ಮೊಗಲರ ಆರ್ಥಿಕ ಮತ್ತು ಸಾಮಾಜಿಕ ಪರಿಸ್ಥಿತಿ

ಮೊಗಲರ ಆರ್ಥಿಕ ಮತ್ತು ಸಾಮಾಜಿಕ ಪರಿಸ್ಥಿತಿ

ಮೊಗಲರ ಆರ್ಥಿಕ ಸ್ಥಿತಿಗತಿ

ಬಾಬರನ ಆತ್ಮವೃತ್ತಾಂತ, ಗುಲ್‌ದನ್‌ ಬೇಗಂಳ ಹುಮಾಯೂನ್ ನಾಮ, ಅಬ್ದುಲ್‌ ಫಜಲ್‌ನ ಐನ್-ಎ-ಆಕ್ಬರಿ ಮೊದಲಾದ ವಿದೇಶಿ ಪ್ರವಾಸಿಗರ ಬರವಣಿಗೆಗಳು ಮತ್ತು ಸಮಕಾಲೀನ ಸಾಹಿತ್ಯ ಕೃತಿಗಳು -ಇವುಗಳಿಂದ ಮೊಗಲರ ಕಾಲದ ಆರ್ಥಿಕ ಪರಿಸ್ಥಿತಿಯ ಮಾಹಿತಿ ದೊರೆಯುತ್ತದೆ.

1. ಕೃಷಿ ಕ್ಷೇತ್ರ: ಮೊಗಲರ ಕಾಲದಲ್ಲಿ ವ್ಯವಸಾಯ ಮುಖ್ಯ ಉದ್ಯೋಗವಾಗಿತ್ತು. ಈ ಕಾಲದಲ್ಲಿಯೂ ಪ್ರಾಚೀನ ಕಾಲದ ಕೃಷಿ ಉಪಕರಣ, ವಿಧಾನಗಳನ್ನೇ ಬಳಸುತ್ತಿದ್ದರು. ಅಕ್ಬರ್ ವ್ಯವಸಾಯಕ್ಕೆ ಹೆಚ್ಚಿನ ಗಮನ ನೀಡಿದನು. ಶೇರ್‌ಶಹನು ಕೃಷಿಕ್ಷೇತ್ರದಲ್ಲಿ ಮಾಡಿದ್ದ ಹಲವು ಕಾರ್ಯಗಳನ್ನು ಆಕ್ಬರನು ಅನುಸರಿಸಿದನು. ವ್ಯವಸಾಯಗಾರರು ಬೇಸಾಯಕ್ಕೊಳಪಟ್ಟ ಜಮೀನಿಗೆ ಮಾತ್ರ ಕಂದಾಯ ಕೊಡಬೇಕಾಗಿತ್ತು. ಅಕ್ಬರನ ಕಾಲದಲ್ಲಿ ರೈತವಾರಿ ಪದ್ಧತಿಯಿದ್ದದರಿಂದ ರೈತರು ಮತ್ತು ಸರ್ಕಾರದ ನಡುವೆ ನೇರ ಸಂಬಂಧವಿತ್ತು. ಷಹಜಹಾನನ ಮತ್ತು ಔರಂಗಜೇಬರ ಅಳ್ವಿಕೆಗಳಲ್ಲಿ ಗೇಣಿದಾರರು ಅಧಿಕಾರಿಗಳ ಶೋಷಣೆಗೆ ಒಳಗಾಗಿದ್ದರು.

ರೈತರು ಗೋಧಿ, ಬಾರ್ಲಿ, ಬೇಳೆಕಾಳುಗಳು, ಎಣ್ಣೆಕಾಳುಗಳು, ಕಬ್ಬು, ನೀಲಿ ಮತ್ತು ಗಸಗಸೆಗಳನ್ನು ಬೆಳೆಯುತ್ತಿದ್ದರು. ಕೆಲವೊಂದು ಬೆಳೆಗಳು ಕೆಲವು ಪ್ರದೇಶಗಳಿಗೆ ಸೀಮಿತವಾಗಿದ್ದವು. ಕಬ್ಬನ್ನು ಉತ್ತರ ಪ್ರದೇಶ, ಬಿಹಾರ ಮತ್ತು ಬಂಗಾಳಗಳಲ್ಲಿ, ನೀಲಿಯನ್ನು ಉತ್ತರ ಮತ್ತು ದಕ್ಷಿಣ ಭಾರತಗಳಲ್ಲಿ, ಹತ್ತಿಯನ್ನು ಭಾರತದ ಹಲವೆಡೆ ಬೆಳೆಯುತ್ತಿದ್ದರು. ಕೃತಕ ನೀರಾವರಿ ಬಳಕೆಯಲ್ಲಿರಲಿಲ್ಲ. ಕೆರೆ ಮತ್ತು ಭಾವಿಗಳಿಂದ ನೀರಾವರಿ ಮಾಡಲಾಗುತ್ತಿತ್ತು. ಆದಾಗ್ಯೂ ದೇಶವು ಕೃಷಿ ಉತ್ಪಾದನೆಯಲ್ಲಿ ಸ್ವಯಂಪೂರ್ಣವಾಗಿತ್ತು.

2. ಕೈಗಾರಿಕೆ : ಮೊಗಲರ ಕಾಲದಲ್ಲಿ ಕೃಷಿಯಲ್ಲದೆ ಉತ್ಪಾದನೆಯ ವಸ್ತುಗಳಲ್ಲಿ ಮೀನು, ಲೋಹಗಳು, ಉಪ್ಪು, ಅಫೀಮು ಮತ್ತು ಮದ್ಯ ಪ್ರಮುಖವಾಗಿದ್ದವು. ಚಿನ್ನವು ಕುಮಾವ್ ಗುಡ್ಡಗಳಲ್ಲಿ ಮತ್ತು ಪಂಜಾಬಿನ ನದಿ ಪಾತ್ರಗಳಲ್ಲಿ ದೊರೆಯುತ್ತಿತ್ತು. ಕಬ್ಬಿಣ ಹಲವು ಕಡೆಗಳಲ್ಲಿ ದೊರೆಯುತ್ತಿದ್ದು, ಸಲಕರಣೆಗಳನ್ನು ಮಾಡಲು, ಶಸ್ತ್ರಾಸ್ತ್ರಗಳನ್ನು ಮಾಡಲು ಉಪಯೋಗಿಸುತ್ತಿದ್ದರು. ರಾಜಸ್ಥಾನ ಮತ್ತು ಮದ್ಯಭಾರತದಲ್ಲಿ ತಾಮ್ರದ ಗಣಿಗಳಿದ್ದವು. ಫತೇಪುರಸಿಕ್ರಿಯಲ್ಲಿ ಕೆಂಪುಶಿಲೆಯು, ಥಟ್ಟಾದಲ್ಲಿ ಹಳದಿ ಶಿಲೆಯು, ಜಯಪುರ ಮತ್ತು ಜೋಧ್‌ಪುರಗಳಲ್ಲಿ ಅಮೃತಶಿಲೆಯು ಸಿಗುತ್ತಿತ್ತು. ವಜ್ರಗಳು ಗೋಲ್ಕಂಡ ಮತ್ತು ಛೋಟಾನಾಗಪುರಗಳಲ್ಲಿ ಸಿಗುತ್ತಿತ್ತು. ಉಪ್ಪು, ಸಂಬಾರ್ ಸರೋವರ, ಪಂಜಾಬ್, ಗುಜರಾತ್, ಸಿಂದ್ ಪ್ರದೇಶದ ಸರೋವರ ಮತ್ತು ಸಮುದ್ರ ತೀರಗಳಿಂದ ದೊರೆಯುತ್ತಿತ್ತು. ಬಿಹಾರ ಮತ್ತು ಮಾಳ್ವಗಳಲ್ಲಿ ಆಫೀಮು ಹೆಚ್ಚಾಗಿ ಬೆಳೆಯುತ್ತಿದ್ದರು. ಮದ್ಯವನ್ನು ಹಲವೆಡೆ ತಯಾರಿಸುತ್ತಿದ್ದರು. ಮದ್ದುಗುಂಡುಗಳ ಬಳಕೆಗೆ ಪೆಟ್ಲುಪ್ಪನ್ನು ತಯಾರಿಸಿ ಬಳಸುತ್ತಿದ್ದರು. ಪ್ರತಿಯೊಂದು ಹಳ್ಳಿಯಲ್ಲಿಯೂ ಹತ್ತಿ ಬಟ್ಟೆಯ ಕೈಗಾರಿಕೆ ಬೆಳೆದಿತ್ತು. ಆಗ್ರ, ಬನಾರಸ್, ಜುನಾಪುರ, ಪಾಟ್ನ, ಬಾನ್ಪುರ, ಲಕ್ನೋ, ಖೈರಾಬಾದ್, ಬೀದರ್, ಬಂಗಾಳ, ಬಿಹಾರ, ಮಾಳ್ವಗಳ ಅನೇಕ ಪ್ರದೇಶಗಳು ಬಟ್ಟೆ ತಯಾರಿಕೆಯ ಪ್ರಮುಖ ಕೇಂದ್ರಗಳಾಗಿದ್ದವು. ಈ ಕೈಗಾರಿಕೆಯ ಜೊತೆಗೆ ಬಣ್ಣ ಹಾಕುವ ಕೈಗಾರಿಕೆ ಸಹ ಉಪಕೈಗಾರಿಕೆಯಾಗಿ ಬೆಳೆದಿತ್ತು. ಬಂಗಾರದ ಜರಿಯುಳ್ಳ ಬಟ್ಟೆಗಳನ್ನು ಅಯೋಧ್ಯೆ ಮತ್ತು ಖಾನ್ದೇಶಗಳಲ್ಲಿ ತಯಾರಿಸುತ್ತಿದ್ದರು. ಡಾಕಾವೂ ಸೇರಿದಂತೆ ಬಂಗಾಳದ ಹಲವು ನಗರಗಳು ರೇಷ್ಮೆ ವಸ್ತ್ರಗಳಿಗೆ, ನಯವಾದ ಮಸ್ಲಿನ್ ಬಟ್ಟೆಗೆ ಮತ್ತು ಚಾಪೆಗಳಿಗೆ ಪ್ರಸಿದ್ಧವಾಗಿದ್ದವು. ಮುಲ್ತಾನ್‌ನಲ್ಲಿ ಸುಂದರವಾದ ಪುಷ್ಪಸದೃಶ ರತ್ನಗಂಬಳಿಗಳನ್ನು ಮತ್ತು ಕಾಶ್ಮೀರದಲ್ಲಿ ಉಣ್ಣೆಯ ರತ್ನಗಂಬಳಿಗಳನ್ನು ಮತ್ತು ಇತರ ರೇಷ್ಮೆ ಮತ್ತು ಉಣ್ಣೆವಸ್ತುಗಳನ್ನು ತಯಾರಿಸುತ್ತಿದ್ದರು. ಜಹಾಂಗೀರನು ಅಮೃತಸರದಲ್ಲಿ ರತ್ನಗಂಬಳಿ ಮತ್ತು ಶಾಲಿನ ಕೈಗಾರಿಕೆ ಸ್ಥಾಪಿಸಿದನು. ಯುದ್ಧಕ್ಕೆ ಮತ್ತು ರಕ್ಷಣೆಗೆ ಬೇಕಾದ ಆಯುಧಗಳನ್ನು ಪ್ರಮುಖವಾಗಿ ಪಂಜಾಬ್, ಗುಜರಾತ್ ಮತ್ತು ಸೋಮನಾಥದಲ್ಲಿ ತಯಾರಿಸುತ್ತಿದ್ದರು. ಜುನಾಪುರ ಮತ್ತು ಗುಜರಾತ್‌ನಲ್ಲಿ ಸುಗಂಧ ದ್ರವ್ಯಗಳನ್ನು, ಸಿಯೋಲ್ ಕೋಟ್, ಗಯಾ ಮತ್ತು ಕಾಶ್ಮೀರಗಳಲ್ಲಿ ಕಾಗದವನ್ನು, ಬೀದರ್‌ನಲ್ಲಿ ಬೆಳ್ಳಿ ಮತ್ತು ಬಂಗಾರದ ಅಲಂಕಾರ ವಸ್ತುಗಳನ್ನು, ಪತೇಪುರಸಿಕ್ರಿ ಮತ್ತು ಬಿರಾರ್‌ಗಳಲ್ಲಿ ಗಾಜಿನ ವಸ್ತುಗಳನ್ನು ಉತ್ಪಾದನೆ ಮಾಡಲಾಗುತಿತ್ತು. ದಕ್ಷಿಣ ಭಾರತದಲ್ಲಿ ಮುತ್ತು ಮತ್ತು ಹವಳಗಳ ಕೈಗಾರಿಕೆ ಅಭಿವೃದ್ಧಿ ಹೊಂದಿತ್ತು. ಹಲವೆಡೆ ಮರದ ಮತ್ತು ಚರ್ಮದ ವಸ್ತುಗಳನ್ನು ತಯಾರಿಸಲಾಗುತ್ತಿತ್ತು.

3. ನಾಣ್ಯಗಳು : ದೆಹಲಿಯಲ್ಲಿ ಪ್ರಧಾನ ಟಂಕಶಾಲೆ ಇತ್ತು. ಬಂಗಾಳ, ಲಾಹೋರ್, ಜಾನ್‌ಪುರ, ಅಹ್ಮದಾಬಾದ್ ಮತ್ತು ಪಾಟ್ನಗಳಲ್ಲಿ ಪ್ರಾಂತೀಯ ಟಂಕಶಾಲೆಗಳಿದ್ದವು. ಷಹಜಹಾನನ ಕಾಲದಲ್ಲಿ ಸೂರತ್‌ನಲ್ಲಿನ ಟಂಕಶಾಲೆ ಮುಖ್ಯವಾಗಿತ್ತು. ಮೊಗಲರ ಕಾಲದ ನಾಣ್ಯಗಳಲ್ಲಿ ಬೆಳ್ಳಿಯ ರೂಪಾಯಿಯ ತೂಕ 175 ಗ್ರೇನ್‌ಗಳಾಗಿತ್ತು. ಅಕ್ಬರನ ಮತ್ತು ಆತನ ತರುವಾಯದ ದೊರೆಗಳ ಕಾಲದಲ್ಲಿ ಮೊಗಲ್ ಸಾಮ್ರಾಜ್ಯದ ವಾಣಿಜ್ಯ ವ್ಯವಹಾರಗಳೆಲ್ಲ ವೃತ್ತಾಕಾರದ ಚಿನ್ನದ ಮೊಹರಗಳು, ರೂಪಾಯಿಗಳು ಮತ್ತು ದಾಮುಗಳಲ್ಲಿ (ತಾಮ್ರದ) ನಡೆಯುತ್ತಿದ್ದವು.

4. ವ್ಯಾಪಾರ : ಮೊಗಲರ ಕಾಲದಲ್ಲಿ ಏಷ್ಯಾ ಮತ್ತು ಯೂರೋಪ್ ರಾಷ್ಟ್ರಗಳೊಡನೆ ವ್ಯಾಪಾರ ಅತ್ಯಂತ ಚಟುವಟಿಕೆಯಿಂದ ನಡೆಯುತ್ತಿತ್ತು. ಶ್ರೀಲಂಕಾ, ಬರ್ಮ, ಚೈನಾ, ಜಪಾನ್, ಇಂಡೋನೇಷಿಯಾ, ನೇಪಾಳ, ಪರ್ಷಿಯಾ, ಮದ್ಯಏಷ್ಯಾ, ಆರೇಬಿಯಾ, ಕೆಂಪುಸಮುದ್ರದ ತೀರದ ಬಂದರುಗಳು, ಪೂರ್ವ ಆಫ್ರಿಕಾದೊಡನೆ ವ್ಯಾಪಾರ ವಹಿವಾಟು ನಡೆಯುತ್ತಿತ್ತು.

ಭಾರತದ ಮುಖ್ಯ ರಫ್ತುವಸ್ತುಗಳೆಂದರೆ ಹತ್ತಿ ಬಟ್ಟೆಗಳು, ಮೆಣಸು, ನೀಲಿ, ಅಫೀಮು, ಪೆಟ್ಲುಪ್ಪು, ಸಾಂಬಾರ ಪದಾರ್ಥಗಳು, ಸಕ್ಕರೆ, ಉಪ್ಪು, ಮಣಿಗಳು, ಅರಿಶಿಣ, ಅರಗು, ವಿವಿಧ ಬಗೆಯ ಔಷಧಿಗಳು ಮತ್ತು ಇತರ ಸಾಮಗ್ರಿಗಳು, ಮುಖ್ಯವಾದ ಅಮದು ವಸ್ತುಗಳೆಂದರೆ- ಬೆಳ್ಳಿ, ಬಂಗಾರ, ಕುದುರೆಗಳು, ಲೋಹಗಳು, ದಂತ, ಹವಳ, ಶಿಲಾರಾಳ, ವೈಡೂರ್ಯ, ರೇಷ್ಮೆ ವಸ್ತ್ರಗಳು, ವೆಲ್ವೆಟ್, ಜರತಾರಿ, ಪಿಂಗಾಣಿ ವಸ್ತುಗಳು, ಆಫ್ರಿಕಾದ ಗುಲಾಮರು ಮತ್ತು ಯೂರೋಪಿನ ಮದ್ಯಪಾನೀಯಗಳು. ದೇಶಿಯ ಮತ್ತು ವಿದೇಶಿಯ ವ್ಯಾಪಾರದ ಪ್ರಮುಖ ಕೇಂದ್ರಗಳೆಂದರೆ ಸೂರತ್, ಬ್ರೋಚ್, ಬೇಸ್ಸೀನ್, ಚೌಲ್, ಗೋವಾ, ಕಲ್ಲಿಕೋಟೆ, ಕೊಚ್ಚಿನ್, ನಾಗಪಟ್ಟಣ, ಮಚಲಿಪಟ್ಟಣ, ಸೌತ್‌ಗೌವ್, ಪಾಟ್ನ, ಆಗ್ರಾ, ಕ್ಯಾಂಬೆ, ಮುಲ್ತಾನ್ ಮತ್ತು ಅಹ್ಮದಾಬಾದ್.

ಸಾಮಾಜಿಕ ಪರಿಸ್ಥಿತಿ

ಮೊಗಲ್ ಕಾಲದಲ್ಲಿನ ಸಮಾಜವು ಪ್ಯೂಡಲ್ ತಳಹದಿಯ ಮೇಲೆ ಸಂಘಟಿತವಾಗಿತ್ತು. ಚಕ್ರವರ್ತಿಯು ಸಮಾಜದಲ್ಲಿ ಅತ್ಯಂತ ಬಲಾಢ್ಯವಾದ ಮತ್ತು ಗೌರವಾನ್ವಿತ ವ್ಯಕ್ತಿಯಾಗಿದ್ದನು. ಸಮಾಜ ವ್ಯವಸ್ಥೆಯ ತುತ್ತ ತುದಿಯಲ್ಲಿದ್ದ ಮೊಗಲ್ ಬಾದಶಹನ ಕೆಳಗೆ ಆತನ ಸರದಾರರು ಇದ್ದರು.

ಶ್ರೀಮಂತರು ವೈಭವದ ಜೀವನವನ್ನು ನಡೆಸಿದರೆ, ಸಾಮಾನ್ಯರು ಕಡುಬಡತನ ಅನುಭವಿಸುತ್ತಿದ್ದರು.

1. ಉಡುಪು : ಕಡಿಮೆ ಬಟ್ಟೆಯನ್ನು ಧರಿಸುವುದು ದಕ್ಷಿಣದಲ್ಲಿ ರೂಢಿಯಲ್ಲಿತ್ತು. ಇದಕ್ಕೆ ಹವಾಮಾನವೇ ಕಾರಣ. ಉತ್ತರ ಭಾರತದಲ್ಲಿ ಕೆಲವೊಂದು ಋತುಗಳಲ್ಲಿ ಮಾತ್ರ ಜನತೆ ಮೈತುಂಬ ಬಟ್ಟೆ ಧರಿಸುತ್ತಿದ್ದರು. ಉಳಿದಂತೆ ಹೆಚ್ಚು ಬಟ್ಟೆ ಧರಿಸುತ್ತಿರಲಿಲ್ಲ. ಕೆಳವರ್ಗದ ಜನರಿಗೆ ಸಾಕಷ್ಟು ಬಟ್ಟೆ ಇರಲಿಲ್ಲ. ಅವರು ಉಣ್ಣೆ ಬಟ್ಟೆಗಳನ್ನು ಧರಿಸುವುದಂತೂ ಅಸಾಧ್ಯವಾಗಿತ್ತು.

2. ಆಹಾರ : ಆಹಾರಕ್ಕೆ ಸಂಬಂಧಿಸಿದಂತೆ ಕಾಳು ಮತ್ತು ಬೇಳೆಗಳನ್ನು ಜನರು ದಿನನಿತ್ಯದ ಆಹಾರವನ್ನಾಗಿ ಉಪಯೋಗಿಸುತ್ತಿದ್ದರು. ಬಂಗಾಳ ಮತ್ತು ಕರಾವಳಿ ಪ್ರದೇಶದಲ್ಲಿ ಈ ಆಹಾರದ ಜೊತೆಗೆ ಮೀನನ್ನು ಉಪಯೋಗಿಸುತ್ತಿದ್ದರೆ, ದಕ್ಷಿಣ ಭಾರತದಲ್ಲಿ ಮಾಂಸವನ್ನು ಉಪಯೋಗಿಸುತ್ತಿದ್ದರು. ಉತ್ತರ ಭಾರತದಲ್ಲಿ ಗೋಧಿ ಹೆಚ್ಚಾಗಿ ಬಳಸುತ್ತಿದ್ದರು. ಬೆಣ್ಣೆ ಮತ್ತು ಎಣ್ಣೆ ಸುಲಭದರದಲ್ಲಿ ದೊರೆಯುತ್ತಿದ್ದರಿಂದ ಸಾಮಾನ್ಯ ಜನತೆ ಹೆಚ್ಚಾಗಿ ಉಪಯೋಗಿಸುತ್ತಿದ್ದರು. ಸಕ್ಕರೆ ಮತ್ತು ಉಪ್ಪು ದುಬಾರಿಯಾಗಿದ್ದವು.

