ಕಲೆ, ಸಾಹಿತ್ಯ ಮತ್ತು ವಾಸ್ತುಶಿಲ್ಪಕ್ಕೆ ಮೊಘಲ್ ಕೊಡುಗೆಗಳು

ಕಲೆ, ಸಾಹಿತ್ಯ ಮತ್ತು ವಾಸ್ತುಶಿಲ್ಪಕ್ಕೆ ಮೊಘಲ್ ಕೊಡುಗೆಗಳು

ಭಾರತದಲ್ಲಿ ಮೊಘಲ್ ಯುಗವು 16 ನೇ ಶತಮಾನದ ಆರಂಭದಿಂದ 18 ನೇ ಶತಮಾನದ ಮಧ್ಯಭಾಗದವರೆಗೆ ವ್ಯಾಪಿಸಿದೆ, ವಿವಿಧ ಕ್ಷೇತ್ರಗಳಲ್ಲಿ, ವಿಶೇಷವಾಗಿ ಶಿಕ್ಷಣ, ಸಾಹಿತ್ಯ ಮತ್ತು ವಾಸ್ತುಶಿಲ್ಪದಲ್ಲಿ ಗಮನಾರ್ಹ ಪ್ರಗತಿಯನ್ನು ಗುರುತಿಸಲಾಗಿದೆ. ಮೊಘಲರು ತಮ್ಮೊಂದಿಗೆ ಪರ್ಷಿಯನ್ ಪ್ರಭಾವಗಳನ್ನು ತಂದರು ಮತ್ತು ಭಾರತದ ಸಾಂಸ್ಕೃತಿಕ ಮತ್ತು ಬೌದ್ಧಿಕ ಪರಂಪರೆಯನ್ನು ರೂಪಿಸುವುದನ್ನು ಮುಂದುವರೆಸಿದರು.

1) ಶಿಕ್ಷಣ: ಮೊಘಲ್ ಆಳ್ವಿಕೆಯಲ್ಲಿ ಸಾಂಪ್ರದಾಯಿಕ ಪ್ರಗತಿ

ಮೊಘಲರ ಕಾಲದಲ್ಲಿ ಶಿಕ್ಷಣವು ಸಾಂಪ್ರದಾಯಿಕ ಆಚರಣೆಗಳಲ್ಲಿ ಆಳವಾಗಿ ಬೇರೂರಿತ್ತು. ಇಸ್ಲಾಮಿಕ್ ಶಿಕ್ಷಣವನ್ನು ಪ್ರಾಥಮಿಕವಾಗಿ ಮಕ್ತಾಬ್‌ಗಳು ಮತ್ತು ಮದ್ರಸಾಗಳಲ್ಲಿ ನಡೆಸಲಾಗುತ್ತಿತ್ತು, ಅವುಗಳು ಹೆಚ್ಚಾಗಿ ಮಸೀದಿಗಳಿಗೆ ಹೊಂದಿಕೊಂಡಂತೆ ಇದ್ದವು. ಪಠ್ಯಕ್ರಮವು ಅರೇಬಿಕ್, ಪರ್ಷಿಯನ್, ಉರ್ದು, ಕುರಾನ್, ತತ್ವಶಾಸ್ತ್ರ, ದೇವತಾಶಾಸ್ತ್ರ ಮತ್ತು ಕಾವ್ಯದಂತಹ ವಿಷಯಗಳನ್ನು ಒಳಗೊಂಡಿತ್ತು. ಮುಲ್ಲಾಗಳು ಅಥವಾ ಧಾರ್ಮಿಕ ವಿದ್ವಾಂಸರು ಈ ಜ್ಞಾನವನ್ನು ನೀಡುವ ಜವಾಬ್ದಾರಿಯನ್ನು ಹೊಂದಿದ್ದರು.

ಮತ್ತೊಂದೆಡೆ, ಹಿಂದೂಗಳು ಪಾಠಶಾಲೆಗಳಲ್ಲಿ ಶಿಕ್ಷಣವನ್ನು ಪಡೆದರು, ಅಲ್ಲಿ ವಿದ್ಯಾರ್ಥಿಗಳು ತತ್ವಶಾಸ್ತ್ರ, ಇತಿಹಾಸ, ವೈದ್ಯಕೀಯ, ವೇದಗಳು, ಉಪನಿಷತ್ತುಗಳು, ಪುರಾಣಗಳು, ಜ್ಯೋತಿಷ್ಯ, ಖಗೋಳಶಾಸ್ತ್ರ, ಗಣಿತಶಾಸ್ತ್ರ ಮತ್ತು ನ್ಯಾಯಶಾಸ್ತ್ರವನ್ನು ಕಲಿತರು. ರಾಜರು ಮತ್ತು ಗಣ್ಯರು ಸೇರಿದಂತೆ ಮೊಘಲ್ ದೊರೆಗಳು ಶಿಕ್ಷಣದ ಪೋಷಕರಾಗಿದ್ದರು, ಶಿಕ್ಷಣ ಸಂಸ್ಥೆಗಳಿಗೆ ಉದಾರವಾಗಿ ಭೂಮಿ ಮತ್ತು ಹಣವನ್ನು ದಾನ ಮಾಡಿದರು. ಈ ವ್ಯವಸ್ಥೆಯು ಶ್ರೀಮಂತ ಮತ್ತು ವೈವಿಧ್ಯಮಯ ಶೈಕ್ಷಣಿಕ ವಾತಾವರಣವನ್ನು ಬೆಳೆಸಲು ಸಹಾಯ ಮಾಡಿತು.

2) ಸಾಹಿತ್ಯ: ಬಹು ಭಾಷೆಗಳ ಪ್ರವರ್ಧಮಾನ

ಮೊಘಲರ ಕಾಲವು ಪರ್ಷಿಯನ್, ಅರೇಬಿಕ್, ಸಂಸ್ಕೃತ, ಹಿಂದಿ ಮತ್ತು ಉರ್ದು ಭಾಷೆಗಳಲ್ಲಿ ಸಾಹಿತ್ಯದ ಪ್ರವರ್ಧಮಾನಕ್ಕೆ ಸಾಕ್ಷಿಯಾಯಿತು. ಪರ್ಷಿಯನ್ ಮೊಘಲ್ ಆಸ್ಥಾನದ ಅಧಿಕೃತ ಭಾಷೆಯಾಗಿತ್ತು ಮತ್ತು ಈ ಸಮಯದಲ್ಲಿ ಹಲವಾರು ಗಮನಾರ್ಹ ಸಾಹಿತ್ಯಿಕ ವ್ಯಕ್ತಿಗಳು ಹೊರಹೊಮ್ಮಿದರು. ಅಬುಲ್ ಫಜಲ್, ಗುಲ್ಬದನ್ ಬೇಗಂ, ನಿಜಾಮುದ್ದೀನ್ ಅಹ್ಮದಿ ಮುಂತಾದವರು ಪರ್ಷಿಯನ್ ಸಾಹಿತ್ಯಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ. ಬಾಬರ್ ಅವರ ಬಾಬರ್ ನಾಮಾ ಮತ್ತು ಅಬುಲ್ ಫಜಲ್ ಅವರ ಅಕ್ಬರ್ ನಾಮಾ ಮುಂತಾದ ಕೃತಿಗಳು ಮೊಘಲ್ ಆಶ್ರಯದಲ್ಲಿ ಪ್ರವರ್ಧಮಾನಕ್ಕೆ ಬಂದ ಶ್ರೀಮಂತ ಸಾಹಿತ್ಯ ಸಂಪ್ರದಾಯದ ಶ್ರೇಷ್ಠ ಉದಾಹರಣೆಗಳಾಗಿವೆ.

ಪರ್ಷಿಯನ್ ಸಾಹಿತ್ಯದ ಜೊತೆಗೆ, ತುಳಸಿದಾಸ, ಸೂರದಾಸ್ ಮತ್ತು ಕೇಶವದಾಸರಂತಹ ಹಿಂದಿ ಕವಿಗಳು ಶಾಶ್ವತ ಕೃತಿಗಳನ್ನು ರಚಿಸಿದರು. ತುಳಸಿದಾಸರ “ರಾಮಚರಿತ ಮಾನಸ” ವನ್ನು  ಹಿಂದೂ ಧರ್ಮದ ಸರ್ವ ಶ್ರೇಷ್ಠ ಗ್ರಂಥಗಳಲ್ಲಿ  ಒಂದೆಂದು ಪರಿಗಣಿಸಲಾಗಿದೆ.

ಮೊಘಲರ ಕಾಲದ ಕೆಲವು ಪ್ರಮುಖ ಕೃತಿಗಳು ಮತ್ತು ಲೇಖಕರು:

  • ಬಾಬರ್: ಬಾಬರ್ ನಾಮಾ (ತುಜಾಕ್-ಇ-ಬಾಬ್ರಿ)
  • ಅಬುಲ್ ಫಜಲ್: ಅಕ್ಬರ್ ನಾಮಾ ಮತ್ತು ಐನ್-ಎ-ಅಕ್ಬರಿ
  • ಗುಲ್ಬದನ್ ಬೇಗಂ: ಹುಮಾಯೂನ್ ನಾಮ
  • ಜಹಾಂಗೀರ್: ತುಜಾಕ್-ಎ-ಜಹಂಗಿರಿ
  • ತುಳಸಿದಾಸ: ರಾಮಚರಿತ ಮಾನಸ್
  • ಸೂರದಾಸ್: ಸುರಸಾಗರ

ಮೊಘಲ್ ದೊರೆಗಳು ಇತರ ಭಾಷೆಗಳಿಂದ ಪರ್ಷಿಯನ್ ಭಾಷೆಗೆ ಮಹತ್ವದ ಕೃತಿಗಳನ್ನು ಅನುವಾದಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಉದಾಹರಣೆಗೆ, ರಾಮಾಯಣವನ್ನು ಪರ್ಷಿಯನ್ ಭಾಷೆಗೆ ಬದೌನಿ ಮತ್ತು ಲೀಲಾವತಿ ಎಂಬ ಗಣಿತಶಾಸ್ತ್ರವನ್ನು ಪೈಜಿ ಅನುವಾದಿಸಿದ್ದಾರೆ.

3) ಕಲೆ ಮತ್ತು ವಾಸ್ತುಶಿಲ್ಪ: ಶಾಶ್ವತ ಪರಂಪರೆ

ಮೊಘಲ್ ರಾಜವಂಶದ ಅತ್ಯಂತ ಗಮನಾರ್ಹ ಕೊಡುಗೆಯೆಂದರೆ ಕಲೆ ಮತ್ತು ವಾಸ್ತುಶಿಲ್ಪ ಕ್ಷೇತ್ರದಲ್ಲಿ. ಮೊಘಲ್ ಶೈಲಿಯನ್ನು ಸಾಮಾನ್ಯವಾಗಿ ಇಂಡೋ-ಸಾರ್ಸೆನಿಕ್ ಎಂದು ಕರೆಯಲಾಗುತ್ತದೆ, ಇದು ಪರ್ಷಿಯನ್, ಇಸ್ಲಾಮಿಕ್ ಮತ್ತು ಭಾರತೀಯ ವಾಸ್ತುಶಿಲ್ಪದ ಅಂಶಗಳನ್ನು ಸಂಯೋಜಿಸಿದೆ. ಪ್ರತಿಯೊಬ್ಬ ಮೊಘಲ್ ಚಕ್ರವರ್ತಿಯು ಶ್ರೀಮಂತ ವಾಸ್ತುಶಿಲ್ಪದ ಪರಂಪರೆಯನ್ನು ಬಿಟ್ಟು ಹೋಗಿದ್ದಾರೆ, ಅದು ಇಂದಿಗೂ ಅಪ್ರತಿಮವಾಗಿ ಉಳಿದಿದೆ.

ಬಾಬರ್ (15261530)

ಮೊಘಲ್ ರಾಜವಂಶದ ಸ್ಥಾಪಕರಾಗಿ, ಬಾಬರ್ ಕಾನ್ಸ್ಟಾಂಟಿನೋಪಲ್ (ಇಂದಿನ ಇಸ್ತಾನ್‌ ಬುಲ್) ನಿಂದ ವಾಸ್ತುಶಿಲ್ಪಿಗಳನ್ನು ಕರೆಸುವ ಮೂಲಕ ಮೊಘಲ್ ವಾಸ್ತುಶಿಲ್ಪಕ್ಕೆ ಅಡಿಪಾಯ ಹಾಕಿದರು. ಅವರು ಕಾಬೂಲ್‌ನಲ್ಲಿ ಮಸೀದಿ ಮತ್ತು ಸಂಭಾಲ್‌ನಲ್ಲಿ ಜಮಾ ಮಸೀದಿಯನ್ನು ನಿರ್ಮಿಸಿದರು, ಭವಿಷ್ಯದ ಮೊಘಲ್ ವಾಸ್ತುಶಿಲ್ಪದ ಯೋಜನೆಗಳಿಗೆ ವೇದಿಕೆಯನ್ನು ಸಿದ್ಧಪಡಿಸಿದರು.

ಹುಮಾಯೂನ್ (15301540, 15551556)

ಹುಮಾಯೂನ್‌ನ ಅತ್ಯಂತ ಮಹತ್ವದ ವಾಸ್ತುಶಿಲ್ಪದ ಕೊಡುಗೆಯೆಂದರೆ ದೆಹಲಿಯ ಸಮೀಪದಲ್ಲಿರುವ ದಿನಪನಾಹ್ ನಗರದ ಸ್ಥಾಪನೆ. ಅವನ ಮರಣದ ನಂತರ, ಅವನ ವಿಧವೆ ಬೇಗಾ ಬೇಗಂನಿಂದ ನಿರ್ಮಿಸಲ್ಪಟ್ಟ  ಅವನ ಸಮಾಧಿಯು ಮೊಘಲ್ ವಾಸ್ತುಶಿಲ್ಪದ ಮೊದಲ ಭವ್ಯವಾದ ಉದಾಹರಣೆಗಳಲ್ಲಿ ಒಂದಾಗಿದೆ. ಪರ್ಷಿಯನ್-ಪ್ರೇರಿತ ವಿನ್ಯಾಸ ಮತ್ತು ಕೆಂಪು ಮರಳುಗಲ್ಲಿನ ಬಳಕೆಯನ್ನು ಇಲ್ಲಿ ಕಾಣಬಹುದು.

ಅಕ್ಬರ್ (15561605)

ಅಕ್ಬರನ ಆಳ್ವಿಕೆಯು ಮೊಘಲ್ ವಾಸ್ತುಶಿಲ್ಪದಲ್ಲಿ ಮಹತ್ವದ ಸಾಧನೆಯಾಗಿದೆ. ಇವನ ಅತ್ಯಂತ ಮಹತ್ವದ ಸಾಧನೆಯೆಂದರೆ ಫತೇಪುರ್ ಸಿಕ್ರಿ, ಗುಜರಾತ್ ವಿರುದ್ಧದ ಅವರ ವಿಜಯದ ನೆನಪಿಗಾಗಿ ನಿರ್ಮಿಸಲಾದ ಹೊಸ ರಾಜಧಾನಿ. ದಿವಾನ್-ಎ-ಖಾಸ್, ಪಂಚ್ ಮಹಲ್ ಮತ್ತು ಬುಲಂದ್ ದರ್ವಾಜಾದಂತಹ ಮೊಘಲ್ ಅವಧಿಯ ಕೆಲವು ಪ್ರಸಿದ್ಧ ರಚನೆಗಳನ್ನು ಈ ನಗರವು ಒಳಗೊಂಡಿದೆ. ಅಕ್ಬರನ ಆಳ್ವಿಕೆಯು ನಾವೀನ್ಯತೆ ಮತ್ತು ಹಿಂದೂ, ಪರ್ಷಿಯನ್ ಮತ್ತು ಇಸ್ಲಾಮಿಕ್ ಶೈಲಿಗಳನ್ನು ಒಳಗೊಂಡಂತೆ ವಿವಿಧ ಸಾಂಸ್ಕೃತಿಕ ಪ್ರಭಾವಗಳ ಮಿಶ್ರಣದಿಂದ ಗುರುತಿಸಲ್ಪಟ್ಟಿದೆ.

ಜಹಾಂಗೀರ್ (16051627)

ಜಹಾಂಗೀರ್, ದೊಡ್ಡ ವಾಸ್ತುಶಿಲ್ಪದ ಯೋಜನೆಗಳನ್ನು ನಿರ್ಮಿಸುವುದಕ್ಕಿಂತ ಕಲೆಯ ಮೆಚ್ಚುಗೆಗೆ ಹೆಚ್ಚು ಹೆಸರುವಾಸಿಯಾಗಿದ್ದಾನೆ, ಲಾಹೋರ್‌ನ ಬಾದ್‌ಶಾಹಿ ಮಸೀದಿ ಮತ್ತು ಶಾಲಿಮಾರ್ ಗಾರ್ಡನ್ಸ್ ಸೇರಿದಂತೆ ಕೆಲವು ಗಮನಾರ್ಹ ನಿರ್ಮಾಣಗಳನ್ನು ಕಾಣಬಹುದು. ಅವನ ಆಳ್ವಿಕೆಯು ಮೊಘಲ್ ಸೌಂದರ್ಯದ ಮತ್ತಷ್ಟು ಪರಿಷ್ಕರಣೆಯನ್ನು ಕಂಡಿತು.

ಷಹಜಹಾನ್ (16281658)

ಷಹಜಹಾನ್ ಆಳ್ವಿಕೆಯಲ್ಲಿ ಮೊಘಲ್ ವಾಸ್ತುಶಿಲ್ಪವು ತನ್ನ ಉತ್ತುಂಗವನ್ನು ತಲುಪಿತು. ಸಾಮಾನ್ಯವಾಗಿ ಅವನನ್ನು “ಕಟ್ಟಡಗಳ ನಿರ್ಮಾತೃ” ಎಂದು ಉಲ್ಲೇಖಿಸಲಾಗುತ್ತದೆ, ವಾಸ್ತುಶಿಲ್ಪಕ್ಕೆ ಷಹಜಹಾನ್ ಅವರ ಕೊಡುಗೆಗಳು ಸಾಟಿಯಿಲ್ಲ. ಅವರ ಪತ್ನಿ ಮುಮ್ತಾಜ್ ಮಹಲ್ ಅವರ ನೆನಪಿಗಾಗಿ ನಿರ್ಮಿಸಲಾದ ತಾಜ್ ಮಹಲ್ ಮೊಘಲ್ ವಾಸ್ತುಶಿಲ್ಪದ ಕಿರೀಟ ರತ್ನವಾಗಿದೆ ಮತ್ತು ವಿಶ್ವದ ಅತ್ಯಂತ ಮೆಚ್ಚುಗೆ ಪಡೆದ ಕಟ್ಟಡಗಳಲ್ಲಿ ಒಂದಾಗಿದೆ.

ತಾಜ್ ಮಹಲ್ ಜೊತೆಗೆ, ಷಹಜಹಾನ್ ದೆಹಲಿಯಲ್ಲಿ ಕೆಂಪು ಕೋಟೆಯನ್ನು ನಿರ್ಮಿಸಿದನು, ಇದು ದಿವಾನ್-ಎ-ಖಾಸ್, ದಿವಾನ್-ಎ-ಆಮ್ ಮತ್ತು ಮೋತಿ ಮಸೀದಿಯಂತಹ ಪ್ರಸಿದ್ಧ ರಚನೆಗಳನ್ನು ಒಳಗೊಂಡಿದೆ. ಮೊಘಲ್ ವೈಭವದ ಸಂಕೇತವಾದ ಅವನ ಮಯೂರ ಸಿಂಹಾಸನವನ್ನು ನಿರ್ಮಿಸಲು ಏಳು ವರ್ಷಗಳನ್ನು ತೆಗೆದುಕೊಳ್ಳಲಾಯಿತು. ಇದನ್ನು ಚಿನ್ನ ಮತ್ತು ಅಮೂಲ್ಯವಾದ ಕಲ್ಲುಗಳಿಂದ ಅಲಂಕರಿಸಲಾಗಿತ್ತು. ದುರದೃಷ್ಟವಶಾತ್, ಈ ಸಿಂಹಾಸನವನ್ನು 1739 ರಲ್ಲಿ ಪರ್ಷಿಯಾದ ನಾದಿರ್ ಷಾ ತನ್ನ ದೇಶಕ್ಕೆ ಕೊಂಡೊಯ್ದನು.

ಉಪಸಂಹಾರ

ಮೊಘಲ್ ಯುಗವು ಶಿಕ್ಷಣ, ಸಾಹಿತ್ಯ ಮತ್ತು ವಾಸ್ತುಶಿಲ್ಪದಲ್ಲಿ ಅದ್ವಿತೀಯ ಬೆಳವಣಿಗೆಯ ಸಮಯವಾಗಿತ್ತು. ಮೊಘಲರ ಕೊಡುಗೆಗಳು ಭಾರತದ  ಸಾಂಸ್ಕೃತಿಕ ಮತ್ತು ಬೌದ್ಧಿಕ ಪರಂಪರೆಗೆ ಅಡಿಪಾಯವನ್ನು ಹಾಕಿದವು. ಬಾಬರ್ ನಾಮದಿಂದ ತಾಜ್ ಮಹಲ್ ವರೆಗೆ, ಅವರ ಪರಂಪರೆ ಇಂದಿಗೂ ಜಗತ್ತನ್ನು ಪ್ರೇರೇಪಿಸುತ್ತದೆ ಮತ್ತು ವಿಸ್ಮಯಗೊಳಿಸುತ್ತಿದೆ.

