ಮೊಗಲ್ ಸಾಮ್ರಾಜ್ಯದ ಸ್ಥಾಪನೆ ಮತ್ತು ಬಾಬರ್

ಮೊಗಲ್ ಸಾಮ್ರಾಜ್ಯದ ಸ್ಥಾಪನೆ ಮತ್ತು ಬಾಬರ್

ಭಾರತದಲ್ಲಿ ಮೊಗಲ್ ಸಾಮ್ರಾಜ್ಯದ ಸ್ಥಾಪಕನಾದ ಬಾಬರ್‌ನು ಆ ಮೊಗಲ್ ಸಾಮ್ರಾಜ್ಯಕ್ಕೆ ಭದ್ರವಾದ ಮತ್ತು ಶಾಶ್ವತವಾದ ಬುನಾದಿಯನ್ನು ಹಾಕಿದ ಕೀರ್ತಿಗೆ ಪಾತ್ರನಾಗಿದ್ದಾನೆ. ಅವನು ಮೊಗಲ್ ಸಾಮ್ರಾಜ್ಯದ ಸ್ಥಾಪನೆಗೆ ಮಾಡಿದ ಮಹತ್ ಸಾಧನೆಗಳು ಚಿರಸ್ಮರಣೀಯವಾಗಿವೆ.

ಬಾಬರನು ತಂದೆಯ ಕಡೆಯಿಂದ ಭಾರತದ ಮೇಲೆ ಕ್ರೂರ ಧಾಳಿಯನ್ನು ನಡೆಸಿದ ತೈಮೂರನ ಐದನೆಯ ತಲೆಮಾರಿನವನು, ತಾಯಿ ಕಡೆಯಿಂದ ಮಹಾನ್ ಸಾಮ್ರಾಜ್ಯ ಸ್ಥಾಪಕವಾದ ಚಂಗೀಸ್ ಖಾನನ ಐದನೇ ವಂಶಸ್ಥ, ಈ ಎರಡೂ ವಂಶಸ್ಥರ ಗುಣಗಳು ಬಾಬರನಲ್ಲಿದ್ದವು.

ಬಾಬರನ ಪ್ರಾರಂಭದ ಜೀವನ : ಬಾಬರ್ ಕ್ರಿ.ಶ. 1483 ಫೆಬ್ರವರಿ 14ರಂದು ಫರಘಾನದಲ್ಲಿ ಜನಿಸಿದನು. ಈತನ ತಂದೆ ಉಮರ್‌ ಷೇಖ್ ಮಿರ್ಜಾ. ತಾಯಿ ಕುತ್ತುಗ್ ನಿಗ್ ಖನುಂ, ಬಾಬರ್‌ನ ತಂದೆಯು ಟ್ರಾನ್ಸ್-ಆಕ್ಸಿಯಾನದಲ್ಲಿನ ಫ‌ರ್ ಘಾನ ಎಂಬ ಸಣ್ಣ ರಾಜ್ಯದ ಅರಸನಾಗಿದ್ದನು. ಕ್ರಿ.ಶ. 1494ರಲ್ಲಿ ಬಾಬರ್‌ನ ತಂದೆ ಮರಣ ಹೊಂದಿದಾಗ, ಆಗ ಇನ್ನೂ ಹನ್ನೊಂದು ವರ್ಷದ ಬಾಲಕನಾಗಿದ್ದ ಬಾಬರ್ ಫರ್ಫಾನದ ಸಿಂಹಾಸನವನ್ನೇರಿದನು. ತದನಂತರ ಸಮರ್ ಖಂಡವನ್ನು ಪ್ರಬಲ ಹೋರಾಟ ನಡೆಸಿ ವಶಪಡಿಸಿಕೊಂಡನು.

ಆದರೆ ಈ ಮಧ್ಯೆ ಅನಾರೋಗ್ಯದಿಂದ ಹಾಸಿಗೆ ಹಿಡಿದ ಬಾಬರ್‌ನು ಸತ್ತನೆಂದು ಸುಳ್ಳುಸುದ್ದಿಯನ್ನು ಬಾಬರನ ಸಂಬಂಧಿಕರು ಹಾಗೂ ಮಂತ್ರಿಗಳು ಫರ್ಘಾನದಲ್ಲಿ ಹರಡಿ, ಬಾಬರನ ಸಹೋದರನಾದ ಜಹಾಂಗೀರನನ್ನು ಅಧಿಕಾರಕ್ಕೆ ತಂದರು. ಕಾಯಿಲೆಯಿಂದ ಚೇತರಿಸಿಕೊಂಡು ಬಾಬ‌ನನು ಫರ್‌ ಘಾನವನ್ನು ಪುನಃ ವಶಪಡಿಸಿಕೊಳ್ಳಲು ಮಾಡಿದ ಯತ್ನ ವಿಫಲವಾಯಿತು. ಬಾಬರ್‌ನು ಮರಳಿ ಸಮರ್ ಖಂಡಕ್ಕೆ ತೆರಳುವಷ್ಟರಲ್ಲಿ ಆ ನಗರವೂ ಸಹ ಆತನ ಹತೋಟಿಯಿಂದ ತಪ್ಪಿ ಹೋಗಿತ್ತು.

ಫರ್‌ಫಾನ ಮತ್ತು ಸಮರ್ ಖಂಡಗಳನ್ನು ಕಳೆದುಕೊಂಡು ರಾಜಭ್ರಷ್ಟನಾದ ಬಾಬರ್‌ನು ಅಲೆಮಾರಿ ಜೀವನದ ಕಷ್ಟನಷ್ಟಗಳನ್ನು ಅನುಭವಿಸಿ, ಆ ಕಷ್ಟನಷ್ಟಗಳ ಶಾಲೆಯಲ್ಲಿ ತರಬೇತಿ ಹೊಂದಿ, ತನ್ನ ಮುಂದಿನ ಜೀವನವನ್ನು ಉಜ್ವಲಗೊಳಿಸುವಲ್ಲಿ ಯಶಸ್ವಿಯಾದನು. ಕ್ರಿ.ಶ. 1504 ರಲ್ಲಿ ಬಾಬರ್‌ನು ಕಾಬೂಲನ್ನು ಜಯಿಸಿಕೊಂಡ ಪರಿಣಾಮವಾಗಿ ಈತನ ಅಲೆಮಾರಿ ಜೀವನ ಅಂತ್ಯಗೊಂಡಿತು. ಕ್ರಿ.ಶ. 1507ರಲ್ಲಿ ಪಾದಶಹ (ಸಾಮ್ರಾಟ) ಎಂಬ ಬಿರುದನ್ನು ಧರಿಸಿದನು. ಕ್ರಿ.ಶ. 1508ರಲ್ಲಿ ಬಾಬರ್‌ನ ಹಿರಿಯ ಪುತ್ರ ಹುಮಾಯೂನ್ ಜನಿಸಿದನು.

ಭಾರತದಲ್ಲಿ ಬಾಬರನ ಆಕ್ರಮಣ : ಭಾರತದಲ್ಲಿನ ಆಗಾಧ ಸಂಪತ್ತು ಬಾಬರನ ಧಾಳಿಯ ಆಸೆಯನ್ನು ಕೆರಳಿಸಿತು. ಕ್ರಿ.ಶ. 1505 ರಲ್ಲಿ ಬಾಬರನು ಸಿಂಧೂ ನದಿಯವರೆಗಿನ ಭಾರತದ ಗಡಿ ಪ್ರದೇಶದಲ್ಲಿ ಆಕ್ರಮಣವೆಸಗಿದನು. ಕ್ರಿ.ಶ.1519 ರಲ್ಲಿ ಸಿಂಧೂನದಿಯನ್ನು ದಾಟಿ, ಪಂಜಾಬಿನ ವಾಯುವ್ಯ ಭಾಗವನ್ನು ಆಕ್ರಮಿಸಿದನು.

ಕ್ರಿ.ಶ. 1524 ರಲ್ಲಿ ಬಾಬರನಿಗೆ ಒಂದು ಒಳ್ಳೆಯ ಅವಕಾಶ ಒದಗಿತು. ಪಂಜಾಬಿನ ದೌಲತ್ ಖಾನ್ ಮತ್ತು ಇಬ್ರಾಹಿಂಲೋದಿಯ ಚಿಕ್ಕಪ್ಪನಾದ ಅಲಂಖಾನ್ ಇವರು ಭಾರತದ ಮೇಲೆ ದಾಳಿಯಿಡುವಂತೆ ಬಾಬರನನ್ನು ಆಮಂತ್ರಿಸಿದರು. ಬಾಬರನು ಕ್ರಿ.ಶ. 1524 ರಲ್ಲಿ ಪಂಜಾಬನ್ನು ಪ್ರವೇಶಿಸಿ ಲಾಹೋರನ್ನು ಆಕ್ರಮಿಸಿದನು. ಹಿಂದೂಸ್ಥಾನದಲ್ಲಿ ಶಾಶ್ವತ ರಾಜ್ಯ ಸ್ಥಾಪನೆಯ ಗುರಿಹೊಂದಿರುವುದನ್ನು ಕಂಡು ದೌಲತ್ ಖಾನ್ ಮತ್ತು ಅಲಂಖಾನರು ಬಾಬರನ ವಿರೋಧಿಗಳಾದರು. ಬಾಬರನು ಕಾಬೂಲಿಗೆ ಹಿಂತಿರುಗಿ ತನ್ನ ಸೈನಿಕ ಬಲವನ್ನು ಹೆಚ್ಚಿಸಿಕೊಂಡನು. ಕ್ರಿ.ಶ. 1525 ರಲ್ಲಿ ಬಾಬರನು ಪಂಜಾಬನ್ನು ಆಕ್ರಮಿಸಿ ದೌಲತ್ ಖಾನನ ಶರಣಾಗತಿಯನ್ನು ಪಡೆದನು. ಅನಂತರ ಇಬ್ರಾಹಿಂಲೋದಿಯನ್ನು ಎದುರಿಸಲು ಪಂಜಾಬಿನಿಂದ ಪಾಣೀಪತ್ ರಣಾಂಗಣಕ್ಕೆ ಸೈನ್ಯಸಮೇತ ಸಾಗಿದನು.

ಪಾಣಿಪತ್‌ ಕದನ (1526 ಏಪ್ರಿಲ್‌ 21)  : ಕ್ರಿ.ಶ. 1526 ಏಪ್ರಿಲ್‌ 21 ರಂದು ಬಾಬರ್‌ ಮತ್ತು ದೆಹಲಿಯ ಇಬ್ರಾಹಿಂಲೋದಿ ನಡುವೆ ನಡೆದ ಮೊದಲನೇ ಪಾಣೀಪತ್ ಕದನಕ್ಕೆ ಕೆಳಗಿನ ಕಾರಣಗಳಿವೆ.

  1. ಬಾಬರನು ಯುದ್ಧಪ್ರಿಯ ಮತ್ತು ಮಹಾಪರಾಕ್ರಮಿಯಾಗಿದ್ದನು. ಕಾಬೂಲಿನ ದೊರೆಯಾಗಿ ಹಲವು ವರ್ಷಗಳ ಕಾಲ ಆಡಳಿತ ನಡೆಸಿದರು, ಅವನ ಮಹತ್ವಾಕಾಂಕ್ಷೆ ಭಾರತದಲ್ಲಿ ಮೊಗಲ್ ಸಾಮ್ರಾಜ್ಯವನ್ನು ಸ್ಥಾಪಿಸುವುದಾಗಿತ್ತು.
  2. ಭಾರತದ ಪ್ರಸಿದ್ದಿ ಮತ್ತು ಉತ್ಕೃಷ್ಟತೆ ಬಾಬರನಿಗೆ ಮೊಘಲ್ ಸಾಮ್ರಾಜ್ಯ ಸ್ಥಾಪಿಸಲು ಪೋಷಕವಾದವು. ಇವುಗಳು ಅವನ ಹೆಬ್ಬಯಕೆಗೆ ಪ್ರೇರಕ ಶಕ್ತಿಗಳಾಗಿ ಪರಿಣಮಿಸಿದವು.
  3. ಕ್ರಿ.ಶ. 1526ರ ಮೊದಲನೇ ಪಾಣಿಪತ್ ಕದನಕ್ಕಿಂತ ಪೂರ್ವದಲ್ಲಿ ಬಾಬರನು ಮಾಡಿದ ಕ್ರಿ.ಶ. 1519, ಕ್ರಿ.ಶ. 1520, ಕ್ರಿ.ಶ. 1524ರ ದಂಡಯಾತ್ರೆಗಳು ಭಾರತದ ಕಡೆ ಸಾಗಲು ದಾರಿಯನ್ನು ಸುಗಮಗೊಳಿಸಿದವು.
  4. ಬಾಬರನ ಕಾಲಕ್ಕೆ ಉತ್ತರ ಭಾರತದ ರಾಜಕೀಯ ಪರಿಸ್ಥಿತಿಯು ತುಂಬಾ ಹದಗೆಟ್ಟಿತ್ತು. ಮಾಳವ, ಗುಜರಾತ್, ರಜಪೂತ ಮೊದಲಾದ ರಾಜರುಗಳಲ್ಲಿ ಆಗಾಗ್ಗೆ ಯುದ್ಧಗಳಾಗುತ್ತಿದ್ದವು. ಉತ್ತರ ಭಾರತದಲ್ಲಿ ರಾಜಕೀಯ ಐಕ್ಯಮತ್ಯವಿಲ್ಲದ್ದು ಭಾರತದ ಮೇಲೆ ದಾಳಿ ಮಾಡಲು ಮತ್ತು ಭಾರತದಲ್ಲಿ ಶಾಶ್ವತವಾದ ಮೊಗಲ್ ಸಾಮ್ರಾಜ್ಯವನ್ನು ಸ್ಥಾಪಿಸಲು ಅವಕಾಶ ಒದಗಿದಂತಾಯಿತು.
  5. ಕ್ರಿ.ಶ. 1526ರ ಹೊತ್ತಿಗೆ ದೆಹಲಿ ಸಾಮ್ರಾಜ್ಯದ ರಾಜಕೀಯ ಪರಿಸ್ಥಿತಿಯು ಇನ್ನಷ್ಟು ಹದಗೆಟ್ಟಿತ್ತು. ಇಬ್ರಾಹಿಂಲೋದಿಯ ಅಸಮರ್ಪಕ ಆಳ್ವಿಕೆಯಿಂದ ಹೆಚ್ಚಾದ ವಿರೋಧಿಗಳು ಅವನ ವಿರುದ್ಧ ಬಂಡಾಯವೇಳುವಷ್ಟು ಪ್ರಬಲರಾದರು. ಈ ಪರಿಸ್ಥಿತಿಯನ್ನೆಲ್ಲ ವೀಕ್ಷಿಸಿ, ನಿರೀಕ್ಷಿಸಿ, ವಿವೇಚಿಸಿದ ಬಾಬರ್ ಭಾರತದ ಮೇಲೆ ದಂಡೆತ್ತಿ ಬರುವ ನಿರ್ಧಾರವನ್ನು ತೆಗೆದುಕೊಂಡನು.
  6. ಕ್ರಿ.ಶ.1524 ರಲ್ಲಿ ಪಂಜಾಬಿನ ದೌಲತ್ ಖಾನ್ ಮತ್ತು ದೆಹಲಿಯ ಇಬ್ರಾಹಿಂಲೋದಿಯ ಚಿಕ್ಕಪ್ಪನಾದ ಅಲಂಖಾನ್-ಇವರು ಭಾರತದ ಮೇಲೆ ದಾಳಿಮಾಡುವಂತೆ ಬಾಬರ್‌ನಿಗೆ ಆಹ್ವಾನ ನೀಡಿದರು. ಈ ನಂತರ ಪಂಜಾಬನ್ನೇ ಆಕ್ರಮಿಸಿ ದೌಲತ್‌ ಖಾನನ ಶರಣಾಗತಿಯನ್ನು ಪಡೆದನು. ಆನಂತರ ಇಬ್ರಾಹಿಂಲೋದಿಯನ್ನು ಎದುರಿಸಲು ಪಂಜಾಬಿನಿಂದ ಪಾಣಿಪತ್ ರಣಾಂಗಣಕ್ಕೆ ಸೈನ್ಯಸಮೇತ ಹೊರಟನು.

