ರಾಜ್ಯ ನಿರ್ದೇಶಕ ತತ್ವಗಳು ಹಾಗೂ ಅದರ ವರ್ಗೀಕರಣ

ರಾಜ್ಯ ನಿರ್ದೇಶಕ ತತ್ವಗಳು ಹಾಗೂ ಅದರ ವರ್ಗೀಕರಣ

“ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ನ್ಯಾಯಗಳನ್ನು ದೇಶದ ಪ್ರಜೆಗಳಿಗೆ ದೊರಕಿಸಿಕೊಡುವ ಉದ್ದೇಶದಿಂದ ರಾಜ್ಯ ನಿರ್ದೇಶಕ ತತ್ವಗಳನ್ನು ಸಂವಿಧಾನದಲ್ಲಿ ಅಳವಡಿಸಲಾಗಿದೆಯಲ್ಲದೇ ಅವುಗಳು ಮೂಲಭೂತ ಹಕ್ಕುಗಳಿಗಿಂತ ಮುಖ್ಯವಾದವೆಂದು ಪರಿಗಣಿಸಲಾಗಿದೆ.” – ಪ್ರೊ. ಕೆ.ಸಿ. ಮರ್ಕಾನಂದನ್

ಭಾರತದ ಸಂವಿಧಾನದ ಪ್ರಸ್ತಾವನೆಯಲ್ಲಿ ದೇಶದ ಎಲ್ಲಾ ಜನರಿಗೂ ಸಾಮಾಜಿಕ, ರಾಜಕೀಯ, ಆರ್ಥಿಕ ಹಾಗೂ ಧಾರ್ಮಿಕ ನ್ಯಾಯವನ್ನು ದೊರಕಿಸಿಕೊಟ್ಟು ಎಲ್ಲಾ ಜನರಿಗೂ ಸಮಾನ ಸ್ಥಾನಮಾನಗಳನ್ನು ನೀಡಿ ಸುಖೀ ರಾಜ್ಯದ ಸ್ಥಾಪನೆಯನ್ನು ಮಾಡುವ ಧ್ಯೇಯವನ್ನು ಹೊಂದಿದೆ ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಈ ಧ್ಯೇಯಗಳನ್ನು ಸರ್ಕಾರಗಳು ಕಾರ್ಯಗತಗೊಳಿಸುವಂತೆ ಸರ್ಕಾರಗಳಿಗೆ ಸಂವಿಧಾನವು ಆದೇಶಗಳನ್ನು ನೀಡುತ್ತದೆ. ಈ ಆದೇಶಗಳೇ ರಾಜ್ಯ ನಿರ್ದೇಶಕ ತತ್ವಗಳು ಎಂದು ಹೆಸರಾಗಿವೆ. ಸಂವಿಧಾನದ 4 ನೇ ಭಾಗದಲ್ಲಿ ರಾಜ್ಯ ನಿರ್ದೇಶಕ ತತ್ವಗಳನ್ನು ಅಳವಡಿಸಲಾಗಿದೆ. ಈ ತತ್ವಗಳನ್ನು ಸರ್ಕಾರಗಳು ಕಡ್ಡಾಯವಾಗಿ ಪಾಲಿಸಬೇಕೆಂಬ ನಿಯಮವೇನೂ ಇಲ್ಲ. ಒಂದು ವೇಳೆ ಸರ್ಕಾರ ಈ ನಿಯಮವನ್ನು ಪಾಲನೆ ಮಾಡದಿದ್ದರೆ ಪೌರನಾದವನು ಸರ್ಕಾರದ ವಿರುದ್ಧ ನ್ಯಾಯಾಲಯಕ್ಕೆ ಹೋಗಲು ಸಾಧ್ಯವಿಲ್ಲ. ನಮ್ಮ ಸಂವಿಧಾನ ರಚನಾಕಾರರು ರಾಜ್ಯ ನಿರ್ದೇಶಕ ತತ್ವಗಳನ್ನು ಐರಿಷ್‌ ಗಣರಾಜ್ಯದಿಂದ ಎರವಲು ಪಡೆದಿದ್ದಾರೆ. ಐರ್ಲೆಂಡ್‌ ದೇಶವು ಸ್ಪೇನ್‌ ದೇಶದ ಸಂವಿಧಾನದಿಂದ ಎರವಲು ಪಡೆದಿದೆ. ಡಾ. ಬಿ.ಆರ್.‌ ಅಂಬೇಡ್ಕರರು ರಾಜ್ಯ ನಿರ್ದೇಶಕ ತತ್ವಗಳು ನಮ್ಮ ಸಂವಿಧಾನದ ಒಂದು ಪ್ರಮುಖವಾದ ಲಕ್ಷಣ ಎಂದಿದ್ದಾರೆ. ರಾಜ್ಯ ನಿರ್ದೇಶಕ ತತ್ವಗಳು ಕಲ್ಯಾಣ ರಾಜ್ಯ ಸ್ಥಾಪನೆಯ ಗುರಿಯನ್ನು ಹೊಂದಿದೆ ಎಂದು ಡಾ. ಬಾಬು ರಾಜೇಂದ್ರ ಪ್ರಸಾದರು ಹೇಳಿದ್ದಾರೆ.

ಸಂವಿಧಾನದ 4ನೇ ಭಾಗದಲ್ಲಿರುವ ವಿಧಿಗಳು (36 ರಿಂದ 51 ರವರೆಗೆ) ರಾಜ್ಯ ನಿರ್ದೇಶಕ ತತ್ವಗಳ ಬಗ್ಗೆ ವಿವರಗಳನ್ನು ಒಳಗೊಂಡಿದೆ.

ರಾಜ್ಯ ನೀತಿ ನಿರ್ದೇಶಕ ತತ್ವಗಳ ವರ್ಗೀಕರಣ: (Classification of directive principles of state policy)

ಭಾರತ ಸಂವಿಧಾನದ 4 ನೇ ಅಧ್ಯಾಯದಲ್ಲಿ 35 ರಿಂದ 51 ನೇ ವಿಧಿಯವರೆಗೆ ರಾಜ್ಯ ನಿರ್ದೇಶಕ ತತ್ವಗಳನ್ನು ಅಳವಡಿಸಲಾಗಿದೆ. ಇವುಗಳನ್ನು ಯೋಜನಾಬದ್ಧವಾಗಿ ಸೇರಿಸಿಲ್ಲವಾದ ಕಾರಣ ಅವುಗಳನ್ನು ವೈಜ್ಞಾನಿಕ ತಳಹದಿಯ ಮೇಲೆ ವಿಂಗಡಿಸಲು ಸಾಧ್ಯವಿಲ್ಲ. ರಾಜ್ಯನೀತಿ ನಿರ್ದೇಶಕ ತತ್ವಗಳನ್ನು ಸಮಾಜವಾದಿ, ಗಾಂಧೀವಾದಿ ಹಾಗೂ ಉದಾರ ತತ್ವಗಳು ಎಂಬ 3 ವಿಭಾಗಗಳಾಗಿ ಗುರುತಿಸಲಾಗಿದ್ದು ಅವುಗಳು ಈ ಕೆಳಗಿನಂತಿವೆ,

1. ಸಮಾಜವಾದಿ ತತ್ವಗಳು ( The socialistic principles)

ಭಾರತದ ಸಂವಿಧಾನದ ಪ್ರಸ್ತಾವನೆಗೆ 1976 ರಲ್ಲಿ ಸಮಾಜವಾದಿ ಪದವನ್ನು ಸೇರಿಸುವ ಮೂಲಕ ಭಾರತವನ್ನು ಸಮಾಜವಾದಿ ರಾಷ್ಟ್ರವೆಂದು ಘೋಷಿಸಲಾಯಿತು. 1976 ಕ್ಕಿಂತ ಮುಂಚೆ ಸಂವಿಧಾನದಲ್ಲಿ ಸಮಾಜವಾದಿ ಅಂಶಗಳನ್ನು ರಾಷ್ಟ್ರನೀತಿ ನಿರ್ದೇಶಕ ತತ್ವಗಳಲ್ಲಿ ಅಳವಡಿಸಿದ್ದರು. ಸಮಾಜವಾದಿ ಸಿದ್ಧಾಂತದ ಉದ್ದೇಶವನ್ನು ಪ್ರತಿನಿಧಿಸುವ ಪ್ರಮುಖ ನಿರ್ದೇಶಕ ತತ್ವಗಳೆಂದರೆ,

a. ಸಂವಿಧಾನದ 38(1)ನೇ ವಿಧಿಯ ಪ್ರಕಾರ ರಾಜ್ಯವು ಪ್ರಜಾಕಲ್ಯಾಣಕ್ಕಾಗಿ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ನ್ಯಾಯವನ್ನು ದೊರಕಿಸಿಕೊಡಬೇಕು.

b.  ಸಂವಿಧಾನದ 38(2)ನೇ ಉಪವಿಧಿಗೆ 44ನೇ ತಿದ್ದುಪಡಿ ತಂದು ಪ್ರಜೆಗಳ ಆದಾಯದ ಅಸಮಾನತೆಯನ್ನು ಕಡಿಮೆಗೊಳಿಸಿ, ವ್ಯಕ್ತಿಗಳ, ಬೇರೆ ಬೇರೆ ಪ್ರದೇಶಗಳಲ್ಲಿ ವಾಸಿಸುವ ಜನರ ಸೌಲಭ್ಯಗಳ ಮತ್ತು ಅವಕಾಶಗಳ ಅಸಮಾನತೆಯನ್ನು ತೆಗೆದು ಹಾಕಲು ರಾಜ್ಯವು ಪ್ರಯತ್ನಿಸಬೇಕು.

c. ಸಂವಿಧಾನದ 39(A) ವಿಧಿಯಂತೆ ರಾಜ್ಯದ ಪ್ರಜೆಗಳ ಉತ್ತಮ ಜೀವನಕ್ಕೆ ಅನುಕೂಲವಾಗುವಂತಹ ಸಾಧನಗಳನ್ನು ಹೊಂದುವಂತಹ ನೀತಿ ಅಥವಾ ಕಾರ್ಯಗಳನ್ನು ರೂಪಿಸಿ ಜಾರಿಗೆಗೊಳಿಸಬೇಕು.

d. ಸಂವಿಧಾನದ 39(B) ವಿಧಿಯ ಪ್ರಕಾರ ದೇಶದ ಸಂಪನ್ಮೂಲಗಳು ಸರ್ವರಿಗೂ ಹಂಚಿ ಹೋಗುವಂತೆ ಕಾರ್ಯಕ್ರಮಗಳನ್ನು ರೂಪಿಸುವ ಜವಾಬ್ದಾರಿ ಸರ್ಕಾರದ್ದಾಗಿದೆ.

e. ಸಂವಿಧಾನದ 39(C) ವಿಧಿಯಂತೆ ರಾಜ್ಯದ ಸಂಪತ್ತು ಕೆಲವೇ ವ್ಯಕ್ತಿಗಳ ಕೈಯಲ್ಲಿ ಕೇಂದ್ರೀಕೃತವಾಗದಂತೆ ಮತ್ತು ಸಮಾನವಾಗಿ ಹಂಚಿಕೆಯಾಗುವಂತೆ ಕ್ರಮ ಕೈಗೊಳ್ಳಬೇಕು.

f. ಸಂವಿಧಾನದ 39(D) ವಿಧಿಯಂತೆ ರಾಜ್ಯವು ಸಮಾನ ಕೆಲಸಕ್ಕೆ ಸಮಾನ ವೇತನ ದೊರೆಯುವಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು.

g. ಸಂವಿಧಾನದ 39(E) ವಿಧಿಯಂತೆ ಕಾರ್ಮಿಕರು, ಮಹಿಳೆಯರು, ಮಕ್ಕಳು ಸೇರಿದಂತೆ ಪ್ರಜೆಗಳ ಆರೋಗ್ಯವನ್ನು ಕಾಪಾಡುವುದು ಸರ್ಕಾರದ ಹೊಣೆಯಾಗಿದೆ.

h. ಸಂವಿಧಾನದ 39(F) ವಿಧಿಯ ಪ್ರಕಾರ ಮಕ್ಕಳು ಆರೋಗ್ಯವಾಗಿ ಬೆಳೆಯಲು ಅವಕಾಶಗಳು ಹಾಗೂ ಸೌಲಭ್ಯಗಳನ್ನು ನೀಡಿ ಅವರ ಸ್ವಾತಂತ್ರ್ಯ ಹಾಗೂ ವ್ಯಕ್ತಿತ್ವದ ಬೆಳವಣಿಗೆಗೆ ಅನುಕೂಲ ಮಾಡಿಕೊಡಬೇಕು. ಮಕ್ಕಳು ಮತ್ತು ಯುವಕರು ಶೋಷಣೆಯ ವಿರುದ್ಧ ರಕ್ಷಣೆಯನ್ನು ಪಡೆಯಬೇಕು.

i. ಸಂವಿಧಾನದ 42 ನೇ ತಿದ್ದುಪಡಿಮ ಮೂಲಕ 39(A) ವಿಧಿಯ ಅನ್ವಯ ರಾಜ್ಯವು ಸಮಾನ ಅವಕಾಶದ ಆಧಾರದ ಮೇಲೆ ನ್ಯಾಯವನ್ನು ದೊರಕಿಸಿ ಬಡವರಿಗೆ ಉಚಿತ ಕಾನೂನು ನೆರವನ್ನು ನೀಡಬೇಕು.

j. ಸಂವಿಧಾನದ 40 ನೇ ವಿಧಿಯ ಪ್ರಕಾರ ರಾಜ್ಯವು ಗ್ರಾಮ ಪಂಚಾಯತಿಗಳನ್ನು ಸ್ಥಾಪಿಸಿ ಅವುಗಳು ಸಮರ್ಪಕವಾಗಿ ಕಾರ್ಯಗಳನ್ನು ನಿರ್ವಹಿಸುವಂತೆ ಅಧಿಕಾರವನ್ನು ನೀಡಬೇಕು.

k. ಸಂವಿಧಾನದ 41 ನೇ ವಿಧಿಯಂತೆ ನಿರುದ್ಯೋಗಿಗಳಿಗೆ, ವೃದ್ಧರಿಗೆ, ರೋಗಿಗಳಿಗೆ ಹಾಗೂ ಅಂಗವಿಕಲರಿಗೆ ಹಣ ಸಂದಾಯ ಮಾಡಿ ಅವರ ಏಳಿಗೆಗೆ ಶ್ರಮಿಸಬೇಕು.

l. ಸಂವಿಧಾನದ 42 ನೇ ವಿಧಿಯು ಕಾರ್ಮಿಕರು ಉತ್ತಮ ಜೀವನ ನಿರ್ವಹಣೆ ಮಾಡಲು ವಿರಾಮ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಅವಕಾಶಗಳನ್ನು ಅನುಭವಿಸುವಂತಾಗಲು ರಾಜ್ಯವು ಗ್ರಾಮೀಣ ಪ್ರದೇಶಗಳ ಕೈಗಾರಿಕೆಗಳಿಗೆ ಪ್ರೋತ್ಸಾಹ ನೀಡಬೇಕು.

m. ಸಂವಿಧಾನದ 42 ನೇ ತಿದ್ದುಪಡಿಯ 42(A) ವಿಧಿಯ ಅನ್ವಯ ಕಾರ್ಮಿಕರು ಉದ್ಯಮಗಳ ಕಾರ್ಯನಿರ್ವಹಣೆಯಲ್ಲಿ ಭಾಗವಹಿಸುವಂತೆ ರಾಜ್ಯವು ಕ್ರಮ ಕೈಗೊಳ್ಳುವಂತೆ ಮಾಡಲಾಗಿದೆ.  

ಗಾಂಧೀವಾದದ ತತ್ವಗಳು (The gandhian principles)

ಭಾರತದ ಸ್ವಾತಂತ್ರ್ಯ ಹೋರಾಟಗಾರ, ರಾಷ್ಟ್ರಪಿತ, ಬಾಪೂಜಿ ಹಾಗೂ ಭಾರತದ ಪಿತಾಮಹ ಎಂದು ಹೆಸರಾದ ಗಾಂಧೀಜಿಯವರು ಸ್ವಾತಂತ್ರ್ಯದ ಹೋರಾಟದ ಸಮಯದಲ್ಲಿ ಅನೇಕ ಆಚರಣೆಗಳು, ನಂಬಿಕೆ, ಮೌಲ್ಯಗಳನ್ನು ಅಳವಡಿಸಿಕೊಂಡು ಭಾರತೀಯ ನಾಗರಿಕರಿಗೆ ಮಾದರಿಯಾದರು. ಆದ್ದರಿಂದ ಭಾರತದ ಬಲಿಷ್ಠ ನಿರ್ಮಾಣಕ್ಕೆ ಸಾದ್ಯವಾಯಿತು. ಅವರು ನೀಡಿದ ಕೆಲವು ಸಲಹೆಗಳನ್ನು ರಾಜ್ಯ ನಿರ್ದೇಶಕ ತತ್ವಗಳಲ್ಲಿ ಅಳವಡಿಸಲಾಯಿತು.

  1. ಸಂವಿಧಾನದ 40 ನೇ ವಿಧಿಯಂತೆ ರಾಜ್ಯವು ಗ್ರಾಮಪಂಚಾಯತಿಗಳನ್ನು ಸ್ಥಾಪಿಸಿ ಅವುಗಳನ್ನು ಸ್ವಯಂ ಆಡಳಿತ ಸಂಸ್ಥೆಗಳನ್ನಾಗಿ ಮಾಡುವುದು.
  2. ಸಂವಿಧಾನದ 43 ನೇ ವಿಧಿಯ ಪ್ರಕಾರ ಗ್ರಾಮೀಣ ಭಾಗದಲ್ಲಿ ಗುಡಿ ಕೈಗಾರಿಕೆಗಳನ್ನು ಸ್ಥಾಪಿಸಿ ಅವುಗಳನ್ನು ಸಹಕಾರಿ ಆಧಾರದ ಮೇಲೆ ರೂಪಿಸುವುದು.
  3. ಸಂವಿಧಾನದ 97 ನೇ ತಿದ್ದುಪಡಿಯ ಮೂಲಕ ಸೇರಿಸಲಾದ 43(B) ವಿಧಿಯಂತೆ ರಾಜ್ಯವು ಸಹಕಾರಿ ಸಂಸ್ಥೆಗಳ ರಚನೆ, ಕಾರ್ಯವಿಧಾನ, ಪ್ರಜಾಸತ್ತಾತ್ಮಕ ನಿಯಂತ್ರಣ ಹಾಗೂ ವೃತ್ತಿಪರ ನಿರ್ವಹಣೆಗೆ ಪ್ರೋತಾಹ ನೀಡಬೇಕು.
  4. ಸಂವಿಧಾನದ 46 ನೇ ವಿಧಿಯಂತೆ ರಾಜ್ಯವು ಪರಿಶಿಷ್ಠ ಜಾತಿ ಹಾಗೂ ಪರಿಶಷ್ಠ ವರ್ಗ ಸೇರಿದಂತೆ ಸಮಾಜದ ದುರ್ಬಲ ವರ್ಗಗಳ ಪ್ರಜೆಗಳ ಶೈಕ್ಷಣಿಕ ಹಾಗೂ ಆರ್ಥಿಕ ಅಭಿವೃದ್ಧಿಗೆ ಶ್ರಮಿಸಬೇಕು.
  5. ಸಂವಿಧಾನದ 47 ನೇ ವಿಧಿಯಂತೆ ರಾಜ್ಯವು ವೈದ್ಯಕೀಯ ಉದ್ದೇಶ ಹೊರತುಪಡಿಸಿ ಆರೋಗ್ಯಕ್ಕೆ ಮಾರಕವಾದ ಉಳಿದೆಲ್ಲಾ ಮಾದಕ ವಸ್ತುಗಳ ಬಳಕೆಯ ನಿಷೇಧಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು.
  6. ಸಂವಿಧಾನದ 48 ನೇ ವಿಧಿಯಲ್ಲಿ ರಾಜ್ಯವು ಗೋಹತ್ಯೆಯನ್ನು ನಿಷೇಧಿಸಲು ಪ್ರಯತ್ನಿಸಬೇಕು.

