ಮೊಗಲ್ ಸಾಮ್ರಾಜ್ಯದ ಸ್ಥಾಪನೆ ಮತ್ತು ಬಾಬರ್

ಮೊಗಲ್ ಸಾಮ್ರಾಜ್ಯದ ಸ್ಥಾಪನೆ ಮತ್ತು ಬಾಬರ್

ಭಾರತದಲ್ಲಿ ಮೊಗಲ್ ಸಾಮ್ರಾಜ್ಯದ ಸ್ಥಾಪಕನಾದ ಬಾಬರ್‌ನು ಆ ಮೊಗಲ್ ಸಾಮ್ರಾಜ್ಯಕ್ಕೆ ಭದ್ರವಾದ ಮತ್ತು ಶಾಶ್ವತವಾದ ಬುನಾದಿಯನ್ನು ಹಾಕಿದ ಕೀರ್ತಿಗೆ ಪಾತ್ರನಾಗಿದ್ದಾನೆ. ಅವನು ಮೊಗಲ್ ಸಾಮ್ರಾಜ್ಯದ ಸ್ಥಾಪನೆಗೆ ಮಾಡಿದ ಮಹತ್ ಸಾಧನೆಗಳು ಚಿರಸ್ಮರಣೀಯವಾಗಿವೆ.

ಬಾಬರನು ತಂದೆಯ ಕಡೆಯಿಂದ ಭಾರತದ ಮೇಲೆ ಕ್ರೂರ ಧಾಳಿಯನ್ನು ನಡೆಸಿದ ತೈಮೂರನ ಐದನೆಯ ತಲೆಮಾರಿನವನು, ತಾಯಿ ಕಡೆಯಿಂದ ಮಹಾನ್ ಸಾಮ್ರಾಜ್ಯ ಸ್ಥಾಪಕವಾದ ಚಂಗೀಸ್ ಖಾನನ ಐದನೇ ವಂಶಸ್ಥ, ಈ ಎರಡೂ ವಂಶಸ್ಥರ ಗುಣಗಳು ಬಾಬರನಲ್ಲಿದ್ದವು.

ಬಾಬರನ ಪ್ರಾರಂಭದ ಜೀವನ : ಬಾಬರ್ ಕ್ರಿ.ಶ. 1483 ಫೆಬ್ರವರಿ 14ರಂದು ಫರಘಾನದಲ್ಲಿ ಜನಿಸಿದನು. ಈತನ ತಂದೆ ಉಮರ್‌ ಷೇಖ್ ಮಿರ್ಜಾ. ತಾಯಿ ಕುತ್ತುಗ್ ನಿಗ್ ಖನುಂ, ಬಾಬರ್‌ನ ತಂದೆಯು ಟ್ರಾನ್ಸ್-ಆಕ್ಸಿಯಾನದಲ್ಲಿನ ಫ‌ರ್ ಘಾನ ಎಂಬ ಸಣ್ಣ ರಾಜ್ಯದ ಅರಸನಾಗಿದ್ದನು. ಕ್ರಿ.ಶ. 1494ರಲ್ಲಿ ಬಾಬರ್‌ನ ತಂದೆ ಮರಣ ಹೊಂದಿದಾಗ, ಆಗ ಇನ್ನೂ ಹನ್ನೊಂದು ವರ್ಷದ ಬಾಲಕನಾಗಿದ್ದ ಬಾಬರ್ ಫರ್ಫಾನದ ಸಿಂಹಾಸನವನ್ನೇರಿದನು. ತದನಂತರ ಸಮರ್ ಖಂಡವನ್ನು ಪ್ರಬಲ ಹೋರಾಟ ನಡೆಸಿ ವಶಪಡಿಸಿಕೊಂಡನು.

ಆದರೆ ಈ ಮಧ್ಯೆ ಅನಾರೋಗ್ಯದಿಂದ ಹಾಸಿಗೆ ಹಿಡಿದ ಬಾಬರ್‌ನು ಸತ್ತನೆಂದು ಸುಳ್ಳುಸುದ್ದಿಯನ್ನು ಬಾಬರನ ಸಂಬಂಧಿಕರು ಹಾಗೂ ಮಂತ್ರಿಗಳು ಫರ್ಘಾನದಲ್ಲಿ ಹರಡಿ, ಬಾಬರನ ಸಹೋದರನಾದ ಜಹಾಂಗೀರನನ್ನು ಅಧಿಕಾರಕ್ಕೆ ತಂದರು. ಕಾಯಿಲೆಯಿಂದ ಚೇತರಿಸಿಕೊಂಡು ಬಾಬ‌ನನು ಫರ್‌ ಘಾನವನ್ನು ಪುನಃ ವಶಪಡಿಸಿಕೊಳ್ಳಲು ಮಾಡಿದ ಯತ್ನ ವಿಫಲವಾಯಿತು. ಬಾಬರ್‌ನು ಮರಳಿ ಸಮರ್ ಖಂಡಕ್ಕೆ ತೆರಳುವಷ್ಟರಲ್ಲಿ ಆ ನಗರವೂ ಸಹ ಆತನ ಹತೋಟಿಯಿಂದ ತಪ್ಪಿ ಹೋಗಿತ್ತು.

ಫರ್‌ಫಾನ ಮತ್ತು ಸಮರ್ ಖಂಡಗಳನ್ನು ಕಳೆದುಕೊಂಡು ರಾಜಭ್ರಷ್ಟನಾದ ಬಾಬರ್‌ನು ಅಲೆಮಾರಿ ಜೀವನದ ಕಷ್ಟನಷ್ಟಗಳನ್ನು ಅನುಭವಿಸಿ, ಆ ಕಷ್ಟನಷ್ಟಗಳ ಶಾಲೆಯಲ್ಲಿ ತರಬೇತಿ ಹೊಂದಿ, ತನ್ನ ಮುಂದಿನ ಜೀವನವನ್ನು ಉಜ್ವಲಗೊಳಿಸುವಲ್ಲಿ ಯಶಸ್ವಿಯಾದನು. ಕ್ರಿ.ಶ. 1504 ರಲ್ಲಿ ಬಾಬರ್‌ನು ಕಾಬೂಲನ್ನು ಜಯಿಸಿಕೊಂಡ ಪರಿಣಾಮವಾಗಿ ಈತನ ಅಲೆಮಾರಿ ಜೀವನ ಅಂತ್ಯಗೊಂಡಿತು. ಕ್ರಿ.ಶ. 1507ರಲ್ಲಿ ಪಾದಶಹ (ಸಾಮ್ರಾಟ) ಎಂಬ ಬಿರುದನ್ನು ಧರಿಸಿದನು. ಕ್ರಿ.ಶ. 1508ರಲ್ಲಿ ಬಾಬರ್‌ನ ಹಿರಿಯ ಪುತ್ರ ಹುಮಾಯೂನ್ ಜನಿಸಿದನು.

ಭಾರತದಲ್ಲಿ ಬಾಬರನ ಆಕ್ರಮಣ : ಭಾರತದಲ್ಲಿನ ಆಗಾಧ ಸಂಪತ್ತು ಬಾಬರನ ಧಾಳಿಯ ಆಸೆಯನ್ನು ಕೆರಳಿಸಿತು. ಕ್ರಿ.ಶ. 1505 ರಲ್ಲಿ ಬಾಬರನು ಸಿಂಧೂ ನದಿಯವರೆಗಿನ ಭಾರತದ ಗಡಿ ಪ್ರದೇಶದಲ್ಲಿ ಆಕ್ರಮಣವೆಸಗಿದನು. ಕ್ರಿ.ಶ.1519 ರಲ್ಲಿ ಸಿಂಧೂನದಿಯನ್ನು ದಾಟಿ, ಪಂಜಾಬಿನ ವಾಯುವ್ಯ ಭಾಗವನ್ನು ಆಕ್ರಮಿಸಿದನು.

ಕ್ರಿ.ಶ. 1524 ರಲ್ಲಿ ಬಾಬರನಿಗೆ ಒಂದು ಒಳ್ಳೆಯ ಅವಕಾಶ ಒದಗಿತು. ಪಂಜಾಬಿನ ದೌಲತ್ ಖಾನ್ ಮತ್ತು ಇಬ್ರಾಹಿಂಲೋದಿಯ ಚಿಕ್ಕಪ್ಪನಾದ ಅಲಂಖಾನ್ ಇವರು ಭಾರತದ ಮೇಲೆ ದಾಳಿಯಿಡುವಂತೆ ಬಾಬರನನ್ನು ಆಮಂತ್ರಿಸಿದರು. ಬಾಬರನು ಕ್ರಿ.ಶ. 1524 ರಲ್ಲಿ ಪಂಜಾಬನ್ನು ಪ್ರವೇಶಿಸಿ ಲಾಹೋರನ್ನು ಆಕ್ರಮಿಸಿದನು. ಹಿಂದೂಸ್ಥಾನದಲ್ಲಿ ಶಾಶ್ವತ ರಾಜ್ಯ ಸ್ಥಾಪನೆಯ ಗುರಿಹೊಂದಿರುವುದನ್ನು ಕಂಡು ದೌಲತ್ ಖಾನ್ ಮತ್ತು ಅಲಂಖಾನರು ಬಾಬರನ ವಿರೋಧಿಗಳಾದರು. ಬಾಬರನು ಕಾಬೂಲಿಗೆ ಹಿಂತಿರುಗಿ ತನ್ನ ಸೈನಿಕ ಬಲವನ್ನು ಹೆಚ್ಚಿಸಿಕೊಂಡನು. ಕ್ರಿ.ಶ. 1525 ರಲ್ಲಿ ಬಾಬರನು ಪಂಜಾಬನ್ನು ಆಕ್ರಮಿಸಿ ದೌಲತ್ ಖಾನನ ಶರಣಾಗತಿಯನ್ನು ಪಡೆದನು. ಅನಂತರ ಇಬ್ರಾಹಿಂಲೋದಿಯನ್ನು ಎದುರಿಸಲು ಪಂಜಾಬಿನಿಂದ ಪಾಣೀಪತ್ ರಣಾಂಗಣಕ್ಕೆ ಸೈನ್ಯಸಮೇತ ಸಾಗಿದನು.

ಪಾಣಿಪತ್‌ ಕದನ (1526 ಏಪ್ರಿಲ್‌ 21)  : ಕ್ರಿ.ಶ. 1526 ಏಪ್ರಿಲ್‌ 21 ರಂದು ಬಾಬರ್‌ ಮತ್ತು ದೆಹಲಿಯ ಇಬ್ರಾಹಿಂಲೋದಿ ನಡುವೆ ನಡೆದ ಮೊದಲನೇ ಪಾಣೀಪತ್ ಕದನಕ್ಕೆ ಕೆಳಗಿನ ಕಾರಣಗಳಿವೆ.

  1. ಬಾಬರನು ಯುದ್ಧಪ್ರಿಯ ಮತ್ತು ಮಹಾಪರಾಕ್ರಮಿಯಾಗಿದ್ದನು. ಕಾಬೂಲಿನ ದೊರೆಯಾಗಿ ಹಲವು ವರ್ಷಗಳ ಕಾಲ ಆಡಳಿತ ನಡೆಸಿದರು, ಅವನ ಮಹತ್ವಾಕಾಂಕ್ಷೆ ಭಾರತದಲ್ಲಿ ಮೊಗಲ್ ಸಾಮ್ರಾಜ್ಯವನ್ನು ಸ್ಥಾಪಿಸುವುದಾಗಿತ್ತು.
  2. ಭಾರತದ ಪ್ರಸಿದ್ದಿ ಮತ್ತು ಉತ್ಕೃಷ್ಟತೆ ಬಾಬರನಿಗೆ ಮೊಘಲ್ ಸಾಮ್ರಾಜ್ಯ ಸ್ಥಾಪಿಸಲು ಪೋಷಕವಾದವು. ಇವುಗಳು ಅವನ ಹೆಬ್ಬಯಕೆಗೆ ಪ್ರೇರಕ ಶಕ್ತಿಗಳಾಗಿ ಪರಿಣಮಿಸಿದವು.
  3. ಕ್ರಿ.ಶ. 1526ರ ಮೊದಲನೇ ಪಾಣಿಪತ್ ಕದನಕ್ಕಿಂತ ಪೂರ್ವದಲ್ಲಿ ಬಾಬರನು ಮಾಡಿದ ಕ್ರಿ.ಶ. 1519, ಕ್ರಿ.ಶ. 1520, ಕ್ರಿ.ಶ. 1524ರ ದಂಡಯಾತ್ರೆಗಳು ಭಾರತದ ಕಡೆ ಸಾಗಲು ದಾರಿಯನ್ನು ಸುಗಮಗೊಳಿಸಿದವು.
  4. ಬಾಬರನ ಕಾಲಕ್ಕೆ ಉತ್ತರ ಭಾರತದ ರಾಜಕೀಯ ಪರಿಸ್ಥಿತಿಯು ತುಂಬಾ ಹದಗೆಟ್ಟಿತ್ತು. ಮಾಳವ, ಗುಜರಾತ್, ರಜಪೂತ ಮೊದಲಾದ ರಾಜರುಗಳಲ್ಲಿ ಆಗಾಗ್ಗೆ ಯುದ್ಧಗಳಾಗುತ್ತಿದ್ದವು. ಉತ್ತರ ಭಾರತದಲ್ಲಿ ರಾಜಕೀಯ ಐಕ್ಯಮತ್ಯವಿಲ್ಲದ್ದು ಭಾರತದ ಮೇಲೆ ದಾಳಿ ಮಾಡಲು ಮತ್ತು ಭಾರತದಲ್ಲಿ ಶಾಶ್ವತವಾದ ಮೊಗಲ್ ಸಾಮ್ರಾಜ್ಯವನ್ನು ಸ್ಥಾಪಿಸಲು ಅವಕಾಶ ಒದಗಿದಂತಾಯಿತು.
  5. ಕ್ರಿ.ಶ. 1526ರ ಹೊತ್ತಿಗೆ ದೆಹಲಿ ಸಾಮ್ರಾಜ್ಯದ ರಾಜಕೀಯ ಪರಿಸ್ಥಿತಿಯು ಇನ್ನಷ್ಟು ಹದಗೆಟ್ಟಿತ್ತು. ಇಬ್ರಾಹಿಂಲೋದಿಯ ಅಸಮರ್ಪಕ ಆಳ್ವಿಕೆಯಿಂದ ಹೆಚ್ಚಾದ ವಿರೋಧಿಗಳು ಅವನ ವಿರುದ್ಧ ಬಂಡಾಯವೇಳುವಷ್ಟು ಪ್ರಬಲರಾದರು. ಈ ಪರಿಸ್ಥಿತಿಯನ್ನೆಲ್ಲ ವೀಕ್ಷಿಸಿ, ನಿರೀಕ್ಷಿಸಿ, ವಿವೇಚಿಸಿದ ಬಾಬರ್ ಭಾರತದ ಮೇಲೆ ದಂಡೆತ್ತಿ ಬರುವ ನಿರ್ಧಾರವನ್ನು ತೆಗೆದುಕೊಂಡನು.
  6. ಕ್ರಿ.ಶ.1524 ರಲ್ಲಿ ಪಂಜಾಬಿನ ದೌಲತ್ ಖಾನ್ ಮತ್ತು ದೆಹಲಿಯ ಇಬ್ರಾಹಿಂಲೋದಿಯ ಚಿಕ್ಕಪ್ಪನಾದ ಅಲಂಖಾನ್-ಇವರು ಭಾರತದ ಮೇಲೆ ದಾಳಿಮಾಡುವಂತೆ ಬಾಬರ್‌ನಿಗೆ ಆಹ್ವಾನ ನೀಡಿದರು. ಈ ನಂತರ ಪಂಜಾಬನ್ನೇ ಆಕ್ರಮಿಸಿ ದೌಲತ್‌ ಖಾನನ ಶರಣಾಗತಿಯನ್ನು ಪಡೆದನು. ಆನಂತರ ಇಬ್ರಾಹಿಂಲೋದಿಯನ್ನು ಎದುರಿಸಲು ಪಂಜಾಬಿನಿಂದ ಪಾಣಿಪತ್ ರಣಾಂಗಣಕ್ಕೆ ಸೈನ್ಯಸಮೇತ ಹೊರಟನು.

ಪ್ರಧಾನ ಘಟನೆಗಳು : ಬಾಬರನ ಸೈನ್ಯವು ದೆಹಲಿಯತ್ತ ಮುನ್ನುಗ್ಗಿದಂತೆ, ಇಬ್ರಾಹಿಂಲೂದಿಯು ಯುದ್ಧಕ್ಕೆ ಸಿದ್ಧತೆ ಮಾಡಿಕೊಂಡು ಮುನ್ನಡೆದನು. ಬಾಬರನು ತನ್ನ ಜೀವನವೃತ್ತಾಂತದಲ್ಲಿ ತಾನು 12000 ಸೈನಿಕರಿಂದ ಪಾಣಿಪತ್ ಯುದ್ಧರಂಗದಲ್ಲಿ ಇಬ್ರಾಹಿಂ ಲೂದಿಯ ಒಂದು ಲಕ್ಷ ಸೈನಿಕರಿಂದ ಮತ್ತು ಒಂದು ಸಾವಿರ ಆನೆಗಳಿಂದ ಕೂಡಿದ್ದ ಸೈನ್ಯವನ್ನು ಸೋಲಿಸಿದನೆಂದು ಹೇಳಿಕೊಂಡಿದ್ದಾನೆ. ಡಾ.ಎಲ್.ಶ್ರೀವಾಸ್ತವ ಅವರು ಬಾಬರನ ಸೈನ್ಯ ಸುಮಾರು 25000, ಇದ್ದಿರಬಹುದೆಂದು ಊಹಿಸಿದ್ದಾರೆ. ಬಾಬರನ ಮತ್ತು ಇಬ್ರಾಹಿಂಲೂದಿಯ ಸೈನ್ಯಗಳು ಐತಿಹಾಸಿಕ ಯುದ್ಧಭೂಮಿಯಾದ ಪಾಣಿಪತ್‌ನಲ್ಲಿ ಕ್ರಿ.ಶ. 1526ರ ಏ. 21 ರಂದು ಸಂಧಿಸಿದವು. ಈ ಎರಡು ಸೇನೆಗಳ ನಡುವೆ ನಡೆದ ಕದನವೇ ಮೊದಲನೇ ಪಾಣಿಪತ್ ಕದನ. ಇದೊಂದು ಭಾರತದ ಇತಿಹಾಸದ ಐತಿಹಾಸಿಕ ಮತ್ತು ನಿರ್ಣಾಯಕ ಕದನ.

ಈ ಕದನ ಬೆಳಗಿನ 9 ರಿಂದ ಮಧ್ಯಾಹ್ನದವರೆಗೆ ನಡೆಯಿತು. ಬಾಬರನು ತನ್ನ ಅಪ್ರತಿಮ ಧೈರ್ಯ, ಶೌರ್ಯ, ಯುದ್ಧ ನೈಪುಣ್ಯ, ಉತ್ತಮ ದಂಡನಾಯಕತ್ವ, ಫಿರಂಗಿದಳದ ಚಾಣಾಕ್ಷ ಬಳಕೆಯಿಂದಾಗಿ ಲೂಧಿಸುಲ್ತಾನನ ವಿರುದ್ಧ ನಿರ್ಣಾಯಕ ವಿಜಯ ಪಡೆದನು. ಇಬ್ರಾಹಿಂಲೋದಿಯು ವೀರಾವೇಶದಿಂದ ಹೋರಾಡಿ ಯುದ್ಧರಂಗದಲ್ಲಿಯೇ ಮಡಿದನು. ಈತನೊಂದಿಗೆ 15 ರಿಂದ 16 ಸಾವಿರ ಸೈನಿಕರು ಸಾವನ್ನಪ್ಪಿದರು. ಬಾಬರನಿಗೆ ವಿಜಯಲಕ್ಷ್ಮಿ ಒಲಿದಳು. ಅಸಂಖ್ಯಾತ ಆನೆಗಳು ಮತ್ತು ಅಪಾರ ಸಂಪತ್ತಿನ ಜೊತೆಗೆ ದೆಹಲಿ ಮತ್ತು ಆಗ್ರಾ ನಗರಗಳು ಬಾಬರನ ವಶವಾದವು. ಈ ಕದನ ಭಾರತದ ಇತಿಹಾಸದಲ್ಲಿ ನಿರ್ಣಾಯಕ ಘಟನೆಯಾಯಿತು.

ಪರಿಣಾಮಗಳು : ಪ್ರಥಮ ಪಾಣೀಪತ್ ಕದನವು ಭಾರತದ ಇತಿಹಾಸದಲ್ಲಿ ಸಂಭವಿಸಿದ ಕದನಗಳಲ್ಲೇ ಅತ್ಯಂತ ಪ್ರಮುಖವಾದುದು. ಇದರ ಪರಿಣಾಮಗಳು ಈ ಕೆಳಗಿನಂತಿವೆ.