3. ಆಭರಣಗಳು ಮತ್ತು ಮನರಂಜನೆ : ಸರದಾರರು ಬೆಲೆಯುಳ್ಳ ಪೋಷಾಕನ್ನು ಮತ್ತು ರತ್ನಾಭರಣಗಳನ್ನು ಧರಿಸುತ್ತಿದ್ದರು. ಸರದಾರರು ವಿವಿಧ ಪ್ರಕಾರಗಳ ಕ್ರೀಡೆ ಮತ್ತು ಮನರಂಜನಾ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು. ಜೂಜುಗಾರಿಕೆ ರೂಡಿಯಲ್ಲಿತ್ತು.

4. ಮೂಢನಂಬಿಕೆಗಳು : ಹಿಂದೂ ಸಮಾಜದಲ್ಲಿ ಸತಿ ಪದ್ಧತಿ, ಬಾಲ್ಯ ವಿವಾಹ, ಶಿಶು ಹತ್ಯೆ ಮತ್ತು ವರದಕ್ಷಿಣೆ ಪದ್ಧತಿಗಳು ರೂಡಿಯಲ್ಲಿದ್ದವು. ಅಕ್ಬರನು ಬಲಾತ್ಕಾರದ ಸತಿಪದ್ದತಿಯನ್ನು ನಿಷೇಧಿಸಲು ಯತ್ನಿಸಿದನು.

5. ಧಾರ್ಮಿಕ ವಿಧಿ ವಿಧಾನಗಳು : ಹಿಂದೂಗಳು ಗಂಗಾನದಿಯನ್ನು ಅತ್ಯಂತ ಪವಿತ್ರವೆಂದು ಭಾವಿಸಿದ್ದರು. ಈ ನದಿಯಲ್ಲಿ ಸ್ನಾನ ಮಾಡುವುದು ಪುಣ್ಯಕರವೆಂಬ ಭಾವನೆಯಿತ್ತು. ಹಿಂದೂಗಳು ಮತ್ತು ಮುಸಲ್ಮಾನರು ಜ್ಯೋತಿಷ್ಯದಲ್ಲಿ ನಂಬಿಕೆಯುಳ್ಳವರಾಗಿದ್ದರು. ಮುಸಲ್ಮಾನರು ಅನೇಕ ಪೀರರನ್ನು ಪೂಜಿಸುತ್ತಿದ್ದರು. ಈದ್ ಹಬ್ಬವನ್ನು ಉತ್ಸಾಹದಿಂದ ಆಚರಿಸುತ್ತಿದ್ದರು. ಶಿಯಾ ಮತ್ತು ಸುನ್ನಿ ಪಂಥಗಳ ನಡುವೆ ತೀವ್ರವಾದ ದ್ವೇಷವಿತ್ತು.

6. ಸಾಮಾನ್ಯ ವರ್ಗ : ಇವರು ಅಧಿಕವಾಗಿದ್ದು, ರೈತರು, ಕೃಷಿಕಾರ್ಮಿಕರು, ಕುಶಲಕರ್ಮಿಗಳು, ಸಣ್ಣ ವ್ಯಾಪಾರಿಗಳು, ಸೇವಕರು, ಗುಲಾಮರು ಇನ್ನೂ ಮುಂತಾದ ಜನರಿದ್ದರು. ಮೇಲಿನ ವರ್ಗದವರಿಗೆ ಹೋಲಿಸಿದಲ್ಲಿ ಇವರ ಜೀವನ ಕಷ್ಟಗಳಿಂದ ಕೂಡಿತ್ತು. ಉಡಲು ಬಟ್ಟೆ ಇರಲಿಲ್ಲ. ಉಣ್ಣೆಯ ಬಟ್ಟೆ ಮತ್ತು ಪಾದರಕ್ಷೆಗಳು ಇವರಿಗೆ ಎಟುಕುವಂತಿರಲಿಲ್ಲ. ಬರಗಾಲ ಬಂದಾಗಲಂತೂ ಇವರ ಜೀವನ ಇನ್ನೂ ತುಂಬಾ ಕಷ್ಟವಾಗುತ್ತಿತ್ತು.

ಉಪಸಂಹಾರ

ಮೊಗಲ್ ಕಾಲದಲ್ಲಿ ಸಮಾಜ ಮತ್ತು ಆರ್ಥಿಕ ವ್ಯವಸ್ಥೆ ಸಮೃದ್ಧವಾಗಿದ್ದರೂ ವರ್ಗ ಭೇದ ಸ್ಪಷ್ಟವಾಗಿತ್ತು. ಕೃಷಿ, ಕೈಗಾರಿಕೆ ಮತ್ತು ವ್ಯಾಪಾರಗಳು ದೇಶದ ಆರ್ಥಿಕ ಅಭಿವೃದ್ಧಿಗೆ ಪ್ರಮುಖ ಪಾತ್ರವಹಿಸಿದ್ದವು. ಆದರೆ ಸಾಮಾನ್ಯ ಜನರ ಜೀವನದಲ್ಲಿ ಕಷ್ಟಗಳು ಮತ್ತು ಅಸಮಾನತೆಗಳೂ ಕಂಡುಬಂದವು. ಈ ಕಾಲದ ಸಾಮಾಜಿಕ ಮತ್ತು ಆರ್ಥಿಕ ವ್ಯವಸ್ಥೆ ಭಾರತೀಯ ಇತಿಹಾಸದಲ್ಲಿ ಮಹತ್ವದ ಅಧ್ಯಾಯವಾಗಿದೆ.

ಶಿವಾಜಿಯ ದಿಗ್ವಿಜಯಗಳು

ಶಿವಾಜಿಯ ದಿಗ್ವಿಜಯಗಳು

ಭಾರತೀಯ ಇತಿಹಾಸದಲ್ಲಿ ಮರಾಠ ಸಾಮ್ರಾಜ್ಯವನ್ನು ಸ್ಥಾಪಿಸಿದ ಮಹಾನ್ ನಾಯಕರೆಂದರೆ ಛತ್ರಪತಿ ಶಿವಾಜಿ ಮಹಾರಾಜ. ಬಾಲ್ಯದಿಂದಲೇ ಧೈರ್ಯ, ದೇಶಭಕ್ತಿ ಮತ್ತು ಯುದ್ಧತಂತ್ರಗಳಲ್ಲಿ ಅವರು ಅಸಾಧಾರಣ ಸಾಮರ್ಥ್ಯವನ್ನು ತೋರಿಸಿದರು. ತೋರಣಗಡದಿಂದ ಆರಂಭವಾದ ಅವರ ವಿಜಯಯಾತ್ರೆ ಅನೇಕ ಕೋಟೆಗಳು ಮತ್ತು ಪ್ರದೇಶಗಳನ್ನು ಜಯಿಸುವ ಮೂಲಕ ಮುಂದುವರಿಯಿತು. ಅವರ ಶೌರ್ಯ ಮತ್ತು ತಂತ್ರಗಳು ಅವರನ್ನು ಭಾರತದ ಮಹಾನ್ ರಾಜರಲ್ಲಿ ಒಬ್ಬರನ್ನಾಗಿ ಮಾಡಿವೆ.

1. ತೋರಂಗಾಡ್ ಆಕ್ರಮಣ (1646) : ಸುಲ್ತಾನರ ಅಂತಃಕಲಹದಿಂದಾಗಿ ಬಿಜಾಪುರ ರಾಜ್ಯವು ಶಕ್ತಿಹೀನವಾಗಿತ್ತು. ಈ ಅವಕಾಶವನ್ನು ಬಳಸಿಕೊಂಡ ಶಿವಾಜಿ ಬಿಜಾಪುರದ ವಿರುದ್ಧ ಯುದ್ಧ ಘೋಷಿಸಿ ತೋರಣದುರ್ಗವನ್ನು ವಶಪಡಿಸಿಕೊಂಡರು. ನಂತರ ಅಲ್ಲಿ ಕೋಟೆಯನ್ನು ನಿರ್ಮಿಸಿ ಅದಕ್ಕೆ ʻರಾಯಗಡʼ ಎಂದು ಹೆಸರಿಟ್ಟರು. ಇದರ ನಂತರ ಶಿವಾಜಿ ಚಕನ್ ಮತ್ತು ಕೊಂಕಣ ಕೋಟೆಗಳನ್ನು ವಶಪಡಿಸಿಕೊಂಡರು. ಕಲ್ಯಾಣದ ಮೇಲೆ ದಾಳಿ ಮಾಡಿ ಸುಲಿಗೆ ಮಾಡಿದ್ದರು.

2. ಜಾವಳಿ ಆಕ್ರಮಣ (1656): ಸತಾರಾ ಜಿಲ್ಲೆಯ ಜಾವಳಿಯನ್ನು ಮರಾಠ ದೊರೆ ಚಂದ್ರರಾವ್ ಮೋರೆ ಆಳುತ್ತಿದ್ದ. ದಕ್ಷಿಣದಲ್ಲಿ ಶಿವಾಜಿಯ ಸಾಮ್ರಾಜ್ಯದ ವಿಸ್ತರಣೆಯನ್ನು ಅವರು ತಡೆದರು. ಆಗ ಶಿವಾಜಿ ಜಾವಳಿಯ ಮೇಲೆ ದಾಳಿ ಮಾಡಿ ಚಂದ್ರರಾವ್ ಮೋರೆಯನ್ನು ಸೋಲಿಸಿ ಕೊಂದನು. ನಂತರ ಸಾ. ಷ. 1656 ರಲ್ಲಿ ಜಾವಳಿ ಶಿವಾಜಿಯ ಆಳ್ವಿಕೆಗೆ ಒಳಪಟ್ಟಿತು.

3. ಮೊಘಲರೊಂದಿಗಿನ ಸಂಘರ್ಷ (1657): ಔರಂಗಜೇಬನು ದಕ್ಷಿಣ ಭಾರತದ ರಾಜ್ಯಪಾಲನಾಗಿದ್ದಾಗ, ಬಿಜಾಪುರದ ಸುಲ್ತಾನನ ವಿರುದ್ಧ ದಂಡಯಾತ್ರೆಯನ್ನು ಕೈಗೊಂಡನು. ಈ ಅವಕಾಶವನ್ನು ಬಳಸಿಕೊಂಡ ಶಿವಾಜಿ ಮೊಘಲರ ಅಧೀನ ಪ್ರದೇಶವಾಗಿದ್ದ ಜುನ್ನಾರ್ ಮತ್ತು ಅಹಮದ್ ನಗರಗಳನ್ನು ಮುತ್ತಿಗೆ ಹಾಕಿದನು. ಇದರಿಂದ ಹತಾಶನಾದ ಔರಂಗಜೇಬನು ಶಿವಾಜಿಯ ವಿರುದ್ಧ ಸೇನೆಯನ್ನು ಕಳುಹಿಸಿದನು. ಯುದ್ಧದಲ್ಲಿ ಶಿವಾಜಿ ಸೋತರು. ನಂತರ ಇಬ್ಬರ ನಡುವೆ ಶಾಂತಿ ಒಪ್ಪಂದವಾಯಿತು. ನಂತರ ಉತ್ತರಾಧಿಕಾರದ ವಿವಾದದಿಂದಾಗಿ ಔರಂಗಜೇಬ್ ಉತ್ತರ ಭಾರತಕ್ಕೆ ತೆರಳಿದರು. ಅವನ ಹಿಮ್ಮೆಟ್ಟುವಿಕೆಯ ನಂತರ, ಶಿವಾಜಿ ತನ್ನ ಆಕ್ರಮಣವನ್ನು ಮುಂದುವರೆಸಿದನು ಮತ್ತು ಕಲ್ಯಾಣ, ಭಿವಂಡಿ ಮತ್ತು ಮಹೋಲವನ್ನು ವಶಪಡಿಸಿಕೊಂಡನು.

4. ಶಿವಾಜಿ ಮತ್ತು ಅಫಜಲ್ ಖಾನ್ (1659) : ದಿನದಿಂದ ದಿನಕ್ಕೆ ಪ್ರವರ್ಧಮಾನಕ್ಕೆ ಬರುತ್ತಿದ್ದ ಶಿವಾಜಿಯನ್ನು ಕಂಡು ಅಫಜಲ್ ಖಾನ್ ಆಘಾತಕ್ಕೊಳಗಾದರು. 1659 ರಲ್ಲಿ ಅವನು 10,000 ಸೈನ್ಯದೊಂದಿಗೆ ಬಂದು ಪಂಡರಪುರ ಮತ್ತು ತುಳಜಾಪುರ ದೇವಾಲಯಗಳನ್ನು ಲೂಟಿ ಮಾಡಿದನು. ಇದರಿಂದ ಭಯಗೊಂಡ ಶಿವಾಜಿ ಪ್ರತಾಪಗಡ ಕೋಟೆಯಲ್ಲಿ ತಂಗಿದ್ದ. ಹಾಗಾಗಿ ಶಿವಾಜಿಯನ್ನು ಸೋಲಿಸುವುದು ಅವರಿಗೆ ಕಷ್ಟಕರವಾಗಿತ್ತು. ಅಫಜಲ್ ಖಾನನ ನೆಪವೊಡ್ಡಿ ಶಿವಾಜಿಯನ್ನು ವಂಚನೆಯಿಂದ ಹಿಡಿದು ಕೊಲ್ಲಲು ಯೋಚಿಸಿ ತನ್ನ ಪ್ರತಿನಿಧಿ ಕೃಷ್ಣಾಜಿ ಭಾಸ್ಕರ್ ರಾವ್ ಅವರನ್ನು ಭೇಟಿಯಾಗಲು ಶಿವಾಜಿಯ ಆಸ್ಥಾನಕ್ಕೆ ಕಳುಹಿಸಿದನು. ಕೃಷ್ಣಾಜಿ ಭಾಸ್ಕರ್ ರಾವ್ ಶಿವಾಜಿಗೆ ಮುಂದೆ ಏನಾಗಬಹುದು ಎಂಬುದರ ಕುರಿತು ವಿವರಿಸಿದರು. ಆಗ ಶಿವಾಜಿ ಆತ್ಮರಕ್ಷಣೆಗಾಗಿ ಬಂದು ಅಪಜಲ್ ಖಾನನನ್ನು ಭೇಟಿಯಾದ. ಗೊತ್ತುಪಡಿಸಿದ ಪ್ರದೇಶದಲ್ಲಿ ಇಬ್ಬರೂ ಭೇಟಿಯಾದಾಗ ಮತ್ತು ಒಬ್ಬರನ್ನೊಬ್ಬರು ಅಪ್ಪಿಕೊಂಡಾಗ, ಅಫಜಲ್ ಖಾನ್ ತನ್ನ ಗುಪ್ತ ಕತ್ತಿಯಿಂದ ಶಿವಾಜಿಯ ತಲೆಗೆ ಹೊಡೆದನು. ಆದರೆ ಶಿವಾಜಿ ತಲೆಗೆ ಪೇಟ ಧರಿಸಿದ್ದರಿಂದ ಏನೂ ಆಗಲಿಲ್ಲ. ಅದೇ ಸಮಯದಲ್ಲಿ ಅವನು ತನ್ನ ಗುರಾಣಿಯಲ್ಲಿ ಬಚ್ಚಿಟ್ಟಿದ್ದ ʻಹುಲಿಯುಗುರು’ (ವ್ಯಾಘ್ರನಖ) ಎಂಬ ಆಯುಧದಿಂದ ಅಫ್ಜಲ್ ಖಾನನನ್ನು ಕೊಂದನು. ಕಾಡಿನಲ್ಲಿ ಅಡಗಿದ್ದ ಶಿವಾಜಿಯ ಸೈನಿಕರು ಬಿಜಾಪುರದ ಸೈನಿಕರನ್ನು ಸೋಲಿಸಿದರು.

5. ಶಿವಾಜಿ ಮತ್ತು ಶಾಹಿಸ್ತಾ ಖಾನ್ (1663) : ಔರಂಗಜೇಬನು ಶಿವಾಜಿಯನ್ನು ನಿಗ್ರಹಿಸಲು ತನ್ನ ಮಾವ ಶಾಹಿಸ್ತಾ ಖಾನ್‌ನನ್ನು ಕಳುಹಿಸಿದನು. ಶಾಹಿಸ್ತಾ ಖಾನ್ ಭಾರೀ ಸೈನ್ಯದೊಂದಿಗೆ ಬಂದು ಕೊಂಕಣ ಮತ್ತು ಕಲ್ಯಾಣದಂತಹ ಮರಾಠ ಪ್ರದೇಶಗಳನ್ನು ವಶಪಡಿಸಿಕೊಂಡು ಪುಣೆಯಲ್ಲಿ ಬೀಡುಬಿಟ್ಟನು. ಪುಣೆಯು ಶಿವಾಜಿಯ ಜನ್ಮಸ್ಥಳವಾಗಿರುವುದರಿಂದ ಅದನ್ನು ಮೊಘಲರಿಂದ ರಕ್ಷಿಸಲು ಅವನು ಸಿದ್ಧನಾಗಿದ್ದನು. ಎರಡು ವರ್ಷಗಳ ಕಾಲ ಪುಣೆಯನ್ನು ಶಿವಾಜಿ ವಶಪಡಿಸಿಕೊಳ್ಳಲಿಲ್ಲ ಮತ್ತು ಅವನು ತುಂಬಾ ನೊಂದಿದ್ದನು. ಇದ್ದಕ್ಕಿದ್ದಂತೆ, ಒಂದು ರಾತ್ರಿ, ಶಿವಾಜಿ ಶಾಹಿಸ್ತಾ ಖಾನ್ ಬೀಡುಬಿಟ್ಟಿದ್ದ ಪುಣೆಯ ಡೇರೆಯ ಮೇಲೆ ಹಠಾತ್ ದಾಳಿ ಮಾಡಿದ. ಈ ಅನಿರೀಕ್ಷಿತ ದಾಳಿಯಿಂದ ಗೊಂದಲಕ್ಕೀಡಾದ ಶಾಹಿಸ್ತಾ ಖಾನ್ ಅಲ್ಲಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾಳೆ. ನಂತರ ಅವರ ಒಂದು ಹೆಬ್ಬೆರಳು ಕತ್ತರಿಸಲಾಯಿತು. ಶಾಹಿಸ್ತಾ ಖಾನ್ ಅಲ್ಲಿಂದ ತಪ್ಪಿಸಿಕೊಂಡು ಓಡಿ ಹೋಗಿದ್ದಾನೆ. ನಂತರ ಶಾಹಿಸ್ತಖಾನನ ಮಗ ಮತ್ತು ಅವನ ಸೈನಿಕರು ಶಿವಾಜಿಯಿಂದ ಕೊಲ್ಲಲ್ಪಟ್ಟರು.

6. ಶಿವಾಜಿ ಮತ್ತು ಜೈಸಿಂಗ್ (1665): ದಕ್ಷಿಣದಲ್ಲಿ ತನ್ನ ಪ್ರತಿಷ್ಠೆಯನ್ನು ಹೆಚ್ಚಿಸುತ್ತಿದ್ದ ಶಿವಾಜಿಯನ್ನು ಎದುರಿಸಲು ಔರಂಗಜೇಬನು ಅಂಬಾರಿನ ದಂಡನಾಯಕ ರಾಜ ಜೈಸಿಂಗ್‌ನನ್ನು ಸೈನ್ಯದೊಂದಿಗೆ ಕಳುಹಿಸಿದನು. ಮಹಾ ಕಪಟಿಯಾಗಿದ್ದ ಜೈಸಿಂಗ್ ಶಿವಾಜಿಯ ವೈರಿಗಳನ್ನು ಒಟ್ಟುಗೂಡಿಸಿ ಪುರಂದರ ಮತ್ತು ರಾಯಗಡ ಕೋಟೆಗಳಿಗೆ ಮುತ್ತಿಗೆ ಹಾಕಿ ಶಿವಾಜಿಯನ್ನು ಕೋಟೆಯೊಳಗೆ ಸಿಲುಕಿಸಿದ. ಶಿವಾಜಿಗೆ ಬಾಹ್ಯ ಬೆಂಬಲ ಸಿಗದಿದ್ದಾಗ ಅವರು ಔರಂಗಜೇಬನನ್ನು ಸಂಪರ್ಕಿಸಿದರು. ಜೂನ್ 24, 1665 ರಂದು, ಅವರು ಮೊಘಲರೊಂದಿಗೆ ಪುರಂದರಿ ಒಪ್ಪಂದಕ್ಕೆ ಸಹಿ ಹಾಕಿದರು.

