ಗುಪ್ತರ ಕಾಲದ ವಿಜ್ಞಾನ ಮತ್ತು ತಂತ್ರಜ್ಞಾನ

ಗುಪ್ತರ ಕಾಲದ ವಿಜ್ಞಾನ ಮತ್ತು ತಂತ್ರಜ್ಞಾನ

ಗುಪ್ತರ ಕಾಲದಲ್ಲಿ ಭಾರತೀಯ ವಿಜ್ಞಾನ ಮತ್ತು ತಂತ್ರಜ್ಞಾನವು ಅಪೂರ್ವವಾದ ಮುನ್ನಡೆಯನ್ನು ಕಂಡಿತು. ಸೊನ್ನೆಯ ವಿಶಿಷ್ಟತೆಯನ್ನು ಜಗತ್ತಿಗೆ ತಿಳಿಸಿ ಕ್ರಾಂತಿಯನ್ನು ಎಬ್ಬಿಸಲಾಯಿತು. ಖಗೋಳ ಶಾಸ್ತ್ರ, ವೈದ್ಯಕೀಯ, ಗಣಿತ ಶಾಸ್ತ್ರ, ಲೋಹ ಶಾಸ್ತ್ರ ಮುಂತಾದ ಕ್ಷೇತ್ರಗಳಲ್ಲಿ ಅಭೂತಪೂರ್ವವಾದ ಯಶಸ್ಸನ್ನು ಸಂಪಾದಿಸಿದರು. ಪರಿಣಾಮವಾಗಿ ವೈಜ್ಞಾನಿಕ ಸಾಹಿತ್ಯ ರೂಪ ತಳೆಯಿತು.

ಆರ್ಯಭಟ : ಇವನು ಗುಪ್ತರ ಕಾಲದ ಶ್ರೇಷ್ಠ ಖಗೋಳ ವಿಜ್ಞಾನಿ ಮತ್ತು ಪ್ರಖ್ಯಾತ ಗಣಿತ ಶಾಸ್ತ್ರಜ್ಞ ಖಗೋಳ ಶಾಸ್ತ್ರವನ್ನು ಗಣಿತಶಾಸ್ತ್ರದಿಂದ ಪ್ರತ್ಯೇಕಿಸಿದ ಕೀರ್ತಿ ಇವನಿಗೆ ಸಲ್ಲುತ್ತದೆ. ಇವನ ಪ್ರಖ್ಯಾತ ಕೃತಿಗಳೆಂದರೆ, ‘ಆರ್ಯಭಟೀಯಂ’ ಮತ್ತು ‘ಸೂರ್ಯ ಸಿದ್ಧಾಂತ’

  1. ಆರ್ಯಭಟನು ತನ್ನ ಕೃತಿಯಲ್ಲಿ ಭೂಮಿ ಗುಂಡಾಗಿದೆ ಎಂಬ ವೈಜ್ಞಾನಿಕ ಸತ್ಯವನ್ನು ಸಾರಿದ್ದಾನೆ. ಅವನ ಮಾತಿನಲ್ಲೇ ಹೇಳುವುದಾದರೆ ‘ಭೂಗೋಲ: ಸರ್ವತೋ ವೃತಃ’.
  2. ಭೂಮಿಯು ತನ್ನ ಅಕ್ಷದ ಸುತ್ತ ಸುತ್ತುತ್ತಿರುವುದರಿಂದ ಹಗಲು ರಾತ್ರಿಗಳಾಗುತ್ತಿವೆ ಎಂದು ಪ್ರಕಟ ಪಡಿಸಿದ್ದಾನೆ.
  3. ಚಂದ್ರನ ಮೇಲೆ ಭೂಮಿಯ ನೆರಳು ಬೀಳುವುದರಿಂದ ಗ್ರಹಣಗಳಾಗುತ್ತವೆ ಎಂದು ಜಗತ್ತಿಗೆ ಸಾರಿ ಹೇಳಿದನು.
  4. ಸೂರ್ಯ ವರ್ಷದ (ಒಂದು ವರ್ಷದ) ಅವಧಿಯನ್ನು 365,3586805 ದಿನಗಳೆಂದು ಗೊತ್ತು ಪಡಿಸಿದನು.
  5. ಪ್ರಾಚೀನರಿಗೆ ಗೊತ್ತಿಲ್ಲದ ದಶಮಾಂಶ ಪದ್ಧತಿಯನ್ನು ಜಗತ್ತಿಗೆ ಕೊಟ್ಟ ಶ್ರೇಯಸ್ಸು ಆರ್ಯಭಟನಿಗೆ ಸಲ್ಲುತ್ತದೆ. ಅವನ ಅಂಕನ ಪದ್ಧತಿಯಲ್ಲಿ ಇದು ಬರುತ್ತದೆ. ಆದಾಗ್ಯೂ ಈ ಪದ್ಧತಿಯನ್ನು ಆರ್ಯಭಟನೇ ಹುಟ್ಟುಹಾಕಿದನೋ ಅಥವಾ ಅಸ್ತಿತ್ವದಲ್ಲಿ ಇದ್ದ ಪದ್ಧತಿಯೊಂದನ್ನು ಸುಧಾರಿಸಿದನೋ ಎಂಬ ಬಗ್ಗೆ ನಿಖರವಾಗಿ ಹೇಳಲು ಸಾಧ್ಯವಿಲ್ಲ.
  6. ಪೈ ನ ಸರಿಯಾದ ಮೌಲ್ಯ 3,1416 ಎಂದು ಪ್ರತಿಪಾಧಿಸಿದನು.

ವಿಶ್ವದ ವಿಜ್ಞಾನ ಕ್ಷೇತ್ರಕ್ಕೆ ಆರ್ಯಭಟನ ಕೊಡುಗೆ ಅಸಾಧಾರಣವಾದುದು. ಒಟ್ಟಿನಲ್ಲಿ ಇಡೀ ಪ್ರಪಂಚದ ಖಗೋಳ ಶಾಸ್ತ್ರಜ್ಞರ ಮಧ್ಯೆ ಅತಿ ಎತ್ತರದ ಸ್ಥಾನವನ್ನು ಅಲಂಕರಿಸಿದ್ದಾನೆ.

ವರಾಹಮಿಹಿರ : ವರಹಮಿಹಿರನು ಖಗೋಳ ಮತ್ತು ಜ್ಯೋತಿಷ್ಯ ಶಾಸ್ತ್ರದ ಪ್ರಸಿದ್ಧ ಪಂಡಿತನಾಗಿದ್ದನು. ಇವನು ಖಗೋಳ ವಿಜ್ಞಾನವನ್ನು ಖಗೋಳ ವಿಜ್ಞಾನ, ಗಣಿತಶಾಸ್ತ್ರ, ಜಾತಕಶಾಸ್ತ್ರ ಮತ್ತು ಜ್ಯೋತಿಷ್ಯಶಾಸ್ತ್ರಗಳೆಂದು ವಿಭಜಿಸಿದ್ದಾನೆ. ಅಲ್ಲದೆ ಖಗೋಳ ವಿಜ್ಞಾನಕ್ಕಿಂತ ಜ್ಯೋತಿಷ್ಯ ಶಾಸ್ತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ಕೊಟ್ಟಿದ್ದಾನೆ.

ವರಾಹಮಿಹಿರನ ಪ್ರಸಿದ್ಧ ಕೃತಿ ‘ಬೃಹತ್ ಸಂಹಿತ’ ಇದನ್ನು ವಿಶ್ವಕೋಶವೆಂದು ಪರಿಗಣಿಸಲಾಗಿದೆ. ಇದರಲ್ಲಿ ಗ್ರಹಗಳ ಚಲನ ವಲನಗಳು, ಮನುಷ್ಯರ ಮೇಲೆ ಅವುಗಳ ಪರಿಣಾಮಗಳು, ಕೆರೆಗಳನ್ನು ತೋಡುವುದು, ತೋಟವನ್ನು ಮಾಡುವುದು, ಬೇರೆ-ಬೇರೆ ವರ್ಗದ ಸ್ತ್ರೀಯರ ಹಾಗೂ ಪ್ರಾಣಿಗಳ ಲಕ್ಷಣಗಳು, ಶಕುನಶಾಸ್ತ್ರ, ಶಿಲ್ಪಶಾಸ್ತ್ರ, ವಾಸ್ತುಶಿಲ್ಪ, ಭೂಗೋಳ, ರತ್ನಪರೀಕ್ಷೆ, ವಿವಾಹ ಮೊದಲಾದವುಗಳ ಬಗ್ಗೆ ಮಾಹಿತಿ ಈ ಗ್ರಂಥದಲ್ಲಿದೆ. ಇವನ ಮತ್ತೊಂದು ಕೃತಿ ಪಂಚಸಿದ್ಧಾಂತಿಕ. ಇದರಲ್ಲಿ ಖಗೋಳ ವಿಜ್ಞಾನದ ಐದು ಪಂಥಗಳ ಬಗ್ಗೆ ಬರೆದಿದ್ದಾನೆ.

ಬ್ರಹ್ಮಗುಪ್ತ : ಇವನೂ ಸಹ ಪ್ರಸಿದ್ಧ ಖಗೋಳ ಮತ್ತು ಗಣಿತಶಾಸ್ತ್ರಜ್ಞನಾಗಿದ್ದನು. ಇವನ ಎರಡು ಕೃತಿಗಳೆಂದರೆ

ಬ್ರಹ್ಮ ಸಿದ್ಧಾಂತ ಮತ್ತು ಖಂಡಖಾದ್ಯ. ಇವನು ತನ್ನ ಕೃತಿಗಳಲ್ಲಿ ಚೌಕೋನ, ಷಟ್ಕೋನ, ತ್ರಿಕೋನ, ಜ್ಯಾಮಿತಿ, ಲಂಬಕೋನ, ವೃತ್ತ ಮುಂತಾದವುಗಳ ಬಗ್ಗೆ ಬರೆದಿದ್ದಾನೆ. ಗ್ರಹಗಳ ಸ್ಥಾನಗಳನ್ನು, ಗ್ರಹಣಗಳ ಲೆಕ್ಕಾಚಾರಗಳನ್ನು ಗುಣಿಸುವುದನ್ನು ವಿವರಿಸಿದ್ದಾನೆ. ಜಗತ್ತಿಗೆ ಆಕರ್ಷಿಸುವ ಶಕ್ತಿ ಇರುವುದರಿಂದಲೇ ಎಲ್ಲಾ ವಸ್ತುಗಳು ನೆಲಕ್ಕೆ ಬೀಳುತ್ತವೆ ಎಂಬ ಸಿದ್ಧಾಂತವನ್ನು ನ್ಯೂಟನ್‌ಗಿಂತ ಹಲವು ಶತಮಾನಗಳ ಹಿಂದೆಯೇ ಪ್ರಕಟಿಸಿದ್ದನು.

ವಾಗ್ಬಟ : ವಾಗ್ದಟನ ಪ್ರಸಿದ್ಧ ಕೃತಿ ‘ಅಷ್ಟಾಂಗ ಸಂಗ್ರಹ’. ಇದೊಂದು ವೈದ್ಯಶಾಸ್ತ್ರದ ಗ್ರಂಥವಾಗಿದ್ದು, ಆಯುರ್ವೇದದ ಬೆಳವಣಿಗೆಗೆ ಸಹಾಯಕವಾಯಿತು.

ಪಾಲಕಾಪ್ಯ : ಇವನ ಕೃತಿ ‘ಹಸ್ತಾ ಆಯುರ್ವೇದ’, ಅಂಗದೇಶದ ರಾಜನಾದ ರೋಮಪಾದ ಹಾಗೂ ಪಾಲಕಾಪ್ಯಮುನಿ ಇವರ ಸಂಭಾಷಣೆಯೇ ಗ್ರಂಥರೂಪವನ್ನು ಪಡೆದಿದೆ. ಇದರಲ್ಲಿ ಆನೆಗೆ ಬರುವ ಕಾಯಿಲೆಗಳು ಮತ್ತು ಅವುಗಳ ಚಿಕಿತ್ಸಾ ವಿಧಾನದ ಬಗ್ಗೆ ಮಾಹಿತಿ ದೊರೆಯುತ್ತದೆ.

ಚರಕ, ಶುಶೃತ, ಧನ್ವಂತರಿ : ಇವರುಗಳು ಪ್ರಸಿದ್ಧ ಆಯುರ್ವೇದ ವೈದ್ಯರಾಗಿದ್ದರು. ಚರಕನ ‘ಚರಕಸಂಹಿತೆ’, ಸುಶೃತನ ‘ಸುಶೃತ ಸಂಹಿತೆ’ ಮತ್ತು ಧನ್ವಂತರಿಯ ‘ಆಯುರ್ವೇದ ನಿಘಂಟು’ ಪ್ರಾಚೀನ ಚಿಕಿತ್ಸಾ ಪದ್ಧತಿಯ ಪ್ರಸಿದ್ಧ ಕೃತಿಗಳಾಗಿವೆ.