  1. ಇಬ್ರಾಹಿಲೋದಿ ಮತ್ತು ಬಾಬರನ ನಿರ್ಣಯಕ ಯುದ್ಧವಾದ ಈ ಕದನದಲ್ಲಿ ಲೋದಿ ಸೈನಿಕ ಶಕ್ತಿಯು ಸಂಪೂರ್ಣವಾಗಿ ನಾಶವಾಯಿತಲ್ಲದೆ ದೆಹಲಿ ಸಾಮ್ರಾಜ್ಯ ಹೇಳ ಹೆಸರಿಲ್ಲದಂತೆ ನಾಶವಾಯಿತು.
  2. ದೆಹಲಿ ದೊರೆ ಇಬ್ರಾಹಿಂಲೋದಿ ರಣರಂಗದಲ್ಲಿ ಸಾವನ್ನಪ್ಪಿದನು.
  3. ದೆಹಲಿ ಸಾಮ್ರಾಜ್ಯವು ಮೊಗಲ್ ದೊರೆ ಬಾಬರನ ವಶವಾಯಿತು.
  4. ಯುದ್ಧಾನಂತರ ಬಾಬರನ ಕೈಗೆ ಅಪಾರ ಸಂಪತ್ತು ದೊರಕಿತು. ಈ ಬಹುದೊಡ್ಡ ಪ್ರಮಾಣದ ಸಂಪತ್ತನ್ನು ಬಾಬರನು ತನ್ನ ಸಂಬಂಧಿಕರಿಗೆ ಮತ್ತು ಅಧಿಕಾರಿಗಳಿಗೆ ಹಂಚಿದನು.
  5. ಬಾಬರನು ಪವಿತ್ರ ಸ್ಥಳಗಳಾದ ಮೆಕ್ಕಾ ಮತ್ತು ಮದೀನಾಗಳಿಗೂ ಕಾಣಿಕೆ ಸಲ್ಲಿಸಿದನು.
  6. ಒಟ್ಟಿನಲ್ಲಿ ಈ ಕದನ ದೆಹಲಿ ಸುಲ್ತಾನರ ಸಾಮ್ರಾಜ್ಯವನ್ನು ನಾಶಗೊಳಿಸಿ, ಮೊಗಲ್ ಸಾಮ್ರಾಜ್ಯದ ಅಡಿಗಲ್ಲನ್ನು ಹಾಕಿತು.            ಬಾಬರನ ವಿಜಯಕ್ಕೆ ಕಾರಣಗಳು
    1. ಉನ್ನತ ಮಟ್ಟದ ಸೇನಾಧಿಪತ್ಯ ಮತ್ತು ಹೆಚ್ಚಿನ ಯುದ್ಧ ತಂತ್ರ,
    2. ತರಬೇತಿ ಹೊಂದಿದ ಮತ್ತು ಶಿಸ್ತಿನ ಮೊಗಲ್ ಸೈನ್ಯ.
    3. ಬಲಾಡ್ಯವಾದ ಫಿರಂಗಿ ಪಡೆ
    4. ಭಾರತೀಯರಲ್ಲಿದ್ದ ಅನೈಕ್ಯತೆ
    5. ಇಬ್ರಾಹಿಂ ಲೂದಿಯ ಅಸಾಮರ್ಥ್ಯತೆ ಮತ್ತು ಆತನ ಸೈನ್ಯದಲ್ಲಿದ್ದ ಅನೈಕ್ಯತೆ.

ಕಣ್ವ ಕಾಳಗ (1527 ಮಾರ್ಚ್ 16)

ಪಾಣಿಪತ್ ಕದನದ ವಿಜಯದಿಂದ ಬಾಬರ್ ಉತ್ತರ ಭಾರತದಲ್ಲಿ ಸಂಪೂರ್ಣವಾಗಿ ತನ್ನ ಯಜಮಾನಿಕೆಯನ್ನು ಸ್ಥಾಪಿಸಲು ಸಾಧ್ಯವಾಗಲಿಲ್ಲ. ಈ ಕದನಕ್ಕಿಂತಲೂ ಭೀಕರವಾದ ಮತ್ತೊಂದು ಕದನದಲ್ಲಿ ಅವನು ತೊಡಗಬೇಕಾಯಿತು. ಇದೇ ಕಣ್ವ ಕದನ.

ಬಾಬರ್ ಭಾರತದಲ್ಲಿ ಇಬ್ರಾಹಿಂ ಲೂದಿಗಿಂತ ಪ್ರಬಲ ಶತ್ರುಗಳನ್ನು ಎದುರಿಸಬೇಕಾಯಿತು. ಇಂತಹ ಶತ್ರುಗಳಲ್ಲಿ ಮೇವಾಡದ ರಾಣಾ ಸಂಗ್ರಾಮ ಸಿಂಹ ಅಥವಾ ರಾಣಾ ಸಂಗ ಪ್ರಮುಖವಾಗಿದ್ದನು. ರಾಣಾ ಸಂಗನನ್ನು ರಜಪೂತ ಮುಖಂಡರೆಲ್ಲಾ ಒಪ್ಪಿಕೊಂಡಿದ್ದರು. ಈತ ಮಹತ್ವಾಕಾಂಕ್ಷಿಯಾಗಿದ್ದು, ದೆಹಲಿಯ ಸಿಂಹಾಸನದ ಮೇಲೆ ಕಣ್ಣಿಟ್ಟಿದ್ದನು.

ತೈಮೂರನಂತೆ ಬಾಬರನೂ ಸಹ ಭಾರತದ ಸಂಪತ್ತನ್ನು ಲೂಟಿ ಮಾಡಿ ಹಿಂದಿರುಗುವನೆಂದು ಭಾವಿಸಿದ್ದ. ಆದರೆ ಬಾಬರನು ದೆಹಲಿಯಲ್ಲಿ ನೆಲೆಸಲು ನಿರ್ಧರಿಸಿದ್ದರಿಂದ ರಾಣಾನು ಆತನ ವಿರುದ್ಧ ಹೋರಾಟಕ್ಕೆ ನಿಂತ. ಮೊಗಲರ ವಿರುದ್ಧ ಹೋರಾಡಲು ಹಲವು ರಜಪೂತ ನಾಯಕರು ರಾಣಾ ಸಂಗನ ನೇತೃತ್ವದಲ್ಲಿ ಒಂದಾದರು. ಇಬ್ರಾಹಿಂ ಲೂದಿಯ ಸಹೋದರ ಮಹಮದ್ ಲೂದಿ ಮತ್ತು ಹಸನ್ ಖಾನ್ ಮೇವಾತಿಯೂ ಸಹ ರಾಣಾನೊಂದಿಗೆ ಕೈಜೋಡಿಸಿದ. ರಾಣಾನು ಬಾಬರನಂತಹ ಬಲಿಷ್ಠನನ್ನು ಹೊರ ಹಾಕಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡ. ರಾಣಾನ ಸೈನಿಕರು ಯುದ್ಧರಂಗದಲ್ಲಿ ಎಂತಹ ಪ್ರಬಲ ಶತ್ರುಗಳನ್ನಾದರು ಎದುರಿಸಿ ಹೋರಾಡಿ ದೇಶದ ಗೌರವ ಮತ್ತು ಆತ್ಮಗೌರವಗಳನ್ನು ಕಾಪಾಡಿಕೊಳ್ಳುವ ಧೃಡ ನಿರ್ಧಾರದಿಂದ ಬಾಬರನ ವಿರುದ್ಧ ದಂಡೆತ್ತಿ ನಡೆದರು. ರಾಣಾಸಂಗನು ಅಜೇಯನೆಂಬ ಖ್ಯಾತಿಯನ್ನು ಗಳಿಸಿದ್ದನು. ತತ್ಪರಿಣಾಮವಾಗಿ ಬಾಬರನ ಸೈನಿಕರು ಭಯಭೀತರಾದರು. ಕಾಬೂಲ್ ನಿಂದ ಬಂದ ಹೆಚ್ಚಿನ ಸೇನೆಯಿಂದ ಬಾಬರನ ಸೈನಿಕರಲ್ಲಿ ಉತ್ಸಾಹ ಉಂಟಾಯಿತು. ಆದರೆ ಜ್ಯೋತಿಷ್ಯಕಾರರ ಮಾತಿನಂತೆ ಬಾಬರನಿಗೆ ಸೋಲುಂಟಾಗುವುದೆಂಬ ವಾರ್ತೆಹಬ್ಬಿತು. ತತ್ಪರಿಣಾಮವಾಗಿ ಬಾಬರನ ಸೈನಿಕರು ಮತ್ತಷ್ಟು ಭಯಭ್ರಾಂತಿಗೆ ಗುರಿಯಾದರು. ಬಾಬರ್ ಮಾತ್ರ ಗಾಬರಿಯಾಗದೆ ಸನ್ನಿವೇಶವನ್ನು ಆಸಾಧಾರಣ ಮಾನಸಿಕ ತಾಳ್ಮೆಯಿಂದ ಎದುರಿಸಿದ. ‘ಅಲ್ಲಾ’ ನ ಹೆಸರಿನಲ್ಲಿ ತನ್ನ ಸೈನಿಕರಲ್ಲಿ ಮಾನಸಿಕ ಸ್ಥೆರ್ಯವನ್ನು ತುಂಬಿದ.

ನಾಟಕೀಯವಾಗಿ ಪಾನಪಾತ್ರೆಗಳನ್ನು ಒಡೆದು ಹಾಕಿ, ತನ್ನಲ್ಲಿದ್ದ ಮದ್ಯವನ್ನೆಲ್ಲಾ ಚೆಲ್ಲಿದನು. ತನ್ನ ಹಿಂದಿನ ತಪ್ಪುಗಳಿಗೆಲ್ಲಾ ಪಶ್ಚಾತ್ತಾಪ ವ್ಯಕ್ತಪಡಿಸಿ ತಾನು ಮುಂದೆಂದೂ ಮದ್ಯಪಾನ ಮಾಡುವುದಿಲ್ಲವೆಂದು ಪ್ರತಿಜ್ಞೆ ಮಾಡಿದನು. ಕುಡಿಯುವ ಚಿನ್ನದ ಮತ್ತು ಬೆಳ್ಳಿಯ ಪಾತ್ರೆಗಳನ್ನು ಚೂರುಮಾಡಿ ಬಡವರಿಗೆ ಮತ್ತು ಮುಸ್ಲಿಂ ಸಂತರಿಗೆ ಹಂಚಿದನು, ರಾಣಾ ಮತ್ತು ರಜಪೂತರ ಮೇಲೆ ಜಿಹಾದ್ ಅಥವಾ ಧರ್ಮಯುದ್ಧ ಮಾಡುವುದಾಗಿ ತಿಳಿಸಿದೆ.

ಮೊಗಲರು ಮತ್ತು ರಜಪೂತರ ನಡುವೆ ಭೀಕರ ಹೋರಾಟ

ಕ್ರಿ.ಶ. 1527ರ ಮಾ.16 ರಂದು ಕಣ್ಣ ಎಂಬಲ್ಲಿ ಸಂಭವಿಸಿತು. ಬಾಬರನು ಪಾಣಿಪತ್ ಕದನದಲ್ಲಿ ಉಪಯೋಗಿಸಿದ ಯುದ್ಧ ತಂತ್ರಗಳನ್ನೇ ಈ ಕದನದಲ್ಲಿಯೂ ಅನುಸರಿಸಿದನು. ರಜಪೂತರು ರಾಣಾಸಂಗನ ನಾಯಕತ್ವದಲ್ಲಿ ಜೀವದ ಹಂಗನ್ನು ತೊರೆದು ವೀರಾವೇಶದಿಂದ ಹೋರಾಡಿದರು. ಆದರೆ ಬಾಬರನು ತನ್ನ ಉತ್ತಮ ದಂಡನಾಯಕತ್ವ, ಸೈನಿಕ ಚಾಕಚಕ್ಯತೆ ಮತ್ತು ಪ್ರಬಲ ಫಿರಂಗಿ ಪಡೆಯ ನೆರವಿನಿಂದ ಜಯಗಳಿಸುವಲ್ಲಿ ಯಶಸ್ವಿಯಾದನು. ರಜಪೂತರಿಗೆ ಸಂಪೂರ್ಣ ಸೋಲುಂಟಾಯಿತು. ತೀವ್ರವಾಗಿ ಗಾಯಗೊಂಡಿದ್ದ ರಾಣಾಸಂಗನನ್ನು ಯುದ್ಧ ರಂಗದಿಂದ, ಆತನ ಸೈನಿಕರು ಸಾಗಿಸಿದರು. ಹತ್ತು ಗಂಟೆಗಳ ಕಾಲ ಜರುಗಿದ ಕಣ್ವ ಕದನದಲ್ಲಿ ಜಯಶೀಲನಾದ ಬಾಬರ್ ರಾಣಾನ ಶಿಬಿರವನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡನು.

ಬಾಬರನ ಇತರ ಆಕ್ರಮಣಗಳು

ಚಾಂದೇರಿ ಪತನ : ಕ್ರಿ.ಶ. 1528ರ ಜನವರಿ ತಿಂಗಳಲ್ಲಿ ಬಾಬರನು ಚಾಂದೇರಿ ಕೋಟೆಯನ್ನು ಮುತ್ತಿದನು. ಚಾಂದೇರಿ ರಾಜ್ಯ ಮೇದಿನರಾಯ್ ಎಂಬ ಸುಪ್ರಸಿದ್ಧ ರಜಪೂತ ದೊರೆಯ ಅಧಿಪತ್ಯಕ್ಕೆ ಒಳಪಟ್ಟಿತ್ತು. ಬಾಬರನು ಚಾಂದೇರಿ ಕೋಟೆಯನ್ನು ಮುತ್ತಿಗೆ ಹಾಕಿದ್ದನ್ನು ಕಂಡು, ಸೋಲಿನಿಂದ ಪಾರಾಗುವುದು ಅಸಾಧ್ಯವೆಂದು ಅರಿತ ರಜಪೂತ ಮಹಿಳೆಯರು ಚೌಹಾರ್ ಪದ್ಧತಿಯನ್ನು ಅನುಸರಿಸಿ ಅಗ್ನಿಗೆ ಆಹುತಿಯಾದರು. ಕೋಟೆಯಲ್ಲಿದ್ದ ಎಲ್ಲ ಸೈನಿಕರು ಹತರಾದರು. ಕ್ರಿ.ಶ. 1528ರ ಜನವರಿ 29ರಂದು ಬಾಬರನು ಚಾಂದೇರಿ ಕೋಟೆಯನ್ನು ತನ್ನ ಹಿಡಿತಕ್ಕೆ ಒಳಪಡಿಸಿಕೊಂಡನು. ಅಲ್ಲದೆ ಬಾಬರನಿಗೆ ಇಲ್ಲಿ ಆಗಾಧ ಪ್ರಮಾಣದ ಸಂಪತ್ತು ಕೈಸೇರಿತು.

ಗೋಗ್ರ ಕದನ : ಇಬ್ರಾಹಿಂ ಲೋದಿಯ ಸಹೋದರನಾದ ಮಹಮದ್ ಲೋದಿ ಬಿಹಾರದಲ್ಲಿ ತನ್ನ ಪ್ರಭುತ್ವವನ್ನು ಸ್ಥಾಪಿಸಿದ್ದಲ್ಲದೆ ಒಂದು ಲಕ್ಷ ಸೈನ್ಯವನ್ನು ಸಂಘಟಿಸಿದ್ದನು. ಬಂಗಾಳ ಮತ್ತು ಬಿಹಾರದ ಆಫ್‌ಘಾನರ ತೊಂದರೆಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಅವರ ಮೇಲೆ ಯುದ್ಧಮಾಡುವುದೊಂದೇ ಉತ್ತಮದಾರಿಯೆಂದು ಬಾಬರ್ ನಿರ್ಧರಿಸಿದ. ಬಾಬರ್ ಕ್ರಿ.ಶ. 1529ರಲ್ಲಿ ಆಗ್ರಾವನ್ನು ಬಿಟ್ಟು ಆಫ್‌ಘನ್ನರನ್ನು ಎದುರಿಸಲು ಹೊರಟ ಕ್ರಿ.ಶ. 1529 ಮೇ 6ರಂದು ಗಂಗಾ ಮತ್ತು ಅದರ ಉಪನದಿಯಾದ ಗೋಗ್ರಾ ಇವುಗಳ ಸಂಗಮ ಸ್ಥಳದಲ್ಲಿ (ಪಾಟ್ನಾದ ಮೇಲ್ಗಡೆ) ಬಾಬರ್ ಮತ್ತು ಅಫಘಾನ್ನರ ನಡುವೆ ಕಾಳಗ ಸಂಭವಿಸಿತು. ಇದರಲ್ಲಿ ಅಫಘಾನ್ನರು ಸಂಪೂರ್ಣವಾಗಿ ಅಪಜಯ ಹೊಂದಿದರು. ಲೋದಿಗಳ ಆಸೆ ಕನಸಾಯಿತು. ಹಲವು ಪ್ರಮುಖ ಅಫಘಾನ ಸರದಾರರು ಬಾಬರನಿಗೆ ಶರಣಾದರು. ಈ ವಿಜಯದ ನಂತರ ಬಾಬನನು ಬಿಹಾರದ ಮೇಲೆ ತನ್ನ ಪ್ರಭುತ್ವ ಸ್ಥಾಪಿಸಿದನು. ಈ ರೀತಿ ಬಾಬರನು ಪಡೆದ ಎಲ್ಲಾ ವಿಜಯಗಳು ಆತನು ಭಾರತದಲ್ಲಿ ಮೊಗಲ್ ಸಂತತಿ ಮತ್ತು ಸಾಮ್ರಾಜ್ಯಗಳ ಸ್ಥಾಪನೆಗೆ ಅಡಿಪಾಯ ಹಾಕಿದವು.

ಬಾಬರನ ಅಂತಿಮ ದಿನಗಳು : ಬಾಬರ್ ತಾನು ಶ್ರಮಪಟ್ಟು ಸಾಧಿಸಿದ್ದ ವಿಜಯಗಳ ಪ್ರತಿಫಲವನ್ನು ಅನುಭವಿಸಲು ಬಹಳ ಕಾಲ ಜೀವಿಸಲಿಲ್ಲ. ಕ್ರಿ.ಶ. 1530 ಡಿ. 26 ರಂದು ಆಗ್ರಾದಲ್ಲಿ ಬಾಬರ್‌ನು ಮರಣಹೊಂದಿದನು. ಈತನ ಮರಣದ ಬಗ್ಗೆ ಹಲವು ಅಭಿಪ್ರಾಯಗಳಿವೆ. ಆದರೆ ಪ್ರೊ. ಶ್ರೀರಾಮ ಶರ್ಮರು ಬಾಬರನ ಮರಣದ ಬಗ್ಗೆ ಅಬುಲ್ ಫಜಲ್ ಕಟ್ಟಿರುವ ಕಾಲ್ಪನಿಕ ಕಥೆಯನ್ನು ನಂಬಲು ಯಾವುದೇ ಆಧಾರವಿಲ್ಲವೆಂದು ತಿಳಿಸಿದ್ದಾರೆ. ಬಾಬರನ ಮೃತದೇಹವನ್ನು ಪ್ರಾರಂಭದಲ್ಲಿ ಆಗ್ರಾದ ಆರಾಮಬಾಗ್‌ನಲ್ಲಿ ಸಮಾಧಿ ಮಾಡಿದರು. ತದನಂತರ ಅದನ್ನು ಕಾಬೂಲಿಗೆ ತರಲಾಯಿತು.

ಬಾಬರ್‌ನ ವ್ಯಕ್ತಿತ್ವ: ಬಾಬರ್‌ನು ಮಧ್ಯಕಾಲೀನ ವಿಷಿಯಾದ ಸರ್ವಶ್ರೇಷ್ಠ ದೊರೆಗಳಲ್ಲೊಬ್ಬನೆಂದು ಸಮಕಾಲೀನ ಹಾಗೂ ಆಧುನಿಕ ಇತಿಹಾಸಕಾರರೆಲ್ಲರೂ ಒಪ್ಪಿಕೊಂಡಿದ್ದಾರೆ. ಈತನ ಸಹೋದರ ಮಿರ್ಜಹೈದರನು ವಿವರಿಸುವಂತೆ “ಶೌರ್ಯ ಮತ್ತು ಮಾನವೀಯತೆಯೂ ಸೇರಿದಂತೆ ಹಲವಾರು ಸದ್ಗುಣಗಳು ಮತ್ತು ಶ್ರೇಷ್ಠತೆಗಳು ಇವನಲ್ಲಿದ್ದವು”, ಗುಲ್‌ಬದನ್ ಬೇಗಂ ತನ್ನ ‘ಹುಮಾಯೂನ್‌ ನಾಮ” ದಲ್ಲಿ ಇಂತಹ ಭಾವನೆಗಳನ್ನೆ ವ್ಯಕ್ತಪಡಿಸಿದ್ದಾಳೆ. ಡಾ|| ವಿ.ಎ. ಸ್ಮಿತ್ ಬಾಬರ್‌ನನ್ನು ಆ ಯುಗದ ಅತ್ಯಂತ ಶ್ರೇಷ್ಠ ರಾಜಕುಮಾರನಾಗಿದ್ದ ಎಂದಿದ್ದಾರೆ. ಹಾವೆಲ್ಲರ ಪ್ರಕಾರ ಈತ ಇಸ್ಲಾಮಿನ ಇತಿಹಾಸದ ಅತ್ಯಂತ ಆಕರ್ಷಕ ವ್ಯಕ್ತಿಗಳಲ್ಲಿ ಒಬ್ಬನು.

