ಸಮುದ್ರಗುಪ್ತ (ಕ್ರಿ.ಶ. 335-375)

ಸಮುದ್ರಗುಪ್ತ (ಕ್ರಿ.ಶ. 335-375)

ಈತ ಗುಪ್ತವಂಶದ ದೊರೆಗಳಲ್ಲಿಯೇ ಅತ್ಯಂತ ಪ್ರಸಿದ್ಧನಾಗಿದ್ದನು. ದಿಗ್ವಿಜಯವೇ ಈತನ ಮೂಲ ಗುರಿಯಾಗಿದ್ದಿತು. ಯುದ್ಧ ಭೂಮಿಯಲ್ಲಿ ಸೋಲಿಲ್ಲದ ಸರದಾರ. ಈತನ ಸಾಧನೆಗಳನ್ನು ಗಮನಿಸಿದ ಡಾ. ವಿ.ಎ. ಸ್ಮಿತ್ ಈತನನ್ನು ಭಾರತದ ನೆಪೋಲಿಯನ್ ಎಂದು ಕರೆದಿದ್ದಾರೆ.

ಸಿಂಹಾಸನಾರೋಹಣ : ಸಮುದ್ರಗುಪ್ತನು ಮೊದಲನೆಯ ಚಂದ್ರಗುಪ್ತನ ಜೇಷ್ಠ ಪುತ್ರನೇನೂ ಆಗಿರಲಿಲ್ಲ. ಭಾರತೀಯ ಸಂಪ್ರದಾಯದ ಪ್ರಕಾರ ರಾಜತ್ವ ವಂಶಪಾರಂಪರ್ಯವಾಗಿರಬೇಕಿತ್ತು. ಅಂದರೆ ಹಿರಿಯಮಗನೇ ತಂದೆಯ ನಂತರ ಅಧಿಕಾರಕ್ಕೆ ಬರಬೇಕಿತ್ತು. ಆದರೆ ಸಮುದ್ರಗುಪ್ತ ಬಹಳ ಬುದ್ದಿವಂತ ಹಾಗೂ ಪರಾಕ್ರಮಿಯಾಗಿದ್ದರಿಂದ ಚಂದ್ರಗುಪ್ತ ತನ್ನ ಉತ್ತರಾಧಿಕಾರಿಯಾಗಿ ಸಮುದ್ರಗುಪ್ತನನ್ನೇ ಆಯ್ಕೆ ಮಾಡಿದನು. ಪ್ರಜೆಗಳ ಮತ್ತು ಮಾಂಡಳಿಕರ ಸನ್ನಿಧಿಯಲ್ಲಿ ಸಮುದ್ರಗುಪ್ತನಿಗೆ ಪಟ್ಟಕಟ್ಟಿ ಜಗತ್ತನ್ನೇ ಆಳು ಎಂದು ಆಶೀರ್ವದಿಸಿದನು.

ಸಮುದ್ರಗುಪ್ತನ ದಿಗ್ವಿಜಯಗಳು : ಸಮುದ್ರಗುಪ್ತ ತನ್ನ ದಿಗ್ವಿಜಯಗಳಿಂದ ಹೆಸರುವಾಸಿಯಾಗಿದ್ದಾನೆ. ಈತ ಕೈಗೊಂಡ ಎಲ್ಲಾ ದಂಡಯಾತ್ರೆಗಳಲ್ಲಿ ಜಯಶೀಲನಾಗಿದ್ದಾನೆ. ಈತನ ದಿಗ್ವಿಜಯಗಳ ಬಗ್ಗೆ ತಿಳಿದುಕೊಳ್ಳಲು ಅಲಹಾಬಾದ್ ಸ್ತಂಭಶಾಸನ ಅತಿ ಉಪಯುಕ್ತ ಆಧಾರವಾಗಿದೆ.

ಅಲಹಾಬಾದ್ ಶಾಸನ : ಈ ಶಾಸನವು ಇಂದು ಅಲಹಾಬಾದ್ ಕೋಟೆಯೊಳಗೆ ಇದೆ. ಇದಕ್ಕಿಂತ ಮುಂಚೆ ಅದು ಅಲಹಾಬಾದ್‌ನಿಂದ 28 ಮೈಲು ದೂರದ ಕೌಶಾಂಬಿಯಲ್ಲಿ ಇತ್ತು. ಈ ಸ್ತಂಭದ ಒಂದು ಭಾಗದಲ್ಲಿ ಅಶೋಕನ ಶಾಸನವಿದೆ. ಮತ್ತೊಂದು ಭಾಗದಲ್ಲಿ ಸಮುದ್ರಗುಪ್ತನ ದಿಗ್ವಿಜಯಗಳನ್ನು ತಿಳಿಸುವ ಶಾಸನವಿದೆ. ಸಮುದ್ರಗುಪ್ತನ ದಂಡನಾಯಕ ಮತ್ತು ಸಂಧಿವಿಗ್ರಹಿಯಾಗಿದ್ದ ಹರಿಶೇಣನು ಅಲಹಾಬಾದ್ ಸ್ತಂಭ ಶಾಸನದ ಕರ್ತೃ. ಇದು ಸಂಸ್ಕೃತ ಭಾಷೆಯಲ್ಲಿದೆ. ಚಂಪೂ ಶೈಲಿಯಲ್ಲಿದ್ದ ಇದು ಗದ್ಯ ಪದ್ಯಗಳೆರಡರಿಂದಲೂ ಮಿಶ್ರಣಗೊಂಡಿದೆ.

ಸಮುದ್ರಗುಪ್ತನ ದಿಗ್ವಿಜಯಗಳ ಕುರಿತು ಡಾ. ಆರ್. ಎಸ್. ತ್ರಿಪಾಟಿಯವರು ಯುದ್ಧ ಮತ್ತು ಆಕ್ರಮಣಗಳನ್ನೇ ಗುರಿಯಾಗಿ ಹೊಂದಿದ್ದ ಸಮುದ್ರಗುಪ್ತನು ಶಾಂತಿ ಹಾಗೂ ಧರ್ಮಗಳನ್ನು ಗುರಿಯಾಗಿ ಹೊಂದಿದ್ದ ಅಶೋಕನಿಗೆ ತದ್ವಿರುದ್ಧವಾಗಿದ್ದನು ಎಂದಿದ್ದಾರೆ. ಅಲಹಾಬಾದ್ ಸ್ತಂಭ ಶಾಸನದ ಪ್ರಕಾರ ಸಮುದ್ರಗುಪ್ತನ ದಿಗ್ವಿಜಯಗಳು ಈ ಕೆಳಗಿನಂತಿವೆ.

1) ಉತ್ತರ ಭಾರತದ ದಿಗ್ವಿಜಯಗಳು :

100 ಕದನಗಳ ಸಿಂಹ ಎಂದು ಹೆಸರಾದ ಸಮುದ್ರಗುಪ್ತನು ತನ್ನ ಅಧಿಕಾರವನ್ನು ವಿರೋಧಿಸಿದ ಉತ್ತರ ಭಾರತದ ಒಟ್ಟು 9 ಜನ ಅರಸರನ್ನು ಸೋಲಿಸಿದನು. ಅವರುಗಳೆಂದರೆ

ರಾಜರು ಆಳುತ್ತಿದ್ದ ಪ್ರದೇಶ ಈಗಿನ ರಾಜ್ಯಗಳು
1) ನಾಗಸೇನ 1) ಪದ್ಮಾವತಿ 1) ಮಧ್ಯಪ್ರದೇಶ
2) ಅಚ್ಯುತ 2) ಅಹಿಶ್ಚತ್ರ 2) ಉತ್ತರಪ್ರದೇಶ

3) ಗಣಪತಿನಾಗ

4) ರುದ್ರದೇವ

3) ಮಥುರ ಅಥವಾ ವಿಧಿಶ

3) ಉತ್ತರಪ್ರದೇಶ

4) ಮಧ್ಯಪ್ರದೇಶ

5) ಮತ್ತಿಲ 4) ವಾಕಟಾಕ ರಾಜ 5) ದೆಹಲಿ
6) ನಾಗದತ್ತ 5) ಬುಲಂದ ಶಹರ 6) ಮಥುರ
7) ಚಂದ್ರವರ್ಮ 6) ನಾಗದೊರೆ 7) ಬಂಗಾಳ
8) ನಂದಿ 7) ಪುಷ್ಕರಣದ ರಾಜ 8) ಉತ್ತರ ಪ್ರದೇಶ
9) ಬಲವರ್ಮನ್ 8) ನಾಗದೊರೆ 9) ಅಸ್ಸಾಂ
9) ಅಸ್ಸಾಂ

2) ಅಡವಿ ರಾಜ್ಯಗಳನ್ನು ಸೆದೆಬಡಿದದ್ದು : ಉತ್ತರ ಪ್ರದೇಶ, ಮಧ್ಯಪ್ರದೇಶ, ನಾಗಪುರ, ಬಾಗೇಲ್ ಖಂಡ, ರೇವಾ ಹಾಗೂ ವಿಂದ್ಯ ಪರ್ವತದ ಅಡವಿ ರಾಜ್ಯಗಳನ್ನು ಗೆದ್ದುಕೊಂಡ ಸಮುದ್ರಗುಪ್ತ ಅವುಗಳನ್ನು ತನ್ನ ಸಾಮ್ರಾಜ್ಯದಲ್ಲಿ ವಿಲೀನಗೊಳಿಸಿದನು.

3) ದಕ್ಷಿಣ ಭಾರತದ ದಿಗ್ವಿಜಯಗಳು : ಆರ್ಯಾವರ್ತವನ್ನು ಗೆದ್ದುಕೊಂಡ ನಂತರ ಸಮುದ್ರಗುಪ್ತನು ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡು ದಕ್ಷಿಣದ ಕಡೆಗೆ ಗಮನಹರಿಸಿದನು. ನಂತರ ದಕ್ಷಿಣದ ಎಲ್ಲಾ 12 ರಾಜರನ್ನು ಸೋಲಿಸಿದನೆಂದು ಅಲಹಾಬಾದ್ ಸ್ತಂಭಶಾಸನ ಹೇಳುತ್ತದೆ. ಅವುಗಳೆಂದರೆ

    ರಾಜನ ಹೆಸರು                                                 ಇಂದಿನ ಪ್ರದೇಶ

1) ಮಹಾಕಾಂತಾರದ ವ್ಯಾಘ್ರರಾಜ                 ಒರಿಸ್ಸಾ ಅಥವಾ ಬುಂದೇಲ ಖಂಡದ ಒಂದು ಪ್ರದೇಶ

2) ಕೋಸಲದ ಮಹೇಂದ್ರ                                 ದಕ್ಷಿಣ ಕೋಸ

(ರಾಯಪುರ, ಸಂಬಲಪುರ, ಬಿಲಾಸ್ ಪುರ)

3) ಕೊಟ್ಟೂರಿನ ಸ್ವಾಮಿದತ್ತ                          ಗಂಜಾಂ ಜಿಲ್ಲೆಯ ಮಹೇಂದ್ರಗಿರಿಯ ಹತ್ತಿರ ಕೊತ್ತೂರು

4) ಷಿಷ್ಠಪುರದ ಮಹೇಂದ್ರಗಿರಿ                        ಪಶ್ಚಿಮ ಗೋದಾವರಿ ಜಿಲ್ಲೆಯ ಇಂದಿನ ಪೀರಾಪುರಂ

5) ಕೌರಾಲದ ಮಾಂತರಾಜ                          ಪಶ್ಚಿಮ ಗೋದಾವರಿ ಜಿಲ್ಲೆಯ ಪ್ರದೇಶ

6) ಏರಂಡಪಲ್ಲದ ದಮನ                              ವಿಶಾಖಪಟ್ಟಣದ ಪ್ರದೇಶ

7) ಕಂಚಿಯ ವಿಷ್ಣುಗೋಪ                              ತಮಿಳುನಾಡಿನ ಕಂಚಿ

8) ಅವಮುಕ್ತದ ನೀಲರಾಜ                           ಕಂಚಿಯ ಹತ್ತಿರದ ಪ್ರದೇಶ

9) ವೆಂಗಿಯ ಹಸ್ತಿವರ್ಮ                                ಕೃಷ್ಣಾ-ಗೋದಾವರಿ ನಡುವಣ ಪ್ರದೇಶ

10) ಪಾಲಕ್ಕದ ಉಗ್ರಸೇನ                            ನೆಲ್ಲೂರು ಜಿಲ್ಲೆಯ ಪಾಲಕ್ಕಾಡ

11) ದೇವರಾಷ್ಟ್ರದ ಕುಬೇರ                            ಮಹಾರಾಷ್ಟ್ರದ ಸತಾರಾ ಜಿಲ್ಲೆ

12) ಕುಸ್ತಲಪುರದ ಧನಂಜಯ                        ಉತ್ತರ ಅರ್ಕಾಟ ಜಿಲ್ಲೆ

ದಕ್ಷಿಣದ ಈ ಪ್ರಾಂತ್ಯಗಳು ಪಾಟಲಿಪುತ್ರದಿಂದ ಬಹಳ ದೂರವಿದ್ದುದರ ಕಾರಣ ಅವುಗಳನ್ನು ನೇರ ಆಳ್ವಿಕೆಗೆ ಒಳಪಡಿಸಲು ಸಮುದ್ರಗುಪ್ತನಿಗೆ ಸಾಧ್ಯವಾಗಲಿಲ್ಲ. ಹೀಗಾಗಿ ಆತ ತನ್ನ ಸಾರ್ವಭೌಮವನ್ನು ಒಪ್ಪಿಕೊಂಡ ಅರಸರಿಂದ ಕಪ್ಪಕಾಣಿಕೆಗಳನ್ನು ಸ್ವೀಕರಿಸಿ ಆ ಪ್ರದೇಶಗಳನ್ನು ಆಯಾ ರಾಜರುಗಳಿಗೆ ಒಪ್ಪಿಸಿದನು.

