ಅಶೋಕ ಧಮ್ಮ

ಅಶೋಕ ಧಮ್ಮ

ಧರ್ಮ ಎಂಬ ಪದದ ಪ್ರಾಕೃತ ರೂಪವೇ ʻಧಮ್ಮ’. ಅಂದರೆ ಧಾರ್ಮಿಕತೆ, ದೈವಭಕ್ತಿ (Law of Piety), ನೈತಿಕತೆ, ಸಾಮಾಜಿಕ ಮತ್ತು ಧಾರ್ಮಿಕ ವ್ಯವಸ್ಥೆ ಎಂಬ ಅರ್ಥಗಳನ್ನು ಹೊಂದಿದೆ. ಅಶೋಕ ಧಮ್ಮದ ಮೂಲಭೂತ ತತ್ವಗಳನ್ನು ಅಶೋಕನೇ ಕೆತ್ತಿಸಿದ ಶಿಲಾಶಾಸನ ಗಳಲ್ಲಿ ಕಾಣಬಹುದು. ಅವುಗಳೆಂದರೆ

ಸಂಯಮ (Mastery of Senses)
ದಯಾ (Kindness)
ಶುಶೃಷಾ (Service)
ಅಪಚಿತ್ತಿ (Reverence – Deep Respect)
ದಾನ (Charity)
ಸಂಪ್ರತಿಪತ್ತಿ (Support)
ಕೃತಜ್ಞತಾ, (Gratitude)
ಶೌಚ (Purity)
ಭಾವಶುದ್ಧಿ (Purity of Thought)
ದೃಡಭಕ್ತಿ (Devotion)
ಸತ್ಯ (Truthfullness)
ಅಪಿಚಿತ್ತಿ (Reverence – Deep Respect)

ಈ ಮೇಲ್ಕಂಡ ಅಂಶಗಳನ್ನು ಒಳಗೊಂಡ ಅಶೋಕ ಧಮ್ಮವು ಯಾವ ಧರ್ಮದಿಂದ ಆಧಾರಿತವಾಗಿದೆ ಅಥವಾ ಪ್ರಭಾವಿತವಾಗಿದೆ ಎಂಬ ವಿಷಯಕ್ಕೆ ಸಂಬಂಧಿಸಿದಂತೆ ವಿದ್ವಾಂಸರಲ್ಲಿ ಭಿನ್ನಾಭಿಪ್ರಾಯಗಳಿವೆ.

ಡಾ. ಭಂಡಾರ್ಕರ್‌ ರವರ ಪ್ರಕಾರ ಅಶೋಕ ಧಮ್ಮವು ಬೌದ್ಧ ಧರ್ಮವಾಗಿದೆ. ಅವನು ಬೌದ್ಧಧರ್ಮಿಯನಾಗಿದ್ದಾನೆ. ಆದರೆ ಅದನ್ನು ವಿರೋಧಿಸುವ ಡಾ. ರಾಧಾಕುಮುದ್ ಮುಖರ್ಜಿಯವರು ಅಶೋಕ ತನ್ನ ಶಿಲಾಶಾಸನಗಳಲ್ಲಿ ಪ್ರತಿಪಾದಿಸಿದ ಧಮ್ಮ ಬೌದ್ಧಧರ್ಮವೇ ಆಗಿದ್ದರೆ, ಭಗವಾನ್ ಬುದ್ಧನ ನಾಲ್ಕು ಆರ್ಯಸತ್ಯಗಳನ್ನು ಹೇಳುತ್ತಿದ್ದ. ಅಷ್ಟಾಂಗಿಕ ಮಾರ್ಗಗಳನ್ನು ಮತ್ತು ನಿರ್ವಾಣವನ್ನಾದರೂ ಉಲ್ಲೇಖಿಸುತ್ತಿದ್ದ. ಭಗವಾನ್ ಬುದ್ಧನ ಮಹಾನ್ ವ್ಯಕ್ತಿತ್ವವನ್ನಾದರೂ ಕೊಂಡಾಡುತ್ತಿದ್ದ. ಆದರೆ ಅದ್ಯಾವುದನ್ನು ಮಾಡದ ಅಶೋಕ ಧಮ್ಮ, ಬೌದ್ಧಧರ್ಮ ಅಲ್ಲವೇ ಅಲ್ಲ ಎನ್ನುವುದು ಮುಖರ್ಜಿಯವರ ಸ್ಪಷ್ಟ ಅಭಿಪ್ರಾಯವಾಗಿದೆ.

ಕಲ್ಲಣನು ತನ್ನ ‘ರಾಜತರಂಗಿಣಿ’ ಎಂಬ ಕೃತಿಯಲ್ಲಿ ಅಶೋಕನು ಶಿವನ ಆರಾಧಕನಾಗಿದ್ದನೆಂದು ತಿಳಿಸುತ್ತಾನೆ. ಅಲ್ಲದೆ ಶಿಲಾಶಾಸನಗಳಲ್ಲಿ ತನ್ನನ್ನು ‘ದೇವನಾಂಪ್ರಿಯ ಪ್ರಿಯದರ್ಶಿ’ ಎಂದು ಕರೆದುಕೊಂಡಿದ್ದಾನೆ. ಕೆ.ಎಂ. ಪಣಿಕ್ಕರ್‌ರವರು ಈ ದೈವ ವೈದಿಕ ದೇವರಲ್ಲದೆ ಮತ್ತಾರು ಎಂದು ಪ್ರಶ್ನಿಸುತ್ತಾರೆ. ಅಂದರೆ ಅಶೋಕನು ವೈದಿಕನಾಗಿದ್ದ. ಅವನ ಧರ್ಮಕ್ಕೆ ʻವೈದಿಕಧರ್ಮ’ (ಹಿಂದೂಧರ್ಮ) ಆಧಾರವಾಗಿತ್ತು ಎಂದರ್ಥವಾಗುತ್ತದೆ. ಆದರೆ ಅದನ್ನು ವಿರೋಧಿಸುವ ಇತರೆ ವಿದ್ವಾಂಸರು ಅಶೋಕ ಪ್ರತಿಪಾದಿಸಿದ ಧಮ್ಮ ವೈದಿಕ ಧರ್ಮವೇ ಆಗಿದ್ದರೆ ಅದರ ಪ್ರತೀಕವಾದ ಪ್ರಾಣಿಬಲಿ, ಯಾಗ, ಸಂಪ್ರದಾಯ ಮತ್ತು ಆಚರಣೆಗಳಲ್ಲಿ ತನ್ನ ನಂಬಿಕೆಯನ್ನು ದೃಢಪಡಿಸುತ್ತಿದ್ದ ಎಂದಿದ್ದಾರೆ. ಆದರೆ ಅವುಗಳ ಬಗ್ಗೆ ಚಕಾರವೆತ್ತದ ಅಶೋಕ ವೈದಿಕ ಧರ್ಮದಿಂದ ಪ್ರಭಾವಿತನಾಗಿಲ್ಲ ಎಂಬುದು ತಿಳಿಯುತ್ತದೆ.

ವಾಸ್ತವವಾಗಿ ಅಶೋಕ ಧಮ್ಮವು ಯಾವುದೇ ಧರ್ಮದಿಂದ ಪ್ರಭಾವಿತವಾಗಿಲ್ಲದಿರುವುದನ್ನು ಕಾಣಬಹುದು. ಆದರೆ ಅದು ಎಲ್ಲಾ ಧರ್ಮಗಳ ಸಾರ ಸಂಗ್ರಹವಾಗಿದೆ. ಯಾವುದೇ ಜಾತಿ, ಮತ, ಧರ್ಮಗಳ ಚೌಕಟ್ಟಿಗೆ ಒಳಪಡದ ಸ್ವತಂತ್ರ ಅಭಿವ್ಯಕ್ತಿಯಾಗಿದೆ. ಡಾ. ಆರ್.ಸಿ. ಮಜುಂದಾರ್ ಪ್ರಕಾರ “ಅವನ ಧರ್ಮ ಧರ್ಮ ಎನ್ನುವುದಕ್ಕಿಂತ ಒಂದು ನೀತಿ ಸಂಹಿತೆ ಎಂದು ಕರೆಯುವುದು ಉಚಿತ’ ಎಂದಿದ್ದಾರೆ. ಆರ್.ಕೆ. ಮುಖರ್ಜಿಯವರ ಪ್ರಕಾರ “ಅಶೋಕನ ಧರ್ಮ ಯಾವುದೇ ನಿರ್ದಿಷ್ಟ ಪದ್ಧತಿಯಾಗಿರದೇ ಅದರಲ್ಲಿ ಎಲ್ಲಾ ಜಾತಿ, ಜನಾಂಗ, ಧರ್ಮಿಯರಿಗೆ ಅವಶ್ಯಕವಾದ ನೀತಿ ಸಂಹಿತೆಯಾಗಿದ್ದವು. ಅವನ ಸ್ವಂತಿಕೆ ಅಡಗಿರುವುದು ಅವನು ಮಾಡಿದ ಕಾರ್ಯಗಳಲ್ಲಿ ಅಡಗಿದೆ” ಎಂದಿದ್ದಾರೆ. ಸ್ಮಿತ್‌ರವರು ಅಶೋಕನದು ಬೌದ್ಧಧರ್ಮವಾಗಿರದೇ ಅವನದೇ ಸ್ವಂತಿಕೆಯ ಧರ್ಮವೆಂದಿದ್ದಾರೆ.