ಮೊಗಲರ ಕಂದಾಯ ಪದ್ಧತಿ

ಮೊಗಲರ ಕಂದಾಯ ಪದ್ಧತಿ

ಮೊಗಲರು ವಿವಿಧ ಮೂಲಗಳಿಂದ ಆರ್ಥಿಕ ಆದಾಯಗಳನ್ನು ಪಡೆಯುತ್ತಿದ್ದರು. ಭೂಕಂದಾಯ, ತೆರಿಗೆ, ಗಣಿಗಾರಿಕೆ, ಧಾಳಿ ಮತ್ತು ಕೊಳ್ಳೆಗಳು, ಸೋತ ಅರಸರು ತುಂಬಿಕೊಡುವ ಪರಿಹಾರಧನ, ತಲೆಗಂದಾಯ ಮುಂತಾದವು ಇವರ ಆದಾಯದ ಮೂಲಗಳಾಗಿದ್ದವು. ಇದರಲ್ಲಿ ಭೂಕಂದಾಯ ಪ್ರಮುಖ ಮತ್ತು ಲಾಭದಾಯಕ ಆಗಿತ್ತು. ಶೇರ್‌ಷಾ ತನ್ನ ಕಾಲದಲ್ಲಿ  ಉತ್ತಮವಾದ ಕಂದಾಯ ವ್ಯವಸ್ಥೆಯನ್ನು ಜಾರಿಗೆ ತಂದಿದ್ದ. ಆದರೆ ನಂತರ ಕಂದಾಯ ವ್ಯವಸ್ಥೆ ಹದಗೆಟ್ಟಿತು. ಇದರ ಪ್ರಾಮುಖ್ಯತೆ ತಿಳಿದಿದ್ದ ಅಕ್ಬರ್‌ ಕಂದಾಯ ವ್ಯವಸ್ಥೆಯ ಪುನರ್ ಸಂಘಟನೆಗೆ ಶ್ರಮಿಸಿದ.

ಕ್ರಿ.ಶ.1582 ರಲ್ಲಿ ಅಕ್ಬರನು ತೋದರಮಲ್ಲನನ್ನು ಅರ್ಥಮಂತ್ರಿಯಾಗಿ ನೇಮಿಸಿದ. ತೋದರಮಲ್ಲನು ಜಾರಿಗೆ ತಂದ ಸುಧಾರಣೆಗಳಿಂದ ಸಾಮ್ರಾಜ್ಯಕ್ಕೆ ಆಗಾಧ ಪ್ರಮಾಣದಲ್ಲಿ ಲಾಭ ಉಂಟಾಯಿತು. ಈ ವ್ಯವಸ್ಥೆ ಮೊಗಲರ ಕಾಲದುದ್ದಕ್ಕೂ ಮುಂದುವರೆದವು. ಅದನ್ನು ʻದಹಸಾಲಿ ಪದ್ಧತಿ’ ಎಂದು ಕರೆಯಲಾಯಿತು. ಈ ಪದ್ಧತಿಯ ಬಗ್ಗೆ ಚರಿತ್ರಕಾರರು ವಿವಿಧ ಬಗೆಯ ವಿವರಣೆ ನೀಡಿದ್ದರೂ ಅದರ ಮುಖ್ಯಾಂಶಗಳು ಈ ಕೆಳಗಿನಂತಿವೆ.

  1. ರಾಜ್ಯದ ಎಲ್ಲಾ ಭೂಮಿಯನ್ನು ವ್ಯವಸ್ಥಿತವಾಗಿ ಅಳತೆ ಮಾಡುವದು. ಇದಕ್ಕಾಗಿ ಸೆಣಬಿನ ಹಗ್ಗಕ್ಕೆ ಬದಲಾಗಿ ಬೊಂಬಿನ: ಗಳವನ್ನು ಬಳಸುವುದು,
  2. ಈ ರೀತಿ ಅಳತೆ ಮಾಡಿದ ಭೂಮಿಯನ್ನು ‘ಬಿಘ’ ಎಂದು ವಿಭಜಿಸುವುದು. (ಒಂದು ಬಿಘ ಎಂದರೆ 60×60 ಗಜ)
  3. ಭೂಮಿಯನ್ನು ಅದರ ಮಣ್ಣಿನ ಸಾರಕ್ಕೆ ಅನುಗುಣವಾಗಿ ನಾಲ್ಕು ವರ್ಗಗಳಾಗಿ ವಿಭಜಿಸಲಾಯಿತು. ಅವುಗಳೆಂದರೆ:

ಪೋಲಾಜ್- ಪ್ರತಿವರ್ಷವೂ ವ್ಯವಸಾಯ ಮಾಡಲು ಯೋಗ್ಯವಾದ ಭೂಮಿ.

ಪರೌತಿ- ಮಣ್ಣಿನ ಸಾರ ಮರಳಿ ಪಡೆಯುವುದಕ್ಕಾಗಿ ಬಿಟ್ಟು ಬಿಟ್ಟು ಸಾಗುವಳಿ ಮಾಡುವ ಭೂಮಿ.

ಚಚರ್ – ಮೂರು ಅಥವಾ ನಾಲ್ಕು ವರ್ಷಗಳಲ್ಲಿ ಒಂದು ಬಾರಿ ಉಳುಮೆ ಮಾಡುವ ಭೂಮಿ.

ಬಂಜರು- ಕೃಷಿ ಯೋಗ್ಯವಲ್ಲದ ಭೂಮಿ.

ಈ ಮೇಲಿನ ವರ್ಗಿಕರಣವನ್ನು ಅನುಸರಿಸಿ ಭೂಮಿಯ ಕಂದಾಯವನ್ನು ನಿಗಧಿಪಡಿಸಲಾಗುತ್ತಿತ್ತು.

  1. ಕೃಷಿಯೋಗ್ಯ ಭೂಮಿಯನ್ನು ಆಳೆದು, ಅದರ ಫಸಲಿನ ಸರಾಸರಿ ವಾರ್ಷಿಕ ಆದಾಯವನ್ನು ತೆರಿಗೆ ನಿರ್ಧಾರಕ್ಕಾಗಿ ಗಣನೆಗೆ ತೆಗೆದುಕೊಳ್ಳಲಾಯಿತು.
  2. ರೈತ ತನ್ನ ಉತ್ಪಾದನೆಯ ಮೂರನೆ ಒಂದು ಭಾಗವನ್ನು ತೆರಿಗೆಯ ರೂಪದಲ್ಲಿ ಸರ್ಕಾರಕ್ಕೆ ಸಲ್ಲಿಸಲು ಆಜ್ಞೆ ಮಾಡಲಾಯಿತು.
  3. ಕೃಷಿ ಮಾಡುವ ಪ್ರದೇಶಕ್ಕೆ ಮಾತ್ರವೇ ರೈತರು ತೆರಿಗೆಯನ್ನು ನೀಡಬೇಕಿತ್ತು. ಈ ವ್ಯವಸ್ಥೆಯನ್ನು ಜಬ್ತಿಪದ್ಧತಿಯೆಂದು ಹೆಸರು.
  4. ತೆರಿಗೆಯನ್ನು ಹಣ ಅಥವಾ ವಸ್ತುಗಳ ರೂಪದಲ್ಲಿ ಸಲ್ಲಿಸುವ ಸ್ವಾತಂತ್ರ್ಯ ರೈತರಿಗಿತ್ತು.
  5. ರಾಜ್ಯದ ಅಧಿಕಾರಿಗಳು ಭೂಮಿಯ ವರ್ಗೀಕರಣ, ಅದರ ಹುಟ್ಟುವಳಿ, ಮಾರುಕಟ್ಟೆಯ ಬೆಲೆ ಮುಂತಾದವುಗಳ ಕುರಿತು ವಿವರವಾದ ದಾಖಲೆ ಇಡಬೇಕಾಗಿತ್ತು.
  6. ಅಕ್ಬರನು ಜಾರಿಗೆ ತಂದ ಪದ್ಧತಿ ರೈತವಾರಿ ಪದ್ಧತಿಯಾಗಿತ್ತು. ಇದರಲ್ಲಿ ರೈತರ ಭೂಮಿಯ ಹಕ್ಕನ್ನು ಮಾನ್ಯಮಾಡಲಾಗಿತ್ತು. ಸರಕಾರ ರೈತರೊಂದಿಗೆ ನೇರವಾಗಿ ವ್ಯವಹರಿಸುವ ಪದ್ಧತಿ ಜಾರಿಗೆ ಬಂದಿತು.
  7. ರೈತರಿಗೆ ಅವರ ಭೂಮಿ ಮತ್ತು ಕಂದಾಯದ ವಿವರ ನೀಡುವ ಪಟ್ಟಾಗಳನ್ನು ಕೊಡಲಾಗಿತ್ತು.
  8. ಬರಗಾಲ, ಪ್ರವಾಹ ಇತ್ಯಾದಿ ಪ್ರಕೃತಿಯ ವೈಪರಿತ್ಯಗಳ ಕಾಲದಲ್ಲಿ ರಿಯಾಯಿತಿಗಳನ್ನು ಮತ್ತು ಸಾಲಗಳನ್ನು ರೈತರಿಗೆ ನೀಡಲಾಗುತ್ತಿತ್ತು.

ಅಮಲ್‌ಗುಜಾರ್‌ನು ಅನೇಕ ಅಧೀನ ಅಧಿಕಾರಿಗಳ ಸಹಾಯದಿಂದ ಕಂದಾಯವನ್ನು ಸಂಗ್ರಹಿಸುತ್ತಿದ್ದ. ಗ್ರಾಮದ ಮುಖ್ಯಸ್ಥನಾದ ಮಕದ್ದಂ, ಅಲ್ಲಿನ ಪಟ್ಟಾರೀ ಇವರಲ್ಲದೆ ಕುನುಂಗೋ, ಬಿತಿಕ್ಚೀ, ಪೊತೆದಾರ-ಇವರೆಲ್ಲರ ಸಹಾಯದಿಂದ ಪರಗಣಗಳ ಮುಖ್ಯಸ್ಥ ತೆರಿಗೆ ವಸೂಲಿಮಾಡುತ್ತಿದ್ದ. ತೆರಿಗೆ ಸಂಗ್ರಹಿಸುವ ಕಾಲದಲ್ಲಿ ಅಧಿಕಾರಿಗಳು ರೈತರನ್ನು ಪೀಡಿಸಕೂಡದೆಂಬ ರಾಜಾಜ್ಞೆ ಜಾರಿಯಲ್ಲಿತ್ತು. ಆದರೆ ಗಡಿಪ್ರಾಂತ್ಯಗಳ ಅಧಿಕಾರಿಗಳು ಭ್ರಷ್ಟರಾಗಿ ಜನತೆಯನ್ನು ಕಾಡುತ್ತಿದ್ದರು. ಹಾಗೂ ಅರಸರಿಗೆ ಕೆಟ್ಟ ಹೆಸರನ್ನು ತರುತ್ತಿದ್ದರು. ಷಹಜಹಾನ್ ಮತ್ತು ಔರಂಗಜೇಬರ ಕಾಲದಲ್ಲಿ ಇಂತಹ ಅಧಿಕಾರಿಗಳ ವರ್ತನೆ ಬಯಲಾದಾಗ ಅವರಿಗೆ ಶಿಕ್ಷೆ ಕೊಟ್ಟು ಕೆಲಸದಿಂದ ವಜ ಮಾಡಲಾಯಿತು.

ಉಪಸಂಹಾರ

ಮೊಗಲ್ ಕಾಲದ ಕಂದಾಯ ವ್ಯವಸ್ಥೆ ರಾಜ್ಯದ ಆರ್ಥಿಕ ಬಲವನ್ನು ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸಿತು. ಅಕ್ಬರ್ ಮತ್ತು ರಾಜಾ ತೋದರಮಲ್ಲ ಜಾರಿಗೆ ತಂದ ದಹಸಾಲಿ ಪದ್ಧತಿ ಭೂಮಿಯ ಅಳತೆ, ವರ್ಗೀಕರಣ ಮತ್ತು ತೆರಿಗೆ ಸಂಗ್ರಹಣೆಯನ್ನು ಕ್ರಮಬದ್ಧಗೊಳಿಸಿತು. ಇದರ ಮೂಲಕ ರೈತರ ಹಕ್ಕುಗಳನ್ನು ಮಾನ್ಯಗೊಳಿಸುವ ವ್ಯವಸ್ಥೆಯೂ ರೂಪುಗೊಂಡಿತು ಮತ್ತು ಮೊಗಲ್ ಆಡಳಿತಕ್ಕೆ ಸ್ಥಿರವಾದ ಆದಾಯ ದೊರೆಯಿತು.

ಮೊಗಲರ ಆಡಳಿತ

ಮೊಗಲರ ಆಡಳಿತ

ಮೊಗಲ್ ಸುಲ್ತಾನರು ನಿರಂಕುಶ ಪ್ರಭುಗಳಾಗಿದ್ದರು. ಇವರ ಆಡಳಿತದಲ್ಲಿ ಸುಲ್ತಾನನೇ ಪರಮಾಧಿಕಾರಿ, ಎಲ್ಲಾ ಅಧಿಕಾರಗಳು ಅವನಲ್ಲೇ ಕೇಂದ್ರಿಕೃತವಾಗಿದ್ದವು. ಆದಾಗ್ಯೂ ಔರಂಗಜೇಬನನ್ನು ಬಿಟ್ಟರೆ ಉಳಿದವರು ಉದಾರಿಗಳು ಮತ್ತು ಪ್ರಗತಿಪರರಾಗಿದ್ದರು. ಸುಲ್ತಾನರು ಜನರಿಗೆ ಸುಖಶಾಂತಿಗಳನ್ನು ಮತ್ತು ನ್ಯಾಯವನ್ನು ದೊರಕಿಸಿಕೊಡುವಲ್ಲಿ ಆಸಕ್ತಿ ಹೊಂದಿದ್ದರು. ಪ್ರತಿಯೊಂದು ದಾಖಲೆ, ನಿರ್ಣಯ ಮತ್ತು ಕಾನೂನುಗಳನ್ನು ವಿವರವಾಗಿ ಇಡುತ್ತಿದ್ದು ಆಗಿನ ಕಾಲದ ವೈಶಿಷ್ಟ್ಯ. ಇಂತಹ ದಾಖಲೆಗಳ ಸಂಖ್ಯೆ ವಿಪರೀತವಾಗಿತ್ತು. ಸರ್ಕಾರ ಹಲವಾರು ಕಾರ್ಖಾನೆಗಳನ್ನು ಸ್ಥಾಪಿಸಿ ಸುಲ್ತಾನನಿಗೆ, ಆಸ್ಥಾನದವರಿಗೆ, ಅಂತಃಪುರದವರಿಗೆ ಬೇಕಾದ ಎಲ್ಲಾ ವಸ್ತುಗಳನ್ನು ತಯಾರಿಸುತ್ತಿದ್ದುದು ಅದರ ವೈಶಿಷ್ಟವಾಗಿತ್ತು. ಮೊಗಲ್ ಆಡಳಿತ ವ್ಯವಸ್ಥೆಯಲ್ಲಿ ಮುಸ್ಲಿಂ ತತ್ವಗಳಿಗೆ ದೊರೆತಿದ್ದ ಮಾನ್ಯತೆ ಕಡಿಮೆ. ಹಲವು ವಿಷಯಗಳಲ್ಲಿ ಅವರು ಹಿಂದೂ ಪರಂಪರೆಯನ್ನು ಅನುಸರಿಸಿದ್ದರು. ಔರಂಗಜೇಬ್ ಮಾತ್ರ ಇದಕ್ಕೆ ಹೊರತಾಗಿದ್ದ.

1. ಕೇಂದ್ರಾಡಳಿತ

ಸುಲ್ತಾನ : ಮೊಗಲ್ ಸುಲ್ತಾನರಿಗಿದ್ದ ಅಧಿಕಾರಗಳು ಅಪರಿಮಿತ. ಇವರ ಅಧಿಕಾರ ಮತ್ತು ತೀರ್ಮಾನವನ್ನು ಯಾರೂ ಪ್ರಶ್ನಿಸುವಂತಿರಲಿಲ್ಲ. ಅರ್ತಾರ್ಥ್ ಸಾಮ್ರಾಟನು ಸಾಮ್ರಾಜ್ಯದ ಪರಮಾಧಿಕಾರಿ. ಸುಲ್ತಾನರು ಇಸ್ಲಾಂ ಧರ್ಮದ ಪರಂಪರೆಗೆ ಅನುಗುಣವಾಗಿ, ರಾಜ್ಯಭಾರ ಮಾಡಬೇಕಾಗಿತ್ತು. ಆದರೆ ಶಕ್ತಿಶಾಲಿ ಸುಲ್ತಾನನು ತಾನು ಇಚ್ಚಿಸಿದಲ್ಲಿ ಅದಕ್ಕೆ ವಿರುದ್ಧವಾಗಿ ನಡೆಯಬಹುದಾಗಿತ್ತು. ಮೊಗಲರಲ್ಲಿ ಹಿರಿಯ ಮಗನಿಗೆ ಸಿಂಹಾಸನವೆಂಬ ಕಾನೂನು ಇರಲಿಲ್ಲ. ತತ್ಪರಿಣಾಮವಾಗಿ ಕತ್ತಿಯೇ ಉತ್ತರಾಧಿಕಾರವನ್ನು ನಿರ್ಧರಿಸುವ ಶಕ್ತಿಯಾಗಿತ್ತು. ಇದರಿಂದಾಗಿಯೇ ಉತ್ತರಾಧಿಕಾರ ಯುದ್ಧಗಳು ಸಾಮಾನ್ಯವಾಗಿದ್ದವು. ಸಾಮ್ರಾಟನು ಸಾಮ್ರಾಜ್ಯದ ಪ್ರಮುಖನಾಗಿ, ಶ್ರೇಷ್ಠ ದಂಡನಾಯಕನಾಗಿ, ಶ್ರೇಷ್ಠ ನ್ಯಾಯಾಧೀಶನಾಗಿ ಮತ್ತು ಕಾನೂನು ಗಾರನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ. ಎಲ್ಲಾ ಪ್ರಮುಖಾಧಿಕಾರಿಗಳನ್ನು ನೇಮಿಸುವ, ಬಡ್ತಿ ನೀಡುವ ಮತ್ತು ಅವರ ಹುದ್ದೆಗಳನ್ನು ರದ್ದುಮಾಡುವ ಅಧಿಕಾರ ಆತನಿಗಿತ್ತು. ಸಾಮ್ರಾಜ್ಯದಲ್ಲಿ ಈತನ ಮಾತೇ ಕಾನೂನಾಗಿತ್ತು.

ಮಂತ್ರಿಗಳು : ಸುಲ್ತಾನನಿಗೆ ಕೇಂದ್ರಾಡಳಿತದಲ್ಲಿ ಸೂಕ್ತ ಸಲಹೆ ಮತ್ತು ಸಹಕಾರ ನೀಡಲು ಕೆಲವು ಮಂತ್ರಿಗಳಿದ್ದರು. ಅವರುಗಳು ಮತ್ತು ಅವರುಗಳ ಕಾರ್ಯಗಳನ್ನು ಈ ಕೆಳಕಂಡಂತೆ ವಿವರಿಸಲಾಗಿದೆ.

ಪ್ರಧಾನಮಂತ್ರಿ : ಈತನಿಗೆ ವಕೀಲ್, ವಜೀರ, ದಿವಾನ್ ಎಂಬ ಹೆಸರುಗಳಿದ್ದವು. ಈತ ಸಾಮಾನ್ಯವಾಗಿ ಹಣಕಾಸು ಇಲಾಖೆಯ ಜವಾಬ್ದಾರಿ ಹೊತ್ತಿದ್ದ. ಅಲ್ಲದೆ ನಾಗರೀಕ ಆಡಳಿತಗಾರನಾಗಿದ್ದ. ಈತ ರಾಜ್ಯದ ಆದಾಯ ಮತ್ತು ಖರ್ಚುಗಳನ್ನು ನೋಡಿಕೊಳ್ಳುತ್ತಿದ್ದ. ಇವನು ಸುಲ್ತಾನನಿಗೂ ಉಳಿದ ಮಂತ್ರಿಗಳಿಗೂ ಕೊಂಡಿಯಾಗಿರುತ್ತಿದ್ದ. ಸುಲ್ತಾನನ ಗೈರು ಹಾಜರಿಯಲ್ಲಿ ಅವನ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸುತ್ತಿದ್ದ. ಈತನಿಗೆ ಹಲವು ಸಹಾಯಕರಿದ್ದು, ಖಜಾನೆ ಈತನ ಹಿಡಿತದಲ್ಲಿತ್ತು. ಕಂದಾಯದ ಬಗ್ಗೆ ಈತನದೇ ಅಂತಿಮ ತೀರ್ಮಾನವಾಗಿತ್ತು.

ಮೀರ್‌ ಭಕ್ಷಿ : ಈತ ಸೇನಾ ವಿಭಾಗದ ಮುಖ್ಯಸ್ಥ. ಸೈನ್ಯದ ಮೇಲ್ವಿಚಾರಕನಾಗಿದ್ದ. ಈತ ಮನ್ಸಬ್ದಾರರನ್ನೂ ನೇಮಿಸುತ್ತಿದ್ದ. ಮನ್ಸಬ್ದಾರರಿಗೆ ಮತ್ತು ಸೈನಿಕರಿಗೆ ಸಂಬಳ ನೀಡುವ ಜವಾಬ್ದಾರಿ ಈತನದಾಗಿತ್ತು. ಸೈನ್ಯದಲ್ಲಿ ರಾಜನ ಆಜ್ಞೆಗಳನ್ನು ಜಾರಿಗೆ ತರುವ, ಕುದುರೆಗಳಿಗೆ ಮುದ್ರೆ ಹಾಕುವ, ಕೆಲಸದ ಮೇಲ್ವಿಚಾರಣೆ ನಡೆಸುವ ಮತ್ತು ಮನ್ಸಬ್‌ದಾರರು ತಮಗೆ ನಿಗಧಿಪಡಿಸಿದ ಸಂಖ್ಯೆಯ ಸೈನಿಕರನ್ನು ಹೊಂದಿರುವರೇ ಅಥವಾ ಇಲ್ಲವೆ ಎಂಬುದನ್ನು ವಿಚಾರಿಸುವ ಅಧಿಕಾರ ಆತನಿಗಿತ್ತು.

ಖಾನ್-ಇ-ಸಾಮಾನ್ : ಇವನು ಅರಮನೆಯ ಕಾರ್ಯನಿರ್ವಾಹಕ, ಅರ್ತಾರ್ಥ್ ಸಾಮ್ರಾಟನ ಗೃಹ ಕೃತ್ಯಗಳ ಅಧಿಕಾರಿಯಾಗಿದ್ದು, ಆಸ್ಥಾನ, ಅಂತಃಪುರ, ಪರಿವಾರ, ಸೇವಕರು ಇತ್ಯಾದಿಗಳ ಮೇಲ್ವಿಚಾರಣೆ ನಡೆಸುತ್ತಿದ್ದನು. ಅಲ್ಲದೆ ಸರ್ಕಾರದ ಕಾರ್ಖಾನೆಗಳ ಮೇಲ್ವಿಚಾರಕನೂ ಆಗಿದ್ದ.