ಪ್ರಧಾನ ಘಟನೆಗಳು : ಬಾಬರನ ಸೈನ್ಯವು ದೆಹಲಿಯತ್ತ ಮುನ್ನುಗ್ಗಿದಂತೆ, ಇಬ್ರಾಹಿಂಲೂದಿಯು ಯುದ್ಧಕ್ಕೆ ಸಿದ್ಧತೆ ಮಾಡಿಕೊಂಡು ಮುನ್ನಡೆದನು. ಬಾಬರನು ತನ್ನ ಜೀವನವೃತ್ತಾಂತದಲ್ಲಿ ತಾನು 12000 ಸೈನಿಕರಿಂದ ಪಾಣಿಪತ್ ಯುದ್ಧರಂಗದಲ್ಲಿ ಇಬ್ರಾಹಿಂ ಲೂದಿಯ ಒಂದು ಲಕ್ಷ ಸೈನಿಕರಿಂದ ಮತ್ತು ಒಂದು ಸಾವಿರ ಆನೆಗಳಿಂದ ಕೂಡಿದ್ದ ಸೈನ್ಯವನ್ನು ಸೋಲಿಸಿದನೆಂದು ಹೇಳಿಕೊಂಡಿದ್ದಾನೆ. ಡಾ.ಎಲ್.ಶ್ರೀವಾಸ್ತವ ಅವರು ಬಾಬರನ ಸೈನ್ಯ ಸುಮಾರು 25000, ಇದ್ದಿರಬಹುದೆಂದು ಊಹಿಸಿದ್ದಾರೆ. ಬಾಬರನ ಮತ್ತು ಇಬ್ರಾಹಿಂಲೂದಿಯ ಸೈನ್ಯಗಳು ಐತಿಹಾಸಿಕ ಯುದ್ಧಭೂಮಿಯಾದ ಪಾಣಿಪತ್‌ನಲ್ಲಿ ಕ್ರಿ.ಶ. 1526ರ ಏ. 21 ರಂದು ಸಂಧಿಸಿದವು. ಈ ಎರಡು ಸೇನೆಗಳ ನಡುವೆ ನಡೆದ ಕದನವೇ ಮೊದಲನೇ ಪಾಣಿಪತ್ ಕದನ. ಇದೊಂದು ಭಾರತದ ಇತಿಹಾಸದ ಐತಿಹಾಸಿಕ ಮತ್ತು ನಿರ್ಣಾಯಕ ಕದನ.

ಈ ಕದನ ಬೆಳಗಿನ 9 ರಿಂದ ಮಧ್ಯಾಹ್ನದವರೆಗೆ ನಡೆಯಿತು. ಬಾಬರನು ತನ್ನ ಅಪ್ರತಿಮ ಧೈರ್ಯ, ಶೌರ್ಯ, ಯುದ್ಧ ನೈಪುಣ್ಯ, ಉತ್ತಮ ದಂಡನಾಯಕತ್ವ, ಫಿರಂಗಿದಳದ ಚಾಣಾಕ್ಷ ಬಳಕೆಯಿಂದಾಗಿ ಲೂಧಿಸುಲ್ತಾನನ ವಿರುದ್ಧ ನಿರ್ಣಾಯಕ ವಿಜಯ ಪಡೆದನು. ಇಬ್ರಾಹಿಂಲೋದಿಯು ವೀರಾವೇಶದಿಂದ ಹೋರಾಡಿ ಯುದ್ಧರಂಗದಲ್ಲಿಯೇ ಮಡಿದನು. ಈತನೊಂದಿಗೆ 15 ರಿಂದ 16 ಸಾವಿರ ಸೈನಿಕರು ಸಾವನ್ನಪ್ಪಿದರು. ಬಾಬರನಿಗೆ ವಿಜಯಲಕ್ಷ್ಮಿ ಒಲಿದಳು. ಅಸಂಖ್ಯಾತ ಆನೆಗಳು ಮತ್ತು ಅಪಾರ ಸಂಪತ್ತಿನ ಜೊತೆಗೆ ದೆಹಲಿ ಮತ್ತು ಆಗ್ರಾ ನಗರಗಳು ಬಾಬರನ ವಶವಾದವು. ಈ ಕದನ ಭಾರತದ ಇತಿಹಾಸದಲ್ಲಿ ನಿರ್ಣಾಯಕ ಘಟನೆಯಾಯಿತು.

ಪರಿಣಾಮಗಳು : ಪ್ರಥಮ ಪಾಣೀಪತ್ ಕದನವು ಭಾರತದ ಇತಿಹಾಸದಲ್ಲಿ ಸಂಭವಿಸಿದ ಕದನಗಳಲ್ಲೇ ಅತ್ಯಂತ ಪ್ರಮುಖವಾದುದು. ಇದರ ಪರಿಣಾಮಗಳು ಈ ಕೆಳಗಿನಂತಿವೆ.

  1. ಇಬ್ರಾಹಿಲೋದಿ ಮತ್ತು ಬಾಬರನ ನಿರ್ಣಯಕ ಯುದ್ಧವಾದ ಈ ಕದನದಲ್ಲಿ ಲೋದಿ ಸೈನಿಕ ಶಕ್ತಿಯು ಸಂಪೂರ್ಣವಾಗಿ ನಾಶವಾಯಿತಲ್ಲದೆ ದೆಹಲಿ ಸಾಮ್ರಾಜ್ಯ ಹೇಳ ಹೆಸರಿಲ್ಲದಂತೆ ನಾಶವಾಯಿತು.
  2. ದೆಹಲಿ ದೊರೆ ಇಬ್ರಾಹಿಂಲೋದಿ ರಣರಂಗದಲ್ಲಿ ಸಾವನ್ನಪ್ಪಿದನು.
  3. ದೆಹಲಿ ಸಾಮ್ರಾಜ್ಯವು ಮೊಗಲ್ ದೊರೆ ಬಾಬರನ ವಶವಾಯಿತು.
  4. ಯುದ್ಧಾನಂತರ ಬಾಬರನ ಕೈಗೆ ಅಪಾರ ಸಂಪತ್ತು ದೊರಕಿತು. ಈ ಬಹುದೊಡ್ಡ ಪ್ರಮಾಣದ ಸಂಪತ್ತನ್ನು ಬಾಬರನು ತನ್ನ ಸಂಬಂಧಿಕರಿಗೆ ಮತ್ತು ಅಧಿಕಾರಿಗಳಿಗೆ ಹಂಚಿದನು.
  5. ಬಾಬರನು ಪವಿತ್ರ ಸ್ಥಳಗಳಾದ ಮೆಕ್ಕಾ ಮತ್ತು ಮದೀನಾಗಳಿಗೂ ಕಾಣಿಕೆ ಸಲ್ಲಿಸಿದನು.
  6. ಒಟ್ಟಿನಲ್ಲಿ ಈ ಕದನ ದೆಹಲಿ ಸುಲ್ತಾನರ ಸಾಮ್ರಾಜ್ಯವನ್ನು ನಾಶಗೊಳಿಸಿ, ಮೊಗಲ್ ಸಾಮ್ರಾಜ್ಯದ ಅಡಿಗಲ್ಲನ್ನು ಹಾಕಿತು.            ಬಾಬರನ ವಿಜಯಕ್ಕೆ ಕಾರಣಗಳು
    1. ಉನ್ನತ ಮಟ್ಟದ ಸೇನಾಧಿಪತ್ಯ ಮತ್ತು ಹೆಚ್ಚಿನ ಯುದ್ಧ ತಂತ್ರ,
    2. ತರಬೇತಿ ಹೊಂದಿದ ಮತ್ತು ಶಿಸ್ತಿನ ಮೊಗಲ್ ಸೈನ್ಯ.
    3. ಬಲಾಡ್ಯವಾದ ಫಿರಂಗಿ ಪಡೆ
    4. ಭಾರತೀಯರಲ್ಲಿದ್ದ ಅನೈಕ್ಯತೆ
    5. ಇಬ್ರಾಹಿಂ ಲೂದಿಯ ಅಸಾಮರ್ಥ್ಯತೆ ಮತ್ತು ಆತನ ಸೈನ್ಯದಲ್ಲಿದ್ದ ಅನೈಕ್ಯತೆ.

ಕಣ್ವ ಕಾಳಗ (1527 ಮಾರ್ಚ್ 16)

ಪಾಣಿಪತ್ ಕದನದ ವಿಜಯದಿಂದ ಬಾಬರ್ ಉತ್ತರ ಭಾರತದಲ್ಲಿ ಸಂಪೂರ್ಣವಾಗಿ ತನ್ನ ಯಜಮಾನಿಕೆಯನ್ನು ಸ್ಥಾಪಿಸಲು ಸಾಧ್ಯವಾಗಲಿಲ್ಲ. ಈ ಕದನಕ್ಕಿಂತಲೂ ಭೀಕರವಾದ ಮತ್ತೊಂದು ಕದನದಲ್ಲಿ ಅವನು ತೊಡಗಬೇಕಾಯಿತು. ಇದೇ ಕಣ್ವ ಕದನ.

ಬಾಬರ್ ಭಾರತದಲ್ಲಿ ಇಬ್ರಾಹಿಂ ಲೂದಿಗಿಂತ ಪ್ರಬಲ ಶತ್ರುಗಳನ್ನು ಎದುರಿಸಬೇಕಾಯಿತು. ಇಂತಹ ಶತ್ರುಗಳಲ್ಲಿ ಮೇವಾಡದ ರಾಣಾ ಸಂಗ್ರಾಮ ಸಿಂಹ ಅಥವಾ ರಾಣಾ ಸಂಗ ಪ್ರಮುಖವಾಗಿದ್ದನು. ರಾಣಾ ಸಂಗನನ್ನು ರಜಪೂತ ಮುಖಂಡರೆಲ್ಲಾ ಒಪ್ಪಿಕೊಂಡಿದ್ದರು. ಈತ ಮಹತ್ವಾಕಾಂಕ್ಷಿಯಾಗಿದ್ದು, ದೆಹಲಿಯ ಸಿಂಹಾಸನದ ಮೇಲೆ ಕಣ್ಣಿಟ್ಟಿದ್ದನು.

ತೈಮೂರನಂತೆ ಬಾಬರನೂ ಸಹ ಭಾರತದ ಸಂಪತ್ತನ್ನು ಲೂಟಿ ಮಾಡಿ ಹಿಂದಿರುಗುವನೆಂದು ಭಾವಿಸಿದ್ದ. ಆದರೆ ಬಾಬರನು ದೆಹಲಿಯಲ್ಲಿ ನೆಲೆಸಲು ನಿರ್ಧರಿಸಿದ್ದರಿಂದ ರಾಣಾನು ಆತನ ವಿರುದ್ಧ ಹೋರಾಟಕ್ಕೆ ನಿಂತ. ಮೊಗಲರ ವಿರುದ್ಧ ಹೋರಾಡಲು ಹಲವು ರಜಪೂತ ನಾಯಕರು ರಾಣಾ ಸಂಗನ ನೇತೃತ್ವದಲ್ಲಿ ಒಂದಾದರು. ಇಬ್ರಾಹಿಂ ಲೂದಿಯ ಸಹೋದರ ಮಹಮದ್ ಲೂದಿ ಮತ್ತು ಹಸನ್ ಖಾನ್ ಮೇವಾತಿಯೂ ಸಹ ರಾಣಾನೊಂದಿಗೆ ಕೈಜೋಡಿಸಿದ. ರಾಣಾನು ಬಾಬರನಂತಹ ಬಲಿಷ್ಠನನ್ನು ಹೊರ ಹಾಕಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡ. ರಾಣಾನ ಸೈನಿಕರು ಯುದ್ಧರಂಗದಲ್ಲಿ ಎಂತಹ ಪ್ರಬಲ ಶತ್ರುಗಳನ್ನಾದರು ಎದುರಿಸಿ ಹೋರಾಡಿ ದೇಶದ ಗೌರವ ಮತ್ತು ಆತ್ಮಗೌರವಗಳನ್ನು ಕಾಪಾಡಿಕೊಳ್ಳುವ ಧೃಡ ನಿರ್ಧಾರದಿಂದ ಬಾಬರನ ವಿರುದ್ಧ ದಂಡೆತ್ತಿ ನಡೆದರು. ರಾಣಾಸಂಗನು ಅಜೇಯನೆಂಬ ಖ್ಯಾತಿಯನ್ನು ಗಳಿಸಿದ್ದನು. ತತ್ಪರಿಣಾಮವಾಗಿ ಬಾಬರನ ಸೈನಿಕರು ಭಯಭೀತರಾದರು. ಕಾಬೂಲ್ ನಿಂದ ಬಂದ ಹೆಚ್ಚಿನ ಸೇನೆಯಿಂದ ಬಾಬರನ ಸೈನಿಕರಲ್ಲಿ ಉತ್ಸಾಹ ಉಂಟಾಯಿತು. ಆದರೆ ಜ್ಯೋತಿಷ್ಯಕಾರರ ಮಾತಿನಂತೆ ಬಾಬರನಿಗೆ ಸೋಲುಂಟಾಗುವುದೆಂಬ ವಾರ್ತೆಹಬ್ಬಿತು. ತತ್ಪರಿಣಾಮವಾಗಿ ಬಾಬರನ ಸೈನಿಕರು ಮತ್ತಷ್ಟು ಭಯಭ್ರಾಂತಿಗೆ ಗುರಿಯಾದರು. ಬಾಬರ್ ಮಾತ್ರ ಗಾಬರಿಯಾಗದೆ ಸನ್ನಿವೇಶವನ್ನು ಆಸಾಧಾರಣ ಮಾನಸಿಕ ತಾಳ್ಮೆಯಿಂದ ಎದುರಿಸಿದ. ‘ಅಲ್ಲಾ’ ನ ಹೆಸರಿನಲ್ಲಿ ತನ್ನ ಸೈನಿಕರಲ್ಲಿ ಮಾನಸಿಕ ಸ್ಥೆರ್ಯವನ್ನು ತುಂಬಿದ.

ನಾಟಕೀಯವಾಗಿ ಪಾನಪಾತ್ರೆಗಳನ್ನು ಒಡೆದು ಹಾಕಿ, ತನ್ನಲ್ಲಿದ್ದ ಮದ್ಯವನ್ನೆಲ್ಲಾ ಚೆಲ್ಲಿದನು. ತನ್ನ ಹಿಂದಿನ ತಪ್ಪುಗಳಿಗೆಲ್ಲಾ ಪಶ್ಚಾತ್ತಾಪ ವ್ಯಕ್ತಪಡಿಸಿ ತಾನು ಮುಂದೆಂದೂ ಮದ್ಯಪಾನ ಮಾಡುವುದಿಲ್ಲವೆಂದು ಪ್ರತಿಜ್ಞೆ ಮಾಡಿದನು. ಕುಡಿಯುವ ಚಿನ್ನದ ಮತ್ತು ಬೆಳ್ಳಿಯ ಪಾತ್ರೆಗಳನ್ನು ಚೂರುಮಾಡಿ ಬಡವರಿಗೆ ಮತ್ತು ಮುಸ್ಲಿಂ ಸಂತರಿಗೆ ಹಂಚಿದನು, ರಾಣಾ ಮತ್ತು ರಜಪೂತರ ಮೇಲೆ ಜಿಹಾದ್ ಅಥವಾ ಧರ್ಮಯುದ್ಧ ಮಾಡುವುದಾಗಿ ತಿಳಿಸಿದೆ.

ಮೊಗಲರು ಮತ್ತು ರಜಪೂತರ ನಡುವೆ ಭೀಕರ ಹೋರಾಟ

ಕ್ರಿ.ಶ. 1527ರ ಮಾ.16 ರಂದು ಕಣ್ಣ ಎಂಬಲ್ಲಿ ಸಂಭವಿಸಿತು. ಬಾಬರನು ಪಾಣಿಪತ್ ಕದನದಲ್ಲಿ ಉಪಯೋಗಿಸಿದ ಯುದ್ಧ ತಂತ್ರಗಳನ್ನೇ ಈ ಕದನದಲ್ಲಿಯೂ ಅನುಸರಿಸಿದನು. ರಜಪೂತರು ರಾಣಾಸಂಗನ ನಾಯಕತ್ವದಲ್ಲಿ ಜೀವದ ಹಂಗನ್ನು ತೊರೆದು ವೀರಾವೇಶದಿಂದ ಹೋರಾಡಿದರು. ಆದರೆ ಬಾಬರನು ತನ್ನ ಉತ್ತಮ ದಂಡನಾಯಕತ್ವ, ಸೈನಿಕ ಚಾಕಚಕ್ಯತೆ ಮತ್ತು ಪ್ರಬಲ ಫಿರಂಗಿ ಪಡೆಯ ನೆರವಿನಿಂದ ಜಯಗಳಿಸುವಲ್ಲಿ ಯಶಸ್ವಿಯಾದನು. ರಜಪೂತರಿಗೆ ಸಂಪೂರ್ಣ ಸೋಲುಂಟಾಯಿತು. ತೀವ್ರವಾಗಿ ಗಾಯಗೊಂಡಿದ್ದ ರಾಣಾಸಂಗನನ್ನು ಯುದ್ಧ ರಂಗದಿಂದ, ಆತನ ಸೈನಿಕರು ಸಾಗಿಸಿದರು. ಹತ್ತು ಗಂಟೆಗಳ ಕಾಲ ಜರುಗಿದ ಕಣ್ವ ಕದನದಲ್ಲಿ ಜಯಶೀಲನಾದ ಬಾಬರ್ ರಾಣಾನ ಶಿಬಿರವನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡನು.