3. ಉದಾರವಾದಿ ತತ್ವಗಳು ( Liberal principles)

1. ಸಂವಿಧಾನದ 44 ನೇ ವಿಧಿಯಂತೆ ಭಾರತದ ಎಲ್ಲಾ ಪ್ರಜೆಗಳಿಗೆ ಏಕರೂಪ ನಾಗರಿಕ ಸಂಹಿತೆಯ ಭರವಸೆಯನ್ನು ರಾಜ್ಯವು ಒದಗಿಸುವ ಕೆಲಸ ಮಾಡಬೇಕು.

2. ಸಂವಿಧಾನದ 45 ನೇ ವಿಧಿಯ ಪ್ರಕಾರ ರಾಜ್ಯವು 14 ವರ್ಷ ವಯಸ್ಸಿನ ಎಲ್ಲಾ ಮಕ್ಕಳಿಗೆ ಉಚಿತ ಹಾಗೂ ಕಡ್ಡಾಯ ಶಿಕ್ಷಣ ನೀಡಬೇಕು.

3. ಸಂವಿಧಾನದ 47 ನೇ ವಿಧಿಯಂತೆ ರಾಜ್ಯವು ಸಾರ್ವಜನಿಕ ಆರೋಗ್ಯಾಭಿವೃದ್ಧಿಗಾಗಿ ಪ್ರಜೆಗಳ ಪೌಷ್ಟಿಕಾಂಶ ಹಾಗೂ ಜೀವನಮಟ್ಟವನ್ನು ಸುಧಾರಿಸಲು ಕ್ರಮ ವಹಿಸಬೇಕು.

4. ಸಂವಿಧಾನದ 50 ನೇ ವಿಧಿಯ ಪ್ರಕಾರ ಸಾರ್ವಜನಿಕ ಸೇವಾ ದೃಷ್ಠಿಯಿಂದ ಕಾರ್ಯಾಂಗ ಹಾಗೂ ನ್ಯಾಯಾಂಗವನ್ನು ಪ್ರತ್ಯೇಕಿಸಬೇಕು.

4. ಸಾಮಾನ್ಯ ತತ್ವಗಳು (Common principles)

  1. ಸಂವಿಧಾನದ 48 ನೇ ವಿಧಿಯಂತೆ ರಾಜ್ಯವು ಕೃಷಿ ಮತ್ತು ಪಶುಸಂಗೋಪನೆಯನ್ನು ವೈಜ್ಞಾನಿಕ ರೀತಿಯಲ್ಲಿ ನಿರ್ವಹಣೆ ಮಾಡಲು ಯತ್ನಿಸಬೇಕು.
  2. 1976 ರಲ್ಲಿ ತರಲಾದ 42 ನೇ ತಿದ್ದುಪಡಿಯಂತೆ ಸೇರಿಸಲಾದ 48(A) ವಿಧಿಯಂತೆ ರಾಜ್ಯವು ಪರಿಸರ ರಕ್ಷಣೆ ಹಾಗೂ ಸುಧಾರಣೆಗೆ ಪ್ರಯತ್ನಿಸಬೇಕು. ಅದೇ ರೀತಿ ಅರಣ್ಯ ಹಾಗೂ ಪರಿಸರವನ್ನು ಸಂರಕ್ಷಿಸಬೇಕು.
  3. ಸಂವಿಧಾನದ 49 ನೇ ವಿಧಿಯಂತೆ ಕಲಾತ್ಮಕ ಅಥವಾ ಚಾರಿತ್ರಿಕ ಪ್ರಾಮುಖ್ಯತೆಯನ್ನು ಹೊಂದಿದ ಸ್ಮಾರಕ, ಸ್ಥಳ ಅಥವಾ ವಸ್ತುವನ್ನು ರಕ್ಷಿಸುವುದು ರಾಜ್ಯದ ಕರ್ತವ್ಯವಾಗಿದೆ.
  4. ಸಂವಿಧಾನದ 51(A) ವಿಧಿಯಂತೆ ರಾಜ್ಯವು ಅಂತರಾಷ್ಟ್ರೀಯ ಶಾಂತಿ ಹಾಗೂ ಭದ್ರತೆಯನ್ನು ಕಾಪಾಡಬೇಕು.
  5. ಸಂವಿಧಾನದ 51(B) ವಿಧಿಯ ಪ್ರಕಾರ ರಾಜ್ಯವು ಜಗತ್ತಿನ ಇತರೇ ದೇಶಗಳೊಂದಿಗೆ ಗೌರವಯುತವಾದ ಸಂಬಂಧವನ್ನು ಹೊಂದಿರಬೇಕು.
  6. ಸಂವಿಧಾನದ 51(C) ವಿಧಿಯಂತೆ ರಾಜ್ಯವು ಅಂತರಾಷ್ಟ್ರೀಯ ಕಾನೂನು ಹಾಗೂ ಒಪ್ಪಂದಗಳನ್ನು ಗೌರವಿಸಬೇಕು.
  7. ಸಂವಿಧಾನದ 51(D) ವಿಧಿಯ ಪ್ರಕಾರ ರಾಜ್ಯವು ಅಂತರಾಷ್ಟ್ರೀಯ ವಿವಾದಗಳನ್ನು ಶಾಂತಿಯುತ ಮಾತುಕತೆಗಳ ಮೂಲಕ ಬಗೆಹರಿಸಬೇಕು.

ಉಪಸಂಹಾರ

ರಾಜ್ಯ ನಿರ್ದೇಶಕ ತತ್ವಗಳು ಭಾರತೀಯ ಸಂವಿಧಾನದ ಆತ್ಮಸ್ವರೂಪವಾಗಿವೆ. ಇವು ಕಾನೂನಾತ್ಮಕವಾಗಿ ಜಾರಿಗೆ ಬಾರದಿದ್ದರೂ ನೈತಿಕವಾಗಿ ಸರ್ಕಾರಗಳಿಗೆ ಬದ್ಧತೆಯನ್ನು ವಿಧಿಸುತ್ತವೆ. ಸಮಾಜವಾದಿ, ಗಾಂಧೀವಾದಿ ಮತ್ತು ಉದಾರ ತತ್ವಗಳ ಸಮನ್ವಯವೇ ಇವುಗಳ ವೈಶಿಷ್ಟ್ಯ. ಈ ತತ್ವಗಳ ಸಮರ್ಪಕ ಜಾರಿಗೆ ಬಂದಾಗಲೇ ನಿಜವಾದ ಕಲ್ಯಾಣರಾಜ್ಯ ನಿರ್ಮಾಣ ಸಾಧ್ಯ.

ಮೂಲಭೂತ ಹಕ್ಕುಗಳ ವರ್ಗೀಕರಣ

ಮೂಲಭೂತ ಹಕ್ಕುಗಳ ವರ್ಗೀಕರಣ

ಭಾರತೀಯ ಸಂವಿಧಾನವು ಕೇವಲ ಆಡಳಿತ ವ್ಯವಸ್ಥೆಯಲ್ಲ, ಮಾನವೀಯ ಮೌಲ್ಯಗಳ ಪ್ರತಿಬಿಂಬವೂ ಹೌದು. ಪ್ರತಿಯೊಬ್ಬ ನಾಗರಿಕನ ಸಮಾನತೆ, ಸ್ವಾತಂತ್ರ್ಯ ಮತ್ತು ಗೌರವವನ್ನು ಕಾಪಾಡುವ ಉದ್ದೇಶದಿಂದ ಮೂಲಭೂತ ಹಕ್ಕುಗಳನ್ನು ಅಳವಡಿಸಲಾಗಿದೆ. ಈ ಹಕ್ಕುಗಳು ವ್ಯಕ್ತಿಯ ಸರ್ವಾಂಗೀಣ ಅಭಿವೃದ್ಧಿಗೆ ಭದ್ರತೆಯನ್ನು ಒದಗಿಸುತ್ತವೆ.

ಸಂವಿಧಾನದಲ್ಲಿ ಅಡಕವಾಗಿರುವ 6 ಮೂಲಭೂತ ಹಕ್ಕುಗಳು ಈ ಕೆಳಗಿನಂತಿವೆ.

1. ಸಮಾನತೆಯ ಹಕ್ಕು (Right to equality) (ವಿಧಿಗಳು 14, 15, 16, 17 ಮತ್ತು 18)

ಸಂವಿಧಾನದ 14,15,16,17 ಮತ್ತು 18ನೇ ವಿಧಿಗಳು ಸಮಾನತೆಯ ಹಕ್ಕಿನ ಕುರಿತು ವಿವರಣೆಗಳನ್ನು ಒದಗಿಸುತ್ತವೆ. ಪ್ರಜಾಪ್ರಭುತ್ವ ಯಶಸ್ವಿಯಾಗಬೇಕಾದರೆ ಸಮಾನತೆ ಬೇಕು. ಭಾರತದ ಸಂವಿಧಾನದ ಪಿತೃಗಳು ಸಹ ಭಾರತೀಯರು ಎಲ್ಲರೂ ಸಮಾನರು ಎಂಬ ತತ್ವಕ್ಕೆ ಮಹತ್ವ ನೀಡಿದ್ದಾರೆ. ಸಮಾನತೆ ಹಕ್ಕು ಈ ಕೆಳಕಂಡ ವಿಧಿಗಳನ್ನು ಒಳಗೊಂಡಿದೆ.

a. ಕಾನೂನಿನ ಮುಂದೆ ಸಮಾನತೆ:

ಸಂವಿಧಾನದ 14ನೇ ವಿಧಿಯ ಪ್ರಕಾರ ಯಾವುದೇ ವ್ಯಕ್ತಿಗೆ ಕಾನೂನಿನ ದೃಷ್ಟಿಯಲ್ಲಿ ರಾಜ್ಯವು ತಾರತಮ್ಯ ಮಾಡುವಂತಿಲ್ಲ. ಎಲ್ಲಾ ಪ್ರಜೆಗಳಿಗೂ ಸಮಾನತೆಯನ್ನು ಒದಗಿಸಬೇಕು. ಯಾವುದೇ ಜಾತಿ, ಲಿಂಗ, ವರ್ಣ, ಜನಾಂಗ, ಜನ್ಮಸ್ಥಳ, ಪಂಗಡ, ಬುಡಕಟ್ಟು ವರ್ಗ ಇತ್ಯಾದಿಗಳ ಆಧಾರದ ಮೇಲೆ ಭೇಧ-ಭಾವ ಮಾಡುವಂತಿಲ್ಲ. ಕಾನೂನಿನ ರಕ್ಷಣೆ ಎಲ್ಲರಿಗೂ ಇದೆ. ಕಾನೂನು ಎಲ್ಲರಿಗೂ ಸಮಾನವಾಗಿ ಹಂಚಿಕೆಯಾಗಿದೆ. ಈ ಹಕ್ಕುಗಳನ್ನು ಸರ್ಕಾರವೇನಾದರೂ ಕಿತ್ತುಕೊಳ್ಳಲು ಯತ್ನಿಸಿದರೆ ಕಾನೂನಿನ ಮೊರೆ ಹೋಗಲು ಅವಕಾಶ ಇದೆ. ಸಂವಿಧಾನದ 361ನೇ ವಿಧಿಯ ಪ್ರಕಾರ ಭಾರತದ ರಾಷ್ಟ್ರಪತಿ ಅಥವಾ ರಾಜ್ಯಪಾಲರು ಹಾಗೂ ವಿದೇಶಗಳ ಕಾರ್ಯಾಂಗೀಯ ಮುಖ್ಯಸ್ಥರು ಅಥವಾ ರಾಯಭಾರಿಗಳಿಗೆ ಈ ವಿಧಿಯು ವಿನಾಯಿತಿಯನ್ನು ನೀಡಿದೆ.

b. ವಿಧಿ 15 ತಾರತಮ್ಯ ನಿಷೇಧ:

ಸಂವಿಧಾನದ 15ನೇ ವಿಧಿಯ ಪ್ರಕಾರ ಧರ್ಮ, ಕುಲ, ಜಾತಿ, ಲಿಂಗ, ಹಾಗೂ ಜನ್ಮಸ್ಥಳದ ಆಧಾರದ ಮೇಲೆ ರಾಜ್ಯವು ಪಕ್ಷಪಾತ ಮಾಡುವಂತಿಲ್ಲ. ಇವುಗಳ ಆಧಾರದ ಮೇಲೆ ಸಾರ್ವಜನಿಕ ಸ್ಥಳಗಳು, ಅಂಗಡಿಗಳು, ಹೋಟೆಲುಗಳು, ಸಾರ್ವಜನಿಕ ಮನರಂಜನಾ ಪ್ರದೇಶಗಳು, ಸಾರ್ವಜನಿಕ ರೆಸ್ಟೋರೆಂಟುಗಳು, ಕುಡಿಯುವ ನೀರಿನ ಬಾವಿಗಳು, ರಸ್ತೆಗಳು, ದೇವಾಲಯಗಳು ಇವೇ ಮೊದಲಾದವುಗಳಿಗೆ ಪ್ರವೇಶ ನಿರಾಕರಿಸುವಂತಿಲ್ಲ. ಈ ಎಲ್ಲವುಗಳನ್ನು ಎಲ್ಲರೂ ಸಮಾನವಾಗಿ ಅನುಭವಿಸಲು ಅವಕಾಶವಿದೆ. ಮತ್ತು ವಿಶೇಷ ಕ್ರಮಗಳ ಮೂಲಕ ಮಹಿಳೆಯರ, ಮಕ್ಕಳ, ಪರಿಶಿಷ್ಠ ಜಾತಿ ಹಾಗೂ ಪರಿಶಿಷ್ಠ ವರ್ಗಗಳ ಜನಾಂಗದವರಿಗೆ ಈ ಮೇಲ್ಕಂಡ ಸ್ಥಳಗಳಿಗೆ ಮುಕ್ತವಾಗಿ ಪ್ರವೇಶವನ್ನು ನೀಡಬೇಕು. ಯಾವುದೇ ನಿರ್ಬಂಧವನ್ನು ಮಾಡಕೂಡದು. ಪರಿಶಿಷ್ಠ ಜಾತಿ ಮತ್ತು ವರ್ಗದವರ ನೇಮಕಾತಿಯಲ್ಲಿಯೂ ಯಾವುದೇ ಅಡೆತಡೆಗಳನ್ನು ಒಡ್ಡಕೂಡದು.

c. ವಿಧಿ 16 ಅವಕಾಶಗಳ ಸಮಾನತೆ:

ಸಂವಿಧಾನದ 16ನೇ ವಿಧಿಯ ಪ್ರಕಾರ ಭಾರತದ ಪ್ರತಿಯೊಬ್ಬ ಪೌರನೂ ಸಹ ಸರ್ಕಾರಿ ಸೇವೆಗೆ ಸೇರಲು ಅರ್ಹನಾಗುತ್ತಾನೆ. ಧರ್ಮ, ಕುಲ, ಜಾತಿ, ವರ್ಣ, ಹುಟ್ಟು, ಸ್ಥಾನಮಾನಗಳ ಆಧಾರದ ಮೇಲೆ ಯಾವುದೇ ತಾರತಮ್ಯ ಎಸಗದೇ ನೇಮಕಾತಿಗಳನ್ನು ಮಾಡುವುದು. ಅರ್ಹತೆಯ ಆಧಾರದ ಮೇಲೆ ಅವರಿಗೆ ನೌಕರಿಯನ್ನು ನೀಡುವುದು ಸರ್ಕಾರದ ಆದ್ಯ ಕರ್ತವ್ಯವಾಗಿದೆ. ನೇಮಕಾತಿ ಸಂದರ್ಭದಲ್ಲಿ ಜೇಷ್ಠತೆಯನ್ನು ಗಣನೆಗೆ ತೆಗೆದುಕೊಳ್ಳುವ ಭರವಸೆಯನ್ನು ಸಂವಿಧಾನದಲ್ಲಿ ನೀಡಲಾಗಿದೆ. ಆದರೆ ಧಾರ್ಮಿಕ ಸಂಸ್ಥೆಗಳ ನೇಮಕಾತಿಗೆ ಸಂವಿಧಾನದ 16ನೇ ವಿಧಿ ಅನ್ವಯವಾಗುವುದಿಲ್ಲವೆಂಬುದನ್ನು ಗಮನಿಸಬೇಕಾದ ವಿಷಯವಾಗಿದೆ. ಆಯಾ ಜಾತಿಗೆ ನೀಡಿದ ಮೀಸಲಾತಿಯಲ್ಲಿ ಯಾವುದೇ ಬದಲಾವಣೆಗಳಾಗದಂತೆ ಕ್ರಮ ಕೈಗೊಳ್ಳಬೇಕು. ಆದರೆ ಅಲ್ಪ ಸಂಖ್ಯಾತರು ನಡೆಸುವ ವಿದ್ಯಾಸಂಸ್ಥೆಗಳಿಗೆ ಇದರಿಂದ ವಿನಾಯಿತಿ ಇದೆ.

d. ವಿಧಿ 17 ಅಸ್ಪೃಶ್ಯತೆ ನಿರ್ಮೂಲನೆ:

ಸಂವಿಧಾನದ 17ನೇ ವಿಧಿಯ ಪ್ರಕಾರ ಭಾರತದಲ್ಲಿ ಅಸ್ಪೃಶ್ಯತೆಯನ್ನು ನಿಷೇಧಿಸಲಾಗಿದೆ. ಅಸ್ಪೃಶ್ಯತೆಯ ಆಚರಣೆಯು ಶಿಕ್ಷಾರ್ಹ ಅಪರಾಧವಾಗಿದೆ. ಸಾವಿರಾರು ವರ್ಷಗಳಿಂದ ಸಾಮಾಜಿಕ ತುಳಿತಕ್ಕೆ ಒಳಗಾಗಿದ್ದ ದಲಿತರನ್ನು ಮೇಲೆತ್ತುವುದೇ ಸಂವಿಧಾನದ ಪ್ರಥಮ ಗುರಿಯಾಗಿದೆ. ಸ್ವಾತಂತ್ರ್ಯ ಚಳುವಳಿಯ ಕಾಲದಲ್ಲಿಯೇ ಮಹಾತ್ಮಾ ಗಾಂಧೀಜಿಯವರು ಅಸ್ಪೃಶ್ಯತಾ ನಿವಾರಣೆಗೆ ಅವಿರತ ಹೋರಾಟ ಮಾಡಿದರು. ಅವರ ಪ್ರಯತ್ನದ ಫಲವಾಗಿ ಸಂವಿಧಾನದ 17ನೇ ವಿಧಿಯಲ್ಲಿ ಅಸ್ಪೃಶ್ಯತಾ ಆಚರಣೆಯನ್ನು ಕಡ್ಡಾಯವಾಗಿ ನಿಷೇಧ ಮಾಡಲಾಯಿತು. ಸಂವಿಧಾನದ ಪ್ರಕಾರ

  1. ಸಾರ್ವಜನಿಕ ಸ್ಥಳಗಳಲ್ಲಿ ಅಸ್ಪೃಶ್ಯರಿಗೆ ಪ್ರವೇಶವನ್ನು ನಿರಾಕರಿಸುವಂತಿಲ್ಲ.
  2. ದೇವಾಲಯಗಳ ಪ್ರವೇಶ ಹಾಗೂ ಪೂಜೆಯನ್ನು ನಿರಾಕರಣೆ ಮಾಡುವ ಹಾಗಿಲ್ಲ.
  3. ಅಂಗಡಿ, ಹೋಟೆಲ್‌, ಸಾರ್ವಜನಿಕ ಮನರಂಜನಾ ಸ್ಥಳ, ಬಾವಿಗಳು, ರಸ್ತೆಗಳು ಹಾಗೂ ಸ್ಮಶಾನ ಮುಂತಾದವುಗಳಿಗೆ ಅಸ್ಪೃಶ್ಯರಿಗೆ ಪ್ರವೇಶ ನೀಡುವುದು.
  4. ನಿಮ್ನ ಜಾತಿಯ ಜನರೆಂದು ಹೀಗಳೆಯುವಂತಿಲ್ಲ ಮತ್ತು ಅಸ್ಪ್ರಶ್ಯತೆಯನ್ನು ಪುರಸ್ಕರಿಸಬಾರದು.
  5. ಅಸ್ಪೃಶ್ಯತೆ ಆಚರಣೆ ಸರಿಯಾಗಿದೆ ಮತ್ತು ಕ್ರಮಬದ್ಧವಾಗಿದೆ ಎಂದು ಹೇಳುವಂತಿಲ್ಲ.

