ಹ್ಯುಯನ್ತ್ಸಾಂಗ್-ಒಂದು ಟಿಪ್ಪಣಿ (ಕ್ರಿ.ಶ.600-ಕ್ರಿ.ಶ.664)

ಹ್ಯುಯನ್ತ್ಸಾಂಗ್-ಒಂದು ಟಿಪ್ಪಣಿ (ಕ್ರಿ.ಶ.600-ಕ್ರಿ.ಶ.664)

ಹ್ಯುಯನ್‌ತ್ಸಾಂಗ್ ಚೀಣಾ ದೇಶದಲ್ಲಿ ಕ್ರಿ.ಶ 600 ರಲ್ಲಿ ಜನಿಸಿದನು. ಬಾಲ್ಯದಿಂದಲೇ ಬೌದ್ಧಧರ್ಮದ ಸೆಳೆತಕ್ಕೆ ಒಳಗಾದನು. ಹೀಗಾಗಿ ತನ್ನ 20ನೇ ವಯಸ್ಸಿನಲ್ಲಿ ಬೌದ್ಧಬಿಕ್ಷುವಾದನು. ನಂತರ ಭಾರತಕ್ಕೆ ಬರಲು ಮಹದಾಕಾಂಕ್ಷೆ ಹೊಂದಿದ್ದನು. ಅದರ ಉದ್ದೇಶ:-

  1. ಬುದ್ಧನ ಜನ್ಮಸ್ಥಳವಾದ ಮತ್ತು ಬೌದ್ಧಧರ್ಮದ ತಾಯಿನಾಡಾದ ಭಾರತವನ್ನು ನೋಡಬೇಕೆಂಬ ಕನಸು.
  2. ಬುದ್ಧನಿಗೆ ಸಂಬಂಧಿತ ಸ್ಥಳಗಳಿಗೆ ಯಾತ್ರೆ ಕೈಗೊಂಡು ಪುನೀತನಾಗಬೇಕೆಂಬ ಬಯಕೆ.
  3. ಬೌದ್ಧ ಪವಿತ್ರ ಗ್ರಂಥಗಳನ್ನು ಅದರ ಮೂಲಭಾಷೆಯಲ್ಲೇ ಅಧ್ಯಯನ ಮಾಡಬೇಕೆಂಬ ತವಕ.
  4. ಬೌದ್ಧ ಪವಿತ್ರ ಗ್ರಂಥಗಳನ್ನು ಚೀಣಿಭಾಷೆಗೆ ಭಾಷಾಂತರಿಸಬೇಕೆಂಬ ಯೋಜನೆ.
  5. ಬುದ್ಧನ ಅವಶೇಷಗಳನ್ನು ವಿಗ್ರಹಗಳನ್ನು ಮತ್ತು ಕೆಲವು ಬೌದ್ಧ ಕೃತಿಗಳನ್ನು ಚೀಣಾಕ್ಕೆ ತರಬೇಕೆಂಬಾಸೆ.
  6. ಭಾರತದಲ್ಲಿ ಕಂಡುಂಡ ಮತ್ತು ಕೇಳಿದ ಸಂಗತಿಗಳ ಕುರಿತು ಹಾಗೂ ಅನುಭವವನ್ನು ಕುರಿತು ಕೃತಿಯೊಂದನ್ನು ಬರೆಯಬೇಕೆಂಬ ದೂರದೃಷ್ಟಿ ಆ ಕಾಲದಲ್ಲಿ ಚೀಣಾ ದೇಶದವರು ಹೊರದೇಶಕ್ಕೆ ಹೋಗಬೇಕೆಂದರೆ ಅರಸನ ಅನುಮತಿ ಪಡೆಯಬೇಕಿತ್ತು. ಆದರೆ ಚೀಣಿ ಅರಸ ಅನುಮತಿ ನೀಡದಿದ್ದಾಗ ಹ್ಯಯನ್‌ತ್ಸಾಂಗ್ ಬಹಳ ನೊಂದುಕೊಂಡನು. ಹೇಗಾದರೂ ಮಾಡಿ ಭಾರತವನ್ನು ತಲುಪಲೇಬೇಕೆಂಬ ಛಲ ತೊಟ್ಟನು. ಚಕ್ರವರ್ತಿಗೂ ಹೇಳದೆ ಕಣ್ಣುತಪ್ಪಿಸಿ ಭಾರತದ ಹಾದಿ ತುಳಿದೇಬಿಟ್ಟನು.

ಚೀಣೀ ಗಡಿಭಾಗದಲ್ಲೆ ನಡೆಯುತ್ತಾ ಸಿಂಧೂ ನದಿಯನ್ನು ದಾಟಿ ತಕ್ಷಶಿಲೆ ತಲುಪಿದನು. ಅನಂತರ ಕಾಶ್ಮೀರ ತಲುಪಿ ಅಲ್ಲಿ ಎರಡು ವರ್ಷ ಇದ್ದನು. ಅಲ್ಲಿ ಬೌದ್ಧಗ್ರಂಥಗಳನ್ನು ಅಧ್ಯಯನ ಮಾಡಿದನು. ನಂತರ ಉತ್ತರ ಪಥೇಶ್ವರನಾದ ಹರ್ಷನ ರಾಜಧಾನಿಯನ್ನು ತಲುಪಿದನು. ಚೀಣಿ ದೇಶದವನೊಬ್ಬ ಭಾರತದ ಯಾತ್ರೆ ಕೈಗೊಂಡಿರುವುದು ಮತ್ತು ಬೌದ್ಧಧರ್ಮದ ಘನ ಪಂಡಿತನಾಗಿರುವುದು ಹರ್ಷನನ್ನು ಆಕರ್ಷಿಸಿತು. ಹರ್ಷನು ಅವನೊಂದಿಗೆ ಹೆಚ್ಚಿನ ಒಡನಾಟ ಬೆಳೆಸಿಕೊಂಡನು. ಡ್ಯೂಯನ್‌ ತ್ಸಾಂಗ್‌ಗೆ ‘ರಾಜಾತಿಥ್ಯ’ವನ್ನೇ ನೀಡಿದನು. ಅವನ ಪ್ರಭಾವದಲ್ಲೇ ಬೌದ್ಧಧರ್ಮಕ್ಕೆ ಮತಾಂತರವಾದನು. ಅವನನ್ನು ಯೋಗ್ಯವಾಗಿ ಸತ್ಕರಿಸಲು ಕನೌಜ್ ಮತ್ತು ಪ್ರಯಾಗ ಸಮ್ಮೇಳನವನ್ನು ನಡೆಸಿದನು. ಇವೆರಡರ ನೇತೃತ್ವವನ್ನು ಡ್ಯೂಯನ್ ತ್ಸಾಂಗ್ ವಹಿಸಿದ್ದನು. ಅಂತಿಮವಾಗಿ ಬೌದ್ಧಧರ್ಮದ ಹೆಗ್ಗಳಿಕೆ ಜಾಹೀರುಪಡಿಸಿದನು. ಕನೌಜ್ ಸಮ್ಮೇಳನದಲ್ಲಿ ಅನೇಕ ಹಿಂದೂ ಮತ್ತು ಜೈನ ವಿದ್ವಾಂಸರನ್ನು ಸೋಲಿಸಿದ್ದರಿಂದ ಹರ್ಷವರ್ಧನನು ಅವನನ್ನು ಆನೆಯ ಮೇಲೆ ಕುಳ್ಳಿರಿಸಿ ಸನ್ಮಾನಿಸಿದ್ದನು.

ಕ್ರಿ.ಶ 630 ರಿಂದ 644 ರವರೆಗೆ ಹೂಯನ್‌ ತ್ಸಾಂಗ್ ಭಾರತದಾದ್ಯಂತ ಸಂಚರಿಸಿದನು. ಯಾತ್ರಿಕನಾಗಿ ಸಂದರ್ಶಿಸಿದ ಸ್ಥಳಗಳೆಂದರೆ ಕಪಿಲವಸ್ತು, ಗಯಾ, ಕುಶೀನಗರ, ಬನಾರಸ್, ಅಲ್ಲದೆ ಕಾಶ್ಮೀರ, ಗಾಂಧಾರ, ಆಂದ್ರ, ಕಂಚಿ, ಮಹಾರಾಷ್ಟ್ರ ಮತ್ತು ಕರ್ನಾಟಕಕ್ಕೂ ಬೇಟಿ ನೀಡಿದ್ದನು. ಗಾಂಧಾರಕ್ಕೆ ಬೇಟಿಕೊಟ್ಟಾಗ ಬಮಿಯಾನ್ ಬುದ್ಧನನ್ನು ನೋಡಿದ್ದನು. ಇಮ್ಮಡಿ ಪುಲಿಕೇಶಿಯ ಸಾಮ್ರಾಜ್ಯಕ್ಕೂ ಬೇಟಿಕೊಟ್ಟಿದ್ದನು. ಆಗ ಅವನ ಶೌರ ಸಾಹಸಗಳನ್ನು, ಕನ್ನಡಿಗರ ಔದಾರ್ಯವನ್ನು ಮತ್ತು ಹೃದಯ ಶ್ರೀಮಂತಿಕೆಯನ್ನು ಹಾಡಿ ಹೊಗಳಿದ್ದಾನೆ.