4) ಗಡಿನಾಡ ರಾಜ್ಯಗಳನ್ನು ಗೆದ್ದುಕೊಂಡದ್ದು : ಸಮುದ್ರಗುಪ್ತನ ಶಕ್ತಿ ಸಾಮರ್ಥ್ಯವನ್ನು ಕೇಳಿ ತಿಳಿದುಕೊಂಡಿದ್ದ ಗಡಿರಾಜ್ಯಗಳಾದ ಅಸ್ಸಾಂನ ಕಾಮರೂಪ, ಉತ್ತರ ಅಸ್ಸಾಂನ ದೇವಕ, ಬಂಗಾಳದ ಸಮತಟ, ನೇಪಾಳದ ಕರ್ತೃಪುರ ಹಾಗೂ ರೋಹಿಲ್ ಖಂಡಗಳ ರಾಜರು ತಾವಾಗಿಯೇ ಬಂದು ಸಮುದ್ರಗುಪ್ತನಿಗೆ ಕಪ್ಪಕಾಣಿಕೆ ಸಲ್ಲಿಸಿ ಸಾರ್ವಭೌಮತ್ವವನ್ನು ಒಪ್ಪಿಕೊಂಡರು

5) ಗಣರಾಜ್ಯಗಳ ವಿರುದ್ಧ ಯುದ್ಧ : ಗಣರಾಜ್ಯಗಳಾದ ಮಾಳ್ವರು, ಕಾಕರು, ಸಂಕನಿಕರು, ಕ್ಷುದ್ರಕರು, ಅಭೀರರು, ಅರ್ಜುನಾಯನರು, ಪ್ರರ್ಜನರು, ಯೌದೇಹರು ಹಾಗೂ ಮಾದ್ರಕರು ಸಮುದ್ರಗುಪ್ತನಿಂದ ಸೋತು ಸಾರ್ವಭೌಮತ್ವವನ್ನು ಸ್ವೀಕರಿಸಿದರು.

ವಿದೇಶಗಳಲ್ಲಿ ಅವನ ಮಹಿಮೆ : ಸಮುದ್ರಗುಪ್ತನ ಕೀರ್ತಿ ವಿದೇಶಗಳಿಗೂ ಹರಡಿತ್ತು. ಶಕರ ಹರಿಶೇಣನು ಗುಪ್ತರಿಗೆ ಹೆಚ್ಚು ಗೌರವ ನೀಡಿದ್ದನು. ಅದರಲ್ಲೂ ಕಾಬೂಲಿನ ಕುಶಾನ ಅರಸನಾದ ದೇವಪುತ್ರಶಾಹಿ ತನ್ನ ರಾಯಭಾರಿಗಳನ್ನು ಸಮುದ್ರಗುಪ್ತನ ಆಸ್ಥಾನಕ್ಕೆ ಕಳುಹಿಸಿಕೊಟ್ಟಿದ್ದನು. ಸಿಂಹಳದ ಅರಸ ಬುದ್ಧಗಯಾದಲ್ಲಿ ಒಂದು ಬೌದ್ಧವಿಹಾರವನ್ನು ನಿರ್ಮಿಸಲು ಸಮುದ್ರಗುಪ್ತನಿಂದ ಅನುಮತಿ ಪಡೆದನು.

6) ಸಮುದ್ರಗುಪ್ತನ ರಾಜ್ಯ ವಿಸ್ತಾರ : ಡಾ. ಆರ್.ಕೆ. ಮುಖರ್ಜಿಯವರ ಪ್ರಕಾರ ಸಮುದ್ರಗುಪ್ತನ ಸಾಮ್ರಾಜ್ಯ ಉತ್ತರ ಹಿಮಾಲಯದಿಂದ ಹಿಡಿದು ದಕ್ಷಿಣದಲ್ಲಿ ನರ್ಮದಾ ನದಿಯವರೆಗೆ ಹಾಗೂ ಪಂಜಾಬಿನಿಂದ ಹಿಡಿದು ಬ್ರಹ್ಮಪುತ್ರಾ ನದಿಯವರೆಗೂ ಹಬ್ಬಿದ್ದಿತು.

7) ಅಶ್ವಮೇಧಾಚರಣೆ : ಅನೇಕ ದಿಗ್ವಿಜಯಗಳನ್ನು ಪೂರ್ಣಗೊಳಿಸಿದ ಸಮುದ್ರಗುಪ್ತನು ಅವುಗಳ ನೆನಪಿಗಾಗಿ ಅಶ್ವಮೇಧಯಾಗವನ್ನು ಮಾಡಿದನು. ಹಾಗೂ ಅಶ್ವಮೇಧ, ಪರಾಕ್ರಮಿ, ರಾಜಾಧಿರಾಜ ಹಾಗೂ ಚಕ್ರವರ್ತಿ ಎಂಬ ಬಿರುದನ್ನು ಧರಿಸಿದನು. ತನ್ನ ವಿಜಯದ ಸಂಕೇತವಾಗಿ ಅನೇಕ ಚಿನ್ನದ ನಾಣ್ಯಗಳನ್ನು ಅಚ್ಚುಹಾಕಿಸಿದನು. ಅವುಗಳ ಮೇಲೆ ಕುದುರೆಯ ಚಿತ್ರವನ್ನು ಟಂಕಿಸಿದನು. ಅದಲ್ಲದೆ ವಿವಿಧ ಬಗೆಯ 9 ಚಿನ್ನದ ನಾಣ್ಯಗಳನ್ನು ಟಂಕಿಸಿದನು. ಅವುಗಳೆಂದರೆ 1) ಹುಲಿಮಾದರಿ 2) ವೀಣಾಪಾಣಿ 3) ಅಶ್ವಮೇಧ 4) ಭರ್ಚಿ 5) ಧನಸ್ಸು 6) ಶಂಖ 7) ಛತ್ರಿ 8) ಗಂಡುಗೊಡಲಿ ಇತ್ಯಾದಿ.

8) ಸಮುದ್ರಗುಪ್ತನ ಕಲಾಪೋಷಣೆ : ಕಲೆ, ಸಾಹಿತ್ಯ, ನೃತ್ಯ ಹಾಗೂ ಶಿಲ್ಪಕಲೆಗಳಿಗೆ ಗುಪ್ತರು ಮಹಾನ್ ಕಾಣಿಕೆಯನ್ನು ನೀಡಿದ್ದಾರೆ. ಅವನ ನಾಣ್ಯಗಳ ಮೇಲೆ ವೀಣಾಪಾಣನಾಗಿ ಕುಳಿತಿರುವ ಚಿತ್ರವನ್ನು ನೋಡಿದರೆ ಅವರಿಗೆ ಸಂಗೀತದ ಬಗ್ಗೆ ಇದ್ದ ಅಭಿರುಚಿಯನ್ನು ತಿಳಿಸುತ್ತದೆ. ಸಮುದ್ರಗುಪ್ತ ತನ್ನ ಆಸ್ಥಾನದಲ್ಲಿ ಅನೇಕ ಕವಿಗಳು ಹಾಗೂ ಪಂಡಿತರಿಗೆ ಆಶ್ರಯ ನೀಡಿದ್ದನು. ಅಹಲಾಬಾದ್ ಶಾಸನ ಸಮುದ್ರಗುಪ್ತನನ್ನು ಕವಿರಾಜ ಎಂದು ವರ್ಣಿಸಿದೆ. ಸ್ವತ ಅವನೇ ಕೃಷ್ಣ ಚರಿತ್ರೆಯನ್ನು ರಚಿಸಿದನು.

ವ್ಯಕ್ತಿತ್ವ : ಸಮುದ್ರಗುಪ್ತ ಅಸಾಧಾರಣ ಪ್ರತಿಭೆಯನ್ನು ಹೊಂದಿದ ಧೀಮಂತ ನೂರಾರು ಕದನಗಳಲ್ಲಿ ಹೋರಾಡಿ ಅಪಾರ ಗೆಲವು ಸಾಧಿಸಿದ ವೀರ. ಈತ ಅಲೆಕ್ಸಾಂಡರನಂತೆ ಯಶಸ್ವಿ ದಿಗ್ವಿಜಯಶಾಲಿ, ದಕ್ಷ ಆಡಳಿತಗಾರ, ಮಹಾಸಾಮ್ರಾಜ್ಯದ ನಿರ್ಮಾಪಕನಾಗಿ ಇಡೀ ಗುಪ್ತರಲ್ಲಿಯೇ ಪ್ರಸಿದ್ಧ ಅರಸನಾಗಿದ್ದನು. ಹರಿದು ಹಂಚಿಹೋಗಿದ್ದ ರಾಜ್ಯವನ್ನು ಒಂದುಗೂಡಿಸಿ ಏಕಚಕ್ರಾಧಿಪತ್ಯಕ್ಕೆ ಒಳಪಡಿಸಿದುದು ಸಮುದ್ರಗುಪ್ತನ ಮಹಾನ್ ಸಾಧನೆಯಾಗಿದೆ. ಆರ್.ಸಿ ಮುಜಂದಾರ್ ಬರೆದಂತೆ ಸಮುದ್ರಗುಪ್ತನು ಭಾರತೀಯ ಇತಿಹಾಸದ ಅತ್ಯಂತ ಆಕರ್ಷಕ ವ್ಯಕ್ತಿ, ವಿಶಿಷ್ಟ ದೊರೆ, ಸೇನಾನಿಯಾಗಿ ಹಾಗೂ ಆಡಳಿತಗಾರನಾಗಿ ಅವನ ಸಾಧನೆ ಅಪಾರ. ಇವನು ಭಾರತದ ಇತಿಹಾಸದಲ್ಲಿ ನವಯುಗಕ್ಕೆ ನಾಂದಿಹಾಡಿದನು. ಅದೇ ಮುಂದೆ ಸುವರ್ಣಯುಗಕ್ಕೆ ದಾರಿಯಾಯಿತು.

ಗುಪ್ತರ ಕಾಲದ ವಿಜ್ಞಾನ ಮತ್ತು ತಂತ್ರಜ್ಞಾನ

ಗುಪ್ತರ ಕಾಲದ ವಿಜ್ಞಾನ ಮತ್ತು ತಂತ್ರಜ್ಞಾನ

ಗುಪ್ತರ ಕಾಲದಲ್ಲಿ ಭಾರತೀಯ ವಿಜ್ಞಾನ ಮತ್ತು ತಂತ್ರಜ್ಞಾನವು ಅಪೂರ್ವವಾದ ಮುನ್ನಡೆಯನ್ನು ಕಂಡಿತು. ಸೊನ್ನೆಯ ವಿಶಿಷ್ಟತೆಯನ್ನು ಜಗತ್ತಿಗೆ ತಿಳಿಸಿ ಕ್ರಾಂತಿಯನ್ನು ಎಬ್ಬಿಸಲಾಯಿತು. ಖಗೋಳ ಶಾಸ್ತ್ರ, ವೈದ್ಯಕೀಯ, ಗಣಿತ ಶಾಸ್ತ್ರ, ಲೋಹ ಶಾಸ್ತ್ರ ಮುಂತಾದ ಕ್ಷೇತ್ರಗಳಲ್ಲಿ ಅಭೂತಪೂರ್ವವಾದ ಯಶಸ್ಸನ್ನು ಸಂಪಾದಿಸಿದರು. ಪರಿಣಾಮವಾಗಿ ವೈಜ್ಞಾನಿಕ ಸಾಹಿತ್ಯ ರೂಪ ತಳೆಯಿತು.

ಆರ್ಯಭಟ : ಇವನು ಗುಪ್ತರ ಕಾಲದ ಶ್ರೇಷ್ಠ ಖಗೋಳ ವಿಜ್ಞಾನಿ ಮತ್ತು ಪ್ರಖ್ಯಾತ ಗಣಿತ ಶಾಸ್ತ್ರಜ್ಞ ಖಗೋಳ ಶಾಸ್ತ್ರವನ್ನು ಗಣಿತಶಾಸ್ತ್ರದಿಂದ ಪ್ರತ್ಯೇಕಿಸಿದ ಕೀರ್ತಿ ಇವನಿಗೆ ಸಲ್ಲುತ್ತದೆ. ಇವನ ಪ್ರಖ್ಯಾತ ಕೃತಿಗಳೆಂದರೆ, ‘ಆರ್ಯಭಟೀಯಂ’ ಮತ್ತು ‘ಸೂರ್ಯ ಸಿದ್ಧಾಂತ’

  1. ಆರ್ಯಭಟನು ತನ್ನ ಕೃತಿಯಲ್ಲಿ ಭೂಮಿ ಗುಂಡಾಗಿದೆ ಎಂಬ ವೈಜ್ಞಾನಿಕ ಸತ್ಯವನ್ನು ಸಾರಿದ್ದಾನೆ. ಅವನ ಮಾತಿನಲ್ಲೇ ಹೇಳುವುದಾದರೆ ‘ಭೂಗೋಲ: ಸರ್ವತೋ ವೃತಃ’.
  2. ಭೂಮಿಯು ತನ್ನ ಅಕ್ಷದ ಸುತ್ತ ಸುತ್ತುತ್ತಿರುವುದರಿಂದ ಹಗಲು ರಾತ್ರಿಗಳಾಗುತ್ತಿವೆ ಎಂದು ಪ್ರಕಟ ಪಡಿಸಿದ್ದಾನೆ.
  3. ಚಂದ್ರನ ಮೇಲೆ ಭೂಮಿಯ ನೆರಳು ಬೀಳುವುದರಿಂದ ಗ್ರಹಣಗಳಾಗುತ್ತವೆ ಎಂದು ಜಗತ್ತಿಗೆ ಸಾರಿ ಹೇಳಿದನು.
  4. ಸೂರ್ಯ ವರ್ಷದ (ಒಂದು ವರ್ಷದ) ಅವಧಿಯನ್ನು 365,3586805 ದಿನಗಳೆಂದು ಗೊತ್ತು ಪಡಿಸಿದನು.
  5. ಪ್ರಾಚೀನರಿಗೆ ಗೊತ್ತಿಲ್ಲದ ದಶಮಾಂಶ ಪದ್ಧತಿಯನ್ನು ಜಗತ್ತಿಗೆ ಕೊಟ್ಟ ಶ್ರೇಯಸ್ಸು ಆರ್ಯಭಟನಿಗೆ ಸಲ್ಲುತ್ತದೆ. ಅವನ ಅಂಕನ ಪದ್ಧತಿಯಲ್ಲಿ ಇದು ಬರುತ್ತದೆ. ಆದಾಗ್ಯೂ ಈ ಪದ್ಧತಿಯನ್ನು ಆರ್ಯಭಟನೇ ಹುಟ್ಟುಹಾಕಿದನೋ ಅಥವಾ ಅಸ್ತಿತ್ವದಲ್ಲಿ ಇದ್ದ ಪದ್ಧತಿಯೊಂದನ್ನು ಸುಧಾರಿಸಿದನೋ ಎಂಬ ಬಗ್ಗೆ ನಿಖರವಾಗಿ ಹೇಳಲು ಸಾಧ್ಯವಿಲ್ಲ.
  6. ಪೈ ನ ಸರಿಯಾದ ಮೌಲ್ಯ 3,1416 ಎಂದು ಪ್ರತಿಪಾಧಿಸಿದನು.

ವಿಶ್ವದ ವಿಜ್ಞಾನ ಕ್ಷೇತ್ರಕ್ಕೆ ಆರ್ಯಭಟನ ಕೊಡುಗೆ ಅಸಾಧಾರಣವಾದುದು. ಒಟ್ಟಿನಲ್ಲಿ ಇಡೀ ಪ್ರಪಂಚದ ಖಗೋಳ ಶಾಸ್ತ್ರಜ್ಞರ ಮಧ್ಯೆ ಅತಿ ಎತ್ತರದ ಸ್ಥಾನವನ್ನು ಅಲಂಕರಿಸಿದ್ದಾನೆ.