7. ಆಗ್ರಾಕ್ಕೆ ಶಿವಾಜಿಯ ಭೇಟಿ (1666): ಪುರಂದರ ಒಪ್ಪಂದದ ನಂತರ, ಜೈಸಿಂಗ್ ಶಿವಾಜಿಯನ್ನು ಆಗ್ರಾಕ್ಕೆ ಬರುವಂತೆ ಮನವೊಲಿಸಿದ. ಅವರ ಮಾತನ್ನು ಪಾಲಿಸಿದ ಶಿವಾಜಿ ತನ್ನ ತಾಯಿ ಜೀಜಾಬಾಯಿಯನ್ನು ರಾಜಪ್ರತಿನಿಧಿಯಾಗಿ ನೇಮಿಸಿ ಆಗ್ರಾಕ್ಕೆ ಭೇಟಿ ನೀಡಿದರು. ಆಗ ಶಿವಾಜಿಯನ್ನು ಔರಂಗಜೇಬನು ಚೆನ್ನಾಗಿ ಸ್ವೀಕರಿಸಲಿಲ್ಲ. ಸಾಮಾನ್ಯ ಜನರು ಕುಳಿತುಕೊಳ್ಳುವ ದರ್ಬಾರ್‌ನಲ್ಲಿ ಅವರಿಗೆ ಆಸನವನ್ನು ನೀಡಲಾಯಿತು. ಶಿವಾಜಿ ಈ ಪರಿಸ್ಥಿತಿಯನ್ನು ಅವಮಾನಕರವಾಗಿ ಕಂಡರು. ಔರಂಗಜೇಬನಿಂದ ಅವಮಾನಿತನಾದ ಶಿವಾಜಿ ಮೊಘಲ್ ಸಿಂಹಾಸನಕ್ಕೆ ಬೆನ್ನು ತಿರುಗಿಸಿ ಹೊರಟುಹೋದ. ಈ ಘಟನೆಯಿಂದ ಕೋಪಗೊಂಡ ಔರಂಗಜೇಬನು ಶಿವಾಜಿಯನ್ನು ಸೆರೆಹಿಡಿದು ಬಂಧನದಲ್ಲಿರಿಸಿದನು. ನಂತರ ಶಿವಾಜಿ ವೇಷ ಧರಿಸಿ ಅಲಹಾಬಾದ್ ಮತ್ತು ಬನಾರಸ್ ಮೂಲಕ ಪ್ರಯಾಣಿಸಿದರು. ಅವರು 1666 ರಲ್ಲಿ ರಾಯಗಡವನ್ನು ತಲುಪಿದರು.

8. ಸಿಂಹಾಸನಾರೋಹಣ (1674) : ಕ್ರಿ.ಶ. 1674 ರಲ್ಲಿ, ರಾಯಗಡದಲ್ಲಿ ಶಿವಾಜಿ ಸಿಂಹಾಸನವನ್ನು ಏರಿದರು. ಆಗ ಶಿವಾಜಿ ʻಛತ್ರಪತಿ’ ಎಂಬ ಬಿರುದು ಪಡೆದರು.

ಕರ್ನಾಟಕದಲ್ಲಿ ದಂಡಯಾತ್ರೆ: ಶಿವಾಜಿ ಗೋಲ್ಕಂಡ ಸುಲ್ತಾನನೊಂದಿಗೆ ಮಾತುಕತೆ ನಡೆಸಿ ಬಿಜಾಪುರ ಸುಲ್ತಾನನ ಜಿಂಜಿ, ವೆಲ್ಲೂರು ಮತ್ತು ತಂಜಾವೂರು ಪ್ರಾಂತ್ಯಗಳನ್ನು ಮುತ್ತಿಗೆ ಹಾಕಿ ವಶಪಡಿಸಿಕೊಂಡರು. ನಂತರ ಕಾರವಾರ, ಅಂಕೋಲಾ, ಹುಬ್ಬಳ್ಳಿಯನ್ನು ಲೂಟಿ ಮಾಡಿದರು.

ಉಪಸಂಹಾರ

ಶಿವಾಜಿಯ ಪಾಲನೆ, ಅವರ ತಾಯಿಯ ಪ್ರೀತಿ ಮತ್ತು ಅವರ ಮಾರ್ಗದರ್ಶಕರ ಬೋಧನೆಗಳಿಂದ ನಿರೂಪಿಸಲ್ಪಟ್ಟಿದೆ, ಅವರ ಭವಿಷ್ಯಕ್ಕಾಗಿ ಅಸಾಧಾರಣ ನಾಯಕನಾಗಿ ಅಡಿಪಾಯ ಹಾಕಿತು. ಅವನ ರಚನೆಯ ವರ್ಷಗಳಲ್ಲಿ ಅವನಲ್ಲಿ ತುಂಬಿದ ಮೌಲ್ಯಗಳು ಭಾರತೀಯ ಇತಿಹಾಸದಲ್ಲಿ ಮಹತ್ವದ ಅಧ್ಯಾಯವನ್ನು ಗುರುತಿಸುವ ಮೂಲಕ ಸಮೃದ್ಧ ಮತ್ತು ಶಕ್ತಿಯುತ ಮರಾಠಾ ಸಾಮ್ರಾಜ್ಯವನ್ನು ಸ್ಥಾಪಿಸಲು ಪ್ರೇರೇಪಿಸುತ್ತವೆ. ಅವರ ಪರಂಪರೆಯು ತಲೆಮಾರುಗಳನ್ನು ಪ್ರೇರೇಪಿಸುತ್ತದೆ, ಧೈರ್ಯ, ಸ್ಥಿತಿಸ್ಥಾಪಕತ್ವ ಮತ್ತು ಸ್ವ-ನಿರ್ಣಯದ ಮನೋಭಾವವನ್ನು ಸಂಕೇತಿಸುತ್ತದೆ.

ಮೂರನೇ ಪಾಣಿಪತ್ ಯುದ್ಧ (1761)

ಮೂರನೇ ಪಾಣಿಪತ್ ಯುದ್ಧ (1761)

ಈ ಯುದ್ಧವು ಭಾರತದ ಚರಿತ್ರೆಯ ನಿರ್ಣಾಯಕ ಯುದ್ಧಗಳಲ್ಲಿ ಒಂದಾಗಿದೆ. ಒಂದನೆಯ ಪೇಶ್ವೆಯ ಕಾಲದಲ್ಲಿ ಪ್ರಾರಂಭವಾದ ಮರಾಠ ಸಾಮ್ರಾಜ್ಯಶಾಹಿ ವಿಸ್ತರಣಾ ನೀತಿ ಮೂರನೇ ಪೇಶ್ವೆ ಬಾಲಾಜಿ ಬಾಜೀರಾಯನ ಕಾಲದಲ್ಲಿ ತನ್ನ ಪರಾಕಾಷ್ಠತೆಯನ್ನು ಮುಟ್ಟಿತು. ಈತನ ಕಾಲದಲ್ಲಿ ಮರಾಠ ಸೈನ್ಯಗಳು ದೆಹಲಿ ಮತ್ತು ಲಾಹೋರ್‌ಗಳ ಮೇಲೆ ಧಾಳಿ ನಡೆಸಿ ಆವುಗಳ ಮೇಲೆ ಮರಾಶ ಸಾರ್ವಭೌಮತ್ವವನ್ನು ಸ್ಥಾಪಿಸಿದವು. ಈ ಧಾಳಿಗಳು ಆಫ್‌ಘಾನಿಸ್ಥಾನದ ಅರಸನಾದ ಅಹ್ಮದ್ಮಷಾ ಅಬ್ದಾಲಿಯನ್ನು ಕೆರಳಿಸಿದವು. ಮರಾಠ ಸೈನ್ಯಗಳು ಪಂಜಾಬಿನ ರಾಜ್ಯಪಾಲನಾಗಿದ್ದ ಅಹ್ಮದ್ಮಾ ಅಬ್ದಾಲಿಯ ಪುತ್ರ ತೈಮೂರ್ ಷಾನನ್ನು ಅಪಜಯಗೊಳಿಸಿದ್ದು ಆತನಿಗೆ ಇನ್ನೂ ಕೋಪ ಹೆಚ್ಚಾಗಲು ಕಾರಣವಾಯಿತು. ಈ ಸೋಲಿನ ಸೇಡನ್ನು ತೀರಿಸಿಕೊಳ್ಳುವ ಉದ್ದೇಶದಿಂದಾಗಿ ಅಹ್ಮದ್ ಷಾ ಅಬ್ದಾಲಿಯು ಮರಾಠರ ವಿರುದ್ಧ ದಂಡೆತ್ತಿ ಬಂದನು. ಇದು ತೃತೀಯ ಪಾಣಿಪತ್ ಯುದ್ಧಕ್ಕೆ ಕಾರಣವಾಯಿತು.

ಕ್ರಿ.ಶ.1761 ರಲ್ಲಿ ಮರಾಠ ಮತ್ತು ಅಫ್ಘನ್ ಸೈನ್ಯಗಳು ಇತಿಹಾಸ ಪ್ರಸಿದ್ಧವಾದ ಪಾಣಿಪತ್‌ನ ರಣಭೂಮಿಯಲ್ಲಿ ಸಂಧಿಸಿದವು. ಅಲ್ಲಿ ತೃತೀಯ ಬಾರಿಗೆ ಭಾರತದ ಅದೃಷ್ಟ ನಿರ್ಣಯವಾಯಿತು. ಮರಾಠ ಸೈನ್ಯವು 45,000 ಇತ್ತು. ಅಫ್ಘನ್ನರ ಸೇನೆ 60,000 ಇತ್ತು. ಆಹ್ಮದ್‌ಷಾನು ಉತ್ತಮವಾದ ಕುದುರೆಗಳನ್ನು ಬಲಾಡ್ಯವಾದ ಗುಂಡಿನ ಪಡೆಯನ್ನು ಹೊಂದಿದ್ದನು. ಈತನ ಸೈನಿಕರ ಶಸ್ತ್ರಾಸ್ತ್ರಗಳು ಮರಾಠರಿಗಿಂತ ಉತ್ತಮವಾಗಿದ್ದವು. ಸಣ್ಣ ಪುಟ್ಟ ಘರ್ಷಣೆಯ ನಂತರ ಉಭಯ ಸೇನೆಗಳ ನಡುವೆ ಕ್ರಿ.ಶ. 1761 ಜನವರಿ 14 ರಂದು ನಿರ್ಣಾಯಕವಾದ, ಭೀಕರವಾದ ಕದನ ಜರುಗಿತು. ಈ ಕದನವು ಬೆಳಿಗ್ಗೆಯಿಂದ ಸಂಜೆ ಮೂರು ಗಂಟೆಯವರೆಗೆ ನಡೆಯಿತು. ಮರಾಠರು ಸದಾಶಿವರಾಯನ ಮುಖಂಡತ್ವದಲ್ಲಿ ಶೌರ್ಯ ಸಾಹಸಗಳಿಂದ ಹೋರಾಡಿದರು. ಯುದ್ಧದ ಪ್ರಾರಂಭದಲ್ಲಿ ಮರಾತರೇ ಮೇಲುಗೈ ಪಡೆದಾಗ್ಯೂ ತದನಂತರ ಅಂದರೆ ಮಧ್ಯಾಹ್ನದ ನಂತರ ಅಬ್ದಾಲಿಯು ನಡೆಸಿದ ಹೊಸ ಸೈನಿಕ ಬದಲಾವಣೆ ಮತ್ತು ಕಾರ್ಯಾಚರಣೆಯಿಂದ ಯುದ್ಧದ ಗತಿಯೇ ಬೇರೆಯಾಯಿತು. ಬೆಳಿಗ್ಗಿನಿಂದ ಹೋರಾಡಿ ಬಳಲಿ ಬೆಂಡಾಗಿದ್ದ ಮರಾಠ ಸೈನಿಕರು ಧೈರ್ಯವನ್ನು ಕಳೆದುಕೊಂಡರು. ಅತ್ಯಲ್ಪ ಕಾಲದಲ್ಲಿಯೇ ಮರಾಠರ ಸೋಲು ಖಚಿವಾಗುವತ್ತಾ ಸಾಗಿತ್ತು. ಮರಾಠ ಸೈನಿಕರು ಭಯದಿಂದ ಯುದ್ಧರಂಗದಿಂದ ಓಡತೊಡಗಿದರು. ಆಫ್ಘನ್ ಸೈನಿಕರು ಅವರನ್ನು ಎಲ್ಲಾ ದಿಕ್ಕುಗಳಿಂದಲೂ ಬೆನ್ನಟ್ಟಿದರು. ಮರಾಠ ಸೈನ್ಯದ ಎಲ್ಲಾ ನಾಯಕರು ಮತ್ತು ಅಸಂಖ್ಯಾತ ಸೈನಿಕರು ಯುದ್ಧ ಭೂಮಿಯಲ್ಲಿಯೇ ಮಡಿದರು. ಪೇಶ್ವೆಯ ಹಿರಿಯ ಪುತ್ರನಾದ ವಿಶ್ವಾಸರಾವ್ ಮತ್ತು ಸದಾಶಿವರಾವ್ ಸೇರಿದಂತೆ ಹಲವು ನಾಯಕರು ಮಡಿದರು. ವಿಜಯಿಗಳಿಗೆ ಆಗಾಧ ಪ್ರಮಾಣದಲ್ಲಿ ಸಂಪತ್ತು ಲಭಿಸಿತು. ಮರಾರರು ಆಗಾಧವಾದ ನಷ್ಟವನ್ನು ಅನುಭವಿಸಿದರು. ಈ ಸೋಲಿನ ವಿಷಯ, ಈಗಾಗಲೇ ರೋಗಪೀಡಿತನಾಗಿ ಹಾಸಿಗೆ ಹಿಡಿದಿದ್ದ ಬಾಲಾಜಿ ಬಾಜಿರಾಯನ ಮರಣವನ್ನು ತ್ವರಿತಗೊಳಿಸಿತು. ಆತ ಭಗ್ನ ಹೃದಯಿಯಾಗಿ ಕ್ರಿ.ಶ. 1761 ಜನವರಿ 23 ರಂದು ಮರಣಹೊಂದಿದನು.

ಪರಿಣಾಮಗಳು :

  1. ಭಾರತದ ಚರಿತ್ರೆಯಲ್ಲಿ ಪ್ರಪ್ರಥಮ ಭಾರಿಗೆ ಮರಾಠರು ಸಂಪೂರ್ಣವಾಗಿ ಸೋತು ಹೋದರು.
  2. ಆಬ್ದಾಲಿಯು ದೆಹಲಿಯ ಮೇಲೆ ಧಾಳಿ ಮಾಡಿ ಮೊಗಲರನ್ನು ಅಪಜಯಗೊಳಿಸಿದ್ದರಿಂದ ಮೊಗಲರು ಅವನತಿ ಹೊಂದಬೇಕಾಯಿತು.
  3. ಮುಖ್ಯವಾಗಿ ಮೈಸೂರಿನಲ್ಲಿ ಹೈದರಾಲಿಯ ಏಳಿಗೆಗೆ ಸದವಕಾಶವಾಯಿತು.
  4. ಆಂಗ್ಲರು ಭಾರತದಲ್ಲಿ ಬಲಾಡ್ಯರಾಗಿ ಬೆಳೆಯಲು ಸದವಕಾಶವಾಯಿತು.
  5. ಈ ಕದನ ಭಾರತದ ಚರಿತ್ರೆಗೆ ಒಂದು ಹೊಸ ಆಯಾಮ ನೀಡಿತು.

ಉಪಸಂಹಾರ

ಮೂರನೇ ಪಾಣಿಪತ್ ಯುದ್ಧವು ಭಾರತದ ಇತಿಹಾಸದಲ್ಲಿ ಮಹತ್ತರ ಪರಿಣಾಮ ಬೀರಿದ ಯುದ್ಧವಾಗಿದೆ. ಈ ಸೋಲಿನಿಂದ ಮರಾಠರ ಪ್ರಭಾವ ಕುಗ್ಗಿ, ಹೊಸ ಶಕ್ತಿಗಳು ಭಾರತದಲ್ಲಿ ಉದಯಿಸಲು ಅವಕಾಶ ದೊರೆಯಿತು. ವಿಶೇಷವಾಗಿ ಆಂಗ್ಲರ ಪ್ರಭಾವ ಹೆಚ್ಚಲು ಇದು ಕಾರಣವಾಯಿತು. ಹೀಗಾಗಿ ಈ ಯುದ್ಧವು ಭಾರತದ ರಾಜಕೀಯ ಇತಿಹಾಸದಲ್ಲಿ ಪ್ರಮುಖ ತಿರುವು ಎಂದು ಪರಿಗಣಿಸಲಾಗುತ್ತದೆ.

ಪೇಶ್ವೆಯವರ ಕೈಕೆಳಗೆ ಮರಾಠ ಸಾಮ್ರಾಜ್ಯದ ಏಳಿಗೆ

ಪೇಶ್ವೆಯವರ ಕೈಕೆಳಗೆ ಮರಾಠ ಸಾಮ್ರಾಜ್ಯದ ಏಳಿಗೆ

ಶಿವಾಜಿಯ ಮರಣದ ನಂತರ ಪೇಳ್ವೆಗಳು ಮರಾಠ ಸಾಮ್ರಾಜ್ಯದ ನಿಜವಾದ ಸಾರ್ವಭೌಮರಾಗಿ ಏಳಿಗೆಗೆ ಬಂದಿದ್ದು, ಮರಾಠ ಇತಿಹಾಸದಲ್ಲಿ ಪ್ರಮುಖವಾದುದು. ಈತನ ಮರಣಾನಂತರ ಉತ್ತರಾಧಿಕಾರಕ್ಕಾಗಿ ನಡೆದ ಹೋರಾಟಗಳು ಆತನ ಉತ್ತರಾಧಿಕಾರಿಗಳನ್ನು ಅನಾವಶ್ಯಕವಾಗಿ ದುರ್ಬಲಗೊಳಿಸಿದವು. ಮೊಗಲ್ ಸಾಮ್ರಾಟ ಔರಂಗಜೇಬನು ಸಾಂಬಾಜಿಯನ್ನು ಕೊಲೆಮಾಡಿದುದು ಮರಾಠರಲ್ಲಿ ಐಕ್ಯತೆ ಉಂಟಾಗಲು ಸಹಾಯಕವಾಯಿತು. ಆದರೆ ಈ ಐಕ್ಯತೆ ಶಾಶ್ವತವಾಗಿ ಉಳಿಯಲಿಲ್ಲ. ಮೊಗಲರ ಬಂಧನದಿಂದ ಬಿಡುಗಡೆಯಾದ ಸಾಹು ಕ್ರಿ.ಶ. 1708ರಲ್ಲಿ ಸತಾರದಲ್ಲಿ ಭತ್ರಪತಿಯಾಗಿ ಅಧಿಕಾರಕ್ಕೆ ಬಂದನು. ಆದರೆ ಈತ ಅಷ್ಟು ಸಮರ್ಥನಾದ ರಾಜನಾಗಿರಲಿಲ್ಲ. ಈತನು ಅಧಿಕಾರಕ್ಕೆ ಬಂದ ವೇಳೆಯಲ್ಲಿ ರಾಜ್ಯಾದ್ಯಂತ ಅನಾಯಕತ್ವ ಮತ್ತು ಅರಾಜಕತೆ ತಲೆದೋರಿತ್ತು. ಈತ ತನ್ನ ವೈಯಕ್ತಿಕ ಗುಣಗಳಿಂದ ಕೆಲವರನ್ನು ತನ್ನ ಕಡೆಗೆ ಒಲಿಸಿಕೊಂಡಿದ್ದನು. ಆದರೆ ಇವನಿಗೆ ಶಿವಾಜಿಯಷ್ಟು ಶಕ್ತಿ ಸಾಮರ್ಥ್ಯವಿರಲಿಲ್ಲ. ಇವನು ಸೋಮಾರಿ ಮತ್ತು ಆಲಸಿಯೂ ಆಗಿದ್ದು, ವಿಲಾಸ ಜೀವನವನ್ನು ಆರಿಸಿಕೊಂಡನು. ಆಡಳಿತವನ್ನು ಸಂಪೂರ್ಣವಾಗಿ ತನ್ನ ಅಧಿಕಾರಿಗಳಿಗೆ ಅತಿಮುಖ್ಯವಾಗಿ ಪ್ರಧಾನಮಂತ್ರಿಗಳಾಗಿದ್ದ ಪೇಕ್ಷೆಗಳಿಗೆ ವಹಿಸಿಕೊಟ್ಟನು. ಈ ರೀತಿ ಅರಸನ ನಿರಾಶಕ್ತಿ ಮತ್ತು ಆಸಮರ್ಥತೆಗಳು, ಸಾರ್ವಭೌಮ ಅಧಿಕಾರವು ಪೇಶ್ವೆಯವರಿಗೆ ವರ್ಗಾವಣೆಯಾಗಲು ಮತ್ತು ಅವರು ಮರಾಠ ರಾಜಕೀಯದಲ್ಲಿ ಪ್ರಧಾನ್ಯತೆ ಗಳಿಸಲು ಕಾರಣವಾಯಿತು.

ಬಾಲಾಜಿ ವಿಶ್ವನಾಥ : ಇವನು ಮೊದಲ ಪೇಳ್ವೆಯಾಗಿದ್ದು ಸಿಕ್ಕ ಸದವಕಾಶವನ್ನು ಉಪಯೋಗಿಸಿಕೊಂಡು ಮರಾಠ ರಾಜಕೀಯದಲ್ಲಿ ಶ್ರೇಷ್ಠ ವ್ಯಕ್ತಿಯಾಗಿ ಮಾರ್ಪಟ್ಟನು. ಕ್ರಿ.ಶ. 1713ರಲ್ಲಿ ಸಾಹು ಇವನನ್ನು ಪೇಶ್ವೆಯನ್ನಾಗಿ ನೇಮಕ ಮಾಡಿದನು. ಇವನು ಅಧಿಕಾರಕ್ಕೆ ಬರಲು ಮೂಲ ಕಾರಣ ಈತನಲ್ಲಿದ್ದ ವೈಯಕ್ತಿಕ ಪ್ರತಿಭೆ ಮತ್ತು ಶಕ್ತಿ ಸಾಮರ್ಥ್ಯ. ತನ್ನ ಚಾಣಾಕ್ಷತನದಿಂದ ಅತ್ಯಲ್ಪ ಕಾಲದಲ್ಲಿಯೇ ಸಾಹುವನ್ನು ನಾಮಮಾತ್ರ ಅರಸನನ್ನಾಗಿ ಮಾಡಿ ತಾನೇ ನಿಜವಾದ ಅರಸನಾದನು. ಪೇಶ್ವೆ ಅಧಿಕಾರವು ವಂಶಪಾರಂಪರ್ಯವಾಗುವಂತೆ ಮಾಡಿದನು. ಈತನೊಂದಿಗೆ ಪೇಶ್ವೆಯವರು ಆಳ್ವಿಕೆ ಆರಂಭವಾಯಿತು.

