ಮೊಗಲರ ಕಂದಾಯ ಪದ್ಧತಿ

ಮೊಗಲರ ಕಂದಾಯ ಪದ್ಧತಿ

ಮೊಗಲರು ವಿವಿಧ ಮೂಲಗಳಿಂದ ಆರ್ಥಿಕ ಆದಾಯಗಳನ್ನು ಪಡೆಯುತ್ತಿದ್ದರು. ಭೂಕಂದಾಯ, ತೆರಿಗೆ, ಗಣಿಗಾರಿಕೆ, ಧಾಳಿ ಮತ್ತು ಕೊಳ್ಳೆಗಳು, ಸೋತ ಅರಸರು ತುಂಬಿಕೊಡುವ ಪರಿಹಾರಧನ, ತಲೆಗಂದಾಯ ಮುಂತಾದವು ಇವರ ಆದಾಯದ ಮೂಲಗಳಾಗಿದ್ದವು. ಇದರಲ್ಲಿ ಭೂಕಂದಾಯ ಪ್ರಮುಖ ಮತ್ತು ಲಾಭದಾಯಕ ಆಗಿತ್ತು. ಶೇರ್‌ಷಾ ತನ್ನ ಕಾಲದಲ್ಲಿ  ಉತ್ತಮವಾದ ಕಂದಾಯ ವ್ಯವಸ್ಥೆಯನ್ನು ಜಾರಿಗೆ ತಂದಿದ್ದ. ಆದರೆ ನಂತರ ಕಂದಾಯ ವ್ಯವಸ್ಥೆ ಹದಗೆಟ್ಟಿತು. ಇದರ ಪ್ರಾಮುಖ್ಯತೆ ತಿಳಿದಿದ್ದ ಅಕ್ಬರ್‌ ಕಂದಾಯ ವ್ಯವಸ್ಥೆಯ ಪುನರ್ ಸಂಘಟನೆಗೆ ಶ್ರಮಿಸಿದ.

ಕ್ರಿ.ಶ.1582 ರಲ್ಲಿ ಅಕ್ಬರನು ತೋದರಮಲ್ಲನನ್ನು ಅರ್ಥಮಂತ್ರಿಯಾಗಿ ನೇಮಿಸಿದ. ತೋದರಮಲ್ಲನು ಜಾರಿಗೆ ತಂದ ಸುಧಾರಣೆಗಳಿಂದ ಸಾಮ್ರಾಜ್ಯಕ್ಕೆ ಆಗಾಧ ಪ್ರಮಾಣದಲ್ಲಿ ಲಾಭ ಉಂಟಾಯಿತು. ಈ ವ್ಯವಸ್ಥೆ ಮೊಗಲರ ಕಾಲದುದ್ದಕ್ಕೂ ಮುಂದುವರೆದವು. ಅದನ್ನು ʻದಹಸಾಲಿ ಪದ್ಧತಿ’ ಎಂದು ಕರೆಯಲಾಯಿತು. ಈ ಪದ್ಧತಿಯ ಬಗ್ಗೆ ಚರಿತ್ರಕಾರರು ವಿವಿಧ ಬಗೆಯ ವಿವರಣೆ ನೀಡಿದ್ದರೂ ಅದರ ಮುಖ್ಯಾಂಶಗಳು ಈ ಕೆಳಗಿನಂತಿವೆ.

  1. ರಾಜ್ಯದ ಎಲ್ಲಾ ಭೂಮಿಯನ್ನು ವ್ಯವಸ್ಥಿತವಾಗಿ ಅಳತೆ ಮಾಡುವದು. ಇದಕ್ಕಾಗಿ ಸೆಣಬಿನ ಹಗ್ಗಕ್ಕೆ ಬದಲಾಗಿ ಬೊಂಬಿನ: ಗಳವನ್ನು ಬಳಸುವುದು,
  2. ಈ ರೀತಿ ಅಳತೆ ಮಾಡಿದ ಭೂಮಿಯನ್ನು ‘ಬಿಘ’ ಎಂದು ವಿಭಜಿಸುವುದು. (ಒಂದು ಬಿಘ ಎಂದರೆ 60×60 ಗಜ)
  3. ಭೂಮಿಯನ್ನು ಅದರ ಮಣ್ಣಿನ ಸಾರಕ್ಕೆ ಅನುಗುಣವಾಗಿ ನಾಲ್ಕು ವರ್ಗಗಳಾಗಿ ವಿಭಜಿಸಲಾಯಿತು. ಅವುಗಳೆಂದರೆ:

ಪೋಲಾಜ್- ಪ್ರತಿವರ್ಷವೂ ವ್ಯವಸಾಯ ಮಾಡಲು ಯೋಗ್ಯವಾದ ಭೂಮಿ.

ಪರೌತಿ- ಮಣ್ಣಿನ ಸಾರ ಮರಳಿ ಪಡೆಯುವುದಕ್ಕಾಗಿ ಬಿಟ್ಟು ಬಿಟ್ಟು ಸಾಗುವಳಿ ಮಾಡುವ ಭೂಮಿ.

ಚಚರ್ – ಮೂರು ಅಥವಾ ನಾಲ್ಕು ವರ್ಷಗಳಲ್ಲಿ ಒಂದು ಬಾರಿ ಉಳುಮೆ ಮಾಡುವ ಭೂಮಿ.

ಬಂಜರು- ಕೃಷಿ ಯೋಗ್ಯವಲ್ಲದ ಭೂಮಿ.

ಈ ಮೇಲಿನ ವರ್ಗಿಕರಣವನ್ನು ಅನುಸರಿಸಿ ಭೂಮಿಯ ಕಂದಾಯವನ್ನು ನಿಗಧಿಪಡಿಸಲಾಗುತ್ತಿತ್ತು.

  1. ಕೃಷಿಯೋಗ್ಯ ಭೂಮಿಯನ್ನು ಆಳೆದು, ಅದರ ಫಸಲಿನ ಸರಾಸರಿ ವಾರ್ಷಿಕ ಆದಾಯವನ್ನು ತೆರಿಗೆ ನಿರ್ಧಾರಕ್ಕಾಗಿ ಗಣನೆಗೆ ತೆಗೆದುಕೊಳ್ಳಲಾಯಿತು.
  2. ರೈತ ತನ್ನ ಉತ್ಪಾದನೆಯ ಮೂರನೆ ಒಂದು ಭಾಗವನ್ನು ತೆರಿಗೆಯ ರೂಪದಲ್ಲಿ ಸರ್ಕಾರಕ್ಕೆ ಸಲ್ಲಿಸಲು ಆಜ್ಞೆ ಮಾಡಲಾಯಿತು.
  3. ಕೃಷಿ ಮಾಡುವ ಪ್ರದೇಶಕ್ಕೆ ಮಾತ್ರವೇ ರೈತರು ತೆರಿಗೆಯನ್ನು ನೀಡಬೇಕಿತ್ತು. ಈ ವ್ಯವಸ್ಥೆಯನ್ನು ಜಬ್ತಿಪದ್ಧತಿಯೆಂದು ಹೆಸರು.
  4. ತೆರಿಗೆಯನ್ನು ಹಣ ಅಥವಾ ವಸ್ತುಗಳ ರೂಪದಲ್ಲಿ ಸಲ್ಲಿಸುವ ಸ್ವಾತಂತ್ರ್ಯ ರೈತರಿಗಿತ್ತು.
  5. ರಾಜ್ಯದ ಅಧಿಕಾರಿಗಳು ಭೂಮಿಯ ವರ್ಗೀಕರಣ, ಅದರ ಹುಟ್ಟುವಳಿ, ಮಾರುಕಟ್ಟೆಯ ಬೆಲೆ ಮುಂತಾದವುಗಳ ಕುರಿತು ವಿವರವಾದ ದಾಖಲೆ ಇಡಬೇಕಾಗಿತ್ತು.
  6. ಅಕ್ಬರನು ಜಾರಿಗೆ ತಂದ ಪದ್ಧತಿ ರೈತವಾರಿ ಪದ್ಧತಿಯಾಗಿತ್ತು. ಇದರಲ್ಲಿ ರೈತರ ಭೂಮಿಯ ಹಕ್ಕನ್ನು ಮಾನ್ಯಮಾಡಲಾಗಿತ್ತು. ಸರಕಾರ ರೈತರೊಂದಿಗೆ ನೇರವಾಗಿ ವ್ಯವಹರಿಸುವ ಪದ್ಧತಿ ಜಾರಿಗೆ ಬಂದಿತು.
  7. ರೈತರಿಗೆ ಅವರ ಭೂಮಿ ಮತ್ತು ಕಂದಾಯದ ವಿವರ ನೀಡುವ ಪಟ್ಟಾಗಳನ್ನು ಕೊಡಲಾಗಿತ್ತು.
  8. ಬರಗಾಲ, ಪ್ರವಾಹ ಇತ್ಯಾದಿ ಪ್ರಕೃತಿಯ ವೈಪರಿತ್ಯಗಳ ಕಾಲದಲ್ಲಿ ರಿಯಾಯಿತಿಗಳನ್ನು ಮತ್ತು ಸಾಲಗಳನ್ನು ರೈತರಿಗೆ ನೀಡಲಾಗುತ್ತಿತ್ತು.

ಅಮಲ್‌ಗುಜಾರ್‌ನು ಅನೇಕ ಅಧೀನ ಅಧಿಕಾರಿಗಳ ಸಹಾಯದಿಂದ ಕಂದಾಯವನ್ನು ಸಂಗ್ರಹಿಸುತ್ತಿದ್ದ. ಗ್ರಾಮದ ಮುಖ್ಯಸ್ಥನಾದ ಮಕದ್ದಂ, ಅಲ್ಲಿನ ಪಟ್ಟಾರೀ ಇವರಲ್ಲದೆ ಕುನುಂಗೋ, ಬಿತಿಕ್ಚೀ, ಪೊತೆದಾರ-ಇವರೆಲ್ಲರ ಸಹಾಯದಿಂದ ಪರಗಣಗಳ ಮುಖ್ಯಸ್ಥ ತೆರಿಗೆ ವಸೂಲಿಮಾಡುತ್ತಿದ್ದ. ತೆರಿಗೆ ಸಂಗ್ರಹಿಸುವ ಕಾಲದಲ್ಲಿ ಅಧಿಕಾರಿಗಳು ರೈತರನ್ನು ಪೀಡಿಸಕೂಡದೆಂಬ ರಾಜಾಜ್ಞೆ ಜಾರಿಯಲ್ಲಿತ್ತು. ಆದರೆ ಗಡಿಪ್ರಾಂತ್ಯಗಳ ಅಧಿಕಾರಿಗಳು ಭ್ರಷ್ಟರಾಗಿ ಜನತೆಯನ್ನು ಕಾಡುತ್ತಿದ್ದರು. ಹಾಗೂ ಅರಸರಿಗೆ ಕೆಟ್ಟ ಹೆಸರನ್ನು ತರುತ್ತಿದ್ದರು. ಷಹಜಹಾನ್ ಮತ್ತು ಔರಂಗಜೇಬರ ಕಾಲದಲ್ಲಿ ಇಂತಹ ಅಧಿಕಾರಿಗಳ ವರ್ತನೆ ಬಯಲಾದಾಗ ಅವರಿಗೆ ಶಿಕ್ಷೆ ಕೊಟ್ಟು ಕೆಲಸದಿಂದ ವಜ ಮಾಡಲಾಯಿತು.

ಉಪಸಂಹಾರ

ಮೊಗಲ್ ಕಾಲದ ಕಂದಾಯ ವ್ಯವಸ್ಥೆ ರಾಜ್ಯದ ಆರ್ಥಿಕ ಬಲವನ್ನು ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸಿತು. ಅಕ್ಬರ್ ಮತ್ತು ರಾಜಾ ತೋದರಮಲ್ಲ ಜಾರಿಗೆ ತಂದ ದಹಸಾಲಿ ಪದ್ಧತಿ ಭೂಮಿಯ ಅಳತೆ, ವರ್ಗೀಕರಣ ಮತ್ತು ತೆರಿಗೆ ಸಂಗ್ರಹಣೆಯನ್ನು ಕ್ರಮಬದ್ಧಗೊಳಿಸಿತು. ಇದರ ಮೂಲಕ ರೈತರ ಹಕ್ಕುಗಳನ್ನು ಮಾನ್ಯಗೊಳಿಸುವ ವ್ಯವಸ್ಥೆಯೂ ರೂಪುಗೊಂಡಿತು ಮತ್ತು ಮೊಗಲ್ ಆಡಳಿತಕ್ಕೆ ಸ್ಥಿರವಾದ ಆದಾಯ ದೊರೆಯಿತು.

ಮೊಗಲರ ಆಡಳಿತ

ಮೊಗಲರ ಆಡಳಿತ

ಮೊಗಲ್ ಸುಲ್ತಾನರು ನಿರಂಕುಶ ಪ್ರಭುಗಳಾಗಿದ್ದರು. ಇವರ ಆಡಳಿತದಲ್ಲಿ ಸುಲ್ತಾನನೇ ಪರಮಾಧಿಕಾರಿ, ಎಲ್ಲಾ ಅಧಿಕಾರಗಳು ಅವನಲ್ಲೇ ಕೇಂದ್ರಿಕೃತವಾಗಿದ್ದವು. ಆದಾಗ್ಯೂ ಔರಂಗಜೇಬನನ್ನು ಬಿಟ್ಟರೆ ಉಳಿದವರು ಉದಾರಿಗಳು ಮತ್ತು ಪ್ರಗತಿಪರರಾಗಿದ್ದರು. ಸುಲ್ತಾನರು ಜನರಿಗೆ ಸುಖಶಾಂತಿಗಳನ್ನು ಮತ್ತು ನ್ಯಾಯವನ್ನು ದೊರಕಿಸಿಕೊಡುವಲ್ಲಿ ಆಸಕ್ತಿ ಹೊಂದಿದ್ದರು. ಪ್ರತಿಯೊಂದು ದಾಖಲೆ, ನಿರ್ಣಯ ಮತ್ತು ಕಾನೂನುಗಳನ್ನು ವಿವರವಾಗಿ ಇಡುತ್ತಿದ್ದು ಆಗಿನ ಕಾಲದ ವೈಶಿಷ್ಟ್ಯ. ಇಂತಹ ದಾಖಲೆಗಳ ಸಂಖ್ಯೆ ವಿಪರೀತವಾಗಿತ್ತು. ಸರ್ಕಾರ ಹಲವಾರು ಕಾರ್ಖಾನೆಗಳನ್ನು ಸ್ಥಾಪಿಸಿ ಸುಲ್ತಾನನಿಗೆ, ಆಸ್ಥಾನದವರಿಗೆ, ಅಂತಃಪುರದವರಿಗೆ ಬೇಕಾದ ಎಲ್ಲಾ ವಸ್ತುಗಳನ್ನು ತಯಾರಿಸುತ್ತಿದ್ದುದು ಅದರ ವೈಶಿಷ್ಟವಾಗಿತ್ತು. ಮೊಗಲ್ ಆಡಳಿತ ವ್ಯವಸ್ಥೆಯಲ್ಲಿ ಮುಸ್ಲಿಂ ತತ್ವಗಳಿಗೆ ದೊರೆತಿದ್ದ ಮಾನ್ಯತೆ ಕಡಿಮೆ. ಹಲವು ವಿಷಯಗಳಲ್ಲಿ ಅವರು ಹಿಂದೂ ಪರಂಪರೆಯನ್ನು ಅನುಸರಿಸಿದ್ದರು. ಔರಂಗಜೇಬ್ ಮಾತ್ರ ಇದಕ್ಕೆ ಹೊರತಾಗಿದ್ದ.