ಬಾಬರನ ಇತರ ಆಕ್ರಮಣಗಳು

ಚಾಂದೇರಿ ಪತನ : ಕ್ರಿ.ಶ. 1528ರ ಜನವರಿ ತಿಂಗಳಲ್ಲಿ ಬಾಬರನು ಚಾಂದೇರಿ ಕೋಟೆಯನ್ನು ಮುತ್ತಿದನು. ಚಾಂದೇರಿ ರಾಜ್ಯ ಮೇದಿನರಾಯ್ ಎಂಬ ಸುಪ್ರಸಿದ್ಧ ರಜಪೂತ ದೊರೆಯ ಅಧಿಪತ್ಯಕ್ಕೆ ಒಳಪಟ್ಟಿತ್ತು. ಬಾಬರನು ಚಾಂದೇರಿ ಕೋಟೆಯನ್ನು ಮುತ್ತಿಗೆ ಹಾಕಿದ್ದನ್ನು ಕಂಡು, ಸೋಲಿನಿಂದ ಪಾರಾಗುವುದು ಅಸಾಧ್ಯವೆಂದು ಅರಿತ ರಜಪೂತ ಮಹಿಳೆಯರು ಚೌಹಾರ್ ಪದ್ಧತಿಯನ್ನು ಅನುಸರಿಸಿ ಅಗ್ನಿಗೆ ಆಹುತಿಯಾದರು. ಕೋಟೆಯಲ್ಲಿದ್ದ ಎಲ್ಲ ಸೈನಿಕರು ಹತರಾದರು. ಕ್ರಿ.ಶ. 1528ರ ಜನವರಿ 29ರಂದು ಬಾಬರನು ಚಾಂದೇರಿ ಕೋಟೆಯನ್ನು ತನ್ನ ಹಿಡಿತಕ್ಕೆ ಒಳಪಡಿಸಿಕೊಂಡನು. ಅಲ್ಲದೆ ಬಾಬರನಿಗೆ ಇಲ್ಲಿ ಆಗಾಧ ಪ್ರಮಾಣದ ಸಂಪತ್ತು ಕೈಸೇರಿತು.

ಗೋಗ್ರ ಕದನ : ಇಬ್ರಾಹಿಂ ಲೋದಿಯ ಸಹೋದರನಾದ ಮಹಮದ್ ಲೋದಿ ಬಿಹಾರದಲ್ಲಿ ತನ್ನ ಪ್ರಭುತ್ವವನ್ನು ಸ್ಥಾಪಿಸಿದ್ದಲ್ಲದೆ ಒಂದು ಲಕ್ಷ ಸೈನ್ಯವನ್ನು ಸಂಘಟಿಸಿದ್ದನು. ಬಂಗಾಳ ಮತ್ತು ಬಿಹಾರದ ಆಫ್‌ಘಾನರ ತೊಂದರೆಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಅವರ ಮೇಲೆ ಯುದ್ಧಮಾಡುವುದೊಂದೇ ಉತ್ತಮದಾರಿಯೆಂದು ಬಾಬರ್ ನಿರ್ಧರಿಸಿದ. ಬಾಬರ್ ಕ್ರಿ.ಶ. 1529ರಲ್ಲಿ ಆಗ್ರಾವನ್ನು ಬಿಟ್ಟು ಆಫ್‌ಘನ್ನರನ್ನು ಎದುರಿಸಲು ಹೊರಟ ಕ್ರಿ.ಶ. 1529 ಮೇ 6ರಂದು ಗಂಗಾ ಮತ್ತು ಅದರ ಉಪನದಿಯಾದ ಗೋಗ್ರಾ ಇವುಗಳ ಸಂಗಮ ಸ್ಥಳದಲ್ಲಿ (ಪಾಟ್ನಾದ ಮೇಲ್ಗಡೆ) ಬಾಬರ್ ಮತ್ತು ಅಫಘಾನ್ನರ ನಡುವೆ ಕಾಳಗ ಸಂಭವಿಸಿತು. ಇದರಲ್ಲಿ ಅಫಘಾನ್ನರು ಸಂಪೂರ್ಣವಾಗಿ ಅಪಜಯ ಹೊಂದಿದರು. ಲೋದಿಗಳ ಆಸೆ ಕನಸಾಯಿತು. ಹಲವು ಪ್ರಮುಖ ಅಫಘಾನ ಸರದಾರರು ಬಾಬರನಿಗೆ ಶರಣಾದರು. ಈ ವಿಜಯದ ನಂತರ ಬಾಬನನು ಬಿಹಾರದ ಮೇಲೆ ತನ್ನ ಪ್ರಭುತ್ವ ಸ್ಥಾಪಿಸಿದನು. ಈ ರೀತಿ ಬಾಬರನು ಪಡೆದ ಎಲ್ಲಾ ವಿಜಯಗಳು ಆತನು ಭಾರತದಲ್ಲಿ ಮೊಗಲ್ ಸಂತತಿ ಮತ್ತು ಸಾಮ್ರಾಜ್ಯಗಳ ಸ್ಥಾಪನೆಗೆ ಅಡಿಪಾಯ ಹಾಕಿದವು.

ಬಾಬರನ ಅಂತಿಮ ದಿನಗಳು : ಬಾಬರ್ ತಾನು ಶ್ರಮಪಟ್ಟು ಸಾಧಿಸಿದ್ದ ವಿಜಯಗಳ ಪ್ರತಿಫಲವನ್ನು ಅನುಭವಿಸಲು ಬಹಳ ಕಾಲ ಜೀವಿಸಲಿಲ್ಲ. ಕ್ರಿ.ಶ. 1530 ಡಿ. 26 ರಂದು ಆಗ್ರಾದಲ್ಲಿ ಬಾಬರ್‌ನು ಮರಣಹೊಂದಿದನು. ಈತನ ಮರಣದ ಬಗ್ಗೆ ಹಲವು ಅಭಿಪ್ರಾಯಗಳಿವೆ. ಆದರೆ ಪ್ರೊ. ಶ್ರೀರಾಮ ಶರ್ಮರು ಬಾಬರನ ಮರಣದ ಬಗ್ಗೆ ಅಬುಲ್ ಫಜಲ್ ಕಟ್ಟಿರುವ ಕಾಲ್ಪನಿಕ ಕಥೆಯನ್ನು ನಂಬಲು ಯಾವುದೇ ಆಧಾರವಿಲ್ಲವೆಂದು ತಿಳಿಸಿದ್ದಾರೆ. ಬಾಬರನ ಮೃತದೇಹವನ್ನು ಪ್ರಾರಂಭದಲ್ಲಿ ಆಗ್ರಾದ ಆರಾಮಬಾಗ್‌ನಲ್ಲಿ ಸಮಾಧಿ ಮಾಡಿದರು. ತದನಂತರ ಅದನ್ನು ಕಾಬೂಲಿಗೆ ತರಲಾಯಿತು.

ಬಾಬರ್‌ನ ವ್ಯಕ್ತಿತ್ವ: ಬಾಬರ್‌ನು ಮಧ್ಯಕಾಲೀನ ವಿಷಿಯಾದ ಸರ್ವಶ್ರೇಷ್ಠ ದೊರೆಗಳಲ್ಲೊಬ್ಬನೆಂದು ಸಮಕಾಲೀನ ಹಾಗೂ ಆಧುನಿಕ ಇತಿಹಾಸಕಾರರೆಲ್ಲರೂ ಒಪ್ಪಿಕೊಂಡಿದ್ದಾರೆ. ಈತನ ಸಹೋದರ ಮಿರ್ಜಹೈದರನು ವಿವರಿಸುವಂತೆ “ಶೌರ್ಯ ಮತ್ತು ಮಾನವೀಯತೆಯೂ ಸೇರಿದಂತೆ ಹಲವಾರು ಸದ್ಗುಣಗಳು ಮತ್ತು ಶ್ರೇಷ್ಠತೆಗಳು ಇವನಲ್ಲಿದ್ದವು”, ಗುಲ್‌ಬದನ್ ಬೇಗಂ ತನ್ನ ‘ಹುಮಾಯೂನ್‌ ನಾಮ” ದಲ್ಲಿ ಇಂತಹ ಭಾವನೆಗಳನ್ನೆ ವ್ಯಕ್ತಪಡಿಸಿದ್ದಾಳೆ. ಡಾ|| ವಿ.ಎ. ಸ್ಮಿತ್ ಬಾಬರ್‌ನನ್ನು ಆ ಯುಗದ ಅತ್ಯಂತ ಶ್ರೇಷ್ಠ ರಾಜಕುಮಾರನಾಗಿದ್ದ ಎಂದಿದ್ದಾರೆ. ಹಾವೆಲ್ಲರ ಪ್ರಕಾರ ಈತ ಇಸ್ಲಾಮಿನ ಇತಿಹಾಸದ ಅತ್ಯಂತ ಆಕರ್ಷಕ ವ್ಯಕ್ತಿಗಳಲ್ಲಿ ಒಬ್ಬನು.

ಬಾಬರನಿಗೆ ಸಂಗೀತದಲ್ಲಿ ಸಾಕಷ್ಟು ತಿಳುವಳಿಕೆ ಇತ್ತು. ಯುದ್ಧ ಹಾಗೂ ರಾಜತಾಂತ್ರಿಕ ತಂತ್ರಗಳು ಪೂರ್ವನಿರ್ಧಾರಿತವಾಗಿದ್ದವು ಹಾಗೂ ಲೆಕ್ಕಾಚಾರದಿಂದ ಕೂಡಿದ್ದವು. ಅವನ ಆಕಾಲಿಕ ಸಾವಿನಿಂದಾಗಿ ಅವನ ಆಡಳಿತಾತ್ಮಕ ಅಂಶಗಳನ್ನು ತಿಳಿಯಲು ಸಾಧ್ಯವೇ ಇಲ್ಲ. ಪದ್ಯ ಮತ್ತು ಗದ್ಯ ರಚನೆಯಲ್ಲಿ ಅವನ ಅಸಾಧಾರಣ ಪ್ರತಿಭೆಯನ್ನು ಕಾಣಬಹುದು. ಅವನು ತನ್ನ ಅನುಭವಗಳನ್ನು ಮುಚ್ಚುಮರೆಯಿಲ್ಲದೆ ನಿರೂಪಿಸಿದ್ದಾನೆ. ತನ್ನ ದೌರ್ಬಲ್ಯಗಳನ್ನು ಮುಕ್ತವಾಗಿ ಹೇಳಿಕೊಂಡಿದ್ದಾನೆ. ಬಾಬರ್‌ನು ಪರ್ಶಿಯನ್, ಅರೇಬಿಕ್ ಮತ್ತು ತುರ್ಕಿಭಾಷೆಗಳಲ್ಲಿ ಅತ್ಯುತ್ತಮ ಬರಹಗಾರನಾಗಿದ್ದನು. ಇವನ ಆತ್ಮಚರಿತ್ರೆ ತುಜುಕ್-ಇ-ಬಾಬರೀ (ಬಾಬರ್ ನಾಮಾ) ಪ್ರಪಂಚದ ಆತ್ಮಚರಿತ್ರೆಯ ಸಾಹಿತ್ಯದಲ್ಲಿ ಮಹತ್ವಪೂರ್ಣ ಕೃತಿಯಾಗಿದೆ.

ಬಾಬರನಿಗೆ ಹುಮಾಯೂನ್, ಕಮ್ರಾನ್, ಹಿಂದಾಲ್ ಮತ್ತು ಆಸ್ಕರಿ ಎಂಬ ನಾಲ್ಕು ಗಂಡು ಮಕ್ಕಳಿದ್ದರು. ಬಾಬರನ ನಿಧನದ ಮೂರು ದಿನಗಳ ನಂತರ ಆತನ ಹಿರಿಯ ಪುತ್ರ ಹುಮಾಯೂನ್ ಮೊಗಲ್ ಪಟ್ಟವೇರಿದನು. ಆದರೆ ಇವನ ಚಾರಿತ್ರ್ಯದಲ್ಲಿನ ದೋಷಗಳೇ ಷೇರ್‌ಷಹನ ಏಳಿಗೆಗೆ ಕಾರಣವಾಯಿತು.

ಆರ್ಯರ ಕಾಲದ ಸಾಹಿತ್ಯ

ಆರ್ಯರ ಕಾಲದ ಸಾಹಿತ್ಯ

ಆರ್ಯರ ಸಂಸ್ಕೃತಿಯನ್ನು ಸಮಗ್ರವಾಗಿ ತಿಳಿಯಲು ನಮಗಿರುವ ಮೂಲಾಧಾರಗಳೆಂದರೆ ಚತುರ್ವೇದಗಳು, ವೇದಾಂಗಗಳು, ಬ್ರಾಹ್ಮಣಗಳು, ಆರಣ್ಯಕಗಳು, ಉಪನಿಷತ್ ಗಳು. ಇವುಗಳನ್ನು ಒಟ್ಟಾರೆ ಹೆಸರಿಸಿರುವುದು ʻವೇದವಾಜ್ಯಯ’ ಎಂಬುದಾಗಿ. ಅಲ್ಲದೆ ರಾಮಾಯಣ ಮತ್ತು ಮಹಾಭಾರತ ಎರಡು ಪ್ರಮುಖ ಮಹಾಕಾವ್ಯಗಳಿವೆ.

ಎ) ಚತುರ್ವೇದಗಳು : ʻವೇದ’ ಎಂಬುದು ಸಂಸ್ಕೃತ ಭಾಷೆಯ ‘ವಿದ್’ ಎಂಬ ಪದದಿಂದ ಬಂದಿದೆ. ಇದರ ಅರ್ಥ ‘ಜ್ಞಾನ’ ಎಂಬುದಾಗಿ ಚತುರ್ವೇದಗಳು ಜ್ಞಾನಕಾಂಡದ ಅಂಗಗಳು. ಆರ್ಯರು ತಮ್ಮ ಪೂರ್ವಿಕರಿಂದ ಪಡೆದ ಮಂತ್ರಗಳನ್ನು ಸ್ವರಬದ್ಧವಾಗಿ ಪಠಿಸುತ್ತಿದ್ದರು. ಅವುಗಳೇ ಋಕ್ಕುಗಳು ಅಥವಾ ಸೂಕ್ತಗಳು, ಚತುರ್ವೇದಗಳು ಇಂತಹ ಸೂಕ್ತಗಳಿಂದ ಕೂಡಿವೆ.

ವೇದಗಳು ನಾಲ್ಕು 1) ಋಗ್ವೇದ, 2) ಯಜುರ್ವೇದ, 3) ಸಾಮವೇದ 4) ಅಥರ್ವಣವೇದ.

1) ಋಗ್ವೇದ : ವೇದಗಳಲ್ಲಿ ಅತ್ಯಂತ ಪ್ರಾಚೀನವಾದುದು ಋಗ್ವೇದ , ಋಗ್ವೇದದಲ್ಲಿ 1028 ಸೂಕ್ತಗಳಿವೆ. ಇದನ್ನು 10 ಮಂಡಲಗಳಾಗಿ ವಿಂಗಡಿಸಲಾಗಿದೆ.’ ಋಗ್ವೇದದ ಕಾಲಮಾನ ಕ್ರಿ.ಪೂ 2000 ದಿಂದ 1500. ಆರ್ಯರ ನಾಗರೀಕತೆಯ ಆರಂಭದ ಚಾರಿತ್ರಿಕ ವಿಚಾರಗಳ ಬಗ್ಗೆ ಋಗ್ವೇದವು ಹೆಚ್ಚು ವಿವರ ನೀಡುತ್ತದೆ. ಹಾಗಾಗಿ ಋಗ್ವೇದವು ಒಂದು ಚಾರಿತ್ರಿಕ ಆಧಾರ.

2) ಯಜುರ್ವೇದ : ಋಗ್ವೇದದ ಕೆಲವು ಸೂಕ್ತಗಳ ಸಂಗ್ರಹವೇ ಯಜುರ್ವೇದವಾಗಿದೆ. ಯಜುರ್ವೇದವನ್ನು ಶುಕ್ಲಯಜುರ್ವೇದ ಮತ್ತು ಕೃಷ್ಣ ಯಜುರ್ವೇದವೆಂದು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ. ಯಜುರ್ವೇದವು ಉತ್ತರ ವೈದಿಕ ಕಾಲದಲ್ಲಿ ರಚನೆಯಾಗಿದೆ.