ಈ ನಿಯಮಗಳನ್ನು ಉಲ್ಲಂಘಿಸಿದವರಿಗೆ 1955ರ ಕಾಯ್ದೆ ಅನ್ವಯ ಶಿಕ್ಷೆಯನ್ನು ವಿಧಿಸಲು ಅವಕಾಶವಿದೆ. ಅಸ್ಪೃಶ್ಯತಾ ಆಚರಣೆಗೆ ಬೆಂಬಲ ನೀಡಿದ ಅಪರಾಧಿಯನ್ನು ಸಂಸತ್ತು ಅಥವಾ ರಾಜ್ಯ ಶಾಸಕಾಂಗದ ಚುನಾವಣೆಯಲ್ಲಿ ಆಯ್ಕೆಯಾಗದಂತೆ ತಡೆಹಿಡಿಯಬಹುದು. 1989 ರಲ್ಲಿ ಸಂಸತ್ತಿನಿಂದ ಅಂಗೀಕಾರ ಪಡೆದ ಪರಿಶಿಷ್ಠ ಜಾತಿ ಜನಾಂಗದ ಮೇಲಿನ ದೌರ್ಜನ್ಯಗಳ ನಿಷೇಧ ಕಾಯ್ದೆ ಜನವರಿ 30 1990 ರಿಂದ ಜಾರಿಗೆ ಬಂದಿದೆ.

e. ವಿಧಿ 18 ಬಿರುದುಗಳ ರದ್ಧತಿ:

ಸಂವಿಧಾನದ 18ನೇ ವಿಧಿಯಂತೆ ರಾಜ್ಯವು ಯಾರಿಗೂ ಬಿರುದು ಬಾವಲಿಗಳನ್ನು ನೀಡುವುದಾಗಲೀ, ಭಾರತೀಯ ಪೌರನು ವಿದೇಶಿಗಳಿಂದ ಯಾವುದೇ ಬಿರುದು ಬಾವಲಿಗಳನ್ನು ಪಡೆಯುವುದನ್ನು ಕಡ್ಡಾಯವಾಗಿ ನಿಷೇಧಿಸಿದೆ. ಭಾರತ ಸರ್ಕಾರದ ಸೇವೆಯಲ್ಲಿರುವ ವಿದೇಶಿಯನು ಸಹ ಭಾರತ ಸರ್ಕಾರದ ಅನುಮತಿಯನ್ನು ಪಡೆಯದೇ ಬಿರುದುಗಳನ್ನು ಸ್ವೀಕರಿಸುವಂತಿಲ್ಲ. ಆದರೆ ಮಿಲಿಟರಿ ಹಾಗೂ ಶೈಕ್ಷಣಿಕ ಕ್ಷೇತ್ರಗಳಿಗೆ ಈ ನಿಯಮ ಅನ್ವಯಿಸುವುದಿಲ್ಲ. ಅರ್ಹವಾದವರಿಗೆ ಬಿರುದುಗಳನ್ನು ನೀಡಬಹುದಾಗಿದೆ. ಸಾಮಾಜಿಕ ಕ್ಷೇತ್ರಗಳಲ್ಲಿ ದುಡಿದವರಿಗೆ ರಾಷ್ಟ್ರಪತಿಗಳು ಭಾರತರತ್ನ, ಪದ್ಮಶ್ರೀ, ಪದ್ಮಭೂಷಣ, ಪದ್ಮವಿಭೂಷಣಗಳನ್ನು ನೀಡಿ ಗೌರವಿಸುತ್ತಾರೆ. ಸೈನಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದವರಿಗೆ ಪರಮವೀರ ಚಕ್ರ, ಮಹಾವೀರ ಚಕ್ರ, ಹಾಗೂ ವೀರಚಕ್ರಗಳನ್ನು ನೀಡಲಾಗುತ್ತದೆ. ಇವೆಲ್ಲವುಗಳು ಬಿರುದುಗಳಲ್ಲ ಗೌರವ ಸೂಚಕವಾಗಿವೆ. 1977 ರಲ್ಲಿ ಮುರಾರ್ಜಿ ದೇಸಾಯಿಯವರು ಈ ಬಿರುದು ನೀಡುವ ಪದ್ಧತಿಯನ್ನು ರದ್ದುಗೊಳಿಸಿದ್ದರು. ಶ್ರೀಮತಿ ಇಂದಿರಾ ಗಾಂಧಿಯವರು 1980 ರಲ್ಲಿ ಮತ್ತೆ ಪ್ರಧಾನಿಯಾದ ನಂತರ ಬಿರುದು ನೀಡುವ ಪದ್ಧತಿಯನ್ನು ಪುನರಾರಂಭಿಸಿದರು.

2. ಸ್ವಾತಂತ್ರ್ಯದ ಹಕ್ಕು (Right to freedom) (ವಿಧಿಗಳು 19, 20, 21 ಮತ್ತು 22)

ವ್ಯಕ್ತಿಯ ವಿಕಾಸಕ್ಕೆ ಸ್ವಾತಂತ್ರ್ಯ ಅಗತ್ಯ. ಸ್ವಾತಂತ್ರ್ಯವಿಲ್ಲದ ವ್ಯಕ್ತಿಯ ಜೀವನ ಅರ್ಥರಹಿತವಾದುದು. ಸಂವಿಧಾನದ 19, 20, 21 ಹಾಗೂ 22ನೇ ವಿಧಿಗಳು ಸ್ವಾತಂತ್ರ್ಯ ಹಕ್ಕಿನ ಬಗ್ಗೆ ವಿವರಗಳನ್ನು ನೀಡುತ್ತವೆ. ಈ ನಾಲ್ಕು ವಿಧಿಗಳು ವೈಯಕ್ತಿಕ ಸ್ವಾತಂತ್ರ್ಯದ ಚಾರ್ಟರನಂತೆ ಇದ್ದು ಮೂಲಭೂತ ಹಕ್ಕುಗಳ ಭಾಗದ ಬೆನ್ನೆಲುಬಿನಂತಿವೆ. ಇವುಗಳಲ್ಲಿ 19ನೇ ವಿಧಿಯು ಅತ್ಯಂತ ಮಹತ್ವವಾಗಿದ್ದು ಇದರಲ್ಲಿ ಸ್ವಾತಂತ್ರ್ಯದ ವಿವಿಧತೆಗಳನ್ನು ವಿವರಿಸಲಾಗಿದೆ. ಇದರಲ್ಲಿ ಒಟ್ಟೂ 6 ಮೂಲಭೂತ ಸ್ವಾತಂತ್ರ್ಯಗಳಿದ್ದು ಇವುಗಳನ್ನು ಈ ಕೆಳಗಿನಂತೆ ನೋಡೋಣ,

a. ವಾಕ್ ಸ್ವಾತಂತ್ರ್ಯ ಅಥವಾ ಅಭಿಪ್ರಾಯ ಸ್ವಾತಂತ್ರ್ಯ: (Freedom of speech and expression)

ಭಾರತದ ಸಂವಿಧಾನದ ಪ್ರಸ್ತಾವನೆಯು ಪ್ರಜೆಗಳಿಗೆ ವಾಕ್‌ ಸ್ವಾತಂತ್ರ್ಯ ಮತ್ತು ಅಭಿಪ್ರಾಯ ಸ್ವಾತಂತ್ರ್ಯವನ್ನು ನೀಡಿದೆ. ಇದರ ಪ್ರಕಾರ ವ್ಯಕ್ತಿ ತನ್ನ ವಿಚಾರ, ಅಭಿಪ್ರಾಯ ಹಾಗೂ ನಂಬಿಕೆಗಳನ್ನು ವ್ಯಕ್ತಪಡಿಸಬಹುದು. ಮಾತು, ಬರಹ, ಚಿತ್ರಕಲೆ ಮುಂತಾದ ರೂಪದಲ್ಲಿ ವ್ಯಕ್ತಿಯು ತನ್ನ ಅಭಿಪ್ರಾಯವನ್ನು ತಿಳಿಯಪಡಿಸುತ್ತಾನೆ. ಇದರ ಜೊತೆಗೆ ಪತ್ರಿಕಾ ಸ್ವಾತಂತ್ರ್ಯ ಹಾಗೂ ವಾಣಿಜ್ಯ ಜಾಹಿರಾತು ಸ್ವಾತಂತ್ರ್ಯ ಸಹ ಈ ವಿಧಿಯ ಮೂಲಕ ಪ್ರಜೆಗಳಿಗೆ ಸಿಗುತ್ತವೆ.

b. ಶಾಂತವಾಗಿ ಮತ್ತು ಶಸ್ತ್ರರಹಿತ ಸಭೆ ಸೇರುವ ಸ್ವಾತಂತ್ರ್ಯ: ( Freedom to assemble peacefully and without arms)

ಭಾರತದ ಪ್ರಜೆಗಳಿಗೆ ಶಾಂತಿಯುತವಾಗಿ ಮತ್ತು ಶಸ್ತ್ರರಹಿತವಾಗಿ ಸಭೆ ಸಮಾರಂಭಗಳಲ್ಲಿ ಭಾಗವಹಿಸಲು ಈ ವಿಧಿಯು ಅವಕಾಶ ನೀಡುತ್ತದೆ. ಸಾರ್ವಜನಿಕ ಹಿತದೃಷ್ಟಿಯಿಂದ ಅಥವಾ ಸಾರ್ವಜನಿಕ ಹಿತಾಸಕ್ತಿಯ ಹಿತದೃಷ್ಟಿಯಿಂದ ಇದು ಅಗತ್ಯವಾಗಿದೆ. ಮೆರವಣಿಗೆ ಹಮ್ಮಿಕೊಳ್ಳಲು ಮತ್ತು ಸಾರ್ವಜನಿಕ ಪ್ರದರ್ಶನ ಏರ್ಪಡಿಸಲು ಅವಕಾಶ ಕಲ್ಪಿಸಲಾಗಿದೆ. ಆದರೆ ಪ್ರತಿಭಟನೆಗೋಸ್ಕರ ಸಭೆ ಸೇರುವುದನ್ನು ನಿರ್ಬಂಧಿಸಲಾಗಿದೆ.

c. ಸಂಘಗಳನ್ನು ಸ್ಥಾಪಿಸುವ ಸ್ವಾತಂತ್ರ್ಯ: (Freedom to form associations)

ಭಾರತದ ಪ್ರಜೆಗಳು ತಮ್ಮ ಸ್ವಹಿತಾಸಕ್ತಿಯನ್ನು ಕಾಪಾಡಿಕೊಳ್ಳಲೋಸುಗ ವಿವಿಧ ಸಂಘಗಳು ಮತ್ತು ಸಹಕಾರಿ ಸಂಘಗಳನ್ನು ಸ್ಥಾಪಿಸಿಕೊಂಡು ತನ್ಮೂಲಕ ಅಭಿವೃದ್ಧಿಯನ್ನು ಹೊಂದಲು ಈ ಸ್ವಾತಂತ್ರ್ಯ ಅವಕಾಶ ನೀಡುತ್ತದೆ. ಉದಾ: ರಾಜಕೀಯ ಕ್ಲಬ್‌, ಕಂಪನಿಗಳು, ಶೇರುದಾರರ ಸಂಸ್ಥೆ, ಕಾರ್ಮಿಕ ಸಂಘಗಳನ್ನು ಸ್ಥಾಪಿಸಿಕೊಂಡು ಅವುಗಳನ್ನು ನಿರ್ವಹಿಸಿಕೊಂಡು ಹೋಗಲು ಅವಕಾಶವಿದೆ. ಕಾನೂನಾತ್ಮಕವಾದ ಗುರಿ ಮತ್ತು ಉದ್ದೇಶಗಳಿಗಾಗಿ ಸಂಘ-ಸಂಸ್ಥೆಗಳನ್ನು ಸ್ಥಾಪಿಸಿಕೊಳ್ಳಲು ಸಂವಿಧಾನದಲ್ಲಿ ಅವಕಾಶವಿದ್ದು, ದೇಶದ ಸಾರ್ವಭೌಮತೆ ಹಾಗೂ ಸಾರ್ವಜನಿಕ ಶಾಂತಿಗೆ ಭಂಗ ತರುವಂತಹ ಸಂಘಗಳನ್ನು ರದ್ದುಗೊಳಿಸುವ ಅಧಿಕಾರ ಸರ್ಕಾರಕ್ಕಿದೆ.

d. ಸಂಚರಿಸುವ ಸ್ವಾತಂತ್ರ್ಯ (Freedom to move)

ಭಾರತೀಯ ಪ್ರಜೆಗಳು ದೇಶದ ಯಾವುದೇ ಮೂಲೆಗಳಲ್ಲಿ ಮುಕ್ತವಾಗಿ ಸಂಚರಿಸುವ ಅವಕಾಶವನ್ನು ಈ ಸ್ವಾತಂತ್ರ್ಯವು ನೀಡಿದೆ. ಪ್ರಜೆಯೊಬ್ಬನು ಭಾರತ ಒಕ್ಕೂಟದ ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಮತ್ತು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಸಂಚರಿಸುವ ಸ್ವಾತಂತ್ರ್ಯವನ್ನು ಪಡೆದಿದ್ದಾನೆ. ಆದರೆ ಸಾರ್ವಜನಿಕ ಹಿತಾಸಕ್ತಿ ಹಾಗೂ ಬುಡಕಟ್ಟು ಜನಾಂಗಗಳ ವಿಶಿಷ್ಠ ಸಂಸ್ಕೃತಿಯ ರಕ್ಷಣೆಗಾಗಿ ಸಂಚರಿಸುವ ಸ್ವಾತಂತ್ರ್ಯದ ಮೇಲೆ ಸರ್ಕಾರ ನಿರ್ಬಂಧ ಹೇರಿದೆ.

e. ವಾಸದ ಸ್ವಾತಂತ್ರ್ಯ: (Freedom to reside)

ಭಾರತೀಯ ಪ್ರಜೆಗಳು ದೇಶದ ಯಾವುದೇ ಭಾಗಗಳಲ್ಲಾದರೂ ವಾಸಿಸುವ ಹಕ್ಕನ್ನು ಪಡೆದಿದ್ದಾರೆ. ಕೆಲವರು ಖಾಯಂ ಆಗಿ ವಾಸಿಸುತ್ತಿದ್ದರೆ ಇನ್ನೂ ಕೆಲವೊಬ್ಬರು ತಾತ್ಕಾಲಿಕ ವಾಸಸ್ಥಳದಲ್ಲಿ ನೆಲೆಸಿದ್ದಾರೆ. ಹೀಗಾಗಿ ದೇಶದ ಏಕತೆ ಮತ್ತು ಭಾಷಾ ಪ್ರೇಮವನ್ನು ಬೆಳೆಸಲು ಈ ಸ್ವಾತಂತ್ರ್ಯ ನೆರವಾಗುತ್ತದೆ. ಆದರೆ ಸರ್ಕಾರವು ಸಾರ್ವಜನಿಕ ಹಿತಾಸಕ್ತಿ ಹಾಗೂ ಬುಡಕಟ್ಟು ಹಿತಾಸಕ್ತಿ ದೃಷ್ಟಿಯಿಂದ ವಾಸಮಾಡುವ ಸ್ವಾತಂತ್ರ್ಯದ ಮೇಲೆ ನಿರ್ಬಂಧ ಹೇರಿದೆ.

f. ವೃತ್ತಿ ಮತ್ತು ಉದ್ಯೋಗದ ಸ್ವಾತಂತ್ರ್ಯ: (Freedeom of employment)

ದೇಶದ ಪ್ರಜೆಗಳು ತಮಗೆ ಸರಿಕಂಡ ಉದ್ಯೋಗವನ್ನು ಪಡೆಯುವ ಸ್ವಾತಂತ್ರ್ಯವನ್ನು ಹೊಂದಿದ್ದಾರೆ. ವೃತ್ತಿ ಸ್ವಾತಂತ್ರ್ಯವು ಬಹು ವಿಶಾಲವಾಗಿದ್ದು ಪ್ರಜೆಗಳು ತಮಗಿಷ್ಟವಾದ ಯಾವುದೇ ಕಸುಬು, ವ್ಯಾಪಾರ ಅಥವಾ ಚಟುವಟಿಕೆಗಳನ್ನು ಹೊಂದಿ ತನ್ಮೂಲಕ ಉತ್ತಮ ಜೀವನ ನಿರ್ವಹಿಸಲು ಅನುವು ಮಾಡಿ ಕೊಡುತ್ತದೆ. ಮಕ್ಕಳ ಮಾರಾಟ, ಮಾದಕ ವಸ್ತುಗಳ ಮಾರಾಟ, ಸ್ಫೋಟಕ ವಸ್ತುಗಳ ಮಾರಾಟ ಮುಂತಾದ ಸಾರ್ವಜನಿಕ ಹಿತಾಸಕ್ತಿಗೆ ಮಾರಕವಾದ ವೃತ್ತಿಗಳನ್ನು ಸರ್ಕಾರವು ನಿರ್ಬಂಧಿಸುತ್ತದೆ.

3. ಶೋಷಣೆಯ ವಿರುದ್ಧ ಹಕ್ಕು (Right against exploitation)

ಸಾವಿರಾರು ವರ್ಷಗಳಿಂದಲೂ ಸಾಮ್ರಾಜ್ಯಶಾಹಿ ಹಾಗೂ ಊಳಿಗಮಾನ್ಯ ಪದ್ಧತಿಗಳನ್ನು ಅನುಭವಿಸಿಕೊಂಡು ಬಂದಿರುವ ಭಾರತದಲ್ಲಿ ಶೋಷಣೆಯೆನ್ನುವುದು ಒಂದು ಸಾಮಾಜಿಕ ಪಿಡುಗಾಗಿ ಪರಿಣಮಿಸಿದೆ. ಇಂತಹ ಪಿಡುಗನ್ನು ನಿರ್ಮೂಲನೆಗೊಳಿಸಲು ಸಂವಿಧಾನದಲ್ಲಿ ಶೋಷಣೆಯ ವಿರುದ್ಧದ ಹಕ್ಕನ್ನು ಅಳವಡಿಸಿರುವುದು ಅತ್ಯಂತ ಸಂತೋಷಕರವಾದ ಸಂಗತಿಯಾಗಿದೆ. ತಾರತಮ್ಯವನ್ನು ಹೋಗಲಾಡಿಸಿ ವೈಯಕ್ತಿಕ ಸ್ವಾತಂತ್ರ್ಯವನ್ನು ರಕ್ಷಿಸಲು ಈ ಕಾಯಿದೆ ತುಂಬಾ ಸಹಾಯಕವಾಗಿದೆ. ಸಂವಿಧಾನದ 23 ಹಾಗೂ 24 ನೇ ವಿಧಿಗಳು ಈ ಹಕ್ಕಿನ ಬಗ್ಗೆ ವಿವರಣೆಗಳನ್ನು ಒಳಗೊಂಡಿವೆ.