ಸಾಮಾಜಿಕ ಹೊಣೆಗಾರಿಕೆ ಮತ್ತು ಒಬ್ಬರೊಂದಿಗೆ ಮತ್ತೊಬ್ಬರ ನಡತೆಗಳು ಹೇಗಿರಬೇಕೆಂಬುದರ ಮಹತ್ವವನ್ನು ಮನವರಿಕೆ ಮಾಡಿಕೊಡುವುದು ಧಮ್ಮದ ಉದ್ದೇಶವಾಗಿತ್ತು ಎಂದು ಪ್ರೊ|| ರೊಮಿಲಾ ಥಾಪರ್ ಅಭಿಪ್ರಾಯಪಟ್ಟಿದ್ದಾರೆ. ಅಶೋಕನ ಧಮ್ಮವು 4 ಪ್ರಮುಖ ತತ್ವಗಳನ್ನು ಆದರಿಸಿತ್ತು. ಅವುಗಳೆಂದರೆ 1. ಅಹಿಂಸೆ, 2. ಸಹಿಷ್ಣುತೆ, 3. ಶಾಂತಿ, 4. ಪ್ರಜಾಕಲ್ಯಾಣ.

 ಡಾ||ಆರ್.ಕೆ.ಮುಖರ್ಜಿಯವರ ಪ್ರಕಾರ ʻಅಶೋಕನ ಧಮ್ಮವು ಯಾವುದೇ ನಿರ್ದಿಷ್ಟ ಧಮ್ಮ ಹಾಗೂ ಧಾರ್ಮಿಕ ಪದ್ಧತಿಯಾಗಿರದೆ ಎಲ್ಲಾ ಜಾತಿ ಜನಾಂಗಕ್ಕೂ ಅಗತ್ಯವಾದ ನೈತಿಕ ಕಾನೂನುಗಳಾಗಿದ್ದವು’. ಡಾ|| ಭಂಡಾರ್ಕರ್ ರವರು ʻಅಶೋಕನ ಧಮ್ಮವು ಧಾರ್ಮಿಕವಲ್ಲದ ಬೌದ್ಧಧರ್ಮವಾಗಿತ್ತು’ ಎಂದಿದ್ದಾರೆ.

ಅಶೋಕ ಧಮ್ಮದ ಲಕ್ಷಣಗಳು :

1. ಅಹಿಂಸೆ :

ಅಹಿಂಸೆಯು ಅಶೋಕ ಧಮ್ಮದ ಸಾರವಾಗಿತ್ತು. ಇವನು ಕಳಿಂಗ ಯುದ್ಧಾನಂತರ ಅಹಿಂಸಾ ನೀತಿಯನ್ನು ಪಾಲಿಸಿದನು, ತನ್ನ ರಾಜ್ಯದಲ್ಲಿ ಪ್ರಾಣಿಬಲಿಯನ್ನು ನಿಷೇಧಿಸಿದನು. ಸ್ವತಃ ಬೇಟೆಯಾಡುವುದನ್ನು ನಿಲ್ಲಿಸಿದನು. ಮಾಂಸಾಹಾರವನ್ನು ಬಿಟ್ಟುಬಿಟ್ಟನು. ಯಜ್ಞಯಾಗಗಳನ್ನು ನಿಷೇಧಿಸಿದನು. ಪ್ರಾಣಿಗಳನ್ನು ಕೊಲ್ಲದಂತೆ ರಾಜಾಜ್ಞೆಯನ್ನು ಮಾಡಿದನು. ತನ್ನ ಶಿಲಾಶಾಸನದಲ್ಲಿ ಅಹಿಂಸೆಯ ಮಹತ್ವವನ್ನು ಸಾರಿದನು.

2. ಸಹಿಷ್ಣುತೆ :

ಸಹಿಷ್ಣುತೆ ಎಂದರೆ ಗುಲಾಮರು ಮತ್ತು ನೌಕರರ ಜೊತೆಗೆ ಸಹಾನುಭೂತಿ, ಜನ್ಮದಾತ್ಮಗಳಿಗೆ ಹಿರಿಯರಿಗೆ, ಗುರುವರ್ಯರಿಗೆ ಗೌರವ ಕೊಡುವುದರ ಜೊತೆಗೆ ವಿದೇಯರಾಗಿರಬೇಕು. ಅಲ್ಲದೆ ಕಿರಿಯರಿಗೆ ಪ್ರೀತ್ಯಾದಾರಗಳನ್ನು, ಆಶ್ರಿತರಿಗೆ, ಬಡವರಿಗೆ, ಸಂಕಷ್ಟದಲ್ಲಿರುವವರಿಗೆ, ಸ್ನೇಹಿತರಿಗೆ, ಪರಿಚಿತರಿಗೆ ಸನ್ಯಾಸಿಗಳಿಗೆ ಬ್ರಾಹ್ಮಣರಿಗೆ ಔದಾರ್ಯತೆಯನ್ನು ತೋರಿಸಬೇಕೆಂದು ಹೇಳುತ್ತಾನೆ. ಅಶೋಕನ ವೈಯಕ್ತಿಕ ಧರ್ಮ ಬೌದ್ಧ ಧರ್ಮವಾಗಿದ್ದರೂ ಅನ್ಯ ಮತಗಳನ್ನು ಕೀಳಾಗಿ ಕಾಣಲಿಲ್ಲ. ಬ್ರಾಹ್ಮಣರನ್ನು ಪ್ರೀತಿ ವಿಶ್ವಾಸಗಳಿಂದ ಕಂಡನು.

ಎರಡನೇ ಶಿಲಾಶಾಸನದಲ್ಲಿ ಅರಸನು ಎಲ್ಲಾ ಪಂಥಗಳನ್ನು ಗೌರವಿಸುತ್ತಾನೆ ಎಂದು ಅಶೋಕನೇ ಬರೆಸಿದ್ದಾನೆ. ಅಲ್ಲದೇ ಅಜೀವಿಕರಿಗಾಗಿ ಗಯಾ ಬಳಿ ಗುಹೆಗಳನ್ನು ಸಹ ನಿರ್ಮಿಸಿದ್ದಾನೆ. ಯಾರನ್ನೂ ಸಹ ಮತಾಂತರಕ್ಕೆ ಅಶೋಕ ಬಲಾತ್ಕರಿಸಲಿಲ್ಲ. ಇದು ಅಶೋಕನ ಮತ್ತು ಧಮ್ಮದ ಹೆಗ್ಗಳಿಕೆಯಾಗಿದೆ. ಅಶೋಕನ ಧಮ್ಮದ ಪ್ರಕಾರ ತನ್ನ ಪಂಥಕ್ಕಿಂತ ಪರಪಂಥವನ್ನು ಗೌರವಿಸಿದಾಗ ತನ್ನ ಪಂಥವು ಪ್ರಬಲಗೊಳ್ಳುತ್ತದೆ. ಪ್ರತಿಯೊಂದು ಪಂಥವು ಒಂದಲ್ಲಾ ಒಂದು ಕಾರಣಕ್ಕಾಗಿ ಪೂಜ್ಯಭಾವನೆಗೆ ಅರ್ಹ.

3. ಶಾಂತಿ :
ಶಾಂತಿಯು ಯಶಸ್ಸಿನ ಸಾಧನೆಯ ಮೂಲಮಂತ್ರವಾಗಿದೆ. ಅಶಾಂತಿಯು ಅವ್ಯವಸ್ಥೆಯ ಆಗರವಾಗುತ್ತದೆ.
4. ವಿಶ್ವ ಸಹೋದರತ್ವ :

ಅಶೋಕನು ವಿಶ್ವ ಸಹೋದರತ್ವವನ್ನು ಎತ್ತಿ ಹಿಡಿದನು. ವಿಶ್ವದ ಜನರೆಲ್ಲರೂ ತನ್ನ ಸಹೋದರರೆಂದು ಸಾರಿದನು. ಇದನ್ನೇ ಅಶೋಕ ಧಮ್ಮದ ಪ್ರಮುಖ ಲಕ್ಷಣವನ್ನಾಗಿಸಿದನು. ಈ ದೃಷ್ಟಿಯಿಂದ ಅಶೋಕನು ʻಜಗತ್ತಿನ ಪ್ರಥಮ ಅಂತರರಾಷ್ಟ್ರೀಯವಾದಿ’ ಎಂದು ಕರೆಯಬಹುದು.