ಭಾರತದಿಂದ ಹಿಂತಿರುಗುವಾಗ ಬುದ್ಧನ ಅವಶೇಷಗಳನ್ನು ಮತ್ತು ವಿಗ್ರಹಗಳನ್ನು ತನ್ನೊಂದಿಗೆ ಕೊಂಡೊಯ್ದನು. ಇಲ್ಲಿ ಸಂಗ್ರಹಿಸಿದ 657 ತಾಳೆಗರಿ ಗ್ರಂಥಗಳನ್ನು, 20 ಕುದುರೆಗಳ ಮೇಲೆ ಹೇರಿಕೊಂಡು ಚೀಣಾಕ್ಕೆ ಹಿಂತಿರುಗಿದನು (ಕ್ರಿ.ಶ 644 ರಲ್ಲಿ). ಅರಸನ ಕೆಂಗಣ್ಣಿಗೆ ತುತ್ತಾಗುವೆನೆಂಬ ಹೆದರಿಕೆ ಇತ್ತು. ಆದರೆ ಚೀಣಿ ಅರಸನು ಅವನನ್ನು ಆದರದಿಂದ ಬರಮಾಡಿಕೊಂಡನು. ಕ್ಯೂಯನ್‌ ತ್ಸಾಂಗ್ ಭಾರತದಲ್ಲಿ ತಾನು ಕಂಡುಂಡ ಸಂಗತಿಗಳನ್ನು ಸಿ-ಯೂ-ಕಿ ಎಂಬ ಗ್ರಂಥದಲ್ಲಿ ದಾಖಲಿಸತೊಡಗಿದನು. ಅಲ್ಲದೆ ಅನೇಕ ಬೌದ್ಧಕೃತಿಗಳನ್ನು ಚೀಣಿ ಭಾಷೆಗೆ ಭಾಷಾಂತರ ಮಾಡಿದನು. ಜೊತೆಗೆ ‘ಹಂಗ್‌ಫು’ ಎಂಬ ಪಂಥವನ್ನು ಸ್ಥಾಪಿಸಿ ಬೌದ್ಧಧರ್ಮ ಪ್ರಸಾರಮಾಡಿದನು.

ಹೂಯನ್‌ ತ್ಸಾಂಗ್ ತನ್ನ ಸಿ-ಯೂ-ಕಿ ಗ್ರಂಥದಲ್ಲಿ ಹಲವು ಹತ್ತು ಸಂಗತಿಗಳನ್ನು ದಾಖಲಿಸಿದ್ದಾನೆ. ಅಂದಿನ ರಾಜಕೀಯ, ಸಾಮಾಜಿಕ, ಆರ್ಥಿಕ ಮತ್ತು ಧಾರ್ಮಿಕ ಪರಿಸ್ಥಿತಿಗಳು, ಜನರ ಅಚಾರ-ವಿಚಾರ, ಸಂಪ್ರದಾಯ ಶರಣತೆಗಳು, ಅಸ್ಪೃಶ್ಯತಾ ಆಚರಣೆ, ಭೌಗೋಳಿಕ ಸ್ಥಿತಿಗತಿ, ಜನರ ಪ್ರಾಮಾಣಿಕತೆ, ಬೌದ್ಧಧರ್ಮದ ಪರಿಸ್ಥಿತಿ ಇವೇ ಮೊದಲಾದವುಗಳ ಬಗ್ಗೆ ಬರೆದಿದ್ದಾನೆ. ಇವುಗಳು ಅಂದಿನ ಇತಿಹಾಸ ರಚನೆಗೆ ಅಮೂಲ್ಯ ದಾಖಲೆಗಳಾಗಿವೆ. ಡಾ||ವಿ.ಎ.ಸ್ಮಿತ್ ರವರ ಪ್ರಕಾರ ಸಿ-ಯೂ-ಕಿ ಯ ಐತಿಹಾಸಿಕ ಮಹತ್ವವನ್ನು ಉತ್ತೇಕ್ಷೆ ಮಾಡಲು ಸಾಧ್ಯವಿಲ್ಲ.ಆದ್ದರಿಂದ ಡ್ಯೂಯನ್‌ ತ್ಸಾಂಗ್‌ನನ್ನು ‘ಯಾತ್ರಿಕರ ಚಕ್ರವರ್ತಿ’ (ಪ್ರವಾಸಿಗರ ರಾಜ) ಎಂದು ಕರೆಯುವುದು ರಾಜೋಚಿತವಾಗಿದೆ.

ಹರ್ಷವರ್ಧನ (ಕ್ರಿ.ಶ 606-646)

ಹರ್ಷವರ್ಧನ (ಕ್ರಿ.ಶ 606-646)

ರಾಜ್ಯವರ್ಧನನ ಮರಣದ ನಂತರ ಹರ್ಷವರ್ಧನ ಕ್ರಿ.ಶ. 606ರಲ್ಲಿ ಥಾನೇಶ್ವರದ ಸಿಂಹಾಸನಾಧೀಶ್ವರನಾದನು. ಆಗ ಹರ್ಷನಿಗೆ ಕೇವಲ 16 ವರ್ಷ ವಯಸ್ಸು. ದಕ್ಷ ಹಾಗೂ ಪ್ರತಿಭಾವಂತನಾಗಿದ್ದ ಹರ್ಷವರ್ಧನನು ತಾನು ಅಧಿಕಾರವಹಿಸಿಕೊಂಡ ನೆನಪಿಗಾಗಿ ಹರ್ಷಶಕೆ ಎಂಬ ಹೊಸ ಶಕೆಯನ್ನು ಆರಂಭಿಸಿದನು. ಇವನು ಅಧಿಕಾರಕ್ಕೆ ಬಂದಾಗ ಈತನ ಮುಂದೆ ಹಲವಾರು ಸಮಸ್ಯೆಗಳಿದ್ದವು. ಹೀಗಾಗಿ ಅವುಗಳಿಗೆ ಪರಿಹಾರ ಕಂಡುಕೊಳ್ಳಬೇಕಿತ್ತು. ಈ ನಡುವೆ ತನ್ನ ಅಣ್ಣ ಹಾಗೂ ಭಾವನನ್ನು ಕೊಂದವರ ವಿರುದ್ಧ ಸೇಡು ತೀರಿಸಿಕೊಳ್ಳುವುದು ಮತ್ತು ತಂಗಿಯಾದ ರಾಜಪ್ರಿಯನ್ನು ಬಂಧನದಿಂದ ಬಿಡುಗಡೆಗೊಳಿಸುವಂತಹ ಜವಾಬ್ದಾರಿಯುತ ಕಾರ್ಯಗಳನ್ನು ನಿರ್ವಹಿಸಬೇಕಿತ್ತು. ರಾಜತ್ರಿಯನ್ನು ಬಿಡುಗಡೆಗೊಳಿಸಬೇಕೆಂಬ ಚಿಂತೆಯಲ್ಲಿರುವಾಗಲೇ ರಾಜಶ್ರೀ ಬಂಧನದಿಂದ ತಪ್ಪಿಸಿಕೊಂಡು ವಿಂಧ್ಯ ಪರ್ವತದ ಕಡೆಗೆ ಹೋದಳು. ಬೌದ್ಧ ಆಶ್ರಮವನ್ನು ಸೇರಿದ ಇವಳಿಗೆ ಅಲ್ಲಿಯೂ ನೆಮ್ಮದಿ ದೊರೆಯದಿದ್ದಾಗ ಅವಳು ಇನ್ನೇನು ಅನುಮರಣ ಮಾಡಬೇಕೆನ್ನುವಷ್ಟರಲ್ಲಿ ಅವಳ ಮನಸ್ಸನ್ನು ಬದಲಿಸಿ ರಾಜಧಾನಿಗೆ ಕರೆತಂದನು. ಅದೊಂದು ಕರುಣಾಜನಕ ಪ್ರಸಂಗ. ಈ ಸನ್ನಿವೇಶವನ್ನು ಬಾಣ ಅತ್ಯಂತ ಕಾವ್ಯಮಯವಾಗಿ ಹಾಗೂ ಹೃದಯಂಗಮಯವಾಗಿ ಚಿತ್ರಿಸಿದ್ದಾನೆ. ಕನೌಜಿನ ರಾಜ್ಯದಲ್ಲಿ ಗೃಹವರ್ಮನ ಉತ್ತರಾಧಿಕಾರಿಗಳು ಯಾರು ಇರದಿದ್ದುದರಿಂದಾಗಿ ಅದರ ಆಡಳಿತವನ್ನು ನೋಡಿಕೊಳ್ಳುವ ಹೊಣೆ ಸಹ ಈತನ ಹೆಗಲಮೇಲೆ ಬಿತ್ತು. ಹೀಗಾಗಿ ಹರ್ಷವರ್ಧನ ಅಧಿಕಾರವಹಿಸಿಕೊಂಡ ತಕ್ಷಣ ರಾಜಧಾನಿಯನ್ನು ಥಾನೇಶ್ವರದಿಂದ ಕನೌಜಿಗೆ ವರ್ಗಾಯಿಸಿದನು.

