ಚರಿತ್ರೆಯ ರಚನೆಯಲ್ಲಿ ಆಧಾರಗಳು ಅದ್ವಿತೀಯವಾದ ಪಾತ್ರವನ್ನು ವಹಿಸುತ್ತವೆ. ಆಧಾರಗಳಿಲ್ಲದೆ ಇತಿಹಾಸವಿಲ್ಲ. ʻಆಧಾರ’ ಈ ಮೂರು ಅಕ್ಷರಗಳ ಅರ್ಥ ಬಹುವ್ಯಾಪಕ. ಇತಿಹಾಸಕ್ಕೆ ಆಧಾರಗಳೇ ಉಸಿರು. ಆಧಾರಗಳಿಲ್ಲದೆ ರಚನೆಗೊಂಡ ಚರಿತ್ರೆ ನಾವಿಕನಿಲ್ಲದ ದೋಣಿಯಂತೆ, ಚುಕ್ಕಾಣಿಯಿಲ್ಲದ ಹಡಗಿನಂತೆ.

ಪ್ರಾಚೀನ ಭಾರತದ ಇತಿಹಾಸ ರಚನೆಗೆ ಸಂಬಂಧಿಸಿದಂತೆ ಸಾಕಷ್ಟು ವಿಪುಲ ಆಧಾರಗಳು ಲಭ್ಯವಾಗುವುದಿಲ್ಲ. ದೊರೆತಿರುವ ಅಲ್ಪಸ್ವಲ್ಪ ಆಧಾರಗಳನ್ನು ಆಧರಿಸಿ ಇತಿಹಾಸವನ್ನು ರಚಿಸಲಾಗಿದೆ. ಅಲ್ಬೆರೂನಿ ‘ತಕ್ವಿಕ್ ಅಲ್ ಹಿಂದ್’ ಎಂಬ ಕೃತಿಯಲ್ಲಿ ʻಭಾರತೀಯರಿಗೆ ಐತಿಹಾಸಿಕ ಪ್ರಜ್ಞೆಯ ಅರಿವಿಲ್ಲ. ಪ್ರಚಲಿತ ವಿಷಯಗಳ ಕುರಿತು ಪ್ರಶ್ನಿಸಿದಾಗ ಅಡುಗೂಲಜ್ಜಿಯ ಕಥೆ ಹೇಳಲು ಆರಂಭಿಸುತ್ತಾರೆ’ ಎಂದು ಅಭಿಪ್ರಾಯ ಪಟ್ಟಿದ್ದಾನೆ. ಈ ಅಭಿಪ್ರಾಯದಿಂದ ಭಾರತೀಯರಲ್ಲಿ ಚಾರಿತ್ರಿಕ ಪ್ರಜ್ಞೆಯ ಅರಿವು ಇರಲಿಲ್ಲ ಎಂಬುದು ತಿಳಿದುಬರುತ್ತದೆ. ಆದರೆ ಅಲ್ಬೆರೂನಿಯ ಅಭಿಪ್ರಾಯದಲ್ಲಿಯೇ ಭಾರತೀಯರು ಪುರಾಣಗಳನ್ನು, ಮಹಾಕಾವ್ಯಗಳನ್ನೆಲ್ಲಾ ರಚಿಸಿದ್ದಾರೆ. ಆದರೆ ಚಾರಿತ್ರಿಕ ಕೃತಿಗಳನ್ನು ರಚಿಸಿರುವುದಿಲ್ಲ. ಹೀಗಾಗಿ ವಾಸ್ತವವಾದಿಗಳಾಗಿರದೆ ಅದೃಷ್ಟವಾದಿಗಳಾಗಿರುವುದು ಮತ್ತು ದಂತಕಥೆಗಳಿಗೆ ಹೆಚ್ಚು ಪ್ರಾಧಾನ್ಯತೆ ನೀಡಿರುವುದು ಕಂಡುಬರುತ್ತದೆ.