ವರಾಹಮಿಹಿರ : ವರಹಮಿಹಿರನು ಖಗೋಳ ಮತ್ತು ಜ್ಯೋತಿಷ್ಯ ಶಾಸ್ತ್ರದ ಪ್ರಸಿದ್ಧ ಪಂಡಿತನಾಗಿದ್ದನು. ಇವನು ಖಗೋಳ ವಿಜ್ಞಾನವನ್ನು ಖಗೋಳ ವಿಜ್ಞಾನ, ಗಣಿತಶಾಸ್ತ್ರ, ಜಾತಕಶಾಸ್ತ್ರ ಮತ್ತು ಜ್ಯೋತಿಷ್ಯಶಾಸ್ತ್ರಗಳೆಂದು ವಿಭಜಿಸಿದ್ದಾನೆ. ಅಲ್ಲದೆ ಖಗೋಳ ವಿಜ್ಞಾನಕ್ಕಿಂತ ಜ್ಯೋತಿಷ್ಯ ಶಾಸ್ತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ಕೊಟ್ಟಿದ್ದಾನೆ.

ವರಾಹಮಿಹಿರನ ಪ್ರಸಿದ್ಧ ಕೃತಿ ‘ಬೃಹತ್ ಸಂಹಿತ’ ಇದನ್ನು ವಿಶ್ವಕೋಶವೆಂದು ಪರಿಗಣಿಸಲಾಗಿದೆ. ಇದರಲ್ಲಿ ಗ್ರಹಗಳ ಚಲನ ವಲನಗಳು, ಮನುಷ್ಯರ ಮೇಲೆ ಅವುಗಳ ಪರಿಣಾಮಗಳು, ಕೆರೆಗಳನ್ನು ತೋಡುವುದು, ತೋಟವನ್ನು ಮಾಡುವುದು, ಬೇರೆ-ಬೇರೆ ವರ್ಗದ ಸ್ತ್ರೀಯರ ಹಾಗೂ ಪ್ರಾಣಿಗಳ ಲಕ್ಷಣಗಳು, ಶಕುನಶಾಸ್ತ್ರ, ಶಿಲ್ಪಶಾಸ್ತ್ರ, ವಾಸ್ತುಶಿಲ್ಪ, ಭೂಗೋಳ, ರತ್ನಪರೀಕ್ಷೆ, ವಿವಾಹ ಮೊದಲಾದವುಗಳ ಬಗ್ಗೆ ಮಾಹಿತಿ ಈ ಗ್ರಂಥದಲ್ಲಿದೆ. ಇವನ ಮತ್ತೊಂದು ಕೃತಿ ಪಂಚಸಿದ್ಧಾಂತಿಕ. ಇದರಲ್ಲಿ ಖಗೋಳ ವಿಜ್ಞಾನದ ಐದು ಪಂಥಗಳ ಬಗ್ಗೆ ಬರೆದಿದ್ದಾನೆ.

ಬ್ರಹ್ಮಗುಪ್ತ : ಇವನೂ ಸಹ ಪ್ರಸಿದ್ಧ ಖಗೋಳ ಮತ್ತು ಗಣಿತಶಾಸ್ತ್ರಜ್ಞನಾಗಿದ್ದನು. ಇವನ ಎರಡು ಕೃತಿಗಳೆಂದರೆ

ಬ್ರಹ್ಮ ಸಿದ್ಧಾಂತ ಮತ್ತು ಖಂಡಖಾದ್ಯ. ಇವನು ತನ್ನ ಕೃತಿಗಳಲ್ಲಿ ಚೌಕೋನ, ಷಟ್ಕೋನ, ತ್ರಿಕೋನ, ಜ್ಯಾಮಿತಿ, ಲಂಬಕೋನ, ವೃತ್ತ ಮುಂತಾದವುಗಳ ಬಗ್ಗೆ ಬರೆದಿದ್ದಾನೆ. ಗ್ರಹಗಳ ಸ್ಥಾನಗಳನ್ನು, ಗ್ರಹಣಗಳ ಲೆಕ್ಕಾಚಾರಗಳನ್ನು ಗುಣಿಸುವುದನ್ನು ವಿವರಿಸಿದ್ದಾನೆ. ಜಗತ್ತಿಗೆ ಆಕರ್ಷಿಸುವ ಶಕ್ತಿ ಇರುವುದರಿಂದಲೇ ಎಲ್ಲಾ ವಸ್ತುಗಳು ನೆಲಕ್ಕೆ ಬೀಳುತ್ತವೆ ಎಂಬ ಸಿದ್ಧಾಂತವನ್ನು ನ್ಯೂಟನ್‌ಗಿಂತ ಹಲವು ಶತಮಾನಗಳ ಹಿಂದೆಯೇ ಪ್ರಕಟಿಸಿದ್ದನು.

ವಾಗ್ಬಟ : ವಾಗ್ದಟನ ಪ್ರಸಿದ್ಧ ಕೃತಿ ‘ಅಷ್ಟಾಂಗ ಸಂಗ್ರಹ’. ಇದೊಂದು ವೈದ್ಯಶಾಸ್ತ್ರದ ಗ್ರಂಥವಾಗಿದ್ದು, ಆಯುರ್ವೇದದ ಬೆಳವಣಿಗೆಗೆ ಸಹಾಯಕವಾಯಿತು.

ಪಾಲಕಾಪ್ಯ : ಇವನ ಕೃತಿ ‘ಹಸ್ತಾ ಆಯುರ್ವೇದ’, ಅಂಗದೇಶದ ರಾಜನಾದ ರೋಮಪಾದ ಹಾಗೂ ಪಾಲಕಾಪ್ಯಮುನಿ ಇವರ ಸಂಭಾಷಣೆಯೇ ಗ್ರಂಥರೂಪವನ್ನು ಪಡೆದಿದೆ. ಇದರಲ್ಲಿ ಆನೆಗೆ ಬರುವ ಕಾಯಿಲೆಗಳು ಮತ್ತು ಅವುಗಳ ಚಿಕಿತ್ಸಾ ವಿಧಾನದ ಬಗ್ಗೆ ಮಾಹಿತಿ ದೊರೆಯುತ್ತದೆ.

ಚರಕ, ಶುಶೃತ, ಧನ್ವಂತರಿ : ಇವರುಗಳು ಪ್ರಸಿದ್ಧ ಆಯುರ್ವೇದ ವೈದ್ಯರಾಗಿದ್ದರು. ಚರಕನ ‘ಚರಕಸಂಹಿತೆ’, ಸುಶೃತನ ‘ಸುಶೃತ ಸಂಹಿತೆ’ ಮತ್ತು ಧನ್ವಂತರಿಯ ‘ಆಯುರ್ವೇದ ನಿಘಂಟು’ ಪ್ರಾಚೀನ ಚಿಕಿತ್ಸಾ ಪದ್ಧತಿಯ ಪ್ರಸಿದ್ಧ ಕೃತಿಗಳಾಗಿವೆ.

ಲೋಹ ಜ್ಞಾನ : ಗುಪ್ತರ ಕಾಲದಲ್ಲಿ ಲೋಹ ವಿದ್ಯೆಯು ಅಭಿವೃದ್ಧಿಯಾಯಿತು. ಅವರ ಕಾಲದ ನಾಣ್ಯಗಳು ಮತ್ತು ಲೋಹಸ್ತಂಭಗಳು ಇದಕ್ಕೆ ಆಧಾರವಾಗಿವೆ. ದೆಹಲಿ ಬಳಿಯಿರುವ ಮೆಹರೌಲಿ ಎಂಬ ಹಳ್ಳಿಯಲ್ಲಿರುವ ಬೃಹತ್ ಕಬ್ಬಿಣದ ಸ್ತಂಭ ಜಗತ್ ಪ್ರಸಿದ್ಧವಾಗಿದೆ. ಇದು ಎರಡನೇ ಚಂದ್ರಗುಪ್ತನ ಕಾಲಕ್ಕೆ ಸೇರಿದ್ದು, ಅಂದಿನ ಲೋಹಜ್ಞಾನಕ್ಕೆ ಕನ್ನಡಿಯಾಗಿದೆ. ಇದು 23 ಅಡಿ 8 ಅಂಗುಲ ಉದ್ದವಿದೆ. 6000 ಕಿಲೋಗ್ರಾಂ ತೂಕವಿದೆ. ನೂರಾರು ವರ್ಷಗಳು ಕಳೆದರೂ ಮಳೆ, ಗಾಳಿಗೆ ಸ್ವಲ್ಪವೂ ತುಕ್ಕುಹಿಡಿಯದೆ ನಿಂತ ಪರಿ ಅಂದಿನ ಲೋಹ ವಿಜ್ಞಾನಕ್ಕೆ ಸಾಕ್ಷಿಯಾಗಿದೆ.

ಬುದ್ಧನ ತಾವುದ ಮೂರ್ತಿ: ಗುಪ್ತರ ಕಾಲದ ಬುದ್ಧನ ತಾಮ್ರದ ಮೂರ್ತಿಯೊಂದು ದೊರೆತ್ತಿದ್ದು, ಅದೀಗ ‘ಬರ್ಮಿಂಗ್‌ ಹ್ಯಾಂ’ ವಸ್ತು ಸಂಗ್ರಹಾಲಯದಲ್ಲಿದೆ. ಇದು 71/2 ಅಡಿ ಎತ್ತರವಿದೆ. 1000 ಕೆ.ಜಿ. ತೂಕವಿದೆ. ಇದೂ ಸಹ ಗುಪ್ತರಕಾಲದ ಲೋಹ ತಂತ್ರಜ್ಞಾನಕ್ಕೆ ಸಾಕ್ಷಿಯಾಗಿದೆ.

ಬಣ್ಣದ ತಯಾರಿಕೆ ಬಹಳ ಚೆನ್ನಾಗಿ ಬೆಳೆಯಿತು. ಇಂದಿಗೂ ಮಾಸದೇ ಉಳಿದ ವರ್ಣಲೇಪಿತ ಅಜಂತಾ ಚಿತ್ರಗಳು ಗುಪ್ತರ ಕಾಲದ ಅತ್ಯುತ್ತಮ ಕಲಾ ಕೊಡುಗೆಗಳಾಗಿವೆ. ಎ.ಎಲ್. ಭಾಷ್ಯಂ ರವರ ಪ್ರಕಾರ ʻದ ವಂಡರ್ ದಟ್ ವಾಸ್ ಇಂಡಿಯಾ’ ಎಂಬ ಕೃತಿಯಲ್ಲಿ ಹೇಳಿರುವಂತೆ ಗುಪ್ತರ ಕಾಲದಲ್ಲಿ ಪ್ಲಾಸ್ಟಿಕ್ ಸರ್ಜರಿ ಬಳಕೆಯಲ್ಲಿತ್ತು. ಎರಡನೆ ನಾಗಾರ್ಜುನನು ರಸಾಯನ ಶಾಸ್ತ್ರದಲ್ಲಿ ಬಹು ದೊಡ್ಡ ಪಂಡಿತನಾಗಿದ್ದನು. ಇವನನ್ನು ರಸಾಯನ ಶಾಸ್ತ್ರದ ಪಿತಾಮಹನೆಂದು ಕರೆಯಲಾಗಿದೆ.

ಗುಪ್ತರ ಕಾಲದ ಧರ್ಮ

ಗುಪ್ತರ ಕಾಲದ ಧರ್ಮ

ಗುಪ್ತರ ಕಾಲದಲ್ಲಿ ಹಿಂದೂ ಧರ್ಮ

ಗುಪ್ತರ ಆಳ್ವಿಕೆಯಿಂದ ಹಿಂದೂ ಧರ್ಮಕ್ಕೆ ಹೊಸ ಚೈತನ್ಯ ಪ್ರಾಪ್ತವಾಯಿತು. ಇಲ್ಲಿಯವರೆಗೂ ಅಷ್ಟಾಗಿ ಇರದ ರಾಜಾಶ್ರಯ ಈಗ ದೊರೆತು ಪ್ರಬಲವಾಯ್ತು. ಪರಿಣಾಮವಾಗಿ ಬೌದ್ಧಧರ್ಮ ಅವನತಿಯತ್ತ ಸಾಗಿದರೆ ಹಿಂದೂಧರ್ಮ ಪುನರುಜ್ಜಿವನವಾಗತೊಡಗಿತು.

1. ಹಿಂದೂ ಕಲಾ ಮತ್ತು ವಾಸ್ತು ಪರಂಪರೆಯ ಪ್ರಾರಂಭ : ಗುಪ್ತರಿಗಿಂತ ಹಿಂದೆ ಹಿಂದು ದೇವರ ವಿಗ್ರಹ ಕೆತ್ತುವ ಅಥವಾ ದೇವಾಲಯ ನಿರ್ಮಿಸುವ ಪರಿಪಾಠವಿರಲಿಲ್ಲ. ಅದನ್ನು ಪ್ರಾರಂಭ ಮಾಡಿದವರೇ ಗುಪ್ತರು. ಪರಿಣಾಮವಾಗಿ ದೇವಾನು ದೇವತೆಗಳ ವಿಗ್ರಹಗಳು ಮತ್ತು ಅಸಂಖ್ಯಾತ ದೇವಾಲಯಗಳು ನಿರ್ಮಾಣವಾದವು. ಗುಪ್ತ ದೊರೆಗಳು ಹೇರಳವಾಗಿ ಧನಸಹಾಯವನ್ನೂ ಮಾಡಿದರು. ಆ ಮೂಲಕ ಗುಪ್ತರು ಭಾರತೀಯ ಕಲೆ ಮತ್ತು ವಾಸ್ತುಶಿಲ್ಪದ ಪರಂಪರೆಗೆ ಅಪಾರವಾದ ಕೊಡುಗೆ ನೀಡಿದ್ದಾರೆ.