ವಿಶ್ವನಾಥನು ಉತ್ತಮ ಆಡಳಿತಗಾರನಾಗಿದ್ದನು. ರಾಜನೈಪುಣ್ಯತೆಯನ್ನು ಹೊಂದಿದ್ದನು. ಇವನು ಪ್ರಧಾನಿಯಾಗಿ ಆಳ್ವಿಕೆ ನಡೆಸುತ್ತಿದ್ದ ಸಂದರ್ಭದಲ್ಲಿ ರಾಜ್ಯದ ಶಾಂತಿಗೆ ಧಕ್ಕೆ ಉಂಟುಮಾಡುತ್ತಿದ್ದ ದಂಗೆಕೋರರನ್ನು ಅಡಗಿಸಿದನು. ಅಷ್ಠಪ್ರಧಾನ ಪದ್ಧತಿಯನ್ನು ಪುನಃ ಜಾರಿಗೆ ತಂದನು. ಆದರೆ ಎಲ್ಲಾ ಅಧಿಕಾರವನ್ನು ತನ್ನ ಕೈಯಲ್ಲಿಯೇ ಕೇಂದ್ರೀಕರಿಸಿಕೊಂಡನು. ಮೊಗಲ್ ಸಾಮ್ರಾಜ್ಯದ ಆಂತರಿಕ ಕಾರ್ಯ ಚಟುವಟಿಕೆಗಳಲ್ಲಿ ಹಸ್ತಕ್ಷೇಪ ನಡೆಸಿ ಮರಾಠರಿಗೆ ಹಲವು ರಿಯಾಯಿತಿಗಳನ್ನು ದೊರಕಿಸಿಕೊಟ್ಟನು. ಮೊಗಲರೊಂದಿಗೆ ಮೈತ್ರಿ ಮಾಡಿಕೊಂಡು ದಖ್ಖನ್ನಿನ ನಾಲ್ಕು ಸುಭಗಳಲ್ಲಿ ಚೌತ್ ಮತ್ತು ಸರ್ದೆಶ್ ಮುಖಿ ತೆರಿಗೆಗಳನ್ನು ವಸೂಲಿ ಮಾಡುವ ಅಧಿಕಾರವನ್ನು ಮರಾಠರಿಗೆ ದೊರಕಿಸಿಕೊಟ್ಟನು. ಕ್ರಿ.ಶ. 1719ರಲ್ಲಿ ಬಾಲಾಜಿ ವಿಶ್ವನಾಥನು ಮೊಗಲರ ಉತ್ತರಾಧಿಕಾರ ಯುದ್ಧದಲ್ಲಿ ಯಶಸ್ವಿಯಾಗಿ ಭಾಗವಹಿಸಿದ್ದನು. ಇದು ಇತಿಹಾಸದಲ್ಲಿ ಪ್ರಾಮುಖ್ಯತೆ ಗಳಿಸಿದೆ. ಇದು ಮರಾಠರ ಘನತೆಯನ್ನು ಹೆಚ್ಚಿಸಿತು. ಅಲ್ಲದೆ ಮಹತ್ವಾಕಾಂಕ್ಷೆಯನ್ನು ಇಮ್ಮಡಿಗೊಳಿಸಿತು. ಅವರು ಸ್ವತಂತ್ರ ಸಾಮ್ರಾಜ್ಯದ ಕನಸನ್ನು ಕಟ್ಟುವುದಕ್ಕೆ ಹಾದಿಯನ್ನು ಸುಗಮಗೊಳಿಸಿತು. ದೆಹಲಿಯ ಚಕ್ರವರ್ತಿಯು ಅವರ ಕೈಗೊಂಬೆಯಾದನು. ವಿಶ್ವನಾಥನು ಸ್ವತಂತ್ರ ಮರಾಠ ಸಾಮ್ರಾಜ್ಯದ ಅಸ್ತಿಭಾರ ನೀತಿಯನ್ನು ಈ ಯಶಸ್ವಿನ ಮೇಲೆ ರೂಪಿಸಿದ. ತತ್ಪರಿಣಾಮವಾಗಿ ಮರಾಠರ ಪ್ರಾಬಲ್ಯ ಹೆಚ್ಚಿದುದಲ್ಲದೆ ಮರಾಠ ರಾಜ್ಯದ ಉತ್ಕರ್ಷಕ್ಕೆ ಕಾರಣವಾಯಿತು. ಈ ಎಲ್ಲಾ ಯಶಸ್ಸಿನ ನಡುವೆ ವಿಶ್ವನಾಥನು ಕ್ರಿ.ಶ. 1720ರಲ್ಲಿ ಮರಣಹೊಂದಿದನು.

ಒಂದನೇ ಬಾಜಿರಾಯ : ಬಾಲಾಜಿ ವಿಶ್ವನಾಥನ ಸಾವಿನ ನಂತರ ಆತನ ಪುತ್ರನಾದ ಒಂದನೇ ಬಾಜಿರಾಯನು ಅಧಿಕಾರಕ್ಕೆ ಬಂದನು. ಇವನು ಪೇಶ್ವೆಗಳಲ್ಲಿ ಪ್ರಮುಖನು ಬಾಲ್ಯದಲ್ಲಿಯೇ ತನ್ನ ತಂದೆಯೊಡನೆ ಸೈನಿಕ ವಿದ್ಯೆಯನ್ನು ಕಲಿತುಕೊಂಡಿದ್ದನು. ತತ್ಪರಿಣಾಮವಾಗಿ ಈತನಿಗೆ ಯುದ್ಧವಿದ್ಯೆ ಮತ್ತು ರಾಜಕಾರಣದಲ್ಲಿ ಸಾಕಷ್ಟು ಅನುಭವವಿತ್ತು. ಇವನು ವೀರಯೋಧ ಮಾತ್ರವಲ್ಲದೆ ಅತ್ಯುತ್ತಮ ರಾಜನೀತಿ ನಿಪುಣನಾಗಿದ್ದ. ಈತ ಮೊಗಲ್ ಸಾಮ್ರಾಜ್ಯ ಅವನತಿಯತ್ತ ಸಾಗಿದ್ದ ಸಂದರ್ಭದಲ್ಲಿ, ಅದರ ಸಮಾಧಿಯ ಮೇಲೆ ಮರಾಠ ಸಾಮ್ರಾಜ್ಯವನ್ನು ನಿರ್ಮಿಸಬೇಕೆಂಬ ಕನಸನ್ನು ಕಂಡನು. ಈ ಉದ್ದೇಶಕ್ಕಾಗಿಯೇ ಹಿಂದೂ ನಾಯಕರನ್ನು ಒಗ್ಗೂಡಿಸಲು ಪ್ರಯತ್ನಿಸಿದನು. ಹಿಂದೂ ನಾಯಕರ ಬೆಂಬಲ ಮತ್ತು ಸಹಕಾರಗಳನ್ನು ಪಡೆಯುವ ಸಲುವಾಗಿ ಒಂದನೇ ಬಾಜಿರಾಯನು ʻಹಿಂದೂ-ಪಾದ್-ಪಾದ್‌ಶಾಯಿ ಅಥವಾ ಹಿಂದೂ ಸಾಮ್ರಾಜ್ಯದ ಸಿದ್ಧಾಂತವನ್ನು ಬೋಧಿಸಿದ. ಕ್ರಿ.ಶ. 1724 ರಲ್ಲಿ ಮಾಳ್ವದ ಮೇಲೆ ಧಾಳಿ ಮಾಡಿ ಅದನ್ನು ಆಕ್ರಮಿಸಿಕೊಂಡನು. ಆದರೆ ಈ ಆಕ್ರಮಣವನ್ನು ಕೆಲವರು ವಿರೋಧಿಸಿದಾಗ ಆ ವಿರೋಧಿಗಳನ್ನು ಹತ್ತಿಕ್ಕಿದನು. ಕ್ರಿ.ಶ. 1731ರಲ್ಲಿ ಹೈದರಾಬಾದಿನ ನಿಜಾಂ-ಉಲ್-ಮುಲ್ಕನೊಂದಿಗೆ ಮೈತ್ರಿ ಮಾಡಿಕೊಂಡು ಉತ್ತರದಲ್ಲಿ ರಾಜ್ಯ ವಿಸ್ತಾರಕ್ಕೆ ಅವಕಾಶಗಿಟ್ಟಿಸಿಕೊಂಡನು.

ಮೊಗಲ್ ಸಾಮ್ರಾಟನು ನಿಜಾಂ-ಉಲ್-ಮುಲ್ಕನ ಸಹಾಯವನ್ನು ಕೋರಿದ್ದರಿಂದ ಕ್ರಿ.ಶ. 1737 ರಲ್ಲಿ ಮುಲ್ಕನು ಈ ಹಿಂದಿನ ಮರಾಠರೊಂದಿಗಿನ ಒಪ್ಪಂದವನ್ನು ಮುರಿದು ಬಾಜಿರಾಯನ ವಿರುದ್ಧ ಯುದ್ಧಕ್ಕಿಳದನು. ಭೂಪಾಲ್ ಹತ್ತಿರ ನಡೆದ ಯುದ್ಧದಲ್ಲಿ ನಿಜಾಂ-ಉಲ್-ಮುಲ್ಕನು ಸೋತು ಶರಣಾದನು. ಸೋತ ಮುಲ್ಕನು ಮಾಳ್ವ, ನರ್ಮದ ಮತ್ತು ಚಂಬಲ್ ನದಿಗಳ ಮಧ್ಯಬಾಗದ ಪ್ರದೇಶದ ಮೇಲೆ ಸಾರ್ವಭೌಮತ್ವವನ್ನು, ಅಲ್ಲದೆ ಯುದ್ಧದ ವೆಚ್ಚಕ್ಕಾಗಿ 50 ಲಕ್ಷ ರೂಪಾಯಿಗಳನ್ನು ದೆಹಲಿಯ ಚಕ್ರವರ್ತಿಯಿಂದ ಕೊಡಿಸಲು ಒಪ್ಪಿದ. ಕ್ರಿ.ಶ. 1739ರಲ್ಲಿ ಮರಾಠರು ಪೋರ್ಚುಗೀಸರಿಂದ ಸಾಲೈಟ್ ಮತ್ತು ಬೇಸಿನ್‌ಗಳನ್ನು ವಶಪಡಿಸಿಕೊಂಡರು. ಕ್ರಿ.ಶ. 1740ರಲ್ಲಿ ಬಾಜಿರಾಯನು ಆಕಾಲಿಕ ಸಾವಿಗೆ ಒಳಗಾದನು. ಈತನ ಮರಣದಿಂದಾಗಿ ಮರಾಠರಿಗೆ ತುಂಬಲಾರದ ನಷ್ಟವಾಯಿತು. ಒಂದನೇ ಬಾಜಿರಾಯನು ತನ್ನ ವೈಯಕ್ತಿಕ ಜೀವನದಲ್ಲಿ ಕೆಲವು ನ್ಯೂನ್ಯತೆಗಳನ್ನು ಹೊಂದಿದ್ದರೂ ಸಹ ವೀರಯೋಧನು ಮತ್ತು ಪ್ರಖ್ಯಾತ ರಾಜನೀತಿ ನಿಪುಣನಾಗಿದ್ದು, ಮರಾಠ ಸಾಮ್ರಾಜ್ಯಕ್ಕೆ ಅತ್ಯುತ್ತಮ ಸೇವೆ ಸಲ್ಲಿಸಿದನು. ಈತನ ಕಾಲದಲ್ಲಿ ಮರಾಠ ಸಾಮ್ರಾಜ್ಯ ವಿಸ್ತಾರವಾಯಿತು.

ಬಾಲಾಜಿ ಬಾಜೀರಾಯ : (1740-1761) : ಒಂದನೇ ಬಾಜೀರಾಯನ ಮರಣಾನಂತರ ಆತನ ಪುತ್ರನಾದ ಬಾಲಾಜಿ ಬಾಜೀರಾಯನು ಪೇಳ್ವೆಯಾಗಿ ಅಧಿಕಾರಕ್ಕೆ ಬಂದನು. ಈತನಿಗೆ ಇವನ ತಂದೆಯಂತಹ ಶ್ರೇಷ್ಠ ಪ್ರತಿಭೆಯಿರಲಿಲ್ಲ. ಆದಾಗ್ಯೂ ಈತನಲ್ಲಿ ಶಕ್ತಿ ಸಾಮರ್ಥ್ಯಗಳು ಕಡಿಮೆ ಇರಲಿಲ್ಲ. ತನ್ನ ತಂದೆಯಂತೆ ಈತನೂ ಸಹ ರಾಜ್ಯದ ವಿಸ್ತರಣೆಯಲ್ಲಿ ಹಲವು ಸಮರ್ಥ ಅಧಿಕಾರಿಗಳ ಸೇವೆಯನ್ನು ದೊರಕಿಸಿಕೊಂಡನು.

ಬಾಲಾಜಿ ಬಾಜಿರಾಯನು ತನ್ನ ಅಜ್ಞಾನದಿಂದ ಎರಡು ವಿಷಯಗಳಲ್ಲಿ ತನ್ನ ತಂದೆಯ ನೀತಿಯನ್ನು ಬಿಟ್ಟು ಅಡ್ಡದಾರಿ ಹಿಡಿದನು. ಒಂದನೆಯದಾಗಿ ಸೇನೆಯು ಈತನ ಕಾಲದಲ್ಲಿ ಸಂಪೂರ್ಣವಾಗಿ ಬದಲಾವಣೆ ಹೊಂದಿತು. ಒಂದನೇ ಬಾಜಿರಾಯನು ಕುದುರೆ ಸವಾರರ ಸಂಖ್ಯೆಯನ್ನು ಹೆಚ್ಚಿಸಿದರೂ ಸಹ ಹಳೆಯ ಯುದ್ಧ ವಿಧಾನವನ್ನು ಕೈಬಿಡಲಿಲ್ಲ. ಆದರೆ ಬಾಲಾಜಿ ಬಾಜಿರಾಯನು ವಿದೇಶೀ ಯುದ್ಧ ವಿಧಾನವನ್ನು ಜಾರಿಗೆ ತರುವ ಉದ್ದೇಶದಿಂದ ಸೈನ್ಯದಲ್ಲಿನ ಸಂಪ್ರದಾಯವನ್ನು ಮುರಿದು ಕೈಗೆ ಸಿಕ್ಕ ಕೂಲಿ ಸೈನಿಕರನ್ನು ಸೇರಿಸಿಕೊಂಡನು. ತತ್ಪರಿಣಾಮವಾಗಿ ಸೈನ್ಯವು ತನ್ನ ರಾಷ್ಟ್ರೀಯ ಲಕ್ಷಣವನ್ನು ಕಳೆದುಕೊಂಡಿತು. ಈ ಹೊರಗಿನ ಸೈನಿಕರನ್ನು ಶಿಸ್ತಿಗೆ ಮತ್ತು ಹತೋಟಿಗೆ ಒಳಪಡಿಸುವುದು ಕಷ್ಟವಾಯಿತು. ಭಾಗಶ: ಹಳೆಯ ಯುದ್ಧ ಪದ್ಧತಿಯನ್ನು ಬಿಟ್ಟು ಬಿಡಲಾಯಿತು. ಎರಡನೆಯದಾಗಿ ಬಾಲಾಜಿ ಬಾಜಿರಾಯನು ತನ್ನ ತಂದೆಯ ಉದ್ದೇಶವಾದ ಹಿಂದೂ ನಾಯಕರನ್ನೆಲ್ಲ ಒಂದೆಡೆ ಸೇರಿಸುವ ಅರ್ಥಾತ್ ಹಿಂದೂ-ಪಾದ್-ಪಾದಶಾಹಿ ಯನ್ನು ಏರ್ಪಡಿಸುವ ಗುರಿಯನ್ನು ಉದ್ದೇಶಪೂರ್ವಕವಾಗಿ ಬಿಟ್ಟುಕೊಟ್ಟನು. ಈತನ ಅನುಯಾಯಿಗಳು ಹಿಂದಿನಂತೆ ಕಲಹ ಕಚ್ಚಾಟಗಳಲ್ಲಿ ಮತ್ತು ಆಕ್ರಮಣಗಳಲ್ಲಿ ತೊಡಗಿದರು. ಹಿಂದೂ ಮುಸ್ಲಿಮರೆನ್ನದೆ ಧಾಳಿನಡೆಸಿ ರಜಪೂತರ ಮತ್ತು ಇತರ ಹಿಂದೂ ನಾಯಕರ ಸಹಾನುಭೂತಿಯನ್ನು ಕಳೆದುಕೊಂಡರು. ತತ್ಪರಿಣಾಮವಾಗಿ ಮರಾಠ ಸಾಮ್ರಾಜ್ಯವು ಅಖಿಲ ಭಾರತ ರಾಷ್ಟ್ರೀಯತೆಯನ್ನು ಪ್ರತಿನಿಧಿಸುವ ಹಕ್ಕನ್ನು ಕಳೆದುಕೊಂಡಿತು.

ಬಾಲಾಜಿ ಬಾಜಿರಾಯನ ನೀತಿಯ ಲೋಪದೋಷಗಳು ತಕ್ಷಣವೇ ಯಾವ ಪರಿಣಾಮವನ್ನುಂಟುಮಾಡಲಿಲ್ಲ. ಉತ್ತರ ಮತ್ತು ದಕ್ಷಿಣ ಭಾರತಗಳಲ್ಲಿ ಮರಾಠರ ಪ್ರಾಬಲ್ಯ ನಿರಂತರವಾಗಿ ಮುಂದುವರಿಯಿತು. ಕೃಷ್ಣಾನದಿಯ ದಕ್ಷಿಣ ರಾಜ್ಯಗಳಿಂದ ಬಲತ್ಕಾರವಾಗಿ ಕಷ್ಟ ಕಾಣಿಕೆಗಳನ್ನು ವಸೂಲಿ ಮಾಡಿದ್ದಲ್ಲದೆ, ಮರಾಜರು ಬಿದನೂರು ಮತ್ತು ಮೈಸೂರು ರಾಜ್ಯಗಳಿಗೆ ಮುತ್ತಿಗೆ ಹಾಕಿದರು. ಆದರೆ ಅವರ ಮುನ್ನಡೆಗೆ ಸ್ವಲ್ಪ ಕಾಲ ತಡೆಯಾಯಿತು. ಕ್ರಿ.ಶ. 1760ರಲ್ಲಿ ಪೇಶ್ವೆಯ ಸಂಬಂಧಿಯಾದ ಸದಾಶಿವರಾಯನು ಹೈದರಾಬಾದಿನ ನಿಜಾಮನನ್ನು ಅಪಜಯಗೊಳಿಸಿದನು. ಸೋತ ನಿಜಾಮನು ಬಿಜಾಪುರ ಪ್ರಾಂತ, ಔರಂಗಾಬಾದಿನ ಎಲ್ಲ ಪ್ರದೇಶ ಮತ್ತು ದೌಲತಾಬಾದಿನ ಕೋಟೆಯೂ ಸೇರಿದಂತೆ ಹಲವಾರು ಕೋಟೆಗಳನ್ನು ಮರಾಠರಿಗೆ ಬಿಟ್ಟುಕೊಟ್ಟನು. ತತ್ಪರಿಣಾಮವಾಗಿ ಮರಾಠರ ಅಧಿಪತ್ಯ ಇನ್ನೂ ಹೆಚ್ಚಾಯಿತು.

ಕ್ರಿ.ಶ. 1753ರಲ್ಲಿ ಹೋಳ್ಕರ್ ಮತ್ತು ರಘುನಾಥರಾಯರನ್ನು ಉತ್ತರ ಭಾರತಕ್ಕೆ ಸೇನಾ ಸಮೇತ ಕಳುಹಿಸಲಾಯಿತು. ತತ್ಪರಿಣಾಮವಾಗಿ ದೋಆಬ್ ಪ್ರಾಂತ್ಯದಲ್ಲಿ ಮರಾಠ ಸಾರ್ವಭೌಮತ್ವವನ್ನು ಪುನು ಸ್ಥಾಪಿಸಲಾಯಿತು. ಕ್ರಿ.ಶ. 1757ರ ಆಗಸ್ಟ್‌ನಲ್ಲಿ ದೆಹಲಿಗೆ ಮುತ್ತಿಗೆ ಹಾಕಿ ನಜೀಬ್-ಉದ್-ದೌಲನನ್ನು ಶರಣಾಗತನಾಗುವಂತೆ ಮಾಡಿದರು. ಅಲ್ಲದೆ ದೆಹಲಿಯನ್ನು ನಂಬಿಕೆಗೆ ಅರ್ಹನಾದ ವಜೀರ್ ಇಮಾದನಿಗೆ ವಹಿಸಲಾಯಿತು, ಕ್ರಿ.ಶ. 1758 ರಲ್ಲಿ ಪಂಜಾಬಿಗೆ ಮುತ್ತಿಗೆ ಹಾಕಿ ಲಾಹೋರ್ ಮತ್ತು ಸರ್ ಹಿಂದ್‌ಗಳನ್ನು ವಶಪಡಿಸಿಕೊಂಡು, ಅದೀನಬೇಗ್ ಖಾನ್ ಎಂಬುವವನನ್ನು ಪಂಜಾಬಿನ ರಾಜ್ಯಪಾಲನನ್ನಾಗಿ ಮಾಡಲಾಯಿತು. ಈತ ಮರಾಠರಿಗೆ ವರ್ಷಕ್ಕೆ 75 ಲಕ್ಷ ರೂಪಾಯಿ ಕಷ್ಟವನ್ನು ನೀಡಲು ಒಪ್ಪಿಕೊಂಡನು. ಈ ರೀತಿ ರಘುನಾಥರಾಯನ ನೀತಿಯು ಮರಾಠ ಸಾಮ್ರಾಜ್ಯವನ್ನು ವಿಸ್ತರಿಸಿತು.