ಪ್ರಾಚೀನ ಭಾರತದ ಇತಿಹಾಸ ರಚನೆಯಲ್ಲಿ ಸಹಕಾರಿಯಾದ ಮೂಲಾಧಾರಗಳನ್ನು ಹೀಗೆ ವರ್ಗೀಕರಿಸಿ ಅವುಗಳ ಗುಣಾತ್ಮಕ ಮೌಲ್ಯವನ್ನು ಪರಿಗಣಿಸಬಹುದಾಗಿದೆ. ಅವುಗಳೆಂದರೆ

1. ಪ್ರಾಕ್ತನಶಾಸ್ತ್ರಾದಾರಗಳು (ಪುರಾತತ್ವ ಆಧಾರಗಳು)

2. ಲಿಖಿತ ಆಧಾರಗಳು. (ಸಾಹಿತ್ಯಾಧಾರಗಳು)

1. ಪ್ರಾಕ್ತನ ಶಾಸ್ತ್ರಾಧಾರಗಳು

ಇತಿಹಾಸ ರಚನೆಯಲ್ಲಿ ಪ್ರಾಕ್ತನಶಾಸ್ತ್ರಾಧಾರಗಳು ಗಮನಾರ್ಹವಾದ ಪಾತ್ರವನ್ನು ಹೊಂದಿವೆ ಇವುಗಳನ್ನು ಅವು ದೊರೆತಿರುವ ಅವಶೇಷಗಳಿಗೆ ಅನುಗುಣವಾಗಿ 4 ಭಾಗಗಳಾಗಿ ವಿಂಗಡಿಸಬಹುದಾಗಿದೆ.

1.ಭೂಸಂಶೋಧನೆ,

2. ಶಾಸನಗಳು,

3. ನಾಣ್ಯಗಳು,

4. ಐತಿಹಾಸಿಕ ಸ್ಮಾರಕಗಳು.

1. ಭೂಸಂಶೋಧನೆ :

ಭೂಸಂಶೋಧನೆ ಎಂದರೆ ಭೂ ಉತ್ಖನನ ಎಂದರ್ಥ (ವೈಜ್ಞಾನಿಕವಾಗಿ ಭೂಮಿಯನ್ನು ಅಗೆಯುವುದು), ಭಾರತದಲ್ಲಿ ಬ್ರಿಟೀಷ್ ವೈಸ್ರಾಯ್ ಆಗಿದ್ದ ಲಾರ್ಡ್ ಕರ್ಜನ್ ಪ್ರಾಕ್ತನ ಇಲಾಖೆಯನ್ನು ಪ್ರಾರಂಭಿಸಿದರು. ಸರ್ಜಾನ್ ಮಾರ್ಷಲ್ ಈ ಇಲಾಖೆಯ ನಿರ್ದೇಶಕರಾಗಿದ್ದಾಗ ಭೂ ಉತ್ಖನದ ಕಾರ್ಯ ಆರಂಭಗೊಂಡಿತು.

1921-22ರಲ್ಲಿ ಹರಪ್ಪ ಮತ್ತು ಮೆಹೆಂಜೋದಾರೋಗಳಲ್ಲಿ ನಡೆದ ಭೂ ಉತ್ಖನನಗಳು ಭಾರತವು ಪ್ರಾಚೀನ ಕಾಲದಲ್ಲಿಯೇ ʻನಾಗರೀಕತೆಗಳ ತೊಟ್ಟಿಲು ರಾಷ್ಟ್ರ’ವಾಗಿತ್ತೆಂದು ತಿಳಿಯುತ್ತದೆ. ತಕ್ಷಶಿಲೆಯ ಉತ್ಖನನವು ಕುಶಾನರ ಇತಿಹಾಸದ ಮೇಲೂ, ಪಾಟಲಿಪುತ್ರದ ಉತ್ಖನನವು ಮೌರ್ಯರ ಇತಿಹಾಸದ ಮೇಲೂ ಬೆಳಕು ಚೆಲ್ಲಲು ಸಹಕಾರಿಯಾಗಿದೆ. ದಕ್ಷಿಣ ಭಾರತದ ಪಾಂಡಿಚೇರಿ, ಅರಿಕಮೇಡು, ಆದಿತ್ಯನಲ್ಲೂರು, ತಿನ್ನವೆಲ್ಲಿ, ಮಸ್ಕಿ, ಬ್ರಹ್ಮಗಿರಿ, ಚಂದ್ರವಳ್ಳಿ, ಸನ್ನತಿಯ ಉತ್ಖನನಗಳು, ಶಿಲಾಯುಗ ಮತ್ತು ತಾಮ್ರಯುಗದ ಚರಿತ್ರೆಯನ್ನು ಬೆಳಕಿಗೆ ತಂದಿವೆ. ಒಟ್ಟಿನಲ್ಲಿ ಭೂ ಉತ್ಖನನದಿಂದ ಭೂಮಿಯ ಗರ್ಭದಲ್ಲಿನ ಐತಿಹಾಸಿಕ ಅವಶೇಷಗಳನ್ನು ಹೊರತೆಗೆದಾಗ ಇತಿಹಾಸವನ್ನು ರಚಿಸಲು ಸಹಕಾರಿಯಾಗುತ್ತದೆ.

