು. ಇದೇ ಸಮಯದಲ್ಲಿ ಚಾಲುಕ್ಯರ ಅರಸನಾದ ಎರಡನೆಯ ಜಯಸಿಂಹ ಭೋಜರಾಜನ ಅರಮನೆಯ ಸಂಪತ್ತೆಲ್ಲವನ್ನು ಲೂಟಿ ಮಾಡಿದನು. ಇದರಿಂದ ಕುಪಿತಗೊಂಡ ಭೋಜರಾಜನು ಕಲಚೂರಿ ದೊರೆ ಗಾಂಗೇಯದೇವ ಹಾಗು ತಂಜಾವೂರಿನ ರಾಜೇಂದ್ರ ಚೋಳನೊಂದಿಗೆ ಒಪ್ಪಂದವನ್ನು ಮಾಡಿಕೊಂಡು ಚಾಲುಕ್ಯರ ಮೇಲೆ ಯುದ್ಧ ಸಾರಿದನು. ಇವರೀರ್ವರೂ ಗೋದಾವರಿ ನದಿ ತೀರದಲ್ಲಿ ಸಂಧಿಸಿದರು. ಆರಂಭದಲ್ಲಿ ಭೋಜರಾಜನ ಸೈನ್ಯಕ್ಕೆ ಯಶಸ್ಸು ಲಭಿಸಿತು. ಆದರೆ ತಕ್ಷಣವೇ ಎಚ್ಚೆತ್ತುಕೊಂಡ ಜಯಸಿಂಹ ಮಿತ್ರಕೂಟವನ್ನು ಸಂಪೂರ್ಣವಾಗಿ ಸೋಲಿಸಿ ಹಿಮ್ಮೆಟ್ಟಿಸಿದನು.

2) ಇಂದ್ರರಥನ ಮೇಲೆ ದಾಳಿ: ಆದಿನಗರವನ್ನು ಆಳುತ್ತಿದ್ದ ಇಂದ್ರರಥನನ್ನು ಸೋಲಿಸಲು ಭೋಜರಾಜನು ಸೇನಾಸಮೇತ ಹೊರಟನು. ಇವರಿಬ್ಬರ ನಡುವೆ ನಡೆದ ಯುದ್ಧದಲ್ಲಿ ಇಂದ್ರರಥ ಸೋಲನುಭವಿಸಿದನು.

3) ಲಾಟರ ವಿರುದ್ಧ ಯುದ್ಧ: ಲಾಟರ ಅರಸನಾದ ಕೀರ್ತಿರಾಜನನ್ನು ಭೋಜರಾಜ ಸೋಲಿಸಿದನೆಂದು ಆ ಕಾಲದ ಶಾಸನಗಳು ಹೇಳಿವೆ.

4) ತ್ರಿಪುರಿ ಗಂಗೇವಾಡಿಯ ವಿರುದ್ಧ ವಿಜಯ: ತ್ರಿಪುರಿ ಗಾಂಗೇಯ ರಾಜನು ಭೋಜರಾಜನ ಕಡುವೈರಿಯಾಗಿದ್ದನು. ಹೀಗಾಗಿ ಅವನನ್ನು ಸೋಲಿಸಲು ಭೋಜ ರಾಜನು ಹೊರಟನು. ದೀರ್ಘಕಾಲದ ಹೋರಾಟದ ನಂತರ ಗಾಂಗೇಯದೇವ ಭೋಜರಾಜನಿಂದ ಸೋತು ಶರಣಾಗತನಾದನು. ದರ್ಪದಿಂದ ಆಳ್ವಿಕೆ ಮಾಡುತ್ತಿದ್ದನು.

5) ಕೊಂಕಣದ ಮೇಲೆ ದಂಡಯಾತ್ರೆ: ಕೊಂಕಣ ಪ್ರಾಂತ್ಯದ ಅಧಿಪತಿಯಾಗಿದ್ದ ಕೇಶಿದೇವನು ಅಹಂಕಾರ ಹಾಗೂ ಇವನನ್ನು ಬಗ್ಗು ಬಡಿಯಲು ಭೋಜರಾಜ ಕ್ರಿ.ಶ.1020ರಲ್ಲಿ ಕೊಂಕಣದ ಮೇಲೆ ದಾಳಿ ಮಾಡಿದನು. ಈ ಯುದ್ಧದಲ್ಲಿ ಭೋಜರಾಜ ಗೆಲುವನ್ನು ಸಾಧಿಸುವ ಮೂಲಕ ಕೊಂಕಣದ ಮೇಲೆ ತನ್ನ ಪ್ರಭುತ್ವವನ್ನು ಸ್ಥಾಪಿಸಿದನು.

6) ಕನ್ಯಾಕುಬ್ಜದ ವಿರುದ್ಧ ದಂಡಯಾತ್ರೆ: ಶಾಸನಗಳು ಹೇಳುವ ಪ್ರಕಾರ ಭೋಜರಾಜನು ಕನ್ಯಾಕುಬ್ಬದ ಮೇಲೆ ದಾಳಿ ಮಾಡಿ ಅಲ್ಲಿನ ರಾಜನನ್ನು ಸೋಲಿಸಿದನು ಎಂದು ತಿಳಿದುಬರುತ್ತದೆ.

7) ಚಂದೇಲರ ವಿರುದ್ಧ ದಂಡಯಾತ್ರೆ: ಚಂದೇಲರ ಅರಸನಾದ ವಿಧ್ಯಾದರ ಹಾಗೂ ಭೋಜನ ನಡುವೆ ಭೀಕರ ಯುದ್ಧ ನಡೆಯಿತು. ಈ ಯುದ್ಧದಲ್ಲಿ ಭೋಜನು ಸೋಲನುಭವಿಸಿದನು. ಭೋಜನ ಪ್ರಯತ್ನವನ್ನು ಚಂದೇಲರು ಭಗ್ನಗೊಳಿಸಿದರೆಂದು ಶಾಸನಗಳಿಂದ ತಿಳಿದುಬರುತ್ತದೆ.

8) ಗ್ವಾಲಿಯರದ ಕೀರ್ತಿರಾಜನ ಮೇಲೆ ದಾಳಿ: ಗ್ವಾಲಿಯರದ ದೊರೆ ಕೀರ್ತಿರಾಜನ ವಿರುದ್ಧ ಭೋಜನು ಯುದ್ಧವನ್ನು ಸಾರಿದನು. ಈತನನ್ನು ತೀವ್ರವಾಗಿ ವಿರೋಧಿಸಿದ ಕೀರ್ತಿರಾಜನು ಭೋಜರಾಜನನ್ನು ಯುದ್ಧದಲ್ಲಿ ಸೋಲಿಸಿ ಹಿಂದಕ್ಕೆ ಅಟ್ಟಿದನು.

9) ಚಹಮಾನರ ವಿರುದ್ಧ ಹೋರಾಟ: ಚಹಮಾನರ ರಾಜನಾದ ವಿಕ್ರಮನು ಭೋಜರಾಜನ ವಿರುದ್ಧ ಹೋರಾಡಿ ಸೋಲನುಭವಿಸಿದನು.

10) ಘಜ್ನಿ ಮಹಮ್ಮದನ ವಿರುದ್ಧ ದಂಡಯಾತ್ರೆ: ಘಜ್ಜಿ ಮಹಮ್ಮದನ ವಿರುದ್ಧ ಪಂಜಾಬಿನ ದೊರೆಯಾದ ಆನಂದಪಾಲನು ಭೋಜರಾಜನ ಜೊತೆ ಮೈತ್ರಿಯನ್ನು ಏರ್ಪಡಿಸಿಕೊಂಡು ಯುದ್ಧ ಸಾರಿದನು. ಆದರೆ ಮಹಮ್ಮದ್‌ನ ಉಪಟಳ ಹೆಚ್ಚಾಯಿತು. ಆಗ ಆನಂದಪಾಲನ ಮಗ ತ್ರಿಲೋಚನಾಪಾಲನು ಭೋಜರಾಜನ ಜೊತೆ ಸೇರಿಕೊಂಡು ಮಹಮ್ಮದನ ವಿರುದ್ಧ ಹೋರಾಟ ಆರಂಭಿಸಿದನು. ಇವರಿಬ್ಬರೂ ಸೇರಿ ಮುಸ್ಲಿಂರ ಆಕ್ರಮಣದಿಂದ ಭಾರತವನ್ನು ರಕ್ಷಿಸಿದರು. ಇದು ಭೋಜರಾಜನ ಬಹುಮುಖ್ಯವಾದ ಸಾಧನೆಯಾಯಿತು.

11) ಸೋಮೇಶ್ವರನ ವಿರುದ್ಧ ದಾಳಿ: ಚಾಲುಕ್ಯ ದೊರೆ ಒಂದನೆಯ ಸೋಮೇಶ್ವರ ಭೋಜರಾಜನಿಂದ ತನ್ನ ತಂದೆಗೆ ಆದ ಅವಮಾನವನ್ನು ಮರೆತಿರಲಿಲ್ಲ. ಹೀಗಾಗಿ ಆತನ ಮೇಲೆ ಸೇಡು ತೀರಿಸಿಕೊಳ್ಳಲು ಒಂದನೆಯ ಸೋಮೇಶ್ವರ ಆತನ ವಿರುದ್ಧ ಯುದ್ಧ ಘೋಷಿಸಿ ಧಾರಾನಗರ, ಉಜೈನಿ ಹಾಗೂ ಮಾಂಡುಗಳನ್ನು ವಶಪಡಿಸಿಕೊಂಡನು. ಸೋಮೇಶ್ವರನ ದಾಳಿಗೆ ಹೆದರಿ ಭೋಜರಾಜ ರಾಜಧಾನಿಯನ್ನು ತೊರೆದು ಪಲಾಯನ ಮಾಡಿದನು.

12) ಭೋಜನ ಸಾಂಸ್ಕೃತಿಕ ಸಾಧನೆಗಳು:

ಎ) ಧರ್ಮ: ಭೋಜರಾಜನು ಮಹಾನ್ ಪರಾಕ್ರಮಿಯಾಗಿದ್ದಂತೆ ಉತ್ತಮ ಆಡಳಿತಗಾರನೂ ಹಾಗೂ ಸಾಹಿತ್ಯ ಪ್ರೇಮಿಯೂ ಆಗಿದ್ದನು. ಇವನು ಶೈವ ಧರ್ಮದ ಅನುಯಾಯಿಯಾಗಿದ್ದು ಧರ್ಮದ ಕುರಿತು ‘ಸತ್ಯ ಪ್ರಕಾಶ’ ಎಂಬ ಕೃತಿಯನ್ನು ರಚಿಸಿದನು. ಇವನು ಜೈನ ಧರ್ಮದ ರಕ್ಷಕನೂ ಆಗಿದ್ದನು. ತನ್ನ ಆಡಳಿತಾವಧಿಯಲ್ಲಿ ವಿವಿಧ ಧರ್ಮದ ಗುರುಗಳನ್ನು ಕರೆದು ಚರ್ಚೆ ಹಾಗೂ ಗೋಷ್ಠಿಗಳನ್ನು ನಡೆಸಿದನು.

ಬಿ) ಶಿಕ್ಷಣ: ಭೋಜನು ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿದನು. ಆದ್ದರಿಂದ ಭೋಜನು ಧಾರಾನಗರದಲ್ಲಿ ಒಂದು ಸಂಸ್ಕೃತ ವಿದ್ಯಾಕೇಂದ್ರವನ್ನು ಸ್ಥಾಪಿಸಿದನು.

ಇವನು ಸಾಹಿತ್ಯ ಪ್ರೇಮಿಯಾಗಿದ್ದು, ಸ್ವತಃ ಅನೇಕ ಕೃತಿಗಳನ್ನು ರಚಿಸಿದ್ದಾನೆ. ಇವನು ರಚಿಸಿದ ಚಂಪೂ ಕಾವ್ಯಕ್ಕೆ ರಾಮಾಯಣ ಚಂಪೂ ಎಂದು ಕರೆಯಲಾಗಿದೆ. ಆಯುರ್ವೇದ ಸರ್ವಸ್ಯ, ಸರಸ್ವತಿ ಕಂಠಾಭರಣ, ವ್ಯವಹಾರ ಸಮುಚ್ಚಯ, ಶಬ್ದಾನುಶಾಸನ, ಸಮರಾಂಗನ ಸೂತ್ರಧಾರ, ನಾಮಮಲ್ಲಿಕಾ, ತತ್ವಪ್ರಕಾಶ, ರಾಜಮಾರ್ತಂಡ ಹಾಗು ಶೃಂಗಾರ ಪ್ರಕಾಶ ಮೊದಲಾದ ಕೃತಿಗಳನ್ನು ಸ್ವತಃ ಭೋಜರಾಜನೇ ರಚಿಸಿದನು. ಧನಪಾಲ, ಉವಟ, ಸೋಲಹನ, ಕವಿತ್ರಿ ಸೀತ ಮುಂತಾದ ಕವಿ ಪಂಡಿತರು ಭೋಜನ ಆಸ್ಥಾನದಲ್ಲಿದ್ದರು. ಈತನ ರಾಣಿ ಅರುಂಧತಿ ಸಹ ವಿದ್ವಂಸಳಾಗಿದ್ದಳು. ಕಲೆ: ಭೋಜರಾಜ ಅನೇಕ ದೇವಾಲಯಗಳು, ಸರೋವರಗಳು ಹಾಗೂ ಕೆರೆಗಳನ್ನು ನಿರ್ಮಿಸಿದನು. ಇವನು ಭೋಜಪುರ ಎಂಬ ನಗರವನ್ನು ನಿರ್ಮಿಸಿದನು. ಧಾರಾನಗರದಲ್ಲಿ ಸರಸ್ವತಿ ದೇಗುಲವನ್ನು ಕಟ್ಟಿಸಿದನು. ಧಾರಾನಗರದಲ್ಲಿ ಶಾಲೆಯನ್ನು ನಿರ್ಮಿಸಿದನು. ಇದು ಅಂದಿನ ಪ್ರಸಿದ್ಧ ವಿಶ್ವವಿದ್ಯಾಲಯವಾಗಿತ್ತು. ಧಾರಾನಗರದಲಿ ಭೋಜ ಸರೋವರವನ್ನು ನಿರ್ಮಿಸಿದನು.