ಬಾಬರನಿಗೆ ಸಂಗೀತದಲ್ಲಿ ಸಾಕಷ್ಟು ತಿಳುವಳಿಕೆ ಇತ್ತು. ಯುದ್ಧ ಹಾಗೂ ರಾಜತಾಂತ್ರಿಕ ತಂತ್ರಗಳು ಪೂರ್ವನಿರ್ಧಾರಿತವಾಗಿದ್ದವು ಹಾಗೂ ಲೆಕ್ಕಾಚಾರದಿಂದ ಕೂಡಿದ್ದವು. ಅವನ ಆಕಾಲಿಕ ಸಾವಿನಿಂದಾಗಿ ಅವನ ಆಡಳಿತಾತ್ಮಕ ಅಂಶಗಳನ್ನು ತಿಳಿಯಲು ಸಾಧ್ಯವೇ ಇಲ್ಲ. ಪದ್ಯ ಮತ್ತು ಗದ್ಯ ರಚನೆಯಲ್ಲಿ ಅವನ ಅಸಾಧಾರಣ ಪ್ರತಿಭೆಯನ್ನು ಕಾಣಬಹುದು. ಅವನು ತನ್ನ ಅನುಭವಗಳನ್ನು ಮುಚ್ಚುಮರೆಯಿಲ್ಲದೆ ನಿರೂಪಿಸಿದ್ದಾನೆ. ತನ್ನ ದೌರ್ಬಲ್ಯಗಳನ್ನು ಮುಕ್ತವಾಗಿ ಹೇಳಿಕೊಂಡಿದ್ದಾನೆ. ಬಾಬರ್‌ನು ಪರ್ಶಿಯನ್, ಅರೇಬಿಕ್ ಮತ್ತು ತುರ್ಕಿಭಾಷೆಗಳಲ್ಲಿ ಅತ್ಯುತ್ತಮ ಬರಹಗಾರನಾಗಿದ್ದನು. ಇವನ ಆತ್ಮಚರಿತ್ರೆ ತುಜುಕ್-ಇ-ಬಾಬರೀ (ಬಾಬರ್ ನಾಮಾ) ಪ್ರಪಂಚದ ಆತ್ಮಚರಿತ್ರೆಯ ಸಾಹಿತ್ಯದಲ್ಲಿ ಮಹತ್ವಪೂರ್ಣ ಕೃತಿಯಾಗಿದೆ.

ಬಾಬರನಿಗೆ ಹುಮಾಯೂನ್, ಕಮ್ರಾನ್, ಹಿಂದಾಲ್ ಮತ್ತು ಆಸ್ಕರಿ ಎಂಬ ನಾಲ್ಕು ಗಂಡು ಮಕ್ಕಳಿದ್ದರು. ಬಾಬರನ ನಿಧನದ ಮೂರು ದಿನಗಳ ನಂತರ ಆತನ ಹಿರಿಯ ಪುತ್ರ ಹುಮಾಯೂನ್ ಮೊಗಲ್ ಪಟ್ಟವೇರಿದನು. ಆದರೆ ಇವನ ಚಾರಿತ್ರ್ಯದಲ್ಲಿನ ದೋಷಗಳೇ ಷೇರ್‌ಷಹನ ಏಳಿಗೆಗೆ ಕಾರಣವಾಯಿತು.

ರಜಪೂತರ ಮೂಲ

ರಜಪೂತರ ಮೂಲ

ಪರಿಚಯ:
ರಜಪೂತಗಳ ಮೂಲದ ಪ್ರಶ್ನೆ ಭಾರತೀಯ ಇತಿಹಾಸಲೇಖನದಲ್ಲಿ ದೀರ್ಘಕಾಲದಿಂದಲೂ ಚರ್ಚೆಗೆ ಒಳಗಾಗಿರುವ ಮಹತ್ವದ ವಿಷಯವಾಗಿದೆ. ಕೆಲ ಪಂಡಿತರು ರಾಜಪುತರಿಗೆ ವಿದೇಶೀ ಮೂಲವಿದೆ ಎಂದು ವಾದಿಸಿದರೆ, ಇನ್ನಿತರರು ಅವು ಸಂಪೂರ್ಣವಾಗಿ ಭಾರತೀಯ ಮೂಲದವರೇ ಎಂದು ಬಲವಾಗಿ ಪ್ರತಿಪಾದಿಸುತ್ತಾರೆ. ವಿಭಿನ್ನ ಸಾಕ್ಷ್ಯಗಳು ಮತ್ತು ವಿಧಾನಗಳನ್ನು ಆಧರಿಸಿದ ಈ ಪರಸ್ಪರ ವಿರೋಧಿ ಅಭಿಪ್ರಾಯಗಳು ಪಂಡಿತರ ನಡುವೆ ತೀವ್ರ ಚರ್ಚೆಗೆ ಕಾರಣವಾಗಿವೆ.

ರಜಪೂತ ಎಂಬ ಪದವನ್ನು ಪ್ರಪ್ರಥಮ ಬಾರಿಗೆ ಕ್ರಿ.ಶ.17ನೆಯ ಶತಮಾನದಲ್ಲಿ ಬಳಸಲಾಯಿತು. ರಜಪೂತರು ಯಾರು? ಅವರ ಮೂಲ ಎಲ್ಲಿಯದು? ಇವುಗಳಿಗೆ ಸಮರ್ಪಕವಾದ ಉತ್ತರಗಳು ದೊರೆತಿಲ್ಲ. ಇವರು ಕ್ಷತ್ರಿಯರ ಜೊತೆಗೆ ಯಾವ ಸಂಬಂಧವನ್ನು ಹೊಂದಿದ್ದರು ಎಂಬ ವಿಷಯವೂ ತಿಳಿಯದು. ಇದರಿಂದಾಗಿ ರಜಪೂತರ ಮೂಲದ ಬಗ್ಗೆ ಇತಿಹಾಸಕಾರರಲ್ಲಿ ವಿಭಿನ್ನ ಅಭಿಪ್ರಾಯಗಳು ವ್ಯಕ್ತವಾಗಿವೆ. ಆದ್ದರಿಂದ ಇತಿಹಾಸಕಾರರ ವಿಭಿನ್ನ ಸಿದ್ಧಾಂತಗಳನ್ನು ಈ ಕೆಳಗಿನಂತೆ ನೋಡಬಹುದು.

1) ವಿದೇಶಿ ಮೂಲದ ಸಿದ್ಧಾಂತ:

ರಜಪೂತರ ವಿದೇಶಿ ಮೂಲ ಸಿದ್ಧಾಂತವನ್ನು ಪ್ರತಿಪಾದಿಸಿದವರು ಕರ್ನಲ್ ಟಾಡ್, ವಿ.ಎ.ಸ್ಮಿತ್ ಹಾಗೂ ಕ್ರೂಕ್ ಮುಂತಾದವರು. ವಿದೇಶದಿಂದ ಬಂದು ಭಾರತದಲ್ಲಿಯೇ ನೆಲಸಿದ ಶಕರು, ಕುಶಾನರು ಹಾಗು ಹೂಣರು ಭಾರತದ ಮೇಲೆ ದಾಳಿ ಮಾಡಿ ಅಂತಿಮವಾಗಿ ಅವರು ಭಾರತೀಯರೊಂದಿಗೆ ಬೆರೆತುಹೋದರು. ವೈದಿಕ ಹಾಗೂ ಬೌದ್ಧ ಧರ್ಮದ ಪ್ರಭಾವಕ್ಕೆ ಒಳಗಾದ ಇವರು ಭಾರತೀಯ ಧರ್ಮವನ್ನು ಅನುಸರಿಸಲಾರಂಭಿಸಿದರು. ಕಾಲಾನಂತರ ಭಾರತೀಯರೊಂದಿಗೆ ವೈವಾಹಿಕ ಸಂಬಂಧವನ್ನು ಬೆಳಸಿಕೊಂಡಿದುದು ಅಲ್ಲದೆ ಭಾರತೀಯ ಸಂಸ್ಕೃತಿ ಮತ್ತು ಆಚಾರ ವಿಚಾರಗಳನ್ನು ಸ್ವೀಕರಿಸಿ ಭಾರತೀಯರೇ ಆದರು. ತಮ್ಮ ಮೂಲ ಸತ್ವವನ್ನು ಕಳೆದುಕೊಂಡು ಭಾರತೀಯತೆಯನ್ನು ಅಳವಡಿಸಿಕೊಂಡರು. ಶಿವ, ಸೂರ್ಯ, ಬುದ್ಧ ಹಾಗೂ ಅಗ್ನಿ ಮುಂತಾದ ದೇವತೆಗಳನ್ನು ಪೂಜಿಸುವ ಮೂಲಕ ಭಾರತೀಯ ಹೆಸರುಗಳನ್ನು ಇಟ್ಟುಕೊಂಡು ಕೊನೆಗೆ ಭಾರತೀಯರೇ ಆದರು. ಅಶ್ವಮೇಧಯಾಗ, ಅಶ್ವಪೂಜೆ, ಸ್ತ್ರೀಯರ ಸ್ಥಾನಮಾನ, ಮಧ್ಯಸೇವನೆ, ಆಯುಧಗಳ ಪೂಜೆ ಮುಂತಾದ ವಿಷಯಗಳಲ್ಲಿ ವಿದೇಶಿಯರಾದ ಶಕರು, ಹೂಣರು ಹಾಗೂ ಕುಶಾನರ ಮತ್ತು ರಜಪೂತರ ನಡುವೆ ಯಾವ ಬದಲಾವಣೆ ಕಾಣಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ರಜಪೂತರು ಹಾಗೂ ವಿದೇಶಿ ಬುಡಕಟ್ಟುಗಳ ನಡುವಿನ ಹೋಲಿಕೆಯನ್ನು ಬಯಲಿಗೆಳೆದ ಇತಿಹಾಸ ತಜ್ಞರೆಂದರೆ ಕರ್ನಲ್ ಟಾಡ್. ಕರ್ನಲ್ ಟಾಡ್‌ ಈ ಅಭಿಪ್ರಾಯವನ್ನು ಬೆಂಬಲಿಸಿದವರೆಂದರೆ ವಿಲಿಯಂ ಬ್ರೂಕ್, ಡಾ| ಈಶ್ವರಿ ಪ್ರಸಾದ್ ಹಾಗೂ ಡಾ॥ ಬಂಡಾರಕರ್.ರಜಪೂತರು ತಮ್ಮನ್ನು ರಾಜಪುತ್ರರು ಎಂದು ಕರೆದುಕೊಂಡಿದ್ದಾರೆ. ರಜಪೂತ ಎಂಬ ಪದವು ರಾಜಪುತ್ರ ಎಂಬ ಪದದ ಅಪಬ್ರಂಶವಾಗಿದೆ. ರಜಪೂತರು ವಿದೇಶಿ ಮೂಲದವರು ಎಂಬ ಅಭಿಪ್ರಾಯವನ್ನು ವಿದ್ವಾಂಸರು ಈ ಕೆಳಗಿನ ಅಂಶಗಳಿಂದಲೂ ದೃಡಪಡಿಸಿದ್ದಾರೆ.

1) ರಜಪೂತರು ಎನ್ನುವ ವಿಶಿಷ್ಟ ಹೆಸರು ವೇದಗಳ ಕಾಲದ ಸಾಹಿತ್ಯದಲ್ಲಿ ಎಲ್ಲಿಯೂ ಕಂಡು ಬರುವುದಿಲ್ಲ. ಆದರೆ ಇಂತಹ ಹೆಸರು ಹೂಣರು ಭಾರತಕ್ಕೆ ಬಂದಾಗಿನಿಂದ ಈಚೆಗೆ ಕಂಡುಬರುತ್ತದೆ. ಆದುದರಿಂದ ರಜಪೂತರು ವಿದೇಶಿಯರು ಎಂಬ ವಾದವನ್ನು ಇತಹಾಸಕಾರರು ಮಂಡಿಸುತ್ತಾರೆ.

2) ರಜಪೂತರು ಆಚರಿಸುತ್ತಿದ್ದ ಅಗ್ನಿಪೂಜೆ ಹೂಣರು ಹಾಗೂ ಶಕರಿಂದ ಬಳುವಳಿಯಾಗಿ ಬಂದಿದೆ.

3) ಭಾರತಕ್ಕೆ ಬಂದ ವಿದೇಶಿ ದಾಳಿಕೋರರು ಹಿಂದೂ ಧರ್ಮವನ್ನು ಒಪ್ಪಿಕೊಂಡರು. ಇವರು ಯುದ್ಧ ಪ್ರಿಯರು ಹಾಗೂ ಆಕ್ರಮಣಶೀಲರೂ ಆಗಿದ್ದು, ಸಹಜವಾಗಿ ಅವರು ಹೋರಾಟದ ಪ್ರವೃತ್ತಿಯನ್ನು ಅಳವಡಿಸಿಕೊಂಡಿದ್ದರು. ನಂತರ ಕ್ಷತ್ರಿಯ ವರ್ಗಕ್ಕೆ ಸೇರಿ ಗುಜರಾತ್ ಪ್ರಾಂತದಲ್ಲಿ ನೆಲಸಿದರು.

4) ರಜಪೂತ ಮನೆತನಗಳಾದ ಚೌಹಾನರು, ಪ್ರತೀಹಾರರು, ಪರಮಾರರು ಹಾಗೂ ಸೋಲಂಕಿಗಳು ಶಕರಿಂದ ರೂಪಾಂತರ ಹೊಂದಿದವರೆಂದು ಕರ್ನಲ್ ಟಾಡ್ ಅಭಿಪ್ರಾಯಪಟ್ಟಿದ್ದಾರೆ.

2) ದೇಶೀಯ ಸಿದ್ಧಾಂತ ಅಥವಾ ಸೂರ್ಯ ಕುಲ ಸಿದ್ಧಾಂತ:

ಗೌರಿಶಂಕರ್ ಓಝ, ವೇದವ್ಯಾಸ, ಡಾ|| ಸಿ.ಎ.ವೈದ್ಯ ಮುಂತಾದ ವಿದ್ವಾಂಸರು ರಜಪೂತರು ವಿದೇಶಿಯರು ಅಲ್ಲ. ಅವರು ದೇಶೀಯರೇ ಆಗಿದ್ದಾರೆ ಎಂದು ವಾದಿಸಿದ್ದಾರೆ. ಇವರು ರಜಪೂತರ ವಿದೇಶಿ ಮೂಲವನ್ನು ತಿರಸ್ಕರಿಸುತ್ತಾರೆ. ಗೌರಿಶಂಕರ್ ಓಝರವರು ತಮ್ಮ ‘ಹಿಸ್ಟರಿ ಆಪ್ ರಾಜಪುಠಾಣ ಎಂಬ ಕೃತಿಯಲ್ಲಿ ರಜಪೂತರು ಭಾರತೀಯರು ಎಂದು ವಾದಿಸಿದ್ದಾರೆ. ರಜಪೂತರು ಆರ್ಯ ಜನಾಂಗಕ್ಕೆ ಸೇರಿದವರು ಹಾಗೂ ಕ್ಷತ್ರಿಯ ವಂಶಗಳಾದ ಸೂರ್ಯ ಹಾಗೂ ಚಂದ್ರ ವಂಶಗಳಿಗೆ ಸೇರಿದವರು ಎಂಬುದು ತಜ್ಞರ ಅಭಿಪ್ರಾಯವಾಗಿದೆ. ಶ್ರೀರಾಮನಿಂದ ವಂಶೋದ್ಧವವಾದವರು ಸೂರ್ಯವಂಶೀಯರು, ಶ್ರೀಕೃಷ್ಣನ ಸಂತತಿಯವರು ಚಂದ್ರವಂಶಸ್ಥರೆಂದು ತಿಳಿಯಲಾಗಿದೆ. ಬೌದ್ಧಿಕ ದೇಹ ಪ್ರಮಾಣ, ಸ್ವಾಭಿಮಾನ, ತ್ಯಾಗದ ಗುಣಗಳು ಆರ್ಯವಂಶದಲ್ಲಿ ಸಾಮಾನ್ಯವಾಗಿ ಕಂಡು ಬರುತ್ತದೆ. ಇವೆಲ್ಲ ಗುಣಗಳು ರಜಪೂತರಲ್ಲಿ ಕಂಡುಬಂದಿದ್ದರಿಂದ ಅವರು ವಿದೇಶಿಯರು ಎಂದು ಹೇಳಲು ಬರುವುದಿಲ್ಲ ಎಂದು ಹೇಳಲಾಗಿದೆ. ರಜಪೂತರ ಭಾರತೀಯ ಮೂಲವನ್ನು ಪ್ರತಿಪಾದಿಸುವ ಆರ್.ಸಿ. ಮುಜುಮ್ದಾರರು “ರಜಪೂತರು ಕ್ಷತ್ರಿಯ ಮೂಲದವರಾಗಿದ್ದು ಪುರಾಣಗಳಲ್ಲಿ ಮತ್ತು ಬಾಣನ ಹರ್ಷಚರಿತದಲ್ಲಿ ರಜಪೂತರ ಹೆಸರನ್ನು ಉಲ್ಲೇಖಿಸಲಾಗಿದೆ. ರಜಪೂತ ಮೂಲದವರು ಕ್ಷತ್ರಿಯ ಹಾಗೂ ಬ್ರಾಹ್ಮಣ ಪಂಗಡಕ್ಕೂ ಸೇರಿದವರಾಗಿದ್ದರು. ರಜಪೂತರ ಮೂಲ ಪದ ರಾಜಪುತ್ರ ಪದವನ್ನು ಮಹಾ ಭಾರತದಲ್ಲಿಯೂ ಕಾಣಬಹುದಾಗಿದೆ. ಮಹಾಭಾರತದ ವಿರಾಟ ಪರ್ವದಲ್ಲಿ ಬ್ರೌಪದಿಯನ್ನು ರಾಜಪುತ್ರಿಯೆಂದು ಸಂಭೋದಿಸಲಾಗಿದೆ. ರಾಜಸ್ಥಾನದ ಅರಸರು ಇಂದಿಗೂ ಚಂದ್ರವಂಶಸ್ಥರೆಂದು ಹೇಳಿಕೊಳ್ಳುತ್ತಾರೆ. ಬಿಕಾನೇರ್, ಮೇವಾಡ್ ಹಾಗೂ ಜಯಪುರದ ಅರಸರು ಇಂದಿಗೂ ಸೂರ್ಯವಂಶಕ್ಕೆ ಸೇರಿದವರು ಎಂದು ಹೇಳಲಾಗಿದೆ.

3) ಅಗ್ನಿಕುಲ ಸಿದ್ಧಾಂತ:

ಅನೇಕ ರಜಪೂತ ಅರಸರು ತಮ್ಮನ್ನು ಅಗ್ನಿಕುಲದವರು ಎಂದು ಹೇಳಿಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿದ ಕಥೆಯೊಂದನ್ನು ಚಾಂದ್ ಬರ್ದಾಯ್ ಬರೆದ ‘ಪೃಥ್ವಿರಾಜರಾಸೋ’ ಎಂಬ ಕಾವ್ಯದಲ್ಲಿ ಕಾಣಬಹುದಾಗಿದೆ. ಪುರಾಣ ಪುರುಷನಾದ ಪರಷುರಾಮನು ಕ್ಷತ್ರಿಯರನ್ನು ನಾಶಮಾಡಿದಾಗ ಬ್ರಾಹ್ಮಣರು ರಕ್ಷಕರಿಲ್ಲದೆ ಪರಿತಪಿಸಿದರು. ಅವರು ತಮ್ಮನ್ನು ರಕ್ಷಿಸುವ ಯೋಧರಿಗಾಗಿ ಒಂದು ಯಜ್ಞವೊಂದನ್ನು ನಡೆಸಿದರು. ಈ ಯಜ್ಞವು ಸುಮಾರು 40 ದಿನಗಳವರೆಗೆ ನಡೆಯಿತು. ಯಜ್ಞದ ಕೊನೆಯ ದಿನದಲ್ಲಿ ಅಲ್ಲಿನ ಅಗ್ನಿಕುಂಡದಲ್ಲಿ ನಾಲ್ಕು ಜನ ವೀರ ಪುರಷರು ಉದ್ಭವಗೊಂಡರು. ಅವರು ಚೌಹಾನರು, ಪ್ರತಿಹಾರ, ಪರಮಾರ ಹಾಗೂ ಚಾಲುಕ್ಯ ಎಂಬ ನಾಲ್ಕು ವಂಶಗಳ ಮೂಲ ವ್ಯಕ್ತಿಗಳಾಗಿದ್ದರು. ಈ ಸಿದ್ಧಾಂತವು ಪೌರಾಣಿಕ ಅಂಶಗಳಿಗೆ ಸಂಬಂಧಪಟ್ಟ ಕಾರಣದಿಂದ ವಿದ್ವಾಂಸರು ಇದರ ಕಡೆಗೆ ಹೆಚ್ಚು ಒಲವು ತೋರಿಸಿಲ್ಲ. ಡಾ| ಈಶ್ವರಿ ಪ್ರಸಾದರು ಈ ಸಿದ್ಧಾಂತ ಕಾಲ್ಪನಿಕವಾಗಿದೆ ಎಂದು ಹೇಳಿದ್ದಾರೆ.