5. ಪ್ರಜಾಕಲ್ಯಾಣ :

ಅಶೋಕ ಧಮ್ಮದ ಇನ್ನೊಂದು ಪ್ರಮುಖ ಲಕ್ಷಣವೆಂದರೆ ಪ್ರಜಾ ಕಲ್ಯಾಣವಾಗಿದೆ ಅಥವಾ ಸುಖಿರಾಜ್ಯದ (Welfare state) ಸ್ಥಾಪನೆಯಾಗಿದೆ. ತನ್ನ ಪ್ರಜೆಗಳೆಲ್ಲರ ನೈತಿಕ, ಲೌಕಿಕ ಮತ್ತು ಆಧ್ಯಾತ್ಮಿಕ ಉನ್ನತಿಗೆ ಶ್ರಮಿಸಿದ ಅಶೋಕನು ಅವರೆಲ್ಲರ ಸುಖಸಂತೋಷಕ್ಕೆ ತನ್ನ ಜೀವನವನ್ನು ಮುಡಿಪಾಗಿಟ್ಟನು. ಅಂತೆಯೇ ತನ್ನ ಒಂದನೇ ಕಳಿಂಗ ಶಿಲಾಶಾಸನದಲ್ಲಿ ಪ್ರಜೆಗಳೆಲ್ಲರೂ ತನ್ನ ಮಕ್ಕಳೇ. ಅವರು ಇಹಲೋಕದಲ್ಲಿ ಮಾತ್ರವಲ್ಲದೇ ಪರಲೋಕದಲ್ಲೂ ಸುಖವಾಗಿರಬೇಕು” ಎಂದು ತಿಳಿಸಿದ್ದಾನೆ. 6ನೇ ಶಿಲಾಶಾಸನದಲ್ಲಿ “ಎಲ್ಲರೂ ನನ್ನ ಮಕ್ಕಳೇ, ನಾನು ಎಲ್ಲೇ ಇರಲಿ, ಭೋಜನ ಮಾಡುತ್ತಿರಲಿ ಅಂತಃಪುರದಲ್ಲಿರಲಿ, ಗೋಶಾಲೆಯಲ್ಲಿರಲಿ, ಮಲಗುವ ಕೊಠಡಿಯಲ್ಲಿರಲಿ, ಅರಮನೆಯಲ್ಲಿರಲಿ, ಪ್ರಜೆಗಳು ತನ್ನನ್ನು ಭೇಟಿಯಾಗಿ ತಮ್ಮ ಕುಂದು ಕೊರತೆಗಳನ್ನು ನಿವಾರಿಸಿಕೊಳ್ಳಬಹುದು. ಅದಕ್ಕೆ ನಾನು ಸದಾ ಸಿದ್ಧ” ಎಂದು ತಿಳಿಸಿದ್ದಾನೆ. ಸುಖಿರಾಜ್ಯ ಸ್ಥಾಪನೆಗಾಗಿ ಸಾರ್ವಜನಿಕ ಉಪಯೋಗಿ ಕೆಲಸಗಳಲ್ಲಿ ತನ್ನನ್ನು ತಾನು ಅಶೋಕ ತೊಡಗಿಸಿಕೊಂಡಿದ್ದಾನೆ. ಈ ದೃಷ್ಟಿಯಿಂದ ಪ್ರಜಾಕಲ್ಯಾಣಕ್ಕಾಗಿ ಶ್ರಮಿಸಿದ ಸಾಮ್ರಾಟರಲ್ಲಿ ಅಶೋಕ ಮಹಾಶಯನೇ ಮೊದಲಿಗನು. ಪ್ರಜಾಕಲ್ಯಾಣದಲ್ಲಿ ಜಾರಿಗೆ ತಂದ ಲೋಕೋಪಯೋಗಿ ಕಾರ್ಯಗಳು ಅತ್ಯಂತ ಅವಿಸ್ಮರಣೀಯವಾಗಿದೆ. ಅವುಗಳೆಂದರೆ:

ರಸ್ತೆಗಳ ನಿರ್ಮಾಣ,    

ಸಾಲುಮರಗಳನ್ನು ನೆಡಿಸಿದ್ದು,

ಅನ್ನ ಛತ್ರಾಲಯಗಳ ಸ್ಥಾಪನೆ,                                             

ಪ್ರತಿ 9 ಮೈಲುಗಳಿಗೆ ಒಂದು ಬಾವಿಯ ನಿರ್ಮಾಣ,

ಚಿಕಿತ್ಸಾಲಯಗಳ ಸ್ಥಾಪನೆ,                                                   

ವಿಶ್ರಾಂತಿ ಗೃಹಗಳ ಸ್ಥಾಪನೆ,

ಗಿಡಮೂಲಿಕೆಯ ಸಸ್ಯಗಳನ್ನು ಬೆಳೆಸಿದ್ದು ಮೊದಲಾದವು ಪ್ರಜಾಕಲ್ಯಾಣದ ಸಾಧನೆಗಳಾಗಿವೆ.

ಅಶೋಕನು ತನ್ನ  ಧಮ್ಮದ ಪ್ರಚಾರಕ್ಕೆ ಕೈಗೊಂಡ ಕ್ರಮಗಳು :

1. ತನ್ನ ವೈಯಕ್ತಿಕ ಉದಾಹರಣೆಯನ್ನು ಜನರ ಮುಂದಿಡುವ ಮೂಲಕ :

* ದಿಗ್ವಿಜಯಕ್ಕೆ ಸಮಾಪ್ತಿ ಹಾಡಿದನು

* ಪ್ರಾಣಿ ಬಲಿ, ಬೇಟೆ, ಮಾಂಸಾಹಾರ ತ್ಯಜಿಸಿದನು

* ಜನೋಪಯೋಗಿ (ಪ್ರಜಾಕಲ್ಯಾಣ) ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡನು

2. ಹೆಚ್ಚು ಪ್ರಚಾರ ಕೈಗೊಳ್ಳುವ ಮೂಲಕ :

* ಶಿಲಾಶಾಸನಗಳ ಮೇಲೆ, ಸ್ತಂಭಗಳ ಮೇಲೆ ಮತ್ತು ಕಲ್ಲುಬಂಡೆಗಳ ಮೇಲೆ ತನ್ನ ಧಮ್ಮದ ಮಾಹಿತಿಯನ್ನು ಕೆತ್ತಿಸಿದನು

* ಧಮ್ಮ ಮಹಾಮಾತ್ರರನ್ನು ನೇಮಿಸಿ ಅವರನ್ನು ಹೊರ ಪ್ರಾಂತಗಳು ಮತ್ತು ಹೊರ ದೇಶಗಳಿಗೆ ಧರ್ಮಪ್ರಚಾರಕರಾಗಿ ಕಳುಹಿಸಿದನು

* ತನ್ನ ಅಧಿಕಾರಿಗಳು ಪ್ರಜಾಹಿತಕ್ಕೆ ಒತ್ತು ಕೊಡುವಂತೆ ಆದೇಶ ನೀಡಿದನು

* ಜನರನ್ನು ನೇರವಾಗಿ ಸಂಪರ್ಕಿಸಿ ಅವರ ಕುಂದು ಕೊರತೆ ಅರಿಯುವ ಪ್ರಯತ್ನಮಾಡಿದನು

* ಧಮ್ಮದ ಬಗ್ಗೆ ಪ್ರಜ್ಞಾವಂತರೊಂದಿಗೆ ಚರ್ಚಿಸಿ ಧಮ್ಮದ ಮಹತ್ವವನ್ನು ಸಾರುವ  ಕೆಲಸಮಾಡಿದನು

ಅಶೋಕ ಧಮ್ಮದ ಪ್ರಭಾವ (ಪರಿಣಾಮ) :

* ಅಶೋಕನ ರಾಜನೀತಿಯ ಮೇಲೆ ಅಶೋಕ ಧಮ್ಮವು ಹೆಚ್ಚಿನ ಪ್ರಭಾವ ಬೀರಿತು.

* ಅಶೋಕನು ತನ್ನ ದಿಗ್ವಿಜಯ ನೀತಿಯನ್ನು ಸಂಪೂರ್ಣವಾಗಿ ಕೈಬಿಟ್ಟನು. ತನ್ನ ವೈಯಕ್ತಿಕ ಅಧಿಕಾರದ ತೆವಲಿಗಾಗಿ ಹಾಗೂ ಸಾಮ್ರಾಜ್ಯಾಧಿಪತಿ ಎಂಬ ಉಮೇದಿಗಾಗಿ ಹಲವು ಜೀವಗಳನ್ನು ಬಲಿಕೊಟ್ಟು ರಾಜ್ಯ ರಾಜ್ಯಗಳನ್ನು ಗೆಲ್ಲುವ ತನ್ನ ನೀತಿಗೆ ಮಂಗಳ ಹಾಡಿದನು.

* ತನ್ನ ಸಮಕಾಲೀನ ರಾಜ್ಯಗಳೊಂದಿಗೆ ಸೌಹಾರ್ದಯುತವಾದ ಸಂಬಂಧವನ್ನು ಸ್ಥಾಪಿಸಿದನು.

* ಆಕ್ರಮಣಕಾರಿ ನೀತಿಯನ್ನು ಕೈಬಿಟ್ಟನು.

* ತನ್ನ ಮಕ್ಕಳು ಮತ್ತು ಮೊಮ್ಮಕ್ಕಳು ಯಾವುದೇ ಹೊಸ ಯುದ್ಧ / ದಿಗ್ವಿಜಯ ನಡೆಸದಂತೆ ಕಟ್ಟಪ್ಪಣೆ ಮಾಡಿದನು. ಆ ಮೂಲಕ ರಕ್ತಪಾತವನ್ನು ತಪ್ಪಿಸಿದನು.

* ನಂತರದ ದೊರೆಗಳು ಮತ್ತು ಪ್ರಜೆಗಳಿಗೆ ಬೇರಿ ಘೋಷಕ್ಕಿಂತ ಧರ್ಮಘೋಷವೇ ಕಿವಿಗೆ ಹೆಚ್ಚು ಬೀಳುವಂತಾಯಿತು.

* ಆದರೆ ಅಶೋಕ ಅನುಸರಿಸಿದ ಅಹಿಂಸಾ ನೀತಿಯಿಂದ ಸಾಮ್ರಾಜ್ಯದ ನಿರಂತರತೆಗೆ ಭಂಗ ಉಂಟಾಯಿತು. ಸೈನಿಕರಲ್ಲಿದ್ದ ಕ್ಷಾತ್ರ ತೇಜಸ್ಸು ನಾಶವಾಗಿ ಪರಕೀಯರು ಆಕ್ರಮಣ ಮಾಡಿದಾಗ ದೇಶವನ್ನು ರಕ್ಷಿಸಲು ಅಸಮರ್ಥರಾದರು. ಇದರಿಂದಾಗಿ ಮೌರ್ಯ ವಂಶದ ಆಳ್ವಿಕೆ ಅಶೋಕನ ನಂತರ ಸರ್ವನಾಶದತ್ತ ಸಾಗಿತ್ತು.