ಕಲೆ: ಭೋಜರಾಜನ ನಂತರ ಜಯಸಿಂಹ, ಉದಯಾದಿತ್ಯ, ಜಗತ್‌ ದೇವ, ನರವರ್ಮನ್, ಯಶೋವರ್ಮನ್, ಜಯವರ್ಮನ್, ವಿಂಧ್ಯವರ್ಮನ್, ಅರ್ಜುನವರ್ಮ, ದೇವಪಾಲ, ಚೈತುಗಿದೇವ, ಎರಡನೆಯ ಜಯವರ್ಮ, ಎರಡನೆಯ ಜಯಸಿಂಹಮ ಎರಡನೆಯ ಅರ್ಜುನವರ್ಮ ಹಾಗೂ ಎರಡನೆಯ ಭೋಜರಾಜ ಪರಮಾರರ ದೊರೆಗಳಾದರು. ಆದರೆ ಎರಡನೆಯ ಭೋಜರಾಜನ ಕಾಲದಲ್ಲಿ 1305ರಲ್ಲಿ ಅಲ್ಲಾವುದ್ದೀನ್ ಖಲ್ಟಿ ಮಾಳವವನ್ನು ಆಕ್ರಮಿಸಿ ಭೋಜರಾಜನ ಸೋಲಿಗೆ ಕಾರಣನಾದನು. ಭೋಜರಾಜನ ಸೋಲಿನ ನಂತರ ಪರಮಾರರ ಸಂತತಿ ಅವನತಿ ಹೊಂದಿತು.

ಪ್ರಮುಖ ರಜಪೂತ ರಾಜವಂಶಗಳು

ಪ್ರಮುಖ ರಜಪೂತ ರಾಜವಂಶಗಳು

ಪರಿಚಯ
ರಾಜಪೂತರು ಪ್ರಾರಂಭಿಕ ಮಧ್ಯಯುಗೀನ ಭಾರತದಲ್ಲಿ ಶಕ್ತಿಶಾಲಿ ಯೋಧ ವರ್ಗವಾಗಿ ಹೊರಹೊಮ್ಮಿದರು. ಧೈರ್ಯ, ಗೌರವ, ನಿಷ್ಠೆ ಮತ್ತು ರಾಜಧರ್ಮ ಎಂಬ ಆದರ್ಶಗಳನ್ನು ಅವರು ಮೈಗೂಡಿಸಿಕೊಂಡಿದ್ದರು. 8ರಿಂದ 12ನೇ ಶತಮಾನಗಳ ನಡುವೆ ಉತ್ತರ ಹಾಗೂ ಮಧ್ಯ ಭಾರತದ ವಿವಿಧ ಭಾಗಗಳಲ್ಲಿ ಆಳಿದ ಚೌಹಾನರು, ಪರಮಾರರು ಮತ್ತು ಪ್ರತಿಹಾರರು ಪ್ರಮುಖ ರಾಜಪೂತ ವಂಶಗಳಾಗಿದ್ದರು. ಈ ವಂಶಗಳು ಹೊರಗಿನ ಆಕ್ರಮಣಗಳಿಗೆ ತಡೆಯೊಡ್ಡಿದಷ್ಟೇ ಅಲ್ಲದೆ, ಕಲೆ, ವಾಸ್ತುಶಿಲ್ಪ, ಸಾಹಿತ್ಯ ಮತ್ತು ಧರ್ಮಕ್ಕೆ ಉತ್ತೇಜನ ನೀಡಿ ಮಧ್ಯಯುಗೀನ ಭಾರತೀಯ ಸಂಸ್ಕೃತಿಗೆ ಮಹತ್ವದ ಕೊಡುಗೆ ನೀಡಿದವು.

ಗೂರ್ಜರ ಪ್ರತಿಹಾರರು (ರಾಜಧಾನಿ – ಕನೂಜ್)

ಗೂರ್ಜರ ಪ್ರತಿಹಾರರು ರಾಮಾಯಣ ಕಾವ್ಯದ ಪ್ರಸಿದ್ಧ ಸೂರ್ಯವಂಶಕ್ಕೆ ಸೇರಿದ ಲಕ್ಷ್ಮಣನ ಹಾಗೂ ಹರಿಚಂದ್ರನೆಂಬ ಬ್ರಾಹ್ಮಣನ ವಂತಜರೆಂದು ಹೇಳಲಾಗಿದೆ. ಇವರು ಕ್ರಿ.ಶ.6ನೆಯ ಶತಮಾನದ ಉತ್ತರಾರ್ಧದ ಸುಮಾರಿಗೆ ಪ್ರಾಬಲ್ಯಾ ಬಂದರು. ಮೊದಲನೆಯ ನಾಗಭಟನು ಪ್ರತಿಹಾರ ಸ್ಥಾಪಕನಾಗಿದ್ದನು. ಇವನು ಕ್ರಿ.ಶ.725ರಿಂದ 740ರವರೆಗೆ ಆಳ್ವಿಕೆ ಮಾಡಿದನೆಂದು ಹೇಳಲಾಗಿದೆ. ಇವನು ಅರಬ್ಬರ ದಾಳಿಯನ್ನು ಯಶಸ್ವಿಯಾಗಿ ಎದುರಿಸಿದನು. ಅನಂತರ ಬಲಿಷ್ಠ ಮೇಚ್ಚ ದೊರೆಯ ಬೃಹತ್ ಸೇನೆಯನ್ನು ಸೆದೆಬಡಿದನು. ಈತನ ಆಳ್ವಿಕೆಯ ನಂತರ ವತ್ಸರಾಜ ಕ್ರಿ.ಶ.778ರಲ್ಲಿ ಅಧಿಕಾರಕ್ಕೆ ಬಂದನು.

ವತ್ಸರಾಜ : (ಕ್ರಿ.ಶ 778-805)

ವತ್ಸರಾಜನು ಗೂರ್ಜರ ಪ್ರತಿಹಾರರ ಪ್ರಮುಖ ದೊರೆಯಾಗಿದ್ದಾನೆ. ಇವನು ಒಂದನೆಯ ನಾಗಭಟನಿಮೊಮ್ಮಗ. ಇವನು ಅತ್ಯಂತ ಧೈರ್ಯಶಾಲಿಯಾದ ಅರಸನಾಗಿದ್ದನು. ಇವನು ತನ್ನ ಆಡಳಿತಾವಧಿಯಲ್ಲಿ ಸಾಕಷ್ಟು ಯುದ್ಧಗಳನ್ನು ಮಾಡಿದನು. ಇದರಿಂದ ವತ್ಸರಾಜನ ಸಾಮ್ರಾಜ್ಯ ಸಾಕಷ್ಟು ವಿಸ್ತಾರ ಹೊಂದಿದ್ದಿತು. ಇವನು ಬಂಗಾಳದ ಅರಸನಾದ ಧರ್ಮಪಾಲನನ್ನು ಸೋಲಿಸಿದನು. ನಂತರ ರಜಪೂತಾನದ ರಾಜನನ್ನು ಸೋಲಿಸಿ ಹಿಮ್ಮೆಟ್ಟಿಸಿದನು. ಇದಾದ ಕೆಲವೇ ದಿನಗಳಲ್ಲಿ ವತ್ಸರಾಜನು ಕನೂಜ್ ಮೇಲೆ ದಾಳಿ ನಡೆಸಿ ಅಲ್ಲಿನ ರಾಜನಾದ ಇಂದ್ರಾಯುಧನನ್ನು ಸೋಲಿಸಿದನು. ಸೋತ ಇಂದ್ರಾಯುಧ ವತ್ಸರಾಜನ ಮಾಂಡಲಿಕ ದೊರೆಯಾದನು. ಇದನ್ನು ಸಹಿಸದ ಧರ್ಮಪಾಲನು ವತ್ಸರಾಜನ ವಿರುದ್ಧ ದಂಡೆತ್ತಿ ಬಂದನು. ಹೀಗೆ ಗೌಡದೇಶದ ಧರ್ಮಪಾಲ ಹಾಗೂ ವತ್ಸರಾಜ ಕನೂಜ್‌ನ ವಿಷಯದಲ್ಲಿ ಪರಸ್ಪರ ಯುದ್ಧಕ್ಕೆ ನಿಂತರು. ಈ ಯುದ್ಧದಲ್ಲಿ ಧರ್ಮಪಾಲ ಸೋತು ಶರಣಾದನು. ಈ ಯುದ್ಧದ ವಿಷಯವನ್ನು ರಾಘವಪುರ ಶಿಲಾಶಾಸನ ತಿಳಿಸುತ್ತದೆ. ವತ್ಸರಾಜನ ಅಧಿಕಾರಾವಧಿಯಲ್ಲಿ ಪ್ರತಿಹಾರರು, ಪಾಲರು ಹಾಗೂ ರಾಷ್ಟ್ರಕೂಟರ ನಡುವೆ ತ್ರಿಕೋನ ಸ್ಪಧೆ ಏರ್ಪಟ್ಟಿತು. ಆದರೆ, ರಾಷ್ಟ್ರಕೂಟ ದೊರೆ ಧ್ರುವನು ವತ್ಸರಾಜನನ್ನು ಯುದ್ಧವೊಂದರಲ್ಲಿ ಸೋಲಿಸಿ ಓಡಿಸಿದನು. ಹೀಗೆ ಯುದ್ಧದಲ್ಲಿ ಪರಾಭವಗೊಂಡ ವತ್ಸರಾಜ ಮಾನಸಿಕವಾಗಿ ಕೊರಗಿ ನಿಧನನಾದನು.

ಎರಡನೆಯ ನಾಗಭಟ: (ಕ್ರಿ.ಶ.905-833)

ವತ್ಸರಾಜನ ಮರಣದ ನಂತರ ಎರಡನೆಯ ನಾಗಭಟನು ಸಿಂಹಾಸನಕ್ಕೆ ಬಂದನು. ಇವನು ಕ್ರಿ.ಶ.805 ರಿಂದ 833ರವರೆಗೆ ಆಡಳಿತ ನಡೆಸಿದನು. ಇವನು ಅಪ್ರತಿಮ ಶೂರನಾಗಿದ್ದು, ಪ್ರತಿಹಾರ ರಾಜ್ಯವನ್ನು ವಿಸ್ತರಿಸಿದನು. ಕ್ರಿ.ಶ.807ರ ತಾಮ್ರ ಶಾಸನದ ಪ್ರಕಾರ ಎರಡನೆಯ ನಾಗಭಟನು ರಾಷ್ಟ್ರಕೂಟರ ಅರಸನಾದ ಮೂರನೆಯ ಗೋವಿಂದನಿಂದ ಪರಾಭವ ಹೊಂದಿದನೆಂದು ತಿಳಿದುಬಂದಿದೆ. ಈತನ ಪ್ರಮುಖ ಯುದ್ಧಗಳೆಂದರೆ,

1) ಕನೂಜ್ ಮೇಲಿನ ಆಕ್ರಮಣ: ಎರಡನೆಯ ನಾಗಭಟನು ಕನೂಜ್ ಮೇಲೆ ದಾಳಿ ಮಾಡಿ ಅಲ್ಲಿನ ಅರಸನಾದ ಚಕ್ರಾಯುಧನನ್ನು ಸೋಲಿಸಿದನು. ಅನಂತರ ಕನೂಜ್ ಎರಡನೆಯ ನಾಗಭಟನ ಆಡಳಿತಕ್ಕೆ ಒಳಪಟ್ಟಿತು. ಅಂದಿನಿಂದ ಕನೂಜ್ ಎರಡನೆಯ ನಾಗಭಟನ ರಾಜಧಾನಿಯಾಯಿತು.

2) ಧರ್ಮಪಾಲನನ್ನು ಸೋಲಿಸಿದುದು: ಕನೂಜ್ ಅರಸನಾದ ಚಕ್ರಾಯುಧನು ಧರ್ಮಪಾಲನ ಆಶ್ರಯದಲ್ಲಿದ್ದನು. ಎರಡನೆಯ ನಾಗಭಟನಿಂದ ಚಕ್ರಾಯುಧ ಪರಾಭವಗೊಂಡ ನಂತರ ಧರ್ಮಪಾಲನು ನಾಗಭಟನ ವಿರುದ್ಧ ಹೋರಾಟ ಆರಂಭಿಸಿದನು. ಈ ಹೋರಾಟದಲ್ಲಿ ಧರ್ಮಪಾಲನು ಸೋಲನುಭವಿಸಿದನು. ಈ ಯುದ್ಧದ ಕುರಿತು ಗ್ವಾಲಿಯರ್ ಶಾಸನ ಮಾಹಿತಿ ಒದಗಿಸುತ್ತದೆ.

3) ರಾಷ್ಟ್ರಕೂಟರ ವಿರುದ್ಧ ದಾಳಿ: ಧರ್ಮಪಾಲನನ್ನು ಪರಾಭವಗೊಳಿಸಿದ ನಾಗಭಟನು ರಾಷ್ಟ್ರಕೂಟರ ಪ್ರದೇಶಗಳ ಕಡೆಗೆ ಗಮನಹರಿಸಿದನು. ಆದರೆ, ರಾಷ್ಟ್ರಕೂಟರ ದೊರೆ 3ನೆಯ ಗೋವಿಂದ ನಾಗಭಟನನ್ನು ಸೋಲಿಸಿ ಆತನ ಮುಂದುವರಿಕೆಗೆ ತಡೆಯೊಡ್ಡಿದನು. ಗ್ವಾಲಿಯರ್ ಶಾಸನವೇ ಹೇಳುವಂತೆ ಎರಡನೆಯ ನಾಗಭಟನು ಆಂದ್ರ, ಸಿಂದ್, ವಿದರ್ಭ ಹಾಗೂ ಕಳಿಂಗ ರಾಜ್ಯಗಳನ್ನು ಗೆದ್ದುಕೊಂಡನು.