4) ಗೊಂಡ ವಂಶದ ಅರಸರ ಸಿದ್ಧಾಂತ:

ರಜಪೂತರು ಇಲ್ಲಿನ ಮೂಲ ನಿವಾಸಿಗಳ ವಂಶಸ್ತರಾಗಿದ್ದಾರೆ ಎಂದು ಕೆಲ ವಿದ್ವಾಂಸರು ಅಭಿಪ್ರಾಯ ಪಟ್ಟಿದ್ದಾರೆ. ಸತ್ಯನಾಥ ಅಯ್ಯರ್ ಅವರು ರಜಪೂತರು ಗೊಂಡರು ಹಾಗೂ ಭಾರರೆಂಬ ಮೂಲದವರಾಗಿದ್ದು, ಭಾರತೀಯರಲ್ಲಿಯೇ ಅನಾಗರಿಕ ಗುಂಪುಗಳಾಗಿದ್ದರು. ಮುದ್ರೆ ಎಂಬ ಬ್ರಾಹ್ಮಣ ಕುಲದವರಿಂದ ಸ್ಥಾಪಿಸಲ್ಪಟ್ಟ ಕೆಲವು ವಂಶೀಯರು ನಂತರ ಕ್ಷತ್ರಿಯರೆಂದು ಪ್ರಸಿದ್ಧರಾದರು. ಇದಕ್ಕೆ ಕಾರಣವೆಂದರೆ ಅವರು ಕ್ಷತ್ರಿಯರೊಂದಿಗೆ ವೈವಾಹಿಕ ಸಂಬಂಧವನ್ನು ಹೊಂದಿದುದು. ರಜಪೂತ ರಾಣಿಯಾದ ರಾಣಿ ದುರ್ಗಾವತಿ ‘ಗೊಂಡ ವಂಶ’ಕ್ಕೆ ಸೇರಿದವಳಾಗಿದ್ದಳೆಂಬುದು ಗಮನಿಸಬೇಕಾದ ಅಂಶವಾಗಿದೆ.

5) ಸರ್ವಸಮ್ಮತ ಸಿದ್ಧಾಂತ:

ಮೇಲಿನ ಎಲ್ಲಾ ಸಿದ್ಧಾಂತಗಳ ಆಧಾರದ ಮೇಲೆ ತಿಳಿದುಬರುವುದೇನೆಂದರೆ ರಜಪೂತರು ಪೂರ್ಣವಾಗಿ ಭಾರತೀಯರೂ ಅಲ್ಲ. ಪೂರ್ಣವಾಗಿ ವಿದೇಶಿಯರೂ ಅಲ್ಲ. ಅವೆರಡರ ಸಂಗಮವೇ ರಜಪೂತರು. ವಿದೇಶಿಯರಾದ ಹೂಣರು, ಕುಶಾನರು ಹಾಗೂ ಶಕರು ಭಾರತೀಯ ಬಹುಸಂಖ್ಯಾತ ಜನರೊಂದಿಗೆ ಬೆರೆತು ಕ್ಷತ್ರಿಯರೆನಿಸಿಕೊಂಡರು. ಆರಂಭದಲ್ಲಿ ರಜಪೂತರು ಹುಟ್ಟು ಹೋರಾಟಗಾರರಾಗಿದ್ದು ಸದಾ ಯುದ್ಧೋತ್ಸಾಹಿಗಳಾಗಿದ್ದರು. ಕಾಲ ಕಳೆದಂತೆ ಅವರಲ್ಲಿ ವಿದೇಶಿಯ ಭಾವನೆ ಮರೆತುಹೋಗಿ ಭಾರತೀಯ ಸಂಸ್ಕೃತಿ ಮನೆ ಮಾಡಿತು. ನಂತರದ ದಿನಗಳಲ್ಲಿ ರಜಪೂತರು ಸ್ವಾತಂತ್ರ್ಯ ಅಭಿಮಾನ ಹಾಗೂ ಆತ್ಮಗೌರವವನ್ನು ಬೆಳೆಸಿಕೊಂಡರು. ಮುಸ್ಲಿಂರನ್ನು ಎದುರಿಸುವ ಶಕ್ತಿಯನ್ನು ಬೆಳೆಸಿಕೊಂಡರು. ಆದರೆ ಮುಸ್ಲಿಂ ಸುಲ್ತಾನರ ಮೋಸ, ವಂಚನೆ ಹಾಗು ಕುಯುಕ್ತಿಯಿಂದ ರಜಪೂತರು ಸೋಲನುಭವಿಸಬೇಕಾಯಿತು. ಒಟ್ಟಿನಲ್ಲಿ ರಜಪೂತರು ವಿದೇಶಿಯರೆಂದು ಕಂಡುಬಂದರೂ ಅವರು ಭಾರತೀಯರೇ ಎಂಬ ವಾದವನ್ನು ಅಲ್ಲಗಳೆಯುವಂತಿಲ್ಲ.

ಉಪಸಂಹಾರ:
ಅಂತಿಮವಾಗಿ, ರಾಜಪುತಗಳ ಮೂಲದ ಕುರಿತು ನಡೆಯುವ ವಾದವಿವಾದಗಳು ಇತಿಹಾಸವು ಸದಾ ಬೆಳೆಯುವ ಹಾಗೂ ಪುನರ್ವ್ಯಾಖ್ಯಾನಗೊಳ್ಳುವ ವಿಷಯವೆಂಬುದನ್ನು ತೋರಿಸುತ್ತವೆ. ಪಂಡಿತರು ತಮ್ಮ ತಮ್ಮ ಸಿದ್ಧಾಂತಗಳನ್ನು ಉತ್ಸಾಹದಿಂದ ಸಮರ್ಥಿಸಿದರೂ, ಅಂತಿಮ ಒಮ್ಮತದ ಕೊರತೆ ಇತಿಹಾಸವು ವ್ಯಾಖ್ಯಾನದ ಮೇಲೂ ಅವಲಂಬಿತವಾಗಿದೆ ಎಂಬುದನ್ನು ನೆನಪಿಸುತ್ತದೆ.

ರಜಪೂತರ ಕಾಲದ ಸಾಹಿತ್ಯ

ರಜಪೂತರ ಕಾಲದ ಸಾಹಿತ್ಯ

ಮಧ್ಯಯುಗದ ರಾಜಪುತ ರಾಜಸಭೆಗಳು ಕೇವಲ ಯುದ್ಧವೀರತೆಯ ಕೇಂದ್ರಗಳಾಗಿರಲಿಲ್ಲ; ಅವು ಬೌದ್ಧಿಕ ಮತ್ತು ಸಾಹಿತ್ಯಿಕ ಚಟುವಟಿಕೆಗಳ ಚೈತನ್ಯಮಯ ಕೇಂದ್ರಗಳಾಗಿದ್ದವು. ರಾಜರು ಪಂಡಿತರು, ಕವಿಗಳು ಮತ್ತು ಇತಿಹಾಸಕಾರರಿಗೆ ಆಶ್ರಯ ನೀಡಿದ್ದು, ಜ್ಞಾನವನ್ನು ರಾಜ್ಯಾಡಳಿತ ಮತ್ತು ಸಾಂಸ್ಕೃತಿಕ ಗೌರವದ ಪ್ರಮುಖ ಅಂಶವೆಂದು ಪರಿಗಣಿಸಿದ್ದರು. ಅರಮನೆಯ ಸಭಾಂಗಣಗಳಲ್ಲಿ ಸಂಸ್ಕೃತ, ಡಿಂಗಲ್, ಬ್ರಜ್ ಮತ್ತು ಪರ್ಶಿಯನ್ ಭಾಷೆಗಳ ಸಾಹಿತ್ಯ ಅರಳಿತು. ವಂಶಗೌರವ ಮತ್ತು ವೀರತೆಯನ್ನು ಕೀರ್ತಿಸುವ ಕಾವ್ಯಗಳೊಂದಿಗೆ ತತ್ತ್ವಚಿಂತನೆ, ನೈತಿಕತೆ ಮತ್ತು ಇತಿಹಾಸದ ಬರವಣಿಗೆಗಳು ಬೆಳವಣಿಗೆಯಾಯಿತು. ಈ ಬೌದ್ಧಿಕ ವಾತಾವರಣವು ಪ್ರಾದೇಶಿಕ ಗುರುತನ್ನು ಉಳಿಸಿ ಭಾರತೀಯ ಸಾಹಿತ್ಯ ಪರಂಪರೆಯನ್ನು ಶ್ರೀಮಂತಗೊಳಿಸಿತು.

ಶಿಕ್ಷಣ:

ರಜಪೂತರು ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡಿದ್ದರು. ರಜಪೂತರ ಕಾಲದ ವಿದ್ಯಾರ್ಥಿಗಳು 14 ವಿಷಯಗಳನ್ನು ಅಧ್ಯಯನ ಮಾಡಬೇಕಿತ್ತು. ವಿದ್ಯಾರ್ಥಿಗಳಿಗೆ ಕೃಷಿ, ವಾಣಿಜ್ಯ, ಶಿಲ್ಪಕಲೆ ಹಾಗೂ ಅಪರಾಧಶಾಸ್ತ್ರಗಳ ಕುರಿತು ಶಿಕ್ಷಣ ನೀಡಲಾಗುತ್ತಿತ್ತು. ನಳಂದ, ಪಾಟಲಿಪುತ್ರ, ಉಜೈನಿ ಹಾಗೂ ಕಂಪಿಲಿ ಪ್ರಮುಖ ಶಿಕ್ಷಣ ಕೇಂದ್ರಗಳಾಗಿದ್ದವು.

ಸಾಹಿತ್ಯ :

ರಜಪೂತ ರಾಜರು ಸ್ವತಃ ಶ್ರೇಷ್ಠ ವಿದ್ವಾಂಸರು ಮತ್ತು ಬರಹಗಾರರಾಗಿದ್ದರು. ಅಲ್ಲದೆ ಸಾಹಿತ್ಯದ ಪೋಷಕರು, ಸಾಹಿತ್ಯಾಭಿಮಾನಿಗಳು ಸಹ ಆಗಿದ್ದರು. ರಜಪೂತರು ಸಾಹಿತ್ಯಕ್ಕೆ ನೀಡಿದ ಅಪಾರ ಪ್ರೋತ್ಸಾಹದಿಂದ ಹಲವಾರು ಪ್ರಮುಖ ಸಾಹಿತ್ಯಕ ಕೃತಿಗಳು ರಚನೆಗೊಂಡವು. ಖಗೋಳ ಶಾಸ್ತ್ರ, ವೈದ್ಯಕೀಯ, ವ್ಯಾಕರಣ, ಮತ್ತು ವಾಸ್ತುಶಿಲ್ಪ ವಿಷಯಗಳಲ್ಲಿಯು ಕೃತಿಗಳು ರಚಿಸಲ್ಪಟ್ಟವು. ರಜಪೂತರ ಕಾಲದಲ್ಲಿ ರಚನೆಗೊಂಡ ಪ್ರಮುಖ ಕೃತಿಗಳೆಂದರೆ;

ಭಟ್ಟಿ – ರಾವಣವಧ,

ಮಾಘ – ಶಿಶುಪಾಲವಧೆ,

ಶ್ರೀ ಹರ್ಷ – ನೈಷದ ಚರಿತ,

ಧಾಮೋದರಗುಪ್ತ – ಕಲ್ತನಿಮಾತಾ,

ಜಯದೇವ – ಗೀತ ಗೋವಿಂದ

ರಜಪೂತರ ಕಾಲದಲ್ಲಿ ರಚನೆಯಾದ ಗದ್ಯಕೃತಿಗಳು:-

ದಂಡಿ – ದಶಕುಮಾರ ಚರಿತ,

ದಮ್ಮಪಾಲ – ತಿಲಕಮಂಜರಿ,

ಯಶಸ್ತಿಲಕ – ವಾಸವದತ್ತ,

ಸುಬಂಧು – ಕಾದಂಬರಿ,

ರಜಪೂತರ ಕಾಲದಲ್ಲಿ ನಾಟಕ ರೂಪದಲ್ಲಿ ಕೆಲವು ಕೃತಿಗಳು ರಚಿಸಲ್ಪಟ್ಟವು. ಅಂತಹ ಕೃತಿಗಳೆಂದರೆ;

ಭವಭೂತಿ – ಮಾಲತಿ ಮಾಧವ,

– ಮಹಾವೀರಚರಿತ,

– ಉತ್ತರ ರಾಮಚರಿತ,

ಆನಂದ ವರ್ಧನ – ಪ್ರಭೋಧ ಚಂದ್ರ,

ರಾಜಶೇಖರ – ಕರ್ಪೂರ ಮಂಜರಿ,

ಭಟ್ಟನಾರಾಯಣ – ವೇಣಿಸಂಹಾರ,

ಮುರಾರಿ – ಅನರ್ಷರಾಘವ,

ರಜಪೂತರ ಕಾಲದಲ್ಲಿ ಕೆಲವು ಐತಿಹಾಸಿಕ ಕೃತಿಗಳು ಸಹ ರಚನೆಗೊಂಡವು, ಅಂತಹ ಪ್ರಮುಖ ಕೃತಿಗಳೆಂದರೆ:-

ಕಲ್ಹಣನ – ರಾಜತರಂಗಿಣಿ,

ಬಿಲ್ಹಣನ – ವಿಕ್ರಮಾಂಕ ದೇವಚರಿತ

ಸಂದ್ಯಾಕಾರಂದಿತನ – ರಾಮಚರಿತ,

ಈ ಕೃತಿಗಳಲ್ಲದೆ ವ್ಯಕ್ತಿಚರಿತ್ರೆಯನ್ನು ಆಧರಿಸಿ ಕೆಲವು ಕೃತಿಗಳು ರಚಿಸಲ್ಪಟ್ಟವು. ಅವುಗಳೆಂದರೆ

ಚಾಂದ್ಬರ್ದಾಯಿಯ – ಪೃಥ್ವಿರಾಜ ರಾಸೋ

ಹೇಮಚಂದ್ರನ – ಕುಮಾರಪಾಲ ಚರಿತ

ಸಾಹಿತ್ಯದ ಇತರೆ ಪ್ರಕಾರಗಳ ಆಧರಿಸಿ ಕೆಲವು ಕೃತಿಗಳು ರಚಿಸಲ್ಪಟ್ಟವು. ಅವುಗಳೆಂದರೆ:-

ಕ್ಷೇಮೇಂದ್ರನ-ಬೃಹತ್ ಕಥಾಮಂಜರಿ.

ಸೋಮದೇವಸಕ ಸಪ್ತಾತಿಯ – ಕಥಾಸರಿತ್ ಸಾಗರ

ವ್ಯಾಕರಣಕ್ಕೆ ಸಂಬಂಧಿಸಿದಂತೆ ಜಯಾದಿತ್ಯನು ಪಾತಂಜಲಿಯ ಮಹಾಭಾಷ್ಯದ ಮೇಲೆ ಭಾಷ್ಯಕೃತಿಯ ರಚಿಸಿದನು. ಸರ್ವವರ್ಮನ ಕಾತಂತ್ರ ಮತ್ತೊಂದು ವ್ಯಾಕರಣ ಕೃತಿಯಾಗಿದೆ.

ರಜಪೂತರ ಕಾಲದಲ್ಲಿ ವಾತ್ಸಾಯನನ ಕಾಮಸೂತ್ರಕ್ಕೆ ಹಲವು ಬಾಷ್ಯಗಳನ್ನು ಬರೆಯಲಾಯಿತು.

ಕೋಶಪಂಡಿತ – ಕೋಶಶಾಸ್ತ್ರ,

ಸಾರಂಗದೇವ –  ಸಂಗೀತ ರತ್ನಾಕರ,

ತತ್ವಶಾಸ್ತ್ರಕ್ಕೆ ಸಂಬಂಧಿಸಿದಂತೆ,

ಹೇಮಚಂದ್ರ – ಪ್ರಮಮ್ ಮೀಮಾಂಸೆ,

ಧರ್ಮಕೀರ್ತಿ – ನ್ಯಾಯಬಂಧು.

ವೈದ್ಯಕೀಯ ಮತ್ತು ಖಗೋಳಶಾಸ್ತ್ರದ ಕೃತಿಗಳಲ್ಲಿ

ವಿಜ್ಞಾನೇಶ್ವರ – ಮಿತಾಕ್ಷರ ಸಂಹಿತೆ,

ವಾಗ್ಟಟ – ಅಷ್ಟಾಂಗ ಸಂಗ್ರಹ,

ಭಾಸ್ಕರಾಚಾರ್ಯ – ಸಿದ್ಧಾಂತ ಶಿರೋಮಣಿ.

ರಜಪೂತರ ಕಾಲದಲ್ಲಿ ಸಾಹಿತ್ಯಕ ಕೃತಿಗಳಲ್ಲದೆ ವೈದ್ಯಕೀಯ, ಖಗೋಳ, ಮತ್ತು ವ್ಯಾಕರಣ ಹಾಗೂ ಚಾರಿತ್ರಿಕ ಕೃತಿಗಳು ರಚನೆಯಾದವು

ಉಪಸಂಹಾರ:

ರಾಜಪುತ ರಾಜಸಭೆಗಳ ಸಾಹಿತ್ಯಿಕ ಕೊಡುಗೆಗಳು ಭಾರತೀಯ ಬೌದ್ಧಿಕ ಇತಿಹಾಸದಲ್ಲಿ ಶಾಶ್ವತವಾದ ಗುರುತು ಮೂಡಿಸಿವೆ. ವಿವಿಧ ಭಾಷೆಗಳು ಮತ್ತು ಸಾಹಿತ್ಯ ಪ್ರಕಾರಗಳಿಗೆ ಆಶ್ರಯ ನೀಡುವ ಮೂಲಕ ವೀರಗಾಥೆಗಳು, ರಾಜಸಭಾ ವೃತ್ತಾಂತಗಳು, ಭಕ್ತಿ ಕಾವ್ಯಗಳು ಮತ್ತು ತತ್ತ್ವಚಿಂತನೆಯ ಕೃತಿಗಳು ಸಂರಕ್ಷಿಸಲ್ಪಟ್ಟವು. ಈ ಸಾಹಿತ್ಯವು ರಾಜಸತ್ತೆ ಮತ್ತು ವೀರತೆಯನ್ನು ಮಾತ್ರವಲ್ಲ, ಕಾಲಘಟ್ಟದ ಸಾಮಾಜಿಕ ಮೌಲ್ಯಗಳು ಮತ್ತು ಸಾಂಸ್ಕೃತಿಕ ಸಂವಹನಗಳನ್ನೂ ಪ್ರತಿಬಿಂಬಿಸಿತು. ಜ್ಞಾನ ಮತ್ತು ಸಾಹಿತ್ಯಕ್ಕೆ ನೀಡಿದ ಮಹತ್ವವು ಮುಂದಿನ ತಲೆಮಾರಿನ ಬರಹಗಾರರು ಮತ್ತು ಇತಿಹಾಸಕಾರರಿಗೆ ಪ್ರೇರಣೆಯಾಯಿತು. ಹೀಗಾಗಿ, ರಾಜಪುತ ಸಾಹಿತ್ಯ ಆಶ್ರಯವು ಯುದ್ಧವಿಜಯಗಳಷ್ಟೇ ಗೌರವಯುತ ಹಾಗೂ ಶಾಶ್ವತವೆಂಬ ಸಂದೇಶವನ್ನು ನೀಡುತ್ತದೆ.

ರಜಪೂತರ ಕಾಲದ ಸಾಮಾಜಿಕ ಜೀವನ

ರಜಪೂತರ ಕಾಲದ ಸಾಮಾಜಿಕ ಜೀವನ

ರಜಪೂತರ ಕಾಲದ ಸಾಮಾಜಿಕ ವ್ಯವಸ್ಥೆ ಚಾತುರ್ವಣ್ರ ಪದ್ಧತಿಯ ಅಡಿಪಾಯದ ಮೇಲೆ ನಿರ್ಮಾಣವಾಗಿತ್ತು. ಇದರಿಂದ ಜಾತಿ ಪದ್ಧತಿ ಆ ಕಾಲದಲ್ಲಿಯೂ ಅತ್ಯಂತ ಕಠಿಣವಾಗಿತ್ತು ಎಂಬುದನ್ನು ತಿಳಿಯಬಹುದು. ಮುಸ್ಲಿಂ ಬರಹಗಾರರ ಪ್ರಕಾರ ರಜಪೂತರ ಕಾಲದಲ್ಲಿ ಅಸ್ತಿತ್ವದಲ್ಲಿದ್ದ ವರ್ಣಗಳೆಂದರೆ ಸಬಕುಪಿರಿಯಾ (ಕ್ಷತ್ರಿಯ) ಬ್ರಹ್ಮ (ಬ್ರಾಹ್ಮಣ) ಬೈಸೂರಿಯಾ (ವೈಶ್ಯ) ಸುದರಿಯಾ (ಶೂದ್ರ). ಈ ನಾಲ್ಕು ವರ್ಣಗಳ ಜೊತೆಗೆ ಅನೇಕ ಉಪಜಾತಿಗಳು ಸಹ ಪ್ರಚಲಿತದಲ್ಲಿದ್ದವು.