3) ಸಾಮವೇದ : ಋಗ್ವೇದದ ಕೆಲವು ಸೂಕ್ತಗಳ ಸಂಗ್ರಹಣೆಯೇ ಸಾಮವೇದ. ಇವುಗಳನ್ನು ಗಾನಮಯವಾಗಿ ರಚಿಸಲಾಗಿದೆ. ಇದರಲ್ಲಿ 78 ಮಂತ್ರಗಳು ಮಾತ್ರ ಹೊಸದಾಗಿ ಸೇರ್ಪಡೆಯಾಗಿವೆ. ಸಾಮವೇದದ ಸೂಕ್ತಗಳನ್ನು ಪಠಿಸುವಾಗ ಗಾನಮಯವಾಗಿಯೇ ಪಠಿಸಬೇಕಾಗಿತ್ತು. ಇದರಲ್ಲಿ ಭಾರತೀಯ ಸಂಗೀತ ಶಾಸ್ತ್ರದ ಸಪ್ತಸ್ವರಗಳು ಪ್ರಯೋಗಿಸಲ್ಪಟ್ಟಿವೆ ಎಂಬುದು ಕೆಲವರ ಅನಿಸಿಕೆ, ಆರ್ಯರ ಸಂಗೀತ ಜ್ಞಾನದ ಬಗ್ಗೆ ಇದು ವಿವರ ನೀಡುತ್ತದೆ.

4) ಅಥರ್ವಣವೇದ : ವೇದಗಳಲ್ಲಿ ಕೊನೆಯದು ಅಥರ್ವಣವೇದ, ಅಥರ್ವಣವೇದವು ಪದ್ಯ ಮತ್ತು ಗದ್ಯ ಶೈಲಿಯಲ್ಲಿ ರಚಿಸಲ್ಪಟ್ಟಿದೆ. ಇದರಲ್ಲಿ ʻ6000′ ಮಂತ್ರಗಳಿವೆ.

ಇದರಲ್ಲಿರುವ ವಿಷಯ ಮತ್ತು ವಿಚಾರಗಳೆಂದರೆ:- ವಿವಾಹ ಪದ್ಧತಿ, ಶವಸಂಸ್ಕಾರ, ರಾಜನ ಆಯ್ಕೆ, ಗೃಹನಿರ್ಮಾಣ, ಮಾಯ, ಮಾಟ, ಮಂತ್ರ ಮತ್ತು ದುಷ್ಟಶಕ್ತಿಗಳನ್ನು ದೂರವಿಡುವ ತಂತ್ರಗಳು, ದೀರ್ಘಾಯುಕ್ರಮ, ಆರೋಗ್ಯಕ್ರಮ, ಸತ್ಯವ್ರತ, ಶ್ರೇಯಸ್ಸು, ರೋಗಗಳ ನಿವಾರಣೆ, ಔಷಧಿಗಳ ವಿವರ ಇನ್ನೂ ಅನೇಕ ವಿಷಯಗಳಿಂದ ಕೂಡಿರುವುದರಿಂದ ಇದಕ್ಕೆ ʻಬ್ರಹ್ಮವೇದ’ ಎಂದು ಕರೆಯಲಾಗುತ್ತಿತ್ತು.

ಬಿ) ವೇದಾಂಗಗಳು ಮತ್ತು ಉಪವೇದಗಳು : ವೇದಾಂಗಗಳು ಮತ್ತು ಉಪವೇದಗಳು ವೈದಿಕ ಸಾಹಿತ್ಯದ ಅನುಬಂಧ ಭಾಗಗಳಾಗಿವೆ. ವೇದಾಂಗಗಳು ಆರು. ಅವುಗಳೆಂದರೆ:- ಶಿಕ್ಷ, ಛಂದಸ್ಸು, ವ್ಯಾಕರಣ, ನಿರುಕ್ತ, ಕಲ್ಪ, ಜ್ಯೋತಿಷ್ಯ. ವೇದಾಂಗಗಳು ಧರ್ಮಸೂತ್ರ, ಧಾರ್ಮಿಕ ರೀತಿ ನಿಬಂಧನೆ, ಲೌಕಿಕ ಮತ್ತು ವ್ಯಾಪಾರ ಜೀವನಕ್ಕೆ ಸಂಬಂಧಿಸಿದ ನೀತಿ ನಿಯಮಗಳ ಬಗ್ಗೆ ತಿಳಿಸುತ್ತವೆ. ಉಪವೇದಗಳಾದ ಆಯುರ್ವೇದ, ಧನುರ್ವೇದ, ಶಿಲ್ಪ ಮತ್ತು ಗಂಧರ್ವ ವೇದಗಳು ಲೌಕಿಕ ವಿಷಯಗಳನ್ನು ಒಳಗೊಂಡಿವೆ.

ಸಿ) ಬ್ರಾಹ್ಮಣಗಳು : ವೇದಗಳ ಕಾಲದ ಕೆಲವು ಸೂಕ್ತಗಳನ್ನು ಗದ್ಯದ ರೂಪದಲ್ಲಿ ಸಂಗ್ರಹಿಸಿಲಾಗಿದೆ. ಅವುಗಳೇ ಬ್ರಾಹ್ಮಣಗಳು. ಐತ್ತರೇಯ ಬ್ರಾಹ್ಮಣ, ತೈತ್ತರೇಯ ಬ್ರಾಹ್ಮಣ, ಗೋಪಥ ಬ್ರಾಹ್ಮಣ ಮತ್ತು ಛಾಂದೋಗ್ಯ ಬ್ರಾಹ್ಮಣಗಳು ಪ್ರಮುಖವಾಗಿದೆ. ಇವುಗಳು ಉತ್ತರ ವೈದಿಕ ಕಾಲದಲ್ಲಿ ರಚಿಸಲ್ಪಟ್ಟಿದ್ದು ಆ ಕಾಲದ ಜನಜೀವನದ ಬಗ್ಗೆ ವಿವರ ನೀಡುತ್ತವೆ.

ಡಿ) ಅರಣ್ಯಕಗಳು : ಉತ್ತರ ವೈದಿಕಕಾಲದಲ್ಲಿ ಋಷಿಮುನಿಗಳು ಪ್ರಶಾಂತವಾದ ಅರಣ್ಯಗಳಲ್ಲಿ ಕುಳಿತು ರಚಿಸಿದ ಸೂಕ್ತಗಳೇ ಅರಣ್ಯಕಗಳು.

ಇ) ಉಪನಿಷತ್ತುಗಳು : ಅರಣ್ಯಕಗಳನ್ನು ಕಾಲಾನಂತರ ಉಪನಿಷತ್ತುಗಳೆಂದು ಹೆಸರಿಸಲಾಯಿತು. ಒಟ್ಟು ಹನ್ನೆರಡು ಉಪನಿಷತ್ತುಗಳಿವೆ. ಈಶ, ಕೇನ, ಕಠ, ಪ್ರಶ್ನೆ, ಮುಂಡಕ, ಮಾಂಡೂಕ್ಯ, ಐತ್ತರೇಯ, ತೈತ್ತರೀಯ, ಛಾಂದೋಗ್ಯ, ಬೃಹದಾರಣ್ಯಕ, ಕೌಷೀತಕಿ, ಶ್ವೇತಾಶ್ವತರ, ಉಪನಿಷತ್ತುಗಳಲ್ಲಿ ಹಿಂದೂ ಧರ್ಮದ ಪರಮಸತ್ಯದ ಸ್ವರೂಪವು ವಿವರವಾಗಿ ನಿರೂಪಿತವಾಗಿದೆ. ಇ.ಇ.ಪಾರ್ಗಿಟರ್‌ರವರ ಪ್ರಕಾರ ‘ವಿಶ್ವದ ತತ್ವಜ್ಞಾನ ರಾಶಿಗೆ ಭಾರತ ಅರ್ಪಿಸಿರುವ ಅಮೂಲ್ಯವಾದ ಕೊಡುಗೆಗಳೇ ಉಪನಿಷತ್ತುಗಳು’.

ಆರ್ಯರ ಮೂಲ

ಆರ್ಯರ ಮೂಲ

ಪ್ರಾಚೀನ ಭಾರತದಲ್ಲಿನ ಎರಡು ಪ್ರಮುಖ ಸಂಸ್ಕೃತಿಗಳಲ್ಲಿ ವೈದಿಕ ಸಂಸ್ಕೃತಿಯು ಒಂದು ಸಿಂಧೂ ಸಂಸ್ಕೃತಿಯ ಪತನಾ ನಂತರ ಆರ್ಯರ ಸಂಸ್ಕೃತಿಯು ರೂಪುಗೊಂಡಿತು. ವೈದಿಕ ಸಂಸ್ಕೃತಿಯು ಕ್ರಿ.ಪೂ 2000 ದ ವೇಳೆಗೆ ಅಸ್ತಿತ್ವದಲ್ಲಿದ್ದಿರಬೇಕೆಂದು ಚರಿತ್ರಾಕಾರರು ಅಭಿಪ್ರಾಯಪಟ್ಟಿದ್ದಾರೆ.

ನಿರ್ಮಾತೃಗಳು : ವೈದಿಕ ಸಂಸ್ಕೃತಿಯ ನಿರ್ಮಾತೃಗಳು ಆರ್ಯರಾಗಿದ್ದರೆಂದು ತಿಳಿದುಬಂದಿದೆ. ಆದರೆ ಆರ್ಯರ ಮೂಲ ತುಂಬ ವಿವಾದಗ್ರಸ್ಥ ವಿಷಯವಾಗಿದೆ.

ಆರ್ಯರ ಮೂಲ ತೀವ್ರ ಭಿನ್ನಾಭಿಪ್ರಾಯಗಳಿಂದ ಕೂಡಿದೆ. ಮೂಲದ ಬಗ್ಗೆ ಕೆಳಕಂಡ ಅಭಿಪ್ರಾಯಗಳನ್ನು ಸಂಗ್ರಹಿಸಲಾಗಿದೆ.

1. ಮಧ್ಯ ಏಷ್ಯಾ ಆರ್ಯರ ಮೂಲಸ್ಥಾನ :

ಜರ್ಮನಿಯ ಖ್ಯಾತ ಭಾಷಾಶಾಸ್ತ್ರಜ್ಞ ‘ಪ್ರೊ|| ಮ್ಯಾಕ್ಸ್ ಮುಲ್ಲರ್’ ಈ ಅಭಿಪ್ರಾಯವನ್ನು ನೀಡಿದ್ದಾರೆ. ಇವರು ವೇದಗಳ ಭಾಷೆಗೂ ಮತ್ತು ಝಂಡ್ ಅವೆಸ್ತಾಗಳ ಭಾಷೆಗೂ ಹೋಲಿಕೆ ಇರುವುದರಿಂದ ಈ ಅಭಿಪ್ರಾಯಕ್ಕೆ ಬಂದಿದ್ದಾರೆ. ಪರಸ್ಪರ ಭಾಷೆಗಳ ಶಬ್ದಗಳನ್ನು ಅದಲು-ಬದಲು ಮಾಡಿ ಶಬ್ದಾರ್ಥರೂಪವನ್ನು ಕಂಡುಹಿಡಿಯಬಹುದಾಗಿದೆ. ಏಷ್ಯಾಮೈನರ್‌ನ ಬೋಗಝ್ ಕಾಯ್ ಶಾಸನದಿಂದ ಇಂಡೋ-ಇರಾನಿಯನ್ ಗುಂಪು ಮದ್ಯವಿಷ್ಯಾದಲ್ಲಿ ಮೊದಲೇ ನೆಲೆಸಿತ್ತೆಂದು ತಿಳಿದುಬರುತ್ತದೆ.

* 16ನೇ ಶತಮಾನದಲ್ಲಿ ಭಾರತಕ್ಕೆ ಬಂದು ಗೋವಾದಲ್ಲಿ ಹಲವು ವರ್ಷಗಳ ಕಾಲ ನೆಲೆಸಿದ್ದ ಪ್ಲಾರೈಂಟೈನಿನ ವ್ಯಾಪಾರಿ ಫಿಲಿಫೊ ಸಸೆಟ್ಟಿ ಎಂಬುವನು ಸಂಸ್ಕೃತ ಮತ್ತು ಯೂರೋಪಿನ ಭಾಷೆಗಳ ನಡುವೆ ಸಾಮೀಪ್ಯವಿದೆಯೆಂದು ತಿಳಿಸಿದ್ದಾರೆ. ಉದಾ: ತಂದೆ, ತಾಯಿ, ಸಹೋದರ, ಗೋವು ಎಂಬ ಪದ ತೆಗೆದುಕೊಂಡಾಗ;

ಸಂಸ್ಕೃತ

ಪರ್ಶಿಯನ್

ಲ್ಯಾಟಿನ್

ಇಂಗ್ಲೀಷ್

ಗ್ರೀಕ್

ಪಿತೃ

ಪಿದರ್

ಪಾಟರ್

ಫಾದರ್

ಪೇಟರ್

ಮಾತೃ

ಮಾದರ್

ಮಾಟರ್

ಮದರ್

ಮೆಟರ್

ಭ್ರಾತೃ

ಭ್ರಾತರ್

ಪ್ರೆಟರ್

ಬ್ರದರ್

ಪ್ರೇಟರ್

ಗೋ

ಗೋಸ

ವಾಸ

ಕೌ

ವೋಸ

2. ಯೂರೋಪ್ ಆರ್ಯರ ಮೂಲಸ್ಥಾನ :

* ಜೋನ್ಸ್ ಮೊದಲಾದ ವಿದ್ವಾಂಸರು ಆರ್ಯರ ಮೂಲಸ್ಥಾನ ಆಗ್ನೆಯ ಯೂರೋಪ್ ಎಂದಿದ್ದಾರೆ.

* ಸರ್ ವಿರಿಯಂ ಜೋನ್ಸ್‌ರವರು 1786 ರಲ್ಲಿ ಗ್ರೀಕ್, ಲ್ಯಾಟನ್, ಗಾಥಿಕ್, ಕೆಲ್ಟಿಕ್ ಮತ್ತು ಪರ್ಷಿಯನ್ ಭಾಷೆಗಳಿಗೂ ಹಾಗೂ ಸಂಸ್ಕೃತ ಭಾಷೆಗಳ ನಡುವೆ ಸಾಮೀಪ್ಯವಿದೆಯೆಂದು ತಿಳಿಸಿದ್ದಾರೆ. ಅದೇ ರೀತಿ ಸರ್ ವಿಲಿಯಂ ಜೋನ್ಸ್ ರವರು ಗ್ರೀಕ್, ಲ್ಯಾಟಿನ್, ಗಾಥಿಕ್, ಕೆಲ್ವಿಕ್ ಮತ್ತು ಪರ್ಷಿಯನ್ ಭಾಷೆಗಳಿಗೂ ಹಾಗೂ ಸಂಸ್ಕೃತ ಭಾಷೆಗೂ ಸಾಮೀಪ್ಯವಿದ್ದು ಈ ಎಲ್ಲಾ ಭಾಷೆಗಳೂ ಒಂದೇ ಮೂಲದಿಂದ ಬಂದಿದೆಯೆಂದು ಪ್ರತಿಪಾದಿಸಿದ್ದಾರೆ.

ಇವರುಗಳ ಪ್ರಕಾರ ಈ ಭಾಷೆಗಳನ್ನಾಡುವ ಜನರು ಪ್ರಾರಂಭದಲ್ಲಿ ಒಂದೇ ಪ್ರದೇಶದಲ್ಲಿ ವಾಸವಾಗಿದ್ದು ಆನಂತರ ಯೂರೋಪ್ ಏಷ್ಯಾ ಮತ್ತಿತರ ಪ್ರದೇಶಗಳಿಗೆ ವಲಸೆ ಹೋದರು. ಇವರು ತಮ್ಮ ವಾದಕ್ಕೆ ಆಧಾರವಾಗಿ ಭಾಷೆಗಳಲ್ಲಿನ ಸಾಹಿತ್ಯದಲ್ಲಿ ಹವಾಗುಣ, ಋತುಗಳು ಪ್ರಾಣಿ, ಸಸ್ಯವರ್ಗ, ಮತ್ತು ಭೌಗೋಳಿಕಾಂಶಗಳ ವಿವರಣೆಯಲ್ಲಿ ಒಂದೇ ವಿಧವಾದ ಹೆಸರುಗಳನ್ನು ಬಳಸಿರುವುದನ್ನು ಪತ್ತೆ ಹಚ್ಚಿದ್ದಾರೆ, ಹೊಂಗೆಮರ, ಎಲ್ಲೊ, ಓಕ್ ಮರಗಳು ಮತ್ತು ಹಸು ಆರ್ಯರಿಗೆ ಚಿರಪರಿಚಿತವಾಗಿತ್ತು. ಆರ್ಯರಿಗೆ ಪರಿಚಿತವಾದ ಗಿಡಮರ ಪ್ರಾಣಿಗಳು ಆಗ್ನೆಯ ಯೂರೋಪಿನಲ್ಲಿ ವಿಪುಲವಾಗಿದ್ದುದು ಅಲ್ಲಿನ ಪಳೆಯುಳಿಕೆಗಳಿಂದ ದೃಡಪಟ್ಟಿದೆ.