2. ಬ್ರಾಹ್ಮಣರಿಗೆ ಪ್ರಥಮ ಪ್ರಾಶಸ್ಯ : ಶ್ರೇಣೀಕೃತ ಭಾರತೀಯ ಸಮಾಜದಲ್ಲಿ ಬ್ರಾಹ್ಮಣರ ಸ್ಥಾನ ಮೊದಲಿನದಾಗಿದೆ. ಆದರೆ ಮೌರ್ಯರ ಮತ್ತು ಕುಶಾನರ ಕಾಲದಲ್ಲಿ ಬೌದ್ಧಧರ್ಮದ ಪ್ರಭಾವದ ಹಿನ್ನೆಲೆಯಲ್ಲಿ ಬ್ರಾಹ್ಮಣರ ಸ್ಥಾನಮಾನ ಮಂಕಾಗಿತ್ತು. ಯಾವಾಗ ಗುಪ್ತರು ಅಧಿಕಾರಕ್ಕೆ ಬಂದರೋ ಅವರು ಸನಾತನ ಧರ್ಮಕ್ಕೆ ಪ್ರಾಮುಖ್ಯತೆ ನೀಡತೊಡಗಿದರು. ಪರಿಣಾಮವಾಗಿ ಸನಾತನ ಧರ್ಮ ಅಥಾರ್ತ್ ಬ್ರಾಹ್ಮಣಧರ್ಮದ ವಾರಸುದಾರರಂತಿದ್ದ ಬ್ರಾಹ್ಮಣರಿಗೂ ಪ್ರಥಮ ಪ್ರಾಶಸ್ತ್ರ ಲಭ್ಯವಾಯಿತು. ಅರಮನೆಗಳಲ್ಲಿ, ಆಡಳಿತದಲ್ಲಿ ಮತ್ತು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಅವರಿಗೆ ವಿಶೇಷ ಮಹತ್ವ ನೀಡತೊಡಗಿದ್ದರಿಂದ ಅವರ ಸ್ಥಾನ ಹೆಚ್ಚಾಯಿತು.

3 ಯಜ್ಞ-ಯಾಗಗಳ ಏಲ್ಲೆ : ಹಿಂದೂ ಧರ್ಮದ ವಿಶೇಷ ಲಕ್ಷಣಗಳಲ್ಲಿ ಯಜ್ಞ ಯಾಗಗಳು ಬರುತ್ತವೆ. ಹಿಂದೂಧರ್ಮದ ಅನುಯಾಯಿಗಳಾದ ಗುಪ್ತರು ಯಜ್ಞ- ಯಾಗಾಧಿಗಳಿಗೆ ಪ್ರಾಶಸ್ತ್ರ ನೀಡತೊಡಗಿದರು. ಪರಿಣಾಮವಾಗಿ ಅಶ್ವಮೇದ, ವಾಜಪೇಯ, ರಾಜಸೂಯ ಯಾಗಗಳು ಬಹು ಜನಪ್ರಿಯವಾದವು.

4. ಶೈವ ಮತ್ತು ಶಾಕ್ತ ಪಂಥಗಳ ಪ್ರಚಾರ : ಗುಪ್ತರ ಕಾಲದಲ್ಲಿ ಲಕುಲೀಶನಿಂದ ಶೈವ ಪಂಥ ಹೆಚ್ಚು ಪ್ರಚಾರವಾಯಿತು. ಹಾಗೆಯೇ ಶಾಕ್ತ ಪಂಥಗಳು ಅಥವಾ ದೇವಿ/ಶಕ್ತಿಯ ಆರಾಧನೆ ಕೂಡ ಜನಪ್ರಿಯವಾಯಿತು.

5. ವಿವಿಧ ಹೆಸರುಗಳಿಂದ ದೇವರ ಆರಾಧನೆ : ಗುಪ್ತರ ಕಾಲಾವಧಿಯಲ್ಲಿ ಶಿವ ಮತ್ತು ವಿಷ್ಣುರ ಅವತಾರಗಳು ಜನಪ್ರಿಯವಾದವು. ವಿಷ್ಣುವನ್ನು ಕೃಷ್ಣ, ಜನಾರ್ಧನ, ಅನಂತಶಯನ, ಗದಾಧರ, ವಾಸುದೇವ, ಗೋವಿಂದ, ನಾರಾಯಣ ಎಂಬುದಾಗಿ ಕರೆದು ವಿವಿಧ ರೂಪಗಳಲ್ಲಿ ಆರಾಧಿಸತೊಡಗಿದರು. ಶಿವನನ್ನು ಜನಾರ್ಧನ, ಶಂಕರ, ಹರನೆಂದು ಪೂಜಿಸತೊಡಗಿದರು. ಪಾರ್ವತಿಯು ಆಧಿಶಕ್ತಿ, ಭಗವತಿಯಾಗಿ ಕಂಡು ಬಂದಳು. ವಿಗ್ರಹಾರಾಧನೆ ಬಹು ಜನಪ್ರಿಯವಾಯಿತು.

6. ಪುರಾಣಗಳ ಪರಿಪೂರ್ಣತೆ : ಹಿಂದೂ ಧರ್ಮದ ಅವಿಭಾಜ್ಯ ಅಂಗಗಳಾದ 18 ಪುರಾಣಗಳು ಪರಿಪೂರ್ಣವಾಗಿ ರಚಿಸಲ್ಪಟ್ಟಿದ್ದು ಗುಪ್ತರ ಕಾಲಾವಧಿಯಲ್ಲಿ. ಅವು ಪುನಃ ಬರೆಯಲ್ಪಟ್ಟಿದ್ದು ಮತ್ತು ಪರಿಷ್ಕಾರವಾದದ್ದೂ ಆ ಕಾಲಾವಧಿಯಲ್ಲೆ.

7. ವೈಷ್ಣವ ಪಂಥದ ಪ್ರಾಧಾನ್ಯತೆ : ಗುಪ್ತ ಅರಸರು ಬಹುಮುಖ್ಯವಾಗಿ ವಿಷ್ಣು ಆರಾಧಕರಾಗಿದ್ದರು. ತಮ್ಮನ್ನು ಪರಮ ಭಾಗವತರೆಂದು ಕರೆದುಕೊಂಡಿದ್ದಾರೆ. ಗುಪ್ತರ ನಾಣ್ಯಗಳಲ್ಲಿ ವಿಷ್ಣುವಿನ ಪತ್ನಿ ಲಕ್ಷ್ಮಿಯ ಚಿತ್ರ ಮುದ್ರಿಸಲ್ಪಟ್ಟಿದೆ. ಅರಸರು ವಿಷ್ಣುವಿನ ವಾಹನವಾದ ಗರುಡನ ಚಿತ್ರವನ್ನು ಬಳಸುತ್ತಿದ್ದರು. ಅವರ ಬಾವುಟವನ್ನು ವಿಷ್ಣು ದ್ವಜವೆಂದು ಕರೆಯುತ್ತಿದ್ದರು

8. ಸಪ್ತ ಮಾತೃಕೆಯರ ಆರಾಧನೆ : ಗುಪ್ತರ ಕಾಲದಲ್ಲಿ ಸಪ್ತಮಾತೃಕೆಯರ ಹೆಸರುಗಳು ಕಂಡು ಬರುತ್ತವೆ. ಬ್ರಾಹ್ಮ, ಮಹೇಶ್ವರಿ, ಕೌಮಾರಿ, ವೈಷ್ಣವಿ, ವರಾಹಿ, ಮಹೇಂದ್ರಿ, ಚಾಮುಂಡಿ ಎಂಬ ಸಪ್ತ ಮಾತೃಕೆಯರ ಆರಾಧನೆ ಜನಪ್ರಿಯವಾಗಿರುವುದು ಕಂಡು ಬರುತ್ತದೆ.

ಗುಪ್ತರ ಕಾಲದ ಕಲೆ ಮತ್ತು ವಾಸ್ತುಶಿಲ್ಪ

ಗುಪ್ತರ ಕಾಲದ ಕಲೆ ಮತ್ತು ವಾಸ್ತುಶಿಲ್ಪ

ಪೀಠಿಕೆ : ಗುಪ್ತರ ಕಾಲದ ಸಾಂಸ್ಕೃತಿಕ ಭವ್ಯತೆ ಕಲಾ ಪ್ರಪಂಚದಲ್ಲೂ ಹೊರಹೊಮ್ಮಿದೆ. ಈ ಕಾಲವು ಶಿಲ್ಪಕಲೆ ಮತ್ತು ವಾಸ್ತುಶಿಲ್ಪದ ಪರಾಕಾಷ್ಟೆಯನ್ನು ಮುಟ್ಟಿದ ಕಾಲವಾಗಿದೆ. ಇವರ ಕಲೆಯು ಕೇವಲ ಒಂದು ಸ್ಥಳದಲ್ಲಿ ಕೇಂದ್ರೀಕೃತವಾಗದೆ ಮಥುರಾ, ಕಾಶಿ, ಪಟ್ನಾ ಮತ್ತಿತರ ಕಡೆಗಳಲ್ಲಿ ಹರಡಿದೆ.

ಗುಪ್ತರ ಕಾಲದ ಕಲೆಯಲ್ಲಿ ಪರಿಶುದ್ಧತೆ, ಸರಳತೆ, ಆದ್ಯಾತ್ಮಿಕತೆ, ಲಾವಣ್ಯ ಮತ್ತು ಸೌಂದರ್ಯವಿದೆ. ಈ ಕಾಲಾವಧಿಯಲ್ಲಿನ ಕಲೆ ಗಾಢವಾದ ಧಾರ್ಮಿಕ ಹಾಗೂ ಆದ್ಯಾತ್ಮಿಕ ಅಂಶಗಳನ್ನು ಒಳಗೊಂಡು ಅತ್ಯುನ್ನತ ಮಟ್ಟವನ್ನು ತಲುಪಿತು. ಆದ್ದರಿಂದಲೇ ವಿ.ಎ.ಸ್ಮಿತ್ ರವರು ‘ಗುಪ್ತರ ಕಲೆಯು ಹಿಂದೂ ಕಲೆಯ ಅತ್ಯುನ್ನತಿಯನ್ನು ಪ್ರತಿನಿಧಿಸುತ್ತದೆ’ ಎಂದಿದ್ದಾರೆ.

ಭಾರತದ ಇತಿಹಾಸದಲ್ಲೇ ಮೊಟ್ಟಮೊದಲು ಕಲ್ಲಿನಲ್ಲಿ ಹಿಂದೂ ದೇವಾಲಯಗಳನ್ನು ಕಟ್ಟುವ ಪರಂಪರೆ ಗುಪ್ತರ ಕಾಲದಿಂದ ಪ್ರಾರಂಭವಾಯಿತು. ಅಲ್ಲದೆ ಗುಪ್ತರ ಯುಗವು ‘ಸುವರ್ಣಯುಗ’ವೆಂದು ಪರಿಗಣಿತವಾಗಲು ಕಲೆ ಮತ್ತು ವಾಸ್ತುಶಿಲ್ಪದಲ್ಲಿ ಸಾಧಿಸಿದ ಸಿದ್ಧಿಯೂ ಕಾರಣವಾಗಿದೆ. ಭಾರತದ ಇತಿಹಾಸದಲ್ಲಿ ಯಾವ ಯುಗದಲ್ಲೂ ಕಂಡುಬರದ ಕಲಾಚಟುವಟಿಕೆಗಳು ಈ ಕಾಲದಲ್ಲಿ ಕಂಡುಬಂದಿದೆ. ಎ.ಕೆ.ಕುಮಾರಸ್ವಾಮಿಯವರು ‘ಆ ವೇಳೆಗಾಗಲೇ ಆಚರಣೆಯಲ್ಲಿದ್ದ ನಮ್ಮ ಕಲಾ ಪರಂಪರೆಯ ಪುಷ್ಪ ಗುಪ್ತರ ಕಲೆ’ ಎಂದಿದ್ದಾರೆ.

ಗುಪ್ತರ ದೇವಾಲಯದ ಲಕ್ಷಣಗಳು ಕೆಳಕಂಡಂತಿವೆ.

  1. ಅದಿಷ್ಠಾನದ (ಜಗುಲಿಯ) ಮೇಲೆ ನಿಂತ ದೇವಾಲಯ.
  2. ದೇಗುಲಕ್ಕೆ ಹೋಗಲು ಮೆಟ್ಟಿಲುಗಳ ಸಾಲು.
  3. ಚೌಕಾಕಾರದ ಕೆಲವೊಮ್ಮೆ ಆಯತಾಕಾರದ ದೇವಾಲಯದ ನಕ್ಷೆ.
  4. ಒಳಗರ್ಭಗೃಹದ ಸುತ್ತ ಮುಚ್ಚಿದ ಪ್ರದಕ್ಷಿಣಾ ಪಥವಿರುವುದು.
  5. ಗರ್ಭಗೃಹದ ಅಲಂಕೃತ ಬಾಗಿಲು.
  6. ಮುಖ ಮಂಟಪದ ಅಲಂಕೃತ ಕಂಬಗಳು.
  7. ಸಮತಟ್ಟಾದ ಚಾವಣಿ
  8. ನಂತರ ಕಾಲದಲ್ಲಿ ಮೇಲ್ಟಾವಣಿ ಮೇಲೆ ನಿಂತ ರೇಖಾನಾಗರ ಶಿಖರ.
  9. ಸರಳ ನಿರಾಡಂಬರ ಹೊರಗೋಡೆ.
  10. ಸಭಾಮಂಟಪ ಇಲ್ಲದೆ ಇರುವುದು.

ನಂತರದ ಲಕ್ಷಣಗಳು :

  1. ಚಿಕ್ಕ ದೇವಾಲಯಗಳನ್ನು ದೊಡ್ಡದನ್ನಾಗಿ ಮಾಡಿರುವುದು- ಹಲವು ಭಾಗಗಳ ಸೇರ್ಪಡೆ.
  2. ಆಯತಾಕಾರದ ನಕ್ಷೆ.
  3. ಸಭಾಮಂಟಪ ಇರುವುದು.
  4. ಸಭಾಮಂಟಪ ಮತ್ತು ಮುಖಮಂಟಪವನ್ನು ಸೇರಿಸುವ ಕೈಸಾಲೆ.
  5. ಜಗುಲಿಯಲ್ಲಿ ಶಿಲ್ಪಸಾಲು
  6. ದೇವಾಲಯದ ಹೊರಗೋಡೆಗಳನ್ನು ಶಿಲ್ಪಕೋಷ್ಟಗಳಿಂದ ಹಾಗೂ ಅರೆಗಂಭಗಳಿಂದ ಅಲಂಕರಿಸಿರುವುದು.
  7. ದೇವಾಲಯದ ಗೋಡೆಗಳ ಮೇಲೆ ಶಿಲ್ಪ.
  8. ಮೇಲ್ಛಾವಣಿಯ ಮೇಲೆ ಪಿರಮಿಡ್ ಆಕಾರದ ಶಿಖರ.