4) ಮುಸ್ಲಿಮರ ಮೇಲೆ ದಾಳಿ: ಎರಡನೆಯ ನಾಗಭಟನು ಬಕ್ಷರನ ಸುಲ್ತಾನನನ್ನು ಸೋಲಿಸಿದನೆಂದು ಗ್ವಾಲಿಯರ್ ಶಾಸನವೇ ಹೇಳುತ್ತದೆ. ಅದು ಅಲ್ಲದೆ ಎರಡನೆಯ ನಾಗಭಟನು ತನ್ನ ಸಾಮಂತನಾದ ಗೋವಿಂದರಾಜನ ಜೊತೆಗೂಡಿ ಮುಸ್ಲಿಂರನ್ನು ಓಡಿಸಿದನೆಂದು ಹೇಳಲಾಗಿದೆ. ನಾಗಭಟನ ನಂತರ ಅವನ ಮಗ ರಾಮಭದ್ರ ಅಧಿಕಾರಕ್ಕೆ ಬಂದನು. ಇವನು ಕೇವಲ 3 ವರ್ಷಗಳ ಕಾಲ ಆಳ್ವಿಕೆಯನ್ನು ಮಾಡಿದನು. ಇವನ ನಂತರ ಇವನ ಮಗನಾದ ಮಿಹಿರ ಭೋಜ ತನ್ನ ತಂದೆಯನ್ನು ಕೊಂದು ಅಧಿಕಾರಕ್ಕೆ ಬಂದನು.

ಮಿಹಿರ ಭೋಜ : (ಕ್ರಿ.ಶ. 836-865)

ಇವನು ಗೂರ್ಜರ ಪ್ರತಿಹಾರ ಚಕ್ರವರ್ತಿಗಳಲ್ಲಿಯೇ ಅತ್ಯಂತ ಶಕ್ತಿಶಾಲಿ ಹಾಗೂ ಪ್ರಸಿದ್ಧ ಅರಸನಾಗಿದ್ದನು. ಇವನು ಪ್ರತಿಹಾರ ಸಾಮ್ರಾಜ್ಯವನ್ನು ಸಾಕಷ್ಟು ವಿಸ್ತರಿಸಿದನು. ಈತ ಧ್ರುವ ಹಾಗೂ ಧರ್ಮಪಾಲರಿಗೆ ಸರಿಸಮವಾದ ಸ್ಥಾನವನ್ನು ಪಡೆದನು. ಇವನು ಭಗವತಿಯ ಪರಮಭಕ್ತನಾಗಿದ್ದನು. ಪ್ರಭಾಸ, ಆದಿ ಹಾಗೂ ಮಿಹಿರ ಎಂಬ ಬಿರುದುಗಳನ್ನು ಪಡೆದಿದ್ದನು. ಇವನು ಕ್ರಿಶ. 836ರಲ್ಲಿ ‘ಬರಾಹ್’ ತಾಮ್ರಶಾಸನವನ್ನು ಹೊರಡಿಸಿದನು.

ದಿಗ್ವಿಜಯಗಳು:

1) ಬಂದೇಲ್‌ಖಂಡದ ವಶ : ಬಂದೇಲ್ ಖಂಡವು ತನ್ನ ತಂದೆಯ ಕಾಲದಿಂದಲೂ ಸ್ವತಂತ್ರವಾಗಿದ್ದ ಕಾರಣದಿಂದ ಮಿಹಿರಬೋಜನು ಅಧಿಕಾರಕ್ಕೆ ಬಂದ ತಕ್ಷಣವೇ ಬಂದೇಲ್ ಖಂಡದ ಮೇಲೆ ದಂಡೆತ್ತಿಹೋಗಿ ಅಲ್ಲಿನ ರಾಜನಾದ ಜಯಶಕ್ತಿಯನ್ನು ಸೋಲಿಸಿ ಅದನ್ನು ತನ್ನ ರಾಜ್ಯದಲ್ಲಿ ಸೇರ್ಪಡೆಗೊಳಿಸಿದನು.

2) ರಾಜಪುತಾನದ ವಿರುದ್ಧ ದಂಡಯಾತ್ರೆ : ಮಿಹಿರಭೋಜನು ರಜಪೂತಾನದ ವಿರುದ್ಧ ದಾಳಿ ಮಾಡಿ ಅದನ್ನು ಗೆದ್ದು ತನ್ನ ಸಾಮ್ರಾಜ್ಯದಲ್ಲಿ ವಿಲೀನಗೊಳಿಸಿದನು. ಈತನ ರಜಪೂತಾನದ ದಾಳಿಯ ಕುರಿತು ವರಾಹ ಹಾಗೂ ದೌಲತ್‌ಪುರದ ಶಾಸನಗಳು ಮಾಹಿತ ನೀಡುತ್ತವೆ.

3) ಪಂಜಾಬ್ ಮೇಲಿನ ದಾಳಿ: ಕಲ್ದಣನು ತನ್ನ ರಾಜತರಂಗಿಣಿಯಲ್ಲಿ ಬರೆದಂತೆ ಪಂಜಾಬಿನ ಕರ್ನಲ್ ಪ್ರಾಂತ್ಯವು ಮಿಹಿರಭೋಜನ ಸಾಮ್ರಾಜ್ಯದ ಒಂದು ಭಾಗವಾಗಿತ್ತು. ಆದರೆ, ಇದನ್ನು ಕಾಶ್ಮೀರದ ಶಂಕರ ವರ್ಮನ್ ಎಂಬ ಅರಸ ಗೆದ್ದುಕೊಂಡಿದ್ದನು. ಆದರೆ, ಮಿಹಿರಭೋಜನು ಪುನಃ ಪಂಜಾಬ್ ಮೇಲೆ ದಾಳಿ ಮಾಡಿ ಶಂಕರವರ್ಮನನ್ನು ಸೋಲಿಸಿ ಪಂಜಾಬನ್ನು ವಶಪಡಿಸಿಕೊಂಡನು.

4) ಪಶ್ಚಿಮ ಭಾರತದ ವಿರುದ್ಧ ದಾಳಿ: ಮಿಹಿರ ಭೋಜನ ಪಶ್ಚಿಮ ಭಾರತದಲ್ಲಿ ನೆಲೆಯೂರಿದ್ದ ಹೂಣರ ವಿರುದ್ಧ ದಾಳಿ ಮಾಡಿದನು. ಈ ದಂಡಯಾತ್ರೆಯ ನಾಯಕತ್ವವನ್ನು ಬಲವರ್ಮ ವಹಿಸಿದ್ದನು. ಮಿಹಿರ ಭೋಜನ ದಾಳಿಗೆ ಹೆದರಿದ ಹೂಣರು ಭಾರತದಿಂದ ಕಾಲೆಗೆದರು.

5) ಮಧ್ಯಭಾರತದ ಮೇಲೆ ದಾಳಿ: ಮಿಹಿರ ಭೋಜನು ಮಧ್ಯಭಾರತದ ಪ್ರದೇಶಗಳಾದ ಗ್ವಾಲಿಯರ್, ಝಾನ್ಸಿಗಳನ್ನು ವಶಪಡಿಸಿಕೊಂಡು ಅಲ್ಲಿ ತನ್ನ ಪ್ರತಿನಿಧಿಗಳನ್ನು ನೇಮಿಸಿದನು ಎಂದು ಗ್ವಾಲಿಯರ್ ಹಾಗೂ ದೇಘರ್ ಶಾಸನಗಳು ಹೇಳಿವೆ. 6) ರಾಷ್ಟ್ರಕೂಟರೊಂದಿಗೆ ಹೋರಾಟ: ರಾಷ್ಟ್ರಕೂಟ ದೊರೆಗಳಾದ ಅಮೋಘವರ್ಷ ಹಾಗೂ ಕೃಷ್ಣರ ವಿರುದ್ಧ ಮಿಹಿರಭೋಜನು ದಾಳಿ ಮಾಡಿ ಅವರನ್ನು ಸೋಲಿಸಿ ಕನೂಜನ್ನು ವಶಪಡಿಸಿಕೊಂಡನು. ನಂತರ ನರ್ಮದಾ ನದಿಯವರೆಗೆ ತನ್ನ ರಾಜ್ಯವನ್ನು ವಿಸ್ತರಿಸಿದನು. ರಾಷ್ಟ್ರಕೂಟರು ಹಾಗು ಮಿಹಿರಭೋಜನ ನಡುವೆ ಹಲವಾರು ಯುದ್ಧಗಳು ನಡೆದು ಅವರಿಬ್ಬರೂ ಸಾಕಷ್ಟು ಬಳಲಿದರು.

6) ಪಾಲರೊಂದಿಗೆ ಯುದ್ಧ: ಪಾಲ ದೊರೆ ದೇವಪಾಲನು ಅತ್ಯಂತ ಶಕ್ತಿಶಾಲಿ ಹಾಗು ಸಮರ್ಥ ದೊರೆಯಾಗಿದ್ದನು. ಇವನು ವಿಂದ್ಯಾಚಲ ಪೂರ್ವಗಡಿ ಭಾಗಗಳು ಹಾಗೂ ಉತ್ತರ ಗಡಿ ಪ್ರದೇಶಗಳ ರಾಜ್ಯಗಳಿಂದ ಅಧಿಕ ಪ್ರಮಾಣದ ತೆರಿಗೆಯನ್ನು ವಸೂಲಿಮಾಡಿ ದರ್ಪದಿಂದ ಮೆರೆಯುತ್ತಿದ್ದನು. ಇದರಿಂದ ಮಿಹಿರಭೋಜನು ದೇವಪಾಲನ ವಿರುದ್ಧ ಹಲವಾರು ಬಾರಿ ದಂಡಯಾತ್ರೆಯನ್ನು ಕೈಗೊಂಡನು. ಈ ದಂಡಯಾತ್ರೆಗಳು ಇಬ್ಬರಿಗೂ ಸಮಬಲದ ಗೆಲವುಗಳನ್ನು ತಂದುಕೊಟ್ಟವು.

ಮಿಹಿರಭೋಜನ ನಂತರ ಮಹೇಂದ್ರಪಾಲ ಹಾಗೂ ಎರಡನೆಯ ಭೋಜ ಕ್ರಮವಾಗಿ ಪ್ರತಿಹಾರರ ದೊರೆಗಳಾಗಿ ಅಧಿಕಾರ ಚಲಾಯಿಸಿದರು. ಇವರ ನಂತರ ಒಂದನೆಯ ಮಹಿಪಾಲ ಪ್ರತಿಹಾರರ ದೊರೆಯಾದನು.

ಒಂದನೆಯ ಮಹಿಪಾಲ:

ಎರಡನೆಯ ಭೋಜನ ನಂತರ ಒಂದನೆಯ ಮಹಿಪಾಲನು ಪ್ರತಿಹಾರರ ಅರಸನಾದನು. ಇವನು ಅತ್ಯಂತ ಶಕ್ತಿಶಾಲಿ ಅರಸನಾಗಿದ್ದು, ಕನೋಜನ್ನು ತನ್ನ ನಿಯಂತ್ರಣದಲ್ಲಿ ಇಟ್ಟುಕೊಂಡನು. ಈತ ಅಧಿಕಾರಕ್ಕೆ ಬಂದ ಹೊಸದರಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸಿದನು. ಆದರೂ ಮಹಿಪಾಲ ದಕ್ಷ ಆಡಳಿತ ನಡೆಸುವ ಮೂಲಕ ಹೆಸರುವಾಸಿಯಾದನು.

1) ರಾಷ್ಟ್ರಕೂಟರೊಂದಿಗೆ ಯುದ್ಧ: ಸಿಂಹಾಸನಕ್ಕೆ ಬಂದ ಹೊಸದರಲ್ಲಿಯೇ ಒಂದನೆಯ ಮಹಿಪಾಲನಿಗೆ ರಾಷ್ಟ್ರಕೂಟರೊಂದಿಗೆ ಹೋರಾಟ ಮಾಡುವ ಸಂದರ್ಭ ಬಂದಿತು. ರಾಷ್ಟ್ರಕೂಟ ದೊರೆ ಇಂದ್ರನು ಕನೂಜನ್ನು ಸೂರೆಗೊಂಡು ಮಾಳವ ಹಾಗೂ ಉಚೈನಿಗಳನ್ನು ವಶಪಡಿಸಿಕೊಂಡನು. ಮಹಿಪಾಲ ಈ ಯುದ್ಧದಲ್ಲಿ ಸೋತು ರಣರಂಗದಿಂದ ಪಲಾಯನ ಮಾಡಿದನು. ಆದರೆ ಮಹಿಪಾಲ ಮತ್ತೊಮ್ಮೆ ರಾಷ್ಟ್ರಕೂಟರ ಅರಸ 3ನೆಯ ಇಂದ್ರನ ಕಾಲದಲ್ಲಿ ಕನೂಜನ್ನು ಮರಳಿ ಪಡೆದನು.

2) ಪಾಲರೊಂದಿಗೆ ಮಹಿಪಾಲನ ನೀತಿ: ಮಹಿಪಾಲನು ಪಾಲರೊಂದಿಗೆ ಯಾವುದೇ ರೀತಿಯಲ್ಲಿ ಯುದ್ಧಕ್ಕೆ ಹೋಗದೆ ಪಾಲರಿಗೆ ಸೋನೆ ನದಿಯ ಪೂರ್ವ ಭಾಗದಲ್ಲಿ ಪ್ರದೇಶಗಳನ್ನು ನೀಡಿದನು.

3) ಮಹಿಪಾಲನ ಇತರೆ ಯುದ್ಧಗಳು: ಮಹಿಪಾಲನು ಮೇಖಲ, ಕಳಿಂಗ, ಕೇರಳ ಹಾಗು ಕುಂತಲ ಮುಂತಾದ ಪ್ರದೇಶಗಳನ್ನು ಗೆದ್ದು ತನ್ನ ರಾಜ್ಯದಲ್ಲಿ ವಿಲೀನಗೊಳಿಸಿದನು. ಧಾರಾ ಹಾಗೂ ಉಜೈನಿಗಳನ್ನು ಗೆದ್ದನೆಂದು ಪ್ರತಾಪಗಡ ಶಾಸನ ತಿಳಿಸುತ್ತದೆ.