ಬ್ರಾಹ್ಮಣರು ರಜಪೂತರ ಕಾಲದಲ್ಲಿ ಸಾಮಾಜಿಕವಾಗಿ ಮೇರು ಸ್ಥಾನದಲ್ಲಿ ಇದ್ದರು. ಉಳಿದ ವರ್ಗದ ಜನ ಇವರನ್ನು ಅತ್ಯಂತ ಗೌರವದಿಂದ ಕಾಣುತ್ತಿದ್ದರು. ಇವರು ಮಂತ್ರಿಗಳಾಗಿ, ಪರೋಹಿತರಾಗಿ, ಸಲಹೆಗಾರರಾಗಿ, ತತ್ವಜ್ಞಾನಿಗಳಾಗಿ, ಉಪಾಧ್ಯಾಯರಾಗಿ ಸೇವೆಸಲ್ಲಿಸುತ್ತಿದ್ದರು. ಬ್ರಾಹ್ಮಣರಲ್ಲಿ ದೀಕ್ಷಿತ್, ಪಾಂಡೆ, ಶರ್ಮ, ಚತುರ್ವೇದಿ, ಪಾಠಕ್, ತ್ರಿವೇದಿ, ತ್ರಿಪಾಠಿ, ಸರಯೂಪರಿ, ಸರಸ್ವತ ಹಾಗೂ ಕನ್ಯಾಕುಬ್ಬ ಎಂಬ ಪಂಗಡಗಳು ಇದ್ದವು. ಇವರಿಗೆ ಮರಣದಂಡನೆಯಿಂದ ವಿನಾಯಿತಿ ಇತ್ತು. ಯಜ್ಞಯಗಾದಿಗಳನ್ನು ಇವರೇ ನೆರವೇರಿಸುತ್ತಿದ್ದರು. ಕ್ಷತ್ರಿಯರು ರಜಪೂತರ ಕಾಲದಲ್ಲಿ ಆಳುವ ವರ್ಗಕ್ಕೆ ಸೇರಿತ್ತು. ಆಡಳಿತಗಾರರು ಮತ್ತು ಸೈನಿಕರು ಕ್ಷತ್ರಿಯರೇ ಆಗಿರುತ್ತಿದ್ದರು. ರಾಜ್ಯದ ರಕ್ಷಣೆ ಹಾಗೂ ಪ್ರಜಾರಕ್ಷಣೆ ಕ್ಷತ್ರಿಯರಿಗೆ ಸೇರಿದ್ದಿತು. ಇವರು ಸೂರ್ಯ ಹಾಗೂ ಚಂದ್ರವಂಶಕ್ಕೆ ಸೇರಿದುದರಿಂದ ಇವರು ಪರಿಶುದ್ಧವಾಗಿದ್ದರು. ಬ್ರಾಹ್ಮಣರೂ ಸಹ ಕ್ಷತ್ರಿಯರ ಮುಂದೆ ತಲೆಬಾಗಬೇಕಿತ್ತು. ಕ್ಷತ್ರಿಯರು ತಮ್ಮ ಬಹುಕಾಲವನ್ನು ಯುದ್ಧದಲ್ಲಿಯೇ ಕಳೆಯಬೇಕಿತ್ತು. ವೈಶ್ಯರು ವ್ಯಾಪಾರ ಹಾಗೂ ವಾಣಿಜ್ಯ ವ್ಯವಹಾರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಇವರ ಪರಿಸ್ಥಿತಿ ಅತ್ಯಂತ ಶೋಚನೀಯವಾಗಿತ್ತು.

ಇವರಿಗೂ ವೇದಾಧ್ಯಯನವನ್ನು ನಿರಾಕರಿಸಲಾಗಿತ್ತು. ಶೂದ್ರರು ವ್ಯವಸಾಯ ಹಾಗೂ ಕುಶಲಕಲೆಗಳಲ್ಲಿ ನಿರತರಾಗುವ ಮೂಲಕ ಈ ಮೇಲಿನ ಮೂರು ವರ್ಗಗಳ ಜನರ ಸೇವೆಯನ್ನು ಮಾಡಬೇಕಿತ್ತು. ಇನ್ನು ಅಸ್ಪೃಶ್ಯರು ಊರ ಹೊರಗೆ ವಾಸಿಸಬೇಕಿತ್ತು. ಇವರ ಬದುಕು ಸಹ ದುಸ್ತರವಾಗಿತ್ತು.

ಈ ಮೇಲಿನ ವರ್ಗಗಳ ಜೊತೆಗೆ ರಜಪೂತರ ಕಾಲದಲ್ಲಿ ಅನೇಕ ಜಾತಿ ಹಾಗೂ ಉಪಜಾತಿಗಳಿದ್ದವು. ಉದಾ. ನೇಕಾರರು, ಅಕ್ಕಸಾಲಿಗ, ಗಾಣಿಗ, ಗೌಳಿಗ, ಬಡಗಿ ಇತ್ಯಾದಿ. ಇವುಗಳ ಜೊತೆಗೆ ‘ಕಾಯಸ್ತ’ ಎಂಬ ವರ್ಗವೊಂದು ಹುಟ್ಟಿಕೊಂಡಿತು. ಕವಿಗಳನ್ನು ಈ ಕಾಲದಲ್ಲಿ ‘ಭಟ ಅಥವಾ ಚರಣ್’ ಎಂದು ಕರೆಯಲಾಯಿತು. ಇವರು ಯಾವಾಗಲೂ ರಾಜರನ್ನು ಹೊಗಳಿ ಬರೆಯಬೇಕಿತ್ತು. ಕೆಲವು ಸಲ ಇವರು ದೂತಾವಾಸದ ಕೆಲಸವನ್ನು ನಿರ್ವಹಿಸಬೇಕಿತ್ತು. ರಜಪೂತ ವರ್ಗದಲ್ಲಿನ ಹುಟ್ಟು ಸಾವು ಇತ್ಯಾದಿಗಳ ಮಾಹಿತಿಯನ್ನು ದಾಖಲು ಮಾಡಿಕೊಳ್ಳುವ ಕಾಯಕ ಇವರದಾಗಿತ್ತು.

ಸ್ತ್ರೀಯರ ಸ್ಥಾನಮಾನ:

ರಜಪೂತ ಸಮಾಜದಲ್ಲಿ ಮಹಿಳೆಯರು ಹೆಚ್ಚು ಸ್ವಾತಂತ್ರ್ಯವನ್ನು ಹೊಂದಿದ್ದರು. ಇವರು ರಜಪೂತ ಸಂಸ್ಕೃತಿಯ ಉನ್ನತ ಆಧಾರ ಸ್ತಂಭಗಳಾಗಿದ್ದರು.

ಸ್ತ್ರೀಯರಿಗೆ ಸಮಾಜದಲ್ಲಿ ಗೌರವಯುತವಾದ ಸ್ಥಾನಮಾನಗಳನ್ನು ನೀಡಲಾಗಿತ್ತು. ಸ್ತ್ರೀಯರಲ್ಲಿ ಅಪಾರವಾದ ದೇಶಭಕ್ತಿ ಇದ್ದಿತು. ಪುರುಷರಂತೆ ಸ್ತ್ರೀಯರಿಗೂ ವಿದ್ಯಾಭ್ಯಾಸದ ಸೌಕರ್ಯಗಳನ್ನು ನೀಡಲಾಗಿತ್ತು. ಹೀಗಾಗಿ ಅವರು ವಿದ್ಯಾವಂತರಾಗಿದ್ದಲ್ಲದೆ ಸಾರ್ವಜನಿಕ ಸಭೆ ಸಮಾರಂಭಗಳಲ್ಲಿಯೂ ಕ್ರಿಯಾಶೀಲರಾಗಿ ಭಾಗವಹಿಸುತ್ತಿದ್ದರು. ವಿದ್ಯೆಯ ಜೊತೆಗೆ ಸಂಗೀತ, ನೃತ್ಯ, ಕಲೆ ಹಾಗೂ ಲಲಿತ ಕಲೆಗಳಲ್ಲಿ ಪರಿಣತಿಯನ್ನು ಪಡೆದಿದ್ದರು. ರಜಪೂತರ ಕಾಲದಲ್ಲಿ ಆನೇಕ ಸ್ತ್ರೀಯರು ಕವಿಗಳಾಗಿ ಸಾಹಿತಿಗಳಾಗಿ ಹಾಗು ಬರಹಗಾರ್ತಿಯರಾಗಿ ತಮ್ಮನ್ನು ಗುರುತಿಸಿಕೊಂಡಿದ್ದರು. ಅಂತವರಲ್ಲಿ ಪ್ರಮುಖರಾದವರೆಂದರೆ, ಇಂದುಲೇಖಾ, ಮರುಳಾ, ಶೀಲ, ಪದ್ಮಶೀಲ, ಸುಭದ್ರ, ಲಕ್ಷ್ಮಿ, ವಿಜ್ಜಿಕಾ, ಮೋರಿಕಾ, ಮಪಲ್ಯ, ಮದಾಲಸ ಮುಂತಾದವರು. ರಾಜಶೇಖರನ ಪತ್ನಿ ‘ಆವಂತಿಸುಂದರಿ’ ಬಹುದೊಡ್ಡ ಸಂಸ್ಕೃತ ಪಂಡಿತೆಯಾಗಿದ್ದಳು. ಸೋಲಂಕಿ ದೊರೆ ವಿಕ್ರಮಾದಿತ್ಯನ ಸೋದರಿ ಅಕ್ಕಾದೇವಿಯು ಆಡಳಿತದಲ್ಲಿ ನಿಪುಣೆಯಾಗಿದ್ದು, ನಾಲ್ಕು ಪ್ರಾಂತಗಳ ಆಡಳಿತವನ್ನು ನಿರ್ವಹಿಸಿದ್ದಳು. ಸ್ವತಃ ತಾನೇ ಯುದ್ಧ ಭೂಮಿಗೆ ತೆರಳಿ ಯುದ್ಧದ ನಾಯಕತ್ವವನ್ನು ವಹಿಸುತ್ತಿದ್ದಳು. ಅಬ್ದುರಿಸಿ ಬರೆದಂತೆ ಅನೇಕ ಸ್ತ್ರೀಯರು ಸಂಸ್ಕೃತ ಭಾಷೆಯನ್ನು ಓದಲು ಹಾಗೂ ಬರೆಯಲು ಕಲಿತಿದ್ದರು. ಅದು ಅಲ್ಲದೆ ನೃತ್ಯ, ಸಂಗೀತ ಹಾಗೂ ಭಾವಚಿತ್ರ ರಚನೆಯಲ್ಲಿ ಪ್ರವೀಣರಾಗಿದ್ದರು. ಪುರುಷರ ಜೊತೆ ಅನೇಕ ಸಲ ವಾದ ಮಾಡಿ ಅವರನ್ನು ಸೋಲಿಸುತ್ತಿದ್ದರು. ರಜಪೂತ ಹೆಣ್ಣುಮಕ್ಕಳು ತಮ್ಮ ಬಾಳ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವನ್ನು ಹೊಂದಿದ್ದರು.

ವಿದೇಶಿಯರ ದಾಳಿ ಹೆಚ್ಚಾದಂತೆ ರಜಪೂತ ಸಮಾಜದಲ್ಲಿ ಅನೇಕ ಸಾಮಾಜಿಕ ಪಿಡುಗುಗಳು ಕಾಣಿಸಿಕೊಂಡವು. ಮುಸಲ್ಮಾನರ ಕಪಿಮುಷ್ಠಿಯಿಂದ ತಪ್ಪಿಸಿಕೊಳ್ಳಲು ರಜಪೂತ ಮಹಿಳೆಯರು ಸಾಮೂಹಿಕ ಅಗ್ನಿ ಪ್ರವೇಶ ಅಥವಾ ಜೋಹಾರ್ ಪದ್ಧತಿಯನ್ನು ಅನುಸರಿಸಲಾರಂಭಿಸಿದರು. ಗಂಡನ ಸಾವಿನ ನಂತರ ವಿಧವತ್ವವನ್ನು ತಪ್ಪಿಸಿಕೊಳ್ಳಲು ಅವಳು ಗಂಡನ ಚಿತೆಯಲ್ಲಿ ಅಗ್ನಿಪ್ರವೇಶ ಮಾಡುವ ಮೂಲಕ ಸತಿ ಪದ್ಧತಿಗೆ ಚಾಲನೆ ನೀಡಿದಳು. ಆ ಕಾಲದಲ್ಲಿ ಬಾಲ್ಯವಿವಾಹ ಜಾರಿಯಲ್ಲಿ ಇರಲಿಲ್ಲ. ಆದರೆ, ಮುಸಲ್ಮಾನರ ದಾಳಿಯ ಪರಿಣಾಮವಾಗಿ ಬಾಲ್ಯ ವಿವಾಹ ಪದ್ಧತಿಯೂ ಜಾರಿಗೆ ಬಂದಿತು. ಹೆಣ್ಣು ಮಗುವಿನ ಹತ್ಯೆಯಂತಹ ಪದ್ಧತಿ ಜಾರಿಗೆ ಬಂದಿತು. ವಿಧವಾ ವಿವಾಹ ಅಷ್ಟೊಂದು ಪ್ರಚಲಿತವಾಗಿರಲಿಲ್ಲ. ವಿಧವೆಯರಿಗೆ ಸಮಾಜದಲ್ಲಿ ಯಾವುದೇ ರೀತಿಯ ಸ್ಥಾನಮಾನವನ್ನು ನೀಡಿರಲಿಲ್ಲ.

ಜೆನಾನಾದಲ್ಲಿರುವ ರಜಪೂತ ಸ್ತ್ರೀ

ಈ ಚಿತ್ರವು ರಾಜಮಹಲಿನ ಜೆನಾನಾದೊಳಗಿನ ಪೂತ ಸ್ತ್ರೀಯ ಖಾಸಗಿ ಜೀವನವನ್ನು ಚಿತ್ರಿಸುತ್ತದೆ. ಶಾಂತ ಹಾಗೂ ಸಂಯಮಿತ ಭಂಗಿಯಲ್ಲಿ ಕುಳಿತಿರುವ ಆಕೆಯು ಜಪುತ ವರ್ಗದ ಸಂಸ್ಕೃತಿಯಲ್ಲಿ ಮೌಲ್ಯವಾದ ಗೌರವ, ನಿಯಂತ್ರಣ ಮತ್ತು ಆಂತರಿಕ ಬಲವನ್ನು ಪ್ರತಿಬಿಂಬಿಸುತ್ತದೆ. ಅಲಂಕಾರಿಕ ವಸ್ತ್ರಗಳು, ಪಾರದರ್ಶಕ ಒಡವೆ ಮತ್ತು ಸೊಗಸಾದ ಆಭರಣಗಳು ಆಕೆಯ ರಾಜಕೀಯ ಸ್ಥಾನಮಾನ ಹಾಗೂ ಪರ್ದಾ ಪದ್ಧತಿಯನ್ನು ಸೂಚಿಸುತ್ತವೆ. ಹಿನ್ನಲೆಯಲ್ಲಿ ಕಾಣುವ ಸೂಕ್ಷ್ಮ ಕೆತ್ತನೆಯ ಕಮಾನು ಪೂತ ವಾಸ್ತುಶಿಲ್ಪದ ವೈಭವವನ್ನು ತೋರಿಸುತ್ತದೆ. ಸುಗಂಧ ದ್ರವ್ಯಗಳು, ಅಲಂಕಾರ ಸಾಮಗ್ರಿಗಳು ಮತ್ತು ಹುಕ್ಕಾ ಸಂಸ್ಕೃತಿಯ ದಿನಚರಿಯನ್ನು ಸೂಚಿಸುತ್ತವೆ. ಹಿನ್ನಲೆಯಲ್ಲಿ ಇರುವ ಸಹಾಯಕಿ ಮಹಿಳೆ ಜೆನಾನಾದೊಳಗಿನ ಗೌಪ್ಯತೆ ಮತ್ತು ಸಹವಾಸವನ್ನು ಒತ್ತಿಹೇಳುತ್ತದೆ.

ರಜಪೂತರ ಕಾಲದ ಆಡಳಿತ

ರಜಪೂತರ ಕಾಲದ ಆಡಳಿತ

ಪೀಠಿಕೆ:

ಮಧ್ಯಯುಗೀನ ಭಾರತದ ಇತಿಹಾಸದಲ್ಲಿ ರಾಜಪೂತರು ಮಹತ್ವದ ಸ್ಥಾನವನ್ನು ಹೊಂದಿದ್ದರು. ಅವರು ಕ್ರಿ.ಶ. 7ನೇ ಶತಮಾನದಿಂದ 18ನೇ ಶತಮಾನವರೆಗೆ ಪಶ್ಚಿಮ ಹಾಗೂ ಮಧ್ಯ ಭಾರತದ ವಿವಿಧ ಭಾಗಗಳಲ್ಲಿ ಆಳ್ವಿಕೆ ನಡೆಸಿದರು. ರಾಜಪೂತ ಆಡಳಿತ ವ್ಯವಸ್ಥೆ ಕ್ಷತ್ರಿಯ ಧರ್ಮ, ವೀರತೆ, ಕುಲಗೌರವ ಮತ್ತು ಭೂಸ್ವಾಮ್ಯಾಧಾರಿತ ಸಾಮಂತ ವ್ಯವಸ್ಥೆ ಮೇಲೆ ಆಧಾರಿತವಾಗಿತ್ತು. ಈ ವ್ಯವಸ್ಥೆಯು ರಾಜಕೀಯ, ಸೈನಿಕ ಮತ್ತು ಸಾಮಾಜಿಕ ಅಂಶಗಳನ್ನು ಒಟ್ಟುಗೂಡಿಸಿಕೊಂಡು ರೂಪುಗೊಂಡಿತ್ತು.

ರಾಜಪೂತ ರಾಜ್ಯಗಳಾದ ಮೇವಾರ್, ಮಾರ್ವಾರ್, ಅಂಬರ್ ಮೊದಲಾದವುಗಳಲ್ಲಿ ಈ ಆಡಳಿತ ವ್ಯವಸ್ಥೆ ವಿಭಿನ್ನ ರೂಪಗಳಲ್ಲಿ ಕಂಡುಬಂದರೂ, ಅದರ ಮೂಲ ಸ್ವರೂಪ ಸಾಮಾನ್ಯವಾಗಿತ್ತು.

1) ರಾಜಕೀಯ ಸ್ಥಿತಿಗತಿ: ರಜಪೂತರ ರಾಜಕೀಯ ವ್ಯವಸ್ಥೆ ಊಳಿಗಮಾನ್ಯ ಲಕ್ಷಣಗಳನ್ನು ಒಳಗೊಂಡಿದ್ದಿತು. ಇವರು ಗುಪ್ತರ ಆಡಳಿತ ಪದ್ಧತಿಯನ್ನು ಮುಂದುವರೆಸಿಕೊಂಡು ಬಂದರು.