ಮುಖ್ಯಖಾಜಿ : ಸುಲ್ತಾನನು ಸಾಮ್ರಾಜ್ಯದ ಶ್ರೇಷ್ಠ ನ್ಯಾಯಾಧೀಶ ಮತ್ತು ಶ್ರೇಷ್ಠ ನ್ಯಾಯಾಲಯವಾಗಿದ್ದರೂ, ಆತನಿಗೆ ಎಲ್ಲಾ ನ್ಯಾಯ ವಿಷಯಗಳಿಗೆ ಗಮನಹರಿಸಲು ಸಮಯವಿರಲಿಲ್ಲ. ತತ್ಪರಿಣಾಮವಾಗಿ ಆ ಕಾರ್ಯವನ್ನು ಕೇಂದ್ರದಲ್ಲಿ ಮುಖ್ಯ ಖಾಜಿಗೆ ವಹಿಸಲಾಗಿತ್ತು. ಈತ ಪ್ರಾಂತ್ಯಗಳ, ಜಿಲ್ಲೆಗಳ ಮತ್ತು ನಗರಗಳ ಖಾಜಿಗಳನ್ನು ನೇಮಿಸುತ್ತಿದ್ದ.

ಸಾದರ್-ಉಸ್-ಸಾದರ್ : ಇವನು ಧಾರ್ಮಿಕ ಇಲಾಖೆಯ ಮುಖ್ಯಸ್ಥ, ಶಿಕ್ಷಣ, ಧಾರ್ಮಿಕ ಸಂಸ್ಥೆಗಳು ಇವನ ಅಧಿಕಾರದ ವ್ಯಾಪ್ತಿಗೆ ಬರುತ್ತಿದ್ದವು.

ಮುಹತ್ಸಿಬ್ : ಇವನು ನೈತಿಕ ಮತ್ತು ಸಾಮಾಜಿಕ ಅಧಿಕಾರಿಯಾಗಿದ್ದ. ಮದ್ಯಪಾನ, ಅಫೀಮು ಸೇವನೆ, ಜೂಜು ಮತ್ತು ಇತರ ನ್ಯಾಯಬಾಹಿರ ಕ್ರಮಗಳನ್ನು ತಡೆಯುವುದು ಈತನ ಜವಾಬ್ದಾರಿಯಾಗಿತ್ತು.

ಮೀರ್‌ ಆತೀಷ್ : ಫಿರಂಗಿ ಪಡೆಯ ಮುಖ್ಯಸ್ಥನಾದ ಈತನ ಹಿಡಿತದಲ್ಲಿ ಎಲ್ಲಾ ಫಿರಂಗಿಗಳಿದ್ದವು. ಅರಮನೆ, ಕೋಟೆಯ ಜವಾಬ್ದಾರಿ ಇವನದಾಗಿತ್ತು.

ದಾರೋಗಾ-ಇ-ಡಾಕ್-ಚೌಕಿ : ಈತ ಗೂಢಾಚಾರ ಪಡೆಯ ಮುಖ್ಯಸ್ಥನಾಗಿದ್ದು ಗೂಢಾಚಾರರನ್ನು ಸಾಮ್ರಾಜ್ಯದ ಎಲ್ಲೆಡೆ ಕಳುಹಿಸಿ, ಅವರಿಂದ ಸುದ್ದಿ ಸಂಗ್ರಹಿಸಿ, ಸಾಮ್ರಾಟನ ಗಮನಕ್ಕೆ ತರುವುದು ಈತನ ಕರ್ತವ್ಯವಾಗಿತ್ತು. ಈತನ ಕೈಕೆಳಗೆ ಪ್ರಾಂತ್ಯಗಳಲ್ಲಿ ಮತ್ತು ಪರಗಣಗಳಲ್ಲಿ ಗೂಢಾಚಾರ ಅಧಿಕಾರಿಗಳಿದ್ದರು.

2. ಪ್ರಾಂತ್ಯಾಡಳಿತ

ಸಾಮ್ರಾಜ್ಯದ ಸುವ್ಯವಸ್ಥಿತ ಆಡಳಿತಕ್ಕಾಗಿ ಸಾಮ್ರಾಜ್ಯವನ್ನು ಹಲವಾರು ಸುಬಾ ಅಥವಾ ಪ್ರಾಂತ್ಯಗಳಾಗಿ ವಿಭಜಿಸಲಾಗಿತ್ತು. ಅಕ್ಬರನ ಕಾಲದಲ್ಲಿ ಇವುಗಳ ಸಂಖ್ಯೆ 15 ಇತ್ತು. ಆದರೆ ಔರಂಗಜೇಬನ ಕಾಲದಲ್ಲಿ ಇವುಗಳ ಸಂಖ್ಯೆ 25 ಕ್ಕೆ ಏರಿತು. ಪ್ರತಿಯೊಂದು ಪ್ರಾಂತ್ಯಕ್ಕೂ ರಾಜ್ಯಪಾಲನಿದ್ದು, ಇವನನ್ನು ಅಕ್ಬರನ  ಕಾಲದಲ್ಲಿ ಸಿಪಾಹ್ ಸಾಲಾರ್ ಎಂದೂ ಆತನ ಉತ್ತಾರಾಧಿಕಾರಿಗಳ ಕಾಲದಲ್ಲಿ ಸುಬಾದಾರ್ ಅಥವಾ ನಿಜಾಮ್ ಎಂದು ಕರೆಯಲಾಗಿತ್ತು. ಈತನನ್ನು ಸಾಮ್ರಾಟ ನೇಮಿಸುತ್ತಿದ್ದ. ಪ್ರಾಂತ್ಯದ ಸಾಮಾನ್ಯ ಆಡಳಿತ, ಶಾಂತಿ, ಶಿಸ್ತು, ಕಾನೂನು ಪಾಲನೆ ಮತ್ತು ಕಂದಾಯ ವಸೂಲಿಯ ಮೇಲ್ವಿಚಾರಣೆ ಈತನ ಕರ್ತವ್ಯವಾಗಿತ್ತು. ಈತನು ಪ್ರಾಂತ್ಯದ ಸೇನೆಯ ದಂಡನಾಯಕನಾಗಿ ಮತ್ತು ನ್ಯಾಯಾಧೀಶನಾಗಿ ಕಾರ್ಯ ನಿರ್ವಹಿಸುತ್ತಿದ್ದ. ಇವನನ್ನು ಆಗಾಗ್ಗೆ ವರ್ಗಾವಣೆ ಮಾಡಲಾಗುತ್ತಿತ್ತು. ಇವನಿಗೆ ಅಧಿಕಾರಗಳಿದ್ದಾಗ್ಯೂ ಚಕ್ರವರ್ತಿಯ ಹಿಡಿತದಲ್ಲಿರಬೇಕಾಗಿತ್ತು. ದಿವಾನ: ಪ್ರಾಂತ್ಯಗಳಲ್ಲಿ ದಿವಾನರೆಂಬ ಅಧಿಕಾರಿಗಳಿದ್ದರು. ಇವರನ್ನು ಕೇಂದ್ರ ಸರ್ಕಾರವೇ ನೇಮಿಸುತ್ತಿತ್ತು. ಇವರು ಸ್ವತಂತ್ರರಾಗಿದ್ದು, ಸುಬಾದಾರರ ಚಟುವಟಿಕೆಗಳ ಮೇಲೆ ಗಮನಹರಿಸಬೇಕಿತ್ತು. ಇವರು ಒಬ್ಬರಿಗೊಬ್ಬರು ಪ್ರತಿಸ್ಪರ್ಧಿಗಳಾಗಿದ್ದರು. ದಿವಾನನು ಕಂದಾಯ ಇಲಾಖೆಯ ಮುಖ್ಯಸ್ಥನಾಗಿದ್ದು, ಕಂದಾಯ ನಿಗದಿ ಮತ್ತು ವಸೂಲಿ ಮೇಲ್ವಿಚಾರಣೆ ಮಾಡಬೇಕಾಗಿತ್ತು. ನಾಗರೀಕ ನ್ಯಾಯ ನೀಡುವ ಹಕ್ಕು ಇವನಿಗೆ ಇದ್ದು, ಈತ ಕೇಂದ್ರದ ವಜೀರನಿಗೆ ನೇರವಾಗಿ ಹೊಣೆಗಾರನಾಗಿದ್ದ. ಈ ಮೇಲ್ಕಂಡ ಅಧಿಕಾರಿಗಳಲ್ಲದೆ, ಪ್ರಾಂತ್ಯಗಳಲ್ಲಿ ಭಕ್ಷ ಸಾದರ್, ಖಾಜಿ, ಕೊತ್ವಾಲ, ವಕಿಯಾ ನವೀಸ್ ಮುಂತಾದ ಅನೇಕ ಅಧಿಕಾರಿಗಳಿದ್ದರು. ಇವರೆಲ್ಲರೂ ಕೇಂದ್ರದಲ್ಲಿ ಅದೇ ನಾಮಾಂಕಿತ ಹೊಂದಿದ ಅಧಿಕಾರಿಗಳ ಕೆಲಸಗಳನ್ನು ಪ್ರಾಂತ್ಯಗಳಲ್ಲಿ ನಿರ್ವಹಿಸುತ್ತಿದ್ದರು.

3. ಜಿಲ್ಲೆಯ ಆಡಳಿತ

ಪ್ರಾಂತ್ಯಗಳನ್ನು ಸರ್ಕಾರ್ ಅಥವಾ ಜಿಲ್ಲೆಗಳಾಗಿ ವಿಭಜಿಸಿದ್ದರು. ಪ್ರತಿಯೊಂದು ಸರ್ಕಾರ್‌ಗೆ ಈಗಿನ ಜಿಲ್ಲಾಧಿಕಾರಿ ರೀತಿ ಒಬ್ಬ ಪೌಜುದಾರ ಎಂಬ ಅಧಿಕಾರಿ ಇದ್ದ. ಇವನು ಸುಬಾದಾರನ ಕೈಕೆಳಗೆ ಕೆಲಸ ನಿರ್ವಹಿಸುತ್ತಿದ್ದ. ಈತ ತನ್ನ ಸರ್ಕಾರದಲ್ಲಿ ಆಡಳಿತ ಮತ್ತು ಕಾನೂನು ವ್ಯವಸ್ಥೆ ಮಾಡುವುದರ ಜೊತೆಗೆ ಸೇನಾ ತುಕಡಿಯ ನಾಯಕನಾಗಿದ್ದ. ಅಂದರೆ, ಡಾ|| ಜಾದುನಾಥ್ ಸರ್ಕಾ‌ರ್ ಪ್ರಕಾರ ಸ್ಥಳೀಯ ದಂಗೆಗಳನ್ನು ಅಡಗಿಸುವ, ದರೋಡೆಕೋರರನ್ನು ಹತ್ತಿಕ್ಕುವ, ಕಳ್ಳರನ್ನು ಮತ್ತು ವಂಚಕರನ್ನು ಶಿಕ್ಷುವ ಮತ್ತು ತೆರಿಗೆ ಕೊಡದವರನ್ನು ದಂಡಿಸುವ ಅಧಿಕಾರ ಹೊಂದಿದ್ದನು.

4. ಪರಗಣಗಳ ಆಡಳಿತ

ಸರ್ಕಾರಗಳನ್ನು (ಜಿಲ್ಲೆಗಳನ್ನು) ಹಲವು ಪರಗಣಗಳಾಗಿ ವಿಂಗಡಿಸಲಾಗಿತ್ತು. ಪ್ರತಿಯೊಂದು ಪರಗಣಗಳಲ್ಲಿ ಶೀಕ್‌ದಾರ್, ಅಮೀಲ್, ಪೋತ್‌ದಾರ್ ಮತ್ತು ಕುನಂಗೊ ಎಂಬ ಅಧಿಕಾರಿಗಳಿದ್ದರು. ಶೀಕ್‌ದಾರ್ ಪರಗಣಗಳ ಮುಖ್ಯ ಆಡಳಿತಾ ಧಿಕಾರಿಯಾಗಿದ್ದು, ಸಾಮಾನ್ಯ ಆಡಳಿತವನ್ನು ನೋಡಿಕೊಳ್ಳುತ್ತಿದ್ದ. ಅಮೀಲನ ಮುಖ್ಯ ಕೆಲಸ ಕಂದಾಯ ನಿಗದಿ ಮತ್ತು ವಸೂಲಿ. ಪೋತ್‌ದಾರನು ಪರಗಣದ ಖಜಾನೆ ಅಧಿಕಾರಿ, ಕುನಂಗೊ ಕಂದಾಯ ವಸೂಲಿ ಬಗ್ಗೆ ದಾಖಲೆಗಳನ್ನು ಇಡುತ್ತಿದ್ದನು.

5. ನಗರಾಡಳಿತ

ನಗರದ ಮುಖ್ಯ ಆಡಳಿತಗಾರ ಕೊತ್ವಾಲ್, ಈತ ಕೇಂದ್ರದಿಂದ ನೇಮಿಸಲ್ಪಟ್ಟ ರಕ್ಷಣಾಧಿಕಾರಿ. ಇವನ ಮುಖ್ಯ ಕರ್ತವ್ಯಗಳೆಂದರೆ:

  1. ನಗರದ ರಕ್ಷಣೆ.
  2. ಮಾರುಕಟ್ಟೆ ನಿಯಂತ್ರಣ
  3. ಉತ್ತರಾಧಿಕಾರಿಗಳಿಲ್ಲದ ಆಸ್ತಿ ರಕ್ಷಣೆ ಮತ್ತು ವಿಲೆವಾರಿ.
  4. ದುಷ್ಕರ್ಮಿಗಳ ಮೇಲೆ ಸದಾ ಗಮನವಿಡುವುದು ಮತ್ತು ಅಪರಾಧಗಳನ್ನು ತಡೆಗಟ್ಟುವುದು.
  5. ಸಮಾಜದಲ್ಲಿನ ಅನೈತಿಕ ಚಟುವಟಿಕೆಗಳನ್ನು ನಿಯಂತ್ರಿಸುವುದು.
  6. ಸಮಾಧಿ ಸ್ಥಳಗಳ ಮತ್ತು ಕಸಾಯಿಖಾನೆಗಳ ನಿಯಂತ್ರಣ.

ಇದಕ್ಕಾಗಿ ಕೊತ್ವಾಲ ರಕ್ಷಣಾದಳವನ್ನು ಹೊಂದಿರಬೇಕಾಗಿತ್ತು. ನಗರವನ್ನು ಅನೇಕ ವಿಭಾಗಗಳಾಗಿ ವಿಂಗಡಿಸಿ, ಅವುಗಳಿಗೆ ನಂಬಿಕೆಗೆ ಅರ್ಹರಾದ ಅಧಿಕಾರಿಗಳನ್ನು ನೇಮಿಸುತ್ತಿದ್ದ. ಈ ಅಧಿಕಾರಿಗಳು ಅಲ್ಲಿನ ಎಲ್ಲಾ ನಿವಾಸಿಗಳ ವಿವರಗಳನ್ನು ಇಟ್ಟುಕೊಳ್ಳಬೇಕಾಗಿತ್ತು. ಗೂಢಾಚಾರರ ಮೂಲಕ ಸುದ್ದಿಸಮಾಚಾರವನ್ನು ಸಂಗ್ರಹಿಸಿ, ಮುನ್ನೆಚ್ಚರಿಕೆ ಕಾರ್ಯಗಳನ್ನು ಕೈಗೊಳ್ಳಬೇಕಾಗಿತ್ತು. ವೇಶ್ಯೆಯರ, ನೃತ್ಯಗಾರ್ತಿಯರ, ಮಾದಕಪಾನೀಯಗಳ ವ್ಯಾಪಾರಿಗಳ ಮತ್ತು ಸೋಮಾರಿಗಳ ಮೇಲೆ ಗಮನಹರಿಸಬೇಕಾಗಿತ್ತು. ದೊಡ್ಡ ನಗರಗಳನ್ನು ಹಲವು ಮೊಹಲ್ಲಾಗಳಾಗಿ ವಿಂಗಡಿಸಲಾಗಿತ್ತು. ಕುಶಲಕರ್ಮಿಗಳು ತಮ್ಮದೇ ಆದ ಸಂಘಸಂಸ್ಥೆಗಳನ್ನು ಹೊಂದಿದ್ದರು. ಪ್ರತಿಯೊಂದು ನಗರದ ಸುತ್ತ ಸಣ್ಣ ಕೋಟೆ ಇರುತ್ತಿತ್ತು. ಸರ್ಕಾರ ಆಂತರಿಕ ಭದ್ರತೆ, ರಸ್ತೆಗಳ ಸ್ವಚ್ಛತೆ, ಮಾರುಕಟ್ಟೆಗಳ ನಿಯಂತ್ರಣ ಮತ್ತು ತೆರಿಗೆಯ ವಸೂಲಿ ಕಾರ್ಯಗಳಿಗೆ ತನ್ನ ಕಾರ್ಯವನ್ನು ಸೀಮಿತಗೊಳಿಸಿತ್ತು. ಬೀದಿ ದೀಪಗಳ ವ್ಯವಸ್ಥೆ, ನೀರು ಸರಬರಾಜು, ಆರೋಗ್ಯ, ಶಿಕ್ಷಣ ಮುಂತಾದವುಗಳು ಜನತೆಗೆ ಬಿಟ್ಟ ವಿಷಯಗಳಾಗಿದ್ದವು.

6. ಗ್ರಾಮಾಡಳಿತ

ಡಾ.ಪಿ.ಶರಣ್ ಪ್ರಕಾರ ಮೊಗಲ್ ಸಾಮ್ರಾಟರು ಗ್ರಾಮಗಳ ಆಡಳಿತಕ್ಕೆ ಹೆಚ್ಚು ಗಮನ ನೀಡಿದರು. ಮತ್ತು ಹಳ್ಳಿಯ ಜನರ ಸಮಸ್ಯೆಗಳ ನಿವಾರಣೆಗೆ ಕ್ರಮಕೈಗೊಂಡಿದ್ದರು. ಗ್ರಾಮಾಧಿಕಾರಿಗಳಲ್ಲಿ ಮುಖದ್ದಂ, ಪಟ್ಟಾರಿ ಮತ್ತು ಚೌಕಿದಾರ ಪ್ರಮುಖರು, ಗ್ರಾಮಗಳ ಆಡಳಿತ ಪಂಚಾಯಿತಿಗಳ ಮೂಲಕ ನಡೆಯುತ್ತಿತ್ತು. ಕುಟುಂಬಗಳ ಪ್ರಮುಖರು ಪಂಚಾಯಿತಿಯ ಸದಸ್ಯರಾಗಿರುತ್ತಿದ್ದರು. ಅವರಿಗೆ ಗ್ರಾಮದ ಆಡಳಿತದ ಬಗ್ಗೆ, ನ್ಯಾಯ ವಿತರಣೆ ಬಗ್ಗೆ, ಕಂದಾಯದ ವಸೂಲಾತಿಯ ಬಗ್ಗೆ, ಗ್ರಾಮದ ನೈರ್ಮಲ್ಯ, ಶಾಂತಿ, ಶಿಸ್ತು, ರಕ್ಷಣೆಯ ಬಗ್ಗೆ ನಿರ್ಣಯ ಮಾಡುವ ಅಧಿಕಾರವಿತ್ತು. ಗ್ರಾಮದ ಮುಖ್ಯಸ್ಥನಾಗಿದ್ದ ಮುಖದ್ದಂ ಪಂಚಾಯಿತಿಯ ಅಧ್ಯಕ್ಷನೂ ಆಗಿದ್ದನು. ಕೇಂದ್ರ ಸರ್ಕಾರ ಗ್ರಾಮದ ಆಡಳಿತದಲ್ಲಿ ಹೆಚ್ಚಾಗಿ ಹಸ್ತಕ್ಷೇಪಮಾಡುವಂತಿರಲಿಲ್ಲ.

ಉಪಸಂಹಾರ

ಮೊಗಲ್ ಆಡಳಿತ ವ್ಯವಸ್ಥೆ ಕೇಂದ್ರದಿಂದ ಗ್ರಾಮ ಮಟ್ಟದವರೆಗೆ ಸುವ್ಯವಸ್ಥಿತವಾಗಿತ್ತು. ಸಾಮ್ರಾಟನಿಗೆ ಅಪಾರ ಅಧಿಕಾರಗಳಿದ್ದರೂ ಮಂತ್ರಿಗಳು ಮತ್ತು ಅಧಿಕಾರಿಗಳ ಸಹಾಯದಿಂದ ಆಡಳಿತ ನಡೆಯುತ್ತಿತ್ತು. ಈ ವ್ಯವಸ್ಥೆಯ ಮೂಲಕ ಶಾಂತಿ, ಕಾನೂನು ಮತ್ತು ಕಂದಾಯ ವ್ಯವಸ್ಥೆಗಳನ್ನು ಸಮರ್ಪಕವಾಗಿ ನಿರ್ವಹಿಸಲಾಯಿತು. ಆದ್ದರಿಂದ ಮೊಗಲ್ ಆಡಳಿತ ವ್ಯವಸ್ಥೆ ಭಾರತೀಯ ಇತಿಹಾಸದಲ್ಲಿ ಪ್ರಮುಖ ಸ್ಥಾನವನ್ನು ಪಡೆದಿದೆ.

ಮೊಗಲರ ಆರ್ಥಿಕ ಮತ್ತು ಸಾಮಾಜಿಕ ಪರಿಸ್ಥಿತಿ

ಮೊಗಲರ ಆರ್ಥಿಕ ಮತ್ತು ಸಾಮಾಜಿಕ ಪರಿಸ್ಥಿತಿ

ಮೊಗಲರ ಆರ್ಥಿಕ ಸ್ಥಿತಿಗತಿ

ಬಾಬರನ ಆತ್ಮವೃತ್ತಾಂತ, ಗುಲ್‌ದನ್‌ ಬೇಗಂಳ ಹುಮಾಯೂನ್ ನಾಮ, ಅಬ್ದುಲ್‌ ಫಜಲ್‌ನ ಐನ್-ಎ-ಆಕ್ಬರಿ ಮೊದಲಾದ ವಿದೇಶಿ ಪ್ರವಾಸಿಗರ ಬರವಣಿಗೆಗಳು ಮತ್ತು ಸಮಕಾಲೀನ ಸಾಹಿತ್ಯ ಕೃತಿಗಳು -ಇವುಗಳಿಂದ ಮೊಗಲರ ಕಾಲದ ಆರ್ಥಿಕ ಪರಿಸ್ಥಿತಿಯ ಮಾಹಿತಿ ದೊರೆಯುತ್ತದೆ.