ಲೋಹ ಜ್ಞಾನ : ಗುಪ್ತರ ಕಾಲದಲ್ಲಿ ಲೋಹ ವಿದ್ಯೆಯು ಅಭಿವೃದ್ಧಿಯಾಯಿತು. ಅವರ ಕಾಲದ ನಾಣ್ಯಗಳು ಮತ್ತು ಲೋಹಸ್ತಂಭಗಳು ಇದಕ್ಕೆ ಆಧಾರವಾಗಿವೆ. ದೆಹಲಿ ಬಳಿಯಿರುವ ಮೆಹರೌಲಿ ಎಂಬ ಹಳ್ಳಿಯಲ್ಲಿರುವ ಬೃಹತ್ ಕಬ್ಬಿಣದ ಸ್ತಂಭ ಜಗತ್ ಪ್ರಸಿದ್ಧವಾಗಿದೆ. ಇದು ಎರಡನೇ ಚಂದ್ರಗುಪ್ತನ ಕಾಲಕ್ಕೆ ಸೇರಿದ್ದು, ಅಂದಿನ ಲೋಹಜ್ಞಾನಕ್ಕೆ ಕನ್ನಡಿಯಾಗಿದೆ. ಇದು 23 ಅಡಿ 8 ಅಂಗುಲ ಉದ್ದವಿದೆ. 6000 ಕಿಲೋಗ್ರಾಂ ತೂಕವಿದೆ. ನೂರಾರು ವರ್ಷಗಳು ಕಳೆದರೂ ಮಳೆ, ಗಾಳಿಗೆ ಸ್ವಲ್ಪವೂ ತುಕ್ಕುಹಿಡಿಯದೆ ನಿಂತ ಪರಿ ಅಂದಿನ ಲೋಹ ವಿಜ್ಞಾನಕ್ಕೆ ಸಾಕ್ಷಿಯಾಗಿದೆ.

ಬುದ್ಧನ ತಾವುದ ಮೂರ್ತಿ: ಗುಪ್ತರ ಕಾಲದ ಬುದ್ಧನ ತಾಮ್ರದ ಮೂರ್ತಿಯೊಂದು ದೊರೆತ್ತಿದ್ದು, ಅದೀಗ ‘ಬರ್ಮಿಂಗ್‌ ಹ್ಯಾಂ’ ವಸ್ತು ಸಂಗ್ರಹಾಲಯದಲ್ಲಿದೆ. ಇದು 71/2 ಅಡಿ ಎತ್ತರವಿದೆ. 1000 ಕೆ.ಜಿ. ತೂಕವಿದೆ. ಇದೂ ಸಹ ಗುಪ್ತರಕಾಲದ ಲೋಹ ತಂತ್ರಜ್ಞಾನಕ್ಕೆ ಸಾಕ್ಷಿಯಾಗಿದೆ.

ಬಣ್ಣದ ತಯಾರಿಕೆ ಬಹಳ ಚೆನ್ನಾಗಿ ಬೆಳೆಯಿತು. ಇಂದಿಗೂ ಮಾಸದೇ ಉಳಿದ ವರ್ಣಲೇಪಿತ ಅಜಂತಾ ಚಿತ್ರಗಳು ಗುಪ್ತರ ಕಾಲದ ಅತ್ಯುತ್ತಮ ಕಲಾ ಕೊಡುಗೆಗಳಾಗಿವೆ. ಎ.ಎಲ್. ಭಾಷ್ಯಂ ರವರ ಪ್ರಕಾರ ʻದ ವಂಡರ್ ದಟ್ ವಾಸ್ ಇಂಡಿಯಾ’ ಎಂಬ ಕೃತಿಯಲ್ಲಿ ಹೇಳಿರುವಂತೆ ಗುಪ್ತರ ಕಾಲದಲ್ಲಿ ಪ್ಲಾಸ್ಟಿಕ್ ಸರ್ಜರಿ ಬಳಕೆಯಲ್ಲಿತ್ತು. ಎರಡನೆ ನಾಗಾರ್ಜುನನು ರಸಾಯನ ಶಾಸ್ತ್ರದಲ್ಲಿ ಬಹು ದೊಡ್ಡ ಪಂಡಿತನಾಗಿದ್ದನು. ಇವನನ್ನು ರಸಾಯನ ಶಾಸ್ತ್ರದ ಪಿತಾಮಹನೆಂದು ಕರೆಯಲಾಗಿದೆ.

ಗುಪ್ತರ ಕಾಲದ ಧರ್ಮ

ಗುಪ್ತರ ಕಾಲದ ಧರ್ಮ

ಗುಪ್ತರ ಕಾಲದಲ್ಲಿ ಹಿಂದೂ ಧರ್ಮ

ಗುಪ್ತರ ಆಳ್ವಿಕೆಯಿಂದ ಹಿಂದೂ ಧರ್ಮಕ್ಕೆ ಹೊಸ ಚೈತನ್ಯ ಪ್ರಾಪ್ತವಾಯಿತು. ಇಲ್ಲಿಯವರೆಗೂ ಅಷ್ಟಾಗಿ ಇರದ ರಾಜಾಶ್ರಯ ಈಗ ದೊರೆತು ಪ್ರಬಲವಾಯ್ತು. ಪರಿಣಾಮವಾಗಿ ಬೌದ್ಧಧರ್ಮ ಅವನತಿಯತ್ತ ಸಾಗಿದರೆ ಹಿಂದೂಧರ್ಮ ಪುನರುಜ್ಜಿವನವಾಗತೊಡಗಿತು.

1. ಹಿಂದೂ ಕಲಾ ಮತ್ತು ವಾಸ್ತು ಪರಂಪರೆಯ ಪ್ರಾರಂಭ : ಗುಪ್ತರಿಗಿಂತ ಹಿಂದೆ ಹಿಂದು ದೇವರ ವಿಗ್ರಹ ಕೆತ್ತುವ ಅಥವಾ ದೇವಾಲಯ ನಿರ್ಮಿಸುವ ಪರಿಪಾಠವಿರಲಿಲ್ಲ. ಅದನ್ನು ಪ್ರಾರಂಭ ಮಾಡಿದವರೇ ಗುಪ್ತರು. ಪರಿಣಾಮವಾಗಿ ದೇವಾನು ದೇವತೆಗಳ ವಿಗ್ರಹಗಳು ಮತ್ತು ಅಸಂಖ್ಯಾತ ದೇವಾಲಯಗಳು ನಿರ್ಮಾಣವಾದವು. ಗುಪ್ತ ದೊರೆಗಳು ಹೇರಳವಾಗಿ ಧನಸಹಾಯವನ್ನೂ ಮಾಡಿದರು. ಆ ಮೂಲಕ ಗುಪ್ತರು ಭಾರತೀಯ ಕಲೆ ಮತ್ತು ವಾಸ್ತುಶಿಲ್ಪದ ಪರಂಪರೆಗೆ ಅಪಾರವಾದ ಕೊಡುಗೆ ನೀಡಿದ್ದಾರೆ.

2. ಬ್ರಾಹ್ಮಣರಿಗೆ ಪ್ರಥಮ ಪ್ರಾಶಸ್ಯ : ಶ್ರೇಣೀಕೃತ ಭಾರತೀಯ ಸಮಾಜದಲ್ಲಿ ಬ್ರಾಹ್ಮಣರ ಸ್ಥಾನ ಮೊದಲಿನದಾಗಿದೆ. ಆದರೆ ಮೌರ್ಯರ ಮತ್ತು ಕುಶಾನರ ಕಾಲದಲ್ಲಿ ಬೌದ್ಧಧರ್ಮದ ಪ್ರಭಾವದ ಹಿನ್ನೆಲೆಯಲ್ಲಿ ಬ್ರಾಹ್ಮಣರ ಸ್ಥಾನಮಾನ ಮಂಕಾಗಿತ್ತು. ಯಾವಾಗ ಗುಪ್ತರು ಅಧಿಕಾರಕ್ಕೆ ಬಂದರೋ ಅವರು ಸನಾತನ ಧರ್ಮಕ್ಕೆ ಪ್ರಾಮುಖ್ಯತೆ ನೀಡತೊಡಗಿದರು. ಪರಿಣಾಮವಾಗಿ ಸನಾತನ ಧರ್ಮ ಅಥಾರ್ತ್ ಬ್ರಾಹ್ಮಣಧರ್ಮದ ವಾರಸುದಾರರಂತಿದ್ದ ಬ್ರಾಹ್ಮಣರಿಗೂ ಪ್ರಥಮ ಪ್ರಾಶಸ್ತ್ರ ಲಭ್ಯವಾಯಿತು. ಅರಮನೆಗಳಲ್ಲಿ, ಆಡಳಿತದಲ್ಲಿ ಮತ್ತು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಅವರಿಗೆ ವಿಶೇಷ ಮಹತ್ವ ನೀಡತೊಡಗಿದ್ದರಿಂದ ಅವರ ಸ್ಥಾನ ಹೆಚ್ಚಾಯಿತು.

3 ಯಜ್ಞ-ಯಾಗಗಳ ಏಲ್ಲೆ : ಹಿಂದೂ ಧರ್ಮದ ವಿಶೇಷ ಲಕ್ಷಣಗಳಲ್ಲಿ ಯಜ್ಞ ಯಾಗಗಳು ಬರುತ್ತವೆ. ಹಿಂದೂಧರ್ಮದ ಅನುಯಾಯಿಗಳಾದ ಗುಪ್ತರು ಯಜ್ಞ- ಯಾಗಾಧಿಗಳಿಗೆ ಪ್ರಾಶಸ್ತ್ರ ನೀಡತೊಡಗಿದರು. ಪರಿಣಾಮವಾಗಿ ಅಶ್ವಮೇದ, ವಾಜಪೇಯ, ರಾಜಸೂಯ ಯಾಗಗಳು ಬಹು ಜನಪ್ರಿಯವಾದವು.

4. ಶೈವ ಮತ್ತು ಶಾಕ್ತ ಪಂಥಗಳ ಪ್ರಚಾರ : ಗುಪ್ತರ ಕಾಲದಲ್ಲಿ ಲಕುಲೀಶನಿಂದ ಶೈವ ಪಂಥ ಹೆಚ್ಚು ಪ್ರಚಾರವಾಯಿತು. ಹಾಗೆಯೇ ಶಾಕ್ತ ಪಂಥಗಳು ಅಥವಾ ದೇವಿ/ಶಕ್ತಿಯ ಆರಾಧನೆ ಕೂಡ ಜನಪ್ರಿಯವಾಯಿತು.

5. ವಿವಿಧ ಹೆಸರುಗಳಿಂದ ದೇವರ ಆರಾಧನೆ : ಗುಪ್ತರ ಕಾಲಾವಧಿಯಲ್ಲಿ ಶಿವ ಮತ್ತು ವಿಷ್ಣುರ ಅವತಾರಗಳು ಜನಪ್ರಿಯವಾದವು. ವಿಷ್ಣುವನ್ನು ಕೃಷ್ಣ, ಜನಾರ್ಧನ, ಅನಂತಶಯನ, ಗದಾಧರ, ವಾಸುದೇವ, ಗೋವಿಂದ, ನಾರಾಯಣ ಎಂಬುದಾಗಿ ಕರೆದು ವಿವಿಧ ರೂಪಗಳಲ್ಲಿ ಆರಾಧಿಸತೊಡಗಿದರು. ಶಿವನನ್ನು ಜನಾರ್ಧನ, ಶಂಕರ, ಹರನೆಂದು ಪೂಜಿಸತೊಡಗಿದರು. ಪಾರ್ವತಿಯು ಆಧಿಶಕ್ತಿ, ಭಗವತಿಯಾಗಿ ಕಂಡು ಬಂದಳು. ವಿಗ್ರಹಾರಾಧನೆ ಬಹು ಜನಪ್ರಿಯವಾಯಿತು.

6. ಪುರಾಣಗಳ ಪರಿಪೂರ್ಣತೆ : ಹಿಂದೂ ಧರ್ಮದ ಅವಿಭಾಜ್ಯ ಅಂಗಗಳಾದ 18 ಪುರಾಣಗಳು ಪರಿಪೂರ್ಣವಾಗಿ ರಚಿಸಲ್ಪಟ್ಟಿದ್ದು ಗುಪ್ತರ ಕಾಲಾವಧಿಯಲ್ಲಿ. ಅವು ಪುನಃ ಬರೆಯಲ್ಪಟ್ಟಿದ್ದು ಮತ್ತು ಪರಿಷ್ಕಾರವಾದದ್ದೂ ಆ ಕಾಲಾವಧಿಯಲ್ಲೆ.