ಹರ್ಷವರ್ಧನನ ದಿಗ್ವಿಜಯಗಳು : ಹರ್ಷನ ದಿಗ್ವಿಜಯಗಳೇನೂ ಇತಿಹಾಸದಲ್ಲಿ ಮಹಾನ್ ಸಾಧನೆಯನ್ನು ಮಾಡಲಿಲ್ಲ. ಈತನ ಪ್ರಮುಖ ಯುದ್ಧಗಳು ಈ ಕೆಳಗಿನಂತಿವೆ.

1) ಶಶಾಂಕನ ವಿರುದ್ಧ ದಂಡಯಾತ್ರೆ :

ತನ್ನ ಅಣ್ಣನಾದ ರಾಜ್ಯವರ್ಧನನ್ನು ಹತ್ಯೆಗೈದ ಶಶಾಂಕನ ವಿರುದ್ಧ ಹರ್ಷವರ್ಧನ ತನ್ನ ಸೇನಾಪತಿಯಾದ ಬಂಡಿಯನನ್ನು ಕನೌಜವನ್ನು ಆಕ್ರಮಿಸಲು ಕಳುಹಿಸಿದನು. ಆದರೆ ಶಶಾಂಕನು ಕನೌಜವನ್ನು ಬಿಟ್ಟು ಮಾಳವಕ್ಕೆ ಹಿಂತಿರುಗಿದನು. ಇಷ್ಟೇ ವಿನಹ ಶಶಾಂಕನ ವಿರುದ್ಧ ಹರ್ಷ ಇನ್ನೇನು ಸಾಧಿಸಲಿಲ್ಲ, ಕ್ರಿ.ಶ. 637ರವರೆಗೂ ಶಶಾಂಕ ಬಂಗಾಳದಲ್ಲಿ ನಿರಂತರವಾಗಿ ಆಳ್ವಿಕೆ ನಡೆಸಿದನು. ಆತನ ಮರಣದ ನಂತರವೇ ಹರ್ಷನು ಪೂರ್ವ ಭಾರತದ ಪ್ರದೇಶದಲ್ಲಿ ತನ್ನ ಪ್ರಭಾವವನ್ನು ವಿಸ್ತರಿಸಿದನು.

2) ಗುಜರಾತ ಮೇಲೆ ದಾಳಿ :

ಹರ್ಷನು ವಲ್ಲಭಿಯ ದೊರೆ ಗೂರ್ಜರ ಎರಡನೆಯ ಧ್ರುವಸೇನನನ್ನು ಸೋಲಿಸಿದನು ಎಂದು ಬಾಣಭಟ್ಟ ತನ್ನ ಕೃತಿಯಾದ ಹರ್ಷಚರಿತದಲ್ಲಿ ಬರೆದಿದ್ದಾನೆ. ಆದರೆ ಧ್ರುವಸೇನನು ಕ್ಷಿಪ್ರದಲ್ಲಿಯೇ ಚೇತರಿಸಿಕೊಂಡು ಹರ್ಷನ ವಿರುದ್ಧ ಯುದ್ಧ ಸಾರಿದನು. ಈ ಯುದ್ಧವನ್ನು ಎದುರಿಸಲಾಗದ ಹರ್ಷ ಧ್ರುವಸೇನನಿಗೆ ತನ್ನ ಮಗಳನ್ನು ಕೊಟ್ಟು ಸಂಬಂಧ ಬೆಳೆಸಿದನು ಎಂದು ಹೂಯೆನ್‌ತ್ಸಾಂಗ್ ಹೇಳಿದ್ದಾನೆ.

3) ಹಿಮಾಲಯ ಪರ್ವತ ಪ್ರದೇಶಗಳನ್ನು ವಶಪಡಿಸಿಕೊಂಡಿದ್ದು :

ಹರ್ಷವರ್ಧನ ಹಿಮಾಲಯ ಪರ್ವತ ಪ್ರದೇಶವಾದ ಕಾಶ್ಮೀರ, ಸಿಂಥ್ ಪ್ರಾಂತ್ಯ ಹಾಗೂ ನೇಪಾಳವನ್ನು ಗೆದ್ದು ತನ್ನ ಅಧಿಕಾರವನ್ನು ಸ್ಥಾಪಿಸಿದನು ಎಂದು ಬಾಣಭಟ್ಟ ಹೇಳುತ್ತಾನೆ.

4) ಪುಲಕೇಶಿಯೊಂದಿಗೆ ಯುದ್ಧ (ಕ್ರಿ.ಶ. 630)

ಪಶ್ಚಿಮ ಭಾರತವನ್ನು ಗೆದ್ದ ಹರ್ಷವರ್ಧನನ ಗಮನ ದಕ್ಷಿಣ ಭಾರತದ ಕಡೆಗೆ ಹರಿಯಿತು. ಸಕಲಉತ್ತರಾಧಿಪಥೇಶ್ವರ ಎಂಬ ಬಿರುದನ್ನು ಪಡೆದಿದ್ದ ಹರ್ಷವರ್ಧನ ಸಕಲ ದಕ್ಷಿಣಾಧಿಪಥೇಶ್ವರ ಎಂಬ ಬಿರುದನ್ನು ಗಳಿಸಿದ್ದ ಎರಡನೆಯ ಪುಲಕೇಶಿಯ ವಿರುದ್ಧ ಯುದ್ಧ ಸಾರಿದನು. ಶಕ್ತಿಯಲ್ಲಿ ಇವರಿಬ್ಬರೂ ಸರಿಸಮಾನರು, ಹರ್ಷನು ವಲ್ಲಭಿ ವ್ಯವಹಾರದಲ್ಲಿ ತಲೆಹಾಕಿ ಅದರ ಅರಸ ಧ್ರುವಸೇನನಿಗೆ ರಾಜ್ಯವನ್ನು ಮರಳಿ ಕೊಡಬೇಕೆಂದು ಹಾಗೂ ಆತನೊಂದಿಗೆ ಸ್ನೇಹದಿಂದ ಇರಬೇಕೆಂದು ಪುಲಕೇಶಿಯ ಬಳಿಗೆ ರಾಯಭಾರಿಯನ್ನು ಕಳುಹಿಸಿದನು. ಇದರಿಂದ ಕುಪಿತಗೊಂಡ ಪುಲಕೇಶಿಗೆ ಕೋಪನೆತ್ತಿಗೇರಿತು. ಹೀಗಾಗಿ ಆತ ಇದನ್ನು ಯುದ್ಧವೇ ತೀರ್ಮಾನಿಸಲಿ ಎಂದು ಹೇಳಿ ಕಳುಹಿಸಿದನು. ಹರ್ಷವರ್ಧನ ಸುಮಾರು 6000 ಆನೆಗಳನ್ನು ಹೊಂದಿದ್ದನು. ಇವರಿಬ್ಬರ ನಡುವೆ ನರ್ಮದಾ ನದಿಯ ದಡದ ಮೇಲೆ ಕ್ರಿ.ಶ. 630ರಲ್ಲಿ ಯುದ್ಧ ನಡೆಯಿತು. ಈ ಯುದ್ಧದಲ್ಲಿ ಹರ್ಷವರ್ಧನನು ಸೋಲುವ ಮೂಲಕ ಆತನ ಹರ್ಷ ಸಂಪೂರ್ಣವಾಗಿ ಅಡಗಿ ಹೋಯಿತು ಎಂದೂ ಪುಲಕೇಶಿ ವಿಜಯಶಾಲಿಯಾದನೆಂದು ಐಹೊಳೆ ಶಾಸನವು ಹೇಳುತ್ತದೆ. ಈ ಯುದ್ಧಾನಂತರ ಎರಡನೆಯ ಪುಲಕೇಶಿ ಪರಮೇಶ್ವರ ಎಂಬ ಬಿರುದನ್ನು ಧರಿಸಿದನು. ಸೋತ ಹರ್ಷನೊಂದಿಗೆ ಸ್ನೇಹ ಹಸ್ತ ನೀಡಿದ ಪುಲಕೇಶಿ ಅವನಿಗೆ ಕಾಣಿಕೆ ನೀಡಿ ಕಲಾವಿದರನ್ನು ವಿನಿಮಯ ಮಾಡಿಕೊಂಡರು. ನರ್ಮದಾ ನದಿಯು ಇವರಿಬ್ಬರ ನಡುವಿನ ಗಡಿಯಾಯಿತು.