* ಹೆಚ್.ಸಿ. ರಾಯ್ ಚೌದರಿಯವರು ಅಭಿಪ್ರಾಯ ಪಡುವಂತೆ “ಮೌರ್ಯ ಸಾಮ್ರಾಜ್ಯದ ಕ್ಷಾತ್ರ ತೇಜಸ್ಸು ಕಳಿಂಗ ರಣರಂಗ ದ ಕಡೆಯ ಸೈನಿಕನ ನೋವಿನ ನರಳಾಟದ ಕಡೆಯ ಸೊಲ್ಲಿನಲ್ಲಿ ನಾಶವಾಯಿತು” ಎಂದಿದ್ದಾರೆ.

ಅಶೋಕನ ಜೀವನ ಮತ್ತು ಸಾಧನೆಗಳು

ಅಶೋಕನ ಜೀವನ ಮತ್ತು ಸಾಧನೆಗಳು

ಆರಂಭಿಕ ಜೀವನ
ಸಿಂಹಾಸನಕ್ಕೆ ಆರೋಹಣ

ಪ್ರಾಚೀನ ಭಾರತದಲ್ಲಿ ಆಳ್ವಿಕೆ ನಡೆಸಿದ ಸರ್ವಶ್ರೇಷ್ಟ ಸಾಮ್ರಾಟರಲ್ಲಿ ಅಶೋಕ ಮಹಾಶಯ ಪ್ರಮುಖ. ಈತನನ್ನು ಭಾರತದ ಘನವಂತ ದೊರೆಯೆಂದೇ ಗುರುತಿಸಲಾಗಿದೆ. ವೀರಯೋಧನು ದಿಗ್ವಿಜಯಶಾಲಿಯೂ, ದಕ್ಷ ಆಡಳಿತಗಾರನೂ, ಶಾಸನಗಳ ಆದ್ಯಪ್ರವರ್ತಕನೂ, ಪ್ರಜಾಹಿತಾಕಾಂಕ್ಷಿ ದೊರೆಯೂ ಆದ ಅಶೋಕ ಮಹಾಶಯನ ವ್ಯಕ್ತಿತ್ವ ವಿಶ್ವದ ಚರಿತ್ರೆಯಲ್ಲಿ ಚಿರಸ್ಥಾಯಿಯಾಗಿ ಉಳಿದುಕೊಂಡಿದೆ. 

 ಅಶೋಕ ಬಿಂದುಸಾರನ ಮಗ, ಚಂದ್ರಗುಪ್ತ ಮೌರ್ಯನ ಮೊಮ್ಮಗ, ಅಶೋಕನ ತಾಯಿಯ ಹೆಸರು ʻದುಮ್ಮಾ’. ಬೌದ್ಧ ಧರ್ಮಗ್ರಂಥಗಳ ಪ್ರಕಾರ ಬಿಂದುಸಾರನಿಗೆ 16 ಜನ ಹೆಂಡತಿಯರಿದ್ದರು. ಅವರಿಗೆ 101 ಜನ ಮಕ್ಕಳು ಜನಿಸಿದರು. ಇವರಲ್ಲಿ ಸುಶೀಮ ಹಿರಿಯಮಗ, ಅಶೋಕ ಎರಡನೇ ಮಗ. ಬಾಲ್ಯದಲ್ಲಿ ಪ್ರತಿಭಾವಂತನಾಗಿದ್ದ ಅಶೋಕನು ತನ್ನ 16ನೇ ವಯಸ್ಸಿನಲ್ಲಿ ಉಜ್ಜಯನಿ ಹಾಗೂ ತಕ್ಷಶಿಲಾ ರಾಜ್ಯಗಳ ರಾಜ್ಯಪಾಲನಾಗಿ ಆಡಳಿತದ ಅನುಭವವನ್ನು ಪಡೆದುಕೊಂಡನು. ಉಜ್ಜಯನಿಯಲ್ಲಿರುವಾಗ ಅಶೋಕ “ಮಹಾದೇವಿ” ಎಂಬ ಕನ್ಯೆಯೊಂದಿಗೆ ವಿವಾಹವಾದನು. ಅವರಿಗೆ ಸಂಗಮಿತ್ರೆ ಹಾಗೂ ಮಹೇಂದ್ರ ಎಂಬ ಇಬ್ಬರು ಮಕ್ಕಳಿದ್ದರು.

ತಂದೆಯ ಮರಣದ ನಂತರ ಅಶೋಕ ನಾಲ್ಕು ವರ್ಷ ತಡವಾಗಿ ಅಂದರೆ ಸಾ.ಶ. ಪೂ. 269ರಲ್ಲಿ ಪಟ್ಟಕ್ಕೆ ಬಂದನು. ಈ ಅವಧಿಯಲ್ಲಿ ಅಶೋಕನು ತನ್ನ ಸಹೋದರರ ಜೊತೆಗೆ ಸಿಂಹಾಸನಕ್ಕಾಗಿ ಹೋರಾಟ ಮಾಡಿರಬೇಕು.  ಅಶೋಕನ ಆರಂಭಿಕ ಜೀವನದ ಬಗ್ಗೆ ವಿವರ ನೀಡುವ ದೀಪವಂಶ, ಮಹಾವಂಶ ಮತ್ತು ಸಿಲೋನಿನ ವೃತ್ತಾಂತಗಳು ಅಶೋಕನು ತನ್ನ 99 ಮಂದಿ ಸಹೋದರರನ್ನು ಸಂಹರಿಸಿ ಸಿಂಹಾಸನಕ್ಕೆ ಬಂದನೆಂದು, ಆರಂಭದಲ್ಲಿ ಕ್ರೂರಿಯು ಮತ್ತು ಚಂಡಾಲ ಅಶೋಕನಾಗಿದ್ದನೆಂದು ತಿಳಿದುಬರುತ್ತದೆ. ಬೌದ್ಧಮತಾವಲಂಬಿಯಾದ ನಂತರ ಧರ್ಮಾಶೋಕನಾಗಿ ಮಾರ್ಪಟ್ಟನು. ಇಂತಹ ಅಂಶಗಳು ‘ಅರ್ಥವಿಲ್ಲದ ಕಗ್ಗ’ವೆಂದು ವಿ.ಎ.ಸ್ಮಿತ್ ಅಭಿಪ್ರಾಯಪಟ್ಟಿದ್ದಾರೆ. ಬಿಂದುಸಾರನ ಮರಣಾನಂತರ ಸಿಂಹಾಸನಕ್ಕಾಗಿ ನಡೆದ ದಾಯಾದಿ ಕಲಹದಿಂದ ಬಹುಶಃ ನಾಲ್ಕು ವರ್ಷಗಳ ಕಾಲ ಅಶೋಕನ ಸಿಂಹಾಸನಾರೋಹಣ ತಡವಾಗಿರಬೇಕೆಂದು ಅಭಿಪ್ರಾಯಪಡಲಾಗಿದೆ. ಆದರೆ ಅಶೋಕನ ಮಲ ಸಹೋದರನಾದ ಸುಸೀಮನ ಪ್ರತಿಭಟನೆ, ಅಶೋಕನ ಸಿಂಹಾಸನಾರೋಹಣವನ್ನು 4ವರ್ಷಗಳ ಕಾಲ ಮುಂದೂಡಿತೇ ವಿನಃ ರಕ್ತಮಯ ವಾತಾವರಣ ಕಾರಣವಲ್ಲವೆಂದು ವಿ.ಎ.ಸ್ಮಿತ್ ಅಭಿಪ್ರಾಯಪಟ್ಟಿದ್ದಾರೆ. ಡಾ|ಆರ್.ಸಿ.ಮಜುಂದಾರ್ ಅಶೋಕನನ್ನು ‘ಚಂಡಾ ಅಶೋಕ’ನೆಂದು ಕರೆಯುವುದು ಸತ್ಯಾಂಶಕ್ಕೆ ದೂರವಾದ ಸಂಗತಿ ಎಂದು ತಿಳಿಸಿದ್ದಾರೆ. ಡಾ. ಜಯಸ್ವಾಲ್ ರವರ ಪ್ರಕಾರ ಪಟ್ಟಾಭಿಷೇಕದ ಕಾಲಕ್ಕೆ ಅಶೋಕನಿಗೆ 21 ವರ್ಷಗಳಾಗಿದ್ದು ವೈದಿಕ ಸಂಪ್ರದಾಯದ ಪ್ರಕಾರ ಪಟ್ಟಾಭಿಷೇಕಕ್ಕೆ 25 ವರ್ಷಗಳಾಗಬೇಕಿದ್ದರಿಂದ 4 ವರ್ಷಗಳ ಕಾಲ ತಡವಾಯಿತು. 

ಕಳಿಂಗ ಯುದ್ಧ

ಅಶೋಕನು ದಿಗ್ವಿಜಯಗಳ ಮೂಲಕ ಮೌರ್ಯರ ಅಧಿಪತ್ಯವನ್ನು ವಿಸ್ತರಿಸುವ ಪ್ರಯತ್ನ ಮಾಡಿದನು. ಆತನು ಕೈಗೊಂಡ ದಿಗ್ವಿಜಯವೇ ಕಳಿಂಗ ಯುದ್ಧ.