1. ಕೇಂದ್ರಾಡಳಿತ

ಸುಲ್ತಾನ : ಮೊಗಲ್ ಸುಲ್ತಾನರಿಗಿದ್ದ ಅಧಿಕಾರಗಳು ಅಪರಿಮಿತ. ಇವರ ಅಧಿಕಾರ ಮತ್ತು ತೀರ್ಮಾನವನ್ನು ಯಾರೂ ಪ್ರಶ್ನಿಸುವಂತಿರಲಿಲ್ಲ. ಅರ್ತಾರ್ಥ್ ಸಾಮ್ರಾಟನು ಸಾಮ್ರಾಜ್ಯದ ಪರಮಾಧಿಕಾರಿ. ಸುಲ್ತಾನರು ಇಸ್ಲಾಂ ಧರ್ಮದ ಪರಂಪರೆಗೆ ಅನುಗುಣವಾಗಿ, ರಾಜ್ಯಭಾರ ಮಾಡಬೇಕಾಗಿತ್ತು. ಆದರೆ ಶಕ್ತಿಶಾಲಿ ಸುಲ್ತಾನನು ತಾನು ಇಚ್ಚಿಸಿದಲ್ಲಿ ಅದಕ್ಕೆ ವಿರುದ್ಧವಾಗಿ ನಡೆಯಬಹುದಾಗಿತ್ತು. ಮೊಗಲರಲ್ಲಿ ಹಿರಿಯ ಮಗನಿಗೆ ಸಿಂಹಾಸನವೆಂಬ ಕಾನೂನು ಇರಲಿಲ್ಲ. ತತ್ಪರಿಣಾಮವಾಗಿ ಕತ್ತಿಯೇ ಉತ್ತರಾಧಿಕಾರವನ್ನು ನಿರ್ಧರಿಸುವ ಶಕ್ತಿಯಾಗಿತ್ತು. ಇದರಿಂದಾಗಿಯೇ ಉತ್ತರಾಧಿಕಾರ ಯುದ್ಧಗಳು ಸಾಮಾನ್ಯವಾಗಿದ್ದವು. ಸಾಮ್ರಾಟನು ಸಾಮ್ರಾಜ್ಯದ ಪ್ರಮುಖನಾಗಿ, ಶ್ರೇಷ್ಠ ದಂಡನಾಯಕನಾಗಿ, ಶ್ರೇಷ್ಠ ನ್ಯಾಯಾಧೀಶನಾಗಿ ಮತ್ತು ಕಾನೂನು ಗಾರನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ. ಎಲ್ಲಾ ಪ್ರಮುಖಾಧಿಕಾರಿಗಳನ್ನು ನೇಮಿಸುವ, ಬಡ್ತಿ ನೀಡುವ ಮತ್ತು ಅವರ ಹುದ್ದೆಗಳನ್ನು ರದ್ದುಮಾಡುವ ಅಧಿಕಾರ ಆತನಿಗಿತ್ತು. ಸಾಮ್ರಾಜ್ಯದಲ್ಲಿ ಈತನ ಮಾತೇ ಕಾನೂನಾಗಿತ್ತು.

ಮಂತ್ರಿಗಳು : ಸುಲ್ತಾನನಿಗೆ ಕೇಂದ್ರಾಡಳಿತದಲ್ಲಿ ಸೂಕ್ತ ಸಲಹೆ ಮತ್ತು ಸಹಕಾರ ನೀಡಲು ಕೆಲವು ಮಂತ್ರಿಗಳಿದ್ದರು. ಅವರುಗಳು ಮತ್ತು ಅವರುಗಳ ಕಾರ್ಯಗಳನ್ನು ಈ ಕೆಳಕಂಡಂತೆ ವಿವರಿಸಲಾಗಿದೆ.

ಪ್ರಧಾನಮಂತ್ರಿ : ಈತನಿಗೆ ವಕೀಲ್, ವಜೀರ, ದಿವಾನ್ ಎಂಬ ಹೆಸರುಗಳಿದ್ದವು. ಈತ ಸಾಮಾನ್ಯವಾಗಿ ಹಣಕಾಸು ಇಲಾಖೆಯ ಜವಾಬ್ದಾರಿ ಹೊತ್ತಿದ್ದ. ಅಲ್ಲದೆ ನಾಗರೀಕ ಆಡಳಿತಗಾರನಾಗಿದ್ದ. ಈತ ರಾಜ್ಯದ ಆದಾಯ ಮತ್ತು ಖರ್ಚುಗಳನ್ನು ನೋಡಿಕೊಳ್ಳುತ್ತಿದ್ದ. ಇವನು ಸುಲ್ತಾನನಿಗೂ ಉಳಿದ ಮಂತ್ರಿಗಳಿಗೂ ಕೊಂಡಿಯಾಗಿರುತ್ತಿದ್ದ. ಸುಲ್ತಾನನ ಗೈರು ಹಾಜರಿಯಲ್ಲಿ ಅವನ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸುತ್ತಿದ್ದ. ಈತನಿಗೆ ಹಲವು ಸಹಾಯಕರಿದ್ದು, ಖಜಾನೆ ಈತನ ಹಿಡಿತದಲ್ಲಿತ್ತು. ಕಂದಾಯದ ಬಗ್ಗೆ ಈತನದೇ ಅಂತಿಮ ತೀರ್ಮಾನವಾಗಿತ್ತು.

ಮೀರ್‌ ಭಕ್ಷಿ : ಈತ ಸೇನಾ ವಿಭಾಗದ ಮುಖ್ಯಸ್ಥ. ಸೈನ್ಯದ ಮೇಲ್ವಿಚಾರಕನಾಗಿದ್ದ. ಈತ ಮನ್ಸಬ್ದಾರರನ್ನೂ ನೇಮಿಸುತ್ತಿದ್ದ. ಮನ್ಸಬ್ದಾರರಿಗೆ ಮತ್ತು ಸೈನಿಕರಿಗೆ ಸಂಬಳ ನೀಡುವ ಜವಾಬ್ದಾರಿ ಈತನದಾಗಿತ್ತು. ಸೈನ್ಯದಲ್ಲಿ ರಾಜನ ಆಜ್ಞೆಗಳನ್ನು ಜಾರಿಗೆ ತರುವ, ಕುದುರೆಗಳಿಗೆ ಮುದ್ರೆ ಹಾಕುವ, ಕೆಲಸದ ಮೇಲ್ವಿಚಾರಣೆ ನಡೆಸುವ ಮತ್ತು ಮನ್ಸಬ್‌ದಾರರು ತಮಗೆ ನಿಗಧಿಪಡಿಸಿದ ಸಂಖ್ಯೆಯ ಸೈನಿಕರನ್ನು ಹೊಂದಿರುವರೇ ಅಥವಾ ಇಲ್ಲವೆ ಎಂಬುದನ್ನು ವಿಚಾರಿಸುವ ಅಧಿಕಾರ ಆತನಿಗಿತ್ತು.

ಖಾನ್-ಇ-ಸಾಮಾನ್ : ಇವನು ಅರಮನೆಯ ಕಾರ್ಯನಿರ್ವಾಹಕ, ಅರ್ತಾರ್ಥ್ ಸಾಮ್ರಾಟನ ಗೃಹ ಕೃತ್ಯಗಳ ಅಧಿಕಾರಿಯಾಗಿದ್ದು, ಆಸ್ಥಾನ, ಅಂತಃಪುರ, ಪರಿವಾರ, ಸೇವಕರು ಇತ್ಯಾದಿಗಳ ಮೇಲ್ವಿಚಾರಣೆ ನಡೆಸುತ್ತಿದ್ದನು. ಅಲ್ಲದೆ ಸರ್ಕಾರದ ಕಾರ್ಖಾನೆಗಳ ಮೇಲ್ವಿಚಾರಕನೂ ಆಗಿದ್ದ.

ಮುಖ್ಯಖಾಜಿ : ಸುಲ್ತಾನನು ಸಾಮ್ರಾಜ್ಯದ ಶ್ರೇಷ್ಠ ನ್ಯಾಯಾಧೀಶ ಮತ್ತು ಶ್ರೇಷ್ಠ ನ್ಯಾಯಾಲಯವಾಗಿದ್ದರೂ, ಆತನಿಗೆ ಎಲ್ಲಾ ನ್ಯಾಯ ವಿಷಯಗಳಿಗೆ ಗಮನಹರಿಸಲು ಸಮಯವಿರಲಿಲ್ಲ. ತತ್ಪರಿಣಾಮವಾಗಿ ಆ ಕಾರ್ಯವನ್ನು ಕೇಂದ್ರದಲ್ಲಿ ಮುಖ್ಯ ಖಾಜಿಗೆ ವಹಿಸಲಾಗಿತ್ತು. ಈತ ಪ್ರಾಂತ್ಯಗಳ, ಜಿಲ್ಲೆಗಳ ಮತ್ತು ನಗರಗಳ ಖಾಜಿಗಳನ್ನು ನೇಮಿಸುತ್ತಿದ್ದ.

ಸಾದರ್-ಉಸ್-ಸಾದರ್ : ಇವನು ಧಾರ್ಮಿಕ ಇಲಾಖೆಯ ಮುಖ್ಯಸ್ಥ, ಶಿಕ್ಷಣ, ಧಾರ್ಮಿಕ ಸಂಸ್ಥೆಗಳು ಇವನ ಅಧಿಕಾರದ ವ್ಯಾಪ್ತಿಗೆ ಬರುತ್ತಿದ್ದವು.

ಮುಹತ್ಸಿಬ್ : ಇವನು ನೈತಿಕ ಮತ್ತು ಸಾಮಾಜಿಕ ಅಧಿಕಾರಿಯಾಗಿದ್ದ. ಮದ್ಯಪಾನ, ಅಫೀಮು ಸೇವನೆ, ಜೂಜು ಮತ್ತು ಇತರ ನ್ಯಾಯಬಾಹಿರ ಕ್ರಮಗಳನ್ನು ತಡೆಯುವುದು ಈತನ ಜವಾಬ್ದಾರಿಯಾಗಿತ್ತು.

ಮೀರ್‌ ಆತೀಷ್ : ಫಿರಂಗಿ ಪಡೆಯ ಮುಖ್ಯಸ್ಥನಾದ ಈತನ ಹಿಡಿತದಲ್ಲಿ ಎಲ್ಲಾ ಫಿರಂಗಿಗಳಿದ್ದವು. ಅರಮನೆ, ಕೋಟೆಯ ಜವಾಬ್ದಾರಿ ಇವನದಾಗಿತ್ತು.

ದಾರೋಗಾ-ಇ-ಡಾಕ್-ಚೌಕಿ : ಈತ ಗೂಢಾಚಾರ ಪಡೆಯ ಮುಖ್ಯಸ್ಥನಾಗಿದ್ದು ಗೂಢಾಚಾರರನ್ನು ಸಾಮ್ರಾಜ್ಯದ ಎಲ್ಲೆಡೆ ಕಳುಹಿಸಿ, ಅವರಿಂದ ಸುದ್ದಿ ಸಂಗ್ರಹಿಸಿ, ಸಾಮ್ರಾಟನ ಗಮನಕ್ಕೆ ತರುವುದು ಈತನ ಕರ್ತವ್ಯವಾಗಿತ್ತು. ಈತನ ಕೈಕೆಳಗೆ ಪ್ರಾಂತ್ಯಗಳಲ್ಲಿ ಮತ್ತು ಪರಗಣಗಳಲ್ಲಿ ಗೂಢಾಚಾರ ಅಧಿಕಾರಿಗಳಿದ್ದರು.

2. ಪ್ರಾಂತ್ಯಾಡಳಿತ

ಸಾಮ್ರಾಜ್ಯದ ಸುವ್ಯವಸ್ಥಿತ ಆಡಳಿತಕ್ಕಾಗಿ ಸಾಮ್ರಾಜ್ಯವನ್ನು ಹಲವಾರು ಸುಬಾ ಅಥವಾ ಪ್ರಾಂತ್ಯಗಳಾಗಿ ವಿಭಜಿಸಲಾಗಿತ್ತು. ಅಕ್ಬರನ ಕಾಲದಲ್ಲಿ ಇವುಗಳ ಸಂಖ್ಯೆ 15 ಇತ್ತು. ಆದರೆ ಔರಂಗಜೇಬನ ಕಾಲದಲ್ಲಿ ಇವುಗಳ ಸಂಖ್ಯೆ 25 ಕ್ಕೆ ಏರಿತು. ಪ್ರತಿಯೊಂದು ಪ್ರಾಂತ್ಯಕ್ಕೂ ರಾಜ್ಯಪಾಲನಿದ್ದು, ಇವನನ್ನು ಅಕ್ಬರನ  ಕಾಲದಲ್ಲಿ ಸಿಪಾಹ್ ಸಾಲಾರ್ ಎಂದೂ ಆತನ ಉತ್ತಾರಾಧಿಕಾರಿಗಳ ಕಾಲದಲ್ಲಿ ಸುಬಾದಾರ್ ಅಥವಾ ನಿಜಾಮ್ ಎಂದು ಕರೆಯಲಾಗಿತ್ತು. ಈತನನ್ನು ಸಾಮ್ರಾಟ ನೇಮಿಸುತ್ತಿದ್ದ. ಪ್ರಾಂತ್ಯದ ಸಾಮಾನ್ಯ ಆಡಳಿತ, ಶಾಂತಿ, ಶಿಸ್ತು, ಕಾನೂನು ಪಾಲನೆ ಮತ್ತು ಕಂದಾಯ ವಸೂಲಿಯ ಮೇಲ್ವಿಚಾರಣೆ ಈತನ ಕರ್ತವ್ಯವಾಗಿತ್ತು. ಈತನು ಪ್ರಾಂತ್ಯದ ಸೇನೆಯ ದಂಡನಾಯಕನಾಗಿ ಮತ್ತು ನ್ಯಾಯಾಧೀಶನಾಗಿ ಕಾರ್ಯ ನಿರ್ವಹಿಸುತ್ತಿದ್ದ. ಇವನನ್ನು ಆಗಾಗ್ಗೆ ವರ್ಗಾವಣೆ ಮಾಡಲಾಗುತ್ತಿತ್ತು. ಇವನಿಗೆ ಅಧಿಕಾರಗಳಿದ್ದಾಗ್ಯೂ ಚಕ್ರವರ್ತಿಯ ಹಿಡಿತದಲ್ಲಿರಬೇಕಾಗಿತ್ತು. ದಿವಾನ: ಪ್ರಾಂತ್ಯಗಳಲ್ಲಿ ದಿವಾನರೆಂಬ ಅಧಿಕಾರಿಗಳಿದ್ದರು. ಇವರನ್ನು ಕೇಂದ್ರ ಸರ್ಕಾರವೇ ನೇಮಿಸುತ್ತಿತ್ತು. ಇವರು ಸ್ವತಂತ್ರರಾಗಿದ್ದು, ಸುಬಾದಾರರ ಚಟುವಟಿಕೆಗಳ ಮೇಲೆ ಗಮನಹರಿಸಬೇಕಿತ್ತು. ಇವರು ಒಬ್ಬರಿಗೊಬ್ಬರು ಪ್ರತಿಸ್ಪರ್ಧಿಗಳಾಗಿದ್ದರು. ದಿವಾನನು ಕಂದಾಯ ಇಲಾಖೆಯ ಮುಖ್ಯಸ್ಥನಾಗಿದ್ದು, ಕಂದಾಯ ನಿಗದಿ ಮತ್ತು ವಸೂಲಿ ಮೇಲ್ವಿಚಾರಣೆ ಮಾಡಬೇಕಾಗಿತ್ತು. ನಾಗರೀಕ ನ್ಯಾಯ ನೀಡುವ ಹಕ್ಕು ಇವನಿಗೆ ಇದ್ದು, ಈತ ಕೇಂದ್ರದ ವಜೀರನಿಗೆ ನೇರವಾಗಿ ಹೊಣೆಗಾರನಾಗಿದ್ದ. ಈ ಮೇಲ್ಕಂಡ ಅಧಿಕಾರಿಗಳಲ್ಲದೆ, ಪ್ರಾಂತ್ಯಗಳಲ್ಲಿ ಭಕ್ಷ ಸಾದರ್, ಖಾಜಿ, ಕೊತ್ವಾಲ, ವಕಿಯಾ ನವೀಸ್ ಮುಂತಾದ ಅನೇಕ ಅಧಿಕಾರಿಗಳಿದ್ದರು. ಇವರೆಲ್ಲರೂ ಕೇಂದ್ರದಲ್ಲಿ ಅದೇ ನಾಮಾಂಕಿತ ಹೊಂದಿದ ಅಧಿಕಾರಿಗಳ ಕೆಲಸಗಳನ್ನು ಪ್ರಾಂತ್ಯಗಳಲ್ಲಿ ನಿರ್ವಹಿಸುತ್ತಿದ್ದರು.

3. ಜಿಲ್ಲೆಯ ಆಡಳಿತ

ಪ್ರಾಂತ್ಯಗಳನ್ನು ಸರ್ಕಾರ್ ಅಥವಾ ಜಿಲ್ಲೆಗಳಾಗಿ ವಿಭಜಿಸಿದ್ದರು. ಪ್ರತಿಯೊಂದು ಸರ್ಕಾರ್‌ಗೆ ಈಗಿನ ಜಿಲ್ಲಾಧಿಕಾರಿ ರೀತಿ ಒಬ್ಬ ಪೌಜುದಾರ ಎಂಬ ಅಧಿಕಾರಿ ಇದ್ದ. ಇವನು ಸುಬಾದಾರನ ಕೈಕೆಳಗೆ ಕೆಲಸ ನಿರ್ವಹಿಸುತ್ತಿದ್ದ. ಈತ ತನ್ನ ಸರ್ಕಾರದಲ್ಲಿ ಆಡಳಿತ ಮತ್ತು ಕಾನೂನು ವ್ಯವಸ್ಥೆ ಮಾಡುವುದರ ಜೊತೆಗೆ ಸೇನಾ ತುಕಡಿಯ ನಾಯಕನಾಗಿದ್ದ. ಅಂದರೆ, ಡಾ|| ಜಾದುನಾಥ್ ಸರ್ಕಾ‌ರ್ ಪ್ರಕಾರ ಸ್ಥಳೀಯ ದಂಗೆಗಳನ್ನು ಅಡಗಿಸುವ, ದರೋಡೆಕೋರರನ್ನು ಹತ್ತಿಕ್ಕುವ, ಕಳ್ಳರನ್ನು ಮತ್ತು ವಂಚಕರನ್ನು ಶಿಕ್ಷುವ ಮತ್ತು ತೆರಿಗೆ ಕೊಡದವರನ್ನು ದಂಡಿಸುವ ಅಧಿಕಾರ ಹೊಂದಿದ್ದನು.