5) ವಿದೇಶಿ ಸಂಬಂಧ :

ಹರ್ಷನು ಚೀನಾದೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದನು. ಕ್ರಿಶ. 641ರಲ್ಲಿ ಟಾಂಗ್ ವಂಶದ ಚಕ್ರವರ್ತಿ ಟಾಯ್‌ತುಂಗನ ಆಸ್ಥಾನಕ್ಕೆ ತನ್ನ ರಾಯಭಾರಿಯನ್ನು ಕಳುಹಿಸಿದನು. ಚೀನಾದ ರಾಯಭಾರ ನಿಯೋಗವು ಕ್ರಿ.ಶ. 643ರಲ್ಲಿ ಹರ್ಷನ ಆಸ್ಥಾನಕ್ಕೆ ಭೇಟಿ ನೀಡಿತು. ಕ್ರಿ.ಶ. 647ರಲ್ಲಿ ಹರ್ಷವರ್ಧನ ನಿಧನನಾದನು.

6) ಸಾಮ್ರಾಜ್ಯದ ವ್ಯಾಪ್ತಿ :

ಹರ್ಷನ ಸಾಮ್ರಾಜ್ಯವು ಪೂರ್ವಪಂಜಾಬ್, ಉತ್ತರ ಪ್ರದೇಶ, ಬಿಹಾರ್, ಪಶ್ಚಿಮ ಬಂಗಾಳ ಹಾಗೂ ಓರಿಸ್ಸಾಗಳನ್ನು ಒಳಗೊಂಡಿತ್ತು. ರಜಪೂತಾನ್, ಸಿಂದ್ ಹಾಗೂ ಪಂಜಾಬಿನ ಬಹುಭಾಗ ಅವನ ಸಾಮ್ರಾಜ್ಯಕ್ಕೆ ಸೇರಿರಲಿಲ್ಲ.

1) ಹರ್ಷನ ಧಾರ್ಮಿಕ ನೀತಿ :

ಪುಷ್ಯಭೂತಿ ಶೈವನಾಗಿದ್ದು, ಪ್ರಭಾಕರವರ್ಧನನೂ ಸಹ ಶಿವನ ಆರಾಧಕನಾಗಿದ್ದನು. ಆದರೆ ಹರ್ಷವರ್ಧನ ಆರಂಭದಲ್ಲಿ ನಿಷ್ಟಾವಂತ ಶೈವನಾಗಿದ್ದರೂ ಹೂಯೆನ್‌ತ್ಸಾಂಗನ ಭೇಟಿಯ ನಂತರ ಹರ್ಷನು ಬೌದ್ಧ ಧರ್ಮದ ಉತ್ಕಟ ಅಭಿಮಾನಿಯಾದನು. ಬೌದ್ಧ ಧರ್ಮವನ್ನು ಸ್ವೀಕರಿಸಿದ ಹರ್ಷವರ್ಧನನು

1) ರಾಜ್ಯದಲ್ಲಿ ಪ್ರಾಣಿವಧೆಯನ್ನು ನಿಲ್ಲಿಸಿದನು.

2) ಸಾವಿರಾರು ಸ್ತೂಪಗಳು, ವಿಹಾರಗಳು ಹಾಗೂ ಚೈತ್ಯಗಳನ್ನು ನಿರ್ಮಿಸಿದನು.

3) ಪ್ರಯಾಣಿಕರಿಗಾಗಿ ವಿಶ್ರಾಂತಿ ಗೃಹಗಳನ್ನು ಹಾಗೂ ಅರವಟ್ಟಿಗೆಗಳನ್ನು ಸ್ಥಾಪಿಸಿದನು.

4) ಬೌದ್ಧ ಭಿಕ್ಷುಕರಿಗಾಗಿ ಮಠಗಳನ್ನು ಸ್ಥಾಪಿಸಿದನು.

5) ಪ್ರತಿ ಐದು ವರ್ಷಗಳಿಗೊಮ್ಮೆ ಎಲ್ಲಾ ಧರ್ಮದ ಪ್ರತಿನಿಧಿಗಳನ್ನು ಸಮಾವೇಶಗೊಳಿಸಿ ತಾನು ಗಳಿಸಿದ ಸಂಪತ್ತನ್ನು ದಾನವಾಗಿ ನೀಡುತ್ತಿದ್ದನು.ಅ

6) ಬೌದ್ಧ ಭಿಕ್ಷುಕರ ಸಮಾವೇಶಗಳನ್ನು ಏರ್ಪಡಿಸಿ ಬೌದ್ಧ ಧರ್ಮದ ಕುರಿತು ಚರ್ಚೆಯನ್ನು ಏರ್ಪಡಿಸುತ್ತಿದ್ದನು.

ವರ್ಧನರು ಧಾರ್ಮಿಕ ವಿಷಯದಲ್ಲಿ ವ್ಯಕ್ತಿ ಸ್ವಾತಂತ್ರ್ಯಕ್ಕೆ ಪ್ರಾಧಾನ್ಯತೆ ನೀಡುತ್ತಿದ್ದರು. ಪ್ರಭಾಕರವರ್ಧನನು ಸೂರ್ಯನ ಆರಾಧಕನಾಗಿದ್ದರೆ, ರಾಜ್ಯವರ್ಧನನು ಬೌದ್ಧ ಮತಾವಲಂಭಿಯಾಗಿದ್ದನು. ಹರ್ಷವರ್ಧನನು ಶಿವ, ಸೂರ್ಯ ಮತ್ತು ಬುದ್ಧನ ಆರಾಧಕನಾಗಿದ್ದನು. ತನ್ನ ಆಳ್ವಿಕೆಯ ಕೊನೆಯ ದಿನಗಳಲ್ಲಿ ರಾಜ್ಯಶ್ರೀ ಮತ್ತು ಡ್ಯೂಯನ್‌ ತ್ಸಾಂಗ್‌ ಪ್ರಭಾವಕ್ಕೊಳಗಾಗಿ ಬೌದ್ಧಧರ್ಮಕ್ಕೆ ಮತಾಂತರವಾದನು. ಬೌದ್ಧಧರ್ಮದ ಮಹಾಯಾನ ಪಂಥಕ್ಕೆ ತನ್ನ ಒಲವು ತೋರಿಸತೊಡಗಿದನು. ಹಲವಾರು ಧಾರ್ಮಿಕ ಗೋಷ್ಠಿಗಳನ್ನು ನಡೆಸಿದನು. ವಿದ್ವಾಂಸ ರೊಂದಿಗೆ ಧಾರ್ಮಿಕ ಚರ್ಚೆಯಲ್ಲಿ ಪಾಲ್ಗೊಂಡನು. ಇದರಲ್ಲಿ ಪ್ರಸಿದ್ಧವಾದವುಗಳೆಂದರೆ ಕನೌಜ್ ಸಮ್ಮೇಳನ ಮತ್ತು ಪ್ರಯಾಗ ಸಮ್ಮೇಳನ.

ಕನೌಜ್ ಸಮ್ಮೇಳನ-ಕ್ರಿ.ಶ 643 : ಹರ್ಷವರ್ಧನನು ಕ್ರಿಶ 643 ರಲ್ಲಿ ಕನೌಜ್ ಸಮ್ಮೇಳನವನ್ನು ನಡೆಸಿದನು. ಇದರ ಉದ್ದೇಶ

  1. ಹೂಯನ್‌ ತ್ಸಾಂಗ್‌ಗೆ ಗೌರವ ಸಲ್ಲಿಸುವುದು.
  2. ಮಹಾಯಾನ ಪಂಥವನ್ನು ಮೆರೆಸುವುದು.
  3. ತನ್ನ ಧಾರ್ಮಿಕ ಧೋರಣೆಯನ್ನು ಸ್ಪಷ್ಟಪಡಿಸುವುದು.