ನಾಗರ ಮತ್ತು ದ್ರಾವಿಡ ಶೈಲಿಗಳ ಉಗಮ : ಗುಪ್ತರ ಕಾಲದ ದೇವಾಲಯಗಳಲ್ಲಿ ನಾಗರ ಮತ್ತು ದ್ರಾವಿಡ ಶೈಲಿಗಳ ಆಗಮನವನ್ನು ಸೂಚಿಸುವ ಲಕ್ಷಣಗಳನ್ನು ಗುರುತಿಸಬಹುದು. ನಾಗರ ಶೈಲಿಯ ಪ್ರಮುಖ ಲಕ್ಷಣವಾದ ರೇಖಾನಾಗರ ಶಿಖರವನ್ನು ಬಿಟರ್‌ಗಾವ್ ನ ಇಟ್ಟಿಗೆಯ ದೇವಾಲಯದಲ್ಲಿ ಗಮನಿಸಬಹುದು.

ದ್ರಾವಿಡ ಶೈಲಿಯ ಪ್ರಮುಖ ಲಕ್ಷಣವಾದ ಪಿರಮಿಡ್ ಆಕಾರದ ಶಿಖರವನ್ನು ಭೋಧಗಯಾದ ಮಹಾಭೋಧಿ ದೇವಾಲಯದಲ್ಲಿ ಗಮನಿಸಬಹುದು. ಇದರಿಂದ ಗುಪ್ತರಕಾಲವು ಈ ಎರಡೂ ಶೈಲಿಗಳ ಉಗಮಸ್ಥಾನವಾಗಿದ್ದು, ನಂತರ ಕಾಲದಲ್ಲಿ ಪರಿಪಕ್ವವಾಯಿತೆಂದು ತಿಳಿಯುತ್ತದೆ.

ದೇವಫರ್‌ನ ದಶಾವತಾರ ದೇವಾಲಯ : ಇದು ಗುಪ್ತರ ಕಾಲದ ಪ್ರಸಿದ್ಧ ದೇವಾಲಯವಾಗಿದೆ. ಇದು 40 ಅಡಿ ಎತ್ತರದ ಶಿಖರವನ್ನು ಒಳಗೊಂಡಿದೆ. ದೇವಾಲಯದ ಬಾಗಿಲು ಹೆಚ್ಚು ಅಲಂಕಾರಭರಿತವಾಗಿದೆ. ಗಂಗಾ-ಯಮುನ ನದಿಗಳ ಸಂಗಮದ ಚಿತ್ರ ಮನೋಜ್ಞವಾಗಿದೆ. ಬಾಗಿಲಿನಲ್ಲಿ ಪೂರ್ಣಘಟ, ಮಿಥುನ ಚಿತ್ರಗಳು, ಪತ್ರಾವಳಿ ಮನೋಹರವಾಗಿದೆ. ಶ್ರೀರಾಮ ಮತ್ತು ಶ್ರೀಕೃಷ್ಣರ ಜೀವನದ ಸುಂದರ ದೃಶ್ಯಾವಳಿಯನ್ನು ಈ ದೇವಾಲಯ ಒಳಗೊಂಡಿದೆ.

ಇತರ ಪ್ರಮುಖ ದೇವಾಲಯಗಳು :

  1. ಜಬ್ಬಲ್‌ಪುರ ಜಿಲ್ಲೆಯ ತಿಗಾವದಲ್ಲಿರುವ ವಿಷ್ಣುದೇವಾಲಯ
  2. ಭುಮರದಲ್ಲಿರುವ ಶಿವ ದೇವಾಲಯ
  3. ಅಜಯ್‌ಗರ್‌ನ ಪಾರ್ವತಿ ದೇವಾಲಯ
  4. ಖೋಹದಲ್ಲಿರುವ ಏಕಮುಖ ಶಿವಲಿಂಗ ದೇವಾಲಯ
  5. ಗುಪ್ತರ ವಾಸ್ತುಶಿಲ್ಪದ ಮಾದರಿಯಲ್ಲಿರುವ ಐಹೊಳೆಯ ದುರ್ಗಾದೇವಾಲಯ

ಶಿಲ್ಪಕಲೆ : ಗುಪ್ತರ ಕಾಲದ ಶಿಲ್ಪಕಲೆಯು ಅಪೂರ್ವವಾದ ಸೌಂದಯ್ಯಕ್ಕೆ ಹೆಸರುವಾಸಿಯಾಗಿದೆ. ಅರುಣ್ ಭಟ್ಟಾಚಾರ್ಜಿಯವರ ಅಭಿಪ್ರಾಯದಲ್ಲಿ ‘ಶಿಲ್ಪಕಲೆಯಲ್ಲಿ ಗುಪ್ತಶಿಲ್ಪಗಳ ಉಳಿ ನಿರ್ಜೀವ ಶಿಲೆಗೆ ಚೇತನ ಹಾಗೂ ಲಾವಣ್ಯವನ್ನಿತ್ತಿದೆ’.

ಗುಪ್ತರ ಶಿಲ್ಪಕಲೆಯ ಲಕ್ಷಣಗಳು :

  1. ಎಲ್ಲಾ ಪ್ರಾಣಿ ಮತ್ತು ಸಸ್ಯ ವಿನ್ಯಾಸಗಳು ಮುಖ್ಯ ಶಿಲ್ಪದ ಕಥಾನಕದಿಂದ ಪೂರ್ತಿ ಹೊರಗೆ ಅಂಚಿಗೆ (ಬಾರ್ಡ‌ರ್‌ ಗೆ) ದೂಡಲ್ಪಟ್ಟಿರುವುದು.
  2. ಗುಪ್ತರ ಶಿಲ್ಪವು ಬಾಹ್ಯ ಲಕ್ಷಣ ಮತ್ತು ಅಂತಃಶಕ್ತಿಯ ಸಮ್ಮಿಲನ.
  3. ಗುಪ್ತರ ಕಾಲದ ಶಿಲ್ಪವು ಕುಳಿತಿರಲಿ, ನಿಂತಿರಲಿ ಅಥವಾ ಬಾಗಿರಲಿ ಸಮತೋಲನ ಸ್ಥಿತಿಯನ್ನು ತಲುಪಿರುವುದು.
  4. ಗುಪ್ತರ ಶಿಲ್ಪವು ಗ್ರೀಕರ ಅಥವಾ ಇನ್ಯಾವುದೇ ಶೈಲಿಯ ಪ್ರಭಾವಕ್ಕೆ ಒಳಗಾಗದೆ ಭಾರತೀಯತೆಯನ್ನು ಒಳಗೊಂಡಿರುವುದು.
  5. ಗುಪ್ತ ಶಿಲ್ಪದಲ್ಲಿ ಕಾಣುವ ತೇಜಸ್ಸು, ಪಾರದರ್ಶಕ ವಸ್ತ್ರ, ಅಲಂಕಾರಿಕ ಪ್ರಭಾವಳಿ.

ಕೆಲವು ಶಿಲ್ಪಾಕೃತಿಗಳು :

  1. ಸಾರನಾಥ ಆಸನ ರೂಢ ಬುದ್ಧನ ವಿಗ್ರಹ
  2. ಉದಯ ಗಿರಿಯ ಶಿಲ್ಪಗಳು
  3. ಬೆಸ್ನಗರದ ಗಂಗಾದೇವಿ ವಿಗ್ರಹ
  4. ಮಥುರಾದ ಬುದ್ಧನ ಪೂರ್ಣ ವಿಗ್ರಹ
  5. ಗ್ವಾಲಿಯರ್‌ನ ಅಪ್ಸರೆಯರ ಮೂರ್ತಿಗಳು
ಗುಪ್ತರ ಕಾಲದ ಆಡಳಿತ

ಗುಪ್ತರ ಕಾಲದ ಆಡಳಿತ

ಗುಪ್ತರ ಆಡಳಿತ : ಗುಪ್ತ ದೊರೆಗಳು ದೊಡ್ಡ ಸಾಮ್ರಾಜ್ಯದ ಅಧಿಪತಿಗಳಾಗಿದ್ದರು. ಪಾಟಲಿಪುತ್ರ ಅವರ ರಾಜಧಾನಿಯಾಗಿತ್ತು. ಎರಡನೆ ಚಂದ್ರಗುಪ್ತನ ಕಾಲದಲ್ಲಿ ಕೆಲವು ಕಾಲ ಉಜೈನಿ ರಾಜಧಾನಿಯಾಗಿದ್ದಿತಾದರೂ, ನಂತರ ಪಾಟಲಿಪುತ್ರವೇ ರಾಜಧಾನಿಯಾಗಿ ಮುಂದುವರೆಯಿತು. ಗುಪ್ತ ದೊರೆಗಳು ಹೆಚ್ಚಿನ ಸಂಖ್ಯೆಯ ಅಧಿಕಾರಿಗಳನ್ನು ನೇಮಿಸಿಕೊಂಡು ಸುಭದ್ರ ಆಡಳಿತವನ್ನು ನೀಡಿದರು.

ರಾಜ :

ರಾಜನೇ ರಾಜ್ಯದ ಮುಖ್ಯಸ್ಥನಾಗಿದ್ದನು. ಆತನ ಮಾತೆ ಅಂತಿಮವಾಗಿತ್ತು. ರಾಜನನ್ನು ದೈವಾಂಶ ಸಂಭೂತನೆಂದು ಪರಿಗಣಿಸಲಾಗಿತ್ತು. ರಾಜನನ್ನು ದೇವರ ಪ್ರತಿನಿಧಿಯೆಂದು ಸಹ ಕರೆಯಲಾಗುತ್ತಿತ್ತು. ರಾಜ್ಯದಲ್ಲಿ ಧರ್ಮವನ್ನು ಪಾಲಿಸುವುದು, ವಿದೇಶಿಯರ ದಾಳಿಯನ್ನು ಎದುರಿಸಿ ದೇಶದ ಜನರನ್ನು ರಕ್ಷಿಸುವುದು, ರಾಜನ ಆದ್ಯ ಕರ್ತವ್ಯವಾಗಿದ್ದಿತು. ನ್ಯಾಯ ನಿರ್ಣಯ ಮಾಡುವುದು, ಸೈನ್ಯದ ನಾಯಕತ್ವ ವಹಿಸುವುದು ಸಹ ಈತನ ಕರ್ತವ್ಯಗಳಾಗಿದ್ದವು. ಇಷ್ಟೆಲ್ಲ ಅಧಿಕಾರಗಳನ್ನು ಹೊಂದಿದ್ದರೂ ರಾಜನು ನಿರಂಕುಶಾಧಿಕಾರಿಯಾಗಿರಲು ಸಾಧ್ಯವಿರಲಿಲ್ಲ.

ದರ್ಪಿಷ್ಟ ಪ್ರಭುತ್ವವಾಗಿರಲಿಲ್ಲ : ಗುಪ್ತರ ಆಡಳಿತವು ದರ್ಪಿಷ್ಟ ಪ್ರಭುತ್ವವಾಗಿರಲಿಲ್ಲ. ಮಹಾರಾಜಾಧಿರಾಜ, ಪರಮೇಶ್ವರ, ಪೃಥ್ವಿಪಾಲ, ಪರಮಭಟ್ಟಾರಕ, ಪರಮದೇವತಾ, ಸಾರ್ವಬೌಮ, ಸಾಮ್ರಾಟ್ ಮೊದಲಾದ ಬಿರುದುಗಳನ್ನು ಧರಿಸಿದ್ದರೂ ನಿರಂಕುಶ ದೊರೆಗಳಾಗಿರಲಿಲ್ಲ. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಮತ್ತು ಆಡಳಿತಾಂಗದ ಅಧಿಪತಿಗಳಾಗಿದ್ದರಿಂದ ಎಲ್ಲಾ ಅಧಿಕಾರಗಳು ಕಟ್ಟಕಡೆಗೆ ಅವರಲ್ಲಿ ಕೇಂದ್ರೀಕೃತವಾಗಿತ್ತು. ಆದಾಗ್ಯೂ ಕೆಲವೊಂದು ಅಡೆತಡೆಗಳಿದ್ದವು. ನ್ಯಾಯ, ನೀತಿ, ಧರ್ಮವನ್ನು ಪಾಲಿಸಬೇಕಾಗಿತ್ತು. ಗುರುಹಿರಿಯರ, ಪಂಡಿತರ, ಮಂತ್ರಿಗಳ ಮತ್ತು ಸಲಹಾ ಸಮಿತಿಯ ಅಭಿಪ್ರಾಯವನ್ನು ಆಲಿಸಬೇಕಾಗಿತ್ತು. ಅಲ್ಲದೆ ಪರಂಪರಾಗತ ನಂಬಿಕೆ, ಆಚರಣೆ, ಧರ್ಮ-ಸಂಪ್ರದಾಯಗಳು ಅರಸರು ಸ್ವೇಚ್ಛಾಧಿಕಾರ ಚಲಾಯಿಸದಂತೆ ಅಡ್ಡಿಯಾಗಿದ್ದವು.

ಮಂತ್ರಾಲೋಚನ ಸಭೆ(ಮಂತ್ರಿಪರಿಷತ್ತು): ಆಡಳಿತ ನಿರ್ವಹಣೆಯಲ್ಲಿ ಅರಸರಿಗೆ ಸಲಹೆ ಸೂಚನೆಗಳನ್ನು ನೀಡಲು ಮಂತ್ರಾಲೋಚನ ಸಭೆ ಇರುತ್ತಿತ್ತು. ಇದು ಮುಖ್ಯಮಂತ್ರಿ, ಆರ್ಥಿಕ ಮಂತ್ರಿ, ನ್ಯಾಯಾಂಗ ಸಚಿವ, ಮುಖ್ಯ ದಂಡನಾಯಕ ಮತ್ತು ಯುವರಾಜನನ್ನು ಒಳಗೊಂಡಿತ್ತು. ಪ್ರಮುಖ ವಿಷಯಗಳನ್ನು ಚರ್ಚಿಸಿ ತೀರ್ಮಾನಗಳನ್ನು ಕೈಗೊಳ್ಳಲಾಗುತ್ತಿತ್ತು.

ವಿವಿಧ ಅಧಿಕಾರಿಗಳು : ಗುಪ್ತರ ಶಾಸನಗಳಲ್ಲಿ ಸೇನಾಪತಿ, ಮಹಾಸೇನಾಪತಿ, ಬಲಾದಿಕೃತ, ಸಂಧಿವಿಗ್ರಹಿ, ದಂಡಪಸಾಧಿಕರಣ, ವಿನಯಸ್ಥಿತಿ ಸ್ಥಾಪಕ ಮೊದಲಾದ ಹುದ್ದೆಗಳ ಪ್ರಸ್ತಾಪ ಬರುತ್ತದೆ. ಇದರಿಂದ ಈ ಅಧಿಕಾರಿಗಳು ಸಂಬಂಧಿತ ಆಡಳಿತದ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದರೆಂಬುದು ತಿಳಿಯುತ್ತದೆ.