4) ಸಾಮ್ರಾಜ್ಯ ವಿಸ್ತರಣೆ: ಮಹಿಪಾಲನ ಸಾಮ್ರಾಜ್ಯವು ಪಶ್ಚಿಮ ಬಿಹಾರದ ಗಡಿಗಳವರೆಗೂ ವಿಸ್ತರಿಸಿದ್ದಿತು. ಇವನಿಗೆ ನಿರ್ಭಯರಾಜನೆಂಬ ಬಿರುದು ಇದ್ದಿತು. ಮಹಿಪಾಲನು ಸಾಹಿತ್ಯಾಭಿಮಾನಿಯಾಗಿದ್ದು ಸ್ವತಃ ತಾನೇ ಅನೇಕ ಕೃತಿಗಳನ್ನು ರಚಿಸಿದ್ದಾನೆ. ಇವನ ಆಸ್ಥಾನದ ಕವಿ ರಾಜಶೇಖರನು ಬಾಲರಾಮಾಯಣ, ಬಾಲಭಾರತ, ಕರ್ಪೂರಮಂಜರಿ ಹಾಗು ಕಾವ್ಯಮೀಮಾಂಸ ಎಂಬ ಕೃತಿಗಳನ್ನು ರಚಿಸಿದನು. ವಿದ್ಯಪಾಲ ಎಂಬುದು ಇವನ ಮೇರು ಕೃತಿ. ರಾಜಶೇಖರನ ಕರ್ಪೂರ ಮಂಜರಿಯು ಭಾರತೀಯ ಇತಿಹಾಸದಲ್ಲಿನ ಸಾಹಿತ್ಯದ ಅತ್ಯಂತ ಶ್ರೇಷ್ಠ ಸುಖಾಂತ ನಾಟಕವಾಗಿದೆ. ಇವನ ನಂತರ ಎರಡನೆಯ ಮಹೇಂದ್ರಪಾಲ, ದೇವಪಾಲ, ಎರಡನೆಯ ವಿನಾಯಕಪಾಲ, ಎರಡನೆಯ ಮಹಿಪಾಲ, ವಿಜಯಪಾಲ ಹಾಗೂ ರಾಜ್ಯಪಾಲ ಅಧಿಕಾರ ನಡೆಸಿದರು. ನಂತರ ಬಂದ ಚಂದೇಲರು, ಕಳಚೂರಿಗಳು ಹಾಗೂ ಚೌಹಾನರು ಗೂರ್ಜರ ಪ್ರತಿಹಾರರನ್ನು ಮೂಲೆಗುಂಪು ಮಾಡಿದರು. ಅಂದಿಗೆ ಪ್ರತಿಹಾರರ ರಾಜ್ಯ ಅವನತಿ ಹೊಂದಿತು.

ಚೌಹಾನರು (ರಾಜಧಾನಿ-ಅಜ್ಮೀರ್, ಜೈಪುರ)

ರಜಪೂತರಲ್ಲಿ ಚೌಹಾನ ಸಂತತಿಯೇ ಅತ್ಯಂತ ಪ್ರಮುಖವಾದುದು. ಇವರು ಏಳನೆಯ ಶತಮಾನದಲ್ಲಿಯೇ ಶಾಕಂಬರಿಯನ್ನು ಪಡೆದುಕೊಂಡಿದ್ದರು. ಹೀಗಾಗಿ ಚೌಹಾನ ವಂಶದಲ್ಲಿ ಶಾಕಂಭರೀಯ ಚೌಹಾನರು, ರಣಸ್ತಂಭಪುರದ ಚೌಹಾನರು, ನಾಡೋಲಿಯ ಚೌಹಾನರು, ಜಾಬಾಲಿಪುರದ ಚೌಹಾನರು, ಸತ್ಯಪುರದ ಚೌಹಾನರು ಹಾಗೂ ದೇವಾಡದ ಚೌಹಾನರು ಎಂಬ ವಿವಿಧ ಶಾಖೆಗಳು ಇದ್ದವು. ಈ ಶಾಖೆಗಳಲ್ಲಿ ಶಾಕಂಬರಿಯ ಚೌಹಾನರೇ ಪ್ರಮುಖರು. ‘ಜೈಪುರ’ ಇವರ ರಾಜಧಾನಿಯಾಗಿತ್ತು. ಇವರು ಪ್ರತಿಹಾರರ ಸಾಮಂತರಾಗಿದ್ದರು. ಚಾಂದ್ ಬರ್ದಾಯಿಯ ಪೃಥ್ವಿರಾಜರಾಸೋ, ನಯಚಂದ್ರನ ಹಮ್ಮಿರ ಕಾವ್ಯ ಹಾಗೂ ಫೆರಸ್ತನ ಬರವಣಿಗೆಗಳು ಚೌಹಾನರ ಇತಿಹಾಸದ ಮೇಲೆ ಬೆಳಕು ಚಲ್ಲುತ್ತವೆ. ಇವರ ಮೂಲದ ಬಗ್ಗೆ ಸ್ಪಷ್ಟ ಮಾಹಿತಿಗಳಿಲ್ಲವಾದರೂ ಚಾಂದ್‌ ಬರ್ದಾಯಿಯ ಪ್ರಕಾರ ಬ್ರಹ್ಮನು ಮೌಂಟ ಅಬುವಿನಲ್ಲಿ ಯಜ್ಞ ಕೈಗೊಂಡಾಗ ಆ ಯಜ್ಞಕುಂಡದ ಮೂಲಕ ಚೌಹಾನರ ಮೂಲ ಪುರುಷ ಹೊರಬಂದನೆಂದು ಹೇಳಲಾಗಿದೆ.

ವಸುದೇವ ಚೌಹಾನ ಸಂತತಿಯ ಸ್ಥಾಪಕ. ಇವನ ನಂತರ ಬಂದ ಇಮ್ಮಡಿ ವಿಗ್ರರಾಜ ಕ್ರಿ.ಶ 973ರ ವರೆಗೆ ಆಳ್ವಿಕೆ ನಡೆಸಿದನು. ಇವನು ಅನಿಲ್‌ವಾಡದ ಮೊದಲನೆಯ ಮೂಲ ರಾಜನನ್ನು ಸೋಲಿಸಿದನೆಂದು ಹೇಳಲಾಗಿದೆ. ತದನಂತರ ಕ್ರಿಶ 1105 ರಲ್ಲಿ ಮೊದಲನೆಯ ಪೃಥ್ವಿರಾಜ ಅಧಿಕಾರಕ್ಕೆ ಬಂದನು. ಇವನ ಮಗ ಅಜಯರಾಜನು ಅಜಮೀರ ನಗರವನ್ನು ನಿರ್ಮಿಸಿದನು. ಅಜಯರಾಜನ ನಂತರ ಅವನ ಮಗ ಅರ್ಣೋರಾಜ ಅಧಿಕಾರಕ್ಕೆ ಬಂದನು. ಇವನು ಕಾಂಚನದೇವಿಯನ್ನು ಮದುವೆಯಾದನು. ಇವನು ಕ್ರಿ.ಶ 1153ರವರೆಗೆ ಅಧಿಕಾರ ಚಲಾಯಿಸಿದನು.

ನಾಲ್ಕನೆಯ ವಿಗ್ರರಾಜ: (1153-1163)

ಅರ್ಣೋರಾಜನ ಮಗನಾದ ವಿಗ್ರರಾಜ ಕ್ರಿ.ಶ 1153 ರಿಂದ 1163ರ ವರೆಗೆ ಆಳ್ವಿಕೆ ನಡೆಸಿದನು. ಇವನು ಚೌಹಾನರಲ್ಲಿಯೇ ಪ್ರಸಿದ್ಧ ದೊರೆಯಾಗಿದ್ದನು. ಇವನಿಗೆ ಬಿಸಿಲದೇವ ಎಂದು ಇನ್ನೊಂದು ಹೆಸರಿದ್ದೀತು. ಇವನ ಆಡಳಿತಾವಧಿಯಲ್ಲಿ ಚೌಹಾನರ ಸಾಮ್ರಾಜ್ಯ ವಿಶಾಲವಾಗಿ ಹರಡಿತ್ತು. ಇವನು ದೆಹಲಿಯನ್ನು ತೋಮರ ರಾಜನಿಂದ ವಶಪಡಿಸಿಕೊಂಡನು. ನಂತರ ಚಾಲುಕ್ಯ ಅರಸ ಕುಮಾರ ಪಾಲನ ಮೇಲೆ ದಂಡಯಾತ್ರೆಯನ್ನು ಕೈಗೊಂಡು ತನ್ನ ತಂದೆಗೆ ಆಗಿದ್ದ ಅವಮಾನದ ಸೇಡನ್ನು ತೀರಿಸಿಕೊಂಡನು. ಈತ ಮುಸ್ಲಿಂ ರೊಂದಿಗೆ ಸಾಕಷ್ಟು ಯುದ್ಧಗಳನ್ನು ಮಾಡಿದನು. ಅವರಿಂದ ಯಮುನಾ ಹಾಗೂ ಸೆಟ್ಲಜ್ ನದಿಗಳ ನಡುವಣ ಪ್ರದೇಶಗಳನ್ನು ವಶಪಡಿಸಿಕೊಂಡನು. ಪರಮಾರರಿಂದ ಜ್ವಾಲಾಪುರವನ್ನು ಗೆದ್ದುಕೊಂಡನು. ಹೀಗೆ ವಿಶಾಲ ಸಾಮ್ರಾಜ್ಯವನ್ನು ನಿರ್ಮಿಸಿದ್ದ ನಾಲ್ಕನೆಯ ವಿಗ್ರರಾಜನಿಗೆ ʻಮಹಾರಾಜಾಧಿರಾಜ ಹಾಗೂ ಪರಮೇಶ್ವರ’ ಇಂಬ ಬಿರುದುಗಳನ್ನು ನೀಡಲಾಗಿತ್ತು. ಈತ ದಿಗ್ವಿಜಯಿಶಾಲಿಯಾಗಿದ್ದುದು ಅಲ್ಲದೆ ಉತ್ತಮ ಕವಿಯೂ ಆಗಿದ್ದನು. ಇವನು ‘ಹರಕೇಲಿ’ಎಂಬ ನಾಟಕವನ್ನು ರಚಿಸಿದ್ದಾನೆ. ಇವನ ಆಸ್ಥಾನದ ಕವಿಯಾಗಿದ್ದ ಸೋಮದೇವ ʻಲಲಿತಾವಿಗ್ರಹ’ ಎಂಬ ನಾಟಕವನ್ನು ಬರೆದಿದ್ದಾನೆ. ಈ ಮೇಲಿನ ಎರಡು ನಾಟಕಗಳ ತುಣುಕುಗಳನ್ನು ಅಜ್ಜರನ ಒಂದು ಪ್ರಧಾನವಾದ ಮಸೀದಿಯಲ್ಲಿನ ಹಾಸುಗಲ್ಲುಗಳ ಮೇಲೆ ಕೆತ್ತಲಾಗಿದೆ. ವಿಗ್ರರಾಜನು ಅಣ್ಣೀರಿನಲ್ಲಿ ಒಂದು ಶಾಲೆಯೊಂದನ್ನು ಸ್ಥಾಪಿಸಿದನು. ವಿಗ್ರರಾಜನ ನಂತರ ಅವನ ಸೋದರ ಸೋಮೇಶ್ವರನ ಮಗ ಮೂರನೆಯ ಪೃಥ್ವಿರಾಜ ಸಿಂಹಾಸನಕ್ಕೆ ಬಂದನು.

ಮಾಳವದ ಪರಮಾರರು: (ರಾಜಧಾನಿ ಧಾರಾ)

ಗೂರ್ಜರ ಪ್ರತಿಹಾರರಿಂದ ಸ್ವಾತಂತ್ರ್ಯವನ್ನು ಘೋಷಿಸಿಕೊಂಡ ಪರಮಾರರು ಅಧಿಕಾರಕ್ಕೆ ಬಂದರು. ಇವರು ರಾಷ್ಟ್ರಕೂಟ ಅರಸರ ಸಾಮಂತರಾಗಿದ್ದರು. ರಜಪೂತಾನದ ಸಿರೋಹಿ ರಾಜ್ಯದ ಮೌಂಟ್ ಅಬು ಪರಮಾರರ ಮೂಲ ಸ್ಥಳ. ಇವರ ಮೊದಲ ರಾಜಧಾನಿ ಉಜೈನಿ ಆಗಿದ್ದು, ನಂತರ ಧಾರಾ ನಗರವನ್ನು ಎರಡನೆಯ ರಾಜಧಾನಿಯನ್ನಾಗಿ ಮಾಡಿಕೊಂಡರು. ಉಪೇಂದ್ರ ಪರಮಾರ ಮನೆತನದ ಸ್ಥಾಪಕ. ಇವನು ಮೌಂಟ್ ಅಬು ಬಳಿಯ ಚಂದ್ರವತಿಯ ಕಡೆಯಿಂದ ಬಂದವನೆಂದು ಹೇಳಲಾಗಿದೆ. ಇವನ ನಂತರ ಒಂದನೆಯ ವೈರಸಿಂಹ, ಸೀಯಕ, ಎರಡನೆಯ ವೈರಸಿಂಹ, ಎರಡನೆಯ ಸೀಯಕ ಕ್ರಮವಾಗಿ ಮಾಳವವನ್ನು ಆಳಿದರು.

ವಾಕ್ಷತಿ ಮುಂಜ;

ಇವನು ಪರಮಾರರ ಏಳನೆಯ ದೊರೆ. ಈತ ಕ್ರಿ.ಶ.993ರಲ್ಲಿ ಅಧಿಕಾರಕ್ಕೆ ಬಂದನು. ಇವನಿಗೆ ವಾಕ್ರತಿ, ಉತ್ಸಲ, ಅಮೋದವಂಶ ಎಂಬ ಬಿರುದುಗಳಿದ್ದವು.

ಇವನ ಸಾಮ್ರಾಜ್ಯ ಪೂರ್ವದ ಬಿಲ್ಲಾದಿಂದ ಪಶ್ಚಿಮದ ಸಬರಮತಿವರೆಗೆ ವಿಸ್ತರಿಸಿದ್ದಿತು. ವಾಕೃತಿ ಅನೇಕ ಯುದ್ಧಗಳನ್ನು ಮಾಡಿದ್ದಾನೆ. ಅವುಗಳೆಂದರೆ,

1) ಕಲಚೂರಿಗಳ ಮೇಲೆ ದಾಳಿ: ಕಲಚೂರಿ ಚಕ್ರವರ್ತಿ ಎರಡನೆಯ ಯುವರಾಜನು ವಾಕ್ರತಿ ಮುಂಜಿನಿಂದ ಸೋತು ತ್ರಿಪುರಿಯನ್ನು ಆತನಿಗೆ ನೀಡಿದನು.