3. ಹಂಗೇರಿ ಆರ್ಯರ ಮೂಲಸ್ಥಾನ :

ಡಾ|| ಪಿ.ಗೈಲ್ಸ್ ಮತ್ತು ಪ್ರೊ|| ಮ್ಯಾಕ್ ಡೊನೆಲ್ ರವರು ಸಹಭಾಷೆಯ ಸಾಮ್ಯತೆಯ ಆಧಾರದ ಮೇಲೆ ಆರ್ಯರ ಮೂಲಸ್ಥಾನವು ಹಂಗೇರಿ ಎಂದು ಪ್ರತಿಪಾದಿಸಿದ್ದಾರೆ. ಭಾಷೆಗಳ ಸಾಹಿತ್ಯದಲ್ಲಿ ಸಸ್ಯ, ಪ್ರಾಣಿ, ಹವಾಗುಣ, ಋತುಗಳನ್ನು ಒಂದೇ ಹೆಸರಿನಲ್ಲಿ ಗುರುತಿಸಿರುವುದನ್ನು ಇವರು ತಮ್ಮ ವಾದಕ್ಕೆ ಬಳಸಿಕೊಂಡಿದ್ದಾರೆ.

4. ದಕ್ಷಿಣ ರಷ್ಯಾ ಮೂಲಸ್ಥಾನ :

ಬ್ರಾಂಡನ್‌ ಸ್ಟೈನ್, ಪೂಕೊರನೆ, ನೆಹರಿಂಗ್, ವೊಲ್ಗಾರ್ ಹಾಗೂ ಇತ್ತೀಚಿಗೆ ಡಾ|| ಬಿ.ಕೆ.ಘೋಷ್ ರವರು ಭಾಷೆಗಳ ಆಧಾರದ ಮೇಲೆ ಮತ್ತು ಕೆಲವು ಪುರಾತನ ಅವಶೇಷಗಳ ಆಧಾರದ ಮೇಲೆ ರಷ್ಯಾದ ದಕ್ಷಿಣದ ಸೈಫಿ ಹುಲ್ಲುಗಾವಲು ಪ್ರದೇಶ ಆರ್ಯರ ಮೂಲ ನೆಲೆಯೆಂದು ಅಭಿಪ್ರಾಯಪಟ್ಟಿದ್ದಾರೆ.

5. ಆರ್ಕ್ಟಿಕ್ ಪ್ರದೇಶ ಮೂಲಸ್ಥಾನ :

ಬಾಲಗಂಗಾಧರ ತಿಲಕ್‌ ರವರು ತಮ್ಮ ʻಆರ್ಕ್ಟಿಕ್ ಹೋಂ ಆಫ್ ದಿ ವೇದಾಸ್’ ಎಂಬ ಕೃತಿಯಲ್ಲಿ ಆರ್ಕ್ಟಿಕ್ ಪ್ರದೇಶ ಅಥವಾ ಉತ್ತರ ದೈವಪ್ರದೇಶವು ಆರ್ಯರ ಮೂಲಸ್ಥಾನ ವೆಂದಿದ್ದಾರೆ. ಇದಕ್ಕೆ ಅವರು ನೀಡುವ ಆಧಾರಗಳೆಂದರೆ ವೈದಿಕ ಕೃತಿಗಳಲ್ಲಿನ ನಿಸರ್ಗ, ಸಸ್ಯ, ಗಿಡಮರಗಳ ಮೇಲಿನ ವಿವರಣೆಯು ಆರ್ಕ್ಟಿಕ್ ಪ್ರದೇಶಕ್ಕೆ ಹೋಲಿಕೆಯಾಗುತ್ತದೆ. ತಿಲಕ್‌ ರವರು ಋಗ್ವೇದ ಮತ್ತು ಜೆಂಡ್ ಅವೆಸ್ತಾಗಳನ್ನು ದೀರ್ಘವಾಗಿ ಅಧ್ಯಯನಮಾಡಿ ಈ ನಿರ್ಧಾರಕ್ಕೆ ಬಂದಿದ್ದಾರೆ.

6. ಟಿಬೆಟ್ ಮೂಲಸ್ಥಾನ :

ಸ್ವಾಮಿ ದಯಾನಂದ ಸರಸ್ವತಿಯವರು ತಮ್ಮ ʻಸತ್ಯಾರ್ಥಪ್ರಕಾಶ’ ಕೃತಿಯಲ್ಲಿ ಆರ್ಯರ ಮೂಲಸ್ಥಾನ ಟಿಬೆಟ್ ಎಂದು ಅಭಿಪ್ರಾಯಪಟ್ಟಿದ್ದಾರೆ. ಎಫ್.ಇ. ಪಾರ್ಗಿಟರ್ ರವರು ತಮ್ಮ ʻಏನ್ಸಿಯಂಟ್ ಇಂಡಿಯನ್ ಹಿಸ್ಟಾರಿಕಲ್ ಟ್ರಡಿಷನ್ಸ್’ ಎಂಬ ಕೃತಿಯಲ್ಲಿ ದಯಾನಂದ ಸರಸ್ವತಿಯವರ ವಾದವನ್ನು ಬೆಂಬಲಿಸಿದ್ದಾನೆ. ಏಕೆಂದರೆ ಟಿಬೆಟಿಯನ್ ರ ಆಚರಣೆಗೂ ಮತ್ತು ಆರ್ಯರ ಆಚರಣೆಗಳ ನಡುವೆ ಹೋಲಿಕೆ ಇದೆ. ಹೀಗೆ ಆರ್ಯರ ಮೂಲದ ಬಗ್ಗೆ ವಿಭಿನ್ನ ಅಭಿಪ್ರಾಯಗಳಿವೆ. ಮೇಲಿನ ಅಭಿಪ್ರಾಯಗಳನ್ನು ಅವಲೋಕಿಸಿದ ನಂತರ ಆರ್ಯರ ಮೂಲ ವಿದೇಶವೆಂದು ತಿಳಿದುಬರುತ್ತದೆ. ಆದರೆ ಆರ್ಯರು ಭಾರತ ದೇಶೀಯರು ಎಂಬ ವಾದವೂ ಸಹ ಇದೆ.

ಉತ್ತರ ವೈದಿಕ ಕಾಲ

ಉತ್ತರ ವೈದಿಕ ಕಾಲ

ಉತ್ತರ ವೈದಿಕ ಕಾಲವನ್ನು ಕೊನೆಯ ವೇದಗಳ ಕಾಲದ ನಾಗರೀಕತೆ ಎಂದು ಸಹ ಹೆಸರಿಸಲಾಗಿದೆ. ಉತ್ತರ ವೈದಿಕಕಾಲದ ಕಾಲಮಾನ ಕ್ರಿ.ಪೂ 1200 ರಿಂದ ಕ್ರಿ.ಪೂ 600, ಋಗ್ವೇದದ ಕಾಲದಲ್ಲಿ ಸಪ್ತಸಿಂಧು ಪ್ರಾಂತ್ಯಕ್ಕೆ ಸೀಮಿತವಾಗಿದ್ದ ಆರ್ಯರ ಸಂಸ್ಕೃತಿ ಕ್ರಮೇಣ ಋಗ್ವೇದದ ಕಾಲದಲ್ಲಿ ವಿಸ್ತರಣೆಗೊಂಡಿತು. ಉತ್ತರ ವೈದಿಕಕಾಲದಲ್ಲಿ ಪೂರ್ವವೈದಿಕ ಕಾಲಕ್ಕಿಂತ ಭಿನ್ನವಾದ ಜನಜೀವನ ಕಂಡುಬಂದಿತು.

ಆಧಾರಗಳು : ಉತ್ತರ ವೈದಿಕಕಾಲದ ಆರ್ಯರ ಸಂಸ್ಕೃತಿಯ ಬಗ್ಗೆ ತಿಳಿಯಲು ಯಜುರ್ವೇದ, ಸಾಮವೇದ ಮತ್ತು ಅಥರ್ವಣವೇದ, ಬ್ರಾಹ್ಮಣಗಳು, ಅರಣ್ಯಕಗಳು ಹಾಗೂ ಉಪನಿಷತ್ತುಗಳು ಸಹಕಾರಿಯಾಗಿವೆ.

ಆರ್ಯರ ಜನಜೀವನ : ಉತ್ತರ ವೈದಿಕಕಾಲದ ಆರ್ಯರ ಜನಜೀವನವು ರಾಜಕೀಯ ವ್ಯವಸ್ಥೆ, ಸಾಮಾಜಿಕ ಸ್ಥಿತಿ, ಆರ್ಥಿಕ ಜೀವನ, ಧಾರ್ಮಿಕ ವ್ಯವಸ್ಥೆ, ಶಿಕ್ಷಣ ಮತ್ತು ಸಾಹಿತ್ಯ ಹಾಗೂ ತತ್ವಜ್ಞಾನದ ಬೆಳವಣಿಗೆಯನ್ನು ಅವಲಂಭಿಸಿತ್ತು.

ಎ. ರಾಜಕೀಯ ವ್ಯವಸ್ಥೆ :

ಪೂರ್ವವೈದಿಕ ಕಾಲದ ರಾಜಕೀಯ ವ್ಯವಸ್ಥೆಯಲ್ಲಿ ಋಗ್ವೇದ ಕಾಲಕ್ಕಿಂತ ಭಿನ್ನವಾದ ಲಕ್ಷಣಗಳು ಕಂಡುಬಂದವು. ಅಂತಹ ಲಕ್ಷಣಗಳಲ್ಲಿ ಪ್ರಮುಖವಾದವುಗಳೆಂದರೆ :

ರಾಜ್ಯಗಳ ಏಳಿಗೆ :

ಪೂರ್ವವೈದಿಕ ಕಾಲದಲ್ಲಿದ್ದ ಬಣರಾಜ್ಯಗಳು ನಶಿಸಿ ಚಿಕ್ಕಪುಟ್ಟ ರಾಜ್ಯಗಳು ಅಸ್ತಿತ್ವಕ್ಕೆ ಬಂದವು. ಅಂತಹ ರಾಜ್ಯಗಳಲ್ಲಿ ಪ್ರಮುಖವಾದವು ಕಾಶಿ, ಕೋಸಲ, ವಿದೇಹ, ಮಗಧ ಹಾಗೂ ಅಂಗರಾಜ್ಯಗಳು,

ಎ) ಕಾಶಿ : ಕಾಶಿಯು ಒಂದು ರಾಜ್ಯವಾಗಿತ್ತು. ಬ್ರಹ್ಮದತ್ತ ಸಂತತಿಯವರು ಕಾಶಿ ರಾಜ್ಯವಾಳುತ್ತಿದ್ದರು. ಕಾಶಿಯ ಪ್ರಖ್ಯಾತ ಅರಸರಲ್ಲಿ ಅಜಾತಶತ್ರು ಪ್ರಮುಖನಾಗಿದ್ದನು. ಅಜಾತಶತ್ರುವು ದಕ್ಷ ಅರಸನಾಗಿದ್ದುದಲ್ಲದೆ ವಿದ್ವಾಂಸರಿಗೆ ಅಪಾರ ಪ್ರೋತ್ಸಾಹ ನೀಡಿದ್ದನು. ಕ್ರಿ.ಪೂ 700 ರವೇಳೆಗೆ ಕಾಶಿಯು ತನ್ನ ಪ್ರಾಮುಖ್ಯತೆ ಕಳೆದುಕೊಂಡಿತು. ಕ್ರಮೇಣ ಕಾಶಿಯು ಆಧ್ಯಾತ್ಮಿಕ ಮತ್ತು ಧಾರ್ಮಿಕ ಕೇಂದ್ರವಾಗಿ ಮಾರ್ಪಟ್ಟಿತ್ತು.

ಬಿ) ಕೋಸಲ: ಕೋಸಲ ಸಹ ಒಂದು ಪ್ರಮುಖ ರಾಜ್ಯವಾಗಿತ್ತು. ಆದರೆ ಅಯೋದ್ಯ ಅವರ ಆರಂಭದ ರಾಜಧಾನಿಯಾಗಿದ್ದು ಸಾಕೇತ ಮತ್ತು ಶ್ರಾವಸ್ಥಿ ಆನಂತರದ ರಾಜದಾನಿಗಳು. ಪುರಾಣಗಳು 31 ಇಕ್ಷಾಕು ಅರಸರು ಆಳ್ವಿಕೆ ನಡೆಸಿದರೆಂದು ತಿಳಿಸುತ್ತವೆ. ಶುದ್ಧೋದನ, ಸಿದ್ದಾರ್ಥ, ರಾಹುಲ ಪ್ರಮುಖರಾಗಿದ್ದರು. ಕಾಶಿ ಮತ್ತು ಕೋಸಲದ ಮಧ್ಯ ರಾಜಕೀಯ ಪ್ರಭುತ್ವ ಸ್ಥಾಪನೆಗಾಗಿ ಹೋರಾಟ ನಡೆದು ಕೋಸಲ ಪ್ರಬಲವಾಯಿತು.

ಸಿ) ವಿದೇಹ : ಕೋಸಲದ ಪೂರ್ವಕ್ಕೆ ವಿದೇಹ ರಾಜ್ಯವಿದ್ದು, ಮಿಥೆಲೆಯು ಕೋಸಲದ ರಾಜಧಾನಿಯಾಗಿತ್ತು. ವಿದೇಹದ ಅರಸ ಜನಕ ಕ್ಷತ್ರಿಯನಾಗಿದ್ದರೂ ಬ್ರಹ್ಮ ವಿದ್ಯೆಯ ಪ್ರವೀಣವೆನಿಸಿದ್ದನು. ಅವನನ್ನು ಜನಕ ಮಹರ್ಷಿ ಎಂದೇ ಕರೆಯಲಾಗುತ್ತಿತ್ತು. ಕೋಸಲ ಮತ್ತು ವಿದೇಹ ರಾಜ್ಯಗಳ ಮಧ್ಯೆ ವೈವಾಹಿಕ ಬಾಂಧವ್ಯವಿತ್ತು.

ಡಿ) ಮಗಧ : ಕೋಸಲ ಮತ್ತು ವಿದೇಹ ರಾಜ್ಯಗಳ ಪೂರ್ವಕ್ಕೆ ಮಗಧರಾಜ್ಯವಿತ್ತು. ವೈದಿಕ ಸಾಹಿತ್ಯ ಕೃತಿಗಳು ಮಗಧರು ದಕ್ಷಿಣ ಬಿಹಾರದಲ್ಲಿ ಪ್ರಾಬಲ್ಯಕ್ಕೆ ಬಂದರೆಂದು ತಿಳಿಸುತ್ತವೆ. ಯಜುರ್ವೇದ ಮತ್ತು ಅಥರ್ವಣ ವೇದಗಳಲ್ಲಿ ಉಲ್ಲೇಖಿಸಲ್ಪಟ್ಟಂತೆ ಮಗಧ ದೊರೆಗಳು ಕ್ಷತ್ರಿಯ ಮತ್ತು ವೈಶ್ಯ ಮಿಶ್ರಜಾತಿಗೆ ಸೇರಿದವರಾಗಿದ್ದರು. ಇವರು ವೈದಿಕ ಸಂಸ್ಕೃತಿಯನ್ನು ಅನುಸರಿಸುತ್ತಿರಲಿಲ್ಲ.

ರಾಜನ ಆಡಳಿತ ಮತ್ತು ಅಧಿಕಾರಗಳು :

ರಾಜನು ಅಪರಿಮಿತವಾದ ಆಡಳಿತಾಧಿಕಾರವನ್ನು ಪಡೆದಿದ್ದನು. ಸಾಮಾನ್ಯ ಆಡಳಿತನಿರ್ವಹಣೆ ಮತ್ತು ನ್ಯಾಯಿಕ ಅಧಿಕಾರಗಳು ರಾಜನಿಗಿದ್ದವು. ರಾಜನ ಆಡಳಿತಾತ್ಮಕ ಅಧಿಕಾರಗಳನ್ನು ಪ್ರಶ್ನಿಸುವಂತಿರಲಿಲ್ಲ.

ಎ) ಅಧಿಕಾರಿಗಳು:-ರಾಜನ ರಾಜ್ಯಾಡಳಿತದಲ್ಲಿ ಸಹಕರಿಸಲು ಪುರೋಹಿತ, ಗ್ರಾಮಿಣಿ ಮತ್ತು ಸೇನಾನಿ ಗಳಿದ್ದರು ಅಲ್ಲದೆ ಭಾಗದುಗ(ಕರವಸೂಲಿಗಾರ) ಸಾರಥಿಸಮ್‌ ಗ್ರಹಿತ್ತಿ (ಕೋಶಾಧಿಕಾರಿ) ಪಲಗಲ(ಆಸ್ಥಾನಿಕ) ಎಂಬ ಅಧಿಕಾರಿಗಳ ವಿವರಗಳು ದೊರೆತಿವೆ.