ಉಪಸಂಹಾರ

ಪೇಶ್ವೆಗಳ ಕಾಲದಲ್ಲಿ ಮರಾಠ ಸಾಮ್ರಾಜ್ಯವು ರಾಜಕೀಯ ಮತ್ತು ಸೈನಿಕವಾಗಿ ಬಹಳಷ್ಟು ವಿಸ್ತಾರವಾಯಿತು. ವಿಶೇಷವಾಗಿ ಬಾಲಾಜಿ ವಿಶ್ವನಾಥ ಮತ್ತು ಬಾಜೀರಾಯರ ನಾಯಕತ್ವ ಮರಾಠ ಸಾಮ್ರಾಜ್ಯದ ಶಕ್ತಿಯನ್ನು ಹೆಚ್ಚಿಸಿತು. ಆದರೆ ನಂತರದ ಆಡಳಿತದಲ್ಲಿ ಉಂಟಾದ ನೀತಿ ದೋಷಗಳು ಮತ್ತು ಒಳಕಲಹಗಳು ಸಾಮ್ರಾಜ್ಯದ ದುರ್ಬಲತೆಗೆ ಕಾರಣವಾದವು. ಆದರೂ ಪೇಶ್ವೆಗಳ ಆಡಳಿತ ಮರಾಠ ಇತಿಹಾಸದಲ್ಲಿ ಮಹತ್ವದ ಅಧ್ಯಾಯವಾಗಿ ಉಳಿದಿದೆ.

ಔರಂಗಜೇಬ್ (ಕ್ರಿ.ಶ. 1658-1707) ಧಾರ್ಮಿಕ ನೀತಿ ಮತ್ತು ದಖ್ಖನ್ ನೀತಿ

ಔರಂಗಜೇಬ್ (ಕ್ರಿ.ಶ. 1658-1707) ಧಾರ್ಮಿಕ ನೀತಿ ಮತ್ತು ದಖ್ಖನ್ ನೀತಿ

ಉನ್ನತ ಮೊಗಲ್ ಚಕ್ರವರ್ತಿಗಳಲ್ಲಿ ಕಟ್ಟಕಡೆಯವನಾದ ಔರಂಗಜೇಬ್, ಕ್ರಿ.ಶ.1658 ರಲ್ಲಿ ತನ್ನ ತಂದೆ ಷಹಜಹಾನನನ್ನು ಬಂಧನದಲ್ಲಿರಿಸಿ ಅಧಿಕಾರಕ್ಕೆ ಬಂದನು. ಕಾರ್ಯದಕ್ಷತೆಗೆ, ಸೈನಿಕ ಕೌಶಲ್ಯಕ್ಕೆ, ಅಸಮಾನ್ಯ ಬುದ್ಧಿಶಕ್ತಿಗೆ, ಧರ್ಮನಿಷ್ಠೆಗೆ ಹೆಸರಾಗಿದ್ದ ಔರಂಗಜೇಬ್ ತಾನು ಪಾಲಿಸಿದ ಕೆಲವೊಂದು ನೀತಿಗಳಿಂದಾಗಿ ಮತ್ತು ತೆಗೆದುಕೊಂಡ ತೀರ್ಮಾನಗಳಿಂದಾಗಿ ಮೊಗಲ್ ಸಾಮ್ರಾಜ್ಯದ ಅವನತಿಗೆ ಮತ್ತು ಪತನಕ್ಕೆ ಕಾರಣನಾದನು. ಅವನ ನೀತಿಗಳಲ್ಲಿ ಪ್ರಮುಖವೆಂದರೆ ಆತನ ಧಾರ್ಮಿಕ ನೀತಿ ಮತ್ತು ದಖ್ಖನ್ ನೀತಿ.

ಧಾರ್ಮಿಕ ನೀತಿ : ಔರಂಗಜೇಬನು ಪಾಲಿಸಿದ ನೀತಿಗಳಲ್ಲಿ ಅತ್ಯಂತ ದುಷ್ಪರಿಣಾಮಕಾರಿ ನೀತಿಯೆಂದರೆ ಅವನ ಧಾರ್ಮಿಕ ನೀತಿ ಅವನ ಧರ್ಮದ್ವೇಷದ ಧರ್ಮಾಂಧ ನೀತಿ, ಆತನ ಧಾರ್ಮಿಕ ನೀತಿ ಹಲವು ಇತಿಹಾಸಕಾರರ ತೀವ್ರವಾದ ಟೀಕೆಗೆ ಗುರಿಯಾಗಿದೆ. ಈತ ತನ್ನ ಧಾರ್ಮಿಕ ನೀತಿಯಿಂದ ತನ್ನ ಮತ್ತು ತನ್ನ ಸಾಮ್ರಾಜ್ಯದ ಪತನಕ್ಕೆ ಕಾರಣನಾದ. ಅಕ್ಬರನು ತನ್ನ ಉದಾರ ಧಾರ್ಮಿಕ ನೀತಿಯಿಂದ ಮೊಗಲ್ ಸಾಮ್ರಾಜ್ಯದ ನಿರ್ಮಾಣಕ್ಕೆ ಕಾರಣನಾಗಿದ್ದಲ್ಲಿ ಔರಂಗಜೇಬನು ತನ್ನ ಧರ್ಮಾಂಧ ನೀತಿಯಿಂದಾಗಿ ಅದರ ನಿರ್ನಾಮಕ್ಕೆ ಕಾರಣನಾದ.

ಔರಂಗಜೇಬನೊಬ್ಬ ನಿಷ್ಠಾವಂತ, ಸಂಪ್ರದಾಯಸ್ಥ ಸುನ್ನೀ ಮುಸಲ್ಮಾನ ಅಕ್ಬರನ ರಾಷ್ಟ್ರೀಯ ನೀತಿ ಈತನಿಗೆ ಒಗ್ಗದ ಕಷಾಯ. ಸಾಮ್ರಾಜ್ಯವನ್ನು ಇಸ್ಲಾಂ ಕಾನೂನು ಸಂಹಿತೆಯ ಆಧಾರದ ಮೇಲೆ ನಿಲ್ಲಿಸುವುದು ಈತನ ಮುಖ್ಯ ಗುರಿಯಾಗಿತ್ತು. ಭಾರತೀಯರನ್ನು ಇಸ್ಲಾಮಿಗೆ ಮತಾಂತರಗೊಳಿಸುವುದು ಮತ್ತು ಅವರ ಮೂರ್ತಿಪುಂಜೆಯನ್ನು ನಿರ್ಮೂಲನ ಮಾಡುವುದು ಈತನ ಯೋಜನೆಯಾಗಿತ್ತು, ಈ ದೃಷ್ಟಿಯಿಂದ ಇವನು ಅಕ್ಬರನ ಧಾರ್ಮಿಕ ಸಹಿಷ್ಣುತಾ ನೀತಿಯನ್ನು ಬದಿಗೊತ್ತಿ ಧರ್ಮಾಂಧವಾಗಿ ವರ್ತಿಸತೊಡಗಿದ್ದು ಕಂಡು ಬರುತ್ತದೆ. ಈತನ ವಕ್ರದೃಷ್ಟಿಗೆ ಬಿದ್ದ ಯಾವ ಹಿಂದೂ ದೇವಾಲಯವೂ ಉಳಿಯಲಿಲ್ಲ. ಮತಾಂತರವನ್ನು ಹೆಚ್ಚಿಸಲು ಹಿಂದೂ ದೇವಾಲಯ ಮತ್ತು ಪಾಠಶಾಲೆಗಳನ್ನು ನಿರ್ನಾಮ ಮಾಡತೊಡಗಿದನು. ಇದಕ್ಕಾಗಿ ನಿಷ್ಠಾವಂತ ಕಾರ್ಯಕರ್ತರಿಗೆ ಬಹುಮಾನಗಳನ್ನು ಕೊಡುವ ಪರಿಪಾಠವನ್ನು ಕೈಕೊಂಡ. ಹಿಂದೂಗಳ ಹಬ್ಬ ಹರಿದಿನಗಳ ಆಚರಣೆ ಮತ್ತು ಪುಣ್ಯಕ್ಷೇತ್ರಗಳ ಯಾತ್ರೆಗಳನ್ನು ರದ್ದು ಗೊಳಿಸಿದನು.

ತನ್ನ ವಂಶದ ಹಿಂದಿನ ಅದಸರುಗಳು ಕುರಾನಿನ ಕಾನೂನುಗಳನ್ನು ತಿರಸ್ಕರಿಸುವ ಮುಖಾಂತರ ಅವರು ದೊಡ್ಡ ಪ್ರಮಾದವನ್ನೆಸಗಿದರೆಂದು ಔರಂಗಜೇಬ್ ಭಾವಿಸಿದ್ದನು. ಮುತ್ಸದ್ದಿಯಾಗಿದ್ದ ಅಕ್ಬರನು ಇಸ್ಲಾಂ ಧರ್ಮದ ರಾಜ ಪ್ರಭುತ್ವದ ತತ್ವವನ್ನು ಕೈಬಿಟ್ಟು ಹಿಂದೂ ಸಾರ್ವಭೌಮತ್ವದ ಆದರ್ಶವನ್ನು ಪಾಲಿಸಿದ್ದ. ಇಸ್ಲಾಂ ಧರ್ಮವು ಪಡೆದಿದ್ದ ವಿಶೇಷ ಸ್ಥಾನಮಾನವನ್ನು ಕೊನೆಗಾಣಿಸಿ, ತನ್ನ ಸಾಮ್ರಾಜ್ಯಕ್ಕೆ ಧರ್ಮ, ನಿರಪೇಕ್ಷತೆಯ ವಿಕಾಲ ಬುನಾದಿಯನ್ನು ನೀಡಿದ್ದನು. ಆದರೆ ಔರಂಗಜೇಬನು ಆಕ್ಟರನು ನಿರ್ಮಿಸಿದ್ದ ವಿಶಾಲ ತಳಹದಿಯ ಅಡಿಪಾಯವನ್ನೇ ಕಿತ್ತೊಗೆದು, ಮೊಗಲ್ ಸಾಮ್ರಾಜ್ಯದ ಪತನಕ್ಕೆ ಕಾರಣನಾದನು.

ಅಧಿಕಾರಕ್ಕೆ ಬಂದ ಪ್ರಾರಂಭದಲ್ಲಿ ಸುನ್ನಿ ಪಂಥದ ಅಭಿವೃದ್ಧಿಗಾಗಿ ಹಲವು ಕ್ರಮಕೈಗೊಂಡ ಔರಂಗಜೇಬನು ಇನ್ನು ಸಾಮ್ರಾಜ್ಯದ ಅಧಿಕೃತ ಧರ್ಮವನ್ನಾಗಿ ಅಂಗೀಕರಿಸಿದನು. ಮುಸ್ಲಿಂಯೇತರರನ್ನು ಇಸ್ಲಾಂ ಧರ್ಮಕ್ಕೆ ಸೇರಿಸುವ ಮತ್ತು ಸಾಮ್ರಾಜ್ಯದ ಆಡಳಿತವನ್ನು ಕುರಾನಿನ ಕಾನೂನು ಪ್ರಕಾರ ಜರುಗಿಸುವ ವಿಧಾನಗಳನ್ನು ಅನುಸರಿಸಿದನು. ಇಡೀ ದೇಶವನ್ನು ಜಯಿಸುವವರೆಗೆ ಮತ್ತು ದೇಶದಲ್ಲಿನ ಎಲ್ಲ ಜನತೆ ಇಸ್ಲಾಂ ಧರ್ಮ ಸ್ವೀಕರಿಸುವವರೆಗೆ ಮುಸ್ಲಿಂಯೇತರರ ಮೇಲೆ ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ ಕಟ್ಟುಪಾಡುಗಳನ್ನು ಹೇರಿ ಪ್ರತಿನಿತ್ಯವೂ ಅವರಿಗೆ ತಮ್ಮ ಕೀಳುಮಟ್ಟದ ನೆನಪುಂಟಾಗುವಂತೆ ಮಾಡುವುದು ಇವನ ಉದ್ದೇಶವಾಗಿತ್ತು. ಇಸ್ಲಾಂಗೆ ಮತಾಂತರ ಹೊಂದಿದವರಿಗೆ ಸಾಮಾಜಿಕ ಗೌರವ. ರಾಜಕೀಯ ಪ್ರಾಧಾನ್ಯತೆ ಮತ್ತು ಆರ್ಥಿಕ ಸಹಾಯಗಳು ದೊರೆಯುವಂತೆ ಮಾಡಿದನು.

ಇಸ್ಲಾಂ ಧರ್ಮವನ್ನು ಸಾಮ್ರಾಜ್ಯದ ಅಧಿಕೃತ ಧರ್ಮವನ್ನಾಗಿ ಅಂಗೀಕರಿಸಿದ ನಂತರ ಔರಂಗಜೇಬನು ಮುಸ್ಲಿಂಯೇತರರ ಪದ್ಧತಿಗಳನ್ನು ತೆಗೆದು ಹಾಕಿ ಅವುಗಳ ಸ್ಥಾನದಲ್ಲಿ ಇಸ್ಲಾಮಿನ ಪದ್ಧತಿಗಳನ್ನು ಜಾರಿಗೆ ತರಲು ಪ್ರಯತ್ನಿಸಿದನು. ಜನ್ಮದಿನದಂದು ಮತ್ತು ಸಿಂಹಾಸನಾರೋಹಣ ದಿನದಂದು ನಡೆಸುತ್ತಿದ್ದ ತುಲಾಭಾರವನ್ನು ರದ್ದುಮಾಡಿದ. ಪ್ರತಿದಿನ ಚಕ್ರವರ್ತಿಗಳು ಜನತೆಗೆ ನೀಡುತ್ತಿದ್ದ ಜರೋಖ ದರ್ಶನ ನಿಲ್ಲಿಸಿದ. ಸಂಗೀತದ ಮೇಲೆ ನಿಷೇಧ ಹಾಕಿ ಸಂಗೀತಗಾರರನ್ನು ಆಸ್ಥಾನದಿಂದ ಹೊರಗಟ್ಟಿದ. ಜ್ಯೋತಿಷಿಗಳ ಮೇಲೆ ನಿಷೇಧ ಹಾಕಿದ. ನೃತ್ಯ ಗಾರ್ತಿಯರು ಮತ್ತು ವೇಶ್ಯೆಯರ ಮೇಲೆ ನಿರ್ಬಂಧ ಹಾಕಿ ಅವರು ಮದುವೆಯಾಗುವಂತೆ ಇಲ್ಲದೆ ಸಾಮ್ರಾಜ್ಯ ಬಿಟ್ಟು ಹೋಗುವಂತೆ ಆಜ್ಞೆಮಾಡಿದ. ಪಾನ ನಿಷೇಧ ಜಾರಿಗೆ ತಂದ. ಅಫೀಮಿನ ಬಳಕೆ ನಿಷೇಧಿಸಿದ. ಜೂಜಿನ ಮೇಲೆ ನಿರ್ಬಂಧ ಹೇರಿದ. ಆದರೆ ಇವೆಲ್ಲ ಬಹಿರಂಗವಾಗಿ ನಿಷೇಧವಾದರೂ ಗುಪ್ತವಾಗಿ ಮುಂದುವರೆದಿದ್ದವು. ಕಾರಣ ಇವೆಲ್ಲ ಆಗಿನ ಕಾಲದ ಜನ ಜೀವನದ ಅವಿಭಾಜ್ಯ ಅಂಗವಾಗಿದ್ದವು. ಹಿಂದೂಗಳ ಪವಿತ್ರ ಹಬ್ಬಗಳಾದ ಹೋಳಿ, ದೀಪಾವಳಿ, ದಸರಾ ಹಬ್ಬಗಳ ಆಚರಣೆ ನಿಲ್ಲಿಸಿದ. ಹಿಂದೂ ರೀತಿಯ ನಮಸ್ಕಾರಗಳನ್ನು ರದ್ದುಪಡಿಸಿ, ಮುಸ್ಲಿಂ ರೀತಿಯ ʻಸಲಾಂ ಅಲೆಕುಮ್ ‘ಜಾರಿಗೆ ತಂದನು. ಹೋಳಿ ಹಬ್ಬದ ಅಶ್ಲೀಲ ಹಾಡುಗಳನ್ನು ಮೊಹರಂ ಮೆರವಣಿಗೆಗಳನ್ನು ಮತ್ತು ಸಹಗಮನ ಪದ್ಧತಿಗಳನ್ನು ನಿಷೇಧಿಸಿದನು.

ಇಸ್ಲಾಂ ಧರ್ಮಾಧಿಕಾರಿಗಳು ತಮ್ಮ ಕ್ಷೇತ್ರಗಳಲ್ಲಿ ಸಂಚರಿಸಿ ಹಿಂದೂ ದೇವಾಲಯ ಮತ್ತು ಪೂಜಾಸ್ಥಾನಗಳನ್ನು ನಾಶಪಡಿಸಿದರು. ಬನಾರಸ್‌ ವಿಶ್ವನಾಥದೇವಾಲಯ, ಮಧುರೆಯ ಕೇಶವದೇವಾಲಯ, ಸೋಮನಾಥದೇವಾಲಯ ಇತ್ಯಾದಿ ಸುಪ್ರಸಿದ್ಧ ಹಿಂದೂ ಮಂದಿರಗಳನ್ನು ನೆಲಸಮ ಮಾಡಲಾಯಿತು..

ಹಿಂದೂಗಳ ಎಲ್ಲಾ ಮಾರಾಟದ ವಸ್ತುಗಳ ಬೆಲೆಯ ಮೇಲೆ 5% ರಂತೆ ತೆರಿಗೆ ವಿಧಿಸಿದನು. ಆದರೆ ಮುಸ್ಲಿಂರು ಶೇಕಡದಂತೆ ಎರಡುವರೆಯಂತೆ ತೆರಿಗೆ ನೀಡುತ್ತಿದ್ದರು. ಕ್ರಿ.ಶ. 1667ರ ನಂತರ ಮುಸ್ಲಿಂರು ಇದನ್ನು ಕೊಡುವಂತಿರಲಿಲ್ಲ. ಸರಕಾರಿ ಹುದ್ದೆಗಳಲ್ಲಿದ್ದ ಹಿಂದೂಗಳನ್ನು ತೆಗೆದು ಹಾಕಿ ಅವರ ಸ್ಥಾನದಲ್ಲಿ ಮುಸ್ಲಿಂರನ್ನು ಸೇರಿಸಿದನು.

ಔರಂಗಜೇಬನು ಹಿಂದೂಗಳನ್ನು ಇಸ್ಲಾಂ ಧರ್ಮಕ್ಕೆ ಪರಿವರ್ತಿಸಲು ಅವರ ಮೇಲೆ ಅಧಿಕ ಒತ್ತಡ ಹೇರಿದನು. ಅಕ್ಬರ ಕಾಲದಲ್ಲಿ ರದ್ದಾಗಿದ್ದ ʻಜೆಸಿಯಾ’ ತಲೆಗಂದಾಯವನ್ನು ಹಿಂದೂಗಳ ಮೇಲೆ ಹೇರಿದ. ಇದರ ವಿರುದ್ಧ ಹಿಂದೂಗಳು ಪ್ರತಿಭಟಿಸಿದಾಗ ಅವರನ್ನು ಅತ್ಯಂತ ಹೀನಾಯವಾದ ರೀತಿಯಲ್ಲಿ ನಡೆಸಿಕೊಂಡು ಅವರ ಪ್ರತಿಭಟನೆಯನ್ನು ಅಡಗಿಸಲಾಯಿತು. ಮನುಸ್ಸಿ ಎಂಬ ಸಮಕಾಲೀನ ಬರಹಗಾರ ಹೇಳುವಂತೆ “ಈ ತೆರಿಗೆಯನ್ನು ಕೊಡಲಾಗದ ಹಿಂದೂಗಳು ತೆರಿಗೆ ವಸೂಲಿ ಅಧಿಕಾರಿಗಳ ಕ್ರೋಧವನ್ನು ಸಹಿಸಲಾಗದೆ ಮುಸ್ಲಿಮರಾಗಿ ಮತಾಂತರಗೊಂಡರು. ಇದರಿಂದ ಔರಂಗಜೇಬನು ಸಂತೋಷಗೊಂಡನು” ಜಿಸಿಯಾ ತಲೆಗಂದಾಯವೇ ಅಲ್ಲದೆ ಹಿಂದೂಗಳ ಮೇಲೆ ಇನ್ನೂ ಹಲವಾರು ನಿರ್ಬಂಧ ಹೇರಲಾಗಿತ್ತು. ಹಬ್ಬಗಳಲ್ಲಿ ಬಾಣ, ಬಿರುಸು, ಪಟಾಕಿಗಳನ್ನು ನಿಷೇಧಿಸಿ, ಹಿಂದೂಗಳು ಮುಸ್ಲಿಂರ ಉಡುಗೆತೊಡುಗೆಗಳನ್ನು ತೊಡದಂತೆ ಮಾಡಿದ. ರಜಪೂತರು ಮತ್ತು ಮರಾಠರನ್ನು ಬಿಟ್ಟು ಬೇರೆ ಹಿಂದೂಗಳು ಪಲ್ಲಕ್ಕಿ ಮತ್ತು ಕುದುರೆಗಳಲ್ಲಿ ಹೋಗುವುದನ್ನು ನಿಷೇಧಿಸಿದೆ.