2) ಗುಜರಾತಿನ ಚಾಲುಕ್ಯರ ವಿರುದ್ಧ ದಂಡಯಾತ್ರೆ: ವಾಕೃತಿ ಮುಂಜ ಗುಜರಾತಿನ ಚಾಲುಕ್ಯ ಅರಸನಾದ ಒಂದನೆಯ ಮೂಲರಾಜನನ್ನು ಸೋಲಿಸಿ ಅವನನ್ನು ಮಾರ್ವಾಟದ ಮರುಭೂಮಿಯವರೆಗೆ ಅಟ್ಟಿಸಿಕೊಂಡು ಹೋದನು.

3) ಚೋಳರ ವಿರುದ್ಧ ವಿಜಯ: ಮುಂಜನು ಚೋಳರ ವಿರುದ್ಧ ಹಲವಾರು ಬಾರಿ ವಿಜಯಸಾಧಿಸಿದ್ದನೆಂದು ಅನೇಕ ಇತಿಹಾಸಕಾರರು ಹೇಳಿದ್ದಾರೆ.

4) ಚಾಹಮಾನರ ವಿರುದ್ಧ ಹೋರಾಟ: ವಾಕ್ಷತಿ ಮುಂಜನು ಚಾಹಮಾನರ ಬಲಿರಾಜನನ್ನು ಸೋಲಿಸಿ ಮೌಂಟ ಅಬು ಹಾಗು ಜೋದಪುರ ಪ್ರದೇಶವನ್ನು ವಶಪಡಿಸಿಕೊಂಡನೆಂದು ಕಂತೇರಿ ಶಾಸನದಲ್ಲಿ ತಿಳಿಸಲಾಗಿದೆ. ಮೌಂಟ ಅಬುವನ್ನು ಗೆದ್ದ ನಂತರ ಮುಂಜ ತನ್ನ ಮಗನಾದ ಅರಣ್ಯ ರಾಜನನ್ನು ಮೌಂಟ ಅಬುವಿನ ಪ್ರಾಂತಾಧಿಕಾರಿಯನ್ನಾಗಿ ನೇಮಿಸಿದನು.

5) ಗುಹಿಲರ ಮೇಲಿನ ದಾಳಿ: ಮುಂಜನು ಗುಹಿಲರ ಅರಸನಾದ ಶಕ್ತಿ ಕುಮಾರನ ವಿರುದ್ಧ ದಂಡಯಾತ್ರೆಯನ್ನು ಕೈಗೊಂಡನು. ಈ ಯುದ್ಧದಲ್ಲಿ ಶಕ್ತಿಕುಮಾರ ಸೋತು ಮುಂಜನಿಗೆ ಸಾಕಷ್ಟು ಪ್ರಮಾಣದಲ್ಲಿ ಸಂಪತ್ತನ್ನು ನೀಡಿದನು.

6) ಹೂಣರ ಮೇಲೆ ದಾಳಿ: ಮುಂಜನು ಉತ್ತರ ಮಾಳವದಲ್ಲಿ ಹೂಣರನ್ನು ಸೋಲಿಸಿದನು.

7) ಲಾಟರ ವಿರುದ್ಧ ದಂಡಯಾತ್ರೆ: ತಪತಿ ನದಿಯ ದಡದಲ್ಲಿದ್ದ ಲಾಟ ದೇಶವು ಕಲ್ಯಾಣಿ ಚಾಲುಕ್ಯರ ಅರಸನಾದ ಎರಡನೆಯ ತೈಲಪನ ಆಳ್ವಿಕೆಗೆ ಒಳಪಟ್ಟಿತು. ಆಗ ಮಂಜನು ಲಾಟದ ಮೇಲೆ ದಾಳಿ ಮಾಡಿ ಎರಡನೆಯ ತೈಲಪನ ದಂಡನಾಯಕನಾದ ಬಾರಪ್ಪನನ್ನು ಸೋಲಿಸಿ ಲಾಟನ್ನು ವಶಪಡಿಸಿಕೊಂಡನು.

8) ಕರ್ನಾಟಕದ ಚಾಲುಕ್ಯರ ವಿರುದ್ಧ ಹೋರಾಟ: ಎರಡನೆಯ ತೈಲಪನ ವಿರುದ್ಧ ಮುಂಜ ಆರು ಬಾರಿ ದಂಡಯಾತ್ರೆಯನ್ನು ಕೈಗೊಂಡನಾದರೂ ಅವನನ್ನು ಸಂಪೂರ್ಣವಾಗಿ ಸೋಲಿಸಲು ಅವನಿಂದ ಸಾಧ್ಯವಾಗಿರಲಿಲ್ಲ. ಇದರಿಂದ ವ್ಯಾಕುಲನಾದ ಮುಂಜ ಏಳನೆಯ ಬಾರಿಗೆ ಚಾಲುಕ್ಯ ದೊರೆ ತೈಲಪನ ವಿರುದ್ಧ ದಂಡಯಾತ್ರೆಗೆ ಸಿದ್ಧತೆಯನ್ನು ಮಾಡಿಕೊಂಡನು. ಆಗ ಮುಂಜನ ದಂಡನಾಯಕನಾದ ರುದ್ರಾದಿತ್ಯ ಮುಂದೆ ಆಗಬಹುದಾಗಿದ್ದ ಅಪಾಯವನ್ನು ತನ್ನ ಒಡೆಯನಿಗೆ ತಿಳಿಸಿದನು. ಆದರೂ ರುದ್ರಾದಿತ್ಯನ ಮಾತನ್ನು ತಿರಸ್ಕರಿಸಿ ಗೋದಾವರಿ ನದಿಯನ್ನು ದಾಟಿ ಚಾಲುಕ್ಯರ ವಿರುದ್ಧ ಧಾಳಿ ಮಾಡಿದನು. ಆದರೆ ತೈಲಪನ ಸೈನಿಕರು ಮುಂಜನನ್ನು ಸುತ್ತುವರೆದು ಸೆರೆಹಿಡಿದರು. ಸೆರೆಸಿಕ್ಕ ಮುಂಜನನ್ನು ತೈಲಪ ಬಂಧನದಲ್ಲಿ ಇರಿಸಿದನು. ಕಾರಾಗೃಹದಲ್ಲಿ ಇದ್ದಾಗ ತೈಲಪನ ತಂಗಿ ಮುಂಜನಲ್ಲಿ ಅನುರಕ್ತಳಾದಳು. ಈ ವಿಷಯ ಗೊತ್ತಾಗುತ್ತಲೇ ತೈಲಪ ಮುಂಜನನ್ನು ಹಿಡಿದು ರುಂಡವನ್ನು ತುಂಡರಿಸಿದನು. ಹೀಗೆ ಮಹಾನ್ ಪರಾಕ್ರಮಿಯಾಗಿದ್ದ ಮುಂಜನ ಬದುಕು ದುರಂತದಲ್ಲಿ ಅಂತ್ಯವಾಯಿತು.

ಮುಂಜನು ಕೇವಲ ದಿಗ್ವಿಜಯಿಯಾಗಿರದೆ ಕಲಾಪೋಷಕನೂ ಆಗಿದ್ದನು. ಇವನು ಅನೇಕ ಕವಿಗಳಿಗೆ ಆಶ್ರಯದಾತನಾಗಿದ್ದನು. ಪದ್ಮಗುಪ್ತನೆಂಬ ಕವಿ ‘ಸಾಹಸಾಂಕಚರಿತ’ ಎಂಬ ಕೃತಿಯನ್ನು ರಚಿಸಿದನು. ಧನಂಜಯ ‘ದಶರೂಪಕ’ವನ್ನು ಬರೆದನು. ಭಟ್ಟಹಾಲಾಯುಧ, ಅಮಿತಗತಿ, ಶುಭನ ಎಂಬುವವರೂ ಸಹ ಉತ್ತಮ ಕವಿಗಳಾಗಿದ್ದರು. ಮುಂಜನು ತನ್ನ ಅಧಿಕಾರಾವಧಿಯಲ್ಲಿ ಅನೇಕ ಕೆರೆಗಳನ್ನು ಹಾಗೂ ದೇವಾಲಯಗಳನ್ನು ನಿರ್ಮಿಸಿದನು.

ಉಪಸಂಹಾರ
ಈ ರೀತಿಯಾಗಿ ಚೌಹಾನರು, ಪರಮಾರರು ಮತ್ತು ಪ್ರತಿಹಾರರು ಎಂಬ ವಂಶಗಳ ಮೂಲಕ ರಾಜಪೂತರು ಸೈನಿಕ ಶಕ್ತಿ, ಸಾಂಸ್ಕೃತಿಕ ಪೋಷಣೆ ಮತ್ತು ಪ್ರಾದೇಶಿಕ ಆಡಳಿತದ ದೀರ್ಘಕಾಲಿಕ ಪರಂಪರೆಯನ್ನು ಭಾರತೀಯ ಇತಿಹಾಸದಲ್ಲಿ ಬಿಟ್ಟುಹೋಗಿದ್ದಾರೆ.

ಆಧಾರಗಳು

ಆಧಾರಗಳು

ಚರಿತ್ರೆಯ ರಚನೆಯಲ್ಲಿ ಆಧಾರಗಳು ಅದ್ವಿತೀಯವಾದ ಪಾತ್ರವನ್ನು ವಹಿಸುತ್ತವೆ. ಆಧಾರಗಳಿಲ್ಲದೆ ಇತಿಹಾಸವಿಲ್ಲ. ʻಆಧಾರ’ ಈ ಮೂರು ಅಕ್ಷರಗಳ ಅರ್ಥ ಬಹುವ್ಯಾಪಕ. ಇತಿಹಾಸಕ್ಕೆ ಆಧಾರಗಳೇ ಉಸಿರು. ಆಧಾರಗಳಿಲ್ಲದೆ ರಚನೆಗೊಂಡ ಚರಿತ್ರೆ ನಾವಿಕನಿಲ್ಲದ ದೋಣಿಯಂತೆ, ಚುಕ್ಕಾಣಿಯಿಲ್ಲದ ಹಡಗಿನಂತೆ.

ಪ್ರಾಚೀನ ಭಾರತದ ಇತಿಹಾಸ ರಚನೆಗೆ ಸಂಬಂಧಿಸಿದಂತೆ ಸಾಕಷ್ಟು ವಿಪುಲ ಆಧಾರಗಳು ಲಭ್ಯವಾಗುವುದಿಲ್ಲ. ದೊರೆತಿರುವ ಅಲ್ಪಸ್ವಲ್ಪ ಆಧಾರಗಳನ್ನು ಆಧರಿಸಿ ಇತಿಹಾಸವನ್ನು ರಚಿಸಲಾಗಿದೆ. ಅಲ್ಬೆರೂನಿ ‘ತಕ್ವಿಕ್ ಅಲ್ ಹಿಂದ್’ ಎಂಬ ಕೃತಿಯಲ್ಲಿ ʻಭಾರತೀಯರಿಗೆ ಐತಿಹಾಸಿಕ ಪ್ರಜ್ಞೆಯ ಅರಿವಿಲ್ಲ. ಪ್ರಚಲಿತ ವಿಷಯಗಳ ಕುರಿತು ಪ್ರಶ್ನಿಸಿದಾಗ ಅಡುಗೂಲಜ್ಜಿಯ ಕಥೆ ಹೇಳಲು ಆರಂಭಿಸುತ್ತಾರೆ’ ಎಂದು ಅಭಿಪ್ರಾಯ ಪಟ್ಟಿದ್ದಾನೆ. ಈ ಅಭಿಪ್ರಾಯದಿಂದ ಭಾರತೀಯರಲ್ಲಿ ಚಾರಿತ್ರಿಕ ಪ್ರಜ್ಞೆಯ ಅರಿವು ಇರಲಿಲ್ಲ ಎಂಬುದು ತಿಳಿದುಬರುತ್ತದೆ. ಆದರೆ ಅಲ್ಬೆರೂನಿಯ ಅಭಿಪ್ರಾಯದಲ್ಲಿಯೇ ಭಾರತೀಯರು ಪುರಾಣಗಳನ್ನು, ಮಹಾಕಾವ್ಯಗಳನ್ನೆಲ್ಲಾ ರಚಿಸಿದ್ದಾರೆ. ಆದರೆ ಚಾರಿತ್ರಿಕ ಕೃತಿಗಳನ್ನು ರಚಿಸಿರುವುದಿಲ್ಲ. ಹೀಗಾಗಿ ವಾಸ್ತವವಾದಿಗಳಾಗಿರದೆ ಅದೃಷ್ಟವಾದಿಗಳಾಗಿರುವುದು ಮತ್ತು ದಂತಕಥೆಗಳಿಗೆ ಹೆಚ್ಚು ಪ್ರಾಧಾನ್ಯತೆ ನೀಡಿರುವುದು ಕಂಡುಬರುತ್ತದೆ.

ಪ್ರಾಚೀನ ಭಾರತದ ಇತಿಹಾಸ ರಚನೆಯಲ್ಲಿ ಸಹಕಾರಿಯಾದ ಮೂಲಾಧಾರಗಳನ್ನು ಹೀಗೆ ವರ್ಗೀಕರಿಸಿ ಅವುಗಳ ಗುಣಾತ್ಮಕ ಮೌಲ್ಯವನ್ನು ಪರಿಗಣಿಸಬಹುದಾಗಿದೆ. ಅವುಗಳೆಂದರೆ

1. ಪ್ರಾಕ್ತನಶಾಸ್ತ್ರಾದಾರಗಳು (ಪುರಾತತ್ವ ಆಧಾರಗಳು)

2. ಲಿಖಿತ ಆಧಾರಗಳು. (ಸಾಹಿತ್ಯಾಧಾರಗಳು)

1. ಪ್ರಾಕ್ತನ ಶಾಸ್ತ್ರಾಧಾರಗಳು

ಇತಿಹಾಸ ರಚನೆಯಲ್ಲಿ ಪ್ರಾಕ್ತನಶಾಸ್ತ್ರಾಧಾರಗಳು ಗಮನಾರ್ಹವಾದ ಪಾತ್ರವನ್ನು ಹೊಂದಿವೆ ಇವುಗಳನ್ನು ಅವು ದೊರೆತಿರುವ ಅವಶೇಷಗಳಿಗೆ ಅನುಗುಣವಾಗಿ 4 ಭಾಗಗಳಾಗಿ ವಿಂಗಡಿಸಬಹುದಾಗಿದೆ.