7. ವೈಷ್ಣವ ಪಂಥದ ಪ್ರಾಧಾನ್ಯತೆ : ಗುಪ್ತ ಅರಸರು ಬಹುಮುಖ್ಯವಾಗಿ ವಿಷ್ಣು ಆರಾಧಕರಾಗಿದ್ದರು. ತಮ್ಮನ್ನು ಪರಮ ಭಾಗವತರೆಂದು ಕರೆದುಕೊಂಡಿದ್ದಾರೆ. ಗುಪ್ತರ ನಾಣ್ಯಗಳಲ್ಲಿ ವಿಷ್ಣುವಿನ ಪತ್ನಿ ಲಕ್ಷ್ಮಿಯ ಚಿತ್ರ ಮುದ್ರಿಸಲ್ಪಟ್ಟಿದೆ. ಅರಸರು ವಿಷ್ಣುವಿನ ವಾಹನವಾದ ಗರುಡನ ಚಿತ್ರವನ್ನು ಬಳಸುತ್ತಿದ್ದರು. ಅವರ ಬಾವುಟವನ್ನು ವಿಷ್ಣು ದ್ವಜವೆಂದು ಕರೆಯುತ್ತಿದ್ದರು

8. ಸಪ್ತ ಮಾತೃಕೆಯರ ಆರಾಧನೆ : ಗುಪ್ತರ ಕಾಲದಲ್ಲಿ ಸಪ್ತಮಾತೃಕೆಯರ ಹೆಸರುಗಳು ಕಂಡು ಬರುತ್ತವೆ. ಬ್ರಾಹ್ಮ, ಮಹೇಶ್ವರಿ, ಕೌಮಾರಿ, ವೈಷ್ಣವಿ, ವರಾಹಿ, ಮಹೇಂದ್ರಿ, ಚಾಮುಂಡಿ ಎಂಬ ಸಪ್ತ ಮಾತೃಕೆಯರ ಆರಾಧನೆ ಜನಪ್ರಿಯವಾಗಿರುವುದು ಕಂಡು ಬರುತ್ತದೆ.

ಆಧಾರಗಳು

ಆಧಾರಗಳು

ಚರಿತ್ರೆಯ ರಚನೆಯಲ್ಲಿ ಆಧಾರಗಳು ಅದ್ವಿತೀಯವಾದ ಪಾತ್ರವನ್ನು ವಹಿಸುತ್ತವೆ. ಆಧಾರಗಳಿಲ್ಲದೆ ಇತಿಹಾಸವಿಲ್ಲ. ʻಆಧಾರ’ ಈ ಮೂರು ಅಕ್ಷರಗಳ ಅರ್ಥ ಬಹುವ್ಯಾಪಕ. ಇತಿಹಾಸಕ್ಕೆ ಆಧಾರಗಳೇ ಉಸಿರು. ಆಧಾರಗಳಿಲ್ಲದೆ ರಚನೆಗೊಂಡ ಚರಿತ್ರೆ ನಾವಿಕನಿಲ್ಲದ ದೋಣಿಯಂತೆ, ಚುಕ್ಕಾಣಿಯಿಲ್ಲದ ಹಡಗಿನಂತೆ.

ಪ್ರಾಚೀನ ಭಾರತದ ಇತಿಹಾಸ ರಚನೆಗೆ ಸಂಬಂಧಿಸಿದಂತೆ ಸಾಕಷ್ಟು ವಿಪುಲ ಆಧಾರಗಳು ಲಭ್ಯವಾಗುವುದಿಲ್ಲ. ದೊರೆತಿರುವ ಅಲ್ಪಸ್ವಲ್ಪ ಆಧಾರಗಳನ್ನು ಆಧರಿಸಿ ಇತಿಹಾಸವನ್ನು ರಚಿಸಲಾಗಿದೆ. ಅಲ್ಬೆರೂನಿ ‘ತಕ್ವಿಕ್ ಅಲ್ ಹಿಂದ್’ ಎಂಬ ಕೃತಿಯಲ್ಲಿ ʻಭಾರತೀಯರಿಗೆ ಐತಿಹಾಸಿಕ ಪ್ರಜ್ಞೆಯ ಅರಿವಿಲ್ಲ. ಪ್ರಚಲಿತ ವಿಷಯಗಳ ಕುರಿತು ಪ್ರಶ್ನಿಸಿದಾಗ ಅಡುಗೂಲಜ್ಜಿಯ ಕಥೆ ಹೇಳಲು ಆರಂಭಿಸುತ್ತಾರೆ’ ಎಂದು ಅಭಿಪ್ರಾಯ ಪಟ್ಟಿದ್ದಾನೆ. ಈ ಅಭಿಪ್ರಾಯದಿಂದ ಭಾರತೀಯರಲ್ಲಿ ಚಾರಿತ್ರಿಕ ಪ್ರಜ್ಞೆಯ ಅರಿವು ಇರಲಿಲ್ಲ ಎಂಬುದು ತಿಳಿದುಬರುತ್ತದೆ. ಆದರೆ ಅಲ್ಬೆರೂನಿಯ ಅಭಿಪ್ರಾಯದಲ್ಲಿಯೇ ಭಾರತೀಯರು ಪುರಾಣಗಳನ್ನು, ಮಹಾಕಾವ್ಯಗಳನ್ನೆಲ್ಲಾ ರಚಿಸಿದ್ದಾರೆ. ಆದರೆ ಚಾರಿತ್ರಿಕ ಕೃತಿಗಳನ್ನು ರಚಿಸಿರುವುದಿಲ್ಲ. ಹೀಗಾಗಿ ವಾಸ್ತವವಾದಿಗಳಾಗಿರದೆ ಅದೃಷ್ಟವಾದಿಗಳಾಗಿರುವುದು ಮತ್ತು ದಂತಕಥೆಗಳಿಗೆ ಹೆಚ್ಚು ಪ್ರಾಧಾನ್ಯತೆ ನೀಡಿರುವುದು ಕಂಡುಬರುತ್ತದೆ.

ಪ್ರಾಚೀನ ಭಾರತದ ಇತಿಹಾಸ ರಚನೆಯಲ್ಲಿ ಸಹಕಾರಿಯಾದ ಮೂಲಾಧಾರಗಳನ್ನು ಹೀಗೆ ವರ್ಗೀಕರಿಸಿ ಅವುಗಳ ಗುಣಾತ್ಮಕ ಮೌಲ್ಯವನ್ನು ಪರಿಗಣಿಸಬಹುದಾಗಿದೆ. ಅವುಗಳೆಂದರೆ

1. ಪ್ರಾಕ್ತನಶಾಸ್ತ್ರಾದಾರಗಳು (ಪುರಾತತ್ವ ಆಧಾರಗಳು)

2. ಲಿಖಿತ ಆಧಾರಗಳು. (ಸಾಹಿತ್ಯಾಧಾರಗಳು)

1. ಪ್ರಾಕ್ತನ ಶಾಸ್ತ್ರಾಧಾರಗಳು

ಇತಿಹಾಸ ರಚನೆಯಲ್ಲಿ ಪ್ರಾಕ್ತನಶಾಸ್ತ್ರಾಧಾರಗಳು ಗಮನಾರ್ಹವಾದ ಪಾತ್ರವನ್ನು ಹೊಂದಿವೆ ಇವುಗಳನ್ನು ಅವು ದೊರೆತಿರುವ ಅವಶೇಷಗಳಿಗೆ ಅನುಗುಣವಾಗಿ 4 ಭಾಗಗಳಾಗಿ ವಿಂಗಡಿಸಬಹುದಾಗಿದೆ.

1.ಭೂಸಂಶೋಧನೆ,

2. ಶಾಸನಗಳು,

3. ನಾಣ್ಯಗಳು,

4. ಐತಿಹಾಸಿಕ ಸ್ಮಾರಕಗಳು.

1. ಭೂಸಂಶೋಧನೆ :

ಭೂಸಂಶೋಧನೆ ಎಂದರೆ ಭೂ ಉತ್ಖನನ ಎಂದರ್ಥ (ವೈಜ್ಞಾನಿಕವಾಗಿ ಭೂಮಿಯನ್ನು ಅಗೆಯುವುದು), ಭಾರತದಲ್ಲಿ ಬ್ರಿಟೀಷ್ ವೈಸ್ರಾಯ್ ಆಗಿದ್ದ ಲಾರ್ಡ್ ಕರ್ಜನ್ ಪ್ರಾಕ್ತನ ಇಲಾಖೆಯನ್ನು ಪ್ರಾರಂಭಿಸಿದರು. ಸರ್ಜಾನ್ ಮಾರ್ಷಲ್ ಈ ಇಲಾಖೆಯ ನಿರ್ದೇಶಕರಾಗಿದ್ದಾಗ ಭೂ ಉತ್ಖನದ ಕಾರ್ಯ ಆರಂಭಗೊಂಡಿತು.

1921-22ರಲ್ಲಿ ಹರಪ್ಪ ಮತ್ತು ಮೆಹೆಂಜೋದಾರೋಗಳಲ್ಲಿ ನಡೆದ ಭೂ ಉತ್ಖನನಗಳು ಭಾರತವು ಪ್ರಾಚೀನ ಕಾಲದಲ್ಲಿಯೇ ʻನಾಗರೀಕತೆಗಳ ತೊಟ್ಟಿಲು ರಾಷ್ಟ್ರ’ವಾಗಿತ್ತೆಂದು ತಿಳಿಯುತ್ತದೆ. ತಕ್ಷಶಿಲೆಯ ಉತ್ಖನನವು ಕುಶಾನರ ಇತಿಹಾಸದ ಮೇಲೂ, ಪಾಟಲಿಪುತ್ರದ ಉತ್ಖನನವು ಮೌರ್ಯರ ಇತಿಹಾಸದ ಮೇಲೂ ಬೆಳಕು ಚೆಲ್ಲಲು ಸಹಕಾರಿಯಾಗಿದೆ. ದಕ್ಷಿಣ ಭಾರತದ ಪಾಂಡಿಚೇರಿ, ಅರಿಕಮೇಡು, ಆದಿತ್ಯನಲ್ಲೂರು, ತಿನ್ನವೆಲ್ಲಿ, ಮಸ್ಕಿ, ಬ್ರಹ್ಮಗಿರಿ, ಚಂದ್ರವಳ್ಳಿ, ಸನ್ನತಿಯ ಉತ್ಖನನಗಳು, ಶಿಲಾಯುಗ ಮತ್ತು ತಾಮ್ರಯುಗದ ಚರಿತ್ರೆಯನ್ನು ಬೆಳಕಿಗೆ ತಂದಿವೆ. ಒಟ್ಟಿನಲ್ಲಿ ಭೂ ಉತ್ಖನನದಿಂದ ಭೂಮಿಯ ಗರ್ಭದಲ್ಲಿನ ಐತಿಹಾಸಿಕ ಅವಶೇಷಗಳನ್ನು ಹೊರತೆಗೆದಾಗ ಇತಿಹಾಸವನ್ನು ರಚಿಸಲು ಸಹಕಾರಿಯಾಗುತ್ತದೆ.