ಹೂಯನ್ ತ್ಸಾಂಗ್‌ನು ಅಧ್ಯಕ್ಷತೆ ವಹಿಸಿದ್ದ ಈ ಸಮ್ಮೇಳನಕ್ಕೆ ವಿವಿಧ ಧರ್ಮೀಯರು ಆಗಮಿಸಿದ್ದರು. 3000 ಬೌದ್ಧ ಸನ್ಯಾಸಿಗಳು, 3000 ಬ್ರಾಹ್ಮಣರು ಮತ್ತು ನಳಂದ ವಿಶ್ವವಿದ್ಯಾಲಯವೊಂದರಿಂದಲೇ 1000 ವಿದ್ಯಾರ್ಥಿಗಳು ಬಂದಿದ್ದರು. ವಿವಿಧ ರಾಜ್ಯಗಳ ಸುಮಾರು 20 ಅರಸರು ಪಾಲ್ಗೊಂಡಿದ್ದರು. ಅಲ್ಲದೆ ವಿವಿಧ ಮತಗಳ, ಪಂಗಡಗಳ ಪ್ರತಿನಿಧಿಗಳೂ ಆಗಮಿಸಿದ್ದರು, ಗಂಗಾನದಿಯ ದಡದಲ್ಲಿ ವಿಶೇಷವಾಗಿ ರಚಿಸಲಾದ ಮಂಟಪದಲ್ಲಿ 23 ದಿನಗಳ ಕಾಲ ಸಮ್ಮೇಳನ ನಡೆಯಿತು. ಭಗವಾನ್ ಬುದ್ಧನ ಚಿನ್ನದ ವಿಗ್ರಹವನ್ನು ಮಂಟಪದಲ್ಲಿ ಇಡಲಾಗಿತ್ತು. ಮೂರಡಿ ಎತ್ತರದ ಉತ್ಸವ ಮೂರ್ತಿಯೊಂದನ್ನು ಪ್ರತಿದಿನವೂ ಮೆರವಣಿಗೆ ಮಾಡುತ್ತಿದ್ದರು. ಅಧ್ಯಕ್ಷತೆ ವಹಿಸಿದ್ದ ಡ್ಯೂಯನ್ ತ್ಸಾಂಗ್‌ನು ಪಾಂಡಿತ್ಯಪೂರ್ಣ ಭಾಷಣಮಾಡಿದನು. ನಂತರ ಸಭಿಕರ ಪ್ರಶ್ನೆಗಳಿಗೆ ಮತ್ತು ಸಂದೇಹಗಳಿಗೆ ಉತ್ತರಿಸಿದನು. ಬಹಳ ಉದಾರಿಯಾದ ಹರ್ಷವರ್ಧನನು ಜನರಿಗೆ ಉದಾರ ದಾನ ಧರ್ಮಗಳನ್ನು ಮಾಡಿದನು. ಹರ್ಷನು ಈ ಸಮ್ಮೇಳನಕ್ಕೆ ವಿವಿಧ ಧರ್ಮೀಯರನ್ನು ಆಹ್ವಾನಿಸಿದ್ದರೂ ಬೌದ್ಧಧರ್ಮದ ಪ್ರಚಾರಕ್ಕೆ ಹಮ್ಮಿಕೊಂಡಿದ್ದ ಧರ್ಮಸಮ್ಮೇಳನದಂತೆ ಪರಿವರ್ತಿತವಾಯಿತು. ಇದನ್ನು ಸಹಿಸದ ಕೆಲವು ವಿರೋಧಿಗಳು ಸಮ್ಮೇಳನದ ಮಂಟಪಕ್ಕೆ ಬೆಂಕಿ ಇಟ್ಟು ಕೊಲ್ಲಲು ಪ್ರಯತ್ನಿಸಿದರು. ಆದರೆ ಹರ್ಷವರ್ಧನನು ದುಷ್ಕರ್ಮಿಗಳನ್ನು ಸೆರೆಹಿಡಿದು ತನಗೆ ರಕ್ಷಣೆ ಕೊಟ್ಟನೆಂದು ಹೂಯನ್‌ ತ್ಸಾಂಗ್ ಹೇಳಿ ಕೊಂಡಿದ್ದಾನೆ.

ಪ್ರಯಾಗ ಸಮ್ಮೇಳನ-ಕ್ರಿ.ಶ 643 : ಕನೌಜ್ ಸಮ್ಮೇಳನ ನಡೆದ ವರ್ಷವೇ ಹರ್ಷನು ಪ್ರಯಾಗದಲ್ಲಿ ಸಮ್ಮೇಳನವೊಂದನ್ನು ನಡೆಸಿದನು. ಇದು ಐದು ವರ್ಷಕ್ಕೊಮ್ಮೆ ನಡೆಸುತ್ತಿದ್ದ ‘ಮಹಾಮೋಕ್ಷ ಪರಿಷತ್’ ಆಗಿತ್ತು. ಗಂಗಾ ಮತ್ತು ಯಮುನೆಯರ ಸಂಗಮ ಸ್ಥಳದಲ್ಲಿ ನಡೆದ ಈ ಸಮ್ಮೇಳನದ ಉದ್ದೇಶ:

  1. ಧಾನ ಧರ್ಮಗಳನ್ನು ಮಾಡುವುದು.
  2. ಧಾರ್ಮಿಕ ಆಸಕ್ತಿಯನ್ನು ತೋರಿಸುವುದು.
  3. ಬೌದ್ಧಮತದ ಮಹಾಯಾನ ಪಂಥದ ಮಹತ್ವವನ್ನು ಸಾರುವುದು.

ಈ ಸಮ್ಮೇಳನವು 75 ದಿನಗಳ ಕಾಲ ನಡೆಯುತು. 5 ಲಕ್ಷಕ್ಕೂ ಹೆಚ್ಚು ಜನ ಭಾಗವಹಿಸಿದ್ದರು. ಈ ಸಮ್ಮೇಳನಕ್ಕೆ ವಿವಿಧ ರಾಜ್ಯಗಳ 18 ಅರಸರು, ವಿದ್ವಾಂಸರು, ಧಾರ್ಮಿಕ ಮುಖಂಡರು, ಸನ್ಯಾಸಿಗಳು, ಬ್ರಾಹ್ಮಣರು ಮತ್ತು ಜೈನರು ಭಾಗವಹಿಸಿದ್ದರು. ಪ್ರತಿ ದಿನವೂ ಭಗವಾನ್ ಬುದ್ಧನ ಚಿನ್ನದ ವಿಗ್ರಹದ ಪೂಜೆ ಯೊಂದಿಗೆ ಶಿವ ಮತ್ತು ಸೂರ್ಯರ ಆರಾಧನೆಯನ್ನು ಮಾಡಲಾಗುತ್ತಿತ್ತು.

ಕೊಡುಗೈ ದೊರೆಯಾದ ಹರ್ಷವರ್ಧನನು ಬೌದ್ಧ ಬಿಕ್ಷುಗಳಿಗೆ, ಬ್ರಾಹ್ಮಣರಿಗೆ, ಜೈನರಿಗೆ ದಾನಧರ್ಮ ಗಳನ್ನು ಮಾಡಿದನು. ಅಲ್ಲದೆ ದೂರದ ಊರುಗಳಿಂದ ಬಂದ ಯಾತ್ರಿಕರಿಗೂ ದಾನ ನೀಡಿದನು. ಒಂದು ತಿಂಗಳ ಕಾಲ ಬಡವರು, ಅನಾಥರು, ಮತ್ತು ನಿರ್ಗತಿಕರಿಗೂ ಸಹಾಯ ಮಾಡಿದನು. ಹೂಯನ್‌ ತ್ಸಾಂಗ್‌ನ ವರದಿಯ ಪ್ರಕಾರ ಪ್ರಯಾಗ ಸಮ್ಮೇಳನದಲ್ಲಿ ಸಕಲವನ್ನೂ ದಾನಮಾಡಿದ ಹರ್ಷನು ಖಜಾನೆಯನ್ನೆಲ್ಲಾ ಖಾಲಿಮಾಡಿ ಕೊಂಡನು. ಅಲ್ಲದೆ ತಾನು ಧರಿಸಿದ್ದ ಅಮೂಲ್ಯ ಪೋಷಾಕು, ದೇಹದ ಆಭರಣವನ್ನೆಲ್ಲ ದಾನಮಾಡಿ ಸೋದರಿಯಿಂದ ಒಂದು ಸಾಮಾನ್ಯ ಬಟ್ಟೆಯನ್ನು ಪಡೆದುಕೊಂಡು ಅದನ್ನು ಧರಿಸಿ ದಶದಿಕ್ಕುಗಳ ಬುದ್ಧರನ್ನು ಆರಾಧಿಸಿದನು. ಆಗಷ್ಟೆ ಸಾರ್ಥಕ್ಯದ ಮನೋಭಾವನೆ ಹರ್ಷನಿಗಾಯಿತು ಎಂದು ಬರೆದಿದ್ದಾನೆ.