1.ಭೂಸಂಶೋಧನೆ,

2. ಶಾಸನಗಳು,

3. ನಾಣ್ಯಗಳು,

4. ಐತಿಹಾಸಿಕ ಸ್ಮಾರಕಗಳು.

1. ಭೂಸಂಶೋಧನೆ :

ಭೂಸಂಶೋಧನೆ ಎಂದರೆ ಭೂ ಉತ್ಖನನ ಎಂದರ್ಥ (ವೈಜ್ಞಾನಿಕವಾಗಿ ಭೂಮಿಯನ್ನು ಅಗೆಯುವುದು), ಭಾರತದಲ್ಲಿ ಬ್ರಿಟೀಷ್ ವೈಸ್ರಾಯ್ ಆಗಿದ್ದ ಲಾರ್ಡ್ ಕರ್ಜನ್ ಪ್ರಾಕ್ತನ ಇಲಾಖೆಯನ್ನು ಪ್ರಾರಂಭಿಸಿದರು. ಸರ್ಜಾನ್ ಮಾರ್ಷಲ್ ಈ ಇಲಾಖೆಯ ನಿರ್ದೇಶಕರಾಗಿದ್ದಾಗ ಭೂ ಉತ್ಖನದ ಕಾರ್ಯ ಆರಂಭಗೊಂಡಿತು.

1921-22ರಲ್ಲಿ ಹರಪ್ಪ ಮತ್ತು ಮೆಹೆಂಜೋದಾರೋಗಳಲ್ಲಿ ನಡೆದ ಭೂ ಉತ್ಖನನಗಳು ಭಾರತವು ಪ್ರಾಚೀನ ಕಾಲದಲ್ಲಿಯೇ ʻನಾಗರೀಕತೆಗಳ ತೊಟ್ಟಿಲು ರಾಷ್ಟ್ರ’ವಾಗಿತ್ತೆಂದು ತಿಳಿಯುತ್ತದೆ. ತಕ್ಷಶಿಲೆಯ ಉತ್ಖನನವು ಕುಶಾನರ ಇತಿಹಾಸದ ಮೇಲೂ, ಪಾಟಲಿಪುತ್ರದ ಉತ್ಖನನವು ಮೌರ್ಯರ ಇತಿಹಾಸದ ಮೇಲೂ ಬೆಳಕು ಚೆಲ್ಲಲು ಸಹಕಾರಿಯಾಗಿದೆ. ದಕ್ಷಿಣ ಭಾರತದ ಪಾಂಡಿಚೇರಿ, ಅರಿಕಮೇಡು, ಆದಿತ್ಯನಲ್ಲೂರು, ತಿನ್ನವೆಲ್ಲಿ, ಮಸ್ಕಿ, ಬ್ರಹ್ಮಗಿರಿ, ಚಂದ್ರವಳ್ಳಿ, ಸನ್ನತಿಯ ಉತ್ಖನನಗಳು, ಶಿಲಾಯುಗ ಮತ್ತು ತಾಮ್ರಯುಗದ ಚರಿತ್ರೆಯನ್ನು ಬೆಳಕಿಗೆ ತಂದಿವೆ. ಒಟ್ಟಿನಲ್ಲಿ ಭೂ ಉತ್ಖನನದಿಂದ ಭೂಮಿಯ ಗರ್ಭದಲ್ಲಿನ ಐತಿಹಾಸಿಕ ಅವಶೇಷಗಳನ್ನು ಹೊರತೆಗೆದಾಗ ಇತಿಹಾಸವನ್ನು ರಚಿಸಲು ಸಹಕಾರಿಯಾಗುತ್ತದೆ.

ನಾಣ್ಯಗಳು :

ಪ್ರಾಚೀನ ಭಾರತದ ಇತಿಹಾಸ ರಚನೆಯಲ್ಲಿ ನಾಣ್ಯಗಳು ಕೂಡ ಮಹತ್ತರ ಪಾತ್ರವಹಿಸುತ್ತವೆ. ನಾಣ್ಯಗಳ ವ್ಯವಸ್ಥಿತ ಅಧ್ಯಯನಕ್ಕೆ ʻನ್ಯುಮಿಸ್‌ಮ್ಯಾಟಿಕ್ಸ್’ ಎಂದು ಕರೆಯಲಾಗಿದೆ. ನಮಗೆ ಚಿನ್ನ, ಬೆಳ್ಳಿ, ತಾಮ್ರ, ಸೀಸ ಮೊದಲಾದ ಲೋಹದ ನಾಣ್ಯಗಳು ದೊರೆತಿವೆ. ಈ ನಾಣ್ಯಗಳು ರಾಜರ ಕಾಲ, ಹೆಸರು, ಬಿರುದು, ಸ್ಥಳ, ವಿದೇಶಗಳೊಡನೆ ಹೊಂದಿದ್ದ ಸಂಬಂಧ, ಲಲಿತಕಲೆಗಳ ಬಗ್ಗೆ ಆಸಕ್ತಿ ಮೊದಲಾದ ಹಲವು ವಿಚಾರಗಳ ಬಗ್ಗೆ ಸ್ಪಷ್ಟಿಕರಿಸುತ್ತವೆ. ಉದಾ: ವಿಷ್ಣುವರ್ದನನ ನಾಣ್ಯಗಳು ಕಂಚಿಗೊಂಡ, ನೊಳಂಬವಾಡಿಗೊಂಡ, ಮಲಪರೋಳಂಡ ಎಂಬ ವಿವರ ಒಳಗೊಂಡಿದೆ. ಸಮುದ್ರಗುಪ್ತನ ನಾಣ್ಯಗಳು ಅವನು ವೀಣಾಪಾಣಿಯಾಗಿ ಕುಳಿತಿರುವ ಚಿತ್ರವನ್ನು ಒಳಗೊಂಡಿವೆ. ನಾಣ್ಯಗಳು ವಿನಿಮಯದ ಮಾಧ್ಯಮವಾಗಿ ವ್ಯಾಪಾರ ವಾಣಿಜ್ಯದಲ್ಲಿ ಮಹತ್ತರವಾದ ಪಾತ್ರವನ್ನು ನಿರ್ವಹಿಸುತ್ತಿದ್ದವು.

ಇತಿಹಾಸ ಅಧ್ಯಯನಕ್ಕೆ ನಾಣ್ಯಗಳ ಉಪಯೋಗಗಳು :

  1. ನಾಣ್ಯಗಳಿಂದ ಅದನ್ನು ಟಂಕಿಸಿದ ಅರಸನ ಹೆಸರು, ಅವನ ಕಾಲ, ಅವನ ಸಂತತಿ, ರಾಜಲಾಂಛನ ಮುಂತಾದವು ತಿಳಿಯುತ್ತದೆ.
  2. ನಾಣ್ಯಗಳಿಂದ ಅರಸನ ವೈಯಕ್ತಿಕ ಧರ್ಮದ ಬಗ್ಗೆ ಮಾಹಿತಿ ಲಭ್ಯವಾಗುತ್ತದೆ. ಉದಾ : ಕುಶಾನರ ನಾಣ್ಯದ ಮೇಲೆ ಇರುವ ಶಿವನ ಚಿತ್ರ, ಚಾಲುಕ್ಯರ
  3. ನಾಣ್ಯಗಳಲ್ಲಿನ ವರಾಹ ಚಿತ್ರ, ಸಮುದ್ರಗುಪ್ತನ ನಾಣ್ಯಗಳ ಮೇಲಿನ ಲಕ್ಷ್ಮಿಯ ಚಿತ್ರ ಸಂಬಂಧಿತ ಅರಸರ ಆರಾಧನೆಯನ್ನು ಸಾಭೀತುಪಡಿಸುತ್ತದೆ. ನಾಣ್ಯಗಳ ಮುಖೇನ ಅರಸರ ಬಿರುದಾವಳಿಗಳು ಬೆಳಕಿಗೆ ಬರುತ್ತದೆ. ಅದು ಎಷ್ಟೋ ಸಲ ಅವನ ಸಾಧನೆಯನ್ನು ದಾಖಲುಗೊಳಿಸುತ್ತದೆ. ಉದಾ ಹೊಯ್ಸಳ ವಿಷ್ಣುವರ್ಧನನ ತಲಕಾಡುಗೊಂಡ, ಮಲೆಷ್ಟೊರೊಳಂಡ ಬಿರುದುಗಳು. ಸಮುದ್ರ ಗುಪ್ತನ ಶಾಸನಗಳಲ್ಲಿ ಅವನ ಶತೃಗಳನ್ನು ನಿಗ್ರಹಿಸಿ ಸ್ವರ್ಗವನ್ನು ಗೆದ್ದಿದ್ದನೆಂದು ಉಲ್ಲೇಖಿಸುತ್ತದೆ.
  4. ನಾಣ್ಯಗಳಿಂದ ಅರಸರ ಕಲಾಭಿರುಚಿಯನ್ನು ಮನಗಾಣಬಹುದು. ಉದಾ : ಸಮುದ್ರಗುಪ್ತನ ನಾಣ್ಯಗಳಲ್ಲಿ ಅವನು ವೀಣೆ ನುಡಿಸುತ್ತಿರುವ ಚಿತ್ರವಿದ್ದು, ಅದು ಸಂಗೀತದಲ್ಲಿ ಇದ್ದ ಅವನ ಆಸಕ್ತಿಯನ್ನು ಹೊರಗೆಡಹುತ್ತದೆ.
  5. ಪ್ರಾಚೀನ ಕಾಲದ ನಾಣ್ಯಗಳು ದೊರೆತ ಸ್ಥಳವನ್ನು ಅವಲಂಬಿಸಿ ಅರಸರ ಸಾಮ್ರಾಜ್ಯದ ಮೇರೆಯನ್ನು ಗುರುತಿಸಬಹುದು.
  6. ವಿದೇಶಿ ನಾಣ್ಯಗಳು ಸ್ವದೇಶದಲ್ಲಿ ಸಿಕ್ಕ ಪ್ರದೇಶದ ಆಧಾರದ ಮೇಲೆ ಆ ಪ್ರದೇಶ ಪ್ರಾಚೀನ ಕಾಲದಲ್ಲಿ ವಿದೇಶದೊಂದಿಗೆ ವ್ಯಾಪಾರಿ ಸಂಪರ್ಕ ಹೊಂದಿತ್ತೆಂದು ತಿಳಿದು ಬರುತ್ತದೆ. ಉದಾಹರಣೆಗೆ ಬೆಂಗಳೂರು ಮತ್ತು ತಲಕಾಡುಗಳಲ್ಲಿ ದೊರೆತ ರೋಮನ್ ನಾಣ್ಯಗಳಿಂದ ಇದು ದೃಢಪಟ್ಟಿದೆ.
  7. ಹೊರಡಿಸಿದ ನಾಣ್ಯಗಳ ಲೋಹದ ಮೌಲ್ಯವು ಆಯಾ ಕಾಲದ ಆರ್ಥಿಕ ಪರಿಸ್ಥಿತಿಯನ್ನು ತೋರಿಸುವ ಕೈಗನ್ನಡಿಯಾಗಿದೆ. ಉದಾಹರಣೆಗೆ ಗುಪ್ತರ ಕಾಲದ ಚಿನ್ನದ ನಾಣ್ಯಗಳು ಆರ್ಥಿಕ ಸುಭಿಕ್ಷತೆಯ ದ್ಯೋತಕವಾದರೆ, ಮಹಮ್ಮದ್ ಬಿನ್ ತುಗಲಕ್ ಕಾಲದ ತಾಮ್ರದ ನಾಣ್ಯಗಳು ಆರ್ಥಿಕ ಪರಿಸ್ಥಿತಿಯ ಹಿನ್ನಡೆಗೆ ದಾಖಲೆಯಾಗಿದೆ.
  8. ನಾಣ್ಯಗಳ ಸಹಾಯದಿಂದ ಕಾಲ ಗಣನೆಯು ಸುಲಭವಾಗುತ್ತದೆ.
  9. ನಾಣ್ಯಗಳು ಆಯಾ ಕಾಲದ ಕಲಾ ಬೆಳವಣಿಗೆ ಮತ್ತು ಲೋಹ ವಿಜ್ಞಾನದ ಪ್ರಗತಿಯ ಮೇಲೆ ಬೆಳಕು ಚೆಲ್ಲುತ್ತದೆ.