1. ಅನೈತಿಕ ವ್ಯವಹಾರ ತಡೆ ಕಾಯಿದೆ: (Immortal traffic prevention act 1956 )

1956 ರಲ್ಲಿ ಸಂಸತ್ತು ಅನೈತಿಕ ತಡೆ ಕಾಯಿದೆಯನ್ನು ಅಂಗೀಕರಿಸಿ ವೇಶ್ಯಾವೃತ್ತಿಯನ್ನು ನಿಷೇಧಿಸಿದೆ. ಇದನ್ನು ಮತ್ತೆ 1978 ಹಾಗೂ 1986 ರಲ್ಲಿ ತಿದ್ದುಪಡಿ ಮಾಡಿ ಹೊಸದಾಗಿ ಮೇಲಿನ ಹೆಸರನ್ನು ನೀಡಲಾಯಿತು. ವೇಶ್ಯಾವೃತ್ತಿಗಾಗಿ ಮಕ್ಕಳನ್ನು ಬಳಸುವ ವ್ಯಕ್ತಿಗೆ ಜೀವಾವಧಿ ಶಿಕ್ಷೆಯನ್ನು ಅಥವಾ ಏಳು ವರ್ಷಗಳ ಕನಿಷ್ಠ ಜೈಲುವಾಸ ವಿಧಿಸಲಾಗುವುದು. ಇಂಡಿಯನ್‌ ಪೀನಲ್‌ ಕೋಡ್‌ ನ ಪ್ರಕಾರ 18 ವರ್ಷ ವಯಸ್ಸಿಗಿಂತ ಕಡಿಮೆ ಇರುವ ಹೆಣ್ಣು ಮಕ್ಕಳನ್ನು ಅನೈತಿಕ ವ್ಯವಹಾರಗಳಿಗೆ ಮಾರಾಟ ಮಾಡಿದರೆ ಅದು ಅಕ್ಷಮ್ಯ ಅಪರಾಧವಾಗುತ್ತದೆ.

2. ವರದಕ್ಷಿಣೆ ನಿಷೇಧ ಕಾಯಿದೆ: (Anti dowry act 1961)

1961 ರ ವರದಕ್ಷಿಣೆ ನಿಷೇಧ ಕಾಯಿದೆಯನ್ನು ಭಾರತ ಸಂಸತ್ತು 1984, 1985 ಹಾಗೂ 1986 ರಲ್ಲಿ ತಿದ್ದುಪಡಿಗೊಳಿಸಿ ವರದಕ್ಷಿಣೆಗಾಗಿ ಸಾವು ಉಂಟಾದರೆ ಇಂಡಿಯನ್‌ ಪೀನಲ್‌ ಕೋಡ್‌ ನ ಸೆಕ್ಷನ್‌ 304 ಬಿ ಪ್ರಕಾರ ಅಕ್ಷಮ್ಯ ಅಪರಾಧವಾಗುತ್ತದೆ. ಈ ಸೆಕ್ಷನ್‌ ಪ್ರಕಾರ ವರದಕ್ಷಿಣೆ ಸಾವಿಗೆ ಕಾರಣರಾದವರು ಕನಿಷ್ಟ 7 ವರ್ಷಗಳ ಕಾಲ ಕಠಿಣವಾದ ಶಿಕ್ಷೆಯನ್ನು ಅನುಭವಿಸಬೇಕು.

3. ಮಹಿಳೆಯರ ಅಶ್ಲೀಲ ಚಿತ್ರ ನಿಷೇಧ ಕಾಯಿದೆ: (The indecent representation of women prohibition act)

ಈ ಕಾಯಿದೆಯ ಪ್ರಕಾರ ಬಲವಂತವಾಗಿ ಮಹಿಳೆಯರ ಅಶ್ಲೀಲ ಚಿತ್ರಗಳನ್ನು ಪ್ರಕಟಿಸುವುದು ಅಪರಾಧವಾಗುತ್ತದೆ.

4. ಸತಿ ನಿಷೇಧ ಕಾಯಿದೆ (Sati prevention act 1987)

1987 ಸೆಪ್ಟೆಂಬರ್‌ 4 ರಂದು 18 ವರ್ಷ ವಯಸ್ಸಿನ ರೂಪ ಕನ್ವರ್‌ ಎಂಬುವವರನ್ನು ಬಲವಂತವಾಗಿ ರಾಜಸ್ಥಾನದ ಸಿಕಾರ ಜಿಲ್ಲೆಯ ದಿಯೊರಾಲಾ ಗ್ರಾಮದಲ್ಲಿ ಸತಿ ಸಹಗಮನಕ್ಕೆ ದೂಡಲಾಯಿತು. ಇದು ದೇಶದಾದ್ಯಂತ ಸಾಮಾಜಿಕ ಕ್ರಾಂತಿಯನ್ನೇ ಎಬ್ಬಿಸಿತು. ಈ ಘಟನೆಯಿಂದ ದಿಗ್ಭ್ರಮೆಗೊಂಡ ರಾಜಸ್ಥಾನ ಸರ್ಕಾರ ಸತಿ ತಡೆ ಸುಗ್ರೀವಾಜ್ಞೆಯನ್ನು ಹೊರಡಿಸಿತು. ನಂತರ ಕೇಂದ್ರ ಸಂಸತ್ತು 1987 ರ ಡಿಸೆಂಬರ್‌ ನಲ್ಲಿ ಮಸೂದೆಯನ್ನು ಅಂಗೀಕರಿಸಿ ಸತಿ ಪದ್ದತಿಯ ನಿಷೇಧಕ್ಕೆ ಕಠಿಣ ಕ್ರಮ ಕೈಗೊಂಡಿತು. ಈ ಕಾಯಿದೆಯ ಪ್ರಕಾರ ಸತಿ ಪದ್ದತಿಯನ್ನು ಪ್ರೇರೇಪಿಸುವವರಿಗೆ ಮರಣದಂಡನೆ ಅಥವಾ ಜೀವಾವಧಿ ಶಿಕ್ಷೆಯನ್ನು ವಿಧಿಸಲು ಅವಕಾಶವಿದೆ.

5. ಕೌಟುಂಬಿಕ ದೌರ್ಜನ್ಯ ನಿಷೇಧ ಕಾಯಿದೆ (Domestic violence prevention act 2005 ) : 2005 ರಲ್ಲಿ ಕೌಟುಂಬಿಕ ದೌರ್ಜನ್ಯ ಕಾಯಿದೆ ಜಮ್ಮು-ಕಾಶ್ಮೀರವನ್ನು ಹೊರತುಪಡಿಸಿ ಎಲ್ಲಾ ರಾಜ್ಯಗಳಲ್ಲಿ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಜಾರಿಗೆ ಬಂದಿತು. ಈ ಕಾಯಿದೆಯ ಪ್ರಕಾರ ದೈಹಿಕ ಅಥವಾ ಮಾನಸಿಕ ಹಿಂಸೆ ಮತ್ತು ವರದಕ್ಷಿಣೆ ಅಥವಾ ಆಸ್ತಿಗಾಗಿ ಕಿರುಕುಳ ಕೊಡುವುದು ಕೌಟುಂಬಿಕ ದೌರ್ಜನ್ಯವಾಗುತ್ತದೆ. 

4. ಧಾರ್ಮಿಕ ಸ್ವಾತಂತ್ರ್ಯದ ಹಕ್ಕು: (Right to freedom religion)

ಸಂವಿಧಾನದ 25 ರಿಂದ 28 ನೇ ವಿಧಿಗಳು ಪೌರರ ಧಾರ್ಮಿಕ ಸ್ವಾತಂತ್ರ್ಯದ ಬಗ್ಗೆ ವಿವರಣೆಯನ್ನು ನೀಡುತ್ತದೆ. ಸಂವಿಧಾನದಲ್ಲಿ ಘೋಷಿಸಲಾದ ಜಾತ್ಯಾತೀತತೆಯ ಉದ್ದೇಶಗಳನ್ನು ಈ ವಿಧಿಗಳು ಈಡೇರಿಸಿವೆ ಎಂದು ಹೇಳಬಹುದು. ಭಾರತವೊಂದು ಜಾತ್ಯಾತೀತ ದೇಶ. ರಾಜ್ಯಕ್ಕೆ ತನ್ನದೇ ಆದ ಯಾವ ಧರ್ಮವೂ ಇಲ್ಲ. ಸರ್ಕಾರ ಯಾವ ಧರ್ಮವನ್ನೂ ಪ್ರೋತ್ಸಾಹಿಸುವುದಿಲ್ಲ. ಜನರು ತಮಗೆ ಸರಿಕಂಡ ಧರ್ಮವನ್ನು ಪಾಲಿಸುವ ಹಾಗೂ ತಮಗಿಷ್ಟವಾದ ದೇವರನ್ನು ಪೂಜಿಸುವ ಹಕ್ಕನ್ನು ಹೊಂದಿದ್ದಾರೆ. ಸಾರ್ವಜನಿಕ ಶಿಸ್ತು, ನೀತಿ, ಆರೋಗ್ಯ ಹಾಗೂ ಸಂವಿಧಾನದ ಮೂರನೇ ಭಾಗದಲ್ಲಿರುವ ನಿಯಮಗಳಿಗೆ ಧಕ್ಕೆಯಾಗದಂತೆ ತಮಗೆ ಸರಿ ತೋರಿದ ಧರ್ಮವನ್ನು ಪಾಲಿಸಿ ಪ್ರಚಾರ ಮಾಡಲು ಸ್ವಾತಂತ್ರ್ಯವಿದೆ.

a. ವಿಧಿ 25 ಧಾರ್ಮಿಕ ಶ್ರದ್ಧೆಪಾಲನೆ ಮತ್ತು ಪ್ರಚಾರದ ಸ್ವಾತಂತ್ರ್ಯ:

ಈ ವಿಧಿಯ ಅನ್ವಯ ಪ್ರತಿಯೊಬ್ಬ ಭಾರತೀಯ ಪೌರನು ತನ್ನ ಮನಸ್ಸಿಗೆ ಸರಿಯೆನಿಸಿದ ಯಾವುದೇ ಧರ್ಮವನ್ನು ಸ್ವೀಕರಿಸುವ, ಪಾಲಿಸುವ ಮತ್ತು ಪ್ರಚಾರ ಮಾಡುವ ಸ್ವಾತಂತ್ರ್ಯವನ್ನು ಹೊಂದಿದ್ದಾನೆ. ಆದರೆ ಸಾರ್ವಜನಿಕ ಶಿಸ್ತು, ಶಾಂತಿ, ಹಾಗೂ ನೈರ್ಮಲ್ಯಕ್ಕೆ ಧಕ್ಕೆ ತರುವುದಾಗಲೀ ಅಥವಾ ಮತಾಂತರಕ್ಕೆ ಒತ್ತಾಯಿಸುವುದಾಗಲೀ ಹಾಗೂ ಮತಾಂತರಕ್ಕೆ ಹಣಕಾಸಿನ ಅಥವಾ ಇನ್ನಿತರ ಯಾವುದೇ ಆಮಿಷ ಒಡ್ಡುವುದಾಗಲೀ ಮಾಡುವಂತಿಲ್ಲ.

b. ವಿಧಿ 26 ಧಾರ್ಮಿಕ ವ್ಯವಹಾರಗಳನ್ನು ನಿರ್ವಹಿಸುವ ಸ್ವಾತಂತ್ರ್ಯ:

ಸಂವಿಧಾನದ 26ನೇ ವಿಧಿಯ ಪ್ರಕಾರ ಸಾರ್ವಜನಿಕ ಶಿಸ್ತು, ನೀತಿ ಹಾಗೂ ನೈರ್ಮಲ್ಯಕ್ಕೆ ಒಳಪಟ್ಟು ಪ್ರತಿಯೊಂದು ಧಾರ್ಮಿಕ ಸಂಸ್ಥೆ ಧಾರ್ಮಿಕ ಮತ್ತು ಚಾರಿಟೇಬಲ್‌ ಉದ್ದೇಶಗಳಿಗೆ ಸಂಸ್ಥೆಗಳನ್ನು ಸ್ಥಾಪಿಸಿ ನಿರ್ವಹಿಸಬಹುದು. ಅದು ತನ್ನ ಧರ್ಮದ ವಿಷಯದ ಕುರಿತು ಮೇಲ್ವಿಚಾರಣೆ ಮಾಡಬಹುದು. ಸ್ಥಿರ ಹಾಗೂ ಚರಾಸ್ಥಿಗಳನ್ನೂ ರಕ್ಷಿಸಬಹುದು ಮತ್ತು ಸಂಪಾದಿಸಬಹುದು. ಇವೆಲ್ಲವುಗಳನ್ನೂ ಕಾನೂನಿಗೆ ಅನುಸಾರವಾಗಿ ನಿರ್ವಹಿಸಬೇಕು. ಆದರೆ ಸಾರ್ವಜನಿಕ ಶಿಸ್ತಿಗೆ ಭಂಗ ತರುವಂತೆ ಇರಬಾರದು.

c. ವಿಧಿ 27 ಧಾರ್ಮಿಕ ತೆರಿಗೆ ನೀಡುವ ಸ್ವಾತಂತ್ರ್ಯ:

ಈ ವಿಧಿಯ ಪ್ರಕಾರ ಧರ್ಮಪ್ರಚಾರಕ್ಕೆ, ಧರ್ಮರಕ್ಷಣೆಗೆ, ಧಾರ್ಮಿಕ ಸಂಸ್ಥೆಯನ್ನು ಪೋಷಿಸಲು ತೆರಿಗೆ ಅಥವಾ ವಂತಿಕೆ ನೀಡಬೇಕೆಂದು ಯಾವುದೇ ವ್ಯಕ್ತಿಯನ್ನು ಒತ್ತಾಯಪೂರ್ವಕವಾಗಿ ಪೀಡಿಸುವಂತಿಲ್ಲ.

d. ವಿಧಿ 28 ಶಿಕ್ಷಣ ಸಂಸ್ಥೆಗಳಲ್ಲಿ ಧಾರ್ಮಿಕ ಬೋಧನೆಯ ಸ್ವಾತಂತ್ರ್ಯ:

ಸಂವಿಧಾನದ 28ನೇ ವಿಧಿಯ ಅನ್ವಯ ಧಾರ್ಮಿಕ ಬೋಧನೆಯನ್ನು ರಾಜ್ಯ ನಿಯಂತ್ರಿತ ಶಿಕ್ಷಣ ಸಂಸ್ಥೆಗಳಲ್ಲಿ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಹಾಗೆಯೇ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಸಂಪೂರ್ಣ ಸಹಾಯಧನ ಪಡೆಯುವ ಶಿಕ್ಷಣ ಸಂಸ್ಥೆಗಳಲ್ಲಿ ಪೂರ್ವಾನುಮತಿಯನ್ನು ಪಡೆಯದೆ ಧಾರ್ಮಿಕ ಬೋಧನೆಯನ್ನೂ ಕಡ್ಡಾಯವಾಗಿ ನಿಷೇಧಿಸಿದೆ.

5. ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಹಕ್ಕು: (ವಿಧಿ 29 ಮತ್ತು 30)

a. ವಿಧಿ 29 ಅಲ್ಪಸಂಖ್ಯಾತರ ಹಿತಾಸಕ್ತಿಗಳ ರಕ್ಷಣೆ:

ಸಂವಿಧಾನದ ಈ ವಿಧಿಯು ಭಾರತದ ಯಾವುದೇ ಮೂಲೆಯಲ್ಲಿ ವಾಸಿಸುವ ಯಾವುದೇ ವರ್ಗದ ಪ್ರಜೆಗಳು ತಮ್ಮದೇ ಆದ ಭಾಷೆ, ಲಿಪಿ, ಸಂಸ್ಕೃತಿಯನ್ನು ಹೊಂದಿದ್ದರೆ ಅವುಗಳನ್ನು ರಕ್ಷಿಸಿಕೊಳ್ಳುವ ಹಾಗೂ ಅಭಿವೃದ್ಧಿಪಡಿಸುವ ಹಕ್ಕನ್ನು ಹೊಂದಿದ್ದಾರೆ. ಇದರಿಂದ ಧಾರ್ಮಿಕ ಅಥವಾ ಭಾಷಾ ಅಲ್ಪಸಂಖ್ಯಾತ ಪ್ರಜೆಗಳ ಸಮುದಾಯದ ರಕ್ಷಣೆಗೆ ಭರವಸೆ ದೊರಕಿದೆ. ಮುಂದುವರೆದು ರಾಜ್ಯ ನಿಯಂತ್ರಿತ ಅಥವಾ ರಾಜ್ಯದಿಂದ ಅನುದಾನ ಪಡೆಯುತ್ತಿರುವ ಶಾಲಾ-ಕಾಲೇಜುಗಳಲ್ಲಿ ಭಾಷೆ, ಜನಾಂಗ, ಜಾತಿ, ಧರ್ಮಗಳ ಆಧಾರದ ಮೇಲೆ ಪ್ರವೇಶ ನಿರಾಕರಿಸಕೂಡದು ಎಂದು ತಿಳಿಸಿದೆ.

b. ವಿಧಿ 30 ಅಲ್ಪಸಂಖ್ಯಾತರು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಹಾಗೂ ನಿರ್ವಹಿಸುವ ಹಕ್ಕು:

ಈ ವಿಧಿಯು ಹೇಳುವಂತೆ ಭಾರತದಲ್ಲಿ ಭಾಷಾ ಅಲ್ಪಸಂಖ್ಯಾತರು ಹಾಗೂ ಧಾರ್ಮಿಕ ಅಲ್ಪಸಂಖ್ಯಾತರು ತಾವು ಬಯಸುವ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಮತ್ತು ನಿರ್ವಹಣೆಗೆ ಮಾಡುವ ಅಧಿಕಾರವನ್ನು ಹೊಂದಿದ್ದಾರೆ. ಅನುದಾನ ಹಂಚಿಕೆಯ ಸಮಯದಲ್ಲಿ ಸರ್ಕಾರವು ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳ ವಿಷಯದಲ್ಲಿ ಯಾವುದೇ ತಾರತಮ್ಯವನ್ನು ಮಾಡುವಂತಿಲ್ಲ. ಮತ್ತು ಆ ಸಂಸ್ಥೆಗಳ ಸ್ವರೂಪಕ್ಕೆ ಘಾಸಿ ಮಾಡುವಂತಿಲ್ಲ. ಅಲ್ಲಿನ ವಿದ್ಯಾರ್ಥಿಗಳಿಗೆ ತಮ್ಮ ಬೋಧನಾ ಮಾಧ್ಯಮದ ಆಯ್ಕೆಗೆ ಸ್ವಾತಂತ್ರ್ಯವನ್ನು ನೀಡಬೇಕು. 2007 ರಲ್ಲಿ ನಡೆದ ಮೊಕದ್ದಮೆಯೊಂದರ ತೀರ್ಪಿನಲ್ಲಿ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲು, ಆಡಳಿತ ಮಂಡಳಿಯನ್ನು ಹೊಂದಲು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳನ್ನು ನೇಮಿಸಿಕೊಳ್ಳಲು ಹಾಗೂ ಸಂಸ್ಥೆಯ ಹಿತದೃಷ್ಠಿಯಯಿಂದ ಆಸ್ತಿಯನ್ನು ಹೊಂದಲು ಅವಕಾಶ ಕಲ್ಪಿಸಲಾಗಿದೆ.