ನಾಣ್ಯಗಳು :

ಪ್ರಾಚೀನ ಭಾರತದ ಇತಿಹಾಸ ರಚನೆಯಲ್ಲಿ ನಾಣ್ಯಗಳು ಕೂಡ ಮಹತ್ತರ ಪಾತ್ರವಹಿಸುತ್ತವೆ. ನಾಣ್ಯಗಳ ವ್ಯವಸ್ಥಿತ ಅಧ್ಯಯನಕ್ಕೆ ʻನ್ಯುಮಿಸ್‌ಮ್ಯಾಟಿಕ್ಸ್’ ಎಂದು ಕರೆಯಲಾಗಿದೆ. ನಮಗೆ ಚಿನ್ನ, ಬೆಳ್ಳಿ, ತಾಮ್ರ, ಸೀಸ ಮೊದಲಾದ ಲೋಹದ ನಾಣ್ಯಗಳು ದೊರೆತಿವೆ. ಈ ನಾಣ್ಯಗಳು ರಾಜರ ಕಾಲ, ಹೆಸರು, ಬಿರುದು, ಸ್ಥಳ, ವಿದೇಶಗಳೊಡನೆ ಹೊಂದಿದ್ದ ಸಂಬಂಧ, ಲಲಿತಕಲೆಗಳ ಬಗ್ಗೆ ಆಸಕ್ತಿ ಮೊದಲಾದ ಹಲವು ವಿಚಾರಗಳ ಬಗ್ಗೆ ಸ್ಪಷ್ಟಿಕರಿಸುತ್ತವೆ. ಉದಾ: ವಿಷ್ಣುವರ್ದನನ ನಾಣ್ಯಗಳು ಕಂಚಿಗೊಂಡ, ನೊಳಂಬವಾಡಿಗೊಂಡ, ಮಲಪರೋಳಂಡ ಎಂಬ ವಿವರ ಒಳಗೊಂಡಿದೆ. ಸಮುದ್ರಗುಪ್ತನ ನಾಣ್ಯಗಳು ಅವನು ವೀಣಾಪಾಣಿಯಾಗಿ ಕುಳಿತಿರುವ ಚಿತ್ರವನ್ನು ಒಳಗೊಂಡಿವೆ. ನಾಣ್ಯಗಳು ವಿನಿಮಯದ ಮಾಧ್ಯಮವಾಗಿ ವ್ಯಾಪಾರ ವಾಣಿಜ್ಯದಲ್ಲಿ ಮಹತ್ತರವಾದ ಪಾತ್ರವನ್ನು ನಿರ್ವಹಿಸುತ್ತಿದ್ದವು.

ಇತಿಹಾಸ ಅಧ್ಯಯನಕ್ಕೆ ನಾಣ್ಯಗಳ ಉಪಯೋಗಗಳು :

  1. ನಾಣ್ಯಗಳಿಂದ ಅದನ್ನು ಟಂಕಿಸಿದ ಅರಸನ ಹೆಸರು, ಅವನ ಕಾಲ, ಅವನ ಸಂತತಿ, ರಾಜಲಾಂಛನ ಮುಂತಾದವು ತಿಳಿಯುತ್ತದೆ.
  2. ನಾಣ್ಯಗಳಿಂದ ಅರಸನ ವೈಯಕ್ತಿಕ ಧರ್ಮದ ಬಗ್ಗೆ ಮಾಹಿತಿ ಲಭ್ಯವಾಗುತ್ತದೆ. ಉದಾ : ಕುಶಾನರ ನಾಣ್ಯದ ಮೇಲೆ ಇರುವ ಶಿವನ ಚಿತ್ರ, ಚಾಲುಕ್ಯರ
  3. ನಾಣ್ಯಗಳಲ್ಲಿನ ವರಾಹ ಚಿತ್ರ, ಸಮುದ್ರಗುಪ್ತನ ನಾಣ್ಯಗಳ ಮೇಲಿನ ಲಕ್ಷ್ಮಿಯ ಚಿತ್ರ ಸಂಬಂಧಿತ ಅರಸರ ಆರಾಧನೆಯನ್ನು ಸಾಭೀತುಪಡಿಸುತ್ತದೆ. ನಾಣ್ಯಗಳ ಮುಖೇನ ಅರಸರ ಬಿರುದಾವಳಿಗಳು ಬೆಳಕಿಗೆ ಬರುತ್ತದೆ. ಅದು ಎಷ್ಟೋ ಸಲ ಅವನ ಸಾಧನೆಯನ್ನು ದಾಖಲುಗೊಳಿಸುತ್ತದೆ. ಉದಾ ಹೊಯ್ಸಳ ವಿಷ್ಣುವರ್ಧನನ ತಲಕಾಡುಗೊಂಡ, ಮಲೆಷ್ಟೊರೊಳಂಡ ಬಿರುದುಗಳು. ಸಮುದ್ರ ಗುಪ್ತನ ಶಾಸನಗಳಲ್ಲಿ ಅವನ ಶತೃಗಳನ್ನು ನಿಗ್ರಹಿಸಿ ಸ್ವರ್ಗವನ್ನು ಗೆದ್ದಿದ್ದನೆಂದು ಉಲ್ಲೇಖಿಸುತ್ತದೆ.
  4. ನಾಣ್ಯಗಳಿಂದ ಅರಸರ ಕಲಾಭಿರುಚಿಯನ್ನು ಮನಗಾಣಬಹುದು. ಉದಾ : ಸಮುದ್ರಗುಪ್ತನ ನಾಣ್ಯಗಳಲ್ಲಿ ಅವನು ವೀಣೆ ನುಡಿಸುತ್ತಿರುವ ಚಿತ್ರವಿದ್ದು, ಅದು ಸಂಗೀತದಲ್ಲಿ ಇದ್ದ ಅವನ ಆಸಕ್ತಿಯನ್ನು ಹೊರಗೆಡಹುತ್ತದೆ.
  5. ಪ್ರಾಚೀನ ಕಾಲದ ನಾಣ್ಯಗಳು ದೊರೆತ ಸ್ಥಳವನ್ನು ಅವಲಂಬಿಸಿ ಅರಸರ ಸಾಮ್ರಾಜ್ಯದ ಮೇರೆಯನ್ನು ಗುರುತಿಸಬಹುದು.
  6. ವಿದೇಶಿ ನಾಣ್ಯಗಳು ಸ್ವದೇಶದಲ್ಲಿ ಸಿಕ್ಕ ಪ್ರದೇಶದ ಆಧಾರದ ಮೇಲೆ ಆ ಪ್ರದೇಶ ಪ್ರಾಚೀನ ಕಾಲದಲ್ಲಿ ವಿದೇಶದೊಂದಿಗೆ ವ್ಯಾಪಾರಿ ಸಂಪರ್ಕ ಹೊಂದಿತ್ತೆಂದು ತಿಳಿದು ಬರುತ್ತದೆ. ಉದಾಹರಣೆಗೆ ಬೆಂಗಳೂರು ಮತ್ತು ತಲಕಾಡುಗಳಲ್ಲಿ ದೊರೆತ ರೋಮನ್ ನಾಣ್ಯಗಳಿಂದ ಇದು ದೃಢಪಟ್ಟಿದೆ.
  7. ಹೊರಡಿಸಿದ ನಾಣ್ಯಗಳ ಲೋಹದ ಮೌಲ್ಯವು ಆಯಾ ಕಾಲದ ಆರ್ಥಿಕ ಪರಿಸ್ಥಿತಿಯನ್ನು ತೋರಿಸುವ ಕೈಗನ್ನಡಿಯಾಗಿದೆ. ಉದಾಹರಣೆಗೆ ಗುಪ್ತರ ಕಾಲದ ಚಿನ್ನದ ನಾಣ್ಯಗಳು ಆರ್ಥಿಕ ಸುಭಿಕ್ಷತೆಯ ದ್ಯೋತಕವಾದರೆ, ಮಹಮ್ಮದ್ ಬಿನ್ ತುಗಲಕ್ ಕಾಲದ ತಾಮ್ರದ ನಾಣ್ಯಗಳು ಆರ್ಥಿಕ ಪರಿಸ್ಥಿತಿಯ ಹಿನ್ನಡೆಗೆ ದಾಖಲೆಯಾಗಿದೆ.
  8. ನಾಣ್ಯಗಳ ಸಹಾಯದಿಂದ ಕಾಲ ಗಣನೆಯು ಸುಲಭವಾಗುತ್ತದೆ.
  9. ನಾಣ್ಯಗಳು ಆಯಾ ಕಾಲದ ಕಲಾ ಬೆಳವಣಿಗೆ ಮತ್ತು ಲೋಹ ವಿಜ್ಞಾನದ ಪ್ರಗತಿಯ ಮೇಲೆ ಬೆಳಕು ಚೆಲ್ಲುತ್ತದೆ.

ಐತಿಹಾಸಿಕ ಸ್ಮಾರಕಗಳು : ಚರಿತ್ರೆಯ ರಚನೆಯಲ್ಲಿ ಐತಿಹಾಸಿಕ ಸ್ಮಾರಕಗಳ ಪಾತ್ರ ವಿಶಿಷ್ಟವಾದುದು. ಭಾರತದಲ್ಲಿ ಬೆಳವಣಿಗೆ ಗೊಂಡ ಕಲೆಯ ಬಗ್ಗೆ ಅಧ್ಯಯನ ಮಾಡಲು ಸ್ಮಾರಕಗಳೇ ಆಧಾರ. ಕಟ್ಟಡಗಳು, ಚೈತಾಲಯಗಳು, ದೇವಾಲಯಗಳು, ಮಂದಿರಗಳು, ಬಸದಿಗಳು, ಮೂರ್ತಿಶಿಲ್ಪಗಳು ಕಲಾ ಪರಂಪರೆಯ ಬೆಳವಣಿಗೆಗೆ ಕೈಗನ್ನಡಿಯಿದ್ದಂತೆ. ಸ್ಮಾರಕಗಳ ಸೂಕ್ಷ್ಮ ಅಧ್ಯಯನ ಮಾಡಿ ನೋಡಿದಾಗ ರಾಜರ ಆಸ್ಥಾನ, ವೈಭವ, ಜನರ ಉಡಿಗೆ-ತೊಡಿಗೆ, ಸಮಕಾಲೀನ ಪ್ರಾಣಿಸಂಕುಲ, ಸಸ್ಯವರ್ಗ, ಸೇನಾ ಸಂಘಟನೆ, ಶಸ್ತ್ರಾಸ್ತ್ರಗಳು, ನೃತ್ಯ ಮೊದಲಾದ ವಿಚಾರಗಳು ಸ್ಪಷ್ಟವಾಗಿ ತಿಳಿದುಬರುತ್ತವೆ. ಅಂತಹ ಪ್ರಮುಖ ಸ್ಮಾರಕಗಳೆಂದರೆ ಮೌರ್ಯರ ಕಾಲದ ಸ್ತೂಪಗಳು, ಸ್ತಂಭಗಳು, ವಿಹಾರಗಳು, ಜೈನ ಬಸದಿಗಳು ಮತ್ತು ತೀರ್ಥಂಕರರ ಮೂರ್ತಿಗಳು, ಎಲ್ಲೋರ ಅಜಂತ, ಖಜುರಾಹೋ, ಆಗ್ರಾ, ಸಾಂಚಿ, ಮಹಾಬಲಿಪುರಂ, ನಾಸಿಕ್, ಕಾರ್ಲೆ, ಬೇಲೂರು, ಹಳೇಬೀಡು, ದೇವಾಲಯಗಳು- ಹೀಗೆ ಕಂಡುಬರುವ ಸ್ಮಾರಕಗಳು ಚರಿತ್ರೆಯ ರಚನೆಗೆ ಸಹಕಾರಿಯಾಗುವುದರ ಜೊತೆಗೆ ಪ್ರವಾಸಿಗರ ಕಣ್ಮನಗಳಿಗೆ ಅನಿರ್ವಚನೀಯ ಸೌಂದರ್ಯ ನೀಡುವಂತಿದೆ.

ಸಾಹಿತ್ಯಾಧಾರಗಳು

ಸಾಹಿತ್ಯಾಧಾರಗಳು

ಪ್ರಾಚೀನ ಭಾರತದ ಚರಿತ್ರೆಯ ರಚನೆಯಲ್ಲಿ ಪ್ರಾಕ್ತನಶಾಸ್ತ್ರಾಧಾರಗಳಂತೆಯೇ ಸಾಹಿತ್ಯಾಧಾರಗಳು ಸಹ ಭಿನ್ನವಾದ ಐತಿಹಾಸಿಕ ವಿಚಾರಗಳ ಸಂಗ್ರಹಣೆಗೆ ಅನುಕೂಲಕರವಾಗಿದೆ. ಸಾಹಿತ್ಯಾಧಾರಗನ್ನು ಅವುಗಳ ಲಭ್ಯತೆಗೆ ಅನುಸಾರವಾಗಿ 2 ವಿಭಾಗಗಳಲ್ಲಿ ವರ್ಗೀಕರಿಸಿ ನೋಡಬಹುದಾಗಿದೆ.