1. ಕೃಷಿ ಕ್ಷೇತ್ರ: ಮೊಗಲರ ಕಾಲದಲ್ಲಿ ವ್ಯವಸಾಯ ಮುಖ್ಯ ಉದ್ಯೋಗವಾಗಿತ್ತು. ಈ ಕಾಲದಲ್ಲಿಯೂ ಪ್ರಾಚೀನ ಕಾಲದ ಕೃಷಿ ಉಪಕರಣ, ವಿಧಾನಗಳನ್ನೇ ಬಳಸುತ್ತಿದ್ದರು. ಅಕ್ಬರ್ ವ್ಯವಸಾಯಕ್ಕೆ ಹೆಚ್ಚಿನ ಗಮನ ನೀಡಿದನು. ಶೇರ್‌ಶಹನು ಕೃಷಿಕ್ಷೇತ್ರದಲ್ಲಿ ಮಾಡಿದ್ದ ಹಲವು ಕಾರ್ಯಗಳನ್ನು ಆಕ್ಬರನು ಅನುಸರಿಸಿದನು. ವ್ಯವಸಾಯಗಾರರು ಬೇಸಾಯಕ್ಕೊಳಪಟ್ಟ ಜಮೀನಿಗೆ ಮಾತ್ರ ಕಂದಾಯ ಕೊಡಬೇಕಾಗಿತ್ತು. ಅಕ್ಬರನ ಕಾಲದಲ್ಲಿ ರೈತವಾರಿ ಪದ್ಧತಿಯಿದ್ದದರಿಂದ ರೈತರು ಮತ್ತು ಸರ್ಕಾರದ ನಡುವೆ ನೇರ ಸಂಬಂಧವಿತ್ತು. ಷಹಜಹಾನನ ಮತ್ತು ಔರಂಗಜೇಬರ ಅಳ್ವಿಕೆಗಳಲ್ಲಿ ಗೇಣಿದಾರರು ಅಧಿಕಾರಿಗಳ ಶೋಷಣೆಗೆ ಒಳಗಾಗಿದ್ದರು.

ರೈತರು ಗೋಧಿ, ಬಾರ್ಲಿ, ಬೇಳೆಕಾಳುಗಳು, ಎಣ್ಣೆಕಾಳುಗಳು, ಕಬ್ಬು, ನೀಲಿ ಮತ್ತು ಗಸಗಸೆಗಳನ್ನು ಬೆಳೆಯುತ್ತಿದ್ದರು. ಕೆಲವೊಂದು ಬೆಳೆಗಳು ಕೆಲವು ಪ್ರದೇಶಗಳಿಗೆ ಸೀಮಿತವಾಗಿದ್ದವು. ಕಬ್ಬನ್ನು ಉತ್ತರ ಪ್ರದೇಶ, ಬಿಹಾರ ಮತ್ತು ಬಂಗಾಳಗಳಲ್ಲಿ, ನೀಲಿಯನ್ನು ಉತ್ತರ ಮತ್ತು ದಕ್ಷಿಣ ಭಾರತಗಳಲ್ಲಿ, ಹತ್ತಿಯನ್ನು ಭಾರತದ ಹಲವೆಡೆ ಬೆಳೆಯುತ್ತಿದ್ದರು. ಕೃತಕ ನೀರಾವರಿ ಬಳಕೆಯಲ್ಲಿರಲಿಲ್ಲ. ಕೆರೆ ಮತ್ತು ಭಾವಿಗಳಿಂದ ನೀರಾವರಿ ಮಾಡಲಾಗುತ್ತಿತ್ತು. ಆದಾಗ್ಯೂ ದೇಶವು ಕೃಷಿ ಉತ್ಪಾದನೆಯಲ್ಲಿ ಸ್ವಯಂಪೂರ್ಣವಾಗಿತ್ತು.

2. ಕೈಗಾರಿಕೆ : ಮೊಗಲರ ಕಾಲದಲ್ಲಿ ಕೃಷಿಯಲ್ಲದೆ ಉತ್ಪಾದನೆಯ ವಸ್ತುಗಳಲ್ಲಿ ಮೀನು, ಲೋಹಗಳು, ಉಪ್ಪು, ಅಫೀಮು ಮತ್ತು ಮದ್ಯ ಪ್ರಮುಖವಾಗಿದ್ದವು. ಚಿನ್ನವು ಕುಮಾವ್ ಗುಡ್ಡಗಳಲ್ಲಿ ಮತ್ತು ಪಂಜಾಬಿನ ನದಿ ಪಾತ್ರಗಳಲ್ಲಿ ದೊರೆಯುತ್ತಿತ್ತು. ಕಬ್ಬಿಣ ಹಲವು ಕಡೆಗಳಲ್ಲಿ ದೊರೆಯುತ್ತಿದ್ದು, ಸಲಕರಣೆಗಳನ್ನು ಮಾಡಲು, ಶಸ್ತ್ರಾಸ್ತ್ರಗಳನ್ನು ಮಾಡಲು ಉಪಯೋಗಿಸುತ್ತಿದ್ದರು. ರಾಜಸ್ಥಾನ ಮತ್ತು ಮದ್ಯಭಾರತದಲ್ಲಿ ತಾಮ್ರದ ಗಣಿಗಳಿದ್ದವು. ಫತೇಪುರಸಿಕ್ರಿಯಲ್ಲಿ ಕೆಂಪುಶಿಲೆಯು, ಥಟ್ಟಾದಲ್ಲಿ ಹಳದಿ ಶಿಲೆಯು, ಜಯಪುರ ಮತ್ತು ಜೋಧ್‌ಪುರಗಳಲ್ಲಿ ಅಮೃತಶಿಲೆಯು ಸಿಗುತ್ತಿತ್ತು. ವಜ್ರಗಳು ಗೋಲ್ಕಂಡ ಮತ್ತು ಛೋಟಾನಾಗಪುರಗಳಲ್ಲಿ ಸಿಗುತ್ತಿತ್ತು. ಉಪ್ಪು, ಸಂಬಾರ್ ಸರೋವರ, ಪಂಜಾಬ್, ಗುಜರಾತ್, ಸಿಂದ್ ಪ್ರದೇಶದ ಸರೋವರ ಮತ್ತು ಸಮುದ್ರ ತೀರಗಳಿಂದ ದೊರೆಯುತ್ತಿತ್ತು. ಬಿಹಾರ ಮತ್ತು ಮಾಳ್ವಗಳಲ್ಲಿ ಆಫೀಮು ಹೆಚ್ಚಾಗಿ ಬೆಳೆಯುತ್ತಿದ್ದರು. ಮದ್ಯವನ್ನು ಹಲವೆಡೆ ತಯಾರಿಸುತ್ತಿದ್ದರು. ಮದ್ದುಗುಂಡುಗಳ ಬಳಕೆಗೆ ಪೆಟ್ಲುಪ್ಪನ್ನು ತಯಾರಿಸಿ ಬಳಸುತ್ತಿದ್ದರು. ಪ್ರತಿಯೊಂದು ಹಳ್ಳಿಯಲ್ಲಿಯೂ ಹತ್ತಿ ಬಟ್ಟೆಯ ಕೈಗಾರಿಕೆ ಬೆಳೆದಿತ್ತು. ಆಗ್ರ, ಬನಾರಸ್, ಜುನಾಪುರ, ಪಾಟ್ನ, ಬಾನ್ಪುರ, ಲಕ್ನೋ, ಖೈರಾಬಾದ್, ಬೀದರ್, ಬಂಗಾಳ, ಬಿಹಾರ, ಮಾಳ್ವಗಳ ಅನೇಕ ಪ್ರದೇಶಗಳು ಬಟ್ಟೆ ತಯಾರಿಕೆಯ ಪ್ರಮುಖ ಕೇಂದ್ರಗಳಾಗಿದ್ದವು. ಈ ಕೈಗಾರಿಕೆಯ ಜೊತೆಗೆ ಬಣ್ಣ ಹಾಕುವ ಕೈಗಾರಿಕೆ ಸಹ ಉಪಕೈಗಾರಿಕೆಯಾಗಿ ಬೆಳೆದಿತ್ತು. ಬಂಗಾರದ ಜರಿಯುಳ್ಳ ಬಟ್ಟೆಗಳನ್ನು ಅಯೋಧ್ಯೆ ಮತ್ತು ಖಾನ್ದೇಶಗಳಲ್ಲಿ ತಯಾರಿಸುತ್ತಿದ್ದರು. ಡಾಕಾವೂ ಸೇರಿದಂತೆ ಬಂಗಾಳದ ಹಲವು ನಗರಗಳು ರೇಷ್ಮೆ ವಸ್ತ್ರಗಳಿಗೆ, ನಯವಾದ ಮಸ್ಲಿನ್ ಬಟ್ಟೆಗೆ ಮತ್ತು ಚಾಪೆಗಳಿಗೆ ಪ್ರಸಿದ್ಧವಾಗಿದ್ದವು. ಮುಲ್ತಾನ್‌ನಲ್ಲಿ ಸುಂದರವಾದ ಪುಷ್ಪಸದೃಶ ರತ್ನಗಂಬಳಿಗಳನ್ನು ಮತ್ತು ಕಾಶ್ಮೀರದಲ್ಲಿ ಉಣ್ಣೆಯ ರತ್ನಗಂಬಳಿಗಳನ್ನು ಮತ್ತು ಇತರ ರೇಷ್ಮೆ ಮತ್ತು ಉಣ್ಣೆವಸ್ತುಗಳನ್ನು ತಯಾರಿಸುತ್ತಿದ್ದರು. ಜಹಾಂಗೀರನು ಅಮೃತಸರದಲ್ಲಿ ರತ್ನಗಂಬಳಿ ಮತ್ತು ಶಾಲಿನ ಕೈಗಾರಿಕೆ ಸ್ಥಾಪಿಸಿದನು. ಯುದ್ಧಕ್ಕೆ ಮತ್ತು ರಕ್ಷಣೆಗೆ ಬೇಕಾದ ಆಯುಧಗಳನ್ನು ಪ್ರಮುಖವಾಗಿ ಪಂಜಾಬ್, ಗುಜರಾತ್ ಮತ್ತು ಸೋಮನಾಥದಲ್ಲಿ ತಯಾರಿಸುತ್ತಿದ್ದರು. ಜುನಾಪುರ ಮತ್ತು ಗುಜರಾತ್‌ನಲ್ಲಿ ಸುಗಂಧ ದ್ರವ್ಯಗಳನ್ನು, ಸಿಯೋಲ್ ಕೋಟ್, ಗಯಾ ಮತ್ತು ಕಾಶ್ಮೀರಗಳಲ್ಲಿ ಕಾಗದವನ್ನು, ಬೀದರ್‌ನಲ್ಲಿ ಬೆಳ್ಳಿ ಮತ್ತು ಬಂಗಾರದ ಅಲಂಕಾರ ವಸ್ತುಗಳನ್ನು, ಪತೇಪುರಸಿಕ್ರಿ ಮತ್ತು ಬಿರಾರ್‌ಗಳಲ್ಲಿ ಗಾಜಿನ ವಸ್ತುಗಳನ್ನು ಉತ್ಪಾದನೆ ಮಾಡಲಾಗುತಿತ್ತು. ದಕ್ಷಿಣ ಭಾರತದಲ್ಲಿ ಮುತ್ತು ಮತ್ತು ಹವಳಗಳ ಕೈಗಾರಿಕೆ ಅಭಿವೃದ್ಧಿ ಹೊಂದಿತ್ತು. ಹಲವೆಡೆ ಮರದ ಮತ್ತು ಚರ್ಮದ ವಸ್ತುಗಳನ್ನು ತಯಾರಿಸಲಾಗುತ್ತಿತ್ತು.

3. ನಾಣ್ಯಗಳು : ದೆಹಲಿಯಲ್ಲಿ ಪ್ರಧಾನ ಟಂಕಶಾಲೆ ಇತ್ತು. ಬಂಗಾಳ, ಲಾಹೋರ್, ಜಾನ್‌ಪುರ, ಅಹ್ಮದಾಬಾದ್ ಮತ್ತು ಪಾಟ್ನಗಳಲ್ಲಿ ಪ್ರಾಂತೀಯ ಟಂಕಶಾಲೆಗಳಿದ್ದವು. ಷಹಜಹಾನನ ಕಾಲದಲ್ಲಿ ಸೂರತ್‌ನಲ್ಲಿನ ಟಂಕಶಾಲೆ ಮುಖ್ಯವಾಗಿತ್ತು. ಮೊಗಲರ ಕಾಲದ ನಾಣ್ಯಗಳಲ್ಲಿ ಬೆಳ್ಳಿಯ ರೂಪಾಯಿಯ ತೂಕ 175 ಗ್ರೇನ್‌ಗಳಾಗಿತ್ತು. ಅಕ್ಬರನ ಮತ್ತು ಆತನ ತರುವಾಯದ ದೊರೆಗಳ ಕಾಲದಲ್ಲಿ ಮೊಗಲ್ ಸಾಮ್ರಾಜ್ಯದ ವಾಣಿಜ್ಯ ವ್ಯವಹಾರಗಳೆಲ್ಲ ವೃತ್ತಾಕಾರದ ಚಿನ್ನದ ಮೊಹರಗಳು, ರೂಪಾಯಿಗಳು ಮತ್ತು ದಾಮುಗಳಲ್ಲಿ (ತಾಮ್ರದ) ನಡೆಯುತ್ತಿದ್ದವು.

4. ವ್ಯಾಪಾರ : ಮೊಗಲರ ಕಾಲದಲ್ಲಿ ಏಷ್ಯಾ ಮತ್ತು ಯೂರೋಪ್ ರಾಷ್ಟ್ರಗಳೊಡನೆ ವ್ಯಾಪಾರ ಅತ್ಯಂತ ಚಟುವಟಿಕೆಯಿಂದ ನಡೆಯುತ್ತಿತ್ತು. ಶ್ರೀಲಂಕಾ, ಬರ್ಮ, ಚೈನಾ, ಜಪಾನ್, ಇಂಡೋನೇಷಿಯಾ, ನೇಪಾಳ, ಪರ್ಷಿಯಾ, ಮದ್ಯಏಷ್ಯಾ, ಆರೇಬಿಯಾ, ಕೆಂಪುಸಮುದ್ರದ ತೀರದ ಬಂದರುಗಳು, ಪೂರ್ವ ಆಫ್ರಿಕಾದೊಡನೆ ವ್ಯಾಪಾರ ವಹಿವಾಟು ನಡೆಯುತ್ತಿತ್ತು.

ಭಾರತದ ಮುಖ್ಯ ರಫ್ತುವಸ್ತುಗಳೆಂದರೆ ಹತ್ತಿ ಬಟ್ಟೆಗಳು, ಮೆಣಸು, ನೀಲಿ, ಅಫೀಮು, ಪೆಟ್ಲುಪ್ಪು, ಸಾಂಬಾರ ಪದಾರ್ಥಗಳು, ಸಕ್ಕರೆ, ಉಪ್ಪು, ಮಣಿಗಳು, ಅರಿಶಿಣ, ಅರಗು, ವಿವಿಧ ಬಗೆಯ ಔಷಧಿಗಳು ಮತ್ತು ಇತರ ಸಾಮಗ್ರಿಗಳು, ಮುಖ್ಯವಾದ ಅಮದು ವಸ್ತುಗಳೆಂದರೆ- ಬೆಳ್ಳಿ, ಬಂಗಾರ, ಕುದುರೆಗಳು, ಲೋಹಗಳು, ದಂತ, ಹವಳ, ಶಿಲಾರಾಳ, ವೈಡೂರ್ಯ, ರೇಷ್ಮೆ ವಸ್ತ್ರಗಳು, ವೆಲ್ವೆಟ್, ಜರತಾರಿ, ಪಿಂಗಾಣಿ ವಸ್ತುಗಳು, ಆಫ್ರಿಕಾದ ಗುಲಾಮರು ಮತ್ತು ಯೂರೋಪಿನ ಮದ್ಯಪಾನೀಯಗಳು. ದೇಶಿಯ ಮತ್ತು ವಿದೇಶಿಯ ವ್ಯಾಪಾರದ ಪ್ರಮುಖ ಕೇಂದ್ರಗಳೆಂದರೆ ಸೂರತ್, ಬ್ರೋಚ್, ಬೇಸ್ಸೀನ್, ಚೌಲ್, ಗೋವಾ, ಕಲ್ಲಿಕೋಟೆ, ಕೊಚ್ಚಿನ್, ನಾಗಪಟ್ಟಣ, ಮಚಲಿಪಟ್ಟಣ, ಸೌತ್‌ಗೌವ್, ಪಾಟ್ನ, ಆಗ್ರಾ, ಕ್ಯಾಂಬೆ, ಮುಲ್ತಾನ್ ಮತ್ತು ಅಹ್ಮದಾಬಾದ್.

ಸಾಮಾಜಿಕ ಪರಿಸ್ಥಿತಿ

ಮೊಗಲ್ ಕಾಲದಲ್ಲಿನ ಸಮಾಜವು ಪ್ಯೂಡಲ್ ತಳಹದಿಯ ಮೇಲೆ ಸಂಘಟಿತವಾಗಿತ್ತು. ಚಕ್ರವರ್ತಿಯು ಸಮಾಜದಲ್ಲಿ ಅತ್ಯಂತ ಬಲಾಢ್ಯವಾದ ಮತ್ತು ಗೌರವಾನ್ವಿತ ವ್ಯಕ್ತಿಯಾಗಿದ್ದನು. ಸಮಾಜ ವ್ಯವಸ್ಥೆಯ ತುತ್ತ ತುದಿಯಲ್ಲಿದ್ದ ಮೊಗಲ್ ಬಾದಶಹನ ಕೆಳಗೆ ಆತನ ಸರದಾರರು ಇದ್ದರು.

ಶ್ರೀಮಂತರು ವೈಭವದ ಜೀವನವನ್ನು ನಡೆಸಿದರೆ, ಸಾಮಾನ್ಯರು ಕಡುಬಡತನ ಅನುಭವಿಸುತ್ತಿದ್ದರು.

1. ಉಡುಪು : ಕಡಿಮೆ ಬಟ್ಟೆಯನ್ನು ಧರಿಸುವುದು ದಕ್ಷಿಣದಲ್ಲಿ ರೂಢಿಯಲ್ಲಿತ್ತು. ಇದಕ್ಕೆ ಹವಾಮಾನವೇ ಕಾರಣ. ಉತ್ತರ ಭಾರತದಲ್ಲಿ ಕೆಲವೊಂದು ಋತುಗಳಲ್ಲಿ ಮಾತ್ರ ಜನತೆ ಮೈತುಂಬ ಬಟ್ಟೆ ಧರಿಸುತ್ತಿದ್ದರು. ಉಳಿದಂತೆ ಹೆಚ್ಚು ಬಟ್ಟೆ ಧರಿಸುತ್ತಿರಲಿಲ್ಲ. ಕೆಳವರ್ಗದ ಜನರಿಗೆ ಸಾಕಷ್ಟು ಬಟ್ಟೆ ಇರಲಿಲ್ಲ. ಅವರು ಉಣ್ಣೆ ಬಟ್ಟೆಗಳನ್ನು ಧರಿಸುವುದಂತೂ ಅಸಾಧ್ಯವಾಗಿತ್ತು.

2. ಆಹಾರ : ಆಹಾರಕ್ಕೆ ಸಂಬಂಧಿಸಿದಂತೆ ಕಾಳು ಮತ್ತು ಬೇಳೆಗಳನ್ನು ಜನರು ದಿನನಿತ್ಯದ ಆಹಾರವನ್ನಾಗಿ ಉಪಯೋಗಿಸುತ್ತಿದ್ದರು. ಬಂಗಾಳ ಮತ್ತು ಕರಾವಳಿ ಪ್ರದೇಶದಲ್ಲಿ ಈ ಆಹಾರದ ಜೊತೆಗೆ ಮೀನನ್ನು ಉಪಯೋಗಿಸುತ್ತಿದ್ದರೆ, ದಕ್ಷಿಣ ಭಾರತದಲ್ಲಿ ಮಾಂಸವನ್ನು ಉಪಯೋಗಿಸುತ್ತಿದ್ದರು. ಉತ್ತರ ಭಾರತದಲ್ಲಿ ಗೋಧಿ ಹೆಚ್ಚಾಗಿ ಬಳಸುತ್ತಿದ್ದರು. ಬೆಣ್ಣೆ ಮತ್ತು ಎಣ್ಣೆ ಸುಲಭದರದಲ್ಲಿ ದೊರೆಯುತ್ತಿದ್ದರಿಂದ ಸಾಮಾನ್ಯ ಜನತೆ ಹೆಚ್ಚಾಗಿ ಉಪಯೋಗಿಸುತ್ತಿದ್ದರು. ಸಕ್ಕರೆ ಮತ್ತು ಉಪ್ಪು ದುಬಾರಿಯಾಗಿದ್ದವು.

3. ಆಭರಣಗಳು ಮತ್ತು ಮನರಂಜನೆ : ಸರದಾರರು ಬೆಲೆಯುಳ್ಳ ಪೋಷಾಕನ್ನು ಮತ್ತು ರತ್ನಾಭರಣಗಳನ್ನು ಧರಿಸುತ್ತಿದ್ದರು. ಸರದಾರರು ವಿವಿಧ ಪ್ರಕಾರಗಳ ಕ್ರೀಡೆ ಮತ್ತು ಮನರಂಜನಾ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು. ಜೂಜುಗಾರಿಕೆ ರೂಡಿಯಲ್ಲಿತ್ತು.

4. ಮೂಢನಂಬಿಕೆಗಳು : ಹಿಂದೂ ಸಮಾಜದಲ್ಲಿ ಸತಿ ಪದ್ಧತಿ, ಬಾಲ್ಯ ವಿವಾಹ, ಶಿಶು ಹತ್ಯೆ ಮತ್ತು ವರದಕ್ಷಿಣೆ ಪದ್ಧತಿಗಳು ರೂಡಿಯಲ್ಲಿದ್ದವು. ಅಕ್ಬರನು ಬಲಾತ್ಕಾರದ ಸತಿಪದ್ದತಿಯನ್ನು ನಿಷೇಧಿಸಲು ಯತ್ನಿಸಿದನು.