ಅಶೋಕನು ತನ್ನ 13ನೇ ಬಂಡೆಕಲ್ಲು ಶಾಸನದಲ್ಲಿ ತಾನು ಸಿಂಹಾಸನವೇರಿದ 9ನೇ ವರ್ಷದಲ್ಲಿ ಕಳಿಂಗ ರಾಜ್ಯದ ಮೇಲೆ ಆಕ್ರಮಣ ಕೈಗೊಂಡನೆಂದು ತಿಳಿಸಿದ್ದಾನೆ. ಈ ಯುದ್ಧದ ಪರಿಣಾಮ ಹಾಗೂ ತನ್ನ ರಾಜನೀತಿಯ ಮೇಲೆ ಉಂಟಾದ ಪ್ರಭಾವದ ಬಗ್ಗೆ ವಿವರಿಸಿದ್ದಾನೆ. ತನ್ನ ತಂದೆಯಿಂದ ಅಥವಾ ಅಜ್ಜನಿಂದ ಕಳಿಂಗವು ಗೆಲ್ಲಲ್ಪಟ್ಟಿರಲಿಲ್ಲವೆಂದು ಸ್ಪಷ್ಟಪಡಿಸಿದ್ದಾನೆ. ಅಶೋಕ ಕೈಗೊಂಡ ದಿಗ್ವಿಜಯಗಳಲ್ಲಿ ಕಳಿಂಗ ಯುದ್ಧವೇ ಪ್ರಥಮ ಮತ್ತು ಕೊನೆಯ ಯುದ್ಧವೆಂದು ತಿಳಿದುಬರುತ್ತದೆ. ಕಳಿಂಗ ಯುದ್ಧಕ್ಕೆ ಕಾರಣವೇನೆಂದು ತಿಳಿದುಬರುವುದಿಲ್ಲ. ಆದರೆ ಈ ಯುದ್ಧವು ತನ್ನ ರಾಜನೀತಿಯ ಮೇಲೆ ಜ್ವಲಂತ ಪರಿಣಾಮ ಬೀರಿತೆಂದು ತಿಳಿಸಿದ್ದಾನೆ.

ಕಳಿಂಗ ಎಂಬುದು ಇಂದಿನ ಓರಿಸ್ಸಾದ ಹಳೆಯ ಹೆಸರು. ಈ ರಾಜ್ಯವನ್ನು ಶುದ್ಧ ವರ್ಮ ಎಂಬ ರಾಜ ಆಳುತ್ತಿದ್ದನು. ಕಳಿಂಗವನ್ನು ಗೆಲ್ಲಬೇಕೆಂಬ ಛಲದಿಂದ ಅಶೋಕ ಭಾರಿ ಸೈನ್ಯದೊಂದಿಗೆ ದಾಳಿ ಮಾಡಿದನು. ಸ್ವಭಾವತಃ ಶಾಂತಿ ಪ್ರಿಯರೂ ಹಾಗೂ ಅಹಿಂಸಾವಾದಿಗಳೂ ಆಗಿದ್ದ ಕಳಿಂಗರು ಭಾರೀ ಪ್ರತಿರೋಧವನ್ನು ಒಡ್ಡಿದರು. ಭುವನೇಶ್ವರದಿಂದ 150 ಕೀ. ಮಿ. ದೂರದ ʻದೌಲಿ’ ಎಂಬಲ್ಲಿ ನಡೆದ ಭೀಕರ ಕದನದಲ್ಲಿ ಅಶೋಕನಿಗೆ ಜಯ ಲಭಿಸಿತು. ಈ ಯುದ್ಧದಲ್ಲಿ ಒಂದು ಲಕ್ಷ ಜನರು ಆಸುನೀಗಿದರು. ಸುಮಾರು ಎರಡು ಲಕ್ಷ ಜನರು ಗಾಯಗೊಂಡರು. ಸುಮಾರು ಒಂದೂವರೆ ಲಕ್ಷ ಜನ ಸೆರೆಸಿಕ್ಕರು. ಲಕ್ಷಾಂತರ ಜನ ರೋಗ ರುಜಿನಗಳಿಗೆ ಬಲಿಯಾದರು. ರಣರಂಗದಲ್ಲಿ ರಕ್ತದ ಕಾಲುವೆಯೇ ಹರಿಯಿತು. ಯುದ್ಧದಲ್ಲಿ ಗಂಡಂದಿರನ್ನು, ಮಕ್ಕಳನ್ನು ಕಳೆದುಕೊಂಡವರ ಆಕ್ರಂದನ ಮುಗಿಲು ಮುಟ್ಟಿತು. ಇದರಿಂದ ಅಶೋಕನ ಮನ ವಿಲಿವಿಲಿ ಒದ್ದಾಡಿತು. ಅವನ ಹೃದಯ ಕಂಪಿಸಿತು. ಈ ಯುದ್ಧ ಅಶೋಕನ ಜೀವನದ ಗತಿಯನ್ನೇ ಬದಲಿಸಿತು. ಇನ್ನು ಮುಂದೆ ಯುದ್ಧವನ್ನೇ ಮಾಡುವುದಿಲ್ಲ ಎಂದು ಪ್ರತಿಜ್ಞೆ ಮಾಡಿದನು. ರಕ್ತ ಪಾತದಿಂದ ರಾಜ್ಯ ನಿರ್ಮಾಣ ನಿರರ್ಥಕ ಎಂದು ಅವನಿಗೆ ಅನಿಸಿತು. ರಕ್ತಪಾತ ಹಾಗೂ ಹಿಂಸೆಯ ಮಾರ್ಗವನ್ನು ಬಿಟ್ಟು ಶಾಂತಿ ಹಾಗೂ ಅಹಿಂಸಾಮಾರ್ಗವನ್ನು ತುಳಿಯುವುದಾಗಿ ಅಶೋಕ ಘೋಷಿಸಿದನು.

ಬೌದ್ಧ ಧರ್ಮಕ್ಕೆ ಪರಿವರ್ತನೆ

 ಕಳಿಂಗ ಯುದ್ಧದಿಂದ ಮಹತ್ತರ ಪರಿಣಾಮ ಉಂಟಾಯಿತು. ಕಳಿಂಗ ಯುದ್ಧವು ಅಶೋಕ ಮಹಾಶಯನ ಮನಪರಿವರ್ತನೆಗೆ ಮೂಲಕಾರಣವಾಯಿತು. ರಣರಂಗದ ಭೀಭತ್ಸ ದೃಶ್ಯದಿಂದ ಅಶೋಕನ ಮನಕರಗಿತು. ಯುದ್ಧದಿಂದ ಪ್ರಜಾಪೀಡನೆ ಉಂಟಾಗುತ್ತದೆಯೇ ಹೊರತು ಪ್ರಜಾ ಪರಿಪಾಲನೆಯಾಗುವುದಿಲ್ಲ ಎಂದು ಅರ್ಥೈಸಿಕೊಂಡ ಅಶೋಕ ಮಹಾಶಯ ಧರ್ಮಾಶೋಕನಾಗಿ ಮಾರ್ಪಟ್ಟನು. ಕಳಿಂಗ ಯುದ್ಧದಿಂದ ಅಶೋಕನ ಸೈನಿಕ ಆಕ್ರಮಣ ಕೊನೆಗೊಂಡು ಆದ್ಯಾತ್ಮಿಕ ದಿಗ್ವಿಜಯ ಆರಂಭಗೊಂಡಿತು.