ಐತಿಹಾಸಿಕ ಸ್ಮಾರಕಗಳು : ಚರಿತ್ರೆಯ ರಚನೆಯಲ್ಲಿ ಐತಿಹಾಸಿಕ ಸ್ಮಾರಕಗಳ ಪಾತ್ರ ವಿಶಿಷ್ಟವಾದುದು. ಭಾರತದಲ್ಲಿ ಬೆಳವಣಿಗೆ ಗೊಂಡ ಕಲೆಯ ಬಗ್ಗೆ ಅಧ್ಯಯನ ಮಾಡಲು ಸ್ಮಾರಕಗಳೇ ಆಧಾರ. ಕಟ್ಟಡಗಳು, ಚೈತಾಲಯಗಳು, ದೇವಾಲಯಗಳು, ಮಂದಿರಗಳು, ಬಸದಿಗಳು, ಮೂರ್ತಿಶಿಲ್ಪಗಳು ಕಲಾ ಪರಂಪರೆಯ ಬೆಳವಣಿಗೆಗೆ ಕೈಗನ್ನಡಿಯಿದ್ದಂತೆ. ಸ್ಮಾರಕಗಳ ಸೂಕ್ಷ್ಮ ಅಧ್ಯಯನ ಮಾಡಿ ನೋಡಿದಾಗ ರಾಜರ ಆಸ್ಥಾನ, ವೈಭವ, ಜನರ ಉಡಿಗೆ-ತೊಡಿಗೆ, ಸಮಕಾಲೀನ ಪ್ರಾಣಿಸಂಕುಲ, ಸಸ್ಯವರ್ಗ, ಸೇನಾ ಸಂಘಟನೆ, ಶಸ್ತ್ರಾಸ್ತ್ರಗಳು, ನೃತ್ಯ ಮೊದಲಾದ ವಿಚಾರಗಳು ಸ್ಪಷ್ಟವಾಗಿ ತಿಳಿದುಬರುತ್ತವೆ. ಅಂತಹ ಪ್ರಮುಖ ಸ್ಮಾರಕಗಳೆಂದರೆ ಮೌರ್ಯರ ಕಾಲದ ಸ್ತೂಪಗಳು, ಸ್ತಂಭಗಳು, ವಿಹಾರಗಳು, ಜೈನ ಬಸದಿಗಳು ಮತ್ತು ತೀರ್ಥಂಕರರ ಮೂರ್ತಿಗಳು, ಎಲ್ಲೋರ ಅಜಂತ, ಖಜುರಾಹೋ, ಆಗ್ರಾ, ಸಾಂಚಿ, ಮಹಾಬಲಿಪುರಂ, ನಾಸಿಕ್, ಕಾರ್ಲೆ, ಬೇಲೂರು, ಹಳೇಬೀಡು, ದೇವಾಲಯಗಳು- ಹೀಗೆ ಕಂಡುಬರುವ ಸ್ಮಾರಕಗಳು ಚರಿತ್ರೆಯ ರಚನೆಗೆ ಸಹಕಾರಿಯಾಗುವುದರ ಜೊತೆಗೆ ಪ್ರವಾಸಿಗರ ಕಣ್ಮನಗಳಿಗೆ ಅನಿರ್ವಚನೀಯ ಸೌಂದರ್ಯ ನೀಡುವಂತಿದೆ.

ಸಾಹಿತ್ಯಾಧಾರಗಳು

ಸಾಹಿತ್ಯಾಧಾರಗಳು

ಪ್ರಾಚೀನ ಭಾರತದ ಚರಿತ್ರೆಯ ರಚನೆಯಲ್ಲಿ ಪ್ರಾಕ್ತನಶಾಸ್ತ್ರಾಧಾರಗಳಂತೆಯೇ ಸಾಹಿತ್ಯಾಧಾರಗಳು ಸಹ ಭಿನ್ನವಾದ ಐತಿಹಾಸಿಕ ವಿಚಾರಗಳ ಸಂಗ್ರಹಣೆಗೆ ಅನುಕೂಲಕರವಾಗಿದೆ. ಸಾಹಿತ್ಯಾಧಾರಗನ್ನು ಅವುಗಳ ಲಭ್ಯತೆಗೆ ಅನುಸಾರವಾಗಿ 2 ವಿಭಾಗಗಳಲ್ಲಿ ವರ್ಗೀಕರಿಸಿ ನೋಡಬಹುದಾಗಿದೆ.

  1. ದೇಶೀಯ ಸಾಹಿತ್ಯಾಧಾರಗಳು 2. ವಿದೇಶಿಯ ಸಾಹಿತ್ಯಾಧಾರಗಳು.
  1. ದೇಶೀಯ ಸಾಹಿತ್ಯಾಧಾರಗಳು : ದೇಶೀಯ ಸಾಹಿತ್ಯಾಧಾರಗಳೆಂದರೆ ಆಸ್ಥಾನದ ಕವಿಗಳು ಮತ್ತು ಚರಿತ್ರಾಕಾರರಿಂದ ರಚಿಸಲ್ಪಟ್ಟ ಬರವಣಿಗೆಗಳು. ದೇಶೀಯ ಆಕರಗಳು ಚರಿತ್ರೆಯನ್ನು ಹೆಚ್ಚು ಸ್ಪಷ್ಟವಾಗಿ ನಿಖರವಾಗಿ ನಿರೂಪಿಸಲು ಸಹಕಾರಿಯಾಗಿವೆ. ಅಂತಹ ಆಧಾರಗಳೆಂದರೆ,

(ಅ) ಧಾರ್ಮಿಕ ಗ್ರಂಥಗಳು: ದೀಪವಂಶ ಮತ್ತು ಮಹಾವಂಶ ಕೃತಿಗಳು ತ್ರಿಪಿಠಕಗಳು, ಜೈನ ಆಗಮ ಸಿದ್ದಾಂತಗಳು, ಅಂಗಗಳು, ಉಪಾಂಗಗಳು ಬೌದ್ಧ ಮತ್ತು ಜೈನ ಧರ್ಮದ ಇತಿಹಾಸ ರಚನೆಗೆ ಹೆಚ್ಚು ಸಹಕಾರಿಯಾಗಿವೆ.

ವೇದವಾಙ್ಮಯ : ವೈದಿಕ ಸಂಸ್ಕೃತಿಯನ್ನು ಅರಿಯಲು ವೇದವಾಙ್ಮಯವೇ ಮೂಲಾಧಾರ. ವೇದವಾಙ್ಮಯದಲ್ಲಿ ಚತುರ್ವೇದಗಳು, ವೇದಾಂಗಗಳು, ಬ್ರಾಹ್ಮಣಗಳು, ಅರಣ್ಯಕಗಳು ಮತ್ತು ಉಪನಿಷತ್ಗಳು ಅಡಕವಾಗಿವೆ.

(ಆ) ಮಹಾಕಾವ್ಯಗಳು, ಪುರಾಣಗಳು: ಭಾರತೀಯರ ಎರಡು ಮಹಾಕಾವ್ಯಗಳಾದ ರಾಮಾಯಣ ಮತ್ತು ಮಹಾಭಾರತಗಳು ಆರ್ಯರು ಮತ್ತು ಗಂಗಾ ನದಿಯ ಬಯಲಿನ ರಾಜರ ಸಂತತಿಯ ಬಗ್ಗೆ ವಿವರ ನೀಡುತ್ತವೆ. ಪ್ರಾಚೀನ ಇತಿಹಾಸದ ರಚನೆಯಲ್ಲಿ ಪುರಾಣಗಳು ಮತ್ತು ಸ್ಮೃತಿಗಳಪಾತ್ರವು ಕಂಡುಬರುತ್ತದೆ.

(ಇ) ಚಾರಿತ್ರಿಕ ಗ್ರಂಥಗಳು: ಕೌಟಿಲ್ಯನ ಅರ್ಥಶಾಸ್ತ್ರ, ಕಲ್ಹಣನ ರಾಜತರಂಗಿಣಿ, ಚರಕನ ಚರಕ ಸಂಹಿತೆ, ಸುಶೃತನ ಸುಶೃತಸಂಹಿತೆ, ಸಮುದ್ರಗುಪ್ತನ ಕೃಷ್ಣಚರಿತ, ಮಹೇಂದ್ರವರ್ಮನ ಮತ್ತವಿಲಾಸ ಪ್ರಹಸನ, ಇಳಂಗೋಅಡಿಗಳ್ ರವರ ತಿಲಪ್ಪದಿಕಾರಂ, ಸಾತ್ತನಾರ್‌ನ ಮಣಿಮೇಖಲೈ, ತಿರುತಕ್ಕದೇವರ್‌ನ ಜೀವಿಕ ಚಿಂತಾಮಣಿ, ಚಾವುಂಡರಾಯನ ಚಾವುಂಡರಾಯಪುರಾಣ, ಪಂಪನ ಆದಿಪುರಾಣ, ವಿಕ್ರಮಾರ್ಜುನ ವಿಜಯ, ಶಿವಮಾರನ ಗಜಶತಕ, 3ನೇ ಸೋಮೇಶ್ವರನ ಮಾನಸೋಲ್ಲಾಸ, ನಾಗವರ್ಮನ ಛಂದೋಂಬುದಿ ಮೊದಲಾದ ಗ್ರಂಥಗಳಲ್ಲಿ ಹೆಚ್ಚು ಚಾರಿತ್ರಿಕ ವಿಷಯಗಳು ಮೂಡಿಬಂದಿವೆ. ಅಶ್ವಘೋಶನ ಬುದ್ಧ ಚರಿತ, ಬಾಣಭಟ್ಟನ ಹರ್ಷಚರಿತೆ, ಹೇಮಚಂದ್ರನ ಕುಮಾರಪಾಲಚರಿತೆ, ಚಾಂದ್ ಬರ್ದಾಯಿಯ ಪೃಥ್ವಿರಾಜ ರಾಸೋ, ಬಿಲ್ಲಣನ ವಿಕ್ರಮಾಂಕ ದೇವಚರಿತೆ, ರನ್ನನ ಗದಾಯುದ್ಧ – ಈ ಕೃತಿಗಳು ರಾಜರ ಆಸ್ಥಾನದಲ್ಲಿದ್ದ ಚರಿತ್ರಾಕಾರರಿಂದ ರಚನೆಗೊಂಡಿದ್ದು ಹೆಚ್ಚು ಐತಿಹಾಸಿಕ ವಿಷಯಗಳ ಬಗ್ಗೆ ಬೆಳಕು ಚೆಲ್ಲುತ್ತವೆ.

ಈ) ನಾಟಕಗಳು: ಕಾಳಿದಾಸನ ರಘುವಂಶ, ಮಾಳವಿಕಾಗ್ನಿಮಿತ್ರ, ವಿಶಾಖದತ್ತನ ಮುದ್ರಾರಾಕ್ಷಸ, ಶೂದ್ರಕನ ಮೃಚ್ಚಕಟಿಕ ಮೊದಲಾದ ನಾಟಕರೂಪದ ಕೃತಿಗಳಲ್ಲಿ ಅಲ್ಪ ಸ್ವಲ್ಪ ಚಾರಿತ್ರಿಕ ಮಾಹಿತಿ ಲಭ್ಯವಾಗುತ್ತದೆ.

  1. ವಿದೇಶಿಯ ಸಾಹಿತ್ಯಾಧಾರಗಳು (ವಿದೇಶಿಯರ ಬರವಣಿಗೆಗಳು):

ಭಾರತವು ಪ್ರಾಚೀನ ಕಾಲದಿಂದ ನಾಗರೀಕತೆ ಸಂಸ್ಕೃತಿಯ ಆವಾಸಸ್ಥಾನ ರಾಷ್ಟ್ರವಾದುದರಿಂದ ಅನೇಕ ವಿದೇಶಿ ಪ್ರವಾಸಿಗರು, ಮತಪ್ರಚಾರಕರು, ವ್ಯಾಪಾರ ವಾಣಿಜ್ಯೋದ್ಯಮಿಗಳು ಭಾರತಕ್ಕೆ ಭೇಟಿನೀಡಿದ್ದರು. ಹಾಗೆ ಬಂದ ವಿದೇಶಿಯರು ತಾವು ಕಂಡು ಕೇಳಿದ ವಿಚಾರಗಳನ್ನು ತಮ್ಮ ಬರವಣಿಗೆಗಳಲ್ಲಿ, ಪ್ರವಾಸ ಕಥನಗಳಲ್ಲಿ ನಮೂದಿಸಿದ್ದಾರೆ. ಅಂತಹ ಬರವಣಿಗೆಗಳು ಭಾರತೀಯ ಚರಿತ್ರೆಯ ಹಲವು ಹತ್ತು ವಿಚಾರಗಳು ಪ್ರಸ್ತಾಪಿಸಲ್ಪಟ್ಟಿವೆ.

1. ಗ್ರೀಕ್ ರೋಮನ್ನರ ಬರವಣಿಗೆಗಳು:

  1. ಹೆರೋಡಾಟಸ್‌ನ ಬರವಣಿಗೆಗಳಲ್ಲಿ ಪರ್ಷಿಯನ್ನರ ಆಕ್ರಮಣದ ವಿವರಗಳಿವೆ.
  2. ಪ್ಲಿನಿ ಮತ್ತು ಟಾಲಮಿಯ ಪ್ರಾಕೃತಿಕ ಚರಿತ್ರೆ ಮತ್ತು ಭೂಗೋಳಶಾಸ್ತ್ರ ಕೃತಿಗಳಲ್ಲಿ ಭಾರತವು ಪ್ರಾಚೀನ ಕಾಲದಲ್ಲಿ ಹೊಂದಿದ್ದ ವ್ಯಾಪಾರ ವಾಣಿಜ್ಯದ ವಿವರಗಳು, ತೀರಪ್ರದೇಶದ ಬಂದರುಗಳ ಪಾತ್ರ ವಿವರಿಸಲ್ಪಟ್ಟಿದೆ.
  3. ಮೆಗಾಸ್ಥನೀಸನ ಇಂಡಿಕಾ ಮೌರ್ಯರ ಇತಿಹಾಸ ಬಗ್ಗೆ ಬೆಳಕು ಚೆಲ್ಲುತ್ತದೆ.
  4. ಗ್ರೀಕ್ ಅನಾಮಧೇಯನಿಂದ ರಚನೆಗೊಂಡ ʻದಿ ಪರಿಪ್ಲಸ್ ಆಫ್ ದಿ ಎರಿತ್ರಿಯನ್‌’ ಕ್ರಿಶ 1ನೇಶತಮಾನದ ವ್ಯಾಪಾರ ವಹಿವಾಟಿನ ವಿವರಗಳನ್ನೊಳಗೊಂಡಿದೆ.
ಗುಪ್ತರ ಕಾಲದ ಕಲೆ ಮತ್ತು ವಾಸ್ತುಶಿಲ್ಪ

ಗುಪ್ತರ ಕಾಲದ ಕಲೆ ಮತ್ತು ವಾಸ್ತುಶಿಲ್ಪ

ಪೀಠಿಕೆ : ಗುಪ್ತರ ಕಾಲದ ಸಾಂಸ್ಕೃತಿಕ ಭವ್ಯತೆ ಕಲಾ ಪ್ರಪಂಚದಲ್ಲೂ ಹೊರಹೊಮ್ಮಿದೆ. ಈ ಕಾಲವು ಶಿಲ್ಪಕಲೆ ಮತ್ತು ವಾಸ್ತುಶಿಲ್ಪದ ಪರಾಕಾಷ್ಟೆಯನ್ನು ಮುಟ್ಟಿದ ಕಾಲವಾಗಿದೆ. ಇವರ ಕಲೆಯು ಕೇವಲ ಒಂದು ಸ್ಥಳದಲ್ಲಿ ಕೇಂದ್ರೀಕೃತವಾಗದೆ ಮಥುರಾ, ಕಾಶಿ, ಪಟ್ನಾ ಮತ್ತಿತರ ಕಡೆಗಳಲ್ಲಿ ಹರಡಿದೆ.