5. ಧಾರ್ಮಿಕ ವಿಧಿ ವಿಧಾನಗಳು : ಹಿಂದೂಗಳು ಗಂಗಾನದಿಯನ್ನು ಅತ್ಯಂತ ಪವಿತ್ರವೆಂದು ಭಾವಿಸಿದ್ದರು. ಈ ನದಿಯಲ್ಲಿ ಸ್ನಾನ ಮಾಡುವುದು ಪುಣ್ಯಕರವೆಂಬ ಭಾವನೆಯಿತ್ತು. ಹಿಂದೂಗಳು ಮತ್ತು ಮುಸಲ್ಮಾನರು ಜ್ಯೋತಿಷ್ಯದಲ್ಲಿ ನಂಬಿಕೆಯುಳ್ಳವರಾಗಿದ್ದರು. ಮುಸಲ್ಮಾನರು ಅನೇಕ ಪೀರರನ್ನು ಪೂಜಿಸುತ್ತಿದ್ದರು. ಈದ್ ಹಬ್ಬವನ್ನು ಉತ್ಸಾಹದಿಂದ ಆಚರಿಸುತ್ತಿದ್ದರು. ಶಿಯಾ ಮತ್ತು ಸುನ್ನಿ ಪಂಥಗಳ ನಡುವೆ ತೀವ್ರವಾದ ದ್ವೇಷವಿತ್ತು.

6. ಸಾಮಾನ್ಯ ವರ್ಗ : ಇವರು ಅಧಿಕವಾಗಿದ್ದು, ರೈತರು, ಕೃಷಿಕಾರ್ಮಿಕರು, ಕುಶಲಕರ್ಮಿಗಳು, ಸಣ್ಣ ವ್ಯಾಪಾರಿಗಳು, ಸೇವಕರು, ಗುಲಾಮರು ಇನ್ನೂ ಮುಂತಾದ ಜನರಿದ್ದರು. ಮೇಲಿನ ವರ್ಗದವರಿಗೆ ಹೋಲಿಸಿದಲ್ಲಿ ಇವರ ಜೀವನ ಕಷ್ಟಗಳಿಂದ ಕೂಡಿತ್ತು. ಉಡಲು ಬಟ್ಟೆ ಇರಲಿಲ್ಲ. ಉಣ್ಣೆಯ ಬಟ್ಟೆ ಮತ್ತು ಪಾದರಕ್ಷೆಗಳು ಇವರಿಗೆ ಎಟುಕುವಂತಿರಲಿಲ್ಲ. ಬರಗಾಲ ಬಂದಾಗಲಂತೂ ಇವರ ಜೀವನ ಇನ್ನೂ ತುಂಬಾ ಕಷ್ಟವಾಗುತ್ತಿತ್ತು.

ಉಪಸಂಹಾರ

ಮೊಗಲ್ ಕಾಲದಲ್ಲಿ ಸಮಾಜ ಮತ್ತು ಆರ್ಥಿಕ ವ್ಯವಸ್ಥೆ ಸಮೃದ್ಧವಾಗಿದ್ದರೂ ವರ್ಗ ಭೇದ ಸ್ಪಷ್ಟವಾಗಿತ್ತು. ಕೃಷಿ, ಕೈಗಾರಿಕೆ ಮತ್ತು ವ್ಯಾಪಾರಗಳು ದೇಶದ ಆರ್ಥಿಕ ಅಭಿವೃದ್ಧಿಗೆ ಪ್ರಮುಖ ಪಾತ್ರವಹಿಸಿದ್ದವು. ಆದರೆ ಸಾಮಾನ್ಯ ಜನರ ಜೀವನದಲ್ಲಿ ಕಷ್ಟಗಳು ಮತ್ತು ಅಸಮಾನತೆಗಳೂ ಕಂಡುಬಂದವು. ಈ ಕಾಲದ ಸಾಮಾಜಿಕ ಮತ್ತು ಆರ್ಥಿಕ ವ್ಯವಸ್ಥೆ ಭಾರತೀಯ ಇತಿಹಾಸದಲ್ಲಿ ಮಹತ್ವದ ಅಧ್ಯಾಯವಾಗಿದೆ.

ಔರಂಗಜೇಬ್ (ಕ್ರಿ.ಶ. 1658-1707) ಧಾರ್ಮಿಕ ನೀತಿ ಮತ್ತು ದಖ್ಖನ್ ನೀತಿ

ಔರಂಗಜೇಬ್ (ಕ್ರಿ.ಶ. 1658-1707) ಧಾರ್ಮಿಕ ನೀತಿ ಮತ್ತು ದಖ್ಖನ್ ನೀತಿ

ಉನ್ನತ ಮೊಗಲ್ ಚಕ್ರವರ್ತಿಗಳಲ್ಲಿ ಕಟ್ಟಕಡೆಯವನಾದ ಔರಂಗಜೇಬ್, ಕ್ರಿ.ಶ.1658 ರಲ್ಲಿ ತನ್ನ ತಂದೆ ಷಹಜಹಾನನನ್ನು ಬಂಧನದಲ್ಲಿರಿಸಿ ಅಧಿಕಾರಕ್ಕೆ ಬಂದನು. ಕಾರ್ಯದಕ್ಷತೆಗೆ, ಸೈನಿಕ ಕೌಶಲ್ಯಕ್ಕೆ, ಅಸಮಾನ್ಯ ಬುದ್ಧಿಶಕ್ತಿಗೆ, ಧರ್ಮನಿಷ್ಠೆಗೆ ಹೆಸರಾಗಿದ್ದ ಔರಂಗಜೇಬ್ ತಾನು ಪಾಲಿಸಿದ ಕೆಲವೊಂದು ನೀತಿಗಳಿಂದಾಗಿ ಮತ್ತು ತೆಗೆದುಕೊಂಡ ತೀರ್ಮಾನಗಳಿಂದಾಗಿ ಮೊಗಲ್ ಸಾಮ್ರಾಜ್ಯದ ಅವನತಿಗೆ ಮತ್ತು ಪತನಕ್ಕೆ ಕಾರಣನಾದನು. ಅವನ ನೀತಿಗಳಲ್ಲಿ ಪ್ರಮುಖವೆಂದರೆ ಆತನ ಧಾರ್ಮಿಕ ನೀತಿ ಮತ್ತು ದಖ್ಖನ್ ನೀತಿ.

ಧಾರ್ಮಿಕ ನೀತಿ : ಔರಂಗಜೇಬನು ಪಾಲಿಸಿದ ನೀತಿಗಳಲ್ಲಿ ಅತ್ಯಂತ ದುಷ್ಪರಿಣಾಮಕಾರಿ ನೀತಿಯೆಂದರೆ ಅವನ ಧಾರ್ಮಿಕ ನೀತಿ ಅವನ ಧರ್ಮದ್ವೇಷದ ಧರ್ಮಾಂಧ ನೀತಿ, ಆತನ ಧಾರ್ಮಿಕ ನೀತಿ ಹಲವು ಇತಿಹಾಸಕಾರರ ತೀವ್ರವಾದ ಟೀಕೆಗೆ ಗುರಿಯಾಗಿದೆ. ಈತ ತನ್ನ ಧಾರ್ಮಿಕ ನೀತಿಯಿಂದ ತನ್ನ ಮತ್ತು ತನ್ನ ಸಾಮ್ರಾಜ್ಯದ ಪತನಕ್ಕೆ ಕಾರಣನಾದ. ಅಕ್ಬರನು ತನ್ನ ಉದಾರ ಧಾರ್ಮಿಕ ನೀತಿಯಿಂದ ಮೊಗಲ್ ಸಾಮ್ರಾಜ್ಯದ ನಿರ್ಮಾಣಕ್ಕೆ ಕಾರಣನಾಗಿದ್ದಲ್ಲಿ ಔರಂಗಜೇಬನು ತನ್ನ ಧರ್ಮಾಂಧ ನೀತಿಯಿಂದಾಗಿ ಅದರ ನಿರ್ನಾಮಕ್ಕೆ ಕಾರಣನಾದ.

ಔರಂಗಜೇಬನೊಬ್ಬ ನಿಷ್ಠಾವಂತ, ಸಂಪ್ರದಾಯಸ್ಥ ಸುನ್ನೀ ಮುಸಲ್ಮಾನ ಅಕ್ಬರನ ರಾಷ್ಟ್ರೀಯ ನೀತಿ ಈತನಿಗೆ ಒಗ್ಗದ ಕಷಾಯ. ಸಾಮ್ರಾಜ್ಯವನ್ನು ಇಸ್ಲಾಂ ಕಾನೂನು ಸಂಹಿತೆಯ ಆಧಾರದ ಮೇಲೆ ನಿಲ್ಲಿಸುವುದು ಈತನ ಮುಖ್ಯ ಗುರಿಯಾಗಿತ್ತು. ಭಾರತೀಯರನ್ನು ಇಸ್ಲಾಮಿಗೆ ಮತಾಂತರಗೊಳಿಸುವುದು ಮತ್ತು ಅವರ ಮೂರ್ತಿಪುಂಜೆಯನ್ನು ನಿರ್ಮೂಲನ ಮಾಡುವುದು ಈತನ ಯೋಜನೆಯಾಗಿತ್ತು, ಈ ದೃಷ್ಟಿಯಿಂದ ಇವನು ಅಕ್ಬರನ ಧಾರ್ಮಿಕ ಸಹಿಷ್ಣುತಾ ನೀತಿಯನ್ನು ಬದಿಗೊತ್ತಿ ಧರ್ಮಾಂಧವಾಗಿ ವರ್ತಿಸತೊಡಗಿದ್ದು ಕಂಡು ಬರುತ್ತದೆ. ಈತನ ವಕ್ರದೃಷ್ಟಿಗೆ ಬಿದ್ದ ಯಾವ ಹಿಂದೂ ದೇವಾಲಯವೂ ಉಳಿಯಲಿಲ್ಲ. ಮತಾಂತರವನ್ನು ಹೆಚ್ಚಿಸಲು ಹಿಂದೂ ದೇವಾಲಯ ಮತ್ತು ಪಾಠಶಾಲೆಗಳನ್ನು ನಿರ್ನಾಮ ಮಾಡತೊಡಗಿದನು. ಇದಕ್ಕಾಗಿ ನಿಷ್ಠಾವಂತ ಕಾರ್ಯಕರ್ತರಿಗೆ ಬಹುಮಾನಗಳನ್ನು ಕೊಡುವ ಪರಿಪಾಠವನ್ನು ಕೈಕೊಂಡ. ಹಿಂದೂಗಳ ಹಬ್ಬ ಹರಿದಿನಗಳ ಆಚರಣೆ ಮತ್ತು ಪುಣ್ಯಕ್ಷೇತ್ರಗಳ ಯಾತ್ರೆಗಳನ್ನು ರದ್ದು ಗೊಳಿಸಿದನು.

ತನ್ನ ವಂಶದ ಹಿಂದಿನ ಅದಸರುಗಳು ಕುರಾನಿನ ಕಾನೂನುಗಳನ್ನು ತಿರಸ್ಕರಿಸುವ ಮುಖಾಂತರ ಅವರು ದೊಡ್ಡ ಪ್ರಮಾದವನ್ನೆಸಗಿದರೆಂದು ಔರಂಗಜೇಬ್ ಭಾವಿಸಿದ್ದನು. ಮುತ್ಸದ್ದಿಯಾಗಿದ್ದ ಅಕ್ಬರನು ಇಸ್ಲಾಂ ಧರ್ಮದ ರಾಜ ಪ್ರಭುತ್ವದ ತತ್ವವನ್ನು ಕೈಬಿಟ್ಟು ಹಿಂದೂ ಸಾರ್ವಭೌಮತ್ವದ ಆದರ್ಶವನ್ನು ಪಾಲಿಸಿದ್ದ. ಇಸ್ಲಾಂ ಧರ್ಮವು ಪಡೆದಿದ್ದ ವಿಶೇಷ ಸ್ಥಾನಮಾನವನ್ನು ಕೊನೆಗಾಣಿಸಿ, ತನ್ನ ಸಾಮ್ರಾಜ್ಯಕ್ಕೆ ಧರ್ಮ, ನಿರಪೇಕ್ಷತೆಯ ವಿಕಾಲ ಬುನಾದಿಯನ್ನು ನೀಡಿದ್ದನು. ಆದರೆ ಔರಂಗಜೇಬನು ಆಕ್ಟರನು ನಿರ್ಮಿಸಿದ್ದ ವಿಶಾಲ ತಳಹದಿಯ ಅಡಿಪಾಯವನ್ನೇ ಕಿತ್ತೊಗೆದು, ಮೊಗಲ್ ಸಾಮ್ರಾಜ್ಯದ ಪತನಕ್ಕೆ ಕಾರಣನಾದನು.

ಅಧಿಕಾರಕ್ಕೆ ಬಂದ ಪ್ರಾರಂಭದಲ್ಲಿ ಸುನ್ನಿ ಪಂಥದ ಅಭಿವೃದ್ಧಿಗಾಗಿ ಹಲವು ಕ್ರಮಕೈಗೊಂಡ ಔರಂಗಜೇಬನು ಇನ್ನು ಸಾಮ್ರಾಜ್ಯದ ಅಧಿಕೃತ ಧರ್ಮವನ್ನಾಗಿ ಅಂಗೀಕರಿಸಿದನು. ಮುಸ್ಲಿಂಯೇತರರನ್ನು ಇಸ್ಲಾಂ ಧರ್ಮಕ್ಕೆ ಸೇರಿಸುವ ಮತ್ತು ಸಾಮ್ರಾಜ್ಯದ ಆಡಳಿತವನ್ನು ಕುರಾನಿನ ಕಾನೂನು ಪ್ರಕಾರ ಜರುಗಿಸುವ ವಿಧಾನಗಳನ್ನು ಅನುಸರಿಸಿದನು. ಇಡೀ ದೇಶವನ್ನು ಜಯಿಸುವವರೆಗೆ ಮತ್ತು ದೇಶದಲ್ಲಿನ ಎಲ್ಲ ಜನತೆ ಇಸ್ಲಾಂ ಧರ್ಮ ಸ್ವೀಕರಿಸುವವರೆಗೆ ಮುಸ್ಲಿಂಯೇತರರ ಮೇಲೆ ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ ಕಟ್ಟುಪಾಡುಗಳನ್ನು ಹೇರಿ ಪ್ರತಿನಿತ್ಯವೂ ಅವರಿಗೆ ತಮ್ಮ ಕೀಳುಮಟ್ಟದ ನೆನಪುಂಟಾಗುವಂತೆ ಮಾಡುವುದು ಇವನ ಉದ್ದೇಶವಾಗಿತ್ತು. ಇಸ್ಲಾಂಗೆ ಮತಾಂತರ ಹೊಂದಿದವರಿಗೆ ಸಾಮಾಜಿಕ ಗೌರವ. ರಾಜಕೀಯ ಪ್ರಾಧಾನ್ಯತೆ ಮತ್ತು ಆರ್ಥಿಕ ಸಹಾಯಗಳು ದೊರೆಯುವಂತೆ ಮಾಡಿದನು.

ಇಸ್ಲಾಂ ಧರ್ಮವನ್ನು ಸಾಮ್ರಾಜ್ಯದ ಅಧಿಕೃತ ಧರ್ಮವನ್ನಾಗಿ ಅಂಗೀಕರಿಸಿದ ನಂತರ ಔರಂಗಜೇಬನು ಮುಸ್ಲಿಂಯೇತರರ ಪದ್ಧತಿಗಳನ್ನು ತೆಗೆದು ಹಾಕಿ ಅವುಗಳ ಸ್ಥಾನದಲ್ಲಿ ಇಸ್ಲಾಮಿನ ಪದ್ಧತಿಗಳನ್ನು ಜಾರಿಗೆ ತರಲು ಪ್ರಯತ್ನಿಸಿದನು. ಜನ್ಮದಿನದಂದು ಮತ್ತು ಸಿಂಹಾಸನಾರೋಹಣ ದಿನದಂದು ನಡೆಸುತ್ತಿದ್ದ ತುಲಾಭಾರವನ್ನು ರದ್ದುಮಾಡಿದ. ಪ್ರತಿದಿನ ಚಕ್ರವರ್ತಿಗಳು ಜನತೆಗೆ ನೀಡುತ್ತಿದ್ದ ಜರೋಖ ದರ್ಶನ ನಿಲ್ಲಿಸಿದ. ಸಂಗೀತದ ಮೇಲೆ ನಿಷೇಧ ಹಾಕಿ ಸಂಗೀತಗಾರರನ್ನು ಆಸ್ಥಾನದಿಂದ ಹೊರಗಟ್ಟಿದ. ಜ್ಯೋತಿಷಿಗಳ ಮೇಲೆ ನಿಷೇಧ ಹಾಕಿದ. ನೃತ್ಯ ಗಾರ್ತಿಯರು ಮತ್ತು ವೇಶ್ಯೆಯರ ಮೇಲೆ ನಿರ್ಬಂಧ ಹಾಕಿ ಅವರು ಮದುವೆಯಾಗುವಂತೆ ಇಲ್ಲದೆ ಸಾಮ್ರಾಜ್ಯ ಬಿಟ್ಟು ಹೋಗುವಂತೆ ಆಜ್ಞೆಮಾಡಿದ. ಪಾನ ನಿಷೇಧ ಜಾರಿಗೆ ತಂದ. ಅಫೀಮಿನ ಬಳಕೆ ನಿಷೇಧಿಸಿದ. ಜೂಜಿನ ಮೇಲೆ ನಿರ್ಬಂಧ ಹೇರಿದ. ಆದರೆ ಇವೆಲ್ಲ ಬಹಿರಂಗವಾಗಿ ನಿಷೇಧವಾದರೂ ಗುಪ್ತವಾಗಿ ಮುಂದುವರೆದಿದ್ದವು. ಕಾರಣ ಇವೆಲ್ಲ ಆಗಿನ ಕಾಲದ ಜನ ಜೀವನದ ಅವಿಭಾಜ್ಯ ಅಂಗವಾಗಿದ್ದವು. ಹಿಂದೂಗಳ ಪವಿತ್ರ ಹಬ್ಬಗಳಾದ ಹೋಳಿ, ದೀಪಾವಳಿ, ದಸರಾ ಹಬ್ಬಗಳ ಆಚರಣೆ ನಿಲ್ಲಿಸಿದ. ಹಿಂದೂ ರೀತಿಯ ನಮಸ್ಕಾರಗಳನ್ನು ರದ್ದುಪಡಿಸಿ, ಮುಸ್ಲಿಂ ರೀತಿಯ ʻಸಲಾಂ ಅಲೆಕುಮ್ ‘ಜಾರಿಗೆ ತಂದನು. ಹೋಳಿ ಹಬ್ಬದ ಅಶ್ಲೀಲ ಹಾಡುಗಳನ್ನು ಮೊಹರಂ ಮೆರವಣಿಗೆಗಳನ್ನು ಮತ್ತು ಸಹಗಮನ ಪದ್ಧತಿಗಳನ್ನು ನಿಷೇಧಿಸಿದನು.

ಇಸ್ಲಾಂ ಧರ್ಮಾಧಿಕಾರಿಗಳು ತಮ್ಮ ಕ್ಷೇತ್ರಗಳಲ್ಲಿ ಸಂಚರಿಸಿ ಹಿಂದೂ ದೇವಾಲಯ ಮತ್ತು ಪೂಜಾಸ್ಥಾನಗಳನ್ನು ನಾಶಪಡಿಸಿದರು. ಬನಾರಸ್‌ ವಿಶ್ವನಾಥದೇವಾಲಯ, ಮಧುರೆಯ ಕೇಶವದೇವಾಲಯ, ಸೋಮನಾಥದೇವಾಲಯ ಇತ್ಯಾದಿ ಸುಪ್ರಸಿದ್ಧ ಹಿಂದೂ ಮಂದಿರಗಳನ್ನು ನೆಲಸಮ ಮಾಡಲಾಯಿತು..

ಹಿಂದೂಗಳ ಎಲ್ಲಾ ಮಾರಾಟದ ವಸ್ತುಗಳ ಬೆಲೆಯ ಮೇಲೆ 5% ರಂತೆ ತೆರಿಗೆ ವಿಧಿಸಿದನು. ಆದರೆ ಮುಸ್ಲಿಂರು ಶೇಕಡದಂತೆ ಎರಡುವರೆಯಂತೆ ತೆರಿಗೆ ನೀಡುತ್ತಿದ್ದರು. ಕ್ರಿ.ಶ. 1667ರ ನಂತರ ಮುಸ್ಲಿಂರು ಇದನ್ನು ಕೊಡುವಂತಿರಲಿಲ್ಲ. ಸರಕಾರಿ ಹುದ್ದೆಗಳಲ್ಲಿದ್ದ ಹಿಂದೂಗಳನ್ನು ತೆಗೆದು ಹಾಕಿ ಅವರ ಸ್ಥಾನದಲ್ಲಿ ಮುಸ್ಲಿಂರನ್ನು ಸೇರಿಸಿದನು.