ಕಳಿಂಗ ಯುದ್ಧದ ನಂತರ ಅಶೋಕನ ಮನಸ್ಸು ದುಃಖತಪ್ತವಾಯಿತು. ಈ ಹಿನ್ನಲೆಯಲ್ಲಿ ಅಶೋಕನು ಬೌದ್ಧ ಮುನಿ ಉಪಗುಪ್ತನ ಪ್ರಭಾವಕ್ಕೊಳಗಾಗಿ ಬೌದ್ಧ ಧರ್ಮಕ್ಕೆ ಮತಾಂತರಗೊಂಡನು. ಇನ್ನು ಮುಂದೆ ಖಡ್ಗವನ್ನು ಹಿಡಿಯಲಾರೆ ಎಂದು ಶಪಥ ಮಾಡಿದನು. ಅಂದಿನಿಂದ ಅವನು ಯುದ್ಧ ವಿಜಯವನ್ನು ತ್ಯಜಿಸಿ ಧರ್ಮ ವಿಜಯವನ್ನು ಆರಂಭಿಸಿದನು. ಬೌದ್ಧ ಧರ್ಮಕ್ಕೆ ಮತಾಂತರಗೊಂಡ ಅಶೋಕನು ಅದರ ಏಳಿಗೆಗಾಗಿ ಹಗಲಿರುಳು ದುಡಿದನು. ಬೌದ್ಧ ಸ್ಥಳಗಳಾದ ಕಪಿಲವಸ್ತು, ಲುಂಬಿಣಿ, ಸಾರನಾಥ, ಗಯಾ, ಕುಶಿನಗರ, ರಾಜಗೃಹ ಹಾಗೂ ವೈಶಾಲಿಗಳಿಗೆ ಭೇಟಿ ನೀಡಿ ಅಲ್ಲಿ ಅನೇಕ ಸ್ತೂಪಗಳನ್ನು ಹಾಗೂ ವಿಹಾರಗಳನ್ನು ಸ್ಥಾಪಿಸಿದನು. ಬುದ್ಧನ ಜನ್ಮಸ್ಥಳವಾದ ಲುಂಬಿನಿಯಲ್ಲಿ ಒಂದು ಸ್ತೂಪವನ್ನು ನಿರ್ಮಿಸಿ ಅಹಿಂಸೆಯೇ ಪರಮಧರ್ಮ ಎಂದು ಸಾರಿದನು. ಅರಮನೆಗಳಲ್ಲಿ ನಡೆಯುತ್ತಿದ್ದ ಪ್ರಾಣಿ ಬಲಿಯನ್ನು ತಡೆಗಟ್ಟಿದನು. ಸ್ವತಃ ತಾನೇ ಬೇಟೆಯಾಡುವದನ್ನು ನಿಲ್ಲಿಸಿದನು. ಪ್ರಾಣಿ ಹಿಂಸೆ ಮಾಡದಂತೆ ತಡೆಯಲು ಶಾಸನಗಳನ್ನು ಹೊರಡಿಸಿದನು. ಧರ್ಮಪ್ರಚಾರಕ್ಕಾಗಿ ʻಧರ್ಮ ಮಹಾಮಾತ್ರರನ್ನು’ ನೇಮಿಸಿದನು. ತನ್ನ ಸ್ವಂತ ಮಕ್ಕಳಾದ ʻಸಂಗಮಿತ್ರೆ ಹಾಗೂ ಮಹೇಂದ್ರ’ರನ್ನು ಶ್ರೀಲಂಕಾಕ್ಕೆ ಬೌದ್ಧ ಧರ್ಮ ಪ್ರಚಾರಕ್ಕಾಗಿ ಕಳುಹಿಸಿದನು. ಸಿಂಹಳದ ರಾಜ ಬೌದ್ಧ ಧರ್ಮವನ್ನು ಸ್ವೀಕರಿಸುವ ಮೂಲಕ ಅನುರಾಧಪುರದಲ್ಲಿ ಒಂದು ಸ್ತೂಪವನ್ನು ನಿರ್ಮಿಸಿದನು. ಅಶೋಕನ ಶ್ರಮದ ಫಲವಾಗಿ ಬೌದ್ಧ ಧರ್ಮವು ಟಿಬೇಟ್, ಚೀನಾ, ಶ್ರೀಲಂಕಾ, ನೇಪಾಳ, ಜಪಾನ್, ಉಜ್ಜಯನಿ, ಕೋರಿಯಾ, ಸಿರಿಯಾ, ಈಜಿಪ್ಟ್, ಮೆಸೋಪೋಟಮಿಯಾ, ಜಾವಾ, ಸುಮಾತ್ರಾ ಹಾಗೂ ಕಾಂಬೋಡಿಯಾಗಳಲ್ಲಿ ಹೆಚ್ಚು ಪ್ರಚಾರಗೊಂಡಿತು. ಅಶೋಕ ಮೂರನೇ ಬೌದ್ಧ ಸಮ್ಮೇಳನವನ್ನು ಪಾಟಲಿಪುತ್ರದಲ್ಲಿ ನೆರವೇರಿಸಿ ಬೌದ್ಧ ಭಿಕ್ಷುಕರ ನಡುವಿನ ಅಂತಃಕಲಹವನ್ನು ಶಮನಗೊಳಿಸಿದನು.

ಅಲ್ಲದೆ ಕಳಿಂಗ ಯುದ್ಧದ ನಂತರ ಪ್ರಜಾಕಲ್ಯಾಣಕ್ಕಾಗಿ ತನ್ನ ಆಡಳಿತವನ್ನು ಮೀಸಲಿಟ್ಟನು. ‘ದಿಗ್ವಿಜಯಕ್ಕಿಂತ ಧರ್ಮವಿಜಯವೇ ಮಿಗಿಲು’ ಎಂಬುದನ್ನು ಅರಿತುಕೊಂಡನು. ಕಲ್ಹಣನ ರಾಜತರಂಗಿಣಿಯ ಪ್ರಕಾರ ಕಳಿಂಗ ಯುದ್ಧಕ್ಕೆ ಮೊದಲು ಆಶೋಕನು ಶಿವನ ಆರಾಧಕನಾಗಿದ್ದನು. ಬೇಟೆಯಾಡುವಲ್ಲಿ ಅಪಾರ ಆಸಕ್ತಿ ತಳೆದಿದ್ದನು. ಯುದ್ಧದ ನಂತರ ಬುದ್ಧನ ತತ್ವಗಳಿಂದ ಪ್ರಭಾವಿತನಾಗಿ ಅಹಿಂಸಾನೀತಿ ಅನುಸರಿಸಿ ಬೌದ್ಧಮತ ಪ್ರಸಾರಕಾರ್ಯ ಕೈಗೊಂಡನು. ತನ್ನ ವಿದೇಶಾಂಗ ನೀತಿಯಲ್ಲಿಯು ಶಾಂತಿಯ ಪಥವನ್ನು ಅನುಸರಿಸಿದನು. 

.

ಸಮಾಜಕ್ಕೆ ಅವರ ಕೊಡುಗೆಗಳು ಸೇರಿವೆ:

1. ಕಟ್ಟಡ ರಸ್ತೆಗಳು: ಅಶೋಕನು ತನ್ನ ಸಾಮ್ರಾಜ್ಯದಾದ್ಯಂತ ಸಂಪರ್ಕವನ್ನು ಹೆಚ್ಚಿಸಲು ಸುಸಜ್ಜಿತವಾದ ರಸ್ತೆಗಳನ್ನು ನಿರ್ಮಿಸಿದನು.

2. ಮರಗಳನ್ನು ನೆಡುವುದು: ಅವರು ಈ ರಸ್ತೆಗಳ ಉದ್ದಕ್ಕೂ ಸಾಲು ಮರಗಳನ್ನು ನೆಟ್ಟು ನೆರಳು ಮತ್ತು ಸೌಂದರ್ಯವನ್ನು ಒದಗಿಸಿದನು.

3. ವಿಶ್ರಾಂತಿ ಗೃಹಗಳನ್ನು ಸ್ಥಾಪಿಸುವುದು: ಅವರು ವಿಶ್ರಾಂತಿ ಗೃಹಗಳನ್ನು ಮತ್ತು ಪ್ರಯಾಣಿಕರಿಗೆ ಸೌಕರ್ಯಗಳನ್ನು ನಿರ್ಮಿಸಿದನು.

4. ಔಷಧಾಲಯಗಳು: ಅಶೋಕನು ಮಾನವರು ಮತ್ತು ಪ್ರಾಣಿಗಳಿಗೆ ಔಷಧಾಲಯಗಳನ್ನು ಸ್ಥಾಪಿಸಿದನು, ಆರೋಗ್ಯ ಮತ್ತು ಯೋಗಕ್ಷೇಮವನ್ನು ಉತ್ತೇಜಿಸಿದನು.

5. ಉಚಿತ ಔಷಧವನ್ನು ಒದಗಿಸುವುದು: ಔಷಧೀಯ ಉದ್ದೇಶಗಳಿಗಾಗಿ ತನ್ನ ನಾಗರಿಕರಿಗೆ ವಿವಿಧ ಗಿಡಮೂಲಿಕೆಗಳನ್ನು ಲಭ್ಯವಾಗುವಂತೆ ಮಾಡಿದರು.

6. ಸ್ವಾತಂತ್ರ್ಯವನ್ನು ನೀಡುವುದು: ಅಶೋಕನು ತನ್ನ ಜನ್ಮದಿನದಂದು ಕೈದಿಗಳಿಗೆ ಸಂಪೂರ್ಣ ಸ್ವಾತಂತ್ರ್ಯವನ್ನು ನೀಡಿದನು, ಕರುಣೆ ಮತ್ತು ಸಹಾನುಭೂತಿಗೆ ತನ್ನ ಬದ್ಧತೆಯನ್ನು ಪ್ರದರ್ಶಿಸಿದನು.

ಇಲ್ಲಿ ಅಶೋಕನು ತನ್ನ ರಾಣಿಯರೊಂದಿಗೆ ನಿಂತಿರುವ ಚಿತ್ರವಿರುವ ಕಲ್ಲಿನ ಪಟ್ಟಿಕೆ ಪತ್ತೆಯಾಗಿದೆ. ಇಲ್ಲಿ ಬ್ರಾಹ್ಮಿ ಲಿಪಿಯಲ್ಲಿರುವ “ರಾಯ ಅಶೋಕ” ಎಂಬ ಬರಹವೂ ಇದ್ದು ಇವನನ್ನು ಅಶೋಕನೆಂದು ಗುರುತಿಸಲು ಸಹಕಾರಿಯಾಗಿದೆ.

ಉಪಸಂಹಾರ

ಒಟ್ಟಿನಲ್ಲಿ ಹೇಳುವುದಾದರೆ ಕಳಿಂಗ ಯುದ್ಧವು ಭಾರತದ ಚರಿತ್ರೆಯಲ್ಲಿ ಒಂದು ಮಹತ್ತರ ಮೈಲಿಗಲ್ಲಾಗಿ ಹೊಸಯುಗಕ್ಕೆ ನಾಂದಿಯಾಯಿತು. ಡಾ.ರಾಯ್‌ ಚೌಧುರಿಯವರು ಅಭಿಪ್ರಾಯಪಡುವಂತೆ ಅಶೋಕ ಮಹಾಶಯನ ಸೈನಿಕ ‘ಆಕ್ರಮಣದ ವಿಜಯ ಅಂತ್ಯಗೊಂಡು ಧರ್ಮವಿಜಯ ಆರಂಭಗೊಂಡಿತು’. ಕಳಿಂಗ ಯುದ್ಧದ ಮೂಲಕ ರಾಜಕೀಯ ಐಕ್ಯತೆಗೂ ಅನುಕೂಲವಾಯಿತು. ಕಳಿಂಗ ಯುದ್ಧದ ನಂತರ ‘ಶಾಂತಿ ಮತ್ತು ಅಹಿಂಸೆ’ ಎಂಬ ತತ್ವಗಳ ಮೇಲೆ ಪ್ರಜಾಕಲ್ಯಾಣ ರಾಜ್ಯ ಸ್ಥಾಪಿಸಿದ ಅಶೋಕ ವಿಶ್ವದಲ್ಲಿಯೇ ಮಾದರಿಯಾದ ಸರ್ವರೂ ಸ್ವೀಕರಿಸುವ ಶ್ರೇಷ್ಠ ತತ್ವಗಳನ್ನು ಕೊಡುಗೆಯಾಗಿ ನೀಡಿದನು. ಹೆಚ್.ಜಿ.ವೇಲ್ಸ್ ಅಭಿಪ್ರಾಯಪಡುವಂತೆ ʻಗೆಲುವಿನ ನಂತರ ಯುದ್ಧವನ್ನು ತ್ಯಜಿಸಿದ ಸೇನಾ ಸಾರ್ವಭೌಮರಲ್ಲಿ ಅಶೋಕನನ್ನು ಬಿಟ್ಟರೆ ಮತ್ತೊಬ್ಬನಿಲ್ಲ’.