ಈ ಮೇಲ್ಕಂಡ ಅನ್ಯಾಯಕರವಾದ ಧಾರ್ಮಿಕ ಧೋರಣೆಯಿಂದ ಕಷ್ಟನಷ್ಟಗಳಿಗೆ ಬಲಿಯಾದ ಹಿಂದೂಗಳು ಔರಂಗಜೇಬನ ವಿರುದ್ಧ ದಂಗೆಯೆದ್ದರು. ಹಿಂದೂಗಳ ತೀವ್ರ ಪ್ರತಿಭಟನೆಯು ಮೊಗಲ್ ಸಾಮ್ರಾಜ್ಯದ ಅಡಿಪಾಯವನ್ನು ಅಲ್ಲಾಡಿಸಿತು. ಸುನ್ನೀ ಧರ್ಮಾಂಧನಾಗಿದ್ದ ಈತ ಶಿಯಾ ಮುಸಲ್ಮಾನರನ್ನು “ಶವಭಕ್ಷಕ ರಾಕ್ಷಸರು” ಎಂದು ಬಣ್ಣಿಸುತ್ತಿದ್ದನು. ಒಟ್ಟಿನಲ್ಲಿ ಔರಂಗಜೇಬನ ಧರ್ಮಾಂಧತೆಯ ಧೋರಣೆಯು ಮೊಗಲ್ ಸಾಮ್ರಾಜ್ಯದ ಭದ್ರತೆಯನ್ನು ನಾಶಪಡಿಸಿತು.

ಔರಂಗಜೇಬನ ಹಿಂದೂ ವಿರೋಧಿ ನೀತಿಯಿಂದಾಗಿ ಸಾಮ್ರಾಜ್ಯದ ಬಹುಸಂಖ್ಯಾತ ಹಿಂದೂಗಳು ಆತೃಪ್ತಿಗೆ ಒಳಗಾಗಿ ಸಾಮ್ರಾಜ್ಯದಾದ್ಯಂತ ಬಂಡಾಯವೆದ್ದರು. ರಾಜಸ್ಥಾನ, ಮಾಳವ, ಬುಂದೇಲಖಂಡ ಮತ್ತು ಖಾನ್ ದೇಶಗಳಲ್ಲಿಯ ಹಿಂದೂಗಳು ಔರಂಗಜೇಬನ ಮತಾಂತರ ನೀತಿಯನ್ನು ಪ್ರಬಲವಾಗಿ ಪ್ರತಿಭಟಿಸಿದರು. ಅಂತಹ ದಂಗೆಗಳಲ್ಲಿ ಪ್ರಥಮ ಮತ್ತು ಪರಿಣಾಮಕಾರಿಯಾದುದೆಂದರೆ ಮಥುರಾದ ಜಾಟರ ಬಂಡಾಯ, ಗೋಕುಲನ ನೇತೃತದಲ್ಲಿ ಸಂಭವಿಸಿದ ಜಾಟರ ದಂಗೆ ತತ್‌ಕ್ಷಣ ಹತ್ತಿಕ್ಕುವಷ್ಟು ಸುಲಭವಾದುದಾಗಿರಲಿಲ್ಲ. ಈ ಬಂಡಾಯ ಮೊಗಲ್ ಸಾಮ್ರಾಜ್ಯದ ಅವನತಿಗೆ ಒಂದು ಮಹತ್ವದ ಕಾರಣವಾಯಿತು. ಏಕೆಂದರೆ ಆನಂತರ ಗೋಕುಲನ ಸ್ಥಾನದಲ್ಲಿ ಬಂದ ರಾಜರಾಮ್ ಮುಂತಾದವರು ಔರಂಗಜೇಬನ ಕೊನೆಯದಿನಗಳವರೆಗೂ ಬಂಡಾಯ ಮುಂದುವರಿಸಿದರು. ಇದು ಮೊಗಲ್ ಆರಸನ ಧರ್ಮಾಂಧತೆಯ ನೀತಿಗೆ ಹಾಕಿದ ಮೊದಲ ಕೊಡಲಿ ಪೆಟ್ಟಾಗಿ ಪರಿಣಮಿಸಿತು. ಇದೇ ರೀತಿಯಲ್ಲಿ ಬುಂದೇಲದ ರಜಪೂತರು, ಮೇವಾಡದ ಮತ್ತು ನರ್ನೋತ ಜಿಲ್ಲೆಗಳ ಹಿಂದೂ ಪಂಗಡದ ಸತ್ನಾಮಿಗಳು, ಸಿಬ್ಬರು ಮೊದಲಾದವರು ಸ್ವತಂತ್ರರಾಗುವ ಹವಣಿಕೆ ನಡೆಸಿ ಔರಂಗಜೇಬನಿಗೆ ಕಂಟಕಪ್ರಾಯರಾದರು. ಔರಂಗಜೇಬನ ಅಧಿಕಾರಿ ಮತ್ತು ಒಬ್ಬ ಸತ್ನಾಮಿ ನಡುವಿನ ಜಗಳವೇ ಸತ್ನಾಮಿ ಬಂಡಾಯಕ್ಕೆ ಪ್ರಮುಖ ಕಾರಣವಾಗಿತ್ತು. ಈ ಬಂಡಾಯದಲ್ಲಿ ಸತ್ನಾಮಿಗಳು ಪರಾಭವ ಹೊಂದಿ, 200 ಸತ್ನಾಮಿಗಳು ಮರಣಹೊಂದಿದರು, ಉಳಿದವರು ಶರಣಾಗತರಾದರು.

ಔರಂಗಜೇಬನ ಧಾರ್ಮಿಕ ಅಸಹಿಷ್ಣುತೆಯಿಂದಾಗಿ ಕ್ರೋದಗೊಂಡವರಲ್ಲಿ ಸಿಬ್ಬರು ಪ್ರಮುಖರು. ಸಿಖ್ಖರ ಗುರು ತೇಜ್ ಬಹದ್ದೂರನನ್ನು ಕೊಲೆ ಮಾಡಿದ ಔರಂಗಜೇಬ್ ಸಿಖ್ಖರ  ಕೋಪಕ್ಕೆ ಕಾರಣನಾದ. ತೇಜ್‌ ಬಹದ್ದೂರ್ ಇಸ್ಲಾಂಗೆ ಮತಾಂತರವಾಗದೆ ಇದ್ದುದೆ ಅವನ ಕೋಪಕ್ಕೆ ಕಾರಣವಾಗಿತ್ತು. ಮತಾಂತರ ಇಲ್ಲವೆ ಸಾವು ಇವೆರಡರಲ್ಲಿ ಯಾವುದನ್ನಾದರೂ ಆರಿಸಿಕೊಳ್ಳಬಹುದೆಂಬ ಔರಂಗಜೇಬನ ಸಲಹೆ ಮೇರೆಗೆ ತೇಜ್ ಬಹದ್ದೂರ್ ಎರಡನೆಯದನ್ನು ಆರಿಸಿ ಕೊಂಡರೆಂಬುದಾಗಿ ಹೇಳಲಾಗಿದೆ. ಇದರಿಂದ ಕ್ರೋದಗೊಂಡ ಸಿಬ್ಬರು ಔರಂಗಜೇಬನ ವಿರುದ್ಧ ತಿರುಗಿ ಬಿದ್ದರು. ಈ ರೀತಿ ಪ್ರೇರೇಪಿತರಾದ ಸಿಬ್ಬರು ಒಂದು ಒಕ್ಕೂಟವನ್ನೇ ರಚಿಸಿಕೊಂಡು ಮೊಗಲರ ಅಸ್ತಿತ್ವವನ್ನೆ ನಾಶ ಮಾಡುವ ಪಣ ತೊಟ್ಟು ಹೋರಾಡಿದರು.

ತನ್ನ ಮತಾಂಧತೆಯಿಂದ ರಜಪೂತರ ಶತೃತ್ವಕ್ಕೆ ಕಾರಣವಾದ ಔರಂಗಜೇಬನ ಅವಿವೇಕದ ನೀತಿ ಅನೇಕ ಅನಾಹುತಗಳಿಗೆ ಎಡೆಮಾಡಿತು. ರಜಪೂತರ ದ್ವೇಷ ಕಟ್ಟಿಕೊಂಡು ಕೊನೆಗೆ ಅದನ್ನು ವಿರೋಧಿಸಿದ ಔರಂಗಜೇಬನ ಪುತ್ರ ಯುವರಾಜ ಅಕ್ಬರ  ತಂದೆಯ ವಿರುದ್ಧ ರಜಪೂತರ ಕಡೆ ಸೇರಿಕೊಳ್ಳಬೇಕಾಯಿತು.

ಒಟ್ಟಿನಲ್ಲಿ ಔರಂಗಜೇಬ್ ತನ್ನ ಧಾರ್ಮಿಕ ನೀತಿಯ ಮೂಲಕ ಮೊಗಲ್ ಸಾಮ್ರಾಜ್ಯದ ಸಮಾಧಿಯನ್ನು ನಿರ್ಮಾಣಮಾಡಿದ. ಮೊಗಲ್ ಸಾಮ್ರಾಜ್ಯದ ಪತನದಲ್ಲಿ ಈತನ ಧಾರ್ಮಿಕ ನೀತಿ ಪ್ರಮುಖ ಪಾತ್ರವಹಿಸಿತು.

ಔರಂಗಜೇಬನ ದಖ್ಖನ್ ನೀತಿ

ಔರಂಗಜೇಬನ ದಖ್ಖನ್ ನೀತಿಯೂ ಸಹ ಆತನ ಧಾರ್ಮಿಕ ನೀತಿಯಷ್ಟೇ ವಿನಾಶಕಾರಿ ನೀತಿ ಆಗಿದ್ದಿತು. ಇತಿಹಾಸಕಾರರು ಆತನ ದಖ್ಖನ್ ನೀತಿಯನ್ನು ತೀವ್ರವಾಗಿ ಟೀಕಿಸಿದ್ದಾರೆ. ಇವನ ದಖ್ಖನ್ ನೀತಿ ಮತ್ತೊಮ್ಮೆ ಅವನ ಮತ್ತು ಅವನ ಸಾಮ್ರಾಜ್ಯದ ಪತನಕ್ಕೆ ಮುಖ್ಯ ಕಾರಣವಾಯಿತು. ಔರಂಗಜೇಬ್ ತನ್ನ ಆಳ್ವಿಕೆಯ ಮೊದಲ ಅರ್ಧಭಾಗದಲ್ಲಿ ಉತ್ತರಭಾಗವನ್ನು ತನ್ನ ಎಲ್ಲಾ ಚಟುವಟಿಕೆಗಳ ಕೇಂದ್ರವನ್ನಾಗಿ ಮಾಡಿಕೊಂಡಿದ್ದ. ತತ್ಪರಿಣಾಮವಾಗಿ ಆತನಿಗೆ ದಕ್ಷಣ ಭಾರತದ ಅಂದರೆ ದಖ್ಖನ್ನಿನ ಬಗ್ಗೆ ಗಮನಕೊಡಲಾಗಲಿಲ್ಲ. ಈ ಸದವಕಾಶವನ್ನು ಉಪಯೋಗಿಸಿಕೊಂಡು ಶಿವಾಜಿಯು ದಕ್ಷಿಣ ಭಾರತದಲ್ಲಿ ಸ್ವತಂತ್ರ ರಾಜ್ಯವನ್ನು ಸ್ಥಾಪಿಸುವಲ್ಲಿ ಯಶಸ್ವಿಯಾದ. ಆದರೆ ದಖ್ಖನ್ನಿನ ಬಿಜಾಪುರ ಮತ್ತು ಗೋಲ್ಕಂಡ ರಾಜ್ಯಗಳು ಈ ಪರಿಸ್ಥಿತಿಯ ಲಾಭ ಪಡೆಯಲಾಗಲಿಲ್ಲ. ಇದಕ್ಕೆ ಕಾರಣ ಅವುಗಳ ಆಂತರಿಕ ಪರಿಸ್ಥಿತಿ.

ಔರಂಗಜೇಬನು ತನ್ನ ಜೀವಿತದ ಕೊನೆಯ ವರ್ಷಗಳನ್ನು ದಖ್ಖನ್ನಿನಲ್ಲಿ ಕಳೆದನು. ಈ ದೀರ್ಘಾವಧಿಯಲ್ಲಿ ಈತನಿಗೆ ವಿರಾಮ ಮತ್ತು ಮಾನಸಿಕ ಸ್ವಾಸ್ಥ್ಯ ಸಿಗಲಿಲ್ಲ. ಔರಂಗಜೇಬ್ ದಖನ್ನಿಗೆ ಬರುವುದಕ್ಕೆ ಮೂರು ಮುಖ್ಯ ಉದ್ದೇಶಗಳಿದ್ದವು. ಅವುಗಳೆಂದರೆ:-

1.ತನ್ನ ಪುತ್ರ ಅಕ್ಬರನನ್ನು ಬಂಧಿಸಿ ಶಿಸುವುದು.

2.ತನ್ನ ಪುತ್ರ ಅಕ್ಬರನಿಗೆ ಆಶ್ರಯ ಕೊಟ್ಟಿದ್ದ ಮರಾಠರನ್ನು ಹತ್ತಿಕ್ಕುವುದು.

  1. ದಖ್ಖನ್ನಿನ ಶಿಯಾ ರಾಜ್ಯಗಳಾದ ಬಿಜಾಪುರ ಮತ್ತು ಗೋಲ್ಕಂಡಗಳ ಅಸ್ಥಿತ್ವ ಅಂತ್ಯಗೊಳಿಸುವುದು.

ಈ ಗುರಿಸಾಧನೆಯಲ್ಲಿ ಔರಂಗಜೇಬನಿಗೆ ದೊರೆತಿದ್ದು ಮಿಶ್ರ ಯಶಸ್ಸು, ಆತ ಅಕ್ಬರನ್ನು ಹಿಡಿದು ಶಿಕ್ಷಿಸಲಾಗಲಿಲ್ಲ. ಅಕ್ಬರ  ತಪ್ಪಿಸಿಕೊಂಡು ಪರ್ಶಿಯಾಕ್ಕೆ ಓಡಿಹೋದ. ತತ್ಪರಿಣಾಮವಾಗಿ ಔರಂಗಜೇಬನ ಸಿಟ್ಟು ಆತನಿಗೆ ಆಶ್ರಯ ನೀಡಿದ್ದ ಸಂಬಾಜಿಯ ವಿರುದ್ಧ ತಿರುಗಿತು. ಸಂಬಾಜಿಯನ್ನು ಹಿಡಿದು ಕೊಲೆ ಮಾಡುವುದರಲ್ಲಿ ಯಶಸ್ವಿಯಾದ, ಆದರೆ ಮರಾಠರನ್ನು ಸಂಪೂರ್ಣವಾಗಿ ಸದೆಬಡಿಯಲಾಗಲಿಲ್ಲ. ಶಿಯಾ ರಾಜ್ಯಗಳಾದ ಬಿಜಾಪುರ ಮತ್ತು ಗೋಲ್ಕಂಡಗಳನ್ನು ಜಯಿಸುವಲ್ಲಿ ಆತ ಯಶಸ್ಸು ಕಂಡಿದ್ದ. ಆದರೆ ಈ ಎಲ್ಲಾ ಕಾರ್ಯಕ್ಕೆ ಆತನಿಗೆ 25 ವರ್ಷ ಬೇಕಾಯಿತು. ಆದರೆ ಈ ಸಾಧನೆ ಅಂತಿಮವಾಗಿ ಶೂನ್ಯವಾಗಿ ಮಾರ್ಪಟ್ಟಿತು. ಈತನ ಸಾಮ್ರಾಜ್ಯ ಅವ್ಯವಸ್ಥೆಯ ಅಂಧಕಾರದಲ್ಲಿ ಮುಳುಗಿತು. ವೃದ್ಧ ಸಾಮ್ರಾಟನು ತನಗರಿವಿಲ್ಲದೆ ತನ್ನ ದಖ್ಖನ್ ನೀತಿಯ ಮುಖಾಂತರ ತನ್ನ ಮತ್ತು ತನ್ನ ಸಾಮ್ರಾಜ್ಯದ ಸಮಾಧಿ ತೋಡಿದ.

ಮನ್ಸಬ್ದಾರಿ ಪದ್ಧತಿ

ಮೊಗಲ್ ಸೈನ್ಯದ ಸಂಘಟನೆಯಲ್ಲಿನ ದೋಷಗಳನ್ನು ನಿವಾರಿಸಲು ಅಕ್ಷರನು ಹಲವು ಕ್ರಮಗಳನ್ನು ಕೈಗೊಂಡನು. ಅದೇ ಮನ್ಸಬ್ದಾರಿ ಪದ್ಧತಿ. ಮನ್ಸಬ್ ಎಂಬ ಶಬ್ದ ಆರೇಬಿಕ್ ಮೂಲವನ್ನು ಹೊಂದಿದ್ದು, ಇದರ ಅರ್ಥ ದರ್ಜೆ, ವರ್ಗ ಅಥವಾ ಪದವಿ ಎಂದಾಗುತ್ತದೆ. ಮನ್ಸಬ್ದಾರ್‌ ಎಂದರೆ ಸಾಮ್ರಾಜ್ಯದ ಸೇವೆಯಲ್ಲಿರುವ ಅಧಿಕಾರಿ. ಅಕ್ಬರನ ಕಾಲದಲ್ಲಿ ರೂಪುಗೊಂಡ ಈ ವ್ಯವಸ್ಥೆಯಲ್ಲಿ ಸೈನಿಕ ಮತ್ತು ನಾಗರೀಕ ಅಧಿಕಾರಿಗಳಲ್ಲಿ ಯಾವುದೇ ವ್ಯತ್ಯಾಸ ಮತ್ತು ಪ್ರತ್ಯೇಕತೆ ಇರಲಿಲ್ಲ. ಅಧಿಕಾರಿಗೂ ಆತನದೇ ಆದ ದರ್ಜೆಯಿದ್ದು ಆತನನ್ನು ಆ ದರ್ಜೆಯ ಮನ್ಸಬ್ದಾರನೆಂದು ಕರೆಯಲಾಗುತ್ತಿತ್ತು.

ವಿ.ಎ. ಸ್ಮಿತ್‌ರವರ ಪ್ರಕಾರ ಅಕ್ಬರ  ಇದರ ನಿರ್ಮಾಪಕನಲ್ಲ. ಇದು ಬಾಬರ್ ಮತ್ತು ಹುಮಾಯೂನರ ಕಾಲದಲ್ಲಿಯೇ ಜಾರಿಯಲ್ಲಿತ್ತು. ಇದು ಪರ್ಶಿಯಾದಿಂದ ಬಂದ ವ್ಯವಸ್ತೆಯಾಗಿತ್ತು. ಆದರೆ ಡಾ|| ಈಶ್ವರೀಪ್ರಸಾದ್‌ ಮತ್ತು ಆ‌ರ್.ಎಸ್. ಕರ್ಮ ಪ್ರಕಾರ ಈ ವ್ಯವಸ್ಥೆಯ ನಿಜವಾದ ನಿರ್ಮಾಪಕ ಅಕ್ಬರ , ಇದುನ್ನು ವ್ಯವಸ್ಥಿತವಾಗಿ ಜಾರಿಗೆ ತಂದ ಕೀರ್ತಿ ಅಕ್ಷನನಿಗೆ ಸಲ್ಲಬೇಕೆಂಬುದು ಇದರ ವಾದ.

ಮನ್ಸಬ್‌ದಾರರಲ್ಲಿ ಅನೇಕ ಶ್ರೇಣಿಗಳಿದ್ದವು. ಅಬುಲ್ ಫಜಲ್ ಪ್ರಕಾರ. 33 ದರ್ಜೆ ಅಥವಾ ವರ್ಗಗಳಿದ್ದವು. ಈ ದರ್ಜೆ 10 ರಿಂದ ಪ್ರಾರಂಭವಾಗಿ 10,000 ದವರೆಗೆ ಇದ್ದಿತು. ಈತನ ಆಳ್ವಿಕೆಯ ಕೊನೆಯಲ್ಲಿ ಈ ಸಂಖ್ಯೆಯನ್ನು 12,000 ಕ್ಕೆ ಏರಿಸಲಾಯಿತು.

ಅಕ್ಬರ್‌ ಇದನ್ನು ಜಾರಿಗೆ ತಂದ ಪ್ರಾರಂಭದಲ್ಲಿ 10 ರಿಂದ 10,000 ದವರೆಗೆ ಒಟ್ಟು 3 ದರ್ಜೆಗಳ ಮನ್ನಬ್ಬಾರರಿದ್ದರು. ಇಲ್ಲಿ ಸಂಖ್ಯೆಯು ಪ್ರತಿಯೊಬ್ಬ ಮನ್ನಬ್ಬಾರನು ಸಾಮ್ರಾಜ್ಯದ ಸೇನೆಗೆ ಸಲ್ಲಿಸಬೇಕಾಗಿದ್ದ ಶಸ್ತ್ರಾಸ್ತ್ರ, ಕುದುರೆ ಸವಾರರ ಸಂಖ್ಯೆಯನ್ನು ಸೂಚಿಸುತ್ತಿತ್ತು. ಮತ್ತು ಪ್ರತಿಯೊಬ್ಬ ಅಧಿಕಾರಿಯ ದರ್ಜೆ ಹಾಗೂ ವೇತನ ಇವುಗಳನ್ನು ನಿರ್ದೇಶಿಸುತ್ತಿತ್ತು. ಸಾಮಾನ್ಯವಾಗಿ ಮನ್ಸಾಬ್ದಾರರು ತಮ್ಮ ದರ್ಜೆಯ ಸಂಖ್ಯೆಯಷ್ಟೇ ಕುದುರೆ ಸವಾರರನ್ನು ಇಟ್ಟುಕೊಳ್ಳಬೇಕೆಂಬ ನಿಯಮವಿರಲಿಲ್ಲ.