ಔರಂಗಜೇಬನು ಹಿಂದೂಗಳನ್ನು ಇಸ್ಲಾಂ ಧರ್ಮಕ್ಕೆ ಪರಿವರ್ತಿಸಲು ಅವರ ಮೇಲೆ ಅಧಿಕ ಒತ್ತಡ ಹೇರಿದನು. ಅಕ್ಬರ ಕಾಲದಲ್ಲಿ ರದ್ದಾಗಿದ್ದ ʻಜೆಸಿಯಾ’ ತಲೆಗಂದಾಯವನ್ನು ಹಿಂದೂಗಳ ಮೇಲೆ ಹೇರಿದ. ಇದರ ವಿರುದ್ಧ ಹಿಂದೂಗಳು ಪ್ರತಿಭಟಿಸಿದಾಗ ಅವರನ್ನು ಅತ್ಯಂತ ಹೀನಾಯವಾದ ರೀತಿಯಲ್ಲಿ ನಡೆಸಿಕೊಂಡು ಅವರ ಪ್ರತಿಭಟನೆಯನ್ನು ಅಡಗಿಸಲಾಯಿತು. ಮನುಸ್ಸಿ ಎಂಬ ಸಮಕಾಲೀನ ಬರಹಗಾರ ಹೇಳುವಂತೆ “ಈ ತೆರಿಗೆಯನ್ನು ಕೊಡಲಾಗದ ಹಿಂದೂಗಳು ತೆರಿಗೆ ವಸೂಲಿ ಅಧಿಕಾರಿಗಳ ಕ್ರೋಧವನ್ನು ಸಹಿಸಲಾಗದೆ ಮುಸ್ಲಿಮರಾಗಿ ಮತಾಂತರಗೊಂಡರು. ಇದರಿಂದ ಔರಂಗಜೇಬನು ಸಂತೋಷಗೊಂಡನು” ಜಿಸಿಯಾ ತಲೆಗಂದಾಯವೇ ಅಲ್ಲದೆ ಹಿಂದೂಗಳ ಮೇಲೆ ಇನ್ನೂ ಹಲವಾರು ನಿರ್ಬಂಧ ಹೇರಲಾಗಿತ್ತು. ಹಬ್ಬಗಳಲ್ಲಿ ಬಾಣ, ಬಿರುಸು, ಪಟಾಕಿಗಳನ್ನು ನಿಷೇಧಿಸಿ, ಹಿಂದೂಗಳು ಮುಸ್ಲಿಂರ ಉಡುಗೆತೊಡುಗೆಗಳನ್ನು ತೊಡದಂತೆ ಮಾಡಿದ. ರಜಪೂತರು ಮತ್ತು ಮರಾಠರನ್ನು ಬಿಟ್ಟು ಬೇರೆ ಹಿಂದೂಗಳು ಪಲ್ಲಕ್ಕಿ ಮತ್ತು ಕುದುರೆಗಳಲ್ಲಿ ಹೋಗುವುದನ್ನು ನಿಷೇಧಿಸಿದೆ.

ಈ ಮೇಲ್ಕಂಡ ಅನ್ಯಾಯಕರವಾದ ಧಾರ್ಮಿಕ ಧೋರಣೆಯಿಂದ ಕಷ್ಟನಷ್ಟಗಳಿಗೆ ಬಲಿಯಾದ ಹಿಂದೂಗಳು ಔರಂಗಜೇಬನ ವಿರುದ್ಧ ದಂಗೆಯೆದ್ದರು. ಹಿಂದೂಗಳ ತೀವ್ರ ಪ್ರತಿಭಟನೆಯು ಮೊಗಲ್ ಸಾಮ್ರಾಜ್ಯದ ಅಡಿಪಾಯವನ್ನು ಅಲ್ಲಾಡಿಸಿತು. ಸುನ್ನೀ ಧರ್ಮಾಂಧನಾಗಿದ್ದ ಈತ ಶಿಯಾ ಮುಸಲ್ಮಾನರನ್ನು “ಶವಭಕ್ಷಕ ರಾಕ್ಷಸರು” ಎಂದು ಬಣ್ಣಿಸುತ್ತಿದ್ದನು. ಒಟ್ಟಿನಲ್ಲಿ ಔರಂಗಜೇಬನ ಧರ್ಮಾಂಧತೆಯ ಧೋರಣೆಯು ಮೊಗಲ್ ಸಾಮ್ರಾಜ್ಯದ ಭದ್ರತೆಯನ್ನು ನಾಶಪಡಿಸಿತು.

ಔರಂಗಜೇಬನ ಹಿಂದೂ ವಿರೋಧಿ ನೀತಿಯಿಂದಾಗಿ ಸಾಮ್ರಾಜ್ಯದ ಬಹುಸಂಖ್ಯಾತ ಹಿಂದೂಗಳು ಆತೃಪ್ತಿಗೆ ಒಳಗಾಗಿ ಸಾಮ್ರಾಜ್ಯದಾದ್ಯಂತ ಬಂಡಾಯವೆದ್ದರು. ರಾಜಸ್ಥಾನ, ಮಾಳವ, ಬುಂದೇಲಖಂಡ ಮತ್ತು ಖಾನ್ ದೇಶಗಳಲ್ಲಿಯ ಹಿಂದೂಗಳು ಔರಂಗಜೇಬನ ಮತಾಂತರ ನೀತಿಯನ್ನು ಪ್ರಬಲವಾಗಿ ಪ್ರತಿಭಟಿಸಿದರು. ಅಂತಹ ದಂಗೆಗಳಲ್ಲಿ ಪ್ರಥಮ ಮತ್ತು ಪರಿಣಾಮಕಾರಿಯಾದುದೆಂದರೆ ಮಥುರಾದ ಜಾಟರ ಬಂಡಾಯ, ಗೋಕುಲನ ನೇತೃತದಲ್ಲಿ ಸಂಭವಿಸಿದ ಜಾಟರ ದಂಗೆ ತತ್‌ಕ್ಷಣ ಹತ್ತಿಕ್ಕುವಷ್ಟು ಸುಲಭವಾದುದಾಗಿರಲಿಲ್ಲ. ಈ ಬಂಡಾಯ ಮೊಗಲ್ ಸಾಮ್ರಾಜ್ಯದ ಅವನತಿಗೆ ಒಂದು ಮಹತ್ವದ ಕಾರಣವಾಯಿತು. ಏಕೆಂದರೆ ಆನಂತರ ಗೋಕುಲನ ಸ್ಥಾನದಲ್ಲಿ ಬಂದ ರಾಜರಾಮ್ ಮುಂತಾದವರು ಔರಂಗಜೇಬನ ಕೊನೆಯದಿನಗಳವರೆಗೂ ಬಂಡಾಯ ಮುಂದುವರಿಸಿದರು. ಇದು ಮೊಗಲ್ ಆರಸನ ಧರ್ಮಾಂಧತೆಯ ನೀತಿಗೆ ಹಾಕಿದ ಮೊದಲ ಕೊಡಲಿ ಪೆಟ್ಟಾಗಿ ಪರಿಣಮಿಸಿತು. ಇದೇ ರೀತಿಯಲ್ಲಿ ಬುಂದೇಲದ ರಜಪೂತರು, ಮೇವಾಡದ ಮತ್ತು ನರ್ನೋತ ಜಿಲ್ಲೆಗಳ ಹಿಂದೂ ಪಂಗಡದ ಸತ್ನಾಮಿಗಳು, ಸಿಬ್ಬರು ಮೊದಲಾದವರು ಸ್ವತಂತ್ರರಾಗುವ ಹವಣಿಕೆ ನಡೆಸಿ ಔರಂಗಜೇಬನಿಗೆ ಕಂಟಕಪ್ರಾಯರಾದರು. ಔರಂಗಜೇಬನ ಅಧಿಕಾರಿ ಮತ್ತು ಒಬ್ಬ ಸತ್ನಾಮಿ ನಡುವಿನ ಜಗಳವೇ ಸತ್ನಾಮಿ ಬಂಡಾಯಕ್ಕೆ ಪ್ರಮುಖ ಕಾರಣವಾಗಿತ್ತು. ಈ ಬಂಡಾಯದಲ್ಲಿ ಸತ್ನಾಮಿಗಳು ಪರಾಭವ ಹೊಂದಿ, 200 ಸತ್ನಾಮಿಗಳು ಮರಣಹೊಂದಿದರು, ಉಳಿದವರು ಶರಣಾಗತರಾದರು.

ಔರಂಗಜೇಬನ ಧಾರ್ಮಿಕ ಅಸಹಿಷ್ಣುತೆಯಿಂದಾಗಿ ಕ್ರೋದಗೊಂಡವರಲ್ಲಿ ಸಿಬ್ಬರು ಪ್ರಮುಖರು. ಸಿಖ್ಖರ ಗುರು ತೇಜ್ ಬಹದ್ದೂರನನ್ನು ಕೊಲೆ ಮಾಡಿದ ಔರಂಗಜೇಬ್ ಸಿಖ್ಖರ  ಕೋಪಕ್ಕೆ ಕಾರಣನಾದ. ತೇಜ್‌ ಬಹದ್ದೂರ್ ಇಸ್ಲಾಂಗೆ ಮತಾಂತರವಾಗದೆ ಇದ್ದುದೆ ಅವನ ಕೋಪಕ್ಕೆ ಕಾರಣವಾಗಿತ್ತು. ಮತಾಂತರ ಇಲ್ಲವೆ ಸಾವು ಇವೆರಡರಲ್ಲಿ ಯಾವುದನ್ನಾದರೂ ಆರಿಸಿಕೊಳ್ಳಬಹುದೆಂಬ ಔರಂಗಜೇಬನ ಸಲಹೆ ಮೇರೆಗೆ ತೇಜ್ ಬಹದ್ದೂರ್ ಎರಡನೆಯದನ್ನು ಆರಿಸಿ ಕೊಂಡರೆಂಬುದಾಗಿ ಹೇಳಲಾಗಿದೆ. ಇದರಿಂದ ಕ್ರೋದಗೊಂಡ ಸಿಬ್ಬರು ಔರಂಗಜೇಬನ ವಿರುದ್ಧ ತಿರುಗಿ ಬಿದ್ದರು. ಈ ರೀತಿ ಪ್ರೇರೇಪಿತರಾದ ಸಿಬ್ಬರು ಒಂದು ಒಕ್ಕೂಟವನ್ನೇ ರಚಿಸಿಕೊಂಡು ಮೊಗಲರ ಅಸ್ತಿತ್ವವನ್ನೆ ನಾಶ ಮಾಡುವ ಪಣ ತೊಟ್ಟು ಹೋರಾಡಿದರು.

ತನ್ನ ಮತಾಂಧತೆಯಿಂದ ರಜಪೂತರ ಶತೃತ್ವಕ್ಕೆ ಕಾರಣವಾದ ಔರಂಗಜೇಬನ ಅವಿವೇಕದ ನೀತಿ ಅನೇಕ ಅನಾಹುತಗಳಿಗೆ ಎಡೆಮಾಡಿತು. ರಜಪೂತರ ದ್ವೇಷ ಕಟ್ಟಿಕೊಂಡು ಕೊನೆಗೆ ಅದನ್ನು ವಿರೋಧಿಸಿದ ಔರಂಗಜೇಬನ ಪುತ್ರ ಯುವರಾಜ ಅಕ್ಬರ  ತಂದೆಯ ವಿರುದ್ಧ ರಜಪೂತರ ಕಡೆ ಸೇರಿಕೊಳ್ಳಬೇಕಾಯಿತು.

ಒಟ್ಟಿನಲ್ಲಿ ಔರಂಗಜೇಬ್ ತನ್ನ ಧಾರ್ಮಿಕ ನೀತಿಯ ಮೂಲಕ ಮೊಗಲ್ ಸಾಮ್ರಾಜ್ಯದ ಸಮಾಧಿಯನ್ನು ನಿರ್ಮಾಣಮಾಡಿದ. ಮೊಗಲ್ ಸಾಮ್ರಾಜ್ಯದ ಪತನದಲ್ಲಿ ಈತನ ಧಾರ್ಮಿಕ ನೀತಿ ಪ್ರಮುಖ ಪಾತ್ರವಹಿಸಿತು.

ಔರಂಗಜೇಬನ ದಖ್ಖನ್ ನೀತಿ

ಔರಂಗಜೇಬನ ದಖ್ಖನ್ ನೀತಿಯೂ ಸಹ ಆತನ ಧಾರ್ಮಿಕ ನೀತಿಯಷ್ಟೇ ವಿನಾಶಕಾರಿ ನೀತಿ ಆಗಿದ್ದಿತು. ಇತಿಹಾಸಕಾರರು ಆತನ ದಖ್ಖನ್ ನೀತಿಯನ್ನು ತೀವ್ರವಾಗಿ ಟೀಕಿಸಿದ್ದಾರೆ. ಇವನ ದಖ್ಖನ್ ನೀತಿ ಮತ್ತೊಮ್ಮೆ ಅವನ ಮತ್ತು ಅವನ ಸಾಮ್ರಾಜ್ಯದ ಪತನಕ್ಕೆ ಮುಖ್ಯ ಕಾರಣವಾಯಿತು. ಔರಂಗಜೇಬ್ ತನ್ನ ಆಳ್ವಿಕೆಯ ಮೊದಲ ಅರ್ಧಭಾಗದಲ್ಲಿ ಉತ್ತರಭಾಗವನ್ನು ತನ್ನ ಎಲ್ಲಾ ಚಟುವಟಿಕೆಗಳ ಕೇಂದ್ರವನ್ನಾಗಿ ಮಾಡಿಕೊಂಡಿದ್ದ. ತತ್ಪರಿಣಾಮವಾಗಿ ಆತನಿಗೆ ದಕ್ಷಣ ಭಾರತದ ಅಂದರೆ ದಖ್ಖನ್ನಿನ ಬಗ್ಗೆ ಗಮನಕೊಡಲಾಗಲಿಲ್ಲ. ಈ ಸದವಕಾಶವನ್ನು ಉಪಯೋಗಿಸಿಕೊಂಡು ಶಿವಾಜಿಯು ದಕ್ಷಿಣ ಭಾರತದಲ್ಲಿ ಸ್ವತಂತ್ರ ರಾಜ್ಯವನ್ನು ಸ್ಥಾಪಿಸುವಲ್ಲಿ ಯಶಸ್ವಿಯಾದ. ಆದರೆ ದಖ್ಖನ್ನಿನ ಬಿಜಾಪುರ ಮತ್ತು ಗೋಲ್ಕಂಡ ರಾಜ್ಯಗಳು ಈ ಪರಿಸ್ಥಿತಿಯ ಲಾಭ ಪಡೆಯಲಾಗಲಿಲ್ಲ. ಇದಕ್ಕೆ ಕಾರಣ ಅವುಗಳ ಆಂತರಿಕ ಪರಿಸ್ಥಿತಿ.

ಔರಂಗಜೇಬನು ತನ್ನ ಜೀವಿತದ ಕೊನೆಯ ವರ್ಷಗಳನ್ನು ದಖ್ಖನ್ನಿನಲ್ಲಿ ಕಳೆದನು. ಈ ದೀರ್ಘಾವಧಿಯಲ್ಲಿ ಈತನಿಗೆ ವಿರಾಮ ಮತ್ತು ಮಾನಸಿಕ ಸ್ವಾಸ್ಥ್ಯ ಸಿಗಲಿಲ್ಲ. ಔರಂಗಜೇಬ್ ದಖನ್ನಿಗೆ ಬರುವುದಕ್ಕೆ ಮೂರು ಮುಖ್ಯ ಉದ್ದೇಶಗಳಿದ್ದವು. ಅವುಗಳೆಂದರೆ:-

1.ತನ್ನ ಪುತ್ರ ಅಕ್ಬರನನ್ನು ಬಂಧಿಸಿ ಶಿಸುವುದು.

2.ತನ್ನ ಪುತ್ರ ಅಕ್ಬರನಿಗೆ ಆಶ್ರಯ ಕೊಟ್ಟಿದ್ದ ಮರಾಠರನ್ನು ಹತ್ತಿಕ್ಕುವುದು.

  1. ದಖ್ಖನ್ನಿನ ಶಿಯಾ ರಾಜ್ಯಗಳಾದ ಬಿಜಾಪುರ ಮತ್ತು ಗೋಲ್ಕಂಡಗಳ ಅಸ್ಥಿತ್ವ ಅಂತ್ಯಗೊಳಿಸುವುದು.

ಈ ಗುರಿಸಾಧನೆಯಲ್ಲಿ ಔರಂಗಜೇಬನಿಗೆ ದೊರೆತಿದ್ದು ಮಿಶ್ರ ಯಶಸ್ಸು, ಆತ ಅಕ್ಬರನ್ನು ಹಿಡಿದು ಶಿಕ್ಷಿಸಲಾಗಲಿಲ್ಲ. ಅಕ್ಬರ  ತಪ್ಪಿಸಿಕೊಂಡು ಪರ್ಶಿಯಾಕ್ಕೆ ಓಡಿಹೋದ. ತತ್ಪರಿಣಾಮವಾಗಿ ಔರಂಗಜೇಬನ ಸಿಟ್ಟು ಆತನಿಗೆ ಆಶ್ರಯ ನೀಡಿದ್ದ ಸಂಬಾಜಿಯ ವಿರುದ್ಧ ತಿರುಗಿತು. ಸಂಬಾಜಿಯನ್ನು ಹಿಡಿದು ಕೊಲೆ ಮಾಡುವುದರಲ್ಲಿ ಯಶಸ್ವಿಯಾದ, ಆದರೆ ಮರಾಠರನ್ನು ಸಂಪೂರ್ಣವಾಗಿ ಸದೆಬಡಿಯಲಾಗಲಿಲ್ಲ. ಶಿಯಾ ರಾಜ್ಯಗಳಾದ ಬಿಜಾಪುರ ಮತ್ತು ಗೋಲ್ಕಂಡಗಳನ್ನು ಜಯಿಸುವಲ್ಲಿ ಆತ ಯಶಸ್ಸು ಕಂಡಿದ್ದ. ಆದರೆ ಈ ಎಲ್ಲಾ ಕಾರ್ಯಕ್ಕೆ ಆತನಿಗೆ 25 ವರ್ಷ ಬೇಕಾಯಿತು. ಆದರೆ ಈ ಸಾಧನೆ ಅಂತಿಮವಾಗಿ ಶೂನ್ಯವಾಗಿ ಮಾರ್ಪಟ್ಟಿತು. ಈತನ ಸಾಮ್ರಾಜ್ಯ ಅವ್ಯವಸ್ಥೆಯ ಅಂಧಕಾರದಲ್ಲಿ ಮುಳುಗಿತು. ವೃದ್ಧ ಸಾಮ್ರಾಟನು ತನಗರಿವಿಲ್ಲದೆ ತನ್ನ ದಖ್ಖನ್ ನೀತಿಯ ಮುಖಾಂತರ ತನ್ನ ಮತ್ತು ತನ್ನ ಸಾಮ್ರಾಜ್ಯದ ಸಮಾಧಿ ತೋಡಿದ.

ಮನ್ಸಬ್ದಾರಿ ಪದ್ಧತಿ

ಮೊಗಲ್ ಸೈನ್ಯದ ಸಂಘಟನೆಯಲ್ಲಿನ ದೋಷಗಳನ್ನು ನಿವಾರಿಸಲು ಅಕ್ಷರನು ಹಲವು ಕ್ರಮಗಳನ್ನು ಕೈಗೊಂಡನು. ಅದೇ ಮನ್ಸಬ್ದಾರಿ ಪದ್ಧತಿ. ಮನ್ಸಬ್ ಎಂಬ ಶಬ್ದ ಆರೇಬಿಕ್ ಮೂಲವನ್ನು ಹೊಂದಿದ್ದು, ಇದರ ಅರ್ಥ ದರ್ಜೆ, ವರ್ಗ ಅಥವಾ ಪದವಿ ಎಂದಾಗುತ್ತದೆ. ಮನ್ಸಬ್ದಾರ್‌ ಎಂದರೆ ಸಾಮ್ರಾಜ್ಯದ ಸೇವೆಯಲ್ಲಿರುವ ಅಧಿಕಾರಿ. ಅಕ್ಬರನ ಕಾಲದಲ್ಲಿ ರೂಪುಗೊಂಡ ಈ ವ್ಯವಸ್ಥೆಯಲ್ಲಿ ಸೈನಿಕ ಮತ್ತು ನಾಗರೀಕ ಅಧಿಕಾರಿಗಳಲ್ಲಿ ಯಾವುದೇ ವ್ಯತ್ಯಾಸ ಮತ್ತು ಪ್ರತ್ಯೇಕತೆ ಇರಲಿಲ್ಲ. ಅಧಿಕಾರಿಗೂ ಆತನದೇ ಆದ ದರ್ಜೆಯಿದ್ದು ಆತನನ್ನು ಆ ದರ್ಜೆಯ ಮನ್ಸಬ್ದಾರನೆಂದು ಕರೆಯಲಾಗುತ್ತಿತ್ತು.

ವಿ.ಎ. ಸ್ಮಿತ್‌ರವರ ಪ್ರಕಾರ ಅಕ್ಬರ  ಇದರ ನಿರ್ಮಾಪಕನಲ್ಲ. ಇದು ಬಾಬರ್ ಮತ್ತು ಹುಮಾಯೂನರ ಕಾಲದಲ್ಲಿಯೇ ಜಾರಿಯಲ್ಲಿತ್ತು. ಇದು ಪರ್ಶಿಯಾದಿಂದ ಬಂದ ವ್ಯವಸ್ತೆಯಾಗಿತ್ತು. ಆದರೆ ಡಾ|| ಈಶ್ವರೀಪ್ರಸಾದ್‌ ಮತ್ತು ಆ‌ರ್.ಎಸ್. ಕರ್ಮ ಪ್ರಕಾರ ಈ ವ್ಯವಸ್ಥೆಯ ನಿಜವಾದ ನಿರ್ಮಾಪಕ ಅಕ್ಬರ , ಇದುನ್ನು ವ್ಯವಸ್ಥಿತವಾಗಿ ಜಾರಿಗೆ ತಂದ ಕೀರ್ತಿ ಅಕ್ಷನನಿಗೆ ಸಲ್ಲಬೇಕೆಂಬುದು ಇದರ ವಾದ.

ಮನ್ಸಬ್‌ದಾರರಲ್ಲಿ ಅನೇಕ ಶ್ರೇಣಿಗಳಿದ್ದವು. ಅಬುಲ್ ಫಜಲ್ ಪ್ರಕಾರ. 33 ದರ್ಜೆ ಅಥವಾ ವರ್ಗಗಳಿದ್ದವು. ಈ ದರ್ಜೆ 10 ರಿಂದ ಪ್ರಾರಂಭವಾಗಿ 10,000 ದವರೆಗೆ ಇದ್ದಿತು. ಈತನ ಆಳ್ವಿಕೆಯ ಕೊನೆಯಲ್ಲಿ ಈ ಸಂಖ್ಯೆಯನ್ನು 12,000 ಕ್ಕೆ ಏರಿಸಲಾಯಿತು.