6. ಸಂವಿಧಾನಾತ್ಮಕ ಪರಿಹಾರ ಹಕ್ಕು (Right to constitutional remedies) ( ವಿಧಿ 32)

ಒಬ್ಬ ವ್ಯಕ್ತಿ ಮೂಲಭೂತ ಹಕ್ಕುಗಳನ್ನು ಪರಿಣಾಮಕಾರಿಯಾಗಿ ಅನುಭವಿಸಬೇಕಾದರೆ ಅವನಿಗೆ ನ್ಯಾಯಾಲಯದ ರಕ್ಷಣೆ ಬೇಕು. ನಮ್ಮ ಸಂವಿಧಾನ ಮೂಲಭೂತ ಹಕ್ಕುಗಳನ್ನು ನೀಡಿರುವುದು ಮಾತ್ರವಲ್ಲದೆ ಅವುಗಳಿಗೆ ಧಕ್ಕೆ ಆಗದ ರೀತಿಯಲ್ಲಿ 32 ನೇ ವಿಧಿಯಲ್ಲಿ ಪರಿಹಾರಗಳನ್ನು ಸೂಚಿಸಿದೆ. ಈ ಹಕ್ಕಿನ ಪ್ರಕಾರ ಜನರು ತಮ್ಮ ಮೂಲಭೂತ ಹಕ್ಕುಗಳಿಗೆ ಧಕ್ಕೆಯುಂಟಾದರೆ ನ್ಯಾಯಾಲಯಗಳಿಗೆ ಮೊರೆ ಹೋಗಬಹುದು. ಹಕ್ಕುಗಳ ರಕ್ಷಣೆಗಾಗಿ ನ್ಯಾಯಾಲಯಕ್ಕೆ ಹೋಗಲು ಇರುವ ಅವಕಾಶವನ್ನೇ ಸಂವಿಧಾನಾತ್ಮಕ ಪರಿಹಾರದ ಹಕ್ಕು ಎಂದು ಕರೆಯಲಾಗಿದೆ. 32ನೇ ವಿಧಿಯನ್ನು ಬಿ. ಆರ್.‌ ಅಂಬೇಡ್ಕರ್‌ ಬಹುವಾಗಿ ಮೆಚ್ಚಿ ಈ ರೀತಿ ಹೇಳಿದರು “ ಸಂವಿಧಾನದ ಅತ್ಯಂತ ಪ್ರಮುಖವಾದ ವಿಧಿ ಯಾವುದೆಂದು ನನ್ನನ್ನು ಕೇಳಿದರೆ ನಾನು 32 ನೇ ವಿಧಿಯೆಂದು ಹೇಳುತ್ತೇನೆ. ಅದು ಸಂವಿಧಾನದ ಆತ್ಮ ಮತ್ತು ಹೃದಯವಿದ್ದಂತೆ.” ಈ ವಿಧಿಯನ್ನು 3 ನೇ ಭಾಗದಲ್ಲಿ ಸೇರಿಸಿರುವುದರಿಂದ ಪರಿಹಾರದ ಹಕ್ಕು ಮೂಲಭೂತ ಹಕ್ಕಾಗಿದೆಯೆಂದು ಸುಪ್ರೀಂಕೋರ್ಟ್‌ 1950, 1959, 1963 ರಲ್ಲಿ ತಿಳಿಸಿತು. ಈ ವಿಧಿಯ ಅನ್ವಯ ಸುಪ್ರೀಂಕೋರ್ಟ್‌ ಮೂಲಭೂತ ಹಕ್ಕುಗಳ ರಕ್ಷಣೆಗೆ ಈ ಕೆಳಗಿನ ರಿಟ್‌ ಅರ್ಜಿಗಳನ್ನು ಸ್ವೀಕರಿಸಬೇಕು ಅವುಗಳೆಂದರೆ,

a. ಹೇಬಿಯಸ್‌ ಕಾರ್ಪಸ್‌ (ಬಂಧಿ ಪ್ರತ್ಯಕ್ಷೀಕರಣ) (Habeas corpus)

ಬಂಧಿತನಾಗಿರುವ ವ್ಯಕ್ತಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ಸಂಬಂಧಿಸಿದ ವ್ಯಕ್ತಿಗೆ ನ್ಯಾಯಾಲಯವು ಕೊಡುವ ಆಜ್ಞೆಯನ್ನು ಹೇಬಿಯಸ್‌ ಕಾರ್ಪಸ್‌ ಅಥವಾ ಬಂಧಿ ಪ್ರತ್ಯಕ್ಷೀಕರಣ ಎಂದು ಕರೆಯಲಾಗುತ್ತದೆ. ಬಂಧಿತನಾದ ವ್ಯಕ್ತಿ ಯಾವುದೇ ತಪ್ಪು ಮಾಡದಿದ್ದಲ್ಲಿ ಅವನನ್ನು ಬಿಡುಗಡೆಗೊಳಿಸುವಂತೆ ಆದೇಶಿಸುತ್ತದೆ. ಆದರೆ ಕ್ರಿಮಿನಲ್‌ ಅಪರಾಧಕ್ಕೆ ಸಂಬಂಧಿಸಿದಂತೆ ಬಂಧಿತನಾದ ವ್ಯಕ್ತಿಯನ್ನು ಬಿಡುಗಡೆಗೆ ಈ ಮೇಲಿನ ರಿಟ್‌ ಆದೇಶವನ್ನು ಹೊರಡಿಸುವಂತಿಲ್ಲ.

b. ಮ್ಯಾಂಡಮಸ್‌ (ಪರಮಾದೇಶ) (Mandamus)

ಒಬ್ಬ ಸರ್ಕಾರಿ ಅಧಿಕಾರಿಯು ತನ್ನ ಕರ್ತವ್ಯವನ್ನು ಸಮರ್ಪಕವಾಗಿ ನಿರ್ವಹಿಸದೆ ಅದರಿಂದ ಸಾರ್ವಜನಿಕರಿಗೆ ತೊಂದರೆಯಾಗುವಂತಿದ್ದರೆ ತೊಂದರೆಗೆ ಒಳಗಾದ ವ್ಯಕ್ತಿಗಳು ಆತನ ವಿರುದ್ಧ ನ್ಯಾಯಾಲಯದ ಮೊರೆ ಹೋಗಬಹುದು. ಆಗ ನ್ಯಾಯಾಲಯವು ಕರ್ತವ್ಯ ಚ್ಯುತಿಯನ್ನುಂಟು ಮಾಡಿದ ಅಧಿಕಾರಿಗೆ ಸಮರ್ಪಕವಾಗಿ ಕಾರ್ಯನಿರ್ವಹಿಸುವಂತೆ ಆದೇಶವನ್ನು ನೀಡುತ್ತದೆ. “ ಇದನ್ನೇ ಮ್ಯಾಂಡಮಸ್‌ ಅಥವಾ ಪರಮಾದೇಶ ಎಂದು ಕರೆಯಲಾಗಿದೆ.”  

c. ಪ್ರೊಹಿಬಿಷನ್‌ (ಪ್ರತಿಬಂಧಕಾಜ್ಞೆ) ( prohibition)

ಕೆಳ ನ್ಯಾಯಾಲಯವು ತನಗೆ ಇಲ್ಲದ ಅಧಿಕಾರವನ್ನು ಚಲಾಯಿಸದಂತೆ ತಡೆಯಲು ಮೇಲಿನ ನ್ಯಾಯಾಲಯವು ಹೊರಡಿಸುವ ತಡೆಯಾಜ್ಞೆಯನ್ನು ಪ್ರೊಹಿಬಿಷನ್‌ ಎಂದು ಕರೆಯಲಾಗುತ್ತದೆ.

d. ಸರ್ಪಿಯೊರರಿ (ಉತ್ಪ್ರೇಕ್ಷಣಾ) (Cerfiorari)

ಕೆಳಗಿನ ನ್ಯಾಯಾಲಯವು ಅಧಿಕಾರ ವ್ಯಾಪ್ತಿ ಮೀರಿ ತೀರ್ಪು ನೀಡಿದ್ದಾದರೆ ಅಂತಹ ತೀರ್ಪನ್ನು ರದ್ದುಪಡಿಸಿ ಸಂಬಂಧಿಸಿದ ಮೊಕದ್ದಮೆಯನ್ನು ಕಳುಹಿಸಬೇಕೆಂದು ಅಥವಾ ವರ್ಗಾಯಿಸಬೇಕೆಂದು ಸುಪ್ರೀಂಕೋರ್ಟ್‌ ಕೆಳ ನ್ಯಾಯಾಲಯಕ್ಕೆ ಕೊಡುವ ಆದೇಶವಾಗಿದೆ.

e. ಕೋ ವಾರಂಟೋ (ಅಧಿಕಾರ ಪುಬ್ಲಾ) (Quo warranto)

ಕಾನೂನು ಬಾಹಿರವಾಗಿ ಅಥವಾ ಅಕ್ರಮವಾಗಿ ಯಾವುದೇ ಒಬ್ಬ ವ್ಯಕ್ತಿ ಸಾರ್ವಜನಿಕ ಅಧಿಕಾರ ಸ್ಥಾನವನ್ನು ವಶಪಡಿಸಿಕೊಂಡರೆ ಆ ವ್ಯಕ್ತಿಯ ವಿರುದ್ಧ ಈ ಅರ್ಜಿಯನ್ನು ಸಲ್ಲಿಸಬಹುದು. ಅದರಂತೆ ಆ ವ್ಯಕ್ತಿ ಯಾವ ಆಧಾರದ ಮೇಲೆ ಅಧಿಕಾರವನ್ನು ಅಪಹರಿಸಿಕೊಂಡಿದ್ದನೆಂದು ಕರೆ ನೀಡುವ ಆಜ್ಞೆಯೇ ಇದಾಗಿದೆ.

  • ಸಂವಿಧಾನದ 33 ನೇ ವಿಧಿಯನ್ವಯ ಸಂಸತ್ತು ಕಾಯಿದೆ ರಚಿಸುವ ಮೂಲಕ ಸೈನಿಕ ದಳಗಳ ಮೂಲಭೂತ ಹಕ್ಕನ್ನು ಮೊಟಕುಗೊಳಿಸುವ ಅಥವಾ ನಿರ್ಬಂಧಿಸುವ ಅಧಿಕಾರವನ್ನು ಪಡೆದಿದೆ. ಅದರಂತೆ 1950 ರಲ್ಲಿ ವಾಯುದಳ ಹಾಗೂ ಭೂದಳ ಕಾನೂನು, 1957 ರ ನೌಕಾದಳ ಕಾನೂನುಗಳು ಸಂವಿಧಾನದ 3 ನೇ ಭಾಗದ ಮೂಲಭೂತ ಹಕ್ಕುಗಳು ರಾಷ್ಟ್ರದ ಮಿಲಿಟರಿ ಹಾಗೂ ಪೋಲಿಸ್‌ ಸೇವೆಯಲ್ಲಿರುವವರಿಗೆ ಅನ್ವಯಿಸುವುದಿಲ್ಲ. ಹೀಗಾಗಿ ಅವರುಗಳು ಸಂಘ ಸಂಸ್ಥೆಗಳನ್ನು ಕಟ್ಟುವ ಅಥವಾ ಅವುಗಳಲ್ಲಿ ಸದಸ್ಯರಾಗುವ, ಸಭೆಯಲ್ಲಿ ಭಾಷಣ ಮಾಡುವ ಹಾಗೂ ರಾಜಕೀಯ ಚಟುವಟಿಕೆಗಳಲ್ಲಿ ಭಾಗವಹಿಸುವ ಕಾರ್ಯಗಳಲ್ಲಿ ನಿರತರಾಗುವಂತಿಲ್ಲ.
  • ಸಂವಿಧಾನದ 34 ನೇ ವಿಧಿಯ ಅನ್ವಯ ಮಾರ್ಷಲ್‌ ಕಾಯಿದೆ ಜಾರಿಯಲ್ಲಿರುವ ಭಾರತದ ಯಾವುದೇ ಭಾಗದಲ್ಲಿ ಮೂಲಭೂತ ಹಕ್ಕುಗಳನ್ನು ನಿರ್ಬಂಧಿಸಲು ಅವಕಾಶವಿದೆ.
  • ಸಂವಿಧಾನದ 35 ನೇ ವಿಧಿಯ ಪ್ರಕಾರ ಸಂಸತ್ತು ಮೂಲಭೂತ ಹಕ್ಕುಗಳ ಅನುಭವಿಸುವಿಕೆಗೆ ಸಂಬಂಧಿಸಿದ ಸರ್ಕಾರಿ ಅಧಿಕಾರಿಗಳು ಹಾಗೂ ಮಿಲಿಟರಿಯವರು ಹೊಂದಬೇಕೆ? ಅಥವಾ ಬೇಡವೇ ಎಂಬುದರ ಬಗ್ಗೆ ಶಾಸನ ಮಾಡುವ ಅಧಿಕಾರ ಪಡೆದಿದೆ.

ಉಪಸಂಹಾರ

ಮೂಲಭೂತ ಹಕ್ಕುಗಳು ಭಾರತೀಯ ಪ್ರಜಾಪ್ರಭುತ್ವದ ಜೀವಾಳವಾಗಿವೆ. ಇವು ನಾಗರಿಕರಿಗೆ ಕೇವಲ ಸ್ವಾತಂತ್ರ್ಯವನ್ನಷ್ಟೇ ಅಲ್ಲ, ಕಾನೂನಾತ್ಮಕ ರಕ್ಷಣೆಯನ್ನೂ ಒದಗಿಸುತ್ತವೆ. ಹಕ್ಕುಗಳ ಅರಿವು ಪ್ರಜ್ಞಾವಂತ ನಾಗರಿಕನ ಲಕ್ಷಣವಾಗಿದ್ದು, ಅವುಗಳ ಸರಿಯಾದ ಬಳಕೆ ಸಮಾಜದ ಸಮತೋಲನಕ್ಕೆ ಅಗತ್ಯವಾಗಿದೆ. ಆದುದರಿಂದ ಪ್ರತಿಯೊಬ್ಬರೂ ತಮ್ಮ ಹಕ್ಕುಗಳ ಜೊತೆಗೆ ಕರ್ತವ್ಯಗಳನ್ನೂ ಅರಿತು ನಡೆದುಕೊಳ್ಳಬೇಕು.

ಮೂಲಭೂತ ಹಕ್ಕುಗಳ ಪರಿಕಲ್ಪನೆ ಮತ್ತು ಲಕ್ಷಣಗಳು

“ಸಂವಿಧಾನದಲ್ಲಿ ಅಳವಡಿಸಿರುವ ಮೂಲಭೂತ ಹಕ್ಕುಗಳಿಗೂ ಮತ್ತು ಅವುಗಳನ್ನು ಪ್ರಜೆಗಳು ವಾಸ್ತವವಾಗಿ ಅನುಭವಿಸುತ್ತಿರುವುದಕ್ಕೂ ಬಹಳಷ್ಟು ಅಂತರವಿದೆ.”  – ನಾರಿಮನ್. ಡಿ. ಪಾಮರ್

ಮೂಲಭೂತ ಹಕ್ಕುಗಳ ಪರಿಕಲ್ಪನೆ:

“ಯಾವ ಹಕ್ಕುಗಳಿಲ್ಲದೆ ಒಬ್ಬ ಪ್ರಜೆಯು ತನ್ನ ಜೀವನವನ್ನು ನಡೆಸಲು ಸಾಧ್ಯವಾಗುವುದಿಲ್ಲವೋ ಅಂತಹ ಹಕ್ಕುಗಳನ್ನು ಮೂಲಭೂತ ಹಕ್ಕುಗಳು ಎಂದು ಕರೆಯಲಾಗುತ್ತದೆ.ʼ ಜಗತ್ತಿನ ಪ್ರತಿಯೊಂದು ದೇಶಗಳು ತಮ್ಮ ಪ್ರಜೆಗಳಿಗೆ ಸಂವಿಧಾನದ ಮೂಲಕವೇ ಮೂಲಭೂತ ಹಕ್ಕುಗಳನ್ನು ನೀಡಿವೆ. ಈ ಮೂಭೂತ ಹಕ್ಕುಗಳು ಎಲ್ಲಾ ಕಾನೂನು, ನ್ಯಾಯಾಂಗದ ತೀರ್ಮಾನ, ಕಾರ್ಯಾಂಗದ ಆದೇಶಗಳಿಗಿಂತ ಶ್ರೇಷ್ಠ ಹಾಗೂ ಉನ್ನತವಾದವುಗಳಾಗಿವೆ. ಈ ಹಕ್ಕುಗಳನ್ನು ಯಾರಿಂದಲೂ ಕಸಿದುಕೊಳ್ಳುವುದಾಗಲೀ ಅಥವಾ ಮೊಟುಕುಗೊಳಿಸುವುದಾಗಲೀ ಸಾಧ್ಯವಿಲ್ಲ. ಮೂಲಭೂತ ಹಕ್ಕುಗಳು ಎಷ್ಟು ಪ್ರಾಮುಖ್ಯತೆ ಪಡೆದುಕೊಂಡಿವೆಯೆಂದರೆ ಶಾಸಕಾಂಗವು ಮಾಡುವ ಯಾವುದೇ ಕಾನೂನು ಮೂಲಭೂತ ತತ್ವಗಳಿಗೆ ವಿರುದ್ಧವಾದರೆ ಅಂತಹ ಕಾನೂನನ್ನು ಸಂವಿಧಾನಬಾಹಿರ ಎಂದು ಪರಿಗಣಿಸಲಾಗುತ್ತದೆ. ವಿಶ್ವದ ಮೊದಲ ಮಹಾಯುದ್ಧದ ನಂತರ ವಿಶ್ವದ ವಿವಿಧ ದೇಶಗಳು ತಮ್ಮ ಪ್ರಜೆಗಳ ಮೂಲಭೂತ ಹಕ್ಕುಗಳಿಗಾಗಿ ಹೋರಾಟ ನಡೆಸಿದವು. ವಿಶ್ವಸಂಸ್ಥೆ ಸಹ ಮಾನವ ಹಕ್ಕುಗಳ ಘೋಷಣೆಯನ್ನು ಡಿಸೆಂಬರ್‌ 10, 1948 ರಂದು ಅಂಗೀಕರಿಸಿತು. ಹಾಗೆಯೇ ಭಾರತದ ಸಂವಿಧಾನವು ಆರಂಭದಲ್ಲಿ 7 ಮೂಲಭೂತ ಹಕ್ಕುಗಳನ್ನು ನೀಡಿತ್ತು. ಆದರೆ 1978ರ 44ನೇ ತಿದ್ದುಪಡಿ ಮೂಲಕ ಆಸ್ತಿಯ ಹಕ್ಕನ್ನು ತೆಗೆದು ಹಾಕಲಾಯಿತು. ಈಗ ಒಟ್ಟು 6 ಮೂಲಭೂತ ಹಕ್ಕುಗಳು ಚಾಲ್ತಿಯಲ್ಲಿವೆ.

ಮೂಲಭೂತ ಹಕ್ಕುಗಳ ಲಕ್ಷಣಗಳು (Characterstics of fundamental rights)

ಭಾರತೀಯ ಸಂವಿಧಾನದಲ್ಲಿ ಪ್ರಜೆಗಳಿಗೆ ನೀಡಲಾದ ಮೂಲಭೂತ ಹಕ್ಕುಗಳು ತನ್ನದೇ ಅದ ಗುಣಲಕ್ಷಣಗಳನ್ನು ಹೊಂದಿವೆ. ಈ ಲಕ್ಷಣಗಳ ಆಧಾರದ ಮೇಲೆ ಮೂಲಭೂತ ಸ್ವರೂಪವನ್ನು ಅರಿಯಬಹುದು.

1. ಸಾರ್ವತ್ರಿಕತೆ: (Universal)

ಭಾರತದಲ್ಲಿ ಜನಿಸಿರುವ ಎಲ್ಲಾ ಪ್ರಜೆಗಳಿಗೆ ಅನ್ವಯವಾಗುವ ರೀತಿಯಲ್ಲಿ ಮೂಲಭೂತ ಹಕ್ಕುಗಳನ್ನು ಭಾರತದ ಸಂವಿಧಾನದಲ್ಲಿ ಪ್ರಸ್ತಾಪಿಸಲಾಗಿದೆ. ಯಾವುದೇ ಜಾತಿ, ಧರ್ಮ, ಲಿಂಗ, ಭಾಷೆ, ಪ್ರದೇಶ ಹಾಗೂ ಸ್ಥಾನಮಾನಗಳ ಆಧಾರದ ಮೇಲೆ ತಾರತಮ್ಯವನ್ನು ಮಾಡದೆ ದೇಶದ ಎಲ್ಲಾ ಪೌರರಿಗೂ ಸಮಾನವಾದ ಹಕ್ಕುಗಳನ್ನು ನೀಡಿದೆ.