ರಾಜ: ರಜಪೂತ ರಾಜ್ಯದಲ್ಲಿ ರಾಜನೇ ಆಡಳಿತದ ಕೇಂದ್ರಬಿಂದುವಾಗಿದ್ದನು. ಇವನು ಅಪರಿಮಿತ ಹಾಗೂ ಹೆಚ್ಚಿನ ಗೌರವವನ್ನು ಹೊಂದಿದ್ದನು. ಈತ ನ್ಯಾಯಾಂಗದ ಮುಖ್ಯಸ್ಥನೂ ಆಗಿದ್ದನು. ರಾಜತ್ವ ದೈವಿಕ ವ್ಯಕ್ತಿತ್ವದ ಸಂಕೇತವಾಗಿತ್ತು. ಅವನನ್ನು ಸಾಕ್ಷಾತ್ ವಿಷ್ಣುವಿನ ಅವತಾರ ಎಂದು ತಿಳಿಯಲಾಗಿತ್ತು. ರಾಜನ ಆಜ್ಞೆಯೇ ಅಂತಿಮ ಅಪೀಲು ಆಗಿತ್ತು. ಇವನ ಹೆಸರಿನಲ್ಲಿ ಅನೇಕ ಶಾಸನಗಳನ್ನು ಹೊರಡಿಸಲಾಗಿತ್ತು. ರಾಜನಿಗೆ ಪರಮಭಟ್ಟಾರಕ, ಮಹಾರಾಜಾಧಿರಾದ, ರಾಜ ಪರಮೇಶ್ವರ ಮುಂತಾದ ಬಿರುದುಗಳನ್ನು ಹೊಂದಿದ್ದನು. ರಾಜತ್ವ ನಿರಂಕುಶಾಧಿಕಾರವಾಗಿದ್ದರೂ ಆತ ನ್ಯಾಯ, ನೀತಿ, ಧರ್ಮಶಾಸ್ತ್ರ ಹಾಗೂ ಸ್ಮೃತಿಗಳಿಗೆ ಅನುಗುಣವಾಗಿ ಆಳ್ವಿಕೆಯನ್ನು ಮಾಡಬೇಕಿದ್ದಿತು. ಪ್ರಜೆಗಳ ರಕ್ಷಣೆ, ರಾಜ್ಯ ರಕ್ಷಣೆ, ಬ್ರಾಹ್ಮಣರಿಗೆ ದಾನ ದತ್ತಿಗಳನ್ನು ನೀಡುವುದು, ಪ್ರಜಾಕಲ್ಯಾಣ, ಕಾನೂನು ಪರಿಪಾಲನೆ, ಶಿಕ್ಷಣ ಪ್ರಚಾರ, ಅಧಿಕಾರಿಗಳ ನೇಮಕ ಮುಂತಾದವುಗಳು ರಾಜನ ಪ್ರಮುಖ ಕರ್ತವ್ಯಗಳಾಗಿದ್ದವು, ರಾಜತ್ವ ವಂಶಪಾರಂಪರವಾಗಿದ್ದಿತು. ರಾಜನ ನಂತರ ಅವನ ಮಗನಿಗೆ ಸಿಂಹಾಸನ ದೊರಕುತ್ತಿತ್ತು, ರಜಪೂತರ ಆಡಳಿತದಲ್ಲಿ ಸ್ತ್ರೀಯರು ಸಹ ರಾಜನಿಗೆ ಮಾರ್ಗದರ್ಶನ ನೀಡಿ ಆಡಳಿತವು ಉತ್ತಮವಾಗಿ ಸಾಗುವಂತೆ ನೋಡಿಕೊಳ್ಳುತ್ತಿದ್ದರು.

ಮಂತ್ರಿಮಂಡಲ: ರಾಜನಿಗೆ ಆಡಳಿತದಲ್ಲಿ ಸಹಾಯ ನೀಡಲು ಮಂತ್ರಿಮಂಡಲವಿತ್ತು. ರಾಜನ ಮಂತ್ರಿಮಂಡಲದಲ್ಲಿ ಯುವರಾಜ ಹಾಗೂ ರಾಣಿಯರಿದ್ದರು. ಇವರಿಗೆ ಅಧಿಕಾರಿ ವರ್ಗ ಸಹಕಾರ ನೀಡುತ್ತಿತ್ತು. ರಾಜನ ಮಂತ್ರಿ ಮಂಡಲವು ಪುರೋಹಿತ, ಪ್ರದಾನ್, ಮಂತ್ರಿ, ಪಂಡಿತ, ಸುಮಂತ, ಅಮಾತ್ಯ ಹಾಗು ದೂತರನ್ನು ಒಳಗೊಂಡಿತ್ತು. ಪ್ರತಿಯೊಬ್ಬ ಮಂತ್ರಿ ತಮಗೆ ನೀಡಿದ ಇಲಾಖೆಗಳ ಮೇಲ್ವಿಚಾರಣೆಯನ್ನು ಮಾಡುತ್ತಿದ್ದರು. ಸಾಮಾನ್ಯವಾಗಿ ಉನ್ನತ ಅಧಿಕಾರಿಗಳು ಬ್ರಾಹ್ಮಣರೇ ಆಗಿರುತ್ತಿದ್ದರು. ಈ ಕಾಲದಲ್ಲಿ ಸಾರ್ವಜನಿಕ ಹುದ್ದೆಗಳು ಸಹ ವಂಶಪಾರಂಪರವಾಗಿದ್ದವು.

ಪ್ರಾಂತಾಡಳಿತ: ರಜಪೂತರ ಆಧಿಕಾರಾವಧಿಯಲ್ಲಿ ಅನೇಕ ರಾಜ್ಯಗಳಿದ್ದು ಅವುಗಳನ್ನು ಒಬ್ಬನಿಂದ ರಕ್ಷಿಸಲು ಸಾಧ್ಯವಾಗುತ್ತಿರಲಿಲ್ಲ. ಆದಕಾರಣ ಅವರು ಆಡಳಿತದ ಹಿತದೃಷ್ಠಿಯಿಂದ ರಾಜ್ಯಗಳನ್ನು ಹಲವಾರು ಪ್ರಾಂತಗಳನ್ನಾಗಿ ವಿಭಾಗಿಸಿದ್ದರು. ಹೀಗೆ ವಿಭಾಗಿಸಲ್ಪಟ್ಟ ಪ್ರಾಂತಗಳನ್ನು ‘ಭುಕ್ತಿಗಳೆಂದು’ ಹೆಸರಿಸಿದರು. ಪ್ರಾಂತಗಳ ಅಧಿಕಾರವನ್ನು ಜಹಗೀರುದಾರರು ನಿರ್ವಹಿಸುತ್ತಿದ್ದರು. ಇವರ ಅಧಿಕಾರವು ಸಹ ವಂಶಪಾರಂಪರ್ಯವಾಗಿತ್ತು. ಯುದ್ಧ ಸಮಯದಲ್ಲಿ ರಾಜನಿಗೆ ಸೈನ್ಯವನ್ನು ಒದಗಿಸುವುದು, ಕಪ್ಪಕಾಣಿಕೆಗಳನ್ನು ನೀಡುವುದು, ಪ್ರಾಂತಗಳ ರಕ್ಷಣೆ ಮಾಡುವುದು ಜಹಗೀರದಾರರಿಗೆ ಸೇರಿದ್ದಿತು.

ಆಡಳಿತದ ಹಿತದೃಷ್ಠಿಯಿಂದ ಪ್ರಾಂತಗಳನ್ನು ಹಲವಾರು ಜಿಲ್ಲೆಗಳನ್ನಾಗಿ ವಿಂಗಡಿಸಲಾಗಿತ್ತು. ಜಿಲ್ಲೆಗಳನ್ನು ವಿಷಯಗಳನ್ನಾಗಿ ವಿಭಜನೆಗೊಳಿಸಿ ಅವುಗಳನ್ನು ವಿಷಯಪತಿ ಎಂಬ ಅಧಿಕಾರಿ ಕೈಗೆ ನೀಡಲಾಯಿತು. ಆತ ವಿಷಯಗಳ ರಕ್ಷಣೆಯನ್ನು ಮಾಡಬೇಕಿದ್ದಿತು. ಆಡಳಿತದ ಕೊನೆಯ ಘಟಕವೇ ಗ್ರಾಮವಾಗಿದ್ದಿತು. ಗ್ರಾಮಗಳ ಮುಖ್ಯಸ್ಥನನ್ನು ಗ್ರಾಮಿಕ, ಗ್ರಾಮಗಾವುಂಡ ಅಥವಾ ಗ್ರಾಮಪತಿ ಎಂದು ಕರೆಯಲಾಗುತ್ತಿತ್ತು. ಪ್ರತಿಯೊಂದು ಗ್ರಾಮವು ಸಹ ಗ್ರಾಮಪಂಚಾಯಿತಿಯನ್ನು ಹೊಂದಿದ್ದಿತು. ನ್ಯಾಯಾಡಳಿತ, ಮಾರುಕಟ್ಟೆ ನಿರ್ವಹಣೆ, ತೆರಿಗೆ ಸಂಗ್ರಹ, ಸಾರ್ವಜನಿಕ ಕಟ್ಟಡಗಳ ನಿರ್ಮಾಣ ಉದ್ಯಾನವನಗಳ ರಕ್ಷಣೆ, ಹುಲ್ಲುಗಾವಲು ನಿರ್ವಹಣೆ, ಶಿಕ್ಷಣ ಸುಧಾರಣೆ, ನೈರ್ಮಲ್ಯ ನಿರ್ವಹಣೆ, ಆಸ್ಪತ್ರೆಗಳ ಸ್ಥಾಪನೆ, ಬೀದಿದೀಪಗಳ ವ್ಯವಸ್ಥೆ, ರಸ್ತೆಗಳ ರಿಪೇರಿ ಬಾವಿ ತೋಡಿಸುವುದು, ದೇವಾಲಯಗಳ ನಿರ್ಮಾಣ ಹಾಗೂ ದುರಸ್ತಿ ಮುಂತಾದವುಗಳು ಗ್ರಾಮ ಮುಖಂಡರ ಕರ್ತವ್ಯಗಳಾಗಿದ್ದವು.

ಸೈನ್ಯಾಡಳಿತ: ರಜಪೂತರು ತಮ್ಮ ಜೀವನವೆಲ್ಲವನ್ನು ಯುದ್ಧಕ್ಕಾಗಿ ಮೀಸಲಾಗಿಟ್ಟಿದ್ದರು. ಪ್ರತಿಯೊಬ್ಬ ರಜಪೂತನು ವಯಸ್ಕನಾದ ಮೇಲೆ ಖಡ್ಗಬಂಧ ಎಂಬ ಶಾಸ್ತ್ರವನ್ನು ಆಚರಿಸಿ ತನ್ನ ಜೀವನವನ್ನು ಯುದ್ಧಕ್ಕಾಗಿ ಮೀಸಲಿಡುತ್ತಿದ್ದನು. ಆದಕಾರಣ ರಜಪೂತರು ಬಲಿಷ್ಟವಾದ ಸೈನ್ಯವನ್ನು ಹೊಂದಿದ್ದರು. ಇವರ ಸೈನ್ಯವು ಕಾಲ್ಗಳ, ಅಶ್ವದಳ ಹಾಗೂ ಗಜದಳವನ್ನು ಹೊಂದಿದ್ದಿತು. ರಜಪೂತರ ಸೈನ್ಯದಲ್ಲಿ ಒಟ್ಟು 2,00000 ಕಾಲ್ಗಳ 30,000, ಗಜದಳ 9,000 ಅಶ್ವದಳವಿದ್ದಿತೆಂದು ಹೇಳಲಾಗಿದೆ. ರಜಪೂತರ 4 ಸೈನಿಕರ ತುಕಡಿಗಳ ದಳಕ್ಕೆ ‘ಗುಲ್ಕ’ ಎಂದು ಕರೆಯುತ್ತಿದ್ದರು. ಇದರ ಮುಖ್ಯಸ್ಥರಿಗೆ ಗುಮಾಸ್ತ ಎಂದು ಹೆಸರು ಇತ್ತು. ದಂಡನಾಯಕ ಅಥವಾ ಸೇನಾಪತಿ ಸೈನ್ಯದ ಮುಖ್ಯಸ್ಥನಾಗಿದ್ದನು. ‘ಭಂಡಾರಿ’ ಎಂಬ ಅಧಿಕಾರಿ ಸೇನೆಗೆ ಬೇಕಾದ ಆಹಾರ, ಬಟ್ಟೆ, ಯುದ್ಧಾಸ್ತ್ರಗಳು ಹಾಗೂ ಮದ್ದುಗುಂಡುಗಳನ್ನು ಸರಬರಾಜು ಮಾಡಬೇಕಿತ್ತು. ಸೈನಿಕರು ದಂಡನಾಯಕನಿಗೆ ನಿಷ್ಠೆಯಿಂದ ಇರುತ್ತಿದ್ದರೇ ಹೊರತು ರಾಜನಿಗಲ್ಲ. ಇವರು ಕೇವಲ ಸಂಬಳಕ್ಕಾಗಿ ಕೆಲಸ ಮಾಡುತ್ತಿದ್ದರೆ ಹೊರತು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿರಲಿಲ್ಲ. ಸದಾ ಯುದ್ಧ ನಿರತ ರಜಪೂತರು ತಮ್ಮ ಒಳಜಗಳಗಳಿಂದ ಸೈನ್ಯದ ಶಿಸ್ತಿನ ಕಡೆಗೆ ಹೆಚ್ಚು ಗಮನ ಹರಿಸಲಿಲ್ಲ. ಈ ಕಾರಣದಿಂದ ತಮ್ಮ ಸೈನಿಕ ಶಕ್ತಿಯನ್ನು ನಾಶಮಾಡಿಕೊಂಡರು. ಸ್ವಾತಂತ್ರ್ಯ ಪ್ರಿಯರಾದ ರಜಪೂತರು ವಿದೇಶಿಯರ ದಾಳಿಯ ವೇಳೆಯಲ್ಲಿಯೂ ದೇಶದ ಸ್ವಾತಂತ್ರ್ಯ ರಕ್ಷಣೆಗಾದರೂ ಒಗ್ಗಟ್ಟಿನಿಂದ ಹೋರಾಡದೆ ಪ್ರತ್ಯೇಕವಾಗಿ ಹೋರಾಡಿ ಸೋತು ಸ್ವಾತಂತ್ರ್ಯವನ್ನು ಕಳೆದುಕೊಂಡರು.

ಭೂಕಂದಾಯ:

ಭೂಕಂದಾಯವು ರಾಜ್ಯದ ಮೂಲ ಆದಾಯವಾಗಿತ್ತು. ಪ್ರತಿಯೊಬ್ಬ ರೈತ ತಾನು ಬೆಳೆದ ಬೆಳೆಯಲ್ಲಿ ಸರ್ಕಾರಕ್ಕೆ 1/6 ಭಾಗ ಅಥವಾ 1/4 ಭಾಗದಷ್ಟು ತೆರಿಗೆಯನ್ನು ಸಲ್ಲಿಸಬೇಕಿತ್ತು. ಗ್ರಾಮಪಂಚಾಯತಿಗಳು ಕಂದಾಯ ವಸೂಲಿ ಮಾಡುವ ಕೇಂದ್ರಗಳಾಗಿದ್ದವು. ತೆರಿಗೆಯನ್ನು ಕಾಳು ಅಥವಾ ಹಣದ ರೂಪದಲ್ಲಿ ನೀಡಬಹುದಾಗಿತ್ತು. ಕಂದಾಯ ಹಣದ ರೂಪದಲ್ಲಿದ್ದರೆ ಅದನ್ನು ‘ಹಿರಣ್ಯ’ ಎಂದು ಕರೆಯಲಾಗುತ್ತಿತ್ತು. ರಸ್ತೆ ತೆರಿಗೆ, ವೃತ್ತಿ ತೆರಿಗೆ, ಮನೆಗಂದಾಯ, ತಲೆಗಂದಾಯ ಮುಂತಾದವುಗಳು ಆ ಕಾಲದ ಪ್ರಮುಖ ತೆರಿಗೆಗಳಾಗಿದ್ದವು. ವ್ಯಾಪಾರ ಹಾಗೂ ಕೈಗಾರಿಕೆಗಳಿಂದ ಬರುತ್ತಿದ್ದ ತೆರಿಗೆಯನ್ನು ‘ಶುಲ್ಕ’ ಎಂದು ಮಾರಾಟ ತೆರಿಗೆಯನ್ನು ‘ಮಂಡಪಿಕ’ ಎಂದು ಕರೆಯಲಾಗುತ್ತಿತ್ತು. ರಾಜ್ಯದ ಒಟ್ಟು ಆದಾಯದ ಅರ್ಧದಷ್ಟು ಸೈನ್ಯದ ಖರ್ಚಿಗಾಗಿ ಇನ್ನರ್ಧದಷ್ಟು ಸಾರ್ವಜನಿಕ ಕೆಲಸ ಕಾರ್ಯಗಳಿಗಾಗಿ ಖರ್ಚು ಮಾಡಲಾಗುತ್ತಿತ್ತು.

ನ್ಯಾಯಾಡಳಿತ:

ರಾಜನೇ ರಾಜ್ಯದ ಸರ್ವೋಚ್ಛ ನ್ಯಾಯಾಧೀಶನಾಗಿದ್ದನು. ಈತನ ಮಾತು ಅಂತಿಮವಾಗಿತ್ತು. ರಾಜನು ನ್ಯಾಯ ನಿಷ್ಠೆಗೆ ಹೆಸರಾಗಿದ್ದನು. ಜನರು ರಾಜನನ್ನು ಸಾಕ್ಷಾತ್ ದೇವರೆಂದೇ ಪೂಜಿಸುತ್ತಿದ್ದರು. ನ್ಯಾಯದಾನದ ವೇಳೆಯಲ್ಲಿ ಬಡವ ಬಲ್ಲಿದನೆನ್ನದೆ ಎಲ್ಲರಿಗೂ ಸಮಾನವಾಗಿ ನ್ಯಾಯವನ್ನು ನೀಡಲಾಗುತ್ತಿತ್ತು. ಪ್ರಾಂತಗಳಲ್ಲಿ ಠಾಕೂರರು ಹಾಗೂ ಜಮೀನುದಾರರು ನ್ಯಾಯ ವಿಚಾರಣೆ ಮಾಡುತ್ತಿದ್ದರೆ, ಗ್ರಾಮಗಳಲ್ಲಿ ಗ್ರಾಮಸಮಿತಿಗಳು ನ್ಯಾಯ ತೀರ್ಮಾನ ಮಾಡುತ್ತಿದ್ದವು. ಅಪರಾಧಿಗಳಿಗೆ ಕಠಿಣವಾದ ಶಿಕ್ಷೆಯನ್ನು ನೀಡಲಾಗುತ್ತಿತ್ತು. ಕೈಕಾಲು ಕತ್ತರಿಸುವುದು, ಕಣ್ಣು ಕೀಳುವುದು, ದಂಡ, ಗಡಿಪಾರು ಮುಂತಾದ ಶಿಕ್ಷೆಗಳು ಸರ್ವೆಸಾಮಾನ್ಯವಾಗಿದ್ದವು.

ಉಪಸಂಹಾರ:

ರಾಜಪೂತ ಆಡಳಿತ ವ್ಯವಸ್ಥೆ ಯೋಧಪ್ರಧಾನ ಮತ್ತು ಕುಲಾಧಾರಿತ ಸಮಾಜಕ್ಕೆ ಸೂಕ್ತವಾಗಿದ್ದು, ಶತಮಾನಗಳ ಕಾಲ ರಾಜಪೂತ ರಾಜ್ಯಗಳು ತಮ್ಮ ರಾಜಕೀಯ ಸ್ವಾತಂತ್ರ್ಯ ಮತ್ತು ಸಾಂಸ್ಕೃತಿಕ ಗುರುತನ್ನು ಉಳಿಸಿಕೊಳ್ಳಲು ಸಹಾಯ ಮಾಡಿತು. ಆದರೆ, ಇದರ ಅತಿಯಾದ ವಿಕೇಂದ್ರೀಕರಣ, ವೈಯಕ್ತಿಕ ನಿಷ್ಠೆಯ ಮೇಲಿನ ಅವಲಂಬನೆ ಮತ್ತು ಬಲಿಷ್ಠ ಕೇಂದ್ರೀಕೃತ ಆಡಳಿತದ ಕೊರತೆ ದೀರ್ಘಾವಧಿಯಲ್ಲಿ ಆಡಳಿತಾತ್ಮಕ ಹಾಗೂ ಆರ್ಥಿಕ ದುರ್ಬಲತೆಗೆ ಕಾರಣವಾಯಿತು.

ಧೈರ್ಯ, ಗೌರವ ಮತ್ತು ಸ್ಥಳೀಯ ಸ್ವಶಾಸನವನ್ನು ಉತ್ತೇಜಿಸಿದರೂ, ಈ ವ್ಯವಸ್ಥೆ ಶಕ್ತಿಶಾಲಿ ಕೇಂದ್ರೀಕೃತ ಸಾಮ್ರಾಜ್ಯಗಳೊಂದಿಗೆ ಸ್ಪರ್ಧಿಸಲು ಕಷ್ಟಪಟ್ಟಿತು. ಆದರೂ, ಧರ್ಮ, ಶೌರ್ಯ ಮತ್ತು ಪ್ರಾದೇಶಿಕ ಆಡಳಿತಕ್ಕೆ ನೀಡಿದ ಮಹತ್ವದ ಕಾರಣದಿಂದ ರಾಜಪೂತ ಆಡಳಿತ ವ್ಯವಸ್ಥೆ ಮಧ್ಯಯುಗೀನ ಭಾರತದ ರಾಜಕೀಯ ಇತಿಹಾಸದಲ್ಲಿ ಮಹತ್ವದ ಸ್ಥಾನವನ್ನು ಹೊಂದಿದೆ.