ಕಲೆ ಮತ್ತು ವಾಸ್ತುಶಿಲ್ಪಕ್ಕೆ ಮೌರ್ಯರ ಕೊಡುಗೆಗಳು (ಮೌರ್ಯ ಪರಂಪರೆ)

ಕಲೆ ಮತ್ತು ವಾಸ್ತುಶಿಲ್ಪಕ್ಕೆ ಮೌರ್ಯರ ಕೊಡುಗೆಗಳು (ಮೌರ್ಯ ಪರಂಪರೆ)

ಮೌರ್ಯ ಸಾಮ್ರಾಜ್ಯವು ತನ್ನ ವಿಶಾಲವಾದ ಪ್ರಾದೇಶಿಕ ವಿಸ್ತಾರ ಮತ್ತು ಶ್ರೀಮಂತ ಸಾಂಸ್ಕೃತಿಕ ಪರಂಪರೆಗೆ ಹೆಸರುವಾಸಿಯಾಗಿದೆ, ಕಲೆ ಮತ್ತು ವಾಸ್ತುಶಿಲ್ಪಕ್ಕೆ ಗಮನಾರ್ಹ ಕೊಡುಗೆಗಳನ್ನು ನೀಡಿತು. ಸ್ತೂಪಗಳಿಂದ ಹಿಡಿದು ಕಲ್ಲಿನ ಕಂಬಗಳು ಮತ್ತು ಭವ್ಯವಾದ ಅರಮನೆಗಳವರೆಗೆ, ಮೌರ್ಯರು ಭಾರತೀಯ ವಾಸ್ತುಶಿಲ್ಪದ ಭೂದೃಶ್ಯದಲ್ಲಿ ಅಳಿಸಲಾಗದ ಗುರುತು ಬಿಟ್ಟಿದ್ದಾರೆ. ಕಲಾತ್ಮಕ ಶೈಲಿಗಳು ಮತ್ತು ನವೀನ ನಿರ್ಮಾಣ ತಂತ್ರಗಳ ಅವರ ವಿಶಿಷ್ಟ ಮಿಶ್ರಣವು ಸಾಮ್ರಾಜ್ಯದ ಭವ್ಯತೆಯನ್ನು ಮತ್ತು ಧಾರ್ಮಿಕ ಮತ್ತು ಸಾಂಸ್ಕೃತಿಕ ಅಭಿವ್ಯಕ್ತಿಗೆ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.

ಸ್ತೂಪಗಳು: ಜ್ಞಾನೋದಯದ ಸ್ಮಾರಕಗಳು

ಮೌರ್ಯ ಸಾಮ್ರಾಜ್ಯದ ಅತ್ಯಂತ ಅಪ್ರತಿಮ ಕೊಡುಗೆಗಳಲ್ಲಿ ಒಂದಾದ ಸ್ತೂಪಗಳ ನಿರ್ಮಾಣವಾಗಿದೆ, ಇವು ಬುದ್ಧನ ಅವಶೇಷಗಳನ್ನು ಇರಿಸಲು ನಿರ್ಮಿಸಲಾದ ಸ್ಮಾರಕಗಳಾಗಿವೆ. ಕಲ್ಲು ಮತ್ತು ಸುಟ್ಟ ಇಟ್ಟಿಗೆಗಳಿಂದ ರಚಿಸಲಾದ ಈ ರಚನೆಗಳು ಬುದ್ಧನ ಬೋಧನೆಗಳ ಆಧ್ಯಾತ್ಮಿಕ ಪ್ರಾಮುಖ್ಯತೆಯನ್ನು ಪ್ರತಿನಿಧಿಸುವ ಛತ್ರಿ-ಆಕಾರದ ಗುಮ್ಮಟದಿಂದ ವಿಶಿಷ್ಟವಾಗಿ ಆರೋಹಿಸಲ್ಪಟ್ಟಿವೆ.

ಸಾಂಚಿ, ತಕ್ಷಿಲಾ, ಶ್ರೀನಗರ, ಕುಶಿನಗರ, ಕಪಿಲವಸ್ತು ಮತ್ತು ಕೌಶಾಂಬಿಯಂತಹ ಗಮನಾರ್ಹ ಸ್ತೂಪಗಳು ಸೊಗಸಾದ ಕರಕುಶಲತೆಯನ್ನು ಪ್ರದರ್ಶಿಸುತ್ತವೆ. ಚಕ್ರವರ್ತಿ ಅಶೋಕನು ಸ್ಥಾಪಿಸಿದ ಸಾಂಚಿ ಸ್ತೂಪವು 121.5 ಅಡಿ ಸುತ್ತಳತೆಯೊಂದಿಗೆ 77.5 ಅಡಿ ಎತ್ತರದಲ್ಲಿದೆ, ಇದು ಮೌರ್ಯ ವಾಸ್ತುಶಿಲ್ಪದ ವಿಶ್ವಪ್ರಸಿದ್ಧ ಉದಾಹರಣೆಯಾಗಿದೆ. ಆರಂಭದಲ್ಲಿ ಸಾಧಾರಣ ಗಾತ್ರದಲ್ಲಿ, ಇದು ಸುಂಗನ ಅವಧಿಯಲ್ಲಿ ಗಮನಾರ್ಹವಾಗಿ ವಿಸ್ತರಿಸಿತು. ಸ್ತೂಪವು ಬುದ್ಧನ ಜೀವನದ ವಿವಿಧ ದೃಶ್ಯಗಳನ್ನು ಚಿತ್ರಿಸುವ ನಾಲ್ಕು ಸಂಕೀರ್ಣವಾದ ಕೆತ್ತಿದ ಗೇಟ್‌ವೇಗಳನ್ನು (ಮಹಾದ್ವಾರಗಳು) ಒಳಗೊಂಡಿದೆ, ಆ ಯುಗದ ಕಲಾತ್ಮಕ ಪರಾಕ್ರಮದ ಬಗ್ಗೆ ಒಂದು ನೋಟವನ್ನು ನೀಡುತ್ತದೆ. ಅಶೋಕನು ಸಾಮ್ರಾಜ್ಯದಾದ್ಯಂತ 84,000 ಸ್ತೂಪಗಳನ್ನು ನಿರ್ಮಿಸಿದನೆಂದು ನಂಬಲಾಗಿದೆ, ಇದು ಬೌದ್ಧಧರ್ಮದ ಮೇಲಿನ ಅವನ ಭಕ್ತಿಯನ್ನು ಒತ್ತಿಹೇಳುತ್ತದೆ.

ಅರಮನೆಯ ವೈಭವ

ಮೌರ್ಯ ಯುಗದ ಮೂಲ ಅರಮನೆಗಳು ಸಮಯದ ಪರೀಕ್ಷೆಯಿಂದ ಉಳಿದುಕೊಂಡಿಲ್ಲವಾದರೂ, ಪುರಾತತ್ತ್ವ ಶಾಸ್ತ್ರದ ಉತ್ಖನನಗಳು ಮೌರ್ಯರ ಕಾಲದ ಅರಮನೆ ಎಂದು ನಂಬಲಾದ ಪಾಟಲಿಪುತ್ರದಲ್ಲಿ (ಇಂದಿನ ಪಾಟ್ನಾ) 100-ಕಂಬಗಳ ಅರಮನೆಯ ಅವಶೇಷಗಳನ್ನು ಅನಾವರಣಗೊಳಿಸಿದೆ. ಚಂದ್ರಗುಪ್ತ ಮೌರ್ಯನ ಆಳ್ವಿಕೆಯಲ್ಲಿ ಪ್ರಸಿದ್ಧವಾದ ಈ ಅರಮನೆಯು ಅದರ ಮರದ ರಚನೆಯಿಂದ ನಿರೂಪಿಸಲ್ಪಟ್ಟಿದೆ, ವಿಸ್ತಾರವಾದ ಉದ್ಯಾನಗಳು ಮತ್ತು ಈಜುಕೊಳಗಳಿಂದ ಆವೃತವಾಗಿದೆ, ಪರ್ಷಿಯನ್ ವಾಸ್ತುಶಿಲ್ಪದ ಪ್ರಭಾವಗಳನ್ನು ಪ್ರದರ್ಶಿಸುತ್ತದೆ.