2. ಪೌರರಿಂದ ವಿದೇಶಿಯರ ಪ್ರತ್ಯೇಕತೆ:

ಭಾರತದ ಗಡಿಯೊಳಗೆ ನೆಲೆಸಿರುವ ವಿದೇಶಿಯರಿಗೆ ಭಾರತೀಯ ಪೌರರ ಹಕ್ಕುಗಳನ್ನು ನೀಡಲಾಗಿಲ್ಲ. ಸಂವಿಧಾನದ 15, 16, 20 ಹಾಗೂ 29ನೇ ವಿಧಿಯಲ್ಲಿ ಪ್ರಸ್ತಾಪಿಸಲಾಗಿರುವ ಹಕ್ಕುಗಳನ್ನು ಭಾರತೀಯ ಪೌರರಿಗೆ ಮಾತ್ರ ನೀಡಲಾಗಿದೆ. ಉಳಿದ ಹಕ್ಕುಗಳನ್ನು ಮಾತ್ರ ವಿದೇಶಿಯರು ಅನುಭವಿಸಲು ಅವಕಾಶ ನೀಡಲಾಗಿದೆ.

3. ಸವಿಸ್ತಾರ:

ಮೂಲಭೂತ ಹಕ್ಕುಗಳ ಕುರಿತು ಭಾರತದ ಸಂವಿಧಾನದಲ್ಲಿ ಸುಧೀರ್ಘವಾಗಿ ವಿವರಣೆ ನೀಡಲಾಗಿದೆ. ಮೂರನೇ ಭಾಗದ 14 ರಿಂದ 35ನೇ ವಿಧಿಯವರೆಗೆ ಅಂದರೆ 24 ವಿಧಿಗಳನ್ನು ಮೂಲಭೂತ ಹಕ್ಕುಗಳಿಗೆ ಮೀಸಲಿಡಲಾಗಿದೆ. ಅದರಲ್ಲಿ ಮೂಲಭೂತ ಹಕ್ಕಿನ ವ್ಯಾಪ್ತಿ ಹಾಗೂ ಮಿತಿಗಳನ್ನು ಸ್ಪಷ್ಟವಾಗಿ ತಿಳಿಸಲಾಗಿದೆ.

4. ಅಲ್ಪ ಸಂಖ್ಯಾತ ಹಿತರಕ್ಷಣೆಗೆ ಅನುವು:

ಭಾರತದ ಮೂಲಭೂತ ಹಕ್ಕುಗಳಲ್ಲಿ ಅಲ್ಪಸಂಖ್ಯಾತರ ಹಿತರಕ್ಷಣೆಗೆ ಆದ್ಯತೆ ನೀಡಲಾಗಿದೆ. ಅವರಿಗೆ ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಹಕ್ಕನ್ನು ನೀಡಲಾಗಿದೆ. ಅದರಲ್ಲೂ ವಿಶೇಷವಾಗಿ ಧಾರ್ಮಿಕ ಹಕ್ಕನ್ನು ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಮೀಸಲಿಡಲಾಗಿದೆ.

5. ಸಾಮಾಜಿಕ ಮತ್ತು ಆರ್ಥಿಕ ಹಕ್ಕುಗಳ ಕೊರತೆ:

ಭಾರತದ ಸಂವಿಧಾನದಲ್ಲಿ ಪ್ರಜೆಗಳಿಗೆ ನಾಗರಿಕ ಹಕ್ಕು ಹಾಗೂ ಸ್ವಾತಂತ್ರ್ಯಗಳನ್ನು ಮಾತ್ರ ನೀಡಿ ಆಹಾರ, ಆರೋಗ್ಯ, ಉದ್ಯೋಗ, ಸಾಮಾಜಿಕ ಭದ್ರತೆ ಹಾಗೂ ಆರ್ಥಿಕ ಹಕ್ಕುಗಳಿಗೆ ಅಗತ್ಯ ಆದ್ಯತೆಗಳನ್ನು ನೀಡಲಾಗಿಲ್ಲ.

6. ಮಿತಿಗಳ ಹೇರಿಕೆ:

ಭಾರತದ ಸಂವಿಧಾನದಲ್ಲಿ ಪ್ರಜೆಗಳಿಗೆ ನೀಡಲಾದ ಮೂಲಭೂತ ಹಕ್ಕುಗಳು ನಿರಂಕುಶವಾದವುಗಳಲ್ಲ. ಪ್ರತಿಯೊಂದು ಹಕ್ಕು ತನ್ನದೇ ಆದ ಮಿತಿಗಳನ್ನು ಹೊಂದಿದೆ. ಸಾಮಾನ್ಯವಾಗಿ ಸಾರ್ವಜನಿಕ ಶಾಂತಿ, ಕಾನೂನು ವ್ಯವಸ್ಥೆ ಹಾಗೂ ದೇಶದ ಅಖಂಡತೆಯ ಕಾರಣಕ್ಕೆ ಸೂಕ್ತವಾದ ನಿರ್ಬಂಧಗಳನ್ನು ಮೂಲಭೂತ ಹಕ್ಕುಗಳ ವಿಷಯದಲ್ಲಿ ಹೇರಲಾಗಿದೆ.

7. ನ್ಯಾಯಾಂಗ ರಕ್ಷಣೆ:

ಭಾರತದ ಪ್ರಜೆಗಳು ಪಡೆದ ಮೂಲಭೂತ ಹಕ್ಕುಗಳಿಗೆ ನ್ಯಾಯಾಂಗದ ಬೆಂಬಲವಿದೆ. ಪ್ರಜೆಗಳ ಹಕ್ಕುಗಳಿಗೆ ತೊಂದರೆಗಳು ಉಂಟಾಗುತ್ತವೆ ಎಂದೆನಿಸಿದಾಗ ಪ್ರಜೆಯಾದವನು ಉಚ್ಛ ಹಾಗೂ ಸರ್ವೋಚ್ಛ ನ್ಯಾಯಾಲಯಗಳಲ್ಲಿ ಮೊಕದ್ದಮೆಗಳನ್ನು ಹೂಡಬಹುದು. ನ್ಯಾಯಾಲಯಗಳ ಮೂಲಕ ವ್ಯಕ್ತಿಯಾದವನು ತನ್ನ ಹಕ್ಕುಗಳನ್ನು ರಕ್ಷಿಸಿಕೊಳ್ಳಬಹುದು. ನ್ಯಾಯಾಂಗವು ಪ್ರಜೆಗಳ ಹಕ್ಕುಗಳ ರಕ್ಷಣೆಯ ಭರವಸೆಯನ್ನೂ ನೀಡುತ್ತವೆ.

8. ತಿದ್ದುಪಡಿಗೆ ಆಸ್ಪದ:

ಭಾರತದ ಸಂವಿಧಾನದಿಂದ ನೀಡಲ್ಪಟ್ಟ ಮೂಲಭೂತ ಹಕ್ಕುಗಳು ಶಾಶ್ವತವಾದ ರೂಪವನ್ನು ಪಡೆದಿಲ್ಲ. ಅವುಗಳನ್ನು ಸಂದರ್ಭಗಳಿಗನುಗುಣವಾಗಿ ತಿದ್ದುಪಡಿ ಮಾಡಲು ಸಂಸತ್ತಿಗೆ ಅಧಿಕಾರ ನೀಡಲಾಗಿದೆ. ವಿಶೇಷ ಬಹುಮತದೊಂದಿಗೆ ಮೂಲಭೂತ ಹಕ್ಕುಗಳ ತಿದ್ದುಪಡಿ ಮಾಡಬಹುದು. ಉದಾ: ಆಸ್ತಿಯ ಹಕ್ಕನ್ನು ಸಂಸತ್ತು ತಿದ್ದುಪಡಿ ಮಾಡಿ ರದ್ದುಗೊಳಿಸಿತು.

9. ಅಮಾನತಿಗೆ ಅವಕಾಶ:

ಭಾರತದ ಪ್ರಜೆಗಳ ಮೂಲಭೂತ ಹಕ್ಕುಗಳನ್ನು ದೇಶದ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಅಮಾನತ್ತಿನಲ್ಲಿಡಲಾಯಿತು. ಇದರೊಂದಿಗೆ ಸೇನೆಯಲ್ಲಿ ಸೇವೆ ಸಲ್ಲಿಸುವವರ ಹಕ್ಕುಗಳನ್ನು ಸಹ ಸಂಸತ್ತು ರದ್ದುಗೊಳಿಸುವ ಅಧಿಕಾರವನ್ನು ಹೊಂದಿದೆ.

10. ಸಂವಿಧಾನಾತ್ಮಕ ಸ್ಥಾನಮಾನ:                 

ಮೂಲಭೂತ ಹಕ್ಕುಗಳು ಭಾರತದ ಸಂವಿಧಾನದ ಅವಿಭಾಜ್ಯ ಅಂಗಗಳಾಗಿವೆ. ಸಾಮಾನ್ಯ ಶಾಸನಗಳು ಇವುಗಳಿಗೆ ವಿರುದ್ಧವಾದ ಅಂಶಗಳನ್ನು ಒಳಗೊಂಡಿದ್ದರೆ ಅವುಗಳನ್ನು ಸಂವಿಧಾನಬಾಹಿರ ಎಂದು ಪರಿಗಣಿಸಿ ರದ್ದುಗೊಳಿಸಲಾಗುತ್ತದೆ.

ಉಪಸಂಹಾರ

ಒಟ್ಟಿನಲ್ಲಿ, ಮೂಲಭೂತ ಹಕ್ಕುಗಳು ಭಾರತೀಯ ಪ್ರಜಾಪ್ರಭುತ್ವದ ಬಲಿಷ್ಠ ಅಡಿಪಾಯವಾಗಿವೆ. ಇವು ಪ್ರಜೆಗಳಿಗೆ ಸ್ವಾತಂತ್ರ್ಯವನ್ನು ಮಾತ್ರವಲ್ಲ, ಜವಾಬ್ದಾರಿಯುತ ನಾಗರಿಕತ್ವವನ್ನೂ ಕಲಿಸುತ್ತವೆ. ಹಕ್ಕುಗಳೊಂದಿಗೆ ಕರ್ತವ್ಯಗಳ ಅರಿವು ಬೆಳೆಸಿಕೊಂಡಾಗ ಮಾತ್ರ ಸಂವಿಧಾನದ ಆಶಯಗಳು ಸಾಕಾರಗೊಳ್ಳುತ್ತವೆ. ಅದರಿಂದ ಮೂಲಭೂತ ಹಕ್ಕುಗಳ ಜ್ಞಾನವು ಪ್ರತಿಯೊಬ್ಬ ಭಾರತೀಯನಿಗೂ ಅನಿವಾರ್ಯವಾಗಿದೆ.

ಸಂವಿಧಾನದ ಪ್ರಸ್ತಾವನೆ ಮತ್ತು ಅದರ ತಾತ್ವಿಕತೆ

ಸಂವಿಧಾನದ ಪ್ರಸ್ತಾವನೆ ಮತ್ತು ಅದರ ತಾತ್ವಿಕತೆ

“ಪ್ರಸ್ತಾವನೆ ಸಂವಿಧಾನದ ಸತ್ವ. ಇದು ಸಂವಿಧಾನದ ಯೋಗ್ಯತೆಯನ್ನು ಅಳೆಯಲು ಇರುವ ಒಂದು ಅಳತೆಗೋಲು”

  • ಪಂಡಿತ್‌ ಠಾಕೂರ್‌ ದಾಸ್‌ ಭಾರ್ಗವ

ಪೀಠಿಕೆ: ಸಾಮಾನ್ಯವಾಗಿ ದೇಶಾದ್ಯಂತ ಹಲವಾರು ಲೇಖಕರು ಬರೆದ ಗ್ರಂಥಗಳನ್ನು ಅವಲೋಕಿಸಿದಾಗ ಅವುಗಳು ಪೂರ್ವ ಪೀಠಿಕೆಗಳನ್ನು ಒಳಗೊಂಡಿರುತ್ತವೆ. ಈ ಪೀಠಿಕೆಗಳು ಇಡೀ ಗ್ರಂಥದ ಒಳನೋಟವನ್ನು ಒದಗಿಸುತ್ತದೆ. ಹಾಗೇ ಜಗತ್ತಿನ ಪ್ರತಿಯೊಂದು ಸಂವಿಧಾನಗಳು ಪೂರ್ವ ಪೀಠಿಕೆಗಳನ್ನು ಒಳಗೊಂಡಿವೆ. ಹಾಗೆಯೇ ಭಾರತದ ಸಂವಿಧಾನ ರಚನಾಕಾರರು ಉದಾರವಾದಿ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತವನ್ನು ನಿರ್ದೇಶಿಸಲು ಹಾಗೂ ನಿಯಂತ್ರಿಸಲು ತಯಾರಿಸಿದ ಭಾರತ ಸಂವಿಧಾನದಲ್ಲೂ ಪ್ರಸ್ತಾವನೆಯನ್ನು ಅಳವಡಿಸಲು ಮುಂದಾದರು. ಅಮೇರಿಕದ ಸಂವಿಧಾನದ ಪ್ರಸ್ತಾವನೆಯಿಂದ ಪ್ರಭಾವಿತಗೊಂಡ ಭಾರತವೂ ಸಹ ತನ್ನ ಸಂವಿಧಾನದಲ್ಲಿ ಪ್ರಸ್ತಾವನೆಯನ್ನು ಅಳವಡಿಸಿಕೊಂಡಿತು. ಭಾರತದ ಸಂವಿಧಾನದ ಪ್ರಸ್ತಾವನೆಯಲ್ಲಿ ರಷ್ಯಾ ಹಾಗೂ ಫ್ರಾನ್ಸ್‌ ಕ್ರಾಂತಿಯ ಮೌಲ್ಯಗಳನ್ನು ಕಾಣಬಹುದಾಗಿದೆ. ಪ್ರಸ್ತಾವನೆಯಲ್ಲಿ ಸಂವಿಧಾನದ ವಿವಿಧ ಅಂಶಗಳು, ಲಕ್ಷಣಗಳು, ಆದರ್ಶಗಳು ಹಾಗೂ ಗುರಿ ಮತ್ತು ಉದ್ದೇಶಗಳನ್ನು ಸಂಕ್ಷಿಪ್ತವಾಗಿ ವಿವರಿಸಲಾಗಿದೆ. ಸಂವಿಧಾನದ ಪೂರ್ವ ಪೀಠಿಕೆಯನ್ನು “ಸಂವಿಧಾನದ ಮುಖಪುಟ” ಎಂದು ಕರೆಯಲಾಗಿದೆ.

1. ಪ್ರಸ್ತಾವನೆಯ ಅರ್ಥ: (Meaning of the preamble)

ಆಕ್ಸ್ ಫರ್ಡ್‌ ಅಡ್ವಾನ್ಸ್‌ ಲರ್ನರ್‌ ಡಿಕ್ಷನರಿ ಪ್ರಕಾರ ಪ್ರಸ್ತಾವನೆ ಎಂದರೆ ಯಾವುದೇ ಗ್ರಂಥ ಅಥವಾ ಬರಹ ರೂಪದ ದಾಖಲೆಯ ಪರಿಚಯಾತ್ಮಕ ಭಾಗವಾಗಿದೆ. ಸಂವಿಧಾನ ಒಳಗೊಂಡಿರುವ ಮೌಲ್ಯ, ತತ್ವಗಳು, ಸಿದ್ಧಾಂತಗಳು, ಗುರಿಗಳು ಹಾಗೂ ಉದ್ದೇಶಗಳನ್ನು ಸ್ಪಷ್ಟವಾಗಿ ತಿಳಿಸುವ ಸಂವಿಧಾನದ ಸರಳವಾದ ಭಾಗವೇ ಪ್ರಸ್ತಾವನೆ ಎಂದು ಹೇಳಬಹುದು. ಸಾಮಾನ್ಯವಾಗಿ ಪ್ರಸ್ತಾವನೆಯು ಸಂವಿಧಾನ ರಚನಾಕಾರರು ಮಹತ್ವ ನೀಡಿದ ಮೌಲ್ಯಗಳು, ಪಾಲಿಸಿದ ಬಹುಮುಖ್ಯ ತತ್ವಗಳು, ಪ್ರಜೆಗಳು ಹೊಂದಿರಬೇಕಾದ ಹಕ್ಕುಗಳು ಹಾಗೂ ರಾಜ್ಯದ ಸ್ವರೂಪವನ್ನು ಪ್ರತಿಫಲಿಸುತ್ತದೆ.

ಪ್ರಸ್ತಾವನೆಯು ಸಂವಿಧಾನದ ಒಂದು ಭಾಗವಲ್ಲದಿದ್ದರೂ ಪೀಠಿಕೆಯಂತಿದ್ದು ಭಾರತದ ರಾಜಕೀಯ ಚಿತ್ರಣವನ್ನು ಕಣ್ಮುಂದೆ ತರುತ್ತದೆ. ಪ್ರಸ್ತಾವನೆಯನ್ನು ಕೆಲವರು ʻʻಸಂವಿಧಾನದ ಒಡವೆʻʻ ಎಂದರೆ, ಕೆ.ಎಂ. ಮುನ್ಸಿಯವರು ಇದನ್ನು ʻʻರಾಜಕೀಯ ಜಾತಕʻʻ ಎಂದು ಬಣ್ಣಿಸಿದರು.

ಇದರ ಉಲ್ಲಂಘನೆಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲು ಸಾಧ್ಯವಿಲ್ಲದಿದ್ದರೂ ಇದರ ಪ್ರಾಮುಖ್ಯತೆ ಮತ್ತು ಉಪಯುಕ್ತತೆಯನ್ನು ಸುಪ್ರೀಂಕೋರ್ಟ್ ಅನೇಕ ತೀರ್ಪುಗಳಲ್ಲಿ ತಿಳಿಸಿದೆ. ಬೆರುಬಾರಿ ಮೊಕದ್ದಮೆಯಲ್ಲಿ ಸುಪ್ರೀಂಕೋರ್ಟ್ ಪ್ರಸ್ತಾವನೆಯನ್ನು ಸಂವಿಧಾನದ ಭಾಗವೆಂದು ಪರಿಗಣಿಸಲಿಲ್ಲ. ಆದರೆ 1973ರ ಕೇಶವಾನಂದ ಭಾರತಿ ಮೊಕದ್ದಮೆಯಲ್ಲಿ ಪ್ರಸ್ತಾವನೆಯನ್ನು ಸಂವಿಧಾನದ ಭಾಗವೆಂದು ಪರಿಗಣಿಸಿತು. ಇದರಲ್ಲಿ ಉಲ್ಲೇಖಿಸಿರುವ ಪದಗಳು ಅರ್ಥಗರ್ಭಿತವಾಗಿದ್ದು ರಚನಾತ್ಮಕ ತತ್ವಗಳನ್ನು ಮತ್ತು ಭಾವನೆಗಳನ್ನು ಒಳಗೊಂಡಿದೆ.