ಅಕ್ಬರ್‌ ಇದನ್ನು ಜಾರಿಗೆ ತಂದ ಪ್ರಾರಂಭದಲ್ಲಿ 10 ರಿಂದ 10,000 ದವರೆಗೆ ಒಟ್ಟು 3 ದರ್ಜೆಗಳ ಮನ್ನಬ್ಬಾರರಿದ್ದರು. ಇಲ್ಲಿ ಸಂಖ್ಯೆಯು ಪ್ರತಿಯೊಬ್ಬ ಮನ್ನಬ್ಬಾರನು ಸಾಮ್ರಾಜ್ಯದ ಸೇನೆಗೆ ಸಲ್ಲಿಸಬೇಕಾಗಿದ್ದ ಶಸ್ತ್ರಾಸ್ತ್ರ, ಕುದುರೆ ಸವಾರರ ಸಂಖ್ಯೆಯನ್ನು ಸೂಚಿಸುತ್ತಿತ್ತು. ಮತ್ತು ಪ್ರತಿಯೊಬ್ಬ ಅಧಿಕಾರಿಯ ದರ್ಜೆ ಹಾಗೂ ವೇತನ ಇವುಗಳನ್ನು ನಿರ್ದೇಶಿಸುತ್ತಿತ್ತು. ಸಾಮಾನ್ಯವಾಗಿ ಮನ್ಸಾಬ್ದಾರರು ತಮ್ಮ ದರ್ಜೆಯ ಸಂಖ್ಯೆಯಷ್ಟೇ ಕುದುರೆ ಸವಾರರನ್ನು ಇಟ್ಟುಕೊಳ್ಳಬೇಕೆಂಬ ನಿಯಮವಿರಲಿಲ್ಲ.

ಪ್ರತಿಯೊಬ್ಬ ಮನ್ಸಾಬ್ದಾರನಿಗೆ ಇಂತಹುದೇ ಕೆಲಸ ಅಥವಾ ಹಯದ್ದೆ ಕೊಡಬೇಕೆಂಬ ನಿಯಮವಿರಲಿಲ್ಲ. ಚಕ್ರವರ್ತಿಯು ಕಾಲಕಾಲಕ್ಕೆ ಸೂಚಿಸಿದ ಕೆಲಸಗಳನ್ನು ಅವರು ಮಾಡುತ್ತಿದ್ದರು. ಮನ್ಸಬ್ದಾರರನ್ನು ನೇಮಕಮಾಡಲು, ಬಡ್ತಿ ನೀಡಲು ಮತ್ತು ತೆಗೆದುಹಾಕಲು ಯಾವ ನಿಯಮಾವಳಿಗಳೂ ಇರಲಿಲ್ಲ. ಇವರ ನೇಮಕಾತಿ ಮತ್ತು ಬಡ್ತಿ ಅರಸರ ತೀರ್ಮಾನವನ್ನು ಅವಲಂಬಿಸಿತ್ತು. ಮನ್ನಬ್ಬಾರರಿಗೆ ನಿರ್ಧಿಷ್ಟ ವೇತನ ಶ್ರೇಣಿಗಳಿದ್ದವು. ಇದನ್ನು ನಗದು ಹಣ ಇಲ್ಲವೆ ಜಹಾಗೀರಿನ ಮುಖಾಂತರ ನೀಡಲಾಗುತ್ತಿತ್ತು. ಅಕ್ಬರನ ಕಾಲದಲ್ಲಿ ನಗದು ವೇತನ ಕೊಡಲಾಗುತ್ತಿತ್ತು. ಸ್ಮಿತ್, ಇರ್ವಿನ್ ಇತ್ಯಾದಿ ಆಂಗ್ಲ ಚರಿತ್ರೆಕಾರರು ಮನ್ಸಬ್ಬಾರರಿಗೆ ವರ್ಷವಿಡೀ ಸಂಬಳ ನೀಡುತ್ತಿರಲಿಲ್ಲವೆಂದು ಹೇಳಿದ್ದಾರೆ. ಆದರೆ ಇದಕ್ಕೆ ಯಾವುದೇ ಆಧಾರಗಳಿಲ್ಲ.

ಮನ್ಸಬ್ದಾರರಿಗೆ ಅಧಿಕ ಸಂಬಳ ದೊರೆಯುತ್ತಿತ್ತು. ಅವರ ವೆಚ್ಚವೆಲ್ಲ ಕಳೆದ ನಂತರವೂ ಅವರಲ್ಲಿ ಹೆಚ್ಚು ಹಣ ಉಳಿಯುತ್ತಿತ್ತು. ಅವರು ಅತ್ಯಂತ ಶ್ರೀಮಂತ ಜೀವನ ನಡೆಸುತ್ತಿದ್ದರು. ಆದರೆ ಮನ್ಸಬ್ದಾರಿ ದರ್ಜೆ ವಂಶಪಾರಂಪರ್ಯ ವಾಗಿರಲಿಲ್ಲ. ಅವರ ಮರಣದ ನಂತರವೇ ಅವರ ಸಂಪತ್ತು, ಭೂಮಿ ಇತ್ಯಾದಿಗಳು ಸಾಮ್ರಾಜ್ಯಕ್ಕೆ ಸೇರುತ್ತಿದ್ದವು.

ಮನ್ಸಬ್ದಾರಿ ದರ್ಜೆಗಳಲ್ಲಿ ಎರಡು ವರ್ಗಗಳಿದ್ದವು. ಅವುಗಳೆಂದರೆ ʻಜಾಟ್’ ಮತ್ತು ‘ಸವಾರ್’. ಇವುಗಳ ನಿಜವಾದ ಸ್ವರೂಪದ ಬಗ್ಗೆ ಚರಿತ್ರಕಾರರಲ್ಲಿ ಭಿನ್ನಾಭಿಪ್ರಾಯಗಳಿವೆ. ಡಾ|| ಎ.ಎಲ್. ಶ್ರೀವಾತ್ಸವರ ಅಭಿಪ್ರಾಯದಂತೆ ಅಕ್ಬರ  ಈ ಪದ್ಧತಿ ಜಾರಿಗೆ ತಂದಾಗ ಮನ್ನಬ್ದಾರನ ದರ್ಜೆ ಮತ್ತು ಅವನು ಇಡಬೇಕಾದ ಸೈನಿಕರು, ಕುದುರೆ, ಆನೆ ಇತ್ಯಾದಿ ಸಂಖ್ಯೆಗಳಲ್ಲಿ ಯಾವುದೇ ವ್ಯತ್ಯಾಸ ಇರಲಿಲ್ಲ. ಆದರೆ ಮನ್ನಬ್ಬಾರರು ಈ ಸಂಖ್ಯೆಯನ್ನು ಪಾಲಿಸದೆ ಹೋದಾಗ ಅದರಲ್ಲಿ ರಿಯಾಯಿತಿ ನೀಡಿದನು. ಅವರಿಗಾಗಿಯೇ ಜಾಟ್ ಮತ್ತು ಸವಾರ್ ಎಂಬ ಪ್ರತ್ಯೇಕ ವರ್ಗ ನಿರ್ಮಿಸಿದನು. ಇದರಂತೆ ಜಾಟ್ ದರ್ಜೆಯ ಮನ್ನಬ್ದಾರರು ಅವರ ಸಂಖ್ಯೆಯ ಕುದುರೆ, ಆನೆ ಮತ್ತು ಸಾಗಣೆಯ ಪ್ರಾಣಿಗಳನ್ನು ಹೊಂದಬೇಕಾಗಿದ್ದಿತೇ ಏನು ಕುದುರೆ ಸವಾರರನ್ನಲ್ಲ. ಅಂತೆಯೇ ಸವಾರ್ ದರ್ಜೆಯ ಮನ್ನಬ್ದಾರರು ತಮ್ಮ ನಿಗದಿತ ಸಂಖ್ಯೆ ಕುದುರೆ ಸವಾರರನ್ನು ಮಾತ್ರ ಇಟ್ಟುಕೊಳ್ಳಬೇಕಾಯಿತು. ಅಕ್ಷರನ ಉತ್ತರಾಧಿಕಾರಿಗಳ ಕಾಲದಲ್ಲಿ ಈ ಕಾನೂನು ಸಡಿಲಗೊಂಡಿತು. ಔರಂಗಜೇಬನ ತರುವಾಯ ಮನ್ಸಬ್ದಾರಿ ಹುದ್ದೆಗಳು ಕೇವಲ ಗೌರವದ ಸಂಕೇತವಾದವು.

ದೋಷಗಳು :

  1. ಮನ್ಸಬ್ದಾರಿ ಪದ್ಧತಿಯಲ್ಲಿ ಭ್ರಷ್ಟಾಚಾರ ಹೆಚ್ಚಾಗಿತ್ತು. ಸೈನಿಕರನ್ನು ಒಟ್ಟಾಗಿ ತೋರಿಸುವ ಮತ್ತು ಮುದ್ರೆ ಹಾಕುವ ವ್ಯವಸ್ಥೆ ಇದ್ದರೂ ಬಹಳಷ್ಟು ಮನ್ಸಬ್ದಾರರು ತಮ್ಮ ನಿಗದಿತ ಸಂಖ್ಯೆಯ ಸವಾರರನ್ನು ಇಟ್ಟುಕೊಂಡಿರಲಿಲ್ಲ.
  2. ಸೈನಿಕರನ್ನು ನೇಮಿಸಿಕೊಳ್ಳುವವರು ಹಾಗೂ ಸಂಬಳವನ್ನು ಕೊಡುವವರು ಮನ್ಸಬ್ದಾರರೇ. ಆದ್ದರಿಂದ ಸೈನಿಕರ ನಿಷ್ಠೆ ಅವರಿಗಿತ್ತೇ ಹೊರತು ಚಕ್ರವರ್ತಿಗಿರಲಿಲ್ಲ. ಸೈನಿಕರು ಮತ್ತು ಚಕ್ರವರ್ತಿಯ ನಡುವಿನ ಈ ಕಂದರವು ಮುಂದೆ ಮೊಗಲರ ಸರ್ಕಾರಕ್ಕೆ ಅಪಾಯವನ್ನುಂಟುಮಾಡಿತು.
  3. ಮನ್ಸಬ್ದಾರರು ತಮ್ಮ ವೈಯಕ್ತಿಕ ಲಾಭ ಮತ್ತು ಹಿತಾಸಕ್ತಿಗಳಲ್ಲಿ ಮಗ್ನರಾಗಿ ಸಾಮ್ರಾಜ್ಯದ ಹಿತಾಸಕ್ತಿಯನ್ನು ಕಡೆಗಣಿಸಿದರು.
  4. ಮನ್ಸಬ್ದಾರರನ್ನು ಸೈನಿಕ ಸೇವೆಗೆ ಮಾತ್ರವೇ ಅಲ್ಲದೇ ನಾಗರಿಕ ಸೇವೆಗೂ ನೇಮಕ ಮಾಡುತ್ತಿದ್ದುದು ಇದರ ಇನ್ನೊಂದು ದೋಷವಾಗಿತ್ತು.
  5. ಮನ್ಸಬ್ದಾರರು ತಮ್ಮ ವೇತನ ಮತ್ತು ಸೌಲತ್ತುಗಳಿಂದ ಸಂತೃಪ್ತರಾಗಿದ್ದು, ಸೈನಿಕರ ಶಿಕ್ಷಣಕ್ಕಾಗಲಿ ಇಲ್ಲವೆ ಯುದ್ಧಕಲೆಯಲ್ಲಿ ಹೊಸ ಆವಿಷ್ಕಾರಕ್ಕಾಗಲೀ ಗಮನ ಹರಿಸಲಿಲ್ಲ.

ಉಪಸಂಹಾರ

ಔರಂಗಜೇಬನ ಧಾರ್ಮಿಕ ಮತ್ತು ದಖ್ಖನ್ ನೀತಿಗಳು ಮೊಗಲ್ ಸಾಮ್ರಾಜ್ಯದ ಸ್ಥಿರತೆಯನ್ನು ಕುಂದಿಸಿದವು. ಧಾರ್ಮಿಕ ಅಸಹಿಷ್ಣುತೆ ಮತ್ತು ನಿರಂತರ ಯುದ್ಧಗಳು ಸಾಮ್ರಾಜ್ಯದ ಆರ್ಥಿಕ ಮತ್ತು ರಾಜಕೀಯ ಶಕ್ತಿಯನ್ನು ದುರ್ಬಲಗೊಳಿಸಿದವು. ಇದರ ಪರಿಣಾಮವಾಗಿ ಹಲವು ಪ್ರಾಂತ್ಯಗಳಲ್ಲಿ ಬಂಡಾಯಗಳು ಉಂಟಾಗಿ ಸಾಮ್ರಾಜ್ಯದ ಪತನಕ್ಕೆ ದಾರಿ ಮಾಡಿಕೊಟ್ಟವು. ಆದ್ದರಿಂದ ಔರಂಗಜೇಬನ ಆಡಳಿತವು ಮೊಗಲ್ ಇತಿಹಾಸದಲ್ಲಿ ಮಹತ್ವದ ತಿರುವಾಗಿ ಪರಿಗಣಿಸಲಾಗಿದೆ.

ಷಹಜಹಾನ್ – ಕಲೆ ಮತ್ತು ವಾಸ್ತುಶಿಲ್ಪ : (ಕ್ರಿಶ. 1627-1658)

ಷಹಜಹಾನ್ – ಕಲೆ ಮತ್ತು ವಾಸ್ತುಶಿಲ್ಪ : (ಕ್ರಿಶ. 1627-1658)

ಮಧ್ಯಕಾಲೀನ ಭಾರತದ ಇತಿಹಾಸದಲ್ಲಿ ಷಹಜಹಾನನ ಆಳ್ವಿಕೆಯ ಕಾಲವನ್ನು ಮೊಗಲರ ಕಾಲದ ಸುವರ್ಣಯುಗವೆಂದು ಬಣ್ಣಿಸಲಾಗಿದೆ. ಈತನ ಕಾಲದಲ್ಲಿ ಮೊಗಲ್ ಸಾಮ್ರಾಜ್ಯ ಔನ್ನತ್ಯದ ಶಿಖರವನ್ನು ತಲುಪಿದ್ದಿತು. ವಿಶಾಲವಾದ ಮೊಗಲ್ ಸಾಮ್ರಾಜ್ಯದಲ್ಲಿ ಶಾಂತಿ, ಸುವ್ಯಮೃತ ಜನಜೀವನ ಮತ್ತು ಪ್ರಗತಿಗಳು ಉಂಟಾಗಿದ್ದವು. ಈತನ ಕಾಲದಲ್ಲಿ ಕ್ಷಾಮ ತಲೆದೋರಿದರೂ ಅದರ ಹತೋಟಿಗೆ ಷಹಜಹಾನನು ಕೈಗೊಂಡ ಮಾನವೀಯ ವ್ಯವಸ್ಥೆ ಶ್ಲಾಘನೀಯವಾಗಿತ್ತು. ಒಟ್ಟಿನಲ್ಲಿ ಷಹಜಹಾನನ ಆಳ್ವಿಕೆಯ ಕಾಲದಲ್ಲಿ ಸುಖ, ಶಾಂತಿ, ಸುವ್ಯವಸ್ಥೆ ನೆಲೆಸಿದ್ದರಿಂದ ಕಲೆ ಮತ್ತು ಸಾಹಿತ್ಯ ಕ್ಷೇತ್ರಗಳಲ್ಲಿ ಅಪಾರ ಪ್ರಗತಿ ಸಾಧಿಸಲ್ಪಟ್ಟಿತು, ಎಂಬುದಾಗಿ ಕೆಲವು ಚರಿತ್ರೆಕಾರರು ಅಭಿಪ್ರಾಯಪಟ್ಟಿದ್ದಾರೆ.

ಷಹಜಹಾನನ ಕಾಲ ಮೊಗಲರ ಸುವರ್ಣ ಯುಗವೇ? ಅಲ್ಲವೆ? ಎಂಬ ಬಗ್ಗೆ ಇತಿಹಾಸಕಾರರಲ್ಲಿ ಜಿಜ್ಞಾಸೆ ಮತ್ತು ವಾದ ವಿವಾದಗಳಿವೆ. ಸಾಮಾನ್ಯವಾಗಿ ಷಹಜಹಾನನ ಕಾಲವನ್ನು ಮೊಗಲರ ಸುವರ್ಣಯುಗವೆಂತಲೂ, ವೈಭವದ ಕಾಲವೆಂದೂ ಬಣ್ಣಿಸಲಾಗಿದೆ. ಆದರೆ ಕೆಲವು ಇತಿಹಾಸಕಾರರು ಇದರ ಬಗ್ಗೆ ತಮ್ಮ ವಿಮರ್ಶಾತ್ಮಕ ದೃಷ್ಟಿ ಬೀರಿ ಸಹಜಹಾನನ ಕಾಲ ಮೊಗಲ್ ಸಾಮ್ರಾಜ್ಯದ ಅವನತಿ ಮತ್ತು ಅವಸಾನದ ಆರಂಭ ಕಾಲವೆಂದು ಪರಿಗಣಿಸಿದ್ದಾರೆ. ಆದ್ದರಿಂದ ಇದರ ಬಗ್ಗೆ ಸಾಕಷ್ಟು ವಾದ ವಿವಾದಗಳಿವೆ.

ಐರೋಪ್ಯ ಬರಹಗಾರರು ಷಹಜಹಾನನ ಅಳ್ವಿಕೆಯನ್ನು ಟೀಕಿಸಿದ್ದಾರೆ. ಈತನ ಆಳ್ವಿಕೆ ಮೇಲು ನೋಟಕ್ಕೆ ವೈಭವಯುತವಾಗಿ ಕಂಡರೂ ಅದು ನಿಜವಾಗಿ ಹಾಗಿರಲಿಲ್ಲ ಎಂಬುದು ಇವರ ಅಭಿಪ್ರಾಯ. ಇದನ್ನು 14ನೇ ಲೂಯಿಯ ಕಾಲದ ಫ್ರಾನ್ಸಿಗೆ ಹೋಲಿಸಬಹುದು. 14ನೇ ಲೂಯಿಯಂತೆ ಷಹಜಹಾನ್ ವೈಭವವನ್ನು ಹೊರನೋಟಕ್ಕೆ ಪ್ರದರ್ಶಿಸಿದ್ದರೂ ಆಂತರಿಕವಾಗಿ ಹಲವಾರು ಆತೃಪ್ತಿ, ಅಸಮಾಧಾನ, ಕೊರತೆ, ಹಸಿವು, ಬಡತನ ಜನರನ್ನು ಕಾಡುತ್ತಿದ್ದವು.

ಈತನ ಆಳ್ವಿಕೆ ಕಣ್ಣು ಕೋರೈಸುವಂತಹ ವೈಭವ ಮತ್ತು ಆಡಂಬರಗಳಿಂದ ಕೂಡಿದ್ದಿತು. ಅವನ ವಾಸ್ತುಶಿಲ್ಪ ಕೃತಿಗಳು ಮತ್ತು ಮಯೂರ ಸಿಂಹಾಸನ ಅವನ ಕಾಲದ ವೈಭವಕ್ಕೆ ಸಾಕ್ಷಿಯಾಗಿದ್ದವು. ಆದರೆ ಷಹಜಹಾನ್ ಇದಕ್ಕೆ ವೆಚ್ಚ ಮಾಡಿದುದು ಅಪಾರ ಹಣ. ಆದರೆ ಇದು ಯಾರ ಹಣ? ಎಲ್ಲಿಂದ ಬಂದಿತ್ತು? ಎಷ್ಟು ಜನರ ಕಣ್ಣೀರಿನ ಮತ್ತು ಬೆವರಿನ ಹಣ ಎಂಬುದು ಮುಖ್ಯ ಪ್ರಶ್ನೆ, ಹೌದು, ಆತನ ಕಾಲದ ವೈಭವದಿಂದ ವಿದೇಶಿಗರು ಮೂಕವಿಸ್ಮಿತರಾಗಿದ್ದರು. ಇವೆಲ್ಲ ನೋಡಿ ಅವರು ಸಾಮ್ರಾಜ್ಯದಲ್ಲಿ ಶಾಂತಿ, ಸಮೃದ್ಧಿ ನೆಲೆಸಿದ್ದಿತೆಂದೇ ಭಾವಿಸಿದ್ದರು. ಆದರೆ ಇದು ಕೇವಲ ಭ್ರಮೆಯಾಗಿತ್ತು. ನೈಜ ಸ್ಥಿತಿ ಇದಕ್ಕೆ ತದ್ವಿರುದ್ಧವಾಗಿತ್ತು.

ಎಡ್ವರ್ಡ್ ಮತ್ತು ಗಾರೆಕ್ಟರ ಪ್ರಕಾರ “ಷಹಜಹಾನನ ಆಳ್ವಿಕೆ ಮೊಗಲ್ ಸಾಮ್ರಾಜ್ಯದ ಮತ್ತು ಅದರ ಆರ್ಥಿಕ ವ್ಯವಸ್ಥೆಯ ಅವಸಾನದ ನಾಂದಿಯಾಗಿದ್ದಿತು”, ವಿ.ಎ. ಸ್ಮಿತ್ ಪ್ರಕಾರ “ಷಹಜಹಾನನ ಕಾಲದ ಆಡಂಬರ, ವೈಭವ ಮತ್ತು ವಿಲಾಸಗಳಿಂದ ಇತಿಹಾಸಕಾರರು ದಾರಿತಪ್ಪಿದ್ದಾರೆ, ಪಹಜಹಾನ್ ಸಮರ್ಥ ದಂಡನಾಯಕ ಮತ್ತು ಸೇನಾ ವ್ಯವಸ್ಥಾಪಕನಲ್ಲ. ರಾಜ್ಯದ ಆಡಳಿತದಲ್ಲಿ ಅವನು ಕ್ರೂರಿ ಮತ್ತು ಯಾವುದಕ್ಕೂ ಹೇಸದವ”.

ಡಾ।। ಜಾದೂನಾಥ ಸರ್ಕಾರ್ ಪ್ರಕಾರ “ಷಹಜಹಾನನ ಕಾಲದಲ್ಲಿ ಮೊಗಲ್ ಸಾಮ್ರಾಜ್ಯದ ಅವನತಿಯ ಬೀಜ ಬಿತ್ತಲ್ಪಟ್ಟವು”.