ಕಂದಾಯ ಆಡಳಿತ : ಗುಪ್ತರ ಕಾಲದಲ್ಲಿ ಭೂಕಂದಾಯವೇ ಆದಾಯದ ಪ್ರಮುಖ ಮೂಲವಾಗಿತ್ತು. ಆದ್ದರಿಂದ ಗುಪ್ತ ದೊರೆಗಳು ಕಂದಾಯ ಆಡಳಿತಕ್ಕೆ ಮಹತ್ವ ನೀಡಿದ್ದರು. ಭೂ ಉತ್ಪನ್ನದ 1/6 ಭಾಗ ಭೂ ಕಂದಾಯವೆಂದು ನಿಗಧಿಪಡಿಸಿದ್ದರು. ಅಲ್ಲದೆ 18 ವಿಧದ ವಿವಿಧ ತೆರಿಗೆಗಳನ್ನು ಹೇರಿದ್ದರು.

ಇದಲ್ಲದೆ ಅರಸನ ಸೈನ್ಯ ಹೋಗುವ ದಾರಿಯಲ್ಲಿರುವ ಜನ ಅದರ ನಿರ್ವಹಣೆಯ ಹೊಣೆಯನ್ನು ಹೊರಬೇಕಿತ್ತು. ‘ಭೋಗ’ ಎಂಬ ನಗರ ಪ್ರವೇಶ ತೆರಿಗೆಯಿಂದಲೂ ಆದಾಯ ಬರುತ್ತಿತ್ತು. ಇವುಗಳ ಜೊತೆಗೆ ಉತ್ಪನ್ನ ಹಾಗೂ ಉಪ್ಪಿನ ಗಣಿಗಳಿಂದಲೂ ತೆರಿಗೆ ಬರುತ್ತಿತ್ತು. ವಿಷ್ಠಿ ಎಂಬ ಕಡ್ಡಾಯ ಉಚಿತ ಶ್ರಮ ಪದ್ಧತಿಯೂ ಜಾರಿಯಲ್ಲಿದ್ದಿತು.

ನ್ಯಾಯಾಂಗ ಆಡಳಿತ : ಅರಸನು ನ್ಯಾಯಾಂಗದ ಅಧಿಪತಿಯಾಗಿದ್ದನು. ಆದಾಗ್ಯೂ ನ್ಯಾಯಾಧೀಶರನ್ನು ನೇಮಿಸಿಕೊಳ್ಳಲಾಗಿತ್ತು. ಮಹಾ ದಂಡನಾಯಕನು ನ್ಯಾಯಾಧಿಕಾರಿಯೂ ಆಗಿದ್ದನು. ವಿಷಯಪತಿಯು ಜಿಲ್ಲೆಯ ಅಧಿಪತಿಯಾಗಿದ್ದುದಲ್ಲದೆ ಜಿಲ್ಲಾಮಟ್ಟದಲ್ಲಿ ನ್ಯಾಯ ತೀರ್ಮಾನ ಮಾಡುತ್ತಿದ್ದನು.

ಸೈನ್ಯಾಡಳಿತ : ಗುಪ್ತರ ಇತಿಹಾಸದ ಬಗೆಗಿನ ಆಧಾರಗಳಲ್ಲಿ ಸೇನಾಪತಿ, ಮಹಾಸೇನಾಪತಿ, ಬಲಾಧಿಕೃತ ಎಂಬ ಹೆಸರುಗಳು ಕಂಡುಬರುತ್ತವೆ. ಇವುಗಳು ವಿವಿಧ ದರ್ಜೆಯ ಸೇನಾಧಿಕಾರಿಗಳ ಹುದ್ದೆಗಳೇ ಆಗಿವೆ.

ಸಾಮ್ರಾಜ್ಯದ ವಿಭಾಗ : ಗುಪ್ತರ ಸಾಮ್ರಾಜ್ಯವು ಬಹುವಿಶಾಲವಾದ ಸಾಮ್ರಾಜ್ಯವಾಗಿತ್ತು. ಆಡಳಿತವು ಕಷ್ಟಸಾಧ್ಯವಾಗಿತ್ತು. ಆದ್ದರಿಂದ ಆಡಳಿತದ ಅನುಕೂಲಕ್ಕಾಗಿ ಸಾಮ್ರಾಜ್ಯವನ್ನು ಪ್ರಾಂತಗಳಾಗಿ, ಪ್ರಾಂತಗಳನ್ನು ಜಿಲ್ಲೆಗಳಾಗಿ ವಿಂಗಡಿಸಿದ್ದು ಕಂಡುಬರುತ್ತದೆ.

ಪ್ರಾಂತಗಳ ಆಡಳಿತ : ಸಾಮ್ರಾಜ್ಯವನ್ನು ಪ್ರಾಂತಗಳನ್ನಾಗಿ ವಿಂಗಡಿಸಲಾಗಿತ್ತು. ಪ್ರಾಂತಗಳನ್ನು ಭುಕ್ತಿ, ದೇಶ, ವಿಷಯ ಎಂಬ ಹೆಸರುಗಳಿಂದ ಕರೆಯುತ್ತಿದ್ದರು. ಅದರ ಆಡಳಿತ ನಿರ್ವಹಣೆಗೆ ಸಾಮಾನ್ಯವಾಗಿ ರಾಜಕುಮಾರರನ್ನು ನೇಮಿಸುತ್ತಿದ್ದರು. ಪ್ರಾಂತದ ಅಧಿಪತಿಯನ್ನು ಬೋಗಪತಿ, ಉಪಾರಿಕ ಹಎಂದು ಕರೆಯುತ್ತಿದ್ದರು. ಇವನಿಗೆ ಸಹಾಯಕ್ಕಾಗಿ ಕೆಳಕಂಡವರು ಇರುತ್ತಿದ್ದರು. ದಂಡನಾಯಕನು ನ್ಯಾಯಾಧಿಕಾರಿಯೂ ಆಗಿದ್ದನು. ವಿಷಯಪತಿಯು ಜಿಲ್ಲೆಯ ಅಧಿಪತಿಯಾಗಿದ್ದುದಲ್ಲದೆ ಜಿಲ್ಲಾಮಟ್ಟದಲ್ಲಿ ನ್ಯಾಯ ತೀರ್ಮಾನ ಮಾಡುತ್ತಿದ್ದನು.

ಸೈನ್ಯಾಡಳಿತ : ಗುಪ್ತರ ಇತಿಹಾಸದ ಬಗೆಗಿನ ಆಧಾರಗಳಲ್ಲಿ ಸೇನಾಪತಿ, ಮಹಾಸೇನಾಪತಿ, ಬಲಾಧಿಕೃತ ಎಂಬ ಹೆಸರುಗಳು ಕಂಡುಬರುತ್ತವೆ. ಇವುಗಳು ವಿವಿಧ ದರ್ಜೆಯ ಸೇನಾಧಿಕಾರಿಗಳ ಹುದ್ದೆಗಳೇ ಆಗಿವೆ. ವಿಶಾಲ ಸಾಮ್ರಾಜ್ಯವನ್ನು ಹೊಂದಿದ್ದ ಗುಪ್ತರು ತಮ್ಮ ರಾಜ್ಯ ರಕ್ಷಣೆಗಾಗಿ ಬಲಿಷ್ಠ ಸೇನೆಯನ್ನು ಕಟ್ಟಿದ್ದರು. ಇವರ ಸೈನ್ಯದಲ್ಲಿ ಪದಾತಿ, ಅಶ್ವಪಡೆ ಹಾಗೂ ಗಜಪಡೆ ಇದ್ದಿತು. ಸೈನ್ಯದಲ್ಲಿ ರಥಗಳನ್ನು ಬಳಸುತ್ತಿರಲಿಲ್ಲ. ಮರಳುಗಾಡಿನಲ್ಲಿ ಮಾತ್ರ ಒಂಟೆಗಳನ್ನು ಬಳಸುತ್ತಿದ್ದರು. ಸೈನ್ಯದ ಮೇಲ್ವಿಚಾರಣೆಗಾಗಿ “ಮಹಾಸೇನಾಪತಿ” ನೇಮಕಗೊಂಡಿದ್ದನು. ಈತನ ಕೈಕೆಳಗೆ ಮಹಾದಂಡನಾಯಕ, ರಣಬಂಡಾರಿಕ ಭಟಶ್ವಪತಿ ಎಂಬ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದರು. ಸೇವಾಡಳಿತದ ಪುಮುಖ ಮುಖ್ಯಸ್ಥರುಗಳನ್ನು ಈ ಕೆಳಗಿನಂತೆ ಅಭ್ಯಸಿಸಬಹುದು.

1) ಸೈನ್ಯದ ಮುಖ್ಯಸ್ಥ – ಮಹಾಸೇನಾಪತಿ

2) ಅಶ್ವಪಡೆ – ಮಹಾಅಶ್ವಪತಿ, ಅಶ್ವಪತಿ

3) ಗಜಪಡೆ- ಮಹಾಪಿಲುಪತಿ ಅಥವಾ ಕಟುಕ

4) ಪಿಲುಪಡೆ – ದಂಡನಾಯಕ

ಸೈನಿಕರಿಗೆ ಹಣದ ರೂಪದಲ್ಲಿ ಸಂಬಳ ವಿತರಣೆ ಮಾಡಲಾಗುತ್ತಿತ್ತು. ಯುದ್ದದಲ್ಲಿ ಬಿಲ್ಲು, ಬಾಣ, ಕತ್ತಿ, ಈಟಿ, ಕೈಗೊಡಲಿ, ಭರ್ಚಿ, ಭಲ್ಲೆ, ಶಿರಾಸ್ತ್ರಣ, ಕಬ್ಬಿಣದ ಕವಚ ಮೊದಲಾದ ಆಯುಧಗಳನ್ನು ಬಳಸಲಾಗುತ್ತಿತ್ತು. ಈ ಅವಧಿಯಲ್ಲಿ ಅಶ್ವಪಡೆ ತನ್ನ ಮಹತ್ವವನ್ನು ಹೆಚ್ಚಿಸಿಕೊಂಡಿತು.

ಸಾಮ್ರಾಜ್ಯದ ವಿಭಾಗ : ಗುಪ್ತರ ಸಾಮ್ರಾಜ್ಯವು ಬಹುವಿಶಾಲವಾದ ಸಾಮ್ರಾಜ್ಯವಾಗಿತ್ತು. ಆಡಳಿತವು ಕಷ್ಟಸಾಧ್ಯವಾಗಿತ್ತು. ಆದ್ದರಿಂದ ಆಡಳಿತದ ಅನುಕೂಲಕ್ಕಾಗಿ ಸಾಮ್ರಾಜ್ಯವನ್ನು ಪ್ರಾಂತಗಳಾಗಿ, ಪ್ರಾಂತಗಳನ್ನು ಜಿಲ್ಲೆಗಳಾಗಿ ವಿಂಗಡಿಸಿದ್ದು ಕಂಡುಬರುತ್ತದೆ.

ಪ್ರಾಂತಗಳ ಆಡಳಿತ : ಸಾಮ್ರಾಜ್ಯವನ್ನು ಪ್ರಾಂತಗಳನ್ನಾಗಿ ವಿಂಗಡಿಸಲಾಗಿತ್ತು. ಪ್ರಾಂತಗಳನ್ನು ಭುಕ್ತಿ, ದೇಶ, ವಿಷಯ ಎಂಬ ಹೆಸರುಗಳಿಂದ ಕರೆಯುತ್ತಿದ್ದರು. ಅದರ ಆಡಳಿತ ನಿರ್ವಹಣೆಗೆ ಸಾಮಾನ್ಯವಾಗಿ ರಾಜಕುಮಾರರನ್ನು ನೇಮಿಸುತ್ತಿದ್ದರು. ಪ್ರಾಂತದ ಅಧಿಪತಿಯನ್ನು ಬೋಗಪತಿ, ಉಪಾರಿಕ ಎಂದು ಕರೆಯುತ್ತಿದ್ದರು. ಇವನಿಗೆ ಸಹಾಯಕ್ಕಾಗಿ ಕೆಳಕಂಡವರು ಇರುತ್ತಿದ್ದರು.

ಬಲಾಧಿಕರಣಿಕ – ಸೈನ್ಯದ ಮುಖ್ಯಸ್ಥ

ದಂಡಪಸೌಧಿಕರಣಿಕ – ಪೋಲೀಸ್ ಅಧಿಕಾರಿ

ರಣಭಂಡಾರಿಕ – ಸೈನ್ಯದ ದಂಡಾಧಿಕಾರಿ

ವಿನಯಸ್ಥಿತಿಸ್ಥಾಪಕ – ಕಾನೂನು ಸುವ್ಯವಸ್ಥೆ ನೋಡಿಕೊಳ್ಳುವಾತ

ಭಟಸ್ವಪತಿ – ಅಶ್ವದಳ ಮತ್ತು ಕಾಲ್ಗಳದ ದಂಡನಾಯಕ

ಮಹಾಪಿಲ್ಲುಪತ – ಗಜಸೈನ್ಯದ ಮುಖ್ಯಸ್ಥ

ಜಿಲ್ಲಾಡಳಿತ : ಪ್ರಾಂತಗಳನ್ನು ಜಿಲ್ಲೆಗಳನ್ನಾಗಿ ವಿಂಗಡಿಸಲಾಗಿತ್ತು. ಅದನ್ನು ‘ವಿಷಯ’ ಎಂದು ಕರೆಯುತ್ತಿದ್ದರು. ಅದರ ಅಧಿಪತಿ ವಿಷಯಪತಿ. ಅವನು ಜಿಲ್ಲಾ ನ್ಯಾಯಾಧೀಶನಾಗಿಯೂ ಕೆಲಸಮಾಡುತ್ತಿದ್ದನು. ಅವನಿಗೆ ಸಲಹೆ ನೀಡಲು ಒಂದು ಸಲಹಾಸಮಿತಿ ಇತ್ತು. ಇದು ಕೆಳಕಂಡವರನ್ನು ಒಳಗೊಂಡಿತ್ತು.

ನಗರ ಶ್ರೇಷ್ಠಿ – ನಗರ ಸಭೆಯ ಅಧ್ಯಕ್ಷ           ಪ್ರಥಮ ಕುಲಿಕ – ಉದ್ದಿಮೆಗಳ ಪ್ರತಿನಿಧಿ

ಸಾರ್ಥವಾಹ – ವಾಣಿಜ್ಯ ಸಂಸ್ಥೆಗಳ ಪ್ರತಿನಿಧಿ      ಪ್ರಥಮ ಕಾಯಸ್ಥ –  ಕರಣಿಕರ ಮುಖ್ಯಸ್ಥ

ನಗರಾಡಳಿತ : ನಗರ ಮುಖ್ಯಸ್ಥ ಪುರಪಾಲ ಅಥವಾ ನಗರ ರಕ್ಷಕನಾಗಿದ್ದ. ನಗರಾಡಳಿತದ ಸಲಹೆಗೆ ಪರಿಷತ್ ಎಂಬ ಸಂಸ್ಥೆಯಿತ್ತು. ಇದು ನಗರಶ್ರೇಷ್ಠಿ ಎಂಬ ಅಧಿಕಾರಿಯನ್ನು ಒಳಗೊಂಡಿತ್ತು.