  1. ದೇಶೀಯ ಸಾಹಿತ್ಯಾಧಾರಗಳು 2. ವಿದೇಶಿಯ ಸಾಹಿತ್ಯಾಧಾರಗಳು.
  1. ದೇಶೀಯ ಸಾಹಿತ್ಯಾಧಾರಗಳು : ದೇಶೀಯ ಸಾಹಿತ್ಯಾಧಾರಗಳೆಂದರೆ ಆಸ್ಥಾನದ ಕವಿಗಳು ಮತ್ತು ಚರಿತ್ರಾಕಾರರಿಂದ ರಚಿಸಲ್ಪಟ್ಟ ಬರವಣಿಗೆಗಳು. ದೇಶೀಯ ಆಕರಗಳು ಚರಿತ್ರೆಯನ್ನು ಹೆಚ್ಚು ಸ್ಪಷ್ಟವಾಗಿ ನಿಖರವಾಗಿ ನಿರೂಪಿಸಲು ಸಹಕಾರಿಯಾಗಿವೆ. ಅಂತಹ ಆಧಾರಗಳೆಂದರೆ,

(ಅ) ಧಾರ್ಮಿಕ ಗ್ರಂಥಗಳು: ದೀಪವಂಶ ಮತ್ತು ಮಹಾವಂಶ ಕೃತಿಗಳು ತ್ರಿಪಿಠಕಗಳು, ಜೈನ ಆಗಮ ಸಿದ್ದಾಂತಗಳು, ಅಂಗಗಳು, ಉಪಾಂಗಗಳು ಬೌದ್ಧ ಮತ್ತು ಜೈನ ಧರ್ಮದ ಇತಿಹಾಸ ರಚನೆಗೆ ಹೆಚ್ಚು ಸಹಕಾರಿಯಾಗಿವೆ.

ವೇದವಾಙ್ಮಯ : ವೈದಿಕ ಸಂಸ್ಕೃತಿಯನ್ನು ಅರಿಯಲು ವೇದವಾಙ್ಮಯವೇ ಮೂಲಾಧಾರ. ವೇದವಾಙ್ಮಯದಲ್ಲಿ ಚತುರ್ವೇದಗಳು, ವೇದಾಂಗಗಳು, ಬ್ರಾಹ್ಮಣಗಳು, ಅರಣ್ಯಕಗಳು ಮತ್ತು ಉಪನಿಷತ್ಗಳು ಅಡಕವಾಗಿವೆ.

(ಆ) ಮಹಾಕಾವ್ಯಗಳು, ಪುರಾಣಗಳು: ಭಾರತೀಯರ ಎರಡು ಮಹಾಕಾವ್ಯಗಳಾದ ರಾಮಾಯಣ ಮತ್ತು ಮಹಾಭಾರತಗಳು ಆರ್ಯರು ಮತ್ತು ಗಂಗಾ ನದಿಯ ಬಯಲಿನ ರಾಜರ ಸಂತತಿಯ ಬಗ್ಗೆ ವಿವರ ನೀಡುತ್ತವೆ. ಪ್ರಾಚೀನ ಇತಿಹಾಸದ ರಚನೆಯಲ್ಲಿ ಪುರಾಣಗಳು ಮತ್ತು ಸ್ಮೃತಿಗಳಪಾತ್ರವು ಕಂಡುಬರುತ್ತದೆ.

(ಇ) ಚಾರಿತ್ರಿಕ ಗ್ರಂಥಗಳು: ಕೌಟಿಲ್ಯನ ಅರ್ಥಶಾಸ್ತ್ರ, ಕಲ್ಹಣನ ರಾಜತರಂಗಿಣಿ, ಚರಕನ ಚರಕ ಸಂಹಿತೆ, ಸುಶೃತನ ಸುಶೃತಸಂಹಿತೆ, ಸಮುದ್ರಗುಪ್ತನ ಕೃಷ್ಣಚರಿತ, ಮಹೇಂದ್ರವರ್ಮನ ಮತ್ತವಿಲಾಸ ಪ್ರಹಸನ, ಇಳಂಗೋಅಡಿಗಳ್ ರವರ ತಿಲಪ್ಪದಿಕಾರಂ, ಸಾತ್ತನಾರ್‌ನ ಮಣಿಮೇಖಲೈ, ತಿರುತಕ್ಕದೇವರ್‌ನ ಜೀವಿಕ ಚಿಂತಾಮಣಿ, ಚಾವುಂಡರಾಯನ ಚಾವುಂಡರಾಯಪುರಾಣ, ಪಂಪನ ಆದಿಪುರಾಣ, ವಿಕ್ರಮಾರ್ಜುನ ವಿಜಯ, ಶಿವಮಾರನ ಗಜಶತಕ, 3ನೇ ಸೋಮೇಶ್ವರನ ಮಾನಸೋಲ್ಲಾಸ, ನಾಗವರ್ಮನ ಛಂದೋಂಬುದಿ ಮೊದಲಾದ ಗ್ರಂಥಗಳಲ್ಲಿ ಹೆಚ್ಚು ಚಾರಿತ್ರಿಕ ವಿಷಯಗಳು ಮೂಡಿಬಂದಿವೆ. ಅಶ್ವಘೋಶನ ಬುದ್ಧ ಚರಿತ, ಬಾಣಭಟ್ಟನ ಹರ್ಷಚರಿತೆ, ಹೇಮಚಂದ್ರನ ಕುಮಾರಪಾಲಚರಿತೆ, ಚಾಂದ್ ಬರ್ದಾಯಿಯ ಪೃಥ್ವಿರಾಜ ರಾಸೋ, ಬಿಲ್ಲಣನ ವಿಕ್ರಮಾಂಕ ದೇವಚರಿತೆ, ರನ್ನನ ಗದಾಯುದ್ಧ – ಈ ಕೃತಿಗಳು ರಾಜರ ಆಸ್ಥಾನದಲ್ಲಿದ್ದ ಚರಿತ್ರಾಕಾರರಿಂದ ರಚನೆಗೊಂಡಿದ್ದು ಹೆಚ್ಚು ಐತಿಹಾಸಿಕ ವಿಷಯಗಳ ಬಗ್ಗೆ ಬೆಳಕು ಚೆಲ್ಲುತ್ತವೆ.

ಈ) ನಾಟಕಗಳು: ಕಾಳಿದಾಸನ ರಘುವಂಶ, ಮಾಳವಿಕಾಗ್ನಿಮಿತ್ರ, ವಿಶಾಖದತ್ತನ ಮುದ್ರಾರಾಕ್ಷಸ, ಶೂದ್ರಕನ ಮೃಚ್ಚಕಟಿಕ ಮೊದಲಾದ ನಾಟಕರೂಪದ ಕೃತಿಗಳಲ್ಲಿ ಅಲ್ಪ ಸ್ವಲ್ಪ ಚಾರಿತ್ರಿಕ ಮಾಹಿತಿ ಲಭ್ಯವಾಗುತ್ತದೆ.

  1. ವಿದೇಶಿಯ ಸಾಹಿತ್ಯಾಧಾರಗಳು (ವಿದೇಶಿಯರ ಬರವಣಿಗೆಗಳು):

ಭಾರತವು ಪ್ರಾಚೀನ ಕಾಲದಿಂದ ನಾಗರೀಕತೆ ಸಂಸ್ಕೃತಿಯ ಆವಾಸಸ್ಥಾನ ರಾಷ್ಟ್ರವಾದುದರಿಂದ ಅನೇಕ ವಿದೇಶಿ ಪ್ರವಾಸಿಗರು, ಮತಪ್ರಚಾರಕರು, ವ್ಯಾಪಾರ ವಾಣಿಜ್ಯೋದ್ಯಮಿಗಳು ಭಾರತಕ್ಕೆ ಭೇಟಿನೀಡಿದ್ದರು. ಹಾಗೆ ಬಂದ ವಿದೇಶಿಯರು ತಾವು ಕಂಡು ಕೇಳಿದ ವಿಚಾರಗಳನ್ನು ತಮ್ಮ ಬರವಣಿಗೆಗಳಲ್ಲಿ, ಪ್ರವಾಸ ಕಥನಗಳಲ್ಲಿ ನಮೂದಿಸಿದ್ದಾರೆ. ಅಂತಹ ಬರವಣಿಗೆಗಳು ಭಾರತೀಯ ಚರಿತ್ರೆಯ ಹಲವು ಹತ್ತು ವಿಚಾರಗಳು ಪ್ರಸ್ತಾಪಿಸಲ್ಪಟ್ಟಿವೆ.

1. ಗ್ರೀಕ್ ರೋಮನ್ನರ ಬರವಣಿಗೆಗಳು:

  1. ಹೆರೋಡಾಟಸ್‌ನ ಬರವಣಿಗೆಗಳಲ್ಲಿ ಪರ್ಷಿಯನ್ನರ ಆಕ್ರಮಣದ ವಿವರಗಳಿವೆ.
  2. ಪ್ಲಿನಿ ಮತ್ತು ಟಾಲಮಿಯ ಪ್ರಾಕೃತಿಕ ಚರಿತ್ರೆ ಮತ್ತು ಭೂಗೋಳಶಾಸ್ತ್ರ ಕೃತಿಗಳಲ್ಲಿ ಭಾರತವು ಪ್ರಾಚೀನ ಕಾಲದಲ್ಲಿ ಹೊಂದಿದ್ದ ವ್ಯಾಪಾರ ವಾಣಿಜ್ಯದ ವಿವರಗಳು, ತೀರಪ್ರದೇಶದ ಬಂದರುಗಳ ಪಾತ್ರ ವಿವರಿಸಲ್ಪಟ್ಟಿದೆ.
  3. ಮೆಗಾಸ್ಥನೀಸನ ಇಂಡಿಕಾ ಮೌರ್ಯರ ಇತಿಹಾಸ ಬಗ್ಗೆ ಬೆಳಕು ಚೆಲ್ಲುತ್ತದೆ.
  4. ಗ್ರೀಕ್ ಅನಾಮಧೇಯನಿಂದ ರಚನೆಗೊಂಡ ʻದಿ ಪರಿಪ್ಲಸ್ ಆಫ್ ದಿ ಎರಿತ್ರಿಯನ್‌’ ಕ್ರಿಶ 1ನೇಶತಮಾನದ ವ್ಯಾಪಾರ ವಹಿವಾಟಿನ ವಿವರಗಳನ್ನೊಳಗೊಂಡಿದೆ.
ಗುಪ್ತರ ಕಾಲದ ಕಲೆ ಮತ್ತು ವಾಸ್ತುಶಿಲ್ಪ

ಗುಪ್ತರ ಕಾಲದ ಕಲೆ ಮತ್ತು ವಾಸ್ತುಶಿಲ್ಪ

ಪೀಠಿಕೆ : ಗುಪ್ತರ ಕಾಲದ ಸಾಂಸ್ಕೃತಿಕ ಭವ್ಯತೆ ಕಲಾ ಪ್ರಪಂಚದಲ್ಲೂ ಹೊರಹೊಮ್ಮಿದೆ. ಈ ಕಾಲವು ಶಿಲ್ಪಕಲೆ ಮತ್ತು ವಾಸ್ತುಶಿಲ್ಪದ ಪರಾಕಾಷ್ಟೆಯನ್ನು ಮುಟ್ಟಿದ ಕಾಲವಾಗಿದೆ. ಇವರ ಕಲೆಯು ಕೇವಲ ಒಂದು ಸ್ಥಳದಲ್ಲಿ ಕೇಂದ್ರೀಕೃತವಾಗದೆ ಮಥುರಾ, ಕಾಶಿ, ಪಟ್ನಾ ಮತ್ತಿತರ ಕಡೆಗಳಲ್ಲಿ ಹರಡಿದೆ.

ಗುಪ್ತರ ಕಾಲದ ಕಲೆಯಲ್ಲಿ ಪರಿಶುದ್ಧತೆ, ಸರಳತೆ, ಆದ್ಯಾತ್ಮಿಕತೆ, ಲಾವಣ್ಯ ಮತ್ತು ಸೌಂದರ್ಯವಿದೆ. ಈ ಕಾಲಾವಧಿಯಲ್ಲಿನ ಕಲೆ ಗಾಢವಾದ ಧಾರ್ಮಿಕ ಹಾಗೂ ಆದ್ಯಾತ್ಮಿಕ ಅಂಶಗಳನ್ನು ಒಳಗೊಂಡು ಅತ್ಯುನ್ನತ ಮಟ್ಟವನ್ನು ತಲುಪಿತು. ಆದ್ದರಿಂದಲೇ ವಿ.ಎ.ಸ್ಮಿತ್ ರವರು ‘ಗುಪ್ತರ ಕಲೆಯು ಹಿಂದೂ ಕಲೆಯ ಅತ್ಯುನ್ನತಿಯನ್ನು ಪ್ರತಿನಿಧಿಸುತ್ತದೆ’ ಎಂದಿದ್ದಾರೆ.