ಅರಮನೆಯ ಕಂಬಗಳು ಚಿನ್ನ ಮತ್ತು ಬೆಳ್ಳಿಯಿಂದ ಅಲಂಕರಿಸಲ್ಪಟ್ಟಿವೆ ಎಂದು ಹೇಳಲಾಗುತ್ತದೆ, ಅದರ ಐಶ್ವರ್ಯವನ್ನು ಹೆಚ್ಚಿಸುತ್ತದೆ. ಗಮನಾರ್ಹವಾಗಿ, 4 ನೇ ಶತಮಾನದ ಪ್ರಯಾಣಿಕ ಎಸ್.ಎಸ್. ಫಾಹಿಯಾನ್ ಅರಮನೆಯ ವೈಭವವನ್ನು ನೋಡಿ ಆಶ್ಚರ್ಯಚಕಿತನಾದನು, ಅದನ್ನು “ಮಾನವ ನಿರ್ಮಿತಕ್ಕಿಂತ ಹೆಚ್ಚಾಗಿ ದೇವರ ನಿರ್ಮಿತ” ಎಂದು ಘೋಷಿಸಿದನು.

ಗುಹೆಗಳು: ಏಕಾಂತತೆಯ ಅಭಯಾರಣ್ಯಗಳು

ಮೌರ್ಯ ರಾಜರು ಸಹ ಗುಹೆ ವಾಸ್ತುಶಿಲ್ಪಕ್ಕೆ ಕೊಡುಗೆ ನೀಡಿದ್ದಾರೆ, ಗಯಾ ಬಳಿಯ ಬರಾಬರ್ ಮತ್ತು ನಾಗಾರ್ಜುನ ಬೆಟ್ಟಗಳಲ್ಲಿ ಹಲವಾರು ಗುಹೆಗಳನ್ನು ಕೆತ್ತಲಾಗಿದೆ. ಈ ಗುಹೆಗಳು ಜೈನ ಮತ್ತು ಬೌದ್ಧ ಸನ್ಯಾಸಿಗಳ ನಿವಾಸಗಳಾಗಿ ಕಾರ್ಯನಿರ್ವಹಿಸುತ್ತಿದ್ದವು ಮತ್ತು ಅಶೋಕ ಮತ್ತು ಅವನ ಉತ್ತರಾಧಿಕಾರಿಯಾದ ದಶರಥನ ಆಳ್ವಿಕೆಯಲ್ಲಿ ನಿರ್ಮಿಸಲಾಯಿತು.

ಬರಾಬರ್ ಗುಹೆಗಳು, 41 ವಿಭಿನ್ನ ಗುಹೆಗಳನ್ನು ಒಳಗೊಂಡಿದ್ದು, ಸುಗಮ ಒಳಾಂಗಣವನ್ನು ಪ್ರದರ್ಶಿಸುತ್ತವೆ, ಆ ಕಾಲದ ಶಿಲ್ಪಿಗಳ ಕೌಶಲ್ಯ ಮತ್ತು ಸಮರ್ಪಣೆಯನ್ನು ಎತ್ತಿ ತೋರಿಸುತ್ತದೆ. ನಾಗಾರ್ಜುನ ಗುಹೆಗಳಲ್ಲಿ ಅಶೋಕನ ಮೊಮ್ಮಗನ ಶಾಸನಗಳಿವೆ, ಈ ರಚನೆಗಳ ಸಾಂಸ್ಕೃತಿಕ ಮತ್ತು ಧಾರ್ಮಿಕ ಮಹತ್ವವನ್ನು ಒತ್ತಿಹೇಳುತ್ತದೆ.

ಕಂಬಗಳು: ಏಕಶಿಲೆಯ ಅದ್ಭುತಗಳು

ಬಹುಶಃ ಮೌರ್ಯ ಸಾಮ್ರಾಜ್ಯದ ಅತ್ಯಂತ ಗಮನಾರ್ಹ ಪರಂಪರೆಯು ಅದರ ಕಲ್ಲಿನ ಕಂಬಗಳಲ್ಲಿದೆ, ಇದನ್ನು ಸ್ತಂಭಗಳು ಎಂದು ಕರೆಯಲಾಗುತ್ತದೆ. ಈ ಏಕಶಿಲೆಯ ರಚನೆಗಳು ಜೀವನ ಮತ್ತು ಪುರಾಣದ ವಿವಿಧ ಅಂಶಗಳನ್ನು ಪ್ರತಿಬಿಂಬಿಸುವ ಸಂಕೀರ್ಣವಾದ ಕೆತ್ತನೆಗಳನ್ನು ಮೇಲಕ್ಕೆತ್ತಿ ಪ್ರದರ್ಶಿಸಿದಾಗ ಸೊಗಸಾಗಿ ಕುಗ್ಗುತ್ತವೆ. ಅಂತಹ 30 ಕಂಬಗಳನ್ನು ಸ್ಥಾಪಿಸಿದ ಕೀರ್ತಿ ಅಶೋಕನಿಗೆ ಸಲ್ಲುತ್ತದೆ, ಪ್ರತಿಯೊಂದೂ 30 ರಿಂದ 40 ಅಡಿ ಎತ್ತರ ಮತ್ತು ಅಂದಾಜು 50 ಟನ್ ತೂಕವಿದೆ.

ಕಂಬಗಳನ್ನು ಮೂರು ಭಾಗಗಳಾಗಿ ವಿಂಗಡಿಸಲಾಗಿದೆ: ತಳ, ಮಧ್ಯ ಮತ್ತು ಮೇಲ್ಭಾಗ. ಬೇಸ್ ಸಾಮಾನ್ಯವಾಗಿ ನವಿಲು ಹೊಂದಿದೆ, ಮಧ್ಯದಲ್ಲಿ ಗಾಜಿನಂತಹ ಹೊಳಪು ತೋರಿಸುತ್ತದೆ. ಮೇಲ್ಭಾಗವು ಆನೆಗಳು, ಎತ್ತುಗಳು, ಕುದುರೆಗಳು ಮತ್ತು ಸಿಂಹಗಳನ್ನು ಒಳಗೊಂಡಂತೆ ವಿವಿಧ ಪ್ರಾಣಿಗಳ ಕೆತ್ತನೆಗಳಿಂದ ಅಲಂಕರಿಸಲ್ಪಟ್ಟಿದೆ. ಒಂದು ಗಮನಾರ್ಹ ಉದಾಹರಣೆಯೆಂದರೆ ಸಾರನಾಥ ಸ್ತಂಭ, ಬುದ್ಧನ ಜ್ಞಾನೋದಯದ ನಂತರದ ಮೊದಲ ಧರ್ಮೋಪದೇಶದ ನೆನಪಿಗಾಗಿ ನಿರ್ಮಿಸಲಾಗಿದೆ.

ಈ ಸ್ತಂಭವು ಈಗ ಅವಶೇಷಗಳಲ್ಲಿದೆ, ಆದರೆ ಕಮಲದ ಆಕಾರದ ಶಿಖರ ಮತ್ತು ನಾಲ್ಕು ಕುಳಿತಿರುವ ಸಿಂಹಗಳು ಪರಸ್ಪರ ಎದುರಿಸುತ್ತಿರುವಂತೆ ಅದರ ಅವಶೇಷಗಳು ಅದರ ಐತಿಹಾಸಿಕ ಮಹತ್ವವನ್ನು ಹೇಳುತ್ತವೆ. ಕೆಳಗಿನ ಚಕ್ರದಲ್ಲಿರುವ 24 ಕಡ್ಡಿಗಳು ದಿನದ ಗಂಟೆಗಳನ್ನು ಸಂಕೇತಿಸುತ್ತದೆ, ಆದರೆ ದೊಡ್ಡ ಚಕ್ರದ 32 ಕಡ್ಡಿಗಳು ಮಹಾಪುರುಷನ ಪುರುಷ ಗುಣಲಕ್ಷಣಗಳನ್ನು ಪ್ರತಿನಿಧಿಸುತ್ತವೆ.

ಉಪಸಂಹಾರ

ಕಲೆ ಮತ್ತು ವಾಸ್ತುಶಿಲ್ಪಕ್ಕೆ ಮೌರ್ಯ ಸಾಮ್ರಾಜ್ಯದ ಕೊಡುಗೆಗಳು ಅದರ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ಅದರ ಜನರ ನವೀನ ಮನೋಭಾವಕ್ಕೆ ಸಾಕ್ಷಿಯಾಗಿದೆ. ಸಾಂಪ್ರದಾಯಿಕ ಸ್ತೂಪಗಳಿಂದ ಹಿಡಿದು ಭವ್ಯವಾದ ಅರಮನೆಗಳು ಮತ್ತು ಸಂಕೀರ್ಣವಾದ ಕೆತ್ತಿದ ಕಂಬಗಳವರೆಗೆ, ಮೌರ್ಯರ ಪರಂಪರೆಯು ವಿಸ್ಮಯ ಮತ್ತು ಮೆಚ್ಚುಗೆಯನ್ನು ಪ್ರೇರೇಪಿಸುತ್ತದೆ. ಈ ವಾಸ್ತುಶಿಲ್ಪದ ಅದ್ಭುತಗಳು ಅದ್ಭುತವಾದ ಗತಕಾಲದ ಜ್ಞಾಪನೆಗಳಾಗಿ ಕಾರ್ಯನಿರ್ವಹಿಸುತ್ತವೆ ಆದರೆ ಭಾರತೀಯ ನಾಗರಿಕತೆಯನ್ನು ಆಳವಾಗಿ ರೂಪಿಸಿದ ಯುಗದ ಆಧ್ಯಾತ್ಮಿಕ ಮತ್ತು ಕಲಾತ್ಮಕ ಆಕಾಂಕ್ಷೆಗಳನ್ನು ಪ್ರತಿಬಿಂಬಿಸುತ್ತವೆ.