ಗ್ರಾಮಗಳ ಆಡಳಿತ : ಗ್ರಾಮವು ಆಡಳಿತದ ಕಟ್ಟಕಡೆಯ ಘಟಕವಾಗಿತ್ತು. ಗ್ರಾಮಾಧಿಕಾರಿಯು ಸರ್ಕಾರದಿಂದ ನೇಮಿಸಲ್ಪಡು ತ್ತಿದ್ದನು. ಗ್ರಾಮದ ಆಡಳಿತ ನಿರ್ವಹಣೆಯು ಪಂಚಾಯಿತಿಯ ಮೂಲಕ ನಡೆಯುತ್ತಿತ್ತು.

ನ್ಯಾಯಾಡಳಿತ :

ರಾಜನೇ ರಾಜ್ಯದ ಸರ್ವೋಚ್ಛ ನ್ಯಾಯಾಧೀಶನಾಗಿದ್ದನು. ವಿಶಾಲ ಸಾಮ್ರಾಜ್ಯದ ನ್ಯಾಯಾಡಳಿತವನ್ನು ನೋಡಿಕೊಳ್ಳಲು ಒಬ್ಬನಿಂದಲೇ ಸಾಧ್ಯವಿಲ್ಲದ ಕಾರಣ ಕೇಂದ್ರ ಹಾಗೂ ಪ್ರಾಂತ್ಯಗಳಲ್ಲಿ ಅನೇಕ ಹಿರಿಯ ಅಧಿಕಾರಿಗಳನ್ನು ನ್ಯಾಯಾಧೀಶರನ್ನಾಗಿ ನೇಮಕ ಮಾಡಿಕೊಳ್ಳಲಾಗುತ್ತಿತ್ತು. ಜಿಲ್ಲಾ ಕೇಂದ್ರಗಳಲ್ಲಿ ನ್ಯಾಯಾಧೀಶರಿಗೆ ಶೇಶ್ ಮತ್ತು ಕಾಯಸ್ಥರು ನೆರವಾಗುತ್ತಿದ್ದರು. ಗ್ರಾಮಗಳಲ್ಲಿ ಗ್ರಾಮ ಪಂಚಾಯಿತಿ ನ್ಯಾಯ ತೀರ್ಮಾನ ಮಾಡುತ್ತಿತ್ತು. ಕಾಳಿದಾಸನು ರಾಜನ ರಾಜಧಾನಿಯ ನ್ಯಾಯಾಲಯವನ್ನು ಧರ್ಮಸ್ಥಾನ ಎಂದು ಕರೆದಿದ್ದಾನೆ. ಅಪರಾಧಿಗಳಿಗೆ ಶಿಕ್ಷೆಗಳು ಕಠಿಣವಾಗಿದ್ದವು.

ಮುಕ್ತಾಯ : ಗುಪ್ತರು ತಮ್ಮ ಹಿಂದಿನ ಮೌರ್ಯರ ಆಡಳಿತ ವ್ಯವಸ್ಥೆಯನ್ನು ಅನುಸರಿಸಿದ್ದರು. ಆದರೆ ಸಂದರ್ಭಕ್ಕೆ ತಕ್ಕಂತೆ ಬದಲಾವಣೆಗಳನ್ನು ಮತ್ತು ಸುಧಾರಣೆಗಳನ್ನು ತಂದು ನಾವೀನ್ಯತೆಯನ್ನು ಸಾಧಿಸಿದ್ದು ಕಂಡು ಬರುತ್ತದೆ.

ಗುಪ್ತರ ಅವನತಿಗೆ ಕಾರಣಗಳು

ಗುಪ್ತರ ಅವನತಿಗೆ ಕಾರಣಗಳು

ಎರಡನೆಯ ಚಂದ್ರಗುಪ್ತನ ನಂತರ ಕುಮಾರಗುಪ್ತ, ಸ್ಕಂದಗುಪ್ತ ಕ್ರಮವಾಗಿ ರಾಜ್ಯವಾಳಿದರು. ಸ್ಕಂದಗುಪ್ತನ ನಂತರ ಗುಪ್ತರಾಜ್ಯ ಅವನತಿಯ ಹಾದಿಯನ್ನು ಹಿಡಿಯಿತು. ಈ ವಂಶದ ಕೊನೆಯ ದೊರೆ ವಿಷ್ಣುಗುಪ್ತ ಕ್ರಿ.ಶ. 570ರವರೆಗೆ ಆಳಿದನು. ಅನಂತರ ಹೂಣರ ದಾಳಿಗೆ ಸಿಕ್ಕ ಗುಪ್ತರಾಜ್ಯ ನಲುಗಿತು. ಹೂಣರ ನಾಯಕರಾದ ತೋರಮಾನ ಹಾಗೂ ಮಿಹಿರಗುಲರು ಗುಪ್ತರ ವಂಶವನ್ನು ನಿರ್ನಾಮಗೊಳಿಸಿದರು. ಗುಪ್ತರ ಅವನತಿಗೆ ಕಾರಣವಾದ ಅಂಶಗಳನ್ನು ಈ ಕೆಳಗಿನಂತೆ ಪಟ್ಟಿಮಾಡಬಹುದು.

1) ಅಸಮರ್ಥ ಉತ್ತರಾಧಿಕಾರಿಗಳು : ಸ್ಕಂದಗುಪ್ತನ ನಂತರ ಬಂದ ಅವನ ಉತ್ತರಾಧಿಕಾರಿಗಳು ವಿಶಾಲವಾದ ಗುಪ್ತ ಸಾಮ್ರಾಜ್ಯವನ್ನು ರಕ್ಷಿಸುವ ಸಾಮರ್ಥ್ಯವುಳ್ಳವರಾಗಿರಲಿಲ್ಲ. ಪುರಗುಪ್ತ, ನರಸಿಂಹಗುಪ್ತ, ಕುಮಾರಗುಪ್ತ ಹಾಗೂ ಬುದ್ಧಗುಪ್ತರು ದುರ್ಬಲ ದೊರೆಗಳಾಗಿದ್ದು ಗುಪ್ತ ಸಾಮ್ರಾಜ್ಯದ ವರ್ಚಸ್ಸಿಗೆ ಧಕ್ಕೆ ತಂದರಲ್ಲದೆ ಹಿಂದಿನ ಅರಸರಂತೆ ಕ್ಷಾತ್ರತೇಜಸ್ಸು, ಆಕರ್ಷಕ ವ್ಯಕ್ತಿತ್ವ ಹಾಗೂ ಶಕ್ತಿಯನ್ನು ಹೊಂದಿರಲಿಲ್ಲ. ಇಂತಹ ಗುಣಲಕ್ಷಣಗಳಿಲ್ಲದ ರಾಜರು ಅಧಿಕಾರಕ್ಕೆ ಬಂದದ್ದೇ ಗುಪ್ತ ಸಾಮ್ರಾಜ್ಯದ ಅವನತಿಗೆ ಕಾರಣವಾಯಿತು.

2) ಉತ್ತರಾಧಿಕಾರದ ಸ್ಪರ್ಧೆ: ರಾಜತ್ವ ವಂತಪಾರಂಪರ್ಯವಾಗಿದ್ದರೂ ಗುಪ್ತರ ಕಾಲದಲ್ಲಿ ಅದು ನಿರ್ದಿಷ್ಟ ನೀತಿ ನಿಯಮಗಳನ್ನು ಹೊಂದಿರಲಿಲ್ಲ. ರಾಜ ಸತ್ತ ನಂತರ ಅವನ ಮಕ್ಕಳಲ್ಲಿ ಉತ್ತರಾಧಿಕಾರಕ್ಕಾಗಿ ಅಂತಃಕಲಹಗಳು ಆರಂಭವಾಗುತ್ತಿದ್ದವು. ಖಡ್ಗಬಲವೇ ಸಿಂಹಾಸನದ ಹಕ್ಕನ್ನು ಪ್ರತಿಪಾದಿಸುತ್ತಿದ್ದುದರಿಂದ ಅಲ್ಲಿ ರಾಜತ್ವಕ್ಕೆ ಬೆಲೆ ಇರಲಿಲ್ಲ. ಈ ರೀತಿಯ ಆಂತರಿಕ ಹೋರಾಟಗಳು ಗುಪ್ತ ಸಾಮ್ರಾಜ್ಯವನ್ನು ಬಲಹೀನಗೊಳಿಸಿದವಲ್ಲದೆ ಅನ್ಯರಿಗೆ ದಾರಿಮಾಡಿಕೊಟ್ಟವು.

3) ಬೌದ್ಧ ಧರ್ಮದ ಪ್ರಭಾವ : ಗುಪ್ತ ಸಾಮ್ರಾಟರಾದ ಬಲಾದಿತ್ಯ ಹಾಗೂ ಬುದ್ಧ ಗುಪ್ತರು ಬೌದ್ಧ ಧರ್ಮವನ್ನು ಸ್ವೀಕರಿಸಿದ್ದರಿಂದ ಅವರ ಸೈನಿಕರು ಅಹಿಂಸಾ ಧರ್ಮವನ್ನು ಪಾಲಿಸಿದರು. ಪರಿಣಾಮವಾಗಿ ಯುದ್ಧದ ಸಮಯದಲ್ಲಿ ಸೈನಿಕರ ಮೇಲೆ ಈ ಅಹಿಂಸಾ ನೀತಿ ನಕಾರಾತ್ಮಕ ಪರಿಣಾಮವನ್ನು ಬೀರಿತು. ಹೂಣರು ಗುಪ್ತ ಸಾಮ್ರಾಜ್ಯದ ವಿರುದ್ಧ ಯುದ್ಧ ಘೋಷಿಸಿದಾಗ ಅಲ್ಲಿನ ಸೈನಿಕರು ಸಮರ್ಥವಾಗಿ ವೈರಿಗಳನ್ನು ಎದುರಿಸಲಿಲ್ಲವಾದ್ದರಿಂದ ಸಾಮ್ರಾಜ್ಯ ಅವನತಿಯನ್ನು ಹೊಂದಿತು.

4) ಗಡಿಭಾಗಗಳ ನಿರ್ಲಕ್ಷತೆ : ಸ್ಕಂದಗುಪ್ತನ ನಂತರ ಬಂದ ದೊರೆಗಳು ತಮ್ಮ ರಾಜ್ಯದ ಗಡಿಭಾಗಗಳ ರಕ್ಷಣೆಯನ್ನು ನಿರ್ಲಕ್ಷಿಸಿದರು. ಹೀಗಾಗಿ ವಿದೇಶಿ ದಾಳಿಕಾರರು ಅದರಲ್ಲೂ ಹೂಣರು ಯಾರ ಹೆದರಿಕೆಯಿಲ್ಲದೆ ಗುಪ್ತ ಸಾಮ್ರಾಜ್ಯದ ಮಧ್ಯಭಾಗದವರೆಗೂ ದಾಳಿ ಮಾಡಿ ದೇಶದೊಳಗೆ ಸುಲಭವಾಗಿ ಪ್ರವೇಶಿಸಿದರು. ಇದರಿಂದ ಪ್ರೇರಿತರಾದ ಇನ್ನಿತರ ದಾಳಿಕಾರರೂ ಸಹ ಗುಪ್ತಸಾಮ್ರಾಜ್ಯದ ಗಡಿಭಾಗ ಸುರಕ್ಷಿತವಲ್ಲ ಎಂಬುದನ್ನು ಗಮನಿಸಿ ತಾವು ರಾಜ್ಯದೊಳಗೆ ನುಸುಳಿದರು. ಹೀಗೆ ಒಬ್ಬರ ನಂತರ ಒಬ್ಬರಂತೆ ಬಂದ ವಿದೇಶಿ ದಾಳಿಕಾರರನ್ನು ಗುಪ್ತರು ಎದುರಿಸದ ಕಾರಣ ಸಾಮ್ರಾಜ್ಯ ಪತನಗೊಂಡಿತು.

5) ಸೈನಿಕ ಅಸಾಮರ್ಥ್ಯ : ಆರಂಭದ ಗುಪ್ತ ಅರಸರು ಸದಾ ಯುದ್ಧ ಚಟುವಟಿಕೆಗಳಲ್ಲಿ ತೊಡಗುತ್ತಿದ್ದುದರಿಂದ ಅವರ ಸೈನ್ಯ ಅತ್ಯಂತ ಬಲಿಷ್ಠವಾಗಿದ್ದಿತು. ಹೀಗಾಗಿ ಅವರು ಕೈಗೊಳ್ಳುತ್ತಿದ್ದ ಎಲ್ಲಾ ಯುದ್ಧಗಳಲ್ಲಿ ಜಯವನ್ನು ಸಾಧಿಸುತ್ತಿದ್ದರು. ಸ್ಕಂದಗುಪ್ತನ ನಂತರ ಅಧಿಕಾರಕ್ಕೆ ಬಂದ ದೊರೆಗಳ ಕಾಲದಲ್ಲಿ ರಾಜ್ಯವು ಶಾಂತಿ, ಸುಭಿಕ್ಷೆಯಿಂದಿದ್ದುದರಿಂದ ಜನರು ಆರ್ಥಿಕವಾಗಿ ಶ್ರೀಮಂತರಾಗಿ ವಿಲಾಸ ಜೀವನವನ್ನು ನಡೆಸಲಾರಂಭಿಸಿದರು. ಸೈನಿಕರು ಸಹ ದೀರ್ಘಾವಧಿಯವರೆಗೆ ಯುದ್ಧಗಳಲ್ಲಿ ಭಾಗವಹಿಸದಿದ್ದುದರಿಂದ ಅವರಲ್ಲಿ ಜಡತ್ವ ಉಂಟಾಗಿ ತರಬೇತಿಯಿಲ್ಲದೆ ಸಾಮರ್ಥ್ಯ ಕುಸಿಯಿತು. ಇಂತಹ ಸಂದರ್ಭದಲ್ಲಿ ಹೂಣರು ಗುಪ್ತ ಸಾಮ್ರಾಜ್ಯದ ಮೇಲೆ ದಾಳಿ ಮಾಡಿದಾಗ ಸೈನಿಕರು ಅಸಾಮರ್ಥ್ಯವನ್ನು ಪ್ರದರ್ಶಿಸಿದರು. ಇದು ವೈರಿಗಳ ವಿಜಯಕ್ಕೆ ಕಾರಣವಾಯಿತು.