ನಾಣ್ಯಗಳು :

ಪ್ರಾಚೀನ ಭಾರತದ ಇತಿಹಾಸ ರಚನೆಯಲ್ಲಿ ನಾಣ್ಯಗಳು ಕೂಡ ಮಹತ್ತರ ಪಾತ್ರವಹಿಸುತ್ತವೆ. ನಾಣ್ಯಗಳ ವ್ಯವಸ್ಥಿತ ಅಧ್ಯಯನಕ್ಕೆ ʻನ್ಯುಮಿಸ್‌ಮ್ಯಾಟಿಕ್ಸ್’ ಎಂದು ಕರೆಯಲಾಗಿದೆ. ನಮಗೆ ಚಿನ್ನ, ಬೆಳ್ಳಿ, ತಾಮ್ರ, ಸೀಸ ಮೊದಲಾದ ಲೋಹದ ನಾಣ್ಯಗಳು ದೊರೆತಿವೆ. ಈ ನಾಣ್ಯಗಳು ರಾಜರ ಕಾಲ, ಹೆಸರು, ಬಿರುದು, ಸ್ಥಳ, ವಿದೇಶಗಳೊಡನೆ ಹೊಂದಿದ್ದ ಸಂಬಂಧ, ಲಲಿತಕಲೆಗಳ ಬಗ್ಗೆ ಆಸಕ್ತಿ ಮೊದಲಾದ ಹಲವು ವಿಚಾರಗಳ ಬಗ್ಗೆ ಸ್ಪಷ್ಟಿಕರಿಸುತ್ತವೆ. ಉದಾ: ವಿಷ್ಣುವರ್ದನನ ನಾಣ್ಯಗಳು ಕಂಚಿಗೊಂಡ, ನೊಳಂಬವಾಡಿಗೊಂಡ, ಮಲಪರೋಳಂಡ ಎಂಬ ವಿವರ ಒಳಗೊಂಡಿದೆ. ಸಮುದ್ರಗುಪ್ತನ ನಾಣ್ಯಗಳು ಅವನು ವೀಣಾಪಾಣಿಯಾಗಿ ಕುಳಿತಿರುವ ಚಿತ್ರವನ್ನು ಒಳಗೊಂಡಿವೆ. ನಾಣ್ಯಗಳು ವಿನಿಮಯದ ಮಾಧ್ಯಮವಾಗಿ ವ್ಯಾಪಾರ ವಾಣಿಜ್ಯದಲ್ಲಿ ಮಹತ್ತರವಾದ ಪಾತ್ರವನ್ನು ನಿರ್ವಹಿಸುತ್ತಿದ್ದವು.

ಇತಿಹಾಸ ಅಧ್ಯಯನಕ್ಕೆ ನಾಣ್ಯಗಳ ಉಪಯೋಗಗಳು :