ಈ ಮೇಲ್ಕಂಡ ಅಭಿಪ್ರಾಯಗಳಿಂದ ಕೆಲವು ಇತಿಹಾಸಕಾರರು ಷಹಜಹಾನನ ಕಾಲವನ್ನು ಸುವರ್ಣಯುಗವೆಂದು ಒಪ್ಪಿಕೊಂಡಿಲ್ಲ ಎಂಬುದು ನಿಖರವಾಗಿ ತಿಳಿಯುತ್ತದೆ. ಆದರೆ ಷಹಜಹಾನನ ಕಾಲವನ್ನು ಸುವರ್ಣಯುಗವೆಂದು ಬಣ್ಣಿಸುವವರೂ ಇದ್ದಾರೆ. ಆ ಅಭಿಪ್ರಾಯವನ್ನು ಮಂಡಿಸುವಲ್ಲಿ ಪ್ರೊ. ಎಸ್.ಆರ್. ಕರ್ಮ ಪ್ರಮುಖರು, ಚರ್ಮರವರು ತಮ್ಮ ʻʻಭಾರತದಲ್ಲಿ ಮೊಗಲ್ ಸಾಮ್ರಾಜ್ಯ” ಎಂಬ ಗ್ರಂಥದಲ್ಲಿ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಹಲವಾರು ವಂಗಗಳು, ಯುದ್ಧಗಳು ಇದ್ದರೂ ಷಹಜಹಾನನ ಕಾಲವು ಸಾಕಷ್ಟು ಸಂಪದ್ಭರಿತತೆ ಮತ್ತು ವೈಭವದಿಂದ ಕೂಡಿತ್ತು ಎಂಬುದು ಅವರ ವಾದ. ಔರಂಗಜೇಬನ ಕಾಲದ ದುರಂತಕ್ಕೆ ಮತ್ತು ಮೊಗಲ್ ಸಾಮ್ರಾಜ್ಯದ ಆರ್ಥಿಕ ದಿವಾಳಿತನಕ್ಕೆ ಈತನನ್ನು ಹೊಣೆ ಮಾಡಿ ಫಲವಿಲ್ಲ ಎಂಬುದು ಇವರ ನಂಬಿಕೆ. ಇವರು ವಿ.ಎ. ಸ್ಮಿತ್‌ರ ವಾದವನ್ನು ವಿರೋಧಿಸಿ, ಅದು ಕೇವಲ ಕಾಲ್ಪನಿಕ ಎಂದು ತೆಗಳಿದ್ದಾರೆ.

ರಾಯ್ ಭಾರ್ಮಲ್ ಮತ್ತು ಕಾಫೀಖಾನ್‌ರೆಂಬ ಸಮಕಾಲೀನ ಇತಿಹಾಸಕಾರರು ಷಹಜಹಾನನ ಕಾಲವನ್ನು ಶಾಂತಿ ಮತ್ತು ಸಮೃದ್ಧಿಯ ಕಾಲವೆಂದು ವರ್ಣಿಸಿದ್ದಾರೆ.

ಎಲ್ಲಿನ್ ಸ್ಟೋನ್‌ರ ಪ್ರಕಾರ, ʻʻಷಹಜಹಾನನ ಕಾಲವು ಭಾರತದ ಇತಿಹಾಸದಲ್ಲಿ ಸಂಪದ್ಭರಿತ ಕಾಲವಾಗಿದ್ದಿತು”. ಈ ಮೇಲ್ಕಂಡಂತೆ ವಾದ ವಿವಾದಗಳಿದ್ದಾಗ್ಯೂ ಷಹಜಹಾನ್ ಯಶಸ್ವಿ ರಾಜನಾಗಿದ್ದ, ಆಡಳಿತ ದಕ್ಷತೆಯನ್ನು ಹೊಂದಿದ್ದ. ಮೊಗಲ್ ಸಾಮ್ರಾಜ್ಯ ಇವನ ಕಾಲದಲ್ಲಿ ಅತ್ಯುನ್ನತಿ ಮುಟ್ಟಿದ್ದಿತು ಎಂಬುದನ್ನು ತಳ್ಳಿಹಾಕುವಂತಿಲ್ಲ. ಅದೇ ರೀತಿ ಆತನ ತಪ್ಪುಗಳನ್ನು ನ್ಯೂನತೆಗಳನ್ನು ಒಪ್ಪಿಕೊಳ್ಳುವಂತಿಲ್ಲ.

ಕಲೆ ಮತ್ತು ವಾಸ್ತು ಶಿಲ್ಪ

ಷಹಜಹಾನನ ಕಾಲ ಕಲೆ ಮತ್ತು ವಾಸ್ತುಶಿಲ್ಪ ದೃಷ್ಟಿಯಿಂದ ವೈಭವದ ಕಾಲ, ಕಟ್ಟಡಗಳ ನಿರ್ಮಾಣದಲ್ಲಿ ಉಳಿದ ಮೊಗಲ್ ದೊರೆಗಳನ್ನು ಮೀರಿಸಿದ ಪಹಜಹಾನ್ ನನ್ನು “ಸೌಧಗಳ ನಿರ್ಮಾಪಕರ ರಾಜ” ಎಂದು ಕರೆದದ್ದು ಸತ್ಯವಾಗಿದೆ. ಪರ್ಶಿಯನ್ ಕವಿ ಶೇಖ್ ಸೌದಿಯಂತೆ, “ದೇವಾಲಯಗಳು, ಸೇತುವೆಗಳು, ಕೆರೆಕಟ್ಟೆಗಳು ಮತ್ತು ಕಾಲುವೆಗಳಂತಹ ಸ್ಮಾರಕಗಳನ್ನು ಬಿಟ್ಟು ಹೋಗುವ ವ್ಯಕ್ತಿ ಎಂದಿಗೂ ಸಾಯುವುದಿಲ್ಲ”. ಈ ಹೇಳಿಕೆ ಷಹಜಹಾನನಿಗೆ ಸಂಪೂರ್ಣವಾಗಿ ಒಪ್ಪುತ್ತದೆ. ಈತನ ಸಾಮ್ರಾಜ್ಯ, ಸೈನಿಕರು, ಆಡಳಿತ ಸಾಧನೆಗಳನ್ನು ಯಾರೂ ಇಂದು ಸ್ಮರಿಸುವುದಿಲ್ಲ. ಆದರೆ ಆತ ಬಿಟ್ಟು ಹೋಗಿರುವ ಕಲೆ ಮತ್ತು ವಾಸ್ತುಶಿಲ್ಪ ಕೃತಿಗಳಲ್ಲಿ ಅವನ ಹೆಸರು ಶಾಶ್ವತವಾಗಿದೆ. ಈತನ ಕಾಲ ನಿಜವಾಗಿ ಮೊಗಲ್ ವಾಸ್ತುಶಿಲ್ಪದ ಸುವರ್ಣಯುಗ. ಇವನೊಬ್ಬ ಮಹಾ ನಿರ್ಮಾಣಕಾರ. ಅವನನ್ನು “ನಿರ್ಮಾಣಕಾರರ ರಾಜ” ನೆಂದೇ ಕರೆಯಲಾಗಿದೆ. ಈತ ಆಗ್ರಾ, ದೆಹಲಿ, ಲಾಹೋರ್, ಕಾಶ್ಮೀರ, ಕಾಬೂಲ್, ಕಾಂದಹಾರ್, ಅಜೀರ್, ಅಹಮದಾಬಾದ್ ಮುಂತಾದೆಡೆಗಳಲ್ಲಿ ಹಲವು ಸುಂದರವಾದ ಆರಮನೆ, ಕೋಟೆ, ಮಸೀದಿ, ಗೋರಿ ಇತ್ಯಾದಿ ಕಟ್ಟಡಗಳನ್ನು ಬಿಟ್ಟು ಹೋಗಿದ್ದಾನೆ. ಈತನ ಕಾಲದಲ್ಲಿ ಮೊಗಲ್ ವಾಸ್ತುಶಿಲ್ಪ ತನ್ನ ಅತ್ಯುನ್ನತಿ ಮುಟ್ಟಿತ್ತು. ಅಮೃತಶಿಲೆಯಲ್ಲಿ ಉತ್ಕೃಷ್ಟ ಸೌಧಗಳನ್ನು ನಿರ್ಮಿಸಿದ “ಷಹಜಹಾನನು ಮೊಗಲರ ಅಗಸ್ಟಸ್” ಎಂದು ಕಲಾವಿಮರ್ಶಕರು ಬಣ್ಣಿಸಿದ್ದಾರೆ.

1. ಕೆಂಪುಕೋಟೆ : ಷಹಜಹಾನನು ಹಲವು ಮೊಗಲ್ ಪಟ್ಟಣಗಳಲ್ಲಿ ಕಟ್ಟಡಗಳನ್ನು ನಿರ್ಮಿಸಿದ್ದರೂ, ದೆಹಲಿ ಮತ್ತು ಆಗ್ರಾಗಳು ಈತನ ಕಾಲದ ಕಲಾವೈಭವವನ್ನು ಪ್ರದರ್ಶಿಸುವಲ್ಲಿ ಪ್ರಾಮುಖ್ಯತೆ ಪಡೆದಿವೆ. ಹಹಜಹಾನ್ ದೆಹಲಿಗೆ ತನ್ನ ರಾಜಧಾನಿ ವರ್ಗಾಯಿಸಿದ ಮೇಲೆ ಅಲ್ಲಿ ʻಷಹಜಹಾನಾ ಬಾದ್’ ಎಂಬ ಹೊಸನಗರವನ್ನೇ ನಿರ್ಮಾಣ ಮಾಡಿದ. ಇದರಲ್ಲಿ ಆನೇಕ ಸುಂದರವಾದ ಕಟ್ಟಡಗಳನ್ನು ನಿರ್ಮಿಸಿದೆ. ಇದರಲ್ಲಿ ಮುಖ್ಯವಾದುದೆಂದರೆ ಕೆಂಪುಕೋಟೆ. ಇದರ ಒಳಗೆ ಅನೇಕ ಸುಂದರವಾದ ವಾಸ್ತುಶಿಲ್ಪ ಕೃತಿಗಳನ್ನು ನಿರ್ಮಿಸಲಾಗಿದೆ. ಇವೆಲ್ಲವನ್ನು ಪರಿಶುದ್ದ ಅಮೃತ ಶಿಲೆಯಲ್ಲಿ ನಿರ್ಮಿಸಲಾಗಿದೆ. ಇವುಗಳಲ್ಲಿ ಮೋತಿಮಹಲ್, ಹಿರಾಮಹಲ್, ರಂಗ ಮಹಲ್, ದಿವಾನಿ ಆಮ್, ದಿವಾನಿ ಖಾಸ್ ಮುಖ್ಯವಾದವು. ದಿವಾನಿ ಖಾಸ್ ಒಂದು ಅಪೂರ್ವ ಸುಂದರ ಕಲಾಕೃತಿ, ಇದರ ಗೋಡೆಯ ಮೇಲೆ ಕಂಡುಬಂದಿರುವ “ಭೂಮಿಯಲ್ಲಿ ಸಂತೋಷದ ಸ್ವರ್ಗದ ಉದ್ಯಾನವಿದ್ದಲ್ಲಿ ಅದುವೆ ಇದು, ಇದಲ್ಲದೆ ಬೇರೆ ಇಲ್ಲ” ಎಂಬ ಬರಹ ಅಕ್ಷರಶಃ ನಿಜ.

2. ತಾಜ್ ಮಹಲ್ : ಷಹಜಹಾನನ ಕಟ್ಟಡಗಳಲ್ಲೆಲ್ಲ ಅತ್ಯಂತ ಸುಪ್ರಸಿದ್ಧವಾದುದು ತಾಜ್ ಮಹಲ್, ಇದನ್ನು ಜಗತ್ತಿನ ಏಳು ಅದ್ಭುತಗಳಲ್ಲಿ ಒಂದಾಗಿ ಪರಿಗಣಿಸಲಾಗಿದೆ. ಇದನ್ನು ಪಹಜಹಾನನು ತನ್ನ ಪ್ರೀತಿಯ ರಾಣಿ ಮಮ್ತಾಜ್ ಮಹಲ್‌ಳ ನೆನಪಿನಲ್ಲಿ ಆಗ್ರಾದಲ್ಲಿ, ಯಮುನಾ ನದಿ ದಡದಲ್ಲಿ ನಿರ್ಮಿಸಿದೆ. ಇದು ಸಂಪೂರ್ಣವಾಗಿ ಅಮೃತಶಿಲೆಯಲ್ಲಿ ನಿರ್ಮಾಣವಾಗಿದೆ. ಕ್ರಿ.ಶ. 1632 ರಲ್ಲಿ ಇದರ ರಚನೆ ಆರಂಭವಾಗಿ 1653ರಲ್ಲಿ ಪೂರ್ಣಗೊಂಡಿತು. ಇದನ್ನು ಕಟ್ಟಿಸಲು ಷಹಜಹಾನನು 50ಲಕ್ಷರೂಗಳನ್ನು ವೆಚ್ಚಮಾಡಿದನು. ತಾಜ್ ಮಹಲ್‌ನ್ನು “ಅಮೃತ ಶಿಲೆಯ ಕನಸು” ಎಂದು ವರ್ಣಿಸಲಾಗಿದೆ. ಟವರ್ನಿಯರ್ ಪ್ರಕಾರ ತಾಜ್‌ಮಹಲ್‌ನ್ನು 22 ವರ್ಷಗಳಲ್ಲಿ ಪೂರ್ಣಗೊಳಿಸಲಾಯಿತು ಮತ್ತು 3 ಕೋಟಿ ರೂಪಾಯಿಗಳಿಗಿಂತ ಹೆಚ್ಚು ಹಣ ವೆಚ್ಚವಾಯಿತು. ವೆನಿಷಿಯಾದ ವೆರೊನಿಯೋ ಎಂಬುವನು ತಾಜ್ ಮಹಲ್‌ನ ವಿನ್ಯಾಸವನ್ನು ರೂಪಿಸಿದವನೆಂದು ಫಾದರ್ ಮಾಡ್ರಿಕ್ ಹೇಳಿದ್ದಾರೆ. ಆದರೆ ಈ ಕಟ್ಟಡದಲ್ಲಿ ಪಾಶ್ಚಾತ್ಯ ಪ್ರಭಾವ ಕಾಣುವುದಿಲ್ಲವೆಂದು ಭಾರತೀಯ ವಿದ್ವಾಂಸರ ಅಭಿಪ್ರಾಯ. ಉಸ್ತಾದ್ ಈಸಾ ಎಂಬುವನ ನಿರ್ದೇಶನದಲ್ಲಿ ಪರ್ಶಿಯದ ಮತ್ತು ಮಧ್ಯ ಏಶಿಯಾದ ಕಲಾವಿದರು ಭಾರತೀಯ ಕಲಾಕಾರರ ಸಹಾಯದಿಂದ ತಾಜ್ ಮಹಲ್‌ನ್ನು ನಿರ್ಮಿಸಿದರೆಂದು ಕೆಲವು ಇತಿಹಾಸಕಾರರ ಅಭಿಪ್ರಾಯ. ಕಟ್ಟಡದ ವಿನ್ಯಾಸವನ್ನು ಮುಸಲ್ಮಾನ ಕಲಾವಿದರು ಮತ್ತು ಅಲಂಕಾರದ ಕೆಲಸವನ್ನು ಹಿಂದೂ ಕಲಾಕಾರರು ಪೂರೈಸಿದರೆಂದು ನಂಬಲಾಗಿದೆ. ತಾಜ್ ಮಹಲ್ ನಲ್ಲಿ ಸಹಜಹಾನನ ಕಾಲದ ಉತ್ಕೃಷ್ಟ ಕಲೆ ಮತ್ತು ಪರಿಣಿತ ವಾಸ್ತುಶಿಲ್ಪ ಇವುಗಳ ಸುಂದರ ಸಮ್ಮಿಲನ ಗೋಚರಿಸುತ್ತದೆ. ಯಮುನಾ ನದಿಯ ದಡದ ಮೇಲಿನ ಈ ತಾಜ್‌ಮಹಲ್ ಪ್ರಕೃತಿ ದೇವಿಯ ಮತ್ತು ಮಾನವ ಹಸ್ತಗಳ ಸಂಯೋಜನೆಯ ಫಲವಾಗಿ ರೂಪುಗೊಂಡ ಸೌಂದರ್ಯರಾಶಿಯಂತೆ ಕಂಗೊಳಿಸುತ್ತದೆ. ಹಗಲು ಹೊತ್ತಿನಲ್ಲಿ ಮತ್ತು ಬೆಳದಿಂಗಳಲ್ಲಿ ತಾಜ್‌ ಮಹಲಿನ ಬಣ್ಣ ಬದಲಾಗುವುದು ಈ ಕಟ್ಟಡದ ಒಂದು ವೈಶಿಷ್ಟ್ಯ.

3. ಮಯೂರ ಸಿಂಹಾಸನ : ಷಹಜಹಾನನ ಕಾಲದ ಇನ್ನೊಂದು ಸೃಷ್ಟಿಯೇ ಮಯೂರ ಸಿಂಹಾಸನ ಇದನ್ನು ನಿರ್ಮಿಸಲು ಏಳು ವರ್ಷ ಹಿಡಿಯಿತು. ಇದಕ್ಕೆ ತಗುಲಿದ ವೆಚ್ಚ ಒಂದು ಕೋಟಿ ರೂಪಾಯಿ, ಇದನ್ನು ಮುತ್ತುರತ್ನಗಳಿಂದ, ವಜ್ರ ವೈಡೂರ್ಯಗಳಿಂದ ಅಲಂಕರಿಸಲಾಗಿತ್ತು. ನಾದಿರ್ಷಹ ತನ್ನ ಧಾಳಿಯ ಕಾಲದಲ್ಲಿ ಇದನ್ನು ಪರ್ಶಿಯಾಕ್ಕೆ ಸಾಗಿಸಿದೆ.

4. ಮೋತಿ ಮಸೀದಿ : ಆಗ್ರಾದಲ್ಲಿನ ನಯನ ಮನೋಹರವಾದ ಮೋತಿ ಮಸೀದಿಯನ್ನು ಕ್ರಿ.ಶ. 1653ರಲ್ಲಿ ಪೂರ್ಣಗೊಳಿಸಲಾಯಿತು. ಇದರ ನಿರ್ಮಾಣಕ್ಕೆ ಏಳು ವರ್ಷ ಹಿಡಿಯಿತು. ಪರಿಶುದ್ಧತೆ ಮತ್ತು ಆಕರ್ಷಕತೆ ಇದರ ಮುಖ್ಯ ಲಕ್ಷಣಗಳು.

5. ಮುಸ್ಲಾಮಾನ್ ಬುರ್ಚ್ : ಇದು ಆಗ್ರಾ ಕೋಟೆಯೊಳಗಿನ ಇನ್ನೊಂದು ಸುಂದರ ನಿರ್ಮಾಣ, ಇಲ್ಲಿಂದ ತಾಜ್ ಮಹಲಿನ ದರ್ಶನ ಸಾಧ್ಯ. ಇದರಲ್ಲಿಯೇ ಔರಂಗಜೇಬ್ ಷಹಜಹಾನನ್ನು ಸೆರೆಹಿಡಿದದ್ದು. ಕಟ್ಟಡಗಳೇ ಅಲ್ಲದೆ ಉದ್ಯಾನವನಗಳನ್ನು ನಿರ್ಮಿಸುವಲ್ಲಿ ಷಹಜಹಾನ್ ಆಸಕ್ತಿ ವಹಿಸಿದ್ದ. ಕಾಶ್ಮೀರದ ಕಾಲಿಮಾರ್ ಮತ್ತು ನಿಷಾತ್ ಉದ್ಯಾನವನಗಳು, ಲಾಹೋರಿನ ಶಾಲಿಮಾರ್ ಉದ್ಯಾನವನ ಈತನ ಕಾಲದವು.

ಮುಕ್ತಾಯ : ಷಹಜಹಾನನ ಕಾಲದಲ್ಲಿ ವಿಶಿಷ್ಟವಾದ ವಾಸ್ತುಶಿಲ್ಪ ಶೈಲಿಯೊಂದು ನಿರ್ಮಾಣವಾಯಿತು. ಇದನ್ನು ಕೆಲವರು “ಷಹಜಹಾನನ ಶೈಲಿ” ಯೆಂದು ಕರೆದಿದ್ದಾರೆ. ಈತನಿಗಿಂತ ಮೊದಲಿನ ಶೈಲಿಯನ್ನು “ಇಂಡೋಪರ್ಶಿಯನ್ ಶೈಲಿ” -ಯೆಂದು ಗುರುತಿಸಲಾಗಿದೆ. ಕಾರಣ ಅದರಲ್ಲಿ ಭಾರತೀಯ ಮತ್ತು ಪರ್ಶಿಯನ್ ಶೈಲಿಗಳ ಸಮ್ಮಿಲನವಿದ್ದಿತ್ತು. ಸಹಜಹಾನನ ಕಾಲದಲ್ಲಿ ಸಂಪೂರ್ಣವಾಗಿ ಭಾರತೀಯ ಅಂಶಗಳಿಂದ ಕೂಡಿದ ಶೈಲಿ ಆರಂಭವಾಯಿತು. ವಿದೇಶಿ ಅಂಶಗಳು ದೂರವಾದವು. ಈ ಶೈಲಿಯಲ್ಲಿ ಸೂಕ್ಷ್ಮವಾದ ಕೆತ್ತನೆಗೆ, ಅಲಂಕಾರಕ್ಕೆ, ಮೆರುಗಿಗೆ, ಬಣ್ಣಕ್ಕೆ, ರಮ್ಯತೆಗೆ ಅಧಿಕ ಗಮನ ಕೊಡಲಾಗಿತ್ತು. ಷಹಜಹಾನನ ಕಾಲದ ವಾಸ್ತುಶಿಲ್ಪ ಕೃತಿಗಳ ವೈಶಿಷ್ಟ್ಯವೆಂದರೆ ಹೆಚ್ಚಾಗಿ ಬಿಳಿಯ ಅಮೃತಶಿಲೆಯ ಬಳಕೆ ಮತ್ತು ಅಲಂಕಾರಕ್ಕೆ ಮತ್ತು ರತ್ನ, ವಜ್ರ ವೈಡೂರ್ಯ, ಬಂಗಾರ ಮತ್ತು ಬೆಳ್ಳಿಯನ್ನು ಬಳಸಿರುವುದು. ತತ್ಪರಿಣಾಮವಾಗಿ ಈತನ ಕಾಲದ ಕೃತಿಗಳು ಅತ್ಯಂತ ಆಕರ್ಷಕ ಮತ್ತು ಸುಂದರವಾದವು.