ರಜಪೂತರ ಕಲೆ ಹಾಗೂ ವಾಸ್ತುಶಿಲ್ಪ

ರಜಪೂತರ ಕಲೆ ಹಾಗೂ ವಾಸ್ತುಶಿಲ್ಪ

ರಜಪೂತ ಅರಸರು ಸಾಹಿತ್ಯ ಪೋಷಕರು ಮತ್ತು ಧರ್ಮ ಸಹಿಷ್ಣುರಾಗಿದ್ದಂತೆ ಕಲಾಭಿಮಾನಿಗಳು ಮತ್ತು ಕಲೋಪಾಸಕರಾಗಿದ್ದರು. ಭಾರತೀಯ ಕಲಾ ಪರಂಪರೆಯಲ್ಲಿ ರಜಪೂತರಿಂದ ಹೊಸದೊಂದು ಯುಗ ಆರಂಭಗೊಂಡಿತು. ರಜಪೂತರಿಂದ ರಚನೆಗೊಂಡ ಕಲಾಸ್ಮಾರಕಗಳೆಂದರೆ:- ದೇವಾಲಯಗಳು, ಅರಮನೆಗಳು, ಕೋಟೆಕೊತ್ತಲಗಳು, ಸ್ನಾನಘಟ್ಟಗಳು, ನೀರಾವರಿ ಅಣೆಕಟ್ಟುಗಳು ಮೊದಲಾದವು. ರಜಪೂತರ ಕಲಾಸ್ಮಾರಕಗಳು ಒರಿಸ್ಸಾ, ಖಜುರಾಹೋ, ರಾಜಸ್ಥಾನ, ಗುಜರಾತ್, ಮಧ್ಯಭಾರತ ಮತ್ತು ಕಾಥೇವಾಡಗಳಲ್ಲಿ ಕಂಡುಬರುತ್ತದೆ.

1. ಕೋಟೆಗಳು : ರಜಪೂತರ ಕಾಲದಲ್ಲಿ ಅಭೇದ್ಯ ಮತ್ತು ಪ್ರಬಲ ದುರ್ಗ ಅಥವಾ ಕೋಟೆಗಳು ನಿರ್ಮಾಣಗೊಂಡವು. ರಣತಂಬೂರ್, ಚಿತ್ತೂರು, ಕುಂಭಲಘಡ, ಗ್ವಾಲಿಯರ್, ಚಾಂದೇರಿ, ಮಾಂಡು ಮತ್ತು ಅಸೀರ್‌ಘಡದ ಕೋಟೆಗಳು ಪ್ರಮುಖ ಕೋಟೆಗಳಾಗಿವೆ. ಇಂತಹ ಕೋಟೆಗಳಲ್ಲಿ ಸರಳ ರೀತಿಯ ಕಲೆಯಿದ್ದು ಕಲಾ ರಮ್ಯತೆಯು ಕಂಡುಬರುವುದಿಲ್ಲ.

2 ಅರಮನೆಗಳು : ರಜಪೂತರ ಕಲೆಯು ಅರಮನೆಗಳಲ್ಲಿಯೂ ಪ್ರತಿಬಿಂಬಿತವಾಗಿದೆ. ಮಹಮ್ಮದೀಯರ ಧಾಳಿಗೆ ಸಿಕ್ಕು ಅನೇಕ ಅರಮನೆಗಳು ಶಿಥಿಲಗೊಂಡಿವೆ. ಕೆಲವು ಅರಮನೆಗಳು ಯಥಾವತ್ತಾಗಿ ಉಳಿದುಬಂದಿವೆ. ಇವುಗಳಲ್ಲಿ ಗ್ವಾಲಿಯರ್‌ನ ಮಾನ್‌ಸಿಂಹನ ಅರಮನೆ, ಅಂಬರ್ ಮತ್ತು ಉದಯ್‌ ಪುರದ ಅರಮನೆಗಳು ಪ್ರಮುಖವಾಗಿವೆ.

ಜಯಪುರದ ಹವಾಮಹಲ್ (Hawa Mahal) ರಾಜಸ್ಥಾನದ ಅತ್ಯಂತ ಪ್ರಸಿದ್ಧ ಐತಿಹಾಸಿಕ ಸ್ಮಾರಕಗಳಲ್ಲಿ ಒಂದಾಗಿದೆ. ಇದನ್ನು ಗಾಳಿಯ ಅರಮನೆ ಎಂದೂ ಕರೆಯಲಾಗುತ್ತದೆ.

ಹವಾಮಹಲ್ ನಿರ್ಮಾಣ ಮತ್ತು ಇತಿಹಾಸ:
1799ರಲ್ಲಿ ಜೈಪುರದ ಮಹಾರಾಜ ಸವಾಯಿ ಪ್ರತಾಪ್ ಸಿಂಗ್ ಅವರು ಈ ಮಹಲ್‌ನ್ನು ನಿರ್ಮಿಸಿದರು. ಇದನ್ನು ಪ್ರಸಿದ್ಧ ವಾಸ್ತುಶಿಲ್ಪಿ ಲಾಲ್ ಚಂದ್ ಉಸ್ತಾದ್ ವಿನ್ಯಾಸಗೊಳಿಸಿದರು. ಈ ಕಟ್ಟಡವು ರಾಜಮಹಲ್ ಸಮುಚ್ಚಯದ ಒಂದು ಭಾಗವಾಗಿದ್ದು, ನಗರ ಜೀವನವನ್ನು ಅರಮನೆಯೊಳಗಿನಿಂದಲೇ ವೀಕ್ಷಿಸಲು ಸಹಾಯ ಮಾಡುತ್ತಿತ್ತು.

ವಾಸ್ತುಶಿಲ್ಪ ವೈಶಿಷ್ಟ್ಯಗಳು:
ಹವಾಮಹಲ್‌ ಐದು ಮಹಡಿಗಳ ಎತ್ತರದ ಕಟ್ಟಡವಾಗಿದ್ದು, ಗುಲಾಬಿ ಬಣ್ಣದ ಮರಳುಗಲ್ಲಿನಿಂದ ನಿರ್ಮಿತವಾಗಿದೆ. ಇದರಲ್ಲಿ ಸುಮಾರು 953 ಸಣ್ಣ ಕಿಟಕಿಗಳು (ಜರೋಕಾಗಳು) ಇವೆ. ಈ ಕಿಟಕಿಗಳ ಮೂಲಕ ಗಾಳಿ ನಿರಂತರವಾಗಿ ಹರಿಯುವುದರಿಂದ ಒಳಗೆ ಸದಾ ತಂಪಾದ ವಾತಾವರಣ ಇರುತ್ತಿತ್ತು—ಆದ್ದರಿಂದ “ಹವಾಮಹಲ್” ಎಂಬ ಹೆಸರು ಬಂದಿದೆ. ಕಟ್ಟಡದ ಮುಂಭಾಗವು ಜೇನುಗೂಡು (honeycomb) ಆಕಾರವನ್ನು ಹೊಂದಿದೆ.

ಉದ್ದೇಶ:
ಪರ್ದಾ ಪದ್ಧತಿಯನ್ನು ಪಾಲಿಸುವ ರಾಜಮಹಿಳೆಗಳು ಸಾರ್ವಜನಿಕ ರಸ್ತೆಗಳಲ್ಲಿ ನಡೆಯುವ ಉತ್ಸವಗಳು, ಮೆರವಣಿಗೆಗಳು ಮತ್ತು ದಿನನಿತ್ಯದ ಚಟುವಟಿಕೆಗಳನ್ನು ಯಾರಿಗೂ ಕಾಣಿಸದೇ ವೀಕ್ಷಿಸಲು ಈ ಮಹಲ್ ಬಳಸುತ್ತಿದ್ದರು.

ಸಾಂಸ್ಕೃತಿಕ ಮಹತ್ವ:
ಹವಾಮಹಲ್ ಜೈಪುರದ ರಜಪೂತ ವಾಸ್ತುಶಿಲ್ಪದ ಅದ್ಭುತ ಮಾದರಿಯಾಗಿದ್ದು, ರಾಜಸ್ಥಾನದ ಸಂಸ್ಕೃತಿ ಮತ್ತು ಕಲೆಗಳ ಪ್ರತೀಕವಾಗಿದೆ. ಇಂದು ಇದು ಪ್ರವಾಸಿಗರನ್ನು ಆಕರ್ಷಿಸುವ ಪ್ರಮುಖ ತಾಣವಾಗಿದೆ.

ಮಾನ್‌ಸಿಂಗ್ ಅರಮನೆ (Man Singh Palace) ರಾಜಸ್ಥಾನದ ಜೈಪುರದಲ್ಲಿ ಇರುವ ಪ್ರಮುಖ ಐತಿಹಾಸಿಕ ಸ್ಮಾರಕವಾಗಿದೆ. ಇದು ರಾಜಪುತ ಹಾಗೂ ಮೊಘಲ್ ವಾಸ್ತುಶಿಲ್ಪದ ಸೊಗಸಾದ ಸಂಯೋಜನೆಯನ್ನು ಪ್ರದರ್ಶಿಸುತ್ತದೆ.

ಇತಿಹಾಸ:
ಈ ಅರಮನೆಯನ್ನು 16ನೇ ಶತಮಾನದಲ್ಲಿ ಅಂಬರ್‌ನ ಮಹಾರಾಜ ಮಾನ್‌ಸಿಂಗ್ I ಅವರು ನಿರ್ಮಿಸಿದರು. ಅವರು ಮೊಘಲ್ ಸಾಮ್ರಾಟ ಅಕ್ಬರ್ ಅವರ ನಿಷ್ಠಾವಂತ ಸೇನಾನಿ ಹಾಗೂ ಸೇನಾಪತಿಯಾಗಿದ್ದರು. ಈ ಅರಮನೆ ಅಂಬರ್ ಕೋಟೆಯ ಒಳಭಾಗದಲ್ಲಿದೆ.

ವಾಸ್ತುಶಿಲ್ಪ:
ಮಾನ್‌ಸಿಂಗ್ ಅರಮನೆ ನಾಲ್ಕು ಮಹಡಿಗಳನ್ನೊಳಗೊಂಡಿದ್ದು, ಕೆಂಪು ಮತ್ತು ಹಳದಿ ಮರಳುಗಲ್ಲಿನಿಂದ ನಿರ್ಮಾಣವಾಗಿದೆ. ಅರಮನೆಯ ಗೋಡೆಗಳ ಮೇಲೆ ಸುಂದರ ಚಿತ್ರಕಲೆಗಳು, ಹೂವಿನ ಅಲಂಕಾರಗಳು ಮತ್ತು ಭೌಮಿತೀಯ ವಿನ್ಯಾಸಗಳು ಕಾಣಸಿಗುತ್ತವೆ. ಒಳಾಂಗಣದಲ್ಲಿರುವ ಸಭಾಂಗಣಗಳು, ಮಂಟಪಗಳು ಮತ್ತು ದರ್ಬಾರ್ ಹಾಲ್‌ಗಳು ಅದರ ವೈಭವವನ್ನು ತೋರಿಸುತ್ತವೆ.

ವಿಶೇಷತೆ:
ಈ ಅರಮನೆ ರಾಜಕುಟುಂಬದ ವಾಸಸ್ಥಳವಾಗಿತ್ತು. ಅರಮನೆಯಲ್ಲಿನ ಚಿತ್ರಗಳು ಹಾಗೂ ಅಲಂಕಾರಗಳು ರಾಜಪುತ ಸಂಸ್ಕೃತಿ ಮತ್ತು ಮೊಘಲ್ ಕಲೆಯ ಪ್ರಭಾವವನ್ನು ಸ್ಪಷ್ಟವಾಗಿ ತೋರಿಸುತ್ತವೆ.

ಮಹತ್ವ:
ಮಾನ್‌ಸಿಂಗ್ ಅರಮನೆ ಅಂಬರ್ ಕೋಟೆಯ ಪ್ರಮುಖ ಆಕರ್ಷಣೆಯಾಗಿದ್ದು, ಜೈಪುರದ ಇತಿಹಾಸ, ಶಿಲ್ಪಕಲೆ ಮತ್ತು ಸಂಸ್ಕೃತಿಯ ಅಧ್ಯಯನಕ್ಕೆ ಅತ್ಯಂತ ಉಪಯುಕ್ತವಾಗಿದೆ.

3. ದೇವಾಲಯಗಳು : ರಜಪೂತರ ಕಾಲದ ಕಲೆಯು ರಮ್ಯತೆ ಮತ್ತು ವೈಭವವನ್ನು ಕಂಡಿರುವುದು ದೇವಾಲಯಗಳಲ್ಲಿ. ರಜಪೂತರ ಕಾಲದ ಪ್ರಮುಖ ದೇವಾಲಯಗಳೆಂದರೆ:-

ಬಂದೇಲ್ ಖಂಡದಲ್ಲಿನ –ಖುಜುರಾಹೋ ದೇವಾಲಯಗಳು (ಇಲ್ಲಿ 80 ಕ್ಕೂ ಹೆಚ್ಚು ದೇವಾಲಯಗಳಿವೆ)

ಓರಿಸ್ಸಾದ – ಭುವನೇಶ್ವರ, ಪುರಿ ಮತ್ತು ಕೊರ್ನಾಕ್‌ ದೇವಾಲಯ

ಜೋಧಪುರದ – ಓಸಿಯಾ ದೇವಾಲಯ,

ಚಿತ್ತೂರಿನ – ಕಾಳಿಕಾಮಾತಾ ದೇವಾಲಯ,

ಉದಯಪುರದ – ಏಕಲಿಂಗ ದೇವಾಲಯ,

ಮೌಂಟ್ ಅಬುನಲ್ಲಿರುವ – ಅಮೃತಶಿಲೆಯ ಜೈನದೇವಾಲಯಗಳು

ಇವುಗಳು ರಜಪೂತರ ಕಲೆಯನ್ನು ಪ್ರತಿಬಿಂಬಿಸುವ ಮೇರು ಕಲಾಕೃತಿಗಳಾಗಿವೆ.

ದೇವಾಲಯಗಳ ಪ್ರಧಾನ ಲಕ್ಷಣಗಳು

ರಜಪೂತರ ದೇವಾಲಯಗಳಲ್ಲಿ ಗರ್ಭಗೃಹ, ಭವ್ಯವಾದ ಶಿಖರಗಳು, ಶಿಖರದ ಮೇಲಿನ ಚಿನ್ನದ ಕಳಸ, ಗರ್ಭಗೃಹದ ಮುಂದೆ ವಿಶಾಲವಾದ ಸಭಾಮಂಟಪ, ಕಂಬಗಳಲ್ಲಿನ ಸೂಕ್ಷ್ಮಕೆತ್ತನೆ ಇವುಗಳು ಪ್ರಧಾನ ಲಕ್ಷಣಗಳಾಗಿ ಕಂಡುಬರುತ್ತವೆ. ಮಥುರಾದ ಸೂರ್ಯ ದೇವಾಲಯವು ಸೌಂದರ್ಯಕ್ಕೆ ಹೆಸರಾಗಿದೆ. ರುದ್ರಮಾಲಾ ದೇವಾಲಯವು ಅತ್ಯಂತ ವಿಶಾಲ ಮತ್ತು ಅಲಂಕೃತವಾದ ದೇವಾಲಯವೆಂದೇ ಖ್ಯಾತವಾಗಿದೆ. ರಜಪೂತರ ಕಾಲದ ಕೊನೆಯ ದಿನಗಳಲ್ಲಿ ನಿರ್ಮಾಣಗೊಂಡ ದೇವಾಲಯಗಳು ಹೊರಭಾಗದಲ್ಲಿ ಮೊದಲಿನ ದೈವಿಕ ಮತ್ತು ನೈತಿಕ ಚಿತ್ರಗಳ ಜೊತೆಗೆ ಅಶ್ಲೀಲವಾದ ಚಿತ್ರಗಳನ್ನು ಹೊಂದಿದೆ.

ಶಿಲ್ಪಕಲೆ : ರಜಪೂತರ ಕಾಲದಲ್ಲಿ ಶಿಲ್ಪಕಲೆಯು ಕೂಡ ಅಭಿವೃದ್ಧಿಗೊಂಡಿತು. ‘ಆಕೃತಿ ಶಿಲ್ಪಕಲೆ’ ಅಥವಾ ‘ಪ್ಲಾಸ್ಟಿಕ್ ಶಿಲ್ಪಕಲೆಯು’ ಪರಮೋನ್ನತಿ ತಲುಪಿತ್ತು. ಖಜುರಾಹೋದ ಮೂರ್ತಿಶಿಲ್ಪ ಶೃಂಗಾರ ಮೂರ್ತಿಶಿಲ್ಪವೆನಿಸಿದೆ. ಇದರಲ್ಲಿ ಬಿಡಿಸಲ್ಪಟ್ಟ ಮೂರ್ತಿಯ ಮುಖಭಾವ, ದುಂಡನೆಯ ಕೆನ್ನೆಗಳು, ಎದ್ದು ಕಾಣುತ್ತಿರುವ ನೇತ್ರ, ನಾಸಿಕ, ಹುಬ್ಬು, ತುಟಿಗಳು ಆಕರ್ಷಕವಾಗಿ ಮೂಡಿಬಂದಿದೆ.

ಚಂದೇಲರ ಪ್ರಮುಖ ನಗರ ಮಹೋಬದಲ್ಲಿ ಬುದ್ಧ ಹಾಗೂ ತಾರಾ ಮೂರ್ತಿಗಳಿವೆ. ಬ್ರಿಟೀಷ್ ಮ್ಯೂಸಿಯಂ ನಲ್ಲಿರುವ ‘ಸರಸ್ವತಿ ಮೂರ್ತಿ’ ಅಂದಿನ ಶಿಲ್ಪಕಲೆಗೆ ಅತ್ಯುತ್ತಮ ನಿದರ್ಶನವಾಗಿದೆ. ಮೌಂಟ್ ಅಬುದಲ್ಲಿನ ಮೂರ್ತಿಶಿಲ್ಪವು ಅತ್ಯಂತ ಸೂಕ್ಷ್ಮ ಮತ್ತು ಶ್ರೀಮಂತ ಶಿಲ್ಪವೆನಿಸಿದೆ. ಹೀಗೆ ರಜಪೂತರ ಕಾಲದಲ್ಲಿ ಕಲಾ ಶ್ರೀಮಂತಿಕೆಯು ವೈಭವ ಪೂರ್ಣವಾದ ಔನ್ನತ್ಯದ ಸ್ಥಿತಿಯನ್ನು ತಲುಪಿತ್ತು.

ಖಜುರಾಹೋ ದೇವಾಲಯಗಳು:     

ಬಂದೇಲಖಂಡದ ‘ಖಜುರಾಹೊ’ ಇಂದಿನ ಮಧ್ಯಪ್ರದೇಶ ರಾಜ್ಯದಲ್ಲಿದೆ. ಖಜುರಾಹೊ ರಜಪೂತರ ದೇವಾಲಯಗಳ ತವರು ಮನೆ. ಇಲ್ಲಿ ದೇವಾಲಯಗಳ ದೊಡ್ಡ ಸಮೂಹವೇ ಕಂಡು ಬಂದಿದೆ. ಇದಕ್ಕೆ ಮೂಲ ಕಾರಣರಾದವರೆಂದರೆ ಚಂದೇಲ ಆರಸರು. ಇವರು ಕ್ರಿ.ಶ.950ರಿಂದ 1050ರ ಅವಧಿಯಲ್ಲಿ ಖಜುರಾಹೋದಲ್ಲಿ ಅನೇಕ ದೇವಾಲಯಗಳನ್ನು ಕ್ರಿಯಾತ್ಮಕವಾಗಿ ನಿರ್ಮಿಸಿದ್ದಾರೆ. ಖಜುರಾಹೋ ಎಂದರೆ ಖರ್ಜೂರ ವೃಕ್ಷಗಳ ಮಾರ್ಗ ಎಂದರ್ಥ. ಖುಜರಾಹೋ ಮಧ್ಯಪ್ರದೇಶದ ಬಂದೇಲ ಖಂಡದ ಒಂದು ಸಣ್ಣ ಕುಗ್ರಾಮ. ಇದು ಸುಮಾರು 8 ಕಿ.ಮೀ. ವಿಸ್ತಾರ ಹೊಂದಿದೆ. ಇಲ್ಲಿ ಸುಮಾರು 85ಕ್ಕಿಂತಲೂ ಅಧಿಕ ದೇವಾಲಯಗಳನ್ನು ನಿರ್ಮಿಸಲಾಗಿದೆ. ಅವುಗಳಲ್ಲಿ ಶೈವ, ವೈಷ್ಣವ ಹಾಗು ಜೈನಧರ್ಮಗಳಿಗೆ ಸಂಬಂಧಿಸಿದ ಹಲವಾರು ದೇವಾಲಯಗಳು ಇವೆ. ಇವುಗಳನ್ನು ನಾಗರಶೈಲಿಯಲ್ಲಿ ನಿರ್ಮಿಸಲಾಗಿದೆ. ಈ ಎಲ್ಲಾ ದೇವಾಲಯಗಳು ನದಿಯ ದಡದಲ್ಲಿ ನಿರ್ಮಾಣವಾಗಿವೆ. ಈ ದೇವಾಲಯಗಳು ಮಧ್ಯದಲ್ಲಿ ಉಬ್ಬಿಕೊಂಡಂತೆ ಇರುವ ಎತ್ತರವಾದ ದ್ವಾರಗೋಪುರವನ್ನು ಹೊಂದಿವೆ. ಈ ದೇವಾಲಯಗಳ ಶಿಖರಗಳು ಪಿರಾಮಿಡ್ಡಿನಾಕಾರದಲ್ಲಿದೆ. ಖಜುರಾಹೊ ದೇವಾಲಯದ ದೊಡ್ಡ ಶಿಖರದ ಸುತ್ತಲೂ ಚಿಕ್ಕಚಿಕ್ಕ ಶಿಖರಗಳನ್ನು ನಿರ್ಮಿಸಲಾಗಿದೆ. ದೇವಾಲಯಗಳು ಗಾತ್ರ ಹಾಗೂ ರೂಪಗಳಲ್ಲಿ ಎಲ್ಲಿಯೂ ತಮ್ಮ ಪ್ರಭುತ್ವವನ್ನು ಕಳೆದುಕೊಂಡಿಲ್ಲ. ದೇವಾಲಯಗಳು ಮುಖ್ಯವಾಗಿ ನಾಲ್ಕು ಭಾಗಗಳನ್ನು ಹೊಂದಿದ್ದು, ಅವುಗಳೆಂದರೆ ಪ್ರವೇಶ ಮಂಟಪ, ಮಧ್ಯ ಮಂಟಪ, ಅಂತರಾಳ ಹಾಗೂ ಗರ್ಭ ಗೃಹ ಪ್ರಮುಖವಾದವುಗಳಾಗಿವೆ. ಗರ್ಭಗೃಹವು ಕತ್ತಲೆಯಿಂದ ಕೂಡಿದ್ದುದಾಗಿದ್ದು, ಅದರ ಸುತ್ತ ಪ್ರದಕ್ಷಿಣಾ ಪಥವಿದೆ. ದೇವಾಲಯದ ಸುತ್ತಲೂ ಅಸಂಖ್ಯಾತ ಶಿಲ್ಪಗಳಿದ್ದು, ಸುಂದರವಾದ ಕೆತ್ತನೆಯಿಂದ ಕೂಡಿದೆ. ದೇವಾಲಯಕ್ಕೆ ಸಾಮಾನ್ಯವಾಗಿ ಒಂದೇ ಪ್ರವೇಶದ್ವಾರವಿದೆ. ಮೆಟ್ಟಿಲುಗಳನ್ನು ಏರಿ ದೇವಾಲಯ ಪ್ರವೇಶಿಸಬೇಕಾಗುತ್ತದೆ.