  1. ನಾಣ್ಯಗಳಿಂದ ಅದನ್ನು ಟಂಕಿಸಿದ ಅರಸನ ಹೆಸರು, ಅವನ ಕಾಲ, ಅವನ ಸಂತತಿ, ರಾಜಲಾಂಛನ ಮುಂತಾದವು ತಿಳಿಯುತ್ತದೆ.
  2. ನಾಣ್ಯಗಳಿಂದ ಅರಸನ ವೈಯಕ್ತಿಕ ಧರ್ಮದ ಬಗ್ಗೆ ಮಾಹಿತಿ ಲಭ್ಯವಾಗುತ್ತದೆ. ಉದಾ : ಕುಶಾನರ ನಾಣ್ಯದ ಮೇಲೆ ಇರುವ ಶಿವನ ಚಿತ್ರ, ಚಾಲುಕ್ಯರ
  3. ನಾಣ್ಯಗಳಲ್ಲಿನ ವರಾಹ ಚಿತ್ರ, ಸಮುದ್ರಗುಪ್ತನ ನಾಣ್ಯಗಳ ಮೇಲಿನ ಲಕ್ಷ್ಮಿಯ ಚಿತ್ರ ಸಂಬಂಧಿತ ಅರಸರ ಆರಾಧನೆಯನ್ನು ಸಾಭೀತುಪಡಿಸುತ್ತದೆ. ನಾಣ್ಯಗಳ ಮುಖೇನ ಅರಸರ ಬಿರುದಾವಳಿಗಳು ಬೆಳಕಿಗೆ ಬರುತ್ತದೆ. ಅದು ಎಷ್ಟೋ ಸಲ ಅವನ ಸಾಧನೆಯನ್ನು ದಾಖಲುಗೊಳಿಸುತ್ತದೆ. ಉದಾ ಹೊಯ್ಸಳ ವಿಷ್ಣುವರ್ಧನನ ತಲಕಾಡುಗೊಂಡ, ಮಲೆಷ್ಟೊರೊಳಂಡ ಬಿರುದುಗಳು. ಸಮುದ್ರ ಗುಪ್ತನ ಶಾಸನಗಳಲ್ಲಿ ಅವನ ಶತೃಗಳನ್ನು ನಿಗ್ರಹಿಸಿ ಸ್ವರ್ಗವನ್ನು ಗೆದ್ದಿದ್ದನೆಂದು ಉಲ್ಲೇಖಿಸುತ್ತದೆ.
  4. ನಾಣ್ಯಗಳಿಂದ ಅರಸರ ಕಲಾಭಿರುಚಿಯನ್ನು ಮನಗಾಣಬಹುದು. ಉದಾ : ಸಮುದ್ರಗುಪ್ತನ ನಾಣ್ಯಗಳಲ್ಲಿ ಅವನು ವೀಣೆ ನುಡಿಸುತ್ತಿರುವ ಚಿತ್ರವಿದ್ದು, ಅದು ಸಂಗೀತದಲ್ಲಿ ಇದ್ದ ಅವನ ಆಸಕ್ತಿಯನ್ನು ಹೊರಗೆಡಹುತ್ತದೆ.
  5. ಪ್ರಾಚೀನ ಕಾಲದ ನಾಣ್ಯಗಳು ದೊರೆತ ಸ್ಥಳವನ್ನು ಅವಲಂಬಿಸಿ ಅರಸರ ಸಾಮ್ರಾಜ್ಯದ ಮೇರೆಯನ್ನು ಗುರುತಿಸಬಹುದು.
  6. ವಿದೇಶಿ ನಾಣ್ಯಗಳು ಸ್ವದೇಶದಲ್ಲಿ ಸಿಕ್ಕ ಪ್ರದೇಶದ ಆಧಾರದ ಮೇಲೆ ಆ ಪ್ರದೇಶ ಪ್ರಾಚೀನ ಕಾಲದಲ್ಲಿ ವಿದೇಶದೊಂದಿಗೆ ವ್ಯಾಪಾರಿ ಸಂಪರ್ಕ ಹೊಂದಿತ್ತೆಂದು ತಿಳಿದು ಬರುತ್ತದೆ. ಉದಾಹರಣೆಗೆ ಬೆಂಗಳೂರು ಮತ್ತು ತಲಕಾಡುಗಳಲ್ಲಿ ದೊರೆತ ರೋಮನ್ ನಾಣ್ಯಗಳಿಂದ ಇದು ದೃಢಪಟ್ಟಿದೆ.
  7. ಹೊರಡಿಸಿದ ನಾಣ್ಯಗಳ ಲೋಹದ ಮೌಲ್ಯವು ಆಯಾ ಕಾಲದ ಆರ್ಥಿಕ ಪರಿಸ್ಥಿತಿಯನ್ನು ತೋರಿಸುವ ಕೈಗನ್ನಡಿಯಾಗಿದೆ. ಉದಾಹರಣೆಗೆ ಗುಪ್ತರ ಕಾಲದ ಚಿನ್ನದ ನಾಣ್ಯಗಳು ಆರ್ಥಿಕ ಸುಭಿಕ್ಷತೆಯ ದ್ಯೋತಕವಾದರೆ, ಮಹಮ್ಮದ್ ಬಿನ್ ತುಗಲಕ್ ಕಾಲದ ತಾಮ್ರದ ನಾಣ್ಯಗಳು ಆರ್ಥಿಕ ಪರಿಸ್ಥಿತಿಯ ಹಿನ್ನಡೆಗೆ ದಾಖಲೆಯಾಗಿದೆ.
  8. ನಾಣ್ಯಗಳ ಸಹಾಯದಿಂದ ಕಾಲ ಗಣನೆಯು ಸುಲಭವಾಗುತ್ತದೆ.
  9. ನಾಣ್ಯಗಳು ಆಯಾ ಕಾಲದ ಕಲಾ ಬೆಳವಣಿಗೆ ಮತ್ತು ಲೋಹ ವಿಜ್ಞಾನದ ಪ್ರಗತಿಯ ಮೇಲೆ ಬೆಳಕು ಚೆಲ್ಲುತ್ತದೆ.