2. ಪ್ರಸ್ತಾವನೆಯ ಹಿನ್ನೆಲೆ: (Background of the preamble)

ಸಂವಿಧಾನ ರಚನಾ ಸಭೆಯ ಮೊದಲ ಅಧಿವೇಶನದಲ್ಲಿ 1946 ಡಿಸೆಂಬರ್ 13 ರಂದು ಜವಾಹರ್ಲಾಲ್ ನೆಹರು ಅವರು ಧ್ಯೇಯಗಳ ನಿರ್ಣಯಗಳನ್ನು ಮಂಡಿಸಿದರು. ಈ ಧ್ಯೇಯಗಳ ನಿರ್ಣಯವು ಸಂವಿಧಾನ ರಚನಾ ಸಭೆಯು ಯಾವ ತತ್ವಗಳು, ಮೌಲ್ಯಗಳು, ಸಿದ್ಧಾಂತಗಳು ಹಾಗೂ ಗುರಿಗಳನ್ನು ಆಧರಿಸಿ ಸಂವಿಧಾನ ರಚಿಸಬೇಕೆಂಬ ಅಂಶಗಳನ್ನು ಒಳಗೊಂಡಿತ್ತು. ಸಾರ್ವಭೌಮತೆ, ಪ್ರಜಾಪ್ರಭುತ್ವ, ಗಣತಂತ್ರ, ಜನತಾ ಪ್ರಾಧಿಕಾರ, ಸಾಮಾಜಿಕ ಹಾಗೂ ಆರ್ಥಿಕ ನ್ಯಾಯ, ಅಲ್ಪಸಂಖ್ಯಾತ ಹಾಗೂ ಹಿಂದುಳಿದ ವರ್ಗದವರ ರಕ್ಷಣೆ ಮುಂತಾದ ನಿರ್ಣಯಗಳನ್ನು ಸಂವಿಧಾನ ರಚನಾ ಸಭೆಯಲ್ಲಿ ಆಳವಾಗಿ ಚರ್ಚಿಸಲಾಯಿತು. ಮುಂದೆ 1947 ಜನವರಿ 22ರಂದು ಈ ಧ್ಯೇಯಗಳ ನಿರ್ಣಯವನ್ನು ಸಂವಿಧಾನ ರಚನಾ ಸಭೆಯು ಅಂಗೀಕರಿಸಿ ಅದರಂತೆ ಕಾರ್ಯರಂಭ ಮಾಡಿತು. 1947 ಅಕ್ಟೋಬರ್ 17ರಂದು ಧ್ಯೇಯಗಳ ನಿರ್ಣಯದಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಿ ಸಂವಿಧಾನ ರಚನಾ ಸಭೆಯು ಅದನ್ನೇ ಸಂವಿಧಾನ ಪ್ರಸ್ತಾವನೆಯನ್ನಾಗಿ ಅಳವಡಿಸಿಕೊಳ್ಳಲು ತೀರ್ಮಾನಿಸಿತು.

3. ಪ್ರಸ್ತಾವನೆಯ ಪಠ್ಯ: (Text of the preamble) 

ಭಾರತದ ಸಂವಿಧಾನದ ಪ್ರಸ್ತಾವನೆಯು ಸಂವಿಧಾನಕ್ಕೆ 1976ರಲ್ಲಿ ಅಳವಡಿಸಲಾದ 42ನೇ ತಿದ್ದುಪಡಿಯ ನಂತರ ಹೀಗೆ ಆರಂಭವಾಗುತ್ತದೆ.

ಭಾರತದ ಪ್ರಜೆಗಳಾದ ನಾವು ಭಾರತವನ್ನು ಒಂದು ಸಾರ್ವಭೌಮ

ಸಮಾಜವಾದಿ, ಜಾತ್ಯತೀತ, ಪ್ರಜಾಸತ್ತಾತ್ಮಕ ಗಣರಾಜ್ಯವನ್ನಾಗಿ ವ್ಯವಸ್ಥೆಗೊಳಿಸಲು 

ಮತ್ತು ಅದರ ಎಲ್ಲಾ ಪೌರರಿಗೆ

ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ನ್ಯಾಯ,

ವಿಚಾರ, ಅಭಿವ್ಯಕ್ತಿ, ನಂಬಿಕೆ, ಧರ್ಮ ಮತ್ತು ಉಪಾಸನಾ ಸ್ವಾತಂತ್ರ್ಯ

ಸ್ಥಾನಮಾನ ಮತ್ತು ಅವಕಾಶಗಳಲ್ಲಿ ಸಮಾನತೆ

ಎಲ್ಲರಿಗೂ ದೊರೆಯುವಂತೆ ಮಾಡುವುದಕ್ಕೆ

ವ್ಯಕ್ತಿ ಗೌರವ ಮತ್ತು ರಾಷ್ಟ್ರದ ಏಕತೆ ಮತ್ತು ಸಮಗ್ರತೆಯನ್ನು

ರಕ್ಷಿಸಿ, ಭ್ರಾತೃ ಭಾವನೆಯನ್ನು ಎಲ್ಲರಲ್ಲೂ ವೃದ್ಧಿಗೊಳಿಸುವುದಕ್ಕಾಗಿ

ದೃಢಸಂಕಲ್ಪ ಮಾಡಿ

ನಮ್ಮ ಸಂವಿಧಾನ ರಚನಾ ಸಭೆಯಲ್ಲಿ ನವೆಂಬರ್ 26 1949 ರಂದು ಈ ಸಂವಿಧಾನವನ್ನು ಅಂಗೀಕರಿಸಿ ಕಾನೂನು ರೂಪದಲ್ಲಿ ಆತ್ಮಾರ್ಪಿತ ಮಾಡಿಕೊಂಡಿದ್ದೇವೆ.

ಮೂಲ ಸಂವಿಧಾನ ಪೀಠಿಕೆಯಲ್ಲಿ ಸಾರ್ವಭೌಮ ಪ್ರಜಾಸತ್ತಾತ್ಮಕ ಗಣರಾಜ್ಯ ಎಂಬ ಪದಗಳಿದ್ದವು. ಅವನ್ನು 1976ರ 42ನೇ ಸಂವಿಧಾನಿಕ ತಿದ್ದುಪಡಿ ಮೂಲಕ ಸಮಾಜವಾದಿ ಹಾಗೂ ಜಾತ್ಯತೀತ ಎಂಬ ಪದಗಳನ್ನು ಸೇರಿಸಲಾಯಿತು. ಅದೇ ರೀತಿ ದೇಶದ ಏಕತೆ ಎಂಬ ಪದವನ್ನು ಬದಲಿಸಿ ದೇಶದ ಏಕತೆ ಮತ್ತು ಸಮಗ್ರತೆ ಎಂಬ ಪದವನ್ನು ಸೇರಿಸಲಾಗಿದೆ.

ಉಪಸಂಹಾರ

ಒಟ್ಟಾರೆ, ಭಾರತೀಯ ಸಂವಿಧಾನದ ಪ್ರಸ್ತಾವನೆ ಸಂವಿಧಾನದ ತಾತ್ವಿಕ ನೆಲೆಯನ್ನು ಸ್ಪಷ್ಟಪಡಿಸುತ್ತದೆ. ಇದು ಪ್ರಜೆಗಳಿಗೆ ಸ್ವಾತಂತ್ರ್ಯ, ಸಮಾನತೆ ಮತ್ತು ನ್ಯಾಯವನ್ನು ಭರವಸೆ ನೀಡುವ ಮಹತ್ವದ ಘೋಷಣೆಯಾಗಿದೆ. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಸಂರಕ್ಷಿಸುವಲ್ಲಿ ಪ್ರಸ್ತಾವನೆ ಪ್ರಮುಖ ಪಾತ್ರ ವಹಿಸುತ್ತದೆ. ಆದುದರಿಂದ, ಸಂವಿಧಾನದ ಆತ್ಮವನ್ನು ಅರ್ಥಮಾಡಿಕೊಳ್ಳಲು ಪ್ರಸ್ತಾವನೆಯ ಅಧ್ಯಯನ ಅನಿವಾರ್ಯವಾಗಿದೆ.

ಸಂವಿಧಾನದ ಪ್ರಸ್ತಾವನೆಯ ಲಕ್ಷಣಗಳು ಅಥವಾ ತಾತ್ವಿಕತೆ

ಸಂವಿಧಾನದ ಪ್ರಸ್ತಾವನೆಯ ಲಕ್ಷಣಗಳು ಅಥವಾ ತಾತ್ವಿಕತೆ

ಭಾರತದ ಸಂವಿಧಾನದ ವಿಸ್ತಾರ ಹಾಗೂ ಮಹತ್ವವನ್ನು ಅರಿಯಲು ಪ್ರಸ್ತಾವನೆಯಲ್ಲಿರುವ ತತ್ವಗಳ ಸಂಕ್ಷಿಪ್ತ ಮಾಹಿತಿಯನ್ನು ಈ ಕೆಳಗಿನಂತೆ ನೋಡೋಣ,

 

1.  ಭಾರತದ ಪ್ರಜೆಗಳಾದ ನಾವು: (We the people of india) 

 ಭಾರತದ ಸಂವಿಧಾನ ಪ್ರಸ್ತಾವನೆಯು ಭಾರತದ ಪ್ರಜೆಗಳಾದ ನಾವು ಎಂದು ಆರಂಭಗೊಂಡು ನಮ್ಮ ಸಂವಿಧಾನವನ್ನು ನವೆಂಬರ್ 26 1949 ರಂದು ಅಂಗೀಕರಿಸಿ ನಮಗೆ ನಾವೇ ಅರ್ಪಿಸಿಕೊಂಡಿದ್ದೇವೆ ಎಂದು ಅಂತ್ಯಗೊಂಡಿದೆ. ಅಂದರೆ ಇದರ ಅರ್ಥ ಭಾರತದ ಸಂವಿಧಾನವು ಭಾರತೀಯರಿಂದಲೇ ರಚಿತಗೊಂಡಿದೆ ಎಂದರ್ಥ. ಸಂವಿಧಾನ ರಚನಾ ಸಭೆಯ ಸದಸ್ಯರು ಪರೋಕ್ಷವಾಗಿ ಆಯ್ಕೆಯಾಗಿದ್ದರೂ ಪ್ರಜೆಗಳ ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯ ಸಮಸ್ಯೆಗಳನ್ನು ಚರ್ಚಿಸಿ ದೇಶಕ್ಕೆ ಸೂಕ್ತವಾದ ಸಂವಿಧಾನವನ್ನು ರಚಿಸಿದರು. ಹೆಚ್ಚು ಕಡಿಮೆ ದೇಶದ ಎಲ್ಲಾ ವರ್ಗದ ಜನರಿಗೆ ಪ್ರಾತಿನಿಧ್ಯ ನೀಡಿದ್ದು ಸಂವಿಧಾನ ರಚನಾ ಸಭೆ ಎಲ್ಲರ ಹಿತರಕ್ಷಣೆ ಮತ್ತು ಅಶೋತ್ತರಗಳನ್ನು ಕಾಪಾಡುವಲ್ಲಿ ಸಾಮರ್ಥ್ಯವನ್ನು ಪ್ರದರ್ಶಿಸಿತು. ಸಂವಿಧಾನ ರಚನಾ ಸಭೆಯ ಸದಸ್ಯರು ಭಾರತದ ಪ್ರಜೆಗಳಾದ ನಾವು ಎಂಬ ಘೋಷಣೆಯ ಮೂಲಕ ಸಂವಿಧಾನವನ್ನು ಅಂಗೀಕರಿಸಿದ್ದನ್ನು ಕೆಲವರು ಟೀಸಿದ್ದಾರೆ. ಏಕೆಂದರೆ ವಾಸ್ತವವಾಗಿ ಭಾರತೀಯರೆಲ್ಲರೂ ಸಂವಿಧಾನದ ರಚನೆಯಲ್ಲಿ ಭಾಗವಹಿಸಲಿಲ್ಲ.

2.  ಸಾರ್ವಭೌಮ ರಾಷ್ಟ್ರ: (Sovereign state)

ಪ್ರಸ್ತಾವನೆ ತಿಳಿಸಿರುವ ಹಾಗೆ ಭಾರತವು ಒಂದು ಸರ್ವತಂತ್ರ ಸ್ವತಂತ್ರವುಳ್ಳ ಸಾರ್ವಭೌಮ ರಾಷ್ಟ್ರ. ಭಾರತವು ವಿಶ್ವದ ಯಾವುದೇ ದೇಶಗಳ ಅದೀನಕ್ಕೊಳಪಟ್ಟ ರಾಷ್ಟ್ರವಲ್ಲ. ಸ್ವಾತಂತ್ರ ನಂತರ ಭಾರತವು ಯಾವುದೇ ವಿದೇಶಿ ಶಕ್ತಿಗೆ ಒಳಗಾಗದೆ ತನ್ನ ಆಂತರಿಕ ಹಾಗೂ ಬಾಹ್ಯ ವ್ಯವಹಾರಗಳನ್ನು ತಾನೇ ನಿರ್ವಹಿಸುತ್ತಿದೆ. ಸ್ವತಂತ್ರ ರಾಷ್ಟ್ರ ಕಾಮನ್‌ವೆಲ್ತ್ನಲ್ಲಿ ಸದಸ್ಯ ರಾಷ್ಟ್ರವಾಗಿದ್ದರೂ ತನ್ನ ಸ್ವಾತಂತ್ರವನ್ನಾಗಲಿ ಅಥವಾ ಅಲಿಪ್ತ ನೀತಿಯನ್ನಾಗಲಿ ಕಳೆದುಕೊಂಡಿಲ್ಲ. ಬ್ರಿಟಿಷ್ ರಾಣಿ ಮುಖ್ಯಸ್ಥರಾಗಿರುವ ಕಾಮನ್ವೆಲ್ತ್‌ ಆರ್ಥಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಹಕಾರವನ್ನುಂಟು ಮಾಡಲು ಸಹಾಯಕವಾಗಿದೆ. ತನಗೆ ಬೇಡವಾದರೆ ಕಾಮನ್ವೆಲ್ತ್ ನಿಂದ ಹೊರಗೆ ಬರುವ ಅಧಿಕಾರ ಭಾರತಕ್ಕೆ ಇದೆ. ಭಾರತವು ಸ್ವ-ಇಚ್ಛೆಯಿಂದ ಕಾಮನ್ವೆಲ್ತನ ಸದಸ್ಯ ರಾಷ್ಟ್ರವಾಗಿರುವುದರಿಂದ ಅದು ಸ್ವ ಇಚ್ಛೆಯಿಂದ ಹೊರಬರುವ ಅಧಿಕಾರವನ್ನು ಹೊಂದಿದೆ. 

3. ಸಮಾಜವಾದಿ ರಾಷ್ಟ್ರ: (Socialist) 

ಬಡವರ ಮತ್ತು ಶ್ರೀಮಂತರ ನಡುವಿನ ಅಂತರವನ್ನು ಕಡಿಮೆಗೊಳಿಸಿ ಸಮಾನವಾದ ಸಮಾಜಕ್ಕೆ ಅಡಿಗಲ್ಲನ್ನು ಹಾಕುವ ದೃಷ್ಟಿಯಿಂದ ಭಾರತವು ಸಮಾಜವಾದವನ್ನು ಅನುಸರಿಸಿತು. ಪ್ರಸ್ತಾವನೆಯಲ್ಲಿಯೇ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಸಮಾಜವಾದಿ ತತ್ವಗಳನ್ನು ಕಾರ್ಯಗತಗೊಳಿಸುವ ಮೂಲಕ ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯ ನ್ಯಾಯವನ್ನು ಪ್ರಜೆಗಳಿಗೆ ಒದಗಿಸಿಕೊಡುವಂತೆ ಕರೆ ನೀಡಿದೆ. ಸಮಾಜವಾದಿ ಎಂಬ ಪದವು ಸಂವಿಧಾನದಲ್ಲಿರಲಿಲ್ಲ. ಸಂವಿಧಾನಕ್ಕೆ 42ನೇ ತಿದ್ದುಪಡಿಯನ್ನು ತರುವ ಮೂಲಕ ಸಮಾಜವಾದಿ ಎಂಬ ಪದವನ್ನು 1976 ಡಿಸೆಂಬರ್ 18ರಂದು ಪ್ರಸ್ತಾವನೆಯಲ್ಲಿ ಸೇರಿಸಲಾಯಿತು. ಇನ್ನು ಸಂವಿಧಾನದಲ್ಲಿ ರಾಜ್ಯ ನಿರ್ದೇಶಕ ತತ್ವಗಳು ಎಂಬ ಪ್ರತ್ಯೇಕ ಭಾಗವಿದ್ದು ಇದು ರಾಜ್ಯ ನಿರ್ವಹಿಸಬೇಕಾದ ಕಾರ್ಯಗಳ ಬಗ್ಗೆ ಮಾರ್ಗಸೂಚಿಯಾಗಿದೆ. ಇದರಲ್ಲಿ ಸಮಾಜವಾದ, ಉದಾರವಾದ ಹಾಗೂ ಗಾಂಧಿ ತತ್ವಗಳನ್ನು ಅಳವಡಿಸಲಾಗಿದೆ. ಉದಾಹರಣೆ: ಭೂ ಸುಧಾರಣೆ, ಸಂಪನ್ಮೂಲಗಳ ಸಮರ್ಪಕ ಬಳಕೆ, ಸಂಪತ್ತಿನ ಸಮಾನ ಹಂಚಿಕೆ, ಸಮಾನ ಕೆಲಸಕ್ಕೆ ಸಮಾನವಾದ ವೇತನ, ಕಾರ್ಮಿಕರ ಹಾಗೂ ವೃದ್ಧರ ಯೋಗ ಕ್ಷೇಮ ಇವೆ ಕಾರ್ಯಕ್ರಮಗಳನ್ನು ಜಾರಿಗೆ ತರುವಂತೆ ಬಯಸುತ್ತಿದೆ. ಇವುಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಾರಿಗೆ ತರುವ ನೈತಿಕ ಕರ್ತವ್ಯಗಳೇ ವಿನಹಃ ಅದು ಕಡ್ಡಾಯವಾದದ್ದು ಅಲ್ಲ.

4. ಜಾತ್ಯತೀತ ರಾಷ್ಟ್ರ: (Secular)

 ಯಾವುದೇ ಒಂದು ನಿರ್ದಿಷ್ಟ ಧರ್ಮಕ್ಕೆ ಪ್ರಾಧಾನ್ಯತೆಯನ್ನು ನೀಡದೇ ಅಸ್ತಿತ್ವದಲ್ಲಿರುವ ಎಲ್ಲಾ ಧರ್ಮಗಳನ್ನು ಸಮಾನವಾಗಿ ರಾಜ್ಯವು ಗೌರವಿಸುವುದನ್ನು ಜಾತ್ಯತೀತತೆ ಎಂದು ಕರೆಯುವರು. ಭಾರತವು ಸರ್ವಧರ್ಮಗಳ ದೇಶ. ಇಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತರು, ಸಿಖ್ಖರು, ಯಹೂದಿಗಳು, ಜೈನರು ಹಾಗೂ ಬೌದ್ಧರಿದ್ದಾರೆ. ದೇಶದಲ್ಲಿ ಕೋಮು ಸಾಮರಸ್ಯ ಹಾಗೂ ಸೌಹಾರ್ದತೆಯನ್ನು ಕಾಪಾಡುವ ಸಲುವಾಗಿ ಭಾರತ ಲೌಕಿಕ ಹಾಗೂ ಜಾತ್ಯತೀತ ರಾಷ್ಟ್ರ ಎಂದು ಘೋಷಿಸಿದೆ. ಈ ಅಂಶವನ್ನು ಒತ್ತಿ ಹೇಳಲು ಸಂವಿಧಾನದ 42ನೇ ತಿದ್ದುಪಡಿಯ ಮೂಲಕ ಜಾತ್ಯತೀತ ಎಂಬ ಪದವನ್ನು ಪ್ರಸ್ತಾವನೆಗೆ 1976ರಲ್ಲಿ ಕೇಂದ್ರ ಸರ್ಕಾರ ಅಳವಡಿಸಿತು. ಸೆಕ್ಯುಲರ್ ಎಂಬ ಪದಕ್ಕೆ ವಿವಿಧ ಅರ್ಥಗಳಿವೆ. ಜಾತ್ಯತೀತತೆ, ಧರ್ಮಾತೀತತೆ, ಧರ್ಮ ನಿರಪೇಕ್ಷತೆ ಹಾಗೂ ಸರ್ವಧರ್ಮ ಸದ್ಭಾವನೆ ಎಂದು ಕರೆಯಲಾಗುತ್ತದೆ. ಧಾರ್ಮಿಕವಾಗಿ ತಟಸ್ಥವಾಗಿರುವುದು ಜಾತ್ಯತೀತ ತತ್ವ ಎಂದು ಕೆಲವರು ಹೇಳಿದ್ದಾರೆ.  ಜವಹರಲಾಲ್ ನೆಹರು ಅವರು ಜಾತ್ಯತೀತ ಎಂದರೆ ಲೌಕಿಕವಾದ ಅಲ್ಲ ಅದರಲ್ಲಿ ಆಧ್ಯಾತ್ಮಿಕ ಅಂಶಗಳು ಇರುತ್ತವೆ ಎಂದಿದ್ದಾರೆ.