4. ಪರಗಣಗಳ ಆಡಳಿತ

ಸರ್ಕಾರಗಳನ್ನು (ಜಿಲ್ಲೆಗಳನ್ನು) ಹಲವು ಪರಗಣಗಳಾಗಿ ವಿಂಗಡಿಸಲಾಗಿತ್ತು. ಪ್ರತಿಯೊಂದು ಪರಗಣಗಳಲ್ಲಿ ಶೀಕ್‌ದಾರ್, ಅಮೀಲ್, ಪೋತ್‌ದಾರ್ ಮತ್ತು ಕುನಂಗೊ ಎಂಬ ಅಧಿಕಾರಿಗಳಿದ್ದರು. ಶೀಕ್‌ದಾರ್ ಪರಗಣಗಳ ಮುಖ್ಯ ಆಡಳಿತಾ ಧಿಕಾರಿಯಾಗಿದ್ದು, ಸಾಮಾನ್ಯ ಆಡಳಿತವನ್ನು ನೋಡಿಕೊಳ್ಳುತ್ತಿದ್ದ. ಅಮೀಲನ ಮುಖ್ಯ ಕೆಲಸ ಕಂದಾಯ ನಿಗದಿ ಮತ್ತು ವಸೂಲಿ. ಪೋತ್‌ದಾರನು ಪರಗಣದ ಖಜಾನೆ ಅಧಿಕಾರಿ, ಕುನಂಗೊ ಕಂದಾಯ ವಸೂಲಿ ಬಗ್ಗೆ ದಾಖಲೆಗಳನ್ನು ಇಡುತ್ತಿದ್ದನು.

5. ನಗರಾಡಳಿತ

ನಗರದ ಮುಖ್ಯ ಆಡಳಿತಗಾರ ಕೊತ್ವಾಲ್, ಈತ ಕೇಂದ್ರದಿಂದ ನೇಮಿಸಲ್ಪಟ್ಟ ರಕ್ಷಣಾಧಿಕಾರಿ. ಇವನ ಮುಖ್ಯ ಕರ್ತವ್ಯಗಳೆಂದರೆ:

  1. ನಗರದ ರಕ್ಷಣೆ.
  2. ಮಾರುಕಟ್ಟೆ ನಿಯಂತ್ರಣ
  3. ಉತ್ತರಾಧಿಕಾರಿಗಳಿಲ್ಲದ ಆಸ್ತಿ ರಕ್ಷಣೆ ಮತ್ತು ವಿಲೆವಾರಿ.
  4. ದುಷ್ಕರ್ಮಿಗಳ ಮೇಲೆ ಸದಾ ಗಮನವಿಡುವುದು ಮತ್ತು ಅಪರಾಧಗಳನ್ನು ತಡೆಗಟ್ಟುವುದು.
  5. ಸಮಾಜದಲ್ಲಿನ ಅನೈತಿಕ ಚಟುವಟಿಕೆಗಳನ್ನು ನಿಯಂತ್ರಿಸುವುದು.
  6. ಸಮಾಧಿ ಸ್ಥಳಗಳ ಮತ್ತು ಕಸಾಯಿಖಾನೆಗಳ ನಿಯಂತ್ರಣ.

ಇದಕ್ಕಾಗಿ ಕೊತ್ವಾಲ ರಕ್ಷಣಾದಳವನ್ನು ಹೊಂದಿರಬೇಕಾಗಿತ್ತು. ನಗರವನ್ನು ಅನೇಕ ವಿಭಾಗಗಳಾಗಿ ವಿಂಗಡಿಸಿ, ಅವುಗಳಿಗೆ ನಂಬಿಕೆಗೆ ಅರ್ಹರಾದ ಅಧಿಕಾರಿಗಳನ್ನು ನೇಮಿಸುತ್ತಿದ್ದ. ಈ ಅಧಿಕಾರಿಗಳು ಅಲ್ಲಿನ ಎಲ್ಲಾ ನಿವಾಸಿಗಳ ವಿವರಗಳನ್ನು ಇಟ್ಟುಕೊಳ್ಳಬೇಕಾಗಿತ್ತು. ಗೂಢಾಚಾರರ ಮೂಲಕ ಸುದ್ದಿಸಮಾಚಾರವನ್ನು ಸಂಗ್ರಹಿಸಿ, ಮುನ್ನೆಚ್ಚರಿಕೆ ಕಾರ್ಯಗಳನ್ನು ಕೈಗೊಳ್ಳಬೇಕಾಗಿತ್ತು. ವೇಶ್ಯೆಯರ, ನೃತ್ಯಗಾರ್ತಿಯರ, ಮಾದಕಪಾನೀಯಗಳ ವ್ಯಾಪಾರಿಗಳ ಮತ್ತು ಸೋಮಾರಿಗಳ ಮೇಲೆ ಗಮನಹರಿಸಬೇಕಾಗಿತ್ತು. ದೊಡ್ಡ ನಗರಗಳನ್ನು ಹಲವು ಮೊಹಲ್ಲಾಗಳಾಗಿ ವಿಂಗಡಿಸಲಾಗಿತ್ತು. ಕುಶಲಕರ್ಮಿಗಳು ತಮ್ಮದೇ ಆದ ಸಂಘಸಂಸ್ಥೆಗಳನ್ನು ಹೊಂದಿದ್ದರು. ಪ್ರತಿಯೊಂದು ನಗರದ ಸುತ್ತ ಸಣ್ಣ ಕೋಟೆ ಇರುತ್ತಿತ್ತು. ಸರ್ಕಾರ ಆಂತರಿಕ ಭದ್ರತೆ, ರಸ್ತೆಗಳ ಸ್ವಚ್ಛತೆ, ಮಾರುಕಟ್ಟೆಗಳ ನಿಯಂತ್ರಣ ಮತ್ತು ತೆರಿಗೆಯ ವಸೂಲಿ ಕಾರ್ಯಗಳಿಗೆ ತನ್ನ ಕಾರ್ಯವನ್ನು ಸೀಮಿತಗೊಳಿಸಿತ್ತು. ಬೀದಿ ದೀಪಗಳ ವ್ಯವಸ್ಥೆ, ನೀರು ಸರಬರಾಜು, ಆರೋಗ್ಯ, ಶಿಕ್ಷಣ ಮುಂತಾದವುಗಳು ಜನತೆಗೆ ಬಿಟ್ಟ ವಿಷಯಗಳಾಗಿದ್ದವು.

6. ಗ್ರಾಮಾಡಳಿತ

ಡಾ.ಪಿ.ಶರಣ್ ಪ್ರಕಾರ ಮೊಗಲ್ ಸಾಮ್ರಾಟರು ಗ್ರಾಮಗಳ ಆಡಳಿತಕ್ಕೆ ಹೆಚ್ಚು ಗಮನ ನೀಡಿದರು. ಮತ್ತು ಹಳ್ಳಿಯ ಜನರ ಸಮಸ್ಯೆಗಳ ನಿವಾರಣೆಗೆ ಕ್ರಮಕೈಗೊಂಡಿದ್ದರು. ಗ್ರಾಮಾಧಿಕಾರಿಗಳಲ್ಲಿ ಮುಖದ್ದಂ, ಪಟ್ಟಾರಿ ಮತ್ತು ಚೌಕಿದಾರ ಪ್ರಮುಖರು, ಗ್ರಾಮಗಳ ಆಡಳಿತ ಪಂಚಾಯಿತಿಗಳ ಮೂಲಕ ನಡೆಯುತ್ತಿತ್ತು. ಕುಟುಂಬಗಳ ಪ್ರಮುಖರು ಪಂಚಾಯಿತಿಯ ಸದಸ್ಯರಾಗಿರುತ್ತಿದ್ದರು. ಅವರಿಗೆ ಗ್ರಾಮದ ಆಡಳಿತದ ಬಗ್ಗೆ, ನ್ಯಾಯ ವಿತರಣೆ ಬಗ್ಗೆ, ಕಂದಾಯದ ವಸೂಲಾತಿಯ ಬಗ್ಗೆ, ಗ್ರಾಮದ ನೈರ್ಮಲ್ಯ, ಶಾಂತಿ, ಶಿಸ್ತು, ರಕ್ಷಣೆಯ ಬಗ್ಗೆ ನಿರ್ಣಯ ಮಾಡುವ ಅಧಿಕಾರವಿತ್ತು. ಗ್ರಾಮದ ಮುಖ್ಯಸ್ಥನಾಗಿದ್ದ ಮುಖದ್ದಂ ಪಂಚಾಯಿತಿಯ ಅಧ್ಯಕ್ಷನೂ ಆಗಿದ್ದನು. ಕೇಂದ್ರ ಸರ್ಕಾರ ಗ್ರಾಮದ ಆಡಳಿತದಲ್ಲಿ ಹೆಚ್ಚಾಗಿ ಹಸ್ತಕ್ಷೇಪಮಾಡುವಂತಿರಲಿಲ್ಲ.

ಉಪಸಂಹಾರ

ಮೊಗಲ್ ಆಡಳಿತ ವ್ಯವಸ್ಥೆ ಕೇಂದ್ರದಿಂದ ಗ್ರಾಮ ಮಟ್ಟದವರೆಗೆ ಸುವ್ಯವಸ್ಥಿತವಾಗಿತ್ತು. ಸಾಮ್ರಾಟನಿಗೆ ಅಪಾರ ಅಧಿಕಾರಗಳಿದ್ದರೂ ಮಂತ್ರಿಗಳು ಮತ್ತು ಅಧಿಕಾರಿಗಳ ಸಹಾಯದಿಂದ ಆಡಳಿತ ನಡೆಯುತ್ತಿತ್ತು. ಈ ವ್ಯವಸ್ಥೆಯ ಮೂಲಕ ಶಾಂತಿ, ಕಾನೂನು ಮತ್ತು ಕಂದಾಯ ವ್ಯವಸ್ಥೆಗಳನ್ನು ಸಮರ್ಪಕವಾಗಿ ನಿರ್ವಹಿಸಲಾಯಿತು. ಆದ್ದರಿಂದ ಮೊಗಲ್ ಆಡಳಿತ ವ್ಯವಸ್ಥೆ ಭಾರತೀಯ ಇತಿಹಾಸದಲ್ಲಿ ಪ್ರಮುಖ ಸ್ಥಾನವನ್ನು ಪಡೆದಿದೆ.

ಮೊಗಲರ ಆರ್ಥಿಕ ಮತ್ತು ಸಾಮಾಜಿಕ ಪರಿಸ್ಥಿತಿ

ಮೊಗಲರ ಆರ್ಥಿಕ ಮತ್ತು ಸಾಮಾಜಿಕ ಪರಿಸ್ಥಿತಿ

ಮೊಗಲರ ಆರ್ಥಿಕ ಸ್ಥಿತಿಗತಿ

ಬಾಬರನ ಆತ್ಮವೃತ್ತಾಂತ, ಗುಲ್‌ದನ್‌ ಬೇಗಂಳ ಹುಮಾಯೂನ್ ನಾಮ, ಅಬ್ದುಲ್‌ ಫಜಲ್‌ನ ಐನ್-ಎ-ಆಕ್ಬರಿ ಮೊದಲಾದ ವಿದೇಶಿ ಪ್ರವಾಸಿಗರ ಬರವಣಿಗೆಗಳು ಮತ್ತು ಸಮಕಾಲೀನ ಸಾಹಿತ್ಯ ಕೃತಿಗಳು -ಇವುಗಳಿಂದ ಮೊಗಲರ ಕಾಲದ ಆರ್ಥಿಕ ಪರಿಸ್ಥಿತಿಯ ಮಾಹಿತಿ ದೊರೆಯುತ್ತದೆ.

1. ಕೃಷಿ ಕ್ಷೇತ್ರ: ಮೊಗಲರ ಕಾಲದಲ್ಲಿ ವ್ಯವಸಾಯ ಮುಖ್ಯ ಉದ್ಯೋಗವಾಗಿತ್ತು. ಈ ಕಾಲದಲ್ಲಿಯೂ ಪ್ರಾಚೀನ ಕಾಲದ ಕೃಷಿ ಉಪಕರಣ, ವಿಧಾನಗಳನ್ನೇ ಬಳಸುತ್ತಿದ್ದರು. ಅಕ್ಬರ್ ವ್ಯವಸಾಯಕ್ಕೆ ಹೆಚ್ಚಿನ ಗಮನ ನೀಡಿದನು. ಶೇರ್‌ಶಹನು ಕೃಷಿಕ್ಷೇತ್ರದಲ್ಲಿ ಮಾಡಿದ್ದ ಹಲವು ಕಾರ್ಯಗಳನ್ನು ಆಕ್ಬರನು ಅನುಸರಿಸಿದನು. ವ್ಯವಸಾಯಗಾರರು ಬೇಸಾಯಕ್ಕೊಳಪಟ್ಟ ಜಮೀನಿಗೆ ಮಾತ್ರ ಕಂದಾಯ ಕೊಡಬೇಕಾಗಿತ್ತು. ಅಕ್ಬರನ ಕಾಲದಲ್ಲಿ ರೈತವಾರಿ ಪದ್ಧತಿಯಿದ್ದದರಿಂದ ರೈತರು ಮತ್ತು ಸರ್ಕಾರದ ನಡುವೆ ನೇರ ಸಂಬಂಧವಿತ್ತು. ಷಹಜಹಾನನ ಮತ್ತು ಔರಂಗಜೇಬರ ಅಳ್ವಿಕೆಗಳಲ್ಲಿ ಗೇಣಿದಾರರು ಅಧಿಕಾರಿಗಳ ಶೋಷಣೆಗೆ ಒಳಗಾಗಿದ್ದರು.

ರೈತರು ಗೋಧಿ, ಬಾರ್ಲಿ, ಬೇಳೆಕಾಳುಗಳು, ಎಣ್ಣೆಕಾಳುಗಳು, ಕಬ್ಬು, ನೀಲಿ ಮತ್ತು ಗಸಗಸೆಗಳನ್ನು ಬೆಳೆಯುತ್ತಿದ್ದರು. ಕೆಲವೊಂದು ಬೆಳೆಗಳು ಕೆಲವು ಪ್ರದೇಶಗಳಿಗೆ ಸೀಮಿತವಾಗಿದ್ದವು. ಕಬ್ಬನ್ನು ಉತ್ತರ ಪ್ರದೇಶ, ಬಿಹಾರ ಮತ್ತು ಬಂಗಾಳಗಳಲ್ಲಿ, ನೀಲಿಯನ್ನು ಉತ್ತರ ಮತ್ತು ದಕ್ಷಿಣ ಭಾರತಗಳಲ್ಲಿ, ಹತ್ತಿಯನ್ನು ಭಾರತದ ಹಲವೆಡೆ ಬೆಳೆಯುತ್ತಿದ್ದರು. ಕೃತಕ ನೀರಾವರಿ ಬಳಕೆಯಲ್ಲಿರಲಿಲ್ಲ. ಕೆರೆ ಮತ್ತು ಭಾವಿಗಳಿಂದ ನೀರಾವರಿ ಮಾಡಲಾಗುತ್ತಿತ್ತು. ಆದಾಗ್ಯೂ ದೇಶವು ಕೃಷಿ ಉತ್ಪಾದನೆಯಲ್ಲಿ ಸ್ವಯಂಪೂರ್ಣವಾಗಿತ್ತು.