ಉಪಸಂಹಾರ : ಹರ್ಷವರ್ಧನನು ಅಶೋಕ ಚಕ್ರವರ್ತಿಯಂತೆ ಧರ್ಮ ಛತ್ರಗಳನ್ನು, ಆಸ್ಪತ್ರೆಗಳನ್ನು, ಸಾಲುಮರಗಳನ್ನು, ರಸ್ತೆಗಳನ್ನು ಮತ್ತು ವಿಶ್ರಾಂತಿ ಗೃಹಗಳನ್ನು ನಿರ್ಮಿಸಿದನು. ಬೌದ್ಧ ಧರ್ಮದ ಏಳೆಗಾಗಿ ಶ್ರಮಿಸಿದನು. ಆದ್ದರಿಂದ ಹರ್ಷನನ್ನು ಎರಡನೆಯ ಅಶೋಕನೆಂದು ಕರೆಯಲಾಗುತ್ತದೆ. ಹರ್ಷನು ಬೌದ್ಧಧರ್ಮದ ಅನುಯಾಯಿಯಾದರೂ, ಶಿವ ಮತ್ತು ಸೂರ್ಯನ ಆರಾಧಕನೂ ಆಗಿದ್ದನು. ಕನೌಜ್ ಮತ್ತು ಪ್ರಯಾಗ ಸಮ್ಮೇಳನದಲ್ಲಿ ಈ ಮೂರು ದೇವರ ಪೂಜೆ ಹಾಗೂ ವಿವಿಧ ಮತ ಪಂಥಿಯರಿಗೆ ನೀಡಿದ ದಾನ ಹರ್ಷನ ಸರ್ವಧರ್ಮ ಸಮನ್ವಯತೆಗೆ ಸಾಕ್ಷಿಯಾಗಿದೆ. ಯಾವುದೇ ಧರ್ಮವನ್ನು ಕಡೆಗಣಿಸದೆ ಬಹುಮುಖ್ಯವಾಗಿ ಎಲ್ಲರ ಔದಾರ್ಯವನ್ನು ಗಳಿಸುವ ಗುಟ್ಟು ಇದರಲ್ಲಡಗಿತ್ತು.

ವರ್ಧನರ ಸಾಹಿತ್ಯ

ವರ್ಧನರ ಸಾಹಿತ್ಯ

ವರ್ಧನರು ಸಾಹಿತ್ಯ ಮತ್ತು ಸಂಸ್ಕೃತಿಯ ಏಳಿಗೆಗೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ. ಈ ಸಂತತಿಯ ಪ್ರಖ್ಯಾತ ದೊರೆಯಾದ ಹರ್ಷವರ್ಧನನು ಸಾಹಿತ್ಯ ಮತ್ತು ಶಿಕ್ಷಣದ ಉದಾರ ಪೋಷಕನಾಗಿದ್ದನು. ತನ್ನ ರಾಜಾದಾಯದ 1/4 ಭಾಗವನ್ನು ಸಾಹಿತ್ಯದ ಅಭಿವೃದ್ಧಿಗೆ ಬಳಸುತ್ತಿದ್ದನು. ಅಂದರೆ ಆ ಹಣವನ್ನು ಕವಿಗಳ, ವಿದ್ವಾಂಸರ ಸನ್ಮಾನಕ್ಕೆ, ಕೊಡುಗೆಗೆ ಮತ್ತು ತಾಳೆಗರಿಗಳ ಪ್ರತಿಮಾಡಿಸಲು ಬಳಸುತ್ತಿದ್ದನು. ಸ್ವತ: ವಿದ್ವಾಂಸ ಮತ್ತು ಬರಹಗಾರನಾಗಿದ್ದ.

ಹರ್ಷವರ್ಧನನು 3 ನಾಟಕಗಳನ್ನು ಬರೆದಿದ್ದಾನೆ. ಸಂಸ್ಕೃತ ಭಾಷೆಯ ಅವುಗಳೆಂದರೆ,

(1) ನಾಗಾನಂದ 

(2) ಪ್ರಿಯದರ್ಶಿನಿ

(3) ರತ್ನಾವಳಿ.

ಈ ನಾಟಕಗಳ ಕತೃ ಹರ್ಷನೇ ಅಥವಾ ಬೇರೆಯವರೇ ಎಂಬ ಬಗ್ಗೆ ವಿದ್ವಾಂಸರಲ್ಲಿ ಜಿಜ್ಞಾಸೆಯುಂಟು. ಆದಾಗ್ಯೂ ಕತೃತ್ವವನ್ನು ನಿರಾಕರಿಸುವ ಗಟ್ಟಿ ಸಾಕ್ಷ್ಯಗಳು ದೊರೆಯಲಿಲ್ಲವಾಗಿ ಹರ್ಷನದೇ ಎಂದು ನಂಬಲಾಗಿದೆ. ರತ್ನಾವಳಿ ಮತ್ತು ಪ್ರಿಯದರ್ಶಿಕಾಗಳು ಪ್ರೇಮ ಮತ್ತು ಆಸ್ಥಾನ ಅಂತಃಕಲಹವನ್ನು ಪ್ರಸ್ತಾಪಿಸುತ್ತವೆ. ನಾಗಾನಂದವು ಬೌದ್ಧ ತಾತ್ವಿಕ ಚಿಂತನೆಯ ನಾಟಕವಾಗಿದೆ. 12ನೇ ಶತಮಾನದ ಕವಿಯಾದ ಜಯದೇವನು ತನ್ನ ಪ್ರಸಿದ್ಧ ಗೀತ ಗೋವಿಂದದಲ್ಲಿ ಹರ್ಷನನ್ನು ಬಾಸ ಮತ್ತು ಕಾಳಿದಾಸರಿಗೆ ಹೋಲಿಸಿದ್ದಾನೆ.

ಹರ್ಷನ ಆಸ್ಥಾನದಲ್ಲಿ ಬಾಣ, ಮಯೂರ, ಮಾತಂಗ, ದಿವಾಕರ, ಸಿದ್ದಸೇನ, ಹರಿದತ್ತ ಮುಂತಾದವರು ಇದ್ದರು.

ಬಾಣ: ಹರ್ಷಚರಿತ, ಕಾದಂಬರಿ, ಚಂಡಿಶತಕ, ಪಾರ್ವತಿ ಪರಿಣಯ

ಭತೃಹರಿ : ಭತೃಹರಿ ಶತಕ

ಮಯೂರ : ಸೂರ್ಯಶತಕ, ಅಷ್ಟಕ

ಹ್ಯೂಯನ್ ತ್ಸಾಂಗ್ : ಸಿ.ಯೂ.ಕಿ

ಹರ್ಷನು ತನ್ನ ಆಸ್ಥಾನದ ಎಲ್ಲಾ ವಿದ್ವಾಂಸರುಗಳಿಂದಲೂ ಬುದ್ಧನ ಪೂರ್ವಜನ್ಮಕ್ಕೆ ಸಂಬಂಧಿಸಿದಂತೆ ಪದ್ಯ ಬರೆಸಿ ಅದನ್ನು ಸಂಪಾದಿಸಿ ‘ಜಾತಕ ಮಾಲಾ’ ಎಂದು ಕೃತಿಗೆ ಹೆಸರು ಕೊಟ್ಟನು. ಬಾಣನ ಹರ್ಷಚರಿತವು ಹರ್ಷನ ಆತ್ಮಚರಿತ್ರೆಯೇ ಆಗಿದೆ.

ನಳಂದ ವಿಶ್ವವಿದ್ಯಾನಿಲಯ

ಗುಪ್ತರ ದೊರೆಯಾದ ಒಂದನೇ ಕುಮಾರಗುಪ್ತನಿಂದ(ಶಕ್ರಾದಿತ್ಯ) ಕ್ರಿಶ 5ನೆಯ ಶತಮಾನದಲ್ಲಿ ನಳಂದ ವಿಶ್ವವಿದ್ಯಾನಿಲಯವು ಸ್ಥಾಪಿಸಲ್ಪಟ್ಟಿತು. ಇದನ್ನು ನಂತರದ ಕಾಲದಲ್ಲಿ ಇತರ ಗುಪ್ತ ದೊರೆಗಳಾದ ಬುಧಗುಪ್ತ, ತಥಾಗತಗುಪ್ತ, ಬಾಲಾದಿತ್ಯರು ಬೆಳೆಸಿದರು. ಶಕದೊರೆಗಳು, ಕಾಮರೂಪದ ಬಾಸ್ಕರವರ್ಮ ಮುಂತಾದವರು ಆಶ್ರಯಧಾತರಾಗಿದ್ದರು. ವರ್ಧನರ ಕಾಲದಲ್ಲಿ ಏಳೆಯ ಶೃಂಗವನ್ನು ಮುಟ್ಟಿದ ಇದಕ್ಕೆ ಹರ್ಷವರ್ಧನನು ಮಹಾಪೋಷಕನಾಗಿದ್ದನು. ಅನೇಕ ಕಟ್ಟಡಗಳನ್ನು ನಿರ್ಮಿಸಿ, ವಿಶ್ವವಿದ್ಯಾಲಯದ ನಿರ್ವಹಣೆಗೆ ಸುಮಾರು 100 ಹಳ್ಳಿಗಳ ಭೂಕಂದಾಯವನ್ನು ದಾನವಾಗಿ ನೀಡಿದನು.