ಗುಪ್ತರ ಕಾಲದ ಕಲೆಯಲ್ಲಿ ಪರಿಶುದ್ಧತೆ, ಸರಳತೆ, ಆದ್ಯಾತ್ಮಿಕತೆ, ಲಾವಣ್ಯ ಮತ್ತು ಸೌಂದರ್ಯವಿದೆ. ಈ ಕಾಲಾವಧಿಯಲ್ಲಿನ ಕಲೆ ಗಾಢವಾದ ಧಾರ್ಮಿಕ ಹಾಗೂ ಆದ್ಯಾತ್ಮಿಕ ಅಂಶಗಳನ್ನು ಒಳಗೊಂಡು ಅತ್ಯುನ್ನತ ಮಟ್ಟವನ್ನು ತಲುಪಿತು. ಆದ್ದರಿಂದಲೇ ವಿ.ಎ.ಸ್ಮಿತ್ ರವರು ‘ಗುಪ್ತರ ಕಲೆಯು ಹಿಂದೂ ಕಲೆಯ ಅತ್ಯುನ್ನತಿಯನ್ನು ಪ್ರತಿನಿಧಿಸುತ್ತದೆ’ ಎಂದಿದ್ದಾರೆ.

ಭಾರತದ ಇತಿಹಾಸದಲ್ಲೇ ಮೊಟ್ಟಮೊದಲು ಕಲ್ಲಿನಲ್ಲಿ ಹಿಂದೂ ದೇವಾಲಯಗಳನ್ನು ಕಟ್ಟುವ ಪರಂಪರೆ ಗುಪ್ತರ ಕಾಲದಿಂದ ಪ್ರಾರಂಭವಾಯಿತು. ಅಲ್ಲದೆ ಗುಪ್ತರ ಯುಗವು ‘ಸುವರ್ಣಯುಗ’ವೆಂದು ಪರಿಗಣಿತವಾಗಲು ಕಲೆ ಮತ್ತು ವಾಸ್ತುಶಿಲ್ಪದಲ್ಲಿ ಸಾಧಿಸಿದ ಸಿದ್ಧಿಯೂ ಕಾರಣವಾಗಿದೆ. ಭಾರತದ ಇತಿಹಾಸದಲ್ಲಿ ಯಾವ ಯುಗದಲ್ಲೂ ಕಂಡುಬರದ ಕಲಾಚಟುವಟಿಕೆಗಳು ಈ ಕಾಲದಲ್ಲಿ ಕಂಡುಬಂದಿದೆ. ಎ.ಕೆ.ಕುಮಾರಸ್ವಾಮಿಯವರು ‘ಆ ವೇಳೆಗಾಗಲೇ ಆಚರಣೆಯಲ್ಲಿದ್ದ ನಮ್ಮ ಕಲಾ ಪರಂಪರೆಯ ಪುಷ್ಪ ಗುಪ್ತರ ಕಲೆ’ ಎಂದಿದ್ದಾರೆ.

ಗುಪ್ತರ ದೇವಾಲಯದ ಲಕ್ಷಣಗಳು ಕೆಳಕಂಡಂತಿವೆ.

  1. ಅದಿಷ್ಠಾನದ (ಜಗುಲಿಯ) ಮೇಲೆ ನಿಂತ ದೇವಾಲಯ.
  2. ದೇಗುಲಕ್ಕೆ ಹೋಗಲು ಮೆಟ್ಟಿಲುಗಳ ಸಾಲು.
  3. ಚೌಕಾಕಾರದ ಕೆಲವೊಮ್ಮೆ ಆಯತಾಕಾರದ ದೇವಾಲಯದ ನಕ್ಷೆ.
  4. ಒಳಗರ್ಭಗೃಹದ ಸುತ್ತ ಮುಚ್ಚಿದ ಪ್ರದಕ್ಷಿಣಾ ಪಥವಿರುವುದು.
  5. ಗರ್ಭಗೃಹದ ಅಲಂಕೃತ ಬಾಗಿಲು.
  6. ಮುಖ ಮಂಟಪದ ಅಲಂಕೃತ ಕಂಬಗಳು.
  7. ಸಮತಟ್ಟಾದ ಚಾವಣಿ
  8. ನಂತರ ಕಾಲದಲ್ಲಿ ಮೇಲ್ಟಾವಣಿ ಮೇಲೆ ನಿಂತ ರೇಖಾನಾಗರ ಶಿಖರ.
  9. ಸರಳ ನಿರಾಡಂಬರ ಹೊರಗೋಡೆ.
  10. ಸಭಾಮಂಟಪ ಇಲ್ಲದೆ ಇರುವುದು.

ನಂತರದ ಲಕ್ಷಣಗಳು :

  1. ಚಿಕ್ಕ ದೇವಾಲಯಗಳನ್ನು ದೊಡ್ಡದನ್ನಾಗಿ ಮಾಡಿರುವುದು- ಹಲವು ಭಾಗಗಳ ಸೇರ್ಪಡೆ.
  2. ಆಯತಾಕಾರದ ನಕ್ಷೆ.
  3. ಸಭಾಮಂಟಪ ಇರುವುದು.
  4. ಸಭಾಮಂಟಪ ಮತ್ತು ಮುಖಮಂಟಪವನ್ನು ಸೇರಿಸುವ ಕೈಸಾಲೆ.
  5. ಜಗುಲಿಯಲ್ಲಿ ಶಿಲ್ಪಸಾಲು
  6. ದೇವಾಲಯದ ಹೊರಗೋಡೆಗಳನ್ನು ಶಿಲ್ಪಕೋಷ್ಟಗಳಿಂದ ಹಾಗೂ ಅರೆಗಂಭಗಳಿಂದ ಅಲಂಕರಿಸಿರುವುದು.
  7. ದೇವಾಲಯದ ಗೋಡೆಗಳ ಮೇಲೆ ಶಿಲ್ಪ.
  8. ಮೇಲ್ಛಾವಣಿಯ ಮೇಲೆ ಪಿರಮಿಡ್ ಆಕಾರದ ಶಿಖರ.

ನಾಗರ ಮತ್ತು ದ್ರಾವಿಡ ಶೈಲಿಗಳ ಉಗಮ : ಗುಪ್ತರ ಕಾಲದ ದೇವಾಲಯಗಳಲ್ಲಿ ನಾಗರ ಮತ್ತು ದ್ರಾವಿಡ ಶೈಲಿಗಳ ಆಗಮನವನ್ನು ಸೂಚಿಸುವ ಲಕ್ಷಣಗಳನ್ನು ಗುರುತಿಸಬಹುದು. ನಾಗರ ಶೈಲಿಯ ಪ್ರಮುಖ ಲಕ್ಷಣವಾದ ರೇಖಾನಾಗರ ಶಿಖರವನ್ನು ಬಿಟರ್‌ಗಾವ್ ನ ಇಟ್ಟಿಗೆಯ ದೇವಾಲಯದಲ್ಲಿ ಗಮನಿಸಬಹುದು.

ದ್ರಾವಿಡ ಶೈಲಿಯ ಪ್ರಮುಖ ಲಕ್ಷಣವಾದ ಪಿರಮಿಡ್ ಆಕಾರದ ಶಿಖರವನ್ನು ಭೋಧಗಯಾದ ಮಹಾಭೋಧಿ ದೇವಾಲಯದಲ್ಲಿ ಗಮನಿಸಬಹುದು. ಇದರಿಂದ ಗುಪ್ತರಕಾಲವು ಈ ಎರಡೂ ಶೈಲಿಗಳ ಉಗಮಸ್ಥಾನವಾಗಿದ್ದು, ನಂತರ ಕಾಲದಲ್ಲಿ ಪರಿಪಕ್ವವಾಯಿತೆಂದು ತಿಳಿಯುತ್ತದೆ.

ದೇವಫರ್‌ನ ದಶಾವತಾರ ದೇವಾಲಯ : ಇದು ಗುಪ್ತರ ಕಾಲದ ಪ್ರಸಿದ್ಧ ದೇವಾಲಯವಾಗಿದೆ. ಇದು 40 ಅಡಿ ಎತ್ತರದ ಶಿಖರವನ್ನು ಒಳಗೊಂಡಿದೆ. ದೇವಾಲಯದ ಬಾಗಿಲು ಹೆಚ್ಚು ಅಲಂಕಾರಭರಿತವಾಗಿದೆ. ಗಂಗಾ-ಯಮುನ ನದಿಗಳ ಸಂಗಮದ ಚಿತ್ರ ಮನೋಜ್ಞವಾಗಿದೆ. ಬಾಗಿಲಿನಲ್ಲಿ ಪೂರ್ಣಘಟ, ಮಿಥುನ ಚಿತ್ರಗಳು, ಪತ್ರಾವಳಿ ಮನೋಹರವಾಗಿದೆ. ಶ್ರೀರಾಮ ಮತ್ತು ಶ್ರೀಕೃಷ್ಣರ ಜೀವನದ ಸುಂದರ ದೃಶ್ಯಾವಳಿಯನ್ನು ಈ ದೇವಾಲಯ ಒಳಗೊಂಡಿದೆ.

ಇತರ ಪ್ರಮುಖ ದೇವಾಲಯಗಳು :

  1. ಜಬ್ಬಲ್‌ಪುರ ಜಿಲ್ಲೆಯ ತಿಗಾವದಲ್ಲಿರುವ ವಿಷ್ಣುದೇವಾಲಯ
  2. ಭುಮರದಲ್ಲಿರುವ ಶಿವ ದೇವಾಲಯ
  3. ಅಜಯ್‌ಗರ್‌ನ ಪಾರ್ವತಿ ದೇವಾಲಯ
  4. ಖೋಹದಲ್ಲಿರುವ ಏಕಮುಖ ಶಿವಲಿಂಗ ದೇವಾಲಯ
  5. ಗುಪ್ತರ ವಾಸ್ತುಶಿಲ್ಪದ ಮಾದರಿಯಲ್ಲಿರುವ ಐಹೊಳೆಯ ದುರ್ಗಾದೇವಾಲಯ

ಶಿಲ್ಪಕಲೆ : ಗುಪ್ತರ ಕಾಲದ ಶಿಲ್ಪಕಲೆಯು ಅಪೂರ್ವವಾದ ಸೌಂದಯ್ಯಕ್ಕೆ ಹೆಸರುವಾಸಿಯಾಗಿದೆ. ಅರುಣ್ ಭಟ್ಟಾಚಾರ್ಜಿಯವರ ಅಭಿಪ್ರಾಯದಲ್ಲಿ ‘ಶಿಲ್ಪಕಲೆಯಲ್ಲಿ ಗುಪ್ತಶಿಲ್ಪಗಳ ಉಳಿ ನಿರ್ಜೀವ ಶಿಲೆಗೆ ಚೇತನ ಹಾಗೂ ಲಾವಣ್ಯವನ್ನಿತ್ತಿದೆ’.

ಗುಪ್ತರ ಶಿಲ್ಪಕಲೆಯ ಲಕ್ಷಣಗಳು :

  1. ಎಲ್ಲಾ ಪ್ರಾಣಿ ಮತ್ತು ಸಸ್ಯ ವಿನ್ಯಾಸಗಳು ಮುಖ್ಯ ಶಿಲ್ಪದ ಕಥಾನಕದಿಂದ ಪೂರ್ತಿ ಹೊರಗೆ ಅಂಚಿಗೆ (ಬಾರ್ಡ‌ರ್‌ ಗೆ) ದೂಡಲ್ಪಟ್ಟಿರುವುದು.
  2. ಗುಪ್ತರ ಶಿಲ್ಪವು ಬಾಹ್ಯ ಲಕ್ಷಣ ಮತ್ತು ಅಂತಃಶಕ್ತಿಯ ಸಮ್ಮಿಲನ.
  3. ಗುಪ್ತರ ಕಾಲದ ಶಿಲ್ಪವು ಕುಳಿತಿರಲಿ, ನಿಂತಿರಲಿ ಅಥವಾ ಬಾಗಿರಲಿ ಸಮತೋಲನ ಸ್ಥಿತಿಯನ್ನು ತಲುಪಿರುವುದು.
  4. ಗುಪ್ತರ ಶಿಲ್ಪವು ಗ್ರೀಕರ ಅಥವಾ ಇನ್ಯಾವುದೇ ಶೈಲಿಯ ಪ್ರಭಾವಕ್ಕೆ ಒಳಗಾಗದೆ ಭಾರತೀಯತೆಯನ್ನು ಒಳಗೊಂಡಿರುವುದು.
  5. ಗುಪ್ತ ಶಿಲ್ಪದಲ್ಲಿ ಕಾಣುವ ತೇಜಸ್ಸು, ಪಾರದರ್ಶಕ ವಸ್ತ್ರ, ಅಲಂಕಾರಿಕ ಪ್ರಭಾವಳಿ.

ಕೆಲವು ಶಿಲ್ಪಾಕೃತಿಗಳು :

  1. ಸಾರನಾಥ ಆಸನ ರೂಢ ಬುದ್ಧನ ವಿಗ್ರಹ
  2. ಉದಯ ಗಿರಿಯ ಶಿಲ್ಪಗಳು
  3. ಬೆಸ್ನಗರದ ಗಂಗಾದೇವಿ ವಿಗ್ರಹ
  4. ಮಥುರಾದ ಬುದ್ಧನ ಪೂರ್ಣ ವಿಗ್ರಹ
  5. ಗ್ವಾಲಿಯರ್‌ನ ಅಪ್ಸರೆಯರ ಮೂರ್ತಿಗಳು