2. ಕೈಗಾರಿಕೆ : ಮೊಗಲರ ಕಾಲದಲ್ಲಿ ಕೃಷಿಯಲ್ಲದೆ ಉತ್ಪಾದನೆಯ ವಸ್ತುಗಳಲ್ಲಿ ಮೀನು, ಲೋಹಗಳು, ಉಪ್ಪು, ಅಫೀಮು ಮತ್ತು ಮದ್ಯ ಪ್ರಮುಖವಾಗಿದ್ದವು. ಚಿನ್ನವು ಕುಮಾವ್ ಗುಡ್ಡಗಳಲ್ಲಿ ಮತ್ತು ಪಂಜಾಬಿನ ನದಿ ಪಾತ್ರಗಳಲ್ಲಿ ದೊರೆಯುತ್ತಿತ್ತು. ಕಬ್ಬಿಣ ಹಲವು ಕಡೆಗಳಲ್ಲಿ ದೊರೆಯುತ್ತಿದ್ದು, ಸಲಕರಣೆಗಳನ್ನು ಮಾಡಲು, ಶಸ್ತ್ರಾಸ್ತ್ರಗಳನ್ನು ಮಾಡಲು ಉಪಯೋಗಿಸುತ್ತಿದ್ದರು. ರಾಜಸ್ಥಾನ ಮತ್ತು ಮದ್ಯಭಾರತದಲ್ಲಿ ತಾಮ್ರದ ಗಣಿಗಳಿದ್ದವು. ಫತೇಪುರಸಿಕ್ರಿಯಲ್ಲಿ ಕೆಂಪುಶಿಲೆಯು, ಥಟ್ಟಾದಲ್ಲಿ ಹಳದಿ ಶಿಲೆಯು, ಜಯಪುರ ಮತ್ತು ಜೋಧ್‌ಪುರಗಳಲ್ಲಿ ಅಮೃತಶಿಲೆಯು ಸಿಗುತ್ತಿತ್ತು. ವಜ್ರಗಳು ಗೋಲ್ಕಂಡ ಮತ್ತು ಛೋಟಾನಾಗಪುರಗಳಲ್ಲಿ ಸಿಗುತ್ತಿತ್ತು. ಉಪ್ಪು, ಸಂಬಾರ್ ಸರೋವರ, ಪಂಜಾಬ್, ಗುಜರಾತ್, ಸಿಂದ್ ಪ್ರದೇಶದ ಸರೋವರ ಮತ್ತು ಸಮುದ್ರ ತೀರಗಳಿಂದ ದೊರೆಯುತ್ತಿತ್ತು. ಬಿಹಾರ ಮತ್ತು ಮಾಳ್ವಗಳಲ್ಲಿ ಆಫೀಮು ಹೆಚ್ಚಾಗಿ ಬೆಳೆಯುತ್ತಿದ್ದರು. ಮದ್ಯವನ್ನು ಹಲವೆಡೆ ತಯಾರಿಸುತ್ತಿದ್ದರು. ಮದ್ದುಗುಂಡುಗಳ ಬಳಕೆಗೆ ಪೆಟ್ಲುಪ್ಪನ್ನು ತಯಾರಿಸಿ ಬಳಸುತ್ತಿದ್ದರು. ಪ್ರತಿಯೊಂದು ಹಳ್ಳಿಯಲ್ಲಿಯೂ ಹತ್ತಿ ಬಟ್ಟೆಯ ಕೈಗಾರಿಕೆ ಬೆಳೆದಿತ್ತು. ಆಗ್ರ, ಬನಾರಸ್, ಜುನಾಪುರ, ಪಾಟ್ನ, ಬಾನ್ಪುರ, ಲಕ್ನೋ, ಖೈರಾಬಾದ್, ಬೀದರ್, ಬಂಗಾಳ, ಬಿಹಾರ, ಮಾಳ್ವಗಳ ಅನೇಕ ಪ್ರದೇಶಗಳು ಬಟ್ಟೆ ತಯಾರಿಕೆಯ ಪ್ರಮುಖ ಕೇಂದ್ರಗಳಾಗಿದ್ದವು. ಈ ಕೈಗಾರಿಕೆಯ ಜೊತೆಗೆ ಬಣ್ಣ ಹಾಕುವ ಕೈಗಾರಿಕೆ ಸಹ ಉಪಕೈಗಾರಿಕೆಯಾಗಿ ಬೆಳೆದಿತ್ತು. ಬಂಗಾರದ ಜರಿಯುಳ್ಳ ಬಟ್ಟೆಗಳನ್ನು ಅಯೋಧ್ಯೆ ಮತ್ತು ಖಾನ್ದೇಶಗಳಲ್ಲಿ ತಯಾರಿಸುತ್ತಿದ್ದರು. ಡಾಕಾವೂ ಸೇರಿದಂತೆ ಬಂಗಾಳದ ಹಲವು ನಗರಗಳು ರೇಷ್ಮೆ ವಸ್ತ್ರಗಳಿಗೆ, ನಯವಾದ ಮಸ್ಲಿನ್ ಬಟ್ಟೆಗೆ ಮತ್ತು ಚಾಪೆಗಳಿಗೆ ಪ್ರಸಿದ್ಧವಾಗಿದ್ದವು. ಮುಲ್ತಾನ್‌ನಲ್ಲಿ ಸುಂದರವಾದ ಪುಷ್ಪಸದೃಶ ರತ್ನಗಂಬಳಿಗಳನ್ನು ಮತ್ತು ಕಾಶ್ಮೀರದಲ್ಲಿ ಉಣ್ಣೆಯ ರತ್ನಗಂಬಳಿಗಳನ್ನು ಮತ್ತು ಇತರ ರೇಷ್ಮೆ ಮತ್ತು ಉಣ್ಣೆವಸ್ತುಗಳನ್ನು ತಯಾರಿಸುತ್ತಿದ್ದರು. ಜಹಾಂಗೀರನು ಅಮೃತಸರದಲ್ಲಿ ರತ್ನಗಂಬಳಿ ಮತ್ತು ಶಾಲಿನ ಕೈಗಾರಿಕೆ ಸ್ಥಾಪಿಸಿದನು. ಯುದ್ಧಕ್ಕೆ ಮತ್ತು ರಕ್ಷಣೆಗೆ ಬೇಕಾದ ಆಯುಧಗಳನ್ನು ಪ್ರಮುಖವಾಗಿ ಪಂಜಾಬ್, ಗುಜರಾತ್ ಮತ್ತು ಸೋಮನಾಥದಲ್ಲಿ ತಯಾರಿಸುತ್ತಿದ್ದರು. ಜುನಾಪುರ ಮತ್ತು ಗುಜರಾತ್‌ನಲ್ಲಿ ಸುಗಂಧ ದ್ರವ್ಯಗಳನ್ನು, ಸಿಯೋಲ್ ಕೋಟ್, ಗಯಾ ಮತ್ತು ಕಾಶ್ಮೀರಗಳಲ್ಲಿ ಕಾಗದವನ್ನು, ಬೀದರ್‌ನಲ್ಲಿ ಬೆಳ್ಳಿ ಮತ್ತು ಬಂಗಾರದ ಅಲಂಕಾರ ವಸ್ತುಗಳನ್ನು, ಪತೇಪುರಸಿಕ್ರಿ ಮತ್ತು ಬಿರಾರ್‌ಗಳಲ್ಲಿ ಗಾಜಿನ ವಸ್ತುಗಳನ್ನು ಉತ್ಪಾದನೆ ಮಾಡಲಾಗುತಿತ್ತು. ದಕ್ಷಿಣ ಭಾರತದಲ್ಲಿ ಮುತ್ತು ಮತ್ತು ಹವಳಗಳ ಕೈಗಾರಿಕೆ ಅಭಿವೃದ್ಧಿ ಹೊಂದಿತ್ತು. ಹಲವೆಡೆ ಮರದ ಮತ್ತು ಚರ್ಮದ ವಸ್ತುಗಳನ್ನು ತಯಾರಿಸಲಾಗುತ್ತಿತ್ತು.

3. ನಾಣ್ಯಗಳು : ದೆಹಲಿಯಲ್ಲಿ ಪ್ರಧಾನ ಟಂಕಶಾಲೆ ಇತ್ತು. ಬಂಗಾಳ, ಲಾಹೋರ್, ಜಾನ್‌ಪುರ, ಅಹ್ಮದಾಬಾದ್ ಮತ್ತು ಪಾಟ್ನಗಳಲ್ಲಿ ಪ್ರಾಂತೀಯ ಟಂಕಶಾಲೆಗಳಿದ್ದವು. ಷಹಜಹಾನನ ಕಾಲದಲ್ಲಿ ಸೂರತ್‌ನಲ್ಲಿನ ಟಂಕಶಾಲೆ ಮುಖ್ಯವಾಗಿತ್ತು. ಮೊಗಲರ ಕಾಲದ ನಾಣ್ಯಗಳಲ್ಲಿ ಬೆಳ್ಳಿಯ ರೂಪಾಯಿಯ ತೂಕ 175 ಗ್ರೇನ್‌ಗಳಾಗಿತ್ತು. ಅಕ್ಬರನ ಮತ್ತು ಆತನ ತರುವಾಯದ ದೊರೆಗಳ ಕಾಲದಲ್ಲಿ ಮೊಗಲ್ ಸಾಮ್ರಾಜ್ಯದ ವಾಣಿಜ್ಯ ವ್ಯವಹಾರಗಳೆಲ್ಲ ವೃತ್ತಾಕಾರದ ಚಿನ್ನದ ಮೊಹರಗಳು, ರೂಪಾಯಿಗಳು ಮತ್ತು ದಾಮುಗಳಲ್ಲಿ (ತಾಮ್ರದ) ನಡೆಯುತ್ತಿದ್ದವು.

4. ವ್ಯಾಪಾರ : ಮೊಗಲರ ಕಾಲದಲ್ಲಿ ಏಷ್ಯಾ ಮತ್ತು ಯೂರೋಪ್ ರಾಷ್ಟ್ರಗಳೊಡನೆ ವ್ಯಾಪಾರ ಅತ್ಯಂತ ಚಟುವಟಿಕೆಯಿಂದ ನಡೆಯುತ್ತಿತ್ತು. ಶ್ರೀಲಂಕಾ, ಬರ್ಮ, ಚೈನಾ, ಜಪಾನ್, ಇಂಡೋನೇಷಿಯಾ, ನೇಪಾಳ, ಪರ್ಷಿಯಾ, ಮದ್ಯಏಷ್ಯಾ, ಆರೇಬಿಯಾ, ಕೆಂಪುಸಮುದ್ರದ ತೀರದ ಬಂದರುಗಳು, ಪೂರ್ವ ಆಫ್ರಿಕಾದೊಡನೆ ವ್ಯಾಪಾರ ವಹಿವಾಟು ನಡೆಯುತ್ತಿತ್ತು.

ಭಾರತದ ಮುಖ್ಯ ರಫ್ತುವಸ್ತುಗಳೆಂದರೆ ಹತ್ತಿ ಬಟ್ಟೆಗಳು, ಮೆಣಸು, ನೀಲಿ, ಅಫೀಮು, ಪೆಟ್ಲುಪ್ಪು, ಸಾಂಬಾರ ಪದಾರ್ಥಗಳು, ಸಕ್ಕರೆ, ಉಪ್ಪು, ಮಣಿಗಳು, ಅರಿಶಿಣ, ಅರಗು, ವಿವಿಧ ಬಗೆಯ ಔಷಧಿಗಳು ಮತ್ತು ಇತರ ಸಾಮಗ್ರಿಗಳು, ಮುಖ್ಯವಾದ ಅಮದು ವಸ್ತುಗಳೆಂದರೆ- ಬೆಳ್ಳಿ, ಬಂಗಾರ, ಕುದುರೆಗಳು, ಲೋಹಗಳು, ದಂತ, ಹವಳ, ಶಿಲಾರಾಳ, ವೈಡೂರ್ಯ, ರೇಷ್ಮೆ ವಸ್ತ್ರಗಳು, ವೆಲ್ವೆಟ್, ಜರತಾರಿ, ಪಿಂಗಾಣಿ ವಸ್ತುಗಳು, ಆಫ್ರಿಕಾದ ಗುಲಾಮರು ಮತ್ತು ಯೂರೋಪಿನ ಮದ್ಯಪಾನೀಯಗಳು. ದೇಶಿಯ ಮತ್ತು ವಿದೇಶಿಯ ವ್ಯಾಪಾರದ ಪ್ರಮುಖ ಕೇಂದ್ರಗಳೆಂದರೆ ಸೂರತ್, ಬ್ರೋಚ್, ಬೇಸ್ಸೀನ್, ಚೌಲ್, ಗೋವಾ, ಕಲ್ಲಿಕೋಟೆ, ಕೊಚ್ಚಿನ್, ನಾಗಪಟ್ಟಣ, ಮಚಲಿಪಟ್ಟಣ, ಸೌತ್‌ಗೌವ್, ಪಾಟ್ನ, ಆಗ್ರಾ, ಕ್ಯಾಂಬೆ, ಮುಲ್ತಾನ್ ಮತ್ತು ಅಹ್ಮದಾಬಾದ್.

ಸಾಮಾಜಿಕ ಪರಿಸ್ಥಿತಿ

ಮೊಗಲ್ ಕಾಲದಲ್ಲಿನ ಸಮಾಜವು ಪ್ಯೂಡಲ್ ತಳಹದಿಯ ಮೇಲೆ ಸಂಘಟಿತವಾಗಿತ್ತು. ಚಕ್ರವರ್ತಿಯು ಸಮಾಜದಲ್ಲಿ ಅತ್ಯಂತ ಬಲಾಢ್ಯವಾದ ಮತ್ತು ಗೌರವಾನ್ವಿತ ವ್ಯಕ್ತಿಯಾಗಿದ್ದನು. ಸಮಾಜ ವ್ಯವಸ್ಥೆಯ ತುತ್ತ ತುದಿಯಲ್ಲಿದ್ದ ಮೊಗಲ್ ಬಾದಶಹನ ಕೆಳಗೆ ಆತನ ಸರದಾರರು ಇದ್ದರು.

ಶ್ರೀಮಂತರು ವೈಭವದ ಜೀವನವನ್ನು ನಡೆಸಿದರೆ, ಸಾಮಾನ್ಯರು ಕಡುಬಡತನ ಅನುಭವಿಸುತ್ತಿದ್ದರು.

1. ಉಡುಪು : ಕಡಿಮೆ ಬಟ್ಟೆಯನ್ನು ಧರಿಸುವುದು ದಕ್ಷಿಣದಲ್ಲಿ ರೂಢಿಯಲ್ಲಿತ್ತು. ಇದಕ್ಕೆ ಹವಾಮಾನವೇ ಕಾರಣ. ಉತ್ತರ ಭಾರತದಲ್ಲಿ ಕೆಲವೊಂದು ಋತುಗಳಲ್ಲಿ ಮಾತ್ರ ಜನತೆ ಮೈತುಂಬ ಬಟ್ಟೆ ಧರಿಸುತ್ತಿದ್ದರು. ಉಳಿದಂತೆ ಹೆಚ್ಚು ಬಟ್ಟೆ ಧರಿಸುತ್ತಿರಲಿಲ್ಲ. ಕೆಳವರ್ಗದ ಜನರಿಗೆ ಸಾಕಷ್ಟು ಬಟ್ಟೆ ಇರಲಿಲ್ಲ. ಅವರು ಉಣ್ಣೆ ಬಟ್ಟೆಗಳನ್ನು ಧರಿಸುವುದಂತೂ ಅಸಾಧ್ಯವಾಗಿತ್ತು.

2. ಆಹಾರ : ಆಹಾರಕ್ಕೆ ಸಂಬಂಧಿಸಿದಂತೆ ಕಾಳು ಮತ್ತು ಬೇಳೆಗಳನ್ನು ಜನರು ದಿನನಿತ್ಯದ ಆಹಾರವನ್ನಾಗಿ ಉಪಯೋಗಿಸುತ್ತಿದ್ದರು. ಬಂಗಾಳ ಮತ್ತು ಕರಾವಳಿ ಪ್ರದೇಶದಲ್ಲಿ ಈ ಆಹಾರದ ಜೊತೆಗೆ ಮೀನನ್ನು ಉಪಯೋಗಿಸುತ್ತಿದ್ದರೆ, ದಕ್ಷಿಣ ಭಾರತದಲ್ಲಿ ಮಾಂಸವನ್ನು ಉಪಯೋಗಿಸುತ್ತಿದ್ದರು. ಉತ್ತರ ಭಾರತದಲ್ಲಿ ಗೋಧಿ ಹೆಚ್ಚಾಗಿ ಬಳಸುತ್ತಿದ್ದರು. ಬೆಣ್ಣೆ ಮತ್ತು ಎಣ್ಣೆ ಸುಲಭದರದಲ್ಲಿ ದೊರೆಯುತ್ತಿದ್ದರಿಂದ ಸಾಮಾನ್ಯ ಜನತೆ ಹೆಚ್ಚಾಗಿ ಉಪಯೋಗಿಸುತ್ತಿದ್ದರು. ಸಕ್ಕರೆ ಮತ್ತು ಉಪ್ಪು ದುಬಾರಿಯಾಗಿದ್ದವು.