ಐತಿಹಾಸಿಕ ಸ್ಮಾರಕಗಳು : ಚರಿತ್ರೆಯ ರಚನೆಯಲ್ಲಿ ಐತಿಹಾಸಿಕ ಸ್ಮಾರಕಗಳ ಪಾತ್ರ ವಿಶಿಷ್ಟವಾದುದು. ಭಾರತದಲ್ಲಿ ಬೆಳವಣಿಗೆ ಗೊಂಡ ಕಲೆಯ ಬಗ್ಗೆ ಅಧ್ಯಯನ ಮಾಡಲು ಸ್ಮಾರಕಗಳೇ ಆಧಾರ. ಕಟ್ಟಡಗಳು, ಚೈತಾಲಯಗಳು, ದೇವಾಲಯಗಳು, ಮಂದಿರಗಳು, ಬಸದಿಗಳು, ಮೂರ್ತಿಶಿಲ್ಪಗಳು ಕಲಾ ಪರಂಪರೆಯ ಬೆಳವಣಿಗೆಗೆ ಕೈಗನ್ನಡಿಯಿದ್ದಂತೆ. ಸ್ಮಾರಕಗಳ ಸೂಕ್ಷ್ಮ ಅಧ್ಯಯನ ಮಾಡಿ ನೋಡಿದಾಗ ರಾಜರ ಆಸ್ಥಾನ, ವೈಭವ, ಜನರ ಉಡಿಗೆ-ತೊಡಿಗೆ, ಸಮಕಾಲೀನ ಪ್ರಾಣಿಸಂಕುಲ, ಸಸ್ಯವರ್ಗ, ಸೇನಾ ಸಂಘಟನೆ, ಶಸ್ತ್ರಾಸ್ತ್ರಗಳು, ನೃತ್ಯ ಮೊದಲಾದ ವಿಚಾರಗಳು ಸ್ಪಷ್ಟವಾಗಿ ತಿಳಿದುಬರುತ್ತವೆ. ಅಂತಹ ಪ್ರಮುಖ ಸ್ಮಾರಕಗಳೆಂದರೆ ಮೌರ್ಯರ ಕಾಲದ ಸ್ತೂಪಗಳು, ಸ್ತಂಭಗಳು, ವಿಹಾರಗಳು, ಜೈನ ಬಸದಿಗಳು ಮತ್ತು ತೀರ್ಥಂಕರರ ಮೂರ್ತಿಗಳು, ಎಲ್ಲೋರ ಅಜಂತ, ಖಜುರಾಹೋ, ಆಗ್ರಾ, ಸಾಂಚಿ, ಮಹಾಬಲಿಪುರಂ, ನಾಸಿಕ್, ಕಾರ್ಲೆ, ಬೇಲೂರು, ಹಳೇಬೀಡು, ದೇವಾಲಯಗಳು- ಹೀಗೆ ಕಂಡುಬರುವ ಸ್ಮಾರಕಗಳು ಚರಿತ್ರೆಯ ರಚನೆಗೆ ಸಹಕಾರಿಯಾಗುವುದರ ಜೊತೆಗೆ ಪ್ರವಾಸಿಗರ ಕಣ್ಮನಗಳಿಗೆ ಅನಿರ್ವಚನೀಯ ಸೌಂದರ್ಯ ನೀಡುವಂತಿದೆ.