6) ವಿಶಾಲ ಸಾಮ್ರಾಜ್ಯ : ಸಮುದ್ರಗುಪ್ತನ ಅಧಿಕಾರಾವಧಿಯಲ್ಲಿ ಗುಪ್ತ ಸಾಮ್ರಾಜ್ಯ ಬಹಳ ವಿಶಾಲವಾಗಿದ್ದಿತು. ಆದರೂ ಅವನು ವಿಶಾಲ ಸಾಮ್ರಾಜ್ಯವನ್ನು ದಕ್ಷತೆಯಿಂದ ಆಳಿದ ನಿದರ್ಶನವು ಉಂಟು. ಈತನ ನಂತರ ಬಂದ ರಾಜಕುಮಾರರಿಗೆ ವಿಶಾಲ ಸಾಮ್ರಾಜ್ಯವನ್ನು ಆಳುವ ಶಕ್ತಿ ಇರಲಿಲ್ಲ. ಸಾರಿಗೆ ಸಂಪರ್ಕಗಳಿಲ್ಲದ ಆ ಕಾಲದಲ್ಲಿ ಬೃಹತ್ ಸಾಮ್ರಾಜ್ಯವನ್ನು ಕೇಂದ್ರದ ಹಿಡಿತಕ್ಕೆ ತರುವುದು ಬಹಳ ಕಷ್ಟವಾಯಿತು. ದೂರದ ಗಡಿಭಾಗದ ಅರಸರು ದಂಗೆಯೆದ್ದಾಗ ಗುಪ್ತ ಸೈನ್ಯವು ಆ ಪ್ರದೇಶವನ್ನು ತಲುಪುವಷ್ಟರಲ್ಲೇ ಅವರು ಸ್ವಾತಂತ್ರ್ಯವನ್ನು ಘೋಷಿಸಿಕೊಳ್ಳುತ್ತಿದ್ದರು. ಹೀಗಾಗಿ ಸಾಮ್ರಾಜ್ಯದ ವಿಶಾಲತೆಯು ಸಹ ಗುಪ್ತರ ಅವನತಿಗೆ ಕಾರಣವಾಯಿತು.

7) ಆರ್ಥಿಕ ದುಸ್ಥಿತಿ : ಸ್ಕಂದಗುಪ್ತ ಹಾಗೂ ಕುಮಾರಗುಪ್ತರ ಕಾಲದಲ್ಲಿ ಹೂಣರು ಪದೇ ಪದೇ ಗುಪ್ತರ ವಿರುದ್ಧ ದಂಡಯಾತ್ರೆ ಕೈಗೊಳ್ಳುತ್ತಿದ್ದುದರಿಂದಾಗಿ ಅವರ ಖಜಾನೆ ಪೂರ್ತಿ ಖಾಲಿಯಾಯಿತು. ಇದನ್ನು ಸ್ಕಂದಗುಪ್ತ ಹೊರಡಿಸಿದ ಚಿನ್ನದ ನಾಣ್ಯಗಳಲ್ಲಿ ಚಿನ್ನದ ಅಂಶ ಕಡಿಮೆಯಾಗಿರುವುದು ಹಾಗೂ ಚಿನ್ನದ ನಾಣ್ಯಗಳಲ್ಲಿ ವಿವಿಧ ಲೋಹಗಳನ್ನು ಮಿಶ್ರಣ ಮಾಡಿರುವುದರಿಂದ ತಿಳಿದುಕೊಳ್ಳಬಹುದು. ಹೀಗೆ ಸಾಮ್ರಾಜ್ಯದಲ್ಲಿ ಉಂಟಾದ ಆರ್ಥಿಕ ಬಿಕ್ಕಟ್ಟು ರಾಜ್ಯದ ದೈನಂದಿನ ಆಡಳಿತಕ್ಕೆ ತಡೆನ್ನೊಡ್ಡಿತು.

8) ಹೂಣರ ದಾಳಿ : ಗುಪ್ತ ಸಾಮ್ರಾಜ್ಯದ ಅವನತಿಗೆ ಹೂಣರ ದಾಳಿಯೇ ಕಾರಣವಾಯಿತು ಎಂದು ಅನೇಕ ವಿದ್ವಾಂಸರು ಹೇಳಿದ್ದಾರೆ. ಸ್ಕಂದಗುಪ್ತನ ಮರಣದ ನಂತರ ಗುಪ್ತ ದೊರೆಗಳಲ್ಲಿ ಆಂತರಿಕ ಕಲಹ ಉಂಟಾಯಿತು. ಇಂತಹ ಸಂದರ್ಭದಲ್ಲಿ ಹೂಣರ ನಾಯಕರಾದ ತೋರಮಾನ ಮತ್ತು ಮಿಹಿರಕುಲರು ಗುಪ್ತರ ಮೇಲೆ ದಾಳಿ ಮಾಡಿ ಅವರನ್ನು ಸೋಲಿಸುವ ಮೂಲಕ ತಮ್ಮ ಪ್ರಾಬಲ್ಯವನ್ನು ಮೆರೆದರು. ಇದು ಗುಪ್ತ ಸಾಮ್ರಾಜ್ಯದ ದುರ್ಬಲತೆಗೆ ಕಾರಣವಾಯಿತು.

9) ಯಶೋವರ್ಮನ ದಾಳಿ : ಗುಪ್ತ ಸಾಮ್ರಾಜ್ಯದ ಅವನತಿಗೆ ಯಶೋವರ್ಮನಂತಹ ಮಹತ್ವಾಕಾಂಕ್ಷಿ ದೊರೆ ಕಾರಣನಾದನು. ಈತ ಗುಪ್ತ ಸಾಮ್ರಾಜ್ಯದ ಸಾರ್ವಭೌಮತ್ವವನ್ನು ಲೆಕ್ಕಿಸದೆ ಸ್ವತಂತ್ರರಾಜನಾಗಿ ತನ್ನ ಸಾಮ್ರಾಜ್ಯವನ್ನು ವಿಸ್ತಾರಗೊಳಿಸಲು ಮುಂದಾದನು. ಹೀಗೆ ಯಶೋವರ್ಮನಿಂದ ಉಂಟಾದ ದಾಳಿಯಿಂದ ಗುಪ್ತ ಸಾಮ್ರಾಜ್ಯ ಅವನತಿಯನ್ನು ಕಂಡಿತು.

10) ಪುಷ್ಯಮಿತ್ರರ ನಡುವಣ ಹೋರಾಟ : ಚಂದ್ರಗುಪ್ತನು ಪುಷ್ಯಮಿತ್ರರೊಡನೆ ಸ್ನೇಹಪೂರ್ವಕವಾದ ಸಂಬಂಧವನ್ನು ಹೊಂದಿದ್ದನು. ಆದರೆ ಕುಮಾರ ಗುಪ್ತನ ಕಾಲದಲ್ಲಿ ಈ ಸಂಬಂಧ ಹದಗೆಟ್ಟಿತು. ಹೀಗಾಗಿ ಪುಷ್ಯಮಿತ್ರರು ಕುಮಾರ ಗುಪ್ತನ ಮಗನನ್ನೇ ಸೆರೆಹಿಡಿದು ಅವನ ಮೇಲಿನ ಸೇಡು ತೀರಿಸಿಕೊಂಡರು. ಈ ರೀತಿಯ ವೈರತ್ವ ಗುಪ್ತ ಸಾಮ್ರಾಜ್ಯದ ಅವನತಿಗೆ ಕಾರಣವಾಯಿತು.

11) ವಾಕಟಾಕರ ಬಗೆಗಿನ ನೀತಿ :

ತಮ್ಮ ಪಕ್ಷದಲ್ಲಿಯೇ ವಾಕಟಾಕರು ಪ್ರಬಲ್ಯಕ್ಕೆ ಬರುತ್ತಿರುವುದನ್ನು ಗುಪ್ತರು ಗಮನಿಸದೇ ಹೋದುದು ಅವರ ಅವನತಿಗೆ ಮತ್ತೊಂದು ಕಾರಣವಾಯಿತು. ಗುಪ್ತರು ವಾಕಟಾಕರೊಂದಿಗೆ ವೈವಾಹಿಕ ಸಂಬಂಧವನ್ನು ಹೊಂದಿ ಅವರ ಪ್ರಾಬಲ್ಯಕ್ಕೆ ಗುಪ್ತರು ಕಾರಣರಾದರು. ಗುಪ್ತರು ಇವರ ವಿರುದ್ಧ ಯಾವುದೇ ಕ್ರಮಗಳನ್ನು ಕೈಗೊಳ್ಳಲಿಲ್ಲ. ಹೀಗಾಗಿ ನರೇಂದ್ರಸೇನ ಹಾಗೂ ಹರಿಸೇನರು ಗುಪ್ತರ ಮೇಲೆ ದಾಳಿ ಮಾಡಿ ಗುಪ್ತರ ಅವನತಿಗೆ ಕಾರಣರಾದರು.

12) ಊಳಿಗ ಮಾನ್ಯ ಪದ್ಧತಿ :

ಗುಪ್ತರು ಜಾರಿಗೆ ತಂದಿದ್ದ ಊಳಿಗಮಾನ್ಯ ಪದ್ಧತಿಯ ಪರಿಣಾಮವಾಗಿ ಜಮೀನುದಾರ ವರ್ಗವೊಂದು ತಲೆ ಎತ್ತಿತು. ಅದು ಅವರ ಸ್ವತಂತ್ರ ಪ್ರವೃತ್ತಿಗೆ ಕಾರಣವಾಗಿ ಗುಪ್ತ ಸಂತತಿ ಕ್ರಮೇಣ ಅವನತಿ ಹೊಂದಲಾರಂಭಿಸಿತು. ಬ್ರಾಹ್ಮಣರಿಗೆ ಶಾಶ್ವತವಾದ ಭೂಮಿಗಳನ್ನು ನೀಡಿದ್ದು, ತೆರಿಗೆರಹಿತ ಭೂ ಹಿಡುವಳಿ ದಯಪಾಲಿಸಿದ್ದು ಹಾಗೂ ಅಧಿಕಾರವನ್ನು ಶಾಶ್ವತವಾಗಿ ನೀಡುದುದರಿಂದ ಗುಪ್ತ ಸಾಮ್ರಜ್ಯ ತನ್ನ ಹಿಡಿತವನ್ನು ಕಳೆದುಕೊಂಡಿತು. ಈ ಪದ್ಧತಿ ಹರ್ಷನ ಕಾಲದವರೆಗೆ ಮುಂದುವರೆಯಿತು. ಸರ್ಕಾರಿ ಅಧಿಕಾರಿಗಳ ಖರ್ಚು ವೆಚ್ಚಗಳಿಗಾಗಿ 1/4 ಭಾಗದಷ್ಟು ರಾಜ್ಯಾದಾಯವನ್ನು ಮೀಸಲಾಗಿಡಲಾಯಿತು. ರಾಜ್ಯಪಾಲರು, ದಂಡಾಧಿಕಾರಿಗಳು, ಭೂ ಮಾಲಿಕರು ಹಾಗೂ ಮಂತ್ರಿಗಳು ಭೂಮಿಗಳನ್ನು ಪಡೆದು ಸರ್ಕಾರಕ್ಕೆ ಮೋಸ ಮಾಡುತ್ತಿದ್ದುದು ಗುಪ್ತರ ಅವನತಿಗೆ ಕಾರಣವಾಯಿತು.

13) ವಿದೇಶಾಂಗ ನೀತಿ

ಗುಪ್ತರ ಆರಂಭದಲ್ಲಿ ತಮ್ಮ ದೂರದೃಷ್ಟಿ ನೀತಿಯಿಂದಾಗಿ ನೆರೆಹೊರೆ ರಾಜ್ಯಗಳೊಂದಿಗೆ ವೈವಾಹಿಕ ಸಂಬಂಧವನ್ನು ಬೆಳಸಿಕೊಂಡಿದ್ದರು. ಪರಿಣಾಮವಾಗಿ ಅವುಗಳ ನಡುವಿನ ಸಂಬಂಧ ಗಟ್ಟಿಯಾಗಿದ್ದಿತು. ದಿನಗಳೆದಂತೆ ಗುಪ್ತರು ವೈವಾಹಿಕ ಸಂಬಂಧವನ್ನು ನಿಲ್ಲಿಸಿಬಿಟ್ಟರು. ಇದರಿಂದ ಗುಪ್ತರ ಪ್ರಾಬಲ್ಯಕ್ಷೀಣಿಸಲಾರಂಭಿಸಿತು.

14) ಗೌರ್ನರುಗಳ ಮಹಾತ್ವಾಕಾಂಕ್ಷೆ

ಗುಪ್ತರು ತಮ್ಮ ವಿಶಾಲ ಸಾಮ್ರಾಜ್ಯವನ್ನು ಆಡಳಿತದ ಅನುಕೂಲಕ್ಕಾಗಿ ಹಲವಾರು ಪ್ರಾಂತಗಳನ್ನಾಗಿ ವಿಂಗಡಿಸಿ ಅವುಗಳನ್ನು ಗೌರ್ನರುಗಳ ಕೈಗೆ ನೀಡಿದರು. ಆಸೆಬುರುಕ ಗೌರರುಗಳು ತಮ್ಮ ಅಧಿಕಾರಾವಧಿಯಲ್ಲಿ ಭ್ರಷ್ಟಾಚಾರದಲ್ಲಿ ತೊಡಗಿ ಇಡೀ ಸಾಮ್ರಾಜ್ಯವನ್ನು ಅವನತಿಯತ್ತ ಕೊಂಡೊಯ್ದರು.

15) ಸಾಂಸ್ಕೃತಿಕ ಪ್ರಗತಿ

ಕಲೆ ಸಾಹಿತ್ಯದಲ್ಲಿ ಪ್ರಗತಿಯಾದಂತೆ ಗುಪ್ತರ ಕಾಲದ ಪ್ರಜೆಗಳು ಹಾಗೂ ಯುವರಾಜರು ವಿಲಾಸ ಜೀವನದಲ್ಲಿ ಮಗ್ನರಾದರು. ಅಸಮರ್ಥ ದೊರೆಗಳ ಕಾಲದಲ್ಲಿಯೂ ಈ ವಿಲಾಸ ಜೀವನ ಮುಂದುವರೆಯಿತು. ಜನ ಸೋಮಾರಿಗಳಾಗಿ ತಮ್ಮ ಕ್ಷಾತ್ರಗುಣಗಳನ್ನು ಕಳೆದುಕೊಂಡು ಯುದ್ಧ ಸಮಯದಲ್ಲಿ ಉದ್ದೇಶಪೂರಕವಾಗಿ ಸೋಲನುಭವಿಸಲಾರಂಭಿಸಿದರು. ಇದು ಗುಪ್ತ ಸಾಮ್ರಾಜ್ಯದ ಏಳಿಗೆಗೆ ಹೊಡೆತಕೊಟ್ಟಿತು.