3. ಆಭರಣಗಳು ಮತ್ತು ಮನರಂಜನೆ : ಸರದಾರರು ಬೆಲೆಯುಳ್ಳ ಪೋಷಾಕನ್ನು ಮತ್ತು ರತ್ನಾಭರಣಗಳನ್ನು ಧರಿಸುತ್ತಿದ್ದರು. ಸರದಾರರು ವಿವಿಧ ಪ್ರಕಾರಗಳ ಕ್ರೀಡೆ ಮತ್ತು ಮನರಂಜನಾ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು. ಜೂಜುಗಾರಿಕೆ ರೂಡಿಯಲ್ಲಿತ್ತು.

4. ಮೂಢನಂಬಿಕೆಗಳು : ಹಿಂದೂ ಸಮಾಜದಲ್ಲಿ ಸತಿ ಪದ್ಧತಿ, ಬಾಲ್ಯ ವಿವಾಹ, ಶಿಶು ಹತ್ಯೆ ಮತ್ತು ವರದಕ್ಷಿಣೆ ಪದ್ಧತಿಗಳು ರೂಡಿಯಲ್ಲಿದ್ದವು. ಅಕ್ಬರನು ಬಲಾತ್ಕಾರದ ಸತಿಪದ್ದತಿಯನ್ನು ನಿಷೇಧಿಸಲು ಯತ್ನಿಸಿದನು.

5. ಧಾರ್ಮಿಕ ವಿಧಿ ವಿಧಾನಗಳು : ಹಿಂದೂಗಳು ಗಂಗಾನದಿಯನ್ನು ಅತ್ಯಂತ ಪವಿತ್ರವೆಂದು ಭಾವಿಸಿದ್ದರು. ಈ ನದಿಯಲ್ಲಿ ಸ್ನಾನ ಮಾಡುವುದು ಪುಣ್ಯಕರವೆಂಬ ಭಾವನೆಯಿತ್ತು. ಹಿಂದೂಗಳು ಮತ್ತು ಮುಸಲ್ಮಾನರು ಜ್ಯೋತಿಷ್ಯದಲ್ಲಿ ನಂಬಿಕೆಯುಳ್ಳವರಾಗಿದ್ದರು. ಮುಸಲ್ಮಾನರು ಅನೇಕ ಪೀರರನ್ನು ಪೂಜಿಸುತ್ತಿದ್ದರು. ಈದ್ ಹಬ್ಬವನ್ನು ಉತ್ಸಾಹದಿಂದ ಆಚರಿಸುತ್ತಿದ್ದರು. ಶಿಯಾ ಮತ್ತು ಸುನ್ನಿ ಪಂಥಗಳ ನಡುವೆ ತೀವ್ರವಾದ ದ್ವೇಷವಿತ್ತು.

6. ಸಾಮಾನ್ಯ ವರ್ಗ : ಇವರು ಅಧಿಕವಾಗಿದ್ದು, ರೈತರು, ಕೃಷಿಕಾರ್ಮಿಕರು, ಕುಶಲಕರ್ಮಿಗಳು, ಸಣ್ಣ ವ್ಯಾಪಾರಿಗಳು, ಸೇವಕರು, ಗುಲಾಮರು ಇನ್ನೂ ಮುಂತಾದ ಜನರಿದ್ದರು. ಮೇಲಿನ ವರ್ಗದವರಿಗೆ ಹೋಲಿಸಿದಲ್ಲಿ ಇವರ ಜೀವನ ಕಷ್ಟಗಳಿಂದ ಕೂಡಿತ್ತು. ಉಡಲು ಬಟ್ಟೆ ಇರಲಿಲ್ಲ. ಉಣ್ಣೆಯ ಬಟ್ಟೆ ಮತ್ತು ಪಾದರಕ್ಷೆಗಳು ಇವರಿಗೆ ಎಟುಕುವಂತಿರಲಿಲ್ಲ. ಬರಗಾಲ ಬಂದಾಗಲಂತೂ ಇವರ ಜೀವನ ಇನ್ನೂ ತುಂಬಾ ಕಷ್ಟವಾಗುತ್ತಿತ್ತು.

ಉಪಸಂಹಾರ

ಮೊಗಲ್ ಕಾಲದಲ್ಲಿ ಸಮಾಜ ಮತ್ತು ಆರ್ಥಿಕ ವ್ಯವಸ್ಥೆ ಸಮೃದ್ಧವಾಗಿದ್ದರೂ ವರ್ಗ ಭೇದ ಸ್ಪಷ್ಟವಾಗಿತ್ತು. ಕೃಷಿ, ಕೈಗಾರಿಕೆ ಮತ್ತು ವ್ಯಾಪಾರಗಳು ದೇಶದ ಆರ್ಥಿಕ ಅಭಿವೃದ್ಧಿಗೆ ಪ್ರಮುಖ ಪಾತ್ರವಹಿಸಿದ್ದವು. ಆದರೆ ಸಾಮಾನ್ಯ ಜನರ ಜೀವನದಲ್ಲಿ ಕಷ್ಟಗಳು ಮತ್ತು ಅಸಮಾನತೆಗಳೂ ಕಂಡುಬಂದವು. ಈ ಕಾಲದ ಸಾಮಾಜಿಕ ಮತ್ತು ಆರ್ಥಿಕ ವ್ಯವಸ್ಥೆ ಭಾರತೀಯ ಇತಿಹಾಸದಲ್ಲಿ ಮಹತ್ವದ ಅಧ್ಯಾಯವಾಗಿದೆ.

ಶಿವಾಜಿಯ ದಿಗ್ವಿಜಯಗಳು

ಶಿವಾಜಿಯ ದಿಗ್ವಿಜಯಗಳು

ಭಾರತೀಯ ಇತಿಹಾಸದಲ್ಲಿ ಮರಾಠ ಸಾಮ್ರಾಜ್ಯವನ್ನು ಸ್ಥಾಪಿಸಿದ ಮಹಾನ್ ನಾಯಕರೆಂದರೆ ಛತ್ರಪತಿ ಶಿವಾಜಿ ಮಹಾರಾಜ. ಬಾಲ್ಯದಿಂದಲೇ ಧೈರ್ಯ, ದೇಶಭಕ್ತಿ ಮತ್ತು ಯುದ್ಧತಂತ್ರಗಳಲ್ಲಿ ಅವರು ಅಸಾಧಾರಣ ಸಾಮರ್ಥ್ಯವನ್ನು ತೋರಿಸಿದರು. ತೋರಣಗಡದಿಂದ ಆರಂಭವಾದ ಅವರ ವಿಜಯಯಾತ್ರೆ ಅನೇಕ ಕೋಟೆಗಳು ಮತ್ತು ಪ್ರದೇಶಗಳನ್ನು ಜಯಿಸುವ ಮೂಲಕ ಮುಂದುವರಿಯಿತು. ಅವರ ಶೌರ್ಯ ಮತ್ತು ತಂತ್ರಗಳು ಅವರನ್ನು ಭಾರತದ ಮಹಾನ್ ರಾಜರಲ್ಲಿ ಒಬ್ಬರನ್ನಾಗಿ ಮಾಡಿವೆ.

1. ತೋರಂಗಾಡ್ ಆಕ್ರಮಣ (1646) : ಸುಲ್ತಾನರ ಅಂತಃಕಲಹದಿಂದಾಗಿ ಬಿಜಾಪುರ ರಾಜ್ಯವು ಶಕ್ತಿಹೀನವಾಗಿತ್ತು. ಈ ಅವಕಾಶವನ್ನು ಬಳಸಿಕೊಂಡ ಶಿವಾಜಿ ಬಿಜಾಪುರದ ವಿರುದ್ಧ ಯುದ್ಧ ಘೋಷಿಸಿ ತೋರಣದುರ್ಗವನ್ನು ವಶಪಡಿಸಿಕೊಂಡರು. ನಂತರ ಅಲ್ಲಿ ಕೋಟೆಯನ್ನು ನಿರ್ಮಿಸಿ ಅದಕ್ಕೆ ʻರಾಯಗಡʼ ಎಂದು ಹೆಸರಿಟ್ಟರು. ಇದರ ನಂತರ ಶಿವಾಜಿ ಚಕನ್ ಮತ್ತು ಕೊಂಕಣ ಕೋಟೆಗಳನ್ನು ವಶಪಡಿಸಿಕೊಂಡರು. ಕಲ್ಯಾಣದ ಮೇಲೆ ದಾಳಿ ಮಾಡಿ ಸುಲಿಗೆ ಮಾಡಿದ್ದರು.

2. ಜಾವಳಿ ಆಕ್ರಮಣ (1656): ಸತಾರಾ ಜಿಲ್ಲೆಯ ಜಾವಳಿಯನ್ನು ಮರಾಠ ದೊರೆ ಚಂದ್ರರಾವ್ ಮೋರೆ ಆಳುತ್ತಿದ್ದ. ದಕ್ಷಿಣದಲ್ಲಿ ಶಿವಾಜಿಯ ಸಾಮ್ರಾಜ್ಯದ ವಿಸ್ತರಣೆಯನ್ನು ಅವರು ತಡೆದರು. ಆಗ ಶಿವಾಜಿ ಜಾವಳಿಯ ಮೇಲೆ ದಾಳಿ ಮಾಡಿ ಚಂದ್ರರಾವ್ ಮೋರೆಯನ್ನು ಸೋಲಿಸಿ ಕೊಂದನು. ನಂತರ ಸಾ. ಷ. 1656 ರಲ್ಲಿ ಜಾವಳಿ ಶಿವಾಜಿಯ ಆಳ್ವಿಕೆಗೆ ಒಳಪಟ್ಟಿತು.

3. ಮೊಘಲರೊಂದಿಗಿನ ಸಂಘರ್ಷ (1657): ಔರಂಗಜೇಬನು ದಕ್ಷಿಣ ಭಾರತದ ರಾಜ್ಯಪಾಲನಾಗಿದ್ದಾಗ, ಬಿಜಾಪುರದ ಸುಲ್ತಾನನ ವಿರುದ್ಧ ದಂಡಯಾತ್ರೆಯನ್ನು ಕೈಗೊಂಡನು. ಈ ಅವಕಾಶವನ್ನು ಬಳಸಿಕೊಂಡ ಶಿವಾಜಿ ಮೊಘಲರ ಅಧೀನ ಪ್ರದೇಶವಾಗಿದ್ದ ಜುನ್ನಾರ್ ಮತ್ತು ಅಹಮದ್ ನಗರಗಳನ್ನು ಮುತ್ತಿಗೆ ಹಾಕಿದನು. ಇದರಿಂದ ಹತಾಶನಾದ ಔರಂಗಜೇಬನು ಶಿವಾಜಿಯ ವಿರುದ್ಧ ಸೇನೆಯನ್ನು ಕಳುಹಿಸಿದನು. ಯುದ್ಧದಲ್ಲಿ ಶಿವಾಜಿ ಸೋತರು. ನಂತರ ಇಬ್ಬರ ನಡುವೆ ಶಾಂತಿ ಒಪ್ಪಂದವಾಯಿತು. ನಂತರ ಉತ್ತರಾಧಿಕಾರದ ವಿವಾದದಿಂದಾಗಿ ಔರಂಗಜೇಬ್ ಉತ್ತರ ಭಾರತಕ್ಕೆ ತೆರಳಿದರು. ಅವನ ಹಿಮ್ಮೆಟ್ಟುವಿಕೆಯ ನಂತರ, ಶಿವಾಜಿ ತನ್ನ ಆಕ್ರಮಣವನ್ನು ಮುಂದುವರೆಸಿದನು ಮತ್ತು ಕಲ್ಯಾಣ, ಭಿವಂಡಿ ಮತ್ತು ಮಹೋಲವನ್ನು ವಶಪಡಿಸಿಕೊಂಡನು.

4. ಶಿವಾಜಿ ಮತ್ತು ಅಫಜಲ್ ಖಾನ್ (1659) : ದಿನದಿಂದ ದಿನಕ್ಕೆ ಪ್ರವರ್ಧಮಾನಕ್ಕೆ ಬರುತ್ತಿದ್ದ ಶಿವಾಜಿಯನ್ನು ಕಂಡು ಅಫಜಲ್ ಖಾನ್ ಆಘಾತಕ್ಕೊಳಗಾದರು. 1659 ರಲ್ಲಿ ಅವನು 10,000 ಸೈನ್ಯದೊಂದಿಗೆ ಬಂದು ಪಂಡರಪುರ ಮತ್ತು ತುಳಜಾಪುರ ದೇವಾಲಯಗಳನ್ನು ಲೂಟಿ ಮಾಡಿದನು. ಇದರಿಂದ ಭಯಗೊಂಡ ಶಿವಾಜಿ ಪ್ರತಾಪಗಡ ಕೋಟೆಯಲ್ಲಿ ತಂಗಿದ್ದ. ಹಾಗಾಗಿ ಶಿವಾಜಿಯನ್ನು ಸೋಲಿಸುವುದು ಅವರಿಗೆ ಕಷ್ಟಕರವಾಗಿತ್ತು. ಅಫಜಲ್ ಖಾನನ ನೆಪವೊಡ್ಡಿ ಶಿವಾಜಿಯನ್ನು ವಂಚನೆಯಿಂದ ಹಿಡಿದು ಕೊಲ್ಲಲು ಯೋಚಿಸಿ ತನ್ನ ಪ್ರತಿನಿಧಿ ಕೃಷ್ಣಾಜಿ ಭಾಸ್ಕರ್ ರಾವ್ ಅವರನ್ನು ಭೇಟಿಯಾಗಲು ಶಿವಾಜಿಯ ಆಸ್ಥಾನಕ್ಕೆ ಕಳುಹಿಸಿದನು. ಕೃಷ್ಣಾಜಿ ಭಾಸ್ಕರ್ ರಾವ್ ಶಿವಾಜಿಗೆ ಮುಂದೆ ಏನಾಗಬಹುದು ಎಂಬುದರ ಕುರಿತು ವಿವರಿಸಿದರು. ಆಗ ಶಿವಾಜಿ ಆತ್ಮರಕ್ಷಣೆಗಾಗಿ ಬಂದು ಅಪಜಲ್ ಖಾನನನ್ನು ಭೇಟಿಯಾದ. ಗೊತ್ತುಪಡಿಸಿದ ಪ್ರದೇಶದಲ್ಲಿ ಇಬ್ಬರೂ ಭೇಟಿಯಾದಾಗ ಮತ್ತು ಒಬ್ಬರನ್ನೊಬ್ಬರು ಅಪ್ಪಿಕೊಂಡಾಗ, ಅಫಜಲ್ ಖಾನ್ ತನ್ನ ಗುಪ್ತ ಕತ್ತಿಯಿಂದ ಶಿವಾಜಿಯ ತಲೆಗೆ ಹೊಡೆದನು. ಆದರೆ ಶಿವಾಜಿ ತಲೆಗೆ ಪೇಟ ಧರಿಸಿದ್ದರಿಂದ ಏನೂ ಆಗಲಿಲ್ಲ. ಅದೇ ಸಮಯದಲ್ಲಿ ಅವನು ತನ್ನ ಗುರಾಣಿಯಲ್ಲಿ ಬಚ್ಚಿಟ್ಟಿದ್ದ ʻಹುಲಿಯುಗುರು’ (ವ್ಯಾಘ್ರನಖ) ಎಂಬ ಆಯುಧದಿಂದ ಅಫ್ಜಲ್ ಖಾನನನ್ನು ಕೊಂದನು. ಕಾಡಿನಲ್ಲಿ ಅಡಗಿದ್ದ ಶಿವಾಜಿಯ ಸೈನಿಕರು ಬಿಜಾಪುರದ ಸೈನಿಕರನ್ನು ಸೋಲಿಸಿದರು.