ಖಜುರಾಹೊ ಒಂದರಲ್ಲಿಯೇ 30ಕ್ಕಿಂತ ಹೆಚ್ಚು ದೇವಾಲಯಗಳಿವೆ. ಅವುಗಳನ್ನು ಪೂರ್ವ, ಪಶ್ಚಿಮ ಹಾಗೂ ದಕ್ಷಿಣ ದೇವಾಲಯಗಳ ಸಮುಚ್ಚಯ ಎಂದು ಕರೆಯಲಾಗಿದೆ. ಆದ ಕಾರಣ ಖಜುರಾಹೊವನ್ನು ಎರಡನೆಯ ವಾರಣಾಸಿ ಎಂದು ಹೆಸರಿಸಲಾಗಿದೆ. ಪೂರ್ವ ಸಮುಚ್ಚಯದಲ್ಲಿ ಬ್ರಹ್ಮ, ವಿಷ್ಣು, ವರುಣ ದೇವಾಲಯಗಳನ್ನು ನಿರ್ಮಿಸಿದ್ದರೆ. ಪಶ್ಚಿಮದಲ್ಲಿ ಲಕ್ಷ್ಮಣ, ಮತಂಗ, ವರಾಹ, ವಿಶ್ವನಾಥ, ನಂದಿ ಹಾಗೂ ಕಂದಾರಿಯ ಮಹಾದೇವ ದೇವಾಲಯಗಳನ್ನು ನಿರ್ಮಿಸಲಾಗಿದೆ. ಹಾಗೆಯೇ ದಕ್ಷಿಣದಲ್ಲಿ ದುಲ್ ಮಹಾದೇವ ಹಾಗೂ ಚತುರ್ಭುಜ ದೇವಾಲಯಗಳನ್ನು ಕಟ್ಟಲಾಗಿದೆ. ಖಜುರಾಹೊದ ದೇವಾಲಯಗಳಲ್ಲಿ ಅತ್ಯಂತ ಮನಮೋಹಕವಾಗಿ ಕಾಣುವ ದೇವಾಲಯವೆಂದರೆ ವಿಶ್ವನಾಥ ದೇವಾಲಯ. ಇದನ್ನು ಕ್ರಿಶ. 1002ರಲ್ಲಿ ಧಂಗವರ್ಮ ಎಂಬುವನ ನಿರ್ಮಿಸಿದನು. ಈ ದೇವಾಲಯ ಪ್ರಾಂಗಣವನ್ನು ಹೊಂದಿದ್ದು, ಕಿರಿದಾದ ಹಾಗೂ ಹಿರಿದಾದ ಶಿಖರಗಳನ್ನು ಹೊಂದಿದೆ. ಮಹಾದೇವ ದೇವಾಲಯ ಖುಜರಾಹೋವಿನ ಅತ್ಯಂತ ಪ್ರಸಿದ್ದ ದೇವಾಲಯವಾಗಿದೆ. ಇದು 166 ಅಡಿ ಎತ್ತರ, 101 ಅಡಿ ಉದ್ದ ಹಾಗೂ 101 ಆಡಿ ಅಗಲವಾಗಿದೆ. ಈ ದೇವಾಲಯವು ಸುಮಾರು 650ಕ್ಕಿಂತಲೂ ಹೆಚ್ಚು ಮೂರ್ತಿ ಶಿಲ್ಪಗಳನ್ನು ಹೊಂದಿದೆ. ಇದರ ಮೇಲ್ಟಾವಣಿ ಗುಮ್ಮಟಾಕಾರದಲ್ಲಿ ಇದೆ.

ಈ ದೇವಾಲಯದ ಪ್ರತಿಶಿಲ್ಪಗಳು ದುಂಡನೆಯ ಕೆನ್ನೆಗಳನ್ನು ಹೊಂದಿದ್ದು, ಮುಖಕ್ಕೆ ಅಂದವನ್ನು ಹೆಚ್ಚಿಸುವ ನೇತ್ರ, ಹುಬ್ಬು, ಕಣ್ಣು, ನಾಸಿಕ ಹಾಗೂ ತುಟಿಗಳನ್ನು ಹೊಂದಿದೆ. ಒಸ್ಸಿಮಾ ಎಂಬಲ್ಲಿ ರಜಪೂತರು ಸುಮಾರು 16 ಹಿಂದೂ ಹಾಗೂ ಜೈನ ದೇವಾಲಯಗಳನ್ನು ನಿರ್ಮಿಸಿದರು. ಚಿತ್ತೂರಿನ ಕಾಳಿಕಾ ದೇಗುಲ ಹಾಗೂ ಉದಯಪುರದ ಏಕಲಿಂಗ ದೇವಾಲಯ ರಜಪೂತರ ಕಲಾ ನೈಪುಣ್ಯತೆಗೆ ಕನ್ನಡಿ ಹಿಡಿದಂತಿದೆ. ಗುಜರಾತಿನ ಸೋಮನಾಥ ದೇವಾಲಯ ಆ ಕಾಲದ ಅತಿ ದೊಡ್ಡ ಶ್ರೀಮಂತ ದೇವಾಲಯವಾಗಿತ್ತು. ಇದನ್ನು ಘಜಿಮಹಮದ್ ನಾಶಗೊಳಿಸಿದನು. ಮಥುರಾ ರಜಪೂತರ ಕಲಾಕೇಂದ್ರವಾಗಿತ್ತು. ಒಟ್ಟಿನಲ್ಲಿ ಖಜುರಾಹೊದ ದೇವಾಲಯಗಳು ರಜಪೂತರ ಹೆಸರನ್ನು ಇಡೀ ವಿಶ್ವದಾದ್ಯಂತ ಅಜರಾಮರವಾಗಿಸಿವೆ.

ಕೋನಾರ್ಕ್ (ಸೂರ್ಯ ದೇವಾಲಯ)

ಕೋನಾರ್ಕ್ ಓರಿಸ್ಸಾದ ಒಂದು ಪ್ರಸಿದ್ಧ ದೇವಾಲಯದ ತಾಣವಾಗಿದೆ. ಓರಿಸ್ಸಾನಿಂದ ಸುಮಾರು 68 ಕಿ.ಮೀ. ದೂರದಲ್ಲಿರುವ ಕೋನಾರ್ಕ್ ಸುಮಾರು 5000 ಜನಸಂಖ್ಯೆಯನ್ನು ಒಳಗೊಂಡಿದೆ. ಓರಿಸ್ಸಾದ ಪುರಿ ಜಿಲ್ಲೆಯಲ್ಲಿರುವ ಕೋನಾರ್ಕ್‌ ನಲ್ಲಿ ಒಟ್ಟು 28 ದೇವಾಲಯಗಳಿದ್ದು, ಇವುಗಳಲ್ಲಿ ಸೂರ್ಯದೇವಾಲಯ ಅತ್ಯಂತ ಪ್ರಮುಖವಾದುದ್ದಾಗಿದೆ. ಸೂರ್ಯನ ಕಿರಣಗಳು ಮೊದಲು ಈ ದೇವಾಲಯದ ಒಳಗಿನ ವಿಗ್ರಹದ ಮೇಲೆ ಒಂದು ನಿರ್ದಿಷ್ಟ ಕೋನದ ಮೇಲೆ ಬೀಳುತ್ತವೆ. ಹೀಗಾಗಿ ಈ ದೇವಾಲಯಕ್ಕೆ ಕೋನ+ಆರ್ಕ=ಕೋನಾರ್ಕ ಎಂಬ ಹೆಸರು ಬಂದಿದೆ. ಈ ದೇವಾಲಯವನ್ನು ಒಂದನೆಯ ನರಸಿಂಹನ ಆಳ್ವಿಕೆಯಲ್ಲಿ ಕಟ್ಟಲಾಯಿತು. ಈಗ ಕೋನಾರ್ಕ ದೇವಾಲಯ ಪಾಳು ಬಿದ್ದು, ಒಂದು ಚೌಕೋನ ಅಂಗಳದ ಮಧ್ಯದಲ್ಲಿ ಇದೆ. ರೇಖಾನಾಗರ ಶೈಲಿಯಲ್ಲಿ ರಚಿತವಾದ ಕೋನಾರ್ಕ್ ದೇವಾಲಯ ಬಂಗಾಳ ಕೊಲ್ಲಿಯ ಸಮುದ್ರ ತೀರದಲ್ಲಿದೆ. ಇದು 865 ಅಡಿ ಉದ್ದ, 540 ಅಡಿ ಅಗಲ ಹಾಗೂ 16 ಅಡಿ ಎತ್ತರದ ಪೀಠದ ಮೇಲೆ ನಿಂತಿದೆ. ಈ ದೇಗುಲದ ನಿರ್ಮಾಣಕ್ಕೆ 12,000 ಜನರು ಸತತವಾಗಿ 12ವರ್ಷಗಳ ಕಾಲ ಶ್ರಮಿಸಿ ನಿರ್ಮಿಸಿದ್ದಾರೆ. ಸುಮಾರು 12 ವರ್ಷಗಳವರೆಗೆ ಬಂದ ಕಂದಾಯದಿಂದ ಇದನ್ನು ನಿರ್ಮಿಸಲಾಗಿದೆ. ಕೋನಾರ್ಕ್ ದೇವಾಲಯದ ನಿರ್ಮಾಣದಲ್ಲಿ ಬಿಳಿ ಮರಳುಕಲ್ಲು ಹಾಗೂ ಕಪ್ಪು ಹಸಿರಿನ ಕ್ಲೋರೈಡ್ ಶಿಲ್ಪ ಶಿಲೆಗಳನ್ನು ಬಳಸಲಾಗಿದೆ. ಇದನ್ನು ನಿರ್ಮಿಸಲು 2000 ಟನ್‌ ಗಳಷ್ಟು ಶಿಲೆಯನ್ನು ಬಳಸಲಾಗಿದೆ. ಕೋನಾರ್ಕ್ ದೇವಾಲಯವನ್ನು ದೂರದಿಂದ ವೀಕ್ಷಿಸಿದಾಗ ಅದು ಕಪ್ಪಾಗಿ ಕಾಣುತ್ತದೆ. ಆದುದರಿಂದ ಸೂರ್ಯದೇವಾಲಯವನ್ನು ಕಷ್ಟು ದೇವಾಲಯ ಅಥವಾ ಬ್ಲಾಕ್ ಪಗೋಡಾ ಎಂದು ಕರೆಯಲಾಗಿದೆ. ಇದರ ಒಟ್ಟು ಎತ್ತರ 228 ಅಡಿಗಳು. ಈ ಸೂರ್ಯದೇಗುಲ ಏಳು ಕುದುರೆಗಳಿಂದ ಎಳೆಯಲ್ಪಡುತ್ತಿರುವ ಒಂದು ಬೃಹತ್ ರಥದ ಮಾದರಿಯ ದೇವಾಲಯವಾಗಿರುವುದು ಒಂದು ವಿಶೇಷ ವಿಶಿಷ್ಠವಾದ ರಥ ದೇಗುಲ 4 ಅಡಿ ಎತ್ತರದ ವೇದಿಕೆಯ ಮೇಲೆ ನಿಂತಿವೆ. ಇದರ ಎರಡೂ ಪಾರ್ಶ್ವಗಳಲ್ಲಿ 9.9 ಅಡಿ ವ್ಯಾಸದ 8 ಕಡ್ಡಿಗಳಿರುವ 12 ಬೃಹತ್ ಚಕ್ರಗಳನ್ನು ಆಳವಡಿಸಲಾಗಿದೆ. ಪ್ರತಿ ಚಕ್ರವೂ 3 ಮೀಟರ್ ವ್ಯಾಸವನ್ನು ಹೊಂದಿದೆ. ಈ ಚಕ್ರಗಳನ್ನು 7 ಕುದುರೆಗಳನ್ನು ಎಳೆದೊಯ್ಯುತ್ತಿರುವಂತೆ ಕಂಡುಬರುತ್ತದೆ. ಪ್ರತಿ ಕುದುರೆಯು 5 ಅಡಿ 2 ಅಂಗುಲ 3 ಮೀಟರ್ ವ್ಯಾಸವನ್ನು ಹೊಂದಿದೆ. ಈ ಚಕ್ರಗಳನ್ನು 7 ಕುದುರೆಗಳನ್ನು ಎಳೆದೊಯ್ಯುತ್ತಿರುವಂತೆ ಕಂಡುಬರುತ್ತದೆ. ಪ್ರತಿ ಕುದುರೆಯು 5 ಅಡಿ 2 ಅಂಗುಲ ಎತ್ತರವಿದೆ. ಈ 7 ಅಶ್ವಗಳು ವಾರದ 7 ದಿನಗಳನ್ನು 24 ಚಕ್ರಗಳು ದಿನದ 24 ಗಂಟೆಗಳನ್ನು ಚಕ್ರದಲ್ಲಿರುವ 8 ಕಡ್ಡಿಗಳು ದಿನದ 8 ಮುಹೂರ್ತಗಳನ್ನು ಪ್ರತಿಬಿಂಬಿಸುತ್ತವೆ ಎಂದು ನಂಬಲಾಗಿದೆ. ಚಕ್ರಗಳ ಮೇಲೆ ಬೀಳುವ ಸೂರ್ಯನ ಬೆಳಕಿನ ಆಧಾರದ ಮೇಲೆ ಅಲ್ಲಿನ ಸ್ಥಳೀಯರು ನಿಖರವಾದ ಸಮಯವನ್ನು ಹೇಳುತ್ತಾರೆ. ಪ್ರತಿಯೊಂದು ಚಕ್ರಗಳು ವಿವಿಧ ವಿನ್ಯಾಸಗಳಿಂದ ಕೆತ್ತಲ್ಪಟ್ಟಿದ್ದು, ನೋಡುಗರನ್ನು ಮೂಕವಿಸ್ಮಿತರನ್ನಾಗಿ ಮಾಡುತ್ತವೆ. ಸದ್ಯ ಒಂದನ್ನು ಬಿಟ್ಟು ಉಳಿದೆಲ್ಲಾ ಚಕ್ರಗಳು ಹಾಳಾಗಿವೆ. ಇದು ಅತ್ಯಂತ ದುಃಖಕರ ಸಂಗತಿ. ಉಳಿದವುಗಳು ಹಾಳಾಗದಂತೆ ಹಾಗು ಜನರಿಂದ ರಕ್ಷಿಸಲು 3 ಅಡಿ ತಂತಿಬೇಲಿಯನ್ನು ಅಳವಡಿಸಲಾಗಿದೆ. ಇಲ್ಲಿನ ಯುದ್ದಾಶ್ವಗಳನ್ನು ಓರಿಸ್ಸಾ ಸರ್ಕಾರ ರಾಜ್ಯ ಲಾಂಛನವನ್ನಾಗಿ ಸ್ವೀಕರಿಸಿ ನಮ್ಮ ದೇಶದ ಪುರಾತನ ಪರಂಪರೆಗೆ ಗೌರವ ತೋರಿದೆ.

ಸೂರ್ಯದೇವಾಲಯದ ಮಹಾದ್ವಾರದ ವಿಮಾನ ಈಗ ನಮಗೆ ಕಾಣಸಿಗುವುದಿಲ್ಲ. ಆದರೆ, ಇದರ ಮೇಲಿದ್ದ ನವಗ್ರಹ ಕೆತ್ತನೆಯ 20 ಟನ್ ಭಾರದ ಕಲ್ಲು ಚಪ್ಪಡಿ ಜಾರಿಬಿದ್ದು, ಒಡೆದು ಹೋಗಿದೆ. ಸೂರ್ಯದೇವಾಲಯದ ರಕ್ಷಣೆಗಾಗಿ 35 ಅಡಿ ಉದ್ದ ಹಾಗೂ 7 ಅಂಗುಲ ದಪ್ಪ ಕಬ್ಬಿಣದ ತೊಲೆಗಳನ್ನು ಬಳಸಲಾಗಿದೆ. ಈ ದೇವಾಲಯದ ಕಲ್ಲಿನ ಬಾಗಿಲುಗಳು ಸುಂದರ ಕೆತ್ತನೆಯಿಂದ ಕೂಡಿದೆ. ದೇಗುಲದ ಹೊರಮೈನ ಪೂರ್ವ ಗೋಡೆಯ ಮೇಲೆ ಉದಯ ಸೂರ್ಯನ ಮುಖ ಸಂತೋಷವನ್ನು, ಮಧ್ಯಾಹ್ನದ ಸೂರ್ಯ ಕೋಪವನ್ನು ಹಾಗು ಸಾಯಂಕಾಲದ ಸೂರ್ಯ ದಣಿವಿನ ಮುಖಭಾವವನ್ನು ವ್ಯಕ್ತಪಡಿಸುತ್ತದೆ. ದೇವಾಲಯದ ಮುಂದೆ ಒಂದು ಸ್ತಂಭವನ್ನು ನಿಲ್ಲಿಸಲಾಗಿತ್ತು. ಇದನ್ನು ಈಗ ಅದನ್ನು ಪುರಿಗೆ ಕೊಂಡೊಯ್ದು ಜಗನ್ನಾಥ ದೇವಾಲಯದ ಮುಂದೆ ನೆಡಲಾಗಿದೆ. ದೇವಾಲಯದ ತಳಭಾಗ, ಹೊರಭಾಗ ಹಾಗೂ ಮೇಲ್ಟಾವಣಿಯಲ್ಲಿ ಅನೇಕ ಶಿಲ್ಪಗಳನ್ನು ಕೆತ್ತಲಾಗಿದ್ದು, ಅವುಗಳು ವಿವಿಧ ಭಂಗಿಯಲ್ಲಿವೆ. ಈ ದೇವಾಲಯಲ್ಲಿ ಅಸಂಖ್ಯಾತ ರತಿ ಕ್ರೀಡೆಯ ದೃಶ್ಯಾವಳಿಗಳನ್ನು ಕೆತ್ತಲಾಗಿದೆ.

ಒಟ್ಟಿನಲ್ಲಿ ಕೊನಾರ್ಕ್ ಸೂರ್ಯದೇವಾಲಯವು ಆಧುನಿಕ ಭಾರತದ ವಿಸ್ಮಯಗಳಲ್ಲಿ ಒಂದು ಎನಿಸಿದೆ. ಆದರೆ ಭಾರತೀಯರ ದುರಾದೃಷ್ಟವೆಂಬಂತೆ 17ನೆಯ ಶತಮಾನದಲ್ಲಿ ಮುಸ್ಲಿಂರು ಆಕ್ರಮಣ ಮಾಡಿ ದೇವಾಲಯವನ್ನು ಸರ್ವನಾಶಗೊಳಿಸಿದರು. ಅಂದಿನಿಂದ ಈ ದೇವಾಲಯದಲ್ಲಿ ಪೂಜೆ ನಡೆದಿಲ್ಲ.