ಪ್ರಾಚೀನ ಭಾರತದ ಅತ್ಯಂತ ಪ್ರಸಿದ್ಧ ವಿಶ್ವವಿದ್ಯಾಲಯವಾದ ನಳಂದವು ‘ನಾಲಂದ’ ಎಂಬಲ್ಲಿತ್ತು. ಇದು ಈಗಿನ ಬಿಹಾರ ರಾಜ್ಯದ ರಾಜಘರ್ ಗೆ ಏಳು ಮೈಲಿ ದೂರದಲ್ಲಿರುವ ಇಂದಿನ ಬರಗಾಂವ್ ಗ್ರಾಮವೇ ಆಗಿದೆಯೆಂದು ಧೃಡಪಟ್ಟಿದೆ. ಇಲ್ಲಿ 1975 ರಲ್ಲಿ ಕನ್ನಿಂಗ್ ಹ್ಯಾಂ ಮತ್ತು 1913 ರಲ್ಲಿ ಡಾ|ಸ್ಪೂನರ್ ರವರು ಉತ್ಖನನ ನಡೆಸಿದ್ದಾರೆ.

ಹ್ಯಯನ್‌ತ್ಸಾಂಗ್ ಮತ್ತು ಇಕ್ಸಿಂಗರ ಪ್ರಕಾರ ಮತ್ತು ಭೂ ಉತ್ಖನನದಲ್ಲಿ ಕೆಲಮಟ್ಟಿಗೆ ದೃಡಪಟ್ಟರು ವಂತೆ ನಳಂದವು ಬಹುದೊಡ್ಡ ವಿಶ್ವವಿದ್ಯಾಲಯವಾಗಿತ್ತು. ಇಲ್ಲಿ 8 ದೊಡ್ಡ ಹಜಾರಗಳು, 300 ಇತರ ಕೊಠಡಿಗಳು ಇದ್ದವು. ಇವುಗಳನ್ನು ಇಟ್ಟಿಗೆಗಳಿಂದ ನಿರ್ಮಿಸಲಾಗಿತ್ತು. ವಿದ್ವಾಂಸರ ವಾಸಕ್ಕೆ ಮಹಡಿ ಮನೆಗಳಿದ್ದವು. ವಿಶ್ವವಿದ್ಯಾಲಯದ ಆವರಣದಲ್ಲಿ ಸ್ತೂಪಗಳು, ವಿಹಾರಗಳು, ಗೋಪುರಗಳಿದ್ದವು, ಮಾವಿನ ತೋಪುಗಳಿದ್ದವು,  ತಾವರೆ ಹೂವಿನ ಪುಷ್ಕರಣಿಗಳಿದ್ದವು.

ಖಗೋಳ ವೀಕ್ಷಣಾಲಯವೂ ಇತ್ತು. 3 ಅಂತಸ್ತಿನ ಮೂರು ಬೃಹತ್ ಕಟ್ಟಡಗಳಲ್ಲಿ ಗ್ರಂಥಾಲಯವಿತ್ತು. ಅವುಗಳನ್ನು ರತ್ನದಧಿ, ರತ್ನರಂಜಕ ಮತ್ತು ರತ್ನಸಾಗರಗಳೆಂದು ಕರೆಯಲಾಗುತ್ತಿತ್ತು. ಗ್ರಂಥಾಲಯವಿದ್ದ ಪ್ರದೇಶವನ್ನು ‘ಧರ್ಮಗಂಜ್ ‘ ಎಂದು ಕರೆಯಲಾಗುತ್ತಿತ್ತು. ಗ್ರಂಥಾಲಯದಲ್ಲಿ ಅಪೂರ್ವ ಓಲೆಗರಿಗಳನ್ನು, ಹಸ್ತಪ್ರತಿಗಳನ್ನು ಸಂಗ್ರಹಿಸಿಡಲಾಗಿತ್ತು.

ವಿಶ್ವವಿದ್ಯಾಲಯದಲ್ಲಿ 1500 ಅಧ್ಯಾಪಕರಿದ್ದರು. ದಿಗ್‌ನಾಗ್, ಸ್ಥಿರಮತಿ, ಧರ್ಮಪಾಲ ಹಾಗು ಶೀಲಭದ್ರ, ಶಾಂತರಕ್ಷಿತ, ಬುದ್ಧಕೀರ್ತಿ, ಕಮಲಶೀಲ, ಪದ್ಮಸಂಭವ, ಮುಂತಾದ ಪ್ರಸಿದ್ಧ ಪ್ರಾಧ್ಯಾಪಕ ಪಂಡಿತರಿದ್ದರು. ಧರ್ಮಪಾಲನು ಪ್ರಸಿದ್ಧ ವಿದ್ವಾಂಸನಾಗಿದ್ದು ಮೂಲತ: ಕಂಚಿಯವನಾಗಿದ್ದನು. ಇವನ ನಂತರ ಶೀಲಭದ್ರನು ಕುಲಪತಿಯಾದನು. ಇವನು ಸಮತಟ ಪ್ರದೇಶದವನಾಗಿದ್ದನು.

ಹೂಯನ್‌ ತ್ಸಾಂಗ್ ನಳಂದದ ಪ್ರಸಿದ್ದ ವಿದ್ಯಾರ್ಥಿಯಾಗಿದ್ದನು. ಮೂಲತ: ಚೀನಾದೇಶದವನಾದ ಇವನು ಯಾತ್ರಿಕನಾಗಿ ಭಾರತಕ್ಕೆ ಬಂದು ನಳಂದದಲ್ಲಿ ಅಧ್ಯಯನ ಮಾಡಿದ್ದನು. ಇವನು ಎಲ್ಲಾ ಪರೀಕ್ಷೆಗಳಲ್ಲೂ ಉತ್ತೀರ್ಣಗೊಂಡು ಧರ್ಮಾಚಾರ್ಯ, ಮೋಕ್ಷಚಾರ್ಯ ಮತ್ತು ಮಹಾಯಾನದೇವ ಎಂಬ ಪದವಿಗಳನ್ನು ಪಡೆದಿದ್ದನು.

ಚೀಣಾದಿಂದ ಬಂದ ʻಇತ್ಸಿಂಗ್ʼ ಸಹ 10 ವರ್ಷಗಳ ಕಾಲ ಇಲ್ಲಿಯೇ ಅಧ್ಯಯನ ಮಾಡಿದ್ದನು. ದೇಶವಿದೇಶಗಳಿಂದ ಸುಮಾರು 10,000 ವಿದ್ಯಾರ್ಥಿಗಳು ಇಲ್ಲಿ ಅಧ್ಯಯನ ಮಾಡುತ್ತಿದ್ದರು. ಇದೊಂದು ವಸತಿ ವಿಶ್ವವಿದ್ಯಾನಿಲಯವಾಗಿದ್ದು ಉಚಿತ ಊಟ, ಉಪಹಾರ, ಉಡುಪು ಮತ್ತು ವಸತಿ ಸೌಲಭ್ಯವನ್ನು ಒದಗಿಸಲಾಗುತ್ತಿತ್ತು.