5. ಶಿವಾಜಿ ಮತ್ತು ಶಾಹಿಸ್ತಾ ಖಾನ್ (1663) : ಔರಂಗಜೇಬನು ಶಿವಾಜಿಯನ್ನು ನಿಗ್ರಹಿಸಲು ತನ್ನ ಮಾವ ಶಾಹಿಸ್ತಾ ಖಾನ್‌ನನ್ನು ಕಳುಹಿಸಿದನು. ಶಾಹಿಸ್ತಾ ಖಾನ್ ಭಾರೀ ಸೈನ್ಯದೊಂದಿಗೆ ಬಂದು ಕೊಂಕಣ ಮತ್ತು ಕಲ್ಯಾಣದಂತಹ ಮರಾಠ ಪ್ರದೇಶಗಳನ್ನು ವಶಪಡಿಸಿಕೊಂಡು ಪುಣೆಯಲ್ಲಿ ಬೀಡುಬಿಟ್ಟನು. ಪುಣೆಯು ಶಿವಾಜಿಯ ಜನ್ಮಸ್ಥಳವಾಗಿರುವುದರಿಂದ ಅದನ್ನು ಮೊಘಲರಿಂದ ರಕ್ಷಿಸಲು ಅವನು ಸಿದ್ಧನಾಗಿದ್ದನು. ಎರಡು ವರ್ಷಗಳ ಕಾಲ ಪುಣೆಯನ್ನು ಶಿವಾಜಿ ವಶಪಡಿಸಿಕೊಳ್ಳಲಿಲ್ಲ ಮತ್ತು ಅವನು ತುಂಬಾ ನೊಂದಿದ್ದನು. ಇದ್ದಕ್ಕಿದ್ದಂತೆ, ಒಂದು ರಾತ್ರಿ, ಶಿವಾಜಿ ಶಾಹಿಸ್ತಾ ಖಾನ್ ಬೀಡುಬಿಟ್ಟಿದ್ದ ಪುಣೆಯ ಡೇರೆಯ ಮೇಲೆ ಹಠಾತ್ ದಾಳಿ ಮಾಡಿದ. ಈ ಅನಿರೀಕ್ಷಿತ ದಾಳಿಯಿಂದ ಗೊಂದಲಕ್ಕೀಡಾದ ಶಾಹಿಸ್ತಾ ಖಾನ್ ಅಲ್ಲಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾಳೆ. ನಂತರ ಅವರ ಒಂದು ಹೆಬ್ಬೆರಳು ಕತ್ತರಿಸಲಾಯಿತು. ಶಾಹಿಸ್ತಾ ಖಾನ್ ಅಲ್ಲಿಂದ ತಪ್ಪಿಸಿಕೊಂಡು ಓಡಿ ಹೋಗಿದ್ದಾನೆ. ನಂತರ ಶಾಹಿಸ್ತಖಾನನ ಮಗ ಮತ್ತು ಅವನ ಸೈನಿಕರು ಶಿವಾಜಿಯಿಂದ ಕೊಲ್ಲಲ್ಪಟ್ಟರು.

6. ಶಿವಾಜಿ ಮತ್ತು ಜೈಸಿಂಗ್ (1665): ದಕ್ಷಿಣದಲ್ಲಿ ತನ್ನ ಪ್ರತಿಷ್ಠೆಯನ್ನು ಹೆಚ್ಚಿಸುತ್ತಿದ್ದ ಶಿವಾಜಿಯನ್ನು ಎದುರಿಸಲು ಔರಂಗಜೇಬನು ಅಂಬಾರಿನ ದಂಡನಾಯಕ ರಾಜ ಜೈಸಿಂಗ್‌ನನ್ನು ಸೈನ್ಯದೊಂದಿಗೆ ಕಳುಹಿಸಿದನು. ಮಹಾ ಕಪಟಿಯಾಗಿದ್ದ ಜೈಸಿಂಗ್ ಶಿವಾಜಿಯ ವೈರಿಗಳನ್ನು ಒಟ್ಟುಗೂಡಿಸಿ ಪುರಂದರ ಮತ್ತು ರಾಯಗಡ ಕೋಟೆಗಳಿಗೆ ಮುತ್ತಿಗೆ ಹಾಕಿ ಶಿವಾಜಿಯನ್ನು ಕೋಟೆಯೊಳಗೆ ಸಿಲುಕಿಸಿದ. ಶಿವಾಜಿಗೆ ಬಾಹ್ಯ ಬೆಂಬಲ ಸಿಗದಿದ್ದಾಗ ಅವರು ಔರಂಗಜೇಬನನ್ನು ಸಂಪರ್ಕಿಸಿದರು. ಜೂನ್ 24, 1665 ರಂದು, ಅವರು ಮೊಘಲರೊಂದಿಗೆ ಪುರಂದರಿ ಒಪ್ಪಂದಕ್ಕೆ ಸಹಿ ಹಾಕಿದರು.

7. ಆಗ್ರಾಕ್ಕೆ ಶಿವಾಜಿಯ ಭೇಟಿ (1666): ಪುರಂದರ ಒಪ್ಪಂದದ ನಂತರ, ಜೈಸಿಂಗ್ ಶಿವಾಜಿಯನ್ನು ಆಗ್ರಾಕ್ಕೆ ಬರುವಂತೆ ಮನವೊಲಿಸಿದ. ಅವರ ಮಾತನ್ನು ಪಾಲಿಸಿದ ಶಿವಾಜಿ ತನ್ನ ತಾಯಿ ಜೀಜಾಬಾಯಿಯನ್ನು ರಾಜಪ್ರತಿನಿಧಿಯಾಗಿ ನೇಮಿಸಿ ಆಗ್ರಾಕ್ಕೆ ಭೇಟಿ ನೀಡಿದರು. ಆಗ ಶಿವಾಜಿಯನ್ನು ಔರಂಗಜೇಬನು ಚೆನ್ನಾಗಿ ಸ್ವೀಕರಿಸಲಿಲ್ಲ. ಸಾಮಾನ್ಯ ಜನರು ಕುಳಿತುಕೊಳ್ಳುವ ದರ್ಬಾರ್‌ನಲ್ಲಿ ಅವರಿಗೆ ಆಸನವನ್ನು ನೀಡಲಾಯಿತು. ಶಿವಾಜಿ ಈ ಪರಿಸ್ಥಿತಿಯನ್ನು ಅವಮಾನಕರವಾಗಿ ಕಂಡರು. ಔರಂಗಜೇಬನಿಂದ ಅವಮಾನಿತನಾದ ಶಿವಾಜಿ ಮೊಘಲ್ ಸಿಂಹಾಸನಕ್ಕೆ ಬೆನ್ನು ತಿರುಗಿಸಿ ಹೊರಟುಹೋದ. ಈ ಘಟನೆಯಿಂದ ಕೋಪಗೊಂಡ ಔರಂಗಜೇಬನು ಶಿವಾಜಿಯನ್ನು ಸೆರೆಹಿಡಿದು ಬಂಧನದಲ್ಲಿರಿಸಿದನು. ನಂತರ ಶಿವಾಜಿ ವೇಷ ಧರಿಸಿ ಅಲಹಾಬಾದ್ ಮತ್ತು ಬನಾರಸ್ ಮೂಲಕ ಪ್ರಯಾಣಿಸಿದರು. ಅವರು 1666 ರಲ್ಲಿ ರಾಯಗಡವನ್ನು ತಲುಪಿದರು.

8. ಸಿಂಹಾಸನಾರೋಹಣ (1674) : ಕ್ರಿ.ಶ. 1674 ರಲ್ಲಿ, ರಾಯಗಡದಲ್ಲಿ ಶಿವಾಜಿ ಸಿಂಹಾಸನವನ್ನು ಏರಿದರು. ಆಗ ಶಿವಾಜಿ ʻಛತ್ರಪತಿ’ ಎಂಬ ಬಿರುದು ಪಡೆದರು.

ಕರ್ನಾಟಕದಲ್ಲಿ ದಂಡಯಾತ್ರೆ: ಶಿವಾಜಿ ಗೋಲ್ಕಂಡ ಸುಲ್ತಾನನೊಂದಿಗೆ ಮಾತುಕತೆ ನಡೆಸಿ ಬಿಜಾಪುರ ಸುಲ್ತಾನನ ಜಿಂಜಿ, ವೆಲ್ಲೂರು ಮತ್ತು ತಂಜಾವೂರು ಪ್ರಾಂತ್ಯಗಳನ್ನು ಮುತ್ತಿಗೆ ಹಾಕಿ ವಶಪಡಿಸಿಕೊಂಡರು. ನಂತರ ಕಾರವಾರ, ಅಂಕೋಲಾ, ಹುಬ್ಬಳ್ಳಿಯನ್ನು ಲೂಟಿ ಮಾಡಿದರು.

ಉಪಸಂಹಾರ

ಶಿವಾಜಿಯ ಪಾಲನೆ, ಅವರ ತಾಯಿಯ ಪ್ರೀತಿ ಮತ್ತು ಅವರ ಮಾರ್ಗದರ್ಶಕರ ಬೋಧನೆಗಳಿಂದ ನಿರೂಪಿಸಲ್ಪಟ್ಟಿದೆ, ಅವರ ಭವಿಷ್ಯಕ್ಕಾಗಿ ಅಸಾಧಾರಣ ನಾಯಕನಾಗಿ ಅಡಿಪಾಯ ಹಾಕಿತು. ಅವನ ರಚನೆಯ ವರ್ಷಗಳಲ್ಲಿ ಅವನಲ್ಲಿ ತುಂಬಿದ ಮೌಲ್ಯಗಳು ಭಾರತೀಯ ಇತಿಹಾಸದಲ್ಲಿ ಮಹತ್ವದ ಅಧ್ಯಾಯವನ್ನು ಗುರುತಿಸುವ ಮೂಲಕ ಸಮೃದ್ಧ ಮತ್ತು ಶಕ್ತಿಯುತ ಮರಾಠಾ ಸಾಮ್ರಾಜ್ಯವನ್ನು ಸ್ಥಾಪಿಸಲು ಪ್ರೇರೇಪಿಸುತ್ತವೆ. ಅವರ ಪರಂಪರೆಯು ತಲೆಮಾರುಗಳನ್ನು ಪ್ರೇರೇಪಿಸುತ್ತದೆ, ಧೈರ್ಯ, ಸ್ಥಿತಿಸ್ಥಾಪಕತ್ವ ಮತ್ತು ಸ್ವ-ನಿರ್ಣಯದ ಮನೋಭಾವವನ್ನು ಸಂಕೇತಿಸುತ್ತದೆ.

ಮೂರನೇ ಪಾಣಿಪತ್ ಯುದ್ಧ (1761)

ಮೂರನೇ ಪಾಣಿಪತ್ ಯುದ್ಧ (1761)

ಈ ಯುದ್ಧವು ಭಾರತದ ಚರಿತ್ರೆಯ ನಿರ್ಣಾಯಕ ಯುದ್ಧಗಳಲ್ಲಿ ಒಂದಾಗಿದೆ. ಒಂದನೆಯ ಪೇಶ್ವೆಯ ಕಾಲದಲ್ಲಿ ಪ್ರಾರಂಭವಾದ ಮರಾಠ ಸಾಮ್ರಾಜ್ಯಶಾಹಿ ವಿಸ್ತರಣಾ ನೀತಿ ಮೂರನೇ ಪೇಶ್ವೆ ಬಾಲಾಜಿ ಬಾಜೀರಾಯನ ಕಾಲದಲ್ಲಿ ತನ್ನ ಪರಾಕಾಷ್ಠತೆಯನ್ನು ಮುಟ್ಟಿತು. ಈತನ ಕಾಲದಲ್ಲಿ ಮರಾಠ ಸೈನ್ಯಗಳು ದೆಹಲಿ ಮತ್ತು ಲಾಹೋರ್‌ಗಳ ಮೇಲೆ ಧಾಳಿ ನಡೆಸಿ ಆವುಗಳ ಮೇಲೆ ಮರಾಶ ಸಾರ್ವಭೌಮತ್ವವನ್ನು ಸ್ಥಾಪಿಸಿದವು. ಈ ಧಾಳಿಗಳು ಆಫ್‌ಘಾನಿಸ್ಥಾನದ ಅರಸನಾದ ಅಹ್ಮದ್ಮಷಾ ಅಬ್ದಾಲಿಯನ್ನು ಕೆರಳಿಸಿದವು. ಮರಾಠ ಸೈನ್ಯಗಳು ಪಂಜಾಬಿನ ರಾಜ್ಯಪಾಲನಾಗಿದ್ದ ಅಹ್ಮದ್ಮಾ ಅಬ್ದಾಲಿಯ ಪುತ್ರ ತೈಮೂರ್ ಷಾನನ್ನು ಅಪಜಯಗೊಳಿಸಿದ್ದು ಆತನಿಗೆ ಇನ್ನೂ ಕೋಪ ಹೆಚ್ಚಾಗಲು ಕಾರಣವಾಯಿತು. ಈ ಸೋಲಿನ ಸೇಡನ್ನು ತೀರಿಸಿಕೊಳ್ಳುವ ಉದ್ದೇಶದಿಂದಾಗಿ ಅಹ್ಮದ್ ಷಾ ಅಬ್ದಾಲಿಯು ಮರಾಠರ ವಿರುದ್ಧ ದಂಡೆತ್ತಿ ಬಂದನು. ಇದು ತೃತೀಯ ಪಾಣಿಪತ್ ಯುದ್ಧಕ್ಕೆ ಕಾರಣವಾಯಿತು.

ಕ್ರಿ.ಶ.1761 ರಲ್ಲಿ ಮರಾಠ ಮತ್ತು ಅಫ್ಘನ್ ಸೈನ್ಯಗಳು ಇತಿಹಾಸ ಪ್ರಸಿದ್ಧವಾದ ಪಾಣಿಪತ್‌ನ ರಣಭೂಮಿಯಲ್ಲಿ ಸಂಧಿಸಿದವು. ಅಲ್ಲಿ ತೃತೀಯ ಬಾರಿಗೆ ಭಾರತದ ಅದೃಷ್ಟ ನಿರ್ಣಯವಾಯಿತು. ಮರಾಠ ಸೈನ್ಯವು 45,000 ಇತ್ತು. ಅಫ್ಘನ್ನರ ಸೇನೆ 60,000 ಇತ್ತು. ಆಹ್ಮದ್‌ಷಾನು ಉತ್ತಮವಾದ ಕುದುರೆಗಳನ್ನು ಬಲಾಡ್ಯವಾದ ಗುಂಡಿನ ಪಡೆಯನ್ನು ಹೊಂದಿದ್ದನು. ಈತನ ಸೈನಿಕರ ಶಸ್ತ್ರಾಸ್ತ್ರಗಳು ಮರಾಠರಿಗಿಂತ ಉತ್ತಮವಾಗಿದ್ದವು. ಸಣ್ಣ ಪುಟ್ಟ ಘರ್ಷಣೆಯ ನಂತರ ಉಭಯ ಸೇನೆಗಳ ನಡುವೆ ಕ್ರಿ.ಶ. 1761 ಜನವರಿ 14 ರಂದು ನಿರ್ಣಾಯಕವಾದ, ಭೀಕರವಾದ ಕದನ ಜರುಗಿತು. ಈ ಕದನವು ಬೆಳಿಗ್ಗೆಯಿಂದ ಸಂಜೆ ಮೂರು ಗಂಟೆಯವರೆಗೆ ನಡೆಯಿತು. ಮರಾಠರು ಸದಾಶಿವರಾಯನ ಮುಖಂಡತ್ವದಲ್ಲಿ ಶೌರ್ಯ ಸಾಹಸಗಳಿಂದ ಹೋರಾಡಿದರು. ಯುದ್ಧದ ಪ್ರಾರಂಭದಲ್ಲಿ ಮರಾತರೇ ಮೇಲುಗೈ ಪಡೆದಾಗ್ಯೂ ತದನಂತರ ಅಂದರೆ ಮಧ್ಯಾಹ್ನದ ನಂತರ ಅಬ್ದಾಲಿಯು ನಡೆಸಿದ ಹೊಸ ಸೈನಿಕ ಬದಲಾವಣೆ ಮತ್ತು ಕಾರ್ಯಾಚರಣೆಯಿಂದ ಯುದ್ಧದ ಗತಿಯೇ ಬೇರೆಯಾಯಿತು. ಬೆಳಿಗ್ಗಿನಿಂದ ಹೋರಾಡಿ ಬಳಲಿ ಬೆಂಡಾಗಿದ್ದ ಮರಾಠ ಸೈನಿಕರು ಧೈರ್ಯವನ್ನು ಕಳೆದುಕೊಂಡರು. ಅತ್ಯಲ್ಪ ಕಾಲದಲ್ಲಿಯೇ ಮರಾಠರ ಸೋಲು ಖಚಿವಾಗುವತ್ತಾ ಸಾಗಿತ್ತು. ಮರಾಠ ಸೈನಿಕರು ಭಯದಿಂದ ಯುದ್ಧರಂಗದಿಂದ ಓಡತೊಡಗಿದರು. ಆಫ್ಘನ್ ಸೈನಿಕರು ಅವರನ್ನು ಎಲ್ಲಾ ದಿಕ್ಕುಗಳಿಂದಲೂ ಬೆನ್ನಟ್ಟಿದರು. ಮರಾಠ ಸೈನ್ಯದ ಎಲ್ಲಾ ನಾಯಕರು ಮತ್ತು ಅಸಂಖ್ಯಾತ ಸೈನಿಕರು ಯುದ್ಧ ಭೂಮಿಯಲ್ಲಿಯೇ ಮಡಿದರು. ಪೇಶ್ವೆಯ ಹಿರಿಯ ಪುತ್ರನಾದ ವಿಶ್ವಾಸರಾವ್ ಮತ್ತು ಸದಾಶಿವರಾವ್ ಸೇರಿದಂತೆ ಹಲವು ನಾಯಕರು ಮಡಿದರು. ವಿಜಯಿಗಳಿಗೆ ಆಗಾಧ ಪ್ರಮಾಣದಲ್ಲಿ ಸಂಪತ್ತು ಲಭಿಸಿತು. ಮರಾರರು ಆಗಾಧವಾದ ನಷ್ಟವನ್ನು ಅನುಭವಿಸಿದರು. ಈ ಸೋಲಿನ ವಿಷಯ, ಈಗಾಗಲೇ ರೋಗಪೀಡಿತನಾಗಿ ಹಾಸಿಗೆ ಹಿಡಿದಿದ್ದ ಬಾಲಾಜಿ ಬಾಜಿರಾಯನ ಮರಣವನ್ನು ತ್ವರಿತಗೊಳಿಸಿತು. ಆತ ಭಗ್ನ ಹೃದಯಿಯಾಗಿ ಕ್ರಿ.ಶ. 1761 ಜನವರಿ 23 ರಂದು ಮರಣಹೊಂದಿದನು.