ಭಾರತದ ಇತಿಹಾಸದಲ್ಲೇ ಮೊಟ್ಟಮೊದಲು ಕಲ್ಲಿನಲ್ಲಿ ಹಿಂದೂ ದೇವಾಲಯಗಳನ್ನು ಕಟ್ಟುವ ಪರಂಪರೆ ಗುಪ್ತರ ಕಾಲದಿಂದ ಪ್ರಾರಂಭವಾಯಿತು. ಅಲ್ಲದೆ ಗುಪ್ತರ ಯುಗವು ‘ಸುವರ್ಣಯುಗ’ವೆಂದು ಪರಿಗಣಿತವಾಗಲು ಕಲೆ ಮತ್ತು ವಾಸ್ತುಶಿಲ್ಪದಲ್ಲಿ ಸಾಧಿಸಿದ ಸಿದ್ಧಿಯೂ ಕಾರಣವಾಗಿದೆ. ಭಾರತದ ಇತಿಹಾಸದಲ್ಲಿ ಯಾವ ಯುಗದಲ್ಲೂ ಕಂಡುಬರದ ಕಲಾಚಟುವಟಿಕೆಗಳು ಈ ಕಾಲದಲ್ಲಿ ಕಂಡುಬಂದಿದೆ. ಎ.ಕೆ.ಕುಮಾರಸ್ವಾಮಿಯವರು ‘ಆ ವೇಳೆಗಾಗಲೇ ಆಚರಣೆಯಲ್ಲಿದ್ದ ನಮ್ಮ ಕಲಾ ಪರಂಪರೆಯ ಪುಷ್ಪ ಗುಪ್ತರ ಕಲೆ’ ಎಂದಿದ್ದಾರೆ.

ಗುಪ್ತರ ದೇವಾಲಯದ ಲಕ್ಷಣಗಳು ಕೆಳಕಂಡಂತಿವೆ.

  1. ಅದಿಷ್ಠಾನದ (ಜಗುಲಿಯ) ಮೇಲೆ ನಿಂತ ದೇವಾಲಯ.
  2. ದೇಗುಲಕ್ಕೆ ಹೋಗಲು ಮೆಟ್ಟಿಲುಗಳ ಸಾಲು.
  3. ಚೌಕಾಕಾರದ ಕೆಲವೊಮ್ಮೆ ಆಯತಾಕಾರದ ದೇವಾಲಯದ ನಕ್ಷೆ.
  4. ಒಳಗರ್ಭಗೃಹದ ಸುತ್ತ ಮುಚ್ಚಿದ ಪ್ರದಕ್ಷಿಣಾ ಪಥವಿರುವುದು.
  5. ಗರ್ಭಗೃಹದ ಅಲಂಕೃತ ಬಾಗಿಲು.
  6. ಮುಖ ಮಂಟಪದ ಅಲಂಕೃತ ಕಂಬಗಳು.
  7. ಸಮತಟ್ಟಾದ ಚಾವಣಿ
  8. ನಂತರ ಕಾಲದಲ್ಲಿ ಮೇಲ್ಟಾವಣಿ ಮೇಲೆ ನಿಂತ ರೇಖಾನಾಗರ ಶಿಖರ.
  9. ಸರಳ ನಿರಾಡಂಬರ ಹೊರಗೋಡೆ.
  10. ಸಭಾಮಂಟಪ ಇಲ್ಲದೆ ಇರುವುದು.

ನಂತರದ ಲಕ್ಷಣಗಳು :

  1. ಚಿಕ್ಕ ದೇವಾಲಯಗಳನ್ನು ದೊಡ್ಡದನ್ನಾಗಿ ಮಾಡಿರುವುದು- ಹಲವು ಭಾಗಗಳ ಸೇರ್ಪಡೆ.
  2. ಆಯತಾಕಾರದ ನಕ್ಷೆ.
  3. ಸಭಾಮಂಟಪ ಇರುವುದು.
  4. ಸಭಾಮಂಟಪ ಮತ್ತು ಮುಖಮಂಟಪವನ್ನು ಸೇರಿಸುವ ಕೈಸಾಲೆ.
  5. ಜಗುಲಿಯಲ್ಲಿ ಶಿಲ್ಪಸಾಲು
  6. ದೇವಾಲಯದ ಹೊರಗೋಡೆಗಳನ್ನು ಶಿಲ್ಪಕೋಷ್ಟಗಳಿಂದ ಹಾಗೂ ಅರೆಗಂಭಗಳಿಂದ ಅಲಂಕರಿಸಿರುವುದು.
  7. ದೇವಾಲಯದ ಗೋಡೆಗಳ ಮೇಲೆ ಶಿಲ್ಪ.
  8. ಮೇಲ್ಛಾವಣಿಯ ಮೇಲೆ ಪಿರಮಿಡ್ ಆಕಾರದ ಶಿಖರ.

ನಾಗರ ಮತ್ತು ದ್ರಾವಿಡ ಶೈಲಿಗಳ ಉಗಮ : ಗುಪ್ತರ ಕಾಲದ ದೇವಾಲಯಗಳಲ್ಲಿ ನಾಗರ ಮತ್ತು ದ್ರಾವಿಡ ಶೈಲಿಗಳ ಆಗಮನವನ್ನು ಸೂಚಿಸುವ ಲಕ್ಷಣಗಳನ್ನು ಗುರುತಿಸಬಹುದು. ನಾಗರ ಶೈಲಿಯ ಪ್ರಮುಖ ಲಕ್ಷಣವಾದ ರೇಖಾನಾಗರ ಶಿಖರವನ್ನು ಬಿಟರ್‌ಗಾವ್ ನ ಇಟ್ಟಿಗೆಯ ದೇವಾಲಯದಲ್ಲಿ ಗಮನಿಸಬಹುದು.

ದ್ರಾವಿಡ ಶೈಲಿಯ ಪ್ರಮುಖ ಲಕ್ಷಣವಾದ ಪಿರಮಿಡ್ ಆಕಾರದ ಶಿಖರವನ್ನು ಭೋಧಗಯಾದ ಮಹಾಭೋಧಿ ದೇವಾಲಯದಲ್ಲಿ ಗಮನಿಸಬಹುದು. ಇದರಿಂದ ಗುಪ್ತರಕಾಲವು ಈ ಎರಡೂ ಶೈಲಿಗಳ ಉಗಮಸ್ಥಾನವಾಗಿದ್ದು, ನಂತರ ಕಾಲದಲ್ಲಿ ಪರಿಪಕ್ವವಾಯಿತೆಂದು ತಿಳಿಯುತ್ತದೆ.

ದೇವಫರ್‌ನ ದಶಾವತಾರ ದೇವಾಲಯ : ಇದು ಗುಪ್ತರ ಕಾಲದ ಪ್ರಸಿದ್ಧ ದೇವಾಲಯವಾಗಿದೆ. ಇದು 40 ಅಡಿ ಎತ್ತರದ ಶಿಖರವನ್ನು ಒಳಗೊಂಡಿದೆ. ದೇವಾಲಯದ ಬಾಗಿಲು ಹೆಚ್ಚು ಅಲಂಕಾರಭರಿತವಾಗಿದೆ. ಗಂಗಾ-ಯಮುನ ನದಿಗಳ ಸಂಗಮದ ಚಿತ್ರ ಮನೋಜ್ಞವಾಗಿದೆ. ಬಾಗಿಲಿನಲ್ಲಿ ಪೂರ್ಣಘಟ, ಮಿಥುನ ಚಿತ್ರಗಳು, ಪತ್ರಾವಳಿ ಮನೋಹರವಾಗಿದೆ. ಶ್ರೀರಾಮ ಮತ್ತು ಶ್ರೀಕೃಷ್ಣರ ಜೀವನದ ಸುಂದರ ದೃಶ್ಯಾವಳಿಯನ್ನು ಈ ದೇವಾಲಯ ಒಳಗೊಂಡಿದೆ.

ಇತರ ಪ್ರಮುಖ ದೇವಾಲಯಗಳು :

  1. ಜಬ್ಬಲ್‌ಪುರ ಜಿಲ್ಲೆಯ ತಿಗಾವದಲ್ಲಿರುವ ವಿಷ್ಣುದೇವಾಲಯ
  2. ಭುಮರದಲ್ಲಿರುವ ಶಿವ ದೇವಾಲಯ
  3. ಅಜಯ್‌ಗರ್‌ನ ಪಾರ್ವತಿ ದೇವಾಲಯ
  4. ಖೋಹದಲ್ಲಿರುವ ಏಕಮುಖ ಶಿವಲಿಂಗ ದೇವಾಲಯ
  5. ಗುಪ್ತರ ವಾಸ್ತುಶಿಲ್ಪದ ಮಾದರಿಯಲ್ಲಿರುವ ಐಹೊಳೆಯ ದುರ್ಗಾದೇವಾಲಯ

ಶಿಲ್ಪಕಲೆ : ಗುಪ್ತರ ಕಾಲದ ಶಿಲ್ಪಕಲೆಯು ಅಪೂರ್ವವಾದ ಸೌಂದಯ್ಯಕ್ಕೆ ಹೆಸರುವಾಸಿಯಾಗಿದೆ. ಅರುಣ್ ಭಟ್ಟಾಚಾರ್ಜಿಯವರ ಅಭಿಪ್ರಾಯದಲ್ಲಿ ‘ಶಿಲ್ಪಕಲೆಯಲ್ಲಿ ಗುಪ್ತಶಿಲ್ಪಗಳ ಉಳಿ ನಿರ್ಜೀವ ಶಿಲೆಗೆ ಚೇತನ ಹಾಗೂ ಲಾವಣ್ಯವನ್ನಿತ್ತಿದೆ’.

ಗುಪ್ತರ ಶಿಲ್ಪಕಲೆಯ ಲಕ್ಷಣಗಳು :

  1. ಎಲ್ಲಾ ಪ್ರಾಣಿ ಮತ್ತು ಸಸ್ಯ ವಿನ್ಯಾಸಗಳು ಮುಖ್ಯ ಶಿಲ್ಪದ ಕಥಾನಕದಿಂದ ಪೂರ್ತಿ ಹೊರಗೆ ಅಂಚಿಗೆ (ಬಾರ್ಡ‌ರ್‌ ಗೆ) ದೂಡಲ್ಪಟ್ಟಿರುವುದು.
  2. ಗುಪ್ತರ ಶಿಲ್ಪವು ಬಾಹ್ಯ ಲಕ್ಷಣ ಮತ್ತು ಅಂತಃಶಕ್ತಿಯ ಸಮ್ಮಿಲನ.
  3. ಗುಪ್ತರ ಕಾಲದ ಶಿಲ್ಪವು ಕುಳಿತಿರಲಿ, ನಿಂತಿರಲಿ ಅಥವಾ ಬಾಗಿರಲಿ ಸಮತೋಲನ ಸ್ಥಿತಿಯನ್ನು ತಲುಪಿರುವುದು.
  4. ಗುಪ್ತರ ಶಿಲ್ಪವು ಗ್ರೀಕರ ಅಥವಾ ಇನ್ಯಾವುದೇ ಶೈಲಿಯ ಪ್ರಭಾವಕ್ಕೆ ಒಳಗಾಗದೆ ಭಾರತೀಯತೆಯನ್ನು ಒಳಗೊಂಡಿರುವುದು.
  5. ಗುಪ್ತ ಶಿಲ್ಪದಲ್ಲಿ ಕಾಣುವ ತೇಜಸ್ಸು, ಪಾರದರ್ಶಕ ವಸ್ತ್ರ, ಅಲಂಕಾರಿಕ ಪ್ರಭಾವಳಿ.

ಕೆಲವು ಶಿಲ್ಪಾಕೃತಿಗಳು :

  1. ಸಾರನಾಥ ಆಸನ ರೂಢ ಬುದ್ಧನ ವಿಗ್ರಹ
  2. ಉದಯ ಗಿರಿಯ ಶಿಲ್ಪಗಳು
  3. ಬೆಸ್ನಗರದ ಗಂಗಾದೇವಿ ವಿಗ್ರಹ
  4. ಮಥುರಾದ ಬುದ್ಧನ ಪೂರ್ಣ ವಿಗ್ರಹ
  5. ಗ್ವಾಲಿಯರ್‌ನ ಅಪ್ಸರೆಯರ ಮೂರ್ತಿಗಳು
ಗುಪ್ತರ ಕಾಲದ ಆಡಳಿತ

ಗುಪ್ತರ ಕಾಲದ ಆಡಳಿತ

ಗುಪ್ತರ ಆಡಳಿತ : ಗುಪ್ತ ದೊರೆಗಳು ದೊಡ್ಡ ಸಾಮ್ರಾಜ್ಯದ ಅಧಿಪತಿಗಳಾಗಿದ್ದರು. ಪಾಟಲಿಪುತ್ರ ಅವರ ರಾಜಧಾನಿಯಾಗಿತ್ತು. ಎರಡನೆ ಚಂದ್ರಗುಪ್ತನ ಕಾಲದಲ್ಲಿ ಕೆಲವು ಕಾಲ ಉಜೈನಿ ರಾಜಧಾನಿಯಾಗಿದ್ದಿತಾದರೂ, ನಂತರ ಪಾಟಲಿಪುತ್ರವೇ ರಾಜಧಾನಿಯಾಗಿ ಮುಂದುವರೆಯಿತು. ಗುಪ್ತ ದೊರೆಗಳು ಹೆಚ್ಚಿನ ಸಂಖ್ಯೆಯ ಅಧಿಕಾರಿಗಳನ್ನು ನೇಮಿಸಿಕೊಂಡು ಸುಭದ್ರ ಆಡಳಿತವನ್ನು ನೀಡಿದರು.