ಸಂವಿಧಾನದ ಪ್ರಸ್ತಾವನೆಯಲ್ಲಿ ಧಾರ್ಮಿಕ ಹಕ್ಕನ್ನು ಮೂಲಭೂತ ಹಕ್ಕು ಎಂದು ಘೋಷಿಸಲಾಗಿದ್ದು ವ್ಯಕ್ತಿಗಳು ತಮ್ಮ ಆತ್ಮ ಸಾಕ್ಷಿಗೆ ಅನುಸಾರವಾಗಿ ಯಾವುದೇ ಧರ್ಮವನ್ನು ಸ್ವೀಕರಿಸುವ, ಪ್ರಚಾರ ಮಾಡುವ ಹಾಗೂ ನಾಸ್ತಿಕವಾಗಿ ಜೀವನ ಸಾಗಿಸುವ ಪೂರ್ಣ ಸ್ವಾತಂತ್ರ್ಯವನ್ನು ಹೊಂದಿದ್ದಾರೆ.

 5. ಪ್ರಜಾಸತ್ತಾತ್ಮಕತೆ: (Democratic) 

ದೇಶದ ಆಡಳಿತದಲ್ಲಿ ಪ್ರಜೆಗಳು ಭಾಗಿಯಾಗುವ ರಾಜಕೀಯ ವ್ಯವಸ್ಥೆಯನ್ನು ಪ್ರಜಾಪ್ರಭುತ್ವ ಎನ್ನಲಾಗಿದೆ. ಈ ಪ್ರಜಾಪ್ರಭುತ್ವ ಎಂಬ ಪದವನ್ನು ವಿವಿಧ ರೀತಿಯಲ್ಲಿ ವ್ಯಾಖ್ಯಾನಿಸಿದ್ದಾರೆ. ಸರ್ ಹೆನ್ರಿ ಮೈನ್ ರವರು ಪ್ರಜಾಪ್ರಭುತ್ವ ಒಂದು ಸರ್ಕಾರ ಪದ್ಧತಿ ಎಂದು ಹೇಳಿದ್ದಾರೆ. ಅಬ್ರಹಂ ಲಿಂಕನ್ ರವರು ಪ್ರಜೆಗಳಿಂದ, ಪ್ರಜೆಗಳಿಗಾಗಿ ಹಾಗೂ ಪ್ರಜೆಗಳಿಗೋಸ್ಕರ ಇರುವ ಸರ್ಕಾರವೇ ಪ್ರಜಾಪ್ರಭುತ್ವ ಎಂದು ಹೇಳಿದ್ದಾರೆ. ಪ್ರಜಾಪ್ರಭುತ್ವವು ಮುಕ್ತತೆ ಹಾಗೂ ಪಾರದರ್ಶಕತೆಯನ್ನು ಅವಲಂಬಿಸಿದ್ದು ಪ್ರಜೆಗಳು ತಮ್ಮ ಸರ್ಕಾರವನ್ನು ತಾವೇ ಪ್ರತಿನಿಧಿಗಳ ಮೂಲಕ ಆಯ್ಕೆ ಮಾಡಿಕೊಳ್ಳುತ್ತಾರೆ. ಸರ್ಕಾರದ ಸರಿ ತಪ್ಪುಗಳನ್ನು ತಿಳಿಹೇಳಿ ಅದನ್ನು ಸರಿದಾರಿಗೆ ತರುವ ಪ್ರಯತ್ನ ಮಾಡುತ್ತಾರೆ. ಒಂದು ವೇಳೆ ಸರ್ಕಾರ ಸರಿದಾರಿಗೆ ಬಾರದಿದ್ದಾಗ ಬೇಸರಗೊಂಡು ಪ್ರಜೆಗಳು ಸರ್ಕಾರವನ್ನು ಐದು ವರ್ಷಕ್ಕೊಮ್ಮೆ ಬದಲಿಸುವ ಅಧಿಕಾರವನ್ನು ಹೊಂದಿದ್ದಾರೆ.

6. ಗಣರಾಜ್ಯ: (Republic)

ದೇಶದ ಮುಖ್ಯಸ್ಥ ಪ್ರಜೆಗಳಿಂದ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಚುನಾಯಿತರಾಗುತ್ತಿದ್ದರೆ ಆ ದೇಶವನ್ನು ಗಣರಾಜ್ಯ ಎಂದು ಕರೆಯಲಾಗುತ್ತದೆ. ರಿಪಬ್ಲಿಕ್ ಪದವು ಸಹ ವಿವಿಧ ಅರ್ಥಗಳನ್ನು ಹೊಂದಿದೆ. ರಿಪಬ್ಲಿಕ್ ಸರ್ಕಾರ ರಾಜಪ್ರಭುತ್ವಕ್ಕೆ ವಿರುದ್ಧವಾದದ್ದು ಎಂದು ಲೀಕಾಕ್ ಹೇಳಿದರೆ, ಅನೇಕ ವ್ಯಕ್ತಿಗಳಿಂದ  ನಡೆಸುವ ಸರ್ಕಾರ ಪದ್ಧತಿಯಾದರೆ ಅದು ರಿಪಬ್ಲಿಕ್ ಎಂದು ಜೆಲಿನೆಕ್ ಹೇಳಿದ್ದಾರೆ. ಹೊಸ ಆಕ್ಸ್ಫರ್ಡ್ ನಿಘಂಟಿನ ಪ್ರಕಾರ ಪರಮಾಧಿಕಾರ ಪ್ರಜೆಗಳಿಂದ ಮತ್ತು ಅವರಿಂದ ಆಯ್ಕೆಯಾದ ಪ್ರತಿನಿಧಿಗಳ ಅಥವಾ‌ ಅಧಿಕಾರಿಗಳ ಕೈಯಲ್ಲಿ ಇರುವುದೇ ಗಣರಾಜ್ಯ. ಒಟ್ಟಿನಲ್ಲಿ ಭಾರತ ಸರ್ಕಾರವು ಯಾವುದೇ ಅನುವಂಶೀಯ ರಾಜ ಅಥವಾ ರಾಣಿಯ ಆಳ್ವಿಕೆಗೆ ಒಳಪಟ್ಟಿಲ್ಲ ಎಂಬುದೇ ಆಗಿದೆ. ರಾಷ್ಟ್ರದ ಮುಖ್ಯಸ್ಥರು ಚುನಾವಣೆಯ ಮೂಲಕ ಆಯ್ಕೆಯಾಗುವ ಪದ್ಧತಿಯನ್ನು ಸಂವಿಧಾನದ ಪ್ರಸ್ತಾವನೆಯಲ್ಲಿಯೇ ಪ್ರಸ್ತಾಪಿಸಲಾಗಿದೆ. ಹಾಗೂ ಅಧ್ಯಕ್ಷರ ಅಧಿಕಾರ ಅವಧಿ ಐದು ವರ್ಷಗಳೆಂದು ಸಹ ನಿಗದಿಪಡಿಸಲಾಗಿದೆ. ಹೀಗೆ ಅಮೆರಿಕಾದ ಹಾಗೆ ಭಾರತವು ಗಣರಾಜ್ಯವಾಗಿದೆ. ಆದರೆ ಇಂಗ್ಲೆಂಡ್ ರಾಜ್ಯ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ ವಿನಹ ಗಣರಾಜ್ಯವಾಗಿಲ್ಲ. ಇಲ್ಲಿ ರಾಷ್ಟ್ರದ ಮುಖ್ಯಸ್ಥರಾಗಿರುವ ರಾಣಿ ಅಥವಾ ರಾಜ ಪ್ರಜೆಗಳಿಂದ ಆಯ್ಕೆ ಆಗುವುದಿಲ್ಲ.

7. ನ್ಯಾಯ: (Judiciary) 

 ಸಾವಿರಾರು ವರ್ಷಗಳಿಂದ ಭಾರತೀಯ ಸಮಾಜದಲ್ಲಿ ಎದ್ದು ಕಾಣುತ್ತಿದ್ದ ಸಾಮಾಜಿಕ ಅಸಮಾನತೆಗಳಾದ ಕರಿಯ-ಬಿಳಿಯ, ಮೇಲು-ಕೀಳು, ಸೃಶ್ಯ- ಅಸ್ಪೃಶ್ಯ, ಮೇಲುಜಾತಿ, ಕೀಳು ಜಾತಿ ಎಂದು ವಿಂಗಡಿಸಿ ಒಂದು ಜಾತಿಯನ್ನಂತೂ ಸಮಾಜದಿಂದ ಹೊರಗಿಡಲಾಗಿತ್ತು. ಅವರನ್ನು ಮಾನಸಿಕವಾಗಿ, ದೈಹಿಕವಾಗಿ ಮತ್ತು ಆರ್ಥಿಕ, ಸಾಮಾಜಿಕವಾಗಿ ಶೋಷಣೆಗೆ ಒಳಪಡಿಸಲಾಗಿತ್ತು. ಅವರನ್ನು ಪ್ರಾಣಿಗಳಿಗಿಂತಲೂ ಕೀಳಾಗಿ ಕಾಣಲಾಗುತ್ತಿತ್ತು. ಈ ಅಸಮಾನತೆಯನ್ನು ಹೋಗಲಾಡಿಸಿ ಸಾಮಾಜಿಕ ನ್ಯಾಯವನ್ನು ಸ್ಥಾಪಿಸುವ ಉದ್ದೇಶವನ್ನು ಸಂವಿಧಾನ ಹೊಂದಿದೆ. ಸಾಮಾಜಿಕ ನ್ಯಾಯವೆಂದರೆ ವಿವಿಧ ವರ್ಗಗಳಲ್ಲಿ ಹಾಗೂ ಜಾತಿಗಳಲ್ಲಿ ಏಕತೆ ಮತ್ತು ಸಮಾನತೆಯ  ಭಾವನೆಯನ್ನು ಉಂಟುಮಾಡುವುದು, ಹಿಂದುಳಿದ ವರ್ಗಗಳ ಹಿತಾಸಕ್ತಿಯನ್ನು ಕಾಪಾಡುವುದು ಹಾಗೂ ಶ್ರಮಜೀವಿಗಳ ಜೀವನ ಮಟ್ಟವನ್ನು ಸುಧಾರಿಸುವುದು, ಹಾಗೆಯೇ ಬಡತನವನ್ನು ತೊಲಗಿಸಿ ಸಾಧ್ಯವಿದ್ದ ಮಟ್ಟಿಗೆ ಎಲ್ಲರಲ್ಲೂ ಆರ್ಥಿಕ ಹಾಗೂ ಸಾಮಾಜಿಕ ಸಮಾನತೆಯನ್ನು ಕಾಪಾಡುವುದು ಸಂವಿಧಾನದ ಗುರಿಯಾಗಿದೆ. ಮುಂದುವರೆದು ಹಿಂದುಳಿದ ಅದರಲ್ಲೂ ಪರಿಶಿಷ್ಟ ಜಾತಿಗೆ ಸೇರಿದ ಜನಾಂಗವನ್ನು ರಾಜಕೀಯ ಉನ್ನತಿ ಸಾಧಿಸಲು ಅನುವು ಮಾಡಿಕೊಡುವುದು. ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ಎಲ್ಲರಿಗೂ ನ್ಯಾಯ ದೊರೆಯಬೇಕೆಂದು ಪ್ರಸ್ತಾವನೆಯಲ್ಲಿ ಹೇಳಿರುವುದು ಮಾನವೀಯತೆಯ ಹಾಗೂ ಏಕತೆಯ ಸಂಕೇತವಾಗಿದೆ. ಆದರೂ ಈ ಕ್ಷೇತ್ರದಲ್ಲಿ ಎಲ್ಲರಿಗೂ ಸಂಪೂರ್ಣವಾಗಿ ನ್ಯಾಯವನ್ನು ಒದಗಿಸಲು ಸಾಧ್ಯವಾಗಿಲ್ಲ. ಗ್ರಾಮೀಣ ಜನರ ಬದುಕು ಇಂದಿಗೂ ಹಸನವಾಗಿಲ್ಲ. ಬಡವರ ಬದುಕು ಮೂರಾಬಟ್ಟೆಯಾಗುತ್ತಿದೆ. ಇನ್ನು ಅಸ್ಪೃಶ್ಯರ ಬಾಳಂತೂ ನರಕದ ಬಾಗಿಲು ತಟ್ಟಿ ಬಂದಂತೆ ಅನಿಸುತ್ತಿದೆ.  ಜಾತಿಯತೆ ಇನ್ನಷ್ಟು ವಿರಾಟ ರೂಪವನ್ನು ತಾಳಿ ಕೇಕೆ ಹಾಕುತ್ತಿದೆ. ಹಿಂದೆಂದಿಗಿಂತಲೂ ಅವರನ್ನು ತುಚ್ಚವಾಗಿ ಕಾಣಲಾಗುತ್ತಿದೆ. ಅನೇಕರು ಇಂದಿಗೂ ಅನ್ನ, ಬಟ್ಟೆ ಹಾಗೂ ವಸತಿ ಇಲ್ಲದೆ ನರಳುತ್ತಿರುವುದು ನಾಚಿಕೇಡಿನ ವಿಷಯವಾಗಿದೆ. ನಿರ್ಗತಿಕರು ರಸ್ತೆ ಬದಿಯಲ್ಲಿ ಸಿಕ್ಕಿದ್ದನ್ನು ತಿಂದು ಅಲ್ಲೇ ಮಲಗಿ ನರಕದ ಜೀವನವನ್ನು ಅನುಭವಿಸುತ್ತಿರುವುದನ್ನು ನೋಡಿದರೆ ಕರುಳು ಕಿವುಚಿದಂತಾಗುತ್ತದೆ. ಸರ್ಕಾರದ ಯಾವ ಯೋಜನೆಗಳು ಈ ಜನರ ಬವಣೆಯನ್ನು ಈವರೆಗೆ ಕಡಿಮೆ ಮಾಡಿಲ್ಲ.

8. ಸ್ವಾತಂತ್ರ: (Independence)

 ಭಾರತದ ಸಂವಿಧಾನದಲ್ಲಿ ಸ್ವಾತಂತ್ರದ ಪರಿಕಲ್ಪನೆ ಇದೆ. ಪ್ರಸ್ತಾವನೆಯಲ್ಲಿ ವಾಕ್ ಸ್ವಾತಂತ್ರ, ಧರ್ಮ ಸ್ವಾತಂತ್ರ್ಯ, ನಂಬಿಕೆ ಹಾಗೂ ಉಪಾಸನ ಸ್ವಾತಂತ್ರ್ಯಗಳಿಗೆ ಅವಕಾಶ ಕಲ್ಪಿಸಿರುವುದು ಪ್ರಜಾಪ್ರಭುತ್ವದ ಸಂಕೇತವಾಗಿದೆ. ಭಾರತೀಯ ಪ್ರತಿಯೊಬ್ಬ ಪ್ರಜೆಗಳಿಗೆ ತಮ್ಮ ಸ್ವಾತಂತ್ರವನ್ನು ಅನುಭವಿಸಲು ಅವಕಾಶ ಕೊಡಬೇಕು. ಹಾಗೊಂದು ವೇಳೆ ಕೊಡದಿದ್ದರೆ ಪ್ರಜಾಪ್ರಭುತ್ವ ಬಹುಕಾಲ ಬಾಳಲಾರದು. ಸ್ವಾತಂತ್ರ್ಯವಿಲ್ಲದ ವ್ಯಕ್ತಿ ಸಮಾಜದಲ್ಲಿ ಯಾವ ಪ್ರಯೋಜನಕ್ಕೂ ಬಾರದವನಾಗಿ ಸರ್ಕಾರದ ಗುಲಾಮನಾಗಿ ಬದುಕಬೇಕಾಗುತ್ತದೆ. ಸ್ವಾತಂತ್ರ್ಯ ಉಲ್ಲಂಘನೆಯಾಗದಂತೆ ನ್ಯಾಯಾಲಯಗಳು ಆತನ ನೆರವಿಗೆ ಬರಬೇಕು.

 9. ಸಮಾನತೆ: (Equality)

ಮಾನವನಿಗೆ ಸ್ವಾತಂತ್ರ್ಯ ಹೇಗೆ ಅಗತ್ಯವಾಗಿದೆಯೋ ಹಾಗೆ ಸಮಾನತೆಯು ಮುಖ್ಯವಾಗಿದೆ. ಇವೆರಡೂ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಸಮಾನತೆಯನ್ನು ಹೊರತುಪಡಿಸಿ ಸ್ವಾತಂತ್ರ್ಯಕ್ಕೆ ಅರ್ಥವಿಲ್ಲ. ಧರ್ಮ, ಜಾತಿ, ಲಿಂಗ, ಬಣ್ಣ ಹಾಗೂ ವಾಸ ಸ್ಥಳದ ಆಧಾರದ ಮೇಲೆ ಅಸಮಾನತೆಯನ್ನು ಮಾಡಬಾರದು. ಅಸಮಾನತೆಯನ್ನು ಮಾಡುವುದು ಶಿಕ್ಷಾರ್ಹ ಅಪರಾಧ. ಸಮಾನ ಸ್ಥಾನ ಹಾಗೂ ಸಮಾನ ಹಕ್ಕುಗಳು ಎಲ್ಲರಿಗೂ ಸಿಗಬೇಕು.

10. ಭ್ರಾತೃತ್ವ: (Liberty)

ಡಾಕ್ಟರ್ ಬಿ. ಆರ್ ಅಂಬೇಡ್ಕರ್ ಅವರು ಎಲ್ಲ ಭಾರತೀಯರು ಒಂದೇ ಎಂದು ಸಾರುವ ಸಹೋದರ ಭಾವನೆಯನ್ನು ಭ್ರಾತೃತ್ವ ಎಂದು ಕರೆದಿದ್ದಾರೆ. ಭಾರತ ವೈವಿಧ್ಯತೆಯುಳ್ಳ ದೇಶ. ವಿವಿಧ ಧರ್ಮ, ಜಾತಿ ಜನರು ತಮ್ಮದೇ ಆದ ಸಂಪ್ರದಾಯ, ಆಚರಣೆ, ಭಾಷೆಗಳನ್ನು ಹೊಂದಿದ್ದಾರೆ. ಕೋಮು ಜಾತಿಯ ಭಾವನೆಯನ್ನು ಅಳಿಸಿ ಪರಸ್ಪರ ಹೊಂದಾಣಿಕೆಯ ಮನೋಭಾವನೆಯನ್ನು ಅಳವಡಿಸಿಕೊಳ್ಳಬೇಕು. ಪರಸ್ಪರರು ಸಹೋದರ ಭಾವನೆಯಿಂದ ಬಾಳಬೇಕು.

ಉಪಸಂಹಾರ:

ಒಟ್ಟಿನಲ್ಲಿ, ಸಂವಿಧಾನದ ಪ್ರಸ್ತಾವನೆ ಭಾರತದ ಆತ್ಮ ಮತ್ತು ದಿಕ್ಕುಸೂಚಿಯಾಗಿದೆ. ಇದು ಕೇವಲ ಕಾನೂನು ಪರಿಚಯವಲ್ಲ, ಬದಲಾಗಿ ಮಾನವೀಯ ಮೌಲ್ಯಗಳ ಘೋಷಣೆಯಾಗಿದೆ. ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವವನ್ನು ಕಾರ್ಯರೂಪಕ್ಕೆ ತರುವುದೇ ಸಂವಿಧಾನದ ನಿಜವಾದ ಆಶಯ. ಈ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ನಿಜವಾದ ಪ್ರಜಾಪ್ರಭುತ್ವ ಸಾಧ್ಯವಾಗುತ್ತದೆ.