ಪರಿಣಾಮಗಳು :

  1. ಭಾರತದ ಚರಿತ್ರೆಯಲ್ಲಿ ಪ್ರಪ್ರಥಮ ಭಾರಿಗೆ ಮರಾಠರು ಸಂಪೂರ್ಣವಾಗಿ ಸೋತು ಹೋದರು.
  2. ಆಬ್ದಾಲಿಯು ದೆಹಲಿಯ ಮೇಲೆ ಧಾಳಿ ಮಾಡಿ ಮೊಗಲರನ್ನು ಅಪಜಯಗೊಳಿಸಿದ್ದರಿಂದ ಮೊಗಲರು ಅವನತಿ ಹೊಂದಬೇಕಾಯಿತು.
  3. ಮುಖ್ಯವಾಗಿ ಮೈಸೂರಿನಲ್ಲಿ ಹೈದರಾಲಿಯ ಏಳಿಗೆಗೆ ಸದವಕಾಶವಾಯಿತು.
  4. ಆಂಗ್ಲರು ಭಾರತದಲ್ಲಿ ಬಲಾಡ್ಯರಾಗಿ ಬೆಳೆಯಲು ಸದವಕಾಶವಾಯಿತು.
  5. ಈ ಕದನ ಭಾರತದ ಚರಿತ್ರೆಗೆ ಒಂದು ಹೊಸ ಆಯಾಮ ನೀಡಿತು.

ಉಪಸಂಹಾರ

ಮೂರನೇ ಪಾಣಿಪತ್ ಯುದ್ಧವು ಭಾರತದ ಇತಿಹಾಸದಲ್ಲಿ ಮಹತ್ತರ ಪರಿಣಾಮ ಬೀರಿದ ಯುದ್ಧವಾಗಿದೆ. ಈ ಸೋಲಿನಿಂದ ಮರಾಠರ ಪ್ರಭಾವ ಕುಗ್ಗಿ, ಹೊಸ ಶಕ್ತಿಗಳು ಭಾರತದಲ್ಲಿ ಉದಯಿಸಲು ಅವಕಾಶ ದೊರೆಯಿತು. ವಿಶೇಷವಾಗಿ ಆಂಗ್ಲರ ಪ್ರಭಾವ ಹೆಚ್ಚಲು ಇದು ಕಾರಣವಾಯಿತು. ಹೀಗಾಗಿ ಈ ಯುದ್ಧವು ಭಾರತದ ರಾಜಕೀಯ ಇತಿಹಾಸದಲ್ಲಿ ಪ್ರಮುಖ ತಿರುವು ಎಂದು ಪರಿಗಣಿಸಲಾಗುತ್ತದೆ.

ಪೇಶ್ವೆಯವರ ಕೈಕೆಳಗೆ ಮರಾಠ ಸಾಮ್ರಾಜ್ಯದ ಏಳಿಗೆ

ಪೇಶ್ವೆಯವರ ಕೈಕೆಳಗೆ ಮರಾಠ ಸಾಮ್ರಾಜ್ಯದ ಏಳಿಗೆ

ಶಿವಾಜಿಯ ಮರಣದ ನಂತರ ಪೇಳ್ವೆಗಳು ಮರಾಠ ಸಾಮ್ರಾಜ್ಯದ ನಿಜವಾದ ಸಾರ್ವಭೌಮರಾಗಿ ಏಳಿಗೆಗೆ ಬಂದಿದ್ದು, ಮರಾಠ ಇತಿಹಾಸದಲ್ಲಿ ಪ್ರಮುಖವಾದುದು. ಈತನ ಮರಣಾನಂತರ ಉತ್ತರಾಧಿಕಾರಕ್ಕಾಗಿ ನಡೆದ ಹೋರಾಟಗಳು ಆತನ ಉತ್ತರಾಧಿಕಾರಿಗಳನ್ನು ಅನಾವಶ್ಯಕವಾಗಿ ದುರ್ಬಲಗೊಳಿಸಿದವು. ಮೊಗಲ್ ಸಾಮ್ರಾಟ ಔರಂಗಜೇಬನು ಸಾಂಬಾಜಿಯನ್ನು ಕೊಲೆಮಾಡಿದುದು ಮರಾಠರಲ್ಲಿ ಐಕ್ಯತೆ ಉಂಟಾಗಲು ಸಹಾಯಕವಾಯಿತು. ಆದರೆ ಈ ಐಕ್ಯತೆ ಶಾಶ್ವತವಾಗಿ ಉಳಿಯಲಿಲ್ಲ. ಮೊಗಲರ ಬಂಧನದಿಂದ ಬಿಡುಗಡೆಯಾದ ಸಾಹು ಕ್ರಿ.ಶ. 1708ರಲ್ಲಿ ಸತಾರದಲ್ಲಿ ಭತ್ರಪತಿಯಾಗಿ ಅಧಿಕಾರಕ್ಕೆ ಬಂದನು. ಆದರೆ ಈತ ಅಷ್ಟು ಸಮರ್ಥನಾದ ರಾಜನಾಗಿರಲಿಲ್ಲ. ಈತನು ಅಧಿಕಾರಕ್ಕೆ ಬಂದ ವೇಳೆಯಲ್ಲಿ ರಾಜ್ಯಾದ್ಯಂತ ಅನಾಯಕತ್ವ ಮತ್ತು ಅರಾಜಕತೆ ತಲೆದೋರಿತ್ತು. ಈತ ತನ್ನ ವೈಯಕ್ತಿಕ ಗುಣಗಳಿಂದ ಕೆಲವರನ್ನು ತನ್ನ ಕಡೆಗೆ ಒಲಿಸಿಕೊಂಡಿದ್ದನು. ಆದರೆ ಇವನಿಗೆ ಶಿವಾಜಿಯಷ್ಟು ಶಕ್ತಿ ಸಾಮರ್ಥ್ಯವಿರಲಿಲ್ಲ. ಇವನು ಸೋಮಾರಿ ಮತ್ತು ಆಲಸಿಯೂ ಆಗಿದ್ದು, ವಿಲಾಸ ಜೀವನವನ್ನು ಆರಿಸಿಕೊಂಡನು. ಆಡಳಿತವನ್ನು ಸಂಪೂರ್ಣವಾಗಿ ತನ್ನ ಅಧಿಕಾರಿಗಳಿಗೆ ಅತಿಮುಖ್ಯವಾಗಿ ಪ್ರಧಾನಮಂತ್ರಿಗಳಾಗಿದ್ದ ಪೇಕ್ಷೆಗಳಿಗೆ ವಹಿಸಿಕೊಟ್ಟನು. ಈ ರೀತಿ ಅರಸನ ನಿರಾಶಕ್ತಿ ಮತ್ತು ಆಸಮರ್ಥತೆಗಳು, ಸಾರ್ವಭೌಮ ಅಧಿಕಾರವು ಪೇಶ್ವೆಯವರಿಗೆ ವರ್ಗಾವಣೆಯಾಗಲು ಮತ್ತು ಅವರು ಮರಾಠ ರಾಜಕೀಯದಲ್ಲಿ ಪ್ರಧಾನ್ಯತೆ ಗಳಿಸಲು ಕಾರಣವಾಯಿತು.

ಬಾಲಾಜಿ ವಿಶ್ವನಾಥ : ಇವನು ಮೊದಲ ಪೇಳ್ವೆಯಾಗಿದ್ದು ಸಿಕ್ಕ ಸದವಕಾಶವನ್ನು ಉಪಯೋಗಿಸಿಕೊಂಡು ಮರಾಠ ರಾಜಕೀಯದಲ್ಲಿ ಶ್ರೇಷ್ಠ ವ್ಯಕ್ತಿಯಾಗಿ ಮಾರ್ಪಟ್ಟನು. ಕ್ರಿ.ಶ. 1713ರಲ್ಲಿ ಸಾಹು ಇವನನ್ನು ಪೇಶ್ವೆಯನ್ನಾಗಿ ನೇಮಕ ಮಾಡಿದನು. ಇವನು ಅಧಿಕಾರಕ್ಕೆ ಬರಲು ಮೂಲ ಕಾರಣ ಈತನಲ್ಲಿದ್ದ ವೈಯಕ್ತಿಕ ಪ್ರತಿಭೆ ಮತ್ತು ಶಕ್ತಿ ಸಾಮರ್ಥ್ಯ. ತನ್ನ ಚಾಣಾಕ್ಷತನದಿಂದ ಅತ್ಯಲ್ಪ ಕಾಲದಲ್ಲಿಯೇ ಸಾಹುವನ್ನು ನಾಮಮಾತ್ರ ಅರಸನನ್ನಾಗಿ ಮಾಡಿ ತಾನೇ ನಿಜವಾದ ಅರಸನಾದನು. ಪೇಶ್ವೆ ಅಧಿಕಾರವು ವಂಶಪಾರಂಪರ್ಯವಾಗುವಂತೆ ಮಾಡಿದನು. ಈತನೊಂದಿಗೆ ಪೇಶ್ವೆಯವರು ಆಳ್ವಿಕೆ ಆರಂಭವಾಯಿತು.

ವಿಶ್ವನಾಥನು ಉತ್ತಮ ಆಡಳಿತಗಾರನಾಗಿದ್ದನು. ರಾಜನೈಪುಣ್ಯತೆಯನ್ನು ಹೊಂದಿದ್ದನು. ಇವನು ಪ್ರಧಾನಿಯಾಗಿ ಆಳ್ವಿಕೆ ನಡೆಸುತ್ತಿದ್ದ ಸಂದರ್ಭದಲ್ಲಿ ರಾಜ್ಯದ ಶಾಂತಿಗೆ ಧಕ್ಕೆ ಉಂಟುಮಾಡುತ್ತಿದ್ದ ದಂಗೆಕೋರರನ್ನು ಅಡಗಿಸಿದನು. ಅಷ್ಠಪ್ರಧಾನ ಪದ್ಧತಿಯನ್ನು ಪುನಃ ಜಾರಿಗೆ ತಂದನು. ಆದರೆ ಎಲ್ಲಾ ಅಧಿಕಾರವನ್ನು ತನ್ನ ಕೈಯಲ್ಲಿಯೇ ಕೇಂದ್ರೀಕರಿಸಿಕೊಂಡನು. ಮೊಗಲ್ ಸಾಮ್ರಾಜ್ಯದ ಆಂತರಿಕ ಕಾರ್ಯ ಚಟುವಟಿಕೆಗಳಲ್ಲಿ ಹಸ್ತಕ್ಷೇಪ ನಡೆಸಿ ಮರಾಠರಿಗೆ ಹಲವು ರಿಯಾಯಿತಿಗಳನ್ನು ದೊರಕಿಸಿಕೊಟ್ಟನು. ಮೊಗಲರೊಂದಿಗೆ ಮೈತ್ರಿ ಮಾಡಿಕೊಂಡು ದಖ್ಖನ್ನಿನ ನಾಲ್ಕು ಸುಭಗಳಲ್ಲಿ ಚೌತ್ ಮತ್ತು ಸರ್ದೆಶ್ ಮುಖಿ ತೆರಿಗೆಗಳನ್ನು ವಸೂಲಿ ಮಾಡುವ ಅಧಿಕಾರವನ್ನು ಮರಾಠರಿಗೆ ದೊರಕಿಸಿಕೊಟ್ಟನು. ಕ್ರಿ.ಶ. 1719ರಲ್ಲಿ ಬಾಲಾಜಿ ವಿಶ್ವನಾಥನು ಮೊಗಲರ ಉತ್ತರಾಧಿಕಾರ ಯುದ್ಧದಲ್ಲಿ ಯಶಸ್ವಿಯಾಗಿ ಭಾಗವಹಿಸಿದ್ದನು. ಇದು ಇತಿಹಾಸದಲ್ಲಿ ಪ್ರಾಮುಖ್ಯತೆ ಗಳಿಸಿದೆ. ಇದು ಮರಾಠರ ಘನತೆಯನ್ನು ಹೆಚ್ಚಿಸಿತು. ಅಲ್ಲದೆ ಮಹತ್ವಾಕಾಂಕ್ಷೆಯನ್ನು ಇಮ್ಮಡಿಗೊಳಿಸಿತು. ಅವರು ಸ್ವತಂತ್ರ ಸಾಮ್ರಾಜ್ಯದ ಕನಸನ್ನು ಕಟ್ಟುವುದಕ್ಕೆ ಹಾದಿಯನ್ನು ಸುಗಮಗೊಳಿಸಿತು. ದೆಹಲಿಯ ಚಕ್ರವರ್ತಿಯು ಅವರ ಕೈಗೊಂಬೆಯಾದನು. ವಿಶ್ವನಾಥನು ಸ್ವತಂತ್ರ ಮರಾಠ ಸಾಮ್ರಾಜ್ಯದ ಅಸ್ತಿಭಾರ ನೀತಿಯನ್ನು ಈ ಯಶಸ್ವಿನ ಮೇಲೆ ರೂಪಿಸಿದ. ತತ್ಪರಿಣಾಮವಾಗಿ ಮರಾಠರ ಪ್ರಾಬಲ್ಯ ಹೆಚ್ಚಿದುದಲ್ಲದೆ ಮರಾಠ ರಾಜ್ಯದ ಉತ್ಕರ್ಷಕ್ಕೆ ಕಾರಣವಾಯಿತು. ಈ ಎಲ್ಲಾ ಯಶಸ್ಸಿನ ನಡುವೆ ವಿಶ್ವನಾಥನು ಕ್ರಿ.ಶ. 1720ರಲ್ಲಿ ಮರಣಹೊಂದಿದನು.

ಒಂದನೇ ಬಾಜಿರಾಯ : ಬಾಲಾಜಿ ವಿಶ್ವನಾಥನ ಸಾವಿನ ನಂತರ ಆತನ ಪುತ್ರನಾದ ಒಂದನೇ ಬಾಜಿರಾಯನು ಅಧಿಕಾರಕ್ಕೆ ಬಂದನು. ಇವನು ಪೇಶ್ವೆಗಳಲ್ಲಿ ಪ್ರಮುಖನು ಬಾಲ್ಯದಲ್ಲಿಯೇ ತನ್ನ ತಂದೆಯೊಡನೆ ಸೈನಿಕ ವಿದ್ಯೆಯನ್ನು ಕಲಿತುಕೊಂಡಿದ್ದನು. ತತ್ಪರಿಣಾಮವಾಗಿ ಈತನಿಗೆ ಯುದ್ಧವಿದ್ಯೆ ಮತ್ತು ರಾಜಕಾರಣದಲ್ಲಿ ಸಾಕಷ್ಟು ಅನುಭವವಿತ್ತು. ಇವನು ವೀರಯೋಧ ಮಾತ್ರವಲ್ಲದೆ ಅತ್ಯುತ್ತಮ ರಾಜನೀತಿ ನಿಪುಣನಾಗಿದ್ದ. ಈತ ಮೊಗಲ್ ಸಾಮ್ರಾಜ್ಯ ಅವನತಿಯತ್ತ ಸಾಗಿದ್ದ ಸಂದರ್ಭದಲ್ಲಿ, ಅದರ ಸಮಾಧಿಯ ಮೇಲೆ ಮರಾಠ ಸಾಮ್ರಾಜ್ಯವನ್ನು ನಿರ್ಮಿಸಬೇಕೆಂಬ ಕನಸನ್ನು ಕಂಡನು. ಈ ಉದ್ದೇಶಕ್ಕಾಗಿಯೇ ಹಿಂದೂ ನಾಯಕರನ್ನು ಒಗ್ಗೂಡಿಸಲು ಪ್ರಯತ್ನಿಸಿದನು. ಹಿಂದೂ ನಾಯಕರ ಬೆಂಬಲ ಮತ್ತು ಸಹಕಾರಗಳನ್ನು ಪಡೆಯುವ ಸಲುವಾಗಿ ಒಂದನೇ ಬಾಜಿರಾಯನು ʻಹಿಂದೂ-ಪಾದ್-ಪಾದ್‌ಶಾಯಿ ಅಥವಾ ಹಿಂದೂ ಸಾಮ್ರಾಜ್ಯದ ಸಿದ್ಧಾಂತವನ್ನು ಬೋಧಿಸಿದ. ಕ್ರಿ.ಶ. 1724 ರಲ್ಲಿ ಮಾಳ್ವದ ಮೇಲೆ ಧಾಳಿ ಮಾಡಿ ಅದನ್ನು ಆಕ್ರಮಿಸಿಕೊಂಡನು. ಆದರೆ ಈ ಆಕ್ರಮಣವನ್ನು ಕೆಲವರು ವಿರೋಧಿಸಿದಾಗ ಆ ವಿರೋಧಿಗಳನ್ನು ಹತ್ತಿಕ್ಕಿದನು. ಕ್ರಿ.ಶ. 1731ರಲ್ಲಿ ಹೈದರಾಬಾದಿನ ನಿಜಾಂ-ಉಲ್-ಮುಲ್ಕನೊಂದಿಗೆ ಮೈತ್ರಿ ಮಾಡಿಕೊಂಡು ಉತ್ತರದಲ್ಲಿ ರಾಜ್ಯ ವಿಸ್ತಾರಕ್ಕೆ ಅವಕಾಶಗಿಟ್ಟಿಸಿಕೊಂಡನು.