ರಾಜ :

ರಾಜನೇ ರಾಜ್ಯದ ಮುಖ್ಯಸ್ಥನಾಗಿದ್ದನು. ಆತನ ಮಾತೆ ಅಂತಿಮವಾಗಿತ್ತು. ರಾಜನನ್ನು ದೈವಾಂಶ ಸಂಭೂತನೆಂದು ಪರಿಗಣಿಸಲಾಗಿತ್ತು. ರಾಜನನ್ನು ದೇವರ ಪ್ರತಿನಿಧಿಯೆಂದು ಸಹ ಕರೆಯಲಾಗುತ್ತಿತ್ತು. ರಾಜ್ಯದಲ್ಲಿ ಧರ್ಮವನ್ನು ಪಾಲಿಸುವುದು, ವಿದೇಶಿಯರ ದಾಳಿಯನ್ನು ಎದುರಿಸಿ ದೇಶದ ಜನರನ್ನು ರಕ್ಷಿಸುವುದು, ರಾಜನ ಆದ್ಯ ಕರ್ತವ್ಯವಾಗಿದ್ದಿತು. ನ್ಯಾಯ ನಿರ್ಣಯ ಮಾಡುವುದು, ಸೈನ್ಯದ ನಾಯಕತ್ವ ವಹಿಸುವುದು ಸಹ ಈತನ ಕರ್ತವ್ಯಗಳಾಗಿದ್ದವು. ಇಷ್ಟೆಲ್ಲ ಅಧಿಕಾರಗಳನ್ನು ಹೊಂದಿದ್ದರೂ ರಾಜನು ನಿರಂಕುಶಾಧಿಕಾರಿಯಾಗಿರಲು ಸಾಧ್ಯವಿರಲಿಲ್ಲ.

ದರ್ಪಿಷ್ಟ ಪ್ರಭುತ್ವವಾಗಿರಲಿಲ್ಲ : ಗುಪ್ತರ ಆಡಳಿತವು ದರ್ಪಿಷ್ಟ ಪ್ರಭುತ್ವವಾಗಿರಲಿಲ್ಲ. ಮಹಾರಾಜಾಧಿರಾಜ, ಪರಮೇಶ್ವರ, ಪೃಥ್ವಿಪಾಲ, ಪರಮಭಟ್ಟಾರಕ, ಪರಮದೇವತಾ, ಸಾರ್ವಬೌಮ, ಸಾಮ್ರಾಟ್ ಮೊದಲಾದ ಬಿರುದುಗಳನ್ನು ಧರಿಸಿದ್ದರೂ ನಿರಂಕುಶ ದೊರೆಗಳಾಗಿರಲಿಲ್ಲ. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಮತ್ತು ಆಡಳಿತಾಂಗದ ಅಧಿಪತಿಗಳಾಗಿದ್ದರಿಂದ ಎಲ್ಲಾ ಅಧಿಕಾರಗಳು ಕಟ್ಟಕಡೆಗೆ ಅವರಲ್ಲಿ ಕೇಂದ್ರೀಕೃತವಾಗಿತ್ತು. ಆದಾಗ್ಯೂ ಕೆಲವೊಂದು ಅಡೆತಡೆಗಳಿದ್ದವು. ನ್ಯಾಯ, ನೀತಿ, ಧರ್ಮವನ್ನು ಪಾಲಿಸಬೇಕಾಗಿತ್ತು. ಗುರುಹಿರಿಯರ, ಪಂಡಿತರ, ಮಂತ್ರಿಗಳ ಮತ್ತು ಸಲಹಾ ಸಮಿತಿಯ ಅಭಿಪ್ರಾಯವನ್ನು ಆಲಿಸಬೇಕಾಗಿತ್ತು. ಅಲ್ಲದೆ ಪರಂಪರಾಗತ ನಂಬಿಕೆ, ಆಚರಣೆ, ಧರ್ಮ-ಸಂಪ್ರದಾಯಗಳು ಅರಸರು ಸ್ವೇಚ್ಛಾಧಿಕಾರ ಚಲಾಯಿಸದಂತೆ ಅಡ್ಡಿಯಾಗಿದ್ದವು.

ಮಂತ್ರಾಲೋಚನ ಸಭೆ(ಮಂತ್ರಿಪರಿಷತ್ತು): ಆಡಳಿತ ನಿರ್ವಹಣೆಯಲ್ಲಿ ಅರಸರಿಗೆ ಸಲಹೆ ಸೂಚನೆಗಳನ್ನು ನೀಡಲು ಮಂತ್ರಾಲೋಚನ ಸಭೆ ಇರುತ್ತಿತ್ತು. ಇದು ಮುಖ್ಯಮಂತ್ರಿ, ಆರ್ಥಿಕ ಮಂತ್ರಿ, ನ್ಯಾಯಾಂಗ ಸಚಿವ, ಮುಖ್ಯ ದಂಡನಾಯಕ ಮತ್ತು ಯುವರಾಜನನ್ನು ಒಳಗೊಂಡಿತ್ತು. ಪ್ರಮುಖ ವಿಷಯಗಳನ್ನು ಚರ್ಚಿಸಿ ತೀರ್ಮಾನಗಳನ್ನು ಕೈಗೊಳ್ಳಲಾಗುತ್ತಿತ್ತು.

ವಿವಿಧ ಅಧಿಕಾರಿಗಳು : ಗುಪ್ತರ ಶಾಸನಗಳಲ್ಲಿ ಸೇನಾಪತಿ, ಮಹಾಸೇನಾಪತಿ, ಬಲಾದಿಕೃತ, ಸಂಧಿವಿಗ್ರಹಿ, ದಂಡಪಸಾಧಿಕರಣ, ವಿನಯಸ್ಥಿತಿ ಸ್ಥಾಪಕ ಮೊದಲಾದ ಹುದ್ದೆಗಳ ಪ್ರಸ್ತಾಪ ಬರುತ್ತದೆ. ಇದರಿಂದ ಈ ಅಧಿಕಾರಿಗಳು ಸಂಬಂಧಿತ ಆಡಳಿತದ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದರೆಂಬುದು ತಿಳಿಯುತ್ತದೆ.

ಕಂದಾಯ ಆಡಳಿತ : ಗುಪ್ತರ ಕಾಲದಲ್ಲಿ ಭೂಕಂದಾಯವೇ ಆದಾಯದ ಪ್ರಮುಖ ಮೂಲವಾಗಿತ್ತು. ಆದ್ದರಿಂದ ಗುಪ್ತ ದೊರೆಗಳು ಕಂದಾಯ ಆಡಳಿತಕ್ಕೆ ಮಹತ್ವ ನೀಡಿದ್ದರು. ಭೂ ಉತ್ಪನ್ನದ 1/6 ಭಾಗ ಭೂ ಕಂದಾಯವೆಂದು ನಿಗಧಿಪಡಿಸಿದ್ದರು. ಅಲ್ಲದೆ 18 ವಿಧದ ವಿವಿಧ ತೆರಿಗೆಗಳನ್ನು ಹೇರಿದ್ದರು.

ಇದಲ್ಲದೆ ಅರಸನ ಸೈನ್ಯ ಹೋಗುವ ದಾರಿಯಲ್ಲಿರುವ ಜನ ಅದರ ನಿರ್ವಹಣೆಯ ಹೊಣೆಯನ್ನು ಹೊರಬೇಕಿತ್ತು. ‘ಭೋಗ’ ಎಂಬ ನಗರ ಪ್ರವೇಶ ತೆರಿಗೆಯಿಂದಲೂ ಆದಾಯ ಬರುತ್ತಿತ್ತು. ಇವುಗಳ ಜೊತೆಗೆ ಉತ್ಪನ್ನ ಹಾಗೂ ಉಪ್ಪಿನ ಗಣಿಗಳಿಂದಲೂ ತೆರಿಗೆ ಬರುತ್ತಿತ್ತು. ವಿಷ್ಠಿ ಎಂಬ ಕಡ್ಡಾಯ ಉಚಿತ ಶ್ರಮ ಪದ್ಧತಿಯೂ ಜಾರಿಯಲ್ಲಿದ್ದಿತು.

ನ್ಯಾಯಾಂಗ ಆಡಳಿತ : ಅರಸನು ನ್ಯಾಯಾಂಗದ ಅಧಿಪತಿಯಾಗಿದ್ದನು. ಆದಾಗ್ಯೂ ನ್ಯಾಯಾಧೀಶರನ್ನು ನೇಮಿಸಿಕೊಳ್ಳಲಾಗಿತ್ತು. ಮಹಾ ದಂಡನಾಯಕನು ನ್ಯಾಯಾಧಿಕಾರಿಯೂ ಆಗಿದ್ದನು. ವಿಷಯಪತಿಯು ಜಿಲ್ಲೆಯ ಅಧಿಪತಿಯಾಗಿದ್ದುದಲ್ಲದೆ ಜಿಲ್ಲಾಮಟ್ಟದಲ್ಲಿ ನ್ಯಾಯ ತೀರ್ಮಾನ ಮಾಡುತ್ತಿದ್ದನು.

ಸೈನ್ಯಾಡಳಿತ : ಗುಪ್ತರ ಇತಿಹಾಸದ ಬಗೆಗಿನ ಆಧಾರಗಳಲ್ಲಿ ಸೇನಾಪತಿ, ಮಹಾಸೇನಾಪತಿ, ಬಲಾಧಿಕೃತ ಎಂಬ ಹೆಸರುಗಳು ಕಂಡುಬರುತ್ತವೆ. ಇವುಗಳು ವಿವಿಧ ದರ್ಜೆಯ ಸೇನಾಧಿಕಾರಿಗಳ ಹುದ್ದೆಗಳೇ ಆಗಿವೆ.

ಸಾಮ್ರಾಜ್ಯದ ವಿಭಾಗ : ಗುಪ್ತರ ಸಾಮ್ರಾಜ್ಯವು ಬಹುವಿಶಾಲವಾದ ಸಾಮ್ರಾಜ್ಯವಾಗಿತ್ತು. ಆಡಳಿತವು ಕಷ್ಟಸಾಧ್ಯವಾಗಿತ್ತು. ಆದ್ದರಿಂದ ಆಡಳಿತದ ಅನುಕೂಲಕ್ಕಾಗಿ ಸಾಮ್ರಾಜ್ಯವನ್ನು ಪ್ರಾಂತಗಳಾಗಿ, ಪ್ರಾಂತಗಳನ್ನು ಜಿಲ್ಲೆಗಳಾಗಿ ವಿಂಗಡಿಸಿದ್ದು ಕಂಡುಬರುತ್ತದೆ.

ಪ್ರಾಂತಗಳ ಆಡಳಿತ : ಸಾಮ್ರಾಜ್ಯವನ್ನು ಪ್ರಾಂತಗಳನ್ನಾಗಿ ವಿಂಗಡಿಸಲಾಗಿತ್ತು. ಪ್ರಾಂತಗಳನ್ನು ಭುಕ್ತಿ, ದೇಶ, ವಿಷಯ ಎಂಬ ಹೆಸರುಗಳಿಂದ ಕರೆಯುತ್ತಿದ್ದರು. ಅದರ ಆಡಳಿತ ನಿರ್ವಹಣೆಗೆ ಸಾಮಾನ್ಯವಾಗಿ ರಾಜಕುಮಾರರನ್ನು ನೇಮಿಸುತ್ತಿದ್ದರು. ಪ್ರಾಂತದ ಅಧಿಪತಿಯನ್ನು ಬೋಗಪತಿ, ಉಪಾರಿಕ ಹಎಂದು ಕರೆಯುತ್ತಿದ್ದರು. ಇವನಿಗೆ ಸಹಾಯಕ್ಕಾಗಿ ಕೆಳಕಂಡವರು ಇರುತ್ತಿದ್ದರು. ದಂಡನಾಯಕನು ನ್ಯಾಯಾಧಿಕಾರಿಯೂ ಆಗಿದ್ದನು. ವಿಷಯಪತಿಯು ಜಿಲ್ಲೆಯ ಅಧಿಪತಿಯಾಗಿದ್ದುದಲ್ಲದೆ ಜಿಲ್ಲಾಮಟ್ಟದಲ್ಲಿ ನ್ಯಾಯ ತೀರ್ಮಾನ ಮಾಡುತ್ತಿದ್ದನು.