ಪ್ರತಿಯೊಬ್ಬ ಮನ್ಸಾಬ್ದಾರನಿಗೆ ಇಂತಹುದೇ ಕೆಲಸ ಅಥವಾ ಹಯದ್ದೆ ಕೊಡಬೇಕೆಂಬ ನಿಯಮವಿರಲಿಲ್ಲ. ಚಕ್ರವರ್ತಿಯು ಕಾಲಕಾಲಕ್ಕೆ ಸೂಚಿಸಿದ ಕೆಲಸಗಳನ್ನು ಅವರು ಮಾಡುತ್ತಿದ್ದರು. ಮನ್ಸಬ್ದಾರರನ್ನು ನೇಮಕಮಾಡಲು, ಬಡ್ತಿ ನೀಡಲು ಮತ್ತು ತೆಗೆದುಹಾಕಲು ಯಾವ ನಿಯಮಾವಳಿಗಳೂ ಇರಲಿಲ್ಲ. ಇವರ ನೇಮಕಾತಿ ಮತ್ತು ಬಡ್ತಿ ಅರಸರ ತೀರ್ಮಾನವನ್ನು ಅವಲಂಬಿಸಿತ್ತು. ಮನ್ನಬ್ಬಾರರಿಗೆ ನಿರ್ಧಿಷ್ಟ ವೇತನ ಶ್ರೇಣಿಗಳಿದ್ದವು. ಇದನ್ನು ನಗದು ಹಣ ಇಲ್ಲವೆ ಜಹಾಗೀರಿನ ಮುಖಾಂತರ ನೀಡಲಾಗುತ್ತಿತ್ತು. ಅಕ್ಬರನ ಕಾಲದಲ್ಲಿ ನಗದು ವೇತನ ಕೊಡಲಾಗುತ್ತಿತ್ತು. ಸ್ಮಿತ್, ಇರ್ವಿನ್ ಇತ್ಯಾದಿ ಆಂಗ್ಲ ಚರಿತ್ರೆಕಾರರು ಮನ್ಸಬ್ಬಾರರಿಗೆ ವರ್ಷವಿಡೀ ಸಂಬಳ ನೀಡುತ್ತಿರಲಿಲ್ಲವೆಂದು ಹೇಳಿದ್ದಾರೆ. ಆದರೆ ಇದಕ್ಕೆ ಯಾವುದೇ ಆಧಾರಗಳಿಲ್ಲ.

ಮನ್ಸಬ್ದಾರರಿಗೆ ಅಧಿಕ ಸಂಬಳ ದೊರೆಯುತ್ತಿತ್ತು. ಅವರ ವೆಚ್ಚವೆಲ್ಲ ಕಳೆದ ನಂತರವೂ ಅವರಲ್ಲಿ ಹೆಚ್ಚು ಹಣ ಉಳಿಯುತ್ತಿತ್ತು. ಅವರು ಅತ್ಯಂತ ಶ್ರೀಮಂತ ಜೀವನ ನಡೆಸುತ್ತಿದ್ದರು. ಆದರೆ ಮನ್ಸಬ್ದಾರಿ ದರ್ಜೆ ವಂಶಪಾರಂಪರ್ಯ ವಾಗಿರಲಿಲ್ಲ. ಅವರ ಮರಣದ ನಂತರವೇ ಅವರ ಸಂಪತ್ತು, ಭೂಮಿ ಇತ್ಯಾದಿಗಳು ಸಾಮ್ರಾಜ್ಯಕ್ಕೆ ಸೇರುತ್ತಿದ್ದವು.

ಮನ್ಸಬ್ದಾರಿ ದರ್ಜೆಗಳಲ್ಲಿ ಎರಡು ವರ್ಗಗಳಿದ್ದವು. ಅವುಗಳೆಂದರೆ ʻಜಾಟ್’ ಮತ್ತು ‘ಸವಾರ್’. ಇವುಗಳ ನಿಜವಾದ ಸ್ವರೂಪದ ಬಗ್ಗೆ ಚರಿತ್ರಕಾರರಲ್ಲಿ ಭಿನ್ನಾಭಿಪ್ರಾಯಗಳಿವೆ. ಡಾ|| ಎ.ಎಲ್. ಶ್ರೀವಾತ್ಸವರ ಅಭಿಪ್ರಾಯದಂತೆ ಅಕ್ಬರ  ಈ ಪದ್ಧತಿ ಜಾರಿಗೆ ತಂದಾಗ ಮನ್ನಬ್ದಾರನ ದರ್ಜೆ ಮತ್ತು ಅವನು ಇಡಬೇಕಾದ ಸೈನಿಕರು, ಕುದುರೆ, ಆನೆ ಇತ್ಯಾದಿ ಸಂಖ್ಯೆಗಳಲ್ಲಿ ಯಾವುದೇ ವ್ಯತ್ಯಾಸ ಇರಲಿಲ್ಲ. ಆದರೆ ಮನ್ನಬ್ಬಾರರು ಈ ಸಂಖ್ಯೆಯನ್ನು ಪಾಲಿಸದೆ ಹೋದಾಗ ಅದರಲ್ಲಿ ರಿಯಾಯಿತಿ ನೀಡಿದನು. ಅವರಿಗಾಗಿಯೇ ಜಾಟ್ ಮತ್ತು ಸವಾರ್ ಎಂಬ ಪ್ರತ್ಯೇಕ ವರ್ಗ ನಿರ್ಮಿಸಿದನು. ಇದರಂತೆ ಜಾಟ್ ದರ್ಜೆಯ ಮನ್ನಬ್ದಾರರು ಅವರ ಸಂಖ್ಯೆಯ ಕುದುರೆ, ಆನೆ ಮತ್ತು ಸಾಗಣೆಯ ಪ್ರಾಣಿಗಳನ್ನು ಹೊಂದಬೇಕಾಗಿದ್ದಿತೇ ಏನು ಕುದುರೆ ಸವಾರರನ್ನಲ್ಲ. ಅಂತೆಯೇ ಸವಾರ್ ದರ್ಜೆಯ ಮನ್ನಬ್ದಾರರು ತಮ್ಮ ನಿಗದಿತ ಸಂಖ್ಯೆ ಕುದುರೆ ಸವಾರರನ್ನು ಮಾತ್ರ ಇಟ್ಟುಕೊಳ್ಳಬೇಕಾಯಿತು. ಅಕ್ಷರನ ಉತ್ತರಾಧಿಕಾರಿಗಳ ಕಾಲದಲ್ಲಿ ಈ ಕಾನೂನು ಸಡಿಲಗೊಂಡಿತು. ಔರಂಗಜೇಬನ ತರುವಾಯ ಮನ್ಸಬ್ದಾರಿ ಹುದ್ದೆಗಳು ಕೇವಲ ಗೌರವದ ಸಂಕೇತವಾದವು.

ದೋಷಗಳು :

  1. ಮನ್ಸಬ್ದಾರಿ ಪದ್ಧತಿಯಲ್ಲಿ ಭ್ರಷ್ಟಾಚಾರ ಹೆಚ್ಚಾಗಿತ್ತು. ಸೈನಿಕರನ್ನು ಒಟ್ಟಾಗಿ ತೋರಿಸುವ ಮತ್ತು ಮುದ್ರೆ ಹಾಕುವ ವ್ಯವಸ್ಥೆ ಇದ್ದರೂ ಬಹಳಷ್ಟು ಮನ್ಸಬ್ದಾರರು ತಮ್ಮ ನಿಗದಿತ ಸಂಖ್ಯೆಯ ಸವಾರರನ್ನು ಇಟ್ಟುಕೊಂಡಿರಲಿಲ್ಲ.
  2. ಸೈನಿಕರನ್ನು ನೇಮಿಸಿಕೊಳ್ಳುವವರು ಹಾಗೂ ಸಂಬಳವನ್ನು ಕೊಡುವವರು ಮನ್ಸಬ್ದಾರರೇ. ಆದ್ದರಿಂದ ಸೈನಿಕರ ನಿಷ್ಠೆ ಅವರಿಗಿತ್ತೇ ಹೊರತು ಚಕ್ರವರ್ತಿಗಿರಲಿಲ್ಲ. ಸೈನಿಕರು ಮತ್ತು ಚಕ್ರವರ್ತಿಯ ನಡುವಿನ ಈ ಕಂದರವು ಮುಂದೆ ಮೊಗಲರ ಸರ್ಕಾರಕ್ಕೆ ಅಪಾಯವನ್ನುಂಟುಮಾಡಿತು.
  3. ಮನ್ಸಬ್ದಾರರು ತಮ್ಮ ವೈಯಕ್ತಿಕ ಲಾಭ ಮತ್ತು ಹಿತಾಸಕ್ತಿಗಳಲ್ಲಿ ಮಗ್ನರಾಗಿ ಸಾಮ್ರಾಜ್ಯದ ಹಿತಾಸಕ್ತಿಯನ್ನು ಕಡೆಗಣಿಸಿದರು.
  4. ಮನ್ಸಬ್ದಾರರನ್ನು ಸೈನಿಕ ಸೇವೆಗೆ ಮಾತ್ರವೇ ಅಲ್ಲದೇ ನಾಗರಿಕ ಸೇವೆಗೂ ನೇಮಕ ಮಾಡುತ್ತಿದ್ದುದು ಇದರ ಇನ್ನೊಂದು ದೋಷವಾಗಿತ್ತು.
  5. ಮನ್ಸಬ್ದಾರರು ತಮ್ಮ ವೇತನ ಮತ್ತು ಸೌಲತ್ತುಗಳಿಂದ ಸಂತೃಪ್ತರಾಗಿದ್ದು, ಸೈನಿಕರ ಶಿಕ್ಷಣಕ್ಕಾಗಲಿ ಇಲ್ಲವೆ ಯುದ್ಧಕಲೆಯಲ್ಲಿ ಹೊಸ ಆವಿಷ್ಕಾರಕ್ಕಾಗಲೀ ಗಮನ ಹರಿಸಲಿಲ್ಲ.

ಉಪಸಂಹಾರ

ಔರಂಗಜೇಬನ ಧಾರ್ಮಿಕ ಮತ್ತು ದಖ್ಖನ್ ನೀತಿಗಳು ಮೊಗಲ್ ಸಾಮ್ರಾಜ್ಯದ ಸ್ಥಿರತೆಯನ್ನು ಕುಂದಿಸಿದವು. ಧಾರ್ಮಿಕ ಅಸಹಿಷ್ಣುತೆ ಮತ್ತು ನಿರಂತರ ಯುದ್ಧಗಳು ಸಾಮ್ರಾಜ್ಯದ ಆರ್ಥಿಕ ಮತ್ತು ರಾಜಕೀಯ ಶಕ್ತಿಯನ್ನು ದುರ್ಬಲಗೊಳಿಸಿದವು. ಇದರ ಪರಿಣಾಮವಾಗಿ ಹಲವು ಪ್ರಾಂತ್ಯಗಳಲ್ಲಿ ಬಂಡಾಯಗಳು ಉಂಟಾಗಿ ಸಾಮ್ರಾಜ್ಯದ ಪತನಕ್ಕೆ ದಾರಿ ಮಾಡಿಕೊಟ್ಟವು. ಆದ್ದರಿಂದ ಔರಂಗಜೇಬನ ಆಡಳಿತವು ಮೊಗಲ್ ಇತಿಹಾಸದಲ್ಲಿ ಮಹತ್ವದ ತಿರುವಾಗಿ ಪರಿಗಣಿಸಲಾಗಿದೆ.

ಷಹಜಹಾನ್ – ಕಲೆ ಮತ್ತು ವಾಸ್ತುಶಿಲ್ಪ : (ಕ್ರಿಶ. 1627-1658)

ಷಹಜಹಾನ್ – ಕಲೆ ಮತ್ತು ವಾಸ್ತುಶಿಲ್ಪ : (ಕ್ರಿಶ. 1627-1658)

ಮಧ್ಯಕಾಲೀನ ಭಾರತದ ಇತಿಹಾಸದಲ್ಲಿ ಷಹಜಹಾನನ ಆಳ್ವಿಕೆಯ ಕಾಲವನ್ನು ಮೊಗಲರ ಕಾಲದ ಸುವರ್ಣಯುಗವೆಂದು ಬಣ್ಣಿಸಲಾಗಿದೆ. ಈತನ ಕಾಲದಲ್ಲಿ ಮೊಗಲ್ ಸಾಮ್ರಾಜ್ಯ ಔನ್ನತ್ಯದ ಶಿಖರವನ್ನು ತಲುಪಿದ್ದಿತು. ವಿಶಾಲವಾದ ಮೊಗಲ್ ಸಾಮ್ರಾಜ್ಯದಲ್ಲಿ ಶಾಂತಿ, ಸುವ್ಯಮೃತ ಜನಜೀವನ ಮತ್ತು ಪ್ರಗತಿಗಳು ಉಂಟಾಗಿದ್ದವು. ಈತನ ಕಾಲದಲ್ಲಿ ಕ್ಷಾಮ ತಲೆದೋರಿದರೂ ಅದರ ಹತೋಟಿಗೆ ಷಹಜಹಾನನು ಕೈಗೊಂಡ ಮಾನವೀಯ ವ್ಯವಸ್ಥೆ ಶ್ಲಾಘನೀಯವಾಗಿತ್ತು. ಒಟ್ಟಿನಲ್ಲಿ ಷಹಜಹಾನನ ಆಳ್ವಿಕೆಯ ಕಾಲದಲ್ಲಿ ಸುಖ, ಶಾಂತಿ, ಸುವ್ಯವಸ್ಥೆ ನೆಲೆಸಿದ್ದರಿಂದ ಕಲೆ ಮತ್ತು ಸಾಹಿತ್ಯ ಕ್ಷೇತ್ರಗಳಲ್ಲಿ ಅಪಾರ ಪ್ರಗತಿ ಸಾಧಿಸಲ್ಪಟ್ಟಿತು, ಎಂಬುದಾಗಿ ಕೆಲವು ಚರಿತ್ರೆಕಾರರು ಅಭಿಪ್ರಾಯಪಟ್ಟಿದ್ದಾರೆ.

ಷಹಜಹಾನನ ಕಾಲ ಮೊಗಲರ ಸುವರ್ಣ ಯುಗವೇ? ಅಲ್ಲವೆ? ಎಂಬ ಬಗ್ಗೆ ಇತಿಹಾಸಕಾರರಲ್ಲಿ ಜಿಜ್ಞಾಸೆ ಮತ್ತು ವಾದ ವಿವಾದಗಳಿವೆ. ಸಾಮಾನ್ಯವಾಗಿ ಷಹಜಹಾನನ ಕಾಲವನ್ನು ಮೊಗಲರ ಸುವರ್ಣಯುಗವೆಂತಲೂ, ವೈಭವದ ಕಾಲವೆಂದೂ ಬಣ್ಣಿಸಲಾಗಿದೆ. ಆದರೆ ಕೆಲವು ಇತಿಹಾಸಕಾರರು ಇದರ ಬಗ್ಗೆ ತಮ್ಮ ವಿಮರ್ಶಾತ್ಮಕ ದೃಷ್ಟಿ ಬೀರಿ ಸಹಜಹಾನನ ಕಾಲ ಮೊಗಲ್ ಸಾಮ್ರಾಜ್ಯದ ಅವನತಿ ಮತ್ತು ಅವಸಾನದ ಆರಂಭ ಕಾಲವೆಂದು ಪರಿಗಣಿಸಿದ್ದಾರೆ. ಆದ್ದರಿಂದ ಇದರ ಬಗ್ಗೆ ಸಾಕಷ್ಟು ವಾದ ವಿವಾದಗಳಿವೆ.

ಐರೋಪ್ಯ ಬರಹಗಾರರು ಷಹಜಹಾನನ ಅಳ್ವಿಕೆಯನ್ನು ಟೀಕಿಸಿದ್ದಾರೆ. ಈತನ ಆಳ್ವಿಕೆ ಮೇಲು ನೋಟಕ್ಕೆ ವೈಭವಯುತವಾಗಿ ಕಂಡರೂ ಅದು ನಿಜವಾಗಿ ಹಾಗಿರಲಿಲ್ಲ ಎಂಬುದು ಇವರ ಅಭಿಪ್ರಾಯ. ಇದನ್ನು 14ನೇ ಲೂಯಿಯ ಕಾಲದ ಫ್ರಾನ್ಸಿಗೆ ಹೋಲಿಸಬಹುದು. 14ನೇ ಲೂಯಿಯಂತೆ ಷಹಜಹಾನ್ ವೈಭವವನ್ನು ಹೊರನೋಟಕ್ಕೆ ಪ್ರದರ್ಶಿಸಿದ್ದರೂ ಆಂತರಿಕವಾಗಿ ಹಲವಾರು ಆತೃಪ್ತಿ, ಅಸಮಾಧಾನ, ಕೊರತೆ, ಹಸಿವು, ಬಡತನ ಜನರನ್ನು ಕಾಡುತ್ತಿದ್ದವು.

ಈತನ ಆಳ್ವಿಕೆ ಕಣ್ಣು ಕೋರೈಸುವಂತಹ ವೈಭವ ಮತ್ತು ಆಡಂಬರಗಳಿಂದ ಕೂಡಿದ್ದಿತು. ಅವನ ವಾಸ್ತುಶಿಲ್ಪ ಕೃತಿಗಳು ಮತ್ತು ಮಯೂರ ಸಿಂಹಾಸನ ಅವನ ಕಾಲದ ವೈಭವಕ್ಕೆ ಸಾಕ್ಷಿಯಾಗಿದ್ದವು. ಆದರೆ ಷಹಜಹಾನ್ ಇದಕ್ಕೆ ವೆಚ್ಚ ಮಾಡಿದುದು ಅಪಾರ ಹಣ. ಆದರೆ ಇದು ಯಾರ ಹಣ? ಎಲ್ಲಿಂದ ಬಂದಿತ್ತು? ಎಷ್ಟು ಜನರ ಕಣ್ಣೀರಿನ ಮತ್ತು ಬೆವರಿನ ಹಣ ಎಂಬುದು ಮುಖ್ಯ ಪ್ರಶ್ನೆ, ಹೌದು, ಆತನ ಕಾಲದ ವೈಭವದಿಂದ ವಿದೇಶಿಗರು ಮೂಕವಿಸ್ಮಿತರಾಗಿದ್ದರು. ಇವೆಲ್ಲ ನೋಡಿ ಅವರು ಸಾಮ್ರಾಜ್ಯದಲ್ಲಿ ಶಾಂತಿ, ಸಮೃದ್ಧಿ ನೆಲೆಸಿದ್ದಿತೆಂದೇ ಭಾವಿಸಿದ್ದರು. ಆದರೆ ಇದು ಕೇವಲ ಭ್ರಮೆಯಾಗಿತ್ತು. ನೈಜ ಸ್ಥಿತಿ ಇದಕ್ಕೆ ತದ್ವಿರುದ್ಧವಾಗಿತ್ತು.

ಎಡ್ವರ್ಡ್ ಮತ್ತು ಗಾರೆಕ್ಟರ ಪ್ರಕಾರ “ಷಹಜಹಾನನ ಆಳ್ವಿಕೆ ಮೊಗಲ್ ಸಾಮ್ರಾಜ್ಯದ ಮತ್ತು ಅದರ ಆರ್ಥಿಕ ವ್ಯವಸ್ಥೆಯ ಅವಸಾನದ ನಾಂದಿಯಾಗಿದ್ದಿತು”, ವಿ.ಎ. ಸ್ಮಿತ್ ಪ್ರಕಾರ “ಷಹಜಹಾನನ ಕಾಲದ ಆಡಂಬರ, ವೈಭವ ಮತ್ತು ವಿಲಾಸಗಳಿಂದ ಇತಿಹಾಸಕಾರರು ದಾರಿತಪ್ಪಿದ್ದಾರೆ, ಪಹಜಹಾನ್ ಸಮರ್ಥ ದಂಡನಾಯಕ ಮತ್ತು ಸೇನಾ ವ್ಯವಸ್ಥಾಪಕನಲ್ಲ. ರಾಜ್ಯದ ಆಡಳಿತದಲ್ಲಿ ಅವನು ಕ್ರೂರಿ ಮತ್ತು ಯಾವುದಕ್ಕೂ ಹೇಸದವ”.

ಡಾ।। ಜಾದೂನಾಥ ಸರ್ಕಾರ್ ಪ್ರಕಾರ “ಷಹಜಹಾನನ ಕಾಲದಲ್ಲಿ ಮೊಗಲ್ ಸಾಮ್ರಾಜ್ಯದ ಅವನತಿಯ ಬೀಜ ಬಿತ್ತಲ್ಪಟ್ಟವು”.