ನಳಂದ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳಾಗಿ ಪ್ರವೇಶಪಡೆಯುವುದು ಸುಲಭವಾಗಿರಲಿಲ್ಲ. ಅಂದರೆ ಪ್ರವೇಶ ಕೋರಿ ಬಂದವರಿಗೆಲ್ಲ ಪ್ರವೇಶ ಸಿಗುತ್ತಿರಲಿಲ್ಲ. ಪ್ರವೇಶ ಬಯಸುವ ಅಭ್ಯರ್ಥಿಗಳಿಗೆ ಮೂರು ತಿಂಗಳ ಕಾಲ ತರಬೇತಿಯನ್ನು ನೀಡಲಾಗುತ್ತಿತ್ತು. ಈ ನಡುವೆ ಅಭ್ಯರ್ಥಿಯ ನಡೆನುಡಿಯ ಮತ್ತು ಜ್ಞಾಪಕಶಕ್ತಿಯನ್ನು ಪರೀಕ್ಷಿಸಲಾಗುತ್ತಿತ್ತು. ಕೊನೆಗೆ ಪರೀಕ್ಷೆಯನ್ನು ಎದುರಿಸಬೇಕಾಗುತ್ತಿತ್ತು. ಈ ಪರೀಕ್ಷೆಯು ಅತ್ಯಂತ ಕಠಿಣ ವಾಗಿದ್ದು ಪಾಸಾದ ಅಭ್ಯರ್ಥಿಯನ್ನು ವಿದ್ಯಾರ್ಥಿಯಾಗಿ ಸೇರಿಸಿಕೊಳ್ಳಲಾಗುತ್ತಿತ್ತು. ಇಲ್ಲಿ ಸ್ತ್ರೀಯರಿಗೂ ಪ್ರವೇಶಾ ವಕಾಶವಿದ್ದು, ಅವರು ಸನ್ಯಾಸಿಗಳ ಮತ್ತು ವಿದ್ಯಾರ್ಥಿಗಳ ಕೊಠಡಿಗೆ ಮಾತ್ರ ಹೋಗುವಂತಿರಲಿಲ್ಲ. ಬೇಕಿದ್ದರೆ ಹೊರಗಡೆ ಮಾತನಾಡಬಹುದಿತ್ತು.

ನಳಂದ ವಿಶ್ವವಿದ್ಯಾನಿಲಯದಲ್ಲಿ ಸಂಸ್ಕೃತವು ಮಾಧ್ಯಮವಾಗಿತ್ತು. ಇಲ್ಲಿಯ ಪಠ್ಯ ವಿಷಯಗಳೆಂದರೆ, ಮಹಾಯಾನ, ಹೀನಯಾನ, ವೈದಿಕ ಸಾಹಿತ್ಯ, ವ್ಯಾಕರಣ, ವೈದ್ಯಕೀಯಶಾಸ್ತ್ರ, ಕಲೆ ಮತ್ತು ತಂತ್ರವಿದ್ಯೆ. ವ್ಯಾಸಂಗವು 3 ಹಂತಗಳಲ್ಲಿ ನಡೆಯುತ್ತಿತ್ತು. ಅವುಗಳೆಂದರೆ;

1. 8 ರಿಂದ 13 ವರ್ಷದವರೆಗೆ ಪ್ರಾಥಮಿಕ ಹಂತ

2. 13 ರಿಂದ20 ವರ್ಷದವರೆಗೆ ಮಾಧ್ಯಮಿಕ ಹಂತ

3. ನಂತರ ಉಚ್ಚ ಶಿಕ್ಷಣ ಹಂತ

ನಳಂದದಲ್ಲಿ ಶಿಕ್ಷಣವು ಉಪನ್ಯಾಸ, ಚರ್ಚೆ, ಪ್ರಶೋತ್ತರ, ತಾಳೆಗರಿಗಳ ಪ್ರತಿಮಾಡುವಿಕೆ, ಅನುವಾದ ಮತ್ತು ವಾದ ವಿವಾದದ ಮೂಲಕ ದೊರೆಯುತ್ತಿತ್ತು. ಉಚ್ಚ ಶಿಕ್ಷಣವು ಆಧುನಿಕ ಸಂಶೋಧನಾ ರೂಪದಲ್ಲಿದ್ದು ಕೊಟ್ಟ ಸಮಸ್ಯೆಗಳನ್ನು ಅಧ್ಯಯನ ಮಾಡಿ ಪರಿಹರಿಸಬೇಕಾಗಿತ್ತು. ಪ್ರಬಂಧಗಳನ್ನು ರಚಿಸಿ ಮಂಡಿಸಬೇಕಾಗಿತ್ತು. ಇದನ್ನು ಪರೀಕ್ಷಿಸಿ ಪ್ರಶಸ್ತಿ ಪತ್ರಗಳನ್ನು ನೀಡಲಾಗುತ್ತಿತ್ತು.

ಪ್ರಾಚೀನ ಕಾಲದಲ್ಲಿ ನಳಂದ ವಿಶ್ವವಿದ್ಯಾನಿಲಯದಲ್ಲಿ ಅಧ್ಯಯನ ಮಾಡುವುದು ಒಂದು ಪ್ರತಿಷ್ಠೆಯ ಪ್ರಶ್ನೆಯಾಗಿತ್ತು. ಇದೊಂದು ಅಂತರರಾಷ್ಟ್ರೀಯ ವಿದ್ಯಾಕೇಂದ್ರವಾಗಿದ್ದು, ದೇಶವಿದೇಶಗಳಿಂದ ವಿದ್ಯಾರ್ಥಿಗಳು ಬರುತ್ತಿದ್ದರು. ಸುತ್ತ-ಮುತ್ತಲ ರಾಜ್ಯಗಳಲ್ಲದೆ ಆಗ್ನೆಯ ಏಷ್ಯಾ ದೇಶಗಳಿಂದಲೂ ರಾಜಾಶ್ರಯ ಈ ವಿಶ್ವವಿದ್ಯಾಲಯಕ್ಕೆ ದೊರೆಯುತ್ತಿತ್ತು.

ನಳಂದ ವಿಶ್ವವಿದ್ಯಾಲಯವು ಪ್ರಾಚೀನ ಭಾರತದಲ್ಲಿ ಹೆಸರುವಾಸಿಯಾಗಲು ಕಾರಣವೆಂದರೆ;

1. ಇಲ್ಲಿ ಸಿಗುತ್ತಿದ್ದ ಉಚಿತ ಶಿಕ್ಷಣ

2. ಬೌದ್ಧ ವಿಷಯಗಳೊಂದಿಗೆ ಇತರ ವಿಷಯಗಳಿಗೂ ಅವಕಾಶ

3. ಪಠ್ಯದಲ್ಲಿ ಲೌಕಿಕ ವಿಷಯಗಳಿಗೂ ಮಹತ್ವ

4. ಪ್ರಸಿದ್ಧ ವಿದ್ವಾಂಸರ ಬೋಧನೆ.

5. ಉತ್ತಮ ಗ್ರಂಥಾಲಯಗಳು ಮತ್ತು ವಸತಿ ಗೃಹಗಳ ಸೌಕರ್ಯ

6. ರಾಜಮಹಾರಾಜರ ಬೆಂಬಲದ ಪ್ರತಿಷ್ಠೆ

7. ದೊಡ್ಡದೊಡ್ಡ ಕಟ್ಟಡಗಳು ಗಾಂಭೀರ್ಯ ಮತ್ತು ಮಹತ್ವವನ್ನು ಸಾರುತ್ತಿದ್ದುದು.

8. ಇಲ್ಲಿ ನೀಡಿದ್ದ ಬೌದ್ಧಿಕ ಸ್ವಾತಂತ್ರ್ಯ

ಇಂತಹ ಪ್ರಸಿದ್ಧ ವಿಶ್ವವಿದ್ಯಾಲಯವನ್ನು 12ನೆಯ ಶತಮಾನದಲ್ಲಿ ಹೂಣರ ನಾಯಕ ಮಿಹಿರಗುಲ ನಾಶಪಡಿಸಿದನು. ಆದರೆ ರಾಜಾ ಬಾಲಾದಿತ್ಯ ಜೀರ್ಣೋದ್ದಾರ ಮಾಡಿದ್ದನಾದರೂ, 12ನೆಯ ಶತಮಾನದ ಅಂತ್ಯದಲ್ಲಿ ಮತ್ತೆ ದಾಳಿಗೀಡಾಯಿತು. ಬಿಹಾರವನ್ನು ಗೆದ್ದ ಬಕ್ತಿಯಾರ್ ಖಲ್ಟಿಯು ನಳಂದ ವಿಶ್ವವಿದ್ಯಾಲಯ ವನ್ನು ನಾಶಮಾಡಿದನು. ಗ್ರಂಥಭಂಡಾರಕ್ಕೆ ಬೆಂಕಿ ಇಟ್ಟು ಪೂರ್ಣನಾಶ ಗೊಳಿಸಿದ್ದಲ್ಲದೆ ವಿದ್ಯಾರ್ಥಿಗಳನ್ನು ಮತ್ತು ವಿದ್ವಾಂಸರನ್ನೂ ಹಿಂಸಿಸಿದ. ಪರಿಣಾಮವಾಗಿ ಗತಕಾಲದ ಜ್ಞಾನ ಕೇಂದ್ರವೊಂದು ಅವನತಿ ಹೊಂದಿತು.