ಬಿ) ಸಭಾ ಮತ್ತು ಸಮಿತಿಗಳು : ಪೂರ್ವ ವೈದಿಕ ಕಾಲದಲ್ಲಿದ್ದಂತೆಯೇ ಉತ್ತರ ವೈದಿಕಕಾಲದಲ್ಲಿಯೂ ಸಭಾ ಮತ್ತು ಸಮಿತಿಗಳು ಅಸ್ತಿತ್ವದಲ್ಲಿದ್ದವು. ಎ.ಎಲ್.ಬಾಷಂ ʻಎ ವಂಡರ್ ದಟ್ ವಾಸ್ ಇಂಡಿಯಾ’ ದಲ್ಲಿ ಅಭಿಪ್ರಾಯಪಡುವಂತೆ ʻಸಭಾ ಮತ್ತು ಸಮಿತಿಗಳು ರಾಜ್ಯಾಡಳಿತದಲ್ಲಿ ಸಹಕರಿಸುತ್ತಿದ್ದವು’.

ಸಿ) ಅಶ್ವಮೇಧಯಾಗ, ರಾಜಸೂಯ ಯಾಗಗಳು:- ರಾಜರುಗಳು ವಿಶಾಲ ರಾಜ್ಯವನ್ನು ಸ್ಥಾಪಿಸಿದ್ದರಿಂದ ಅದರ ಜ್ಞಾಪಕಾರ್ಥವಾಗಿ ರಾಜಸೂಯಯಾಗ

ಬಿ. ಸಾಮಾಜಿಕ ಸ್ಥಿತಿಗತಿ :

ಉತ್ತರ ವೈದಿಕಕಾಲದ ಸಾಮಾಜಿಕ ವ್ಯವಸ್ಥೆಯಲ್ಲಿ ಕೆಲವು ಪ್ರಮುಖ ಲಕ್ಷಣಗಳು ಕಂಡುಬರುತ್ತವೆ. ಅಂತಹ ಪ್ರಮುಖ ಲಕ್ಷಣಗಳೆಂದರೆ.

ಎ) ಅವಿಭಕ್ತಕುಟುಂಬ ಪದ್ಧತಿ : ಪೂರ್ವ ವೈದಿಕಕಾಲದಲ್ಲಿದ್ದಂತೆಯೇ ಉತ್ತರ ವೈದಿಕಕಾಲದಲ್ಲೂ ಅವಿಭಕ್ತ ಕುಟುಂಬ ಪದ್ಧತಿಯು ಮುಂದುವರೆಯಿತು.

ಬಿ) ಸ್ತ್ರೀಯರ ಸ್ಥಾನ : ಉತ್ತರ ವೈದಿಕಕಾಲದಲ್ಲಿ ಸ್ತ್ರೀಯರ ಸ್ಥಾನವು ಗೌಣವಾದುದಾಗಿರಲಿಲ್ಲ. ಕೌಟುಂಬಿಕ ವ್ಯವಹಾರಗಳಲ್ಲಿ ಸ್ತ್ರೀಯರು ಪಾಲ್ಗೊಳ್ಳುತ್ತಿದ್ದರು.

ಸಿ) ಉಡುಪು ಮತ್ತು ಆಭರಣಗಳು : ಪೂರ್ವ ವೈದಿಕಕಾಲದಲ್ಲಿದ್ದಂತೆಯೇ ಉತ್ತರ ವೈದಿಕಕಾಲದಲ್ಲಿ ಸ್ತ್ರೀ-ಪುರುಷರು ಹತ್ತಿ ಮತ್ತು ಉಣ್ಣೆಯ ಉಡುಪುಗಳನ್ನು ಧರಿಸುತ್ತಿದ್ದರು. ಈ ಕಾಲದಲ್ಲಿಯೂ ಸ್ತ್ರೀ-ಪುರುಷರು ಆಭರಣಪ್ರಿಯರಾಗಿದ್ದರು.

ಡಿ) ಆಹಾರ, ಪಾನೀಯಗಳು : ಮಿಶ್ರ ಆಹಾರ ಪದ್ಧತಿ ಅಸ್ತಿತ್ವದಲ್ಲಿತ್ತು. ಸಸ್ಯಹಾರ ಮತ್ತು ಮಾಂಸಾಹಾರಗಳು ಬಳಕೆಯಲ್ಲಿದ್ದವು. ʻಸೋಮರಸ ಮತ್ತು ಸುರೆ’ ಎಂಬ ಮತ್ತಿನ ಪಾನೀಯಗಳನ್ನು ಸೇವಿಸುತ್ತಿದ್ದರು.

ಇ) ವಿವಾಹ ಪದ್ಧತಿ : ಉತ್ತರ ವೈದಿಕಕಾಲದಲ್ಲಿ 8 ಬಗೆಯ ವಿವಾಹ ಪದ್ಧತಿಗಳು ಅಸ್ತಿತ್ವದಲ್ಲಿದ್ದವೆಂದು ಧರ್ಮಸೂತ್ರಗಳು ವಿವರನೀಡುತ್ತವೆ. ಅವುಗಳೆಂದರೆ ಬ್ರಹ್ಮ, ದೈವ, ಆರ್ಷ, ಪ್ರಜಾಪತ್ಯ, ಗಾಂಧರ್ವ, ಅಸುರ, ರಾಕ್ಷಸ ಮತ್ತು ಪೈಶಾಚ. ವಿಧವಾ ವಿವಾಹ ಪದ್ಧತಿಯಲ್ಲಿ ನಿರ್ಬಂಧದ ವಿವಾಹ ಅಸ್ತಿತ್ವದಲ್ಲಿತ್ತು.

ಎಫ್) ಜಾತಿ ಪದ್ಧತಿ : ಉತ್ತರ ವೈದಿಕಕಾಲದಲ್ಲಿನ ಸಾಮಾಜಿಕ ವ್ಯವಸ್ಥೆಯ ಒಂದು ಪ್ರಧಾನ ಲಕ್ಷಣವೆಂದರೆ ಜಾತಿ ಪದ್ಧತಿ ಅಸ್ತಿತ್ವಕ್ಕೆ ಬಂದದ್ದು. ಋಗ್ವೇದದ 10ನೇ ಮಂಡಲದಲ್ಲಿ ಜಾತಿ ಪದ್ಧತಿಯ ಉಗಮ ಮತ್ತು ಜಾತಿಗಳ ನಿರ್ದಿಷ್ಟ ಕಸುಬುಗಳ ಬಗ್ಗೆ ವಿವರವಿದೆ. ವರ್ಣಪದ್ಧತಿಯಲ್ಲಿ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರ ಎಂಬ ನಾಲ್ಕು ಜಾತಿಗಳಿದ್ದವು. ಬ್ರಾಹ್ಮಣರು ಬ್ರಹ್ಮನ ಮುಖದಿಂದಲೂ, ಕ್ಷತ್ರಿಯರು ಬ್ರಹ್ಮನ ಭುಜಗಳಿಂದಲೂ, ವೈಶ್ಯರು ಬ್ರಹ್ಮನ ತೊಡೆಗಳಿಂದಲೂ ಮತ್ತು ಶೂದ್ರರು ಬ್ರಹ್ಮನ ಪಾದಗಳಿಂದಲೂ ಜನಿಸಿದವರೆಂದು ಉಲ್ಲೇಖಗಳಿವೆ. ಬ್ರಾಹ್ಮಣರು-ವೇದಾಧ್ಯಯನವನ್ನು, ಕ್ಷತ್ರಿಯರು ರಾಜ್ಯರಕ್ಷಣೆಯನ್ನು, ವೈಶ್ಯರು ವ್ಯಾಪಾರ ವಾಣಿಜ್ಯವನ್ನೂ, ಶೂದ್ರರು ಮೇಲಿನ ಮೂರು ವರ್ಗಗಳ ಸೇವೆಯನ್ನು ಮಾಡಬೇಕಾಗಿತ್ತು.

ಜಿ) ಆಶ್ರಮ ವ್ಯವಸ್ಥೆ : ಉತ್ತರ ವೈದಿಕಕಾಲದ ಸಾಮಾಜಿಕ ವ್ಯವಸ್ಥೆಯಲ್ಲಿನ ಒಂದು ಪ್ರಮುಖ ಲಕ್ಷಣವೆಂದರೆ ವರ್ಣಾಶ್ರಮ ವ್ಯವಸ್ಥೆಯ ಅಸ್ತಿತ್ವ, ಅವುಗಳೆಂದರೆ ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ ಮತ್ತು ಸನ್ಯಾಸಾಶ್ರಮಗಳು.

ಬ್ರಹ್ಮಚರ್ಯ : ಈ ಆಶ್ರಮವನ್ನು ಅವಲಂಬಿಸಿದ ಬಾಲಕ ಉಪನಯನ ಸಂಸ್ಕಾರವಾದ ಮೇಲೆ ಯೋಗ್ಯವಾದ ಗುರುವಿನ ಬಳಿ ಶಿಕ್ಷಣವನ್ನು ಪಡೆಯಬೇಕಾಗಿತ್ತು. ಶಿಕ್ಷಣವನ್ನು ಆಶ್ರಮದಲ್ಲಿ ಪಡೆಯಬೇಕಾಗಿತ್ತು. 8 ರಿಂದ 25 ವರ್ಷಗಳವರೆಗೆ ಶಿಕ್ಷಣವನ್ನು ಪಡೆಯಬಹುದಾಗಿತ್ತು. ಶಿಕ್ಷಣದ ಜೊತೆಗೆ ಆಶ್ರಮದ ಕೆಲಸಕಾರ್ಯಗಳನ್ನು ಸಹ ನಿರ್ವಹಿಸಬೇಕಾಗಿತ್ತು. ಸೂಕ್ತ ಶಿಕ್ಷಣ ಪಡೆದ ನಂತರ ಗುರುವಿನ ಆಶೀರ್ವಾದ ಪಡೆದು ಗುರುಕಾಣಿಕೆ ಸಲ್ಲಿಸಿ ಆಶ್ರಮವನ್ನು ತ್ಯಜಿಸಬೇಕಾಗಿತ್ತು.

ಗೃಹಸ್ಥಾಶ್ರಮ : ಗೃಹಸ್ಥಾಶ್ರಮನ್ನು ಅವಲಂಬಿಸಿದ ವ್ಯಕ್ತಿಯ ಶಿಕ್ಷಣದ ನಂತರ ಗೃಹಸ್ಥಾಶ್ರಮ ಪ್ರವೇಶಿಸಬೇಕಾಗಿತ್ತು. ಗೃಹಸ್ಥಾಶ್ರಮದಲ್ಲಿ 40 ಸಂಸ್ಕಾರ ವಿಧಿಗಳನ್ನು ಆಚರಿಸುತ್ತ ಪಿತೃಋಣ, ಸಮಾಜದ ಋಣ ಮತ್ತು ದೇವಋಣ ಗಳನ್ನು ತೀರಿಸಬೇಕಾಗಿತ್ತು. ಗೃಹಸ್ಥಾಶ್ರಮವು ಶಿಸ್ತುಬದ್ಧ ಜೀವನವಾಗಿತ್ತು.

ಸನ್ಯಾಸಾಶ್ರಮ : ಗೃಹಸ್ಥಾಶ್ರಮದ ನಂತರ 50 ವರ್ಷ ದಾಟಿದವರು ಸನ್ಯಾಸಾಶ್ರಮವನ್ನು ಪ್ರವೇಶಿಸಬೇಕಿತ್ತು. ಐಹಿಕ ಭೋಗಗಳನ್ನು ತ್ಯಜಿಸಿ, ಒಂದೆಡೆ ವಾಸಿಸದೆ ಧ್ಯಾನಾಸಕ್ತನಾಗಿ ವೇದಮಂತ್ರಗಳ ಪಠಿಸುತ್ತಾ ಸಂಧ್ಯಾವಿಧಿಗಳನ್ನು ನೆರವೇರಿಸಿಕೊಂಡು ಭಿಕ್ಷಾನ್ನದಿಂದ ಹಸಿವನ್ನು ನೀಗಿಸಿಕೊಳ್ಳಬೇಕಾಗಿತ್ತು.

ವಾನಪ್ರಸ್ಥಾಶ್ರಮ : ಸನ್ಯಾಸಾಶ್ರಮದನಂತರ ಅಂತಿಮವಾಗಿ ವಾನಪ್ರಸ್ಥಾಶ್ರಮವನ್ನು ಅವಲಂಬಿಸಬಹುದಿತ್ತು. ವಾನಪ್ರಸ್ಥಾಶ್ರಮದ ವ್ಯಕ್ತಿಗಳು ಕಾಡುಗಳಲ್ಲಿ ಸಂಚರಿಸುತ್ತ ನಾರುಡಿಗೆಯನ್ನು ಧರಿಸಿ ಹಣ್ಣು-ಗೆಡ್ಡೆ-ಗೆಣಸುಗಳನ್ನು ತಿಂದು ಹಸಿವನ್ನು ನೀಗಿಸಬೇಕಾಗಿತ್ತು. ಅಂತಿಮವಾಗಿ ನಿರಾಹಾರಿಯಾಗಿ ಧ್ಯಾನಾಸಕ್ತನಾಗಿ ಇಹಲೋಕವನ್ನು ತ್ಯಜಿಸಬೇಕಾಗಿತ್ತು.

ಆಶ್ರಮ ವ್ಯವಸ್ಥೆಯು ಕಡ್ಡಾಯವಾಗಿ ಅಸ್ತಿತ್ವದಲ್ಲಿರಲಿಲ್ಲ. ಆಶ್ರಮ ವ್ಯವಸ್ಥೆಯ ಅನುಸರಣೆಯಿಂದ ಐಹಿಕ ಜೀವನದಲ್ಲಿ ಸದ್ಧತಿ ಮತ್ತು ಮೋಕ್ಷ ದೊರೆಯುವುದೆಂಬ ನಂಬಿಕೆ ಇತ್ತು. ಬ್ರಾಹ್ಮಣರು 4 ಆಶ್ರಮಗಳನ್ನೂ ಅವಲಂಬಿಸಿದ್ದರೆ ಉಳಿದ ವರ್ಗಗಳು ಕೇವಲ ಗೃಹಸ್ಥಾಶ್ರಮವನ್ನು ಮಾತ್ರ ಅವಲಂಬಿಸಿದ್ದರು.

ಸಿ. ಆರ್ಥಿಕ ಸ್ಥಿತಿಗತಿ :

ಉತ್ತರ ವೈದಿಕಕಾಲದ ಆರ್ಥಿಕ ಸ್ಥಿತಿಗತಿಯು ಪೂರ್ವವೈದಿಕಕಾಲಕ್ಕಿಂತ ಸ್ವಲ್ಪ ಭಿನ್ನತೆಯಿಂದ ಕೂಡಿತ್ತು. ಪ್ರಮುಖ ಕಸುಬುಗಳು ಮತ್ತು ಉಪಕಸುಬುಗಳು ಕಂಡುಬರುತ್ತಿದ್ದವು.

ಎ) ವ್ಯವಸಾಯ : ಒಂದು ಪ್ರಧಾನ ಕಸುಬಾಗಿತ್ತು. ಗಂಗಾ ನದಿಯ ಬಯಲಿನಲ್ಲಿ ‘ರಾಜಸಾರಿ’ ಎಂಬ ಭತ್ತವನ್ನು ಹೇರಳವಾಗಿ ಬೆಳೆಯುತ್ತಿದ್ದರು. ಭೂಮಿಯನ್ನು ಉಳುಮೆ ಮಾಡಲು, ಭಾರವಾದ ನೇಗಿಲನ್ನು ಎಳೆಯಲು 24 ಎತ್ತುಗಳನ್ನು ಉಪಯೋಗಿಸುತ್ತಿದ್ದರು. ಭತ್ತ, ಗೋದಿ, ಬಾರ್ಲಿ, ಬೀನ್ಸ್, ಎಣ್ಣೆ ಬೀಜಗಳನ್ನು ಬೆಳೆಯುತ್ತಿದ್ದರು

ಬಿ) ವ್ಯಾಪಾರ : ಆಂತರಿಕ ಮತ್ತು ಅಂತರಾಷ್ಟ್ರೀಯ ವ್ಯಾಪಾರಗಳೆರಡು ಅಸ್ತಿತ್ವದಲ್ಲಿದ್ದವು. ಆಂತರಿಕ ವ್ಯಾಪಾರವು ದಕ್ಷಿಣ ಭಾರತದೊಂದಿಗೂ ಅಂತರಾಷ್ಟ್ರೀಯ ವ್ಯಾಪಾರವು ಬ್ಯಾಬಿಲೋನಿಯಾ ಮೊದಲಾದ ದೇಶಗಳೊಡನೆ ನಡೆಯುತ್ತಿತ್ತು. ಸಾಗರೋತ್ತರ ವ್ಯಾಪಾರವು ಅಭಿವೃದ್ಧಿಗೊಂಡಿತ್ತು.