ಸೈನ್ಯಾಡಳಿತ : ಗುಪ್ತರ ಇತಿಹಾಸದ ಬಗೆಗಿನ ಆಧಾರಗಳಲ್ಲಿ ಸೇನಾಪತಿ, ಮಹಾಸೇನಾಪತಿ, ಬಲಾಧಿಕೃತ ಎಂಬ ಹೆಸರುಗಳು ಕಂಡುಬರುತ್ತವೆ. ಇವುಗಳು ವಿವಿಧ ದರ್ಜೆಯ ಸೇನಾಧಿಕಾರಿಗಳ ಹುದ್ದೆಗಳೇ ಆಗಿವೆ. ವಿಶಾಲ ಸಾಮ್ರಾಜ್ಯವನ್ನು ಹೊಂದಿದ್ದ ಗುಪ್ತರು ತಮ್ಮ ರಾಜ್ಯ ರಕ್ಷಣೆಗಾಗಿ ಬಲಿಷ್ಠ ಸೇನೆಯನ್ನು ಕಟ್ಟಿದ್ದರು. ಇವರ ಸೈನ್ಯದಲ್ಲಿ ಪದಾತಿ, ಅಶ್ವಪಡೆ ಹಾಗೂ ಗಜಪಡೆ ಇದ್ದಿತು. ಸೈನ್ಯದಲ್ಲಿ ರಥಗಳನ್ನು ಬಳಸುತ್ತಿರಲಿಲ್ಲ. ಮರಳುಗಾಡಿನಲ್ಲಿ ಮಾತ್ರ ಒಂಟೆಗಳನ್ನು ಬಳಸುತ್ತಿದ್ದರು. ಸೈನ್ಯದ ಮೇಲ್ವಿಚಾರಣೆಗಾಗಿ “ಮಹಾಸೇನಾಪತಿ” ನೇಮಕಗೊಂಡಿದ್ದನು. ಈತನ ಕೈಕೆಳಗೆ ಮಹಾದಂಡನಾಯಕ, ರಣಬಂಡಾರಿಕ ಭಟಶ್ವಪತಿ ಎಂಬ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದರು. ಸೇವಾಡಳಿತದ ಪುಮುಖ ಮುಖ್ಯಸ್ಥರುಗಳನ್ನು ಈ ಕೆಳಗಿನಂತೆ ಅಭ್ಯಸಿಸಬಹುದು.

1) ಸೈನ್ಯದ ಮುಖ್ಯಸ್ಥ – ಮಹಾಸೇನಾಪತಿ

2) ಅಶ್ವಪಡೆ – ಮಹಾಅಶ್ವಪತಿ, ಅಶ್ವಪತಿ

3) ಗಜಪಡೆ- ಮಹಾಪಿಲುಪತಿ ಅಥವಾ ಕಟುಕ

4) ಪಿಲುಪಡೆ – ದಂಡನಾಯಕ

ಸೈನಿಕರಿಗೆ ಹಣದ ರೂಪದಲ್ಲಿ ಸಂಬಳ ವಿತರಣೆ ಮಾಡಲಾಗುತ್ತಿತ್ತು. ಯುದ್ದದಲ್ಲಿ ಬಿಲ್ಲು, ಬಾಣ, ಕತ್ತಿ, ಈಟಿ, ಕೈಗೊಡಲಿ, ಭರ್ಚಿ, ಭಲ್ಲೆ, ಶಿರಾಸ್ತ್ರಣ, ಕಬ್ಬಿಣದ ಕವಚ ಮೊದಲಾದ ಆಯುಧಗಳನ್ನು ಬಳಸಲಾಗುತ್ತಿತ್ತು. ಈ ಅವಧಿಯಲ್ಲಿ ಅಶ್ವಪಡೆ ತನ್ನ ಮಹತ್ವವನ್ನು ಹೆಚ್ಚಿಸಿಕೊಂಡಿತು.

ಸಾಮ್ರಾಜ್ಯದ ವಿಭಾಗ : ಗುಪ್ತರ ಸಾಮ್ರಾಜ್ಯವು ಬಹುವಿಶಾಲವಾದ ಸಾಮ್ರಾಜ್ಯವಾಗಿತ್ತು. ಆಡಳಿತವು ಕಷ್ಟಸಾಧ್ಯವಾಗಿತ್ತು. ಆದ್ದರಿಂದ ಆಡಳಿತದ ಅನುಕೂಲಕ್ಕಾಗಿ ಸಾಮ್ರಾಜ್ಯವನ್ನು ಪ್ರಾಂತಗಳಾಗಿ, ಪ್ರಾಂತಗಳನ್ನು ಜಿಲ್ಲೆಗಳಾಗಿ ವಿಂಗಡಿಸಿದ್ದು ಕಂಡುಬರುತ್ತದೆ.

ಪ್ರಾಂತಗಳ ಆಡಳಿತ : ಸಾಮ್ರಾಜ್ಯವನ್ನು ಪ್ರಾಂತಗಳನ್ನಾಗಿ ವಿಂಗಡಿಸಲಾಗಿತ್ತು. ಪ್ರಾಂತಗಳನ್ನು ಭುಕ್ತಿ, ದೇಶ, ವಿಷಯ ಎಂಬ ಹೆಸರುಗಳಿಂದ ಕರೆಯುತ್ತಿದ್ದರು. ಅದರ ಆಡಳಿತ ನಿರ್ವಹಣೆಗೆ ಸಾಮಾನ್ಯವಾಗಿ ರಾಜಕುಮಾರರನ್ನು ನೇಮಿಸುತ್ತಿದ್ದರು. ಪ್ರಾಂತದ ಅಧಿಪತಿಯನ್ನು ಬೋಗಪತಿ, ಉಪಾರಿಕ ಎಂದು ಕರೆಯುತ್ತಿದ್ದರು. ಇವನಿಗೆ ಸಹಾಯಕ್ಕಾಗಿ ಕೆಳಕಂಡವರು ಇರುತ್ತಿದ್ದರು.

ಬಲಾಧಿಕರಣಿಕ – ಸೈನ್ಯದ ಮುಖ್ಯಸ್ಥ

ದಂಡಪಸೌಧಿಕರಣಿಕ – ಪೋಲೀಸ್ ಅಧಿಕಾರಿ

ರಣಭಂಡಾರಿಕ – ಸೈನ್ಯದ ದಂಡಾಧಿಕಾರಿ

ವಿನಯಸ್ಥಿತಿಸ್ಥಾಪಕ – ಕಾನೂನು ಸುವ್ಯವಸ್ಥೆ ನೋಡಿಕೊಳ್ಳುವಾತ

ಭಟಸ್ವಪತಿ – ಅಶ್ವದಳ ಮತ್ತು ಕಾಲ್ಗಳದ ದಂಡನಾಯಕ

ಮಹಾಪಿಲ್ಲುಪತ – ಗಜಸೈನ್ಯದ ಮುಖ್ಯಸ್ಥ

ಜಿಲ್ಲಾಡಳಿತ : ಪ್ರಾಂತಗಳನ್ನು ಜಿಲ್ಲೆಗಳನ್ನಾಗಿ ವಿಂಗಡಿಸಲಾಗಿತ್ತು. ಅದನ್ನು ‘ವಿಷಯ’ ಎಂದು ಕರೆಯುತ್ತಿದ್ದರು. ಅದರ ಅಧಿಪತಿ ವಿಷಯಪತಿ. ಅವನು ಜಿಲ್ಲಾ ನ್ಯಾಯಾಧೀಶನಾಗಿಯೂ ಕೆಲಸಮಾಡುತ್ತಿದ್ದನು. ಅವನಿಗೆ ಸಲಹೆ ನೀಡಲು ಒಂದು ಸಲಹಾಸಮಿತಿ ಇತ್ತು. ಇದು ಕೆಳಕಂಡವರನ್ನು ಒಳಗೊಂಡಿತ್ತು.

ನಗರ ಶ್ರೇಷ್ಠಿ – ನಗರ ಸಭೆಯ ಅಧ್ಯಕ್ಷ           ಪ್ರಥಮ ಕುಲಿಕ – ಉದ್ದಿಮೆಗಳ ಪ್ರತಿನಿಧಿ

ಸಾರ್ಥವಾಹ – ವಾಣಿಜ್ಯ ಸಂಸ್ಥೆಗಳ ಪ್ರತಿನಿಧಿ      ಪ್ರಥಮ ಕಾಯಸ್ಥ –  ಕರಣಿಕರ ಮುಖ್ಯಸ್ಥ

ನಗರಾಡಳಿತ : ನಗರ ಮುಖ್ಯಸ್ಥ ಪುರಪಾಲ ಅಥವಾ ನಗರ ರಕ್ಷಕನಾಗಿದ್ದ. ನಗರಾಡಳಿತದ ಸಲಹೆಗೆ ಪರಿಷತ್ ಎಂಬ ಸಂಸ್ಥೆಯಿತ್ತು. ಇದು ನಗರಶ್ರೇಷ್ಠಿ ಎಂಬ ಅಧಿಕಾರಿಯನ್ನು ಒಳಗೊಂಡಿತ್ತು.

ಗ್ರಾಮಗಳ ಆಡಳಿತ : ಗ್ರಾಮವು ಆಡಳಿತದ ಕಟ್ಟಕಡೆಯ ಘಟಕವಾಗಿತ್ತು. ಗ್ರಾಮಾಧಿಕಾರಿಯು ಸರ್ಕಾರದಿಂದ ನೇಮಿಸಲ್ಪಡು ತ್ತಿದ್ದನು. ಗ್ರಾಮದ ಆಡಳಿತ ನಿರ್ವಹಣೆಯು ಪಂಚಾಯಿತಿಯ ಮೂಲಕ ನಡೆಯುತ್ತಿತ್ತು.

ನ್ಯಾಯಾಡಳಿತ :

ರಾಜನೇ ರಾಜ್ಯದ ಸರ್ವೋಚ್ಛ ನ್ಯಾಯಾಧೀಶನಾಗಿದ್ದನು. ವಿಶಾಲ ಸಾಮ್ರಾಜ್ಯದ ನ್ಯಾಯಾಡಳಿತವನ್ನು ನೋಡಿಕೊಳ್ಳಲು ಒಬ್ಬನಿಂದಲೇ ಸಾಧ್ಯವಿಲ್ಲದ ಕಾರಣ ಕೇಂದ್ರ ಹಾಗೂ ಪ್ರಾಂತ್ಯಗಳಲ್ಲಿ ಅನೇಕ ಹಿರಿಯ ಅಧಿಕಾರಿಗಳನ್ನು ನ್ಯಾಯಾಧೀಶರನ್ನಾಗಿ ನೇಮಕ ಮಾಡಿಕೊಳ್ಳಲಾಗುತ್ತಿತ್ತು. ಜಿಲ್ಲಾ ಕೇಂದ್ರಗಳಲ್ಲಿ ನ್ಯಾಯಾಧೀಶರಿಗೆ ಶೇಶ್ ಮತ್ತು ಕಾಯಸ್ಥರು ನೆರವಾಗುತ್ತಿದ್ದರು. ಗ್ರಾಮಗಳಲ್ಲಿ ಗ್ರಾಮ ಪಂಚಾಯಿತಿ ನ್ಯಾಯ ತೀರ್ಮಾನ ಮಾಡುತ್ತಿತ್ತು. ಕಾಳಿದಾಸನು ರಾಜನ ರಾಜಧಾನಿಯ ನ್ಯಾಯಾಲಯವನ್ನು ಧರ್ಮಸ್ಥಾನ ಎಂದು ಕರೆದಿದ್ದಾನೆ. ಅಪರಾಧಿಗಳಿಗೆ ಶಿಕ್ಷೆಗಳು ಕಠಿಣವಾಗಿದ್ದವು.

ಮುಕ್ತಾಯ : ಗುಪ್ತರು ತಮ್ಮ ಹಿಂದಿನ ಮೌರ್ಯರ ಆಡಳಿತ ವ್ಯವಸ್ಥೆಯನ್ನು ಅನುಸರಿಸಿದ್ದರು. ಆದರೆ ಸಂದರ್ಭಕ್ಕೆ ತಕ್ಕಂತೆ ಬದಲಾವಣೆಗಳನ್ನು ಮತ್ತು ಸುಧಾರಣೆಗಳನ್ನು ತಂದು ನಾವೀನ್ಯತೆಯನ್ನು ಸಾಧಿಸಿದ್ದು ಕಂಡು ಬರುತ್ತದೆ.