ಈ ಮೇಲ್ಕಂಡ ಅಭಿಪ್ರಾಯಗಳಿಂದ ಕೆಲವು ಇತಿಹಾಸಕಾರರು ಷಹಜಹಾನನ ಕಾಲವನ್ನು ಸುವರ್ಣಯುಗವೆಂದು ಒಪ್ಪಿಕೊಂಡಿಲ್ಲ ಎಂಬುದು ನಿಖರವಾಗಿ ತಿಳಿಯುತ್ತದೆ. ಆದರೆ ಷಹಜಹಾನನ ಕಾಲವನ್ನು ಸುವರ್ಣಯುಗವೆಂದು ಬಣ್ಣಿಸುವವರೂ ಇದ್ದಾರೆ. ಆ ಅಭಿಪ್ರಾಯವನ್ನು ಮಂಡಿಸುವಲ್ಲಿ ಪ್ರೊ. ಎಸ್.ಆರ್. ಕರ್ಮ ಪ್ರಮುಖರು, ಚರ್ಮರವರು ತಮ್ಮ ʻʻಭಾರತದಲ್ಲಿ ಮೊಗಲ್ ಸಾಮ್ರಾಜ್ಯ” ಎಂಬ ಗ್ರಂಥದಲ್ಲಿ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಹಲವಾರು ವಂಗಗಳು, ಯುದ್ಧಗಳು ಇದ್ದರೂ ಷಹಜಹಾನನ ಕಾಲವು ಸಾಕಷ್ಟು ಸಂಪದ್ಭರಿತತೆ ಮತ್ತು ವೈಭವದಿಂದ ಕೂಡಿತ್ತು ಎಂಬುದು ಅವರ ವಾದ. ಔರಂಗಜೇಬನ ಕಾಲದ ದುರಂತಕ್ಕೆ ಮತ್ತು ಮೊಗಲ್ ಸಾಮ್ರಾಜ್ಯದ ಆರ್ಥಿಕ ದಿವಾಳಿತನಕ್ಕೆ ಈತನನ್ನು ಹೊಣೆ ಮಾಡಿ ಫಲವಿಲ್ಲ ಎಂಬುದು ಇವರ ನಂಬಿಕೆ. ಇವರು ವಿ.ಎ. ಸ್ಮಿತ್‌ರ ವಾದವನ್ನು ವಿರೋಧಿಸಿ, ಅದು ಕೇವಲ ಕಾಲ್ಪನಿಕ ಎಂದು ತೆಗಳಿದ್ದಾರೆ.

ರಾಯ್ ಭಾರ್ಮಲ್ ಮತ್ತು ಕಾಫೀಖಾನ್‌ರೆಂಬ ಸಮಕಾಲೀನ ಇತಿಹಾಸಕಾರರು ಷಹಜಹಾನನ ಕಾಲವನ್ನು ಶಾಂತಿ ಮತ್ತು ಸಮೃದ್ಧಿಯ ಕಾಲವೆಂದು ವರ್ಣಿಸಿದ್ದಾರೆ.

ಎಲ್ಲಿನ್ ಸ್ಟೋನ್‌ರ ಪ್ರಕಾರ, ʻʻಷಹಜಹಾನನ ಕಾಲವು ಭಾರತದ ಇತಿಹಾಸದಲ್ಲಿ ಸಂಪದ್ಭರಿತ ಕಾಲವಾಗಿದ್ದಿತು”. ಈ ಮೇಲ್ಕಂಡಂತೆ ವಾದ ವಿವಾದಗಳಿದ್ದಾಗ್ಯೂ ಷಹಜಹಾನ್ ಯಶಸ್ವಿ ರಾಜನಾಗಿದ್ದ, ಆಡಳಿತ ದಕ್ಷತೆಯನ್ನು ಹೊಂದಿದ್ದ. ಮೊಗಲ್ ಸಾಮ್ರಾಜ್ಯ ಇವನ ಕಾಲದಲ್ಲಿ ಅತ್ಯುನ್ನತಿ ಮುಟ್ಟಿದ್ದಿತು ಎಂಬುದನ್ನು ತಳ್ಳಿಹಾಕುವಂತಿಲ್ಲ. ಅದೇ ರೀತಿ ಆತನ ತಪ್ಪುಗಳನ್ನು ನ್ಯೂನತೆಗಳನ್ನು ಒಪ್ಪಿಕೊಳ್ಳುವಂತಿಲ್ಲ.

ಕಲೆ ಮತ್ತು ವಾಸ್ತು ಶಿಲ್ಪ

ಷಹಜಹಾನನ ಕಾಲ ಕಲೆ ಮತ್ತು ವಾಸ್ತುಶಿಲ್ಪ ದೃಷ್ಟಿಯಿಂದ ವೈಭವದ ಕಾಲ, ಕಟ್ಟಡಗಳ ನಿರ್ಮಾಣದಲ್ಲಿ ಉಳಿದ ಮೊಗಲ್ ದೊರೆಗಳನ್ನು ಮೀರಿಸಿದ ಪಹಜಹಾನ್ ನನ್ನು “ಸೌಧಗಳ ನಿರ್ಮಾಪಕರ ರಾಜ” ಎಂದು ಕರೆದದ್ದು ಸತ್ಯವಾಗಿದೆ. ಪರ್ಶಿಯನ್ ಕವಿ ಶೇಖ್ ಸೌದಿಯಂತೆ, “ದೇವಾಲಯಗಳು, ಸೇತುವೆಗಳು, ಕೆರೆಕಟ್ಟೆಗಳು ಮತ್ತು ಕಾಲುವೆಗಳಂತಹ ಸ್ಮಾರಕಗಳನ್ನು ಬಿಟ್ಟು ಹೋಗುವ ವ್ಯಕ್ತಿ ಎಂದಿಗೂ ಸಾಯುವುದಿಲ್ಲ”. ಈ ಹೇಳಿಕೆ ಷಹಜಹಾನನಿಗೆ ಸಂಪೂರ್ಣವಾಗಿ ಒಪ್ಪುತ್ತದೆ. ಈತನ ಸಾಮ್ರಾಜ್ಯ, ಸೈನಿಕರು, ಆಡಳಿತ ಸಾಧನೆಗಳನ್ನು ಯಾರೂ ಇಂದು ಸ್ಮರಿಸುವುದಿಲ್ಲ. ಆದರೆ ಆತ ಬಿಟ್ಟು ಹೋಗಿರುವ ಕಲೆ ಮತ್ತು ವಾಸ್ತುಶಿಲ್ಪ ಕೃತಿಗಳಲ್ಲಿ ಅವನ ಹೆಸರು ಶಾಶ್ವತವಾಗಿದೆ. ಈತನ ಕಾಲ ನಿಜವಾಗಿ ಮೊಗಲ್ ವಾಸ್ತುಶಿಲ್ಪದ ಸುವರ್ಣಯುಗ. ಇವನೊಬ್ಬ ಮಹಾ ನಿರ್ಮಾಣಕಾರ. ಅವನನ್ನು “ನಿರ್ಮಾಣಕಾರರ ರಾಜ” ನೆಂದೇ ಕರೆಯಲಾಗಿದೆ. ಈತ ಆಗ್ರಾ, ದೆಹಲಿ, ಲಾಹೋರ್, ಕಾಶ್ಮೀರ, ಕಾಬೂಲ್, ಕಾಂದಹಾರ್, ಅಜೀರ್, ಅಹಮದಾಬಾದ್ ಮುಂತಾದೆಡೆಗಳಲ್ಲಿ ಹಲವು ಸುಂದರವಾದ ಆರಮನೆ, ಕೋಟೆ, ಮಸೀದಿ, ಗೋರಿ ಇತ್ಯಾದಿ ಕಟ್ಟಡಗಳನ್ನು ಬಿಟ್ಟು ಹೋಗಿದ್ದಾನೆ. ಈತನ ಕಾಲದಲ್ಲಿ ಮೊಗಲ್ ವಾಸ್ತುಶಿಲ್ಪ ತನ್ನ ಅತ್ಯುನ್ನತಿ ಮುಟ್ಟಿತ್ತು. ಅಮೃತಶಿಲೆಯಲ್ಲಿ ಉತ್ಕೃಷ್ಟ ಸೌಧಗಳನ್ನು ನಿರ್ಮಿಸಿದ “ಷಹಜಹಾನನು ಮೊಗಲರ ಅಗಸ್ಟಸ್” ಎಂದು ಕಲಾವಿಮರ್ಶಕರು ಬಣ್ಣಿಸಿದ್ದಾರೆ.

1. ಕೆಂಪುಕೋಟೆ : ಷಹಜಹಾನನು ಹಲವು ಮೊಗಲ್ ಪಟ್ಟಣಗಳಲ್ಲಿ ಕಟ್ಟಡಗಳನ್ನು ನಿರ್ಮಿಸಿದ್ದರೂ, ದೆಹಲಿ ಮತ್ತು ಆಗ್ರಾಗಳು ಈತನ ಕಾಲದ ಕಲಾವೈಭವವನ್ನು ಪ್ರದರ್ಶಿಸುವಲ್ಲಿ ಪ್ರಾಮುಖ್ಯತೆ ಪಡೆದಿವೆ. ಹಹಜಹಾನ್ ದೆಹಲಿಗೆ ತನ್ನ ರಾಜಧಾನಿ ವರ್ಗಾಯಿಸಿದ ಮೇಲೆ ಅಲ್ಲಿ ʻಷಹಜಹಾನಾ ಬಾದ್’ ಎಂಬ ಹೊಸನಗರವನ್ನೇ ನಿರ್ಮಾಣ ಮಾಡಿದ. ಇದರಲ್ಲಿ ಆನೇಕ ಸುಂದರವಾದ ಕಟ್ಟಡಗಳನ್ನು ನಿರ್ಮಿಸಿದೆ. ಇದರಲ್ಲಿ ಮುಖ್ಯವಾದುದೆಂದರೆ ಕೆಂಪುಕೋಟೆ. ಇದರ ಒಳಗೆ ಅನೇಕ ಸುಂದರವಾದ ವಾಸ್ತುಶಿಲ್ಪ ಕೃತಿಗಳನ್ನು ನಿರ್ಮಿಸಲಾಗಿದೆ. ಇವೆಲ್ಲವನ್ನು ಪರಿಶುದ್ದ ಅಮೃತ ಶಿಲೆಯಲ್ಲಿ ನಿರ್ಮಿಸಲಾಗಿದೆ. ಇವುಗಳಲ್ಲಿ ಮೋತಿಮಹಲ್, ಹಿರಾಮಹಲ್, ರಂಗ ಮಹಲ್, ದಿವಾನಿ ಆಮ್, ದಿವಾನಿ ಖಾಸ್ ಮುಖ್ಯವಾದವು. ದಿವಾನಿ ಖಾಸ್ ಒಂದು ಅಪೂರ್ವ ಸುಂದರ ಕಲಾಕೃತಿ, ಇದರ ಗೋಡೆಯ ಮೇಲೆ ಕಂಡುಬಂದಿರುವ “ಭೂಮಿಯಲ್ಲಿ ಸಂತೋಷದ ಸ್ವರ್ಗದ ಉದ್ಯಾನವಿದ್ದಲ್ಲಿ ಅದುವೆ ಇದು, ಇದಲ್ಲದೆ ಬೇರೆ ಇಲ್ಲ” ಎಂಬ ಬರಹ ಅಕ್ಷರಶಃ ನಿಜ.

2. ತಾಜ್ ಮಹಲ್ : ಷಹಜಹಾನನ ಕಟ್ಟಡಗಳಲ್ಲೆಲ್ಲ ಅತ್ಯಂತ ಸುಪ್ರಸಿದ್ಧವಾದುದು ತಾಜ್ ಮಹಲ್, ಇದನ್ನು ಜಗತ್ತಿನ ಏಳು ಅದ್ಭುತಗಳಲ್ಲಿ ಒಂದಾಗಿ ಪರಿಗಣಿಸಲಾಗಿದೆ. ಇದನ್ನು ಪಹಜಹಾನನು ತನ್ನ ಪ್ರೀತಿಯ ರಾಣಿ ಮಮ್ತಾಜ್ ಮಹಲ್‌ಳ ನೆನಪಿನಲ್ಲಿ ಆಗ್ರಾದಲ್ಲಿ, ಯಮುನಾ ನದಿ ದಡದಲ್ಲಿ ನಿರ್ಮಿಸಿದೆ. ಇದು ಸಂಪೂರ್ಣವಾಗಿ ಅಮೃತಶಿಲೆಯಲ್ಲಿ ನಿರ್ಮಾಣವಾಗಿದೆ. ಕ್ರಿ.ಶ. 1632 ರಲ್ಲಿ ಇದರ ರಚನೆ ಆರಂಭವಾಗಿ 1653ರಲ್ಲಿ ಪೂರ್ಣಗೊಂಡಿತು. ಇದನ್ನು ಕಟ್ಟಿಸಲು ಷಹಜಹಾನನು 50ಲಕ್ಷರೂಗಳನ್ನು ವೆಚ್ಚಮಾಡಿದನು. ತಾಜ್ ಮಹಲ್‌ನ್ನು “ಅಮೃತ ಶಿಲೆಯ ಕನಸು” ಎಂದು ವರ್ಣಿಸಲಾಗಿದೆ. ಟವರ್ನಿಯರ್ ಪ್ರಕಾರ ತಾಜ್‌ಮಹಲ್‌ನ್ನು 22 ವರ್ಷಗಳಲ್ಲಿ ಪೂರ್ಣಗೊಳಿಸಲಾಯಿತು ಮತ್ತು 3 ಕೋಟಿ ರೂಪಾಯಿಗಳಿಗಿಂತ ಹೆಚ್ಚು ಹಣ ವೆಚ್ಚವಾಯಿತು. ವೆನಿಷಿಯಾದ ವೆರೊನಿಯೋ ಎಂಬುವನು ತಾಜ್ ಮಹಲ್‌ನ ವಿನ್ಯಾಸವನ್ನು ರೂಪಿಸಿದವನೆಂದು ಫಾದರ್ ಮಾಡ್ರಿಕ್ ಹೇಳಿದ್ದಾರೆ. ಆದರೆ ಈ ಕಟ್ಟಡದಲ್ಲಿ ಪಾಶ್ಚಾತ್ಯ ಪ್ರಭಾವ ಕಾಣುವುದಿಲ್ಲವೆಂದು ಭಾರತೀಯ ವಿದ್ವಾಂಸರ ಅಭಿಪ್ರಾಯ. ಉಸ್ತಾದ್ ಈಸಾ ಎಂಬುವನ ನಿರ್ದೇಶನದಲ್ಲಿ ಪರ್ಶಿಯದ ಮತ್ತು ಮಧ್ಯ ಏಶಿಯಾದ ಕಲಾವಿದರು ಭಾರತೀಯ ಕಲಾಕಾರರ ಸಹಾಯದಿಂದ ತಾಜ್ ಮಹಲ್‌ನ್ನು ನಿರ್ಮಿಸಿದರೆಂದು ಕೆಲವು ಇತಿಹಾಸಕಾರರ ಅಭಿಪ್ರಾಯ. ಕಟ್ಟಡದ ವಿನ್ಯಾಸವನ್ನು ಮುಸಲ್ಮಾನ ಕಲಾವಿದರು ಮತ್ತು ಅಲಂಕಾರದ ಕೆಲಸವನ್ನು ಹಿಂದೂ ಕಲಾಕಾರರು ಪೂರೈಸಿದರೆಂದು ನಂಬಲಾಗಿದೆ. ತಾಜ್ ಮಹಲ್ ನಲ್ಲಿ ಸಹಜಹಾನನ ಕಾಲದ ಉತ್ಕೃಷ್ಟ ಕಲೆ ಮತ್ತು ಪರಿಣಿತ ವಾಸ್ತುಶಿಲ್ಪ ಇವುಗಳ ಸುಂದರ ಸಮ್ಮಿಲನ ಗೋಚರಿಸುತ್ತದೆ. ಯಮುನಾ ನದಿಯ ದಡದ ಮೇಲಿನ ಈ ತಾಜ್‌ಮಹಲ್ ಪ್ರಕೃತಿ ದೇವಿಯ ಮತ್ತು ಮಾನವ ಹಸ್ತಗಳ ಸಂಯೋಜನೆಯ ಫಲವಾಗಿ ರೂಪುಗೊಂಡ ಸೌಂದರ್ಯರಾಶಿಯಂತೆ ಕಂಗೊಳಿಸುತ್ತದೆ. ಹಗಲು ಹೊತ್ತಿನಲ್ಲಿ ಮತ್ತು ಬೆಳದಿಂಗಳಲ್ಲಿ ತಾಜ್‌ ಮಹಲಿನ ಬಣ್ಣ ಬದಲಾಗುವುದು ಈ ಕಟ್ಟಡದ ಒಂದು ವೈಶಿಷ್ಟ್ಯ.

3. ಮಯೂರ ಸಿಂಹಾಸನ : ಷಹಜಹಾನನ ಕಾಲದ ಇನ್ನೊಂದು ಸೃಷ್ಟಿಯೇ ಮಯೂರ ಸಿಂಹಾಸನ ಇದನ್ನು ನಿರ್ಮಿಸಲು ಏಳು ವರ್ಷ ಹಿಡಿಯಿತು. ಇದಕ್ಕೆ ತಗುಲಿದ ವೆಚ್ಚ ಒಂದು ಕೋಟಿ ರೂಪಾಯಿ, ಇದನ್ನು ಮುತ್ತುರತ್ನಗಳಿಂದ, ವಜ್ರ ವೈಡೂರ್ಯಗಳಿಂದ ಅಲಂಕರಿಸಲಾಗಿತ್ತು. ನಾದಿರ್ಷಹ ತನ್ನ ಧಾಳಿಯ ಕಾಲದಲ್ಲಿ ಇದನ್ನು ಪರ್ಶಿಯಾಕ್ಕೆ ಸಾಗಿಸಿದೆ.

4. ಮೋತಿ ಮಸೀದಿ : ಆಗ್ರಾದಲ್ಲಿನ ನಯನ ಮನೋಹರವಾದ ಮೋತಿ ಮಸೀದಿಯನ್ನು ಕ್ರಿ.ಶ. 1653ರಲ್ಲಿ ಪೂರ್ಣಗೊಳಿಸಲಾಯಿತು. ಇದರ ನಿರ್ಮಾಣಕ್ಕೆ ಏಳು ವರ್ಷ ಹಿಡಿಯಿತು. ಪರಿಶುದ್ಧತೆ ಮತ್ತು ಆಕರ್ಷಕತೆ ಇದರ ಮುಖ್ಯ ಲಕ್ಷಣಗಳು.

5. ಮುಸ್ಲಾಮಾನ್ ಬುರ್ಚ್ : ಇದು ಆಗ್ರಾ ಕೋಟೆಯೊಳಗಿನ ಇನ್ನೊಂದು ಸುಂದರ ನಿರ್ಮಾಣ, ಇಲ್ಲಿಂದ ತಾಜ್ ಮಹಲಿನ ದರ್ಶನ ಸಾಧ್ಯ. ಇದರಲ್ಲಿಯೇ ಔರಂಗಜೇಬ್ ಷಹಜಹಾನನ್ನು ಸೆರೆಹಿಡಿದದ್ದು. ಕಟ್ಟಡಗಳೇ ಅಲ್ಲದೆ ಉದ್ಯಾನವನಗಳನ್ನು ನಿರ್ಮಿಸುವಲ್ಲಿ ಷಹಜಹಾನ್ ಆಸಕ್ತಿ ವಹಿಸಿದ್ದ. ಕಾಶ್ಮೀರದ ಕಾಲಿಮಾರ್ ಮತ್ತು ನಿಷಾತ್ ಉದ್ಯಾನವನಗಳು, ಲಾಹೋರಿನ ಶಾಲಿಮಾರ್ ಉದ್ಯಾನವನ ಈತನ ಕಾಲದವು.

ಮುಕ್ತಾಯ : ಷಹಜಹಾನನ ಕಾಲದಲ್ಲಿ ವಿಶಿಷ್ಟವಾದ ವಾಸ್ತುಶಿಲ್ಪ ಶೈಲಿಯೊಂದು ನಿರ್ಮಾಣವಾಯಿತು. ಇದನ್ನು ಕೆಲವರು “ಷಹಜಹಾನನ ಶೈಲಿ” ಯೆಂದು ಕರೆದಿದ್ದಾರೆ. ಈತನಿಗಿಂತ ಮೊದಲಿನ ಶೈಲಿಯನ್ನು “ಇಂಡೋಪರ್ಶಿಯನ್ ಶೈಲಿ” -ಯೆಂದು ಗುರುತಿಸಲಾಗಿದೆ. ಕಾರಣ ಅದರಲ್ಲಿ ಭಾರತೀಯ ಮತ್ತು ಪರ್ಶಿಯನ್ ಶೈಲಿಗಳ ಸಮ್ಮಿಲನವಿದ್ದಿತ್ತು. ಸಹಜಹಾನನ ಕಾಲದಲ್ಲಿ ಸಂಪೂರ್ಣವಾಗಿ ಭಾರತೀಯ ಅಂಶಗಳಿಂದ ಕೂಡಿದ ಶೈಲಿ ಆರಂಭವಾಯಿತು. ವಿದೇಶಿ ಅಂಶಗಳು ದೂರವಾದವು. ಈ ಶೈಲಿಯಲ್ಲಿ ಸೂಕ್ಷ್ಮವಾದ ಕೆತ್ತನೆಗೆ, ಅಲಂಕಾರಕ್ಕೆ, ಮೆರುಗಿಗೆ, ಬಣ್ಣಕ್ಕೆ, ರಮ್ಯತೆಗೆ ಅಧಿಕ ಗಮನ ಕೊಡಲಾಗಿತ್ತು. ಷಹಜಹಾನನ ಕಾಲದ ವಾಸ್ತುಶಿಲ್ಪ ಕೃತಿಗಳ ವೈಶಿಷ್ಟ್ಯವೆಂದರೆ ಹೆಚ್ಚಾಗಿ ಬಿಳಿಯ ಅಮೃತಶಿಲೆಯ ಬಳಕೆ ಮತ್ತು ಅಲಂಕಾರಕ್ಕೆ ಮತ್ತು ರತ್ನ, ವಜ್ರ ವೈಡೂರ್ಯ, ಬಂಗಾರ ಮತ್ತು ಬೆಳ್ಳಿಯನ್ನು ಬಳಸಿರುವುದು. ತತ್ಪರಿಣಾಮವಾಗಿ ಈತನ ಕಾಲದ ಕೃತಿಗಳು ಅತ್ಯಂತ ಆಕರ್ಷಕ ಮತ್ತು ಸುಂದರವಾದವು.