ಸಿ) ಪಶುಪಾಲನೆ : ಪಶುಪಾಲನೆಯು ಮತ್ತೊಂದು ಪ್ರಧಾನ ಕಸುಬಾಗಿತ್ತು. ಹಸುವು ಪವಿತ್ರ ಮತ್ತು ಪೂಜಾರ್ಹ ವಾದುದಾಗಿತ್ತು. ಒಬ್ಬ ವ್ಯಕ್ತಿಯ ಶ್ರೀಮಂತಿಕೆಯನ್ನೂ ಅವನು ಹೊಂದಿರುವ ಹಸುಗಳ ಆಧಾರದ ಮೇಲೆ ನಿರ್ಧರಿಸಲಾಗುತ್ತಿತ್ತು. ಕುರಿ, ಮೇಕೆ, ಕುದುರೆ ಮೊದಲಾದ ಪ್ರಾಣಿಗಳನ್ನು ಸಾಕುತ್ತಿದ್ದರು

ಡಿ) ಉಪಕಸುಬುಗಳು : ನೂಲುವುದು, ನೇಯ್ದೆ, ಕುಂಬಾರಿಕೆ, ಮರಗೆಲಸ, ಗಾರೆಕೆಲಸ, ಆಭರಣಗಳ ತಯಾರಿಕೆ, ಕಸೂತಿಕೆಲಸ, ಚಾಪೆ ಮತ್ತು ಬುಟ್ಟಿ ಹೆಣೆಯುವುದು ಮೊದಲಾದ ಹಲವು ಉಪಕಸುಬುಗಳಿದ್ದವು.

ಉತ್ತರ ವೈದಿಕಕಾಲದಲ್ಲಿ ಭಿನ್ನವಾದ ಧಾರ್ಮಿಕ ಜೀವನವು ಕಂಡುಬರುತ್ತಿತ್ತು.

ಡಿ. ಧಾರ್ಮಿಕ ಸ್ಥಿತಿ :

ಎ) ಯಾಗಯಜ್ಞಗಳ ಪ್ರಾಬಲ್ಯ : ಉತ್ತರ ವೈದಿಕಕಾಲದಲ್ಲಿ ಯಾಗ ಯಜ್ಞಗಳು ಹೆಚ್ಚು ಬೆಳವಣಿಗೆಗೊಂಡವು, ಪುರೋಹಿತರ ಸಂಖ್ಯೆ 16ಕ್ಕೇರಿತ್ತು. ಜನಸಾಮಾನ್ಯರು ಯಾಗ ಯಜ್ಞಗಳ ಬಗ್ಗೆ ಒಲವು ತೋರಿಸಿದರು. ಯಾಗ ಯಜ್ಞಗಳ ಆಚರಣೆ ಮತ್ತು ಮಂತ್ರೋಚ್ಛಾರಣೆಯಿಂದಾಗಿ ಪುರೋಹಿತರ ಸ್ಥಾನಮಾನವು ಮೇಲಕ್ಕೇರಿತ್ತು. ವೈದಿಕ ಯುಗದ ಕೊನೆಯ ವೇಳೆಗೆ ಜನಸಾಮಾನ್ಯರು ಯಾಗ ಯಜ್ಞಗಳು ಆರ್ಥಿಕವಾಗಿ ಹೊರೆಯಾದವುಗಳೆಂದು ನಿರ್ಧರಿಸಿದ್ದರು.

ಬಿ) ಏಕದೇವತಾ ಆರಾಧನಾ ಪದ್ಧತಿ : ಉತ್ತರ ವೈದಿಕಕಾಲದಲ್ಲಿ ಬಹುದೇವತಾ ಆರಾಧನಾ ಪದ್ಧತಿಯು ಅಂತ್ಯಗೊಂಡು ಏಕದೇವತಾ ಆರಾಧನಾ ಪದ್ಧತಿಯು ಅಸ್ತಿತ್ವಕ್ಕೆ ಬಂದಿತ್ತು. ಜೀವಾತ್ಮನೂ, ಸಕಲ ಚರಾಚರವಸ್ತುಗಳ ನಿಯಂತ್ರಕನೂ ಆದ ‘ದೇವನೊಬ್ಬನೇ’ ಎಂಬ ಭಾವನೆ ಮೂಡಿಬಂದಿತು. ಹೀಗಾಗಿ ಬ್ರಹ್ಮ, ವಿಷ್ಣು, ಮಹೇಶ್ವರ ಮತ್ತು ಅವರ ಪತ್ನಿಯರಾದ ಸರಸ್ವತಿ, ಲಕ್ಷ್ಮೀ, ಪಾರ್ವತಿಯರ ಆರಾಧನೆಯೂ ಕಂಡುಬಂದಿತ್ತು. ಹೀಗಾಗಿ ವೈದಿಕ ಯುಗದ ಅಂತ್ಯದ ವೇಳೆಗೆ ವೈದಿಕ ಧರ್ಮಕ್ಕೆ ಬದಲು ಹೊಸ ಮತಗಳ ಉದಯಕ್ಕೆ ಪ್ರೋತ್ಸಾಹ ದೊರಕಿತು.

ಇ. ಶಿಕ್ಷಣ ಮತ್ತು ಸಾಹಿತ್ಯ :

ವೈದಿಕ ಯುಗದ ಕೊನೆಯ ವೇಳೆಗೆ ಗುರುಕುಲಾಶ್ರಮದ ಶಿಕ್ಷಣವು ಪ್ರಧಾನವಾಗಿ ಕಂಡುಬಂದಿತು. ಉಪನಯನ ಸಂಸ್ಕಾರವಾದ ಮೇಲೆ ಯೋಗ್ಯ ಗುರುಗಳ ಬಳಿ ಆಶ್ರಮದಲ್ಲಿ ಶಿಕ್ಷಣವನ್ನು ಪಡೆಯಬೇಕಿತ್ತು. 8 ರಿಂದ 25 ವರ್ಷಗಳವರೆಗೆ ಶಿಕ್ಷಣ ಪಡೆಯಬಹುದಾಗಿತ್ತು. ಶಿಕ್ಷಣಾರ್ಥಿಯು ಶಿಕ್ಷಣದ ಜೊತೆಗೆ ಆಶ್ರಮದ ಕೆಲಸ ಕಾರ್ಯಗಳನ್ನು ನಿರ್ವಹಿಸಬೇಕಾಗಿತ್ತು. ಪುರಾಣಗಳು, ಧರ್ಮಶಾಸ್ತ್ರಗಳು, ವೇದಗಳು, ವೇದಾಂಗಗಳು, ಚರಿತ್ರೆ, ವೈದ್ಯಶಾಸ್ತ್ರ ಮೊದಲಾದ ವಿಭಿನ್ನ ವಿಷಯಗಳ ಬಗ್ಗೆ ಶಿಕ್ಷಣ ನೀಡಲಾಗುತ್ತಿತ್ತು. ಪೂರ್ಣ ಶಿಕ್ಷಣ ಪಡೆದ ವಿದ್ಯಾರ್ಥಿ ಗುರುವಿನ ಆಶೀರ್ವಾದ ಪಡೆದು ಆಶ್ರಮ ತ್ಯಜಿಸಬೇಕಾಗಿತ್ತು.

ಸಾಹಿತ್ಯದಲ್ಲಿ ಯಜುರ್ವೇದ, ಸಾಮವೇದ ಮತ್ತು ಅಥರ್ವಣವೇದಗಳು, ಬ್ರಾಹ್ಮಣಗಳು, ಅರಣ್ಯಕಗಳು ಉಪನಿಷತ್‌ಗಳು ಹಾಗೂ ಎರಡು ಮಹಾಕಾವ್ಯಗಳಾದ ರಾಮಾಯಣ ಮತ್ತು ಮಹಾಭಾರತಗಳು ರಚನೆಗೊಂಡವು. [ಸೂಚನೆ: ಉತ್ತರ ವೈದಿಕ ಕಾಲದ ಸಾಹಿತ್ಯದ ಬಗ್ಗೆ ಹಿಂದೆಯೇ ವಿವರಿಸಲಾಗಿದೆ. ‘ಆರ್ಯ ಸಂಸ್ಕೃತಿಯ ರಚನೆಗಿರುವ ಮೂಲಾಧಾರಗಳು’ ಎಂಬ ಪ್ರಾರಂಭಿಕ ಭಾಗವನ್ನು ಗಮನಿಸಿ]

ಎಫ್. ತತ್ವಜ್ಞಾನ :

ಉತ್ತರ ವೈದಿಕಕಾಲದಲ್ಲಿ ತತ್ವಜ್ಞಾನವು ಬೆಳವಣಿಗೆ ಹೊಂದಿತ್ತು. ಜನಕ ಮಹರ್ಷಿ ರಾಜನಾಗಿದ್ದನಲ್ಲದೆ ಪ್ರಖ್ಯಾತ ತತ್ವಜ್ಞಾನಿಯೂ ಆಗಿದ್ದನು. ಆಗಾಗ್ಗೆ ತನ್ನ ರಾಜ್ಯದಲ್ಲಿ ತತ್ವಜ್ಞಾನದ ಸಭೆಗಳನ್ನು ನಡೆಸುತ್ತಿದ್ದನು. ವಿಶ್ವಾವರ, ಮೈತ್ರೇಯಿ ಮತ್ತು ಗಾರ್ಗಿ ಎಂಬ ಖ್ಯಾತ ಮಹಿಳಾ ವಿದ್ವನ್ಮಣಿಗಳು ಈ ಸಭೆಗೆ ಹಾಜರಾಗಿ ತಾತ್ವಿಕ ಚಿಂತನೆ ನಡೆಸುತ್ತಿದ್ದರು. ಇ.ಇ.ಪಾರ್ಗಿಟರ್ ಅಭಿಪ್ರಾಯದಂತೆ ‘ವಿಶ್ವದ ತತ್ವಜ್ಞಾನರಾಶಿಗೆ ಭಾರತದ ಅತ್ಯಮೂಲ್ಯವಾದ ಕೊಡುಗೆಗಳೆಂದರೆ ಉಪನಿಷತ್‌ಗಳು’.

ಹೀಗೆ ವೈದಿಕಯುಗದ ಉತ್ತರಾರ್ದದ ಜನಜೀವನದಲ್ಲಿ ಕೆಲವು ಪ್ರಮುಖ ಲಕ್ಷಣಗಳು ಕಂಡು ಬರುತ್ತವೆ.

ಪೂರ್ವವೇದ ಮತ್ತು ಉತ್ತರ ವೇದಗಳ ಕಾಲದ ನಡುವಿನ ತುಲನೆ

ಪೂರ್ವವೇದ ಮತ್ತು ಉತ್ತರ ವೇದಗಳ ಕಾಲದ ನಡುವಿನ ತುಲನೆ

ಹೋಲಿಕೆಗಳು (ಸಮಾನ ಅಂಶಗಳು) :

  1. ರಾಜಕೀಯವಾಗಿ ಹೋಲಿಕೆ : ಅನುವಂಶಿಕ ರಾಜಪ್ರಭುತ್ವ, ರಾಜನ ಕರ್ತವ್ಯಗಳು, ಸಭಾ ಮತ್ತು ಸಮಿತಿಗಳ ಅಸ್ತಿತ್ವ ಉತ್ತರ ವೇದಗಳ ಕಾಲದಲ್ಲೂ ಮುಂದುವರೆಯಿತು.
  2. ಸಾಮಾಜಿಕವಾಗಿ ಹೋಲಿಕೆ : ಅವಿಭಕ್ತ ಕೌಟುಂಬಿಕ ವ್ಯವಸ್ಥೆ, ಪಿತೃ ಪ್ರಧಾನ ಕುಟುಂಬ, ಗಂಡು ಸಂತಾನ ಇಷ್ಟ ಪಡುವುದು, ಆಹಾರ ಪಾನೀಯ, ಮನರಂಜನೆ, ಉಡುಗೆ ತೊಡುಗೆ, ಪೂರ್ವ ವೇದಗಳ ಕಾಲದಲ್ಲಿದ್ದಂತೆ ಉತ್ತರ ವೇದಗಳ ಕಾಲದಲ್ಲೂ ಮುಂದುವರೆಯಿತು.
  3. ಆರ್ಥಿಕವಾಗಿ ಹೋಲಿಕೆ : ಕೃಷಿ ಪ್ರಧಾನ ಆರ್ಥಿಕ ವ್ಯವಸ್ಥೆ, ಕಬ್ಬಿಣದ ಬಳಕೆ, ವ್ಯಾಪಾರ ವಾಣಿಜ್ಯ, ಕೈಗಾರಿಕೆ ಪೂರ್ವ ವೇದಗಳ ಕಾಲದಲ್ಲಿ ಇದ್ದಂತೆ ಉತ್ತರ ವೇದಗಳ ಕಾಲದಲ್ಲಿ ಮುಂದುವರೆಯಿತು.
  4. ಧಾರ್ಮಿಕವಾಗಿ ಹೋಲಿಕೆ : ಹಸು ಪೂಜನೀಯವಾಗಿತ್ತು, ಪುರೋಹಿತರ ಪ್ರಾಬಲ್ಯವಿತ್ತು. ಜಾತಿ ಪದ್ಧತಿ, ಧಾರ್ಮಿಕ ಆಚರಣೆಗಳು ಎಂದಿನಂತೆ ಉತ್ತರ ವೇದಗಳ ಕಾಲದಲ್ಲಿ ಮುಂದುವರೆಯಿತು.

ವ್ಯತ್ಯಾಸಗಳು

ಉತ್ತರ ವೇದಗಳ ಕಾಲ

ಉತ್ತರ ವೈದಿಕ ಕಾಲ

1.

ರಾಜನು ಬಲಿಷ್ಯನಾಗಿರಲಿಲ್ಲ, ಆತ ಧರ್ಮ ಮತ್ತು ಕಾನೂನುಗಳಿಗೆ ತಲೆ ಭಾಗಬೇಕಿತ್ತು.

1.

ರಾಜನ ಬಲಿಷ್ಠನಾಗಿದ್ದನು. ಆತ ದೈವಾಂಶ ಸಂಭೂತನೆಂದು ಪರಿಗಣಿಸಲ್ಪಟ್ಟಿದ್ದನು.

2.

ಪುರೋಹಿತನ ಸ್ಥಾನಮಾನ ಉತ್ತಮವಾಗಿತ್ತು. ಪುರೋಹಿತಶಾಹಿ ಪ್ರಾಬಲ್ಯ ಇದ್ದಿತು.

2.

ಪುರೋಹಿತನ ಸ್ಥಾನಮಾನ ಕುಗ್ಗಿತು. ರಾಜತ್ವ ಪ್ರಾಬಲ್ಯ ಪಡೆಯಿತು.

3.

ಸಭಾ ಮತ್ತು ಸಮಿತಿಗಳು ಪ್ರಾಬಲ್ಯವಾಗಿದ್ದವು. ಅವು ರಾಜನನ್ನು ನಿಯಂತ್ರಿಸಿದ್ದವು.

3.

ಸಭಾ ಮತ್ತು ಸಮಿತಿಗಳ ಪ್ರಾಬಲ್ಯ ಕುಗ್ಗಿತು. ಕೇವಲ ರಾಜನ ಸಲಹಾ ಅಂಗಗಳಾಗಿ ಉಳಿದವು.

4.

ಜಾತಿಪದ್ಧತಿ ಅಸ್ತಿತ್ವದಲ್ಲಿರಲಿಲ್ಲ ಕರ್ತವ್ಯವಾಗಿತ್ತು.

4.

ಜಾತಿಪದ್ಧತಿ ಅಸ್ತಿತ್ವದಲ್ಲಿತ್ತು. ಅದು ತುಂಬಾ ಸಂಕೀರ್ಣದತ್ತ ಸಾಗಿತ್ತು.

5.

ರಾಜನು ನಿರಂಕುತನಾಗಿರಲಿಲ್ಲ. ಪ್ರಜಾ ಕಲ್ಯಾಣ ಅವನ ಆದ್ಯ ಕರ್ತವ್ಯವಾಗಿತ್ತು.

5.

ರಾಜನು ನಿರಂಕುಶನಾದನು. ಅವನು ದೈವತ್ವ ಸ್ಥಾನಕ್ಕೇರಿದನು.

6.

ಸ್ತ್ರೀಯರಿಗೆ ಗೌರವ ಸ್ಥಾನಮಾನಗಳಿದ್ದವು.

6.

ಸ್ತ್ರೀಯರ ಸ್ಥಾನಮಾನಗಳು ಕುಗ್ಗಿದವು.

7.

ಗ್ರಾಮೀಣ ಜೀವನ ಪ್ರಧಾನವಾಗಿತ್ತು.

7.

ನಗರ ಜೀವನ ಸಾಮಾನ್ಯವಾಯಿತು.

8.