ಮೊಗಲ್ ಸಾಮ್ರಾಟನು ನಿಜಾಂ-ಉಲ್-ಮುಲ್ಕನ ಸಹಾಯವನ್ನು ಕೋರಿದ್ದರಿಂದ ಕ್ರಿ.ಶ. 1737 ರಲ್ಲಿ ಮುಲ್ಕನು ಈ ಹಿಂದಿನ ಮರಾಠರೊಂದಿಗಿನ ಒಪ್ಪಂದವನ್ನು ಮುರಿದು ಬಾಜಿರಾಯನ ವಿರುದ್ಧ ಯುದ್ಧಕ್ಕಿಳದನು. ಭೂಪಾಲ್ ಹತ್ತಿರ ನಡೆದ ಯುದ್ಧದಲ್ಲಿ ನಿಜಾಂ-ಉಲ್-ಮುಲ್ಕನು ಸೋತು ಶರಣಾದನು. ಸೋತ ಮುಲ್ಕನು ಮಾಳ್ವ, ನರ್ಮದ ಮತ್ತು ಚಂಬಲ್ ನದಿಗಳ ಮಧ್ಯಬಾಗದ ಪ್ರದೇಶದ ಮೇಲೆ ಸಾರ್ವಭೌಮತ್ವವನ್ನು, ಅಲ್ಲದೆ ಯುದ್ಧದ ವೆಚ್ಚಕ್ಕಾಗಿ 50 ಲಕ್ಷ ರೂಪಾಯಿಗಳನ್ನು ದೆಹಲಿಯ ಚಕ್ರವರ್ತಿಯಿಂದ ಕೊಡಿಸಲು ಒಪ್ಪಿದ. ಕ್ರಿ.ಶ. 1739ರಲ್ಲಿ ಮರಾಠರು ಪೋರ್ಚುಗೀಸರಿಂದ ಸಾಲೈಟ್ ಮತ್ತು ಬೇಸಿನ್‌ಗಳನ್ನು ವಶಪಡಿಸಿಕೊಂಡರು. ಕ್ರಿ.ಶ. 1740ರಲ್ಲಿ ಬಾಜಿರಾಯನು ಆಕಾಲಿಕ ಸಾವಿಗೆ ಒಳಗಾದನು. ಈತನ ಮರಣದಿಂದಾಗಿ ಮರಾಠರಿಗೆ ತುಂಬಲಾರದ ನಷ್ಟವಾಯಿತು. ಒಂದನೇ ಬಾಜಿರಾಯನು ತನ್ನ ವೈಯಕ್ತಿಕ ಜೀವನದಲ್ಲಿ ಕೆಲವು ನ್ಯೂನ್ಯತೆಗಳನ್ನು ಹೊಂದಿದ್ದರೂ ಸಹ ವೀರಯೋಧನು ಮತ್ತು ಪ್ರಖ್ಯಾತ ರಾಜನೀತಿ ನಿಪುಣನಾಗಿದ್ದು, ಮರಾಠ ಸಾಮ್ರಾಜ್ಯಕ್ಕೆ ಅತ್ಯುತ್ತಮ ಸೇವೆ ಸಲ್ಲಿಸಿದನು. ಈತನ ಕಾಲದಲ್ಲಿ ಮರಾಠ ಸಾಮ್ರಾಜ್ಯ ವಿಸ್ತಾರವಾಯಿತು.

ಬಾಲಾಜಿ ಬಾಜೀರಾಯ : (1740-1761) : ಒಂದನೇ ಬಾಜೀರಾಯನ ಮರಣಾನಂತರ ಆತನ ಪುತ್ರನಾದ ಬಾಲಾಜಿ ಬಾಜೀರಾಯನು ಪೇಳ್ವೆಯಾಗಿ ಅಧಿಕಾರಕ್ಕೆ ಬಂದನು. ಈತನಿಗೆ ಇವನ ತಂದೆಯಂತಹ ಶ್ರೇಷ್ಠ ಪ್ರತಿಭೆಯಿರಲಿಲ್ಲ. ಆದಾಗ್ಯೂ ಈತನಲ್ಲಿ ಶಕ್ತಿ ಸಾಮರ್ಥ್ಯಗಳು ಕಡಿಮೆ ಇರಲಿಲ್ಲ. ತನ್ನ ತಂದೆಯಂತೆ ಈತನೂ ಸಹ ರಾಜ್ಯದ ವಿಸ್ತರಣೆಯಲ್ಲಿ ಹಲವು ಸಮರ್ಥ ಅಧಿಕಾರಿಗಳ ಸೇವೆಯನ್ನು ದೊರಕಿಸಿಕೊಂಡನು.

ಬಾಲಾಜಿ ಬಾಜಿರಾಯನು ತನ್ನ ಅಜ್ಞಾನದಿಂದ ಎರಡು ವಿಷಯಗಳಲ್ಲಿ ತನ್ನ ತಂದೆಯ ನೀತಿಯನ್ನು ಬಿಟ್ಟು ಅಡ್ಡದಾರಿ ಹಿಡಿದನು. ಒಂದನೆಯದಾಗಿ ಸೇನೆಯು ಈತನ ಕಾಲದಲ್ಲಿ ಸಂಪೂರ್ಣವಾಗಿ ಬದಲಾವಣೆ ಹೊಂದಿತು. ಒಂದನೇ ಬಾಜಿರಾಯನು ಕುದುರೆ ಸವಾರರ ಸಂಖ್ಯೆಯನ್ನು ಹೆಚ್ಚಿಸಿದರೂ ಸಹ ಹಳೆಯ ಯುದ್ಧ ವಿಧಾನವನ್ನು ಕೈಬಿಡಲಿಲ್ಲ. ಆದರೆ ಬಾಲಾಜಿ ಬಾಜಿರಾಯನು ವಿದೇಶೀ ಯುದ್ಧ ವಿಧಾನವನ್ನು ಜಾರಿಗೆ ತರುವ ಉದ್ದೇಶದಿಂದ ಸೈನ್ಯದಲ್ಲಿನ ಸಂಪ್ರದಾಯವನ್ನು ಮುರಿದು ಕೈಗೆ ಸಿಕ್ಕ ಕೂಲಿ ಸೈನಿಕರನ್ನು ಸೇರಿಸಿಕೊಂಡನು. ತತ್ಪರಿಣಾಮವಾಗಿ ಸೈನ್ಯವು ತನ್ನ ರಾಷ್ಟ್ರೀಯ ಲಕ್ಷಣವನ್ನು ಕಳೆದುಕೊಂಡಿತು. ಈ ಹೊರಗಿನ ಸೈನಿಕರನ್ನು ಶಿಸ್ತಿಗೆ ಮತ್ತು ಹತೋಟಿಗೆ ಒಳಪಡಿಸುವುದು ಕಷ್ಟವಾಯಿತು. ಭಾಗಶ: ಹಳೆಯ ಯುದ್ಧ ಪದ್ಧತಿಯನ್ನು ಬಿಟ್ಟು ಬಿಡಲಾಯಿತು. ಎರಡನೆಯದಾಗಿ ಬಾಲಾಜಿ ಬಾಜಿರಾಯನು ತನ್ನ ತಂದೆಯ ಉದ್ದೇಶವಾದ ಹಿಂದೂ ನಾಯಕರನ್ನೆಲ್ಲ ಒಂದೆಡೆ ಸೇರಿಸುವ ಅರ್ಥಾತ್ ಹಿಂದೂ-ಪಾದ್-ಪಾದಶಾಹಿ ಯನ್ನು ಏರ್ಪಡಿಸುವ ಗುರಿಯನ್ನು ಉದ್ದೇಶಪೂರ್ವಕವಾಗಿ ಬಿಟ್ಟುಕೊಟ್ಟನು. ಈತನ ಅನುಯಾಯಿಗಳು ಹಿಂದಿನಂತೆ ಕಲಹ ಕಚ್ಚಾಟಗಳಲ್ಲಿ ಮತ್ತು ಆಕ್ರಮಣಗಳಲ್ಲಿ ತೊಡಗಿದರು. ಹಿಂದೂ ಮುಸ್ಲಿಮರೆನ್ನದೆ ಧಾಳಿನಡೆಸಿ ರಜಪೂತರ ಮತ್ತು ಇತರ ಹಿಂದೂ ನಾಯಕರ ಸಹಾನುಭೂತಿಯನ್ನು ಕಳೆದುಕೊಂಡರು. ತತ್ಪರಿಣಾಮವಾಗಿ ಮರಾಠ ಸಾಮ್ರಾಜ್ಯವು ಅಖಿಲ ಭಾರತ ರಾಷ್ಟ್ರೀಯತೆಯನ್ನು ಪ್ರತಿನಿಧಿಸುವ ಹಕ್ಕನ್ನು ಕಳೆದುಕೊಂಡಿತು.

ಬಾಲಾಜಿ ಬಾಜಿರಾಯನ ನೀತಿಯ ಲೋಪದೋಷಗಳು ತಕ್ಷಣವೇ ಯಾವ ಪರಿಣಾಮವನ್ನುಂಟುಮಾಡಲಿಲ್ಲ. ಉತ್ತರ ಮತ್ತು ದಕ್ಷಿಣ ಭಾರತಗಳಲ್ಲಿ ಮರಾಠರ ಪ್ರಾಬಲ್ಯ ನಿರಂತರವಾಗಿ ಮುಂದುವರಿಯಿತು. ಕೃಷ್ಣಾನದಿಯ ದಕ್ಷಿಣ ರಾಜ್ಯಗಳಿಂದ ಬಲತ್ಕಾರವಾಗಿ ಕಷ್ಟ ಕಾಣಿಕೆಗಳನ್ನು ವಸೂಲಿ ಮಾಡಿದ್ದಲ್ಲದೆ, ಮರಾಜರು ಬಿದನೂರು ಮತ್ತು ಮೈಸೂರು ರಾಜ್ಯಗಳಿಗೆ ಮುತ್ತಿಗೆ ಹಾಕಿದರು. ಆದರೆ ಅವರ ಮುನ್ನಡೆಗೆ ಸ್ವಲ್ಪ ಕಾಲ ತಡೆಯಾಯಿತು. ಕ್ರಿ.ಶ. 1760ರಲ್ಲಿ ಪೇಶ್ವೆಯ ಸಂಬಂಧಿಯಾದ ಸದಾಶಿವರಾಯನು ಹೈದರಾಬಾದಿನ ನಿಜಾಮನನ್ನು ಅಪಜಯಗೊಳಿಸಿದನು. ಸೋತ ನಿಜಾಮನು ಬಿಜಾಪುರ ಪ್ರಾಂತ, ಔರಂಗಾಬಾದಿನ ಎಲ್ಲ ಪ್ರದೇಶ ಮತ್ತು ದೌಲತಾಬಾದಿನ ಕೋಟೆಯೂ ಸೇರಿದಂತೆ ಹಲವಾರು ಕೋಟೆಗಳನ್ನು ಮರಾಠರಿಗೆ ಬಿಟ್ಟುಕೊಟ್ಟನು. ತತ್ಪರಿಣಾಮವಾಗಿ ಮರಾಠರ ಅಧಿಪತ್ಯ ಇನ್ನೂ ಹೆಚ್ಚಾಯಿತು.

ಕ್ರಿ.ಶ. 1753ರಲ್ಲಿ ಹೋಳ್ಕರ್ ಮತ್ತು ರಘುನಾಥರಾಯರನ್ನು ಉತ್ತರ ಭಾರತಕ್ಕೆ ಸೇನಾ ಸಮೇತ ಕಳುಹಿಸಲಾಯಿತು. ತತ್ಪರಿಣಾಮವಾಗಿ ದೋಆಬ್ ಪ್ರಾಂತ್ಯದಲ್ಲಿ ಮರಾಠ ಸಾರ್ವಭೌಮತ್ವವನ್ನು ಪುನು ಸ್ಥಾಪಿಸಲಾಯಿತು. ಕ್ರಿ.ಶ. 1757ರ ಆಗಸ್ಟ್‌ನಲ್ಲಿ ದೆಹಲಿಗೆ ಮುತ್ತಿಗೆ ಹಾಕಿ ನಜೀಬ್-ಉದ್-ದೌಲನನ್ನು ಶರಣಾಗತನಾಗುವಂತೆ ಮಾಡಿದರು. ಅಲ್ಲದೆ ದೆಹಲಿಯನ್ನು ನಂಬಿಕೆಗೆ ಅರ್ಹನಾದ ವಜೀರ್ ಇಮಾದನಿಗೆ ವಹಿಸಲಾಯಿತು, ಕ್ರಿ.ಶ. 1758 ರಲ್ಲಿ ಪಂಜಾಬಿಗೆ ಮುತ್ತಿಗೆ ಹಾಕಿ ಲಾಹೋರ್ ಮತ್ತು ಸರ್ ಹಿಂದ್‌ಗಳನ್ನು ವಶಪಡಿಸಿಕೊಂಡು, ಅದೀನಬೇಗ್ ಖಾನ್ ಎಂಬುವವನನ್ನು ಪಂಜಾಬಿನ ರಾಜ್ಯಪಾಲನನ್ನಾಗಿ ಮಾಡಲಾಯಿತು. ಈತ ಮರಾಠರಿಗೆ ವರ್ಷಕ್ಕೆ 75 ಲಕ್ಷ ರೂಪಾಯಿ ಕಷ್ಟವನ್ನು ನೀಡಲು ಒಪ್ಪಿಕೊಂಡನು. ಈ ರೀತಿ ರಘುನಾಥರಾಯನ ನೀತಿಯು ಮರಾಠ ಸಾಮ್ರಾಜ್ಯವನ್ನು ವಿಸ್ತರಿಸಿತು.

ಉಪಸಂಹಾರ

ಪೇಶ್ವೆಗಳ ಕಾಲದಲ್ಲಿ ಮರಾಠ ಸಾಮ್ರಾಜ್ಯವು ರಾಜಕೀಯ ಮತ್ತು ಸೈನಿಕವಾಗಿ ಬಹಳಷ್ಟು ವಿಸ್ತಾರವಾಯಿತು. ವಿಶೇಷವಾಗಿ ಬಾಲಾಜಿ ವಿಶ್ವನಾಥ ಮತ್ತು ಬಾಜೀರಾಯರ ನಾಯಕತ್ವ ಮರಾಠ ಸಾಮ್ರಾಜ್ಯದ ಶಕ್ತಿಯನ್ನು ಹೆಚ್ಚಿಸಿತು. ಆದರೆ ನಂತರದ ಆಡಳಿತದಲ್ಲಿ ಉಂಟಾದ ನೀತಿ ದೋಷಗಳು ಮತ್ತು ಒಳಕಲಹಗಳು ಸಾಮ್ರಾಜ್ಯದ ದುರ್ಬಲತೆಗೆ ಕಾರಣವಾದವು. ಆದರೂ ಪೇಶ್ವೆಗಳ ಆಡಳಿತ ಮರಾಠ ಇತಿಹಾಸದಲ್ಲಿ ಮಹತ್ವದ ಅಧ್ಯಾಯವಾಗಿ ಉಳಿದಿದೆ.