ಅಂತರಜಾತಿ ವಿವಾಹ, ಬಾಲ್ಯ ವಿವಾಹ, ಬಹುಪತ್ನಿತ್ವಗಳು ಇರಲಿಲ್ಲ

8.

ಇವೆಲ್ಲವೂ ರೂಢಿಗೆ ಬಂದವು.

9.

9. ಇಂದ್ರ, ವರುಣ, ಮಿತ್ರ, ಅಗ್ನಿ, ಸೂರ್ಯ ದೇವತೆಗಳ ಜನಪ್ರಿಯತೆ, ಮೂರ್ತಿಪೂಜೆ ಇರಲಿಲ್ಲ.

9.

ಬ್ರಹ್ಮ, ವಿಷ್ಣು, ಶಿವ ದೇವರುಗಳ ಜನಪ್ರಿಯತೆ, ದೇವತಾವತಾರಗಳಲ್ಲಿ ನಂಬಿಕೆ ಉಂಟಾಯಿತು.

10.

ಯಜ್ಞಗಳ ಆಚರಣೆ ಸರಳವಾಗಿತ್ತು. ಧರ್ಮಾಚರಣೆ ಸುಲಭವಾಗಿತ್ತು.

10.

ಯಜ್ಞಗಳ ಆಚರಣೆ ದುಬಾರಿಯಾಯಿತು. ಈಗ ವೈದಿಕ ಧರ್ಮ ತುಂಬಾ ಜಟಿಲವಾಯಿತು.

11.

ವೃತ್ತಿ ಸಂಘಗಳು ಇರಲಿಲ್ಲ

11.

ವೃತ್ತಿ ಸಂಘಗಳು ಇದ್ದವು.

12.

ರಾಜನಿಗೆ ನೆರವಾಗುತ್ತಿದ್ದ ಅಧಿಕಾರಿಗಳ ಸಂಖ್ಯೆ ಕಡಿಮೆ ಇದ್ದಿತು.

12.

ರಾಜನಿಗೆ ನೆರವಾಗುತ್ತಿದ್ದ ಅಧಿಕಾರಿಗಳ ಸಂಖ್ಯೆ ಹೆಚ್ಚಾಯಿತು.

13.

ಆಂತರಿಕ ವ್ಯಾಪಾರ ಜನಪ್ರಿಯವಾಯಿತು.

13.

ವಿದೇಶಿ ವ್ಯಾಪಾರ ಜನಪ್ರಿಯವಾಯಿತು.

14.

ಮಂತ್ರ, ತಂತ್ರ, ಭೂತಗಳಲ್ಲಿ ನಂಬಿಕೆ ಇರಲಿಲ್ಲ.

14.

ಇವುಗಳಲ್ಲಿ ನಂಬಿಕೆ ಬೆಳೆಯಿತು.

15.

ಬ್ರಾಹ್ಮಣರ ಪ್ರಾಬಲ್ಯ ಇತ್ತು.

15.

ಕ್ಷತ್ರಿಯರ ಪ್ರಾಬಲ್ಯವಿತ್ತು.

16.

ಮಾಂಸಹಾರ ವಿರಳವಾಗಿತ್ತು.

16.

ಮಾಂಸಹಾರ ಸಾಮಾನ್ಯವಾಯಿತು.

17.

ಸಪ್ತಸಿಂಧೂ ಆರರ ನೆಲೆ.

17.

ಆರ್ಯಾವರ್ತ ಆರ್ಯರ ನೆಲೆ.

ಹ್ಯುಯನ್ತ್ಸಾಂಗ್-ಒಂದು ಟಿಪ್ಪಣಿ (ಕ್ರಿ.ಶ.600-ಕ್ರಿ.ಶ.664)

ಹ್ಯುಯನ್ತ್ಸಾಂಗ್-ಒಂದು ಟಿಪ್ಪಣಿ (ಕ್ರಿ.ಶ.600-ಕ್ರಿ.ಶ.664)

ಹ್ಯುಯನ್‌ತ್ಸಾಂಗ್ ಚೀಣಾ ದೇಶದಲ್ಲಿ ಕ್ರಿ.ಶ 600 ರಲ್ಲಿ ಜನಿಸಿದನು. ಬಾಲ್ಯದಿಂದಲೇ ಬೌದ್ಧಧರ್ಮದ ಸೆಳೆತಕ್ಕೆ ಒಳಗಾದನು. ಹೀಗಾಗಿ ತನ್ನ 20ನೇ ವಯಸ್ಸಿನಲ್ಲಿ ಬೌದ್ಧಬಿಕ್ಷುವಾದನು. ನಂತರ ಭಾರತಕ್ಕೆ ಬರಲು ಮಹದಾಕಾಂಕ್ಷೆ ಹೊಂದಿದ್ದನು. ಅದರ ಉದ್ದೇಶ:-

  1. ಬುದ್ಧನ ಜನ್ಮಸ್ಥಳವಾದ ಮತ್ತು ಬೌದ್ಧಧರ್ಮದ ತಾಯಿನಾಡಾದ ಭಾರತವನ್ನು ನೋಡಬೇಕೆಂಬ ಕನಸು.
  2. ಬುದ್ಧನಿಗೆ ಸಂಬಂಧಿತ ಸ್ಥಳಗಳಿಗೆ ಯಾತ್ರೆ ಕೈಗೊಂಡು ಪುನೀತನಾಗಬೇಕೆಂಬ ಬಯಕೆ.
  3. ಬೌದ್ಧ ಪವಿತ್ರ ಗ್ರಂಥಗಳನ್ನು ಅದರ ಮೂಲಭಾಷೆಯಲ್ಲೇ ಅಧ್ಯಯನ ಮಾಡಬೇಕೆಂಬ ತವಕ.
  4. ಬೌದ್ಧ ಪವಿತ್ರ ಗ್ರಂಥಗಳನ್ನು ಚೀಣಿಭಾಷೆಗೆ ಭಾಷಾಂತರಿಸಬೇಕೆಂಬ ಯೋಜನೆ.
  5. ಬುದ್ಧನ ಅವಶೇಷಗಳನ್ನು ವಿಗ್ರಹಗಳನ್ನು ಮತ್ತು ಕೆಲವು ಬೌದ್ಧ ಕೃತಿಗಳನ್ನು ಚೀಣಾಕ್ಕೆ ತರಬೇಕೆಂಬಾಸೆ.
  6. ಭಾರತದಲ್ಲಿ ಕಂಡುಂಡ ಮತ್ತು ಕೇಳಿದ ಸಂಗತಿಗಳ ಕುರಿತು ಹಾಗೂ ಅನುಭವವನ್ನು ಕುರಿತು ಕೃತಿಯೊಂದನ್ನು ಬರೆಯಬೇಕೆಂಬ ದೂರದೃಷ್ಟಿ ಆ ಕಾಲದಲ್ಲಿ ಚೀಣಾ ದೇಶದವರು ಹೊರದೇಶಕ್ಕೆ ಹೋಗಬೇಕೆಂದರೆ ಅರಸನ ಅನುಮತಿ ಪಡೆಯಬೇಕಿತ್ತು. ಆದರೆ ಚೀಣಿ ಅರಸ ಅನುಮತಿ ನೀಡದಿದ್ದಾಗ ಹ್ಯಯನ್‌ತ್ಸಾಂಗ್ ಬಹಳ ನೊಂದುಕೊಂಡನು. ಹೇಗಾದರೂ ಮಾಡಿ ಭಾರತವನ್ನು ತಲುಪಲೇಬೇಕೆಂಬ ಛಲ ತೊಟ್ಟನು. ಚಕ್ರವರ್ತಿಗೂ ಹೇಳದೆ ಕಣ್ಣುತಪ್ಪಿಸಿ ಭಾರತದ ಹಾದಿ ತುಳಿದೇಬಿಟ್ಟನು.

ಚೀಣೀ ಗಡಿಭಾಗದಲ್ಲೆ ನಡೆಯುತ್ತಾ ಸಿಂಧೂ ನದಿಯನ್ನು ದಾಟಿ ತಕ್ಷಶಿಲೆ ತಲುಪಿದನು. ಅನಂತರ ಕಾಶ್ಮೀರ ತಲುಪಿ ಅಲ್ಲಿ ಎರಡು ವರ್ಷ ಇದ್ದನು. ಅಲ್ಲಿ ಬೌದ್ಧಗ್ರಂಥಗಳನ್ನು ಅಧ್ಯಯನ ಮಾಡಿದನು. ನಂತರ ಉತ್ತರ ಪಥೇಶ್ವರನಾದ ಹರ್ಷನ ರಾಜಧಾನಿಯನ್ನು ತಲುಪಿದನು. ಚೀಣಿ ದೇಶದವನೊಬ್ಬ ಭಾರತದ ಯಾತ್ರೆ ಕೈಗೊಂಡಿರುವುದು ಮತ್ತು ಬೌದ್ಧಧರ್ಮದ ಘನ ಪಂಡಿತನಾಗಿರುವುದು ಹರ್ಷನನ್ನು ಆಕರ್ಷಿಸಿತು. ಹರ್ಷನು ಅವನೊಂದಿಗೆ ಹೆಚ್ಚಿನ ಒಡನಾಟ ಬೆಳೆಸಿಕೊಂಡನು. ಡ್ಯೂಯನ್‌ ತ್ಸಾಂಗ್‌ಗೆ ‘ರಾಜಾತಿಥ್ಯ’ವನ್ನೇ ನೀಡಿದನು. ಅವನ ಪ್ರಭಾವದಲ್ಲೇ ಬೌದ್ಧಧರ್ಮಕ್ಕೆ ಮತಾಂತರವಾದನು. ಅವನನ್ನು ಯೋಗ್ಯವಾಗಿ ಸತ್ಕರಿಸಲು ಕನೌಜ್ ಮತ್ತು ಪ್ರಯಾಗ ಸಮ್ಮೇಳನವನ್ನು ನಡೆಸಿದನು. ಇವೆರಡರ ನೇತೃತ್ವವನ್ನು ಡ್ಯೂಯನ್ ತ್ಸಾಂಗ್ ವಹಿಸಿದ್ದನು. ಅಂತಿಮವಾಗಿ ಬೌದ್ಧಧರ್ಮದ ಹೆಗ್ಗಳಿಕೆ ಜಾಹೀರುಪಡಿಸಿದನು. ಕನೌಜ್ ಸಮ್ಮೇಳನದಲ್ಲಿ ಅನೇಕ ಹಿಂದೂ ಮತ್ತು ಜೈನ ವಿದ್ವಾಂಸರನ್ನು ಸೋಲಿಸಿದ್ದರಿಂದ ಹರ್ಷವರ್ಧನನು ಅವನನ್ನು ಆನೆಯ ಮೇಲೆ ಕುಳ್ಳಿರಿಸಿ ಸನ್ಮಾನಿಸಿದ್ದನು.

ಕ್ರಿ.ಶ 630 ರಿಂದ 644 ರವರೆಗೆ ಹೂಯನ್‌ ತ್ಸಾಂಗ್ ಭಾರತದಾದ್ಯಂತ ಸಂಚರಿಸಿದನು. ಯಾತ್ರಿಕನಾಗಿ ಸಂದರ್ಶಿಸಿದ ಸ್ಥಳಗಳೆಂದರೆ ಕಪಿಲವಸ್ತು, ಗಯಾ, ಕುಶೀನಗರ, ಬನಾರಸ್, ಅಲ್ಲದೆ ಕಾಶ್ಮೀರ, ಗಾಂಧಾರ, ಆಂದ್ರ, ಕಂಚಿ, ಮಹಾರಾಷ್ಟ್ರ ಮತ್ತು ಕರ್ನಾಟಕಕ್ಕೂ ಬೇಟಿ ನೀಡಿದ್ದನು. ಗಾಂಧಾರಕ್ಕೆ ಬೇಟಿಕೊಟ್ಟಾಗ ಬಮಿಯಾನ್ ಬುದ್ಧನನ್ನು ನೋಡಿದ್ದನು. ಇಮ್ಮಡಿ ಪುಲಿಕೇಶಿಯ ಸಾಮ್ರಾಜ್ಯಕ್ಕೂ ಬೇಟಿಕೊಟ್ಟಿದ್ದನು. ಆಗ ಅವನ ಶೌರ ಸಾಹಸಗಳನ್ನು, ಕನ್ನಡಿಗರ ಔದಾರ್ಯವನ್ನು ಮತ್ತು ಹೃದಯ ಶ್ರೀಮಂತಿಕೆಯನ್ನು ಹಾಡಿ ಹೊಗಳಿದ್ದಾನೆ.

ಭಾರತದಿಂದ ಹಿಂತಿರುಗುವಾಗ ಬುದ್ಧನ ಅವಶೇಷಗಳನ್ನು ಮತ್ತು ವಿಗ್ರಹಗಳನ್ನು ತನ್ನೊಂದಿಗೆ ಕೊಂಡೊಯ್ದನು. ಇಲ್ಲಿ ಸಂಗ್ರಹಿಸಿದ 657 ತಾಳೆಗರಿ ಗ್ರಂಥಗಳನ್ನು, 20 ಕುದುರೆಗಳ ಮೇಲೆ ಹೇರಿಕೊಂಡು ಚೀಣಾಕ್ಕೆ ಹಿಂತಿರುಗಿದನು (ಕ್ರಿ.ಶ 644 ರಲ್ಲಿ). ಅರಸನ ಕೆಂಗಣ್ಣಿಗೆ ತುತ್ತಾಗುವೆನೆಂಬ ಹೆದರಿಕೆ ಇತ್ತು. ಆದರೆ ಚೀಣಿ ಅರಸನು ಅವನನ್ನು ಆದರದಿಂದ ಬರಮಾಡಿಕೊಂಡನು. ಕ್ಯೂಯನ್‌ ತ್ಸಾಂಗ್ ಭಾರತದಲ್ಲಿ ತಾನು ಕಂಡುಂಡ ಸಂಗತಿಗಳನ್ನು ಸಿ-ಯೂ-ಕಿ ಎಂಬ ಗ್ರಂಥದಲ್ಲಿ ದಾಖಲಿಸತೊಡಗಿದನು. ಅಲ್ಲದೆ ಅನೇಕ ಬೌದ್ಧಕೃತಿಗಳನ್ನು ಚೀಣಿ ಭಾಷೆಗೆ ಭಾಷಾಂತರ ಮಾಡಿದನು. ಜೊತೆಗೆ ‘ಹಂಗ್‌ಫು’ ಎಂಬ ಪಂಥವನ್ನು ಸ್ಥಾಪಿಸಿ ಬೌದ್ಧಧರ್ಮ ಪ್ರಸಾರಮಾಡಿದನು.

ಹೂಯನ್‌ ತ್ಸಾಂಗ್ ತನ್ನ ಸಿ-ಯೂ-ಕಿ ಗ್ರಂಥದಲ್ಲಿ ಹಲವು ಹತ್ತು ಸಂಗತಿಗಳನ್ನು ದಾಖಲಿಸಿದ್ದಾನೆ. ಅಂದಿನ ರಾಜಕೀಯ, ಸಾಮಾಜಿಕ, ಆರ್ಥಿಕ ಮತ್ತು ಧಾರ್ಮಿಕ ಪರಿಸ್ಥಿತಿಗಳು, ಜನರ ಅಚಾರ-ವಿಚಾರ, ಸಂಪ್ರದಾಯ ಶರಣತೆಗಳು, ಅಸ್ಪೃಶ್ಯತಾ ಆಚರಣೆ, ಭೌಗೋಳಿಕ ಸ್ಥಿತಿಗತಿ, ಜನರ ಪ್ರಾಮಾಣಿಕತೆ, ಬೌದ್ಧಧರ್ಮದ ಪರಿಸ್ಥಿತಿ ಇವೇ ಮೊದಲಾದವುಗಳ ಬಗ್ಗೆ ಬರೆದಿದ್ದಾನೆ. ಇವುಗಳು ಅಂದಿನ ಇತಿಹಾಸ ರಚನೆಗೆ ಅಮೂಲ್ಯ ದಾಖಲೆಗಳಾಗಿವೆ. ಡಾ||ವಿ.ಎ.ಸ್ಮಿತ್ ರವರ ಪ್ರಕಾರ ಸಿ-ಯೂ-ಕಿ ಯ ಐತಿಹಾಸಿಕ ಮಹತ್ವವನ್ನು ಉತ್ತೇಕ್ಷೆ ಮಾಡಲು ಸಾಧ್ಯವಿಲ್ಲ.ಆದ್ದರಿಂದ ಡ್ಯೂಯನ್‌ ತ್ಸಾಂಗ್‌ನನ್ನು ‘ಯಾತ್ರಿಕರ ಚಕ್ರವರ್ತಿ’ (ಪ್ರವಾಸಿಗರ ರಾಜ) ಎಂದು ಕರೆಯುವುದು ರಾಜೋಚಿತವಾಗಿದೆ.